ಫರ್ಡಿನಂಡ್ ಕಿಟೆಲರ ಕ್ರಿಸ್ತ ಕಥನ ಕಾವ್ಯ ಕಥಾಮಾಲೆ
ಫರ್ಡಿನೆಂಡ್ ಕಿಟೆಲರ ಹೆಸರಿನ ಜತೆಗೆ ನೆನಪಾಗುವುದು, ಅವರು ರಚಿಸಿದ " ಕನ್ನಡ - ಇಂಗ್ಲಿಷ್ ನಿಘಂಟು; ಕನ್ನನಡ
ವ್ಯಾಕರಣ, ಶಬ್ಧಮಣಿದರ್ಪಣ, ಹಾಗೂ " ನಾಗವರ್ಮನ ಛಂದೋಂಬುಧಿ" ಕನ್ನಡದ ಏರೆತ್ತರದ ಮಾನಸ್ತಂಭಗಳು.
ಎರಡು ಸಂಸ್ಕೃತಿಗಳ ವಿಭಿನ್ನ ನೆಲೆಗಳಲ್ಲಿ ಕಾರ್ಯನಿರ್ವಹಿಸಿ ಭಾರತೀಯ ಅದರಲ್ಲೂ ಕನ್ನಡ ಸಂಸ್ಕೃತಿಯ ಎಲ್ಲೆಯನ್ನು ವಿಸ್ತರಿಸಿದ ಕಿಟೆಲರ ಅಸಾಮಾನ್ಯ ಭಾರತೀಯ ನೆಲದ ಅರಿವು ಹೆಚ್ಚಾಗಿ ಬೆಳಕಿಗೆ ಬೇದಿಲ್ಲ.
ಕಿಟೆಲ್ ಹುಟ್ಟಿದ್ದು ೧೮೩೨ ಏಪ್ರಿಲ್ ೨ ರಂದು. ಹುಟ್ಟೂರು ಜರ್ಮನಿಯ ಪೂರ್ವ ಫ್ರಿಸಿಯಾದ ರೆಸ್ಕರ್ ಹಾಫೆ. ತಾಯಿ ಹೆಲೆನ್, ತಂದೆ ಗಾಟ್ ಫ್ರೀ ಕಿಟೆಲ್ ಒಬ್ಬ ಧರ್ಮಗುರು. ಜೌರಿಕ್ನಲ್ಲಿ ಆರಂಭಿಕ ಶಿಕ್ಷಣ ಮುಗಿಸಿ ೧೮೫೦ ರಲ್ಲೆ ಬಾಸೆಲ್ ಮಿಷನ್ಗೆ ಸೇರೆದರು. ಊಲ್ಲಿ ಮೂರು ವರ್ಷಗಳ ಕಾಲ ಕ್ರೈಸ್ತ ದೈವಶಾಸ್ತ್ರ ತರಬೇತಿ ಪಡೆದರು. ಬಳಿಕ ಕಿಟೆಲ್ ೨.೧೧.೧೮೫೩ ರ ರಂದು ತನ್ನ ಸಹಮತವುಳಿಗ ( ಸುವಾರ್ತಾ ಪ್ರಚಾರಕ ) ಕೌಫ್ಮನ್ನೊಂದಿಗೆ ಹಡಗನ್ನೇರಿ ೮.೧೨.೧೮೫೩ ರಂದು ಭಾರತದ ನೆಲಕ್ಕೆ ಮುಂಬಯಿಗೆ ಬಂದಿಳಿದರು. ೧೩.೧೨.೧೮೫೩ ರಂದು ಬ್ರಿಟಿಷ್ ಹಾಯಿಹಡಗಿನಲ್ಲಿ ಮುಂಬಯಿಯಿಂದ ಹೊನ್ನಾವರ ತಲುಪಿದರು. ಮೇಲಧಿಕಾರಿಗಳ ಸೂಚನೆ ಮೇರೆಗೆ ಕಿಟೆಲ್, ಕೌಫ್ಮನ್ ಧಾರವಾಡಕ್ಕೆ ಬಂದರು.
ಬಾಸೆಲ್ನಿಂದ ಹೊರಡುವ ವೇಳೆಗೆ ಕಿಟೆಲ್ ಮತ್ತು ಕೌಫ್ಮನ್ ಧಾರವಾಡದಲ್ಲಿ ವೈಗಲ್ನಿಂದ ಕನ್ನಡ ಕಲಿಯಬೇಕೆಂದು ಸೂಚಿಸಲಾಗಿತ್ತು. ಈ ನಡುವೆ ವೈಕಲ್ ಅವರಿಗೆ ಮಂಗಳೂರಿಗೆ ವರ್ಗಾವಣೆ ಆದೇಶ ಬಂದಿತು. ಅಂತೆಯೇ ಮಾರ್ಚ್
೩೧. ೧೮೫೪ ಕ್ಕೆ ವೈಗಲ್ ಮಂಗಳೂರಿಗೆ ತಲುಪಿದರು. ಹೀಗಾಗಿ ಕಿಟೆಲರಿಗೆ ವೈಗಲ್ ರಿಂದ ಮೂರು ತಿಂಗಳು ಮಾತ್ರ ಕನ್ನಡ ಬೋಧನೆ ಸಾಧ್ಯವಾಯಿತು. ಮುಂದೆ ಕಿಟೆಲರ ಕನ್ನಡ ಕಲಿಕೆಗೆ ಮೊರಿಕೆ ನಿಯುಕ್ತರಾದರು.
ಕಿಟೆಲರು ಸುವಾರ್ತಾ ಪ್ರಚಾರಕನಾಗುವುದರ ಬದಲು ಭಾರತೀಯ ಸಂಸ್ಕೃತಿ, ಭಾಷೆ, ವ್ಯಾಕರಣ. ಛಂದಸ್ಸಿನ ಶೋಧಕರಾಗುತ್ತಿರುವುದನ್ನು ಗಮನಿಸಿದ ಹಾನ್ಸ್ ಕಿಟೆಲರನ್ನು ನೀಲಗಿರಿ ಬೆಟ್ಟದ ಕೇಟಿಗೆ ( ೨೯.೧೦. ೧೮೫೬) ವರ್ಗಾಯಿಸಿದರು. ೧೮೬೯ ರಲ್ಲಿ ಕಿಟೆಲರನ್ನು ಮಂಗಳೂರಿನ ಬಾಸೆಲ್ ಮಿಷನ್ ಮುದ್ರಣಾಲಯಕ್ಕೆ ವರ್ಗಾಯಿಸ-
ಲಾಯಿತು. ಅಲ್ಲಿ ಅವರು ಕನ್ನಡ ಗ್ರಂಥಗಳ ಸಂಪಾದನೆ, ಕನ್ನಡ ಸಾಹಿತ್ಯ ಚರಿತ್ರೆಯ ನಿರ್ಮಾಣ, ಧಾರ್ಮಿಕ ಸಾಹಿತ್ಯದ ರಚನೆಯಲ್ಲಿ ಪೂರ್ಣ ಕಾಲಾವಧಿ ತೊಡಗಿದರು. ಕನ್ನಡ ವ್ಯಾಕರಣ, ಛಂದಸ್ಸುಗಳ ಅಭ್ಯಾಸ, ಕನ್ನಡ ಭಾಷೆ ಕಾಲದಿಂದ ಕಾಲಕ್ಕೆ ತೋರಿದ ಮಾರ್ಪುಗಳ ಅಧ್ಯಯನ, ತಾಡವೋಲೆಗಳ ಸಂಗ್ರಹ ಹಾಗೂ ಶುದ್ಧಪಾಠ ನಿರ್ಣಯದಂತಹ ಶ್ರಮಪೂರ್ಣ ಕೆಲಸಗಳಲ್ಲಿ ತೊಡಗಿಕೊಂಡರು. ಇದನ್ನು ಗಮನಿಸಿಯೇ ಕಿಟೆಲ್ ಶೋಧಕ ರೀನ್ ಹಾರ್ಡವೆಂಟ್ ಕಿಟೆಲರನ್ನು " ಅಕ್ಷರಪುರುಷ " ಎಂದು ಕರೆದರು.
ಕಿಟೆಲರು ಕನ್ನಡ-ಇಂಗ್ಲಿಷ್ ಶಬ್ಧಕೋಶಕ್ಕಾಗಿ ಹಲವಾರು ಹಳಗನ್ನಡ. ನಡುಗನ್ನಡ, ಜೊತೆಗೆ ಒಂದೆರಡು ಹೊಸಗನ್ನಡ ಕೃತಿಗಳನ್ನು ಆಯ್ದ ಶಬ್ಧ ಸಂಗ್ರಹಕ್ಕೆ ಆಗಲೆ ತೊಡಗಿದ್ದರು. ಅಷ್ಟೇ ಅಲ್ಲದೆ ಅನೇಕ ಪ್ರಾದೇಶಿಕ ಪದಗಳನ್ನು, ಕೂಡುನುಡಿ, ಜೋಡುನುಡಿ, ಗಾದೆ, ಒಗಟುಗಳನ್ನು ಜೋಡಿಸಿಕೊಂಡಿದ್ದರು. ಬಾಸೆಲ್ ಮಿಷನ್ ಪರವಾಗಿ ಮೋಗ್ಲಿಂಗ್ ಬ್ರಿಟಿಷ್ ಸರಕಾರದ ಜೊತೆ ಸಂಧಾನ ನಡೆಸಿ ಬ್ರಿಟಿಷ್ ಸರಕಾರ ನಿಘಂಟಿಗಾಗಿ ೧೦೦೦ ಪೌಂಡುಗಳನ್ನು ಮಿಷನ್ಗೆ ನೀಡುವುದೆಂದು ಅದಕ್ಕೆ ಪ್ರತಿಯಾಗಿ ಮುದ್ರಣವಾದ ಬಳಿಕ ೨೦೦ ಪ್ರತಿಗಳನ್ನು ಮಿಷನ್ಗೆ ಉಚಿತವಾಗಿ ಸರಕಾರಕ್ಕೆ ನೀಡಬೇಕೆಂದು ಮತ್ತು ಕಿಟೆಲ್ ಮೂರು ವರ್ಷಗಳಲ್ಲಿ ನಿಘಂಟನ್ನು ರೂಪಿಸಿ ಕೊಡಬೇಕು, ಅದಕ್ಕೆ ಅವರಿಗೆ ತಿಂಗಳಿಗೆ ೩೨೫ ರೂಪಾಯಿ ಸಂಭಾವನೆ ನೀಡುವುದೆಂದು ಒಪ್ಪಂದದ ಕರಾರಾಯಿತು.
ಕಿಟೆಲ್ ನಿರ್ಮಿಸಿದ ಕನ್ನಡ-ಇಂಗ್ಲಿಷ್ನಿಘಂಟು ೧೮೯೧ ಹಾಗೂ ವ್ಯಾಕರಣ ( ೧೯೦೩) ಗಳು ಕನ್ನಡ ಭಾಷೆಯ ಅಸಾಧಾರಣ ಶಬ್ಧಶಕ್ತೀಯನ್ನು ಹಾಗೂ ನಿಘಂಟಿನಲ್ಲಿ ಬಳಕೆಯಾದ ಅಪಾರ ಸಂಖ್ಯೆಯ ಪದಗಳಿಂದ ಕನ್ನಡ ಸಂಸ್ಕೃತಿಯ ಅನನ್ಯ ಸಾಮಾಜಿಕ ಸಾಂಸ್ಕೃತಿಕ ಬಹುತ್ವವನ್ನು ಕಿಟೆಲ್ ನಿಘಂಟು ಪ್ರತಿನಿಧಿಸಿದೆ. ಸುಮಾರು ಇಪ್ಪತ್ತು ವರ್ಷಗಳ ಪರಿಶ್ರಮದಿಂದ ಕಿಟೆಲ್ ಒಂದು ಸಾವಿರದ ಏಳುನೂರು ಪುಟಗಳ ಬೃಹತ್ ದ್ವಿಭಾಷಿಕ ನಿಘಂಟನ್ನು ರೂಪಿಸಿದರು. ಈ ನಿಘಂಟಿಗೆ ಸಾಟಿಯಾದ ನಿಘಂಟನ್ನು ಕಟ್ಟಲು ನಾವು ಇನ್ನೂ ಯಶಸ್ವಿಯಾಗಿಲ್ಲ ಎನ್ನುವುದು ಗಮನಿಸಬೇಕಾದ ಅಂಶ. ಈ ನಿಘಂಟಿನ ರಚನೆಯ ಹಿಂದಿನ ಬೌದ್ಧಿಕಶ್ರಮ ಹಾಗೂ ಭಾಷಾ ವೈಜ್ಞಾನಿಕ ತಿಳುವಳಿಕೆಯನ್ನು ಗಮನಿಸಿ ಕಿಟೆಲ್ ಅವರಿಗೆ
ತುಬಿಂಜೆನ್ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ (೧೮೯೬ ) ನೀಡಿ ಗೌರವಿಸಿತು.
ಕಥೆಯ ಹರಹು
ಕಥಾ ಪ್ರವೇಶದ ಮೊದಲಿಗೆ ಭಾಮಿನಿ ಷಟ್ಪದಿಯಲ್ಲಿ ರಚಿತವಾದ "ವಂದನಾ ವಾಕ್ಯ " ಎನ್ನುವ ಕಥಾ ಪ್ರವೇಶಕ್ಕೆ ಪೂರ್ವಪೀಠಿಕೆಯನ್ನು ನೀಡಿದ್ದಾರೆ. ಹಳಗನ್ನಡ, ನಡುಗನ್ನಡ ಕವಿಗಳ ಮಾದರಿಯಲ್ಲಿ ಕಿಟೆಲರು ಶ್ರೀಕಾರದೊಂದಿಗೆ
( ಇದು ಕನ್ನಡ ವಿಶಿಷ್ಟತೆ ) ಮೂಜಗನ್ನಾಥ ಏಸುವನ್ನು ಹಲವಾರು ವಿಶೇಷಣಗಳೊಂದಿಗೆ ಸ್ತುತಿಸಿ " ಮೂಡು ಭಕ್ತರ ಹೃದಯಕಮಲದೊಳು" ) ಎಂದು ಪ್ರಾರ್ಥಿಸಿಕೊಳ್ಳುತ್ತಾರೆ.
ಕಥಾಮಾಲೆ
॥ ಶ್ರೀ ಯೇಹೋವಾಯ ನಮಃ ॥
ವಂದನಾ ವಾಕ್ಯ
ಭಾಮಿನೀ ಷಟ್ಪದಿ
ಶ್ರೀಜನಾರ್ಚಿತ ಸತ್ಯಸಾಕ್ಷಿಯೆ
ಭೂಜನೈಕೋಗುರುವೆ ದೇವಜ
ರಾಜಿಪವನೇ ರವಿಯೆ ಸುಪಥವೆ ಜೀವದಧಿಪತಿಯೇ॥
ತೇಜದುದಯವೆ ದೇವಕಾಂತಿಯೆ
ಮೂಜಗನ್ನಾಥೇಸೊ ನಿನ್ಮುಖ
ಮಾಜಿಕೊಳ್ಳದೆ ಮೂಡು ಭಕ್ತರ ಹೃದಯಕಮಲದೊಳು॥೧॥
ಶ್ರೀ ಮಹಾಂತನೆ ದೇವದತ್ತನೆ
ಸಾಮಕರ್ತನೆ ಶುದ್ಧಯಜ್ಞನೆ
ನೇಮದಂತ್ಯನೆ ವಿಜಯಶಾಲಿಯೆ ಪಾಪಪರಿಹರನೆ ॥
ಪ್ರೇಮದಬ್ಧಿಯೆ ಮನುಜಪುತ್ತನೆ
ರಾಮಣೀಯಕ ಸಖನೆ ನಿನ್ನಯ
ನಾಮದುನ್ನತಿ ಯಾರು ನುಡಿದಾರತುಲಶೋಭಿತನೇ॥೨॥
ನಿನ್ನ ವಾಕ್ಯವ ನೋಡಿ ರಚಿಸಿದೆ
ವುನ್ನತೇಶನೆ ಕಥೆಯ ಮಾಲೆಯ
ನಿನ್ನು ನಿನಗೈ ವಂದಿಸುತ್ತೇವದನು ವಿನಯದಲಿ॥
ಚಿನ್ನ ಮಾಡೈ ನಮ್ಮ ಬುದ್ಧಿಯ
ಮನ್ನಿಸೇಸುವೆ ದಯದಿ ನಮ್ಮನು
ಬೆನ್ನ ಹತ್ತಲಿ ನಿನಗೆ ರಾಜನೆ ಸಕಲ ಮಾನವರೂ॥೩॥
ಮತ್ತೆ ಮನುಜರೆ ನೀವು ಪಠಿಸಿರು
ಚಿತ್ತವಿಟ್ಟೀ ಕಥೆಯ ಮಾಲೆಯ
ಹೊತ್ತನರ್ಥಕೆ ಕಳೆವ ಕಾವ್ಯವಿದಲ್ಲವಲ್ಲವೆಲೇ॥
ಉತ್ತಮೋತ್ತಮ ಕ್ರಿಸ್ತನಾಗಮ
ವಿತ್ತಲಾತನ ಶುದ್ಧಯಜ್ಞವು
ಸತ್ತನಂತರ ಮಹಿಮೆಯುದ್ಗಮವೆಲ್ಲ ತಿಳಿಯುವದೂ॥೪॥
ನಿಮಗೆ ಕ್ರಿಸ್ತನು ಸಲಿಸಿದಮಿತಿಯ
ಮಮತೆ ಚಿಂತಿಸಿ ನಿಮಗೆ ಪಟ್ಟ
ಶ್ರಮೆಯ ಮರಣದ ತಾಪವೀಕ್ಷಿಸಿಯವನ ಕೊಂಡಾಡಿ॥
ವಿಮಲಕರ್ತನು ಮಾಡಿದಾವುಪ
ಶಮನ ಪಡಕೊಂಡವಗೆ ಧೂಳಲಿ
ನಮಿಸಲೆರಗಿರಿ ಹಿಂದು ದೇಶದ ಸಕಲ ಕುಲದವರೇ॥೫॥
೧ . ಯೇಸುವಿನ ಜನನ ವಿಷಯವು - ಭಾಮಿನೀ ಷಟ್ಪದಿ
ಪಡುವಲು ದಿಕ್ಕಿನ ಯೂದಿ ದೇಶದ
ಲಡಿವೆಯೊಂದನು ಪೊಕ್ಕ ಕುರುಬರು
ನಡುವಣಿರುಲೊಳು ಹಿಂಡು ಕಾಯುತ್ತಿರುವ ಸಮಯದಲಿ॥
ಒಡನೆ ದೇವರ ದೂತ ಬರಲವ
ರೆಡೆಗೆ ದೇವರ ಮಹಿಮೆಯೆಸೆವರೆ
ತೊಡಗಿತಾಗವರಧಿಕ ಭಯದವರಾಗಿ ಬೊಗ್ಗಿದರೂ॥೧॥
ಹೆದರಬೇಡಿರಿ ದೊಡ್ಡ ಮೋದವ
ವದಿಸಿಬಂದೆನು ಸಕಲಜನಹಿತ
ಕೆದುರ ಬೇತುಲೆಹೇಮಿನಲ್ಲೊಗದಿಹನು ರಕ್ಷಕನೂ॥
ಇದರ ಗುರ್ತನ್ನೊರೆವೆ ಛತ್ರದ
ಮೃದುವದಲ್ಲದ ಗೋದ್ಲಿ ಹುಲ್ಲಲಿ
ಮುದದ ಶಿಶುವನು ಬಟ್ಟೆ ಸುತ್ತಿದದಾಗಿ ಕಾಣುವಿರಿ॥೨॥
ಹಾಗೆ ದೂತನು ನುಡಿಯೆಪರದಿಂ
ವೇಗವಿಳಿದೊಂದಮಿತ ಸೇನೆಯು
ರಾಗವೆತ್ತಿದುದಧಿಕ ಮಂಜುಳ ದನಿಯಲಿಂತೆನುತಾ॥
ಆಗಲತಿಶಯವುಚ್ಚಲೋಕ
ಶ್ರೀಗತೀಶನಿಗಿಳೆಯ ವಿಧವಿಧ
ಭಾಗದಲಿ ಶಾಂತ್ಯೊದಗಲದರಲಿ ಮನುಜರಿಂಗೊಲುಮೇ॥೩॥
ಕುರುಬರಾಲಿಸಿಯಿನ್ನು ಶೀಘ್ರದಿ
ಹೊರಟು ಬೆತುಲೆಹೇಮ ಛತ್ರಕೆ
ಬರಲು ದನಗಳ ಗೋದ್ಲಿಯೊಳ್ ಮಲಗಿರುವ ಮಗು ಕಂಡೂ॥
ಸರುವ ಸೃಷ್ಟಿಯ ನಾಥನಾದದ
ಧರೆಯ ರಕ್ಷಕರ್ತನಾದದ
ಹರಸಿ ಪಟ್ಣದ ಜನರಿಗೆಲ್ಲವ ಸಾರಿ ಹೇಳಿದರೂ॥೪॥
ಜನರು ಕೇಳಲಿಕಂಥ ಸುದ್ದಿಯ
ಮನದಿ ವಿಸ್ಮಯ ಪಡುವರಾದರು
ವನದಲುಳಿದಿಹ ಹಿಂಡ ಕಾವಲಿಗಂದು ಕುರುಬಜನಾ॥
ವಿನುತ ದೇವರು ಗೈದ ಕರುಣೆಯ
ನೆನಸಿ ಹರ್ಷದಿಯವನ ಹೆಸರನು
ಘನವ ಪಡಿಸುತ ಹೊಗಳಿ ಪೊಗಳುತ ತಿರುಗಿ ಗಮಿಸಿದುದೂ॥೫॥
೫. ಸ್ನಾನವು - ಭಾಮಿನೀ ಷಟ್ಪದಿ
ಮಾನಸಾಂತರ ಪಡಿರೆಲೆನುತ
ಸ್ನಾನ ಕೊಡುತಲಿ ಯೊರ್ದನುದಕದ
ಕಾನನಾಶ್ರಮದಲ್ಲಿ ಯೋಹಾನಿರುವ ಕಾಲದೊಳೂ॥
ತಾನು ಹೊಂದ ಸ್ನಾನವನ್ಯೋ
ಹಾನಿಗೇಸುವು ಸಾರಿ ನನಗೂ
ನೀನು ಜಲವೆರೆಯೆಂದು ವಿನಯದಿಯವನ ಬೆಸಸಿದನೂ॥೧॥
ಯಾವ ಮಾತಿದು? ದಿವ್ಯ ಶೋಭೆಯ
ಪಾವನಾತ್ಮಜ ನೀನು ನಂಗೆ ದ
ಯಾವಲಂಬನೆ ದೊರಕಿಸಿದರದು ಯೋಗ್ಯವಹುದೆಂದೂ॥
ದೇವವರಯೋಹಾನು ನುಡಿಯವ
ನೀವು ನನಗೀ ಸ್ನಾನ! ರಕ್ಷಾ
ಸೇವಾಯಲ್ನಾನೆಲ್ಲ ನೀತಿಯ ನಡಿಸಬೇಕೆಂದಾ ॥೨॥
ಅದನು ಕೇಳಿ ಸ್ನಾನಪಾಲಕ
ನುದಕದಿಂದಭಿಷೇಕ ಕೊಟ್ಟನು
ತದನುವೇಸುವು ನೀರಿನಿಂ ಪೊರಮಟ್ಟು ಪ್ರಾರ್ಥಿಸಲೂ॥
ಸದಮಲಾತ್ಮವು ಪಾರಿವಾಳ ಖ
ಗದನುರೂಪದಿಯವನ ಮೇಲತಿ
ಮುದದೊಳಿಳಿದುದು ತೆರೆದ ಬಾನಿಂದಿಳಿದ ತತ್ಕ್ಷಣವೇ॥೩॥
ಉದ್ದ ತಾಣದಿನೀತನೆನ್ನಯ
ಮುದ್ದು ಪುತ್ರನು ನನಗೆ ಮೋದವು
ಸಿದ್ಧಿಯಾಗಿಹುದೀತನಲ್ಲಿಯೆ ಕೇಳಿರೆಂಬೊಂದೂ॥
ಸದ್ದು ಕೇಳಿಸಿತಾಗ ಹತ್ತರ
ವಿದ್ದ ಯೋಹಾನದನು ಲಾಲಿಸ
ಲೆದ್ದು ಪಸರಿಸಿದಧಿಕದಾಚ್ಚರವವನ ಹೃದಯದೊಳಗೇ॥೪॥
********
ಪ್ರೀತಿಸಾಗರವಾದ ಕ್ರಿಸ್ತಗೆ
ಹೇತುವೇನುದಕಾಭಿಷೇಕಕ್
ಕಾತನುಕ್ತಿಯ ಮೇಲೆ ತಿಳುಕೊಳಲಾಲಿಸಿರಿ ಜನರೇ॥
ನೀತಿಯೆಲ್ಲವ ನಡತೆಯಲ್ಲಿಯು
ಮಾತಿನಲ್ಲಿಯು ಗೈದು ಸಗ್ಗಕೆ
ಶೇತುವಾಗುವ ಹಾಗೆ ನೇಮದ ಪೂರ್ತಿಗೊಳಗಾದಾ॥॥೧॥
ಅವನು ನೀತಿಯ ನಡಿಸಿಯದರಿಂ
ಭುವನದೆಲ್ಲರ ಋಣವ ತೀರಿಸಿ
ಯವನ ಗೈದನು ಶಾಪಬಂಧದಲಿರುವ ಮನುಜರಿಗೇ॥
ವಿವಿಧ ವಜ್ರಗಳೆಸೆಯುವಂತೆಯೆ
ರವಿಯ ಕಾಂತಿಯು ಹೊಳೆಯುವಂತೆಯೆ
ಯವನಿಮಂಡಲದಲ್ಲಿ ತೋರುವವನ ಸುಗುಣಗಳೂ॥೨॥
೬. ಜೀವದ ನೀರು *** ವಾರ್ಧಿಕ್ಯ
ಜಲದಾತ್ಮದಭಿಷೇಕ ತಂಗಾದ ಮೇಲೇಸು
ಒಲೆದೊಲೆದು ತೊಡಗಿದನು ಪಿತದೇವ ತಂಗಿತ್ತ
ಕೆಲಸವನು ದೇವರದು ರಾಜ್ಯವೊದಗಿಹುದೀಗ ನಿಮ್ಮೊಳಗೆ ಶುಭತರದಲೀ॥
ಎಲವೊ ದುರ್ಕರ್ಮಿಗಳೆಯೆನ್ನುತಲಿ ಬಂದಧಿಕ
ಬಲದ ಪ್ರಸಂಗದಿಂದೆಚ್ಚರಿಸುತೆಲ್ಲರನು
ಗಲಿಲಯದ ನಾಡ ಪೊಗುವಾ ಹೊತ್ತು ಸಾಮಾರ್ಯಿ ಬಾವಿಯಲಿ ಕೂತುಕೊಂಡಾ॥೧॥
ಆಸರವ ಪಟ್ಟವನ ಶಿಷ್ಯರಾಹಾದಿ
ಗೋಸರಿಸಿ ಪೋಗಿರಲು ಕೊಡವೆತ್ತಿ ಪಟ್ಟಣ ನಿ
ವಾಸಿಗಳಲೊಬ್ಬಾಕೆ ಬಂದಳಾ ಬಾವಿಂಗೆ ಜಲ ಶೇದಬೇಕೆನ್ನುತಾ॥
ಯೇಸುಗುರು ಕುಡಿಯ ಕೊಡು ಹೆಣ್ಣೆ ನೀರಡಿಕೆಗೆನೆ
ಹೇಸಿಯೆಯೊ ಯೂದಿ ನೀನಶುಚಿಸಾಮಾರ್ಯಳಿಂ
ದೀಸಿಕೊಳ ನೀರನೈ? ನಿನಗು ನಮಗೇನು ಬಳಿಕುಂಟೆನ್ನುತವಳೊರೆದಳೂ॥೨॥
ಅರಿಯೆ ನೀ ನಿನ್ನಿಂದ ನೀರನ್ನು ಬೇಡುವನ
ಗುರುತರಿತಳಿಗಿದ್ದರಾತನನ್ನಮಲಜಲ
ವರ ಕೇಳ್ವಿ ಮತ್ತವನು ನಿಂಗಿಂದು ಜೀವಜಲವೀವನೆಂದವನುಸುರಲೂ ॥
ಕರದಲ್ಲಿ ನಿನಗೈಯ್ಯ ಹಗ್ಗವೇನಿಲ್ಲದಿರೆ
ಹರದೀತೆಯೀಯುದ್ಧ ಬಾವಿಯಿಂ ಶೇದುವದು
ನರನೆ ನೀನದ ತೋಡಿ ಶೇದಿ ಕುಡಿದಾ ಪಿತನಿಗೆಂದಾಕೆ ಕೇಳಲಾಗೀ॥೩॥
ಹೇಳುವೆನು ಹೆಣ್ಣೆಯೀ ಶೆಲೆನೀರ ಕುಡಿದವನು
ತಾಳುವನು ಮತ್ಮತ್ತು ದಾಹವನು ತೋಷಿಸದಲೆ
ಬಾಳುವನು ನನ್ನಮೃತ ಜಲವೇಸಿ ಕೊಂಡದನು ಕುಡಿದಾತನೆಂದೆಂದಿಗೂ॥
ಕೇಳು ನಾನೀವ ನೀರ್ ಕುಡಿದವಗೆ ನಿತ್ಯದಲ್
ಲೇಳುತಿಹ ಜೀವಶೆಲೆಯಹುದೆಂದು ಗುರುವೆನೆ ದ
ಯಾಳೆಯಾ ಜಲ ಪಾಲಿಸಿನ್ಗಾನತೃಷೆಯಾಗಿ ಶೇದಲಿಕೆ ಬಾರೆನೀಸ್ಥಳಕೆಂದಳೂ॥೪॥
ಅವಳರಿಯಳೆನ್ನಮರ ವಾಕ್ಯಗಳು ಜೀವಜಲ
ದವುಗಳೆಂದಿರತೇಸು ತಿಳುಕೊಂಡು ವಧುವೆ ನೀ
ನವಧರಿಸು ಪುರಕೈದಿ ತಾ ನಿನ್ನ ಗಂಡನನ್ನೆನಲವಳುನಾಚಿ ಕೊಂಡೂ॥
ಅವನಿಗೈ ನಂಗಿಲ್ಲ ಗಂಡನೆನಲಾ ಮಾತ
ಭವವರಿತು ತಾನೆಂದು ಕಲಿತಿರದ ವಧುವಿಂಗೆ
ದಿವಕರ್ತನಹುದೈವರಿದ್ದರೀಗಿರುವವನು ನಿನ್ನ ಧವನಲ್ಲೆಂದನೂ॥೫॥
ಬಂದುವೇನಿಲ್ಲದಿದ್ದಂತೀತನರುಹಿಸಿದ
ನೆಂದಾಕೆಯೈ ನಿಪ್ರಾವದಿಯೆಲೆ ಮೂಢಳಿಂ
ಗಿಂದು ದಯೆಯಿಂ ಪೇಳು ದೇವರಾರಾಧಿಸಲಿಕೊಳ್ಳೆಯೆಡೆಯನ್ನೆಂದಳೂ॥
ವಂದಿಸುವರರಿತ ಜನರರಿಸದಲೆ ದೇವರಿಂ
ಗೊಂದು ಬಗೆತಾಣವನ್ನಾತ್ಮದಲು ಸತ್ಯದಲು
ಮುಂದೆರೈವ ಕಾಲದೊಳ್ ಪ್ರಭುವಾತ್ಮವವನ ಜನರಾತ್ಮಭಾವಾನ್ವಿತವರೂ॥೬॥
ಬಿಡದೆ ಮತ್ತುಸುರಿಯಾ ಹೆಣ್ಣು ಮಗಳವನಪತಿ
ಯೆಡೆಯಲ್ಲಿದ್ದೀಶಜನು ಬಂದೆಲ್ಲವರುಹಿಸುವೆನೆಂದು ನಾ ಬಲ್ಲೆನೆನ್ನೇ
ಪಡದೀಗಲವನನಾರೊರೆದಿಹನು ಕೇಳು ನೀನ್
ನೊಡನವನೆ ! ಯೆನಲೇಸುವಾ ಸ್ರ್ತೀಯು ಕೇಳುತಲೆ
ತಡವಿಲ್ಲದಲ್ಲಿ ಕೂಡ ಬಿಟ್ಟೋಡಿ ಮುಂದ ಪುರಬಾಗಿಲನು ಬೇಗ ಪೊಕ್ಕೂ॥೭॥
ಕರಕರದಳವಳು ಬಿದ್ಯೋಣಿಗಳ ಜನಜನರ
ನೊರವೊರದಳವಳು ತಾ ಕಂಡದನು ಲಾಲಿಸಿದ
ವರನರರು ಮುಖಮುಖವ ನೋಡುತಲಿ ಬೆರಗಾಗಿ ನೆರನೆರದು ಬೇಗದಿಂದಾ॥
ಸರಸದಿ ನಿನ್ನ ಮಾತಿನ್ನೇಕೆ ? ನಾವೆ ಕಂ
ಡೆರಗೆರಗುತಿಹೆವಾತಗೆನ್ನುತಲಿ ವರಗುರುವ ತಡಸಿದರು ತಮ್ಮೆಡೆಯಲೀ॥೮॥
ನೀರಡಿಸುವಾತ್ಮರೇಯೇಸುವಿನ ಚರಣಕ್ಕೆ
ಶೇರಿರೆಲೆ ಮೂಲೋಕದಲ್ಲೆಲ್ಲಿ ಹುಡುಕಿದರು
ಬೇರುಬ್ಬನಧಿಕಾರಿ ದೊರಕಿಸನು ನಿಮ್ಮಾತ್ಮದಾಹವನು ಕಳೆಯುವದಕೇ॥
ಕೋರಿದದನಾ ವೈದ್ಯ ತಂದಂತೆಯಾಗುವದು
ಹೇರಳಾದಾದರಣೆಯೀವನವನೊಲೈಮೆಯಲಿ
ದೂರವಿರದೀಗೊದಗಿ ಬಂದಮಲ ಜೀವಜಲವಡದು ಕೊಂಡುದ ಕುಡಿಯಿರಿ॥೯॥
೧೧. ಕೊಳದಲ್ಲಿಯ ರೋಗಿಷ್ಟನು ••••• ಭಾಮಿನೀ ಷಟ್ಪದಿ
ಬಂದನೇಸುವೆರೊಸಲೇಮು ವಿ
ನೊಂದು ಬಾಗಲಿಗದನು ಕುರಿಗದ
ವೆಂದು ಹೇಳುವರಲ್ಲಿ ಬೆಥೆಸುದವೆಂಬದೊಂದ್ಕೆರೆಯೂ॥
ಮಂದಿಸಮಜವು-ಕುರುಡಕುಂಟರು
ಮಂದಮೈಯವರೂನರೊಣ ಕೈ
ಯಿಂದ ಕಾಲಿಂ ಕಷ್ಟ ಪಡುವವರಲ್ಲಿ ನೆರೆಯುವರೂ॥೧॥
ಸುಂಟರನಿಲವು ಬಡಿಯುವಂದದಿ
ಘಂಟೆ ಬಂದರೆ ಜಲದ ಮಥನವ
ನುಂಟು ಮಾಡುವನೊಬ್ಬ ದೂತನು ದೇವರಾಜ್ಞೆಯಲೀ॥
ಮಂಟಪಸ್ಥಿತ ಜನರು ನೋಡುತ
ದಾಂಟು ಮೀಂಬರು ದೇಹಸೊಸ್ಥಕೆ
ವೆಂಟಣಿಸುವನು ಗುಣವ ಮೊದಲಿಗೆ ಜಲದ ಪೊಕ್ಕವನೂ॥೨॥
ಕಷ್ಟಪಟ್ಟವನೊಬ್ಬನತಿ ರೋ
ಗಿಷ್ಟನಲ್ಲಿಹನವನು ಬಿದ್ದವ
ರಷ್ಟು ಜನರೊಳು ಚಿಂತೆಯುಳ್ಳವನಾಗಿ ನರಳುವನೂ॥
ಅಷ್ಟತ್ರಿಂಶತಿ ವರ್ಷದಿಂದಲಿ
ದುಷ್ಟ ರೋಗವು ಹತ್ತಿಯವನದು
ಪುಷ್ಟಿ ತಿಂಬುದು ನೆಲದಿ ಬಿದ್ದವನನ್ನು ಗುರು ಕಂಡಾ॥೩॥
ಅವನವಸ್ಥೆಯ ತಿಳಿದು ಕರ್ತನು
ಸವಿಯ ಮಾತನು ಕರುಣೆಯಿಂ ನುಡಿ
ದವನ ಬೇಕೆಲೆ ಗುಣವ ಬಯಸುತಿಯೆನ್ನಲಾಯೊರೆಯೂ॥
ಕಿವಿಗೆ ಬಿದ್ದವನೊಡೆಯ ನನ್ನನು
ಗವನ ಮಾಡುವರಿಲ್ಲ ಕದಲಲು
ತವಕದಿಂದೆನನುದಕಿಡುವವರಾರು ಬಾರರೆನೇ॥೪॥
ಮಗನೆ ಭಯ ಪಡದೆದ್ದು ಬೇಗದಿ
ಹೆಗಲಿಗೆತ್ತಿಸಿಕೊಂಡು ಮಂಚವ
ಸೊಗದಿ ನಡಿಯೈಯೆನುತಲಪ್ಪಣೆ ಕೊಟ್ಟನೇಸುಗುರೂ॥
ಮಿಗಿಲು ಮುದದಿಂ ಗುಣವ ಪಡೆದವ
ನಗಣಿತಾಚ್ಚರವಾಗಿ ಮಂಚವ
ನೆಗಹಿ ನಡೆದನು ಪರಮ ದೇವನ ಶಕ್ತಿವರದಿಂದಾ॥೫॥
ಕೇಳರೆಲ್ಲರೆಯಂಥ ಕೊಳವೀ
ವೇಳೆಯಲ್ಲಿಯು ಕಾಣದಾದರೆ
ಬಾಳಕರುಣೆಯ ವೈದ್ಯನೀಗಲು ಬಾಳುತಿದ್ದಾನೇ॥
ಹೇಳಲೇತಕ್ಕವನ ಹೆಸರನ್
ನಾಳುತಾನೀಗೆಲ್ಲ ಲೋಕವ
ನೇಳಿರವನಿಯ ಜನರೆಯೇಸುವಿನೆಡೆಗೆ ಬೀಳ್ವದಕೇ॥
೧೮. ಶ್ರೇಷ್ಠಪಾಲು ***** ವಾರ್ಧಿಕ್ಯ
ಗ್ರಾಮವೊಂದಕ್ಕೈದಿ ಮುನ್ನಿನಂತೇಸುಗುರು
ಪ್ರೇಮದಿಂ ಶೇರಿದನು ಮಾರ್ಥಳೆಂಬವಳ ಮನೆ
ಯಾ ವನಿತೆಯನುಜಗಿಹ ಮರಿಯಳವಳೊಂದಿಗಿರುವಳವರತಿ ಭಕ್ತರೂ॥
ಹೇಮಕಿಂತಪರಂಜಿಗಿಂತಖಿಲ ಭೂಲೋಕ
ಸೀಮೆಗಳ ರತ್ನಕಿಂತೊಳ್ಳೆ ಮಾತಿಂ ದೇವ
ನಾಮರಾಜ್ಯಾದಿಗಳ ಮರ್ಮವನು ನುಡಿಯುತಿಹನಲ್ಲಿ ಬಂದ್ಕೂತಿರಲ್ಕೆ॥೧॥
ಮರಿಯಳೆಂಬಾಕೆಯ ಸಮಯದೊಳು ಗುರು ನುಡಿಯು
ತಿರುವ ಮಾತಾಲೈಸಿಕೊಳ್ಳುವಂತಧಿಕ
ಹರುಷದಲಿ ಬೋಧಕನ ಪಾದದೆಡೆ ಕುಳ್ತಿರಲು ಮಾರ್ಥಳತಿ ಸೇವಿಸುತ್ತಾ॥
ಕರುತ ಕೇಳಿವಳಿನ್ನನೊಬ್ಬಳಾಗೀ ಕಷ್ಟ
ತರವಾದ ಕೆಲಸವನು ಮಾಡ ಬಿಟ್ಟದಕಾಗಿ
ಕರಕರೆಯು ನಿಂಗಾಗದೇನೈಯ್ಯ ವೊತ್ತಾಸೆ ಗೈವಂತೆ ಹೇಳೆಂದಳೂ॥೨॥
ಬಳಿಕೇಸು ದಯೆಯಿಂದಲುತ್ತರವನೀಯುತ್ತ
ತಳಗಾಣದತಿ ಬಹಳವಾದದಕೆ ಮಾರ್ಥಳೆಲೆ
ತೊಳತೊಳಲಿ ತೊಂದರೆಯ ಪಡುತಿದ್ಧಿ ಕೇಳೆ ಸ್ತ್ರೀಯೆ ಬೇಕಾದದೊಂದೆ ಮಾತ್ರಾ॥
ಉಳಿದೆಲ್ಲ ವಿಧವಿಧಗಳುದ್ಯೋಗಗಳಿಗಿಂತ
ತಿಳಿ ಮರಿಯಳೊಳ್ಳೆ ಪಾಲನ್ನಾದುಕೊಂಡಲ್ಲಿ
ಪೊಳೆಯುತಿರಲಾಕೆಯಿಂದದು ತೆಗೆಯ ಪಡದು ಕೇಳೆಂದವಳನೆಚ್ಚರಿಸಿದಾ॥೩॥
**********
ಸಂಗರವನಾಡಾಡಿ ಬಹುಕೀರ್ತಿ ನಾಮಗಳ
ಸಂಗತಿಗೆ ರಾಜರುಗಳಲೆಯುವರು ವಿದ್ಯೆಗಳ
ಮಂಗಳದ ಜಲನಿಧಿಯ ರತ್ನಗಳನಡೆಯಲ್ಕೆ ವಿದ್ಯಾರ್ಥಿ ಜನರಲೆವರೂ॥
ಅಂಗರಕ್ಷಾರ್ಥದಿಂ ಗೋರಕ್ಷೆ ವಾಣಿಜ್ಯ
ಮುಂಗೊಂಡು ಮತ್ತು ಕೃಷಿ ಸೇವೆಗಳಲಿತರ ಜನ
ಸಂಗಗಳು ಮಿಗೆಯಲೆಯುತಲೆಯುತಲಿ ಕಾಣುವರು ಭೂಲೋಕದಲೆಲ್ಲಿಯೂ॥೧॥
ಅನ್ನಿನಿಂದೀ ವರಿಗೆ ಹಿಂದುಜನರಾದವರೆ
ಬನ್ನ ಪಟ್ಟಲೆವಿರೆಲಾವಾ ಪರಿಯ ಕೆಲಸದಲಿ
ಮುನ್ನ ನಿಜ ಪದವಿಯನು ಚಿಂತಿಸದೆ ದೇವರನು ಸತ್ಯವನು ಬಿಟ್ಟು ಬಿಟ್ಟೂ॥
ಹೊನ್ನು ಹೆಣ್ಣುದರ ಮಣ್ಣಾದಿಗಕಟಚಲವಾದ್
ದನ್ನರಸದಾರೈಸದಂಥ ಮನವತಿಗಳೆದು
ಭಿನ್ನವೇನಿಲ್ಲದಲವಶ್ಯವಾದೇಸುವೊರೆಯಾಲೈಸಿ ಶಾಂತಿಗೊಳಿರೀ॥೨॥
೩೦. ಯೆರೂಸಲೇಮ ವಿಷಯದ ನಿರ್ಣಯ ***** ಭಾಮಿನೀ ಷಟ್ಪದಿ
************************************
ಇಂಚರಾತಿಸುವಾರ್ತೆಯಾಡುತ
ವಂಚನಿಲ್ಲದೇಸು ಗುರು ಪ್ರ
ಪಂಚದಬ್ಧಿಲಿ ಮುಳುಗಿದಾ ಜನ ಕರೆಯುತಿರುವಾಗಾ॥
ಚಂಚಲಾತ್ಮದ ಯೂದಿ ಜನರೊಳ್
ಕೊಂಚ ಮಂದಿಯೆ ಜೀವಪಾನವ
ಹಂಚುವಾತಗೆ ದಿಟ್ಟ ಭಾವದಿ ಬೆನ್ನ ಬಳಸುವರೂ॥೧॥
ಆಗ ನಂಬುತ ತುತಿಯ ಸಲ್ಲಿಸ
ಲೀಗಲೆದುರಿಸಿ ತಮ್ಮ ಪಥದಲಿ
ಸಾಗಿ ಪೋಪರು ಬಾಯಿ ತೆರೆದಿಹ ನರಲೋಕಕ್ಕೇ॥
ಹೀಗೆ ನೋಡುತಲೇಸು ಮರುಳರ
ಮೇಗೆ ನೋವನು ತಾಳಿ ಭಾರಕೆ
ಬಾಗಿ ಮೊರೆಯನ್ನಿಡುತ ದೇಶವ ತಿರುಗಿತಿರುಗುತಿಹಾ॥೨॥
ಸಂದಿ ಬೀದಿಗಳಲ್ಲಿ ನಡೆಯುವ
ಮಂದಿ ನೆವನವನೇನು ಹಿಡುಕೊಳ
ದಂದದಿ ಸರ್ವತ್ರ ಸರ್ವವ ಸರ್ವ ಜನಕೊರೆಯೇ॥
ಒಂದು ದಿನದಲೆರೂಸಲೇಮಿಗೆ
ಬಂದು ದೇವಳದಲ್ಲಿ ಜನರೊಳ್
ನಿಂದು ದುಖ್ಖಿಸಿಯಂತಃಕರಣದಿ ಹೀಗೆ ಹಲುಬಿದನೂ॥೩॥
ಕೇಳು ನಗರವೆರೂಸಲೇಮುವೆ
ವೇಳೆವೇಳೆಗೆ ಬಂದು ಬುದ್ಧಿಯ
ಹೇಳಿ ವಾದಿಸಿದಾ ಪ್ರವಾದಿಗಳನ್ನು ಕೊಂದವಳೇ॥
ಕೀಳ ಮನದಿಂ ದೇವ ಕಳುಹಿಸಿ
ದಾಳುಗಳ ಕಲ್ಲೆಸೆದ ನಗರವೆ
ಬಾಳ ಕರೆದೆನು ನನ್ನ ಮಾತನು ಕೇಳದಿದ್ದಿ ಕಣಾ॥೪॥
ಚಿಕ್ಕ ಮರಿಗಳನೊಂದು ಕೋಳಿಯು
ರೆಕ್ಕೆಯೊಳಗತಿ ಮಮತೆ ತಾಳುತ
ಲಿಕ್ಕುವಂದದಿ ನಿನ್ನ ಹುದುಗಿಸುವಂತೆ ಬಯಸಿದೆನೂ॥
ಮಕ್ಕಳೆನ್ನುತಲಾದರಕಟಾ
ಧಿಕ್ಕುಧಿಕ್ಕರಿಸೆನ್ನ ವಾಕ್ಯವ
ದುಕ್ಕದಬ್ಧಿಯೊಳೆನ್ನ ಹಾಕಲಿಕೊಲ್ಲೆನೆಂದೊರೆದೀ॥೫॥
ಇನ್ನು ನಿನ್ನಯ ಚೆಲುವ ನಿಳಯವು
ಛಿನ್ನಛಿನ್ನದಿ ಹಾಳು ಬೀಳ್ವುದು
ನನ್ನ ಕರುಣಕಾಲ ತಪ್ಪಿತು ನಿನಗೆ ಪಟ್ಟಣವೆ॥
ಉನ್ನತೇಶನ ವಿನುತ ನಾಮದಿ
ನಿನ್ನ ಹತ್ತರ ಬರುವ ಕ್ರಿಸ್ತಗೆ
ಮನ್ನಣಾಗಲೆಲೆನ್ನುವನಕವೆ ನನ್ನ ನೋಡದಿರೂ॥೬॥
*********
ಉಚ್ಚಮಹಿಮಾಕರ್ತನೊರೆದದ್
ದೆಚ್ಚಿದೊಂದತಿ ಹದನ ಬಾಣವೆ
ಯೆಚ್ಚರಾಗಿರಿ ತಾಗಲಿಕ್ಕದು ನಿಮ್ಮ ಹೃದಯಕ್ಕೇ॥
ನಚ್ಚದಿದ್ದರೆ ನೀವು ಮನುಜರೆ
ನಿಚ್ಚ ನಿರ್ಮಲ ಕ್ರಿಸ್ತರಾಜನ
ನಚ್ಚಲಾತ್ಮನ ಬಿಸುಟು ಬಿಟ್ಟರೆ ಹಾಳು ತಪ್ಪದಲೇ॥
ಕರ್ತೃ: ಫರ್ಡಿನಂಡ್ ಕಿಟೆಲ್
ಸಂಪಾದಕರು: ಪ್ರೊ ॥ ಎ. ವಿ. ನಾವಡ
ಪ್ರಕಾಶಕರು: ಕನ್ನಡ ಸಾಹಿತ್ಯ ಪರಿಷತ್ತು
ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ,
ಬೆಂಗಳೂರು-೫೬೦೦೧೮.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ