ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಭಾನುವಾರ, ಜನವರಿ 7, 2018

ರುದ್ರಭಟ್ಟನ ಜಗನ್ನಾಥ ವಿಜಯಂ

ಜಗನ್ನಾಥ ವಿಜಯಂ
ರುದ್ರಭಟ್ಟ
ಕಾಲ|| ಸುಮಾರು ಕ್ರಿ. ಶ.  ೧೨೪೦

ಪ್ರಥಮಾಶ್ವಾಸಂ

ಶಾ|| ಶ್ರೀರಾಮಾನಟಿ ಕೌಸ್ತುಭದ್ಯುತಿಕಿರತ್ಪುಷಾಪಾಂಜಲಿಕ್ಷೇಪವ
ಕ್ಷೋರಂಗಸ್ಥಿತೆಯಾದ ಪಾದನಖೋಚಿರ್ಗಂಗೆ ಪೃಥ್ವೀಶಕೋ
ಟೀರವ್ಯಾಪ್ತಿಗೆ ಸಂದ ಚಕ್ರ ರವಿ ದೈತ್ಯಧ್ವಾಂತಮಂ ಗೆಲ್ದ ಭೂ
ಭಾರಚ್ಛೇದವಿನೋದಿ ಕೃಷ್ಣನೆಮಗೀಗಾನಂದಸಂದೋಹಮಂ ||೧||

ಚಂ|| ಜನನುತರಾಜಹಂಸನಯನಂ ಕಮಳಾವಸಥಂ ಕಳಾನಿಕೇ
ತನನೆನಿಸಿರ್ದ ಪೆಂಪುಪಮೆವೆತ್ತೊಡಮೇನೊ ಹಿರಣ್ಯಗರ್ಭನೆಂ
ದೆನಿಸಿಯುದಾರನೆಂಬ ರಜಮೊಂದಿಯೆ ಸತ್ತ್ವನಿಧಾನನೆಂಬ ಪೆಂ
ಪನುಗುಣಮಾದ ಲೋಕಪಿತನೊಲ್ದು ಚತುರ್ಮುಖನೀಗೆ ರಾಗಮಂ||೨||

ಮ|| ಅರಾರೌದ್ರಂ ಕರದೈರ್ಘ್ಯಮುಲ್ಲಸದಹೀನಾಲಂಕೃತಂ ಮೂರ್ತಿ ಸಾ
ಕ್ಷರಸೇವ್ಯಂ ನಿಜವಿದ್ಯೆ ವಿಶ್ವವಿನುತಂ ಪಾದಂ ಸದಾಳಿಪ್ರಿಯಂ
ವರದಾನಂ ನತಭದ್ರಲಕ್ಷಣಪದಂ ಪದ್ಮಾನುಷಂಗಿತ್ವಮಾ
ಗಿರೆ ಪೆಂಪಚ್ಚರಿಯಾದ ದೇವಗಣಪಂ ರಕ್ಷಿಕ್ಕೆ ಭೂಚಕ್ರಮಂ ||೫||

ಮ|| ಕೆಸಱೊಳ್ ಪುಟ್ಟಿದುದಂತಮಲ್ಲದೆ ರಜಸ್ಸಂಲೀಢಮೆಂತುಂ ಜಡಾ
ವಸಥಂ ಚಿಃ ಮಧುಪಪ್ರಸಂಗಿ ಖರದಂಡಂ ಮತ್ತೆನುತ್ತಬ್ಜಮಂ
ಬಿಸುಟತ್ಯತ್ತಮಮಿಂತುಟೆಂದು ಪಿರಿದುಂ ಸಂತೋಷದಿಂ ವಾಣಿ ಬಂ
ದು ಸಮಂತಿರ್ಕೆ ನವೀನಸೌರಭದವೋಲ್ ಜಿಹ್ವಾಗ್ರದೊಳ್ ರುದ್ರನಾ ||೬||

ಮ|| ಸ್ತುತಿಗೆಯ್ವೆಂ ಕೃತಪಂಚಮಶ್ರುತಿಪುರಾಣವ್ಯಾಸನಂ ವ್ಯಾಸನಂ
ಕೃತಿಲೋಕಶ್ರುತಿಪೂರಕಲ್ಪಕವಿತಾಗೀರ್ಬಾಣನಂ ಬಾಣನಂ
ಚತುರೋಕ್ತಿಪ್ರಚುರಾರ್ಥಕಾವ್ಯಜನಿತೋರ್ವೀಹರ್ಷನಂ ಹರ್ಷನಂ
ಶತಪತ್ರಾಕ್ಷ ಕಥಾಮೃತಬುಧಸ್ತೋಮಾಘನಂ ಮಾಘನಂ ||೮||

ಚಂ|| ಇನಿತುಮವಿರ್ಕೆ ಮತ್ಕೃತಿಯೊಳೀಧರೆ ಬಣ್ಣಿಸೆ ಸಂದ ಶಂಖವ
ರ್ಮನ ಬಗೆ ಶಾಂತಿವರ್ಮನ ನಯಂ ಗುಣವರ್ಮನ ಬಂಧಗೌರವಂ
ಮನಸಿಜನೋಜೆ ಕಣ್ಣಮನ ಜಾಣ್ಣುಡಿ ಪಂಪನ ರೀತಿ ಚಂದ್ರಭ
ಟ್ಟನ ಜತಿ ಪೊನ್ನಮಯ್ಯನಬೆಡಂಗು ಗಜಾಂಕುಶನುಳ್ಳ ಬಿನ್ನಣಂ ||೧೦||

ಕತೆ ವಿಷ್ಣುಪುರಾಣಂ ಸ
ತ್ಕೃತಿವೇೞ್ದಂ ಸುಕವಿರುದ್ರನೀಕೃತಿಗೆ ಕಥಾ
ಪತಿ ಕೃಷ್ಣಂ ಕೃತಿಯುಂ ಭೂ
ನುತಮೆ ಜಗನ್ನಾಥವಿಜಯಮೆನೆ ಮೆಚ್ಚದರಾರ್ ||೨೧||

ಮ|| ಭಯಮಂ ದೇವಗಣಕ್ಕೆ ಮಾಡಿ ಪದಿನಾಲ್ಕು ಲೋಕಮಂ ದೈತ್ಯನಾ
ಜ್ಞೆಯೊಳಿೞ್ಕೊಂಡಿರೆ ನಾಕಿಗಳ್ಗಭಯಮಂ ಕೊಟ್ಟೇಱಿ ತೇಱಂ ಜಗ
ತ್ತ್ರಯಮಂ ಕಾದು ಸುರಾಸುರಾಹವದೊಳಾಂ ಕೊಂದಂದಿನಾ ಕಾಲನೇ
ಮಿಯೆ ಕಂಸಾಸುರನಾಗಿ ಪುಟ್ಟಿದುದನಾಂ ಬಲ್ಲೆಂ ವಚೋವಲ್ಲಭಾ||೬೮||

ಚಂ|| ಗಿರಿಗಳನೆತ್ತಿ ಪೆರ್ಮರಂಗಳಂ ಪಿಡಿದಾತಂ ಮಹಾಬಲಸ್ಥ ವಾ
ನರಭಟಕೋಟಿಯಂ ಶ್ವಸಿತವಾಸದೆ ಪಾಱಿಸುವಂಘ್ರಿಯುಗ್ಮದಿಂ
ದೊರಸುವ ಕೈಗಳಿಂ ಪೊಸೆದು ಮುಕ್ಕುವಗುರ್ವಿನ ಕುಂಭಕರ್ಣನೀ
ಧರಣಿಗೆ ದಂತವಕ್ರನೆನಿಸಿರ್ದುರ್ಪುದನಾನಱಿವೆಂ ಚತುರ್ಮುಖಾ||೭೦||

ಚಂ ||ಹರಸಖನಲ್ಲಿ ಪುಷ್ಪಕಮನಿೞ್ಕುಳಿಗೊಂಡು ಹರಾದ್ರಿಯಂ ಹರಂ
ಬೆರಸು ಭುಜಂಗಳಿಂ ನೆಗಪಿ ಶಕ್ರನುಮಂ ಸೆಱೆಗೆಯ್ದಜಯ್ಯನಾ
ಗಿರೆ ಬಹುಯತ್ನಗೌರವದಿನಾಂ ಪೊಣರ್ದಿಕ್ಕಿದ ರಾವಣಂ ವಚೋ
ಧರ ಶಿಶುಪಾಲನೆಂಬಸುರನಾದುದನಾಂ ತಿಳಿದೆಂ ನಿರಾಕುಳಂ ||೭೧||

ಚಂ ||ಕ್ರಮದೆ ವಿಜೃಂಭಣಕ್ರಮದೆ ಕೊಂಡು ಧರಾತಳಮಂ ರಸಾತಳ
ಕ್ಕಮರವಿರೋಧಿಯಂ ಕಳುಪಿದೆಂ ಬಳಿಯಂ ಬಳಿಯಂ ತದಾತ್ಮಜಂ
ಯಮಸಮಭೀಕರಂ ಯಮಸಮಾಧಿಯಿನೀಶ್ವರನಿಂ ವರಂ ವರಂ
ಸಮನಿಪ ಬಾಣನೀ ಸುರರ್ಗೆ ಹೃದ್ಗತಬಾಣನೆ ಬಲ್ಲೆನಬ್ಜಜಾ ||೭೨||

ಆದಿತ್ಯನ ಪಿತೃಮಾತೃಗ
ಳಾದ ಕಶ್ಯಪನುಮದಿತಿಯುಂ ವರುಣನ ಶಾ
ಪಾದೇಶದೆ ಯದುವಂಶಜ
ರಾದರ್ ವಸುದೇವದೇವಕೀಸಂಜ್ಞೆಗಳಿಂ ||೭೫||

ಸುತನಪ್ಪೆಂ ದೇವಕಿಗಾಂ
ಕತಿಪಯದಿನಮೊಲ್ದು ರಮಿಯಿಪೆಂ ಗೋಕುಲದೊಳ್
ದಿತಿಸುತರಂ ಕಂಸಾದ್ಯರ
ನತಿಬಲರಂ ಕೊಲ್ವೆನಿೞಿಪುವೆಂ ಭೂಭರಮಂ||೭೯||

ದ್ವಿತೀಯಾಶ್ವಾಸಂ

ಶ್ರೀವರನ ಚರಣಮಂ ಕ
ಲ್ಪಾವನಿಜಪ್ರಸವಚಯದಿನರ್ಚಿಸಿ ಬೀೞ್ಕೊಂ
ಡಾವಿಬುದರ್ ಮುದದಿಂ ನಾ
ನಾವಿಧ ವಾಹನದೆ ಮೇರುಗಿರಿಗೆೞ್ತಂದರ್ ||೧||

ಮ|| ಯದುವಂಶಾಭರಣಂಗೆ ರಾಜ್ಯಭರಧುರ್ಯಂಗುಗ್ರಸೇನಂಗೆ ಪು
ಟ್ಟಿದನಭ್ರಮಕ್ಕೆ ಸಿಡಿಲ್ ಸುಧಾಬ್ಧಿಗೆ ಮಹಾಹಾಳಾಹಳಂ ಕಾನನ
ಕ್ಕೆ ದವೋಗ್ರಾಗ್ನಿ ಕಡಂಗಿ ಪುಟ್ಟಿದವೊಲಂತಾ ಕಂಸದೈತ್ಯಂ ವಿಳಾ
ಸದಿನಿರ್ದಂ ಸೆಱೆಗೆಯ್ದು ತಜ್ಜನಕನಂ ಸಾಮ್ರಾಜ್ಯಸಂಪತ್ತಿಯೊಳ್ ||೩೮||

ಮಸಕದ ಹಾಳಾಹಳದೊಡ
ನೆಸೆವಿಂದುವ ಲೇಖೆ ಪುಟ್ಟುವಂದದಿನಾ ರಾ
ಕ್ಷಸನೊಡನೆ ಪುಟ್ಟಿ ದೇವಕಿ
ವಸುದೇವಂಗರಸಿಯಾಗಿ ಸುಖದಿಂದಿರ್ದಳ್ ||೩೯||

ಅತಿದುಸ್ಸಹವಾರ್ತಾ ವಿಷ
ಲತೆಯಂ ನಾಂಟಿಸಲಿದಲ್ತೆ ಕಂಸಶ್ರೋತ್ರ
ಕ್ಷಿತಿನನಪವಿಶಲಾಕಾ
ತತಿಯೆನೆ ದಶನಾಂಶು ನಿಮಿರೆ ಮುನಿಯಿಂತೆಂದಂ ||೪೩||

ಮ||ಸ್ರ|| ಚತುರಾಸ್ಯೇಂದ್ರಾದಿದೇವರ್ ನಡೆದು ಜಲಧಿತಲ್ಪಂಗೆ ದೈತ್ಯೇಂದ್ರರುದ್ವೃ
ತ್ತತೆಯಂ ಪುಯ್ಯಲ್ಚೆ ಕಂಸಪ್ರಭೃತಿ ದಿತಿಜರಂ ಕೊಲ್ವೆನಾನೆಂದು ಪೂಣ್ದ
ಚ್ಯುತದೇವಂ ದೇವಕೀಗರ್ಭದೊಳುದಯಿಸಲೆಂದಿರ್ದನೆಂದಿಂತಿದಂ ಪೇ
ೞ್ದತಿಮಾತ್ರಂ ಪಾಂಡುಗಾತ್ರಂ ತಳರ್ದನಘಲತಾದಾತ್ರನಾ ಬ್ರಹ್ಮಪುತ್ರಂ ||೪೪||

ಮ||ಸ್ರ|| ಕಿಸುಱಂ ಪೊತ್ತಿಕ್ಕುವೀ ದಂದುಗಮೆ ತನುಗನುಷ್ಠಾನಮುಂ ಧ್ಯಾನಮುಂ ತ
ತ್ತ್ಯಸುಖೈಕಜ್ಞಾನಮುಂ ಕೇವಳಮೆನೆ ಕುಟಿಲಂ ಕ್ಲಿಷ್ಟಕಂ ಸಾಧುದುಷ್ಟಂ
ಪಿಸುಣರ್ ಮತ್ತಾರೋಪೇೞ್ ನಾರದಮುನಿಯವೊಲೆಂಬೀಪ್ರಧಾನೋಕ್ತಿಯಂ ರಾ
ಕ್ಷಸರಾಜಂ ಕೇಳ್ದು ದಂಷ್ಟ್ರಾಕಿರಣಧವಳಿತಾಸ್ಥಾನನಿಂತೆಂದನಾಗಳ್ ||೪೫||

ತೊದಳಲ್ತು ನಾರದಂ ಪೇ
ೞ್ದುದದೆಂತೆನಲೆನ್ನ ತೇರನೇಱಿಸಿ ವಿಭವಾ
ಸ್ಪದಮೆನೆ ದೇವಕಿಪುತ್ರಿಯ
ಮದುವೆಯ ನಾನೊಲ್ದುಮಾಡಿ ಕೞಿಪುವ ಪಥದೊಳ್ ||೪೬||

ಅಮರಾಧ್ವದೊಳೊಂದಶರೀ
ರಮಹಾಧ್ವನಿ ಕಂಸ ಕಂಸ ಕೇಳ್ ದೇವಕಿಯ
ಷ್ಟಮಗರ್ಭದಾತನಿಂದ
ಷ್ಟಮಚಂದ್ರಂ ನಿನಗೆ ನೆರೆಗುಮೆಂದುದಮೋಘಂ ||೪೭||

ಮ|| ಅಹಿಮರ್ತ್ಯಾಮರವಿಷ್ಟಪತ್ರಿತಯಮಂ ಮುಂ ಗೆಲ್ದ ನಿನ್ನೊಂದು ದು
ಸ್ಸಹದೋಸ್ಸಾಹದಿಂದಮಾದ ಜಸಮೆಲ್ಲಂ ಮಾಸುಗುಂ ತ್ವತ್ಪ್ರತಾ
ಪಹುತಾಶಂ ಕಡುದಣ್ಪನೇಱುಗುಮಮೋಘಂ ಸ್ತ್ರೀವಧಂಗೆಯ್ಯೆಮಾ
ಣಹಹಿನ್ನೆತ್ತದಿರೀ ನಿಜಾನುಜೆಗೆ ನೀಂ ನಿಸ್ತ್ರಿಂಷಶ ನಿಸ್ತ್ರಿಂಶಮಂ ||೪೯||

ಉ|| ನೆಟ್ಟನೆ ಮೃತ್ಯುವೀಕೆಯ ಸುತರ್ ನಿನಗೆಂದೊಡೆ ಕೊಲ್ವುದೀಕೆಗಂ
ಪುಟ್ಟಿದ ಮಕ್ಕಳಂ ಪರಸಿ ಸೇಸೆಯನಿಕ್ಕಿದ ಕೈಯೊಳೆಂತು ಕೈ
ಮುಟ್ಟಿಱಿದಪ್ಪೆ ಪೂಮುಡಿಯ ಬಾಲೆಯನೀಕೆಯನೆಂದು ಬಾಸಿಗಂ
ಗಟ್ಟಿದ ಶೀರ್ಷದಿಂದೆಱಗಿದಂ ವಸುದೇವನತೀವಭೀತಿಯಿಂ ||೫೦||

ಚಂ|| ಎಲೆ ಫಣಿರಾಜ ನಿನ್ನ ಫಣರತ್ನ ಸಹಸ್ರದ ಮಧ್ಯರತ್ನದೊಳ್
ಜಲಧಿವೃತೋರ್ವಿಯಂ ಸರಸಕಿಂಶುಕಕುಟ್ಮಳಸಂಗಿಭೃಂಗಿಯಂ
ಗೆಲೆ ತಳೆದಾ ಮಹಾಮಹಿಮ ನೀಂ ತಳೆದುರ್ವರೆಗಾದ ಭಾರಮಂ
ತೊಲಗಿಪನಿಂ ಮದಂಶವಿಭುವಾ ವಿಭುಗಗ್ರಜನಾನು ಲೀಲೆಯಿಂ ||೫೭||

ಮ||ಸ್ರ|| ಎಲೆ ಮಾಯಾದೇವಿ ಲೋಕತ್ರಯಜನನಿ ಮದಾಜ್ಞಾಸಮುತ್ಪನ್ನೆಯುಷ್ಮ
ತ್ಕಲೆ ದಿವ್ಯಾಕಾರದಿಂ ಪುಟ್ಟುಗೆ ಭಗವತಿಯುಂ ಚಂಡಿಯುಂ ದುರ್ಗಿಯುಂ ವೀ
ರಲುಲಾಯಧ್ವಂಸಿಯುಂ ಕನ್ನೆಯುಮೆನಿಸುಗೆ ಪೂಜಿಕ್ಕೆ ಮಾಂಸಾದಿ ನಾನಾ
ಬಲಿಯಿಂ ದೇವರ್ ನರರ್ ತ್ವಚ್ಚರಣಕಮಲಮಂ ಶ್ರೀಜಯಶ್ರೀನಿಮಿತ್ತಂ ||೫೮||

ಮ|| ವನಜಾಕ್ಷಂ ಬೆಸವೇೞ್ದುದಂ ನೆನೆದು ಮಾಯಾದೇವಿ ಬಂದೆಯ್ದೆ ಕಂ
ಸನ ಮಾೞ್ಪೊಂದಪಚಾರದಿಂದಿೞಿದುದಿಂದೀ ದೇವಕಿಗರ್ಭಮೆಂ
ಬಿನಮಾದೇವಿಯ ಗರ್ಭದರ್ಭಕನನತ್ತಲ್ ಗೋಕುಲಕ್ಕುಯ್ಯುಮೋ
ಹನಸಾಮರ್ಥ್ಯದೆ ನಿಂದು ಯೋಜಿಸಿದಳಂತಾ ರೋಹಿಣೀಗರ್ಭದೊಳ್ ||೬೧||

ವಚನ|| ಆಗಳಾಗೋಕುಲದೊಳಿರ್ದ ವಸುದೇವನರ್ಧಾಂಗಿ ರೋಹಿಣೀದೇವಿ ಪರಿ
ಪೂರ್ಣಗರ್ಭನಿರ್ಭರಭಾರವತಿಯಾಗಿರೆ ಶುಭಮುಹೂರ್ಥದೊಳ್

ಜಲಧರಪಥಪರ್ಯಟನ
ಕ್ಕಲಸಿ ಸುಧಾಸೂತಿ ಧಾತ್ರಿಯೊಳ್ ಶಿಶುರೂಪ
ಚ್ಚಲದಿಂ ನೆಲೆವಡೆದವೊಲು
ಜ್ಜ್ವಲತನು ರೋಹಿಣಿಗನಂತನಂದುದಯಿಸಿದಂ ||೮೮||

ವಚನ|| ಅಂತು ನಿರ್ಭರಗರ್ಭಪ್ರಾದುರ್ಭಾವಮಾಗಿ ನವಮಾಸಂ ತೀವೆ ಸಮನಂ
ತರಂ ಶ್ರಾವಣಕೃಷ್ಣಪಕ್ಷಾಷ್ಟಮೀ ರೋಹೀಣೀನಕ್ಷತ್ರದೊಳ್ ಮಹೋತ್ಕೃಷ್ಟಮಪ್ಪ
ಮುಹೂರ್ತದಿಂ ಸನಾಥವಾದ ನಿಶಾಮಧ್ಯಸಮಯದೊಳ್

ಮ||ಸ್ರ|| ಅತಸೀಪುಷ್ಪಾವಭಾಸಂ ತನುವೆಸೆವಿನೆಗಂ ಕಿಂಕಿರಾತಪ್ರಸೂನ
ಪ್ರತಿಮಂ ಪೀತಾಂಬರಂ ರಂಜಿಸುವಿನಮುದಿತಾರ್ಕಪ್ರಭಂ ಕೌಸ್ತುಭಪ್ರ
ದ್ಯುತಿ ಬೀಱುತ್ತಿರ್ಪಿನಂ ಶಾಶ್ವತನವತರಿಸಿರ್ದಂ ಗದಾಶಂಖಚಕ್ರಾಂ
ಕಿತಹಸ್ತಂ ವಾಸುದೇವಂ ದನುಜವಿಪಿನದಾವಂ ಸಮಸ್ತಪ್ರಭಾವಂ ||೧೦೦||

ಷಷ್ಠಾಶ್ವಾಸಂ

ಶ್ರೀಕೃಷ್ಣಂ ಕಂಸಪುರಾ
ಲೋಕನಕೌತುಕರಸೋದಯಂ ವೀರರಸೋ
ದ್ರೇಕಕ್ಕೆಡೆಗುಡೆ ಬಲಖ
ರ್ವೀಕೃತನಾ ದೈತ್ಯಖಳನ ಪೊೞಲ್ಗೆಯ್ತಂದಂ ||೧||

ಮ|ಸ್ರ|| ಪ್ರಕಟಂ ಸಿಂಹಸ್ಫುರಲ್ಲಂಘನಮೆಸೆಯೆ ತವಂಗಕ್ಕೆ ಧೀಂಕಿಟ್ಟು ಕೃಷ್ಣಂ
ಮಕುಟಾಗ್ರಾಸ್ಫಾಲನಂಗೆಯ್ದೆಲೆಲೆ ರವಿಯನಾ ರಾಹುವೀಂಟಿತ್ತಿನಲ್ ಕೌ
ತುಕಮಾಯ್ತೆಂದಭ್ರದೊಳ್ ಬೊಬ್ಬಿಱಿಯೆ ದಿವಿಜರಾ ಮಾಡದಿಂ ಕಂಸನಂ ಮ
ಲ್ಲಕಳಕ್ಕೆತ್ತಿಕ್ಕಿ ತಾಂ ಮೇಲೆಱಗಿದನೆಱಗಲ್ ಸ್ವರಾಗದಿಂ ಪುಷ್ಪವರ್ಷಂ ||೭೬||

ಜಗದಾಧಾರಕದದಟಿಂ
ಧಿಗಿಲೆನೆ ಮೇಲೇಱಿ ತುೞಿದು ರಾಕ್ಷಸನಸುವಂ
ತೆಗೆದು ತೆಗೇದೆೞೆದು ಬೞಿಯಂ
ತೆಗೆದಂ ಶ್ರೀಕೋಷ್ಣನವನ ಮೇಗಣ ಮುಳಿಸಂ ||೭೭||

ಖಳನಂ ತುೞಿವೆಡೆಯೊಳ್ ಗೋ
ವಳರಾಯನ ತೊಡರ ಹಾಹೆ ತೊಡರ್ವೆರಸಂಘ್ರಿ
ಸ್ಥಳದಿನುರುಳ್ವಂತಿರೆ ನಿ
ರ್ಗಳಿತಾನ್ತ್ರನುರುಳ್ದು ಕಂಸನೆಸೆದಂ ಕಳದೊಳ್|| ೭೮|||

ವಚನ|| ಆ ಪ್ರಸ್ತಾವದೊಳ್

ಮ|| ಪವನವ್ಯೋಮವಸುಂಧರಾಸಲಿಲತೇಜೋಲೀಲೆ ಮೈವೆರ್ಚಲು
ತ್ಸವಮಾದತ್ತು ಸಮಸ್ತಭೂತಳದೊಳಾಗಳ್ ಭೂತಸರ್ವಸ್ವಮಂ
ಕವರ್ದಂಗೀಕರಿಸಿರ್ದ ಕಂಸನನುಜಂ ಪಂಚತ್ವಮಂ ಪೊರ್ದಲಿಂ
ತವು ತಂತಮ್ಮ ವಿಭಾಗಮಂ ಮಗುಳ್ ಕೈಕೊಂಡಿರ್ದುವೆಂಬನ್ನೆಗಂ ||೭೯||

ವಚನ|| ಆ ಮಹೋತ್ಸವದೊಳ್

ಮ|| ಶರವಿದ್ಯಾ ಬಲದಿಂದೆ ಕೊಂಡುಕೊನೆವಾ ಯುದ್ಧಂಗಳಂ ಮೆಚ್ಚೆನಾಂ
ಪಿರಿದುಂ ಮೆಚ್ಚುವೆನಿಂತುಟೊಂದು ನಿಮಿಷಂ ಧೀಂಕಿಟ್ಟು ಹರ್ಮ್ಯಾಗ್ರದಿಂ
ಧರೆಗಾರ್ದಿಕ್ಕಿ ವಿರೋಧಿಯಂ ಮಡಿಪಿದೊಂದಂ ಚೆಲ್ವನೆಂದಾಡಿದಂ
ಪರಮಾನಂದವಿನೋದದಿಂ ಸ್ಮಿತಹಟನ್ನಾರದಂ||೮೦||


ವಚನ|| ಅನ್ನೆಗಂ ಶತಮಖಪ್ರಮುಖನಿಖಿಲದೇವತಾಸಂತಾನವಂತರ್ಧಾನದೊಳ್
ನಿಂದು ದಾನವಾಂತಕನ ಮೊಗಮಂ ನೋಡಿ

ಮುಂ ದೈತ್ಯಕೋಪಹುತವಹ
ನಿಂದಂ ಕಾಯ್ದುರಿವ ಭುವನಮಂ ವಿಜಯಯಶ
ಶ್ಚಂದದರಸದಿಂದಂ ತೊಳೆ
ದಿಂದು ಮುರಧ್ವಂಸಿ ನೀಂ ಕುಳಿರ್ಕೋಡಿಸಿದೈ||೮೧||

ಕಮಲೋದ್ಭವ ವಾಗ್ವಿಲಸ
ತ್ಕ್ರಮಮಂ ಮೀಱಿದುದು ವೇದವೇದಾಂಗರಹ
ಸ್ಯಮನದಟಲೆದುದೆನಲ್ ಕಂ
ಸಮಥನ ಬಣ್ಣಿಸುವರಳವೆ ನಿನ್ನ ಮಹತ್ವಂ ||೮೩||

ವಚನ|| ಎಂದಮರಸಮುದಯಮಂ ಪುಷ್ಪದೊಳಂ ವಾಕ್ಪುಷ್ಪದೊಳಮರ್ಚಿಸಿ ಪೋಗೆ

ಉ|| ಆನತರಪ್ಪರಂಬುಜಭವಾದಿಗಳುಂ ತನಗೞ್ಕಱಿಂದೆ ತಾ
ನಾನತನಾರ್ಗಮಲ್ಲವಧಿಕರ್ ತನಗಿಲ್ಲದೆ ಪೆಂಪಿನಿಂದಮೆಂ
ಬಾ ನಳಿನಾಕ್ಷನಂದು ವಸುದೇವನ ದೇವಕಿಯಂಘ್ರಿಗಳ್ಗೆ ಬಂ
ದಾನತನಾದನಂದನುಚಿತಂ ಗುರುಸನ್ನತಿ ಮರ್ತ್ಯವೇಷದೊಳ್ ||೮೪||

ವಚನ|| ಆಗಳಾ ವಸುದೇವನುಂ ದೇವಕಿಯುಮತ್ಯಂತ ಸಂತೋಷಮನಪ್ಪುಕೆಯ್ದು

ಮ|| ಮನದೊಪಳ್ ತೆಕ್ಕನೆ ತೀವಿದೊಂದು ಪರಮಸ್ನೇಹಾಮೃತಂ ಕಣ್ಗಳಿಂ
ದೆನಸು ಪೊಣ್ಮಿದುದೆಂಬಿನಂ ಸುರಿವಿನಂ ಹರ್ಷಾಶ್ರು ಪಾದಾನತಾ
ಸ್ಯನನಿಂಬಿಂ ತೆಗೆದಪ್ಪಿಕೊಂಡೊಗೆದ ರೋಮಾಂಚಂಗಳೊತ್ತೊತ್ತಿನಿಂ
ತನುಗಳ್ ಪಿಂಗಿದುವೆಂಬಿನಂ ಕೆಲಕೆ ಸಾರ್ದಿಂತೆಂದರಾನಂದದಿಂ ||೮೫||

ಉದಯಿಸಿ ದಿವ್ಯಾಕೃತಿಯಿಂ
ಮೊದಲೊಳ್ ನೀನೆಮಗೆ ನುಡಿದ ತೆಱದಿಂದಡಿಗಿ
ಕ್ಕಿದೆ ಕಂಸನನೆಮ್ಮಂ ನೆಗ
ಪಿದೆ ಚಿಂತಾವಾರ್ಧಿಯೊಳಗೆ ಮುಳುಗಿರ್ದವರಂ ||೮೬||

ಪುಟ್ಟುವುದು ಜಗಂ ನಿನ್ನಿಂ
ಪುಟ್ಟುವೆ ನೀನಾವನಿಂ ಸ್ವಯಂಪ್ರಭು ಪಿರಿದುಂ
ಪುಟ್ಟುವೊಡಂಶಾಂಶದೆ ನೀಂ
ಪುಟ್ಟೆ ಜಗದ್ರಕ್ಷಣಕ್ಷಯಕ್ಷಮನಪ್ಪೈ ||೮೭||

ಉ|| ಕೇಳೆಲೆ ತಾತ ಕೇಳ್ ಜನನಿ ಕಂಸನ ಕಾರಣದಿಂದಗಲ್ದು ಗೋ
ಪಾಲಯವಾಸರಾದೆಮಗೆ ನಿಮ್ಮ ಪದಾರ್ಚನೆಗೆಯ್ಯದಿನ್ನೆಗಂ
ಕಾಲಮಿದಿಂತು ಪೋಯ್ತು ಪಿತೃಮಾತೃಗುರುದ್ವಿಜದೇವಪೂಜೆಯಿಂ
ಕಾಲಮಿದೆಯ್ದೆ ಸಲ್ಲದನ ಬಾೞ್ಕೆ ನಿರರ್ಥಕಮಲ್ತೆ ಲೋಕದೊಳ್ ||೯೩||

ಮ|| ಕೊನೆವುರ್ವಿಂ ನಸುಜರ್ವಿ ಪದ್ಮಭವಚಂದ್ರೇಂದ್ರಾರ್ಕಮುಖ್ಯಾಮೃತಾ
ಶನರ್ಗಂತಪ್ಪ ಪದಂಗಳಂ ಕುಡುವತರ್ಕೈಶ್ವರ್ಯನಾ ರಾಜ್ಯಮಂ
ಮನದೊಳ್ ಭಾವಿಸದುಗ್ರಸೇನನನೆ ಬಂಧೋನ್ಮುಕ್ತನಂ ಮಾಡಿ ತ
ತ್ತನಯಶ್ರೀಸ್ಥಿತನಾಗೆ ಮಾಡಲೊಸೆದಂ ಶ್ರೀದೇವಕೀನಂದನಂ ||೧೦೬||

ನವಮಾಶ್ವಾಸಂ

ಒಱಗಿರ್ದ ನಿದ್ರೆಯಿನೆ
ೞ್ಚರಿಸಿದರಂ ಕೋಪಶಿಖಿಯಿನುರುಪುವ ವರದಿಂ
ನೆಱೆದು ಕೃತಯುಗದೊಳಸುರರೊ
ಳಿಱಿದ ಪರಿಶ್ರಮದೆ ರಾಜಮುನಿ ಮುಚುಕುಂದಂ ||೪೫||

ವಚನ|| ಆ ನಿದ್ರಾಮುದ್ರಿತನೇತ್ರನೆೞ್ಚಱದಂತಚ್ಯುತಂ ಮೆಲ್ಲನೆ ಕೆಲಕೆ ಸಾರ್ದು
ನಿಲ್ವುದುಂ ಪ್ರಾಪ್ತಕಾಲಂ ಕಾಲಯವನಂ ಮುಟ್ಟೆವಂದು ಪಟ್ಟಿರ್ದ ಮುಚುಕುಂದನಂ
ಮುಕುಂದನಗೆತ್ತೊದೆಯೆ ತತ್ಪ್ರಬೋಧಿತನಾ ವಿರೋಧಿಯಂ ಕ್ರೋಧಹುತಾಶನಂಗಾಹುತಿ
ಮಾಡಿ ಮುಱಿದು ನೋಡಿ ಸಮಕ್ಷದೊಳ್ ನಿಂದ ಪುಂಡರೀಕಾಕ್ಷನಂ ಕಂಡು ನೀನಾರ್ಗೆಂದು
ಬೆಸಗೊಳೆ ಶಶಿವಂಶಜಾತನೆಂ ವಸುದೇವಪ್ರಸೂತನೆನೆಂದು ಪೇೞೆ

ಸ್ಮರಿಯಿಸಿದಂ ಮುಚುಕುಂದಂ
ಚಿರೋಕ್ತಮಂ ಮನದೊಳಿರ್ಪತೆಂಟನೆಯ ದ್ವಾ
ಪರದಂತ್ಯದಲ್ಲಿ ಧರೆಯೊಳ್
ಹರಿ ಪುಟ್ಟುಗುಮೆಂಬ ವೃದ್ಧವರ್ಗದ ನುಡಿಯಂ ||೪೬||

ವಚನ|| ಅಂತು ನೆನೆದು ತನುವಿನೊಳ್ ಹರ್ಷಪುಳಕಮಂ ನಯನದೊಳಾನಂದ
ಬಾಷ್ಪಜಲಮುಂ ನೆಗೆಯಲೊಗೆದನಿರ್ಭರಭಕ್ತಿಯಿಂ ಗೋವರ್ಧನೋದ್ಧಾರಂಗೆ ಬದ್ದಾಂಜಲಿ ಯಾಗಿ

ನೀಂ ಶರಧಿತಲ್ಪನೈ ಶಶಿ
ವಂಶದೊಳುದಯಿಸಿದೆ ಮರ್ತ್ಯಲೋಕಹಿತಾರ್ಥಂ
ಸಂಶಯಮಿಲ್ಲದು ನಿನ್ನಂ
ಶಾಂಶದ ತನುವೀ ಪ್ರಭಾವಮನ್ಯರ್ಗುಂಟೇ ||೪೮||

ವಿವಿಧತರವರ್ಣನಿರ್ಣೀ
ತವೆನಿಸಿ ಸಂಕಲ್ಪತೂಲಿಕಾಭಿತ್ತಿಯೊಳೀ
ಭುವನತ್ರಯಮಂ ಚಿತ್ರಿಸು
ವ ವಿರಿಂಚಿನ ವಿದ್ಯೆಗಧಿಪ ನೀಂ ಗುರುವಲ್ತೆ ||೪೯||

ಮ|| ಶತಪತ್ತ್ರಾಕ್ಷ ನಿಜಸ್ವರೂಪಮನದಾರುಂ ಬಲ್ಲರೇ ನೀಂ ಗುಣ
ವ್ಯತಿರಿಕ್ತಂ ವಿತನುತ್ವದಿಂ ಗುಣಯುತಂ ಬ್ರಹ್ಮಾದಿಸಾಂಗತ್ಯದಿಂ
ದತಿಸೂಕ್ಷ್ಮಂ ಪರಮಾತ್ಮರೂಪದಿನತಿಸ್ಥೂಲಂ ಜಗದ್ರೂಪದಿಂ
ಹೃತಕಾಲಂ ಧ್ರುವಭಾವದಿಂ ಸ್ವಗತಕಾಲಂ ನಶ್ವರವ್ಯಕ್ತಿಯಿಂ ||೫೦||

ಇವನೀಶಂ ಹರಿಯೆಂದು ಬೇರ್ಪಡಿಸಿ ನಿನ್ನಂ ಪೂರ್ವಸಂಸ್ಕಾರವಾ
ಸನೆಯಿಂದೆಂತುಟು ದೈವವೆಂಬರವರ್ಗಂತಂತಪ್ಪೆ ನೀನಾದೊಡೊ
ರ್ವನೆ ಭುವನೋದಯಸ್ಥಿತಿಲಯಂ ನೀಂ ದೇವ ಚೈತನ್ಯರೂ
ಪನಮೇಯಂ ಸದಸದ್ವಿಕಲ್ಪರಹಿತಂ ನಿತ್ಯಂ ಮುನಿಪ್ರತ್ಯಯಂ ||೫೧||

ಉ|| ವಾರಿಧಿ ತನ್ನಗಳ್ ತನಗೆ ರೈವತಶೈಲಮುಪಾಂತಶೈಲವಂ
ಭೋರುಹಲೋಚನಂ ತ್ರೀಭುವನಪ್ರಭು ತನ್ನಧಿನಾಥನೆಂದೊಡಿ
ನ್ನಾರಭಿವರ್ಣಿಸಲ್ ನೆಱೆವರೆಂಬಿನಮಿರ್ದುದುದಗ್ರಗೋಪುರಂ
ದ್ವಾರಾವತೀಪುರಂ ಜಿತಸುರೇಂದ್ರಪುರಂ ವಸುಧಾಂಘ್ರಿನೂಪುರಂ ||೮೫||

ವಚನ||ಆ ಪುರದ ಪೊಱವೊೞಲೊಳ್

ಮ|| ಬಳಸಿರ್ದದ್ರಿಯ ಕಲ್ಗಳೆಲ್ಲಮವು ಪೊನ್ನುಂ ರನ್ನಮುಂ ಪೂಗೊಳಂ
ಗಳ ನೀರೆಲ್ಲಮನೇಕಸಿದ್ಧರಸಮುಂ ಪೀಯೂಷಮುಂ ಕೆಯ್ವೊಲಂ
ಗಳ ಸಸ್ಯಾವಳಿಯೆಲ್ಲಮೊಳ್ಗೞವೆಯುಂ ಪುಂಡ್ರೇಕ್ಷುವುಂ ನಂದನಂ
ಗಳ ಧಾತ್ರೀರುಹಜಾತಮೆಲ್ಲಮಮರೋರ್ವೀಜಾತಮುಂ ಚೂತಮುಂ ||೮೬||

ಚಂ|| ನೆಗೞೆ ಕಳಸ್ವನಂ ಕಳಮದಿಂ ಕಳಮಕ್ಕೆ ವನಾಳಿಯಿಂ ವನಾ
ಳಿಗೆ ಕೊಳದಿಂ ಕೊಳಕ್ಕೆ ಕೃತಕಾಚಲದಿಂ ಕೃತಕಾಚಲಕ್ಕೆ ಪಿಂ
ಡಗಲದೆ ಪಾಱುತಿರ್ಪುವಿದಿರುಂ ಬೞಿಯುಂ ಶುಕಭೃಂಗಹಂಸಕೇ
ಕಿಗಳನುರಕ್ತಪಾಂಥಜನದಳ್ಳೆರ್ದೆ ಪವ್ವನೆ ಪಾಱುತಿರ್ಪಿನಂ ||೮೭||

ಮ|| ನಳಿನೀತೀರಲತಾಗೃಹಂಗಳ ನೆೞಲ್ ನೇರ್ಪಟ್ಟಿರಲ್ ಪಟ್ಟು ಕಾ
ಲ್ಗಳನಿಂಬಿಂ ಪರಿಕಾಲೊಳಿಟ್ಟತಿಮುದಂ ಕೈಸಾರೆ ಕೈಸಾರೆಯೊಳ್
ಬಳೆದಿಮ್ಮಾವಿನ ಬಾಳೆಯೀಳೆಗಳ ಪಣ್ಣಂ ಪಣ್ಣನೋರೊರ್ಮೆ ಮೆ
ಲ್ದೆಳನೀರೀಂಟಿ ಪಥಾರ್ತರಿರ್ಪರಳಿಕೀರಧ್ವಾನದುದ್ಯಾನದೊಳ್ ||೮೮||

ಶರ್ವಾಣೀಶಗೃಹಕ್ಕೆ ಸು
ಪರ್ವೇಂದ್ರಗೃಹಕ್ಕೆ ಮೆಱೆಯದಾತ್ಮೀಯಕಳಾ
ಸರ್ವಜ್ಞತೆಯಂ ಮೆಱೆದಂ
ಗಗೀರ್ವಾಣಸ್ಥಪತಿ ನಿಮ್ಮ ಗೃಹವಿರಚನೆಯಿಂ ||೧೩೧||

ಮ||ಸ್ರ|| ಗರುಡಂ ಪೇೞ್ದಂದದಿಂದೊಪ್ಪುವ ನಿಜಪುರಮಂ ಕೂಡೆನೋಡುತ್ತುಮೆತ್ತಂ
ತರಳಾಪಾಂಗಾಂಶುಜಾಳಂ ದ್ವಿಗುಣಿಸೆ ನಗರಸ್ತ್ರೀಜನಂ ಸೂಸುವಾಪಾಂ
ಡುರಶೇಷಾನೀಕಮಂ ಕೈಕೊಳುತುಮತುಳಗೀತಾನಕಧ್ವಾನಮುಣ್ಮು
ತ್ತಿರೆ ಪೊಕ್ಕಂ ವಾಸವಾವಾಸವನಿೞಿಪ ನಿಜಾವಾಸವಂ ವಾಸುದೇವಂ ||೧೩೪||

ನೆನಕೆ.
ಸಂಪಾದಕ,
ಡಾ. ಆರ್. ಶಾಮಾಶಾಸ್ತ್ರಿ
ಕನ್ನಡ ಅಧ್ಯನ ಸಂಸ್ಥೆ
ಮೈಸೂರು ವಿಶ್ವವಿದ್ಯಾನಿಲಯ
೧೯೭೬

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ