ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಬುಧವಾರ, ಫೆಬ್ರವರಿ 12, 2025

ಸತ್ತ್ವಾಲೋಕನಂ (ಚಂಪು ಕಾವ್ಯ) - ಪ್ರೊ. ಟಿ. ಕೇಶವ ಭಟ್ಟ

ಸತ್ತ್ವಾಲೋಕನಂ ( ಚಂಪು ಕಾವ್ಯ) 

ಪ್ರೊ. ಟಿ. ಕೇಶವ ಭಟ್ಟ 


ಈ ಕಾವ್ಯದ ಕರ್ತೃ ಶ್ರೀ ಪ್ರೊ. ಟಿ. ಕೇಶವ ಭಟ್ಟರು. ಇವರು ಮದ್ರಾಸು ವಿಶ್ವವಿದ್ಯಾಲಯದಲ್ಲಿ  " ಬಿ " ವಿದ್ವಾನ್ ( ಕನ್ನಡ ಮತ್ತು ಸಂಸ್ಕೃತ) ಪೂರೈಸಿದವರು. ಇವರು ಚಂಪೂಕಾವ್ಯಗಳನ್ನು ಹೆಚ್ಚಿನ ಶ್ರದ್ಧೆಯಿಂದ ಅಧ್ಯಯನು ಮಾಡಿದರು. ಅಂತಹದೇ ಕಾವ್ಯರಚನೆಗೆ ಅಂತಃಪ್ರೇರಣೆ ದೊರಕಿದ್ದಿತು. ಕೃಷ್ಣಾರ್ಜುನರ ಕಾಳಗವನ್ನು ಕಥಾವಸ್ತುವಾಗಿಟ್ಟುಕೊಂಡು 

 ಕಾವ್ಯ ರಚಿಸಿದ್ದಾರೆ.  ೧೯೫೯ ರಲ್ಲಿ ಪ್ರಥಮ ಆವೃತ್ತಿಯು ಪ್ರಕಟವಾಯಿತು. 


ಇದನ್ನು ರಚಿಸಿದವನು ಸಜ್ಜನ-ಪದ-ಮಸ್ತಕನೂ ಉಪಾಧ್ಯಾಯನೂ ಕನೀಯನೂ ಆದ ಕೇಶವನೆಂದು ಕಾವ್ಯದಲ್ಲಿ ಉಕ್ತವಾಗಿದೆ. ಸತ್- ಜನ - ಪದ - ಮಸ್ತಕಂ ಕನೀಯಂ ಎಂದಾಗ, ಸತ್ಪುರುಷರ ಪಾದಕ್ಕೆ ತಲೆಯನಿಟ್ಟು ( ವಿನಮ್ರನಾದ ) ಕನೀಯನಾದ ( ಕಿರಿಯನಾದ ), ಅಲ್ಪನಾದ ತಾನು ಎಂದಂತಾಗುವುದು. ಕವಿಯ ಭಾವನೆ ಇದೇ. ಇದು ಎಂಟು ಆಶ್ವಾಸಗಳಿಂದ ಕೂಡಿದ ಚಿಕ್ಕ ಚಂಪೂಕಾವ್ಯ.  ಇದಕ್ಕೆ "ಸತ್ತ್ವಾಲೋಕನ ಕಾವ್ಯ "ಎಂಬ ಹೆಸರಿಟ್ಟಿದ್ದಾರೆ. "ಸತ್ತ್ವ " ಎಂದರೆ ಇಲ್ಲಿ ಬಲ ಅಥವಾ  ಸಾಮರ್ಥ್ಯ.  ಆಲೋಕ ಅಥವಾ  ಆಲೋಕನ ಎಂದರೆ ನೋಡುವಿಕೆ, ಪ್ರಕಾಶಪಡಿಸುವಿಕೆ. ಈ ಕಾವ್ಯದಲ್ಲಿ ಶ್ರೀಕೃಷ್ಣನು ಅರ್ಜುನನ ಸತ್ತ್ವವನ್ನು ಪರೀಕ್ಷಿಸಿ ನೋಡಲು ಹವಣಿಸಿದ್ದನೆಂದು ಒಂದೆಡೆ ಶಿವನ ಮಾತಿನಲ್ಲಿ ಬಂದಿದೆ. 


ಸತ್ತ್ವಾಲೋಕನಂ ಎಂಬ ವಸ್ತುಕ ಕಾವ್ಯಂ


ಪ್ರಥಮಾಶ್ವಾಸಂ 


( ನಾಂದಿ - ಕಥಾಪೀಠಿಕೆ - ದ್ವಾರಕಾವರ್ಣನಂ ) 


ಶಾ. ವಿ.    ಶ್ರೀದೇವೀರಮಣಂ ವಿನೋದಕರಣಂ ಧರ್ಮಾನುಕೂಲಾತ್ಮ ಸ 

ದ್ಬೋಧಪ್ರಾಯಗುಣಂ ಮನೋಜ್ಞಸುಮುಖಂ ಚಾತುರ್ಮುಖೋದ್ಗೀತದಿ 

ವ್ಯೋದಂತಂ ರಣರಂಗಪಂಚವದನಂ ದೋಷಪ್ರಣಾಶಂ ಸದಾ 

ಹ್ಲಾದಂ ರಕ್ಷಿಸುಗೊಳ್ಪನಿತ್ತು ತಿರೆಯೊಳ್ ಶ್ರೀಶಂಕರಂ ಲೆಂಕರಂ ॥೧॥ 


( ಆಶೀರೂಪದ ಈ ಪ್ರಥಮ ಮಂಗಳ ಪದ್ಯವು ವಿಷ್ಣು-ಶಿವ ಉಭಯಪರವಾಗಿದೆ; ಎಂಟು ಆಶ್ವಾಸಗಳ ಕಥಾಗರ್ಭಸೂಚಕ ಆಗಿದೆ ) ಶ್ರೀ ದೇವಿಯ (ಲಕ್ಷ್ಮೀದೆವಿಯ, ಕಾಂತಿಯುಕ್ತಳಾದ ದೇವಿಯ ) ವಲ್ಲಭನು, ವಿನೋದದ ಮನೋಭಾವವುಳ್ಳವನ, ಧರ್ಮಕ್ಕೆ ಅನುಕೂಲವಾಗುಳ್ಳ ಆತ್ಮಜ್ಞಾನ ಸಮೃದ್ಧ ಗುಣವುಳ್ಳವನು, ಮನೋಹರವಾಗಿ ಕಾಣಿಸುವ ಒಳ್ಳೆಯ ಮುಖವಳ್ವವನು (ಗರುಡನುಳ್ಳವನು, ಗಣೇಶನನುಳ್ಳವನು), ನಾರದಾದಿ ಕೀರ್ತನಶೀಲ ಭಕ್ತರಿಂದ ಹಾಡಲಾದ ದಿವ್ಯ ಚರೆತ್ರೆಯುಳ್ಳವನು, ಯುದ್ಧರಂಗದಲ್ಲಿ ಪಂಚಾಸ್ಯನು ( ಸಿಂಹನು, ನರಸಿಂಹ ರೂಪನು, ಐಮೊಗನು ) ದೋಷನಾಶಮಾಡುವವನು, ಯಾವಾಗಲೂ ಸಂತೋಷವುಳ್ಳವನು, ( ಸತ್ಪುರುಷರಿಗೆ ಸಂತೋಷ ಸ್ವರೂಪನು ) ಆದ ಶ್ರೀಶನು  (ಶ್ರೀಯರಸನು ) -ಶ್ರೀಶಂಕರನು ಈ ಭೂಮಿಯಲ್ಲಿ ಒಳ್ಳೆಯದನಿತ್ತು ಭಕ್ತರನ್ನು ಕಾಪಾಡಲಿ. 


ಶಾ. ವಿ :   ಈಶಂ ಮೃತ್ಯುಹರಂ ಸ್ವಕಾಶನಿರೆಯುಂ ಪೂರ್ವಸ್ತುತಂ ಸರ್ವವಿ 

ಘ್ನೇಶಂ ರಾಜಿಪ ವಾರಣೇಂದ್ರಮುಖನಾಗಿರ್ದುಂ ವಿವೇಕಾತಿಸಂ 

ಕಾಶಂ ಮೂಷಕವಾಹನಂ ಫಣಿಧರಂ ಲಂಬೋದರಂದಾಳ್ದುಂ ಸ 

ರ್ವಾಶಾವ್ಯಾಪಿ ಗಣೇಶನಾದನೊಸೆದಾದಂ ಮಾೞ್ಕೆರ್ವಿಘ್ನಮಂ ॥೨॥ 


ಈಶ್ವರನೂ ಮರಣದೇವತೆಯ ಸಂಹಾರಕನೂ ಆಗಿ, ತನ್ನ ತಂದೆಯಿದ್ದರೂ ಅವನಿಂದ ಮೊದಲೇ ಸ್ತುತಿಗೆ ಪಾತ್ರನಾದ, ಎಲ್ಲ ವಿಘ್ನಗಳಿಗೂ ಒಡೆಯನಾದ, ಶೋಭಿಸುವ ಗಜರಾಜನ ಮುಖವುಳ್ಳವನಾಗಿದ್ದೂ ಜ್ಞಾನದ ಅತಿಶಯ ಕಾಂತಿಯುಳ್ಳವನಾದ, ಇಲಿಯ ವಾಹನವುಳ್ಳವನಾಗಿ ಸರ್ಪಧರನೂ ಆದ, ಜೋತಾಡುವ ಹೊಟ್ಟೆಯಿದ್ದೂ ಎಲ್ಲ ದಿಕ್ಕುಗಳಲ್ಲಿ ವ್ಯಾಪಿಸಿ ಕೊಂಡಿರುವ ಹೀಗೆ ವಿರುದ್ಧಗುಣ ವಿಶೇಷವುಳ್ಳ ಗಣೇಶನೆನಿಸಿದವನು ಭಕ್ತರನ್ನು ಪ್ರೀತಿಸಿ ನಿರ್ವಘ್ನವನ್ನು ವಿಶೇಷವಾಗಿ ಉಂಟುಮಾಡಲಿ. 


ಮ. ವಿ:  ಕತೆ ಗೆಲ್ ಭಾವಮಲರ್ ಸದರ್ಥಮೆ ಫಲಂ ಶಬ್ಧಂ ಕುಕಿಲ್ ಛಂದಮ 

ನ್ವಿತರ್ಪಣಂ ರಸಜೀವಮಾಗೆ ಪುರುಡೆಂಬಾ ಮಾರುತಾಘಾತದಿಂ 

ಕೃತಿಭೂಜಂ ಕೆಡೆಬೀಳದಂತೆ ತಳೆವಾ ತಾಯ್ವೇರವೋಲ್ ದೇವಿವಾ 

ಕ್ಸತಿ ಮತ್ಕಾವ್ಯವನಾಂತು ರಂಜಿಸುಗೆ ವಿದ್ಯಾಲೋಕಮಂ ಲೋಕಮಂ॥೬॥ 


ಕಾವ್ಯವೆಂಬುದೊಂದು ಮರ. ಕತೆಗಳೇ ಅದರ ಕೊಂಬೆಗಳು. ಭಾವವೇ ಹೂಗಳು. ಒಳ್ಳಿತಾದ ಅರ್ಥವೆಂಬುದು ಹಣ್ಣುಗಳು. ಶಬ್ಧವೇ ಕೋಗಿಲೆಯ ಕೂಗು, ಛಂದಸ್ಸು ಮರದೆಲೆಗಳು. ರಸವೇ ಜೀವ. ಹೀಗಿರುವ ಕಾವ್ಯವೃಕ್ಷವು ಕೆಟ್ಟ ಜನರ ಹೊಟ್ಟೆಕಿಚ್ಚೆಂಬ ಗಾಳಿಹೊಡೆತಕ್ಕೆ ಗುರಿಯಾಗಿ ಮುರೆದು ಬೀಳದಂತೆ ಧರಿಸತಕ್ಕ ತಾಯಿ ಬೇರಿನಂತೆ ಇರತಕ್ಕವಾಗ್ದೇವಿಯು ನನ್ನ ಕಾವ್ಯವನ್ನು ಆಧರಿಸಿಕೊಂಡು ಇದು ವಿದ್ಯಾವಂತರಾದ ಜನರನ್ನೂ ಇತರ ಜನರನ್ನೂ ರಂಜಿಸುವಂತೆ ಮಾಡಲಿ. 


ಕಂದ: ಲಕ್ಕಣಮಂ ಕಿಡಿಸದೆ ಪಿಂ 

ತಿಕ್ಕದೆ ಸನ್ಮಾರ್ಗಗತಿಯನೀಗಳ್ ಪುರುಳಂ 

ಲಕ್ಕಿಸಿ ಕಬ್ಬಂಬೇೞ್ದರ್ 

ತಕ್ಕಿನ ಕವಿರಾಜರೆನ್ನ ಸನ್ನುತಿಭಾಜರ್ ॥೭॥ 


ಕಾವ್ಯಕ್ಕೆ ಇರಬೇಕಾದ ಲಕ್ಷಣವನ್ನು ಕೆಡಿಸದೆ, ಸನ್ಮಾರ್ಗದಲ್ಲಿ ಮುಂದುವರಿಯಬೇಕಾದುದನ್ನು ಹಿಂದಕ್ಕೆ ತಳ್ಳದೆ, ಯಾವಾಗಲೂ ಹುರುಳನ್ನು ವಿಶೇಷವಾಗಿ ಲಕ್ಷ್ಯವಿಟ್ಟುಕೊಂಡು ಕಾವ್ಯರಚನೆ ಮಾಡಿದ ಯೋಗ್ಯ ಕವಿರಾಜರು ನನ್ನ ಸಂಸ್ತುತಿಗೆ ಪಾತ್ರರಾಗಿರುವರು. 


ಕಂದ: ಸನ್ನುತರೆನಗಂ ಪೂರ್ವಜ 

ರೆನ್ನೋದಿಕೆಗಿಂತು ನೆಗಳ್ದ ಮತಿಗಂ ಕೃತಿಗಂ 

ರನ್ನದ ಕೈದೀವಿಗೆಯಾ 

ದನ್ನರ್ ಸದ್ಭಕ್ತಿಯಿಂದವಱಂ ನೆನೆವೆಂ॥೮॥ 


ನನಗೂ ಸನ್ನುತರಾಗಿದ್ದು ನನ್ನ ಓದಿಕೆಗೂ ( ವಿದ್ಯಾಭ್ಯಾಸಕ್ಕೂ ) ಹೀಗೆ ಪ್ರಖ್ಯಾತವಾದ ಬುದ್ಧಿಗೂ ಕೃತಿರಚನೆಗೂ ರತ್ನದ ಕೈದೀವಿಗೆಯಾದಂತಹರು ನನ್ನ ಪೂರ್ವಜರು ( ನನ್ನಣ್ಣನವರು ) ಅವರನ್ನು ನಾನು ಭಕ್ತಿಯಿಂದ ಸ್ಮರಿಸುತ್ತೇನೆ. 


ಕಂದ : ಧೀರರುದಾರರ್ ವಾಗ್ಗಂ 

ಭೀರರ್ ನಾನಾ ಕಳಾಪ್ರಸಾರವಿಹಾರರ್ 

ಚಾರುಗುಣಧಾರರೀರ್ಷ್ಯಾ

ದೂರರ್ ಸತತಂ ಬುಧರ್ಕಳೆಂದಱಿದಿರ್ಪೆಂ॥೯॥ 


ವಿದ್ರಾಂಸರೆಂದರೆ- ಯಾವಾಗಲೂ ಬುದ್ಧಿವಂತರು, ಉದಾರ ಗುಣವುಳ್ಳವರು, ಮಾತಿನಲ್ಲಿ ಗಂಭೀರತೆಯುಳ್ಳವರು, ಹಲವು ಬಗೆಯ ಕಲೆಗಳನ್ನು ಪ್ರಸಾರ ಮಾಡುವುದೇ ತಮ್ಮ ಲೀಲೆಯಾಗಿರೈವವರು, ಮನೋಹರ ಗುಣಗಳನ್ನು ಧರಿಸಿರುವವರು, ಮತ್ಸರದಿಂದ ದೂರವಾದವರು ( ನಿರ್ಮತ್ಸರರು ) ಎಂದು ನಾನು ತಿಳಿದಿರುತ್ತೇನೆ. ( ಪರಿಕರಾಲಂಕಾರ ) 


ಪೞಗನ್ನಡಮನೆ ಕಬ್ಬದೆ 

ಬಳಸುವರೀ ಚಂಪು ತೆರಳ್ವ ಕಾಲರಥಾಂಗ 

ಕ್ಕೊಳಗಾಗಿ ಮುಂದೆ ಬಂದುದು 

ಪೞತಲ್ತದರಲ್ಲಿ ಪೊಸತನಱಿವವರಱಿವರ್॥೧೦॥ 


ಹೊಸದಾದ ಕಾವ್ಯವೆಂದಾಗ ಅದರಲ್ಲಿ ಹಳಗನ್ನಡವನ್ನು ಪ್ರಯೋಗಿಸದೆ ಯಾರೂ ಇರುವುದಿಲ್ಲ.  ಇದೀಗ ಈ ಚಂಪೂಕಾವ್ಯವು ಕಾಲ ಚಕ್ರ ಪರೆವರ್ತನೆಗೊಳಗಾಗಿ ಮುಂದೆ ಬಂದಿರುತ್ತದೆ. ಇದು ಹಳೆಯದೇನೂ ಅಲ್ಲ. ತಿಳಿದವರು ಇದರಲ್ಲಿರತಕ್ಕ ಹೊಸತನವನ್ನು ತಿಳಿದುಕೊಳ್ಳುವರು. 


ಎಲ್ಲುಂ ನಿಱುಗೆಯೊಳಿದಱೊಳ್ 

ಸಲ್ಲದ ಕುಂದಿರ್ದೊಡಂ ಪ್ರಸನ್ನತೆಯಿಂದಂ 

ಬಲ್ಲವರಂದದೆ ತಿರ್ದುಗೆ 

ಸಲ್ಲಲಿತಗುಣಾಂತರಂಗ ಶರನಿಧಿ ಸೋಮರ್॥೧೧॥ 


ಈ ಕಾವ್ಯದ ಪದವಿನ್ಯಾಸದಲ್ಲಿ ಎಲ್ಲಿಯೇ ಆಗಲಿ, ಸಲ್ಲದಂತಹ ಕುಂದು ಏನಾದರು ಇದ್ದರೆ, ಒಳ್ಳೆಯ ಸುಮಧುರವಾದ ಗುಣಗಳುಳ್ಳ ಅಂತರಂಗವೆಂಬ ಸಮುದ್ರಕ್ಕೆ ಚಂದ್ರನಂತಿರತಕ್ಕ ಕೋವಿದರು ಅಂದವಾಗಿ ತಿದ್ದಲಿ. 


ಪ್ರಸ್ತುತ ಸತ್ವಾಲೋಕನ 

ವಸ್ತುಕಮೀ ಕಾವ್ಯಮಿದಕೆ ಹರಿನರಸಮರಂ 

ವಸ್ತುವಿದಂ ಸಜ್ಜನಪದ 

ಮಸ್ತಕನೊವಜಂ ಕನೀಯ ಕೇಶವನೊರೆದಂ॥೧೨॥ 


ಒಳ್ಳೆಯ ಸ್ತುತಿಗೆ ಒಳಗಾದಂತಹ " ಸತ್ತ್ವಾಲೋಕನಂ " ಎಂಬ ವಸ್ತುಕ ( ಚಂಪೂ ) ಕಾವ್ಯವಿದು. ಇದಕ್ಕೆ ಕಥಾವಸ್ತು ಕೃಷ್ಣಾರ್ಜುನರ ಕಾಳಗ. ಇದನ್ನು ಸಜ್ಡನರ ಪೃದಕ್ಕಿಟ್ಟು ಕಲೆಯವನಾದ ಓಜನಾದ "ಕನೀಯ ಕವಿ" ಎಂಬ ಬಿರುದಿನ ಕೇಶವನು ರಚಿಸಿರುವನು. 


ತೃತೀಯಾಶ್ವಾಸಂ. 

( ಗಯಪರಿಭ್ರಮಣಂ - ಶಿವಾನುಗ್ರಹಂ ) 


ಕಂ: ಶ್ರೀರಮಣನೇೞಿ ಪೋಗುವ 

ಗಾರುಡವೇಗಂ ಸ್ವವಾಜಿವೇಗಕೆ ವೇಗ 

ಪ್ರಾರಂಭದೊಳೇ ಕೀಳೆಂ 

ದೋರಂತಿರೆ ಗರ್ವಿಯಾದನಾಗಲ್ ಬಹುದೇ? ॥೧॥ 


ಶ್ರೇಯರಸನು ಹತ್ತಿ ಕುಳಿತು ಪಯಣಿಸತಕ್ಕ ಗರುಡನ ವೇಗವು ತನ್ನ ಕುದುರೆಯ ವೇಗಕ್ಕೆ ಅದರ ವೇಗದ ಪ್ರಾರಂಭದಲ್ಲೆಯೇ, ಕೆಳಗಿನ ಮಟ್ಟದ್ದೆಂದು ಗಯನು ಒಂದಂ ಸಮನೆ ಗರ್ವಗೊಂಡನು. ಹಾಗೆ ಗರ್ವ ತಾಳುವುದು ಸರಿಯೇ? 


ಮ. ವಿ : ನಡೇಬೇಗಂ ನಡೆಯಿಂದೆ ಗಾಡಿ ನಡೆಯಿಂದಂ ಗಾಡಿಯಿಂದೆಣ್ಣೆದೇರ್ 

ನಡೆಯಿಂ ಗಾಡಿಯಿನೆಣ್ಣೆದೇರ ಗತಿಮೀರ್ಗುಂ ದೂವೆದೇರೆತ್ತಲುಂ 

ನಡೆಯಿಂ ಗಾಡಿಯಿನೆಣ್ಣೆದೇರ್ಪೋಗೆಯ ತೇರಿಂ ವ್ಯೋಮಯಾನಂ ದಲಂ 

ದಡರಲ್ಕಾ ಹರಿ ವೇಗದಿಂದಿವುಗಳಂ ಮೀರ್ವಂತದೇನೋಡಿತೋ॥೨॥ 


ವೇಗದ ಪರಿಗಣನೆಯಲ್ಲಿ ನಮ್ಮ ನಡಿಗೆಯೇ ವೇಗವಾದುದೆಂದು ಇಟ್ಟುಕೊಂಡರೆ, ಆ ನಡಿಗೆಯಿಂದ ಹೆಚ್ಚಿನ ವೇಗವುಳ್ಳದು ಗಾಡಿ. ( ಕುದುರೆಗಾಡಿ ) ಗಾಡಿಯಿಂದ ಹೆಚ್ಚಿನ ವೇಗವುಳ್ಳುದು ಎಣ್ಣೆದೇರು. ( ಅಂದರೆ ಬಸ್ಸು, ಕಾರು, ಮುಂತಾದವು) ನಡೆ, ಗಾಡಿ, ಎಣ್ಣೆದೇರುಗಳ ವೇಗವನ್ನು ಮೀರುವಂತಹದು ಧೂಮಶಕಟ, ( ಹೊಗೆ ಬಂಡಿ, ರೈಲು ) ಎವೆಲ್ಲವನ್ನೂ ಮೀರುವಂತಹದು ವಿಮಾನ, ಇದು ನಿಶ್ಚಯ. ಅಂದು ಗಯನು ಕುದುರೆಯನ್ನೇರಿದಾಗ ವೇಗದಲ್ಲಿ ಇವೆಲ್ಲವನ್ನೂ ಮೀರುವ ಹಾಗೆ ಅದೇನು ಓಡಿತೋ ! 


ಮ. ಸ್ರ : ಖುರಘೂತೋದ್ಧೂತ ಪಾಂಸುವ್ರಜಮೊಗೆವ ಮೊದಲ್ ಗಾವುದಂ ದಾಂಟಿತೆಂಬೋಲ್ 

ಧರೆಯಂ ಘೋಟಾಖುರಂ ಸ್ಪರ್ಶಿಪುದತಿಭರದಿಂ ಸಂದೆಯಂ ಮಾಡೆಯುಂ ವಿ 

ಸ್ತರ ಮಾರ್ಗೋಪಾಂತಭೂಜಾವಳಿಯೆ ರಭಸಮಂ ತಾಳ್ದು ಪಾರ್ವಂತೆ ಕಾಣು

ತ್ತಿರೆ ವೇಗಕ್ಕುತ್ತರಾಶಾಧಿಪಸುತ ತುರಗಂ ವೇಗದಿಂ ಪಾಯ್ದುದಾಗಳ ॥೩॥ 


ಆ ಕುದುರೆಯ ವೇಗ ಅಸಾಮಾನ್ಯ.  ಅದರ ಗೊರಸಿನ ಪೆಟ್ಟಿನಿಂದ ಮೇಲೇಳುವ ಧೂಳು ಉಂಟಾಗುವುದರೊಳಗೆ  ಒಂದು ಗಾವುದವನ್ನೇ ದಾಟಿತೆಂಬಂತೆಯೂ ಕುದುರೆಯ ಗೊರಸು ನೆಲವನ್ನು ಸ್ಪರ್ಶಿಸುವುದೇ ಸಂದೇಹವನ್ನುಂಟು ಮಾಡತಕ್ಕ ತ್ವರೆಯಿಂದಲೂ ಕುದುರೆ ಓಡುವ ಮಾರ್ಗದ ಸಮೀಪದ ಮರಗಳ ಸಮೂಹವು ಅತ್ಯಂತ ರಭಸದಿಂದ ಓಡುತ್ತಿರುವಂತೆ ಕಾಣುತ್ತಿರಲು ಅಷ್ಟೊಂದು ವೇಗದಿಂದ ಆ ಕುಬೇರನ ಮಗನ ಕುದುರೆಯು ಓಡಿತು. 


ಚ. ಮಾ : ತೆಗೞ್ವರ ಮಾತುಮಂ ಕಿವಿಗೆ ಕೊಳ್ಳದೆ ಬೀೞುತೆ ಸಾವರಂ ಮನ 

ಕ್ಕೊಗೆದಳಲಿಂದೆ ನೋಡದೆ ಕೃಪಾಕ್ಷಿಯೊಳೀಕ್ಷಿಸಿ ಕಾಯೊ ತಕ್ಕುದಂ 

ನೆಗೞದೆ ನಿಲ್ವೊಡಕ್ಕುಮೆ ಜನೇಶ ಎನುತ್ತಮೆ ಕೃಷ್ಣನಂ ಶರಣ್ 

ಬುಗುವರಲಕ್ಷ್ಯಮಾಗಿರೆ ಬರುತ್ತಿರೆ ಮಾರ್ಗದೆ ನಿರ್ಭಯಂ ಗಯಂ ॥೮॥ 


ತನ್ನನ್ನು ಬಯ್ಯುವವರ ಮಾತನ್ನು ಕಿವಿಗೆ ಹಾಕಿಕೊಳ್ಳದೆ, ಗೊರಸಿನ ತುಳಿತಕ್ಕೆ ಬಿದ್ದು ಸಾಯುವವರನ್ನು ಮನೋವ್ಯಥೆಪಟ್ಟು ನೋಡದೆ, " ಎಲೈ ಜನರ ಒಡೆಯನಾದ ಕೃಷ್ಣನೇ, ಕರುಣೆಯ ಕಣ್ಣಿನಿಂದ ನೋಡಿ ನಮ್ಮನ್ನು ಕಾಪಾಡೋ, ಈ ದುರುಳನಿಗೆ ತಕ್ಕ ಶಾಸ್ತಿಯನ್ನು ಮಾಡದೆ ನೀನು ಸುಮ್ಮನಿರಬಹುದೆ ?" ಎನ್ನುತ್ತ ಶ್ರೀಕೃಷ್ಣನಿಗೆ ಶರಣಾಗುವವರು ತನಗೆ ಅಲಕ್ಷ್ಯವಾಗಿರಲು ಗಯನು ತನ್ನ ಕುದುರೆ ಸವಾರಿಯ ಮಾರ್ಗದುದ್ದಕ್ಕೂ ಹೆದರದೆಯೇ ಇದ್ದನು. 


ಗದ್ಯ :  ಅಂತಾ ದೋರಗೆಯಂ ಗೋಳ್ಗುಡಿಸುತ್ತೆ ಚಣದೊಳೆ ಸುತ್ತುತ್ತೆ ಪಿಂದೆರಳುತ್ತಿರಲಲ್ಲಿ ವಲ್ಲೀಗೃಹದಲ್ಲಿರ್ದ ಜನಕಾಂತನಪ್ಪ ಶ್ರೀಕಾಂತಂ ತಿಳಿದು -


ಅಂತು ಆ ಗಯನು ದ್ವಾರಕೆಯ ಜನರಂ ಗೋಳುಗುಡಿಸುತ್ತ ಬಲುಬೇಗನೆ ಪುರವನ್ನು ಸುತ್ತುತ್ತ ಹಿಂದೆರಳುತ್ತಿರಲು, ಆ ಉದ್ಯಾನದಲ್ಲಿ ಬಳ್ಳಿಮನೆಯಲ್ಲಿದ್ದ ಜನರೊಡೆಯನಾದ ಶ್ರೀಯರಸನು ಇದನ್ನು ತಾನಾಗಿಯೇ ತಿಳಿದು- 


ಚಂ. ಮಾ: ಇದು ಪಿರಿದಪ್ಪ ಗರ್ವಮಿದು ಲೋಕಕಶಾಂತಿಯನುಂಟು ಮಾೞ್ಕುಮಿಂ 

ತಿದು ನಿಜ ಭೂಪ್ರಜಾಜನಕೆ ಕಷ್ಟವನೀವುದು ಮತ್ಪರಾಭವಾ 

ಸ್ಪದಮಿದು ವಿಕ್ರಮಕ್ಕೆಡರಹಸ್ಯಮಿದಿಂದು ಮನಕ್ಕೆ ಮೆಚ್ಚನಾ 

ಸುದತಿಯರ್ಗಂ ವಿರಾಗಕರಮೆಂದೆನುತಾಂತನುದಗ್ರ ರೌದ್ರಮಂ॥೯॥ 


ಇದು ಹಿರಿದಾದ ಗರ್ವವೇ ಸರಿ. ಇದು ಲೋಕಕ್ಕೆ ಅಶಾಂತಿಯನುಂಟುಮಾಡುವುದು. ಹೀಗೆ ಇದು ನನ್ನ ಭೂಮಿಯ ಪ್ರಜೆಗಳಿಗೆ ಕಷ್ಟವನ್ನುಂಟುಮಾಡುವುದು. ನನ್ನ ಅಪಜಯಕ್ಕೆ ಆಸ್ಪದ. ಇದು ನನ್ನ ಪರಾಕ್ರಮಕ್ಕೆ ವಿಘ್ನ. ಇದು ಈ ದಿನ ನನ್ನ ಮನಮೆಚ್ಚಿನ ಸ್ರ್ತೀಯರಿಗೆ ಪ್ರೀತಿ ಭಂಗಮಾಡುವುದು. ಎಂದುಕೊಂಡು ಶ್ರೀಕೃಷ್ಣನು ಅತಿಶಯ ಕೋಪವನ್ನು ತಾಳಿದನು. 


ಉ. ಮಾ: ಮತ್ತಚಕೋರನೇತ್ರನುದಿತಾಯಸಗಾಢವಿಮುಷ್ಠಿ ಭಂಗಿತೋ 

ದ್ವೃತ್ತಲಲಾಟನುದ್ಧರ ಸಮುಚ್ಛಸ್ವಿತಂ ಪರಿಜಾಲ ದೇಹನಾ 

ಯತ್ತ ಶರೀರ ಕೋಪಪುಳಕಂ ರದನ ಸ್ಫುಟಿತಾಧರಂ ದ್ವಿಷದ್ 

ವೃತ್ತಹರಂ ಮುರಾಸುರಹರಂ ಹರನಂತಿರೆ ಬಲ್ಲೇ ಗಯಂ ॥೧೦॥ 


ಮದಗೊಂಡ ಚಕೋರಪಕ್ಷಿಯಂತೆ ಕೆಂಪಾದ ಕಣ್ಣುಗಳುಳ್ಳವನೂ, ಕಬ್ಬಿಣದಂತೆ ಗಟ್ಟಿಯಾದ ಮುಷ್ಟಿಯುಳ್ಳವನೂ, ಭಂಗಗೊಂಡು ಉದ್ರಿಕ್ತವಾದ ಹಣೆಯುಳ್ಳವನೂ, ಹೆಚ್ಚಾದ ನಿಟ್ಟುಸಿರುಳ್ಳವನೂ, ಅತ್ತಿತ್ತ ಅಲುಗುವ ದೇಹವುಳ್ಳವನೂ,ದೇಹದಲ್ಲಿ ಕೋಪದ ರೋಮಾಂಚನವುಳ್ಳವನೂ, ತುಟಿಗಚ್ಚಿದವನೂ ಆಗಿ, ಶತ್ರುಗಳ ವರ್ತನೆಯನ್ನು ನಾಶಗೊಳಿಸುವವನಾದ ಮುರಾಸುರನನ್ನು ಕೊಂದವನಾದ ಕೃಷ್ಣನು ವಿಲಯಕಾರಿ ಪರಮೇಶ್ವರನಂತಿರಲು, ಗಯನು ಈ ಸಂಗತಿಯನ್ನು ಬಲ್ಲನೇ? 


ಉ. ಮಾ: ಕೋಪವನಾಂತನೋ ಬೆದರ್ದನೋ ಪಗೆಗೊಂಡನೊ ಮೆಚ್ಚುಗೊಂಡನೋ 

ಚಾಪವನೆತ್ತಿಕೊಂಡನೊ ಸುದರ್ಶನಮಂ ಪಿಡಿದಟ್ಟಿ ಬಂದನೋ

ರೂಪದೆ ಕೆಟ್ಟು ಕೂೞ್ಗುದಿದನೋ ಕೊಲಟ್ಟನೊಸಲಿಸೂರುಳೊಂದನೆಂ 

ದೀ ಪರಿಯೊಂದುಮಂ ಮನದೆ ಭಾವಿಸನಾ ಗಯನಂದು ಗರ್ವದಿ॥೧೧॥ 


ಕೃಷ್ಣನು ತನ್ನ ಮೇಲೆ ಸಿಟ್ಟಾದನೋ ಹೆದರಿದನೋ, ಹಗೆತನವನ್ನು ತಾಳಿದನೋ,ಮೆಚ್ಚಿದನೋ, ಬಿಲ್ಲನ್ನು ಹಿಡಿದನೋ, ಶ್ರೇಷ್ಠವಾದ ಸುದರ್ಶನ ಚಕ್ರವನ್ನು ಹಿಡಿದು ಬೆನ್ನಟ್ಟಿಕೊಂಡು ಬಂದನೋ, ಕೋಪದಿಂದ ವಿರೂಪನಾಗಿ ಮನಸ್ಸಿನಲ್ಲೆ ಕೂಳಿನಂತೆ ಕುದಿದನೋ, ನನ್ನನ್ನು ಕೊಲ್ಲಲು ಪ್ರತಿಜ್ಞೆ ಮಾಡಿದನೋ- ಎಂದು ಇದೊಂದನ್ನೂ ಆ ಗಯನು ತನ್ನ ಗರ್ವದಿಂದ ಭಾವಿಸದೆ ಇದ್ದನು. 


ಉ. ಮಾ: ಸಂಪದಮುಂಟು ತನ್ನ ಬಗೆಗೊಪ್ಪುವ ಪೆಂಡಿರ ಮೇಳವುಂಟು ತಾ 

ತಂ ಪರಮೇಶಮಿತ್ರನೆನಿಪೊಪ್ಪುವ ಪೆರ್ಮೆಯುಮುಂಟು ಸರ್ವರಿಂ 

ದಂ ಪದಪೊಂದಿದೊಂದು ಕುಲಮುಂ ಚಲಮುಂ ಬಲಮುಂ ನೆಗೞ್ತೆಯುಂ 

ಟಿಂ ಪೆಱತೇಕೆ ಜವ್ವನಮೆರಲ್ ಮದಮಿಲ್ಲದ ಬಾೞ್ಕೆಯಿರ್ಪುದೇ?॥೧೨॥ 


ಇದಕ್ಕೇ ಕಾರಣವೇನು? ತನ್ನಲ್ಲಿ ಸಂಪತ್ತಿದೆ, ತನ್ನ ಮನಕ್ಕೆ ಒಪ್ಪುವ ಹೆಂಡಿರ ಮೇಳವಿದೆ, ತನ್ನ ತಂದೆಯಾದ ಕುಬೇರನು ಪರಮೇಶ್ವರನ ಗೆಳೆಯನೆಂಬ ಹಿರಿಮೆಯಿದೆ, ಎಲ್ಲರಿಂದಲೂ ಒಲವಿಗೆ ಕಾರಣವಾದ ಕುಲ, ಚಲ, ಬಲ, ಕೀರ್ತಿಗಳಿವೆ, ಇನ್ನು ಬೇರೆ ಏಕೆ? ಯೌವನವೂ ಇರುವಾಗ ಮದವಿಲ್ಲದ ಬದುಕು ಇರುವುದೇ? 


ಕಂದ: ವೇಗಸ್ತಂಭನ ಶಕ್ತಿಯಿ

ನಾ ಗುಣಿಮುನಿ ನಾರದಂ ಹಯಂದಡೆದೆಂದಂ 

ವೇಗದೆ ಬರೆ ನೀಂ ಕೇಡೊಗೆ

ದಾಗಳೆ ಕೇಳ್ ನಿನ್ನೊಳಿಂದು ಕೃಷ್ಣಂ ಮುಳಿದಂ ॥೧೭॥ 


ಗುಣವಂತನಾದ ಆ ನಾರದಮುನಿಯು ತನ್ನಲ್ಲಿರುವ ವೇಗಸ್ತಂಭನ ವಿದ್ಯೆಯ ಶಕ್ತಿಯಿಂದ ಕುದುರೆಯನ್ನು ಅಲ್ಲೇ ನಿಲ್ಲವಂತೆ ಮಾಡಿ ಹೀಗೆಂದನು " ನೀನು ವೇಗದಿಂದ ಬಂದಾಗ ಕೆಡುಕು ಉಂಟಾಯಿತು. ಎಲವೋ ಕೇಳು. ಕೃಷ್ಣನು ಆಗಲೆ ಈ ದಿನ ನಿನ್ನ ಮೇಲೆ ಕೋಪಗೊಂಡನು. ಮತ್ತು ಹೀಗೆಂದನು - 


ಕಂದ : ನಿನ್ನೈಸಿರಿಯೊಟ್ಟಜೆ ದ 

ರ್ಪೋನ್ನತಿ ದುರ್ನೀತಿಯದಟನೆನ್ನೊಳ್ ತೋರ್ದೈ 

ಎನ್ನವರಂ ಪೀಡಿಸಿದೈ 

ನಿನ್ನನ್ನೆಂಟನೆಯ ದೆವಸಮಳಿಸದೆ ಮಾಣೆಂ॥೧೮॥ 


ನಿನ್ನ ಐಶ್ವರ್ಯವನ್ನೂ ,ಮೇಲ್ಮೆಯನ್ನೂ , ದರ್ಪದ ಹೆಚ್ಚಳವನ್ನೂ, ಕೆಟ್ಟ ನೀತಿಯನ್ನೂ, ಪರಾಕ್ರಮವನ್ನೂ, ನನ್ನಲ್ಲಿ ತೋರಿಸಿದೆಯಾ ? ಇಂದಿಗೆ ಎಂಟನೆಯ ದಿನದಂದು ಕೊಲ್ಲದಿರೆನು. 


ಗದ್ಯ: ಎಂದು ಸೂರುಳಿಟ್ಟನದಲ್ಲದೆ ನಿನತವಿಚಾರಮಂ ಪಿರಿದುಂ ಪೊಲ್ಲದಾಯ್ತಾತನ ಪತ್ತನದ ನೇಮವನಱಿವೊಡೆ- 


ಎಂದು ಕೃಷ್ಣನು ಪ್ರತಿಜ್ಞೆಮಾಡಿದ್ದಾನೆ. ಅದಲ್ಲದೆ ನಿನ್ನ ವಿಚಾರಹೀನವಾದ ವರ್ತನೆ ಕೆಟ್ಟದಾಯಿತು. ಅವನ ಪಟ್ಟಣದ ನಿಯಮವನ್ನು ತಿಳಿಯುವುದಾದರೆ- 


ಕಂದ: ಅಱಿತುಂ ಪೇೞದ ತಪ್ಪಿಂ

ಗೆಱೆವಟ್ಟಾದಪೆನದಲ್ಲದೆನುತುಂ ನಿನಗಾ 

ನಱಿಪಿದ ತಪ್ಪಂ ಮನ್ನಿಪು 

ದಱಿದೇಕೆಯೊ ನಿಲ್ವೆಮುಂದೆ ಧಾವಿಸಿ ಜವದಿಂ॥೨೧॥ 


ಈ ಸಂಗತಿಯನ್ನು ನಿನಗೆ ನಾನು ಹೇಳದಿದ್ದರೆ - ತಿಳಿದೂ ಹೇಳದೆ ಇದ್ದ ತಪ್ಪಿಗೆ ಆಶ್ರಯನಾಗುವೆನು ಎಂಬುದರಿಂದಾಗಿ, ನಿನಗೀಗ ನಾನು ಹೇಳಿದೆನು. ಎದು ನನ್ನ ತಪ್ಪು; ಇದನ್ನು ನೀನು ಕ್ಷಮಿಸು. ಈ ಸಂಗತಿ ಗೊತ್ತೃದ ಮೇಲೆ, ಇನ್ನೇಕೆ ನಿಂತಿರುವೆ? ವೇಗದಿಂದ ಮುಂದೆ ತೆರಳು! 


ಗದ್ಯ: ಎಂಬುದುಮಾ ನಾರದೇರಿತಂ ಮರ್ದುಗುತ್ತಿನಂತೆಯುಂ, ಕೂರ್ಪುಣುಂಬುವೆಟ್ಟಿದಂತೆಯುಂ, ಕೂರ್ವಾಳ ಕಡಿತದಂತೆಯುಂ, ಕಿರ್ಚಿನ ಚುರ್ಚುಂ ಬೇನೆಯಂತೆಯುಂ, ಭೋಂಕನೆ ಗಯನ ಮನಕ್ಕೆ ಪುಗುತೆವಡೆವುದುಂ, ಭೋರನೆ ಮುನಿಚರಣಕ್ಕೆರಗಿ ಪೋಗದಂತೆ ಗಟ್ಟಿವಿಡಿದು, ಗುಂಡಿಗೆ ಕೆಡೆದ ಸೊಂಡಿಲನಂತೆಯುಂ, ಬಲೆಗೆ ಸಿಲ್ಕಿದೆರಲೆಯಂತೆಯುಂ, ಬಾವಿಗೆ ಬಿೞ್ದ ಮಂಕಡನಂತೆಯುಂ, ಸಂಪಗೆಗೆಱಗಿದಳಿಯಂತೆಯುಂ, ಸೊರ್ಕನುಳಿದು,ಗರಂಬೊಯ್ದನಂತೆಯುಂ, ಬೂತಂಬಿಡಿದನಂತೆಯುಂ, ಮುಚ್ಚೆವೋದನಂತೆಯುಂ, ಮಿಡುಕಲಱಿಯದೆ ಕುಳಿರ್ಕೊಂಡಿದನಂತೆಯುಂ, ಪಗೆಗೆ ಸಿಲ್ಕಿದ ಪೆಂಬೇಡಿಯಂತೆಯುಂ, ಪಾವಿನ ನಂಜುವಲ್ ಕೊಂಡನಂತೆಯುಂ, ಬೂತಮಂ ಕಣ್ಕಂಡನಂತೆಯುಂ, ಭಯಂಜ್ವರಂಗೊಂಡು ನಡುನಡುಗಿ ಕಣ್ಗೆ ಚಂಡಾಂಶು ರಶ್ಮಿವೊಕ್ಕಂತೆಯುಂ, ಪೊಗೆ ಕವಿದಂತೆಯುಂ, ಕುತ್ತಂ ಬಿಗಡಿಸಿದಂತೆಯುಂ, ಕಂಬನಿವೊನಲಂ ಕಱೆದು, ಬಸಂಗೆಟ್ಟು, ಮೆಯ್ಯಱೆದು, ಚೇತರಿಸಿ, ನಿಟ್ಟುಸಿರಿಟ್ಟು, ತನ್ನಯೆ ಕೀಳ್ಗೆಯ್ಮೆಗೆ ತಾನೆ ಮಱುಕಂದಾಳ್ದು, ಬೞಿಕ್ಕಂ ನೆಗೞ್ತೆಯಱಿವುಂದೊರೆಕೊಳೆ, ಮುನಿಗಿಂತೆಂದಂ- 


ಹೀಗೆನ್ನಲು, ನೃರದನೆಂದ ಮಾತು ಚುಚ್ಚುಮದ್ದಿನಂತೆಯೂ, ಚೂಪಾದ ಬಾಣ ಹೊಡೆದಂತೆಯೂ, ಹರಿತವಾದ ಕತ್ತಿಯ ಕಡಿತದಂತೆಯೂ, ಬೆಂಕಿ ಉರಿದ ನೋವಿನಂತೆಯೂ, ಬೇಗನೆ ಗಯನ ಮನಸ್ಸಿನೊಳಗೆ ಪ್ರವೇಶಿಸಲು, ಊವನು ತಡಮಾಡದೆ ನಾರದನ ಪಾದಕ್ಕೆ ಎರಗಿ, ಅವನು ಹೋಗದಂತೆ ಗಟ್ಟಿಯಾಗಿ ಹಿಡಿದುಕೊಂಡನು. ಆಳವಾದ ಕಂದಕಕ್ಕೆ ಬಿದ್ದ ಆನೆಯಂತೆಯೂ, ಬೀಸುಬಲೆಗೆ ಸಿಕ್ಕಿದ ಜಿಂಕೆಯಂತೆಯೂ, ಬಾವಿಗೆ ಬಿದ್ದ ಮಂಗನಂತೆಯೂ,ಸಂಪಗೆ ಹೂವಿಗೆ ಎರಗಿದ ತುಂಬಿಯಂತೆಯೂ, ಗರ್ವಭಂಗವಾಗಿ ಕೆಟ್ಟಗ್ರಹ ಹೊಡೆದಂತೆಯೂ, ಭೂತ ಹಿಡಿದಂತೆಯೂ, ಪ್ರಜ್ಞೆತಪ್ಪಿದವನಂತೆಯೂ, ಅತ್ತಿತ್ತ ಅಲ್ಲಾಡಲು ತಿಳಿಯದೆ ಶೀತವೇರಿದವನಂತೆಯೂ, ಶತ್ರುವಿಗೆ ಸಿಕ್ಕಿದ ಹೇಡಿಯಂತೆಯೂ, ಹಾವಿನ ವಿಷದ ಹಲ್ಲು ತಗುಲಿದವನಂತೆಯೂ, ಭೂತದ ಸ್ವರೂಪವನ್ನು ಕಣ್ಣಲ್ಲಿ ಕಂಡವನಂತೆಯೂ, ಭಯದ ಜ್ವರವನ್ನು ತಾಳಿ ನಡುಗಿ ಕಣ್ಣಿಗೆ ಸೂರ್ಯನ ರಶ್ಮಿ ಹೊಕ್ಕಂತೆಯೂ, ಕಣ್ಣಿಗೆ ಹೊಗೆ ಕವಿದಂತೆಯೂ, ಕಣ್ಣಿಗೆ ಕಸ ಹೊಕ್ಕಂತೆಯೂ, ಮುಳ್ಳು ಚುಚ್ಚಿದಂತೆಯೂ, ಕಣ್ಣಿಗೆ ಕಲ್ಲು ಬಿದ್ದು ಹೊರಳಿಸಿದಂತೆಯೂ, ರೋಗವು ಬಿಗಡಾಯಿಸಿದಂತೆಯೂ, ಕಣ್ಣೀರಿನ ಹೊನಲನ್ನು ಸುರಿಸಿ, ವಶತಪ್ಪಿ, ಮೈಮರೆತು, ಆ ಮೇಲೆ ಚೇತರಿಸಿ, ನಿಟ್ಟುಸಿರುಬಿಟ್ಟು ತನ್ನದೇ ಆದ ಕೀಳುಗೆಲಸಕ್ಕೆ ತಾನೇ ಮರುಗುತ್ತ, ಆ ಮೇಲೆ ಕಾರ್ಯಮಗ್ನತೆಯ ಅರಿವು ಉಂಟಾಗಲು ಗಯನು ನಾರದ ಮಹರ್ಷಿಗೆ ಹೀಗೆಂದನು. 


ಕಂದ: ಉೞಿಸುವೊಡಮೞಿಸುವೊಡಮಾ

ನಳಿನಾಂಬಕ ಶೂಲಿ ಭಕ್ತ ನಿನಗಾಯತ್ತಂ 

ಬಳವತ್ ಪಾವನ ನಯನಂ 

ಗಳೋಳೀಕ್ಷಿಸಲಾಯ್ತು ಪೂರ್ವಫಲದಿಂ ನಿನ್ನಂ॥೨೨॥ 


ನನ್ನನ್ನು ಉಳಿಸುವುದಾದರೂ ಅಳಿಸುವುದಾದರೂ ಆ ಶ್ರೀಕೃಷನ ಮತ್ತು ಶಿವನ ಭಕ್ತನಾದ ನಿನಗೇ ಸೇರಿದುದಾಗಿದೆ. ನನ್ನ ಪೂರ್ವಪುಣ್ಯ ಫಲದಿಂದ ಈಗ ಬಲಿಷ್ಠವಾದ ಪಾಪ ಮಾಡಿದ ಕಣ್ಣುಗಳಿಂದ ನಿನ್ನನು ನೋಡುವಂತಾಯಿತು. 


ಕಂದ: ಅೞಿವಪ್ಪೊಡೆ ಸುರಮುನಿಪಂ 

ಬೞಿಗೇಕೆಯೊ ಬರ್ಕುಮಿವನ ದರೂಶನದಿಂದಂ 

ಅೞಿವೞಿಗುಮೆನಗದೇಂ ಪು 

ಚ್ಚೞಿಯಪ್ಪುದೆ ಬೆಳೆವ ಬೆಳೆ ಸಕಾಲದ ಮೞೆಯಿಂ ?॥೨೩॥ 


ಹೀಗೆಂದ ನಂತರ ಗಯನು ತನ್ನ ಮನಸ್ಸಿನಲ್ಲೇ ಹೀಗೆಂದನು. ನನಗೆ ಮರಣವುಂಟಾಗುವುದಾದರೆ, ಈ ನಾರದನು ನನ್ನ ಬಳಿಗೇಕೆ ಬರುತ್ತಾನೆ? ಇವನನ್ನು ಕಂಡುದರಿಂದ ನನಗೆ ಬರಬಹುದಾದ ಸಾವು ಅಳಿಯುವುದು. ಬೆಳೆವ ಬೆಳೆಗೆ ಸಕಾಲದ ಮಳೆಯಿಂದ ಕೇಡಾಗುವುದೆ? 


ಗದ್ಯ: ಎಂದಾತಂ ಮನದೊಳ್ ಪರಿಭಾವಿಸಿ- 


ಹೀಗೆಂದು ಅವನು ಮನಸ್ಸಿನಲ್ಲಿ ಯೋಚಿಸಿ ನಾರದನೊಡನೆ ಹೀಗೆಂದನು. 


ಕಂದ: ಎನ್ನರುಮಂ ಮಱೆವೊಕ್ಕರ 

ಮನ್ನಣೆಯಿಂ ಕಾವ ಬಿರುದರೆಱೆಯನೆ ದಯೆಯಿಂ 

ದೆನ್ನಂ ಕಾಯನುಪಮಗುಣ 

ಎನ್ನಂ ಪೊರೆ ಸಲಪು ದೇವದೇವೆಂಬಿನೆಗಂ॥೨೭॥ 


ಎಂತಹ ತಪ್ಪು ಮಾಡಿದವರಾಗಿದ್ದರೂ ಅವರು ಮರೆಹೊಕ್ಕರೆ, ಅವರನ್ನು ಮರ್ಯಾದೆಯಿಂದ ಕಾಪಾಡತಕ್ಕ ಬಿರುದಿನ ಒಡೆಯನೆ, ದಯೆಯಿಂದ ನನ್ನನ್ನು ಕಾಪಾಡು. ಹೋಲಿಕೆಯಿಲ್ಲದ ಗುಣಸಂಪನ್ನನೆ, ನನ್ನನ್ನು ಕಾಪಾಡು ದೇವಾ, ದೇವಾ, ನನ್ನನ್ನು ಕಾಪಾಡು- ಎಂದು ಹೇಳುತ್ತಿರಲು- 


ಕಂದ: ಉಱದೆಯೆ ಕಾಕಂ ಕೋೞಿಯ 

ಮಱಿಯೊಂದಂ ಕೊಳ್ಳೆಗೆಯ್ಯಲೆನುತುಂ ಭರದಿಂ 

ದೆಱಗುವುದುಂ ಕಂಡೊಡನಾ 

ಮಱಿ ತಾಯ್ಗಱೆವೊಕ್ಕು ತಾಂ ಬರ್ದುಂಕಿದುದಾಗಳ್॥೩೦॥ 


ಒಂದು ಕಾಗೆ ವೇಗವಾಗಿ ಬಂದು ಒಂದು ಕೋಳಿಮರಿಯನ್ನು ತನ್ನ ಕೊಳ್ಳೆಯನ್ನಾಗಿ ಮಾಡಲು ಹಾರಿಬಂದು ಎರಗಿತು. ಅದನ್ನು ಕಾಣುತ್ತಲೇ ಆ ಮರಿ, ತನ್ನ ತಾಯಿಯ ರೆಕ್ಕೆಯ ಒಳಹೊಕ್ಕು ಬದುಕಿಕೊಂಡಿತು. 


ಗದ್ಯ: ಅದಂ ಗಯನೀಕ್ಷಿಸಿ, ದುರ್ಬಳಮಪ್ಪ ಮಱಿ ಸ್ವಬುದ್ಧಿ ಪ್ರಯತ್ನೋಪಾಯದಿಂ ಬರ್ದುಂಕಿತೆಂದು ಮುಂಬೋಪುದುಮತ್ತಲೊಂದು ನೀರ್ದಾಣದ ಬೞಿಯೊಳ್- 


ಅದನ್ನು ಗಯನು ನೋಡಿ, ಹೀಗೆಂದುಕೊಂಡನು. " ಬಲಹೀನವಾದ ಕೋಳಿಮರಿ ತನ್ನ ಪ್ರಯತ್ನದಿಂದಲೇ ತಕ್ಕುದಾದ ಉಪಾಯದಿಂದ ಬದುಕಿ ಕೊಂಡಿತು." ಹೀಗೆನ್ನುತ್ತ ಮುಂದೆ ಸಾಗಿದನು. ಅತ್ತಲಾಗಿ ಒಂದೆಡೆ ಒಂದು ಕೆರೆಯ ಬಳಿ ಇನ್ನೊಂದು ಘಟನೆಯನ್ನು ಕಂಡನು. 


ಕಂದ: ಹೋರೆತ್ತು ಹಾಯೆ ಭರದಿಂ 

ಭೋರನೆ ಬೆರ್ಚುತ್ತೆ ಬಚ್ಚನೋಡಿ ಕೆಳೆಯ ಬ 

ಲ್ಪೋರಿಯ ಮಱೆಯಂ ಸಾರ್ದೊಡೆ 

ಹೋರಿದುವೆರಡಲ್ಲಿ ನೋಯದುೞಿದುದು ಬಚ್ಚಂ॥೩೧॥ 


ಒಂದು ಎಳೆಗರು ಒಂದು ಎತ್ತಿನ ಬಳಿಗೆ ಬಂದಾಗ ಹೋರಾಡುವ ಸ್ವಭಾವದ ಆ ಎತ್ತು ಭರದಿಂದ ಕರುವಿಗೆ ಹಾಯಲು ಬಂದಿತು. ಕರು ಹೆದರಿ ಓಡುತ್ತ ಇನ್ನೊಂದು ಬಲಿಷ್ಠ ಎತ್ತನ್ನು ಆಶ್ರಯಿಸಿತು. ಆಗ ಆ ಎರಡು ಎತ್ತುಗಳೂ ಹೋರಾಡತೊಡಗಿದುವು. ಈ ಕರು ಮಾತ್ರ ನೋಯದೆ ಉಳಿದು ಕೊಂಡಿತು. 


ಸೂರಗ್ಧರಾ: ಏವಂ ಮಾಣ್ ದ್ವೈತಮೆಂಬಾಟವಿಯೊಳೆಸೆದಪಂ ಸೋದರೋಪೇತ ಪಾರ್ಥಂ

ಕಾವಂ ಮದ್ಭಕ್ತನುಂ ಶಾಪಿತಸುಜನಶರಣ್ಯಂ ಮಹಾಸತ್ವಯುಕ್ತಂ 

ಭೂವಿಸ್ತಾರಪ್ರಕೀರ್ತ್ಯನ್ವಿತನಭಯತೆಯಿನ್ನಾತನಿಂದಕ್ಕೆ ಗರ್ವೋ 

ದ್ಭಾವಂ ತ್ವತ್ಪಾಪಮಿಂದೆನ್ನಯೆ ಬಕುತಿಯೊಳೇ ಪೋ ಪಡಲ್ವಟ್ಟುದೀಗಳ್ ॥೬೫॥ 


ನಿನ್ನ ದುಃಖವನ್ನು ಬಿಡು. ದ್ವೈತಾರಣ್ಯದಲ್ಲಿ ತನ್ನ ಸಹೋದರರೊಂದಿಗೆ ಅರ್ಜುನನಿದ್ದಾನೆ. ಅವನು ನಿನ್ನನು ಕಾಪಾಡುವನು. ಅವನು ನನ್ನ ಭಕ್ತನು. ಶಾಪಕ್ಕೆ ಒಳಗಾದ ಒಳ್ಳೆಯ ಜನರಿಗೆ ಆಶ್ರಯದಾತನು. ಮಹಾಸತ್ವಶಾಲಿ, ಭೂಮಿಯಲ್ಲಿ ಅಧಿಕ ಕೀರ್ತಿಯುಳ್ಳವನು. ನಿನಗೆ ಅವನಿಂದ ಅಭಯವುಂಟಾಗಲಿ. ಗರ್ವದಿಂದ ಉಂಟಾದ ನಿನ್ನ ಪಾಪವು ಈ ದಿನ ನನ್ನ ಮೇಲಣ ಭಕ್ತಿಯಿಂದಾಗಿ ಚೆದುರಿಹೋಯಿತು. 


ಕಂದ: ಎಡರೆಡೆಯೊಳಡಸದಿರ್ಕೆಮ 

ನಡೆ ನೀನಾ ಪಾರ್ಥನೆಡೆಗೆ ತಡೆಯದೇಕೆಂದಂ 

ಎಡರ್ಗೇಡಿ ತಂದೆ ಶಾವನೋ 

ಲ್ವೆಡೆಯೊಳ್ ಮಗನಪ್ಪ ಬೆನಕನೊಲವೇನಿರದೇ? ॥೬೬॥ 


ಆಗ ವಿಘ್ನವಿನಾಶಕನಾದ ಗಣೇಶನು " ನಿನಗೆ ನಿನ್ನ ಪ್ರಯತ್ನಗಳ ನಡುವೆ ಏನೊಂದು ವಿಘ್ನವುಂಟಾಗದಿರಲಿ ! ನೀನು ಅರ್ಜುನನ ಬಳಿಗೆ ತೆರಳು. ತಡಮಾಡದಿರು " ಎಂದನು. ತಂದೆಯಾದ ಶಿವನು ಒಲಿಯುವ ಸಂದರ್ಭದಲ್ಲಿ ಅವನ ಮಗನಾದ ವಿನಾಯಕನು ಒಲಿಯದಿರುವನೇ? 


ಎಂಬಲ್ಲಿಗೆ ಸತ್ತ್ವಾಲೋಕನ ಕಾವ್ಯದೊಳ್ 

ಗಯಪರಿಭ್ರಮಣಂ ಶೈವಾನುಗ್ರಹಂ 

ತೃತೀಯಾಶ್ವಾಸಂ. 


ಉಪಕಾರ ಸ್ಮರಣೆಯೊಂದಿಗೆ. 

ಕರ್ತೃ: ಪ್ರೊ. ಟಿ. ಕೇಶವ ಭಟ್ಟ, 

ಪ್ರಕಾಶಕರು: ಕನ್ನಡ ಸಾಹಿತ್ಯ ಪರಿಷತ್ತು,

ಪಂಪಮಹಾಕವಿ ರಸ್ತೆ, 

ಚಾಮರಾಜಪೇಟೆ,  ಬೆಂಗಳೂರು-೫೬೦೦೧೮ .



 

ಬುಧವಾರ, ಜನವರಿ 15, 2025

ಕನ್ನಡ ವಕ್ರೋಕ್ತಿ ಜೀವಿತ - ಡಾ. ಆರ್. ಲಕ್ಷ್ಮೀನಾರಾಯಣ

 ಕನ್ನಡ ವಕ್ರೋಕ್ತಿ ಜೀವಿತ - ಡಾ. ಆರ್. ಲಕ್ಷ್ಮೀನಾರಾಯಣ 


ಕೃತಿಯ ಕರ್ತೃ ಕುಂತಕ. ವಕ್ರೋಕ್ತಿಯೆ ಕಾವ್ಯದ ಜೀವಿತವೆಂದು ಕೃತಿಯ ಶೀರ್ಷಿಕೆಯ ಮೂಲಕ ಸೂಚಿಸುವ ಕುಂತಕ ತನ್ನ ಪೂರ್ವಸೂರಿಗಳು ನೀಡಿದ ಪರಿಕಲ್ಪನೆಯನ್ನು ಮರುಚಿಂತನೆಗೆ ಒಳಗುಮಾಡಿ, ಪರಿಷ್ಕರಿಸಿ, ವಿಸ್ತರಿಸಿ, ಪ್ರತಿಪಾದಿಸಿದವನು. ವಕ್ರೋಕ್ತಿಯ ಕುರಿತಾದ ಚಿಂತನೆ ಕುಂತಕನಿಗೂ ಹಿಂದೆ ಇದ್ದ ಭಾಮಹ, ದಂಡಿ, ವಾಮನರಲ್ಲಿ ಕಾಣಿಸಿಕೊಂಡಿದೆ. ಇವರಲ್ಲಿ ಪ್ರಾಚೀನತಮನಾದ ಭಾಮಹನಲ್ಲಿ ಮೊದಲಿಗೆ ವಕ್ರೋಕ್ತಿಯ ಪರಿಕಲ್ಪನೆ ಉಲ್ಲೇಖಗೊಂಡಿದೆ. ಆಕರ್ಷವಾಗಿ, ಮನಮುಟ್ಟುವಂತೆ ಪರಿವರ್ತಿಸಲಾದ ಮಾತು ವಕ್ರೋಕ್ತಿ.  ಮನಮುಟ್ಟುವಂತಿರುವ ಭಾಷೆ ಮತ್ತು ಆಲೋಚನೆಅಲಂಕಾರಗಳಿಗೆ ಮೂಲ. ಅದಿಲ್ಲದೆ ಯಾವ ಅಲಂಕಾರವೂ ಇಲ್ಲ. 


ಲೋಕಸಾಮಾನ್ಯವಲ್ಲದ ಹೊಳಹು-ಹೊಳಪನ್ನು ಉಂಟುಮಾಡುವ ವೈಚಿತ್ರ್ಯವೇ ವಕ್ರತೆ. ಇಲ್ಲಿ ಲೋಕೋತ್ತರ ಎನ್ನುವುದು ಅಲೌಕಿಕ ಅಥವಾ ದೈವಿಕ ಅಲ್ಲ. ಸ್ವಾರ್ಥದೂರವಾದದ್ದು, ಅಸಾಧಾರಣವಾದದ್ದು ಅಥವಾ ಲೋಕಸಾಧಾರಣವಲ್ಲದ್ದು ಎಂದರ್ಥ. ಚಮತ್ಕಾರಿ ಎನ್ನುವುದುಹೊಸ-ಹೊಳಹು-ಹೊಳಪುನೀಡುವ ವಾಕ್ಸೃಷ್ಟಿ ಕ್ರಿಯೆ. ಇಂಥ ಕವಿಮಾನಸ ಕ್ರಿಯೆ ಅಭಿವ್ಯಕ್ತಿಗೊಳ್ಳುವ ಪರಿ ಬೇರೆ ಬಗೆಯದೇ ಆಗಿರುತ್ತದೆ. ಈ ಬೇರೆ ಬಗೆಯೇ "ವೈಚಿತ್ರ್ಯ" ಇದಕ್ಕೆ ಇನ್ನೊಂದು ಹೆಸರುವಕ್ರತೆ. ನೇರ ಅಲ್ಲದ್ದು ವಕ್ರತೆಯೇ ವಿನಾ ಹೀನಾರ್ಥದಲ್ಲಿ ಅಲ್ಲ. ಕುಂತಕನು ಪರ್ಯಾಯ ಪದಗಳಾಗಿ ಸಮಾನ ನೆಲೆಯಲ್ಲಿ ಬಳಸಿದ 

" ವೈತಚಿತ್ರ್ಯ- ವಕ್ರತೆ " ಎನ್ನುವ ಪದಗಳನ್ನು ಬೇರೆ ಪದಗಳಿಂದ ಅನುವಾದಿಸಲಾಗದು. ಇವುಗಳ ಆಂತರ್ಯವನ್ನು ಕುಂತಕನ ವಿಶ್ಲೇಷಣೆಯಿಂದಲೇ ಅರಿಯಬೇಕಾಗಿದೆ. 


ಕುಂತಕನು ಕಾವ್ಯ ಪ್ರಕ್ರಿಯೆಯನ್ನು " ವಕ್ರ ಕವಿ ವ್ಯಾಪಾರ " ಅಥವಾ " ಕವಿ ವ್ಯಾಪಾರ ವಕ್ರತ್ವ " ವೆಂದು ಗುರುತಿಸುತ್ತಾನೆ. ಕುಂತಕನದು ಸ್ವತಂತ್ರ ಪ್ರಸ್ತಾನವಲ್ಲ. ಭಾಮಹನಿಂದ ಬೆಳಕಿಗೆ ಬಂದ ಅಲಂಕಾರ ಪ್ರಸ್ಥಾನದ ವಿಸ್ತೃತ ರೂಪ. ವಕ್ರೋಕ್ತಿ ಸಿದ್ಧಾಂತದಮಂಡನೆಯ ಮೂಲಕ ಅಲಂಕಾರ ಪ್ರಸ್ಥಾನವನ್ನೂ, ತನ್ನ ಪ್ರಾಚೀನರ ಕಾವ್ಯ ಚರ್ಚೆಯನ್ನೂ ಹೊಸ ದಿಕ್ಕಿಗೆ ಒಯ್ದ ಕುಂತಕನು ರಸ, ಧ್ವನಿ ಮುಂತಾಗಿ ಇತರ ಸಿದ್ಧಾಂತಗಳನ್ನು ನಿರಾಕರಿಸದೆ, ವಕ್ರೋಕ್ತಿಯಲ್ಲೇ ಅಂತರ್ಗತ ಮಾಡಿಕೊಳ್ಳುವ ಮೂಲಕ " ಅಂತರ್ಭಾವವಾದಿ " ಎನಿಸಿದ್ದಾನೆ. ಕುಂತಕನು ನೀಡಿದ ನಿದರ್ಶನಗಳನ್ನು ಅವಲೋಕಿಸಿದಾಗ ಆತನ ವಿಶಾಲ ಓದು, ಸಾಹಿತ್ಯ ಜಾಣ್ಮೆ, ವಿಮರ್ಶಾತ್ಮಕ ಒಳನೋಟ ಅರಿವಿಗೆ ಬರುತ್ತದೆ


ವಕ್ರೋಕ್ತಿಯನ್ನು ಕಾವ್ಯದ ಜೀವಿತ ಎಂದು ಘೋಷಿಸುವ ಮೂಲಕ ಭಾರತೀಯ ಕಾವ್ಯಮೀಮಾಂಸೆಯಲ್ಲಿ ಒಂದು ವಿಶಿಷ್ಟ ದನಿಯಾದವನು ಕುಂತಕ. ಅಷ್ಟೇ ಅಲ್ಲ, ಅದನ್ನೇ ಒಂದು ಪ್ರಸ್ಥಾನದ ರೂಪದಲ್ಲಿ ರೂಪಿಸಿದವನು.  ಅದುವರೆಗಿನ ಪ್ರಮುಖ ಕಾವ್ಯ ಸಿದ್ಧಾಂತಗಳನೆಲ್ಲ ಹೊಸ ದೃಷ್ಟಿಕೋನದಿಂದ ಕಂಡು ಹೊಸ ರೀತಿಯಲ್ಲಿ ವ್ಯಾಖ್ಯಾನಿಸಿದಸಾಹಸಿ ಮತ್ತು ಮೇಧಾವಿ. ಕಲಾಕೃತಿಗಳನ್ನು ತನ್ನ ನೂತನ ಸಿದ್ಧಾಂತದ ಒರೆಗಲ್ಲಿನ ಮೇಲೆ ತಿಕ್ಕಿ ನೋಡಿ ಕವಿ ಮತ್ತು ಕಾವ್ಯಗಳ ಮೂಲ್ಯಾಂಕನ ಮಾಡುವ ರೀತಿಯಲ್ಲಂತೂಒಂದು ಮೈಲಿಗಲ್ಲೆನಿಸಿ, ತನ್ಮೂಲಕ ಸಾಹಿತ್ಯ ವಿಮರ್ಶೆಗೆ ಹೊಸ ಆಯಾಮ ನೀಡಿದವನು. ಇಂಥ ಆಚಾರ್ಯನ ಕಾಲ, ದೇಶ, ಕೃತಿಗಳ ಬಗೆಗೆ ಏನನ್ನೂ ಹೇಳಿಕೊಂಡಿಲ್ಲ. ಅವನ ಕೃತಿಯಲ್ಲಿ ಸಿಗಬಹುದಾದ ಆಂತರಿಕ ಸಾಕ್ಷ್ಯ ಗಳು, ಎತರೆ ಕೃತಿಗಳು ಮತ್ತು ಕವಿಗಳನ್ನೇ ಅವಲಂಬಿಸಿದೆ. ಸ್ಥೂಲವಾಗಿ ಕುಂತಕನ ಕಾಲ ೯೨೦-೯೨೫ ಎಂದಿಟ್ಟುಕೊಳ್ಳಬಹುದು. 


ವಕ್ರೋಕ್ತಿ ಜೀವಿತ ಕೃತಿಯು (೧) ಕಾರಿಕಾ ಭಾಗ (೨) ವೃತ್ತಿ ಭಾಗ ಹಾಗೂ (೩) ಲಕ್ಷ್ಯ ಭಾಗಗಳೆಂದು ಮೂರು ಭಾಗಗಳನ್ನು ಒಳಗೊಂಡಿದೆ. ಸಕಲ ವ್ಯಾಖ್ಯಾನ ವಿವರಣೆಗಳೊಂದಿಗೆ ನಾಲ್ಕು ಉನ್ಮೇಷಗಳಲ್ಲಿ ನಿರೂಪಿಸಲಾಗಿದೆ. ನಾಲ್ಕು ಉನ್ಮೇಷಗಳೂ ಸೇರಿ ಒಟ್ಟಾರೆ ೧೮೩ ಕಾರಿಕೆಗಳು ಮತ್ತು ೪೩೩  ಉದಾಹೃತ ಭಾಗಗಳಿಂದ ಕೂಡಿ ವಿಸ್ತಾರವಾಗಿದೆ. 


ಕನ್ನಡ ವಕ್ರೋಕ್ತಿ ಜೀವಿತ 


ಮೊದಲನೆಯ ಉನ್ಮೇಷ 


ಜಗತ್ತ್ರಿತಯ ವೈಚಿತ್ರ್ಯ ಚಿತ್ರಕರ್ಮವಿಧಾಯಿನಮ್। 

ಶಿವಂ ಶಕ್ತಿ ಪರಿಸ್ಪಂದ ಮಾತ್ರೋಪಕರಣಂ ನುಮಃ॥೧॥ 


ಶಕ್ತಿ ಪರಿಸ್ಪಂದ ಮೆಂಬುಪಕರಣ ಮಾತ್ರದಿಂದಲೆ 

ಜಗತ್ರಯ ವೈಚಿತ್ರ್ಯವೆನುವಂಥ 

ಚಿತ್ರ ರಚನೆಯ ಗೈವ ಮಹಾಕುಶಲಕರ್ಮಿಗೆ 

ಆ ಶಿವಗೆ ನನ್ನಯ ನಮನ॥ 


ಯಥಾತತ್ತ್ವಂ ವಿವೇಚ್ಯಂತೇ ಭಾವಾಸ್ತ್ರೈಲೋಕ್ಯವರ್ತಿನಃ

ಯದಿ ತನ್ನಾದ್ಭುತಂ ನಾಮ ದೈವ ರಕ್ತಾ ಹಿ ಕಿಂಶುಕಾಃ ॥೨॥ 


ಮೂರೂ ಲೋಕಗಳಲ್ಲಿ ಇರುವ ವಸ್ತುಗಳನ್ನು ಅವುಗಳು ಇರುವಂತೆಯೇ ವಿವೇಚಿಸಿದರೆ ಅದರಲ್ಲೇನೂ ಅದ್ಭುತವಿರುವುದಿಲ್ಲ.  ಸ್ವಭಾವತಃ ರಕ್ತ ವರ್ಣದ ಹೂಗಳಿಂದ ಕೂಡಿರುವ ಮುತ್ತುಗದ ಮರ ಹೇಗೆ ಅದ್ಭುತವಲ್ಲವೋಹಾಗೆ.


ಸ್ವಮನೀಷಿಕಯೈನಾಥ ತತ್ತ್ವಂತೇಷಾಂ ಯಥ್ರುಚಿ। 

ಸ್ಥಾಪ್ಯತೇ ಪ್ರೌಢಿಮಾತ್ರಂ ತತ್ಪರಮಾರ್ಥೋ ನ ತಾದೃಶಃ॥೩॥ 


ಚಿಂತಕರು ಮೂರೂ ಲೋಕಗಳಲ್ಲಿರುವ ವಸ್ತುಗಳ ಸ್ವರೂಪಕ್ಕೆ ಸಂಬಂಧಿಸಿದಂತೆ ತಮ್ಮ ಬುದ್ಧಿಗೆ ತೋಚಿದಂತೆ ಸ್ವೇಚ್ಛೆಯಿಂದ ತಮ್ಮದೇ ಆದ  ನಿರ್ಣಯಕ್ಕೆ ಬರಬಹುದು. ಹಾಗಾದರೆ ಅದು ಅವರ ಪ್ರೌಢಿಮೆಯಾಗುತ್ತದೆ ಅಷ್ಟೆ. ಯಾವುದೇ ವಸ್ತುವಿನ ಸತ್ಯ ಅಂಥ ಚಾತುರ್ಯಕ್ಕೆ ಸಗ್ಗುವಂತಿರುವುದಿಲ್ಲ. 


ಇತ್ಯಸತ್ತರ್ಕ ಸಂದರ್ಭೇ ಸ್ವತಂತ್ರೇऽ ಪ್ಯಕೃತಾದರಃ। 

ಸಾಹಿತ್ಯಾರ್ಥ ಸುಧಾಸಿಂಧೋಃ ಸಾರಮುನ್ಮೀಲಯಾಮ್ಯಹಂ ॥೪॥ 


ಇಂಥ ಮಿಥ್ಯಾತರ್ಕಗಳಿಂದ ಹೊರಹೊಮ್ಮುವ ಸ್ವಚ್ಛಂದ ವಾಗ್ಜಾಲಗಳಿಂದ ಅಸಂತುಷ್ಟನಾಗಿ ನಾನೀಗ ಸಾಹಿತ್ಯದ ಅರ್ಥವೆಂಬ ಅಮೃತಸಾಗರದ ಸಾರವನ್ನು ಮೊದಲ ಬಾರಿಗೆ ಹೊರತರೈವೆನು. 


ಯೇನ ದ್ವಿತಯಮಪ್ಯೇತತ್ತತ್ವ ನಿರ್ಮಿತಿ ಲಕ್ಷಣಮ್। 

ತದ್ವಿದಾಮದ್ಭುತಾಮೋದ ಚಮತ್ಕಾರಂ ವಿಧಾಸತಿ॥೫॥ 


ತತ್ತ್ವ ಮತ್ತು ನಿರ್ಮಿತಿ ಲಕ್ಷಣಗಳೆಂಬ ಎರಡು ಅಂಶಗಳಿಗೆ ಸಂಬಂಧಿಸಿದಂತೆ ಈ ನನ್ನ ಗ್ರಂಥವು ಸಾಹಿತ್ಯ ಮರ್ಮಜ್ಞರಿಗೆ (ರಸಿಕರಿಗೆ) ಅದ್ಭುತ ಆನಂದ ಹಾಗೂ ಚಮತ್ಕಾರಗಳನ್ನುಂಟುಮಾಡುವಂಥದಾಗಿರುತ್ತದೆ.  


ವಂದೇ ಕವೀಂದ್ರ ವಕ್ತ್ರೇಂದು ಲಾಸ್ಯಮಂದಿರ ನರ್ತಕೀಂ। 

ದೇವೀಂ ಸೂಕ್ತಿ ಪರಿಸ್ಪಂದ ಸುಂದರಾಭಿನಯೋಜ್ವಲಾಂ॥1॥ 


ಕವೀಂದ್ರರ ಮುಖಚಂದ್ರ ರಂಗಮಂದಿರದೊಳ್ 

ನಲವಿಂ ಕುಶಲೋಕ್ತಿ ರೂಪದ ಸುಂದರ 

ಭಾವಾಭಿನಯ ಕೌಶಲಂಗಳಿಂ ನರ್ತಿಪ 

ನಟೀಮಣಿಗೆ ವಾಗ್ದೇವಿಗೆ ವಂದಿಸುವೆನು ನಾನು 


[ ಕವಿ ಶ್ರೇಷ್ಠರ ಮುಖಚಂದ್ರವೆಂಬ ರಂಗಮಂದಿರದಲ್ಲಿ ಕುಶಲವಾದ ಉಕ್ತಿಗಳ ರೂಪದ ಸಾತ್ವಿಕಾದಿ ಸುಂದರ ಭಾವಾಭಿನಯ ಕೌಶಲಂಗಳಿಂ ನರ್ತಿಸುತ್ತಿರುವ ಉಜ್ವಲ ನಟಿಯಾದ ಶಾರದೆಗೆ ನಾನು ನಮಸ್ಕರಿಸುತ್ತೀನೆ. ] 


ವಾಚೋ ವಿಷಯ ನೈಯತ್ಯಮುತ್ಪಾದಯಿತುಮುಚ್ಯತೇ 

ಆದಿವಾಕ್ಯೇऽಭಿಧಾನಾದಿ ನಿರ್ಮಿತೇರ್ಮಾನ ಸೂತ್ರಮ್॥೬॥ 


ಕಟ್ಟಡನಿರ್ಮಾಣದಲ್ಲಿ ಅಳತೆಯ ಕಡ್ಡಿಯಿಂದ ನೀಲ ನಕ್ಷೆಯನ್ನು ತಯಾರಿಸುವಂತೆ ಮಾತುಗಳನ್ನು ವಿಷಯದ ಪರಿಧಿಯಲ್ಲಿ ನಿಯಂತ್ರಿಸುವ ಸಲುವಾಗಿ ಅಭಿಧಾನವೇ ಮೊದಲಾದ ಅನುಬಂಧ ಚತುಷ್ಟಯಗಳನ್ನು ಹೇಳಲಾಗುತ್ತದೆ.  


ಲೋಕೋತ್ತರ ಚಮತ್ಕಾರಕಾರಿ ವೈಚಿತ್ರ್ಯ ಸಿದ್ಧಯೇ। 

ಕಾವ್ಯಸ್ಯಾಯಮಲಂಕಾರಃ ಕೋऽಪ್ಯಪೂರ್ವೋ ವಿಧೀಯತೇ ॥2॥ 


ಲೋಕೋತ್ತರವಾದ ಚಮತ್ಕಾರವನ್ನು ಉಂಟುಮಾಡಬಲ್ಲ ವೈಚಿತ್ರ್ಯದ ಸಿದ್ಧಿಗಾಗಿ ಅಪೂರ್ವವೆನಿಸಿದ ಹಾಗೂ ಕಾವ್ಯಕ್ಕೆ ಅಲಂಕಾರ ಪ್ರಾಯವಾದ ಈ ಗ್ರಂಥವನ್ನು ರಚಿಸಲಾಗಿದೆ. 


ಧರ್ಮಾದಿ ಸಾಧನೋಪಾಯಃ ಸುಕುಮಾರ ಕ್ರಮೋದಿತಃ । 

ಕಾವ್ಯ ಬಂಧೋऽಭಿಜಾತಾನಾಂ ಹೃದಯಾಹ್ಲಾದಕಾರಕಃ॥3॥ 


ಸುಕುಮಾರ ಕ್ರಮದಲ್ಲಿ ರಚಿತವಾದ ಮಹಾಕಾವ್ಯವು, ಧರ್ಮ, ಅರ್ಥ, ಕಾಮ, ಮೋಕ್ಷವೇ ಮೊದಲಾದ ಪುರುಷಾರ್ಥಗಳನ್ನು ಸಾಧಿಸುವುದು ಸಾಧನವಾಗಿರುವುದಷ್ಟೇ ಅಲ್ಲ; ಅಭಿಜಾತ ವ್ಯಕ್ತಿಗಳ ಹೃದಯಕ್ಕೆ ಆಹ್ಲಾದವನ್ನುಂಟುಮಾಡುವಂಥದೂ ಆಗಿರುತ್ತದೆ.  


ವ್ಯವಹಾರ ಪರಿಸ್ಪಂದ ಸೌಂದರ್ಯವ್ಯವಹಾರಿಭಿಃ । 

ಸತ್ಕಾವ್ಯಾಧಿಗಮಾದೇವ ನೂತನೌಚಿತ್ಯಮಾಪ್ಯತೇ॥4॥ 


ಲೋಕವ್ಯವಹಾರದಲ್ಲಿ ತೊಡಗಿರುವ ಜನರು, ನೂತನೌಚಿತ್ಯದಿಂದ ಕೂಡಿದ ಲೋಕ ವ್ಯಾಪಾರದ ಸೌಂದರ್ಯವನ್ನು ಸತ್ಕಾವ್ಯ ಪರಿಜ್ಞಾನದಿಂದ ಮಾತ್ರ ಸವಿಯಬಲ್ಲರು.  


ಚತುರ್ವರ್ಗ ಫಲಾಸ್ವಾದಮಪ್ಯತಿಕ್ರಮ್ಯ ತದ್ವಿದಾಮ್। 

ಕಾವ್ಯಾಮೃತರಸೇನಾಂತಶ್ಚಮತ್ಕಾರೋ ವಿತನ್ಯತೇ ॥5॥ 


ಧರ್ಮ, ಅರ್ಥ,  ಕಾಮ,  ಮೋಕ್ಷಾದಿ ಚತುರ್ವಿಧ ಪುರುಷಾರ್ಥಗಳ ಫಲಾಸ್ವಾದವನ್ನೂ ಮೀರಿದ ಆನಂದ, ಸಹೃದಯನ ಹೃದಯದಲ್ಲಿ ಕಾವ್ಯಾಮೃತ ರಸಾಸ್ವಾದದಿಂದ ಉಂಟಾಗುತ್ತದೆ.  


ಕಟುಕೌಷಧವಚ್ಛಾಚ್ತ್ರಮ ವಿದ್ಯಾವ್ಯಾಧಿನಾಶನಮ್ । 

ಆಹ್ಲಾದ್ಯಮೃತವತ್ಕಾವ್ಯಮ ವಿವೇಕ ಗದಾ ಪಹಮ್ ॥ ೭॥ 


ಶಾಸ್ತ್ರವು, ಕಹಿಯಾದ ಔಷಧಿಯ ಹಾಗೆ ಅವಿದ್ಯೆ( ಅಜ್ಞಾನ) ಯೆಂಬ ರೋಗವನ್ನು ನಾಶಮಾಡುತ್ತದೆ.  ಕಾವ್ಯವು ಆಹ್ಲಾದವೆಂಬ ಅಮೃತದಹಾಗೆ ಹಾಗೆ ಅದೇ ಅಜ್ಞಾನ (ಅವಿವೇಕ) ವೆಂಬ ರೋಗವನ್ನು ನಾಶಮಾಡುತ್ತದೆ. 

 

ಆಯತ್ಯಾಂ ಚ ತದಾತ್ವೇ ಚ ರಸನಿಷ್ಯಂದ ಸುಂದರಮ್ 

ಯೇನ ಸಂಪದ್ಯತೇ ಕಾವ್ಯಂ ತದಿದಾನೀಂ ವಿಚಾರ್ಯತೇ॥೮॥


ಯಾವ ತತ್ವದಿಂದಾಗಿ ಕಾವ್ಯವು ಅಧ್ಯಯನ ಕಾಲದಲ್ಲೂ ಅನಂತರದಲ್ಲೂ ತನ್ನ ರಸಸ್ಯಂದತೆಯಿಂದ ರಮಣೀಯವೆನಿಸುತ್ತದೆಯೋ ಆ ತತ್ವವನ್ನು ಈಗ್ರಂತದಲ್ಲಿ ವಿವೇಚಿಸಲಾಗುವುದು.  


ಅಲಂಕೃತಿರಲಂಕಾರ್ಯಮಪೋಧ್ಧೃತ್ಯ ವಿವೋಚ್ಯತೇ। 

ತದುಪಾಯತಯಾ ತತ್ತ್ವಂ ಸಾಲಂಕಾರಸ್ಯ ಕಾವ್ಯತಾ॥6॥ 


"ಅಲಂಕರಣ" ಮತ್ತು "ಅಲಂಕಾರ್ಯ" ಗಳೆರಡನ್ನೂಬೇರೆ ಬೇರೆಯಾಗಿಯೇ ವಿವೇಚಿಸಲಾಗುವುದು,  ನಮ್ಮ ಅಂತಿಮ ಉದ್ದೇಶವನ್ನು ಸಾಧಿಸಲು ಇರುವ ಅತ್ಯಂತಿಕ ಮಾರ್ಗ ಅದೊಂದೇ,  ವಸ್ತು ಸಂಗತಿ ಏನೆಂದರೆ, ಕಾವ್ಯವು ಯಾವಾಗಲೂ ಸಾಲಂಕೇ. ಅಲಂಕರಣ ಮತ್ತು ಅಲಂಕಾರ್ಯಗಳು ಸೇರಿಯೇ ಕಾವ್ಯವಾಗುತ್ತದೆ.  


ಕನ್ನಡ ವಕ್ಕೋಕ್ತಿ ಜೀವಿತ 

ಎರಡನೆಯ ಉನ್ಮೇಷ


ಏಕೋ ದ್ವೌ ಬಹವೋ ವರ್ಣಾ ಬಧ್ಯಮಾನೃಃ ಪುನಃ ಪುನಃ 

ಸ್ವಲ್ಲಾಂತರಾಸ್ತ್ರಿಧಾ ಸೋಕ್ತಾ ವರ್ಣವಿನ್ಯಾಸ ವಕ್ರತಾ ॥1॥ 


ಒಂದು, ಎರಡು ಅಥವಾ ಹಲವು ವರ್ಣಗಳು ( ವ್ಯಂಜನಗಳು) ಕಡಿಮೆ ಕಾಲದ ಅಂತರದಲ್ಲಿ ಮತ್ತೆ ಮತ್ತೆ ಬಳಕೆಯಾದಾಗ ಮೂರು ರೀತಿಯ ವರ್ಣವಿನ್ಯಾಸ ವಕ್ರತೆಗಳು ರೂಪಿತವಾಗುತ್ತವೆ. 


ವರ್ಗಾಂತ ಯೋಗಿನಃ ಸ್ಪರ್ಶಾ ದ್ವಿರುಕ್ತಾಸ್ತಾ-ಲ- ನಾದಯಃ 

ಶಿಷ್ಟಾಶ್ಚ ರಾದಿಸಂಯುಕ್ತಾಃ ಪ್ರಸ್ತುತೌಚಿತ್ಯಶೋಭಿನಃ॥20 ॥


ವರ್ಗೀಯ ವ್ಯಂಜನಗಳು ( ಕ ಕಾರದಿಂದ ಮಕಾರದವರೆಗಿನ ೨೫) ತಮ್ಮ ವರ್ಗದ ಅಂತಿಮ ವ್ಯಂಜನಗಳಾದ ಅನುನಾಸಿಕಗಳೊಂದಿಗೆ ಸೇರಿ ಆವೃತ್ತವಾಗಬಹುದು. " ತ" "ಲ" "ನ"ಗಳು ದ್ವಿರುಕ್ತಗಳಾಗಿ ಆವೃತ್ತಗೊಳ್ಳಬಹುದು . 

ಉಳಿದ ಎಲ್ಲ ವರ್ಣಗಳು " ರ" ಆದಿಯೊಂದಿಗೆ ಸಂಯುಕ್ತಗೊಂಡು ಆವೃತ್ತಗೊಳ್ಳಬಹುದು. ವರ್ಣ್ಯಮಾನ ವಸ್ತುವಿನೊಂದಿಗೆ ಔಚಿತ್ಯಪೂರ್ಣವಾಗಿ ಮಿಳಿತಗೊಂಡು ಇವು ಶೋಭಿಸುತ್ತವೆ.


ಕ್ವಚಿದವ್ಯವಧಾನೇಪಿ ಮನೋಹಾರಿ ನಿಬಂಧನಾ। 

ಸಾ ಸ್ವರಾಣಾಮಸಾರೂಪ್ಯಾತ್ ಪರಾಂ ಪುಷ್ಣಾತಿ ವಕ್ರತಾಮ್॥೩॥ 


ಕೆಲವೊಮ್ಮೆ ಕಾಲ ವಿಳಂಬವಿಲ್ಲದೆ ಒಂದಾದ ನಂತರ ಮತ್ತೊಂದರಂತೆ ಕವಿಯು ಕಲಾತ್ಮಕವಾಗಿ ಯೋಜಿಸಿದ ವರ್ಣಾವೃತ್ತಿಯು ಸ್ವರಗಳ ವ್ಯತ್ಯಯದಿಂದಾಗಿ ಅಪೂರ್ವವಾದ ಕಾವ್ಯಸೌಂದರ್ಯವನ್ನು ಪೋಷಿಸುತ್ತದೆ. 


ಕಾಲವಿಳಂಬವಿಲ್ಲದ ಏಕವ್ಯಂಜನ ವರ್ಣಾವೃತ್ತಿಗೆ

ವಾಮಂ ಕಜ್ಜಲವದ್ವಿಲೋಚನ ಮುರೋರೋಹದ್ವಿಸಾರಿಸ್ತನಮ್॥೯॥ 


ಇಲ್ಲಿ "ಕಜ್ಜಲ" ದಲ್ಲಿ "ಜ"ದ ಹಾಗೂ " ವಿಲೋಚನ ಮುರೋರೋಹದ್" ನಲ್ಲಿ "ರ" ಕಾಲವಿಳಂಬವಿಲ್ಲದೆ ಆವೃತ್ತವಾಗಿದೆ. 


ಎರಡು ವ್ಯಂಜನಗಳ ಪುನರಾವೃತ್ತಿಗೆ


ತಾಂಬೂಲೀನದ್ಧ ಮುಗ್ಧಕ್ರಮುಕ ತರುತಲ ಸ್ರಸ್ತರೇ ಸಾನುಗಾಭೀ 

ಪಾಯಂ ಪಾಯಂ ಕಲಾಚೀಕೃತಕ ದಲದಲಂ ನಾರೀಕೇಳೀ ಫಲಾಂಭಃ

ಸೇವ್ಯಂತಾಂ ವ್ಯೋಮಯಾತ್ರಾ ಶ್ರಮಜಲಜಯಿನಃ ಸೈನ್ಯಸೀಮಂತಿನೀಭಿ

ರ್ದಾತ್ಯೂಹವ್ಯೂಹ ಕೇಲೀಕಲಿತ ಕುಹುಕುಹಾರಾವ ಕಾಂತಾಬನಾಂತಃ॥೧೦॥ 


ಕುಹು ಕುಹು ಕೋಕಿಲ ಸ್ವರಗಳು 

ಮಾರ್ದನಿಗೊಡುತಿರುವ ವನಸ್ಥಳಗಳಲಿ 

ವೀಳ್ಯದ ಬಳ್ಳಿಗಳು ತಬ್ಬಿರುವ 

ಎಳೆಯ ಅಡಿಕೆ ಮರಗಳೆಡೆಗಳಲಿ

ಶಿಲಾಸ್ತರದ ಮೇಲ್ ಕುಳಿತು ಸೇನಾಲಲನೆಯರು 

ಬಾಳೆಲೆಯ ದೊನ್ನೆಗಳಲಿ ಎಳನೀರ 

ಕುಡಿಕುಡಿದು ವ್ಯೋಮಯಾತ್ರೆಯ 

ಶ್ರಮದಲುದಿಸಿದ ಬೆವರ ಹನಿಗಳ ನೀಗಿಕೊಳಲಿ॥೧೦॥ 


ಹಾಗೂ 


ಆಯಿ ಪಿಬಿತ ಚಕೋರಾಃ ಕೃತ್ಸ್ನಮುನ್ನಮ್ಯ ಕಂಠಾನ್ 

ಕ್ರಮುಕವಲನ ಚಂಚಚ್ಚಂಚವಶ್ಚಂದ್ರಿಕಾಂಭಃ 

ವಿರಹವಿಧುರಿತಾನಾಮ್ ಜೀವಿತತ್ರಾಣಹೇತೋ 

ರ್ಭವತಿ ಹರಿಲಕ್ಷ್ಮಾಯೇನ ತೇಜೋದರಿದ್ರಃ॥೧೧॥ 


ಅಡಕೆಗಳ ಕುಕ್ಕಿ ಹರಿತ ಕೊಕ್ಕನು ಹೊಂದಿಹ 

ಚಕೋರಗಳೆ

ವಿರಹದಲಿ ನವೆಯುತಿರುವವರ

ಪ್ರಾಣ ರಕ್ಷಣೆಗಾಗಿ 

ನಿಮ್ಮ ಕೊರಳನೆತ್ತರಿಸಿ ಕುಡಿದು ಬಿಡಿ

ಚಂದ್ರಿಕೆಯ ಜಲವನ್ನೆಲ್ಲ

 ಅದರಿಂದ ಮೃಗಲಾಂಚನನು 

ತನ್ನ ತೇಜವನೆಲ್ಲ ನೀಗಿಕೊಂಡು ಬಿಡಲಿ॥೧೧॥ 


ಇಲ್ಲಿ ಕೊನೆಯ ಸಾಲಿನಲ್ಲಿ ಮಾತ್ರ ಬರುವ " ದರಿದ್ರ" ದಲ್ಲಿ "ದ" ಮತ್ತು "ರ" ಗಳು ಕಾಲವಿಳಂಬವಿಲ್ಲದೆ ಪುನರಾವೃತ್ತಗೊಂಡಿವೆ. 


ಅನೇಕ ವ್ಯಂಜನಗಳ ಪುನರಾವೃತ್ತಿಗೆ: 


 ಸರಲತರಲತಾಲಾಸಿಕಾ॥೧೨॥ 


ಇಲ್ಲಿ ರ, ಲ, ತ, ಎಂಬ ವರ್ಣಗಳು ಕಾಲವಿಳಂಬವಿಲ್ಲದೆ ಎರಡು ಸಲ ಆವೃತ್ತಗೊಂಡಿವೆ. 


ಸ್ವಸ್ಥಾಃ ಸಂತು ವಸಂತ ತೇ ರತಿಪತೇರಗ್ರೇಸರಾ ವಾಸರಾಃ ॥೧೩॥ 


ಹೇ ವಸಂತನೇ ರತಿಪತಿಯ ಮುನ್ನಡೆಯಲಿ ಸಾಗುವಾ ನಿನ್ನ ದಿನಗಳು ಸುಖಕರವಾಗಲಿ. ॥೧೩॥ 


ಅನೇಕ ವರ್ಣಗಳು ಮಧ್ಯೆ ವ್ಯವಧಾನವಿದ್ದರೂ ಪುನರಾವೃತ್ತವಾಗುವುದಕ್ಕೆ


ಚಕಿತ ಚಾತಕಮೇಚಕಿತವಿಯತಿ ವರ್ಷಾತ್ಯಯೇ ॥೧೪॥ 


ಮಳೆಗಾಲದಂತ್ಯದಲಿ ಚಕಿತಗೊಂಡ ಚಾತಕಗಳಾಗಸದೊಳು ॥೧೪॥ 


ನಾತಿನಿರ್ಬಂಧವಿಹಿತಾ ನಾಪ್ಯಪೇಶಲಭೂಷಿತಾ 

ಪೂರ್ವಾವೃತ್ತ ಪರಿತ್ಯಾಗ ನೂತನಾವರ್ತನೋಜ್ವಲಾ॥4॥ 


ಹೆಚ್ಚಿನ ಪ್ರಯಾಸವಿಲ್ಲದೆ ( ಪರ್ಯತ್ನವಿಲ್ಲದೆ) ಕರ್ಕಶವಲ್ಲದ ವರ್ಣಗಳಿಂದ ಕೂಡಿದ್ದು. ಈ ಮುಂಚೆ ಆವೃತ್ತಗೊಂಡ ವರ್ಣಗಳನ್ನು ಬಿಟ್ಟು ನೂತನ ವರ್ಣಗಳ ಆವರ್ತನದಿಂದ ಸುಶೋಭಿತಗೊಂಡ ವರ್ಣವಿನ್ಯಾಸ ವಕ್ರತೆಯಾಗಿರಬೇಕು. 


ಏತಾಮ್ ಪಶ್ಯ ಪುರಸ್ತಟೀಮಿಹ ಕಿಲ ಕ್ರೀಡಾಕಿರಾತೋ ಹರಃ 

ಕೋದಂಡೇನ ಕಿರೀಟಿನಾಂ ಸರಭಸಂ ಚೂಡಾಂತರೇ ತಾಡಿತಃ 

ಇತ್ಯಾಕರ್ಣ್ಯ ಕಥಾದ್ಭುತಂ ಹಿಮ ನಿಧಾವದ್ರೌ ಸುಭದ್ರಾಪತೇ 

ರ್ಮಂದಂ ಮಂದಮಕಾರಿ ಯೇನ ನಿಜಯೋರ್ದೋರ್ದಂಡಯೋರ್ಮುಂಡನಂ ॥೨೨॥ 


ಮುಂದಿರುವೀ ನದೀತಟವ ನೋಡಿದೊ 

ಇಲ್ಲೆ ಅರ್ಜುನನು ಧನುವಿಂದ 

ಕಿರಾತವೇಷದ ಶಿವನ ಶಿರವ ರಭಸದಿಂದಲಿ 

ಘಟ್ಟಿಸಿದನು ಹಿಮಗಿರಿಯ ಮೇಲೆ 

ಸುಭದ್ರಾಪತಿ ಅರ್ಜುನನು ಮೆರೆದ


ವರ್ಣಚ್ಛಾಯಾನುಸಾರೇಣ ಗುಣಮಾರ್ಗಾನುವರ್ತಿನೀ

ವೃತ್ತಿ ವೈಚಿತ್ರ್ಯ ಯುಕ್ತೇತಿ ಸೈವ ಪ್ರೋಕ್ತಾ ಚಿರಂತನೈಃ ॥5॥ 


ವರ್ಣಗಳ ಸೌಂದರ್ಯವನ್ನು ದುಡಿಸಿಕೊಳ್ಳುವ ವರ್ಣವಿನ್ಯಾಸ ವಕ್ರತೆಯು ಗುಣ ಮತ್ತು ಮಾರ್ಗಗಳನ್ನು ಅನುಸರಿಸುವಂಥದು. ವೃತ್ತಿ ವೈಚಿತ್ರ್ಯದಿಂದ ಕೂಡಿರುವಂಥದು ಎಂದು ಚಿರಂತನಾಚಾರ್ಯರು ಹೇಳಿದ್ದು ಇದನ್ನೇ. 


ಕನ್ನಡ ವಕ್ರೋಕ್ತಿ ಜೀವಿತ 


ಮೂರನೆಯ ಉನ್ಮೇಷ 


ಉದಾರ ಸ್ವ ಪರಿಸ್ಪಂದ ಸುಂದರತ್ವೇನ ವರಣನಮ್

ವಸ್ತು ನೋ ವಕ್ರ ಶಬ್ದೈಕ ಗೋಚರತ್ವೇನ ವಕ್ರತಾ[ 1] 


ತನ್ನದೇ ಆದ ಅಪಾರ ಸ್ವಾಭಾವಿಕ ಸೌಂದರ್ಯದ ದೆಸೆಯಿಂದಾಗಿ ವಸ್ತುವು ರಮಣೀಯತೆಗೆ ತಗುವ ರೀತಿಯಲ್ಲಿ ವಿಶಿಷ್ಟ ವಕ್ರ ಶಬ್ಧದ ಮೂಲಕವೇ ವರ್ಣಿಸಲ್ಪಟ್ಟಾಗ, ಅದನ್ನು ವಸ್ತು ವಕ್ರತೆ ಎಂದು ಪರಿಗಣಿಸಬಹುದು. [1] 


ಅಪರಾ ಸಹಜಾಹಾರ್ಯಕವಿಕೌಶಲಶಾಲಿನೀ 

ನಿರ್ಮಿತಿರ್ನೂತನೋಲ್ಲೇಖಲೋಕಾತಿಕ್ರಾಂತ ಗೋಚರಾ[೨] 


ಇನ್ನೊಂದು ಪ್ರಕಾರದ ವಕ್ರತೆ ಇದೆ. ಅದು ಕವಿಯ ಸಹಜ ಹಾಗೂ ವ್ಯುತ್ಪತ್ತಿಜನ್ಯ ಕೌಶಲಗಳಿಂದ ಶೋಭಿತವಾದ್ದು.  ಅದು ಕವಿ ಪ್ರತಿಭಾಜನ್ಯ ಮೌಲಿಕ ರಚನೆಗಳಲ್ಲಿ ಪರಿಣಮಿಸುವಂಥದು [2] 


ಮಾರ್ಗಸ್ಥ ವಕ್ರಶಬ್ಧಾರ್ಥ ಗುಣಾಲಂಕಾರ ಸಂಪದಃ । 

ಅನ್ಯದ್ವಾಕ್ಯಸ್ಯ ವಕ್ರತ್ವಂ ತಥಾಭಿಹಿತಿ ಜೀವಿತಮ್ [3] 


ಮನೋಜ್ಞಫಲಕೋಲ್ಲೇಖ ವರ್ಣಚ್ಛಾಯಾಶ್ರಿಯಃ ಪೃಥಕ್।

ಚಿತ್ರಸ್ಯೇವ ಮನೋಹಾರಿ ಕರ್ತುಃ ಕಿಮಪಿ ಕೌಶಲಮ್ [4] 


ಸುಕುಮಾರಾದಿ ಮಾರ್ಗಗಳಲ್ಲಿರುವ (ವಕ್ರ) ಶಬ್ಧ, ಅರ್ಥ, ಗುಣ, ಹಾಗೂ ಅಲಂಕಾರಗಳ ಸೌಂದರ್ಯ ಸಂಪತ್ತಿಗಿಂತ ವಾಕ್ಯವಕ್ರತೆ ಎಂಬುದು ತೀರಾ ಭಿನ್ನವಾದದ್ದು. ವಾಕ್ಯರೂಪದ ಅಭಿವ್ಯಕ್ತಿಯೇ ಈ ಸೌಂದರ್ಯದ ಪ್ರಾಣವೆಂದು ಪರಿಗಣಿಸಲಾಗಿದೆ. ಅದು ಕವಿಯ ವಿಶಿಷ್ಟ ಕೌಶಲದ ದ್ಯೋತಕ. ಹೇಗೆಂದರೆ ಚಿತ್ರವೊಂದನ್ನು ರೂಪಿಸುವ ಸುಂದರ ಫಲಕ, ಗೆರೆಗಳು ಮತ್ತು ವಿವಿಧ ವರ್ಣ ಛಾಯೆಗಳೇ ಮೊದಲಾದ ವಿವಿಧ ವಸ್ತುಗಳ ಸೌಂದರ್ಯಕ್ಕಿಂತಚಿತ್ರದ ಒಟ್ಟಾರೆ ವಿಶಿಷ್ಟ ಸೌಂದರ್ಯವು ವಿಭಿನ್ನವಾಗಿರುವಂತೆ. [ 3, 4 ] 


ಭಾವಾನಾಮಪರಿಮ್ಲಾನ ಸ್ವಭಾವೌಚಿತ್ಯ ಸುಂದರಮ್। 

ಚೇತನಾನಾಮ್ ಜಡಾನಾಮ್ ಚ ಸ್ವರೂಪಂ ದ್ವಿವಿಧಂ ಸ್ಮೃತಂ [ 5] 


ಎಂದೂ ಮಾಸದ ಔಚಿತ್ಯದಿಂದ ಹಾಗೂ ಸರಸ ಸ್ವಭಾವದ ಸೌಂದರ್ಯದಿಂದ ಕೂಡಿರುವಂತೆ ವರ್ಣಿಸಲಾಗುವ ಕಾವ್ಯ ವಿಷಯಗಳು ಎರಡು ಪ್ರಾಕಾರದವು. ಅವುಗಳೆಂದರೆ ಜಡ ಮತ್ತು ಚೇತನಗಳು. 


ತತ್ರ ಪೂರ್ವಂ ಪ್ರಕಾರಾಭ್ಯಾಮ್ ದ್ವಾಭ್ಯಾಮೇವ ವಿಭಿದ್ಯತೇ। 

ಸುರಾದಿ ಸಿಂಹಪ್ರಭೃತಿ ಪ್ರಾಧಾನ್ಯೇತರ ಯೋಗತಃ[ 6] 


ಇವುಗಳಲ್ಲಿ ಮೊದಲನೆಯದಾದ ಚೇತನ ವರ್ಗದಲ್ಲಿ ದೇವಾದಿ ಮತ್ತು ಸಿಂಹಾದಿಗಳಲ್ಲಿ ಪ್ರಾಧಾನ್ಯ ಮತ್ತು ಅಪ್ರಾಧಾನ್ಯದಿಂದ ಮತ್ತೆ ಎರಡು ವಿಧಗಳಾಗುತ್ತವೆ. 


ಮುಖ್ಯಮಕ್ಲಿಷ್ಟರತ್ಯಾದಿ ಪರಿಪೋಷ ಮನೋಹರಮ್। 

ಸ್ವಜಾಚ್ಯುಚಿತ ಹೇವಾಕ ಸಮುಲ್ಲೇಖೋ ಜ್ವಲಂ ಪರಮ್[7] 


ಮೊದಲನೆಯದಾಗಿ ಚೇತನ ಪ್ರಕಾರಗಳು ಸುಂದರವಾದ ರತಿಯೇ ಮೊದಲಾದ ಸ್ಥಾಯೀ ಭಾವಗಳ ಸರಾಗ ಪರಿಪೋಷಣೆಯಿಂದ ಮನೋಹರವೆನಿಸುತ್ತವೆ. ಎರಡನೆಯ ಗೌಣ [೬] ಚೇತನ ಪದಾರ್ಥಗಳು ತಮ್ಮ ಜಾತಿಗೆ ಉಚಿತವಾದ ಸ್ವಭಾವದ ಸಂಯಕ್ ನಿರೂಪಣೆಯಿಂದ ಉಜ್ವಲವಾಗುತ್ತವೆ.[7]


ರಸೋದ್ದೀಪನ ಸಾಮರ್ಥ್ಯ ವಿನಿಬಂಧನ ಬಂಧುರಮ್। 

ಚೇತನಾನಾಮಮುಖ್ಯಾನಾಂ ಜಡಾನಾಂ ಚಾಪಿ ಭೂಯಸಾ॥ [8] 


ಗೌಣಚೇತನ ಪದಾರ್ಥಗಳು ( ಅಮುಖ್ಯಚೇತನ ಪಶುಪಕ್ಷಿ ಸಿಂಹಾದ್ರಿ ) ಹಾಗೂ ಹೆಚ್ಟಾಗಿ ಜಡ ಪದಾರ್ಥಗಳನ್ನು ರಸವನ್ನು ಉದ್ದೀಪಿಸಲು ಸಮರ್ಥವಾಗುವ ರೀತಿಯಲ್ಲಿ ವರ್ಣಿಸಿದಾಗ, ಅವು ಅತ್ಯಂತ ಮನೋಹರವೆನಿಸುತ್ತವೆ.


ಕನ್ನಡ ವಕ್ರೋಕ್ತಿ ಜೀವಿತ 

ನಾಲ್ಕನೆಯ ಉನ್ಮೇಷ 


ಯತ್ರ ನಿರ್ಯಂತ್ರಣೋತ್ಸಾಹ ಪರಿಸೂಪಂದೋಪಶೋಭಿನೀ। 

ಪ್ರವೃತ್ತಿ ರ್ವ್ಯವಹರ್ತೃಣಾಂ ಸ್ವಾಶಯೋಲ್ಲೇಖ ಶಾಲಿನೀ ॥1॥ 


ಅಪ್ಯಾಮೂಲಾದನಾಶಂಕ್ಯ ಸಮುತ್ಥಾನೇ ಮನೋರಥೇ। 

ಕಾಪ್ಯುನ್ಮೀಲತಿ ನಿಃಸೀಮಾ ಸಾ ಪ್ರಬಂಧಾಂಶ ವಕ್ರತಾ॥2॥ 


ಅಪರಿಮಿತವಾದ ಉತ್ಸಾಹದ ಸೌಂದರ್ಯದಿಂದ ಶೋಭಿತವಾದ ತಮ್ಮ ಭಾವನೆಗಳಿಗೆ ಅಭಿವ್ಯಕ್ತಿ ಕೊಡುವ ಹಾಗೂ ತಮ್ಮ ಆಶಯಗಳನ್ನು ಪ್ರಬಲವಾಗಿ ಅಭಿವ್ಯಕ್ತಿಸುವ ಪ್ರವೃತ್ತಿ ವ್ಯವಹರಿಸುವವರಲ್ಲಿ ( ಪಾತ್ರಗಳಲ್ಲಿ) ಕಂಡು ಬಂದಾಗ. 


ಪಾತ್ರಗಳ ಮನೋಭೀಷ್ಟಗಳು ಮೊದಲಿನಿಂದ ಕಡೆಯವರೆಗೂ ನಿಗೂಢವಾಗಿಯೇ ಉಳಿದು ಬಿಟ್ಟಾಗ ( ಅಂದರೆ ಕೊನೆಯವರೆಗೂ ಕಾತರ ನಿರೀಕ್ಷೆಗಳು ಶಾಶ್ವತವಾಗಿ ಉಳಿದಿರುತ್ತವೆ.) ಈ ಎಲ್ಲದರ ಹಿಂದಿರುವ ವಿಶಿಷ್ಟವೂ, ಅಸೀಮವೂ ಆದ ಕಾವ್ಯ ಕೌಶಲವು ಪ್ರಕರಣ ವಕ್ರತೆ ಎನಿಸುತ್ತದೆ.  


ಇತಿವೃತ್ತ ಪ್ರಯುಕ್ತೇऽಪಿ ಕಥಾವೈಚಿತ್ರ್ಯ ವರ್ತ್ಯನಿ।

ಉತ್ಪಾದ್ಯಲವಲಾವಣ್ಯಾದನ್ಯಾ ಲಸತಿ ವಕ್ರತಾ॥3॥ 


ತಥಾ ಯಥಾ ಪ್ರಬಂಧಸ್ಯ ಸಕಲಸ್ಯಾಪಿ ಜೀವಿತಮ್ । 

ಭಾತಿ ಪ್ರಕರಣಂ ಕಾಷ್ಮಾದಿ ರೂಢ ರಸನಿರ್ಭರಮ್॥4॥ 


ಇತಿವೃತ್ತ (ಇತಿಹಾಸ) ವನ್ನಾಧರಿಸಿದ್ದರೂ, ಕವಿಯು ಕಥಾ ವೈಚಿತ್ರ್ಯವನ್ನು ನಿರ್ಮಿಸ ಹೊರಟಿದ್ದರೆ, ಅಲ್ಲಿ ಲಾವಣ್ಯದ ಕಿಂಚಿದಂಶವನ್ನು ಸೃಷ್ಟಿಸಿದ್ದರೂ ಸಾಕು, ಅದರಿಂದ ಹೊರಹೊಮ್ಮುವ ಸೌಂದರ್ಯವು ಅಪೂರ್ವವೇ ಆಗಿಬಿಡುತ್ತದೆ.


ಪ್ರಕರಣವೊಂದು ರಸನಿರ್ಭರತೆಯಿಂದ ಕೂಡಿಕೊಂಡು ಪರಾಕಾಷ್ಠೆಯನ್ನು ಮುಟ್ಟುವುದರಿಂದ ಅದು ಸಮಗ್ರ ಪ್ರಬಂಧದ ಪ್ರಾಣ ಸ್ವರೂಪದಂತೆ ಶೋಭಿಸುವುದು. 


ಪುರಬಂಧಸ್ಯೈಕ ದೇಶಾನಾಂ ಫಲಬಂಧಾನುಬಂಧವಾನ್। 

ಉಪಕಾರ್ಯೋಪ ಕರ್ತೃತ್ವ ಪರಿಸ್ಪಂದಃ ಪರಿಸ್ಫುರನ್॥5॥ 


ಅಸಾಮಾನ್ಯ ಸಮುಲ್ಲೇಖ ಪ್ರತಿಭಾ ಪ್ರತಿಭಾಸಿನಃ । 

ಸೂತೇ ನೂತನ ವಕ್ರತ್ವರಹಸ್ಯಂ ಕಸ್ಯಚಿತ್ಕವೇ॥6॥ 


ಆತ್ಯಂತಿಕ ಫಲ (ಗುರಿ) ಸಾಧನೆಯ ಉದ್ದೇಶದಿಂದ ಕೃತಿಯ ವಿವಿಧ ಭಾಗಗಳಲ್ಲಿ ವರ್ಣಿಸಲಾದ ವಿವಿಧ ಪ್ರಕರಣಗಳು ಪರಸ್ಪರ ಉಪಕಾರ್ಯೋಪ ಕರ್ತೃತ್ವ ಸಂಬಂಧದಿಂದ ಒಂದಕ್ಕೊಂದು ಬೆಸೆಯಲ್ಪಟ್ಟಿರುತ್ತವೆ. ಇಂಥ ಪ್ರಕರಣಗಳಲ್ಲಿ ಕಣ್ಣಿಗೆ ಹೊಡೆಯುವಂತೆ ಸಾವಯವ ಸಂಬಂಧ ಅಥವಾ ಅವಯವೈಕತೆ ಇರುತ್ತದೆ. 


ಇಂಥ ಸಾವಯವ ಸಂಬಂಧವು ಮೌಲಿಕ ಸೃಜನಶೇಲತೆಯ ತಿರುಳನ್ನು ಅಭಿವ್ಯಕ್ತಿಸುತ್ತದೆ. ಅಸಾಮಾನ್ಯ ನಿರ್ಮಾಣಶೀಲ ಪ್ರತಿಭಾಸಂಪನ್ನತೆಯನ್ನು ವರವಾಗಿ ಪಡೆದಿರುವ ಅದ್ಭುತ ಕಾವ್ಯ ಪ್ರತಿಭಾಸಂಪನ್ನ ಕವಿಯಲ್ಲಿ ಮಾತ್ರ ಈ ನೂತನ ವಕ್ರತ್ವವು ಹೊರಹೊಮ್ಮುವುದು. 


ಪ್ರತಿ ಪ್ರಕರಣಂ ಪ್ರೌಢ ಪ್ರತಿಭಾಭೋಗ ಯೋಜಿತಃ । 

ಏಕ ಏವಾಭಿಧೇಯಾತ್ಮಾ ಬಧ್ಯಮಾನಃ ಪುನಃ ಪುನಃ ॥7॥ 


ಅನ್ಯೂನ ನೂತನೋಲ್ಲೇಖರಸಾಲಂಕರಣೋಜ್ವಲಃ । 

ಬಧ್ನಾತಿ ವಕ್ರತೋದ್ಭೇದ ಭಂಗೀಮುತ್ಪಾದಿತಾದ್ಭುತಾಮ್ ॥8॥ 


ಒಂದೇ ವಸ್ತುವು ಪ್ರತಿ ಪ್ರಕರಣದಲ್ಲೂ ಮತ್ತೆ ಮತ್ತೆ ಕವಿಯ ಪ್ರೌಢ ಪ್ರತಿಭೆಯ ಸ್ಪರ್ಶದಿಂದ ವರ್ಣಿಸಲ್ಪಟ್ಟಾಗ. (7) 


ಹಾಗೂ ಅನ್ಯೂನವೂ (ಪರಿಪೂರ್ಣವೂ) ನೂತನವೂ ಆದ ರಸಾಲಂಕಾರಗಳ ಉಜ್ವಲತೆಯನ್ನು ಬಿಂಬಿಸುವಂತಾದಾಗ ಅದು ವಕ್ರತೆಯ ಅದ್ಭುತವಾದ ಭಂಗಿಯನ್ನು ಅಭಿವ್ಯಕ್ತಿಸುತ್ತದೆ. ಅಂಥ ಹೊಸಕ್ರಮವು, ವಕ್ರತೆಯ ಸೌಂದರ್ಯವನ್ನು ಪ್ರಭಾವಪೂರ್ಣವಾದ ರೀತಿಯಲ್ಲಿ ಅಳವಡಿಸಿಕೊಳ್ಳುತ್ತದೆ. 


ಕಥಾ ವೈಚಿತ್ರ್ಯ ಪಾತ್ರಂ ತದ್ವಕ್ರಿಮಾಣಂ ಪ್ರಪದ್ಯತೇ। 

ಯದಂಗಂ ಸರ್ಗಬಂಧಾದೇಃ ಸೌಂದರ್ಯಾಯ ನಿಬಧ್ಯತೇ॥9॥ 


ಮಹಾ ಕಾವ್ಯಾದಿಗಳ (ಸರ್ಗಬಂಧೃದೇಃ) ಸೌಂದರ್ಯದ ಸಲುವಾಗಿ ಯೋಜಿಸಲಾಗುವ ಸಾಂಪ್ರದಾಯಿಕಗಳೆನಿಸಿದ ಪ್ರಕರಣಗಳೂ ಕಥಾ ಸಂವಿಧಾನ ವೈಚಿತ್ರ್ಯದ ಅವಿಭಾಜ್ಯ ಅಂಗವಾಗಿ ಬಂದಾಗ, ವಕ್ರತೆಯನ್ನು ಪಡೆದುಕೊಳ್ಳುತ್ತವೆ. 


ಯತ್ರಾಂಗಿರಸ ನಿಷ್ಯಂದ ನಿಕಷಃ ಕೋ ಲಕ್ಷ್ಯತೇ । 

ಪೂರ್ವೋತ್ತರ ರೈರಸಂಪಾದ್ಯಃ ಸಾಂಕಾದೇಃ ಕಾಪಿ ವಕ್ರತೇ॥10॥ 


ಅಂಕಾದಿಗಳಿಗೆ ಸಂಬಂಧಿಸಿದ ಅಲೌಕಿಕ ವಕ್ರತೆಯು ಅಂಕವೊಂದಕ್ಕೆ ವಿಶಿಷ್ಟವಾಗಿದ್ದು, ನಾಟಕದಲ್ಲಿ ಅದರ ಹಿಂದಿನ ಅಥವಾ ಮುಂದಿನ ಅಂಕದಿಂದ ಆ ಅಲೌಕಿಕತೆ ಸಿದ್ಧಿಸುವುದಿಲ್ಲ.  ಹೀಗಾಗಿ ಆ ಅಂಕವು ತನ್ನದೇ ಆದ ರೀತಿಯಲ್ಲಿ ನಾಟಕದ ಪ್ರಧಾನ ರಸಪ್ರವಾಹದ ನಿಕಷವಾಗಿರುತ್ತದೆ. 


ಕರ್ತೃ: ಕುಂತಕ

ಅನುವಾದಕರು: ಡಾ. ಆರ್. ಲಕ್ಷ್ಮೀನಾರಾಯಣ 

ಪ್ರಕಾಶಕರು: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ 

ಬೆಂಗಳೂರು-೫೬೦೦೫೬