ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಶನಿವಾರ, ಜನವರಿ 24, 2026

ಜೈಮಿನಿ ಭಾರತ 29 - ದೊಡ್ಡಬೆಲೆ ನಾರಾಯಣಶಾಸ್ತ್ರೀ

ಜೈಮಿನಿ ಭಾರತ 29 - ದೊಡ್ಡಬೆಲೆ ನಾರಾಯಣಶಾಸ್ತ್ರೀ


ಸೂಚನೆ:- ಮಂತ್ರಿ ಮತ್ಸರದಿಂದೆ ಮುಂದೆ ತಪ್ಪುವ ದೈವ। 

ಯಂತ್ರಭೇದವನರಿಯದಿಂದುಹಾಸನ ಮೇಲೆ। 

ತಂತ್ರಮಂ ಪಣ್ಣಿ ಕೊಲಿಸುವೆನೆಂದು ಕಳುಹಿದಂ ಕುಂತಳೇಂದ್ರನ ನಗರಿಗೆ॥ 


ಪ್ರತಿಪದಾರ್ಥ :- ಮಂತ್ರಿ= ಅಮಾತ್ಯನಾದ ದುಷ್ಟಬುದ್ಧಿ, ಮುಂದೆ=ಅನಂತರ, ತಪ್ಪುವ= ನಿವಾರಣೆಯನ್ನೈದುವ, ದೈವ= ದೇವರ ಸಂಬಂಧವಾದ, ಯಂತ್ರ= ಆಜ್ಞೆಯ, ಭೇದವನು= ವ್ಯತ್ಯಾಸವನ್ನು,ಅರಿಯದೆ = ತಿಳಿಯಲಾರದೆ, ಕೊಲಿಸುವೆನು= ಕೊಲ್ಲಿಸುತ್ತೇನೆ, ಎಂದು=ಎಂಬತೆರನಾಗಿ, ಮತ್ಸರದಿಂದ= ಅಸೂಯೆಯಿಂದ, ಇಂದುಹಾಸನಮೇಲೆ= ಚಂದ್ರಹಾಸನಮೇಲೆ, ತಂತ್ರಮಂಪಣ್ಣಿ=ಹೂಟವೊಂದನ್ನು ಬಗೆದು, ಕುಂತಳೇಂದ್ರನ ನಗರಿಗೆ= ಕುಂತಳ ರಾಜ್ಯಕ್ಕೆ, ಕಳುಹಿದಂ = ಕಳುಹಿಸಿಕೊಟ್ಟ- 

ನು. 


ತಾತ್ಪರ್ಯ:-ಮುಂದೆ ದೈವೇಚ್ಛೆಯಿಂದಾಗುವ ಬದಲಾವಣೆಯನ್ನರಿಯದೆ ದುಷ್ಟಬುದ್ಧಿಯು ಚಂದ್ರಹಾಸನನ್ನು ಕೊಲ್ಲುವ ತಂತ್ರವನ್ನು ಹೂಡಿ ಕುಂತಳಪುರಕ್ಕೆ ಕಳುಹಿಸಿದನು. 


ಧ್ರುವನಂಬರಸ್ಥಳದೊಳಸ್ಮತ್ಪಿತಾಮಹಂ। 

ದಿವದೊಳ್ ಭೀಷಣಂ ಲಂಕೆಯೊಳ್ ಪಾತಾಳ । 

ಭುವನದೊಳ್ ಬಲಿ ವಿಷ್ಣುಭಕ್ತರಂ ಕಾಣ್ವರಾರೀ ಚಂದ್ರಹಾಸನಿಂದೆ॥ 

ಅವನಿ ಪಾವನಮಪ್ಪುದಾತನಂ ಸಂಧಿಸುವ। 

ಲವಲವಿಕೆಯಾಗಿರ್ಪ್ಪುದೆಲೆ ತಪೋಧನ ತನಗೆ। 

ವಿವರಿಸೀತನ ಕಥೆಯನೆಂದರ್ಜುನಂ ಕೇಳ್ದೊಡಾ ಮುನಿಪನಿಂತೆಂದನು॥೧॥ 


ಪ್ರತಿಪದಾರ್ಥ :- ಅರ್ಜುನಂ=ಫಲುಗುಣನು ( ನಾರದನನ್ನು ಕುರಿತು) ಎಲೆ ತಪೋಧನ=ಎಲೈ ಋಷಿವರ್ಯನೆ, ಅಂಬರಸ್ಥ-

ಳದೊಳು= ಅಂತರಿಕ್ಷದಲ್ಲಿ, ಧ್ರುವನು= ಧ್ರುವಚಕ್ರವರ್ತಿಯೂ,ದಿವದೋಳ್= ಇಂದ್ರಲೋಕದಲ್ಲಿ, ಅಸ್ಮತ್ಪಿತಾಮಹಂ= ನಮ್ಮ ತಾತನಾದ ವಿಚಿತ್ರವೀರ್ಯನೂ, ಲಂಕೆಯೊಳ್= ಲಂಕಾಪಟ್ಟಣದೊಳಗೆ, ವಿಭೀಷಣಂ= ವಿಭೀಷಣನೂ, ಪಾತಾಳ ಭವನದೊಳ್= ಪಾತಾಳಲೋಕದಲ್ಲಿ, ಬಲಿ= ಬಲಿಚಕ್ರವರ್ತಿಯೂ, (ಇರುವ ಹಾಗೆ) ಆರು= ಯಾರುತಾನೆ, ವಿಷ್ಣುಭಕ್ತರಂ-

ಕಾಣ್ಬರು= ವಿಷ್ಣುಭಕ್ತರನ್ನು ನೋಡುವರು, ಅವನಿ=ಲೋಕವು, ಈ ಚಂದ್ರಹಾಸನಿಂದ= ಈ ಚಂದ್ರಹಾಸನೆಂಬವನಿಂದ, ಪಾವನಂ= ಪವಿತ್ರತೆಯನ್ನೈದಿದ್ದು, ಅಪ್ಪುವುದು=ಆಗುತ್ತದೆ, ಆತನಂ= ಆ ಇಂದುಹಾಸನನ್ನು, ಸಂಧಿಸುವ= ದರ್ಶನಮಾ- 

ಡಿಕೊಳ್ಳತಕ್ಕ, ಲವಲವಿಕೆಯು=ಉತ್ಸಾಹವು,ಆಗಿರ್ಪುದು= ಆಗಿದೆ, ಎಲೆ ತಪೋಧನ= ಮಹನೀಯನೆ, ಈತನ= ಈ ಚಂದ್ರಹಾಸನ ಚರಿತ್ರೆಯನ್ನು, ತನಗೆ=ನನಗೆ, ವಿವರಿಸು= ವಿಸ್ತಾರವಾಗಿ ಹೇಳು, ಎಂದು= ಎಂಬತೆರನಾಗಿ,  ಕೇಳ್ದಡೆ= ಕೇಳಲಾಗಿ, ಇಂತು= ಮುಂದೆಹೇಳುವಂತೆ, ಆ ಮುನಿಪನು= ನಾರದನು, ಎಂದನು= ಹೇಳತೊಡಗಿದನು.


ಅ॥ವಿ॥ ಭವನ= ಮನೆ, ಭುವನ= ಪ್ರಪಂಚ. 


ತಾತ್ಪರ್ಯ:- ಎಲೈ ದೇವಮುನಿಯೆ! ಧ್ರುವರಾಯನು ಅಂತರಿಕ್ಷದಲ್ಲಿಯೂ,ನಮ್ಮ ತಾತನಾದ ವಿಚಿತ್ರವೀರ್ಯನು ಸ್ವರ್ಗ-

ಲೋಕದೊಳಗೂ, ವಿಭೀಷಣನು ಲಂಕಾನಗರದಲ್ಲಿಯೂ, ಬಲಿಚಕ್ರವರ್ತಿಯು ಪಾತಾಳದಲ್ಲಿಯೂ, ಇದ್ದುಕೊಂಡು ವಿಷ್ಣು- 

ಭಕ್ತಾಗ್ರೇಸರರೆಂದು ಖ್ಯಾತಿಗೊಂಡಿರುವೈದಕ್ಕಿಂತಲೂ, ಅತ್ಯಧಿಕವಾದ ಹೆಸರನ್ನೂ, ವಿಷ್ಣುಭಕ್ತಿಯನ್ನೂ ಉಳ್ಳ ಈ ಚಂದ್ರಹಾಸನಿಂದ ಈ ಭೂಮಂಡಲವೆಲ್ಲ ಪಾವನವಾಗುತ್ತಲಿರುವುದು . ಇಂತಹ ಅಸಾಧಾರಣವಾದ ನಡತೆಯುಳ್ಳ ಚಂದ್ರಹ್ಸನನ್ನು ನೋಡಬೇಕೆಂಬ ಕುತೂಹಲವಿರುವುದು. ದಯಮಾಡಿ ಆತನ ಕಥೆಯನ್ನು ನನಗೆ ತಿಳಿಸೆಂದು ಕೇಳಿಕೊಂಡನು. ಫಲುಗುಣನು ಈ ಪ್ರಕಾರವಾಗಿ ನಾರದನನ್ನು ಕೇಳಿಕೊಂಡದ್ದರಿಂದದೇವಮುನಿಯಾದ ನಾರದನು ಚಂದ್ರಹಾಸನ ಮುಂದಿನ ಕಥೆಯನ್ನು ಹೇಳಲಾರಂಭಿಸಿದನು. 


ಆಲಿಸೆಲೆ ಫಲುಗುಣ ಕುಳಿಂದಕನ ಭವನದೊಳ್ । 

ಬಾಲಕಂ ಪೆರ್ಚುವ ಸುಧಾಂಶುಕಳೆಯಿಂ ನಗುವ। 

ಲೀಲೆಯಿಂ ಚಂದ್ರಹಾಸಂ ತಪ್ಪನೆಂಬಂತೆ ದಿನದಿನಕೆಶವರ್ಧಿಸುತಿರೆ॥ 

ಮೇಲೆ ಮೇಲೆಸೆದುದಾ ಪೊಳಲ ಸಿರಿ ವಿಮಲ ಗುಣ। 

ಶೀಲದಿಂ ಮೆರೆದುದೆಲ್ಲಾ ಜನಂ ಬಿಡದೆ ಕೊಡ। 

ವಾಲಂ ಕರೆದುವಾಕಳುತ್ತು ಬಿತ್ತದೆ ಬೆಳೆಯತೊಡಗಿತಿಳೆ ಮಳೆಗಳಿಂದೆ॥೨॥


ಪ್ರತಿಪದಾರ್ಥ :-  ಎಲೆ ಫಲುಗುಣ= ಅಯ್ಯಾ ಪಾರ್ಥನೆ, ಆಲಿಸು= ಕೇಳು, ಬಾಲಂ= ಹಸುಳೆಯಾದ ಚಂದ್ರಹಾಸನು, ಪೆಚ್ಚುವ= ಅಧಿಕವಾಗುವ,ಸುಧಾಂಶು= ಚಂದ್ರನ, ಕಳೆಯಂ= ಹೊಳಪನ್ನು,ನಗುವಲೀಲೆಯಿಂ= ಹಾಸ್ಯಗೈವ ಪರಿಯಿಂದ,

ಚಂದ್ರಹಾಸಂ ತಪ್ಪನು= ಚಂದ್ರಹಾಸನೆಂಬುದರಲ್ಲಿ ಸಂದೇಹವೇ ಇಲ್ಲ, ಎಂಬಂತೆ= ಎನ್ನುವ ರೀತಿಯಾಗಿ, ದಿನದಿನಕೆ= ದಿನೇ ದಿನೇ , ಕುಳಿಂಕನ= ಚಂದನಾವತಿಯೊಡನೆ, ಭವನದೊಳ್= ಮಂದಿರದಲ್ಲಿ, ವರ್ಧಿಸುತಿರೆ= ಮೇಲ್ಮೆಯನ್ನೈದುತ್ತಿರಲು, ಆ ಪೊಳಲ ಸಿರಿ= ಆ ನಗರದ ಐಶ್ವರ್ಯವು, ಮೇಲೆಮೇಲೆ= ಅತ್ಯಧಿಕವಾಗುತ್ತ, ಎಸೆದುದು= ಹೊಳೆಯಲಾರಂಭಿಸಿತು. ಎಲ್ಲಾ ಜನಂ= ಅಲ್ಲಿಯ ನಿವಾಸಿಗಳೆಲ್ಲರೂ,ವಿಮಲ=ಪರಿಶುದ್ಧವಾದ, ಗುಣಶೀಲದಿ= ಸದ್ಗುಣ ಸದಾಚಾರಗಳಿಂದ, ಮೆರೆದುದು= ಪ್ರಸಿದ್ಧವಾಯಿತು, ಆಕಳುಗಳು= ಹಸುಗಳು, ಬಿಡದೆ= ತಪ್ಪದೆ, ಕೊಡವಾಲಂ= ಬಿಂದಿಗೆ ತುಂಬ ಹಾಲನ್ನು, ಕರೆದವು= ಕರೆ-

ಯುತ್ತಿದ್ದವು, ಇಳೆ= ಭೂಮಿ, ಬಿತ್ತದೆ= ಬಿತ್ತನೆ ಮಾಡದಿದ್ದರೂ, ಮಳೆಗಳಿಂದ = ಚನ್ನಾಗಿ ಮಳೆ ಸುರಿಯುವುದರಿಂದ, ಬೆಳೆ- 

ಯತೊಡಗಿತು= ಬೆಳೆಯಲಾರಂಭಿಸಿತು.  


ತಾತ್ಪರ್ಯ:- ಕೇಳೈ ಅರ್ಜುನಾ, ಚಂದ್ರಹೃಸನು ಮೇಧಾವಿಯೆಂಬ ಚಂದನಾವತಿಯ ರಾಜನ ಮನೆಯಲ್ಲಿ ಶುಕ್ಲಪಕ್ಷದ ಚಂದ್ರನಂತೆ ಅಭಿವೃದ್ಧಿಹೊಂದುತ್ತಿದ್ದನು. ಈ ಮಹಾನುಭಾವನು ಮೇಧಾವಿಯ ಮನೆಯನ್ನು ಸೇರಿದಂದಿನಿಂದ ಐಸಿರಿಯು ದಿನೇದಿನೇ ಹೆಚ್ಚುವುದಕ್ಕಾರಂಭವಾಯಿತು. ಆ ಚಂದನಾವತಿಯ ಪ್ರಜೆಗಳೆಲ್ಲಾ ಸದ್ಗುಣ ಸದಾಚಾರ ಸಂಪನ್ನರಾಗಿರುತ್ತಲಿದ್ದ-

ರು. ಅಲ್ಲಿನ ಹಸುಗಳೆಲ್ಲಾ ಒಂದೊಂದು ಬಿಂದಿಗೆಯ ತುಂಬಾ ಹಾಲನ್ನು ಕರೆಯಲಾರಂಭಿಸಿದವು,. ಕಾಲಕಾಲಕ್ಕೆ ಮಳೆಬೆಳೆಗಳು ಆಗುತ್ತ ಪ್ರಜೆಗಳೆಲ್ಲಾ ನೆಮ್ಮದಿಯಾಗಿರುತ್ತಲಿದ್ದರು. 


ಸೂಚಿತದ ಪೂರ್ವಜನ್ಮದ ಪುಣ್ಯಫಲದಿಂದೆ।

ಯಾಚಿತದೊಳನುಪಮದ ಶಿಶು ನಿಧಾನಂ ತನಗೆ।

ಗೋಚರಿಸಿತೆಂದು ನಲಿದಾ ಕುಳಿಂದನುಮವನ ರಾಣಿಯುಂ ದಿನದಿನದೊಳು॥ 

ಲೋಚನಂ ತಣಿಯೆ ನೋಡುತ ಹರ್ಷವಾರಿಧಿಯ। 

ವೀಚಿಯೊಳ್ ಮುಳುಗಾಡಿ ಪುತ್ರವಾತ್ಸಲ್ಯದಿಂ। 

ದಾ ಚಂದ್ರಹಾಸನಭ್ಯುದಯದೊಳ್ ಪೆರ್ಚಿದರನೇಕ ಸಂಪದಮೊದವಲು॥೩॥ 


ಪ್ರತಿಪದಾರ್ಥ :- ಆ ಕುಳಿಂದನು= ಆ ಚಂದನಾವತಿಯೊಡೆಯನೂ, ಅವನ ರಾಣಿಯುಂ= ಆತನ ಅರಸಿಯಾದ ಮೇಧಾವಿನಿಯೂ ಸಹ, ತಮಗೆ=ತಮಗಾದರೊ, ಸೂಚಿತದ= ಒದಗಿದ, ಪೂರ್ವಜನ್ಮದ ಪುಣ್ಯಫಲದಿಂದ= ಹಿಂದಿನ ಜನ್ಮದಲ್ಲಿ ಮಾಡಿದ ಸತ್ಕಾರ್ಯಗಳ ಪರಿಪಾಕದಿಂದ, ಅಯಾಚಿತದೊಳು=ಇಚ್ಛೆಇಲ್ಲದಿರುವಂತೆ, ಅನುಪಮ= ಅಸಾಧಾರಣವಾದ, ಶಿಶುನಿಧಾನಂ= ಮಗುವೆಂಬ ಫಲವು(ನಿಕ್ಷೇಪ) ಗೋಚರಿಸಿತು =ಸಿದ್ಧಿಸಿತು, ಎಂದು=ಎಂಬತೆರನಾಗಿ, ನಲಿದು=ಆನಂದಹೊಂದಿ, ಲೋಚನಂದಣಿಯೆ= ಕಣ್ಣುಗಳಿಗೆ ಸಾಕಾಗುವ ವರೆಗೂ, ದಿನದಿನದೊಳು= ಪ್ರತಿದಿನವೂ, ಹರ್ಷವಾರಿಧಿವೀಚಿಯೊಳ್= ಆನಂದವೆಂಬ ಕಡಲಿನ ತೆರೆಗಳಲ್ಲಿ, ಮುಳುಗಾಡಿ= ತೇಲಾಡಿ, ಅನೇಕ ಸಂಪದಂ= ಐಶ್ವರ್ಯ ಸಮುದಾಯವು, ಒದವಲು= ಬಂದು ಸೇರಲು, ಆ ಚಂದ್ರಹಾಸನ = ಆ ಚಂದ್ರಹಾಸನೆಂಬ ಬಾಲಕನ, ಅಭ್ಯುದಯದೊಳ್

= ಏಳಿಗೆಯಲ್ಲಿ, ಪುತ್ರವಾತ್ಸಲ್ಯದಿಂದ= ಸುತನೆಂಬ ಮೋಹಾತಿಶಯದಿಂದ, ಪೆರ್ಚಿದರು= ಏಳಿಗೆಹೊಂದಿದರು.


ತಾತ್ಪರ್ಯ:- ಚಂದನಾವತಿಯ ರಾಜನೂ ರಾಣಿಯೂ ಸಹ ತಮಗೆ ಅಪ್ರಾರ್ಥಿತವಾಗಿ ದೊರೆತ ಉತ್ತಮೋತ್ತಮವಾದ ಈ ಬಾಲಕನನ್ನು ನೋಡಿ ನೋಡಿ ಆನಂದಗೊಂಡು ತಮ್ಮ ಪೂರ್ವಜನ್ಮದ ಪುಣ್ಯವೇ ಈ ಬಾಲಕನ ರೂಪವಾಗಿ ಬಂದಿರುವು- 

ದೆಂದೆಣಸಿ ಆನಂದಾಬುಧಿಯಲ್ಲಿ ಓಲಾಡುತ್ತಾ, ಬಾಲಕನಾದ ಚಂದ್ರಹಾಸನ ಏಳಿಗೆಯಲ್ಲಿಯೇ ಅತಿಯಾದ ಕುತೂಹಲದಿಂದ ಕೂಡಿದವರಾದರು.


ಲಕ್ಷಣದೊಳೆಸೆವ ಸುಕುಮಾರನಂ ನಗರಿಗ। 

ಧ್ಯಕ್ಷನಾಗಿಹ ಕುಳಿಂದಂ ಕೆಲವು ದಿನದ ಮೇ। 

ಲಕ್ಷರಭ್ಯಾಸಕಿರಿಸಿದೊಡೆ ಹರಿಯೆಂಬೆರಡು ವರ್ಣಮಲ್ಲದೆ ಪೆರತನು॥ 

ಅಕ್ಷಿಯಿಂದೀಕ್ಷಿಸದೆ ವಾಚಿಸದಿರಲ್ಕೆ ಗುರು। 

ಶಿಕ್ಷಿಸಿ ಕನಲ್ದು ಬರೆಯೆಂದೊಡಂ ಕೇಳದಿರೆ। 

ತತ್ಕ್ಷಣದೊಳಾತನೈತಂದವನ ತಾತಂಗದಂ ಪೇಳ್ದೊಡಿಂತೆಂದನು॥೪॥ 


ಪ್ರತಿಪದಾರ್ಥ :- ಕೆಲವು ದಿನದಮೇಲೆ= ಕೆಲವು ದಿನಗಳು ಕಳೆದನಂತರ,ನಗರಿಗೆ= ಚಂದನಾವತಿಗೆ, ಅಧ್ಯಕ್ಷನಾಗಿಹ= ಒಡೆಯನಾಗಿರತಕ್ಕ, ಕುಳಿಂದಕಂ= ಕುಳಿಂದಕನು, ಲಕ್ಷಣದೊಳ್= ಸೌಂದರ್ಯದಲ್ಲಿ,ಎಸೆವ=ಹೊಳೆವ, ಸುಕುಮಾರನಂ =ಕೋಮಲಾಂಗನಾದ ಬಾಲಕನನ್ನು, ಅಕ್ಷರಾಭ್ಯಾಸಕ್ಕೆ= ವಿದ್ಯೆ ಕಲಿಸಲು, ಇರಿಸಿದೊಡೆ=ಬಿಡಲಾಗಿ, ಹರಿಯೆಂಬ= ಹರಿಯೆ-

ನ್ನತಕ್ಕ,ಎರಡನು= ಎರಡನ್ನೆ, ಅಲ್ಲದೆ= ಬಿಟ್ಟರೆ, ಅಕ್ಷಿಯಿಂದ= ತನ್ನ ಕಣ್ಣಿನಿಂದಲೂ ಕೂಡ, ಪೆರತನು= ಅನ್ಯವಾದ್ದನ್ನು, ಈಕ್ಷಿ-

ಸದೆ= ನೋಡದೆ, ವಾಚಿಸದೆ= ಓದದೆ, ಇರಲ್ಕೆ= ಇದ್ದಕಾರಣ, ಗುರು= ಶಿಕ್ಷಕರು, ಶಿಕ್ಷಿಸಿ= ಹೊಡೆದು, ಕನಲ್ದು= ಕೋಪಿಸಿ-

ಕೊಂಡು, ಬರೆಯೊಂದೊಡಂ= ಅಕ್ಷರಗಳನ್ನು ತಿದ್ದೆಂದರೂಶಕೂಡ, ಕೇಳದೆ= ಲೆಕ್ಕಿಸದೆ, ಇದ್ದದ್ದರಿಂದ, ಆತನು=ಆ ಶಿಕ್ಷಕನು, ತಕ್ಷಣದೊಳ್= ಕೂಡಲೇ, ಐತಂದು= ಬಂದು, ಅವನತಾತಂಗೆ= ಕುಳಿಂದರಾಜನಿಗೆ, ಪೇಳ್ದಡೆ= ತಿಳಿಸಲು, ಇಂತೆಂದನು= ಮುಂದೆ ಹೇಳುವಂತೆ ಹೇಳಿದನು. 


ಅ॥ವಿ॥ ಅಧ್ಯಕ್ಷ (ತ್ಸ.) ಅದ್ಧಿಕ( ತ್ಭ) 


ತಾತ್ಪರ್ಯ:- ಹೀಗೆಯೇ ಕೆಲವು ದಿನಗಳು ಕಳೆದ ಬಳಿಕ  ಕುಳಿಂದರಾಜನು, ರಾಜಲಕ್ಷಣಗಳಿಂದೊಪ್ಪುತ್ತಲಿರುವ, ಚಂದ್ರಹಾಸನನ್ನು ವಿದ್ಯಾಭ್ಯಾಸಕ್ಕಾಗಿ ಗುರುವಿನ ಬಳಿಗೆ ಕಳುಹಿದನು. ಆ ವಿದ್ಯಾಗುರುವು ರಾಜಕುಮಾರನಾದ ಚಂದ್ರಹಾಸನಿಗೆ ಎಷ್ಟು ವಿಧವಾಗಿ ಬೋಧಿಸಿದರೂ ನಿಷ್ಫಲವಾಯಿತು. ಚಂದ್ರಹಾಸನಿಗೆ ಹರಿಯೆಂಬೆರಡು ಅಕ್ಷರದಮೇಲಲೆ ಆಶೆಯೇ ಹೊರತು ಮತ್ತೆ ಯಾವುದನ್ನೂ ಕಣ್ಣಿನಿಂದಲೂ ನೋಡದೆಯೂ ಓದದೆಯೂ ಇದ್ದನಾದ್ದರಿಂದ ಗುರುವಿಗೆ ಕೋಪ ಹೆಚ್ಚಿ ಶಿಕ್ಷಿಸಿದರೂ ಕೂಡ ಲೆಕ್ಕಿಸದೆ ಮನಸ್ವಿಯಾಗಿರುವುದನ್ನು ಕಂಡುರಾಜನ ಬಳಿಗೆ ಬಂದು ಇದ್ದ ಸಂಗತಿಯನ್ನೆಲ್ಲಾ ತಿಳಿಸಿದನು. 


ಈತನೇಕಾದಶಿಯೊಳುಪವಾಸಮಂ ಮಾಳ್ಪ। 

ನೀತನಂ ಕಂಡು ನಾವೆಲ್ಲರುಮನುಷ್ಠಿಸುವೆ। 

ವೀತನಚ್ಯುತಭಕ್ತನೀತನಿಂದೆನಗಪ್ಪುದಭ್ಯುದಯಮಿಹಪರದೊಳು॥ 

ಈತನಲ್ಲದೆ ಬೇರೆ ತನುಜಾತರಿಲ್ಲ ತನ। 

ಗೀತನಲ್ಲಿಯೆ ಜೀವಮಾಗಿರ್ಪೆನಾನದರಿ। 

ನೀತನೆಂತಾದೊಡಿರಲೀತಂಗೆ ಶಿಕ್ಷೆ ಬೇಡೆಂದಂ ಕುಳಿಂದನಂದು॥೫॥ 


ಪ್ರತಿಪದಾರ್ಥ :- ಆ ಕುಳಿಂದಂ= ಆ ಕುಳಿಂದನು, ಏಕಾದಶಿಯೊಳು= ಏಕಾದಶಿಯ ದಿವಸ, ಈತನು= ಈ ಚಂದ್ರಹಾಸನು, 

ಉಪವೃಸಮಾಳ್ಪನು= ಉಪವಾಸವನ್ನು ಮಾಡುತ್ತಾನೆ. ನಾವೆಲ್ಲರುಂ= ನಾವುಗಳೆಲ್ಲಾ, ಈತನಂಕಂಡು= ಇವನ ನಡವಳಿ-

ಯನ್ನು ನೋಡಿ, ಅನುಷ್ಠಿಸುವೆವು= ಅನುಸರಿಸಿ ನಡೆಯುತ್ತೇವೆ, ಈತನು= ಈ ಬಾಲಕನಾದರೋ, ಅಚ್ಯುತಭಕ್ತನು= ವಿಷ್ಣು ಭಕ್ತನಾಗಿರುವನು, ಎನಗೆ= ನನಗೆ, ಇಹಪರದೊಳು= ಈ ಲೋಕ ಪರಲೋಕಗಳಲ್ಲಿ, ಅಭ್ಯುದಯಂ= ಏಳಿಗೆಯು,ಈತ-

ನಿಂದ= ಇವನಿಂದಲೇ, ಅಪ್ಪುದು= ಆಗುತ್ತದೆ, ಈತನಲ್ಲದೆ= ಇವನನ್ನುಬಿಟ್ಟರೆ, ಬೇರೆ ಸುತರು= ಬೇರೆ ಮಕ್ಕಳು, ತನಗೆ= ನನಗಾದರೊ, ಇಲ್ಲ=ಇಲ್ಲವು,ಈತನಲ್ಲಿಯೇ= ಈ ಹಸುಳೆಯಲ್ಲಿಯೇ,ಜೀವಂ ಆಗಿರ್ಪೆನು= ನನ್ನ ಜೀವವನ್ನಿಟ್ಟುಕೊಂಡಿರು- 

ವೆನು, ಅದರಿಂ= ಆದಕಾರಣ, ಈತಂ= ಈ ಬಾಲಕನು, ಎಂತಾದೊಡಂ= ಹೇಗೆಬೇಕಾದರೂ, ಇರಲಿ= ಇರತಕ್ಕವನಾಗಲಿ, ಈತಂಗೆ= ಇವನಿಗೆ, ಶಿಕ್ಷೆ= ದಂಡಿಸುವಿಕೆಯು,ಬೇಡ=ಕೂಡದು, ಎಂದು= ಎಂಬುದಾಗಿ , ಅಂದು= ಆ ಕಾಲದಲ್ಲಿ, ಎಂದಂ= ಎಂದು ಹೇಳಿದನು. 


ತಾತ್ಪರ್ಯ:- ಆಗ ಮೇಧಾವಿಯು ವಿದ್ಯಾಗುರುವನ್ನು ಕುರಿತು, ಈ ಬಾಲಕನು ಏಕಾದಶೀದಿನ ಉಪವಾಸವನ್ನು ಮಾಡುವನು. ಇವನನ್ನು ನೋಡಿ ನಾವೆಲ್ಲಾ ಆಚರಿಸುತ್ತಲಿರುವೆವು. ಇವನು ವಿಷ್ಣು ಭಕ್ತರಲ್ಲಿ ಅಗ್ರೇಸರನು. ನನಗೆ ಉಂಟಾ-

ಗಬೇಕಾಗಿರುವ ಇಹ ಪರ ಸುಖಗಳಿಗೆ ಈ ಬಾಲಕನೇ ಕಾರಣನಾಗಿರುವನು. ನನಗೆ ಇವನೊಬ್ಬನೆ ಮಗನಾದ್ದರಿಂದ  ಈ ಹಸುಳೆಯನ್ನು ಕಂಡರೆ ನನಗೆ ಹೆಚ್ಚಾದ ಪ್ರೇಮವಿರುವುದು. ಇವನನ್ನು ಬಿಟ್ಟರೆ ನನ್ನ ಪ್ರಾಣವು ನಿಲ್ಲಲಾರದ ಕಾರಣ ಈಶಬಾಲಕನು ಹೇಗಾದರೂ ಇರಲಿ. ಇವನನ್ನು ಶಿಕ್ಷಿಸಕೂಡದೆಂದು ನುಡಿದನು. 


ಅಂದು ಮೊದಲಾಗಿ ತನ್ನಿಚ್ಛೆಯಿಂ ಚಂದ್ರಹಾ। 

ಸಂ ದಾನವಾರಿಯಂ ಬಿಡದೆ ಬಾಲಕ್ರೀಡೆ। 

ಯಿಂದುತ್ಸವಂಗಳಂ ಮಾಡಿ ಕೆಳೆಯರ್ವೆರಸಿ ಕೊಂಡಾಡಿ ಭಕ್ತಿಯಿಂದೆ॥ 

ತಂದು ಫಲ ವರ್ಗಮಂ ಪೂಜೆಗೈದುಪವಾಸ। 

ದಿಂದ ಜಾಗರಣದಿಂದೇಕಾದಶೀ ವ್ರತವ। 

ನಂದದಿಂದಾಚರಿಪನಖಿಳ ಜನಕುಪದೇಶಿಪಂತೆ ಹರಿ ಮಹಿಮೆಗಳನು॥೬॥ 


ಪ್ರತಿಪದಾರ್ಥ :- ಚಂದ್ರಹಾಸಂ= ಚಂದ್ರಹಾಸನು, ಅಂದುಮೊದಲಾಗಿ = ಕುಳಿಂದನು ವಿದ್ಯಾಗುರುಗಳಿಗೆ ಹೇಳಿದ ಕಾಲದಿಂ-

ದಲೂ, ತನ್ನಿಚ್ಛೆಯಿಂ = ತನ್ನ ಇಷ್ಟಾನುಸಾರ, ದಾನವಾರಿಯಂ= ಕೃಷ್ಣನನ್ನು, ಬಿಡದೆ= ತಪ್ಪದೆ, ಬಾಲಕ್ರೀಡೆಯಿಂದ= ಬಾಲ- 

ರೊಂದಿಗೆ ಆಟದಿಂದ, ಉತ್ಸವಂಗಳಂಮಾಡಿ= ಉತ್ಸವಾದಿಗಳನ್ನು ನೆರವೇರಿಸಿ, ಕೆಳೆಯರ್ವೆರಸಿ= ತನ್ನ ಮಿತ್ರರೊಂದಿಗೆ, ಭಕ್ತಿಯಿಂದ = ಆಸಕ್ತಿಯಿಂದ, ಕೊಂಡಾಡಿ= ನುತಿಸಿ, ಫಲವರ್ಗಮಂ= ನಾನಾ ಪ್ರಕಾರವಾದ ಹಣ್ಣುಗಳನ್ನು,  ತಂದು= ಸಂಗ್ರಹಿಸಿ, ಪೂಜೆಗೈದು= ಆರಾಧನೆ ಮಾಡಿ, ಹರಿಯ= ಕೃಷ್ಣನ, ಮಹಿಮೆಗಳನು= ಮಹಾತ್ಮೆಗಳನ್ನು, ಅಖಿಳಜನಕೆ= ಸಮಸ್ತ ಪ್ರಜೆಗಳಿಗೂ, ಉಪದೇಶಿಪಂತೆ= ತಿಳಿಸುವಂತೆ, ಉಪವಾಸಮಂ= ಉಪವಾಸವನ್ನು,  ಜಾಗರಣದಿಂದ= ಎಚ್ಚರಿಕೆ-

ಯಿಂದ, ಏಕಾದಶಿವ್ರತವನು= ಏಕಾದಶಿಯ ನಿಯಮವನ್ನು,  ಆನಂದದಿಂ= ಉತ್ಸಾಹದಿಂದ,  ಆಚರಿಪನು= ನಡೆಯಿಸುವನು. 


ಅ॥ವಿ॥ ಪೂಜೆಗೈ=ಪೂಜೆ+ಕೆಯ್ ( ಕ್ರಿ. ಸ. ) ಕೆಳೆ= ಸ್ನೇಹ, ಕಳೆ= ಹೋಗಲಾಡಿಸುವುದು ಮತ್ತು ಅಪ್ರಕೃತವಾದ ಪೈರು. 


ತಾತ್ಪರ್ಯ:- ಅಂದಿನಿಂದಲೂ ಈ ಚಂದ್ರಹಾಸನು ಸ್ವೇಚ್ಛೆಯಾಗಿ ಬೆಳೆಯುತ್ತಲಿದ್ದನು. ಇವನು ಯಾವಾಗಲೂ ಅನೇಕ ಬಾಲಕರನ್ನು ಕೂಡಿಕೊಂಡು ನಾನಾ ಪ್ರಕಾರವಾದ ಫಲಪುಷ್ಪಗಳನ್ನು ತಂದು, ಶ್ರೀಮನ್ನಾರಾಯಣನನ್ನು ಆರಾಧಿಸುತ್ತಾ, ಅವನ ಮಹತ್ವವನ್ನು ಸಕಲರಿಗೂ, ಬೋಧಿಸುತ್ತಲಿರುವನೋ ಎಂಬಂತೆ ಎಚ್ಚರಿಕೆಯಿಂದಲೂ, ಉಪವಾಸದಿಂದಲೂ, ಏಕಾದಶೀವ್ರತವನ್ನು ಸಾಂಗವಾಗಿ ನೆರವೇರಿಸುತ್ತಲಿದ್ದನು.

ಮೆಲ್ಲನಿಂತಿರಲೆಂಟನೆಯ ವರುಷಮಾಗಲ್ಕೆ।

ನಿಲ್ಲದುಪನಯನಮಂ ವಿರಚಿಸಿ ಕುಳಿಂದಂ ಸ। 

ಮುಲ್ಲಾಸಮಂ ತಾಳ್ದನಂಗಸಹಿತಖಿಳ ವೇದಂಗಳಂ ನೀತಿಗಳನು॥ 

ಸಲ್ಲಲಿತ ಶಬ್ಧಾದಿ ಶಾಸ್ತ್ರಸಿದ್ಧಾಂತಂಗ। 

ಳೆಲ್ಲಮಂ ಗುರುಮುಖದೊಳಧಿಕರಿಸಿ ಬೇಕಾದ। 

ಬಿಲ್ಲವಿದ್ಯೆಯನರಿದು ಗಜ ತುರಗದೇರಾಟದೊಳ್ ಚತುರನಾದನವನು॥೭॥ 


ಪ್ರತಿಪದಾರ್ಥ :- ಇಂತು= ಈ ಬಗೆಯಾಗಿ, ಇರಲು= ಇರುತ್ತಿರುವಾಗ,ಮೆಲ್ಲನೆ=ನಿಧಾನವಾಗಿ, ಎಂಟನೆಯ ವರ್ಷಂ= ಎಂಟನೆಯವರುಷವು, ಆಗಲ್ಕೆ= ಆದಕಾರಣ, ನಿಲ್ಲದೆ= ಸಾವಕಾಶಮಾಡದೆ, ಕುಳಿದಂ= ಕುಳಿಂದನು, ಉಪನಯನಮಂ= ಉಪನಯನವೆಂಬ ವೇದಾದಿಕರ್ಮವನ್ನು, ವಿರಚಿಸಿ= ನೆರವೇರಿಸಿ, ಸಮುಲ್ಲಾಸಮಂ ತಾಳ್ದನು= ಸಂತೋಷಗೊಂಡನು, ಅವಂ= ಆ ಬಾಲಕನಾದರೊ, ಗುರುಮುಖದೊಳು= ಗುರುವಿನ ಮೂಲಕವಾಗಿ, ಅಂಗಸಹಿತ= ಶಿಕ್ಷಾದಿ ಷಡಂಗಗಳಿಂದ ಕೂಡಿರತಕ್ಕ, ವೇದಂಗಳಂ= ವೇದಗಳನ್ನು, ನೀತಿಗಳನು= ನ್ಯಾಯಶಾಸ್ತ್ರವನ್ನು,ಸಲ್ಲಲಿತ= ಸುಲಭವಾದ, ಶಬ್ಧಾದಿ=ಶಬ್ಧಗ- 

ಳೇ ಮೊದಲಾಗಿರತಕ್ಕ, ಸಿದ್ಧಾಂತಗಳೆಲ್ಲಮಂ= ಸಕಲ ಸಾರಾಂಶವನ್ನು,  ಗುರುಮುಖದೊಳ್= ಗುರುವಿನ ಮೂಲಕ, ಅಧಿಕರಿಸಿ= ಅಭ್ಯಾಸಮಾಡಿ, ಬೇಕಾದ= ಅವಶ್ಯಕವಾದ, ಬಿಲ್ಲವಿದ್ಯೆಯನು= ಧನುರ್ವಿದ್ಯೆಯನ್ನು, ಅರಿದು=ತಿಳಿದುಕೊಂಡು

ಗಜತುರಗದ= ಆನೆಶಕುದುರೆಗಳ, ಏರಾಟದೊಳ್= ಸವಾರಿಯಲ್ಲಿ, ಅವನು=ಆ ಬಾಲಕನು, ಚತುರನಾದನು= ಪ್ರವೀಣನಾದನು. 


ಅ॥ವಿ॥ ವೇದಗಳು= ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣವೇದ ಎಂಬಿವು, ವೇದಾಂಗಗಳು= ಶಿಕ್ಷೆ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೋತಿಷ, ಕಲ್ಪ ಎಂಬಿವು. 


ತಾತ್ಪರ್ಯ:- ಹೀಗಿರುವಾಗ ಈ ಬಾಲಕನಿಗೆ ಎಂಟನೆಯ ವರ್ಷವಾಗಲು,ರಾಜನಾದ ಮೇಧಾವಿಯು ಯಥಾ-

ವಿಧಿಯಾಗಿ ಉಪನಯನ ಮಹೋತ್ಸವವನ್ನು ನೆರವೇರಿಸಿ, ಗುರುಮುಖದಿಂದ ವಿದ್ಯೆಯನ್ನು ಕಲಿಸಲಾರಂಭಿಸಿದನು, ಈ ಬಾಲಕನಾದರೊ, ಕೆಲವು ದಿವಸಗಳೊಳಗಾಗಿ ವೇದವೇದಾಂಗಗಳಲ್ಲಿಯೂ, ಶಬ್ಧಾದಿ ಶಾಸ್ತ್ರಂಗಳಲ್ಲಿಯೂ ಪಂಡಿತನಾದನು. ಧನುರ್ವಿದ್ಯೆಯಲ್ಲಿಯೂ,ಆನೆ ಕುದುರೆಗಳ ಸವಾರಿಯಲ್ಲಿಯೂ, ಇವನನ್ನು ಮೀರಿಸತಕ್ಕವರೇ 

ಇರಲಿಲ್ಲವು. 


ವಿದಿತ ವೇದಾರ್ಥಮಂ ವಿಷ್ಣುವೆಂದರಿತು ಬಹು। 

ವಿಧ ಶಾಸ್ತ್ರತತಿಗೆ ಹರಿ ಗತಿಯೆಂದು ತಿಳಿದು ತಾ। 

ನಧಿಕರಿಸಿ ಬಳಿಕ ನಿಜಭಕ್ತಿಚಾಪಕೆ ಸತ್ವಗುಣವನಳವಡಿಸಿ ತನ್ನ॥ 

ಸುಧಿಯ ಶರಮಂ ಪೂಡಿ ಕೃಷ್ಣನಂ ಗುರಿಮಾಡಿ। 

ವಿಧುಹಾಸನನುಪಮ ಧನುರ್ವಿದ್ಯೆಯಂ ಜಗದೊ। 

ಳಧಿಕತರಮಾಗೆ ಸಾಧಿಸಿ ಪರಮ ಭಾಗವತ ಕಲೆಗಳಿಂದೆಸೆದಿರ್ದನು॥೮॥ 


ಪ್ರತಿಪದಾರ್ಥ :- ವಿಧುಹಾಸನು= ಚಂದ್ರಹಾಸನು, ವಿದಿತ= ಗೋಚರವಾದ, ವೇದಾರ್ಥಮಂ= ವೇದದ ಸಾರವನ್ನು, ವಿಷ್ಣು- 

ವೆಂದು= ವಿಷ್ಣುವೆಂಬುದಾಗಿ,ಅರಿದು=ತಿಳಿದು, ಬಹುವಿಧ= ನಾನಾ ಬಗೆಯಾದ, ಶಾಸ್ತ್ರತತಿ= ಶಾಸ್ತ್ರಗಳ ಗುಂಪು, ಹರಿಯೇ= ಕೃಷ್ಣನೇ, ಗತಿಯೆಂದು= ದಿಕ್ಕೆಂಬುದಾಗಿ,ತಿಳಿದು= ತಿಳಿದುಕೊಂಡು, ತಾನು= ತಾನಾದರೊ,ಅಧಿಕರಿಸಿ= ಸಕಲಶಾಸ್ತ್ರಗಳನ್ನೂ ಕಲಿತು.ಬಳಿಕ= ಅನಂತರ, ನಿಜ= ತನ್ನ, ಭಕ್ತಿಚಾಪಕೆ= ಭಕ್ತಿಯೆಂಬ ಬಿಲ್ಲಿಗೆ,ಸತ್ವಗುಣವನು= ಸನ್ಮಾರ್ಗವೆಂಬ ಹುರಿಯನ್ನು, ಅಳವಡಿಸಿ = ಜೋಡಿಸಿ,  ತನ್ನ= ತನ್ನದಾದ ,ಸುಧಿಶರಮಂ ಪೂಡಿ= ಸುಜ್ಞಾನವೆಂಬ ಅಲಗನ್ನುಹೂಡಿ, ಕೃಷ್ಣನಂ ಗುರಿಮಾಡಿ

= ಕೃಷ್ಣನನ್ನು ಎದುರಾಳನ್ನಾಗಿ ತಿಳಿದು, ಜಗದೊಳು= ಲೋಕದಲ್ಲಿ ,ಅಧಿಕತರಂ= ಬಹು ಹೆಚ್ಚಾದದ್ದು, ಆಗೆ= ಆಗುವಂತೆ, ಅನುಪಮ= ಅಸಾಧಾರಣವಾದ, ಧನುರ್ವಿದ್ಯೆಯಂ ಸಾಧಿಸಿ= ಬಾಣಪ್ರಯೋಗದ ಪ್ರಾವೀಣ್ಯವನ್ನು ಸಾಧಿಸಿ, ಪರಮ= ಶ್ರೇಷ್ಠವಾದ, ಭಾಗವತಕಲೆಗಳಿಂದ,= ಭಗವಂತನ ಭಕ್ತರ ಕಾಂತ್ಯತಿಶಯದಿಂದ, ಎಸೆದಿರ್ದನು= ಹೊಳೆಯುತ್ತಲಿದ್ದನು.


ತಾತ್ಪರ್ಯ:- ಈ ಚಂದ್ರಹಾಸನು ಭಕ್ತಿಯೆಂಬ ಧನುಸ್ಸಿಗೆ ಸನ್ಮಾರ್ಗವೆಂಬ ಹುರಿಯನ್ನು ಕಟ್ಟಿ ತನ್ನ ಬುದ್ಧಿಯೆಂಬ ಬಾಣವನ್ನು ಹೂಡಿ, ಗುರಿಯಿಟ್ಟು ಕೃಷ್ಣನೆಂಬ ವಸ್ತುವನ್ನು ಹೊಡೆದು ಸ್ವಾಧೀನಮಾಡಿಕೊಂಡದ್ದರಿಂದಲೇ ಅತ್ಯುನ್ನತಿಯನ್ನೈದಿದನು ಎಂಬಂತೆ ಸುಲಕ್ಷಣಗಳಿಂದ ಮೆರೆಯುತ್ತಲಿದ್ದನು. 


ಷೋಡಶ ಪ್ರಾಯದೊಳವಂ ಪ್ರಬಲ ಭಟನಾಗಿ। 

ಮೂಡಿದಗ್ಗಳಿಕೆಯಿಂದೈದೆ ರಥಿಕರ್ಕಳಂ। 

ಕೂಡಿಕೊಂಡೈದಿ ನಿಜ ತಾತಂಗೆ ಮಲೆವ ಮನ್ನೆಯರೆಲ್ಲರಂ ಘಾತಿಸಿ॥ 

ಮಾಡಿದಂ ದಿಗ್ವಿಜಯಮಂ ಕುಳಿಂದಕನಾಳ್ವ। 

ನಾಡಲ್ಲದೆಣ್ದೆಸೆಯ ಸೀಮೆಗಳನೊತ್ತಿದಂ। 

ಪೂಡಿಸಿದನವರವರ ಮನೆಗಳ ಸುವಸ್ತುಜಾಲಂಗಳಂ ತನ್ನ ಪುರಕೆ॥೯॥ 


ಪ್ರತಿಪದಾರ್ಥ :- ಅವಂ= ಆ ಚಂದ್ರಹಾಸನು, ಷೋಡಶಪ್ರಾಯದೊಳು= ತನ್ನ ಹದಿನಾರನೆಯ ವಯಸ್ಸಿನಲ್ಲಿ, ಪ್ರಬಲ= ಹೆಚ್ಚಾದ, ಬಲನು= ಸಾಮರ್ಥ್ಯವುಳ್ಳವನಾಗಿ, ರಥಿಕರ್ಕಳಂ ಕೂಡಿಕೊಂಡು = ರಥಿಕರೊಂದಿಗೆ ಬೆರೆತು, ಐದೆ= ಚೆನ್ನಾಗಿ, ಮೂಡಿದ= ಲಭ್ಯವಾದ, ಅಗ್ಗಳಿಕೆಯಿಂದ= ಸಾಹಸದಿಂದ, ಐದಿ=ಹೊರಟು, ನಿಜತಾತಂಗೆ= ತನ್ನ ತಂದೆಗೆ, ಮಲೆವ= ಎದುರಾಳುಗಳಾಗುವ, ಮನ್ನೆಯರೆಲ್ಲರಂ= ರಾಜರನ್ನೆಲ್ಲಾ,ಘಾತಿಸಿ= ಸಂಹರಿಸಿ, ದಿಗ್ವಿಜಯಮಂ ಮಾಡಿದನು= ಗೆಲುವನ್ನು ಹೊಂದಿದನು, ಕುಳಿಂದಕನು= ಪ್ರಭುವು, ಆಳ್ವ=ಪರಿಪಾಲಿಸತಕ್ಕ, ನಾಡಲ್ಲದೆ= ತನ್ನ ರಾಜ್ಯವಲ್ಲದೆ, ಎಣ್ದೆಸೆಯಸೀಮೆಗಳನು

= ಎಟುದಿಕ್ಕಿನಸರಹದ್ದುಗಳನ್ನೂ, ಒತ್ತಿದಂ= ಆವರಿಸಿದನು, ತನ್ನಪುರಕ್ಕೆ= ತನ್ನ ನಗರಿಗೆ, ಅವರವರ= ಆಯಾ ಪ್ರಜೆಗಳ,

ಮನೆಗಳ= ಮಂದಿರಗಳ, ಸುವಸ್ತು ಜಾಲಂಗಳಂ= ಉತ್ತಮ ಪದಾರ್ಥಗಳ ರಾಶಿಯನ್ನೂ, ಪೂಡಿಸಿ= ಸಾಗಿಸಿಕೊಂಡು ಬಂದು ಸೇರಿಸಿದನು. 


ತಾತ್ಪರ್ಯ:- ಇವನು ಸಕಲಕಲಾಕೋವಿದನಾಗುವ ವೇಳೆಗೆ ಹದಿನಾರುವರ್ಷ ಪ್ರಾಯದವನಾದನು. ಇವನಿಗೆ ಕಾಯಶಕ್ತಿಯು ದಿನೇದಿನೇ ಹೆಚ್ಚಿತು. ಆಗ ಚಂದ್ರಹಾಸನು ಮಹಾರಥಿಕರಿಂದಲೂ ಅಪರಿಮಿತವಾದ ಸೇನಾಸಮುದ್ರದಿಂ- 

ದಲೂ, ಕೂಡಿ ತಮ್ಮ ತಂದೆಗೆ ಶತ್ರುಗಳಾದ ರಾಜರ ದೇಶಗಳಮೇಲೆ ನುಗ್ಗಿ ಎಲ್ಲರನ್ನೂ ಜಯಿಸಿ ರಾಜ್ಯವನ್ನು ವಿಸ್ತರಿಸಿದನು. ಮತ್ತು ಅವರ ಸರ್ವಸ್ವವನ್ನು ಸೂರೆಗೊಂಡನು.


ಹರಿಯನಾರಾಧಿಸದೆ ರಾಜ್ಯಮದದಿಂ ಸೊಕ್ಕಿ। 

ದರಿ ಭೂಪರಂ ಗೆಲ್ದು ಮಣಿ ಕನಕ ಮುಕ್ತಾಳಿ। 

ಕರಿ ತುರಗ ಮೊದಲಾದ ಮುಖ್ಯ ವಸ್ತು ಪ್ರತತಿ ಸಹಿತ ಪಟ್ಟಣಕೆ ಬರಲು॥ 

ಪುರದ ಸಿಂಗರದ ಮಂಗಳ ವಾದ್ಯರವದಬಲೆ। 

ಯರ ಸೊಡರ್ವೆಳಗಿನಾರತಿ ಮಹೋತ್ಸವದ। 

ಸಿರಿಯೊಳ್ ಕುಳಿಂದಂ ಕುಮಾರನಿದಿರ್ಗೊಳಿಸಿ ಮತ್ತೆ ಕಾಣಿಸಿಕೊಂಡನು॥೧೦॥ 


ಪ್ರತಿಪದಾರ್ಥ:- ರಾಜ್ಯಮದದಿಂ = ರಾಜ್ಯಭಾರದ ಅಹಂಕಾರದಿಂದ, ಹರಿಯನು= ಶ್ರೀಕೃಷ್ಣನನ್ನು, ಆರಾಧಿಸದೆ= ಪೂಜೆ- 

ಮಾಡದೆ, ಸೊಕ್ಕಿದ= ಗರ್ವಿಷ್ಟರಾದ, ಅರಿಭೂಪರಂ= ಶತ್ರುರಾಜರನ್ನು, ಗೆಲ್ದು= ಜಯಿಸಿ,  ಮಣಿ=ರತ್ನಗಳು, ಕನಕ= ಬಂಗಾರ, ಮುಕ್ತಾಳಿ= ಮುತ್ತಿನ ರಾಶಿಯು,ಕರಿ=ಆನೆಗಳು, ತುರಗ= ಕುದುರೆಗಳು,ಮೊದಲಾದ = ಮುಂತಾದುವುಗಳ, ಮುಖ್ಯವಸ್ತುಪ್ರತತಿಸಹಿತ= ಮುಖ್ಯವಾದ ಪದಾರ್ಥ ಸಹಿತವಾಗಿ, ಪಟ್ಟಣಕೆ= ಚಂದನಾವತಿಗೆ, ಬರಲು= ಬಂದಕಾರಣ, ಪುರದ= ಪಟ್ಟಣದ, ಸಿಂಗರ= ಅಲಂಕಾರದ., ಮಂಗಳ = ಕಲ್ಯಾಣಪ್ರದಮಾದ, ವಾದ್ಯರವದ= ವಾದ್ಯಗಳಧ್ವನಿ, ಅಬಲೆಯರ= ನಾರಿಯರ, ಸೊಡರ್ವೆಳಗಿನ= ದೀಪದ ಕಾಂತಿಯ, ಆರತಿಗಳ= ಮಂಗಳಾರತಿಯ, ಸಿರಿಯೊಳ್= ಐಶ್ವರ್ಯದಿಂದ, ಕುಳಿಂದಂ = ಕುಳಿಂದ ನರಪತಿಯು, ಕುಮಾರನನು= ಪುತ್ರನಾದ ಚಂದ್ರಹಾಸನನ್ನು, ಇದಿರ್ಗೊಳಿಸಿ= ಇದಿರ್ಗೊಂಡವನಾಗಿ,ಮತ್ತೆ=ತಿರುಗಿ, ಕಾಣಿಸಿಕೊಂಡವನಾದನು. 


ಅ॥ವಿ॥ ಸಿಂಗರ(ತ್ಭ) ಶೃಂಗಾರ (ತ್ಸ) ಸಿರಿ (ತ್ಭ) ಶ್ರೀ (ತ್ಸ)


ತಾತ್ಪರ್ಯ:- ರಾಜ್ಯಮದದಿಂದ ಹರಿಯನ್ನ ಆರಾಧಿಸದ ಶತ್ರು ರಾಜರನ್ನು ಗೆಲ್ದು ಅವರಿಂದ ಮುತ್ತು,ರತ್ನ,ಬಂಗಾರ, ಆನೆ, ಕುದುರೆ ಮೊದಲಾದ ವಸ್ತುಗಳನ್ನೊಡಗೊಂಡು ಪಟ್ಟಣಕ್ಕೆ ಮಹಾ ವೈಭವದಿಂದ ಬರುತ್ತಲಿರುವದನ್ನು ಕುಳಿಂದಕನು ನೋಡಿ ಮಗನನ್ನು ಎದುರುಗೊಳ್ಳಲು ಮಡದಿಯೊಡನೆ ಹೊರಟನು. ಪಟ್ಟಣವೆಲ್ಲಾ ಶೃಂಗಾರವಾಯಿತು,ಮಂಗಳವಾದ್ಯಗಳು ಮೊಳಗಲಾರಂಭಿಸಿದವು. ಚಂದನಾವತಿಯ ಸ್ತ್ರೀಯರೆಲ್ಲಾ ಆರತಿಗಳನ್ನು ಹಿಡಿದು ಹೊರಟರು. 


ತಾಯಿತಂದೆಗಳೀಗಳಿಂದಿರಾದೇವಿ ನಾ। 

ರಾಯಣರ್ ತನಗೆಂದು ಭಾವಿಸಿ ನಮಿಸಲವರ್। 

ಪ್ರೀಯದಿಂ ತನಯನಂ ತೆಗೆದಪ್ಪಿದರ್ ಬಳಿಕ ಪುರವೀಧಿಯೊಳ್ ಬರುತಿರೆ॥ 

ಆಯತಾಕ್ಷಿಯರಾಗಳಲರ್ಗಳಂ ಚೆಲ್ಲಿದರ್। 

ಕಾಯಜಾಕೃತಿಯೊಳೈತಹ ಚಂದ್ರಹಾಸನ ವಿ। 

ಡಾಯಮಂ ನೋಡುವ ಕಟಾಕ್ಷದ ಮರೀಚಿಗಳ ವೀಚಿಗಳ ವಿಕಿರದೊಡನೆ॥೧೧॥ 


ಪ್ರತಿಪದಾರ್ಥ :- ಈಗಲ್= ಈಗಲಾದರೊ, ತನಗೆ= ನನಗೆ, ತಾಯಿತಂದೆಗಳ್= ಜನನೀ ಜನಕರು, ಇಂದಿರಾದೇವಿ ನಾರಾಯಣರು= ರಾಧಾಮಾಧವರು, ಎಂದು= ಎಂಬುದಾಗಿ, ಭಾವಿಸಿ= ತಿಳಿದುಕೊಂಡು, ನಮಿಸಲು= ಎರಗಲು, ಅವರ್= ಅವರೀರೂವರೂ, ತನಯನಂ= ಮಗನನ್ನು, ಪ್ರಿಯದಿಂ= ಅಕ್ಕರೆಯಿಂದ, ತೆಗೆದಪ್ಪಿದರ್ = ಬಾಚಿ ತಬ್ಬಿಕೊಂಡರು, ಬಳಿಕ = ತರುವಾಯ, ಪುರವೀಧಿಯೊಳ್= ನಗರದ ದೊಡ್ಡ ರಸ್ತೆಯಲ್ಲಿ, ಬರುತಿರೆ= ಬರುತ್ತಿರಲಾಗಿ, ಆಗಲು= ಆ ಕಾಲದಲ್ಲಿ, ಕಾಯಜಾಕೃತಿಯೊಳು= ಮನ್ಮಥಾಕಾರದಿಂದ, ಐತಹ= ಬರುತ್ತಿರುವ, ಚಂದ್ರಹಾಸನ = ಇಂದುಹಾಸನ, ವಿಡಾಯಮಂ= ರಾಜಾಂಗಗಳನ್ನು, ನೋಡುವ=ಈಕ್ಷಿಸುವ, ಕಟಾಕ್ಷದ= ಕಡೆಗಣ್ಣುನೋಟದ, ಮರೀಚಿವೀಚಿಯ= ಕಿರಣಸಮುದಾಯದ, ವಿಕೀರ್ಣದೊಡನೆ= ಚಲ್ಲುವಿಕೆಯೊಂದಿಗೆ, ಆಯತಾಕ್ಷಿಯರು= ವಿಶಾಲನೇತ್ರೆ-

ಯರು, ಅಲರ್ಗಳಂಚೆಲ್ಲಿದರು= ಹೂಮಳೆಗರೆದರು. 


ತಾತ್ಪರ್ಯ:- ಇಂತಹ ಸಂಭ್ರಮದಿಂದ ಬರುತ್ತಲಿರುವ ಕುಳಿಂದಕನನ್ನೂ, ಆತನರಸಿಯಾದ ಮೇಧಾವಿನಿಯನ್ನೂ, ಚಂದ್ರಹಾಚಂದ್ರಹಾಸನು ನೋಡಿದ ಕೂಡಲೇ ಅವರನ್ನು ಲಕ್ಷ್ಮೀನಾರಾಯಣರೆಂದು ಸಂತಸವುಳ್ಳವನಾಗಿ ಅವರ ಪಾದಾಂಬುಜಗಳಿಗೆರಗಿದನು. ಆ ದಂಪತಿಗಳು ಚಂದ್ರಹಾಸನನ್ನು ಮೇಲಕ್ಕೆಬ್ಬಿಸಿ ಸಂತೋಷಾತಿಶಯದಿಂದ ಗಾಢಾಲಿಂಗನವನ್ನು ಮಾಡಿಕೊಂಡು,  ಅತ್ಯುತ್ಸವದಿಂದ ಆ ಬಾಲಕನೊಂದಿಗೆಪಟ್ಟಣದ ಬೀದಿಯಲ್ಲಿ ಬರುತ್ತಿರುವುದನ್ನು ಕಂಡ ಕಂಡ ಅಬಲೆಯರೆಲ್ಲಾ ಊವನ ಮೇಲೆ ಪುಷ್ಪಗಳನ್ನು ಎರಚುವುದರಿಂದಲೂ, ಕಟಾಕ್ಷವೀಕ್ಷಣದಿಂದಲೂ ಆನಂದ ಪಡುತ್ತಾ ಹೂಮಳೆಗರೆದರು. 


ನಿಳಯಕೈದಿದನುತ್ಸವದಿಂ ಕುಳಿಂದಕಂ। 

ಬಳಿಕ ತನ್ನಾಧಿಪತ್ಯವನ್ನಾತ್ಮಜಂಗೆ ಮಂ। 

ಗಳ ಮುಹೂರ್ತದೊಳಿತ್ತನಂದಿನಿಂ ಚಂದ್ರಹಾಸಂ ಪಾಲಿಸುವನಿಳೆಯನು॥ 

ತುಳುಕಾಡಿತಾನಾಡ ಸಿರಿ ಚಂದನಾವತಿಯ । 

ಪೊಳಲ ಸೌಭಾಗ್ಯಮಭಿವರ್ಧಿಸಿತು ವೈಷ್ಣವದ। 

ಬಳೆವಳಿಗೆಯಾದುದೆಲ್ಲಾ ಜನದೊಳಾಚಾರ ಗುಣ ದಾನ ಧರ್ಮದಿಂದೆ॥೧೨॥ 


ಪ್ರತಿಪದಾರ್ಥ :- ಕುಳಿಂದಕಂ= ಕುಳಿಂದಕನಾದರೊ, ಉತ್ಸವದಿಂದ= ಅತ್ಯಾನಂದದಿಂದ,ನಿಳಯಕೆ= ತನ್ನ ಮನೆಗೆ, ಐತಂದನು= ಬಂದು ಸೇರಿದನು. ಬಳಿಕ = ಆಮೇಲೆ, ಮಂಗಳಮುಹೂರ್ತದೊಳು= ಶುಭಲಗ್ನದಲ್ಲಿ, ತನ್ನ= ಸ್ವಕೀಯವಾದ, ಆಧಿಪತ್ಯವನು= ಒಡೆತನವನ್ನು, ಆತ್ಮಜಂಗೆ=ಕುವರನಾದ ಚಂದ್ರಹಾಸನಿಗೆ, ಇತ್ತನು=ಒಪ್ಪಿಸಿದನು, ಅಂದಿನಿಂ= ಆ ಹೊತ್ತಿನಿಂದಲೂ, ಚಂದ್ರಹಾಸನು = ಚಂದ್ರಹಾಸನೆಂಬ ಬಾಲಕನು, ಇಳೆಯನು= ಚಂದನಾವತಿಗೆ ಸೇರಿದ ರಾಜ್ಯವನ್ನೆಲ್ಲಾ, ಪಾಲಿಸುವನು= ಸಲಹುವನು, ಆ ನಾಡಸಿರಿ=ಆ ರಾಜ್ಯದ ಸಂಪತ್ತು, ತುಳುಕಾಡಿತು= ಅತ್ಯಧಿಕವಾಯಿತು, ಚಂದನಾವತಿಯ = ಚಂದನಾವತಿಯೆಂಬ, ಪೊಳಲ= ನಗರದ, ಸೌಭಾಗ್ಯಂ= ಐಸಿರಿಯು, ಅಭಿವರ್ಧಿಸಿತು= ಅಧಿಕವಾಯಿತು, ಆಚಾರ= ಸನ್ಮಾರ್ಗವು,ಗುಣ= ಸದ್ಗುಣಗಳು, ದಾನ= ದಾನಮಾಡುವುದು, ಧರ್ಮದಿಂದ =ಸತ್ಕಾರ್ಯದಿಂದ, ವೈಷ್ಣವಂ= ಶ್ರೀಕೃಷ್ಣ-

ಸ್ವಾಮಿಯಲ್ಲಿ ಭಕ್ತಿಯು, ಎಲ್ಲಾ ಜನದೊಳು=ಸಕಲಪ್ರಜೆಗಳಲ್ಲಿಯೂ, ಬೆಳವಣಿಗೆಯಾದುದು= ವೃದ್ಧಿಯನ್ನೈದಿತು.


ತಾತ್ಪರ್ಯ:- ಈ ರೀತಿಯಲ್ಲಿ ಮಹೋತ್ಸವದಿಂದ ಬರುತ್ತಲಿರುವ ಕುಳಿಂದಕನು ತನ್ನರಮನೆಯನ್ನು ಪೊಕ್ಕಸಂತೋಷದಿಂದ ಕಾಲವಂ ಕಳೆಯುತ್ತಿದ್ದನು. ಆ ಬಳಿಕ ಗುರುವರ್ಯರಿಂದ ಸುಮುಹೂರ್ತವನ್ನಿಡಿಸಿ, ಆ ಶುಭಲಗ್ನದಲ್ಲಿ ತನ್ನ ಕುವರನಾದ ಚಂದ್ರಹಾಸನಿಗೆ ಚಂದನಾವತಿಯ ರಾಜ್ಯಭಾರವನ್ನು ಒಪ್ಪಿಸಿದನು. ಅಂದಿನಿಂದಲೂ, ಚಂದನಾವತಿಗೆ ಚಂದ್ರಹಾಸನೇ ರಾಜನಾದನು, ಇವನ ರಾಜ್ಯಭಾರದಿಂದ ಚಂದನಾವತಿಯಲ್ಲಿಯೇ ಲಕ್ಷ್ಮೀದೇವಿಯು ಸ್ಥಿರವಾಗಿ ನಿಲ್ಲಬೇಕೆಂದು ಆಶಿಸಿದಳು. ಅಲ್ಲಿರೈವ ಜನರೆಲ್ಲರೂ ಚಂದ್ರಹಾಸನಂತೆಯೇ ಸದಾಚಾರ ಸದ್ಗುಣಗಳಿಂದ ಕೂಡಿ ವಿಷ್ಣು ಭಕ್ತರಾದರು. 


ದಶಮಿಯ ಮಹೋತ್ಸವಂ ಪೆರ್ಚಿತೇಕಾದಶಿಯೊ। 

ಳಶನಮಂ ತೊರೆದರಚ್ಯುತಪರಾಯಣರಾಗಿ। 

ನಿಶೆಯೊಳ್ ನಿರಂತರಂ ನಿದ್ರೆಯಂ ಬಿಟ್ಟರಾ ಮರುದಿನಂ ದ್ವಾದಶಿಯೊಳು॥ 

ಕುಶಶಯನ ಪೂಜೆಯಂ ಮಾಡಿ ಭುಂಜಿಪರಿಂತ। 

ತಿಶಯಮಾದುದು ಮೇಲೆ ಮೇಲೆ ಮಾಧವ ಭಕ್ತಿ।

ವಿಶದ ಗುಣನಿಧಿ ಚಂದ್ರಹಾಸನಾಜ್ಞೆಯೊಳವನ ದೇಶದ ಸಮಸ್ತ ಜನಕೆ॥೧೩॥ 


ಪ್ರತಿಪದಾರ್ಥ :- ಮಾಧವ= ಶ್ರೀಮನ್ನಾರಾಯಣನಲ್ಲಿ, ಭಕ್ತಿ= ಅಕ್ಕರೆಯಿಂದ, ವಿಶದ=ವಿಸ್ತಾರವಾದ, ಗುಣ= ಒಳ್ಳೇ- 

ಗುಣಗಳಿಗೆ, ನಿಧಿ= ಆಶ್ರಯನಾದ, ಚಂದ್ರಹಾಸನ= ರಾಜನ, ಆಜ್ಞೆಯೊಳು= ಅಪ್ಪಣೆಯಿಂದ, ಅವನ= ಆ ರಾಜನ, ದೇಶದ= ನಾಡಿನ, ಸಮಸ್ತಜನಕೆ= ಸಕಲರಿಗೂ, ದಶಮಿಯ= ದಶಮೀ ದಿವಸದ, ಮಹೋತ್ಸವಂ= ಅತಿಶಯವಾದ ಸೇವೆಯು, ಪೆಚ್ಚಿತು= ಹೆಚ್ಚಾಯಿತು,ಏಕಾದಶಿಯೊಳು= ಏಕಾದಶೀದಿನ, ಅಶನಮಂ ತೊರೆದು= ಉಪವಾಸ ಮಾಡಿ, ನಿರಂತರಂ= ಯಾವಾಗಲೂ, ಅಚ್ಯುತಪರಾಯಣರಾಗಿ= ಶ್ರೀಮನ್ನಾರಾಯಣನನ್ನು ಧ್ಯಾನಿಸುವುದರಲ್ಲಿ ಆಸಕ್ತಿಯನ್ನೈದಿ,

ನಿದ್ರೆಯಂ ಬಿಟ್ಟರು= ನಿದ್ರೆಯನ್ನು ಬಿಟ್ಟರು ,ಆ ಮರುದಿನ= ಮಾರನೆಯ ದಿನ, ದ್ವಾದಶಿಯೊಳು= ದ್ವಾದಶಿಯ ದಿವಸ, ಕುಶಶಯನ ಪೂಜೆಯಂ= ಶ್ರೀಮನ್ನಾರಾಯಣನ ಪೂಜೆಯನ್ನು, ಮಾಡಿ= ನೆರವೇರಿಸಿ, ಮೇಲೆ ಮೇಲೆ= ಆ ಬಳಿಕ,  ಭುಂಜಿಪ= ಪಾರಣೆಯನ್ನು ನೆರವೇರಿಸತಕ್ಕ,ಮಹಾತಿಶಯಂ= ಸರ್ವೋತ್ತಮವಾದ ನಡವಳಿಕೆಯು, ಆದುದು= ಆಯಿತು. 


ಅ॥ವಿ॥ ಆಜ್ಞೆ ( ತ್ಸ) ಆಣೆ (ತ್ಭ) ಕುಶಶಯನ= ದರ್ಭೆಯನ್ನೆ ಹಾಸಿಗೆಯಾಗುಳ್ಳವನು ನಾರಾಯಣ, ಮಾಧವ= ಲಕ್ಷ್ಮಿಯ ಒಡೆಯ, ಸ್ವಾಮಿಯು ಲಕ್ಷ್ಮೀಪತಿ. 


ತಾತ್ಪರ್ಯ:- ಚಂದನಾವತಿಯಲ್ಲಿ ದಶಮಿಯ ಉತ್ಸವವು ಅಧಿಕವಾಯಿತು. ಅಲ್ಲಿಯ ಪ್ರಜೆಗಳೆಲ್ಲರೂ ವಿಷ್ಣುಭಕ್ತಿ ಪರಾಯಣರಾಗಿ, ಏಕಾದಶಿಯದಿನ ನಿದ್ರಾಹಾರಾದಿಗಳನ್ನು ಬಿಟ್ಟು ಪೂಜೆಯನ್ನು ಮಾಡುತ್ತಲೂ, ಮಾರನೆಯ ದಿನ ಶ್ರೀಮನ್ನಾರಾಯಣನನ್ನು ಅರ್ಚಿಸಿದ ಬಳಿಕ ಊಟಮಾಡುತ್ತಿದ್ದರು.


ಜಲಜಾಕ್ಷ ಭಕ್ತಿಯಿಂ ಪ್ರಹ್ಲಾದನಾಗಿ ನಿ। 

ಶ್ಚಲ ಹರಿಧ್ಯಾನದಿಂ ಧ್ರುವನಾಗಿ ಸತ್ಯದಿಂ। 

ಬಲಿಯಾಗಿ ಶಾಂತತ್ವದಿಂ ವಿಭೀಷಣನಾಗಿ ವೈಷ್ಣವಾಭರಣನೆಂಬ॥ 

ಕಲೆಯಿಂದೆ ಮಹಿಗೆ ರುಕ್ಮಾಂಗದಂ ತಾನಾಗಿ। 

ಸಲೆ ಕೀರ್ತಿಯಿಂ ಪುಂಡರೀಕನಾಗಿರುತಿಹಂ। 

ಸುಲಲಿತ ಚರಿತ ಭಾಗವತ ಶಿರೋಮಣಿ ಚಂದ್ರಹಾಸನುರ್ವೀತಳದೊಳು॥೧೪॥


ಈ ಪದ್ಯದಲ್ಲಿ ಅರ್ಥಚಮತ್ಕಾರದಿಂದ ಚಂದ್ರಹಾಸನ ಗುಣಾವಳಿಯನ್ನು ಕವಿಯು ವರ್ಣಿಸಿರುವನು)


ಪ್ರತಿಪದಾರ್ಥ :- ಉರ್ವೀತಳದೊಳು= ಭೂಮಂಡಲದೊಳಗೆ, ಸುಲಲಿತ= ಅತಿಮನೋಹರವಾದ,ಚರಿತ= ನಡವಳಿ- 

ಕೆಯನ್ನುಳ್ಳ, ಭಾಗವತಶಿರೋಮಣಿ= ಕೃಷ್ಣನ ಭಕ್ತರಲ್ಲಿ ಮೊದಲನೆಯವನಾದ,ಚಂದ್ರಹಾಸನು = ಚಂದ್ರಹಾಸನೆಂಬ ರಾಜನು, ಜಲಜಾಕ್ಷ ಭಕ್ತಿಯಿಂ= ಕೃಷ್ಣನ ಸ್ಮರಣೆಯಲ್ಲಿ, ಭಕ್ತಿಯಿಂ= ಭಕ್ತಿಯಿಂದ, ಪ್ರಹ್ಲಾದನಾಗಿ= ಪ್ರಹ್ಲಾದನೆಂಬ ಹರಿಭಕ್ತ- 

ನೇ ಆಗಿ, ಮತ್ತು ಹೆಚ್ಚಾದ ಸಂತೋಷಕ್ಕೆ ನಿಧಿಯಾಗಿ, ನಿಶ್ಚಲ= ಚಂಚಲವಿಲ್ಲದ, ಹರಿಧ್ಯಾನದಿಂ = ನಾರಾಯಣನ ಆರಾಧನೆ- 

ಯಿಂದ, ಧ್ರುವನಾಗಿ= ಧ್ರುವ ಚಕ್ರವರ್ತಿಯಾಗಿ, ಮತ್ತು ಸ್ಥಿರಬುದ್ದಿಯುಳ್ಳವನಾಗಿ, ಸತ್ವದಿ= ಸಾಹಸಗುಣದಿಂದ, ಬಲಿಯಾಗಿ

= ಬಲಿಚಕ್ರವರ್ತಿಯೂ ಮತ್ತು ಶಕ್ತಿಯುಳ್ಳವನೂ ಆಗಿ, ಶಾಂತತ್ವದಿಂ = ಶಾಂತಗುಣದಿಂದ, ವಿಭೀಷಣನು= ವಿಭೀಷಣನೆಂ-

ಬ ಲಂಕಾಧಿಪನೂ, ಮತ್ತು ಶತ್ರು ಭಯಂಕರನು, ಆಗಿ=ಆದವನಾಗಿ,ವೈಷ್ಣವಾಭರಣನು= ವಿಷ್ಣು ಭಕ್ತಿಯೆಂಬ ತೊಡಿಗೆಯಿಂ-

ದ ಅಲಂಕೃತನು, ಎಂಬ = ಎನ್ನತಕ್ಕ, ಕಲೆಯಿಂದ= ಪ್ರಕಾಶದಿಂದಲೂ, ವಿದ್ಯದಿಂದಲೂಸಹ, ತಾಂ= ತಾನಾದರೊ, ಮಹಿಗೆ= ಭೂಮಂಡಲಕ್ಕೆ,  ಋಕ್ಮಾಂಗದಂ= ಋಕ್ಮಾಂಗದನೆಂಬ ಭಕ್ತನು ಮತ್ತು ಸುವರ್ಣದ ಭುಜಕೀರ್ತಿಗಳಿಂದ ಕೂಡಿರತಕ್ಕವನೂ, ಆಗಿ= ಆಗಿಬಿಟ್ಟು,ಸಲೆ= ಚನ್ನಾಗಿ, ಕೀರ್ತಿಯಿಂ= ಕೀರ್ತಿಯಿಂದ,ಪುಂಡರೀಕನು=ತಾವರೆಯಂತಿರುವವನು,ಮತ್ತು ಮನುಷ್ಯರಲ್ಲಿ ಹುಲಿಗೆ ಸಮಾನನು ಆಗಿ, ಇರುತಿಹಂ= ಇದ್ದಾನೆ. 


ಅ॥ವಿ॥ ಪ್ರಹ್ಲಾದ, ಧ್ರುವ, ಬಲಿ, ವಿಭೀಷಣ, ಋಕ್ಮಾಂಗದ, ಪುಂಡರೀಕ, ಎಂಬ ಪದಗಳು ಮೇಲೆ ಹೇಳಿರುವ ದ್ವಂದ್ವಾರ್ಥ- 

ಗರ್ಭಿತಗಳಾಗಿರುವುವು. 


ತಾತ್ಪರ್ಯ:- ಈ ಚಂದ್ರಹಾಸನಿಗಿರುವ ವಿಷ್ಣುಭಕ್ಯಿಯ ಎದುರಿಗೆ ಪ್ರಖ್ಯಾತರಾದ ಪ್ರಹ್ಲಾದ, ಧ್ರುವ, ಬಲಿಚಕ್ರವರ್ತಿ, ವಿಭೀಷಣ, ಋಕ್ಮಾಂಗದ, ಮೊದಲಾದವರಿಗಿರುವ ಭಕ್ತಿಯು ನಿಲ್ಲಲಾರದೆ ಹೋಯಿತು. ಈ ಮಹನೀಯರೆಲ್ಲರಿಗಿಂತಲೂ ಚಂದ್ರಹಾಸನಿಗೆ ಶ್ರೀಮನ್ನಾರಾಯಣನಲ್ಲಿ ಭಕ್ತಿಯು ಅತ್ಯಧಿಕವಾದದ್ದು. 


ರೂಪಿಂದೆ ಮದನನುಂ ನಾರಿಯರುಮಮಿತ ಪ್ರ। 

ತಾಪದಿಂ ದಿನಪನುಂ ಪರ ಮಹೀಪಾಲರುಂ। 

ವ್ಯಾಪಿಸಿದ ಕೀರ್ತಿಯಿಂ ಪೀಯೂಷ ಕಿರಣನುಂ ತಾರೆಗಳುಮಭಿವರ್ಧಿಪ॥ 

ಶ್ರೀಪತಿಯ ಭಕ್ತಿಯಿಂ ಗರುಡನುಂ ಸನಕಾದಿ। 

ತಾಪಸರುಮೈದೆ ಸೋಲ್ದಪರೆಂದೊಡಿನ್ನುಳಿದ। 

ಕಾಪುರುಷರೀ ಚಂದ್ರಹಾಸನಂ ಪೋಲ್ದಪರೆ ಪೇಳೆಂದು ಮುನಿ ನುಡಿದನು॥೧೫॥ 


ಪ್ರತಿಪದಾರ್ಥ :- ಮುನಿ=ನಾರದನು, (ಅರ್ಜುನನನ್ನು ಕುರಿತು) ಮದನನುಂ= ಪ್ರದ್ಯುಮ್ನನೂ, ನಾರಿಯರುಂ= ಸ್ತ್ರೀಯರೂ- 

ಸಹ, ರೂಪಿಂದ= ಸೌಂದರ್ಯದಿಂದಲೂ, ದಿನಪನುಂ= ಸೂರ್ಯನೂ, ಪರಮಹೀಪಾಲರುಂ= ಇತರ ಶತ್ರುರಾಜರೂಸಹ,

ಅಮಿತಪ್ರತಾಪದಿಂ= ಅಸಾಧಾರಣವಾದ ಸಾಹಸದಿಂದಲೂ, ಪೀಯೂಷಕಿರಣನುಂ= ಚಂದ್ರನೂ, ತಾರೆಗಳುಂ= ನಕ್ಷತ್ರಗ-

ಳೂ, ವ್ಯಾಪಿಸಿದ = ಆವೃತವಾದ, ಕೀರ್ತಿಯಿಂ = ಒಳ್ಳೆಯ ಹೆಸರಿನಿಂದ, ಗರುಡನುಂ= ಗರುಡನೂ, ಸನಕಾದಿ ತಾಪಸರುಂ=

ಸನಕನೆ ಮೊದಲಾದ ಮುನಿವರ್ಯರೂ, ಅಭಿವರ್ಧಿಪ= ಅತ್ಯಧಿಕವಾಗುತ್ತಲಿರುವ, ಶ್ರೀಪತಿಯ ಭಕ್ತಿಯಿಂ=ಇಂದಿರಾರ- 

ಮಣನಾದ ನಾರಾಯಣಮೂರ್ತಿಯಲ್ಲಿರುವ ಭಕ್ತಿಯಿಂದಲೂ, ಐದೆ= ಚನ್ನಾಗಿ, ಸೋಲ್ದಪರು= ಸೋಲುವರು, ಎಂದರು= ಎಂದು ನುಡಿದರು, ಇನ್ನು = ಹೀಗೆಂದು ಹೇಳಿದಮೇಲೆ, ಈ ಚಂದ್ರಹಾಸನಂ= ಇಂತಹ ಇಂದುಹಾಸನೆಂಬ ರಾಜನನ್ನು, ಉಳಿದ= ಮಿಕ್ಕಿರುವ, ಕಾಪುರುಷರು= ಸಾಧಾರಣ ಮಾನವರು, ಪೋಲ್ದಪರೆ= ಹೋಲುತ್ತಾರೆಯೆ, ಪೇಳ್= ಹೇಳು, ಎಂದು

= ಎಂಬತೆರನಾಗಿ, ನುಡಿದನು= ಹೇಳಿದನು. 


ತಾತ್ಪರ್ಯ:- ಕೇಳೈ ಅರ್ಜುನಾ,  ಈ ಚಂದ್ರಹಾಸನ ಸೌಂದರ್ಯವು ಮನ್ಮಥನನ್ನು ಅಣಕಿಸುತ್ತಲಿರುವುದು. ಸ್ತ್ರೀಯರಲ್ಲಿ ಯಾರಿಗೂ ಇಂತಹ ರೂಪು ಇಲ್ಲವು. ಸೂರ್ಯನೂ ಶತ್ರುರಾಜರೂ ಇವನ ಸಾಹಸದ ಮುಂದೆ ನಿಲ್ಲಲಾರರು. ಲೋಕದಲ್ಲಿ  ಹೆಸರುವಾಸಿಯನ್ನು ಪಡೆದಿರುವ ಚಂದ್ರನಿಗೂ ನಕ್ಷತ್ರಗಳಿಗೂ ಇಷ್ಟು ಸತ್ಕೀರ್ತಿಯೆಂಬುದೇ ಇಲ್ಲವು, ಈ ಚಂದ್ರಹಾಸನು ವಿಷ್ಣು ಭಕ್ತರಲ್ಲಿ ಅಗ್ರಗಣ್ಯರೆಂದೆನಿಕೊಂಡಿರತಕ್ಕ ಗರುಡನನ್ನೂ ಸನಕಾದಿಗಳನ್ನೂ ಸಹ ಮೀರಿಸಿದ್ದಾನೆ ಇಷ್ಟು ಪ್ರಸಿದ್ಧಿಯನ್ನು ಪಡೆದಿರತಕ್ಕ ಈ ಚಂದ್ರಹಾಸನೆದುರಿಗೆ ಮಿಕ್ಕವರು ಯಾರುತಾನೆ ನಿಲ್ಲಬಲ್ಲರು. 


ಈ ತೆರದೊಳಿರೆ ಕುಳಿಂದಂ ಚಂದ್ರಹಾಸನಂ। 

ಪ್ರೀತಿಯಿಂದಂ ಕರೆದು ನುಡಿದನೆಲೆ ಮಗನೆ ವಿ। 

ಖ್ಯಾತಮಾಗಿಹ ರಾಜಧಾನಿ ಕುಂತಳಮಿಲ್ಲಿಗಾರುಯೋಜನದೊಳಿಹುದು॥ 

ಭೂತಳಮಾದಾನಗರದರಸಿನದು ನಮಗೊಡೆಯ। 

ನಾತನ ಶಿರಃಪ್ರಧಾನಂ ದುಷ್ಟಬುದ್ಧಿ ಸಂ। 

ಜಾತ ವಸ್ತುಗಳ ಸಿದ್ಧಾಯಮಂ ಕುಡವೇಳ್ಪುದರಸಂಗೆ ನಾವೆಂದನು॥೧೬॥ 


ಪ್ರತಿಪದಾರ್ಥ :- ಈ ತೆರದೊಳ್= ಈ ಪರಿಯಾಗಿ, ಇರೆ=ಇರಲು, ಚಂದ್ರಹಾಸನಂ= ಕುವರ ಚಂದ್ರಹಾಸನನ್ನು ನೋಡಿ, ಕುಳಿಂದಂ= ರಾಜನು, ಪ್ರೀತಿಯಿಂದಲಿ= ಪ್ರೇಮದಿಂದ, ನುಡಿದನು= ಮುಂದೆ ಹೇಳುವಂತೆ ಹೇಳಿವನು, ಎಲೆ ಮಗನೆ= ಎಲೈ ಕುಮಾರನೆ, ಇಲ್ಲಿಗೆ= ಈ ನಮ್ಮ ನಗರಕ್ಕೆ,  ಆರು ಯೋಜನದೊಳು= ಆರು ಗಾವುದದ ಆಚೆ, ವಿಖ್ಯಾತಮಾಗಿ= ಹೆಸರು- 

ಗೊಂಡು, ಇಹ=ಇರತಕ್ಕ,  ಕುಂತಳಂ= ಕುಂತಳವೆಂಬ, ರಾಜಧಾನಿ= ಅರಸನ ನಿವಾಸಸ್ಥಾನವು,ಇಹುದು=ಇದೆ, ಇದು ಭೂತಳಂ= ಈ ನಮ್ಮ ನಾಡು, ಆ ನಗರದರಸನದು= ಆ ದೇಶದ ದೊರೆಗೆ ಸೇರಿದ್ದು, ಆತನ= ಆ ಅರಸನ, ಶಿರಃಪ್ರಧಾನಂ= ಮುಖ್ಯಾಮಾತ್ಯನಾದ, ದುಷ್ಟಬುದ್ಧಿ= ದುಷ್ಟಬುದ್ಧಿ ಎಂಬಾತನು, ನಮಗೆ= ನಮಗಾದರೊ, ಒಡೆಯನು= ದಣಿಯು, ನಾವು= ನಾವಾದರೊ, ಅರಸಂಗೆ= ಕುಂತಳದ ಪ್ರಭುವಿಗೆ, ಸಂಜಾತ= ಉತ್ಪನ್ನ ದ್ರವ್ಯದಲ್ಲಿ,ಸಿದ್ಧ= ನಿಯಾಮಕವಾದ, ಆಯಮಂ= ಕಾಣಿಕೆಯನ್ನು,  ಕೊಡವೇಳ್ವುದು= ಸಲ್ಲಿಸಿಬರಬೇಕು, ಎಂದನು= ಎಂದು ನುಡಿದನು.


ತಾತ್ಪರ್ಯ:- ಕೇಳೈ ಫಲುಗುಣಾ! ಇಂತಹ ಪ್ರಸಿದ್ಧಿಯನ್ನು ಪಡೆದಿರತಕ್ಕ ಚಂದ್ರಹಾಸನನ್ನು ನೋಡುವ ಮೇಧಾವಿ ಎಂಬರಸನ ಪುಣ್ಯವು ಅತ್ಯುತ್ತಮವಾದದ್ದಲ್ಲವೆ? ಆ ಬಳಿಕ ಒಂದಾನೊಂದುದಿನ ಮೇಧಾವಿಯು ಕುವರನಾದ ಚಂದ್ರಹಾ- 

ಸನನ್ನು ಕುರಿತು,  ಎಲೈ ಪುತ್ತನೆ! ಈ ನಮ್ಮ ಚಂದನಾವತಿಗೆ ಆರುಗಾವುದದ ಆಚೆ ಕುಂತಳದೇಶ ಎಂಬ ಜನಪದವುಂಟು. ಅಲ್ಲಿನ ಚಕ್ರವರ್ತಿಗೆ ಈ ಚಂದನಾವತಿಯು ಸೇರಿದ್ದಾಗಿರುವುದು. ಆ ಕುಂತಳೇಂದ್ರನ ಮಂತ್ರಿಯಾದ ದುಷ್ಟಬುದ್ಧಿ ಎಂಬಾ- 

ತನು ನಮಗೆ ಒಡೆಯನಾಗಿರುವನು. 


ರಾಯಂಗೆ ವರ್ಸವರ್ಷಕೆ ನಾವುಶಕುಡುವ ಸಿ। 

ದ್ಧಾಯಮಂ ದುಷ್ಟಬುದ್ಧಿಗೆ ಸಲಿಸಿ ಬರ್ಪ ನಿ। 

ಷ್ಕಾಯುತ ದ್ರವ್ಯಮಂ ನೃಪನ ರಾಣಿಗೆ ಪುರೋಹಿತನಾದ ಗಾಲವಂಗೆ॥ 

ಪ್ರೀಯದಿಂದದುಪಚರಿಸುವರ್ಥಮಂ ತತ್ಕಾಲ। 

ಕೀಯಬೇಕೆಲೆ ಮಗನೆ ಧನವನೊದವಿಸಿ ಕಳುಹ। 

ಸೂಯೆಗೀಡಾಗಬೇಡೆಂದು ನಿಜನಂದನಂಗಾ ಕುಳಿಂದಂ ಪೇಳ್ದನು॥೧೭॥ 


ಪ್ರತಿಪದಾರ್ಥ :- ಆ ಕುಳಿಂದಂ= ಆ ಕುಳಿಂದ ರಾಜನು, ನಿಜನಂದನಂಗೆ= ತನ್ನ ಮಗನಿಗೆ, ಕುರಿತು,  ನಾವು= ನಾವಾದರೊ, ವರುಷವರುಷಕೆ= ಪ್ರತಿ ವರುಷವೂ, ರಾಯಂಗೆ= ಕುಂತಳಾಧೀಶನಿಗೆ, ಕೊಡುವ= ಕೊಡಬೇಕಾದ,ಸಿದ್ಧಾಯಮಂ= ಕಪ್ಪವ-

ನ್ನು, ದುಷ್ಟಬುದ್ಧಿಗೆ= ಅಮಾತ್ಯ ದುಷ್ಟಬುದ್ಧಿಗೆ, ಸಲಿಸಿ ಬಪ್ಪ= ಕೊಡಬೇಕಾದ, ನಿಷ್ಕಾಯುತದ್ರವ್ಯಮಂ= ಹತ್ತು ಸಹಸ್ರ ವರ- 

ಹಗಳನ್ನೂ, ನೃಪನ= ರಾಜನ, ರಾಣಿಗೆ= ಪಟ್ಟದರಸಿಗೆ, ಪುರೋಹಿತ= ಪುರೋಹಿತನಾಗಿರತಕ್ಕ, ಗಾಲವಂಗೆ= ಗಾಲವನೆಂಬ ಮುನಿಗೆ, ಪ್ರೀಯದಿಂದ= ಅಕ್ಕರೆಯಿಂದ, ಉಪಚರಿಸುವ= ಕೊಡತಕ್ಕ, ಅರ್ಥಮಂ= ದ್ರವ್ಯವನ್ನೂ, ತತ್ಕಾಲಕೆ= ಕ್ಲುಪ್ತ ಸಮಯಕ್ಕೆ, ಈಯಬೇಕು= ಕೊಟ್ಟು ಬರಬೇಕು, ಎಲೆ ಮಗನೆ= ಎಲೆಶಕುಮಾರನೆ, ಧನವನು= ಹಣವನ್ನು,  ಒದವಿಸಿ ಕಳುಹು= ಒಟ್ಟುಗೂಡಿಸಿ ಅವರಿಗೆ ತಲಪಿಸು, ಅಸೂಯೆಗೆ= ಅವರ ದ್ವೇಷಕ್ಕೆ, ಈಡಾಗಬೇಡ= ಪಾತ್ರನಾಗಬೇಡ, ಎಂದು= ಎಂಬತೆರನಾಗಿ,  ನುಡಿದನು= ಹೇಳಿದನು. 


ಅ॥ವಿ॥ ರಾಯ ( ತ್ಭ) ರಾಜನ್(ತ್ಸ) ರಾಣಿ(ತ್ಭ)ರಾಜ್ಞಿ (ತ್ಸ) 


ತಾತ್ಪರ್ಯ:- ನಾನು ಇಲ್ಲಿ ಹುಟ್ಟುವಳಿಯಾಗತಕ್ಕ ಹಣದಲ್ಲಿ ಕ್ಲುಪ್ತವಾಗಿದ್ದ ಕಾಣಿಕೆಯನ್ನು ರಾಯನಿಗೂ ಆತನ ಮಂತ್ರಿಗೆ ಹತ್ತು ಸಾವಿರ ವರಹಗಳೂ, ಪುರೋಹಿತನಾದ ಗಾಲವ ಮುನಿಗೆ ಹಾಗೂ ಪಟ್ಟದರಸಿಗೂ ಮರ್ಯಾದಾರ್ಥವಾಗಿ ಹಣವೂ ಕಾಲಕಾಲಕ್ಕೆ ಸರಿಯಾಗಿ ಕಳುಹಿಸುತ್ತಲಿದ್ದೆನು. ನೀನೂ ಈಗ ಆ ಹಣವನ್ನು ಸಿದ್ಧಮಾಡಿಕೊಂಡು ಪದ್ಧತಿಯ ಮೇರೆಗೆ ಕಳುಹಿಸಿ ಆ ಕುಂತಳೇಂದ್ರನ ಅನುಗ್ರಹಕ್ಕೆ ಪಾತ್ರನಾಗಿರಬೇಕೆಂದು ನುಡಿದನು. 


ಪಿತನ ಮಾತಂ ಕೇಳ್ದು ಚಂದ್ರಹಾಸಂ ಮಹೀ।

ಪತಿಗೆ ಮಹಿಷಿಗೆ ಮಂತ್ರಿ ದುಷ್ಟಬುದ್ಧಿಗೆ ಪುರೋ। 

ಹಿತ ಗಾಲವಂಗೆ ಸಲಿಸುವ ಧನವನದರ ಸಂಗಡಕೆ ತಾನಾಹವದೊಳು॥ 

ಪ್ರತಿಭೂಪರಂ ಜಯಿಸಿ ತಂದ ವಸ್ತುಗಳನಂ। 

ಕಿತದಿಂದೆ ಕಟ್ಟಿ ಶಕಟೋಷ್ಟ್ರಕರಿ ಭಾರಗಳ। 

ಶತ ಸಂಖ್ಯೆಯಿಂದೆ ಕಳುಹಿದನಾಪ್ತರಂ ಕೂಡಿಕೊಟ್ಟು ಕುಂತಳ ನಗರಿಗೆ॥೧೮॥


ಪ್ರತಿಪದಾರ್ಥ :- ಪಿತನ= ತಂದೆಯ, ಮಾತಂ=ನುಡಿಯನ್ನು, ಚಂದ್ರಹಾಸಂ= ಚಂದ್ರಹಾಸನು, ಕೇಳ್ದು= ಕೇಳಿದವನಾಗಿ, ಮಹೀಪತಿಗೆ = ಕುಂತಳರಾಜನಿಗೆ, ಮಹಿಷಿಗೆ = ಆತನ ಪಟ್ಟದರಸಿಗೂ, ಮಂತ್ರಿ= ಮಂತ್ರಿ ದುಷ್ಟಬುದ್ಧಿಗೂ, ಪುರೋಹಿತ= ಗುರುವಾದ, ಗಾಲವಂಗೆ=ಗಾಲವನೆಂಬ ಮುನಿಗೂ, ಸಲಿಸುವ= ಒಪ್ಪಿಸಬೇಕಾದ, ಧನವನು= ದ್ರವ್ಯವನ್ನು, ಅದರಸಂಗಡಕೆ

=ಆ ಹಣದಕೂಡ, ತಾನು= ಚಂದ್ರಹಾಸನು, ಪ್ರತಿಭೂಪರಂ = ಶತ್ರುರಾಜರನ್ನು, ಆಹವದೊಳು= ಕಾಳಗದಲ್ಲಿ, ಜಯಿಸಿ= ಸೋಲಿಸಿ, ತಂದ= ಸಂಪಾದಿಸಿ ತಂದ, ವಸ್ತುಗಳನ್ನೂ, ಅಂಕಿತದಿಂದ =ತಾನು ಕಳುಹಿದೆನೆಂಬ ಚಿನ್ಹೆಗಳಿಂದ, ಕಟ್ಟಿ= ಕಟ್ಟಿದ-

ವನಾಗಿ, ಶಕಟ= ಗಾಡಿಗಳನ್ನು, ಉಷ್ಟ್ರ= ಒಂಟೆಗಳು, ಕರಿಗಳ= ಆನೆಗಳ, ಭಾರ= ಹೊತ್ತುಕೊಂಡು ಹೋಗುವುದರ,ಶತ ಸಂಖ್ಯೆಯಿಂದ= ನೂರರ ಎಣಿಕೆಯಿಂದ, ಕುಂತಳನಗರಿಗೆ, ಆಪ್ತರಂ ಕೂಡಿಕೊಟ್ಟು= ನಂಬಿಕಸ್ತರ ಜೊತೆಮಾಡಿ, ಕಳುಹಿದಂ= ಕಳುಹಿಸಿದನು. 


ತಾತ್ಪರ್ಯ:- ಚಂದ್ರಹಾಸನು ತಂದೆಯ ಮಾತನ್ನು ಶಿರಸಾವಹಿಸಿ, ಮೇಧಾವಿಯು ಪ್ರತಿವರ್ಷವೂ ಕಳುಹಿಸಿಕೊಡುತ್ತಿದ್ದಂತೆ, ಕಪ್ಪಕಾಣಿಕೆಗಳನ್ನು ಸಿದ್ಧಮಾಡಿ ಇದರ ಜೊತೆಗೆ ತಾನು ಶತ್ರು ರಾಜರಿಂದ ಸೂರೆಮಾಡಿದ್ದ ಉತ್ತಮ ವಸ್ತುಗಳನ್ನೂ ಸಹ ಅರಗಿನ ಮೊಹರು ತನ್ನ ರುಜು ಮೊದಲಾದವುಗಳಿಂದ ಭದ್ರಮಾಡಿ ಆನೆ ಕುದುರೆ ಒಂಟೆ ಕಾಲಾಳ್ಗಳ ಮುಖಾಂತರ ತನ್ನ ನಂಬಿಗಸ್ತರ ಕವಲಿನಲ್ಲಿ ಕಳುಹಿಸಿದನು. 



ಹಸ್ತಿ ಹಯ ರತ್ನ ವಸ್ತ್ರಾಭರಣ ಕರ್ಪೂರ। 

ಕಸ್ತೂರಿ ಮಲಯಜ ಸುವರ್ಣ ರಜತಾದ್ಯಖಿಳ। 

ವಸ್ತುಚಯಮಂ ಕೊಂಡು ಚಂದ್ರಹಾಸನ ಚರರ್ ಬಂದು ಕುಂತಳನಗರಿಗೆ॥ 

ವಿಸ್ತಾರದಿಂದೆಸೆವ ನಗರೋಪಕಂಠದ ಸ। 

ರಸ್ತೀರದೊಳ್ ಮಿಂದು ಚಕ್ರಿಯಂ ಪೂಜೆಗೈ। 

ದಸ್ತಮಯ ಸಮಯದೊಳ್ ಪೊಕ್ಕರಾ ಪಟ್ಟಣವನತಿಶುಚಿರ್ಭೂತರಾಗಿ॥೧೯॥ 


ಪ್ರತಿಪದಾರ್ಥ :- ಹಸ್ತಿ= ಆನೆಗಳು, ಹಯ= ಕುದುರೆಗಳು, ರತ್ನ= ನವರತ್ನಗಳು, ವಸ್ತ್ರ= ಉಡಿಗೆಗಳು, ಆಭರಣ= ಒಡವೆಗಳು,  ಕರ್ಪೂರ= ವಿಧವಿಧವಾದ ಕರ್ಪೂರವು, ಕಸ್ತೂರಿ= ಕಸ್ತೂರಿಯು, ಮಲಯಜ= ಶ್ರೀಗಂಧ, ಸುವರ್ಣ =ಚಿನ್ನವು, ರಜತ= ಬೆಳ್ಳಿಯು, ಆದಿ= ಮೊದಲಾದ,  ಅಖಿಳ= ಸಮಸ್ತ, ವಸ್ತುಚಯಮಂ= ಪದಾರ್ಥಗಳು ರಾಶಿಯನ್ನು, ಚಂದ್ರಹಾಸನ ಚರರ್= ಇಂದುಹಾಸನ ದೂತರು, ಕೊಂಡು= ತಮ್ಮ ಮಾಡಿಕೊಂಡು,  ಕುಂತಳ ನಗರಿಗೆ ಬಂದು= ಕುಂತಳ ಪಟ್ಟಣಕ್ಕೆ ಬಂದು, ವಿಸ್ತಾರದಿಂದ= ಬಹುರಮ್ಯವಾಗಿ, ಎಸೆವ= ಹೊಳೆಯುತ್ತಿರುವ, ನಗರೋಪಕಂಠದ= ಪಟ್ಟಣದ ಹತ್ತಿರವಿರುವ, ಸರಸ್ತೀರದೊಳ್= ಸರೋವರದ ತಡಿಯಲ್ಲಿ, ಮಿಂದು= ಸ್ನಾನಮಾಡಿ, ಚಕ್ರಿಯಂ= ಕೃಷ್ಣನನ್ನು,  ಪೂಜೆಗೈದು= ಪೂಜೆಯನ್ನು ಮಾಡಿ,  ಅತಿಶುಚಿರ್ಭೂತರಾಗಿ= ಬಹಳ ನಿರ್ಮಲವಾದ ಮನಸ್ಸಿನಿಂದ ಕೂಡಿ, ಆ ಪಟ್ಟಣವನು= ಆ ನಗರವನ್ನು,  ಅಸ್ತಮಯಸಮಯದೊಳ್= ಸಂಧ್ಯಾಕಾಲಕ್ಕೆ ಸರಿಯಾಗಿ, ಪೊಕ್ಕರು= ಪ್ರವೇಶಮಾಡಿದರು. 


ತಾತ್ಪರ್ಯ:- ಬೆಂಗಾವಲಾಗಿ ಆಪ್ತರಾದ ಸೇವಕರನ್ನುನಿಯಮಿಸಿ ಕುಂತಳನಗರಕ್ಕೆ ತಲುಪಿಸಿ ಬರುವಂತೆ ಹೇಳಿ ಕಳುಹಿಸಿದನು. ಚಂದ್ರಹಾಸನಿಂದಾಜ್ಞಪ್ತರಾದ ಸೇವಕ ಜನರು ಆನೆ ಕುದುರೆ ರತ್ನಧನಕನಕಾದಿ ಸರ್ವಸ್ವವನ್ನೂ ಯಾವುದೊಂದಪಾಯಕ್ಕೂ ಈಡುಮಾಡದೆ ಸಂರಕ್ಷಿಸಿಕೊಂಡು ತಡಮಾಡದೆ ಕುಂತಳನಗರದ ಸಮೀಪಕ್ಕೆ ಹೋದರು. ಆ ಪಟ್ಟಣದ ಹೊರಭಾಗದಲ್ಲಿ ರಮ್ಯವಾದ ಉದ್ಯಾನವಿರಲು, ಅಲ್ಲಿಗೆ ಹೋಗಿ, ಅಲ್ಲಿದ್ದ ನಿರ್ಮಲವಾದ ಸರೋವರದಲ್ಲಿ ಸ್ನಾನ ಮಾಡಿ  ಶ್ರೀಕೃಷ್ಣಮೂರುತಿಯ ಸೇವೆಯಂ ಮಾಡಿ ಶುದ್ಧಾಂತರಂಗರಾಗಿ ಸಾಯಂಕಾಲದ ಹೊತ್ತಿಗೆ ಪಟ್ಟಣವನ್ನು ಪ್ರವೇಶಿಸಿದರು. 


ನೊಸಲೊಳೆಸೆವೂರ್ಧ್ವಪುಂಡ್ರದ ಸುಧೌತಾಂಬರದ। 

ಮಿಸುಪ ತುಳಸಿಯ ದಂಡೆಗಳ ಕೊರಳ ನಿಚ್ಚಳದ। 

ದಶನಪಙ್ಕ್ತಿಯ ವಿಕಿಲ್ಬಿಷಗಾತ್ರದಚ್ಛಸಾತ್ವಿಕ ಭಾವದಿಂದೆ ಮೆರೆವ॥

ಶಶಿಹಾಸನನುಚರರ್ ಬಂದು ಕಾಣಲ್ಕಿದೇಂ। 

ಪೊಸಶಕಟ ನಿಮಗೀಗಳೆಕೆ ಶುದ್ಧಿಸ್ನಾನ। 

ಮಸುವಿಡಿದಿಹನೆ ಕುಳಿಂದಕನೆಂದುಶಂಕೆಯಿಂ ಕೇಳ್ದನಾ ದುಷ್ಟಬುದ್ಧಿ॥೨೦॥ 


ಪ್ರತಿಪದಾರ್ಥ :- ನೊಸಲೊಳ್ = ಹಣೆಯಲ್ಲಿ, ಎಸೆವ= ಹೊಳೆಯುವ, ಊರ್ಧ್ವಪಂಡ್ರದ= ಉದ್ದವಾಗಿ ಬರೆದ ತಿಲಕವುಳ್ಳ, ಸುಧೌತ= ಚನ್ನಾಗಿ ಮಡಿಮಾಡಿದ, ಅಂಬರದ= ವಸ್ತ್ರಗಳುಳ್ಳ, ಮಿಸುಪ= ಪ್ರಕಾಶಿಸುವ, ತುಳಸಿಯದಂಡೆಗಳ= ತುಳಸೀಮಾಲೆಗಳಿಂದ ಕೂಡಿದ, ಕೊರಳ= ಕುತ್ತಿಗೆಯ, ಸ್ವಚ್ಛತರ= ಶುದ್ಧವಾಗಿರುವ, ಧವಳ= ಬೆಳ್ಳಗಿರುವ, ದಶನಪಙ್ತಿ- 

ಯ= ಹಲ್ಲುಗಳನ್ನುಳ್ಳ, ಆಕಿಲ್ಭಿಷಗಾತ್ರದ= ಶುಭ್ರವಾದ ದೇಹವನ್ನುಳ್ಳ, ಅಚ್ಛ= ಶುದ್ಧವಾದ, ಸಾತ್ವಿಕ ಭಾವದಿಂದ= ಸತ್ವಗು- 

ಣವೆಂಬ ನಿಧಿಯಿಂದ, ಮೆರೆವ= ಹೊಳೆಯುವ, ಶಶಿಹಾಸನ= ಚಂದ್ರಹಾಸನ, ಅನುಚರರ್= ದೂತರು, ಬಂದು= ಪುರ- 

ಪ್ರವೇಶಗೈದು, ಕಾಣಲ್ಕೆ= ದುಷ್ಟಬುದ್ಧಿಯನ್ನು ನೋಡಲಾಗಿ, ಆ ದುಷ್ಟಬುದ್ಧಿಯು= ಆ ಕುಂತಳರಾಜನ ಮಂತ್ರಿ , ಅಕಟ= ಆಹಾ, ಪೊಸತು= ಎಂದೂ ಇಲ್ಲದ ನಡತೆಯು ಈಗ ಉಂಟಾಗಿದೆಯಲ್ಲಾ, ಇದೇಂ= ಇದೇನಚ್ಚರಿ, ಈಗಲೆ= ಈ ಸಂಧ್ಯಾ- 

ಕಾಲದಲ್ಲಿಯೆ, ನಿಮಗೆ= ನಿಮಗೆ, ಶುದ್ಧಿಸ್ನಾನಂ ಏಕೆ= ನಿರ್ಮಲವಾಗಿರಬೇಕೆಂದು ಮಾಡಿರುವ ಸ್ನಾನಕ್ಕೆ ನಿಮಿತ್ತವೇನು? 

ಕುಳಿಂದಕನು= ಚಂದನಾವತಿಯರಸು, ಅಸುವಿಡಿದು= ಪ್ರಾಣಸಹಿತನಾಗಿ, ಇಹನೆ= ಇದ್ದಾನೆಯೇ, ಎಂದು=ಎಂಬತೆರನಾಗಿ, 

ಶಂಕೆಯಿಂದ= ಅನುಮಾನಬುದ್ಧಿಯಿಂದ,ಕೇಳ್ದನು= ಪ್ರಶ್ನೆಮಾಡಿದನು. 


ತಾತ್ಪರ್ಯ:- ಹಣೆಯಲ್ಲಿ ನಾಮವನ್ನಿಟ್ಟು, ಮಡಿಮಾಡಿದ ವಸ್ತ್ರಗಳನ್ನುಟ್ಟು ,ತುಲಸೀ ಮಾಲೆಗಳಿಂದ ಕಂಠವನ್ನಲಂಕರಿಸಿ- 

ಕೊಂಡು,ಸನ್ಮಾರ್ಗಪ್ರವರ್ತಕರಾಗಿ ಎದುರಿಗೆ ನಿಂತಿರುವ ಚಂದ್ರಹಾಸನ ದೂತರನ್ನು ಮಂತ್ರಿಯಾದ ದುಷ್ಟಬುದ್ಧಿಯು ನೋಡಿ, ಅಚ್ಚರಿಗೊಂಡು, ಅವರನ್ನು ಕುರಿತು, ಓಹೋ! ಇದೇನು ಚಂದನಾವತಿಯ ರಾಜನು ಕ್ಷೇಮವಾಗಿದಾನೆಯೇ? ನಿಮ್ಮ ರೂಪು ಈ ರೀತಿ ಬದಲಾಯಿಸಲು ನಿಮಿತ್ತವೇನೆಂದು ಕೇಳಿದನು.