ಜೈಮಿನಿ ಭಾರತ 25 - ದೊಡ್ಡಬೆಲೆ ನಾರಾಯಣಶಾಸ್ತ್ರೀ
ಸೂ॥ ಊರ್ಜಿತ ಪ್ರಬಲ ರಿಪುವೀರರಂ ಗೆಲ್ದು ಕೃ।
ಷ್ಣಾರ್ಜುನರನಾಹವದೊಳೊಟ್ಟೈಸಿ ಭುಜ ವಿಕ್ರ।
ಮಾರ್ಜಿತ ವಿನಯದೊಡನೆ ತಾಮ್ರಧ್ವಜಂ ತುರಗಮಂ ತಂದೆಗೊಪ್ಪಿಸಿದನು॥
ಪ್ರತಿಪದಾರ್ಥ :- ತಾಮ್ರಧ್ವಜಂ = ರಕ್ತಛಾಯೆಯ ಧ್ವಜಪಟವುಳ್ಳ ಮಯೂರಧ್ವಜನ ಕುವರನು, ಊರ್ಜಿತ= ಶಾಶ್ವತವಾದ, ಪ್ರಬಲ= ಹೆಚ್ಚಾದ, ರಿಪು= ಹಗೆಗಳಲ್ಲಿ, ವೀರರಂ= ಶೂರರಾದ ಹಂಸಧ್ವಜ ನೇಲಧ್ವಜಾದಿಗಳನ್ನೂ, ಆಹವದೊಳು=ಕಾಳ-
ಗದಲ್ಲಿ, ಗೆಲ್ದು= ಜಯಿಸಿ, ಕೃಷ್ಣಾರ್ಜುನರು=ನರನಾರಾಯಣರನ್ನು, ಒಟ್ಟೈಸಿ= ಭೂಮಿಯಮೇಲೆ ಬಿದ್ದು ಹೋಗುವಂತೆ ಮಾಡಿ, ತುರಗಮಂ= ಅಶ್ವವನ್ನು, ಭುಜ= ಬಾಹುಗಳ, ವಿಕ್ರಮ= ಪರಾಕ್ರಮದಿಂದ, ಆರ್ಜಿತ= ಸಂಪಾದಿಸಿದ, ವಿಜಯ-
ದೊಡನೆ= ಜಯಲಕ್ಷ್ಮಿ ಸಹಿತ, ತಂದೆಗೆ= ಜನಕನಿಗೆ, ಒಪ್ಪಿಸಿದನು= ಅರ್ಪಣೆ ಮಾಡಿದನು.
ಪ್ರತಿಪದಾರ್ಥ:-
ಅ॥ವಿ॥ ಊರ್ಜಿತ ಪ್ರಬಲ ರಿಪು=ಪ್ರಬಲನಾದ ರಿಪು (ವಿ. ಪೂ. ಕ. ಸ.) ಊರ್ಜಿತರಾದ ಪ್ರಬಲರಿಪು( ವಿ. ಪೂ. ಕ.ಸ.)ಊರ್ಜಿತಪ್ರಬಲರಿಪುಗಳಲ್ಲಿ ವೀರರು( ಷ.ತ.) ಕೃಷ್ಣ +ಅರ್ಜುನ= ಕೃಷ್ಣಾರ್ಜುನ (ಸ.ದೀ. ಸಂ) ಬುಜಗಳ+ವಿಕ್ರಮ=
ಭುಜವಿಕ್ರಮಾರ್ಜಿತವಿಜಯದೊಡನೆ ( ಷ.ತ.) ಭುಜವಿಕ್ರಮದಿಂದ ಆರ್ಜಿತ( ತೃ. ತ. ಸ. ) ಭುಜವಿಕ್ರಮಾರ್ಜಿತ ವಿಜಯ( ವಿ, ಪೂ.) ತಾಮ್ರಧ್ವಜಂ= ತಾಮ್ರವರ್ಣದ ಧ್ವಜವು ಯಾರಿಗೊ ಅವನು( ಬ. ಸ.) ತಾಮ್ರಧ್ವಜಂ ತುರಗಮಂ ಒಪ್ಪಿಸಿದನು
( ಸಕರ್ಮಕ ಕರ್ತರಿ ವಾಕ್ಯ )
ತಾತ್ಪರ್ಯ:- ತಾಮ್ರಧ್ವಜನು ಮಹಾ ಪ್ರಬಲರಾದ ಹಂಸಧ್ವಜ ಬಭ್ರುವಾಹನನರೇ ಮೊದಲಾದ ಶತ್ರುರಾಜರನ್ನು ಯುದ್ಧದಲ್ಲಿ ಗೆದ್ದು, ಕೃಷ್ಣಾರ್ಜುಜನರನ್ನು ಬೀಳಿಸಿ,ಭುಜಬಲ ವಿಕ್ರಮದಿಂದ ಸಂಪಾದಿಸಿದ ಧರ್ಮಜನ ಯಜ್ಞಾಶ್ವವನ್ನು ತಂದೆಗೊಪ್ಪಿಸಿದನು.
ಎಲೆ ಮುನಿಪ ಸದಮಲಂ ಮೊದಲೆ ಪಾಲ್ಗಡಲದಕೆ।
ಮಲಯಾನಿಲಂ ತೀಡೆ ಬೆಳುದಿಂಗಳಂ ಪೂಡೆ।
ಲಲಿತ ಸುಮನೋವಾಸಿತಂ ಕೂಡೆ ಮೇಲೆಮೇಲಿನಿದಾಗಿ ತೋರುವಂತೆ॥
ಸಲೆ ಸೊಗಸು ನಿನ್ನ ನುಡಿ ಸರಸಮಚ್ಚರಿ ಪುಣ್ಯ।
ನೆಲಯಮೆನೆ ಕೃಷ್ಣಚರಿತಾಮೃತವನೀಕಿವಿಗ।
ಳೊಲಿದೀಂಟೆ ತಣಿದಪುವೆ ಮುಂಗತೆಯನುಸಿರೆಂದು ಬೆಸಗೊಂಡನವನೀಶನು॥ ೧॥
ಪ್ರತಿಪದಾರ್ಥ :- ಎಲೆ ಮುನಿಪ= ಎಲೈ ಜೈಮಿನಿ ಋಷೀಂದ್ರನೇ, ಪಾಲ್ಗಡಲು= ಕ್ಷೇರಸಮುದ್ರವು, ಮೊದಲೆ= ಆದಿಯಲ್ಲಿಯೆ, ಸದಮಲಂ= ಬಹು ಪವಿತ್ರವಾದದ್ದು,ಮಲಯಾನಿಲಂ = ಮಂದಮಾರುತವು,ಅದಕೆ= ಆ ಕ್ಷೀರ- ಸಾಗರಕ್ಕೆ, ತೀಡೆ= ಬೀಸಿದಹಾಗಾದರೆ, ಬೆಳ್ದಿಂಗಳಂ= ಚಂದ್ರಿಕೆಯನ್ನು,ಪೂಡೆ= ಜೋಡಿಸಲು, ಲಲಿತ= ಮನೋಹರವಾದ, ಸುಮನೋವಾಸಿತಂ = ಹೂಗಳ ಸುರಭಿಯೈ, ಕೂಡೆ= ಜೋಡಣೆಯಾದರೆ, ಮೇಲೆಮೇಲೆ= ಮೇಲೆ ಹೇಳಿದವು ಜೊತೆಯಾದಹಾಗೆಲ್ಲಾ, ಇನಿದಾಗಿ= ಇಂಪಾಗಿ, ತೋರುವಂತೆ= ಕಾಣಬರುವಂತೆ,ನಿನ್ನನುಡೆ= ನಿನ್ನ ಮಾತು, ಸಲೆ= ಚೆನ್ನಾಗಿ, ಸೊಗಸು= ಮನರಂಜಿಸುವೈದು, ಸರಸಂ= ರಸಭರಿತವಾದದ್ದು,ಅಚ್ಚರಿ= ಆಶ್ಚರ್ಯವನ್ನು ಉಂಟುಮಾಡುವುದು, ಪುಣ್ಯ-
ನಿಲಯಂ= ಪುಣ್ಯಕ್ಕೆ ಸ್ಥಾನಭೂತವಾದದ್ದು, ಎನೆ= ಎಂದು ನುಡಿಯಲು, ಈ ಕಿವಿಗಳು=ಈ ನನ್ನ ಶ್ರೋತ್ರಂಗಳು, ಕೃಷ್ಣ ಚರಿತಾಮೃತವನು= ಅಮೃತಕ್ಕೆ ಸದೃಶವಾದ ಕೃಷ್ಣ ಚಾರಿತ್ರ್ಯವನ್ನು , ಒಲಿದು= ಅಕ್ಕರೆಯಿಂದ, ಈಂಟಿ= ಪಾನಮಾಡಿ,
ದಣಿದಪೆವೆ= ತೃಪ್ತಿಗೊಂಡಾವೆ,ಮುಂಗಥೆಯನು= ಮುಂದೆ ನಡೆದ ಕಥಾಮೃತವನ್ನೂ, ಉಸಿರು= ಹೇಳುವನಾಗು, ಎಂದು= ಎಂಬತೆರನಾಗಿ, ಅವನೇಶನೈ= ಭೂಕಾಂತನಾದ ಜನಮೇಜಯನು,ಬೆಸಗೊಂಡನು= ಕೇಳಿಕೊಂಡನು.
ಅ॥ವಿ॥ ಅಮಲ=ಕಶ್ಮಲವಿಲ್ಲದ್ದು (ನಙ್. ತತ್ಪುರುಷ) ಪೃಲ್+ಕಡಲು= ಪಾಲ್ಗಡಲು (ವ್ಯಂಜನ ಸಂಧಿ ಮತ್ತು ಷ. ತ.ಸ.)
ಮಲಯ+ಅನಿಲಂ= ಮಲಯಾನಿಲಂ (ಸ.ದೀ.ಸಂ) ಅನಿಲ=ಗಾಳಿ, ಅನಲ= ಬೆಂಕಿ,ಬೆಳ್+ತಿಂಗಳು= ಬೆಳ್ದಿಂಗಳು(ವ್ಯಂ. ಸಂ.) ಅಚ್ಚರಿ (ತ್ಭ) ಋಶ್ಚರ್ಯ (ತ್ಸ) ಪುಣ್ಯನಿಲಯಂ ( ಚ. ತ.) ಮುಂಗಥೆ=ಮುಂದಿನ ಕಥೆ ( ಷ. ತ. ಸ.)ಅವನಿ+ಈಶ= ಅವನೀಶ ( ಸ. ದೀ. ಸಂ.)
ತಾತ್ಪರ್ಯ:- ಆ ಬಳಿಕ ಪೊಡವಿಪನಾದ ಜನಮೇಜಯನು, ಜೈಮಿನಿವರ್ಯನನ್ನು ಕುರಿತು, ಎಲೈ ತಾಪಸೋತ್ತಮನಾದ ಜೈಮಿನಿ ಮುನೀಂದ್ರನೆ, ಬಹು ಪವಿತ್ರಕರವಾದ ಕ್ಷೀರಸಮುದ್ರದ ಜತೆಗೆ ಮಂದಮಾರುತವೂ, ಹಿಮಕಿರಣಗಳೂ,ಹೂಗಳ ಸುವಾಸನೆಯೂ, ಬಂದೊದಗಲು ಮನವನ್ನು ಹೇಗೆ ರಂಜಿಸುವುದೋ ಅದೇರೀತಿಯಾಗಿಯೇ ನೇನು ಸರಸವಾದ ಪದಸರಣಿಯಿಂದ ಪೇಳುತ್ತಲಿರುವ ಪುಣ್ಯಪ್ರದವಾದ ಕೃಷ್ಣ ಚರಿತ್ರೆಯನ್ನು ಎಷ್ಟು ಕೇಳಿದರೂ ನನ್ನ ಕಿವಿಗಳಿಗೆ ತೃಪ್ತಿಯೇ ಉಂಟಾಗದು, ಆದಕಾರಣ ಮುಂದೆ ನಡೆದ ಕಥೆಯನ್ನೂ ಸವಿಸ್ತಾರವಾಗಿ ಹೇಳಿ ಕರ್ಣಾನಂದವನ್ನುಂಟುಮಾಡಬೇಕೆಂದನು.
ಕೈಮುಗಿಯುತಾದರದೊಳವನಿಪಂ ಬೆಸಗೊಳಲ್।
ಜೈಮಿನಿ ಮುನೀಶ್ವರಂ ಪೇಳ್ದನೆಲೆ ನೃಪತಿ ಕೇ।
ಳೈ ಮುಂದಣಾಶ್ಚರ್ಯಮಂ ಭೀಮಸೇನನಂ ಗಜಪುರಕೆ ಕಳುಹಿ ಬಳಿಕ ॥
ಹೈಮಾಂಬರಂ ಸಕಲ ದಳಸಹಿತ ಮೈದುನನ।
ಮೈಮೆಚ್ಚಿಕೆಗೆ ಮಖ ತುರಂಗದೊಡನೈದಿದಂ।
ವೈಮಾನಿಕ ಪ್ರತತಿ ಬೆರಗಾಗೆ ಕಲಿ ಬಭ್ರುವಾಹನಂ ಕೂಡೆ ಬರಲು॥೨॥
ಪ್ರತಿಪದಾರ್ಥ :- ಆದರದೊಳು= ಅಕ್ಕರೆಯಿಂದ, ಅವನಿಪಂ= ಭೂಕಾಂತನಾದ ಜನಮೇಜಯನು, ಕೈಮುಗಿವುತ= ವಂದಿಸುತ, ಬೆಸಗೊಳಲ್= ಕೇಳಿಕೊಳ್ಳಲಾಗಿ, ಜೈಮಿನಿ ಮುನೀಶ್ವರಂ= ಜೈಮಿನಿ ಮಹರ್ಷಿಯು, ಪೇಳ್ದನು= ಹೇಳತೊಡ-
ಗಿದನು,ಎಲೈ ನೃಪತಿ= ಎಲೈ ರಾಜನೆ,ಮುಂದಿನ= ಮುಂದೆ ನಡೆದ, ಆಶ್ಚರ್ಯಮಂ= ಆಶ್ಚರ್ಯ ಕೃತ್ಯವನ್ನು, ಕೇಳೈ= ಕೇಳು- ವನಾಗು, ಗಜಪುರಕೆ = ಹಸ್ತಿನಾವತಿಗೆ, ಭೀಮಸೇನನಂ= ವೃಕೋದರನನ್ನು, ಕಳುಹಿ= ಕಳುಹಿಸಿಬಿಟ್ಟು, ಬಳಿಕ = ಅನಂತರ
ವೈಮಾನಿಕ ಪ್ರತತಿ= ಸುರರ ಸಮೂಹವು, ಬೆರಗಾಗೆ= ಅಚ್ಚರಿಪಡುವಂತೆ, ಸಕಲ= ಸಮಸ್ತ, ದಳಸಹಿತ= ಸೇನಾಸಮೇತ-
ನಾಗಿ,ಕಲಿ= ವೀರನಾದ, ಬಭ್ರುವಾಹನಂ =ಪಾರ್ತಜನು,ಕೂಡೆ= ಜೊತೆಯಲ್ಲಿಯೇ,ಬರಲು=ಬರಲಾಗಿ, ಮಖತುರಂಗ
ದೊಡನೆ= ಯಾಗದ ಕುದುರೆಯೊಡನೆ,ಮೈದುನನ= ತಂಗಿಯ ಗಂಡನಾದ ಧನಂಜಯನ, ಮೈಗಾವಲ್ಗೆ= ಅಂಗರಕ್ಷಣೆಗೆ, ಐದಿದಂ= ಹೊರಟನು.
ತಾತ್ಪರ್ಯ:-ಕೈಮುಗಿದು ಸವಿನಯದಿಂದ ಕೇಳಿಕೊಳ್ಳುತ್ತಲಿರುವ ಜನಮೇಜಯರಾಯನನ್ನು ನೋಡಿ, ಕೇಳೈ ಮಹೀವಲ್ಲ-
ಭನೆ,ಮುಂದೆ ನಡೆದ ಅತ್ಯಾಶ್ಚರ್ಯಗಳನೆಲ್ಲ ಹೇಳುವೆನು, ಸಾವಧಾನಚಿತ್ತನಾಗಿ ಕೇಳು. ಈ ರೀತಿಯಾಗಿ ಮಣಿಪುರದಲ್ಲಿ ಐದಾರು ದಿನಗಳವರೆಗೂ ಸಂತೋಷವಾಗಿ ಕಾಲಹರಣ ಮಾಡಿದಮೇಲೆ,ಕೃಷ್ಣಸ್ವಾಮಿಯು ವೃಕೋದರನೊಂದಿಗೆ ಕುಂತೀದೇವಿ,ದೇವಕಿ, ಯಶೋದೆಯರು, ಉಲೂಪಿ ಚಿತ್ರಾಂಗದೆಯರು ಇವರನ್ನೆಲ್ಲಾ ಹಸ್ತಿನಾವತಿಗೆ ಕಳುಹಿಸಿ, ಬಭ್ರುವಾ-
ಹನಾದಿಗಳನ್ನು ತನ್ನ ಸಂಗಡ ಕರೆದುಕೊಂಡು, ಯಜ್ಞಾಶ್ವವನ್ನು ಮುಂದೆ ಬಿಟ್ಟುಕೊಂಡು ಅಪರಿಮಿತವಾದ ಸೇನಾಜಲಧಿ-
ಯೊಡನೆ ಅರ್ಜುನನ ಬೆಂಗಾವಲ್ಗೆ ತಾನೇ ಹೊರಟನು, ಇದನ್ನು ನೋಡಿ ಅಂತರಿಕ್ಷ ಮಾರ್ಗದಲ್ಲಿದ್ದ ದೇವತೆಗಳೆಲ್ಲಾ ಆಶ್ಚರ್ಯಗೊಂಡರು.
ತುರಗಂ ನಡೆದುದು ಮಣಿಪುರದಿಂ ಶರದ್ದಿನದೊ।
ಳರಸಂಚೆ ಸಂಚರಿಸತೊಡಗಿದುವು ನದಿಗಳು।
ಬ್ಬರಮಡಗಿ ತಿಳಿದು ಪರಿದುವು ಬೆಳತುದಾಗಸಂ ಮೆರೆದುದುಡುರಾಜಿಕೂಡೆ॥
ತರಣಿ ಶಶಿಗಳ ಕಿರಣಮೈದೆ ನಿರ್ಮಲವಾದು।
ವರವಿಂದಲರನರಸಿದುವಳಿಗಳೆಣ್ದೆಸೆಯ।
ತರುಣಿಯರ ಗುರುಕುಚದ ಮೇಲುದಂ ಸೆಳೆದಂತೆ ಗಿರಿನಿಕರಮೆಸೆದಿರ್ದುದು॥೩॥
ಪ್ರತಿಪದಾರ್ಥ :- ಮಣಿಪುರದಿಂದ= ಮಣಿಪುರದ ದೆಸೆಯಿಂದ, ಶರದ್ದಿನದೊಳು= ಶರತ್ಕಾಲದಲ್ಲಿ ತುರಗಂ= ಯಾಗಾಶ್ವವು, ನಡೆದುದು= ಮುಂದೆ ಹೊರಟಿತು, ಅರಸಂಚೆ= ಹಂಸಗಳು, ಸಂಚರಿಸತೊಡಗಿದವು= ತಿರುಗಾಡಲುಜ್ಜುಗಿಸಿದವು, ನದಿಗಳ= ನದಿಗಳ ಸಮೂಹದ, ಉಬ್ಬರಂ= ತುಂಬಿ ಮೆರೆಯುವಿಕೆಯು,ಅಡಗಿ= ಕುಗ್ಗಿ, ತಿಳಿದು= ನಿರ್ಮಲವಾಗಿ, ಪರಿದವು= ಹರಿಯುತ್ತಲಿದ್ದವು ,ಆಗಸಂ= ನಭೋಮಂಡಲವು, ಬೆಳತುದು= ಸ್ವಚ್ಛವಾಯಿತು, ಉಡುರಾಜಿ= ತಾರಾ ಸಮೂಹವು, ಕೂಡೆ= ತಕ್ಷಣವಂ, ಮೆರೆದವು= ಹೊಳೆಯುತ್ತಲಿದ್ದವು, ತರಣಿ ಶಶಿಗಳ= ಸೂರ್ಯ ಚಂದ್ರರ, ಕಿರಣಂ= ಕರಗಳು, ಐದೆ=ಚನ್ನಾಗಿ, ನಿರ್ಮಲವಾದವು= ಶುದ್ಧವಾದವು,ಅಳಿಗಳು =ದುಂಬಿಗಳು,ಅರವಿಂದದ= ತಾವರೆಯ, ಅಲರನು= ಹೂವನ್ನು, ಅರಸಿದವು= ಹುಡುಕಿದವು, ಎಣ್ದೆಸೆಯ= ಅಷ್ಟದಿಕ್ಕುಗಳ, ತರುಣಿಯರ=ನಾರಿಯರ, ಗುರು= ದಪ್ಪವಾದ,ಕುಚದ= ಮೊಲೆಗಳ ಮೇಲಿರುವ, ಮೇಲುದಂ= ಸೆರಗು, ಸೆಳೆದಂತೆ= ಎಳೆದ ತೆರನಾಗಿ, ಗಿರಿನಿಕರಂ= ಪರ್ವತಗಳ ಸಮೂಹವು, ಎಸೆದಿರ್ದುದು= ಹೊಳೆಯುತ್ತಲಿತ್ತು.
ಅ॥ವಿ॥ ಅರಸಂಚೆ (ತ್ಭ) ರಾಜಹಂಸ ( ತ್ಸ) ತರಣಿ= ಸೂರ್ಯ, ತರುಣಿ=ಯೌವನೆ, ತರಣಿಯೂ+ಶಶಿಯೂ= ತರಣಿ ಶಶಿಗಳು (ದ್ವಿ. ಯೊ. ದ್ವಂದ್ವ. ಸ.)
ತಾತ್ಪರ್ಯ:-ಕೃಷ್ಣಾರ್ಜುನರು ಯಜ್ಞಾಶ್ವದೊಂದಿಗೆ ಹೊರಡುವಾಗ ಶರತ್ಕಾಲವಾಗಿದ್ದದ್ದರಿಂದ ಎಲ್ಲೆಡೆಯಲ್ಲಿಯೂ ರಾಜಹಂಸಗಳ ಸಂಚಾರವೂ ನೋಟಕರ ಮನಸ್ಸಿಗೆ ಆನಂದವನ್ನುಂಟುಮಾಡುತ್ತಲಿತ್ತು .ನದಿಗಳಲ್ಲೆಲ್ಲಾ ನೀರು ಕಡಿಮೆಯಾಗಿಯೂ ತಿಳಿಯಾಗಿಯೂ ಇತ್ತು. ಆಕಾಶವು ಬೆಳ್ಳಗಾಗಿತ್ತು.ನಕ್ಷತ್ರಗಳೂ ಸೂರ್ಯಚಂದ್ರರೂ ಚೆನ್ನಾಗಿ ಪ್ರಕಾಶಿ-
ಸುತ್ತಲಿದ್ದರು. ಕಮಲಪುಷ್ಪಗಳೆಲ್ಲಾ ಅರಳಿ ಬೀರುತ್ತಲಿದ್ದ ಸುವಾಸನೆಯನ್ನು ಹೀರಲು ಭೃಂಗಾಳಿಯು ಹಾರಾಡುತ್ತಲಿದ್ದವು. ಅಷ್ಟ ದಿಗಂಗನೆಯರ ಪೀನ ಸ್ತನಗಳನ್ನು ಮುಚ್ಚಿದ ಸೆರಗುಗಳನ್ನು ತೆಗೆದಂತೆ ಪರ್ವತಗುಳ ಸಮುದಾಯವು ತೋರುತ್ತಲಿದ್ದಿತು.
ಪುಳಿನ ಜಘನಂ ಮತ್ಸ್ಯಲೋಚನಂ ಹಂಸಗತಿ।
ಸುಳಿನಾಭಿ ಕೋಕಸ್ತನಂ ಪಂಕಜಾನನಂ।
ಸೆಳೆನಡು ಸುಕಂಬು ಕಂಠಂ ತರಂಗ ತ್ರಿವಳಿ ಶೈವಾಲ ರೋಮಾವಳಿ॥
ಲಲಿತಪ್ರವಾಹ ಲಾವಣ್ಯ ಲಹರಿಗಳೆಸೆಯೆ।
ತೊಳತೊಳಗಿ ಬೆಳಗುವ ನದೀವಧುಗಳುಳ್ಗದಡು।
ತಿಳಿದು ನಿಜಕಾಂತನಾಗಿಹ ಸಿಂಧುರಾಜನಂ ನೆರೆಯದಿರರೆಂಬೊಲಾಯ್ತು॥೪॥
ಪ್ರತಿಪದಾರ್ಥ :- ಪುಳಿನ= ಸೈಕತಂಗಳೆನ್ನುವ,ಜಘನಂ= ಹಿಂಭಾಗಗಳುಳ್ಳ, ಮತ್ಸ್ಯ= ಮೀನುಗಳೆನ್ನುವ, ಲೋಚನಂ= ನಯನಂಗಳಿಂದ ಕೂಡಿದ, ಹಂಸ= ಹಂಸಪಕ್ಷಿಗಳಂತೆ, ಗತಿ= ನಡಿಗೆಯನ್ನು ಪಡೆದಿರತಕ್ಕ,ಸುಳಿ= ಸುಳಿಯೆಂಬ, ನಾಭಿ= ಹೊಕ್ಕುಳಿನಿಂದಲೂ, ಕೋಕ= ಜಕ್ಕವಕ್ಕಿಗಳೆನ್ನುವ, ಸ್ತನಂ= ಕುಚಗಳಿಂದಲೂ,ಪಂಕಜ= ತಾವರೆಗಳೆನ್ನುವ, ಆನನಂ= ವದನವು, ಸೆಳೆ= ಸೆಳೆಯುವುದೆಂಬ, ನಡು= ಸೊಂಟದಿಂದಲೂ, ಸು= ಮೇಲಾದ, ಕಂಬುಕಂಠಂ= ಶಂಖದಂತಿರುವ ಕತ್ತಿನಿಂದಲೂ ಕೂಡಿದ,ತರಂಗ= ಅಲೆಗಳೆನ್ನುವ, ತ್ರಿವಳಿ= ಮೂರು ಮಡಿಕೆಗಳುಳ್ಳ, ಶೈವಾಲ= ಪಾಚಿ ಎನ್ನುವ, ರೋಮಾವಳಿ = ರೋಮಪಂಙ್ತಿಯಿಂದ ಕೂಡಿದ, ಲಲಿತ= ಸುಮನೋಹರವಾದ,ಪ್ರವಾಹ= ನೀರಿನ ಹರಿವು, ಲೃವಣ್ಯ= ಪ್ರಕಾಶದ,ಲಹರಿ= ಅಲೆಗಳ ಸಮೂಹವು, ಎಸೆಯೆ= ಕಾಂತಿಯುಕ್ತವಾಗಿರಲು, ತೊಳತೊಳಗಿ= ಬಹಳ ಹೆಚ್ಚಾಗಿ, ಬೆಳಗುವ= ಕಾಂತಿಯನ್ನೀವ,ನದೀವಧುಗಳು= ನದಿಗಳೆಂಬ ನಾರಿಯರು,ಒಳ್ಳಿತಂ= ಮೇಲಾಗಿ, ತಿಳಿದು= ಸ್ವಚಛವಾಗಿ,ನಿಜ=ತಮ್ಮ, ಕಾಂತನು= ರಮಣನು, ಆಗಿ= ಆಗಿಯೂ ಇರತಕ್ಕ, ಸಿಂಧುರಾಜನಂ= ಸಮುದ್ರಗಳ ಅರಸನನ್ನು ನೆರೆಯದೆ= ಸೇರದೆ, ಇರರು= ಇರತಕ್ಕವರಲ್ಲ,ಎಂಬೊಲು= ಎಂಬತೆರನಾಗಿ, ಆಯ್ತು= ಆಗಬಿಟ್ಟಿತು, ಈ ಪದ್ಯದಲ್ಲಿ ನದಿಯು ಸ್ತ್ರೀಯಂತೆ ಇರುವುದಾಗಿ ಹೋಲಿಸಿದೆ.
ಅ॥ವಿ॥ ಸಿಂಧುರಾಜ (ಷ. ತ. ಸ. ) ಮಣಿ= ಶ್ರೇಷ್ಠವಾಚಕ, ಮಣಿಪುರವೆಂಬ ಊರು, ನಮಸ್ಕರಿಸು. ಹಂಸ= ರವಿ, ಸನ್ಯಾಸಿ, ಹಕ್ಕಿ, ಮಂತ್ರ. ನೆರೆ=ಸೇರುವುದು,(ಕ್ರಿ) ನೆರೆ= ಪಕ್ಕದ ಮನೆಗಳು (ನಾಮ) ಪಂಕ=ಕೆಸರಲ್ಲಿ, ಜ= ಹುಟ್ಟಿದ್ದು
ತಾವರೆ. (ಕೃ, ವೃ) ತೊಳತೊಳಗಿ ( ಅಧಿಕ್ಯದಲ್ಲಿ ದ್ವಿರುಕ್ತಿ)
ತಾತ್ಪರ್ಯ:- ದಪ್ಪವಾದ ತೊಡೆಗಳನ್ನೂ, ಮೀನಿನಂತಿರುವ ನಯನಗಳನ್ನೂ, ಹಂಸಪಕ್ಷಿಯ ಗಮನವನ್ನು ನಿರಾಕರಿಸುವ ನಡಿಗೆಯನ್ನೂ, ತ್ರಿವಳಿಗಳಿಂದೊಡಗೂಡಿದ ಹೊಕ್ಕುಳನ್ನೂ,ಜಕ್ಕವಕ್ಕಿಗಳಂತೆ ಬೆಳ್ಳಗಿರುವ ಕುಚಗಳನ್ನೂ, ಕಮಲದಂತಿರುವ ಮುಖವನ್ನೂ, ತೆಳ್ಳನೆಯ ನಡುವನ್ನೂ, ಶಂಖದಂತಿರುವ ಕತ್ತನ್ನೂ, ಅಲೆಗಳಂತಿರುವ ತ್ರಿವಳಿಗಳನ್ನೂ,ಪಾಚಾಯಂತಿರುವ ರೋಮಪಂಙ್ತಿಯನ್ನೂ ಪಡೆದ ಸುಂದರೀಮಣಿಯು ನಿಜಕಾಂತನೊಂದಿಗೆ ಕೂಡಲಿಚ್ಚಿಸಿ ಹೋಗುತ್ತಲಿರುವಂತೆಯೇ ಮರಳ ದಿಣ್ಣೆಗೆಗಳಿಂದಲೂ, ಮೀನುಗಳಿಂದಲೂ, ಹಂಸಪಕ್ಷಿಗಳಿಂದಲೂ,ಸುಳಿಗಳಿಂದಲೂ,ಶಂಖಗಳಿಂದಲೂ,ಅಲೆಗಳಿಂದಲೂ, ಪಾಚಿ ಇವುಗಳಿಂದಲೂ ಕೂಡಿದ ನದಿಗೂ ಕೂಡ ಸುಂದರಾಂಜನೆಯರನ್ನು ಹೋಲುತ್ತಾ, ತಾವೂ ತಮ್ಮ ಪ್ರಾಣಕಾಂತನಾದ ಸಮೈದ್ರರಾಜನಿರುವೆಡೆಗೆ ಹೋಗುತ್ತಲಿವೆಯೋ ಎಂಬಂತೆ ನೋಟಕರ ಮನಸ್ಸಿಗೆ ಭ್ರಾಂತಿಯುಂಟುಮಾಡುತ್ತಲಿದ್ದವು.
ಕರೆಕರೆದ ತಮ್ಮ ಮಳೆವೊನಲಿಂದೆ ಶಶಿಕಾಂತ।
ದೊರತೆವೊನಲುರೆ ವೆಗ್ಗಳಿಸೆ ನಾಚಿ ಬೆಳ್ಪಾದ।
ತೆರದಿಂ ಮುಗಿಲ್ಗಳಿರೆ ಬೆಳುದಿಂಗಳೊಪ್ಪಿದುದು ಬೆಳಸುಗಳ ಪಣ್ದೆನೆಗಳ॥
ಮಿರುಪ ಹೊಂಬಣ್ಣದ ಹರಿದ್ರಾನುಲೇಪನದ।
ಮೆರೆವ ಮೈಸಿರಿಯ ಮಾಂಗಲ್ಯದಿಂ ಭೂದೇವಿ।
ನೆರೆ ಶೋಭಿಸುವ ಶರತ್ಕಾಲದೊಳ್ ತಿರುಗಿತಧ್ವರ ಹಯಂ ಧರೆಯಮೇಲೆ॥೫||
ಪ್ರತಿಪದಾರ್ಥ :- ಕರೆಕರೆದ = ಹೆಚ್ಚಾಗಿ ಸುರಿಸಿದ, ಮಳೆವನಿಗಳಿಂ= ಮಳೆಯ ಬಿಂದುಗಳಿಂದ, ಶಶಿಕಾಂತದ= ಚಂದ್ರಕಾಂ-
ತಶಿಲೆಯ, ಒರತೆವೊನಲ್= ಒರತೆಯನೀರು, ಉರೆ=ಹೆಚ್ಚಾಗಿ, ವೆಗ್ಗಳಿಸೆ= ಹರಿಯಲು, ಮುಗಿಲ್ಗಳು= ಮೋಡಗಳೆಲ್ಲವೂ, ನಾಚಿ= ನಾಚಿಕೆಯಿಂದ ಕೂಡಿ, ಬೆಳ್ಪಾದ ತೆರದಿಂದ= ಬಿಳಿದಾದ ಬಗೆಯಿಂದ, ಇರೆ = ಇರುವಂತೆ, ಬೆಳ್ದಿಂಗಳು=ಚಂದ್ರಿಕೆಯು, ಒಪ್ಪಿದುದು= ಚನ್ನಾಗಿ ಕಾಣಿಸುತ್ತಲಿತ್ತು, ಬೆಳಸುಗಳ= ಬೆಳೆಗಳ, ಪಣ್ದೆನೆಗಳ= ಹಣ್ಣಾದ ತೆನೆಗಳಿಂದ ಕೂಡಿದ, ಮಿರುಪ= ಥಳಥಳಿಸುವ, ಹೊಂಬಣ್ಣದ,= ಚಿನ್ನದ ವರ್ಣವೆನ್ನುವ,ಹರಿದ್ರ= ಅರಿಶಿನವನ್ನು, ಲೇಪನದಿಂದ= ಬಳಿದುಕೊಂಡಿರುವುದ-
ರಿಂದ, ಮೆರೆವ=ಹೊಳೆಯುತ್ತಿರುವ, ಮೈಸಿರಿಯ= ಶರೀರದ ಸೊಬಗಿನ, ಮಾಂಗಲ್ಯದಿಂ = ಶುಭದಿಂದ, ಭೂದೇವಿ= ಭೂದೇವಿಯೆಂಬ ದೇವತೆಯು,ನೆರೆ=ಅಂದವಾಗಿ, ಶೋಭಿಸುವ = ಹೊಳೆಯುವ, ಶರತ್ಕಾಲದೊಳ್= ಶರದೃತುವಿನ
ಯದಲ್ಲಿ,ಧರೆಯಮೇಲೆ= ಭೂಮಂಡಲದಲ್ಲಿ, ಅಧ್ವರ ಹಯಂ= ಯಾಗದ ಕುದುರೆಯು, ತಿರುಗಿತು= ತಿರುಗಲುಜ್ಜುಗಿಸಿತು.
ಅ॥ವಿ॥ ಪಣ್+ತೆನೆ=ಪಣ್ದೆನೆ (ವ್ಯಂಜನ ಸಂಧಿ,ಮತ್ತು ವಿ. ಪೂ. ಕ.) ಕರ=ಕೈ, ಕಿರಮ, ಸೊಂಡಿಲು, ಕರೆಕರೆದ(ಅಧಿಕ್ಯದಲ್ಲಿ ದ್ವಿರುಕ್ತಿ) ಹೊಂಬಣ್ಣ=ಹೊನ್ನಿನ ಬಣ್ಣ ( ಷ. ತ. ಸ.)
ತಾತ್ಪರ್ಯ:- ಮಳೆಯ ಹನಿಗಳಿಂದ ಭೂಮಿಯನ್ನು ತುಂಬಿಸಿದರೂ ಈಗ ಒಂದು ನದಿಯೂ ದೊಡ್ಡದಾಗಿ ಹರಿಯದಿರುವುದನ್ನೂ, ಚಂದ್ರಕಾಂತ ಶಿಲೆಯಿಂದ ಹೊರಡುವ ಪ್ರವಾಹಗಳು ಮನೋಹರವಾಗಿರುವುದನ್ನೂ, ಮೇಘಗಳು ನೋಡಿ ನಾಚಿಕೆಯಿಂದ ದುಃಖಿಸಿ ಬೆಳ್ಳಗಾದವೋ ಎಂಬಂತೆ ಆಕಾಶದಲ್ಲೆಲ್ಲಾಬಿಳಿಯ ಮೋಡಗಳೇ ಕಾಣಿಸುತ್ತಲಿದ್ದವು. ಬೆಳ್ದಿಂಗಳಾದರೊ ಎಲ್ಲೆಲ್ಲಿಯೂ ಅಂದವಾಗಿ ಕಾಣಿಸುತ್ತಲಿತ್ತು. ಭೂಮಿಯ ಮೇಲೆಲ್ಲಾ ಪೈರು ಪಚ್ಚೆಗಳು ಮಾಗಿ ಚಿನ್ನದ ಬಣ್ಣದಿಂದ ಹೊಳೆಯುತ್ತಲಿರುವುದನ್ನು ನೋಡಿದರೆ ಭೂದೇವಿಯು ಅರಿಶಿನ ಬಳಿದುಕೊಂಡು ಮಂಗಳಕರವಾದ ಕಾಂತಿಯಿಂದ ಕೂಡೆರುವಳೋ ಎಂಬಂತೆ ತೋರಿಬರುತ್ತಲಿತ್ತು. ಇಂತಹ ಸುಮನೋಹರವಾದ ಆಶ್ವಯುಜ ಕಾರ್ತಿಕ ಮಾಸಗಳಿಂದ ಕೂಡಿದ ಶರತ್ಸಮಯದಲ್ಲಿ ಯಜ್ಞಾಶ್ವವು ಮಣಿಪುರವನ್ನು ಬಿಟ್ಟು ಮುಂದೆ ನಡೆಯಿತು.
ವಿಟನಂತೆ ಕಾಂತಾರತಲಸದ್ವಿಲಾಸ।
ಪರ್ಯಟನದಿಂದೊಪ್ಪಿದುದು ಸುಕವೀಂದ್ರನಂತೆ ಸಂ।
ಘಟಿತ ಚಾತುರ್ಯ ಪದ ರಚನೆಯಿಂ ವಿವಿಧ ವಿಷಯಂಗಳೊಳ್ ಕಾಣಿಸಿದುದು॥
ಭಟನಂತೆ ಸಮ್ಯಗ್ವಿರಾಜಿತ ಭೂಮಿ ಭೃ।
ತ್ಕಟಕಂಗಳಲ್ಲಿ ಸಂಚರಿಸಿದುದು ಪಾಂಡವನ।
ಪಟುತರ ಮಹಾಧ್ವರ ತುರಂಗಮಂ ಬೆಂಬಿಡದೆ ಬಹ ನೃಪರ ಸೇನೆಸಹಿತ॥೬॥
ಪ್ರತಿಪದಾರ್ಥ :- ಪಾಂಡವನ= ಪಾಂಡು ಸುತನಾದ ಅರ್ಜುನನ, ಪಟುತರ= ಬಹುಶಕ್ತಿಯುಳ್ಳ, ಮಹಾಧ್ವರ= ದೊಡ್ಡ ಯಜ್ಞದ, ತುರಗಮಂ= ಕುದುರೆಯನ್ನು, ಬೆಂಬಿಡದೆ= ಹಿಂಬಾಲಿಸಿ, ಬಹ= ಬರತಕ್ಕ, ನೃಪಸೇನೆಸಹಿತ= ರಾಜಬಲದೊಂದಿಗೆ, ವಿಟನಂತೆ= ಕಾಮುಕನಹಾಗೆ,ಕಾಂತಾ = ಸುಂದರಿಯರಾದ ನಾರಿಯರ,ರಸ= ನವರಸಗಳಿಂದ, ರಸ= ವಿಶ್ವಾಸಸಹಿತಮಾದ
ಲಸತ್= ಹೊಳೆಹೊಳೆವ, ವಿಲಾಸ= ಸುಂದರವಾದ,ಪರಿಯಟಣದಿಂದ= ಸುತ್ತವಿಕೆಯಿಂದ( ಯಜ್ಞಾಶ್ವದ ಪರವಾದ) ಕಾಂತಾರ= ಅರಣ್ಯಗಳೊಳಗೆ,ಲಸತ್= ಬಹಳವಾಗಿ ಹೊಳೆಯುವ, ವಿಲಾಸ= ಕ್ರೀಡಾದಿಗಳಲ್ಲಿ, ಪರಿಯಟಣದಿಂ= ತಿರುಗು-
ವಿಕೆಯಿಂದ, ಒಪ್ಪಿದುದು= ನೋಡುವುದಕ್ಕೆ ಅಲಂಕಾರವಾಗಿತ್ತು,( ಕಾಂತಾ= ನಾರಿಯರ, ರವ= ಸಂಗೀತದ, ರಸ= ಮಧುರವಾದ,ಸದ್ವಿಲಾಸ= ಮನ್ಮಥವಿಕಾರವನ್ನುಂಟುಮಾಡುವುದರಲ್ಲಿ, ಪರ್ಯಟನದಿಂದ= ಸುತ್ತುವಿಕೆಯಿಂದ, ಎಂದು ಪಾಠಾಂತರವು) ಸಂಘಟಿತ= ಸೇರಲ್ಪಟ್ಟ, ಚಾತುರ್ಯ= ಚತುರತೆಯಿಂದ ಕೂಡಿದ, ಪದ= ಕಾಲುಗಳನ್ನು, ರಚನೆಯಿಂ= ಇಡೋಣದರಿಂದ,( ಅಶ್ವಪರವಾದ ಅರ್ಥವು) ಸಂಘಟಿತ= ಜೋಡಿಸಲ್ಪಟ್ಟ, ಚಾತುರ್ಯ= ಯುಕ್ತಿ ಯುಕ್ತಮಾದ, ಪದ= ಪಾದಗಳು ಅಥವಾ ಅಲ್ಲಲ್ಲಿ ನಿಲ್ಲಿಸಬಹುದಾದ ಸ್ಥಳಗಳನ್ನು, ರಚನೆಯಿಂ= ಗೊತ್ತಾಗಿ ಇಡುವುದರಿಂದ(ಕವಿಯಪರವಾಗಿ) ವಿವಿಧ= ಬೇರೆಬೇರೆಯಾದ,ವಿಷಯಂಗಳೊಳ್= ನಾಡುಗಳಲ್ಲಿಯೂ,ಅಭಿಪ್ರಾಯಗಳಲ್ಲಿಯೂ, (ಕಾಮುಕ ವಸ್ತುಗಳಲ್ಲಿಯೂ) ಸುಕವೀಂದ್ರರಂತೆ= ಯೋಗ್ಯರಾದ ಕವಿಗಳಂತೆ, ಕಾಣಿಸಿದುದು= ನೋಟಕರಿಗೆ ಕಾಣಿಸುತ್ತಲಿತ್ತು, ಸಮ್ಯಕ್= ಮೇಲಾಗಿ, ವಿರಾಜಿತ= ಹೊಳೆಹೊಳೆವ, ಭೂಮಿಭೃತ್= ಅರಸುಗಳ, ಕಟಕಂಗಳಲ್ಲಿ= ದಳದೊಂದಿಗೆ ,ಭೂಮಿಭೃತ್= ಗಿರಿಗಳ, ಕಟಕಂಗಳಲ್ಲಿ= ಸಾನುಪ್ರದೇಶಗಳಲ್ಲಿ,ಭಟನಂತೆ= ವೀರರನ್ನು ಹೋಲುತ್ತಾ,ಸಂಚರಿಸಿದುದು= ಸುತ್ತುತ್ತಲಿತ್ತು.
ಅ॥ವಿ॥ ಸುಕವಿ+ಇಂದ್ರ= ಸುಕವೀಂದ್ರ ( ಸ. ದೀ. ಸಂ. ಮತ್ತು ಷ. ತ. ಸ. ) ಸು=ಒಳ್ಳೆ ಕವೀಂದ್ರ= ಕವಿಗಳಲ್ಲಿ ಮೇಲಾದವನು (ವಿ. ಪೂ. ಕ) ಕವಿ=ನೀರ್ವಕ್ಕಿ, ಕವಿತ್ವ ಮಾಡುವವನು, ಶುಕ್ರನು, ಆವರಿಸುವುದು, ಪಟುತರ ಮಹಾಧ್ವರ ತುರಂಗಮಂ= ಮಹತ್ತಾದ+ಅಧ್ವರ= ಮಹಾಧ್ವರ(ವಿ. ಪೂ. ಕ. )ಮಹಾಧ್ವರದ ತೈರಂಗಮಂ ( ಷ. ತ. ಸ) ಪಟುತರವಾದ ಮಹಾಧೂವರ ತೈರಂಗಮಂ ( ವಿ. ಪೂ. ಕ.)
ತಾತ್ಪರ್ಯ:- ಕಾಮುಕನು ಕಾಂತೆಯೊಂದಿಗೆ ಬೆರೆವೆನೆಂಬುತ್ಸವದಿಂದಲೂ, ನಾನಾವಿಷಯಂಗಳಂ ಸಂಗ್ರಹಿಸಿ,ಉತ್ತಮವಾದ ಪದಸರಣಿಯಿಂದ ಮೆರೆವ ಕವಿತ್ವವನ್ನು ಮಾಡತಕ್ಕ ಕವಿಶ್ರೇಷ್ಠನಂತೆ, ದೇಶದೇಶಗಳನ್ನು ತಿರುತಿರುಗಿ ತನ್ನ ಪದಚಮತ್ಕಾರವನ್ನು ತೋರಿಸುತ್ತಲೂ, ರಾಜಾಧಿರಾಜರ ಮಧ್ಯದಲ್ಲೆಲ್ಲಾ ನುಗ್ಗುವ ಭಟನಹಾಗೆ ತಾನೂ ಅನೇಕ ವೀರಾಗ್ರಣಿಗಳ ನಡುವೆ ಕಂಗೊಳಿಸುತ್ತಲೂ ಇರುವ ಧರ್ಮರಾಯನ ಯಾಗದ ಕುದುರೆಯು ಅರ್ಜುನಾದಿ ವೀರಾಗ್ರಣಿಗ-
ಳಿಂದಲೂ, ಪರಮ ಪಾವನನಾದ ಕೃಷ್ಣಸ್ವೃಮಿಯಿಂದಲೂ ಕೂಡಿ ದೇಶದೇಶಗಳಲ್ಲೆಲ್ಲಾ ಸುತ್ತುತ್ತಿತ್ತು.
ಪೋದುದಧ್ವರವಾಜಿ ರತ್ನಪುರಮೆಂಬ ಪುಟ।
ಭೇದನದ ಪತಿ ಮಯೂರಧ್ವಜನ ರಾಷ್ಟ್ರಕವ।
ನಾದಿಯೊಳ್ ತುರಗಮೇಧಂಗಳೇಳಂಮಾಡಿ ನರ್ಮದಾತಟಕೆ ಬಂದು॥
ಸಾದರದೊಳೆಂಟನೆಯ ಮಖಕೆ ದೀಕ್ಷಿತನಾಗಿ।
ಮೇದಿನಿಯ ಮೇಲೆ ಹಯಮಂ ಬಿಡಲ್ಕಿದಿರಾಗಿ।
ಬೀದಿಯೊಳ್ ಬರುತಿರ್ದುದಾ ನೃಪನ ಸೂನು ತಾಮ್ರಧ್ವಜನ ಕಾಪಿನಿಂದೆ॥೭॥
ಪ್ರತಿಪದಾರ್ಥ :- ರತ್ನಪುರಮೆಂಬ= ರತ್ನಪುರವೆಂಬ ಹೆಸರುಳ್ಳ, ಪುಟಭೇದನದ= ಪಟ್ಟಣದ, ಪತಿ=ಅರಸಾದ, ಮಯೂರಧ್ವಜನ = ನವಿಲನ್ನು ಧ್ವಜದಲ್ಲಿ ಉಳ್ಳ ರಾಜನ, ರಾಷ್ಟ್ರಕೆ= ನಾಡಿಗೆ, ಅಧ್ವರವಾಜಿ=ಯಾಗದಕುದುರೆಯು, ಪೋದುದು= ಹೋಯಿತು, ಅವನು= ಆ ಮಯೂರಧ್ವಜನು, ಆದಿಯೊಳ್= ಮೊದಲೆ, ಏಳು= ಏಳಾದ, ತುರಗಮೇಧಂ-
ಗಳನು= ಅಶ್ವಮೇಧಯಾಗಂಗಳನು,ಮಾಡಿ= ರಚಿಸಿ, ನರ್ಮದಾತಟಾಕಕೆಬಂದು= ನರ್ಮದಾನದಿಯ ತೀರವನ್ನು ಸೇರಿ, ಎಂಟನೆಯ= ಎಂಟನೆಯದಾದ, ಅಧ್ವರಕೆ= ಯಾಗವನ್ನು ಮಾಡಲು, ಸಾದರದೊಳ್= ಆಸಕ್ತಿಯಿಂದ, ದೀಕ್ಷಿತನಾಗಿ= ದೀಕ್ಷಾಬದ್ಧನಾಗಿ, ಹಯಮಂ= ಅಶ್ವವನ್ನು, ಮೇದಿನಿಯ= ಇಳೆಯ, ಮೇಲೆ=ಸಂಚಾರಮಾಡಿಕೊಂಡು ಬರಲು, ಬಿಡಲ್ಕೆ= ಬಿಡುವುದಕ್ಕಾಗಿ, ಆ ನೃಪನ ಸೂನು= ಆ ಮಯೂರಧ್ವಜನ ಕುವರನಾದ, ತಾಮ್ರಧ್ವಜನ= ತಾಮ್ರಧ್ವಜನೆಂಬ ಹೆಸರಿನಿಂದ ಕೂಡಿದವನ, ಕಾಪಿನಿಂದ= ರಕ್ಷಣೆಯಿಂದ, ಆ ಹಯಂ= ಆ ಅಶ್ವವು, ಇದಿರಾಗಿ= ಅರ್ಜುನನಿಗೆದುರಾಗಿ, ಬರುತಿರ್ದುದು= ಬರುತ್ತಲಿದ್ದಿತು.
ತಾತ್ಪರ್ಯ:-ರತ್ನಪುರವೆಂಬ ನಗರವನ್ನು ಸೇರಿತು. ಆ ರಾಜ್ಯಕ್ಕೆ ಮಯೂರಧ್ವಜನೆಂಬುವನು ಅರಸಾಗಿದ್ದನು. ಅವನು ಮೊದಲು ಏಳು ಅಶ್ವಮೇಧಗಳನ್ನು ಮಾಡಿ ಮತ್ತೊಂದು ಯಾಗವನ್ನು ಮಾಡಲು ನರ್ಮದಾ ನದಿಯ ತಿರಕ್ಕೆ ಬಂದು, ದೀಕ್ಷಾಬದ್ಧನಾಗಿ, ತನ್ನ ಕುವರನಾದ ತಾಮ್ರಧ್ವಜನ ಬೆಂಗಾವಲಿನಿಂದ ಯಜ್ಞಾಶ್ವವನ್ನು ದೇಶಾಟನೆಗಾಗಿ ಕಳುಹಿದನು, ತಂದೆಯ ಅಪ್ಪಣೆಯ ಪ್ರಕಾರ ಯಾಗದ ಕುದುರೆಯನ್ನು ಮುಂದುಮಾಡಿಕೊಂಡು ತಾಮ್ರಧ್ವಜನು ಅಪಾರ ಸೇನೆಯೊಡನೆ ಬರುತ್ತಲಿದ್ದನು.
ಕ್ಷೋಣೀಂದ್ರ ಕೇಳೀ ತುರಂಗಮಾ ಕುದುರೆಯಂ।
ಕಾಣುತುಂ ಧ್ವನಿಗೈದು ಪರಿತಂದು ಮೊಗವನಾ।
ಘ್ರಾಣಿಸಿ ಮಿಳರ್ಚಿ ಕಿವಿಗಳನೊಡನೆ ಪೆರದೆಗೆದು ಮುಂಗಾಲ್ಗಳಿಂದಡರ್ದು॥
ಮೇಣೊಂದನೊಂದು ಹಿಂದಣ ಖುರಂಗಳಿಂ।
ಮಾಣದಡಿಗಡಿಗೆ ಕಂದದ ತೇಟೆಗಳನಾಡಿ।
ಮಾಣಿಕ್ಯಮುಕ್ತಾಳಿಗಳ ಭೂಷಣಂಗಳಂ ಪರಿದಿಕ್ಕಿ ಬಿರುಗೊಂಡವು॥೮॥
ಪ್ರತಿಪದಾರ್ಥ :- ಕ್ಷೋಣೀಂದ್ರ= ಭೂಕಾಂತನಾದ ಜನಮೇಜಯನೆ, ಕೇಳು=ಲಾಲಿಸು, ಈ ತುರಂಗಂ= ಫಲುಗುಣನ ಯಜ್ಞಾಶ್ವವು, ಆ ಕುದುರೆಯಂ = ತಾಮ್ರಧ್ವಜನ ಬೆಂಗಾವಲಿನಿಂದೆ ಬರುವ ವಾಜಿಯನ್ನು, ಕಾಣುತ= ನೋಡಿದ ಕೂಡಲೆ, ಧ್ವನಿಗೈದು= ಕೆನೆಯುತ್ತಾ, ಪರಿತಂದು=ಓಡಿಬಂದು, ಮೊಗವನು= ಮೋರೆಯನ್ನು, ಆಘ್ರಾಣಿಸಿ = ಮೂಸಿನೋಡಿ, ಒಡನೆ= ತಕ್ಷಣವೇ, ಕಿವಿಗಳನು= ಕಿವಿಗಳನ್ನು, ಮಿಳಿರ್ಚಿ= ಮೇಲಕ್ಕೆಬ್ಬಿಸಿ,ಪೆರೆತೆಗೆದು=ಉಬ್ಬಿ, ಮುಂಗಾಲ್ಗಳಿಂದ= ಮುಂದಿನ ಕಾಲುಗಳಕಡೆಯ ಮೂಲಕ, ಅಡರ್ದು= ಒಂದು ಮತ್ತೊಂದರ ಮೇಲೆ ಏರುತ್ತಾ,ಮೇಣ್=ಅಲ್ಲದೆ,ಒಂದನು= ಒಂದು ಹಯವನ್ನು, ಒಂದು= ಮತ್ತೊಂದು, ಹಿಂದಣಖುರಂಗಳಿಂದೆ= ಹಿಂಗಾಲುಗಳ ಖುರಪುಟಂಗಳಿಂದ,ಒದೆದು=ಝಾಡಿಸಿ, ಗಂಧದ= ಪರಿಮಳದ, ತೀಟೆಗಳ= ಸುವಾಸನೆಯನ್ನು, ಅಡಿಗಡಿಗೆ= ಬಾರಿಬಾರಿಗೂ, ತೀಡಿ=ತಿಕ್ಕಿ, ಮಾಣಿಕ್ಯ= ಮಾಣಿಕ್ಯ ವಿಶಿಷ್ಟವಾದ, ಮುಕ್ತಾವಳಿಗಳ= ಮುತ್ತಿನ ಗುಚ್ಛಂಗಳ, ಭೂಷಣಂಗಳಂ=ಆಭರಣಗಳನ್ನೆಲ್ಲಾ, ಪರಿದಿಕ್ಕಿ = ಕಿತ್ತು ಬಿಸುಟು, ಬಿಡುಗೊಂಡವು= ಸ್ವೇಚ್ಛೆಯಾಗಿದ್ದವು.
ತಾತ್ಪರ್ಯ:- ಭೂಕಾಂತನಾದ ಜನಮೇಜಯನೆ ಕೇಳು, ತಾಮ್ರಧ್ವಜನ ಜತೆಯಲ್ಲಿ ಬರುತ್ತಿರುವ ಯಜ್ಞಾಶ್ವವನ್ನು ಅರ್ಜುನನ
ಬೆಂಗಾವಲಿನಿಂದ ಬರುತಿದ್ದ ಯುಧಿಷ್ಠಿರನ ತುರಂಗವು ಕಂಡು ಕೆನೆಯುತ್ತಾ ಹತ್ತಿರಕ್ಕೆ ಓಡಿಬಂದು ಅದರ ಮುಖವನ್ನು ಮೂಸಿನೋಡಿ, ಕಿವಿಗಳನ್ನು ಮೇಲಕ್ಕೆ ಮಾಡಿಕೊಂಡು, ಮುಂಗಾಲುಗಳನ್ನು ಆ ಕುದುರೆಯ ಮೇಲೆ ಹಾಕಲಾಗಿ, ತಾಮ್ರಧ್ವಜನ ಕುದುರೆಯೂ ಸುಮ್ಮನಿರದೆ ಪಾರ್ಥನ ತುರಂಗವನ್ನು ತನ್ನ ಹಿಂಗಾಲ್ಗಳಿಂದ ಒದೆಯಲಾರಂಭಿಸಿದ್ದಲ್ಲದೆ, ಪರಸ್ಪರ ಅವುಗಳ ಮೈಮೇಲಿದ್ದ ಮುತ್ತಿನ ಸರವೇ ಮೊದಲಾದ ಹಾರಗಳನ್ನೂ ಕೂಡ ಕಿತ್ತು ಹಾಕಿಬಿಟ್ಟವು.
ಭಾರಣೆಯ ಬಲದೊಡನೆ ಕುದುರೆಗಾವಲೊಳಿರ್ದ।
ವೀರತಾಮ್ರಧ್ವಜನ ಮಂತ್ರಿ ನಕುಲಧ್ವಜಂ।
ದೂರದೊಳ್ ಕಂಡನೀ ತೆರನಂ ವಿಚಾರಿಸಿದನೆತ್ತಣ ತುರಂಗಮೆಂದು॥
ಚಾರರಂ ಕಳುಹಿ ತರಿಸಿದನದರ ಮಸ್ತಕದೊ।
ಳಾರಾಜಿಸುವಕನಕ ಪಟ್ಟ ಲಿಖಿತವನೋದಿ।
ಭೂರಮಣ ಧರ್ಮಜನ ಬಿರುದುಗಳ ವಿಸ್ತರವನೊಡೆಯಂಗೆ ಕೇಳಿಸಿದನು॥೯॥
ಪ್ರತಿಪದಾರ್ಥ :- ಭಾರಣೆಯ = ಪರಾಕ್ರಮಾತಿಶಯದಿಂದ ಕೂಡಿದ, ಬಲದೊಡನೆ= ದಳಸಹಿತವಾಗಿ,ಕುದುರೆಗಾವಲೊಳು
= ಯಜ್ಞಾಶ್ವದ ರಕ್ಷಣೆಯಲ್ಲಿ, ಇರ್ದ್ದ=ಇದ್ದಂಥಾ, ವೀರ= ಶೂರರಾದ, ತಾಮ್ರಧ್ವಜನ = ತಾಮ್ರಧ್ವಜನೆಂಬಾತನ, ಮಂತ್ರಿ= ಅಮಾತ್ಯನಾದ ನಕುಲಧ್ವಜಂ= ನಕುಲಧ್ವಜನೆಂಬಾತನು,ದೂರದೊಳ್= ದೂರದಲ್ಲಿರುವಾಗಲೆ, ಈತೆರನಂ= ಕುದುರೆಗಳ ಕಾಳಗವನ್ನು, ಕಂಡನು= ನಿರುಕಿಸಿದನು, ಎತ್ತಣ=ಎಲ್ಲಿಂದ ಬಂದಿರತಕ್ಕ, ತುರಗಂ= ಹಯವು, ಎಂದು=ಎಂಬುದಾಗಿ, ವಿಚಾರಿಸಿದನು= ವಿಚಾರ ಮಾಡಿದನು, ಅದರ ಮಸ್ತಕದೊಳು= ಆ ಅಶ್ವದ ಹಣೆಯಮೇಲೆ, ಆರಾಜಿಸುವ= ಹೊಳೆಯುತ್ತ-
ಲಿರುವ, ಕನಕ= ಬಂಗಾರದ, ಪಟ್ಟ= ತಗಡಿನಲ್ಲಿರುವ, ಲಿಖಿತವನು= ಬರವಣಿಗೆಯನ್ನು, ( ಬಿರುದಾವಳಿಯನ್ನು) ಚಾರರಂ= ಸೇವಕಜನರನ್ನು, ಕಳುಹಿ = ಕಳುಹಿಸಿ, ತರಿಸಿದನು= ತರಿಸಿಕೊಂಡನು, ಭೂರಮಣ= ಪೃಥ್ವೀಶ್ವರನಾದ, ಧರ್ಮಜನ= ಧರ್ಮಸುತನ, ಬಿರುದುಗಳ=ಬಿರುದಾವಳಿಯ, ವಿಸ್ತರವನು= ವಿಶಾಲತೆಯನ್ನು, ಓದಿ= ತಾನು ಓದಿಕೊಂಡು, ಒಡೆಯಂಗೆ= ತನ್ನ ಯಜಮಾನನಾದ ತಾಮ್ರಧ್ವಜನಿಗೆ, ಕೇಳಿಸಿದನು= ಶ್ರುತಪಡಿಸಿದನು.
ತಾತ್ಪರ್ಯ:- ಇವೆರಡು ಕುದುರೆಗಳೂ ಈಪರಿ ಕಾದಾಡುತ್ತಲಿರುವುದನ್ನು ದೂರದಲ್ಲಿದ್ದ ನಕುಲಧ್ವಜನೆಂಬ ತಾಮ್ರಕೇತುವಿನ ಸಚಿವನು ಕಂಡು, ಈ ಕುದುರೆಯ ವೃತ್ತಾಂತವನ್ನೆಲ್ಲಾ ಚಾರರಿಂದ ತಿಳಿದು, ಆ ಹಯದ ಹಣೆಯಲ್ಲಿ ಬಿಗಿದಿದ್ದ ಕನಕ ಪಟ್ಟಿಯನ್ನು ಚಾರರು ತಂದು ಕೊಟ್ಟ ಪಟ್ಟದಲ್ಲಿರುವ ಯುಧಿಷ್ಠಿರ ನರೇಂದ್ರನ ಬಿರುದಾವಳಿಯನ್ನೆಲ್ಲಾ ಓದಿಕೊಂಡು, ತನ್ನೊಡೆಯನಾದ ತಾಮ್ರಧ್ವಜನಿಗೆ ಸಾಂಗವಾಗಿ ತಿಳಿಸಿದನು.
ಕೇಳುತ ಕನಲ್ದು ತಾಮ್ರಧ್ವಜಂ ಕಟ್ಟಿದಂ।
ತೋಳ ಬಲ್ಪಿಂದೆ ಪಾರ್ಥನ ತುರಗಮಂ ಬಳಿಕ ।
ಮೇಳೈಸಿ ನಿಲಿಸಿದಂ ನಿಜಬಲದ ಪೌಜುಗನರೂಧಚಂದ್ರಾಕೃತಿಯೊಳು॥
ಏಳಧ್ವರಂ ಪಿಂತೆ ಕೃಷ್ಣವರ್ಜಿತಮಾಯ್ತು।
ಪೇಳಲೇನಿದು ಕೃಷ್ಣಸಂಯುಕ್ತಮಾದಪುದು।
ಕಾಳೆಗಂ ಕೃಷ್ಣನೊಳ್ ದೊರಕೊಳ್ವುದೀಗಳೆಂದೈಬ್ಬೇರಿದಂ ಮನದೊಳು ॥೧೦॥
ಪ್ರತಿಪದಾರ್ಥ :- ತಾಮ್ರಧ್ವಜನು= ಮಯೂರಧ್ವಜನ ಕುವರನು, ಕೇಳುತ= ಈ ಮಾತುಗಳನ್ನು ಕೇಳಿದ ಕೂಡಲೆ, ಕನಲ್ದು= ಕೋಪಗೊಂಡು, ಪಾರ್ಥನ= ಫಲುಗುಣನ, ತುರಗಮಂ= ಹಯವನ್ನು, ತೋಳಬಲ್ಪಿಂದ= ಬಾಹು ಪರಾಕ್ರಮದಿಂದ, ಕಟ್ಟಿದಂ= ಕಟ್ಟಿಹಾಕಿದನು, ಬಳಿಕ = ಆಮೇಲೆ, ನಿಜಬಲದ= ತನ್ನ ಸೇನೆಯ, ಫೌಜುಗಳನು= ಚತುರಂಗಬಲವನ್ನೂ, ಮೇಳೈಸಿ= ಒಟ್ಟುಗೂಡಿಸಿ,ಅರ್ಧಚಂದ್ರಾಕೃತಿಯೊಳು= ಅರ್ಧ ಚಂದ್ರನ ಆಕಾರದಂತೆ, ನಿಲಿಸಿದಂ= ನಿಲ್ಲಿಸಿದನು, ಏಳಧ್ವರಂ= ಏಳು ಅಶ್ವಮೇಧಗಳು,ಪಿಂತೆ=ಹಿಂದೆ, ಕೃಷ್ಣವರ್ಜಿತ= ಕೃಷ್ಣನಿಲ್ಲದೆ ನಡೆದದ್ದು, ಆಯ್ತು= ಆಗಿಬಿಟ್ಟಿತು, ಇದು= ಈ ಯಾಗವಾದರೊ,ಕೃಷ್ಣ ಸಂಯುಕ್ತಂ= ಕೃಷ್ಣನಿಂದ ಕೂಡಿದ್ದು, ಆದಪುದು= ಆಗುತ್ತದೆ, ಪೇಳಲೇನು= ಇನ್ನು ಹೇಳತಕ್ಕ-
ದ್ದೇನಿರುವುದು, ಈಗ=ಈಗಲಾದರೊ,ಕೃಷ್ಣನೊಳ್= ಕೃಷ್ಣನೊಂದಿಗೆ, ಕಾಳಗಂ= ಯುದ್ಧವು,ದೊರಕೊಂಬುದು= ಉಂಟಾಗುವುದು,ಎಂದು=ಎಂಬತೆರನಾಗಿ, ಮುದದೊಳ್= ಆನಂದದಿಂದ, ಉಬ್ಬೇರಿದಂ= ಉಬ್ಬಿ ಮೆರೆಯಲುಜ್ಜುಗಿಸಿದನು.
ತಾತ್ಪರ್ಯ:-ತನ್ನ ಮಂತ್ರಿಯು ಹೇಳಿದ ಯುಧಿಷ್ಠಿರನ ಪ್ರತಾಪದ ನುಡಿಗಳನ್ನು ತಾಮ್ರಧ್ವಜನು ಕೇಳಿ, ಕೋಪಾಟೋಪದಿಂದೊಡಗೂಡಿ, ಅವನ ಯಾಗದ ಹಯವನ್ನು ತಂದು ಬಿಗಿದು ತನ್ನ ಸಕಲ ಪರಿವಾರವನ್ನು
ದ್ರಾಕಾರದಿಂದ ನಿಲ್ಲಿಸಿ, ಹಿಂದೆ ನಡೆದ ಅಶ್ವಮೇಧಂಗಳು ಏಳೂ ಕೃಷ್ಣನಿಲ್ಲದೆಯೆ ನಡೆದಿರುವುವು. ನಮ್ಮ ತಂದೆಯು ಮಾಡಲುಜ್ಜುಗಿಸುತ್ತಲಿರುವ ಈ ಯಾಗವಾದರೊ ಕೃಷ್ಣಸಮೇತವಾಗಿ ನಡೆಯುವುದೆಂಬ ಅತ್ಯುತ್ಸಾಹದಿಂದ ಕೂಡಿ ಮನದಲ್ಲೇ ಉಲ್ಲಸಿತನಾದನು.
ತಂದೆಯ ಮಹಾಧ್ವರಕೆ ಕೃಷ್ಣನೊಡಗೂಡುವಂ।
ಮುಂದೆ ಪಾಂಡವ ವೀರರೊಳ್ ತನಗೆ ಕಾಳೆಗಂ।
ಬಂದಪುದು ಲೇಸಾದುದೆಂದು ತಾಮ್ರಧ್ವಜಂ ನಕುಲಧ್ವಜನೊಳಾಡಲು॥
ಮಂದ ಪೌರುಷದಲ್ಪಭಾಗ್ಯದತಿಕೃಶಮಾದ।
ಮಂದಿ ಕುದುರೆಯ ಮೇದಿನೀಶ್ವರರ್ ಕಾಳೆಗಕೆ।
ನಿಂದಪರೆ ನಿನ್ನೊಳಿದು ಪುಸಿಯೆನುತೆ ಮತ್ತವಂ ನಸುನಗೆಯೊಳಿಂತೆಂದನು॥೧೧॥
ಪ್ರತಿಪದಾರ್ಥ :- ತಾಮ್ರಧ್ವಜಂ = ತಾಮ್ರಧ್ವಜನು, ಮುಂದೆ= ಇನ್ನು ಮುಂದೆ, ತಂದೆಯ= ಜನಕನಾದ ಮಯೂರಧ್ವಜನು ಮಾಡತಕ್ಕ, ಮಹಾಧ್ವರಕೆ= ದೊಡ್ಡ ಯಾಗಕ್ಕೆ, ಕೃಷ್ಣನು=ಶ್ರೀಕೃಷ್ಣನು, ಒಡಗೂಡುವಂ= ಸೇರುತ್ತಾನೆ,ತನಗೆ= ನನಗಾದರೊ, ಪಾಂಡುವೀರರೊಳ್= ಅರ್ಜುನನ ಬಲದೊಂದಿಗೆ, ಕಾಳಗಂ= ಸಮರವು, ಬಂದಪುದು= ಒದಗುವುದು, ಲೇಸಾದುದು= ಮೇಲಾಯಿತು,ಎಂದು=ಎಂಬ ತೆರನಾಗಿ, ನಕುಲಧ್ವಜನೊಳು= ನಕುಲಧ್ವಜನೊಂದಿಗೆ,ಆಡಲು= ನುಡಿಯಲು, ಮಂದಪೌರುಷದ= ಬಲಹೀನವಾದ, ಅಲ್ಪಭಾಗ್ಯಂ= ಭಾಗ್ಯರಹಿತವು,ಅತಿಕೃಶಮಾದ= ಬಹು ಕಡಿಮೆಯಾದ, ಮಂದಿ= ಪ್ರಜೆಗಳು, ಕುದುರೆಯ= ಅಶ್ವಗಳಿಂದ ಕೂಡಿದ, ಮೇದಿನೀವರರ್= ಅರಸುಗಳು,ನಿನ್ನೊಳು=ನಿನ್ನ ಕೂಡ,ಕಾಳಗಕೆ= ಯುದ್ಧ ಮಾಡುವುದಕ್ಕೆನಿಂದಪರೆ= ಎದುರಾಗುತ್ತಾರೆಯೇ, ಇದು=ಪಾಂಡವರ ಸೇನೆಯು ನಿನಗೆದುರಾಗುವುದು, ಪುಸಿ= ಸುಳ್ಳು. ಎನುತ= ಎಂದು ಹೇಳುತ್ತ, ನಸುನಗೆಯೊಳು= ಮಂದಹಾಸದಿಂದ,ಅವಂ= ಆ ತಾಮ್ರಧ್ವಜನ ಮಂತ್ರಿಯು, ಇಂತು= ಈ ತೆರನಾಗಿ, ಎಂದನು= ನುಡಿದನು,
ತಾತ್ಪರ್ಯ:- ನಕುಲಧ್ವಜನನ್ನು ಕುರಿತು, ಎಲೈ ಮಂತ್ರಿವರ್ಯನೆ, ಪೂರ್ವದಲ್ಲಿ ನಡೆದ ಯಜ್ಞಗಳಿಗಿಂತಲೂ ಈಗ ನಮ್ಮ ತಂದೆಯು ಮಾಡುವ ಯಜ್ಞಕ್ಕೆ ಕೃಷ್ಣನೂ ಬಂದೊದಗುವನು, ಪಾಂಡವರೊಡನೆ ಯುದ್ಧಮಾಡಬೇಕಾಗುವುದು, ಒಳ್ಳೇದು, ಆಗಲಿ, ಎಂದು ನುಡಿದನು,ತಾಮ್ರಧ್ವಜನ ಈ ತೆರನಾದ ನುಡಿಗಳನ್ನು ಕೇಳಿದ ನಕುಲಧ್ವಜನು, ಮುಗುಳುನಗೆಯಿಂದ ಕೂಡಿ, ಎಲೈ ಪ್ರಭುವೆ ಮಂದಭಾಗ್ಯರೂ, ಅಬಲರಾದ ಸೈನಿಕರಿಂದ ಕೂಡಿದವರೂ ಆದ ಪಾಂಡವರು, ವೀರನಾದ ನಿನ್ನೊಂದಿಗೆ ನಿಂತು ಹೋರಾಡುವುದೆಂದರೇನು? ಇದು ಅಸಂಭವವು.
ಚಪ್ಪನ್ನದೇಶದೊಳ್ ನಿನಗೆ ಮಲೆತಿದಿರಾಗಿ।
ಬಪ್ಪ ಭೂಮಿಪರಿಲ್ಲ ನಿಮ್ಮಯ್ಯನರಮನೆಯೊ।
ಳೊಪ್ಪಂಬಡೆದ ನರ್ತಕೀಜನದ ನಿತ್ಯ ಪುಷ್ಪಾಂಜಲಿಯ ಸಂಗ್ರಹಕ್ಕೆ॥
ತಪ್ಪದೆಂದು ತೆರುವ ಕಟ್ಟಳೆಯ ಮುತ್ತುಗಳ।
ಕಪ್ಪಮಂ ಕೊಂಡು ಬಂದನೊ ಬಭ್ರುವಾಹನಂ ।
ಸಪ್ಪುಳಿದು ಪೊಸತೆತ್ತಣದೊ ಸೈನ್ಯಮೆನೆ ತಾಮ್ರಕೇತು ಮಗುಳಿಂತೆಂದನು॥೧೨॥
ಪ್ರತಿಪದಾರ್ಥ :- ನಿನಗೆ= ನಿನಗಾದರೊ, ಮಲತು= ವ್ಯತಿರಿಕ್ತವಾಗಿ,ಇದಿರಾಗಿ= ಎದುರುಬಿದ್ದು, ಬಪ್ಪ=ಬರತಕ್ಕ, ಭೂಮಿಪರು= ಅರಸುಗಳು, ಛಪ್ಪನ್ನದೇಶದೊಳು= ಐವತ್ತಾರು ನಾಡುಗಳೊಳಗೂ, ಇಲ್ಲ=ಇಲ್ಲವು,ನಿಮ್ಮಯ್ಯನ= ನಿಮ್ಮ ತಂದೆಯ,ಅರಮನೌಯೊಳು= ರಾಜಭವನದೊಳಗೆ,ಒಪ್ಪಂಬಡೆದ= ಗೊತ್ತಾಗಿರುವ, ನರ್ತಕೀಜನ= ನಾಟ್ಯಗಾತಿಯರು, ನಿತ್ಯ= ಅನವರತವೂ, ಪುಷ್ಪಾಂಜಲಿಯ = ಮುತ್ತುಗಳಿಂದ ತುಂಬಿದ ಬೊಗಸೆಯ,ಸಂಗ್ರಹಕೆ= ಸೇರುವಿಕೆಗೆ, ತಪ್ಪದು= ತಪ್ಪತಕ್ಕದ್ದಲ್ಲವು,ಎಂದುಂ= ಸದಾಕಾಲದಲ್ಲಿಯೂ, ತೆರುವ= ಕೊಡಬೇಕಾಗಿರುವ,ಕಟ್ಟಳೆಯ=ನಿಷ್ಕರ್ಷೆಯಾಗಿರತಕ್ಕ, ಮುತ್ತುಗಳ ಕಪ್ಪಮಂ= ಮುತ್ತುಗಳ ಕಾಣಿಕೆಯನ್ನು, ಬಭ್ರುವಾಹನಂ =ಪಾರ್ಥಜನು,ಕೊಂಡುಬಂದನೊ= ತೆಗೆದುಕೊಂಡು ಬಂದಿರುವನೊ,ಇದು ಸಪ್ಪುಳು=ಈ ದನಿಯು,ಸೈನ್ಯಂ= ದಳವೂ, ಪೊಸದು= ಹೊಸದಾಗಿದೆ, ಎತ್ತಣದು=ಎಲ್ಲಿಂದ ಬಂದಿರುವುದು,ಎನೆ=ಎಂದು ನುಡಿಯಲು, ಮಗುಳೆ=ತಿರುಗಿ ತಾಮ್ರಕೇತು = ತಾಮ್ರಧ್ವಜನು, ಇಂತು= ಮುಂದೆ ಹೇಳುವಂತೆ ಎಂದನು= ನುಡಿದನು.
ತಾತ್ಪರ್ಯ:- ಐವತ್ತಾರು ದೇಶಗಳಲ್ಲಿರುವ ರಾಜರಲ್ಲಿ ಯಾರು ತಾನೆ ನಿನಗೆದುರಾಗಿ ನಿಂತು ಬಾಳಿಯಾರು? ನಿಮ್ಮ ತಂದೆಯಾದ ಮಯೂರಧ್ವಜನ ರಾಜಭವನದಲ್ಲಿ ನಾಟ್ಯವಾಡತಕ್ಕ ನಟಿಯರ ಪುಷ್ಪಾಂಜಲಿಗಾಗಿ ಬಭ್ರುವಾಹನನು ಮುತ್ತಿನ ರಾಶಿಗಳ ಕಪ್ಪವನ್ನರ್ಪಿಸಲು ಸೇನಾಸಮೇತನಾಗಿ ಬರುತ್ತಲಿರೈವನೆ ಹೊರತು ಮತ್ತೆ ಬೇರೆ ಇಲ್ಲವೆಂದು ನುಡಿದನು.
ಧಾತ್ರಿಯೊಳ್ ವೀರರಿಲ್ಲೆನ್ನದಿರ್ ನಾರದಂ।
ರಾತ್ರಿಯೊಳ್ ಬಂದೆನ್ನೊಳಾಡಿದಂ ಧರೆಗತಿ।
ಕ್ಷಾತ್ರಪೌರುಷದಿಂದೆ ವರ್ತಿಪರ್ ಬಭ್ರುವಾಹನ ಕರ್ಣತನಯರೆಂದು॥
ಗೋತ್ರಾರಿ ಪುತ್ರ ದಾನವ ಸೂದನರ್ ಮನುಜ।
ಮಾತ್ರರಲ್ಲೆಯ್ದೆ ನರನಾರಾಯಣರ್ ಕಮಲ।
ನೇತ್ರಸಮರನಿರುದ್ಧ ಸಾತ್ಯಕಿ ಪ್ರದ್ಯುಮ್ನ ಭೋಜಾದಿ ಯದುಗಳೆಂದು॥೧೩॥
ಪ್ರತಿಪದಾರ್ಥ :- ಧತ್ರಿಯೊಳ್= ಭೂಮಿಯಲ್ಲಿ, ವೀರರು= ಪರಾಕ್ರಮಿಗಳು, ಇಲ್ಲ= ಇಲ್ಲವು, ಎನ್ನದೆ= ಎಂದು ನುಡಿಯದೆ, ಇರು=ಇರುವವನಾಗು, ರಾತ್ರಿಯೊಳ್= ನಿನ್ನೆ ರಾತ್ರಿ,ನಾರದಂ= ಜ್ಞಾನಪ್ರದನಾದ ನಾರದ ಮಹಾಮುನಿಯು,ಬಂದು= ನಾನಿದ್ದೆಡೆಗೆ ಬಂದು, ಬಭ್ರುವಾಹನ ಕರ್ಣತನಯರು= ಅರ್ಜುನನ ಮಗ ಕರ್ಣನ ಮಗ, ಧರೆಗೆ= ಭೂಮಂಡಲದಲ್ಲಿ, ಅತಿ ಕ್ಷಾತ್ರಪೌರುಷದಿಂದ= ಬಹು ಹೆಚ್ಚಾದ ಶೌರ್ಯವುಳ್ಳವರಾಗಿ,ವರ್ತಿಪರು= ಇದ್ದಾರೆ, ಎಂದು= ಎಂಬುದಾಗಿಯೂ, ಗೋತ್ರಾ-
ರಿಪುತ್ತ=ಫಲುಗುಣನೂ, ದಾನವಸೂದನರ್= ಕೃಷ್ಣನೂ ಸಹ, ಮನುಜಮಾತ್ರರಲ್ಲ= ಎಲ್ಲರಂತೆ ಮನುಷ್ಯರಲ್ಲವು, ಇವರು= ಇವರಿಬ್ಬರೂ, ನರನಾರಾಯಣರು= ಮನುಷ್ಯರ ರೂಪವನ್ನು ಧರಿಸುವ ದೇವರುಗಳು, ಅನಿರುದ್ಧ = ಅನಿರುದ್ಧನೆಂಬಾತನು
ಸಾತ್ಯಕಿ=ಸತ್ಯಕನ ಮಗನೂ,ಪ್ರದ್ಯುಮ್ನ = ಪ್ರದ್ಯುಮ್ನನೆಂಬವನೂ, ಭೋಜ= ಭೋಜನೂ, ಆದಿ= ಮೊದಲಾದ, ಯದುಗಳು= ಯದುವಂಶೀಯರಾದರೊ, ಕಮಲನೇತ್ರಸಮರು= ಕಮಲಾಕ್ಷನಾದ ಶ್ರೀಮನ್ನಾರಾಯಣನಿಗೆ ಸಮರಾಗಿರುವವರು, ಎಂದು= ಎಂಬತೆರನಾಗಿ, ಆಡಿದಂ= ನುಡಿದನು,.
ಅ॥ವಿ॥ ಗೋತ್ರ=ಪರ್ವತಗಳ, ಅರಿ= ಶತೃ (ಇಂದ್ರನು, ಷ. ತ. ಸ. ) ಗೋತ್ರಾರಿಯ ಪುತ್ರ (ಷ. ತ. ಸ.) ಇಂದ್ರನ ಮಗನು (ಅರ್ಜುನನು) ದಾನವ= ರಾಕ್ಷಸರನ್ನು, ಸೂದನ= ಕೊಂದುಹಾಕಿದವನು(ದ್ವಿ. ತ) ಕಮಲನೇತ್ರ-ಕಮಲದಂತೆ ನೇತ್ರವು ಯಾರಿಗೋ ಅವನು(ಬ. ಸ.)
ತಾತ್ಪರ್ಯ:- ಆಗ ತಾಮ್ರಧ್ವಜನು ತನ್ನ ಸಚಿವನನ್ನು ನೋಡಿ, ಎಲೈ ನಕುಲಧ್ವಜನೆ, ಲೋಕದಲ್ಲಿ ಶೂರರಿಲ್ಲವೆಂದು ಎಂದಿಗೂ ತಿಳಿಯಬೇಡ. ನೆನ್ನೆ ನಾನು ಮಲಗಿರುವಾಗ ರಾತ್ರಿಯಲ್ಲಿ ನಾರದಮಹರ್ಷಿಯು ಸ್ವಪ್ನದಲ್ಲಿ ಬಂದು, ಲೋಕದಲ್ಲಿ ವೀರಾಗ್ರೇಸರರೊಳಗೆ ಹೆಸರುವಾಸಿಯಾದ ವೃಷಕೇತು, ಬಭ್ರುವಾಹನ, ರೆಂಬೀರ್ವರು ಭೂಲೋಕದಲ್ಲೆಲ್ಲ ಪ್ರಸಿದ್ಧರು. ಪೂರ್ವದಲ್ಲಿ ಶ್ರೀಮಹಾವಿಷ್ಣುವು ನರನಾರಾಯಣಾವತಾರವನ್ನು ತಾಳಿದ್ದವನು. ಈಗ ಕೃಷ್ಣಾರ್ಜುನರೆಂಬ ನಾಮಧೇಯ-
ದಿಂದ ಭೂಸಂಚಾರವನ್ನು ಗೈಯುತ್ತಲಿರುವರೆಂದೂ, ಅನಿರುದ್ಧ, ಸಾತ್ಯಕಿ, ಪ್ರದ್ಯುಮ್ನ, ಭೋಜ ಮೊದಲಾದ ಯದುವೀರ-
ರೆಲ್ಲಾ, ಪದ್ಮಪತ್ರೇಕ್ಷಣನಾದ ಪಾವನಮೂರ್ತಿಗೆ ಸಮನಾದವರೆಂದೂ ಹೇಳಿ ಹೊರಟುಹೋದನು.
ಉದ್ಧತ ಪರಾಕ್ರಮಿಗಳಿನಿಬರಿಂದಿವರೊಡನೆ।
ಯುದ್ಧಮಾದಪುದೆಮಗೆ ನಮ್ಮಖಿಳಸೇನೆ ಸ।
ನ್ನದ್ಧಮಾಗಿರಲರ್ಧಚಂದ್ರಾಕೃತಿಯೊಳೆಂದು ತಾಮ್ರಧ್ವಜಂ ಮಂತ್ರಿಗೆ॥
ಬುದ್ಧಿಗಲಿಸಿದನಿತ್ತ ಪಾಂಡವನ ಬಲದೊಳ್ ಪ್ರ।
ಸಿದ್ಧಭಟರನುಸಾಲ್ವ ಕರ್ಣಸುತ ಸಾಂಬಾನಿ।
ರೈದ್ಧ ಕೃತವರ್ಮಾದಿಗಳ್ ಮಸಗಿದರ್ ತುರಂಗಮಂ ಬಿಡಿಸುವುಜ್ಜುಗದೊಳು॥೧೪॥
ಪ್ರತಿಪದಾರ್ಥ :- ತಾಮ್ರಧ್ವಜಂ= ತಾಮ್ರಧ್ವಜನು, ಮಂತ್ರಿಗೆ= ತನ್ನ ಮಂತ್ರಿ ನಕುಲಧ್ವಜನಿಗೆ, ಎಮಗೆ= ನಮಗೆ, ಉದ್ಧತ= ಕಠಿಣವಾದ, ಪರಾಕ್ರಮಿಗಳು= ವೀರರು, ಅನಿಬರೊಡನೆ= ಅವರೊಂದಿಗೆ, ಯುದ್ಧಂ= ರಣವು, ಆದಪುದು= ಆಗುತ್ತದೆ, ನಮ್ಮ= ನಮ್ಮದಾದ, ಅಖಿಳಸೇನೆ= ಸೈನ್ಯವೆಲ್ಲಾ, ಅರ್ಧಚಂದ್ರಾಕೃತಿಯೊಳು= ಅರ್ಧಚಂದ್ರನ ತೆರನಾಗಿ, ಸನ್ನದ್ಧಮಾಗಿ= ಅನುವಾಗಿ, ಇರಲಿ= ಇರತಕ್ಕದ್ದಾಗಿರಲಿ, ಎಂದು= ಎಂಬುದಾಗಿ, ಬುದ್ಧಿಗಲಿಸಿದನು= ತಿಳಿ ಹೇಳಿದವನಾದನು, ಇತ್ತ= ಈ ಭಾಗದಲ್ಲಿ,ಪಾಂಡವ ಬಲದೊಳ್= ಧನಂಜಯನ ದಂಡಿನಲ್ಲಿ,ಪ್ರಸಿದ್ಧ= ಹೆಸರಾದ, ಭಟರು= ವೀರರಾದ, ಅನುಸಾಲ್ವ= ಅನುಸಾಲ್ವನೂ, ಕರ್ಣಸುತ= ವೃಷಧ್ವಜನೂ, ಸಾಂಬ= ಸಾಂಬನು, ಅನಿರುದ್ಧನೂ, ಕೃತವರ್ಮಾದಿಗಳ್ = ಕೃತವರ್ಮನೇ ಮೊದಲಾದವರು, ಅಶ್ವಮಂ= ಕುದುರೆಯನ್ನು, ಬಿಡಿಸಿಕೊಂಬ= ಬಿಡಿಸಿಕೊಳ್ಳಬೇಕೆನ್ನತಕ್ಕ,ಉಜ್ಜುಗದೊಳು=ಕಾರ್ಯದಲ್ಲಿ, ಮಸಗಿತು= ಯತ್ನವನ್ನು ಮಾಡಿದರು.
ತಾತ್ಪರ್ಯ:- ಈಗಲಾದರೊ ಇಂತಹ ಅಸಹಾಯಶೂರರೊಂದಿಗೆನಾನು ಕಾಳಗವನ್ನು ಮಾಡಬೇಕಾಗಿರುವುದರಿಂದ ನಮ್ಮ ಸೈನ್ಯವೆಲ್ಲಾ ಅರ್ಧಚಂದ್ರಾಕೃತಿಯಾಗಿ ನಿಂತಿರುವಂತೆಕಟ್ಟು ಮಾಡಿ ಎಂದನು. ಅತ್ತ ಪಾಂಡವ ಬಲದಲ್ಲಿರತಕ್ಕ ರಾಜಾಧಿರಾಜರು ಪಾರ್ಥನ ಕುದುರೆಯನ್ನು ತಾಮ್ರಧ್ವಜನು ಕಟ್ಟಿಹಾಕಿದನೆಂದು ತಿಳಿದರು, ಊವರಲ್ಲಿ ಅನಿರುದ್ಧ, ಸಾತ್ಯಕಿ, ಪ್ರದ್ಯುಮ್ನ ಮೊದಲಾದವರೆಲ್ಲ ತಾಮ್ರಧ್ವಜನೊಂದಿಗೆ ಕಾಳಗಮಾಡಲುಜ್ಜುಗಿಸುತ್ತಲಿದ್ದರು.
ಕುದುರೆಯಂ ಕಟ್ಟಿ ಪಡೆಸಹಿತ ತಾಮ್ರಧ್ವಜಂ।
ಕದನಕಿದಿರಾಗಲಸುರಾಂತಕಂ ಕಂಡು ತೋ।
ರಿಸಿದನರ್ಜುನಂಗಿವಂ ಬರ್ಹಿಧ್ವಜನ ತನುಜನನಸೂಯಕಂ ಧೀರನು॥
ಉದಿತ ಕಾಮಂ ಸತ್ಯವಾದಿ ಶುಚಿ ವೈಷ್ಣವಂ।
ಸದರಮಲ್ಲಿವನೊಡನೆ ಕಾಳಗಂ ನರ್ಮದಾ।
ನದಿಯ ತೀರದೊಳಿವನ ತಂದೆ ದೀಕ್ಷಿತನಾಗಿಹಂ ಗೆಲ್ವುದರಿದೆಂದನು॥೧೫॥
ಪ್ರತಿಪದಾರ್ಥ :- ತಾಮ್ರಧ್ವಜಂ= ತಾಮ್ರಧ್ವಜನು, ಕುದುರೆಯಂ = ಪಾರ್ಥನ ತುರಗವನ್ನು, ಕಟ್ಟಿ= ಕಟ್ಟಿಹಾಕಿ, ಕದನಕೆ = ಕಾಳಗಕ್ಕೆ, ಪಡೆಸಹಿತ = ಸೇನಾಸಮೇತನಾಗಿ, ಇದಿರಾಗಲು= ಎದುರು ಬೀಳಲು,ಅಸುರಾಂತಕಂ= ಕೃಷ್ಣನು, ಕಂಡು=ಈಕ್ಷಿಸಿ, ಅರ್ಜುನಂಗೆ= ಪಾರ್ಥನಿಗೆ,ತೋರಿದಂ= ತೋರಿಸಿದನು, ಇವಂ= ಈಗ ಎದುರಾಗಿರತಕ್ಕವನು,ಬರ್ಹಿಧ್ವಜನ ತನುಜನು= ಮಯೂರಧ್ವಜನ ಮಗನು, ಅನಸೂಯಕಂ= ಹೊಟ್ಟೆ ಕಿಚ್ಚಿಲ್ಲದವನು,ಧೀರನು= ಪರಾಕ್ರಮಿಯು, ಉದಿತಕಾಮಂ= ಇಷ್ಟಾರ್ಥದಿಂದ ಕೂಡಿದವನು, ಸತ್ಯವಾದಿ= ಯಥಾರ್ಥವನ್ನು ನುಡಿಯುವವನು, ಶುಚಿ= ಪವಿತ್ರನು, ವೈಷ್ಣವಂ= ವಿಷ್ಣುವಿನಲ್ಲಿ ಸಂಪೂರ್ಣ ಭಕ್ತಿಯುಳ್ಳವನು, ಕಾಳಗಂ= ಯುದ್ಧಮಾಡುವಿಕೆಯು, ಇವನೊಡನೆ= ಈ ತಾಮ್ರಧ್ವಜನೊಂದಿಗೆ, ಸದರಂ ಅಲ್ಲ= ಸುಲಭವಲ್ಲ, ಇವನತಂದೆ= ಇವನ ಜನಕನು, ನರ್ಮದಾನದಿಯ ತೀರದೊಳ್= ನರ್ಮದಾನದಿಯ ದಡದಲ್ಲಿ, ದೀಕ್ಷಿತನಾಗಿ= ದೀಕ್ಷಾಬದ್ಧನಾಗಿ, ಇಹಂ= ಇದ್ದಾನೆ, ಗೆಲ್ವುದು= ಅವನನ್ನು ಸೋಲಿಸುವುದು,ಅರಿದು= ಸಾಧ್ಯವಲ್ಲ,ಎಂದನು= ಎಂಬುದಾಗಿ ಹೇಳಿದನು.
ತಾತ್ಪರ್ಯ:- ಆಗ ಕೃಷ್ಣನು ಅರ್ಜುನನ ಕುದುರೆಯನ್ನು ಕಟ್ಟಿಹಾಕಿ ಸೈನ್ಯವನ್ನು ಅರ್ಧಚಂದ್ರಾಕೃತಿಯಾಗಿ ನಿಲ್ಲಿಸಿಕೊಂಡು ನಿಂತಿರುವುದನ್ನು ನೋಡಿ, ಪಾರ್ಥನನ್ನು ಕುರಿತು, ಎಲೈ ಕಿರೀಟಿಯೆ,ಈಗ ಕುದುರೆಯನ್ನು ಕಟ್ಟಿಕೊಂಡಿರುವವನು ತಾಮ್ರಧ್ವಜನೆಂಬ ಹೆಸರಿನಿಂದ ಪ್ರಸಿದ್ಧನಾಗಿರುವವನು. ಇವನ ತಂದೆ ಮಯೂರಧ್ವಜನು. ಅಸೂಯೆ ಇಲ್ಲದವನು. ಧೈರ್ಯಶಾಲಿ, ಕೃತಾರ್ಥ, ಸತ್ಯವಂತ, ಮಹಾಪರಿಶುದ್ಧನು, ವಿಷ್ಣು ಭಕ್ತನು, ಅತಿ ಬಲಶಾಲಿಯಾಗಿರುವನು. ಎವನನ್ನು ಜಯಿಸುವುದು ಸುಲಭಸಾಧ್ಯವೆಂದು ತಿಳಿಯಬೇಡ. ಇವನ ತಂದೆ ಮಯೂರಧ್ವಜನು ನರ್ಮದಾನದಿಯ ದಡದಲ್ಲಿ ಯಾಗದೀಕ್ಷಿತನಾಗಿ ಕುಳಿತಿರುವನು.
ಎಂದಖಿಳಸೇನೆಯಂ ಗೃಧ್ರದಾಕಾರಕ್ಕೆ।
ತಂದು ನಿಲಿಸಿದನಸುರಮರ್ಧನಂ ಮೇಣದರ।
ಮುಂದೆಸೆಯೆ ಕೊರಲೊಳನುಸಾಲ್ವನಂ ಕಂಗಳೊಳ್ ನೀಲ ಹಂಸಧ್ವಜರನು॥
ಕಂದರ್ಪಕಾನಿರುದ್ಧರನುಭಯ ಪಕ್ಷದೆಡೆ।
ಗಂಧದಿಂದಡಿಗಳ್ಗೆ ಭೋಜ ಸಾತ್ಯಕಿಗಳಂ।
ಹಿಂದಣಗರಿಗೆ ಮೇಘನಾದನಂ ಕಲಿಯೌವನಾಶ್ವನಂ ಜೋಡಿಸಿದನು॥೧೬॥
ಪ್ರತಿಪದಾರ್ಥ :- ಕೃಷ್ಣನು, ಎಂದು= ಈ ತೆರನಾಗಿ ನುಡಿದು, ಗೃಧ್ರದಾಕಾರಕ್ಕೆ = ಹದ್ದಿನ ಆಕೃತಿಗೆ, ಅಖಳಸೇನೆಯಂ= ತನ್ನ ಬಲವನ್ನೆಲ್ಲಾ,ತಂದು= ತೆಗೆದುಕೊಂಡು ಬಂದು, ನಿಲಿಸಿದನು= ನಿಲ್ಲುವಂತೆ ಮಾಡಿದನು, ಅನುಸಾಲ್ವನಂ= ಸಾಲ್ವನ ತಮ್ಮನನ್ನು, ಮುಂದೆಸೆಯಕೊರಳೊಳು= ಮುಂಭಾಗದ ಕಂಠಸ್ಥಾನದಲ್ಲಿಯೂ,ನೀಲ ಹಂಸಧ್ವಜರನು= ನೀಲಕೇತು ಹಂಸಕೇತುಗಳೆಂಬೀರ್ವರನ್ನು, ಕಂಗಳೊಳು= ನೇತ್ರಗಳೆಡೆಯಲ್ಲಿಯೂ, ಉಭಯಪಕ್ಷದಕಡೆಗೆ= ಎರಡು ಕಡೆಯ ರೆಕ್ಕೆಗಳ ಭಾಗಕ್ಕೆ, ಕಂದರ್ಪಕಾನಿರುದ್ಧರನ್ನು= ಮನ್ಮಥ ಮತ್ತು ಅನಿರುದ್ಧರನ್ನು, ಅಂದದಿಂದ= ಚನ್ನಾಗಿ ಕಾಣುವ ಬಗೆಯಿಂದ, ಅಡಿಗಳ್ಗೆ= ಕಾಲುಗಳ ಕಡೆಗೆ, ಭೋಜ ಸಾತ್ಯಕಿಗಳಂ=ಪಾದದ ಕಡೆಗೆ, ಕೃತವರ್ಮ ಸಾತ್ಯಕಿಗಳಿಬ್ಬರನ್ನೂ ಹಿಂದಣಗರಿಗೆ, ಮೇಘನಾದನಂ= ಮೇಘನಾದನನ್ನು, ಯೌವನಾಶ್ವನನ್ನು= ಭದ್ರಾವತೀ ರಾಜನನ್ನು ಸಹ, ಹಿಂದಣ ಗರಿಗಳಿಗೆ= ಬಾಲದ ಕಡೆ ರೆಕ್ಕೆಗಳ ಕಡೆಗೂ, ಜೋಡಿಸಿದನು= ನಿಲ್ಲುವಂತೆ ಮಾಡಿದನು.
ತಾತ್ಪರ್ಯ:- ಇಂತಹ ವೀರನೊಂದಿಗೆ ಈಗ ನೀನು ಯುದ್ಧ ಮಾಡಬೇಕೆಂದು ನುಡಿದು ಸೈನ್ಯವನ್ನೆಲ್ಲಾ ಹದ್ದಿನಾಕಾರವಾಗಿ ನಿಲ್ಲಿಸಿದನು. ಆ ಹದ್ದಿನಾಕಾರದ ಪಡೆಯ ಕತ್ತಿನ ಭಾಗದಲ್ಲಿ ಅನುಸಾಲ್ವನನ್ನು ನಿಲ್ಲಿಸಿದನು, ಎರಡು ಕಣ್ಣುಗಳ ಕಡೆಯಲ್ಲಿಯೂ ನೀಲಧ್ವಜ ಹಂಸಧ್ವಜರೂ ನಿಂತುಕೊಂಡರು. ರೆಕ್ಕೆಗಳ ಎರಡೂಕಡೆ ಪ್ರದ್ಯುಮ್ನ ಅನಿರುದ್ಧರೂ, ಕಾಲುಗಳ ಬಳಿ ಭೋಜನೂ ಸಾತ್ಯಕಿಯೂಸಹ ನಿಂತರು. ಹಿಂಭಾಗದ ಗರಿಗಳ ಕಡೆಗೆ ಮೇಘವರ್ಣನನ್ನೂ ಯೌವನಾಶ್ವನ-
ನ್ನೂ ನಿಲ್ಲುವಂತೆ ಆಜ್ಞಾಪಿಸಿದನು.
ವ್ಯೂಹಚಂಚು ಸ್ಥಾನಕಿರಿಸಿದಂ ಕಲಿ ಬಭ್ರು।
ವಾಹನ ವೃಷಧ್ವಜನನುಳಿದ ಭಟರಂ ಗೃಧ್ರ।
ದೇಹದವಯವದೆಡೆಗೆ ನೆಲೆಗೊಳಿಸಿ ಬಳಿಕದರ ಹೃದಯದೊಳ್ ಫಲುಗುಣನನು॥
ವಾಹಿನಿ ಸಹಿತ ನಿಲಿಸಿ ದಾರುಕನೆಸೆಗೆ ರಥಾ।
ರೋಹಣಂಗೈದು ಮುರಮಥನಂ ಪಿಡಿದನಾ ಮ।
ಹಾಹವಕೆ ವರಪಾಂಚಜನ್ಯಮಂ ಘೋರ ರವದಿಂದಹಿತರೆದೆಗಳೊಡೆಯೆ॥೧೭॥
ಪ್ರತಿಪದಾರ್ಥ :- ಕಲಿ=ವೀರನಾದ, ಬಭ್ರುವಾಹನ ವೃಷಧ್ವಜರನು= ಬಭ್ರುವಾಹನ ಕರ್ಣತನುಜರನ್ನು, ವ್ಯೂಹ= ಹದ್ದಿನಾಕಾರದ, ಚಂಚುಸ್ಥಾನಕ್ಕೆ= ಕೊಕ್ಕಿನೆಡೆಗೆ, ಗೃಧ್ರ=ಹದ್ದಿನ,ಅವಯವದ= ಶರೀರದ, ಎಡೆಗೆ= ಸ್ಥಾನಕ್ಕೆ, ಉಳಿದ= ಮಿಕ್ಕಿರುವ,ಭಟರಂ= ವೀರರನ್ನೂ ನೆಲೆಗೊಳಿಸಿ= ನಿಲ್ಲಿಸಿ, ಬಳಿಕ= ಆ ಮೇಲೆ, ಫಲುಗುಣನನು= ಕಿರೀಟಿಯನ್ನು, ಅದರ= ಆ ಗೃಧ್ರ ಕೃತಿಯ, ಹೃದಯದೊಳು= ಎದೆಯ ಭಾಗದಲ್ಲಿ, ವಾಹಿನಿ ಸಹಿತ= ಸೇನಾಸಮೇತನಾಗಿ, ನಿಲಿಸಿ= ನಿಲ್ಲಿಸಿದವನಾಗಿ ದಾರುಕನು= ದಾರುಕನೆಂಬುವನು, ಎಸಗೆ= ಸಾರಥಿಯಾಗಿರಲು,ಮುರಮಥನನು= ಕೃಷ್ಣನು, ರಥಾರೋಹಣಂಗೈದು= ರಥವನ್ನೇರಿದವನಾಗಿ,ಅಹಿತರ= ವೈರಿಗಳ, ಎದೆಗಳ= ಮರ್ಮಸ್ಥಳಗಳಲ್ಲೆಲ್ಲಾ,ಒಡೆಯೆ= ಬಿಚ್ಚಿಹೋಗುವಹಾಗೆ, ಮಹಾಹವಕೆ= ದೊಡ್ಡ ಯುದ್ಧಕ್ಕಾಗಿ, ಘೋರರವದಿಂದ= ಬಹುಗಟ್ಟಿಯಾಗಿ ಶಬ್ಧವೈ ಹುಟ್ಟುವಂತೆ,ಪಾಂಚಜನ್ಯಮಂ=
ಪಾಂಚಜನ್ಯವೆಂಬ ಶಂಖವನ್ನು, ಪಿಡಿದು= ಊದಿದನು.
ತಾತ್ಪರ್ಯ:- ಗೃಧ್ರವ್ಯೂಹದ ಕೊಕ್ಕಿನಲ್ಲಿ ವೃಷಕೇತು ಬಭ್ರುವಾಹನರನ್ನು, ಉಳಿದ ಅವಯವಗಳಲ್ಲಿ ಉಳಿದ ವೀರರನ್ನು ನಿಲ್ಲಿಸಿ, ಹೃದಯ ಸ್ಥಾನದಲ್ಲಿ ಅರ್ಜುನನನ್ನು ಸೇನಾಮಧ್ಯದಲ್ಲಿ ನಿಲ್ಲಿಸಿದನು.ತಾನು ರಥವನ್ನೇರಿ , ಸಾರಥಿ ದಾರುಕನು ಅದನ್ನು ನಡೆಸಲು, ಪಾಂಚಜನ್ಯವನ್ನು ಘೋರರವದಿಂದ ಊದಿದನು. ಶತ್ರುಗಳ ಎದೆಗಳು ಬಿರಿದವು, (ಪಾಂಚಜನ್ಯವನ್ನು ಊದಿದರೆ ಸ್ವಪಕ್ಷದವರು ಸಂಪ್ರೀತರಾಗಿ ಉತ್ಸಾಹಿಸುತ್ತಿದ್ದರು. ಶತ್ರುಗಳು ಭಯಭೀತರಾಗುತ್ತಿದ್ದರು).
ಪಾಂಚಜನ್ಯಧ್ವನಿಗೆ ಬೆದರದುಬ್ಬೇರಿ ರೋ।
ಮಾಂಚನದೊಳಾಗ ತಾಮ್ರಧ್ವಜಂ ಶ್ರೀವತ್ಸ।
ಲಾಂಛನಂಗಿದಿರಾಗಿ ನುಡಿದನೆಲೆ ದೇವ ಕಟ್ಟಿದೆನರ್ಜುನನ ಹಯವನು॥
ವಾಂಛೆಯುಳ್ಳೊಡೆ ಬಿಡಿಸು ಪಾಲಿಸು ಕಿರೀಟಿಯಂ।
ನೀಂ ಚಕ್ರಮಂ ತುಡುಕು ಶಾರ್ಙ್ಗಮಂ ಪಿಡಿ ರಣಕೆ।
ನಾಂ ಚಲಿಸೆನಿದೆಯೆನ್ನ ವಾಜಿಯಂ ತಡೆ ಸತ್ವಮುಳ್ಳೊಡೆನುತಾರ್ದೆಚ್ಚನು॥೧೮॥
ಪ್ರತಿಪದಾರ್ಥ :- ಆಗ =ಕೃಷ್ಣನು ಪಾಂಚಜನ್ಯವನ್ನು ಹಿಡಿದಾಗ, ತಾಮ್ರಧ್ವಜನು, ಪಾಂಚಜನ್ಯ ಧ್ವನಿಗೆ= ಪಾಂಚಜನ್ಯದ ಮಹಾಶಬ್ಧಕ್ಕೆ, ಬೆದರದೆ= ಹೆದರಿಕೊಳ್ಳದೆ, ಉಬ್ಬೇರಿದವನಾಗಿ= ಹೆಚ್ಚಾಗಿ ಉಬ್ಬಿ, ರೋಮಾಂಚನದೊಳು= ಮೈಕೂದಲೆಲ್ಲಾ ಎದ್ದುನಿಲ್ಲುವುದರಿಂದ,ಶ್ರೀವತ್ಸಲಾಂಛನಂಗೆ= ಶ್ರೀಕೃಷ್ಣನಿಗೆ, ಇದಿರಾಗಿ = ಪ್ರತಿಭಟಿಸಿ, ನುಡಿದನು= ಮುಂದೆ ಹೇಳುವಂತೆ ಹೇಳಿದನು. ಎಲೆದೇವ= ಎಲೈ ಪ್ರಭುವೆ, ಅರ್ಜುನನ = ಕಿರೀಟಿಯ, ಹಯವನು=ಅಶ್ವವನ್ನು, ಕಟ್ಟಿದೆನು= ಕಟ್ಟಿಹಾಕಿರು-
ವೆನು, ವಾಂಛೆಯುಳ್ಳೊಡೆ= ಇಷ್ಟವಿದ್ದರೆ, ಬಿಡಿಸು= ಬಿಡುಗಡೆಮಾಡು. ಕಿರೀಟಿಯಂ= ಫಲ್ಗುಣನನ್ನು, ಪಾಲಿಸು= ಕಾಪಾಡು, ನೀಂ= ನೀನಾದರೊ, ಚಕ್ರಮಂ= ಚಕ್ರಾಯುಧವನ್ನು, ತುಡುಕು= ಹಿಡಿಯುವನಾಗು, ಶಾರ್ಙ್ಗವನು= ನಿನ್ನ ಬಿಲ್ಲನ್ನು, ಪಿಡಿ= ಹಿಡಿಯತಕ್ಕವನಾಗು, ನಾಂ= ನಾನು, ರಣಕೆ= ಕಾಳಗಕ್ಕೆ, ಚಲಿಸೆನು= ಸ್ಥಿರವಾಗಿ ನಿಲ್ಲುವೆನು, ಇದೆ= ಇಲ್ಲಿರತಕ್ಕ,ಎನ್ನ=ನನ್ನ, ವಾಜಿಯಂ=ಯಾಗದ ಕುದುರೆಯನ್ನು, ಸತ್ವಮುಳ್ಳೊಡೆ= ಶಕ್ತಿಯಿದ್ದ ಪಕ್ಷದಲ್ಲಿ, ತಡೆ= ನಿಲ್ಲಿಸು, ಎನುತ= ಎಂದು ನುಡಿಯುತ್ತ, ಆರ್ದು= ಗರ್ಜಿಸಿ, ಎಚ್ಚನು= ಬಾಣ ಬಿಡಲು ಪ್ರಾರಂಭಿಸಿದನು.
ಅ॥ವಿ॥ ಶ್ರೀವತ್ಸಲಾಂಛನಂಗೆ= ಶ್ರೀವತ್ಸವೆಂಬ ಮಚ್ಚೆಯುಳ್ಳವನು ಯಾವನೊ ಅವನಿಗೆ( ಬ. ಸ.)
ತಾತ್ಪರ್ಯ:-ಆಗ ತಾಮ್ರಧ್ವಜನು ಕೃಷ್ಣನು ಪೂರೈಸಿದ ಪಾಂಚಜನ್ಯ ಧ್ವನಿಗೆ ಸ್ವಲ್ಪವೂ ಬೆದರದೆ ಯುದ್ಧಾಸಕ್ತಿಯಿಂದ ಮೆರೆಯುತ್ತಾ ಕೃಷ್ಣನನ್ನು ಕುರಿತು, ಎಲೈ ಸ್ವಾಮಿಯೆ, ಇಗೊ ಅರ್ಜುನನ ಕುದುರೆಯನ್ನು ಕಟ್ಟಿಹಾಕಿದ್ದೇನೆ. ನಿನಗೆ ಬೇಕಾದರೆ ಈ ಹಯವನ್ನು ಬಿಡಿಸಿ ಅರ್ಜುನನ ಪ್ರಾಣವನ್ನುಳಿಸು. ನಿನ್ನ ಚಕ್ರವನ್ನೂ ಧನುಸ್ಸನ್ನೂ ಅಣಿಮಾಡಿಕೊ, ಇಗೋ ನಾನು ಯುದ್ಧಕ್ಕೆ ನಿಂತೇ ಇರುವೆನು. ನಿನಗೆ ಪರಾಕ್ರಮವಿದ್ದರೆ ಬಿಡಿಸಿಕೊ. ಇಲ್ಲಿರುವ ನನ್ನ ಯಜ್ಞಾಶ್ವವನ್ನು ಶಕ್ತಿಯಿದ್ದರೆ ಕಟ್ಟಿಹಾಕು ಎನ್ನುತ್ತಾ ಬಾಣಪ್ರಯೋಗ ಮಾಡಿದನು.
ಹರಿಗೆ ಕೂರ್ಗಣೆ ಮೂರು ದಾರುಕಂಗೈದು ರಥ।
ಹರಿಗಳ್ಗೆ ನಾಲ್ಕು ಸಿತವಾನಂಗಿಪ್ಪತ್ತು।
ವರಭೋಜಪತಿಗೆಂಟು ಶಿನಿಸುತಂಗೊಂಬತ್ತು ಹಂಸಧ್ವಜಂಗೆ ಪತ್ತು ॥
ತರಣಿತನಯಜ ಬಭ್ರುವಾಹಾನುಸಾಲ್ವಕ।
ಸ್ಮರ ಯೌವನಾಶ್ವಾನಿರುದ್ಧ ನೀಲಧ್ವಜ।
ರ್ಗೆರಡೆರಡು ಮೇಘನಾದಂಗೇಳು ಕೋಲ್ಗಳಂ ಕರೆದವಂ ಬೊಬ್ಬಿರಿದನು॥೧೯॥
ಪ್ರತಿಪದಾರ್ಥ :- ಕೂರ್ಗಣೆಮೂರು = ತೀಕ್ಷ್ಣವಾದ ಮೂರು ಸರಲ್ಗಳನ್ನು, ಹರಿಗೆ= ಕೃಷ್ಣನಿಗೆ, ಐದು= ಐದು ಕಣೆಗಳನ್ನು, ದಾರುಕಂಗೆ=ಕೃಷ್ಣನ ಸಾರಥಿಗೂ, ನಾಲ್ಕು=ನಾಲ್ಕು ಕೋಲ್ಗಳನ್ನು, ರಥಹರಿಗಳ್ಗೆ=ಅಶ್ವರಥಂಗಳಿಗೂ, ಇಪ್ಪತ್ತು= ಇಪ್ಪತ್ತು ಸರಲ್ಗಳನ್ನು, ಸಿತವಾಹನಂಗೆ= ಬೆಳ್ಗುದುರೆಗಳಿಂದ ಕೂಡಿದ ತೇರನ್ನು ಅಲಂಕರಿಸಿರುವಧನಂಜಯನಮೇಲೂ, ಎಂಟು=ಎಂಟು ಅಂಬುಗಳನ್ನು, ವರ= ಉತ್ತಮನಾದ,ಭೋಜಪತಿಗೆ= ಕೃತವರ್ಮನಮೇಲೂ, ಒಂಬತ್ತು=ಒಂಬತ್ತು ಕೋಲ್ಗಳನ್ನು, ಶನಿಸುತಂಗೆ= ಸಾತ್ಯಕಿಯ ಮೇಲೂ, ಎಪ್ಪತ್ತು= ಎಪ್ಪತ್ತು ಕಣೆಗಳನ್ನು, ಹಂಸಧ್ವಜನಿಗೆ= ಹಂಸಧ್ವಜನ-
ಮೇಲೂ,ಎರಡೆರಡು= ಎರಡರಂತೆ, ತರಣಿತನಯಜ= ವೃಷಧ್ವಜನು, ಬಭ್ರುವಾಹನ= ಪಾರ್ಥಸುತನು, ಅನುಸಾಲ್ವಕ= ಸಾಲ್ವಾನುಜನು, ಸ್ಮರ= ಕಂದರ್ಪನು, ಯೌವನಾಶ್ವ= ಯೌವನಾಶ್ವನೆಂಬಾತನು, ಅನಿರುದ್ಧ = ಅನಿರುದ್ಧನು, ನೀಲಧ್ವಜ-
ರ್ಗೆ= ನೀಲಧೂವಜನೇ ಮೊದಲಾದವರ ಮೇಲೂ, ಏಳುಕೋಲ್ಗಳಂ= ಏಳು ಕಣೆಗಳನ್ನು, ಮೇಘನಾದಂಗೆ= ಮೇಘನಾ-
ದನೆಂಬಾತನಮೇಲೂ, ಅವಂ= ಆ ತಾಮ್ರಧ್ವಜನು, ಕರೆದು= ವರ್ಷಿಸಿ, ಬೊಬ್ಬಿರಿದನು= ಗರ್ಜಿಸಿದನು.
ಅ॥ವಿ॥ ಕೂರ್ಗಣೆ=ಕೂರಿತ್ತು ಕಣೆ(ವಿ. ಪೂ. ಸ. )
ತಾತ್ಪರ್ಯ:- ಮೂರು ಬಾಣಗಳನ್ನು ಕೃಷ್ಣನಮೇಲೆ ಬಿಟ್ಟನು, ಆ ಸ್ವಾಮಿಯ ಸಾರಥಿಯನ್ನು ಐದು ಕಣೆಗಳಿಂದಲೂ, ರಥವನ್ನು ನಾಲ್ಕು ಬಾಣಗಳಿಂದಲೂ ಹೊಡೆದನು. ಅರ್ಜುನ, ಭೋಜ, ಹಂಸಧ್ವಜರನ್ನು ಕ್ರಮವಾಗಿ ಇಪ್ಪತ್ತು, ಎಂಟು,ಎ ಇಪ್ಪತ್ತು ಕೋಲುಗಳಿಂದ ಗಾಯಮಾಡಿದ ಬಳಿಕ, ಸಾತ್ಯಕಿಯ ಮೇಲೆ ಒಂಭತ್ತು ಬಾಣಗಳನ್ನು ಬಿಟ್ಟನು. ಎರಡೆರಡು ಬಾಣ-
ಗಳನ್ನು ಬಭ್ರುವಾಹನ, ವೃಷಕೇತು, ಯೌವನಾಶ್ವ, ಅನಿರುದ್ಧ, ಪ್ರದ್ಯುಮ್ನ, ನೀಲಧ್ವಜರ ಮೇಲೆ ಬಿಟ್ಟು ನೋಯಿಸಿ ಗಟ್ಟಿಯಾಗಿ ಸಿಂಹನಾದ ಮಾಡಿದನು.
ಅಚ್ಯುತಂ ಬೆರಗಾದನಾತನ ಪರಾಕ್ರಮಕೆ।
ಮೆಚ್ಚಿದಂ ಫಲುಗುಣಂ ಮಿಕ್ಕುಳಿದ ಪಟುಭಟರ್।
ಬೆಚ್ಚಿದರ್ ಮಸಗಿ ವೀರಾವೇಶದಿಂದೆ ತಮತಮಗೆ ಬಳಿಕನಿರುದ್ಧನು॥
ಎಚ್ಚನೆಲವೆಲವೊ ತಾಮ್ರಧ್ವಜ ವಿಚಾರಿಸದೆ।
ಕೆಚ್ಚೆದೆಯೊಳಿದಿರಾದೆ ಮುರಹರನ ಮೊಮ್ಮನಾಂ।
ಬೆಚ್ಚವೊಡೆ ಬಿಡು ಹಯವನಲ್ಲದೊಡೆ ನೋಡೆನ್ನ ಬಾಣ ಜಾತವನೆಂದನು॥೨೦॥
ಪ್ರತಿಪದಾರ್ಥ :- ಆತನ= ಮಯೂರಧ್ವಜನ ಮಗನ, ಪರಾಕ್ರಮಕೆ= ಸಾಹಸಕ್ಕೆ, ಅಚ್ಯುತಂ= ಕೃಷ್ಣಮೂರ್ತಿಯು, ಬೆರಗಾದನು= ಭ್ರಾಂತಿಯನೈದಿದನು,ಫಲುಗುಣಂ= ಪಾರ್ಥನು, ಮೆಚ್ಚಿದಂ= ಹೊಗಳಿದನು,ಮಿಕ್ಕ= ಉಳಿದಿರುವ, ಪಟುಭಟರು= ವೀರಾಗ್ರಣಿಗಳು, ಮಸಗಿ= ಆಗ್ರಹದಿಂದಕೂಡಿ, ವೀರಾವೇಶದಿಂದ= ಸಾಹಸದ ಹೆಚ್ಚಿಗೆಯಿಂದ, ತಮತಮಗೆ= ತಮ್ತಮ್ಮಷ್ಟಕ್ಕೆ, ಪೆಚ್ಚಿದರು= ಉಬ್ಬಿದರು, ಬಳಿಕ = ಆ ಮೇಲೆ, ಅನಿರುದ್ಧನು= ಪ್ರದ್ಯುಮ್ನನ ಕುವರನು,ಎಚ್ಚನು= ಕೋಲ್ಗಳನ್ನು ಎಸೆದನು, ಎಲವೆಲವೊ= ಓ ತಾಮ್ರಧ್ವಜಾ! ವಿಚಾರಿಸದೆ= ಪರಿಶೀಲನೆ ಮಾಡದೆ, ಕೆಚ್ಚೆದೆಯೊಳು= ಹೆಮ್ಮೆಯಿಂದ, ಇದಿರಾದೆ= ಪ್ರತಿಭಟಿಸಿ ನಿಂತಿರುವಿ, ನಾನಾದರೊ, ಮುರಹರನ = ಶ್ರೀ ಕೃಷ್ಣಸ್ವಾಮಿಯ, ಮೊಮ್ಮಗಂ= ಮಗನ ಸುತನಾಗಬೇಕು, ಬೆಚ್ಚುವಡೆ= ಹೆದರುವಹಾಗಿದ್ದರೆ, ಹಯವನು= ಯಜ್ಞಾಶ್ವವನ್ನು, ಬಿಡು= ಬಿಟ್ಟು ಹೊರಡು, ಅಲ್ಲದೊಡೆ= ಹಾಗಿಲ್ಲವಾದರೆ, ಎನ್ನ=ನನ್ನ ಸಂಬಂಧವಾದ, ಬಾಣ ಜಾಣತನವನು= ಬಾಣದ ಚಾತುರ್ಯವ-
ನ್ನು, ನೋಡು=ಈಕ್ಷಿಸು, ಎಂದನು= ಎಂಬುದಾಗಿ ನುಡಿದನು.
ತಾತ್ಪರ್ಯ:- ಕೃಷ್ಣಮೂರುತಿಯು ನೋಡಿ ದಿಗ್ಭ್ರಮೆಯಾಗಿ ನಿಂತು ಬಿಟ್ಟನು, ಅರ್ಜುನನು ಅವನ ಸಾಹಸವನ್ನು ಕೊಂಡಾಡಿದನು. ಮಿಕ್ಕ ಸೈನಿಕರೆಲ್ಲಾ ರೋಷಭೀಷಣರಾಗಿ ನಿಂತರು. ಆಗ ಪ್ರದ್ಯುಮ್ನ ಸುತನಾದ ಅನಿರುದ್ಧನು ತಾಮ್ರಧ್ವಜನನ್ನು ಕುರಿತು, ಎಲೈ ತಾಮ್ರಕೇತುವೆ, ನಾನು ಯಾರೆಂಬ ವಿಚಾರರಹಿತನಾಗಿ ಎದುರಿಸುತ್ತಿರುವೆಯಾ? ನಾನು ಶ್ರೀಕೃಷ್ಣಸ್ವಾಮಿಯ ಮೊಮ್ಮಗನು. ನನ್ನ ಹೆಸರು= ಅನಿರುದ್ಧನು, ನಿನಗೆ ನನ್ನೊಡನೆ ಕಾಳಗಂಗೊಡುವಧಟಿದ್ದರೆ ಯುದ್ಧಕ್ಕೆ ನಿಲ್ಲು, ಇಲ್ಲವಾದರೆ ಕುದುರೆಯನ್ನೊಪ್ಪಿಸಿ ನಡೆ, ನನ್ನ ಬಾಣವರ್ಷಕ್ಕೆ ಸಿಕ್ಕಿ ನರಳಬೇಡವೆಂದು ನುಡಿದನು.