ಜೈಮಿನಿ ಭಾರತ 27 - ದೊಡ್ಡಬೆಲೆ ನಾರಾಯಣಶಾಸ್ತ್ರೀ
ಸೂಚನೆ: ಹರಿಗಳಂ ತಡೆಯಲ್ಕೆ ಸಾರಸ್ವತಾಖ್ಯ ಪುರ।
ವರದೊಳಂತಕನ ವೃತ್ತಾಂತಮಂ ಕೇಳ್ದು ಸಂ।
ಗರದೊಳಚ್ಯುತನ ಮತದಿಂ ವೀರವರ್ಮನಂ ಜಯಿಸಿದಂ ಕಲಿಪಾರ್ಥನು॥
ಪ್ರತಿಪದಾರ್ಥ :- ಕಲಿ=ಶೂರನಾದ, ಪಾರ್ಥನು=ಫಲುಗುಣನು,( ವೀರವರ್ಮನು) ಹರಿಗಳಂ= ಯಜ್ಞಾಶ್ವಗಳನ್ನು,ತಡೆಯಲ್ಕೆ
= ಕಟ್ಟಿಹಾಕಲು, ಅಂತಕನ= ಯಮಧರ್ಮರಾಯನ, ವೃತ್ತಾಂತಮಂ = ವಾರ್ತೆಯನ್ನು, ಸಾರಸ್ವತಾಖ್ಯ ಪುರದೊಳಗೆ=ಸಾರ-
ಸ್ವತನಾಮಕವಾದ ಪಟ್ಟಣದಲ್ಲಿ, ಕೇಳ್ದು= ಕೇಳಿದವನಾಗಿ, ವೀರವರ್ಮನಂ = ವೀರವರ್ಮನೆಂಬ ರಾಜನನ್ನು, ಸಂಗರದೊ-
ಳು= ಯುದ್ಧದಲ್ಲಿ, ಅಚ್ಯುತನ= ಕೃಷ್ಣನ, ಮತದಿಂ= ಆಶಯವನ್ನನುಸರಿಸಿ, ಜಯಿಸಿದಂ= ಗೆದ್ದವನಾದನು.
ಅ॥ವೀ॥ ಹರಿ= ಇದು ನಾನಾರ್ಥಪದವಾಗಿದೆ, ಕಪ್ಪೆ, ಕುದುರೆ,ಯಮ, ಗಾಳಿ, ಚಂದ್ರ, ವಿಷ್ಣು, ಹಿಂಹ, ಗಿಣಿ, ಕೋತಿ, ಅಶ್ವತ್ಥವೃಕ್ಷ, ಮೊದಲಾದ ಅರ್ಥಗಳಿಂದ ಕಾಡಿದ ಪದವಾಗಿದೆ,ಕಲಿ= ಪರಾಕ್ರಮಿ, ಕಲಿಯೆಂಬ ಯುಗ, ಕಲಿಪುರುಷನ ಹೆಸರು, ಕಲಹ( ಇವೆಲ್ಲಾ ನಾಮಪದದಲ್ಲಿ ಅರ್ಥಗಳು) ಕಲಿ= ಕಲಿತುಕೊಳ್ಳುವುದು. (ಕ್ರಿಯಾಪದ)
ಸಾರಸ್ವತಾಖ್ಯ ಪುರವೆಂಬ ಹೆಸರು ಬರಲು ಕಾರಣ.
ಪೂರ್ವದಲ್ಲಿ ದಧೀಚಿಯೆಂಬ ಮುನಿಯೋರ್ವನು ಸರಸ್ವತೀನದಿಯ ತೀರದಲ್ಲಿ ಕುಳಿತು ದೇವ ಋಷಿಗಳಿಗೂ ತಮ್ಮ ಪಿತೃಗಳಿಗೂ ತರ್ಪಣವನ್ನು ಕೊಡುತ್ತಾ ಕುಳಿತಿದ್ದನು, ಆ ಕಾಲಕ್ಕೆ ಸರಿಯಾಗಿ " ಆಲಂಬಸಾ" ಎಂಬ ಅಪ್ಸರೆಯು ಬಂದು ಸರಸ್ವತೀನದಿಯಲ್ಲಿ ಸ್ನಾನಮಾಡತೊಡಗಿದಳು. ದಧೀಚಿಯು ಇವಳ ಸೌಂದರ್ಯಕ್ಕೆ ಸಿಕ್ಕಿದ ಕಾರಣ ವೀರ್ಯ ಸ್ಖಲನೆಯಾಗಿ, ಆ ನದೀಜಲದೊಳಗೆ ಬಿದ್ದಿತು. ಸರಸ್ವತೀನದಿಯು ಈ ವೀರ್ಯವನ್ನು ನೋಡಿ ಅಸಾಧಾರಣವಾದ ಇದನ್ನು ತಾನು ಉಪೇಕ್ಷೆ ಮಾಡದೆ ತನ್ನಲ್ಲಿಯೇ ಅದನ್ನು ಧರಿಸಿ ಒಬ್ಬ ಮಗನನ್ನು ಹೆತ್ತು ಆ ಶಿಶುವನ್ನು ದಧೀಚಿಗೆ ಒಪ್ಪಿಸಿದಳು. ಮುನಿವರ್ಯನು ಆ ಬಾಲಕನಿಗೆ ಸಾರಸ್ವತನೆಂಬುದಾಗಿ ನಾಮಕರಣ ಮಾಡಿದನು. ಸಾರಸ್ವತಮುನಿಯ ಅನುಗ್ರಹದಿಂ-
ದಾದ ಪಟ್ಟಣಕ್ಕೆ ಸಾರಸ್ವತ ನಗರವೆಂದು ಹೆಸರಾಯಿತು.
ವೀರವರ್ಮನೆಂಬ ಹೆಸರು ಬರಲು ಕಾರಣ.
ಯಮನಿಂದ ಕೊಡಲ್ಪಟ್ಟ ವಜ್ರಕವಚವುಳ್ಳವನಾದ್ದರಿಂದ ವೀರವರ್ಮನೆಂದು ಹೆಸರು ಬಂದಿದೆ. ಊಸ್ತ್ರಗಳಿಂದಲೂ ಕೂಡ ಇದನ್ನು ಭೇದಿಸಲು ಆಗುವುದಿಲ್ಲ.
ತಾತ್ಪರ್ಯ:- ಸಾರಸ್ವತ ಪುರದಲ್ಲಿ (ವೀರವರ್ಮನು) ಕುದುರೆಗಳನ್ನು ಕಟ್ಟಲು, ಅಲ್ಲಿ ಯಮನ ವೃತ್ತಾಂತವನ್ನು ಕೇಳಿ ಶ್ರೀಕೃಷ್ಣನ ಅಭಿಪ್ರಾಯದಂತೆ ಅರ್ಜುನನು ವೀರವರ್ಮನನ್ನು ಜಯಿಸಿದನು.
ಸೋಮ ಕುಲತಿಲಕ ಜನಮೇಜಯ ನರೇಂದ್ರ ಕೇ।
ಳಾ ಮಯೂರಧ್ವಜಂ ತನ್ನ ನಗರದೊಳತಿ।
ಪ್ರೇಮದಿಂ ಮೂರುದಿನಮರ್ಜುನ ಮುರಾರಿಗಳನಿರಿಸಿಕೊಂಡಿರ್ದು ಬಳಿಕ ॥
ಭೀಮಾನುಜನ ಕೂಡೆ ಪೊರಮಟ್ಟನನುಸಾಲ್ವ।
ಕಾಮ ಕರ್ಣಜ ಬಭ್ರುವಾಹನ ಸುವೇಗ ನಿ।
ಸ್ಸೀಮ ನೀಲಧ್ವಜ ಮರಾಳಧ್ವಜಾದಿಗಳ್ ಪಡೆವೆರಸಿ ನಡೆದರೊಡನೆ॥ ೧॥
ಪ್ರತಿಪದಾರ್ಥ :- ಸೋಮಕುಲತಿಲಕ= ಚಂದ್ರವಂಶಕ್ಕೆ ತಿಲಕಪ್ರಾಯನಾದ, ಜನಮೇಜಯನರೇಂದ್ರ= ಜನಮೇಜಯ ದೊರೆಯೇ, ಕೇಳು= ಲಾಲಿಸು, ಆ ಮಯೂರಧ್ವಜಂ= ಮಯೂರಧ್ವಜನು, ಅರ್ಜುನ ಮುರಾರಿಗಳನು= ಫಲುಗುಣ ಮತ್ತು ಕೃಷ್ಣನನ್ನು ಸಹ, ಅತಿಪ್ರೇಮದಿಂದ = ಹೆಚ್ಚು ವಿಶ್ವಾಸದಿಂದ, ಮೂರುದಿನಂ= ಮೂರುದಿನಗಳವರೆಗೂ, ತನ್ನ ನಗರದೊಳು= ತನ್ನ ಪಟ್ಟಣದೊಳಗೆ, ಇರಿಸಿಕೊಂಡು= ಉಪಚರಿಸಿಕೊಂಡು, ಇರ್ದ ಬಳಿಕ= ಇದ್ದ ತರುವಾಯ, ಭೀಮಾ-
ನುಜನ ಕೂಡೆ= ಫಲುಗುಣನೊಂದಿಗೆ, ಪೊರಮಟ್ಟನು= ಹೊರಟನು, ಅನುಸಾಲ್ವ= ಸಾಲ್ವನ ತಮ್ಮನು, ಕಾಮ= ಮನ್ಮಥನು, ಕರ್ಣಜ= ವೃಷಧ್ವಜನು,ಬಭ್ರುವಾಹನ= ಚಿತ್ರಾಂಗದೆಯಲ್ಲಿ ಅರ್ಜುನನಿಂದ ಹುಟ್ಟಿದ ನಕೈಲಧ್ವಜನು, ಸುವೇಗ= ಯೌವನಾಶ್ವನ ಕುವರನು, ನಿಸ್ಸೀಮ = ಸಾಹಸಿಗಳಾದ, ನೀಲಧ್ವಜ ಮರಾಳಧ್ವಜಾದಿಗಳ್ = ನೀಲಧ್ವಜ ಮರಾಳಧ್ವಜರೇ ಮೊದಲಾದ ರಾಜಾಗ್ರಣಿಗಳೆಲ್ಲರೂ, ಪಡೆವೆರಸಿ= ಸೇನೆಯೊಡಗೂಡಿ, ಒಡನೆ= ಪಾರ್ಥನ ಹಿಂದೆಯೇ, ನಡೆದರು= ಹೊರಟರು.
ಅ॥ವಿ॥ ನರ+ಇಂದ್ರ= ನರೇಂದ್ರ( ಗು. ಸಂ. ) ಭೀಮ= ಧರ್ಮರಾಯನ ತಮ್ಮ, ಹೆದರಿಕೆಯನ್ನುಂಟುಮಾಡುವುದು, ದಮಯಂತಿಯ ತಂದೆಯ ಹೆಸರು.
ತಾತ್ಪರ್ಯ:- ಚಂದ್ರವಂಶಕ್ಕೆ ತಿಲಕಪ್ರಾಯನಾದ ಜನಮೇಜಯನೆ ಕೇಳು. ಮಯೂರಧ್ವಜನು ಕೃಷ್ಣಾರ್ಜುನರನ್ನು ಮೂರು ದಿನಗಳು ಇರಿಸಿಕೊಂಡು ಉಪಚರಿಸಿದನು. ಅನಂತರ ಯಜ್ಞಾಶ್ವಗಳೊಡನೆ ಕೃಷ್ಣಾರ್ಜುನರು ಪ್ರಯಾಣಬೆಳಸಿದರು. ಆಗ ಮಯೂರಧ್ವಜನೂ ಕೂಡ ತನ್ನ ಸೇನೆಯೊಡನೆ ಕೃಷ್ಣಾರ್ಜುನರನ್ನು ಹಿಂಬಾಲಿಸಿದನು. ಸಾಲ್ವಾನುಜ, ಮನ್ಮಥ, ವೃಷಕೇತು, ಬಭ್ರುವಾಹನ, ಸುವೇಗ, ನೀಲಧ್ವಜ, ಹಂಸಧೂವಜನೇ ಮೊದಲಾದ ವೀರರೆಲ್ಲಾ ಫಲುಗುಣನ ಹಿಂದೆಯೇಹೊರಟರು.
ತುಂಬಿತು ಮಹೀಮಂಡಲವನತುಲಸೇನೆ ನಡೆ।
ಗೊಂಬುದಿನ್ನೆಲ್ಲಿಗೆ ಮಹಾದೇವ ಕೌತುಕಮಿ।
ದೆಂಬ ತೆರನಾಗಿ ಮುಂದಕೆ ತಳೆವ ಕುದುರೆಗಳ ಕೂಡೆ ಸೌರಾಷ್ಟ್ರಕಾಗಿ॥
ಬೆಂಬಿಡದೆ ಬಂದುದರ್ಜುನನ ಬಲಮಲ್ಲಿ ಸುಖ।
ದಿಂಬಾಳ್ವ ಭೂವರಂ ವೀರವರ್ಮಂ ಜನಾ।
ಡಂಬರದೊಳಿರ್ದಪಂ ಸಾರಸ್ವತಾಖ್ಯ ನಗರದೊಳತಿ ವಿಲಾಸದಿಂದೆ॥
ಪ್ರತಿಪದಾರ್ಥ :- ಅತುಲ= ಅತ್ಯಧಿಕವಾದ, ಸೇನೆ= ಬಲವು, ಮಹೀಮಂಡಲವನು= ಭೂಪ್ರದೇಶವನ್ನೆಲ್ಲಾ, ತುಂಬಿತು= ವ್ಯಾಪಿಸಿಕೊಂಡಿತು, ಇನ್ನೆಲ್ಲಿಗೆ= ಇನ್ನು ಯಾವ ಸ್ಥಳಕ್ಕೆ, ನಡೆಗೊಂಬುದು= ಹೋಗಲಾದೀತು, ಮಹಾದೇವ= ಪರಮೇಶ್ವರನೆ, ಇದು= ಈ ಸೈನ್ಯವು, ಕೌತುಕಂ= ಅಚ್ಚರಿಯು, ಎಂಬ= ಎನ್ನತಕ್ಕ, ತೆರನಾಗಿ = ವಿಧಾನದಿಂದ, ಮುಂದ ಮುಂದಕೆ ತಳೆವ= ಹೊರಡುವ, ಕುದುರೆಗಳ ಕೂಡೆ= ಅಶ್ವಗಳೊಂದಿಗೆ, ಅರ್ಜುನನ ಬಲ= ಫಲುಗುಣನ ಸೈನ್ಯವು, ಬೆಂಬಿಡದೆ= ಹಿಂಬಾಲಿಸಿ-
ಕೊಂಡೇ, ಸೌರಾಷ್ಟ್ರಕ್ಕಾಗಿ= ಸೌರಾಷ್ಟ್ರವೆಂಬ ನಾಡನ್ನು ಕುರಿತು, ಬಂದುದು= ತಲಪಿತು, ಅಲ್ಲಿ= ಆ ಸೌರಾಷ್ಟ್ರದೇಶದಲ್ಲಿರ-
ತಕ್ಕ, ಸಾರಸ್ವತಾಖ್ಯನಗರದೊಳು= ಸಾರಸ್ವತವೆಂಬ ಪಟ್ಟಣದಲ್ಲಿ, ಸುಖದಿಂದ= ಸೌಖ್ಯವಾಗಿ, ಬಾಳ್ವ= ರಾಜ್ಯಪರಿಪಾಲನೆ ಮಾಡುತ್ತಿರುವ,ವೀರವರ್ಮ ಭೂವರಂ= ವೀರವರ್ಮನೆಂಬ ಅರಸು. ಜನಾಡಂಬರದೊಳು= ಜನಸಮುದಾಯದಲ್ಲಿ, ಅತಿವಿಲಾಸದಿಂದ= ಹೆಚ್ಚಾದ ಸಂಭ್ರಮದಿಂದ, ಇರ್ದಪಂ= ಇದ್ದನು.
ತಾತ್ಪರ್ಯ:- ಇವರ ಅಪಾರವಾದ ಸೇನೆಯ ಸಡಗರದಿಂದ, ಭೂಮಂಡಲದಲ್ಲಿ ಎಲ್ಲಿಯೂ ಬಿಡುವೇ ಇಲ್ಲವಾಯಿತು. ಈ ತೆರನಾಗಿ ಹೊರಟ ಸೇನೆಯು ಮುಂದುವರಿದು ಸೌರಾಷ್ಟ್ರ ಗಡಿಯನ್ನು ದಾಟಿತು. ಧನಂಜಯನ ಯಜ್ಞಾಶ್ವಗಳು ಆ ನಾಡಿಗೆ ನುಗ್ಗಿ ನಡೆದವು. ಆ ನಾಡಿಗೆ ಸೇರಿದ ಸಾರಸ್ವತವೆಂಬ ಪಟ್ಟಣ ಕಾಣಿಸಿತು. ಯಾಗದ ಕುದುರೇಗಳು ಆ ನಗರಕ್ಕೆ ಹೋಗಿ ಸೇರಲು ಬೆಂಗಾವಲಿಗೆ ಬಂದಿರುವ ಕೃಷ್ಣಾರ್ಜುನರು ಆ ಪುರಪ್ರವೇಶಮಾಡಿದರು. ಆ ನಗರದಲ್ಲಿ ವೀರವರ್ಮನೆಂಬ ಅರಸು ಪ್ರಜಾರಂಜಕನಾಗಿ ಧರ್ಮದಿಂದ ರಾಜ್ಯಪರಿಪಾಲನೆ ಮಾಡುತ್ತಿದ್ದನು.
ನೆರೆ ನಾಲ್ಕು ಚರಣದಿಂ ಧರ್ಮಮಡಿಯಿಡುತಿಹುದು।
ಮರೆದು ಕನಸಿನೊಳಾದೊಡಂ ಪಾತಕದ ಕೃತ್ಯ।
ಕೆರಗುವವರಿಲ್ಲ ಪುರುಷ ಸ್ತ್ರೀಕದಂಬದೊಳ್ ವ್ಯಾಧಿಗಳ ಪೀಡೆಗಳನು॥
ಅರಿಯರಾರುಂ ದುಃಖ ಶೋಕಸಂತಾಪದಿಂ।
ಮರುಗುವವರಂ ಕಾಣೆನಾ ನೃಪನ ರಾಷ್ಟ್ರದೊಳ್।
ಸೆರೆಯಾಗಿ ವೈವಸ್ವತಂ ಮನೆಯಳಿಯತನದೊಳಿರುತಿಹಂ ಭೂವರಂಗೆ॥೩॥
ಪ್ರತಿಪದಾರ್ಥ :- ಧರ್ಮಂ= ಧರ್ಮವಾದರೊ, ನಾಲೂಕುಚರಣದಿಂದ= ನಾಲ್ಕುಹೆಜ್ಜೆಗಳಿಂದಲೂ, ನೆರೆ= ಚನ್ನಾಗಿ, ಅಡಿಯಿಡುತಿಹುದು= ಹೆಜ್ಜೆಗಳನ್ನಿಡುತ್ತಲಿರುವುದು, ಪುರುಷ ಸ್ತ್ರೀ ಕದಂಬದೊಳು=ಅಲ್ಲಿ ವಾಸಮಾಡುವ ಗಂಡಸರು ಹೆಂಗಸರಲ್ಲೆ ಯಾರೊಬ್ಬರೂ, ಮರೆದು= ಮರೆತು, ಕನಸಿನೊಳಾದರುಂ= ಸ್ವಪ್ನದಲ್ಲಿಯೂ ಕೂಡ, ಪಾತಕದ ಕೃತ್ಯಕ್ಕೆ= ಕೆಟ್ಟ ಕೆಲಸಕ್ಕೆ, ಎರಗುವವರಿಲ್ಲ= ಉಜ್ಜುಗಿಸತಕ್ಕವರಲ್ಲ, ವ್ಯಾಧಿಪೀಡೆಗಳನು= ರೋಗಬಾಧೆಯನ್ನು,ಆರುಂ= ಯಾರು, ಅರಿಯರು= ತಿಳಿಯರು, ಆ ನೃಪನ= ಆ ವೀರವರ್ಮನ, ರಾಷ್ಟ್ರದೊಳ್= ದೇಶದೊಳಗೆ, ದುಃಖ ಶೋಕ ಸಂತಾಪದಿಂ= ಸಂಕಟ ಮನೋವ್ಯಥೆಯ ಬಾಧೆ ಮೊದಲಾದವುಗಳಿಂದ, ಮರುಗುವವರಂ= ನರಳುತ್ತಲಿರುವವರನ್ನು,ಕಾಣೆನು= ನೋಡಲೇ ಇಲ್ಲ, ವೈವಸೂವತಂ= ಸೂರ್ಯಸುತನಾದ ಯಮನು, ಭೂವರಂಗೆ= ರಾಜನಾದ ವೀರವರ್ಮಂಗೆ,ಮನೆಯ= ಮಂದಿರದ, ಅಳಿಯತನದೊಳ್= ಅಳಿಯನ ಭಾವದಿಂದ, ಸೆರೆಯಾಗಿ= ಸಂಸಾರಪಾಶಕ್ಕೆ ಸಿಕ್ಕಿಕೊಂಡು, ಇರುತಿಹನು= ಇದ್ದಾನೆ.
ತಾತ್ಪರ್ಯ:- ಈ ವೀರವರ್ಮನ ರಾಜ್ಯದಲ್ಲಿ ಧರ್ಮದೇವತೆಯು ನಾಲ್ಕು ಚರಣಗಳಿಂದಲೂ ನಡೆಯುತ್ತಲಿರುವುದೊ ಎಂಬಂತೆ ಆ ದೇಶನಿವಾಸಿಗಳೆಲ್ಲರೂಧರ್ಮಪರಾಯಣರಾಗಿದ್ದರೇ ಹೊರತು ಗಂಡಸರಾಗಲಿ ಹೆಂಗಸರಾಗಲೆ ಯಾರೊಬ್ಬರೂ ಕೂಡ ಸ್ವಪ್ನದಲ್ಲಿ ಕೂಡ ದುಷ್ಕಾರ್ಯವನ್ನು ನೆನೆಯತಕ್ಕವರಾಗಿರಲಿಲೂಲ. ಪ್ರಜೆಗಳೆಲ್ಲರೂ ಸನ್ಮಾರ್ಗ-
ಪ್ರವರ್ತಕರೃದ ಕಾರಣ ಯಾರೊಬ್ಬರೂ ರೋಗ ರುಜಿನಗಳಿಂದಲೂ, ಕಷ್ಟ ನಷ್ಟಗಳಿಂದೊದಗುವ ಸಂಕಟಗಳಿಂದಲೂ
ನರಳದೆ ಸುಖವಾಗಿಯೂ ಸಂತೋಷವಾಗಿಯೂ ಇದ್ದರು. ಇಂತಹ ಸುಖದೃಯಕವಾದ ದೇಶದ ರಾಜ ವೀರವರ್ಮನಗೆ ಯಮಧರ್ಮರೃಯನೆ ಅಳಿಯನಾಗಿದ್ದುಕೊಂಡು ಯಾವೊಂದು ಬಾಧೆಗೂ ಅವಕಾಶವಿಲ್ಲದಂತೆ ನೋಡಿಕೊಳ್ಳುತ್ತಲಿದ್ದನು.
ಈ ತೆರನಾಗಿ ವೀರವರ್ಮನು ಸುಖದಿಂದ ರಾಜ್ಯವನ್ನು ಪರಿಪಾಲಿಸುತ್ತಿದ್ದನು.
ಆ ವೀರವರ್ಮನೀ ಪಾಂಡವನ ಕುದುರೆಗಳ್।
ಕಾವ ಪಡೆಸಹಿತನಿಜರಾಷ್ಟ್ರಕೈತಂದುವೆಂ।
ಬೀ ವಾರ್ತೆಯಂ ಕೇಳ್ದು ನಗುತೆ ಖತಿಗೊಂಡು ಕೃಷ್ಣಾರ್ಜುನರ ಸಾಹಸವನು॥
ನಾವರಿದುಕೊಂಬೆವಶ್ವಂಗಳಂ ಕಟ್ಟುವುದು।
ನೀವೆಂದು ಕಳುಪಲಾ ನೃಪನ ಪರಿವಾರಂ ಮ।
ಹಾ ವಿಭವದಿಂದೆ ಕರಿ ತುರಗ ರಥ ಪಾಯದಳಮೊತ್ತರಿಸೆ ಪೊರಮಟ್ಟುದು॥೪॥
ಪ್ರತಿಪದಾರ್ಥ :- ಈ ಪಾಂಡವನ= ಈ ಫಲುಗುಣನ, ಕುದುರೆಗಳ್= ಕುದುರೆಗಳು, ಕಾವ= ಬೆಂಗಾವಲಾಗಿರತಕ್, ಪಡೆಸಹಿತ = ಸೇನಾಸಮೇತನಾಗಿ, ನಿಜ= ತನ್ನ, ರಾಷ್ಟ್ರಕೆ= ನಾಡಿಗೆ, ಐತಂದವು= ಬಂದವು, ಎಂಬ=ಎನ್ನತಕ್ಕ, ಈ ವಾರ್ತೆಯಂ= ಈ ಸಮಾಚಾರವನ್ನು, ಆ ವೀರವರ್ಮಂ= ಅಲ್ಲಿನ ರಾಜ ವೇರವರ್ಮನು, ಕೇಳ್ದು= ಕೇಳಿ, ನಗುತ= ಮುಗುಳುನಗುತ್ತ, ಖತಿಗೊಂಡು= ಆಗ್ರಹಗೊಂಡು, ನಾವು= ನಾವಾದರೊ, ಕೃಷ್ಣಾರ್ಜುನರ= ನರನಾರಾಯಣರ
ಸಾಹಸವನು= ಪರಾಕ್ರಮವನ್ನು, ಅರಿದುಕೊಂಬೆವು= ನೋಡಿಕೊಳ್ಳುತ್ತೇವೆ, ನೀವು= ನೀವುಗಳು, ಅಶ್ವಂಗಳಂ= ಕುದುರೆಗಳನ್ನು, ಕಟ್ಟುವುದು= ಕಟ್ಟಿಹಾಕಿ, ಎಂದು=ಎಂಬುದಾಗಿ, ಕಳುಪಲು= ಕಳುಹಿಸಿಕೊಡಲು,ಆ ನೃಪನ= ಆ ರಾಜನ, ಪರಿವಾರಂ= ವೀರರ ಸಮುದಾಯಂ, ಕರಿತುರಗಪಾಯದಳಂ= ಆನೆ, ಕುದುರೆ, ಪದಾತಿಗಳಿಂದ, ಒತ್ತರಿಸಿ= ಒಟ್ಟುಗೂಡಿ,
ಮಹಾವೆಭವದಿಂದ= ಹೆಚ್ಚಾದ ಅಟ್ಟಹಾಸದಿಂದ,ಪೊರಮಟ್ಟುದು= ಹೊರಟಿತು.
ಅ॥ವಿ॥ ಕೃಷ್ಣ+ಅರ್ಜುನ= ಕೃಷ್ಣಾರ್ಜುನರು( ಸ. ದೀ ಸಂ.)
ತಾತ್ಪರ್ಯ:- ವೀರವರ್ಮ ಮಹಾರಾಜನಿಗೆ ಅರ್ಜುನನ ಯಜ್ಞಾಶ್ವಗಳು ತನ್ನ ದೇಶಕ್ಕೆನುಗ್ಗಿ ಬಂದಿರುವಂತೆಯೂ ಫಲುಗುಣನು ಅಪಾರವಾದ ಸೇನಾಸಮುದ್ರದಿಂದ ಆ ಕುದುರೆಗಳನ್ನು ಹಿಂಬಾಲಿಸಿ ಬಂದಿರುವುದಾಗಿಯೂ ತಿಳಿದು, ಕೋಪಗೊಂಡು ಕೃಷ್ಣಾರ್ಜುನರ ಸಾಹಸವನ್ನು ನೋಡಿಕೊಳ್ಳುವೆನು. ನೀವು ತಡಮಾಡದೆ ಹೋಗಿ ಯಾಗದ ಕುದುರೆಗಳನ್ನು ಕಟ್ಟಿಹಾಕಿರೆಂದು ಅಪ್ಪಣೆಯನ್ನಿತ್ತನು. ಕೂಡಲೆ ಚತುರಂಗಬಲವು ಸಿದ್ಧವಾಯಿತು.
ಸುಲಭನೆಂದನುಪಮ ಸುಫಾಲನೆಂದೆನುತ ಕು।
ವಲನೆಂದು ನೀಲನೆಂದಗ್ಗದ ಸರಳನೆಂದು।
ಬಲವಂತರಿವರೈವರಾ ನೃಪನ ಸೂನುಗಳ್ ಪೊರಮಟ್ಟು ಸೇನೆ ಸಹಿತ॥
ಕೆಲವರಿದಡರ್ದು ಕೈದುಡುಕಿ ತುಸು ಮಾತ್ರಮೆನೆ।
ಫಲುಗುಣನ ತುರಗಂಗಳಂ ತಂದು ನಿಮಿಷದೊಳ್।
ನಿಲಿಸಿದರ್ ಪಿತನ ಸನ್ನಿಧಿಯೊಳರ್ಜುನನ ಪಡೆ ಕಂಡು ಕವಿದುದೊಡನೆ॥೫॥
ಪ್ರತಿಪದಾರ್ಥ :- ಸುಲಭನು ಎಂದು= ಸುಲಭನೆಂಬ ಹೆಸರಿನಿಂದಲೂ, ಅನುಪಮ= ಅಸದೃಶನಾದ, ಸುಲೋಭನೆಂದು= ಸುಲೋಭನೆಂಬತೆರನಾಗಿಯೂ, ಉನ್ನತ= ಹೆಚ್ಚುಗಾರಿಕೆಯ, ಕುವಲನೆಂದು= ಕುವಲನೆಂಬ ನಾಮಧೇಯದಿಂದಲೂ, ನೇಲನೆಂದು= ನೀಲನೆಂಬುದಾಗಿಯೂ, ಅಗ್ಗದ= ಶೂರನಾದ, ಸರಳನೆಂದು= ಸರಳನೆಂಬ ಹೆಸರುಳ್ಳ, ಬಲವಂತರು= ಪರಾಕ್ರಮಿಗಳಾದ, ಇವರೈವರು= ಈ ಐದುಜನ, ಆ ನೃಪನ ಸೂನುಗಳ್= ಆ ರಾಜಕುಮಾರರು, ಸೇನೆಸಹಿತ= ಪಡೆಯಿಂ-
ದೊಡಗೂಡಿ, ಪೊರಮಟ್ಟು = ಹೊರಟು, ಕೆಲವರಿದು= ಪಕ್ಕಗಳನ್ನು ನೋಡಿಕೊಂಡು, ಊಡರ್ದು= ಮುಂಬರಿದು, ತುಸುಮಾತ್ರಂ= ಅತ್ಯಲ್ಪವು, ಎನೆ= ಎನ್ನುವಂತೆ, ಕೈದುಡುಕಿ= ಕೈಮೀರಿ, ನಿಮಿಷದೊಳ್= ನಿಮಿಷಮಾತ್ರದೊಳಗಾಗಿ
ಫಲುಗುಣನ= ಪಾರ್ಥನ, ತುರಗಂಗಳಂ= ಹಯಗಳನ್ನು, ತಂದು= ತೆಗೆದುಕೊಂಡುಬಂದು, ಪಿತನ= ಜನಕನ, ಸನ್ನಿಧಿಯೊಳ್= ಬಳಿಯಲ್ಲಿ, ನಿಲಿಸಿದರ್= ನಿಲ್ಲಿಸಿಬಿಟ್ಟರು, ಅರ್ಜುನನ = ಫಲುಗುಣನ, ಪಡೆ= ದಳವು, ಅದನು=
ಕುದುರೆಗಳನ್ನು ಸೆಳೆದುಕೊಂಡು ಹೋಗುತ್ತಿರೈವುದನ್ನು, ಕಂಡು=ನೋಡಿ, ಒಡನೆ= ತಕ್ಷಣವೇ, ಕವಿದುದು= ಮುತ್ತಿಕೊಂಡಿತು.
ತಾತ್ಪರ್ಯ:- ಸೇನೆಯೊಂದಿಗೆ ಹೊರಟ ಸುಲಭ, ಸುಲೋಭ, ಕುವಲ, ನೀಲ, ಸರಳರೆಂಬ ವೀರವರ್ಮನ ಐವರು ಕುವರರೂ ನಿರಾಯಾಸವಾಗಿ ಕ್ಷಣಮಾತ್ರದಲ್ಲಿ ಅರ್ಜುನನ ಕುದುರೆಗಳನ್ನು ಹಿಡಿತಂದು ತಂದೆಯಾದ ವೀರವರ್ಮನಿಗೆ ಒಪ್ಪಿಸಿದರು. ಈ ವಾರ್ತೆಯು ಫಲುಗುಣನಿಗೆ ತಿಳಿಯಿತು. ಬಳಿಕ ಅರ್ಜುನನ ಸಕಲಪರಿವಾರವೂ ಯುದ್ಧಕ್ಕೆ
ಅನುವಾಯಿತು.
ಮೋಹರದ ಮುಂದೆ ನಡೆತರುತಿರ್ದ ಕಲಿ ಬಭ್ರು।
ವಾಹನಂ ಕೇಳ್ದು ಕಡುಗೋಪದಿಂದೊದಗಿ ಬಂ।
ದಾಹವಕೆ ಶಂಖನಾದಂಗೆಯ್ಯೆ ಬೆದರಿತು ಜಗತ್ತ್ರಯಂ ಪರಬಲದೊಳು॥
ಸಾಹಸಿಗಳುಡುಗಿದರ್ ಬಳಿಕೆರಡು ಚೂಣಿಗಳ।
ಕಾಹುರದ ಕಲಿಗಳೊಡವೆರಸಿಹೊಯ್ದಾಡಿದರ್।
ಬಾಹು ನಖ ಮುಷ್ಟಿ ಕೇಶಾಕೇಶಿ ಮಲ್ಲಯುದ್ಧದ ಹತಾಹತಿಗಳಿಂದೆ॥೬॥
ಪ್ರತಿಪದಾರ್ಥ :- ಮೋಹರದ ನಡುವೆ= ದಳದ ಮಧ್ಯಭಾಗದಲ್ಲಿ, ನಡೆತರುತಿರ್ದ= ಬರುತ್ತಲಿದ್ದ, ಕಲಿ=ವೀರನಾದ, ಬಭ್ರುವಾಹನಂ = ಪಾರ್ಥಜನು, ಕೇಳಿ= ಕುದುರೆಗಳನ್ನು ವೀರವರ್ಮನ ಮಕ್ಕಳು ಹಿಡಿದುಕೊಂಡು ಹೋಗುತ್ತಲಿರುವರೆಂಬ
ವಾರ್ತೆಯನ್ನಾಲಿಸಿ,ಆಹವಕ್ಕೆ= ಕಾಳಗಕ್ಕೆ, ಕಡುಕೋಪದಿಂದ= ಅತ್ಯಾಗ್ರಹದಿಂದ, ಒದಗಿ= ನೆರೆದು, ಬಂದು= ಬಂದವನಾಗಿ, ಶಂಖನಾದಂಗೈಯೆ= ಶಂಖವನ್ನೂದಲು, ಜಗತ್ರಯಂ= ಮೂರುಲೋಕಗಳೂ,ಬೆದರಿತು= ಹೆದರಿಕೊಂಡಿತು, ಪರಬಲದೊಳ್= ಹಗೆಗಳ ಪಡೆಯಲ್ಲಿ,ಸಾಹಸಿಗಳು= ವೀರಾಗ್ರಣಿಗಳೆಲ್ಲಾ, ಒದಗಿದರು=ಒಟ್ಟುಗೂಡಿದರು, ಬಳಿಕ = ಆ ಮೇಲೆ, ಎರಡೂಚೂಣಿಗಳು= ಎರಡೂ ಸೈನ್ಯಗಳು, ಕಾಹುರದ= ಕಾಳಗದಲ್ಲಿ ಸಮರ್ಥರಾದ, ಕಲಿಗಳು= ಶೂರರು, ಎಡೆವೆರಸಿ= ಒಟ್ಟುಗೂಡಿದವರಾಗಿ, ಬಾಹು=ಭುಜಗಳು, ನಖ=ಉಗುರುಗಳು, ಮುಷ್ಟಿ= ಕೈಹಿಡಿ, ಕೇಶಾಕೇಶಿ= ಒಬ್ಬರ ಜುಟ್ಟನ್ನು ಮತ್ತೊಬ್ಬರು ಹಿಡಿಯುವುದು, ಮಲ್ಲಯುದ್ಧದ= ಕುಸ್ತಿಗಳು ಮೊದಲಾದವುಗಳ, ಹತಾಹತಿಗಳಿಂದ= ಪೆಟ್ಟುಗಳ ಮೇಲೆ ಪೆಟ್ಟುಗಳು ಬೀಳುವಂತೆ,ಹೊಯ್ಯಾಡಿದರು= ಹೊಡೆದಾಡಿದರು.
ತಾತ್ಪರ್ಯ:- ಸೇನೆಯ ಮಧ್ಯಭಾಗದಲ್ಲಿ ಬರುತ್ತಲಿದ್ದ ಬಭ್ರುವಾಹನನು ಇದನ್ನು ನೋಡಿದ ಕೂಡಲೆ ಅತಿಕೋಪಗೊಂಡು ಯುದ್ಧರಂಗವನ್ನು ಹೊಕ್ಕು ವೈರಿಗಳ ಎದೆ ನಡುಗುವಂತೆ ಶಂಖನಾದವನ್ನು ಮಾಡಿದ್ದರಿಂದ ಮೂರು ಲೋಕಗಳೂ ಕೂಡ ಗಾಬರಿಗೊಂಡವು. ಬಭ್ರುವಾಹನನ ಶಂಖನಾದವು ಕೇಳಿದ ಕೂಡಲೆ ವೀರವರ್ಮನ ಸೇನೆಯ ಶೂರರೆಲ್ಲಾ ಯುದ್ಧಕ್ಕೆ ನಿಂತರು, ಉಭಯ ಸೈನ್ಯಗಳೂ ಕಲೆತಾಗ ಕೈಗಳಿಂದ ಒಬ್ಬರನ್ನೊಬ್ಬರು ಅಪ್ಪಳಿಸುತ್ತಲೂ, ಒಬ್ಬರ ಜುಟ್ಟನ್ನು ಒಬ್ಬರು ಹಿಡಿದು ಹೊಡೆಯುವುದರಲ್ಲಿಯೂ, ಒಬ್ಬರು ಮತ್ತೊಬ್ಬರನ್ನು ಮೀರಿಸುತ್ತಲಿದ್ದರು.
ಬಳಿಕೆರಡು ಕಡೆಯ ಭಟರುಬ್ಬರದೊಳುಬ್ಬರದೊ।
ಳೆಳಸಿ ಹೊಯ್ದಾಡುತಿರಲಾಚೆಯಿಂದೀಚೆಯಿಂ।
ತಳತಂತ್ರಮೊಡನೊಡನೆ ಮುಗ್ಗಿದುದು ಮುಗ್ಗಿದುದು ಬಹಳ ಕೋಲಾಹಲದೊಳು॥
ಖಳಿಕಟಿಲು ಖಟಿಲೆಂದು ರವದಿಂದೆ ಜವದಿಂದೆ।
ಕಳಿವರಿದು ಘೋರಪ್ರಹಾರದಿಂ ವೀರದಿಂ।
ಬಳಸಿ ಬಿದ್ದುದು ಮಂದಿ ಹೆಣಮಯದ ರಣಮಯದ ರೌಕುಳದ ರಚನೆ ಮೆರೆಯೆ॥೭॥
ಪ್ರತಿಪದಾರ್ಥ :- ಬಳಿಕ = ಅನಂತರ, ಎರಡುಕಡೆಯಭಟರು= ಎರಡುಕಡೆಯ ವೀರರು,ಉಬ್ಬರದೊಳು= ಹೆಚ್ಚರಿಕೆಯಿಂದ
ಅಬ್ಬರದೊಳು= ಸಿಂಹನಾದದಿಂದ, ಎಳಸಿ= ಅಪೇಕ್ಷಿಸಿ, ಆಚೆಯಿಂ= ಆ ಭಾಗದಿಂದಲೂ, ಈಚೆಯಿಂ= ಈ ಭಾಗದಿಂದಲೂ,
ಹೊಯ್ದಾಡುತ= ಹೊಡೆದಾಡುತ್ತ, ಇರಲು= ಇರಲಾಗಿ, ತ್ಳತಂತ್ರಂ= ಪರಾಕ್ರಮವು, ಒಡನೊಡನೆ= ಆಗಾಗ್ಗೆ, ಮುಗ್ಗಿದುದು=
ಕೆಡೆಯಲಾರಂಭವಾಯಿತು, ಮುಗ್ಗಿದುದು= ಕಡಮೆಯಾಯಿತು, ಬಹಳ=ಅಧಿಕವಾದ, ಕೋಲಾಹಲದೊಳು= ಕಲಕಲಧ್ವ-
ನಿಯಿಂದ, ಖಳಿಖಟಿಲು= ಖಳಿಖಟಿಲು, ಎಂಬ=ಎನ್ನತಕ್ಕ, ರವದಿಂದ= ಶಬ್ಧದಿಂದ, ಜವದಿಂದ= ಜಾಗ್ರತೆಯಿಂದ, ಕಳಿವ=
ಮರ್ಮಸ್ಥಾನವನ್ನು(ಎದೆಯಭಾಗವನ್ನು) ಅರಿದು=ತಿಳಿದು, ಘೋರ= ಬಲವಾದ, ಪ್ರಹಾರದಿಂದ= ಏಟಿನಿಂದ, ವೀರದಿಂದ= ಪರಾಕ್ರಮದಿಂದ, ಬಳಸಿ= ಕೂಡಿ, ಹೆಣಮಯದ= ಹೆಣಗಳಿಂದ ತುಂಬಿದ,ರಣಮಯದ= ಯುದ್ಧದಿಂದ ಕೂಡಿರುವ, ಕಾಕುಳದ= ಸೋಕುವುದರ, ರಚನೆ= ಕಾರ್ಯವು, ಮೆರೆಯೆ= ಅಂದದಿಂದ ಕೂಡಿರಲು, ಮಂದಿ= ಜನಗಳು, ಬಿದ್ದುದು= ಬಿದ್ದುಬಿಟ್ಟಿತು.
ತಾತ್ಪರ್ಯ:-ಎರಡುಕಡೆಗಳಲ್ಲಿಯೂನೆರೆದಿದ್ದ ವೀರರೆಲ್ಲರೂ ಈ ಪರಿ ಘೋರಯುದ್ಧ ಮಾಡುತ್ತ ಸಿಂಹನಾದಮಾಡುತ್ತ ಇರಲಾಗಿ, ಬಭ್ರುವಾಹನನ ಸಾಹಸಾತಿಶಯದಿಂದ ವೀರವರ್ಮನ ಕಡೆಯ ಸೈನ್ಯವೆಲ್ಲಾ ನಷ್ಟವಾಗಿ ಹೋದಕಾರಣ ಎಲ್ಲಿ-
ನೋಡಿದರೂ ಹೆಣದ ರಾಶಿಯು ಬಿದ್ದುಹೋಯಿತು.
ಮತ್ತೆ ಪುರದಿಂದಯುತ ನಿಯುತ ಸಂಖ್ಯೆಯ ರಥವ।
ಮೊತ್ತದಿಂ ಕುದುರೆ ಮಂದಿಗಳ ಸಂದಣಿಗಳಿಂ।
ಮತ್ತಗಜ ಘಟೆಗಳಂದಾನೃಪನ ಸುತರೈವರುಂ ಪಚಾರಿಸುತ ಬಂದು॥
ಒತ್ತಾಯಮಂ ಮಾಡೆ ಬಭ್ರುವಾಹಂ ಕನ।
ಲ್ದುತ್ತುಂಗ ಚಾಪದಿಂ ಕಣೆಗರೆಯುತಿರಲನಿಬ।
ರೆತ್ತಲಡಗಿದರೊ ಪೇಳೆನೆ ಮಡಿದುದರಿಚಾತುರಂಗಮದನೇವೇಳ್ವೆನು॥೮॥
ಪ್ರತಿಪದಾರ್ಥ :- ಮತ್ತೆ= ತಿರುಗಿ, ಆ ನೃಪನ= ಆ ರಾಜನ, ಸುತರೈವರು = ಐದುಜನ ಮಕ್ಕಳೂ, ಪುರದಿಂದ= ತಮ್ಮ ನಗರದಿಂದ, ಅಯುತ= ಹತ್ತು ಸಾವಿರದ, ನಿಯತ=ಇಪ್ಪತ್ತು ಸಾವಿರದ, ಸಂಖ್ಯೆಯ= ಲೆಕ್ಕವುಳ್ಳ, ರಥದ= ರಥಗಳ, ಮೊತ್ತದಿಂ= ಸಮುದಾಯದಿಂದ, ಕುದುರೆ= ಹಯಗಳು, ಮಂದಿಗಳ= ಕಾಲ್ಬಲ ಇವುಗಳ,ಸಂದಣಿಗಳಿಂ= ಗುಂಪಿನಿಂದ
ಮತ್ತ= ಮದದಿಂದ ಕೂಡಿದ, ಗಜಘಟೆಗಳಿಂದ= ಆನೆಗಳ ಸಮೂಹದಿಂದ, ಪಚಾರಿಸುತ= ದಂಡಿಸುತ್ತ, ಬಂದು=ಬಂದವ-
ರಾಗಿ, ಒತ್ತಾಯಮಂಮಾಡೆ= ನೆರವಾಗಿ ಸೇರಲು, ಬಭ್ರುವಾಹನನು = ಪಾರ್ಥಜನು, ಕನಲ್ದು= ಕೋಪಗೊಂಡು, ಉತ್ತುಂಗ= ಬಹುದೊಡ್ಡದಾದ, ಚಾಪದಿಂ= ಧನುಸ್ಸಿನಿಂದ, ಕಣೆಗರೆವುತ= ಬಾಣಗಳನ್ನು ಸುರಿಸುತ್ತ, ಇರೆ=ಇರಲಾಗಿ, ಅನಿಬರು= ಆ ಐವರು, ಎತ್ತಲು=ಯಾವ ಭಾಗದಲ್ಲಿ, ಅಡಗಿದರೊ = ಅವಿತುಕೊಂಡರೊ, ಪೇಳೆನೆ= ಹೇಳು ಎಂಬಂತೆ, ಅರಿಚಾತುರಂಗಂ= ಹಗೆಗಳ ಚತುರಂಗ ಬಲವು, ಮಡಿದುದು= ಮರಣವನೈದಿತು,ಅದನು= ಆ ಸಮಾಚಾರವನ್ನು,ಏ ವೇಳ್ವೆನು= ಏನೆಂದು ನುಡಿಯಲಿ.
ಙ
ಅ॥ವಿ॥ ಅರಿಗಳ+ಚಾತುರಂಗ=ಅರಿಚಾತುರಂಗ(ಷ. ತ. ಸ.)
ತಾತ್ಪರ್ಯ:-ಈ ವರ್ತಮಾನವನ್ನು ವೀರವರ್ಮನ ಮಕ್ಕಳು ಕೇಳಿ, ಕೋಪಾವಿಷ್ಟರಾಗಿ, ಇಪ್ಪತ್ತು ಸಹಸ್ರ ಚತುರಂಗಬಲದೊಂದಿಗೆ ಬಭ್ರುವಾಹನನ ಮೇಲೆ ಯುದ್ಧಕ್ಕೆ ನಿಂತರು. ಬಭ್ರುವಾಹನನಿಗೆ ರೋಷವಿಮ್ಮಡಿಸಿ ಧನುಸ್ಸಿಗೆ ಬಾಣಗಳನ್ನು ಹೂಡಿ ಸುಲಭನೇ ಮೊದಲಾದವರಮೇಲೆ ಬಿಡುತ್ತಿರಲು, ಅವರು ಬಂದ ಮಾರ್ಗವನ್ನೇ ಕಾಣದೆ ಯಮಪುರಿ-
ಯನ್ನೈದಬೇಕಾಯಿತು. ಈ ಸುದ್ಧಿಯು ವೀರವರ್ಮನಿಗೆ ತಿಳಿಯಲು,
ಕಲಿ ಬಭ್ರುವಾಹನನ ಕೋಲ್ಗಳಿಂ ನಿಜಸೇನೆ।
ಖಿಲಮಾಗುತಿರೆ ಕೇಳ್ದು ವೀರವರ್ಮಂ ತಾನೆ।
ಬಲ ಸಹಿತ ಪೊರಮಟ್ಟು ತನಗಳಿಯನಾಗಿರ್ದ ಕಾಲಂಗೆ ತೋರಿಸಲ್ಕೆ॥
ಕೊಲತೊಡಗಿದಂ ಬಳಿಕ ಧರ್ರಾಜಂ ಮುಳಿದು।
ಫಲುಗುಣನ ತಳತಂತ್ರಮಂ ತನ್ನ ಮಾವಂಗೆ।
ಗೆಲವಾಗಬೇಕೆಂದು ಜೀವಿಗಳ ವಧೆಗೆ ಜವನಳಕುವನೆ ಜಗದೊಳೆನಲು॥೯॥
ವೀರವರ್ಮಂ = ವೀರವರ್ಮ ರಾಜನು, ನಿಜ= ತನ್ನ, ಸೇನೆ= ದಂಡು, ಕಲೆ ಬಭ್ರುವಾಹನನ = ಶೂರನಾದ ಬಭ್ರುವಾಹನನ, ಕೋಲ್ಗಳಿಂ= ಬಾಣಗಳಿಂದ, ಖಿಲಮಾಗುತಿರೆ = ನಾಶವನ್ನೈದುತ್ತಿರಲು,ಕೇಳ್ದು= ಕೇಳಿದವನಾಗಿ, ಬಲಸಹಿತ= ದಂಡಿನೊಡ-
ನೆ, ತಾನೆ= ತಾನಾಗಿಯೇ, ಪೊರಮಟ್ಟು = ಹೊರಟು, ಫಲುಗುಣನ= ಧನಂಜಯನ, ತಳತಂತ್ರಮಂ= ಶೌರ್ಯವನ್ನು, ತನಗೆ= ತನಗಾದರೊ, ಅಳಿಯನಾಗಿರ್ದ= ಅಳಿಯನಾಗಿದ್ದ, ಕಾಲಂಗೆ= ಅಂತಕನಿಗೆ, ತೋರಿಸಲ್ಕೆ= ತೋರ್ಪಡಿಸಲಾಗಿ, ಬಳಿಕ = ಆಮೇಲೆ, ಧರ್ಮರಾಜಂ= ಯಮನು, ಮುಳಿದು= ಕೋಪಿಸಿಕೊಂಡು, ತನ್ನ ಮಾವಂಗೆ= ತನ್ನ ಮಾವ ವೀರವರ್ಮನಿಗೆ, ಜಗದೊಳು= ಲೋಕದಲ್ಲಿ, ಜವನು= ಯಮನು, ಜೀವಿಗಳ= ಪ್ರಾಣವುಳ್ಳವರ, ವಧಿಗೆ= ಕೊಲೆಗೆ, ಅಳುಕುವನೆ= ಹಿಂಜರಿಯುತ್ತಾನೆಯೆ, ಎನಲು= ಎಂಬತೆರನಾಗಿ, ಫಲುಗುಣನ= ಪಾರ್ಥನ, ತಳತಂತ್ರಮಂ= ಪರಾಕ್ರಮಿ-
ಗಳಾದ ಯೋಧರನ್ನೆಲ್ಲಾ, ಕೊಲತೊಡಗಿದಂ= ಕೊಂದುಹಾಕತೊಡಗಿದನು.
ತಾತ್ಪರ್ಯ:- ವೀರ ಬಭ್ರುವಾಹನನ ಬಾಣಗಳಿಂದ ತನ್ನ ಸೈನ್ಯವು ನಾಶವಾಗುತ್ತಿರಲು ವೀರವರ್ಮನು ಸೈನ್ಯದೊಡನೆ ತಾನೇ ಹೊರಟು, ಅಳಿಯನಾದ ಯಮನಿಗೆ ತೋರಿಸಿದನು. ಅವನು ಕೋಪದಿಂದ ಮಾವನನ್ನು ಗೆಲ್ಲಿಸಲು ಅರ್ಜುನನ ಸೈನ್ಯವನ್ನು ಕೊಲ್ಲಲಾರಂಭಿಸಿದನು. ಯಮನುವಜೀವಿಗಳ ವಧೆಗೆ ಅಳುಕುವನೇ.
ಎಂದಿರ್ದೊಡಂ ಪ್ರಾಣಿಗಳನೆಲ್ಲರಂ ಕೊಲ್ವ।
ದಂದುಗಂ ತನಗೆ ಬಿಡದೆಂದು ಮುಳಿದಂತಕಂ।
ಬಂದು ಪೊಕ್ಕನೊ ಕಿರೀಟಿಯ ದಳವನೆನೆ ಹತಾಹತಿಗಳಂ ಮಾಡುತಿರಲು॥
ನಿಂದು ಕಾದುವಲ್ಲದಂ ಕಂಡು ಪಾರ್ಥ ಮು।
ಕುಂದನಂ ಬೆಸಗೊಂಡನೆಲೆ ದೇವ ಸೈನ್ಯಮಂ।
ಮುಂದುಗೆಡಿಸುವ ಪರಾಕ್ರಮದ ಕಟ್ಟಾಸುರದ ವೀರನಿವನಾವನೆಂದು॥೧೦॥
ಅಂತಕಂ= ಯಮಧರ್ಮರಾಯನು,ತನಗೆ=ತನಗಾದರೊ, ಪ್ರಾಣಿಗಳೆಲ್ಲರಂ= ಜೀವರಾಶಿಗಳೆಲ್ಲವನ್ನೂ, ಕೊಲ್ವ= ಕೊಂದು ಹಾಕುವ, ದಂದುಗಂ=ಬಾಧೆಯು, ಎಂದಿರ್ದೊಡಂ= ಎಂದಿಗೇ ಆದರೂ, ಬಿಡದು= ತಪ್ಪುವುದಿಲ್ಲ, ಎಂದು= ಎಂಬತೆರನಾಗಿ
ಮುಳಿದು= ಕೋಪಿಸಿಕೊಂಡು, ಬಂದು= ರಣರಂಗಕ್ಕೆ ಬಂದು, ಕಿರೀಟಿಯ= ಧನಂಜಯನ, ದಳವನು= ಸೇನೆಯನ್ನು, ಪೊಕ್ಕನೊ ಎನೆ= ಪ್ರವೇಶಮಾಡಿದನೊ ಎಂಬಂತೆ, ಹತಾಹತಿಗಳಂ ಮಾಡುತಿರಲು= ಎಡಬಿಡದೆ ಏಟುಗಳನ್ನು ಹಾಕುತಿರ-
ಲು, ನಿಂದು= ಆ ಯಮನಿಗೆದುರಾಳಾಗಿ, ಕಾದುವರು= ಹೋರಾಡತಕ್ಕವರು, ಇಲೂಲ=ಇರಲಿಲ್ಲ, ಅದಂ= ಆ ಬಗೆಯನ್ನು, ಫಲುಗುಣಂ ಕಂಡು= ನಿರುಕಿಸಿ, ಮುಕುಂದನಂ= ಮೋಕ್ಷದಾಯಕನಾದ ಕೃಷ್ಣನನ್ನು, ಬೆಸಗೊಂಡನು= ಕೇಳಿದನು, ಎಲೆ-
ದೇವ= ಓ ಮಹಾನುಭಾವನೆ, ಸೈನ್ಯಮಂ= ನಮ್ಮ ಬಲವನ್ನೆಲ್ಲಾ ,ಮುಂದುಗೆಡಿಸುವ = ಹಿಂದಕ್ಕೆ ಹೋಗುವ ಹಾಗೆ ಮಾಡು-
ತ್ತಲಿರತಕ್ಕ, ಪರಾಕ್ರಮದ= ಶೌರ್ಯವುಳ್ಳ, ಇವನು= ಈ ಕಟ್ಟಾಸುರನು, ರಕ್ಕಸನಂತೆ ತೋರುವ, ವೀರನು= ಸಾಹಸಿ,ಆರು=
ಯಾರು, ಎಂದನು= ಎಂಬುದಾಗಿ ಕೇಳಿದನು.
ತಾತ್ಪರ್ಯ:- ಇಲ್ಲಿ ನೆರೆದಿರುವ ಸಕಲ ಜೀವಿಗಳನ್ನೂ ಕೊಂದುಬಿಡುವ ತನ್ನ ಕರ್ತವ್ಯವನ್ನು ಈಗಲೇ ನೆರವೇರಿಸಲು ಪ್ರಾರಂಭಿಸಿದನೋ ಎಂಬಂತೆ ಘೋರಯುದ್ಧವನ್ನು ಮಾಡುತ್ತ, ವೀರಾದಿವೀರರನ್ನೂ ಅಪರಿಮಿತವಾದ ಫಲುಗುಣನ ಪಡೆಯನ್ನೂ ತನ್ನ ಲೋಕಕ್ಕೆ ಕರೆದುಕೊಳ್ಳುತ್ತಲಿರುವುದನ್ನೂ ಅರ್ಜುನನು ನೋಡಿ ಸಮೀಪದಲ್ಲಿದ್ದ ಕೃಷ್ಣನನ್ನು ಕುರಿತು, ಎಲೈ ಮಹಾನುಭಾವನೆ! ನಮ್ಮ ಅಪರಿಮಿತವಾದ ಸೇನಾಸಮುದ್ರವನ್ನು ನಾಶಮಾಡುತ್ತಿರುವ ಈ ಶೂರನು ಯಾರೆಂದು ಕೇಳಿದನು.
ತಾತ ಕೇಳೈ ಪಾರ್ಥ ನಿನಗೆ ಹಿರಿಯಯ್ಯನಹ।
ನೀತಂ ಕಣಾ ಧರ್ಮರಾಜ ನೀ ನೃಪನ ಜಾ।
ಮಾತನಾಗಿರ್ದಪಂ ಮಾವಂಗೆ ಹಿತಮಾಗಿ ನಮ್ಮ ಚಾತುರ್ಬಲವನು॥
ಘಾತಿಸುವನೆಂದು ಹರಿ ನುಡಿದೊಡೆ ಧನಂಜಯನಿ।
ದೇತಕೆ ಮಹೀಪತಿಗೆ ತಾನಳಿಯನಾದನೀ।
ಭೂತಳದೊಳಿದನರಿಪಬೇಕೆಂದು ಬೇಡಿಕೊಳಲಸುರಹರನಿಂತೆಂದನು॥೧೧॥
ಪ್ರತಿಪದಾರ್ಥ :- ತಾತ= ಎಲೈ, ಪಾರ್ಥ= ಕಿರೀಟಿಯೆ, ಕೇಳೈ= ಕೇಳುವನಾಗು, ಈತಂ= ಈಗ ಯುದ್ಧಮಾಡುತ್ತಿರುವವನು, ಧರ್ಮರಾಜ ಕಣಾ= ದಂಡಧರನಲ್ಲವೆ, ನಿನಗೆ= ನಿನಗಾದರೊ, ಹಿರಿಯಯ್ಯ= ದೊಡ್ಡಪ್ಪ, ಅಹನು=ಆಗಿದ್ದಾನೆ. ಈ ನೃಪನ= ಈ ರಾಜನ, ಜಾಮಾತನು= ಮಗಳ ಗಂಡನು, ಆಗಿರ್ದಪಂ= ಆಗಿದ್ದಾನೆ, ನಮ್ಮ= ನಮ್ದಾದಾದ, ಚಾತುರ್ಬಲವನು= ಚತು-
ರಂಗಸೇನೆಯನ್ನು, ಮಾವಂಗೆ= ತನ್ನ ಮಾವನಾದ ವೀರವರ್ಮನಿಗೆ, ಹಿತಮಾಗೆ= ಒಳ್ಳೆಯದು ಮಾಡಲು, ಘಾತಿಸುವನು= ಸಂಹರಿಸುತ್ತಲಿರುವನು, ಎಂದು= ಎಂಬತೆರನಾಗಿ, ಹರಿ= ಕೃಷ್ಣನು, ನುಡಿದಡೆ= ಪೇಳಲು, ಮಹೀಪತಿಗೆ = ರಾಜನಿಗೆ, ಈ ಭೂತಳದೊಳು= ಈ ಪ್ರಪಂಚದಲ್ಲಿ, ತಾನು= ಆ ಯಮನು, ಅಳಿಯನು= ಅಳಿಯನಾಗಿ, ಏತಕೆ= ಯಾವ ಕ್ರಣದಿಂದ, ಆದನು= ಆಗಿಬಿಟ್ಟನು, ಇದನು= ಈ ವಾರ್ತೆಯನ್ನು, ಅರುಹಬೇಕು= ತಿಳಿಸಬೇಕು, ಎಂದು= ಎಂಬುದಾಗಿ, ಧನಂಜಯಂ= ಪಾರ್ಥನು, ಬೇಡಿಕೊಳಲು= ಕೇಳಿಕೊಂಡಿದ್ದಕ್ಕಾಗಿ, ಅಸುರಹರನು= ರಾಕ್ಷಸಾಂತಕನಾದ ಕೃಷ್ಣನು, ಇಂತು= ಮುಂದೆ ಹೇಳುವಂತೆ, ಎಂದನು= ನುಡಿದನು.
ತಾತ್ಪರ್ಯ:- ಆಗ ಕೃಷ್ಣನು ಪಾರ್ಥನನ್ನು ಕುರಿತು ಅಯ್ಯಾ ಧನಂಜಯ! ಈ ವೀರಾಗ್ರಣಿಯು ನಿನ್ನ ದೊಡ್ಡ ತಂದೆಯಾದ ಯಮಧರ್ಮರಾಯನು. ಈ ಕಲನಿಗೆ ವೀರವರ್ಮನು ಮಗಳನ್ನು ಮದುವೆಮಾಡಿರುವುದರಿಂದ ನಿನಗೆ ಎದುರಾಳಾದ ಈ ರಾಜನು ಯಮನಿಗೆ ಮಾವನಾಗಬೇಕು. ಬಭ್ರುವಾಹನನ ಸಾಹಸದಿಂದ ವೀರವರ್ಮನ ಸೈನ್ಯವು ನಾಶವಾಗುತ್ತಿರಲು ವೀರವರ್ಮನೇ ತನ್ನ ಅಳಿಯನಾದ ಯಮನೊಡಗೂಡಿ ನಿನ್ನನ್ನು ಎದುರಿಸಿರುವನು. ಈ ಅಂತಕನೇ ನಿನ್ನ ಸೈನ್ಯವನ್ನೆಲ್ಲಾ ನಾಶಮಾಡುತ್ತಲಿರುವನೆಂದು ನುಡಿದನು. ಇದನ್ನು ಅರ್ಜುನನು ಕೇಳಿ ಮತ್ತೆ ಕೃಷ್ಣನನ್ನು ಕುರಿತು ಎಲೈ ಕೃಷ್ಣಮೂರ್ತಿ! ಭೂಲೋಕವಾಸಿಯಾದ ವೀರವರ್ಮನಿಗೆ ಯಮನು ಅಳಿಯನಾದದ್ದು ಹೇಗೆ ಇದನ್ನು ನನಗೆ ಸವಿಸ್ತಾರವಾಗಿ ಹೇಳ-
ಬೇಕೆಂದು ಕೇಳಿಕೊಂಡನು.
ಆಲಿಸಾದೊಡೆ ಪಾರ್ಥ ವೀರವರ್ಮಕ ಮಹೀ।
ಪಾಲಕನ ತನುಜೆ ಮಾಲಿನಿಯೆಂಬ ನಾಮದಿಂ।
ದಾಲಯದೊಳಿರುತಿರ್ದೊಡಾದುದಾ ಕನ್ನಿಕೆಗೆ ಯೌವನಪ್ರಾಪ್ತಿ ಬಳಿಕ॥
ಬಾಲಕಿಗೆ ಪತಿಯಾಗಬೇಕೆಂದು ನರನಾಥ।
ನಾಲೋಚಿಸಿದೊಡಾಕೆ ಪಿತನೊಡನೆ ಮಾನವರ।
ಮೇಲೆನಗೆ ಮನವೆರಗದೆನಲವಂ ವರನಾರೆಂದೊಡಿಂತೆಂದಳು॥೧೨॥
ಪ್ರತಿಪದಾರ್ಥ :- ಪಾರ್ಥ= ಎಲೈ ಧನಂಜಯನೆ, ಆದೊಡೆ= ಆದರೆ, ಆಲಿಸು= ಕೇಳು, ಮಾಲಿನಿಯೆಂಬ ನಾಮದಿಂದ= ಮಾಲಿನಿಯೆಂಬ ಹೆಸರಿನಿಂದ ಕೂಡಿದ, ವೀರವರ್ಮಕ ಮಹೀಪಾಲನ= ವೀರವರ್ಮಕನೆಂಬ ಅರಸನ, ತನುಜೆ= ಕುವರಿ-
ಯು, ಆಲಯದೊಳು= ಮಂದಿರದಲ್ಲಿ, ಇರುತಿರ್ದೊಡೆ= ಇರತಕ್ಕ ಕಾಲದಲ್ಲಿ, ಆ ಕನ್ಯೆಗೆ= ಆ ಹುಡುಗಿಗೆ, ಯೌವನಪ್ರಾಪ್ತಿ-
ಯಾದುದು= ಪ್ರಾಯವು ತಲೆದೋರಿತು, ಬಳಿಕ =ತರುವಾಯ, ಬಾಲಕಿಗೆ= ಕುವರಿಗೆ, ಪತಿಯು=ಕಾಂತನು, ಆಗಬೇಕು= ಆಗುವಂತೆ ಮಾಡಬೇಕು, ಎಂದು=ಎಂಬತೆರನಾಗಿ, ಆಲೋಚಿಸಿದೊಡೆ= ಯೋಚನೆಮಾಡಲು, ಪಿತನೊಡನೆ= ತಂದೆಯೊ-
ನೆ, ಎನಗೆ= ನನಗೆ, ಮಾನವರ ಮೇಲೆ= ಮನುಷ್ಯರನ್ನು ಮದುವೆಮಾಡಿಕೊಳ್ಳಲು, ಮನಂ= ಚಿತ್ತವು, ಎರಗದು= ಉಂಟಾ-
ಗುವುದಿಲ್ಲವೆಂದು, ಆಕೆ= ಆ ಮಾಲಿನಿಯು, ಎನಲು= ನುಡಿಯಲು, ಅವಂ= ಆಕೆಯ ತಂದೆಯು, ಮತ್ತೆ= ಪುನಃ, ವರನು=
ನಿನಗೆ ಅನುರೂಪನಾದವನು, ಆರು=ಯಾರು, ಎಂದೊಡೆ= ಎಂದು ಪ್ರಶ್ನೆಮಾಡಲು, ಇಂತು= ಈ ತೆರನಾಗಿ, ಎಂದಳು= ಉತ್ತರಕೊಟ್ಟಳು.
ತಾತ್ಪರ್ಯ:- ಕೇಳೈ ಫಲುಗುಣ, ನಿನಗೆ ಎದುರಾಳಾಗಿರುವ ವೀರವರ್ಮನಿಗೆ ಮಾಲಿನಿಯೆಂಬ ಕುವರಿ ಇರುವಳು, ಆಕೆಯು ಪ್ರಾಪ್ತವಯಸ್ಸಿಗೆ ಬಂದಾಗ ಕುವರಿಗೆ ಅನುರೂಪನಾದ ವರನನ್ನು ಹುಡುಕಬೇಕೆಂದು ಆಲೋಚಿಸುತ್ತಿರುವಾಗಮಾಲಿನಿಯು
ತಂದೆಯನ್ನು ಕುರಿತು ಎಲೈ ಜನಕನೆ ನನಗೆ ಮನುಷ್ಯರನ್ನು ಮದುವೆಯಾಗಬೇಕೆಂಬ ಇಚ್ಚೆ ಇಲ್ಲವೆಂದು ಹೇಳಿದಳು. ಮತ್ತೆ ಯಾರನ್ನು ವರಿಸಬೇಕೆಂದಿರುವೆ ಎನ್ನಲು ಈ ರೀತಿ ಹೇಳಿದಳು.
ಬೊಪ್ಪ ಕೇಳ್ ಮನುಜರ್ಗೆ ಮರಣ ಮೆಂದಿರ್ದೊಡಂ।
ತಪ್ಪದದರಿಂದೆ ಮಾನವರ ಪಾಣಿಗ್ರಹಣ।
ಕೊಪ್ಪೆನಾಂ ಪತಿಯೊಳುರಿವುಗವೇಳ್ಪುದಲ್ಲದೊಡೆ ವಿಧವೆಯಾಗಿರವೇಳ್ಪುದು॥
ಅಪ್ಪೊಡೆ ನಿಜಕಾಂತನಿಲ್ಲದೊಡೆ ಮನ್ಮಥಂ।
ನಿಪ್ಪಸರದಿಂದಿಸುವ ಕುಸುಮಾಸ್ತ್ರ ಕನ್ಯರಂ।
ಬಪ್ಪ ನರಕವನರಿಯದೊಡಗೂಡುವೇಳ್ಪುದಿದಕಂಜುವೆಂ ತಾನೆಂದಳು॥೧೩॥
ಪ್ರತಿಪದಾರ್ಥ :- ಬೊಪ್ಪ= ಎಲೈ ಪಿತನೆ, ಕೇಳು=ಲಾಲಿಸು, ಮನುಜರ್ಗೆ= ಭೂಲೋಕವಾಸಿಗಳಿಗೆ, ಮರಣಂ= ಸಾವು, ಎಂದಿರ್ದೊಡಂ= ಎಂದಿಗೇ ಆದರೂ, ತಪ್ಪದು= ತಪ್ಪತಕ್ಕದ್ದಲ್ಲವು, ಅದರಿಂದ= ಆ ಕಾರಣದಿಂದ, ನಾಂ= ನಾನು, ಮಾನವರ= ಮನುಷ್ಯ ಸಾಮಾನ್ಯದವರ, ಪಾಣಿಗ್ರಹಣಕೆ= ವಿವಾಹಕ್ಕೆ, ಒಪ್ಪಿ = ಸಮ್ಮತಿಸಿ, ಉರಿ= ಅಗ್ನಿಯನ್ನು, ಪತಿಯೊಳು= ಗಂಡನೊಂದಿಗೆ, ಪೊಗವೇಳ್ವುದು= ಹೋಗಬೇಕಾಗುವುದು,ಅಲ್ಲದೊಡೆ= ಹಾಗೆ ಆಗದೆಹೋದರೆ,
ವಿಧವೆಯಾಗಿ= ವೈಧವ್ಯವನ್ನು ಹೊಂದಿ, ಇರವೇಳ್ವುದು= ಇರಬೇಕು, ಅಪ್ಪುವೊಡೆ= ತಬ್ಬಿಕೊಳ್ಳಲು, ನಿಜ= ತನ್ನ, ಕಾಂತನು= ರಮಣನು, ಇಲ್ಲದೊಡೆ= ಇಲ್ಲದೆ ಹೋದರೆ,(ಮದುವೆ ಇಲ್ಲದಿದ್ದರೆ)ನಿಪ್ಪಸರದಿಂದ= ಕೂರಲಗಿನಿಂದ, ಎಸೆವ= ಹೊಳೆಯುವ, ಕುಸುಮಾಸ್ತ್ರಕೆ= ಹೂಬಾಣಕ್ಕೆ, ಮನ್ಮಥನು= ಮದನನು, ಬಪ್ಪ= ಬರತಕ್ಕ, ನರಕವನು= ನರಕಬಾಧೆಯನ್ನ, ಅರಿಯದೆ= ಗೋಚರವಿಲ್ಲದೆ,ಅನ್ಯರಂ= ಬೇರೆ ಯಾರನ್ನಾದರೂ, ಒಡಗೂಡವೇಳ್ವುದು= ಸೇರಿ ರಮಿಸಬೇಕಾಗುತ್ತದೆ, ತಾನು= ನಾನಾದರೊ,ಇದಕೆ= ಈ ತೊಂದರೆಗೆ, ಅಂಜುವೆಂ= ಹೆದರುತ್ತೇನೆ, ಎಂದಳು= ಎಂಬುದಾಗಿ ಮಾಲಿನಿಯು ತನ್ನ ಪಿತನೊಂದಿಗೆ ನುಡಿದಳು.
ತಾತ್ಪರ್ಯ:- ಭೂಲೋಕವಾಸಿಗಳನ್ನು ವರಿಸದಿರುವ ತನ್ನ ಸುತೆಯನ್ನು ಕುರಿತು, ಅಮ್ಮ! ಮಾಲಿನೀ! ನೀನು ಮತ್ತೆ ಯಾರನ್ನು ಮದುವೆ ಮಾಡಿಕೊಳ್ಳಲಿಚ್ಚಿಸುವಿ ಎಂದು ಪ್ರಶ್ನೆ ಮಾಡಿದನು. ಆಗ ಮಾಲಿನಿಯು ತಂದೆಯನ್ನು ಕುರಿತು, ತಾತನೆ,
ನನ್ನ ನುಡಿಗಳನ್ನಾಲಿಸು, ಭೂಲೋಕವಾಸಿಗಳಿಗೆ ಸಾವು ಸಿದ್ಧವೆಂಬುದು ಹೊಸದಾದ ನುಡಿಯಲ್ಲವಷ್ಟೆ ? ನಾನು ಮಾನವರನ್ನು ಮದುವೆಯಾದರೆ ಗಂಡನು ಸತ್ತಾಗ ಅವನೊಂದಿಗೆ ಸಹಗಮನವನ್ನು ಮಾಡಬೇಕು. ಇಲ್ಲವಾದರೆ ವಿಧವೆ-
ಯಾಗಬೇಕು. ಅಥವಾ ಮನ್ಮಥನ ಬಾಣದ ಏಟುಗಳನ್ನು ತಾಳಲಾರದೆ ದುರ್ಮಾರ್ಗಪ್ರವರ್ತಳಾಗಿ ಯಮದಂಡನೆಗೆ ಗುರಿ-
ಯಾಗಬೇಕು.
ನಿಜನಾಥನಿರ್ದಲ್ಲಿ ಮರಣಮಾದೊಡೆ ಪುಣ್ಯ।
ಮಜನಾದರಿಪನವನ ಕೂಡೆ ತನ್ನಂಗಮಂ।
ತ್ಯಜಿಸಿದೊಡೆ ವಿಧವೆಯಾದೊಡೆ ಸತಿಗೆ ಪಾತಕಂ ಬಂದಲ್ಲದಿರದು ಬಳಿಕ ॥
ಪ್ರಜೆಗಳಂ ಪಡೆದು ಸದ್ಗತಿಗೈದವೇಳ್ಪುದಿದು।
ರುಜುವಲ್ಲ ಮನುಷ್ಯಮಾರ್ಗಮಿದಕಾರದಾಂ।
ಭಜಿಸುವೆಂ ಧರ್ಮರಾಜನನೆನ್ನಾತಂಗೆ ಕುಡು ಮದುವೆಯಹನೆಂದಳು॥೧೪॥
ಪ್ರತಿಪದಾರ್ಥ :- ಮರಣಂ=ಸಾವು, ನಿಜನಾಥನು= ಪತಿಯು, ಇರ್ದಲ್ಲಿ= ಇರುವಾಗ, ಆದೊಡೆ= ಒದಗಿದರೆ, ಪುಣ್ಯಂ= ಉತ್ತಮವೇ ಸರಿ, ಅಜನು=ಬ್ರಹ್ಮನು ಕೂಡ, ಆದರಿಪನು= ಮನ್ನಣೆ ಗೈವನು, ತನ್ನ= ತನ್ನದಾದ,ಅಂಗಮಂ= ದೇಹವನ್ನು, ಅವನಕೂಡೆ= ಪತಿಯೊಂದಿಗೇನೆ, ತ್ಯಜಿಸಿದೊಡೆ= ಬಿಟ್ಟು ಬಿಡದಿದ್ದರೆ, ವಿಧವೆಯು= ವೈಧವ್ಯವನ್ನವಲಂಬಿಸುವಳು,ಆದ-
ಡೆ= ಆದಪಕ್ಷದಲ್ಲಿ, ಸತಿಗೆ= ನಾರಿಗೆ, ಪಾತಕಂ= ದೋಷವು, ಬಂದಲ್ಲದೆ ಇರದು= ಬಾರದೆ ಇರಲಾರದು, ಬಳಿಕ = ಆಮೇಲೆ, ಮಾನುಷ್ಯಮಾರ್ಗಂ= ಮನುಷ್ಯರ ನಡವಳಿಕೆಯು, ಪ್ರಜೆಗಳಂ ಪಡೆದು= ಸಂತಾನವನ್ನು ಹೊಂದಿ, ಸದ್ಗತಿಗೆ= ಉತ್ತಮಗತಿ-
ಗೆ, ಐದವೇಳ್ವುದು= ಹೋಗಬೇಕಾಗುವುದು, ಇದು= ಈ ಕೃತ್ಯವು, ರುಜುವಲ್ಲ= ನ್ಯಾಯವಾದುದಲ್ಲ, ಇದಕೆ= ಈ ಕಾರ್ಯಕ್ಕೆ, ಆಂ=ನಾನು, ಆರನು=ಯಾರನ್ನು, ಭಜಿಸುವೆಂ = ವರಿಸಲಿ, ಧರ್ಮರಾಜನಂ= ಕಾಲನನ್ನು, ಭಜಿಸುವೆಂ= ಮದುವೆಮಾಡಿಕೊಳ್ಳಬೇಕೆಂದಿರುವೆನು, ಆತಂಗೆ= ಆ ಕಾಲನಿಗೆ, ಕೊಡ= ನನ್ನನ್ನು ದಾನಮಾಡು, ಮದುವೆಯಹೆನು= ಮದುವೆಯಾಗುತ್ತೇನೆ, ಎಂದಳು= ಎಂಬುದಾಗಿ ತಿಳಿಸಿದಳು.
ತಾತ್ಪರ್ಯ:- ಗಂಡನೆದುರಿಗೆ ನಾನೇ ಸತ್ತುಹೋದರೆ ಮಹಾ ಪುಣ್ಯ ಉಂಟಾಗುವುದು. ಹಾಗಿಲ್ಲದಿದ್ದರೆ ನಾಮ ಮಾತ್ರ ಬದುಕಿದ್ದು ಪತಿಯು ಪರಲೋಕವನ್ನೈದಿದರೆ ಮಹಾ ಅನರ್ಥಗಳುಂಟಾಗುತ್ತವೆ, ಆದ್ದರಿಂದ ನನಗೆ ಮಾನವರನ್ನು ಮದುವೆ ಮಾಡಿಕೊಳ್ಳುವ ಯೋಚನೆ ಇಲ್ಲವು. ಮರಣಭಯವೇ ಇಲ್ಲದಿರುವ ಯಮಧರ್ಮರಾಯನನ್ನೆ ಮದುವೆ ಮಾಡಿಕೊಳ್ಳಬೇ-
ಕೆಂದಿರುವೆ. ಆದ್ದರಿಂದ ಆ ಅಂತಕನಿಗೆ ನನ್ನನ್ನು ಕೊಟ್ಟು ಮದುವೆ. ಆದ್ದರಿಂದ ಆ ಅಂತಕನಿಗೆ ನನ್ನನ್ನು ಕೊಟ್ಟು ಮದುವೆ ಮಾಡು.
ಮೃತರಾದೊಡವನ ಪೊರೆಗೈದುವರ್ ಸುಕೃತ ದು।
ಷ್ಕೃತವನಾತನೆ ಬಲ್ಲನದರಿಂದೆ ತನಗೆ ರವಿ।
ಸುತನೆ ವರನಾದಪಂ ವ್ರತ ದಾನ ಜಪತಪದೊಳಾತನಂ ಮೆಚ್ಚಿಸುವೆನು॥
ಅತಿಶಯಮಿದೆನ್ನದಿರ್ ನಿನ್ನ ಪುಣ್ಯದ ಫಲಂ।
ಪ್ರತಿಕೂಲಮಾಗದೆನಗಿನ್ನು ವೈವಸ್ವತಂ।
ಪತಿಯಾಗದಿರನವನ ಕಾಯಮಂ ತಳೆದು ಜಸಪಡೆದಪೆಂ ತಾನೆಂದಳು॥೧೫॥
ಪ್ರತಿಪದಾರ್ಥ :- ಮೃತಿಯು= ಮರಣವು, ಆದೊಡೆ= ಆದರೌ, ಅವನ= ಆ ದಂಡಧರನ, ಪೊರೆಗೆ= ಸಮೀಪಕ್ಕೆ, ಐದುವ-
ವರು= ಹೋಗಿಸೇರುತ್ತಾರೆ, ಆತನೆ= ಆ ಕಾಲನೆ, ಸಕೃತ =ಪುಣ್ಯಕಾರ್ಯ, ದುಷ್ಕೃತವನು=ದುರಿತವೆಂಬುದನ್ನೂ, ಬಲ್ಲನು=ಅರಿತವನಾಗಿದ್ದಾನೆ, ಆದರಿಂದೆ= ಆ ಕಾರಣದಿಂದ, ರವಿಸುತನ= ಸೂರ್ಯಕುಮಾರನ,ಎನಗೆ= ನನಗೆ, ವರನು= ಇಷ್ಟವುಳ್ಳವನು, ಆದವಂ= ಆಗುವನು, ಆತನಂ= ಅವನನ್ನು, ವ್ರತ=ಉಪವಾಸ, ದಾನ=ದಾನದಿಂದ, ಜಪ= ಆತನ ಕುರಿತು ಜಪಮಾಡುವುದು, ತಪದೊಳು= ತಪಸ್ಸಿನಿಂದಲೂ,ಮೆಚ್ಚಿಸುವೆನು= ಅವನ ಪ್ರೀತಿಗೆ ಪಾತ್ರಳಾಗುತ್ತೇನೆ, ಇದು= ಈ ಕಾರ್ಯ, ಅತಿಶಯಂ= ಅಸಾಧ್ಯವು, ಎನ್ನದು= ಎಂದು ಭಾವಿಸದೆ, ಇರು= ಇರತಕ್ಕವನಾಗು,ನಿನ್ನ =ನೀನು ಮಾಡಿರುವ, ಪುಣ್ಯದ= ಸತ್ಕಾರ್ಯದ,ಫಲಂ= ಪ್ರಯೋಜನವು, ಪ್ರತಿಕೂಲಂ= ಬೇರೆ ತೆರನಾದದ್ದು, ಆಗದು= ಆಗುವುದಿಲ್ಲ, ಇನ್ನು=ಮುಂದೆ, ವೈವಸ್ವತಂ= ಭಾನುಸುತನೆ, ಎನಗೆ=ನನಗೆ, ಪತಿಯು= ಕಾಂತನು, ಆಗದೆ ಇರನು= ಆಗುತ್ತಾನೆ, ತಾನು= ನಾನು, ಅವನ= ಆ ಯಮಧರ್ಮರಾಯನ, ಕಾಯಮಂ= ದೇಹವನ್ನು, ತಳೆದು= ಮುಟ್ಟಿ,(ಆಲಿಂಗಿಸಿಕೊಂಡು) ಜಸವಡೆದಪೆಂ= ಕೀರ್ತಿಗೆ ಪಾತ್ರಳಾಗುತ್ತೇನೆ.
ಅ॥ವಿ॥ ಜಸ=ಕೀರ್ತಿಯನ್ನು , ಪಡೆದಪೆಂ= ಹೊಂದುತ್ತೇನೆ ( ಕ್ರಿ. ಸ.) ಜಸ(ತ್ಭ) ಯಶಸ್ (ತ್ಸ)
ತಾತ್ಪರ್ಯ:- ಸತ್ತವರೆಲ್ಲರೂ ಅವನ ಬಳಿಗೆ ಹೋಗಿ ಸೇರುವರು. ಸುಕೃತ ದುಷ್ಕೃತಗಳನ್ನು ಪರಿಶೀಲಿಸತಕ್ಕ, ಆತನನ್ನು ಯಮೋಪಾಸನೆಯೇ ಮೊದಲಾದವುಗಳಿಂದ ಲೂ, ದಾನ ಧರ್ಮ ಮೊದಲಾದವುಗಳಿಂದಲೂ ಮೆಚ್ಚಿಸುವೆನು. ಇದು ಅಸಾಧ್ಯವೆಂದು ಆಲೋಚಿಸದೆ ನನ್ನನ್ನು ಆ ಸೂರ್ಯನ ಮಗನಿಗೇ ಮದುವೆ ಮಾಡೆಂದು ಹೇಳಿದಳು.
ಇಂತೆಂದು ಮಾಲಿನಿ ಮಹೀಪತಿಗೆ ವಿನಯದಿಂ।
ದಂತಸ್ಥಮಾಗಿಹ ಮನೋರಥವನೊರೆದಿನ್ನು।
ಸಂತತಂ ಬಿಡದೆ ನಾನಾವಿಧದ ಪುಣ್ಯ ಕರ್ಮಂಗಳಂ ನೀನೇ ರಚಿಸಿ॥
ಎಂತಾದೊಡಂ ಧರ್ಮರಾಜಂಗೆ ಮದುವೆಯ।
ಪ್ಪಂತೆ ಮಾಡೆಂದು ಕಾಲ್ಗೆರಗಿದೊಡೆ ತನುಜೆಯಂ।
ಸಂತೈಸಿ ತೊಡಗಿದಂ ಯಮಸೂಕ್ತದಿಂದ ವೈವಸ್ವತ ಪ್ರಾರ್ಥನೆಯನು॥೧೬॥
ಪ್ರತಿಪದಾರ್ಥ :- ಇಂತೆಂದು= ಈ ತೆರನಾಗಿ, ಮಹೀಪತಿಗೆ = ತಂದೆ ವೀರವರ್ಮನಿಗೆ ಅಂತಸ್ಥಂ= ಅಂತರಂಗವಾದದ್ದು, ಆಗಿಹ= ಆಗಿರತಕ್ಕ, ಮನೋರಥವನು= ಕೋರಿಕೆಯನ್ನು, ಮಾಲಿನಿ= ರಾಜಕುವರಿಯು, ಒರೆದು= ತಿಳಿಸಿ, ಇನ್ನು= ಇನ್ನು ಮಂದೆ, ನೀನೆ= ನೀನಾಗಿಯೆ, ಸಂತತಂ= ಅನವರತವೂ, ಬಿಡದೆ=ತಪ್ಪದೆ, ನಾನಾವಿಧದ= ಅನೇಕ ಪ್ರಕಾರವಾದ, ಪುಣ್ಯ-
ಕರ್ಮಂಗಳಂ = ಪುಣ್ಯಕಾರ್ಯಗಳನ್ನು, ರಚಿಸಿ= ಎಸಗಿ, ನಾನು=ನಾನಾದರೊ, ಧರ್ಮಜಂಗೆ= ಭಾನುಸುತನಿಗೆ, ಎಂತಾ-
ದೊಡಂ= ಯಾವಬಗೆಯಿಂದಲಾದರೂ, ಮದುವೆಯಪ್ಪಂತೆ= ಮದುವೆ ಆಗುವ ತೆರನಾಗಿ,ಮಾಡು=ಎಸಗು, ಎಂದು= ಎಂಬುದಾಗಿ ನುಡಿದು, ಕಾಲ್ಗೆರಗಿದೊಡೆ= ತನ್ನ ಪಾದಗಳ ಮೇಲೆ ಬಿದ್ದದ್ದರಿಂದ, ತನಯಳಂ= ಮಗಳನ್ನು, ಸಂತೈಸಿ= ಸಮಾ-
ಧಾನಪಡಿಸಿ, ವೈವಸ್ವತ ಪ್ರಾರ್ಥನೆಯನು= ಯಮನ ಪ್ರಾರ್ಥನೆಯನ್ನು, ಯಮಸೂಕ್ತದಿಂದ= ಯಮಧರ್ಮರಾಜನ ಮಂತ್ರದಿಂದಲೆ, ತೊಡಗಿದಂ= ಪ್ರಾರಂಭಿಸಿದನು.
ತಾತ್ಪರ್ಯ:- ತನ್ನ ಮನೋಭಿಪ್ರಾಯವನ್ನು ತಂದೆಗೆ ತಿಳಿಸಿ ಸಾಷ್ಟಾಂಗ ನಮಸ್ಕಾರ ಮಾಡಲು, ವೀರವರ್ಮನು ತನ್ನ ಮಗಳನ್ನು ಒಳ್ಳೆಯ ಮಾತುಗಳಿಂದ ಮನ್ನಿಸಿ, ಅಂದು ಮೊದಲು ಯಮಸೂಕ್ತವನ್ನು ಪಠಿಸುತ್ತಲಿದ್ದನು.
ಅಂದು ಮೊದಲಾಗಿ ಮಾಲಿನಿ ದಿವಾರಾತ್ರಿಯೊ।
ಳ್ಕುಂದದೆ ಕೃತಾಂತನಂ ನಾನಾ ವಿಧಾನಂಗ।
ಳಿಂದೆ ಪೂಜಿಸುತಿರ್ದಳನ್ನೆಗಂ ದಿನದಿನಕೆ ಯೌವನಂ ಪ್ರಬಲಮಾಗೆ॥
ಇಂದುವದನೆಯ ನೆನಹಿಗೊಳಗಾಗಿ ತರಣಿಜಂ।
ಬಂದು ಮೈದೋರದಿರೆ ಧರ್ಮದ ಸಹಾಯಕ್ಕೆ ।
ಮುಂದುವರಿದಮರಮುನಿ ನಾರದಂ ತಿಳಿದನೀ ವೃತ್ತಾಂತಮಂ ಮನದೊಳು॥೧೭॥
ಪ್ರತಿಪದಾರ್ಥ :- ಮಾಲಿನಿ= ಮಾಲಿನಿಯು, ಅಂದುಮೊದಲಾಗಿ= ಆ ದಿನದಿಂದಲೂ, ಕುಂದದೆ= ಸ್ವಲ್ಪವೂ ಕುಗ್ಗದೆ,
ನಾನಾವಿಧಾನಂಗಳಿಂದ= ಅನೇಕವಿಧವಾದ ಶಾಸ್ತ್ರನಿಯಮಗಳಿಂದ, ದಿವಾರಾತ್ರೆಯೊಳು= ಹಗಲುರಾತ್ರಿ, ಕೃತಾಂತನಂ= ಅಂತಕನನ್ನು, ಪೂಜಿಸುತಿರ್ದಳು= ಪೂಜೆಮಾಡುತ್ತಿದ್ದಳು, ಅನ್ನೆಗಂ= ಆ ಕಾಲಕ್ಕೆ, ದಿನದಿನಕೆ= ದಿನೇದಿನೆ, ಯೌವನಂ= ಹರಯವು, ಪ್ರಬಲಮಾಗೆ= ಅಧಿಕವಾಗುತ್ತಿದ್ದ ಕಾಲದಲ್ಲಿ, ತರಣಿಜಂ= ಭಾನುಸುತನಾದ ಯಮನು, ಇಂದುವದನೆಯ= ಚಂದ್ರಮುಖಿಯಾದ ಮಾಲಿನಿಯ, ನೆನಹಿಗೆ= ಅಭಿಲಾಷೆಗೆ, ಒಳಗಾಗಿ= ವಶನಾಗಿ, ಬಂದು= ಬಿಜಯಮಾಡಿ, ಮೈದೋರದಿರೆ= ಪ್ರತ್ಯಕ್ಷನಾಗದಿದ್ದರಿಂದ, ಈ ವೃತ್ತಾಂತಮಂ = ಈ ವೃತ್ತಾಂತವನ್ನು, ಧರ್ಮದ ಸಹಾಯಕ್ಕೆ =ಧರ್ಮಕಾರ್ಯ
ಕೈಗೂಡುವುದಕ್ಕೆ ಅಡಚಣೆ ಯಾಗಿರುವಾಗ, ಮುಂದುವರಿವ= ಈ ಕಾರ್ಯದಲ್ಲಿ ಆಸಕ್ತನಾದ, ಅಮರಮುನಿ= ಸುರಮು-
ನಿಯಾದ, ನಾರದಂ= ನಾರದನು, ಮನದೊಳು= ತನ್ನ ಮನಸ್ಸಿನಲ್ಲಿ, ತಿಳಿದನು= ಯೋಚಿಸಿಕೊಂಡನು.
ತಾತ್ಪರ್ಯ:- ಮಾಲಿನಿಯೂ ಕೂಡ ದಿನರಾತ್ರಿ ಯಮನನ್ನು ಧ್ಯಾನಿಸುತ್ತಲೂ, ಯಮನ ಪ್ರೀತಿಗಾಗಿ ಅನೇಕ ದಾನಧರ್ಮಗಳನ್ನು ಮಾಡುತ್ತಲೂ ಇರುವಾಗ ಮಾಲಿನಿಯ ಯೌವನವು ದಿನೇದಿನೇ ಹೆಚ್ಚಿ ಮದನ ಬಾಧೆಯಿಂದಲೂ, ಯಮನು ಪ್ರಸನ್ನನಾಗದಿರುವ ಮನೋವ್ಯಥೆಯಿಂದಲೂ, ಸಂಕಟಪಡುತ್ತಿರುವುದನ್ನು ದೇವಮುನಿಯಾದ ನಾರದನು
ದಿವ್ಯಜ್ಞಾನದಿಂದ ಅರಿತನು.
ರದ ಮುನೀಶ್ವರಂ ಕಾಲನಲ್ಲಿಗೆ ಬಂದು।
ವೇರವರ್ಮಕ ನೃಪನ ತನುಜೆಶಮಾಲಿನಿಯಂ ವಿ।
ಚಾರಿಸದೆಸುಮ್ಮನಿರ್ದಪರೆ ನೀಂ ಧರೆಯ ಮಾನವರನೊಲ್ಲದೆ ನಿನ್ನನು॥
ಹಾರೈಸಿ ಪತಿಯಾಗಬೇಕೆಂದು ಭಜಿಸುವಳ್।
ಚಾರಿತ್ತ ಗುಣ ಶೀಲ ಸತ್ಯ ಧರ್ಮಂಗಳಿಂ ।
ಸಾರಸೂವತಾಖ್ಯ ಪುರಮಂ ಪಾವನಂಗೈವಳಾಕೆಯಂ ವರಿಸೆಂದನು॥೧೮॥
ಪ್ರತಿಪದಾರ್ಥ :- ನಾರದಮುನೀಶ್ವರಂ= ನಾರದ ಮುನಿಯು, ಕಾಲನಲ್ಲಿ= ಯಮನಲ್ಲೆ, ಬಂದು= ಐತಂದು, (ಯಮನನ್ನು ಕುರಿತು) ನೀಂ= ನೀನು, ವೀರವರ್ಮ ಕೃಪತನುಜೆ= ವೀರವರ್ಮರಾಜನ ಕುವರಿಯಾದ, ಮಾಲಿನಿಯಂ= ಮಾಲಿನಿಯನ್ನು, ವಿಚಾರಿಸದೆ= ಅವಳ ಇಷ್ಟಾರ್ಥಸಿದ್ಧಿಮಾಡದೆ, ಸುಮ್ಮನೆ ಇರ್ದಪರೆ= ಮನಸ್ಸಿಗೆ ತಂದುಕೊಳ್ಳದೆ ಇರಬಹುದೆ, ನಿನ್ನನ್ನು =ನೆನ್ನನ್ನೇ, ಪತಿಯು= ಗಂಡನು, ಆಗಬೇಕೆಂದು= ಮಾಡಿಕೊಳ್ಳಬೇಕೆಂದು, ಹಾರೈಸಿ= ಆಸೆಯುಳ್ಳವಳಾಗಿ, ಧರೆಯಮಾನ-
ವರನು= ಭೂಲೋಕ ನಿವಾಸಿಗಳಾದ ಮನುಜರನ್ನು, ಒಲ್ಲದೆ=ಇಷ್ಟಪಡದೆ, ಚಾರಿತ್ರ= ಸಚ್ಚರಿತ್ರೆಯಿಂದಲೂ, ಗುಣ=ಒಳ್ಳೆ-
ಯಗುಣಗಳು, ಶೀಲ=ಸನ್ಮಾರ್ಗವು, ಸತ್ಯ= ನಿಶ್ಚಯ ಬುದ್ಧೆಯು, ಧರ್ಮಂಗಳಿಂ= ಧರ್ಮಮಾರ್ಗವು ಇವುಗಳಿಂದಲೂ,
ಭಜಿಸುವಳು=ಆರಾಧಿಸುತ್ತಲಿದ್ದಾಳೆ, ಸಾರಸ್ವತಾಖ್ಯಪುರಮಂ= ಸಾರಸ್ವತವೆಂಬ ಪಟ್ಟಣವನ್ನು, ಪಾವನಂಗೈವಳು= ಪವಿ-
ತ್ರವಾಗುವಂತೆ ಮಾಡುವಳು, ಆಕೆಯಂ= ಅಂತಹ ಸದ್ಗುಣ ಸಂಪನ್ನಳಾದ ವೀರವರ್ಮನ ಮಗಳನ್ನು, ವರಿಸು= ಅಂಗೀಕರಿಸುವನಾಗು, ಎಂದನು= ಎಂಬುದಾಗಿ ನಾರದನು ಯಮನಿಗೆ ತಿಳಿಸಿದನು.
ಅ॥ವಿ॥ ಮುನಿ+ಈಶ್ವರ= ಮುನೀಶ್ವರ ( ಸ. ದೀ. ಸಂ. ಮತ್ತು ಷ. ತ. ಸ. )
ತಾತ್ಪರ್ಯ:- ಸಂಭ್ರಮದಿಂದ ಕೂಡಿ ಯಮಲೋಕಕ್ಕೆ ಬಂದು, ಅಂತಕನ ದರ್ಶನವನ್ನು ಮಾಡಿಕೊಂಡು, ಕಾಲನನ್ನು ಕುರಿತು
ಎಲೈ ದಂಡಧರನೆ ಕೇಳು, ಭೂಲೋಕದಲ್ಲಿ ಸಾರಸ್ವತನಗರದ ರಾಜನ ಕುವರಿಯಾದ ಮಾಲಿನಿ ಎಂಬ ಕನ್ಯಾಮಣಿಯು ಮಾನವರನ್ನು ಮದುವೆಮಾಡಿಕೊಳ್ಳಲು ಇಷ್ಟವಿಲ್ಲದೆ ನಿನ್ನನ್ನೆ ವರಿಸಬೇಕೆಂದು ಹಾರೈಸುತ್ತ,ವಿಧವಿಧವಾದ ಪೂಜೆಗಳನ್ನು ಮಾಡುತ್ತಲಿದ್ದರೂ ಕೂಡ ನೀನು ಪ್ರಸನ್ನನಾಗದಿರುವೆ,ಆ ಮಾಲಿನಿಯು ಗುಣದಲ್ಲಿಯೂ, ಶೀಲದಲ್ಲಿಯೂ, ರೂಪದಲ್ಲೆಯೂ, ಸಕಲರನ್ನೂ ಮೀರಿಸೆರುವಳು. ಸನ್ಮಾರ್ಗದಿಂದಲೂ, ದಾನಧರ್ಮಾದಿಗಳಿಂದಲೂ, ಸಾರಸ್ವತನಗರವನ್ನು ಪಾವನವಾಗುವಂತೆ ಮಾಡುತ್ತಲಿರುವಳು.
ನಿಜವಾಗಿ ಮನದೊಳನ್ಯವನುಳಿದು ತನ್ನನೇ।
ಭಜಿಪ ಶರಣಾಗತರನಾದರಿಸದಿರ್ದಪರೆ।
ಸುಜನರೆಲೆ ತರಣಿಸುತ ನಾಲ್ಕು ಚರಣವನೂರಿ ನಡೆವ ಧರ್ಮದೊಳಡರ್ದು॥
ಪ್ರಜೆಗಳಿಂದೆಸೆವ ಸಾರಸ್ವತ ಪುರಕ್ಕಾ ಮ।
ನುಜ ವೇಷಮಂ ತಾಳ್ದು ನೀಂ ಪೋಗಿ ವರಿಸು ಭೂ।
ಭುಜ ಕುವರಿಯನೆಂದೊಡೊಪ್ಪಿ ವೈವಸ್ವತಂ ಕಳುಹಿದಂ ಸುರಮುನಿಯನು॥೧೯॥
ಪ್ರತಿಪದಾರ್ಥ :- ಎಲೆ ತರಣಿಸುತ= ಎಲೈ ಭಾನು ಕುವರನೆ, ಮನದೊಳು= ಮನಸ್ಸಿನೊಳಗೆ, ಅನ್ಯರನು= ಇತರರನ್ನು, ಉಳಿದು= ತ್ಯಜಿಸಿ, ತನ್ನನೆ= ತನ್ನೊಬ್ಬನನ್ನೆ,ಭಜಿಪ= ಆರಾಧಿಸತಕ್ಕ, ಶರಣಾಗತರನು= ಮರೆಬಿದ್ದವರನ್ನು, ಸುಜನರು=ಒಳ್ಳೆ-
ಯವರು, ಆದರಿಸದೆ= ಮನ್ನಣೆಕೊಡದೆ, ಇರ್ದಪರೆ= ಇರುವುದುಂಟೆ, ನೀಂ=ನೀನಾದರೊ, ಮಾನುಷ್ಯವೇಶಮಂ ತಾಳ್ದು= ಮನುಷ್ಯ ರೂಪವನ್ನು ತಾಳಿ, ನಾಲ್ಕು ಚರಣವನು= ಕಾಲುಗಳ ನಾಲ್ಕನ್ನು, ಊರಿ= ಇಟ್ಟು, ನಡೆವ= ತಿರುಗುವ, ಧರ್ಮ- ಮದೊಳು= ಧರ್ಮದ ಮೂಲಕ, ಅಡರ್ದು= ಸೇರಿಕೊಂಡು, ಪ್ರಜೆಗಳಿಂದ= ಜನಗಳಿಂದ, ಎಸೆವ= ಹೊಳೆಯುತ್ತಲಿರುವ, ಸಾರಸ್ವತಪುರಕ್ಕೆ= ಸಾರಸ್ವತ ನಗರಕ್ಕೆ, ಪೋಗಿ= ಹೋಗಿ, ಭೂಭುಜನ= ರಾಜನಾದ ವೀರವರ್ಮನ, ಕುವರಿಯನು= ಪುತ್ತಿಯನು, ವರಿಸು= ಮದುವೆಮಾಡಿಕೊ, ಎಂದೊಡೆ= ಎನಲು, ವೈವಸ್ವತಂ= ಯಮನು, ಒಪ್ಪಿ= ಅನುಮೋದಿಸಿ, ಸುರಮುನಿಯನು= ನಾರದನನ್ನು, ಕಳುಹಿದಂ= ಹಿಂದಕ್ಕೆ ಕಳುಹಿಸಿದನು.
ತಾತ್ಪರ್ಯ:- ಲೈ ಭಾನುಸೂನುವೇ, ಯಾರಲ್ಲಿಯೂ ಮನಸ್ಸಿಡದೆ ಅನವರತವೂ ನಿನ್ನನ್ನೆ ಭಜಿಸುತ್ತ ನಿನ್ನ ಶರಣಾಗತರಾದವರನ್ನು ಆದರಿಸದೆ ಈ ಪರಿ ಉಪೇಕ್ಷೆಮಾಡುವುದು ಯುಕ್ತವಲ್ಲ, ಧರ್ಮಕ್ಕೆ ನೆಲೆಯಾಗಿರುವ ಸಾರಸ್ವತ ನಗರಕ್ಕೆ ಮನುಷ್ಯ ವೇಷದಿಂದ ನೀನುಶಹೋಗಿ ಅಲ್ಲಿಗೆ ರಾಜನಾಗಿರುವ ವೀರವರ್ಮನ ತನುಜೆಯಾದ ಮಾಲಿನಿಯನ್ನು ಮದುವೆಮಾಡಿಕೊಳ್ಳೆಂದು ಬೋಧಿಸುತ್ತಲಿರುವ ನಾರದ ಮುನಿಯ ನುಡಿಗಳಿಗೆ ಸಮ್ಮತಿಸಿ, ಮುನಿಪುಂಗವನನ್ನು ಮರ್ಯಾದೆಯಿಂದ ಕಳುಹಿಸಿಕೊಟ್ಟನು.
ಅಸ್ವಭಾವಕಮಲ್ಲ ನೈಜಮಿದು ತನಗೆನೆ ತ।
ಪಸ್ವಿಗಳ ಮೌನಿಮಣಿ ನಾರದಂ ಪೋಗಿ ವೈ।
ವಸ್ವತಂಗರುಹಿ ಮಾಲಿನಿಯ ಭಾವವನಲ್ಲಿ ಬೀಳ್ಕೊಂಡು ಖೇಚರದೊಳು॥
ಸುಸ್ವರದ ವೀಣೆವಿಡಿದಾನಂದದಿಂದೆ ಸಾ।
ರಸ್ವತ ಪುರಕೆ ಬಂದು ಕಾಲನಾಡಿದುದಂ ಯ।
ಶಸ್ವಿಯಾಗಿಹ ವೀರವರ್ಮನಂ ಕಂಡು ಸತ್ಕೃತನಾಗಿ ವಿವರಿಸಿದನು॥೨॥
ಪ್ರತಿಪದಾರ್ಥ :- ಇದು= ಈ ತೆರನಾದ ಕೆಲಸವು, ತನಗೆ= ನಾರದನಿಗೆ, ಅಸ್ವಭಾವಿಕವಲ್ಲ= ಹೊಸ ಕಾರ್ಯವಲ್ಲ, ನೈಜಂ= ನಿಜವಾದದ್ದು, ಎನೆ= ಎಂಬತೆರನಾಗಿ, ತಪಸ್ವಿಗಳ= ಋಷಿವರ್ಯರ, ಮೌಳಿ= ತಲೆಗಳಿಗೆ, ಮಣಿ= ರತ್ನದ ಹಾಗೆ ಇರತಕ್ಕ, ನಾರದಂ= ನಾರದ ಮುನೀಂದ್ರನು, ವೈವಸ್ವತಂಗೆ= ಯಮನಿಗೆ, ಮಾಲಿನಿಯ= ಮಾಲಿನಿಯನ್ನು, ಭಾವವನು= ಅಭಿಲಾಷೆಯನ್ನು, ಅರುಪಿ= ಹೇಳಿ, ಅಲ್ಲಿ= ಯಮನ ಹತ್ತಿರ, ಬೀಳ್ಕೊಂಡು = ಆಜ್ಞೆಯನ್ನು ಪಡೆದು ಹಿಂದಿರುಗಿ,ಪೋಗಿ= ಮುಂದೆಶಹೋಗಿ, ಖೇಚರದೊಳು= ಅಂತರಿಕ್ಷದಲ್ಲಿ, ಸುಸ್ವರದ= ಇಂಪಾದ ಧ್ವನಿ ಮಾಡುವ, ವೀಣೆ=ಮಹತೀ ಎಂಬ ವೀಣೆಯನ್ನು, ಪಿಡಿದು= ಹಿಡಿದವನಾಗಿ, ಸಾರಸ್ವತ ಪುರಕೆ= ಸಾರಸ್ವತ ನಗರಕ್ಕೆ, ಆನಂದದಿಂದ = ಸಂತಸದಿಂದ, ಬಂದು= ಸೇರಿ, ಯಶಸ್ವಿಯಾಗಿಹ= ಕೀರ್ತಿವಂತನಾಗಿರುವ, ವೀರವರ್ಮನಂ= ವೀರವರ್ಮನನ್ನು, ಕಂಡು= ದರ್ಶನತೆಗೆದುಕೊಂಡು,
ಸತ್ಕೃತನಾಗಿ = ಸತ್ಕಾರ ಸ್ವೀಕರಿಸಿ, ಕಾಲನು= ಯಮನು, ಆಡಿದುದಂ= ಹೇಳಿದ ಸಮಾಚಾರವನ್ನು, ವಿವರಿಸಿದನು= ತಿಳಿಯಪಡಿಸಿದನು.
ತಾತ್ಪರ್ಯ:- ಯಮಧರ್ಮರಾಜನಿಂದ ಸತ್ಕಾರ್ಯವನ್ನೈದಿ ಹಿಂದಿರುಗಿ ಬಂದ ನಾರದ ಮುನೀಶ್ವರ, ಮನಸ್ಸಿನಲ್ಲಿ ಅತಿಶಯವಾದ ಆನಂದವನ್ನು ತಾಳಿ, ವೀಣೆಯನ್ನು ನುಡಿಸುತ್ತ ಸಾರಸ್ವತ ನಗರಕ್ಕೆ ಬಂದು ಸೇರಿ, ವೀರವರ್ಮನನ್ನು ಕಂಡು,
ಅವನುಶಮಾಡಿದ ಸತ್ಕಾರವನ್ನು ಸ್ವೀಕರಿಸಿ ವೀರವರ್ಮನನ್ನು ಕುರಿತು ಇಂತೆಂದನು.