ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಬುಧವಾರ, ಅಕ್ಟೋಬರ್ 15, 2025

ಜೈಮಿನಿ ಭಾರತ 18 - ದೊಡ್ಡಬೆಲೆ ನಾರಾಯಣಶಾಸ್ತ್ರೀ

ಜೈಮಿನಿ ಭಾರತ 18 - ದೊಡ್ಡಬೆಲೆ ನಾರಾಯಣಶಾಸ್ತ್ರೀ


ಸೂಚನೆ:ಸಾಮ್ರಾಜ್ಯಮಂ ತಾಳ್ದೆಸೆವ ರಾಘವೇಂದರನಿಂ। 

ದಾಮ್ರಪ್ರವಾಳದಂತಿರೆ ವಿರಾಜಿಸುತಿರ್ಪ। 

ತಾಮ್ರಾಧರೆಯರ ಸೀಮಂತಮಣಿ ಸೀತಾರಮಣಿ ಗರ್ಭಮಂ ತಾಳ್ದಳು॥


ತಾಮ್ರ=ಕೆಂಪಗಿರುವ, ಪ್ರವಾಳದಂತೆ = ಚಿಗುರಿನ ಹಾಗೆ,( ಕೆಂಪಗಿರುವ ಹವಳದಂತೆ)ವಿರಾಜಿಸುತ= ಹೊಳೆಯುತ್ತ, ಇರೂಪ=ಇರುವ, ತಾಮ್ರ=ಚಿಗುರಿನಂತೆ ಕೆಂಪಗಿರುವ, ಅಧರೆಯರ= ತುಟಿಗಳುಳ್ಳ ಸ್ತ್ರೀಯರಲ್ಲಿ,(ಕೆಂದುಟಿಗಳುಳ್ಳ ಸುಂದರ ಸ್ತ್ರೀಯರ ) ಸೀಮಂತಮಣಿ= ಸೀಮಂತ ರತ್ನದೋಪಾದಿಯಲ್ಲಿರುವ,( ಮುಂದಲೆ ಬೊಟ್ಟಿನಂತಿರುವ) ಸೀತಾರಮಣಿ= ಸೀತಾದೇವಿಯೆಂಬ ಸ್ತ್ರೀಯು, ಸಾಮ್ರಾಜ್ಯಮಂ= ಚಕ್ರಾಧಿಪತ್ಯವನ್ನು( ಸಾರ್ವಭೌಮಾಧಿಪತ್ಯವನ್ನು) ತಾಳ್ದು= ಹೊಂದಿದವನಾಗಿ, ಎಸೆವ=ಶೋಭಿಸುತ್ತಿರುವ, ರಾಘವೇಂದ್ರನಿಂ= ಶ್ರೀರಾಮಚಂದ್ರಸ್ವಾಮಿಯಿಂದ, (ರಘುಕುಲತಿಲಕನಾದ 

ಶ್ರೀರಾಮನಿಂದ) ಗರೂಭಮಂ= ಗರ್ಭವನ್ನು (ಬಸಿರನ್ನು) ತಾಳ್ದಳು= ಧರಿಸಿದಳು(ಪಡೆದಳು) 


ಅ॥ವಿ॥ ಸಾಮ್ರಾಜ್ಯ =ವತಭವ, ಚಕ್ರವರ್ತಿ ಪದವಿ= ಭೂಮಂಡಲಾಧಿಪತ್ಯ, ತಾಮ್ರ=ತಾಮ್ರಲೋಹ, ಕೆಂಪು ಬಣ್ಣ, ಪ್ರವಾಳ= ಚಿಗುರು, ಹವಳ, ವೀಣೆಯ ದಂಡಿಗೆ, ಬಾಲಕ, ತಾಮ್ರದಂತೆ+ಅಧರವುಳ್ಳವರು= ತಾಮ್ರಾಧರೆಯರು(ಉ. ಪೂ.

ಬಹು. ಸ.) ಸೀಮಂತ=ಬೈತಲೆ, ಸಂಜ್ಞಾ ಸ್ತಂಭ,ಗಡಿಕಲ್ಲು.


ಭೂಪಾಲ ಕೇಳಾದೊಡಿನ್ನು ಪೂರ್ವದೊಳವನಿ।

ಜಾಪತಿ ಕುಶಲವರ ಸಂಗರದ ಕೌತುಕವ। 

ನಾಪನಿತನೊರೆವೆನಿಕ್ಷ್ವಾಕು ಮೊದಲಾದ ರವಿಕುಲದ ನೃಪರೇಳ್ಗೆಗಳನು॥ 

ವ್ಯಾಪಿಸಿದ ಸಂಪದಕೆ ನೆಲೆವನೆಯೆನಿಪ್ಪಯೋ। 

ಧ್ಯಾಪುರದೊಳವತರಿಸಿದಂಮಹಾವಿಷ್ಣುಸುತ। 

ರೂಪದಿಂ ರಾಮಾಭಿಧಾನದೊಳ್ ಪುತ್ರಕಾಮೇಷ್ಠಿಯಿಂ ದಶರಥಂಗೆ॥೧॥ 


ಪ್ರತಿಪದಾರ್ಥ :-  ಭೂಪಾಲ= ಎಲೈ ಭೂಮಿಪತಿಯಾದ ಜನಮೇಜಯನೇ! ಆದೊಡೆ= ಆದರೆ, ಇನ್ನು= ಇನ್ನು, ವಿವರಿಪ ವಿಷಯವನ್ನು, ಕೇಳು= ಆಲಿಸು, ಅವನಿಜಾಪತಿಯ= ಭೂಪುತ್ರಿಯಾದ ಸೀತಾದೇವಿಯ ಒಡೆಯನಾದ ಶ್ರೀರಾಮನ, ಕುಶಲವರ= ಶ್ರೀರಾಮನ ಪುತ್ರರಾದ ಲವಕುಶರೆಂಬವರ, ಸಂಗರದ= ಯುದ್ಧಾಡಂಬರದ, ಕೌತುಕವನು= ಕುತೂಹಲವನ್ನು

(ಅಚ್ಚರಿಯ ಸಂಗತಿಯನ್ನು) ಅನಿಯನು= ತಿಳಿದಷ್ಟು ವಿಷಯವನ್ನು, ಒರೆವೆನು= ಹೇಳುತ್ತೇನೆ, ಇಕ್ಷ್ವಾಕು ಮೊದಲಾದ=

ಇಕ್ಷ್ವಾಕು ಚಕ್ರವರ್ತಿಯೇ ಮೊದಲುಗೊಂಡು, ರವಿಕುಲದ= ಇನವಂಶದ,(ಸೂರ್ಯವಂಶದ) ಸಂಪದಕೆ= ಐಶ್ವರ್ಯಗಳಿಗೆ, ನೆಲೆವನೆ ಎನಿಪ್ಪ= ತೌರುಮನೆ ಎನಿಸಿಕೊಂಡಿರುವ,(ಸ್ಥಿರವಾದ ಸ್ಥಳವಾದ) ಅಯೋಧ್ಯಾಪುರದೊಳು= ಅಯೋಧ್ಯಾ ನಗರದಲ್ಲಿ, ಪುತ್ರ= ಮಗನನ್ನು, ಕಾಮ= ಕೋರತಕ್ಕ,ಇಷ್ಟಿಯಿಂ= ಯಜ್ಞದಿಂದ, ( ಪುತ್ರನನ್ನು ಪಡೆಯಲು ಮಾಡತಕ್ಕ ಯಜ್ಞದಿಂದ) ದಶರಥಂಗೆ= ದಶರಥ ಮಹಾರಾಜನಿಗೆ,ಮಹಾವಿಷ್ಣು=ವಿಷ್ಣುವು, ರಾಮಾಭಿದಾನದೊಳ್= ಶ್ರೀರಾಮಚಂದ್ರ-

ಲನೆಂಬ ನಾಮಧೇಯದಿಂದ, ಅವತರಿಸಿದಂ= ಆವಿರ್ಭವಿಸಿದನು( ಸಂಜನಿಸಿದನು) 


ತಾತ್ಪರ್ಯ:- ದಶರಥರಾಯನು ಪುತ್ರಸಂತಾನವಿಲ್ಲದಿರಲು ಪುತ್ರಕಾಮೇಷ್ಟಿಯೆಂಬ ಯಜ್ಞವನ್ನು  ಗೈದು, ಯಜ್ಞಪುರುಷನು ಕೊಟ್ಟ ಪರಮಾನ್ನದಲ್ಲಿ ಕೌಸಲ್ಯೆ, ಕೈಕಯಿ, ಸುಮಿತ್ರೆ ಎಂಬ ಮೂವರು ಪತ್ನೆಯರಿಗೂ ಹಂಚಿಕೊಟ್ಟುದ್ದರಿಂದ, ದೇವತೆಗಳಿಂದ ಪ್ರಾರ್ಥಿಸಲ್ಪಟ್ಟ ಶ್ರೀಮನ್ನಾರಾಯಣನು ರಾವಣಾದಿ ರಾಕ್ಷಸರ ಬಾಧಾನಿವೃತ್ತಿಗಾಗಿತಾನು ಕೌಸಲ್ಯೆಯ ಉದರದಲ್ಲಿ ಹುಟ್ಟಿದನು. ಭರತನು ಕೈಕೇಯಿಯ ಗರ್ಭದಲ್ಲಿಯೂ,ಲಕ್ಷ್ಮಣ ಮತ್ತು ಶತ್ರುಘ್ನರು ಸುಮಿತ್ರಾ ಗರ್ಭದಲ್ಲಿಯೂ

ಸಂಜನಿಸಿದರು. 


ತೊಳೆದು ಜನನಿಯ ಜಠರಮಂ ಜನಿಸಿ ಭವನದೊಳ್।

ಬಳೆದು ಲಕ್ಷ್ಮಣ ಭರತ ಶತ್ರುಘ್ನರೊಡಗೂಡಿ। 

ತಳೆದು ಕೌಶಿಕನ ಮಖಮಂ ಕಾದು ತಾಟಕಿಯನೊರಸಿ ಮುನಿಸತಿಯಘವನು॥ 

ಕಳೆದು ಮಿಥಿಲೆಗೆ ಪೋಗಿ ಭಾರ್ಗವನ ಗರ್ವಮಂ। 

ಸೆಳೆದು ಹರಚಾಪಮಂ ಮುರಿದೊಲಿಸಿ ಸೀತೆಯಂ। 

ತಳೆದುತ್ತಸವದೊಳಯೋಧ್ಯಾಪುರಿಗೆ ದಶರಥನೊಡನೆ ರಾಘವಂ ಬಂದನು॥೨॥


ಪ್ರತಿಪದಾರ್ಥ :- ರಾಘವಂ= ಶ್ರೀರಾಮನು, ಜನನಿಯ= ಮಾತೆಯಾದ ಕೌಸಲ್ಯಾ ದೇವಿಯ,ಜಠರಮಂ= ಗರ್ಭಕೋಶವ-

ನ್ನು, ತೊಳೆದು= ಪಾವನಗೈದು, (ಪರಿಶುದ್ಧವಾದದ್ದನ್ನಾಗಿ ಮಾಡಿ) ಜನಿಸಿ= ಉದಯಿಸಿ, ಲಕ್ಷ್ಮಣ ಭರತ ಶತ್ರುಘ್ನರೊಡ-

ಗೂಡಿ= ಲಕ್ಷಮಣನು, ಭರತನ, ಶತ್ರುಘ್ನ ಇವರುಗಳಿಂದೊಡಗೂಡಿ, ಭವನದೊಳ್= ರಾಜಮಂದಿರದಲ್ಲಿ, ಬೆಳೆದು= ವೃದ್ಧಿ ಹೊಂದಿ, ತಳೆದು= ಪಿತನಾಣತಿಯನ್ನು ಹೊಂದಿ, ಕೌಶಿಕನ= ವಿಶ್ವಾಮಿತ್ರ ಮಹರ್ಷಿಯ, ಮಖಮಂ= ಯಾಗವನ್ನು,

ಕಾಯ್ದು= ರಕ್ಷಿಸಿ, ತಾಟಕಿಯಂ= ತಾಟಕಿಯೆಂಬ ದೈತ್ಯಸ್ತ್ರೀಯನ್ನು, ಒರಸಿ= ಸಂಹಾರಮಾಡಿ, ಮುನಿಸತಿಯ= ಗೌತಮ ಮಹರ್ಷಿಯ ಧರ್ಮಪತ್ನಿಯಾದ ಅಹಲ್ಯೆ ಎಂಬವಳ,ಅಘವನು= ದೇವೇಂದ್ರನು ಭಂಗಪಡಿಸಿದ್ದರಿಂದುಂಟಾದ ದೋಷವನ್ನು, ಕಳೌದು= ಹೋಗಲಾಡಿಸಿದವನಾಗಿ,ಮಿಥಿಲೆಗೆ= ಜನಕರಾಯನ ಪಟ್ಟಣವಾದ ಮಿಥಿಲಾನಗರಕ್ಕೆ, ಪೋಗಿ= ಪ್ರವೇಶಿಸಿ, ಭಾರ್ಗವನ= ಪರಶುರಾಮನ, ಗರ್ವಮಂ= ಅಹಂಕಾರವನ್ನು, ಸೆಳೆದು= ಪರಿಹರಿಸಿ, ಹರಚಾಪಮಂ= ಶಿವಧನುಸ್ಸನ್ನು, ಮುರಿದು=ತುಂಡುಮಾಡಿ, ಸೀತೆಯಂ=ಸೀತಾದೇವಿಯನ್ನು, ಒಲಿಸಿ= ಮನಸ್ಸೊಪ್ಪುವಂತೆ ಮಾಡಿ, ತಳೆದು= ಸೀತೆಯನ್ನು ಮದುವೆಮಾಡಿಕೊಂಡು, ದಶರಥನೊಡನೆ= ತಂದೆಯಾದ ದಶರಥಮಹಾರಾಜನೊಡನೆ, ಅಯೋಧ್ಯಾಪುರಿಗೆ= ಅಯೋಧ್ಯಾಪಟ್ಟಣಕ್ಕೆ, ಉತ್ಸವದೊಳು= ವೈಭವದಿಂದ, ಬಂದನು= ಬಂದವನಾದನು. 


ಅ॥ವಿ॥ ಲಕ್ಷ್ಮಣ = ಸಕಲಗುಣ ಸಂಪನ್ನ, ಭರತ= ತನ್ನ ಖ್ಯಾತಿಯನ್ನು ಪ್ರಪಂಚದಲ್ಲೆಲ್ಲಾ ಹರಡತಕ್ಕವನು, ಶತ್ರುಘ್ನ = ಶತ್ರುಗಳನ್ನು ನಾಶಮಾಡತಕ್ಕವನು,ರಾಮ= ಸಕಲರ ಮನಸ್ಸಿನಲ್ಲಿಯೂ ರಮಿಸತಕ್ಕವನು, ಕೌಶಿಕ ಮುನಿಯು ರಚಿಸುತ್ತಿದ್ದ ಯಜ್ಞಕಾರ್ಯಗಳನೆಲ್ಲಾ ಕೆಡಿಸುತ್ತಿದ್ದ ರಾಕ್ಷಸರ ಬಾಧಾ ನಿವೃತ್ತಿಗಾಗಿ ಅಯೋಧ್ಯಾ ಪಟ್ಟಣಕ್ಕೆ ಬಂದು, ದಶರಥನನ್ನು ಸಂತವಿಟ್ಟು ರಾಮಲಕ್ಷ್ಮಣರನ್ನು ಸಂಗಡ ಕರೆದುಕೊಂಡು ಬರುತ್ತಿದ್ದನು, ದಾರಿಯಲ್ಲಿ ತಾಟಕಿಯೆಂಬ ಒಬ್ಬ ರಕ್ಕಸಿಯು ರಾಮಲಕ್ಷ್ಮಣರನ್ನು ನುಂಗಲೋಸುಗ ಬರಲಾಗಿ ರಾಮನು ಆ ದುಷ್ಟ ರಕ್ಕಸಿಯನ್ನು ಸಂಹರೆಸಿ ಮುಂದೆ ಹೊರಟನು, ದೇವೇಂದ್ರನು ಗೌತಮ ಮಹರ್ಷಿಯ ಹೆಂಡತಿಯಾದ ಅಹಲ್ಯೆಯನ್ನು ಮೋಸದಿಂದ ಮಾನಭಂಗ ಮಾಡಿದ್ದಕ್ಕೆ, ಗೌತಮನು ಅಹಲ್ಯೆಯನ್ನು ಕಲ್ಲಾಗುರುವಂತೆ ಶಪಿಸುತ್ತಾನೆ, ಅದೇ ಮಾರ್ಗವಾಗಿ ರಾಮಲಕ್ಷ್ಮಣರು ಬರುತ್ತಿರಲಾಗಿ ಆ ಶಿಲೆಗೆ ಶ್ರೀರಾಮನ ಪಾದವು ಸೋಕಿದ್ದರಿಂದ ಶಾಪ ಪರಿಹಾರವಾಗಿ ಪೂರ್ವದ ಋಷಿಪತ್ನಿಯಾದಳು. ಜಠರ(ತ್ಸ) ಹೊಟ್ಟೆ (ತ್ಭ), ಮಖ=ಯಜ್ಞ, ಮುಖ=ಮೋರೆ, 


ತಾತ್ಪರ್ಯ:- ಆಗ ಶ್ರೀರಾಮಚಂದ್ರ ಸ್ವಾಮಿಯು, ಜನನಿಯಾದ ಕೌಸಲ್ಯಾದೇವಿಯ ಉದರವನ್ನು ಪಾವನಗೈದು ಜನಿಸಿ, ಲಕ್ಷ್ಮಣ ಭರತ ಶತ್ರುಘ್ನರೊಡಗೂಡಿ ರಾಜ ಭವನದಲ್ಲಿ ಬೆಳೆಯುತ್ತಿದ್ದರು. ತಂದೆಯಾದ ದಶರಥನ ಅಪ್ಪಣೆ ಪಡೆದು ಕೌಶಿಕ ಮುನಿಯ ಯಜ್ಞ ಸಂರಕ್ಷ್ಣೆಯನ್ನು ಮಾಡಿ ಯಜ್ಞವನ್ನು ಭಂಗಪಡಿಸಲು ಬಂದ ದೈತ್ಯರನ್ನು ಸಂಹರಿಸಿ ತಾಟಕಿಯೆಂಬ ರಕ್ಕಸಿಯನ್ನು ಕೊಂದು, ಗೌತಮ ಮಹರೂಷಿಯ ಧರ್ಮಪತ್ನಿಯಾದ ಅಹಲ್ಯೆಯ ಶಾಪವನ್ನು ಪರಿಹರಿಸಿ,ಅನಂತರ ಮಿಥಿಲೆಗೆ ಹೋಗಿ ಶೈವಧನುಸ್ಸನ್ನು ಖಂಡಿಸಿ, ಮಿಥಿಲಾಧಿಪನಾದ ಜನಕ ಸುತೆಯಾದ ಜಾನಕಿಯನ್ನು ಕೈಹಿಡಿದು, ಭೃಗು ಪುತ್ರನಾದ ಪರಶುರಾಮನ ಗರ್ವವನ್ನು ಭಂಗಿಸಿ, ಸೀತಾದೇವಿಯನ್ನೊಡಗೊಂಡು ತಂದೆಯಾದ ದಶರಥನ ಸಂಗಡ ಅಯೋಧ್ಯೆಗೆ ಬಂದನು. 


ವರ್ಧಿಪ ಕುಮಾರಂಗೆ ಭೂಮೀಶ್ವರಂ ಬಳಿಕ । 

ಮೂರ್ಧಾಭಿಷೇಚನಂ ಮಾಡಲನುಗೈಯೆ ನೃಪ। 

ನರ್ಧಾಂಗಿ ತಡೆಯೆ ಪೊರಮಟ್ಟು ಬನಕೈದೆ ನರಪತಿ ಪುತ್ರಶೋಕದಿಂದೆ॥ 

ಸ್ವರ್ಧಾಮಕಡರೆ ಕೇಳುತೆ ಭರತನಂ ಕಳುಹಿ। 

ದುರ್ಧರದರಣ್ಯಪ್ರವೇಶಮಂ ಮಾಡಿದಂ। 

ಸ್ಪರ್ದಿಸುವ ದನುಜರಂ ಮುರಿದು ಮುನಿಗಳನೋವಿ ಸತಿಸಹಿತ ಕಾಕುತ್ಸನು॥೩॥


ಪ್ರತಿಪದಾರ್ಥ :- ಭೂಮೀಶ್ವರಂ = ಪೃಥ್ವೀಪತಿಯಾದ ದಶರಥರಾಜನು, ವರ್ಧಿಪ= ಪ್ರವರ್ಧಮಾನವನ್ನು ಹೊಂದುತ್ತಿದ್ದ, ಕುಮಾರಂಗೆ= ಪುತ್ರನಾದ ಶ್ರೀರಾಮಚಂದ್ರ ಸ್ವಾಮಿಗೆ,ಮೂರೂಧಾಭಿಷೇಚನಂ= ಪಟ್ಟಾಭಿಷೇಕ ಮಹೋತ್ಸವವನ್ನು, ಮಾಡಲು= ನೆರವೇರಿಸಲು,ಅನುಗೈಯೆ= ಅಣಿಮಾಡಲಾಗಿ, ನೃಪನ= ರಾಜನ, ಅರೂಧಾಂಗಿ= ವಲ್ಲಭೆಯಾದ ಕೈಕೇಯಿ ದೇವಿಯು, ತಡೆಯೆ= ಅಡ್ಡಿಮಾಡಲಾಗಿ, ಶ್ರೀರಾಮಂ= ಮಂಗಳಕರನಾದ ರಾಮನು, ಬನಕ= ಅರಣ್ಯವನ್ನು ಕುರಿತು, ಪೊರಮಟ್ಟು = ಪಟ್ಟಣವನ್ನು ಬಿಟ್ಟು ಹೊರಟು, ಐದೆ= ಪ್ರಯಾಣಮಾಡಲಾಗಿ,ನರಪತಿ= ರಾಜನಾದ ದಶರಥನು, ಪುತ್ರಶೋಕದಿಂದ= ಮಗನ ಅರಣ್ಯಪ್ರವೇಶದ ದುಃಖದಿಂದ, ಸ್ವರ್ಧಾಮಕೆ= ಪರಲೋಕಕ್ಕೆ,(ಸ್ವರ್ಗಕ್ಕೆ) ಅಡರೆ= ಹತ್ತಲು(ಲೋಕಾಂತರವನ್ನೈದಲಾಗಿ) ರಾಮಂ= ಶ್ರೀರಾಮಚಂದ್ರನು,ಕೇಳುತ= ತಂದೆ ಸ್ವರ್ಗಗತನಾದ ಸಂಗತಿಯನ್ನು ತಿಳಿದು, ಭರತನ= ತಮ್ಮನಾದ ಭರತನನ್ನು, ಕಳುಹಿ= ಕಳುಹಿಸಿಕೊಟ್ಟು,  ಕಾಕುತ್ಥ್ಸನು= ಕಕುತ್ಥ್ಸರಾಜ ಸಂತತಿಯವನಾದ ರಾಮನು, ಸ್ಪರ್ಧಿಸುವ= ಎದುರುಬಿದ್ದು ಬರುವ,ದನುಜರಂ= ರಾಕ್ಷಸಾದಿ ವೀರರನ್ನು, (ಕಬಂಧ, ಖರದೂಷಣಾದಿ ರಕ್ಕಸರನ್ನು) ಮುರೆದು= ನಾಶಮಾಡಿ,(ಸಂಹಾರಮಾಡಿ) ಮುನಿಗಳಂ= ಆ ಎಡೆಯಲ್ಲಿ ವಾಸವಾಗಿದ್ದ ತಪಸ್ವಿಗಳನ್ನು, ಓವಿ=ಸಲಹಿದವರಾಗಿ, ಸತಿಸಹಿತ= ಧರ್ಮಪತ್ನಿಯಾದ ಜಾನಕಿಯೊಡನೆ, ದುರ್ಧರದ= ಪ್ರವೇಶಿಸಲು ಅಸಾಧ್ಯವಾದ, ಅರಣ್ಯಪ್ರದೇಶಮಂ= ದಂಡಕಾರಣ್ಯ ಪ್ರವೇಶವನ್ನು, ಮಾಡಿದಂ= ಗೆಯ್ದನು( ಕೈಗೊಂಡನು) 


ಅ॥ವಿ॥ ಭೂಮಿ+ಈಶ= ಭೂಮೀಶ( ಸ. ದೀ. ಸಂ) ಮೂರೂಧ=ತಲೆ,ಪಟ್ಟ, ಹಣೆ, ಶಿಖರ, ಮುಖ್ಯಸ್ಥ. ಬನ(ತ್ಭ) ವನ(ತ್ಸ) ದಶ+ಹತ್ತು ದಿಕ್ಕುಗಳಲ್ಲೂ, ರಥ= ರಥಸಂಚಾರವುಳ್ಳವನು, (ದಶರಥ) ದಶಸಂಸ್ಕಾರಗಳು= ಜನನ, ಜೀವನ, ತಾಡನ, ಬೋಧನ, ಅಭಿಷೇಕ, ಕಮಲೀಕರಣ, ಋಪ್ಯಾಯನ, ತರ್ಣಣ, ದೀಪನ, ಗುಪ್ತಿ, ದಶೋಪಚಾರಗಳು, (೨) ದಶೋಪಚಾರಗಳು = ಪಾದ್ಯ, ಅರ್ಘ್ಯ, ಆಚಮನ, ಗಂಧ, ಪುಷ್ಪ, ದೇಪ, ನೈವೇದ್ಯ, ಪುನರಾಚಮನ, ತಾಂಬೂಲ,


ತಾತ್ಪರ್ಯ:-ಆಗ ದಶರಥರಾಯನು, ಶ್ರೀರಾಮನಿಗೆ, ಪಟ್ಟಾಭಿಷೇಕವನ್ನು ನೆರವೇರಿಸಬೇಕೆಂದು ಯತ್ನಮಾಡಲಾಗಿ, ದಶರಥಮಹಾರಾಜನ ಅರ್ಧಾಂಗಿಯಾದ ಕೈಕೇಯಿಯು ತಡೆಯಲು, ದಶರಥನ ಆಜ್ಞೆಯಂತೆ ಶ್ರೀರಾಮಚಂದ್ರನು ಅರಣ್ಯವೃಸಕ್ಕೆ ಹೊರಟನು, ದಶರಥಚಕ್ರವರ್ತಿಯು ಪುತ್ರಶೋಕದಿಂದ ಸ್ವರ್ಗಸ್ಥನಾದನು. ಶ್ರೀರಾಮನು ಭರತನಿಂದ ತಂದೆಯ ನಿಧನ ವಾರ್ತೆಯನ್ನು ತಿಳಿದು, ಭರತನನ್ನು ಸಮಾಧಾನಪಡಿಸಿ ಕಳುಹಿದನು, ತರುವಾಯ ತನ್ನೊಡನೆ ಪ್ರತಿಭಟಿಸಿ ನಿಂತ ಕಬಂಧಾದಿ ರಾಕ್ಷಸರನ್ನು ಸಂಹಾರಮಾಡಿ,  ಅರಣ್ಯವಾಸಿಗಳಾದ ತಪಸ್ವಿಗಳನ್ನು ಸಂರಕ್ಷಿಸಿ, ದಂಡಕಾರಣ್ಯಕ್ಕೆ ಪತ್ನಿಯೊಡನೆ ಪ್ರವೇಶಿಸಿದನು. 


ದಂಡಕಾರಣ್ಯದೊಳಿರಲ್ಕೆ ಶೂರ್ಪಣಖೆ ಬಂ।

ದಂಡಲೆಯಲಾಕೆಯಂ ಭಂಗಿಸಿ ಖರಾದ್ಯರಂ। 

ಖಂಡಿಸಿ ಕನಕಮೃಗ ವ್ಯಾಜ್ಯದಿಂದೈದೆ ಲಕ್ಷ್ಮಣನಗಲೆ ಕಪಟದಿಂದೆ॥ 

ಕೊಂಡೊಯ್ಯೆ ರಾವಣಂ ಸೀತೆಯಂ ಕಾಣದುರೆ। 

ಬೆಂಡಾಗಿ ವಿರಹದಿಂ ಬಿದ್ದಿಹ ಜಟಾಯುವಂ। 

ಕಂಡು ಪೊಲಬಂ ಕೇಳ್ದು ಸೌಮಿತ್ರಿ ಸಹಿತ ನಡೆದಂ ಮುಂದೆ ರಘುನಾಥನು॥೪॥


ಪ್ರತಿಪದಾರ್ಥ :- ರಾಮಂ= ಶ್ರೀರಾಮಚಂದ್ರನು, ದಂಡಕಾರಣ್ಯದೊಳು= ದಂಡಕಾವನದಲ್ಲಿ,ಇರಲ್ಕೆ=ಇರಲಾಗಿ, ಶೂರ್ಪಣಖಿ= ಮೊರದಂತೆ ಉಗುರುಳ್ಳ ರಕ್ಕಸಿಯು(ರಾವಣಾಸುರನ ತಂಗಿಯಾದ ಶೂರ್ಪನಖಿ) ಬಂದು= ರಾಮಲಕ್ಷ್ಮಣರ ಹತ್ತಿರಕ್ಕೆ ಬಂದು,  ಅಂಡಲೆಯಲು= ತೊಂದರೆಯುಂಟುಮಾಡಲು, ಆಕೆಯಂ= ಆ ಶೂರ್ಪನಖಿಯನ್ನು, ಭಂಗಿಸಿ= ಅಪಮಾನಪಡಿಸಿ, ಖರಾದ್ಯರಂ= ಸಹೋದರರಾದ ಖರದೂಷಣ ತ್ರಿಶಿರರನ್ನೈ, ಖಂಡಿಸಿ= ಸಂಹಾರಮಾಡಿ, ಕನಕ= ಸ್ವರ್ಣವಿಕಾರವಾದ, ಮೃಗ= ಜಿಂಕೆಯೆಂಬ ಮಾಯಾಮೃಗದ, ವ್ಯಾಜದಿಂದ= ನೆಮಿತ್ತದಿಂದ, ಐದೆ= ಶ್ರೀರಾಮನು ಹೊರಡಲು, ಲಕ್ಷ್ಮಣಂ= ಲಕ್ಷ್ಮಣಸ್ವಾಮಿಯು,ಸೀತೆಯನ್ನು ಬಿಟ್ಟು ರಾಮನ ಬಳಿಗೆ ಬರಲು, ರಾವಣಂ= ಲಂಕೇಶ್ವರನಾದ 

ರಾವಣನು, ಕಪಟದಿಂದ= ಮೋಸದಿಂದ,  ಸೀತೆಯಂ= ಜಾನಕಿಯನ್ನು, ಕೊಂಡೊಯ್ಯೆ= ಕದ್ದುಕೊಂಡುಹೋಗಲಾಗಿ, ರಘುನಾಥನು= ರಘುಕುಲಕ್ಕೆ ಒಡೆಯನಾದ ಶ್ರೀರಾಮನು, ಕಾಣದೆ= ಸೀತೆಯನ್ನು ನೋಡದೆ, ವಿರಹದಿಂದ= ವಿರಹತಾಪದಿಂದ, ಉರೆ= ಹೆಚ್ಚಾಗಿ, ಬೆಂಡಾಗಿ = ನಿರ್ಬಲನಾಗಿ, ಬಿದ್ದಿಹ= ನಿರ್ಬಲನಾಗಿ ಬಿದ್ದಿರೈವಂಥ, ಜಟಾಯುವಂ= ಜಟಾಯುವನ್ನು, ಕಂಡು= ಈಕ್ಷಿಸಿದವನಾಗಿ, ಪೊಲಬ=ಅಲ್ಲಿ ನಡೆದ ಕೆಟ್ಟಸಮಾಚಾರವನ್ನು,ಕೇಳ್ದು=ಆಲಿಸಿ, ಮುಂದೆ= ಅಲ್ಲಿಂದಾಚೆಗೆ, ಸೌಮಿತ್ರಿ ಸಹಿತ= ಲಕ್ಷ್ಮಣನೊಡನೆ,ನಡೆದಂ= ಸೀತಾನ್ವೇಷಣೆಗಾಗಿ ನಡೆದನು.


ಅ॥ವಿ॥ ದಂಡಕವೆಂಬ+ಅರಣ್ಯ= ದಂಡಕಾರಣ್ಯ( ಸಂ. ಪೂ. ಕ.) ಗೃಧ್ರ( ತ್ಸ) ಹದ್ದು( ತ್ಭ) ಶೂರ್ಪ= ಮೊರದಂತೆ ವಿಶಾಲವಾದ,  ನಖ= ಉಗುರುಳ್ಳವಳು(ಶೂರ್ಪನಖಿ) ಸುಮಿತ್ರೆಯ ಮಗ =ಸೌಮಿತ್ರಿ


ತಾತ್ಪರ್ಯ:-ಶ್ರೀರಾಮನು ದಂಡಕಾರಣ್ಯದಲ್ಲಿರುವಾಗ ಲಂಕಾಧಿಪನಾದ ರಾವಣನ ಸಹೋದರಿ ಸೂರ್ಪನಖಿಯು ತನ್ನ ವರಿಸೆಂದು ರಾಮಲಕ್ಷ್ಮಣರನ್ನು ಬಾಧಿಸಲು, ಅವಳನ್ನು ಮೂಗು ಹರಕಿಯಾಗಿ ಮಾಡಿದನು, ಈ ರೀತಿಯಾದ ಮಾನಭಂಗಪಟ್ಟ ಸಹೋದರಿಯ ಸಂತಾಪವನ್ನು ಪರಿಹರಿಸಲೋಸುಗ ಶ್ರೀರಾಮನ ಮೇಲೆ ದಂಡೆತ್ತಿಬಂದ ಖರದೂಷಣ ತ್ರಿಶಿರರನ್ನು ಸಂಹಾರಮಾಡಿ, ಕನಕಮೃಗರೂಪಿಯಾದ ಮಾರೀಚನನ್ನು ಸೀತೆಯ ಅಭಿಪ್ರಾಯದಂತೆ ಹಿಡಿತರಲು ಹೊರಟ ರಾಮನ ಬಳಿಗೆ  ಲಕ್ಷ್ಮಣ ಬರಲು, ರಾವಣ ಕಪಟವೇಷಧಾರಿಯಾಗಿ ಬಂದು ಸೀತಾದೇವಿಯನ್ನು ಕೊಂಡೊಯ್ಯಲು, ಶ್ರೀರಾಮನು ತನ್ನ ಪ್ರಾಣಕಾಂತೆಯನ್ನು ಕಾಣದೆ ವಿರಹಾಗ್ನಿಯಿಂದ ಬೆಂದು ಬೆಂಡಾಗಿ ಕಂಗೆಟ್ಟು ಕುಂದಿ ಕುಗ್ಗಿ, ಸೀತೆಯನ್ನು ರಾವಣನು ಕೊಂಡೊಯ್ಯುವ ಕಾಲದಲ್ಲಿ ತಡೆದು ಜಗಳವಾಡಿ ಆ ರಾವಣನಿಂದ ಸೋತು ಬಿದ್ದಿದ್ದ  ಕುಟುಕುಜೀವಿಯಾದ ಜಟಾಯುವಿನಿಂದ ನಡೆದ ಸಂಗತಿಯನ್ನು ಗ್ರಹಿಸಿ ಮುಂದಕ್ಕೆ ಸೌಮಿತ್ರಿ ಸಹಿತನಾಗಿ ಸೀತಾನ್ವೇಷಣಕ್ಕೆ ಹೊರಟನು.


ಪಥದೊಳ್ ಕಬಂಧನಂ ಕೊಂದು ಶಬರಿಯ ಮನೋ। 

ರಥಮಂ ಸಲಿಸಿ ಕರುಣದಿಂದಾಂಜನೇಯನಂ। 

ಪ್ರಥಮದೊಳ್ ಕಂಡು ಸುಗ್ರೀವಂಗೆ ಕೈಗೊಟ್ಟು ವಾಲಿಯಂ ಬಾಣದಿಂದೆ ॥ 

ಮಥಿಸಿ ರಾವಣನ ಮೇಲಣ ರಾಜಕಾರಿಯದ। 

ಕಥನಕಾಳೋಚಿಸಿ ಕರಡಿಕಪಿಗಳಂ ನೆರಪಿ। 

ಪೃಥಿವಿಜೆಯನರಸಲ್ಕೆ ವೀರಹನುಮಂತನಂ ಕಳುಹಿದಂ ಕಾಕುತ್ಸನು॥೫॥ 


ಪ್ರತಿಪದಾರ್ಥ :- ಕಾಕುತ್ಸನು= ಶ್ರೀರಾಮಚಂದ್ರನು, ಪಥದೊಳ್= ಮಾರ್ಗದಲ್ಲಿ, ಕಬಂಧನಂ= ಕಬಂಧನೆಂಬ ದಾನವನನ್ನು,

ಕೊಂದು=ಸಂಹಾರಮಾಡಿ, ಶಬರಿಯ= ಶಬರಿಯೆಂಬ ಅತಿ ಭಕ್ತಳಾದ ವ್ಯಾಧಸ್ತ್ರೀಯ,ಮನೋರಥಮಂ= ಮನಸ್ಸಿನ ಕೋರಿಕೆಯನ್ನು,ಸಲಿಸಿ= ನೆರವೇರಿಸಿಕೊಟ್ಟು, ಆಂಜನೇಯನಂ= ಅಂಜನಾಸುತನಾದ ಆಂಜನೇಯನನ್ನು, ಕರುಣದಿಂದ= ಕೃಪೆಯಿಂದ, ಪ್ರಥಮದೊಳ್= ಆದಿಯಲ್ಲಿ,ಕಂಡು= ನೋಡಿ, ಸುಗ್ರೀವಂಗೆ= ಸುಗ್ರೀವನೆಂಬ ವಾನರೇಶ್ವರನಿಗೆ, ಕೈಗೊಟ್ಟು= ಸಹಾಯಕನಾಗಿರುವೆನೆಂದು ಪ್ರಮಾಣಮಾಡಿ, ವಾಲಿಯಂ= ವಾಲಿಯೆಂಬ ಸುಗ್ರೀವನ ಸಹೋದರನನ್ನು, ಬಾಣದಿಂ=ಅಂಬಿನಿಂದ, ಮಥಿಸಿ= ಸಂಹಾರಮಾಡಿ, ರಾವಣನ ಮೇಲಣ= ಲಂಕೇಶ್ವರನಾದ ರಾವಣಾಸುರನ ಮೇಲೆ ನಡೆಸಬೇಕಾದ, ರಾಜಕಾರಿಯದ= ರಾಯಭಾರಿಕೃತ್ಯದ, ಕಥನದೊಳು= ವಿವರಣೆಯಿಂದ, ಆಲೋಚಿಸಿ= ಯೋಚನೆಯನ್ನು ಮಾಡಿ, ಕರಡಿಕಪಿಗಳಂ = ಕರಡಿ ಮತ್ತು ಕೋತಿಗಳನ್ನು,(ಜಾಂಬವಂತಾಂಜನೇಯಾದಿಗಳನ್ನು)ನೆರಪಿ= ಸಮೂಹದಿಂದ ಸೇರಿಸಿಕೊಂಡು, ಪೃಥಿವಿಜೆಯಂ= ಭೂ ಪುತ್ರಿಯಾದ ಜಾನಕಿಯನ್ನು, ಅರಸಲ್ಕೆ= ಹುಡುಕುವ ಸಲುವಾಗಿ, ವೀರ= ಅಸಹಾಯಶೂರನಾದ, ಹನಮಂತನಂ= ಆಂಜನೇಯನನ್ನು, ಕಳುಹಿದಂ=ಕಳುಹಿಸಿಕೊಟ್ಟನು. 


ಅ॥ವಿ॥ ವೀರನಾದ+ ಹನುಮ= ವೀರಹನುಮ( ವಿ, ಪೂ. ಕ. ) ಕಬಂಧ= ತಲೆಯಿಲ್ಲದ ಮುಂಡ,ಕಬಂಧಾಸುರ, ನೀರು

ಅಂಜನೆಯ+ಮಗ= ಆಂಜನೇಯ, ಅಂಜನಾ= ಅಂಜನಾದೇವಿ, ಸು= ಒಳ್ಳೇ, ಗ್ರೀವ= ಕಂಠವುಳ್ಳವನು,


ತಾತ್ಪರ್ಯ:- ಶ್ರೀರಾಮನು ಮಾರ್ಗದಲ್ಲಿ ಬರುತ್ತ ಕಬಂಧನೆಂಬ ದೈತ್ಯನನ್ನು ಸಂಹರಿಸಿ, ಪರಮಭಕ್ತ ಶಿರೋಮಣಿಯಾದ ಬೇಡರ ಸ್ತ್ರೀಯ ಮನೋರಥವನ್ನು ನಡಸಿಕೊಟ್ಟು ಆಂಜನೇಯನನ್ನು ಕೃಪಾಕಟಾಕ್ಷದಿಂದು ನೋಡಿ, ಸುಗ್ರೀವನಿಗೆ ಅಭಯ-

ಪ್ರದಾನಮಾಡಿ, ಸುಗ್ರೀವನ ಸಹೋದರ ವಾಲಿಯನ್ನು ಬಾಣದಿಂದ ವಧಿಸಿ, ಸೀತಾಪಹಾರಿಯ ಹುಡುಕುವ ಕಾರ್ಯಕ್ಕೆ ಬೇಕಾದ ಸಲಹೆಗಳನ್ನು ಕಲ್ಪಿಸಿಕೊಂಡು ಜಾಂಬವಂತ ಆಂಜನೇಯಾದಿಗಳ ಜೊತೆಮಾಡಿಕೊಂಡು ಸೀತಾನೂವೇಷಣೆಗಾಗಿ ವೀರಹನುಮಂತನನ್ನು ಕಳೈಹಿಸಿಕೊಟ್ಟನು. 


ಧೀಂಕಿಟ್ಟು ಶರಧಿಯಂ ದಾಂಟಿ ಮೇದಿನಿಯ ಸುತೆ। 

ಗಂಕಿತದ ಮುದ್ರಿಕೆಯನಿತ್ತು ಬೀಳ್ಗೊಂಡು ನಿ। 

ಶ್ಯಂಕೆಯೊಳಶೋಕವನಮಂಕಿತ್ತುದನುಜರಂ ಸದೆದಕ್ಷನಂ ಮರ್ದಿಸಿ॥ 

ಅಂಕದೊಳ್ ಬಳಿಕಿಂದ್ರಜಿತುವಿನ ಬ್ರಹ್ಮಾಸ್ತ್ರ। 

ದಂಕೆಯೊಳ್ ನಿಂದು ವಾಲಧಿಗಿಕ್ಕಿದುರಿಯಿಂದೆ। 

ಲಂಕೆಯಂ ಸುಟ್ಟು ಬಂದೊಸಗೆವೇಳ್ದನಿಲಜನನಸುರಾರಿ ಮನ್ನಿಸಿದನು॥೬॥ 


ಪ್ರತಿಪದಾರ್ಥ :- ಧೀಂಕಿಟ್ಟು = ಕುಪ್ಪಳಿಸಿ, ಶರಧಿಯಂ= ಸಮುದ್ರವನ್ನು,ದಾಂಟಿ= ದಾಟಿಕೊಂಡು, ಮೇದಿನಿಯ ಸುತೆಗೆ= ಭೂಪುತ್ರಿಯಾದ ಸೀತೆಗೆ, ಅಂಕಿತದ= ಶ್ರೀರಾಮಚಂದ್ರನ ಹೆಸರುಳ್ಳ, ಮುದ್ರಿಕೆಯನು= ಮೈದ್ರೆಯ ಉಂಗುರವನ್ನು ಇತ್ತು=

ಕೊಟ್ಟು, ಬೀಳ್ಕೊಂಡು= ಜಾನಕಿಯ ಊಪ್ಪಣೆ ಪಡೆದುಕೊಂಡು, ನಿಶ್ಯಂಕೆಯಲಿ= ನಿರ್ಭೀತಿಯಿಂದ,ಅಶೋಕಮಂ= ಅಶೋಕವನವನ್ನು, ಕಿತ್ತು= ಹಾಳುಮಾಡಿ, ದನುಜರಂ=ತನ್ನನ್ನು ಹೆದರಿಸಲು ಬಂದ ರಕ್ಕಸರನ್ನು, ಸದೆದು= ಸಂಹರಿಸಿ, ಬಳಿಕ= ಅನಂತರದಲ್ಲಿ, ಅಕ್ಷನಂ= ರಾವಣನ ಪುತ್ರನಾದ ಅಕ್ಷಯಕುಮಾರನನ್ನು, ಮರ್ದಿಸಿ= ಕೊಂದು, ಅಂಕದೊಳ್= ನಿರ್ಬಂಧ ಸೂಚನೆಗೆ, (ಬ್ರಹ್ಮಾಸ್ತ್ರಕ್ಕೆ ತಾನು ಮುಹೂರ್ತತ್ರಿತಯ ಒಳಬೀಳುವೆನೆಂಬ ಮಾತಿಗನುಸಾರವಾಗಿ) ಇಂದ್ರಜಿತು-

ವಿನ= ರಾವಣನ ಪುತ್ರ ಇಂದ್ರಜಿತುವಿನ, ಬ್ರಹ್ಮಾಸ್ತ್ರದ=ಬ್ರಹ್ಮಾಸ್ತ್ರವೆಂಬ ಬಾಣದ, ಅಂಕೆಯೊಳ್= ತೊಡಕಿನಲ್ಲಿ, ನಿಂದು=ನಿಂತು, ವಾಲಧಿಗೆ= ಲಾಂಗೂಲಕ್ಕೆ,(ಬಾಲದ ತುದಿಗೆ)ಇಕ್ಕಿದ= ದಾನವರಿಟ್ಟಂಥ, ಉರಿಯಿಂದ= ಬೆಂಕಿಯಿಂದ, ಲಂಕೆಯಂ= ಲಂಕಾಪಟ್ಟಣವನ್ನು, ಸುಟ್ಟು = ದಹಿಸಿ, ಬಂದು= ಹಿಂದಿರುಗಿ ಬಂದು, ಒಸಗೆಪೇಳ್ದ= ಹರ್ಷವಾರ್ತೆಯನ್ನು ಹೇಳಿದಂಥ, ಅನಿಲಜನಂ= ವಾಯುಪುತ್ರನಾದ ಆಂಜನೇಯನನ್ನು ,ಅಸುರಾರಿ= ರಾಕ್ಷಸಾಂತಕನಾದ ಶ್ರೀರಾಮನು, ಮನ್ನಿಸಿದಂ= ಮರ್ಯಾದೆಯನ್ನು ಮಾಡಿದನು.


ಅ॥ವಿ॥ ಮುದ್ರಿಕಾ(ತ್ಸ), ಮುದ್ದಿಕೆ(ತ್ಭ), ಅಶೋಕ=ಅಶೋಕ ಚಕ್ರವರ್ತಿ, ಅಶೋಕವೃಕ್ಷ, ಅಶೋಕವನ. ಅಸುರ+ಅರಿ= ಅಸುರಾರಿ (ಸ.ದೀ. ಸಂ. ), ಷ. ತ. ಅನಿಲ=ವಾಯು, ಅನಲ=ಅಗ್ನಿ, ವಾಲ=ಬಾಲ, ಕಾಲ=ಯಮ. 


ತಾತ್ಪರ್ಯ:- ಆಗ ಅಂಜನಾಸುತನಾದ ಆಂಜನೇಯನು ಶ್ರೀರಾಮಚಂದ್ರನ ಅಪ್ಪಣೆ ಪಡೆದು ಹಾರಿ, ಶರಧಿಯನ್ನು ದಾಟಿ ಸೀತಾದೇವಿಗೆ ಶ್ರೀರಾಮನಾಮಾಂಕಿತಮಾದ ಮುದ್ರೆಯುಂಗುರವನ್ನು ಕೊಟ್ಟು, ಜಾನಕಿಯ ಅಪ್ಪಣೆಯನ್ನು ಪಡೆದು, ನಿರ್ಭೀತಿಯಿಂದ ರಾವಣನ ಅಶೋಕವನವನ್ನು ನಾಶಮಾಡಿ,  ತನಗೆ ಎದುರಾಳಿಗಳಾಗಿ ಬಂದ ರಾಕ್ಷಸರನ್ನೂ,ರಾವಣನ ಕಿರಿಯ ಮಗನಾದ ಅಕ್ಷಯಕುಮಾರನನ್ನೂ ಸಂಹರಿಸಿ ಆ ಬಳಿಕ ರಾವಣನ ಹಿರಿಯಮಗನಾದ ಇಂದ್ರಜಿತುವಿನ ಬ್ರಹ್ಮಾಸ್ತ್ರಕ್ಕೆ ಅಧೀನನಾಗಿ, ಅಪಮಾನಾಸ್ಪದವಾಗಿ ತನ್ನ ಬಾಲಕ್ಕೆ ಇಟ್ಟ ಅಗ್ನಿಯಿಂದ ಲಂಕಾನಗರಿಯನ್ನು ದಹಿಸಿ, ತಾನು ಮಾಡಿದ ಸಂಗತಿಗಳನ್ನೆಲ್ಲಾ ಶ್ರೀರಾಮಚಂದ್ರ ಮೂರ್ತಿಗೆ ತಿಳಿಸಲು ಶ್ರೀರಾಮನು ಅಂಜನೃಸುತಗೆ ಮನ್ನಣೆ ಮಾಡಿದನು. 


ಗಣನೆಯಿಲ್ಲದ ಕಪಿಗಳಂ ಕೂಡಿಕೊಂಡು ತೆಂ। 

ಕಣಕಡಲ ತೀರದೊಳ್ ಬಿಟ್ಟು ಬಂದೊಡೆ ವಿಭೀ। 

ಷಣನಂ ಪರಿಗ್ರಹಿಸಿ ಲಂಕಾಧಾಪತ್ಯಮಂ ಕೊಟ್ಟು ಜಲಧಿಯನೆ ಕಟ್ಟಿ॥ 

ರಣದೊಳಸುರರ ಕುಲದ ಹೆಸರುಳಿಯದಂತೆ ರಾ। 

ವಣ ಕುಂಭಕರ್ಣ ಮೊದಲಾದ ರಕ್ಕಸರನುರೆ। 

ಹಣಿದವಾಡಿದನುರವಣಿಸಿ ಧೂಳಿಗೋಟೆಯಂಕೊಂಡನಾ ರಘುವೀರಂ॥೭॥


ಪ್ರತಿಪದಾರ್ಥ :- ಆ ರಘುವೀರನು= ಆ ರಘುವಂಶದಲ್ಲಿ ಶೂರನಾದ ಶ್ರೀರಾಮಚಂದ್ರನು, ಗಣನೆಯಿಲ್ಲದ= ಅಸಂಖ್ಯವಾದ

ಕಪಿಗಳಂ= ವಾನರರನ್ನು, ಕೂಡಿಕೊಂಡು= ಸೇರಿಸಿಕೊಂಡು (ಜೊತೆಮಾಡಿಕೊಂಡು) ತೆಂಕಣ= ದಕ್ಷಿಣ ದಿಕ್ಕಿನ, ಕಡಲ= ಸಮುದ್ರದ, ತೀರದೊಳು= ದಡದಲ್ಲಿ, ಬಿಟ್ಟು = ಬಿಟ್ಟುಕೊಂಡು, ಬಂದಡೆ=ಬರಲಾಗಿ, ಎಂದರೆ ತನ್ನ ಅನುಜನಾದ ರಾವಣನೊಡನೆ ಜಗಳವಾಡಿ ಬರಲು, ವಿಭೀಷಣನಂ= ವಿಭೀಷಣನನ್ನು, ಪರಿಗ್ರಹಿಸಿ= ಬಳಿಗೆ ಬರಮಾಡಿಕೊಂಡು, ಲಂಕಾಧಾಪತ್ಯಮಂ = ಲಂಕಾಪಟ್ಟಣದ ರಾಜಪದವಿಯನ್ನು, ಕೊಟ್ಟು =ಕೊಟ್ಟವನಾಗಿ,ಜಲಧಿಯನು= ಕಡಲನ್ನು, ಕಟ್ಟಿ= ಸೇತುವೆಯನ್ನು ರಚಿಸಿ, ರಣದೊಳು= ಕಾಳಗದಲ್ಲಿ, ಅಸುರಕುಲದ= ದಾನವರ ಸಮೂಹದ,ಹೆಸರು= ನಾಮವು, ಉಳಿಯದಂತೆ= ತೆರನಿಲ್ಲದ ರೀತಿಯಿಂದ,ರಾವಣ= ರಾವಣನು, ಕುಂಭಕರ್ಣ = ಕುಂಭಕರ್ಣನು, ಮೊದಲಾದ = ಆದಿಯಾದ, ರಕ್ಕಸರಂ=ದೈತ್ಯವೀರರನ್ನು,ಉರೆ= ಅತ್ಯಧಿಕವಾಗಿ, ಹಣಿದವಾಡಿದನು= ಕೊಂದವನಾದನು, ಉರವಣಿಸಿ=

ರೋಷಗೊಂಡು, ಧೂಳಿಗೋಟೆಯಂಕೊಂಡನು= ಪೂರ್ತಿಯಾಗಿ ನಾಶಮಾಡಿದನು(ಧೂಳಿಯಾಗುವಂತೆ ಮಾಡಿದನು)


ಅ॥ವಿ॥ ಜಲ=ನೀರು, ಧಿ=ನಿಲ್ಲುವ ಸ್ಥಳ, ಅಸುರರ+ಕುಲ= ಅಸುರಕುಲ(ಷ. ತ.) ಆಂಜನ= ಆನೆ, ಅಂಜನ= ಪರ್ವತ, ಅಂಜನಾದೇವಿ,ರಾವಣನೂ+ಕುಂಭಕರ್ಣನೂ= ರಾವಣಕುಭಕರ್ಣರ್(ದ್ವಿ. ದ್ವಂ. ಸ),ಆವನು+ ರಘುವೀರ= ಆ ರಘುವೀರನು. 


ತಾತ್ಪರ್ಯ:- ರಘುವೀರನು ಅಸಂಖ್ಯಾತ ವಾನರರನ್ನು ಕೂಡಿಸಿಕೊಂಡು ದಕ್ಷಿಣ ಸಮುದ್ರದ ತೀರದಲ್ಲಿ ಸೇರಿಕೊಂಡು, ರಾವಣನೊಡನೆ ವ್ಯಾಜ್ಯಮಾಡಿಕೊಂಡು ಶ್ರೀರಾಮನ ಬಳಿಗೆ ಬಂದ ವಿಭೀಷಣನನ್ನು ಪರಿಗ್ರಹಿಸಿ,  ಲಂಕಾಧಿಪತ್ಯವನ್ನು ವಿಭೀಷಣನಿಗೆ ದಯಪಾಲಿಸಿ, ಸಮುದ್ರಕ್ಕೆ ಸೇತುಬಂಧನ ಮಾಡಿ,ರಾವಣನೊಂದಿಗೆ ವೀರಾದಿವೀರರನ್ನು ಸಂಹರಿಸಿ, 

ರಾಕ್ಷಸ ಕುಲವನ್ನೆಲ್ಲ ನಾಶಮಾಡಿ, ಕೋಟೆಕೊತ್ತಳಾದಿಗಳನ್ನು ನಾಶಮಾಡಿದನು


ರಾವಣನ ಪದಮಂ ವಿಭೀಷಣಂಗೊಲಿದಿತ್ತು। 

ದೇವರ್ಕಳಂ ಪೊರೆದು ಸೆರೆಯಿರ್ದ ಸೀತೆಯಂ। 

ಪಾವಕನ ಮುಖದಿಂ ಪರಿಗ್ರಹಿಸಿ ಮೂಜಗಂ ಮೆಚ್ಚೆ ವಿಜಯೋತ್ಸವದೊಳು॥ 

ಭೂವರಂ ಸೌಮಿತ್ರಿ ದಶಮುಖಾವರಜ ಸು। 

ಗ್ರೀವಾದಿಗಳ ಗಡಣದಿಂದಯೋಧ್ಯಾಪುರಿಗೆ

ದೂವಾಳಿಸಿದನಮಲ ಮಣಿಪುಷ್ಪಕದ ಮೇಲೆ ಭರತನಂ ಪಾಲಿಸಲ್ಕೆ॥೮॥ 


ಪ್ರತಿಪದಾರ್ಥ :- ರಾಮಂ= ಶ್ರೀರಾಮಚಂದ್ರನು ರಾವಣ=ರಾವಣಾಸುರನ, ಪದಮಂ= ಪದವಿಯನ್ನು,(ದೊರೆತನವನ್ನು)

ವಿಭೀಷಣಂಗೆ= ರಾವಣನ ತಮ್ಮನಾದ ವಿಭೀಷಣನಿಗೆ, ಒಲಿದು= ಮನವೊಪ್ಪಿ,(ಸಂತೋಷಪಟ್ಟು) ಇತ್ತು= ಕೊಟ್ಟು, ದೇವರ್ಕಳಂ = ದೇವತೆಗಳನ್ನು,ಪೊರೆದು= ರಕ್ಷಿಸಿ, ಸೆರೆಯಿರ್ದ= ನಿರ್ಬಂಧದಲ್ಲಿದ್ದ,ಸೀತೆಯಂ=ಜಾನಕಿಯನ್ನು, ಪಾವಕನ ಮುಖದಿಂದ = ಬೆಂಕಿಯ ಮುಖದಿಂದ, (ಎಂದರೆ ಅಗ್ನಿ ಪ್ರವೇಶ ಮಾಡಿದ್ದರ ದೆಸೆಯಿಂದ) ಪರಿಗ್ರಹಿಸಿ= ಸ್ವೀಕರಿಸಿ, ಮೂಜಗಂ= ಮೂರು ಲೋಕದ ಜನರೂ, ಮೆಚ್ಚೆ= ಒಪ್ಪುವಹಾಗೆ, ವಿಜಯೋತ್ಸವದೊಳು= ಜಯೋತ್ಸವದಿಂದ, ಭೂವರಂ= ಶ್ರೀರಾಮನು, ಸೌಮಿತ್ರಿ= ಲಕ್ಷ್ಮಣನು,ದಶವದನನ= ರಾವಣನ, ಅನುಜ= ಸಹೋದರನಾದ ವಿಭೀಷಣನ,ಸ ಸುಗ್ರೀವ= ಸುಗ್ರೀವನೇ, ಆದಿಗಳ= ಮೊದಲಾದವರ, ಗಡಣದಿಂದ= ಗುಂಪಿನಿಂದ, ಭರತನಂ= ಅನುಜನಾದ ಭರತನನ್ನು, ಪಾಲಿಸಲ್ಕೆ= ಸಲಹಲ್ಕೆ, ಅಮಲ=ನಿರ್ಮಲವಾದ,ಮಣಿ=ರತ್ನಖಚಿತವಾದ,ಪುಷ್ಪಕದ ಮೇಲೆ= ವಿಮಾನದಲ್ಲಿ, ಅಯೋಧ್ಯಾಪುರಿಗೆ= ಅಯೋಧ್ಯಾಪಟ್ಟಣಕ್ಕೆ, ದೂವಾಳಿಸಿದನು= ದಯಮಾಡಿಸಿದನು( ಬಿಜಯಮಾಡಿದನ) 


ಅ॥ವಿ॥ ಮಲವಿಲ್ಲದ್ದು=ಅಮಲ, ಮಣಿ=ರತ್ನ, ನಮಸ್ಕಾರಮಾಡುವುದು, ಪಾವನ=ಪರಿಶುದ್ಧವಾದ, ಪಾವಕ=ಅಗ್ನಿ, ಪತಿ=ಗಂಡ, ಪತ್ನಿ= ಹೆಂಡತಿ,ವಿಜಯ+ಉತ್ಸವ=ವಿಜಯೋತ್ಸವ( ಗುಣ. ಸಂ. ) ವಿಜಯ=ಸಂವತ್ಸರ, ಅರ್ಜುನ, ಜಯವನ್ನ ಹೊಂದುವುದು. 


ತಾತ್ಪರ್ಯ:- ಅನಂತರದಲ್ಲಿ ಶ್ರೀರಾಮಚಂದ್ರನು, ರಾವಣನ ಪದವಿಯನ್ನು ಎಂದರೆ ಲಂಕಾರಾಜ್ಯಾಧಿಪತ್ಯವನ್ನು ವಿಭೀಷಣನಿಗೆ ಆದರಪೂರೂವಕವಾಗಿ ಕೊಟ್ಟು, ದೇವತೆಗಳನ್ನು ಸಲಹಿ,ರಾವಣಾಸುರನ ಸೆರೆಯಲ್ಲಿದ್ದ ಜಾನಕಿಯನ್ನು ಅಗ್ನಿಪ್ರವೇಶಮಾಡಿಸಿ, ಪರಿಗ್ರಹಿಸಿ ಮೂರುಲೋಕಗಳು ಮೆಚ್ಚುವಂತೆ ವಿಜಯೋತ್ಸವದಿಂದ ಹರ್ಷಿತನಾಗಿ, ಭೂವರನಾದ ರಾಮನು ಸೌಮಿತ್ರಿ, ವಿಭೀಷಣ,ಸುಗ್ರೀವ,ಜಾಂಬವಾದಿಗಳ ಸಮುದಾಯದಿಂದ ಹಿಂತಿರುಗಿ ಭರತನನ್ನು ತಾನು ಹೇಳಿದ್ದ ಮಾತಿನ ಪ್ರಕಾರ ಸಲಹುವ ಸಲುವಾಗಿ ದೋಷರಹಿತವಾದ ನವರತ್ನಾದಿಗಳಿಂದ ಕೆತ್ತಲ್ಪಟ್ಟಿದ್ದ ಪುಷ್ಪಕದಲ್ಲಿಕುಳಿತು,ಅತಿ ವೈಭವದಿಂದ ಅಯೋಧ್ಯಾಪಟ್ಟಣಕ್ಕೆ ಬಿಜಯಮಾಡಿದನು.


ವರಪುಷ್ಪಕವನಿಳಿದು ಭರತಶತ್ರುಘ್ನರಂ।

ಕರುಣದಿಂ ತೆಗೆದಪ್ಪಿ ಕೌಶಿಕವಸಿಷ್ಟಾದಿ। 

ಗುರುಗಳಂ ಸತ್ಕರಿಸಿ ಕೈಕೆಮೊದಲಾಗಿರ್ದ ಮಾತೃಜನಕೈದೆ ನಮಿಸಿ॥ 

ಅರಮನೆಯ ಸತಿಯರಂ ಸಚಿವರಂ ಪ್ರಜೆಗಳಂ। 

ಪರಿಜನಪ್ರಕೃತಿಗಳನಿರದೆ ಕಾಣಿಸಿಕೊಂಡು। 

ಬರವನೇ ಹಾರೈಸಿ ಕೃಶೆಯಾದ ಕೌಸಲೆಗೆ ರಾಮನಭಿವಂದಿಸಿದನು॥೯॥ 


ಪ್ರತಿಪದಾರ್ಥ :- ರಾಮಂ=ಶ್ರೀರಾಮನು, ವರ= ಶ್ರೇಷ್ಟವಾದ, ಪುಷ್ಪಕವನು= ವಿಮಾನವನ್ನು, ಇಳಿದು= ಇಳಿದವನಾಗಿ, ಭರತಶತ್ರುಘ್ನರಂ= ಅನುಜರಾದ ಭರತ ಶತ್ರುಘ್ನರನ್ನು, ಕರುಣದಿಂ= ವಿಶ್ವಾಸದಿಂದ, ತೆಗೆದಪ್ಪಿ= ಆಲಿಂಗನ ಮಾಡಿ, ಕೌಶಿಕ =ವಿಶ್ವಮಿತ್ರನು, ವಶಿಷ್ಟ=ವಶಿಷ್ಟನು, ಆದಿ= ಮೊದಲ್ಗೊಂಡು, ಗುರುಜನರಂ= ಗುರುಶ್ರೇಷ್ಠರನ್ನು, ಸತ್ಕರಿಸಿ= ಸೇವಿಸಿ, (ಸಾಷ್ಟಾಂಗಪ್ರಣಾಮಾದಿಗಳಿಂದ ಸೇವಿಸಿ) ಕೈಕೆಮೊದಲಾಗಿರ್ದ = ಕೈಕೇಯಿಯೇ ಮೊದಲಾದ, ಮಾತೃಜನಕೆ= ತಾಯಂದಿ-

ರಿಗೆ, ಐದೆ= ಅಧಿಕವಾಗಿ, ನಮಿಸಿ=ವಂದಿಸಿ, ಅರಮನೆಯ ಸತಿಯರಂ= ರಾಣಿವಾಸದ ಸ್ತ್ರೀಯರನ್ನು, ಸಚಿವರಂ= ಮಂತ್ರಿಶ್ರೇಷ್ಠರನ್ನು, ಪ್ರಜೆಗಳಂ= ನಗರಿಗರನ್ನು, ಪರಿಜನಪ್ರಕೃತಿಗಳಂ=ಪರಿಚಾರಕ ಜನಗಳನ್ನು, ಇರದೆ= ತಡಮಾಡದೆ, ಕಾಣಿಸಿಕೊಂಡು= ನೋಡಿದವನಾಗಿ, ಬರವನೇ= ಆಗಮನವನ್ನೇ, ಹಾರೈಸಿ= ಅಪೇಕ್ಷಿಸಿ, ಕೃಶೆಯಾದ= ಬಡವಾದ, ಕೌಸಲ್ಯೆಗೆ= ಕೌಸಲ್ಯಾದೇವಿಗೆ,ಅಭಿವಂದಿಸಿದನು= ಸಾಷ್ಟಾಂಗ ನಮಸ್ಕಾರವನ್ನು ಮಾಡಿದನು.


 ಅ॥ವಿ॥ ಕುಶಿಕವಂಶೋತ್ಪನ್ನ=ಕೌಶಿಕ, ಗುರು=ಉಪಾಧ್ಯಾಯ, ಗುರುವರ್ಣ, ಬೃಹಸ್ಪತಿ,ದೊಡ್ಡದು. ಪ್ರಕೃತಿ= ಸ್ವಭಾವ, ಮೂಲಪ್ರಕೃತಿ,ಕಾರಣ. 


ತಾತ್ಪರ್ಯ:-ಬಳಿಕ ರಾಮಚಂದ್ರನು ಪುಷ್ಪಕವನ್ನಿಳಿದು, ಸಹೋದರರಾದ ಭರತ ಶತೃಘ್ನರನ್ನು ಕರುಣದಿಂದ ಆಲಿಂಗನ ಮಾಡಿಕೊಂಡು ಕೌಶಿಕ ವಸಿಷ್ಠಾದಿ ಗುರುಗಳಾದ ಮಹರ್ಷಿಗಳಿಗೆ ಸಾಷ್ಟಾಂಗ ನಮಸ್ಕಾರ ಪೂರ್ವಕವಾಗಿ ಸತ್ರಕರಿಸಿ, ಕೈಕಂಯಿ ಮೊದಲಾದ ಮಾತೃವರ್ಗದವರಿಗೆ ಆದರ ಪುರಸ್ಸರವಾಗಿ ನಮಸ್ಕಾರಗಳನ್ನು ಮಾಡಿ, ಅರಮನೆಯ ಸತಿಯರನ್ನು ಮಂತ್ರಿ ಸಚಿವಾದಿಗಳನ್ನು, ಸೇನಾಪತಿಗಳನ್ನು, ಪರಿಜನ ಪ್ರಕೃತಿಗಳನ್ನು ಆನಂದಪೂರ್ವಕವಾಗಿ ಕಾಣಿಸಿಕೊಂಡು, ಶ್ರೀರಾಮಾಗಮನವನ್ನೇ ಹಾರೈಸಿಕೊಂಡಿದ್ದ, ಕೃಶಾಂಗಿಯಾದ ಕೌಸಲ್ಯಾದೇವಿಗೆ ಅಭಿವಂದಿಸಿದನು. 


ಕಯ್ದಳದೊಳೊಯ್ಯನೊಯ್ಯನೆ ಘನಸ್ನೇಹದಿ। 

ಮೆಯ್ದಡವಿ ತನಯನಂ ತಕ್ಕೈಸಿ ಮುಂಡಾಡಿ।

ಕಯ್ದುಗಳ ಗಾಯಮಂ ಕಂಡು ಕರಗುತೆ ಮಗನೆ ನಿನ್ನ ಕೋಮಲತನುವನು॥ 

ಪೊಯ್ದವರದಾರಕಟ ಬೆಂದುದೆನ್ನೊಡಲೆಂದು। 

ಸುಯ್ದು ಮುಗ್ಧಾಭಾವದಿಂ ತನ್ನ ಸವತಿಯಂ। 

ಬಯ್ದು ಮರುಗುವ ಮಾತೆಯಂ ನೋಡಿ ನಗುತೆ ಸಂತೈಸಿದಂ ರಾವಣಾರಿ॥೧೦॥ 


ಪ್ರತಿಪದಾರ್ಥ :- ರಾವಣಾರಿ= ರಾವಣನ ಹಗೆಯಾದ ಶ್ರೀರಾಮನು, ಕೈದಳದೊಳು= ಅಂಗೈಯಿಂದ, ಒಯ್ಯನೊಯ್ಯನೆ= ಮೆಲ್ಲಮೆಲ್ಲಗೆ(ಅತ್ಯಂತ ಮೆತ್ತಗೆ) ತಕ್ಕೈಸಿ= ಮೇಲಕ್ಕೆ ಎಬ್ಬಿಸಿ, ಘನಸ್ನೇಹದಿಂ= ಅತ್ಯಂತ ಸಂತೋಷದಿಂದ, ಮೈದಡವಿ= ಶರೀರವನ್ನು ಸವರಿ, ಮಗನ= ಪುತ್ರನಾದ ಶ್ರೀರಾಮನನ್ನು, ಮುಂಡಾಡಿ= ಮುದ್ದಾಡಿ, ಕೈದುಗಳ= ಆಯುಧಗಳಿಂದಾದ, ಗಾಯಮಂ= ಹುಣ್ಣನ್ನು, ಕಂಡು=ಈಕ್ಷಿಸಿ, ಕರಗುತ= ವ್ಯಥೆಪಡುತ್ತ, ಮಗನೆ= ಎಲೈ ತನುಜನೆ, ನಿನ್ನ=ನಿನ್ನಯ, ಕೋಮಲತನುವನು= ಮೃದುವಾದ ಶರೀರವನ್ನು, ಪೊಯ್ದವರು= ಹೊಡೆದಂಥವರು, ಅದಾರು= ಯಾರು,ಅಕಟ= ಅಯ್ಯೊ, ಎನ್ನೊಡಲು= ನನ್ನ ಹೊಟ್ಟೆಯು, ಬೆಂದುದು= ಸುಟ್ಟುಹೋಯಿತು, ಎಂದು=ಎಂಬುದಾಗಿ, ಸುಯ್ದು= ನಿಟ್ಟುಸಿರುಬಿಟ್ಟು, ಮುಗ್ದಾಭಾವದಿಂ= ಅಜ್ಞಾನಿಗಳಾದ ಹೆಂಗಸರಹಾಗೆ,ಸವತಿಯಂ= ಸಪತ್ನಿಯಾದ ಕೈಕೆಯನ್ನು, ಬೈದು=

ದೂಷಿಸಿ, ಮರುಗುವ= ವ್ಯಥೆಪಡುತ್ತಿರುವ,ಮಾತೆಯಂ= ತಾಯಿಯನ್ನು, ನೋಡಿ=ಈಕ್ಷಿಸಿ, ನಗುತ=ನಗುತ್ತ, ಸಂತೈಸಿದಂ= ಸಮಾಧಾನಪಡಿಸಿದನು. 


ಅ॥ವಿ॥ ಅರಿ=ಶತ್ರು, ತಿಳಿ, ಕೈಯ+ತಳ= ಕೈದಳ (ಷ. ತ. ಸ. )ಮೈಯಂ+ತಡವಿ= ಮೈದಡವಿ(ಕ್ರಿಯಾ. ಸ.ಮತ್ತು ದ ಕಾರ ಆದೇಶ.ಸಂ) ಮುಗ್ಧ(ತ್ಸ) ಮುಗುದ(ತ್ಭ) ,ಸಪತ್ನಿ (ತ್ಸ) ಸವತಿ (ತ್ಭ) 


ತಾತ್ಪರ್ಯ:- ಆಗ ರಾವಣಾರಿಯಾದ ಶ್ರೀರಾಮನು, ಕೈಗಳಿಂದ ಒಯ್ಯನೊಯ್ಯನೆ ತಕ್ಕೈಸಿ, ಅತಿ ಪ್ರೀತಿಯಿಂದ ಮೈದಡವಿ ತನ್ನ ಪ್ರಿಯ ಪುತ್ರನನ್ನು ಮುದ್ದಾಡಿ ಕೈದುಗಳಿಂದಾದ ಗಾಯಗಳನ್ನು ನೋಡಿ ವ್ಯಥೆಪಡುತ್ತ, ಅತಿಯಾಗಿ ಕರಗಿದವಳಾಗಿ, ಮಗುವೆ! ನಿನ್ನಯ ಕೋಮಲ ಶರೀರದಲ್ಲಿ ಪೊಯ್ದವರಾರು, ಅಕಟ ಎನ್ನೊಡಲು ಬೆಂದು ಪೋಪುದು ಎಂದು ನಿಡುಸುಯ್ದು 

ಮುಗ್ಧಭಾವದಿಂದ ಸವತಿಯಾದ ಕೈಕೆಯನ್ನು ನಿಂದಿಸಿ ಶೋಕಿಸುತ್ತಿರುವ ತಾಯಿಯನ್ನು ನೋಡಿ ನಗುತ್ತ ಸಂತೈಸಿದನು. 


ಮೇಲೆ ತಾಳ್ದಂ ಶುಭಮುಹೂರ್ತದೊಳ್ ವಾರಿನಿಧಿ। 

ವೇಲೆಯಾದವನಿಯಂ ಪಟ್ಟಾಭಿಷೇಚನದ। 

ಕಾಲದೊಳ್ ಕಂಡರು ಸಮಸ್ತಮುನಿ ಗೀರ್ವಾಣ ವಾನರ ದನುಜ ಮನುಜರು॥ 

ಮೂಲೋಕಮೈದೆ ಕೊಂಡಾಡೆ ಬಳಿಕುರ್ವಿಯಂ।

ಪಾಲಿಸುತಿರ್ನೊಂಬತ್ತು ಸಿಸಿರ್ವರ್ಷ। 

ಮೋಲೈಸಿದುದು ರಾಘವೇಂದ್ರನಂ ನಿಖಿಳ ಭೂಪತಿಚಯಂ ಪ್ರೀತಿಯಿಂದೆ॥೧೧॥ 


ದಪ್ರತಿಪದಾರ್ಥ :- ರಾಮಂ= ಶ್ರೀರಾಮನು, ಮೇಲೆ= ಅನಂತರದಲ್ಲಿ, ವಾರಿನಿಧಿ= ನಾಲ್ಕು ಸಮುದ್ರಗಳೆ, ಮೇರೆಯಾದ= ಸರಹದ್ದಾಗುಳ್ಳ, ಅವನಿಯಂ= ಪೃಥ್ವಿಯನ್ನು, ಶುಭ= ಶುಭಕರವಾದ, ಮುಹೂರ್ತದೊಳ್= ಮುಹೂರ್ತದೊಳಗೆ, ತಾಳ್ದಂ=

ಧರಿಸಿದನು, ಅಂದು= ಆ ಸಮಯದಲ್ಲಿ, ಸಮಸ್ತ= ಎಲ್ಲಾ, ಮುನಿ= ಕಶ್ಯಪಾದಿ ಸಪ್ತ ಋಷಿಗಳು, ಗೀರ್ವಾಣ= ದೇವಾದಿ-

ದೇವತೆಗಳು, ನರ= ಮನುಜರು, ನಾಗ= ನಾಗರು, ದನುಜರು= ದಾನವರಾದ ವಿಭೀಷಣನೇ ಮೊದಲಾದವರು, ಪಟ್ಟಾಭಿಷೇಚನದ= ಪಟ್ಟಾಭಿಷೇಕೋತ್ಸವ ಕಾಲದ, ಕಾಲದೊಳ್= ಸಮಯದಲ್ಲಿ, ಕಂಡರು= ನೋಡಿದರು, ಮೂಲೋಕಂ= ಮೂಲೋಕದ ಜನರು, ಐದೆ= ಬಂದು, ಕೊಂಡಾಡೆ= ಸ್ತುತಿಸುತ್ತಿರಲಾಗಿ,ಬಳಿಕ =ತರುವಾಯ, ಒಂಬತ್ತು ಸಾವಿರವರುಷಂ= ಒಂಬತ್ತು ಸಾವಿರ ವರ್ಷಗಳವರೆಗೂ, ಉರ್ವಿಯಂ= ಭೂಮಂಡಲವನ್ನು, ಪಾಲಿಸುತಿರ್ದಂ= ಪರಿಪಾಲನೆ ಮಾಡುತ್ತಿದ್ದನು, ನಿಖಿಲ= ಸಮಸ್ತ, ಭೂಭುಜಚಯಂ= ಭೂಪಾಲಕರಾದ ಸಾಮಂತ ರಾಜಸಮುದಾಯವು, ರಾಘವೇಂದ್ರನಂ= ಶ್ರೀರಾಮಚಂದ್ರಮೂರ್ತಿಯನ್ನು,ಪ್ರೀತಿಯಿಂದ = ವಿಶ್ವಾಸದಿಂದ, ಓಲೈಸಿದುದು= ಸೇವಿಸುತ್ತಿದ್ದರು.


ಅ॥ವಿ॥ ಮೂರಾದ ಲೋಕಗಳ ಸಮುದಾಯ=ಮೂಲೋಕ, ಸಮಾಹಾರ, (ದ್ವಿಗು.ಸ.) ಸಪ್ತ ಋಷಿಗಳು=ಕಶ್ಯಪ, ಅತ್ರಿ, ಭರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ, ವಸಿಷ್ಠ, ಸಪ್ತ ಶರಧಿಗಳು= ಲವಣ, ಇಕ್ಷು, ಸುರಾ, ಸರೂಪಿ, ದಧಿ, ಕ್ಷೀರ,ಜಲ.

ಮೂಲೋಕ= ಸ್ವರ್ಗ,  ಮರ್ತ್ಯ, ಪಾತಾಳ. 


ತಾತ್ಪರ್ಯ:- ಆ ಬಳಿಕ ಶ್ರೀರಾಮನು ನಾಲ್ಕು ಸಮುದ್ರಗಳೇ ಎಲ್ಲೆಯಾಗುಳ್ಳ ಪೃಥ್ವಿಯನ್ನು ಶುಭಮುಹೂರ್ತದಲ್ಲಿ ರಾಜ್ಯಧುರಂಧರನಾದನು(ಹೊಂದಿದವನಾದನು) ಆ ವೇಳೆಯಲ್ಲಿ ಸಕಲ ತಪೋನಿಧಿಗಳಾದ ಮುನಿವರ್ಯರು,ದೇವತೆಗಳು,

ಭೂಲೋಕದ ಮನುಜರು, ನಾಗಲೋಕದ ನಾಗಗಳು, ವಿಭೀಷಣಾದಿ ದಾನವರು,ಶ್ರೀರಾಮಚಂದ್ರನ ಪಟ್ಟಾಭಿಷೇಕ ಮಹೋತ್ಸವಕಾಲದಲ್ಲಿ ದರ್ಶನವಂ ಮಾಡಿಕೊಂಡರು. ಮೂರು ಲೋಕದ ಜನರೂ ಬಂದು ಕೊಂಡಾಡಿದರು. ಅನಂತರದಲ್ಲಿ ಒಂಬತ್ತು ಸಾಸಿರ ವರ್ಷಗಳ ಪರಿಯಂತವೂ ಏಕಚಕ್ರಾಧಿಪತಿಯಾಗಿ ಭೂಮಂಡಲವನ್ನೆಲ್ಲ ಪರಿಪಾಲಿಸುತ್ತಿ-

ದ್ದನು .ಸಕಲರಾದ ಸಾಮಂತರಾಜಮಂಡಲಿಯೆಲ್ಲವೂ ರಾಘವೇಂದ್ರನನ್ನು ಅತ್ಯಾದರದಿಂದ ಓಲೈಸುತ್ತಿತ್ತು.


ಯೂಪಮಯವಾಯ್ತು ಧರೆಯೆಲ್ಲಮುಂ ವರಜಾತ। 

ರೂಪಮಯವಾಯ್ತು ಮನೆಯೆಲ್ಲಮುಂ ಶುಕಪಿಕಾ। 

ಲಾಪಮಯವಾಯ್ತುವನವೆಲ್ಲಮುಂ ವರ್ಧಿಪ ಪ್ರಜೆಗಳಿಂ ಸಂಟರಿಸುವ॥ 

ಗೋಪಮಯವಾಯ್ತು ಗಿರಿಯೆಲ್ಲಮುಂ ರತ್ನಪ್ರ। 

ದೀಪಮಯವಾಯ್ತು ತಮಮೆಲ್ಲಮುಂ ರಘುಜಪ್ರ। 

ತಾಪಮಯಮಾಯ್ತು ಮೂಜಗಮೆಲ್ಲಮುಂ ದಾಶರಥಿ ರಾಜ್ಯಮಂ ಪಾಲಿಸೆ॥೧೨॥ 


ಪ್ರತಿಪದಾರ್ಥ :- ದಾಶರಥಿ= ದಶರಥಾತ್ಮಜನಾದ ಶ್ರೀರಾಮನು, ರಾಜ್ಯಮಂ=ಭೂಮಂಡಲವನ್ನು, ಪಾಲಿಸೆ= ಪರಿಪಾಲಿಸುತ್ತಿರುವಾಗ,ಧರೆಯೆಲ್ಲಮುಂ= ಭೂಮಂಡಲವೆಲ್ಲವೂ, ಯೂಪಮಯಂ ಆಯ್ತು= ಸರ್ವಕಡೆಗಳಲ್ಲೂ ಯಜ್ಞಸ್ತಂಭಗಳಾದವು,ಎಂದರೆ ಬಹುವಾಗಿ ಯಜ್ಞಾದಿಗಳುಪಕ್ರಮವಾದವು,ಮನೆಯೆಲ್ಲಮುಂ= ಸಕಲ ಪ್ರಜೆಗಳ 

ಮನೆಯೆಲ್ಲವೂ, ವರ=ಶ್ರೇಷ್ಠವಾದ, ಜಾತರೂಪಮಯಂ= ಸುವರ್ಣದಿಂದ ತುಂಬಿದಂಥಾದ್ದು,ಆಯ್ತು=ಉಂಟಾಯಿತು, 

ವನಮೆಲ್ಲಮುಂ=ವನಪ್ರದೇಶಾದಿಗಳೆಲ್ಲವೂ, ಶುಕ= ಪಂಡಿತಪಕ್ಷಿಗಳ(ಕೀರಗಳ) ಪಿಕ= ಪರಪುಟ್ಟಗಳ(ಕೋಕಿಲಗಳ) ಕಲಾಪಿ= ನವಿಲುಗಳ,ಮಯಂ ಆಯ್ತು=ಇವುಗಳಿಂದ ತುಂಬಿತು,ಅಥವಾ ಗಿಣಿ, ಕೋಗಿಲೆ,ಇವುಗಳ ಮಧುರಧ್ವನಿಯಿಂದ ತುಂಬಿತ್ತು ಎಂಬ ಭಾವವು, ವರ್ಧಿಪ= ಅಭಿವೃದ್ಧಿ ಹೊಂದುತಲಿರ್ಪ, ಪ್ರಜೆಗಳುಂ= ಜನರೂ, ಎಂದರೆ ಏಳ್ಗೆ ಹೊಂದುತ-

ಲಿರುವ ಭೂಮಂಡಲವೂ, ಗಿರಿಯಲ್ಲಮುಂ= ಪರ್ವತಗಳೆಲ್ಲವೂ,ಸಂಚರಿಸುವ=ಸಂಚಾರಮಾಡುವ,ಗೋಪಮಯಂ ಆಯ್ತು= ಗೋಪಾಲಕರಿಂದ ತುಂಬಿತು, ತಮಮೆಲ್ಲಮುಂ= ಅಂಧಕಾರವೆಲ್ಲವೂ, ರತ್ನಪ್ರದೀಪಮಯಂ ಆಯ್ತು= 

ರತ್ನಮಣಿಗಳ ಕಾಂತಿಯೆಂಬ ದೀವಿಗೆಗಳಿಂದ ವ್ಯಾಪಿಸಿತು,ಮೂಜಗಮೆಲ್ಲಮುಂ= ಮೂರು ಲೋಕಗಳೂ ಕೂಡ, ರಘುಪ್ರತಾಪ= ಶ್ರೀರಾಮಚಂದ್ರನ ಆಟೋಪದಿಂದ,  ಮಯಂ ಆಯ್ತು= ತುಂಬಿದಂತಾಯ್ತು.


ಅ॥ವಿ॥ ಶುಕ =ಗಿಣಿ, ಪಿಕ=ಕೋಗಿಲೆ, ಕಲಾಪ= ನವಿಲಗರಿ, ಅದುಳ್ಳದ್ದು ಕಲಾಪಿ, ಜಾತ= ಹುಟ್ಟಿದಂಥ, ಜಾತವೇದಸ್ಸು

=ಅಗ್ನಿ, ಜಾತರೂಪ=ಬಂಗಾರ,ಜಾತಾಪತ್ಯೆ= ಬಾಣಂತಿ,ರಾಘವ+ ಇಂದ್ರ=ರಾಘವೇಂದ್ರ (ಗುಣ. ಸಂ. )


ತಾತ್ಪರ್ಯ:- ದಶರಥರಾಮನು ರಾಜ್ಯ ಪರಿಪಾಲನೆಮಾಡುತ್ತಿರುವಾಗ, ಭೂಮಂಡಲದಲ್ಲಿಎಲ್ಲಿ ನೋಡಿದರೂ ಯಜ್ಞಕಾರ್ಯಗಳು ನಡೆಯುತ್ತಿದ್ದವು,ಸಕಲಪ್ರಜೆಗಳ ಮನೆಯಲ್ಲಿಯೂ ಚಿನ್ನ, ಬೆಳ್ಳಿ, ರತ್ನಾದಿಗಳುತುಂಬಿದ್ದವು. ಯಾರೊಬ್ಬರೂ ದೌರ್ಭಾಗ್ಯದಿಂದ ಪೀಡಿತರಾಗದೆ ಸೌಖ್ಯದಿಂದಿರುತ್ತಿದ್ದರು.ಕಾಲಕಾಲಕ್ಕೆ ಮಳೆಯಾಗುತ್ತಿದ್ದದರಿಂದ ನದಿನದಾದಿಗಳೂ, ತಟಾಕಾದಿಗಳೂ, ತುಂಬಿ ತುಳುಕುತ್ತಿದ್ದವು. ನೆಲವೆಲ್ಲವೂ ಪೈರು ಪಚ್ಚೆಗಳಿಂದ ನಳನಳಿಸುತ್ತಿದ್ದವು.ಅರಣ್ಯದ ತೋಪುಗಳಲ್ಲಿಯೂ,ಉದ್ಯಾನಗಳಲ್ಲಿಯೂ,ಶುಕ, ಪಿಕ,ಮಯೂರಾದಿಗಳ ಇಂಚರದಿಂದ 

(ಮಧುರ ಧ್ವನಿಯಿಂದ) ರಂಜಿತವಾಗಿ ರವಗೈಯುತ್ತಿದ್ದವು, ಪ್ರಜೆಗಳೆಲ್ಲರೂ ಆಧ್ಯಾತ್ಮಿಕ, ಆಧಿದೈವಿಕ, ಆದಿಭೌತಿಕ, ತಾಪತ್ರಯಗಳಿಗೆ ಒಳಗಾಗದೆ ಸರ್ವದಾ ಸುಖಿಗಳಾಗಿರುತ್ತಿದ್ದರು. ಪಶುಜಾತಿಗಳೆಲ್ಲವೂ ಕ್ಷುದ್ರಮೃಗಗಳ ಭಯವಿಲ್ಲದೆ

ಗಿರಿಗಳಲ್ಲಿಯೂ, ವನಗಳಲ್ಲಿಯೂ,ಉದ್ಯಾನಗಳಲ್ಲಿಯೂ ನಿರ್ಭಯದಿಂದ ಸಂಚಾರಮಾಡಿಕೊಂಡು ತಮ್ಮ ಆಹಾರಪಾನೀಯಗಳನ್ನು ಹುಡುಕಿಕೊಳ್ಳುತ್ತಿದ್ದವು .ಷಡ್ರುತುಗಳು ತಮ್ಮ ಋತುಧರ್ಮಗಳನ್ನುತಪ್ಪದೇ ನಡೆಸುತ್ತಿದ್ದವು. ಆಯಾಯ ವರ್ಣಾಶ್ರಮದವರು ತಮ್ಮ ಮತಧರ್ಮಗಳನ್ನು ಬಿಡದೆ ಆಚರಿಸುತ್ತ ಹೆಚ್ಚಿಗೆಗೆ ಹೋಗದೆ, ಇದ್ದುದನ್ನು ಬಿಡದೆಯೂ ಆಚರಿಸುತ್ತಿದ್ದರು. ಬಾಲಕರ ಮುಂದೆ ವೃದ್ಧರು ಮೃತಿಹೊಂದುತ್ತಿದ್ದರೇ ಹೊರ್ತು ಈ ಕಲಿಧರ್ಮದಂತೆ ಮುದುಕರ ಮುಂದೆ ಬಾಲಕರು ಸಾಯರು,(ಅಪ್ರಾಪ್ತ ವಯಸ್ಸಿನಲ್ಲಿ ಸಾಯುತ್ತಿರಲಿಲ್ಲ) ತ್ರಿಲೋಕದವರೂ ಶೀರಾಮ- 

ನಾಮಾಮೃತವನ್ನು ಪಾನಮಾಡುತ್ತಿದ್ದರು. (ತ್ರಿಕಾಲದಲ್ಲೂ ಶ್ರೀ ಸೀತಾರಾಮ ಸ್ಮರಣೆ ಮಾಡುತ್ತಿದ್ದರು) 


ಪಣ್ಗಾಯಿ ಪೂ ತಳಿರ್ ಬೀತ ತರೈಲತೆಯಿಲ್ಲ। 

ತಣ್ಗೊಳಂ ಕರೆಕಾಲ್ಬೆಳೆಗಳಿಲ್ಲದಿಳೆಯಿಲ್ಲ। 

ಪೆಣ್ಗಂಡುಗಳೊಳೊರ್ವರುಂನಾಜಾಚಾರ ವಿರಹಿತರಾಗಿ ನಡೆವರಿಲ್ಲ॥ 

ಬಿಣ್ಗೆಚ್ಚಲಿಕ್ಕಿಕೊಡವಾಲ್ಗರೆಯದಾವಿಲ್ಲ। 

ನುಣ್ಗಾಡಿವೆತ್ತಿರದ ಪಶುಪಕ್ಷಿ ಮೃಗವಿಲ್ಲ। 

ಕಣ್ಗೊಳಿಪ ರಾಮರಾಜ್ಯದೊಳಕಾಲ ಮರಣಮಿಲ್ಲಖಿಳಜೀವಿಗಳ್ಗೆ॥೧೩॥ 


ಪ್ರತಿಪದಾರ್ಥ :-  ಕಣ್ಗೊಳಿಪ= ನೇತ್ರಾನಂದಕರಮಾದ, ರಾಮರಾಜ್ಯದೊಳು= ಶ್ರೀರಾಮಚಂದ್ರನ ರಾಜ್ಯಭಾರಕ್ರಮದಲ್ಲಿ, ಪಣ್= ಹಣ್ಣು, ಕಾಯ್=ಕಾಯಿ, ಪೂ= ಪುಷ್ಪವು,ತಳಿರ್=ಚಿಗುರು, ಇವುಗಳು,ಬೀತ=ಇಲ್ಲದಿರ್ಪ, ತರು= ಮರವು, ಲತೆ=ಬಳ್ಳಿಗಳು, ಇಲ್ಲ= ಇರಲಿಲ್ಲ, ಎಂದರೆ ಪ್ರತಿವೃಕ್ಷವು,ಪಣ್ಗಾಯಿ ಪೂತಳಿರುಗಳಿಂದ ತುಂಬಿದ್ದುವು,ತಣ್ಗೊಳ= ತಂಪಾದ ನೀರಿರುವ ಕೊಳಗಳು, ಕೆರೆ=ಕಟ್ಟೆಗಳು, ಕಾಲುವೆ= ಕುಲ್ಯಗಳು,ಇಲ್ಲದ= ಇಲ್ಲದಿರ್ಪ, ಇಳೆಯಿಲ್ಲ= ಪೃಥ್ವಿಯೇ ಇಲ್ಲ, (ಎಲ್ಲಾ ಪ್ರದೇಶಗಳಲ್ಲಿಯೂ ತಂಪಾದ ನೀರಿನ ಕೆರೆ, ಕೊಳ, ಕಾಲುವೆಗಳಿಂದ ತುಂಬಿದ್ದವು) ಪೆಣ್= ಹೆಂಗಸರು, ಗಂಡುಗಳೋಳ್=

ಗಂಡಸರುಗಳ, ಒರ್ವರುಂ=ಒಬ್ಬರಾದರೂ, ನಿಜ=ತಮ್ಮ, ಆಚಾರ= ನಡವಳಿಕೆಗಳನ್ನು,(ಸದಾಚಾರಗಳನ್ನು) ವಿರಹಿತರಾಗಿ = ತ್ಯಜಿಸಿದವರಾಗಿ,ಇಲ್ಲ=ಇರುತ್ತಿರಲಿಲ್ಲ,(ಸಕಲರೂ ಆಯಾಯ ಕುಲಪದ್ಧತಿಗೆ ಅನುಸಾರವಾಗಿ ಸದಾಚಾರಸಂಪನ್ನರಾಗಿ-

ದ್ದರು) ಬಿಣ್ಗೆಚ್ಚ್= ಬಿಳಿಯದಾದ ಕೆಚ್ಚಲನ್ನು, ಇಕ್ಕಿ= ಇಟ್ಟು,ಕೊಡವಾಲ್= ಒಂದು ಕೊಡದಷ್ಟು ಹಾಲನ್ನು, ಕರೆಯದ= ಕರೆಯದಿರತಕ್ಕ,ಆವು=ದನವು, ಇಲ್ಲ=ಇರಲಿಲ್ಲ, ಗುಣ್ಗೂಡುವೆತ್ತಿ= ಮನೋಹರವಾದ ವಾಸಸ್ಥಾನಗಳನ್ನು ಮಾಡಿಕೊಂಡು,

ಇರದ= ಇರದಿರುವ, ಪಶು, ಪಕ್ಷಿ, ಮೃಗ, ಇಲ್ಲ= ಪಶ್ವಾದಿಗಳು, ವಿಹಂಗಾದಿಗಳು,ಮತ್ತು ವನ್ಯಮೃಗಗಳೂ ಇರುತ್ತಿರಲಿಲ್ಲ, 

(ಸಕಲ ಪ್ರಾಣಿಗಳೂ ತಮತಮಗೆ ಅನುಕೂಲವಾದ ಆಶ್ರಯಗಳನ್ನೊಂದಿದ್ದವು), ಅಖಿಳ= ಎಲ್ಲಾ, ಜೀವಿಗಳ್ಗೆ= ಪ್ರಾಣಿವರ್ಗಕ್ಕೆ ಅಕಾಲದ= ಕಾಲವಲ್ಲದ, ಮರಣಂ= ಸಾವು, ಇಲ್ಲ= ಇರುತ್ತಿರಲಿಲ್ಲ, ಯಾವ ಪ್ರಾಣಿಯೇ ಆಗಲಿ ಅಕಾಲದಲ್ಲಿ ಸಾಯುತ್ತಿರಲಿಲ್ಲ,ಸಕಲ ಪ್ರಾಣಿಗಳೂದೀರ್ಘಾಯುಗಳಾಗಿದ್ದವು. 


ಅ॥ವಿ॥ ಪಣ್ಣೂ,ಕಾಯೂ,ಪೂವೂ,ತಳಿರೂ,ಇವುಗಳು= ಪಣ್ಗಾಯಿಪೂ ತಳಿರ್ (ಬಹು, ದ್ವಂ. ಸ.) ತರುವೂ ಲತೆಯೂ= ತರುಲತೆಗಳ್( ದ್ವಿ, ದ್ವಂ. ಸ. ) ತಣ್ಣಿತ್ತು+ಕೊಳ= ತಣ್ಗೊಳ(ವಿ. ಪೂ. ಕ.)ಆಚಾರದಿಂದ+ವಿರಹಿತ= ಆಚಾರವಿರಹಿತ(ತೃ.ತ.)

ಕೊಡ+ಪಾಲ್= ಕೊಡವಾಲ್( ವಕಾರಾದೇಶ ಸಂಧಿ) 


ತಾತ್ಪರ್ಯ:-ಮನೋಲ್ಲಾಸಕರವಾದ ಶ್ರೀರಾಮಚಂದ್ರನರಾಜ್ಯಭಾರಕ್ರಮದಲ್ಲಿ ವೃಕ್ಷಾದಿಗಳೆಲ್ಲವೂ ಚಿಗುರಿ,ಹೂ, ಕಾಯಿ, ಹಣ್ಣುಗಳುಳ್ಳವಾಗಿದ್ದವು.ಸರಸ್ಸು, ಪುಷ್ಕರಣಿಗಳುತಂಪಾದ ನೀರಿನಿಂದ ತುಂಬಿ ನಳಿನಾಳಿಗಳಿಂದಲೂ,ನೈದಿಲೆಗಳಿಂದಲೂ,

ತುಂಬಿ ರಂಜಿಸುತ್ತಿದ್ದವು,ಪ್ರತಿಯೊಂದು ಜೀವರಾಶಿಗಳು ಸ್ವಾಭಾವಿಕ ದ್ವೇಷವನ್ನು ಬಿಟ್ಟು ಅನ್ಯೋನ್ಯಪ್ರೀತಿಯುಳ್ಳವುಗಳಾ-

ಗಿದ್ದವು. ಪುರುಷ ಸ್ತ್ರೀಯರೆಲ್ಲರೂ, ಪರಸ್ಪರಾನುರಾಗವುಳ್ಳವರಾಗಿ ಸತ್ಕರ್ಮ ಮತ್ತು ಸ್ವಧರ್ಮಾಚರಣೆಯಲ್ಲಿರುತ್ತಿದ್ದರು.

ಹಸುಗಳೆಲ್ಲವೂ ಬಿಳಿಕೆಚ್ಚಲನ್ನಿಟ್ಟು ಒಂದೊಂದು ಕೊಡ ಹಾಲನ್ನು ಕರೆಯುತ್ತದ್ದವು. ಪಕ್ಷಿಜಾತಿಗಳೆಲ್ಲವೂ ತಮಗೆ ಅನುಕೂಲವಾದ ಗೂಡುಗಳನ್ನು ಮಾಡಿಕೊಂಡು ಸುಖದಿಂದಿರುತ್ತಿದ್ದವು.


ಕಾಳಿಂದಿ ಸುರನದಿಗೆ ಕೃಷ್ಣನಮೃತಾಬ್ಧಿಗಳ। 

ಕಾಳಿ ವಾಣಿಗೆ ಕಳಂಕಿಂದುಮಂಡಲಕೆ ವರ। 

ಕಾಳಿ ಕಾಪಾಲಿಗೆ ಮದಂ ದೇವಜಗಕೆ ನಂಜಹಿಪತಿಗೆ ತೊಡವಾಗಿರೆ॥ 

ಕಾಳಿಮದ ಕೂಟಮೆನಗೆಲ್ಲೆಂಬ ಮುಳಿಸತಿವಿ। 

ಕಾಳಿಸಲಮಳಕೀರ್ತಿಕಾಂತೆ ಪೊರಮಟ್ಟು ಲೊ। 

ಕಾಳಿಯಂ ತಿರುಗುವಳೆನಲ್ಕೆ ರಾಮನ ಯಶೋವಿಸ್ತರವನೇ ವೊಗಳ್ವೆನು॥೧೪॥ 


ಪ್ರತಿಪದಾರ್ಥ :- ಸುರನದಿಗೆ = ದೇವಗಂಗಾನದಿಗೆ,(ಜಾಹ್ನವಿಗೆ) ಕಾಳಿಂದೀ= ಯಮುನಾನದಿಯಂತೆಯೂ, ಅಮೃತಾಬ್ಧಿಗೆ= ಕ್ಷೀರಸಮೈದ್ರಕ್ಕೆ,ಕೃಷ್ಣಂ= ಕೃಷ್ಣನಂತೆಯೂ, (ಮಹಾವಿಷ್ಣುವಿನಹಾಗೂ) ವಾಣಿಗೆ= ಶಾರದಾಂಬೆಗೆ, ಅಳಕಾಳಿ=ಮುಂಗೂದಲು

(ಮುಂಗುರುಳು)ಗಳ, ಸಮೂಹದಂತೆಯೂ,ಇಂದುಮಂಡಲಕೆ= ಇಂದುವಿನ ಬಿಂಬಕ್ಕೆ( ಚಂದ್ರ ಬಿಂಬಕ್ಕೆ) ಕಳಂಕ= ದೋಷದಂತೆ,ಕಾಪಾಲಿಗೆ= ಕಪಾಲಧರನಾದ ಈಶ್ವರನಿಗೆ,ವರಕಾಳಿ= ಪಾರ್ವತೀದೇವಿಯಂತೆಯೂ, ದೇವಗಜಕೆ= ಇಂದ್ರನ ಆನೆಯಾದ ಐರಾವತಕ್ಕೆ,ಮದಂ= ಮದಜಲದಂತೆಯೂ, ಅಹಿಪತಿಗೆ= ಸರ್ಪಗಳಿಗೊಡೆಯನಾದ ಆದಿಶೇಷನಿಗೆ, ನಂಜು= ವಿಷದಂತೆಯೂ, ತೊಡವಾಗಿರೆ= ಹೊಂದಿರಲಾಗಿ, ಕಾಳಿಮದ= ಕಪ್ಪಿನ( ನೀಲಬಣ್ಣದ) ಕೂಟಂ= ಸೇರೋಣವು, (ಕೂಡುವಿಕೆಯು) ಎನಗೆ= ನನಗೆ, ಇಲ್ಲೆಂಬ= ಇಲ್ಲವೆನ್ನುವ,ಮುನಿಸು= ಸಿಟ್ಟು,(ಕೋಪಮಾಡುವುದು)ಅತಿ=ಹೆಚ್ಚಾಗಿ, ವಿಕಾಳಿಸಲು= ಪ್ರಸರಿಸಲು, ಅಮಲ= ನಿರ್ದೋಷವಾದ,ಕೀರ್ತಿ= ಯಶಸ್ಸೆಂಬ, ಕಾಂತೆ= ಹೆಂಗಸು(ತರುಣಿಯು, ಸ್ತ್ರೀಯು)

ಪೊರಮಟ್ಟು = ಹೊರಟವಳಾಗಿ, ಲೋಕಾಳಿಯಂ= ಪ್ರಪಂಚಗಳ ಸಮುದಾಯವನ್ನು, ತಿರುಗುವಳ್= ಸಂಚಾರಮಾಡು-

ವಳು, ಎನಲ್ಕೆ= ಎನ್ನುವಂತೆ, ರಾಮನ= ಶ್ರೀರಾಮಚಂದ್ರನ,  ಯಶೋವಿಸ್ತರವನು= ಕೀರ್ತಿಯ ವಿಸ್ತಾರವನ್ನು, ಏಂ= ಏನೆಂದು,ಪೊಗಳ್ವೆನು= ವರ್ಣಿಸಲಿ( ಸ್ತೋತ್ರಮಾಡಲಿ) 


ಅ॥ವಿ॥ ಕೃಷ್ಣ= ವಿಷ್ಣು, ಅರ್ಜುನ, ಕಪ್ಪು, ಮೆಣಸು. ಕೃಷ್ಣಪಕ್ಷ, ಕಲಿಯುಗ, ಪರಮಾತ್ಮ, ಕಣ್ಣಿನ ಕಪ್ಪು, ಕೋಷ್ಣಾನದಿ. ಅಮೃತ+ಅಬ್ಧಿ= ಅಮೃತಾಬ್ಧಿ(ಸ. ದೀ. ಸನ.) ವಾಣಿ=ಸರಸ್ವತಿ, ಸ್ವರ, ಭಾಷೆ, ನೆಯಿಗೆ,ಕೀರ್ತಿಯೆಂಬ+ಕಾಂತೆ= ಕೀರ್ತಿಕಾಂತೆ

(ಸಂ ಪೂ. ಕ. )


ತಾತ್ಪರ್ಯ:- ದೇವಗಂಗಾನದಿಗೆ ಕಾಳಿಂದಿಯೂ, ಅಮೃತಾಬ್ಧಿಗೆ ಶ್ರೀಕೃಷ್ಣನೂ, ಶಾರದೆಗೆ ಅಳಕಾಳಿಯೂ, ಇಂದುಮಂಡಲಕ್ಕೆ ಕಳಂಕವೂ, ಕಪಾಲಿಗೆ ವರಕಾಳಿಯೂ, ಇಂದ್ರನ ಐರಾವತಕ್ಕೆ ಮದೋದಕವೂ, ಅಹಿಪತಿಗೆ ಹಾಲಾಹಲವೂ, ತೊಡವಾಗಿ-

ರಲು, ನೀಲವರ್ಣದ ಸಂಬಂಧವು ತನಗಿಲ್ಲವೆಂಬ ಮುನಿಸು ಅತ್ಯಧಿಕಮಾಗಿ ವಿಕಾಳಿಸಲಾಗಿ ಅಮಲಕೀರ್ತಿಯೆಂಬ ಕಾಂತೆಯು ಪೊರಮಟ್ಟು, ಲೋಕಾಳಿಗಳಲ್ಲಿ ಸಂಚಾರಮಾಡುವಳೋ ಎನ್ನಲು ಶ್ರೀರಾಮನ ಯಶೋವಿಸ್ತರವನ್ನು ಏನೆಂದು ಪೊಗಳಲಿ. 


ಸರ್ವಸಂಪತ್ಸಮೃದ್ಧಿಗಳಿಂ ಸ್ವಧರ್ಮದಿಂ। 

ನಿರ್ವಿಘ್ನಮಾಗಿ ಸಕಲಪ್ರಕೃತಿ ಜಾತಿ ಚಾ। 

ತುರ್ವವರ್ಣ್ಯಮಂ ಬಿಡದೆ ಪೊರೆವಲ್ಲಿ ನೀತಿಶಾಸ್ತ್ರಂಗಳ್ಗೆ ಪಳಿವೊರಿಸದೆ॥ 

ಉರ್ವಿಯಂ ನವಸಹಸ್ರಾಬ್ದಮುರೆ ಪಾಲಿಸಿದ। 

ನುರ್ವಸಂತಾನಮಂ ಕಾಣದಿಕ್ಷ್ವಾಕು ಕುಲ। 

ನಿರ್ವಾಹಮಂ ನೆನೆದು ರಘುವರಂ ನುಡಿದನೇಕಾಂತದಿಂ ಜಾನಕಿಯೊಳು॥೧೫॥


ಪ್ರತಿಪದಾರ್ಥ :- ರಘುವರಂ=ಶ್ರೀರಾಮಚಂದ್ರಮೂರ್ತಿಯು, ಸರ್ವ=ಸಮಸ್ತ, ಸಂಪತ್= ಅಷ್ಟೈಶ್ವರ್ಯಾದಿಗಳಿಂದ, ಸಮೃದ್ಧಿಗಳಿಂ= ತುಂಬಿರುವಿಕೆಯಿಂದಲೂ, ಸ್ವಧರ್ಮದಿಂ= ತಮ್ಮ ತಮ್ಮ ಧರ್ಮಾಚಾರಗಳಿಂದಲೂ,ನಿರ್ವಿಘ್ನಮಾಗಿಯೂ=

ಯಾವುದೊಂದು ಅಡಚಣೆಯಿಲ್ಲದೆ,ಸಕಲ=ಎಲ್ಲ, ಪ್ರಕೃತಿಜಾತ= ಮೂಲಪ್ರಕೃತಿಗಳಿಂದುಂಟಾದ,(ಅನಾದಿಯಿಂದಲೂ ಬಂದ), ಚಾತುರ್ವರ್ಣ್ಯಮಂ= ವರ್ಣಾಶ್ರಮ ಧರ್ಮವನ್ನು, ಬಿಡದೆ= ತಪ್ಪದಂತೆ, ಪೊರೆವಲ್ಲಿ= ಕಾಪಾಡುತ್ತಿರಲಾಗಿ,ನೀತಿ ಶಾಸ್ತ್ರಗಳಿಗೆ= ಧರ್ಮಶಾಸ್ತ್ರಾದಿಗಳಿಗೆ,ಪಳಿವೊರಿಸದೆ= ತೊಂದರೆ ಬರದಹಾಗೆ,ಉರ್ವಿಯಂ= ಭೂಮಂಡಲವನ್ನು, ನವಸಹಸ್ರಾಬ್ದಮಂ= ಒಂಬತ್ತು ಸಾವಿರವರ್ಷಗಳ ಪರಿಯಂತ,ಪಾಲಿಸಿದನು= ಪರಿಪಾಲನೆಮಾಡಿದನು,ರಾಮಂ= ಶ್ರೀರಾಮನು, ಉರ್ವ= ಹೊಂದಿದ,ಸಂತಾನಮಂ= ವಂಶಾಭಿವೃದ್ಧಿಯನ್ನು,ಕಾಣದೆ =ನೋಡದೆ, ಎಂದರೆ ಹೊಂದದೆ, ಇಕ್ಷ್ವಾಕು = ಇಕ್ಷ್ವಾಕುರಾಯನ, ಕೈಲ=ಸಂತತಿಯ, ನಿರ್ವಾಹಮಂ= ಸ್ಥಾನವನ್ನು, ನೆನೆದು= ಸ್ಮರಿಸಿ, ಜಾನಕಿಯೊಳು= ಭೂಮಿಜೆಯಲ್ಲಿ, ಏಕಾಂತದೊಳ್= ಗುಟ್ಟಾಗಿ, ನುಡಿದಂ= ಮಾತನಾಡಿದನು. 


ಅ॥ವಿ॥ ಸಂಪತ್+ಸಮೃದ್ಧಿ= ಶ್ಚುತ್ವ ಸಂಧಿ, ಪ್ರ. ಉ. ಅಷ್ಟೈಶ್ವರ್ಯ= ದಾಸೀಜನ, ಭೃತ್ಯ,ಪುತ್ರ,ಬಂಧುವರ್ಗ,ವಸ್ತ್ರ,ವಾಹನ, ಧನ, ಧಾನ್ಯ, ಅಷ್ಟ ಭಾಗ್ಯ= ರಾಜ್ಯ, ಭಂಡಾರ, ಸೈನ್ಯ, ಆನೆ, ಕುದುರೆ, ಛತ್ರ, ಚಾಮರ,ಆಂದೋಳ, ಚಾತುರ್ವರ್ಣ್ಯ= ಬ್ರಹ್ಮ, ಕ್ಷತ್ರಿಯ, ವೈಶ್ಯ, ಶೂದ್ರ, ಚತುರ್ಯುಗ= ಕೃತ, ತ್ರೇತ, ದ್ವಾಪರ, ಕಲಿ, ಚತುರಾಶ್ರಮ= ಬ್ರಹ್ಮಚಾರಿ, ಗೃಹಸ್ತ, ವಾನಪ್ರಸ್ಥ, ಯತಿ

ಜನಕರಾಯನ ಮಗಳು=ಜಾನಕಿ


ತಾತ್ಪರ್ಯ:- ಶ್ರೀರಾಮನು ಸರ್ವಸಂಪತ್ಸಮೃದ್ಧಿಗಳಿಂದಲೂ, ಸ್ವಧರ್ಮಗಳಿಂದಲೂ, ನಿರ್ವಿಘ್ನವಾಗಿ ಸಕಲ ಜನಸಮೂಹದಲ್ಲಿ ಚಾತುರ್ವರ್ಣ್ಯವನ್ನು ಬಿಡದೆ, ರಾಜಾಯಪರಿಪಾಲನೆ ಮಾಡುತ್ತಿರಲು, ನೀತಿಶಾಸ್ತ್ರಗಳಿಗೆ ಯೃವೊಂದೂ ಕುಂದು ಬಾರದಂತೆ ಭೂಮಿಯನ್ನು ಒಂಬತ್ತು ಸಾವಿರವರ್ಷಗಳ ಪರಿಯಂತ ಪರಿಪಾಲನೆ ಮಾಡಿದನು. ಶ್ರೀರಾಮನು ಅಷ್ಟು ಕಾಲದವರಿಗೂ, ಪುತ್ರಸಂತಾನವನ್ನು ಕಾಣದೆ,ಇಕ್ಷ್ವಾಕುರಾಜನೆಂಬ ತನ್ನ ಮೂಲಪೈರುಷನ ವಂಶದ ವಿಚಾರವನ್ನು ಜ್ಞಾಪಿಸಿ ಮನದೊಳು ಚಿಂತಿಸಿದವನಾಗಿ, ಪ್ರಾಣಕಾಂತೆಯಾದ ಜಾನಕಿಯೊಡನೆ ಏಕಾಂತದಲ್ಲಿ ಹೇಳಿದನು.


ಕಾಂತೆ ಕೇಳಿಕ್ಷ್ವಾಕುವಂಶಮೆನ್ನಲ್ಲಿ ಬಂ। 

ದಾಂತುದಿಲ್ಲಿಂದೆ ಸಂತತಿ ನಡೆಯದಿರ್ದೊಡೆ ಕು। 

ಲಾಂತಕಂ ತಾನಾದಪೆಂ ಸಾಕದಂತಿರಲಿ ಮನುಜರ್ಗೆ ಸಂಸಾರದ॥ 

ಭ್ರಾಂತಿಯಂ ಬಿಡಿಸುವೊಡಪತ್ಯದೇಳ್ಗೆಗಳೆ ವಿ। 

ಶ್ರಾಂತಿಯಲ್ಲದೆ ಪೆರತದೇನುಂಟು ಮುಂದೆ ಪು। 

ತ್ರಾಂತರವನೈದದಿರ್ದಪೆನೆಂತೊ ಪೇಳೆಂದು ದಾಶರಥಿ ಬಿಸುಸುಯ್ದನು॥೧೬॥ 


ಪ್ರತಿಪದಾರ್ಥ :- ದಾಶರಥಿ= ಶ್ರೀರಾಮನು, ಕಾಂತೆ= ಎಲೆ ಲಾವಣ್ಯವತಿಯೇ! ಕೇಳು=ತಿಳಿ,ಇಕ್ಷ್ವಾಕುವಂಶಂ= ಇಕ್ಷ್ವಾಕುವಿನ ಸಂತತಿಯು,ಬಂದು= ಅನುಕ್ರಮದಿಂದ ಬಂದುದಾಗಿ,ಎನ್ನಲ್ಲಿ= ನನ್ನಲ್ಲಿ, ಆಅಂತುದು= ಸೇರಿಹೋಯಿತು, ಇಲ್ಲಿಂದ=ಎನ್ನಿಂ-

ದ,ಸಂತತಿ=ವಂಶವು, ನಡೆಯದಿರ್ದೊಡೆ= ಅಭಿವೃದ್ಧಿಯನ್ನು ಪಡೆಯದಿದ್ದಲ್ಲಿ,ಕುಲಾಂತಕಂ= ಕುಲಕ್ಕೆಮೃತ್ಯುಸ್ವರೂಪನು,

(ವಂಶನಾಶಕನು),ತಾಂ= ನಾನಾದರೋ,ಆದಪೆಂ=ಆಗುತ್ತೇನೆ,ಸಾಕು= ಆ ವಿಷಯ ಬಿಡು, ಅದಂತಿರಲಿ= ಆ ಮಾತು ಹಾಗೆಯೇ ಇರಲಿ,ಮನುಜರ್ಗೆ= ಮಾನವರಿಗೆ,ಸಂಸಾರದ= ಸಂಸ್ಕೃತಿಯ,ಭ್ರಾಂತಿ= ಕಳವಳವು, ಬಿಡಿಸವೊಡೆ= ತಪ್ಪಿಸ-

ಬೇಕಾದರೆ,ಅಪತ್ಯದ= ಮಗನ(ಹುಡುಗರ) ಏಳ್ಗೆಗಳೇ= ಹೆಚ್ಚುವಿಕೆಯೇ,(ಪ್ರವರ್ಧಮಾನವೆ) ವಿಶ್ರಾಂತಿಯು= ವಿರಾಮವು,

(ಸಂಸಾರಭ್ರಾಂತಿಯಿಂದ ಬಿಡುಗಡೆಯು) ಅಲ್ಲದೆ= ಅದು ಹೊರ್ತಾಗಿ,(ಅದು ಬಿಟ್ಟರೆ) ಪೆರತು= ಅನ್ಯವಾದುದು,ಅದು ಏಂ ಉಂಟು= ಮತ್ತೆ ಯಾವುದು ತಾನೆ ಇರುತ್ತದೆ,(ಅಪುತ್ರಸ್ಯಗತಿರ್ನಾಸ್ತಿ) ಎಂಬಂತೆ ಪುತ್ರಹೀನನಿಗೆ ಎಂದಿಗೂ ಸದ್ಗತಿಯುಂ-

ಟಾಗದು, ಪುತ್ರವಂತನು ಸಂಸಾರಭಾರವನ್ನು ತನ್ನ ಪುತ್ರನಿಗೆ ಒಪ್ಪಿಸಿ ತಾನು ವಿಶ್ರಾಂತಿಯನ್ನು ಅನುಭವಿಸಲು ವಾನಪ್ರಸ್ಥಾ-

ಶ್ರಮವನ್ನು ಹೊಂದುವನು, ಮುಂದೆ ಇನ್ನಾದರೂ ಎಂದರೆ ಇಲ್ಲಿಂದೀಚೆಗೆ, ಪುತ್ರಾಅಂತರವನು= ಪುತ್ರಸಂತಾನವನ್ನು (ಮಕ್ಕಳನ್ನು) ಐದದಿರ್ಪೆನೆ= ಹೊಂದುತ್ತೇನೆಯೊ ಇಲ್ಲವೊ, ಎಂತೋ= ಅದು ಆವರೀತಿಯಾಗುತ್ತದೆಯೊ, ಪೇಳೆಂದು = 

ಹೇಳೆಂಬುದಾಗಿ, ಬಿಸುಸುಯ್ದನು= ನಿಟ್ಟುಸಿರು ಬಿಟ್ಟನು. 


ಅ॥ವಿ॥ ಕಾಂತೆ=ಪ್ರಿಯಳು,ಹೆಂಡತಿ, ಪ್ರಿಯಂಗುವಲ್ಲಿ,ದೊಡ್ಡ ಏಲಕ್ಕಿ,ಭೂಮಿ, ಬೆಚ್ಚನೆಯ+ಸುಯ್= ಬಿಸುಸುಯ್

( ವಿ. ಪೂ. ಕ. ) 


ತಾತ್ಪರ್ಯ:- ಎಲೈ ಪ್ರಾಣಕಾಂತೆಯೇ ಕೇಳು,ಇಕ್ಷ್ವಾಕುವಂಶವು ನನ್ನಲ್ಲಿ ಬಂದು ನೆಲೆಗೊಂಡಿತು.ನನ್ನ ದೆಸೆಯಿಂದ ವಂಶಾಭಿ-

ವೃದ್ಧಿಯು ನಡೆಯದಿದ್ದರೆ ಕುಲಕ್ಕೆ ಮೃತ್ಯುಪ್ರಾಯನಾಗುತ್ತೇನೆ. ಅದು ಹಾಗಿರಲಿ ಈ ವಿಷಯ ಬೇಕಾದುದಿಲ್ಲ. ಮಾನವರಿಗೆ ಸಂಸಾರಭ್ರಾಂತಿಯನ್ನು ಹೋಗಲಾಡಿಸಬೇಕಾಗಿದ್ದ ಪಕ್ಷದಲ್ಲಿ ಪುತ್ರಸಂತಾನಾದಿ ಅಭಿವೃದ್ಧಿಗಳೇ ಹೇತುವಾಗಿರುವುದು,ಹಾಗೆ 

ಸಂತಾನಾಭಿವೃದ್ಧಿಯಾಗದಿದ್ದರೆ ಸಂಸಾರಭ್ರಾಂತಿಯನ್ನು ಬಿಡಲು ಬೇರೆಯಾದ ಮಾರ್ಗವುಂಟೆ? (ಪುನ್ನಾಮ್ನೋನರಕಾತ್ ತ್ರಾತಾ ಎಂಬ ವಾಕ್ಯವು ಸಹಜವೇ ಸರಿ)ಪುತ್ರವಂತನೇ ಪಿತೃ ಮಾತೃ ಋಣಗಳಿಂದ ವಿಮುಕ್ತನಾಗುತ್ತಾನೆ, ಆ ರೀತಿಯಾಗಿ ಎಷ್ಟುಕಾಲ ಅಪುತ್ರವಂತನಾಗಿ ಜೀವಿಸಿದ್ದರೆ ತಾನೆ ಫಲವೇನು? ಇನ್ನು ಮುಂದಾದರೂ ನಾನು ಪುತ್ರವಂತನಾಗಿಆದೇನೆಯೇ

ಅಥವಾ ಇಲ್ಲವೆ ಮತ್ತೆ ಯಾವರೀತಿ ಪರಿಣಮಿಸುತ್ತದೆಯೊ ಹೇಳೆಂಬುದಾಗಿ ದಾಶರಥಿಯು ಬಿಸುಸುಯ್ದು ಚಿಂತಿಸುತಿರ್ದನು.


ಸಂತಾನಮಂದಾರದೊಳ್ ಪಡೆದತುಳವಿಭವ। 

ಮಂ ತಳೆದು ನಂದನೋತ್ಸವದಮೃತಪಾನದ। 

ತ್ಯಂತಸೌಖ್ಯವನೈದಿ ದೇವೇಂದ್ರನಂತೆ ಸುಮ್ಮಾನಮಾಗಿರದೆ ಬರಿದೆ॥ 

ಸಂತತಂ ಜಾತರೂಪವನೆ ಕಾಣದೆ ತಾಪ। 

ದಿಂ ತೊಳಲಿ ಬಳಲುವ ದರಿದ್ರನಂದದೊಳೈದೆ । 

ಚಿಂತಿಸುವ ಸಂಸಾರಮೇಕೆ ಮಾನವಜನ್ಮಕೆಂದು ರಘುಪತಿ ನುಡಿದನು॥೧೭॥ 


ಪ್ರತಿಪದಾರ್ಥ :- ರಘುಪತಿ = ಶ್ರೀರಾಮಚಂದ್ರನು, ಸಂತೃನ= ಪುತ್ರಸಂತಾನವೆಂಬ, ಮಂದಾರದೊಳ್= ಕಲ್ಪವೃಕ್ಷದಲ್ಲಿ, ಅತುಳ= ಸಾಮ್ಯವಿಲ್ಲದ, ವೈಭವಮಂ= ವಂಶಾಭಿವೃದ್ಧಿಯೆಂಬ ವೈಭವವನ್ನು, (ಪುತ್ರಸಂತಾನವೆಂಬ ಐಶ್ವರ್ಯವನ್ನು, ) ತಳೆದು= ಪಡೆದುಕೊಂಡು, ನಂದನೋತ್ಸವದ= ಪುತ್ರನು ಉದ್ಭವಿಸಿದನೆಂದು ಆನಂದದ, ಅಮೃತದ= ಸುಧೆಯ, ಪಾನದ= ಆಸ್ವಾದನೆಯ, ಅತ್ಯಂತಸೌಖ್ಯಮಂ= ಅತಿ ಹೆಚ್ಚಾದ ಹರ್ಷವನ್ನು, ಐದಿ= ಹೊಂದಿ, ದೇವೇಂದ್ರನಂತೆ= ಇಂದ್ರನ ಹಾಗೆ,ಸು ಸುಮ್ಮಾನಮಾಗಿರದೆ = ಆನಂದವನ್ನು ಅನುಭವಿಸಿಕೊಂಡಿರದೆ,ಬರಿದೆ= ನಿರರ್ಥಕವಾಗಿ,ಜಾತರೂಪವನೇ= ಭಂಗಾರವನ್ನೇ

ಕಾಣದೆ= ನೋಡದೆ, ತಾಪದಿಂ= ಚಿಂತೆಯಿಂದ,ತೊಳಲಿ=ಸುತ್ತಿ(ಬಳಸಿ) ಬಳಲುವ= ಶ್ರಮಪಡುವ, ದರಿದ್ರನಂದದೊಳ್= ನಿರ್ಭಾಗ್ಯನ ಹಾಗೆ, ಐದೆ= ಅತಿ ಹೆಚ್ಚಾಗಿ, ಚಿಂತಿಸುವ= ಸಂತಾಪಪಡುವ, ಸಂಸಾರವು= ಸಂಸ್ಕೃತಿಯು, ಏಕೆ= ಏತಕ್ಕೆ, ಪ್ರಯೋಜನವಾದೀತು, ಆ ರೀತಿಯಾದ ಮಾನವ ಜನ್ಮವು= ಮನುಜನ ಆವಿರ್ಭಾವವು, (ಹುಟ್ಟುವಿಕೆಯು) ಏಕೆ=ಏತಕ್ಕೆ, 

ಎಂದು= ಎಂಬುದಾಗಿ, ನುಡಿದನು= ಹೇಳಿದನು. 


ಅ॥ವಿ॥ ಅಮೃತ=ಸುಧೆ, ಧನ್ವಂತರಿ, ಇಂದ್ರ, ಸೂರ್ಯ, ವಿಷ್ಣು, ಶಿವ, ಬೆಣ್ಣೆ, ಹಾಲು, ಕಾಂತಿ, ದಾರ=ಹೆಂಡತಿ, ಹರಕು, ಬಿರುಕು, ನಂದನ= ಮಗ, ಸಂವತ್ಸರ, ಇಂದ್ರನ ವನ, ನಂದನ+ಉತ್ಸವ= ನಂದನೋತ್ಸವ( ಸವರ್ಣ ದೀ, ಸಂ.) ದೇವತೆಗಳ + ಇಂದ್ರ= ದೇವೇಂದ್ರ (ಷ. ತ.) 


ತಾತ್ಪರ್ಯ:- ಸಂತಾನಾಭಿವೃದ್ಧಿಯನ್ನು ಧರ್ಮಪತ್ನಿಯಲ್ಲಿಶಪಡೆದು ಸಾಮ್ಯವಿಲ್ಲದ ಪುತ್ರ ಸಂಪತ್ತನ್ನು ತಳೆದು, ಪುತ್ರೋತ್ಸವವೆಂಬ ಅಮೃತಪಾನದ ಸೌಖ್ಯವನ್ನು ಪಡೆದು ದೇವೇಂದ್ರನಂತೆ ಸಂತೋಷದಿಂದ ಕೂಡಿರದೆ, ನಿರರ್ಥಕವಾಗಿ  ಸುವರ್ಣವನ್ನೇ ಕಾಣದೆ, ಪರಿತಾಪದಿಂದ ತೊಳಲಿ ಶ್ರಮಪಡುತ್ತಿರುವ ನಿರ್ಭಾಗ್ಯನಂದದಿ ಸಂತಾಪ ಪಡುವ ಸಂಸಾರಸಾಗರವು ಅದೇಕೆ? ಆ ರೀತಿಯಾದ ಮಾನವ ಜನ್ಮವು, ಏಕೆ ಪ್ರಯೋಜನಕ್ಕೆ ಬಂದೀತು? ಎಂದರೆ ಪುತ್ರಸಂತಾನವಿಲ್ಲದವನಿಗೆ ಎಷ್ಟು ವಿಧವಾದ ನಿಧಿ ನಿಕ್ಷೇಪಾದಿಗಳು ಇದ್ದರೂಪ್ರಯೋಜನವಿಲ್ಲವಾಗುತ್ತದೆ.(ಆಜಾಗಳ ಸ್ತನದಂತೆ ಫಲಕಾರಿಯಾಗದು ಎಂದು ಹೇಳಿದನು. 


ನೀರಿರ್ದ ಕಾಸಾರಕರವಿಂದಮಿಲ್ಲದೊಡೆ। 

ತಾರಕೆಗಳಿರ್ದ ಗಗನಕೆ ಚಂದ್ರನಿಲ್ಲದೊಡೆ। 

ಚಾರುಯೌವನಮಿರ್ದ ಪೆಣ್ಗಿನಿಯನಿಲ್ಲದೊಡೆ ಸನ್ನುತ ಪ್ರಜೆಗಳಿರ್ದ॥ 

ಧಾರಿಣಿಗೆ ಧರ್ಮದರಸಿಲ್ಲದೊಡೆ ಸಿರಿಯಿರ್ದು। 

ದಾರವಂಶಕೆ ಕುವರನಿಲ್ಲದೊಡೆ ಮೆರೆದಪುದೆ। 

ನಾರಿ ಪೇಳೆನೆ ಲಜ್ಜೆಯಿಂದ ತಲೆವಾಗಿ ನಿಜಪತಿಗೆ ಜಾನಕಿ ನುಡಿದಳು॥೧೮॥ 


ಪ್ರತಿಪದಾರ್ಥ :- ನೀರಿರ್ದ= ನೀರಿನಿಂದ ತುಂಬಿರುವ( ಜಲಾನ್ವಿತವಾದ) ಕಾಸಾರಕೆ= ಸರೋವರಕ್ಕೆ, ಅರವಿಂದ= ತಾವರೆಗಳು, ಇಲ್ಲದೊಡೆ= ಇಲ್ಲದೇ ಹೋದರೆ, ತಾರಕಿಗಳ್= ನಕ್ಷತ್ರಾದಿಗಳು, ಇರ್ದು= ಇರುವ, ಗಗನಕೆ= ಆಕಾಶಕ್ಕೆ, ಚಂದ್ರಂ= ಚಂದ್ರನು, ಇಲ್ಲದೊಡೆ= ಇಲ್ಲದಿದ್ದರೂ, ಚಾರು= ಮನೋಹರವಾದ, ಯೌವನಂ= ಹರೆಯವು, ಇರ್ದು= ಇದ್ದು, ಪೆಣ್ಗೆ= ಹೆಂಗಸಿಗೆ, ಇನಿಯನು= ವಲ್ಲಭನು, ಇಲ್ಲದೊಡೆ= ಇಲ್ಲದೇ ಹೋದರೊ, ಸನ್ನುತ= ಸ್ತೋತ್ರಾರ್ಹರಾದ, ಪ್ರಜೆಗಳ್= ಜನಗಳು, ಇರ್ದು=ಇದ್ದುಕೊಂಡು, ಧಾರುಣಿಗೆ= ಪೃಥ್ವಿಗೆ, ಅರಸಿಲ್ಲದೊಡೆ= ದೊರೆಯಿರಣಲ್ಲದಿದ್ದರೂ, ಸಿರಿ= ಐಶ್ವರ್ಯವು, ಇರ್ದು= ಇರುವ, ಉದಾರ= ಶ್ರೇಷ್ಠವಾದ, ವಂಶಕೆ= ಸಂತಾನಕ್ಕೆ, ಕುವರಂ=ವಕುಮಾರನು, ಇಲ್ಲದೊಡೆ= ಇಲ್ಲದಿದ್ದರೂ, ಮೆರೆವುದೆ= ಶೋಭಿಸುವುದೆ, ನಾರಿ= ಸ್ತ್ರೀಯಾದ ಸೀತೆಯೆ, ಪೇಳ್= ಹೇಳುವಳಾಗು, ಎನೆ= ಎಂಬುದಾಗಿ ಹೇಳಲು, ಲಜ್ಜೆಯಿಂದ =ನಾಚಿಕೆಯಿಂದ, ತಲೆವಾಗಿ =ತಲೆ ತಗ್ಗಿಸಿ, ನಿಜ= ತನ್ನಯ,ಪತಿಗೆ= ತನ್ನ ಪತಿ ರಾಮಚಂದ್ರನಿಗೆ, ಜಾನಕಿ= ಸೀತಾದೇವಿಯು, ನುಡಿದಳು= ಹೇಳಿದಳು.


ಅ॥ವಿ॥ ಸಿರಿ (ತ್ಭ.) ಶ್ರೀ (ತ್ಸ) ತಾರಕ= ನಕ್ಷತ್ರ, ತಾರಕಮಂತ್ರ, ಕಣ್ಣಿನ ಕರಿಯ ಗುಡ್ಡೆ, ಪ್ರಾಯ (ತ್ಸ) ಹರಯ(ತ್ಭ) ಸತ್+ ನುತ= ಸನ್ನುತ (ಅನುನಾಸಿಕ ಸಂಧಿ) ತಲೆಯಂ+ಬಾಗಿ= ತಲೆಬಾಗಿ (ಕ್ರಿಯಾ ಸ. ) ನಾರಿ= ಸ್ತ್ರೀ, ಬಿಲ್ಲಿನ ಹೆದೆ, ಕುವರ(ತ್ಭ.) ಕುಮಾರ ( ತ್ಸ.) ಅರಸ ಅಕಾರಾಂತ ಪ್ರಕೃತಿ, ಪುಲ್ಲಿಂಗ, ಅರಸಿ= ಸ್ತ್ರೀಲಿಂಗ


ತಾತ್ಪರ್ಯ:- ಎನ್ನ ಪ್ರಾಣವಲ್ಲಭೆಯೇ ಜಲದಿಂದ ತುಂಬಿರುವ ಕಾಸಾರಕ್ಕೆ ತಾವರೆಗಳು ಇಲ್ಲದಿದ್ದರೂ, ಉಡುಗಣದಿಂದ ತುಂಬಿರುವ ಗಗನಕ್ಕೆ ಚಂದ್ರನಿಲ್ಲದಿದ್ದರೂ, ಚಾರು ಯೌವನವಿದ್ದ ಯುವತಿಗೆ ಪ್ರಾಣವಲ್ಲಭನಿಲ್ಲದಿದ್ದರೂ, ಸನ್ನುತಪ್ರಜೆಗ-

ಳಿದ್ದು ಧಾರಿಣಿಗೆ ಪ್ರಭುವಿಲ್ಲದಿದ್ದರೂ, ಐಶ್ವರ್ಯದಿಂದೊಪ್ಪುವ ನಿಷ್ಕಳಂಕಮಾದ ಕುಲಕ್ಕೆ ಪುತ್ರನಿಲ್ಲದಿದ್ದರೂ, ಎಂದಿಗಾದರೂ ಶೋಭಿಸುತ್ತದೆಯೇ! ಪುತ್ರರತ್ನವನ್ನು ಪಡೆಯದವಳು ಭೂಮಿಯೊಳು ಒಬ್ಬ ಹೆಂಗಸಾಗಿರ್ಪಳೇ! ಹೇಳೆನಲು ಲಜ್ಜೆಯಿಂದ ತಲೆವಾಗಿ ತನ್ನ ಪ್ರಾಣಕಾಂತನಿಗೆ ಈ ರೀತಿಯಾಗಿ ಪೇಳಿದಳು.  


ಕಾಂತ ನೀಂ ಪೇಳ್ದೊಡೇಂ ಪುತ್ರವತಿಯಹುದು ಜ। 

ನ್ಮಾಂತರದ ಪುಣ್ಯಮೈಸಲೆ ಪೆಣ್ಗೆ ಮುನ್ನ ತಾಂ। 

ನೋಂತುದಲ್ಲದೆ ಬಂದಪುದೆ ಬರಿದೆ ಬಯಸಿದೊಡೆ ಸುಕುಮಾರನಂ ಪೊಡೆಯೊಳು॥ 

ಆಂತೊಳಗೆ ಪುದಗಿರ್ದ ಪರಿಮಳದೊಳೊಪ್ಪುವ ಲ। 

ತಾಂತಕುಟ್ಮಲದಂತೆ ವರ ಗರ್ಭಲಾಂಛನದ। 

ಕಾಂತಿಯಂ ತಳೆವುದಂಗನೆಯರೆಲ್ಲರ್ಗೆ ದೊರೆವುದೆ ಮೇದಿನಿಯೊಳೆಂದಳು॥೧೯॥ 


ಪ್ರತಿಪದಾರ್ಥ :- ಕಾಂತ= ಎಲೈ ವಲ್ಲಭ ಸ್ವಾಮಿಯೇ, ನೀಂ= ನೀನು, ಪೇಳ್ದೊಡೆ= ಈ ರೀತಿ ಚಿಂತೆಯಿಂದ ಹೇಳಿದರೆ ತಾನೆ, ಏಂ= ಏನಾಗುವುದು, (ಈ ರೀತಿ ಹೇಳಿದ್ದರಿಂದ ಏನು ಪ್ರಯೋಜನ) ಪೆಣ್ಗೆ= ಹೆಂಗಸಿಗೆ, ಪುತ್ರವತಿಯಹುದು= ಮಕ್ಕಳನ್ನುಳ್ಳವಳಾಗುವುದು, ಜನ್ಮಾಂತರದ= ಪೂರ್ವಜನ್ಮಫಲೋದಯದ,(ಹಿಂದಿನ ಜನ್ಮದಲ್ಲಿ ಮಾಡಿದ ಪುಣ್ಯ ಪರಿಪಾಕದ) ಪುಣ್ಯಂ= ಸುಕೃತವು, ಐಸಲೆ= ಅಲ್ಲವೆ, ಮುನ್ನ= ಹಿಂದಿನ ಜನ್ಮದಲ್ಲಿ, ತಾಂ= ನಾನು,( ಸ್ತ್ರೀಯರು) ನೋಂತಡಲ್ಲದೆ= ಭಗವತ್ಪ್ರಾರ್ಥನೆಯನ್ನು ಮಾಡಿದ ಹೊರ್ತಾಗಿ, (ಭಗವಂತನ ಪೂಜೆ ಮಾಡಿದ ಹೊರ್ತು) ಸುಕುಮಾರನಂ

= ಶ್ರಂಷ್ಠನಾದ ಮಗನನ್ನು,  ಪಡೆವುದು= ಹೊಂದತಕ್ಕದ್ದು, ಬರಿದೆ= ನಿರರ್ಥಕವಾಗಿ, ಬಯಸಿದೊಡೆ= ಇಷ್ಟಪಟ್ಟರೆ, ಆ ಪೆಣ್ಗೆ= ಆ ಸ್ತ್ರೀಗೆ, ಬಂದಪುದೆ= ಬರುತ್ತದೆಯೆ, ಆಂ= ನಾನಾದರೊ, ತೊಳಗೆ= ಶ್ರಮಪಡಲು, ಏಂ= ಏನಾದೀತು, ಪುದುಗಿರ್ದ= ವ್ಯಾಪ್ತವಾದ,  ಪರಿಮಳದೊಳು= ಸುಗಂಧದಿಂದ, ಒಪ್ಪುವ= ಪ್ರಕಾಶಿಸುವ, ಲತಾಂತ = ಬಳ್ಳಿಯನ್ನು ಹೊಂದಿರುವ, ಕುಟ್ಮಲದಂತೆ= ಮೊಗ್ಗಿನ ರೀತಿಯಿಂದ, ವರ= ಶ್ರೇಷ್ಠವಾದ, ಗರ್ಭಲಾಂಛನದ= ಬಸುರಿನ ಗುರ್ತಿನ, ಕಾಂತಿಯಂ= ಶೋಭೆಯನ್ನು, ತಳೆವುದು= ಪಡೆಯತಕ್ಕದ್ದು, ಮೇದಿನಿಯೋಳ್= ಈ ಭೂಮಂಡಲದಲ್ಲಿ, ಅಂಗನೆಯರ್= ಸ್ತ್ರೀಯರು, ಎಲ್ಲರ್ಗೆ= ಸಕಲರಿಗೂ, ದೊರೆವುದೇ= ಲಭಿಸುತ್ತದೆಯೆ? ಎಂದಳು= ಎಂಬುದಾಗಿ ಹೇಳಿದಳು. 


ಅ॥ವಿ॥ ಲತೆಯನ್ನು+ಆಂತ= ಲತಾಂತ(ದ್ವಿ. ತ. ) ಗರೂಭ= ಬಸಿರು, ಹೊಟ್ಟೆ,. ಲಾಂಛನ= ಕುಂದು, ಚಿಹ್ನೆ, ಕಳಂ= ಮಧುಕೈಟಭರೆಂಬ ರಕ್ಕಸರ ಮೇಧಸ್ಸಿನಿಂದಾದುದು ಮೇದಿನಿ. 


ತಾತ್ಪರ್ಯ:- ಜಾನಕಿಯು ಎಲೈ ಪ್ರಾಣವಲ್ಲಭನೇ! ನೀನು ಈರೀತಿಯಾಗಿ ಹೇಳಿದ್ದರಿಂದ ನನಗೇನು ಕೊರತೆಯಿಲ್ಲ. ಪುತ್ರವತಿಯಾಗುವುದು ಜನ್ಮಾಂತರದ ಸತ್ಕರ್ಮ ಫಲವು ಅಲ್ಲವೆ? ಪೂರ್ವಜನ್ಮದಲ್ಲಿ ಭಕ್ತಿಪುರಸ್ಸರವಾಗಿ ತಾನು ದೇವತಾರಾಧನೆಯನ್ನು ಮಾಡಿದ ಹೊರ್ತು ಪುತ್ರಸಂತಾನವಾಗಲಾರದು. ಹಾಗಿಲ್ಲದೆ ವಾಮನನು ಅತಿ ಎತ್ತರದಲ್ಲಿರುವ 

ವೃಕ್ಷದ ಫಲವನ್ನು  ಹೊಂದಲು ಬಯಸಿದಂತೆಯೂ, ಮೂಕನು ಮಾತನಾಡಲು ಇಚ್ಛಿಸಿದಂತೆಯೂ, ಹಿಂದಣ ಜನ್ಮದಲ್ಲಿ ಯಾವ ದೇವತಾರಾಧನೆಯೂ ಮಾಡದೆ ಪುತ್ರವತಿಯರಾಗಲು ಬಯಸಿದರೆ ಆದಾರೆಯೇ? ಎಂದಿಗೂ ಆಗಲಾರದು, ಆದ್ದರಿಂದ ನಾನು ವೃಥಾಚಿಂತಿಸುವುದರಿಂದ ಫಲವೇನಾದೀತು? ಪರಿಮಳದಿಂದ ಶೋಭಿಸುವ ಲತಾಕುಟ್ಮಲದಂತೆ

(ಬಳ್ಳಿಯ ಮಧ್ಯಭಾಗದಲ್ಲಿರುವ ಸುವಾಸನೆಯುಳ್ಳ ಮೊಗ್ಗಿನಂತೆ) ಶ್ರೇಷ್ಠವಾದ ಗರ್ಭಲಾಂಛನವನ್ನು ಹೊಂದುವುದು 

ಮೇದಿನಿಯಲ್ಲಿ ಅಂಗನೆಯರೆಲ್ಲರಿಗೆ ಸುಲಭಸಾಧ್ಯವಾದೀತೆ? 


ಕಂದನಾಡುವ ಬಾಲಲೀಲೆಯಂ ನೋಡಿ ತೊದ। 

ಲೊಂದಿದಿನಿವಾತನುರೆ ಕೇಳ್ದು ಮುದ್ದಿನ ಮುದ್ದೆ। 

ಯಂದದಂಗವನೆತ್ತಿಕೊಂಡು ನಳಿತೋಳ್ಗಳಿಂದಪ್ಪಿ ಕೆಂಗುರುಳ್ಗಳೊಲೆವ॥ 

ಮುಂದಲೆಯ ಕಂಪನಾಘ್ರಾಣಿಸಿ ತೊರೆದ ಜೊಲ್ಲ। 

ಚೆಂದುಟಿಯ ಬಾಯ್ದೆರೆಯನೈದೆ ಚುಂಬಿಸಿ ಸೊಗಸು। 

ಗುಂದದಾಯೆಂದು ಪಂಚೇಂದ್ರಿಯಪ್ರೀತಿಯಂ ಪಡೆವರಿನ್ನಾವ ಕೃತರೊ॥೨೦॥ 


ಪ್ರತಿಪದಾರ್ಥ :- ಕಂದ=ಪುತ್ರನು(ಮಗುವು) ಆಡುವ= ಆಟವಾಡುವ, ಬಾಲಲೀಲೆಯಂ= ಮಕ್ಕಳ ಆಟವನ್ನು, ನೋಡಿ=ಕಂಡು, ತೊದಲೊಂದಿದ= ತೊಡಕನ್ನು ಹೊಂದಿದ,( ಸಿಕ್ಕನ್ನು ಹೊಂದಿರುವ) ಇನಿವಾತಂ= ಮಧುರವಾದ ಮಾತನ್ನು, (ಮನಸ್ಸಿಗೆ ಹಿತವಾದ ಮಾತನ್ನು) ಉರೆ= ಬಹಳವಾಗಿ, ಕೇಳ್ದು= ಆಲಿಸಿ, ಮುದ್ದಿನ= ಪ್ರೇಮದ, ಮುದ್ದೆಯಂದದ= ಉಂಡೆಯಂತಿರುವ,(ಮುದ್ದೆಯ ಹಾಗಿರುವ) ಅಂಗವನು= ದೇಹವನ್ನು (ಮೈಯನ್ನು) ಎತ್ತಿಕೊಂಡು = ಕರೆದುಕೊಂಡು,  ನಳಿತೋಳ್ಗಳಿಂದ= ಮನೋಹರವಾದ ತೋಳುಗಳಿಂದ, ಅಪ್ಪಿ=ತಬ್ಬಿಕೊಂಡು, (ಆಲಿಂಗನ ಮಾಡಿಕೊಂ-

ಡು), ಕೆಂಗರುಳ್ಗಳೆಸೆವ= ಕೆಂಪಾಗಿರುವ ಮುಂಗುರುಳುಗಳಿಂದ ಶೋಭಿಸುವ, ಮುಂದಲೆಯ= ಮುಂದಿನ ತಲೆಯ,( ನೆತ್ತಿಯ ಭಾಗದ) ಕಂಪನು= ಒಳ್ಳೆಯ ವಾಸನೆಯನ್ನು, ಆಘ್ರಾಣಿಸಿ = ವಾಸನೆಯನ್ನು ನೋಡಿ, ತೊರೆದ= ಸ್ರವಿಸುತ್ತಿರುವ( (ಸುರಿಯುತ್ತಿರುವ) ಜೊಲ್ಲ= ಜೊಲ್ಲುರಸವುಳ್ಳ( ಲಾಲಾರಸ) ಕೆಂದುಟಿಯ= ಕೆಂಪಾಗಿರುವ ತುಟಿಯ, ಬಾಯ್ದೆರೆಯನು= ಬಾಯನ್ನು(ತುಟಿ)ಬಿಟ್ಟುಕೊಂಡಿರುವ ಮಗುವು, ಐದೆ= ಹತ್ತಿರಕ್ಕೆ ಬರಲಾಗಿ, ಚುಂಬಿಸಿ= ಮುದ್ದಾಡಿ, ಸೊಗಸುಗುಂದದೆ= ಅಲಂಕಾರವು ಕಡಿಮೆಯಾಗದಂತೆ,ಆಯಂದು= ಆಹಾ ಎಂದು, ಪಂಚೇಂದ್ರಿಯ= ತ್ವಕ್ಚಕ್ಷುಗಳೇ ಆದಿಯಾದ ಪಂಚೇಂದ್ರಿ-

ಯಗಳಿಗೆ, ಪ್ರೀತಿಯಂ= ಆನಂದವನ್ನು, ಪಡೆವರು= ಹೊಂದತಕ್ಕವರು, ಇನ್ನಾವ= ಇನ್ನು ಯಾವರೀತಿಯಾದ,ಕೃತರೊ= ಪುಣ್ಯವಂತರೊ, ಎಂದಳು= ಎಂಬುದಾಗಿ ಹೇಳಿದಳು.  


ಅ॥ವಿ॥ ಇನಿದು+ಮಾತು= ಇನಿವಾತು( ವಿ. ಪೂ. ಕ.),ಬಾಲರ+ಕ್ರೀಡೆ= ಬಾಲಕ್ರೀಡೆ (ಷ. ತ.) ಪಂಚೇಂದ್ರಿಯಗಳು= ತ್ವಕ್, ಚಕ್ಷು, ಶ್ರೋತ್ರ, ರಸನ, ಘ್ರಾಣ, ವಾಯುಪಂಚಕ= ಪ್ರಾಣ, ಆಪಾನ, ಉದಾನ, ವ್ಯಾನ, ಸಮಾನ.


ತಾತ್ಪರ್ಯ:- ಮನೆಯಲ್ಲಿ ಕಂದನಾಡುವ ಬಾಲಕ್ರೀಡೆಗಳನ್ನುನೋಡಿ, ತೊದಲೊಂದಿದ ಇನಿವಾತ(ಇಂಪಾದ ಮಾತನ್ನು) ಕೇಳಿ ಮುದ್ದಿನ ಮುದ್ದೆಯಂತಿರುವ ಅಂಗವನ್ನು ಎತ್ತಿಕೊಂಡು,  ಮನೋಹರವಾದ ಬಾಹುಗಳಿಂದ ಅಪ್ಪಿಕೊಂಡು ಕೆಚ್ಚನೆಯ ಕೂದಲುಗಳಿಂದೆಸೆವ ಮುಂದಲೆಯ ಸುವಾಸನೆಯನ್ನು ಆಘ್ರಾಣಿಸಿ, ಜೊಲ್ಲುನೀರಿನಿಂದ ಕೂಡಿರುವ ಕೆಂದುಟಿಯುಳ್ಳ ಬಾಯಿಯನ್ನು ತೆರೆದುಕೊಂಡಿರುವ ಮಗುವು ಬರಲಾಗಿ, ಚುಂಬಿಸಿ ಸೊಗಸುಗುಂದದಂತೆ ಹಾ ಎಂಬುದಾಗಿ ಪಂಚೇಂದ್ರಿ- ಯಗಳಿಗೂ ಆನಂದವನ್ನು ಹೊಂದುವವರು ಇನ್ನು ಎಂತಹ ಪುಣ್ಯಶಾಲಿಗಳೋ ಕಾಣೆನು ಆ ರೀತಿಯಾದ ಆನಂದವನ್ನು ನಾನೆಂದಿಗೆ ಪಡೆವೆನೊ ಎಂದು ಲಜ್ಜಾನ್ವಿತಳಾಗಿ ಚಿಂತಿಸಿರ್ದಳು. ( ಪುಟ ೧-೪೯೨, ಗುರುವಾರ ೦೯-೧೦-೨೦೨೫)