ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಭಾನುವಾರ, ಜೂನ್ 2, 2019

ಮಲ್ಲಕವಿ ಸಂಯೋಜಿತಂ ಕಾವ್ಯಸಾರಂ

ಮಲ್ಲಕವಿ ಸಂಯೋಜಿತಂ,
ಕಾವ್ಯಸಾರಂ.

“ಕಾವ್ಯಸಾರವು “ಕಾವ್ಯಾಂಗಗಳಾದ ಅಷ್ಟಾದಶ ವರ್ಣನೆ ಗಳನ್ನು ಕುರಿತ ಒಂದು ಸಂಕಲನ ಗ್ರಂಥ. ಇದನ್ನು ರಚಿಸಿದವನು ಮಲ್ಲಕವಿ. ಇದು ಆಶ್ವಾಂತೂಯದಲ್ಲಿ ಬರುವ “ ಇದು ಸರಸ್ವತೇಸರ್ವಾಂಜ ದರ್ಪಣಾಯಮಾನ ಪ್ರತಿಭಾ ಸನೂತನ ಪುರಾತನ ಪ್ರಮಾಣಸುಕವಿಪುಂಗವಮಲ್ಲನಿರಮಿತ ಕಾವ್ಯಸಾರ ಮಹಾಪ್ರಬಂಧದೊಳ್ “ ಎಂಬ ವಚನ ಭಾಗದಿಂದ ಮಾತ್ರ ಸೂಚಿತವಾಗಿದೆ. ಇದು ಬಿಟ್ಟರೆ” ಕಾವ್ಯಸಾರವು” ಯಾರಿಂದ ರಚಿತವಾಯಿತೆಂದು ಹೇಳುವುದಕ್ಕೆ ಕಾವ್ಯದ ಶರೀರದಲ್ಲಿ ಮತ್ತೆಲ್ಲಿಯೂ ಯಾವ ಆಧಾರವೂ ಇಲ್ಲ.

ಕೃತಿಕಾರನೇ ಸ್ಪಷ್ಟವಾಗಿ ನಿರ್ದಿಷ್ಟವಿಲ್ಲದಿರುವಾಗ ಅವನ ಕಾಲ, ದೇಶ, ಗೋತ್ರಗಳ ವಿಷಯವಾಗಿ ವಿಚಾರಮಾಡಲು ಅವಕಾಶವೇ ಇಲ್ಲ. ಆಕರಗಳ ದೃಷ್ಟಿಯಿಂದ ಸಂಕಲನದ ಆದ್ಯಂತಮಿತಿಯನ್ನು ಸೂಚಿಸಬಹುದು. ಒಂದನೆಯ ಗುಣವರ್ಮನ “ ಶೂದ್ರಕ” ದಿಂದ ಅಭಿನವವಾದಿ ವಿದ್ಯಾನಂದನ “ ಕಾವ್ಯಸಾರದ” ವರೆಗಿನ ಕೃತಿಗಳಿಂದ ಪದ್ಯಗಳು ಅನುವಾದವಾಗಿರುವುದರಿಂದ ಈ ಗ್ರಂಥದ ವ್ಯಾಪ್ತಿ ೧೦ನೆಯ ಶತಮಾನದಿಂದ ೧೬ನೆಯ ಶತಮಾನದವರೆಗೆಂದು ಊಹಿಸಬಹುದು.

ಪೀಠಿಕಾ ಪ್ರಕರಣದಿಂದಲೂ ಕವಿಯ ವಿಷಯವೇನೂ ತಿಳಿಯುವಂತಿಲ್ಲ. ಮೊದಲನೆಯ ನಾಂದಿ ಪದ್ಯ ಆದಿಪರಮೇಶ್ವರನ ವಿಷಯಕವಾದುದು. ಇದರ ಆಧಾರದ ಮೇಲೆಯೆ ಪಂಡಿತರು ಮೂಲಸಂಕಲನಕಾರನಾದ ಮಲ್ಲಿಕಾರ್ಜುನನು ಜೈನನಿರಬಹುದೆಂದು ಊಹಿಸಿದುದು. ಪೀಠಿಕಾ ಪ್ರಕರಣದ

ವಾರಿಧಿ ಪರ್ವತಂ ಪುರನರೇಶ್ವರರುದ್ವಹನಂ ಕುಮಾರರಂ
ಭೋರುಹವೈರಿಮಿತ್ರರುದಯಂ ಋತುನಂದನವಂಬು ಸೀಧು ಕಾಂ
ತಾರತಿ ಮಂತ್ರ ಚಿಂತೆ ಚರಯಾನ ವಿರೋಧಿಜಯಂಗಳೆಂಬಿವಂ
ಸೂರಿಗಳಂಗಮೆಂದು ಕೃತಿಯೊಳ್ ಪದಿನೆಂಟುಮನೆಯ್ದೆ ಬಣ್ಣಿಪರ್

ಎಂಬ ಪದ್ಯದಲ್ಲಿ ವರ್ಣಿತವಾಗಿರುವ ೧೮ ಅಂಗಗಳಲ್ಲಿ ಕೊನೆಯ ಯುದ್ಧ ( ವಿರೋಧಿಜಯ)ವಿಷಯವನ್ನುಳಿದು ೧೭ ಅಂಗಗಳು “ಸೂಕ್ತಿಸುಧಾರ್ಣವ” ದಲ್ಲಿ ವರ್ಣಿತವಾಗಿವೆ. ಕಾವ್ಯಸಾರವಾದರೋ ೧೪ ನೆಯ ವರ್ಣನೆಯಾದ ವಿಪ್ರಲಂಬದಲ್ಲಿ ಕೊನೆಗೊಂಡು ಉಳಿದ ಮಂತ್ರ, ದೂತ, ಯಾನ, ವಿರೋಧಿಜಯಗಳೆಂಬ ನಾಲ್ಕು ಅಂಗಗಳಿಂದ
ಲುಪ್ತವಾಗಿದೆ.

ಈ” ಕಾವ್ಯಸಾರ “ಕ್ಕೆ ಸೂಕ್ತಿಸುಧಾರ್ಣವವೇ ಆಕರವಾಗಿದ್ದರೂ ಈ ಎರಡಕ್ಕೂ ಸಮವಾದಿಯಾದ ಪದ್ಯಗಳು ಸುಮಾರು ೭೩೦. ಸೂಕ್ತಿಸುಧಾರ್ಣವದ ೧೮ ಆಶ್ವಾಸಗಳ ಪದ್ಯಸಂಖ್ಯೆ ೨೨೦೦. ಕಾವ್ಯಸಾರದಲ್ಲಿ ೧೫ ಆಶ್ವಾಸಗಳಿಗೆ ಸಮನಾದ ಪದ್ಯ ಸಂಖ್ಯೆ ೨೦೦೦. ಅಲ್ಲಿ ಆಕರ ಸಿಕ್ಕಿರುವುದು ಸುಮಾರು ೧೦೦೦ ಪದ್ಯಗಳಿಗೆ ಮಾತ್ರ. ಕಾವ್ಯಸಾರದಲ್ಲಿ ೧೫ ಅಂಗಗಳ ಒಟ್ಟು ಪದ್ಯ ಸಂಖ್ಯೆ ೩೫೫೫. ಅವುಗಳಲ್ಲಿ ಆಕರ ಸಿಕ್ಕಿರುವುದು ಸುಮಾರು ೧೫೦೦, ಪದ್ಯಗಳಿಗೆ ಮಾತ್ರ. ಉಳಿದ ಸುಮಾರು ೨೦೦೦ ಪದ್ಯಗಳಿಗೆ ಆಕರವೇ ಸಿಕ್ಕಿಲ್ಲ. ಈ ಸಂಖ್ಯೆಯೇ “ಕಾವ್ಯಸಾರದ “ ಮಹತ್ವವನ್ನುಸೂಚಿಸುತ್ತದೆ . ಆಕರ ಸಿಕ್ಕಿರುವ ೧೫೦೦ ಪದ್ಯಗಳು ಸುಮಾರು ೩೦ ಗ್ರಂಥಗಳಿಂದ ಆಯ್ದುಕೊಂಡುವಾದುದರಿಂದ ಆಕರಸಿಕ್ಕದ ಉಳಿದ ೨೦೦೦ ಪದ್ಯಗಳು ಅಷ್ಟೇ ಸಂಖ್ಯೆಯ ಗ್ರಂಥಗಳಿಂದಲಾದರೂ ಆರಿಸಿಕೊಂಡಿರಬೇಕು. ಅಂದಮೇಲೆ ಕನ್ನಡ ಸಾಹಿತ್ಯದಲ್ಲಿ  ಅಷ್ಟು
ಗ್ರಂಥಗಳಾದರೂ ನಷ್ಟವಾಗಿರಬೇಕು.

೧) ಪೀಠಿಕಾ ಪ್ರಕರಣಂ

ಶ್ರೀ ದಿವಿಜೇಂದ್ರವಂದಿತಪದಾಂಬುಜನಾನತಹೃತ್ಪಯೋಜಮಿ
ತ್ರೋದಯನತ್ಯನೂನ ಸಕಲಾಗಮಶಾಸ್ತ್ರವಿರಾಜತೇಜಬೋ
ಧೋದಯನುನ್ನತೋನ್ನತದಯಾರತಧರ್ಮಸುಧಾಬ್ಧಿಪೂರ್ಣಚಂ
ದ್ರೋದಯನಾದನಾದಿಪರಮೇಶ್ವರನೀಗೆಮಗಿಷ್ಟಸಿದ್ಧಿಯಂ||೧||

ಸುರಿವ ಮದಕ್ಕೆ ಸುತ್ತಿ ಸೞಿವಾಱಡಿವಿಂಡು ನವಾಭ್ರದಂತೆ ಕೇ
ಕರರುಚಿ ಮಿಂಚಿನಂತೆ ಮಕುಟಾಂಕಿತ ರತ್ನಮಯೂಖಲೇಖೆ ನಿ
ರ್ಜರ(ವರ) ಚಾಪದಂತೆ ಕರಸೀಕರಮುಣ್ಮುವ ವರ್ಷದಂತೆ ತೋ
ಱಿರೆ ಮೞೆಗಾಲದಂತೆಸೆವ ಸಿದ್ಧಿವಿನಾಯಕನೀಗೆ ಮನೋನುರಾಗಮಂ||೮||

ವಾಣಿ ಜಗತ್ಪತಾಮಹನರಾಣಿಯತೀವಸುಖಪ್ರದೈಕ ಕ
ಲ್ಯಾಣಿ ಸುನೀಲರತ್ನನಿಭವೇಣಿ ಪದದ್ವಿತಯಾಬ್ಜನಮ್ರಗೀ
ರ್ವಾಣಿ ವಿಕರ್ಮವಲ್ಲರಿಕೃಪಾಣಿ ದಯಾಂಚಿತಗೌಣಿ ಗೌರವ
ಶ್ರೇಣಿ ಸರೋಜಪಾಣಿ ದಯೆಯಿಂದೆಮಗೀಗೆ ವಚೋವಿಲಾಸಮಂ ||೯||

ಚಾಡಿಯನೆ ಕೇಳ್ದು ಕಿವಿಯೊಳ್
ಮೂಡುವುದಂತದು ಕಪಾಲದೊಳ್ ಕುಱುಹಕಟಾ
ಕೂಡಿ ಭೂಪಾಲರೌಷಧಿ
ಮಾಡುವುದೊಂದುಂಟು ಖಳರ ಜಿಹ್ವಾಮೂಲಂ ೨೦||

ಪುಣ್ಯಮೆ ಪೂರ್ವಪಾಪತತಿಯಿಂ ಪೊಡೆದಿಕ್ಕುವುದೆಂಬ ಮಾತದೇಂ
ಗಣ್ಯಮೆ ಸೂರ್ಯನಿಂದೆ ತಮವೋಡದೆ ಲೋಕದೊಳಂತದಾಗಿಯುಂ
ಪುಣ್ಯಮನೊಂದನೇ ಗಳಿಸೆ ಮುಂದೆ ಸುಜನ್ಮವನಾಳ್ವನೀಗಲಾ
ರಣ್ಯದೊಳಿರ್ದೊಡಂ ಸುಖಮನೀವುದು ಮಾೞ್ಕೆ ವರೇಣ್ಯಪುಣ್ಯಮಂ||೪೪||

ಸೊಗಯಿಸುವ ಕಬ್ಬಮಂ ಕ
ಬ್ಬಿಗರಲ್ಲದೆ ಮೆಚ್ಚರುೞಿದರೇನಱಿವರೆ ತುಂ
ಬಿಗಳಲ್ಲದೆ ಪೂಗಳ ಮಗ
ಮಗಿಸುವ ಕಂಪಂ ಕಡಂದುಱೇನಱಿದಪುದೇ೬೯||

ಸಲ್ಲದ ಗುಣಮಂ ಪೆಱರೊಳ್
ಸಲ್ಲಿಸುವರ್ ತಮ್ಮೊಳುಳ್ಳ ಗುಣಗಣಮಂ ತಾ
ವಿಲ್ಲೆಂದು ಪುಸಿವ ಪುಸಿಕ
ರ್ಗೆಲ್ಲಿಂದಂ ಬಂದುದಮಮಸುಜನತೆ ಚಿತ್ರಂ ||೮೦||‌

ರಸಮಂ ಕಟ್ಟುವರೊಲ್ದು ಕಟ್ಟೆಯಿಡದತ್ಯರ್ಥೌಘಮಂ ತೀವುವರ್
ಮಿಸುಪೊಂದಾಲಯಮಿಲ್ಲದಪ್ರತಿಮ ಚಿತ್ರವ್ರಾತಮಂ ತೋಱುವರ್
ನಸುಕೇರಿಲ್ಲದೆ ದೇಹಮಿಲ್ಲದಸುವಂ ತಂದಿಟ್ಟು ಕೊಂಡಾಡುವರ್
ವೊಸ ಕಬ್ಬಂಗಳೊಳಾ ಕವೀಶ್ವರರದೇನಂ ಮಾಡಲುಂ ತೀರದೇ ||೧೦೧||,

೨ ) ಸಮುದ್ರ ವರ್ಣನಂ.

ನೆಲೆಯಂ ನೋಡಲಸಾಧ್ಯಮಾದ ಗುಣಮಂ ತಾಳ್ದಿರ್ದು ಸಂತೋಷದಿಂ
ಕುಲಮಂ ನೋಡಲು ಕಾಣಲೀಯದ ಮಹಾಗಾಂಭೀರ್ಯದೈಶ್ವರ್ಯದಿಂ
ಬಲದಿಂದಗ್ನಿಯನಾವಗಂ ಧರಿಸಿಯಿಪ್ಪಾನಂದದಿಂದೀಶನಂ
ಸಲೆ ನಾಂ ಪೋಲುವೆನೆಂಬುದೊಂದುಪಮೆಯಿಂದೊಪ್ಪಿತ್ತು ನೀರಾಕಾರಂ ||೨||

ವನಮಾಲಾಪರಿಶೋಭೆಯಿಂದನಿಮಿಷಾದ್ಯುತ್ಪತ್ತಿಯಿಂ ಶಂಖ ಚ
ಕ್ರನವೀನೋಜ್ವಲದಿಂದನಂತಮಹಿಮೋದಾರತ್ವದಿಂ ಶ್ರೀನಿವೇ
ಶನದಿಂ ಗೋತ್ರಸುಖಾದಿದಾನದೊದವಿಂ ಮುಕ್ತಾದಿಜನ್ಮಪ್ರಕೀ
ರ್ತನದಿಂ ವಾರಿಧಿ ವಾರಿಜಾಕ್ಷನವೊಲೇಂ ಚೆಲ್ವಾಯ್ತು ಭೂಭಾಗದೊಳ್ ||೩||

ಗಿರಿಶಂಗೊಲ್ದು ವಿಭೂಷಣಕ್ಕೆ ಶಶಿಯಂ ದೈತ್ಯಾರಿಗಂ ಪ್ರೇಮದಿಂ
ಸಿರಿಯಂ ಕೌಸ್ತುಭಮಂ ಸುರರ್ಗೆ ಸುಧೆಯಂ ದೇವೇಂದ್ರಗೈಶ್ವರ್ಯಮಂ
ಹರುಷಂ ಕೈಮಿಗಿಲಿತ್ತದೊಂದು ಘನದಿಂ ಮತ್ತಂ ಧರಾಚಕ್ರದೊಂ
ದಿರವು ತನ್ನೊಳಗೆಂಬ ತೇಜದೊದವಿಂದೊಪ್ಪಿತ್ತು ರತ್ನಾಕರಂ ||೬||

ಹರಿ ತನ್ನಳಿಯಂ ತಾನಾ
ಹರಿಯಾಣ್ಮಂ ತನ್ನೊಳೊಲ್ದು ಹರಿಯಿರ್ಪಂ ತಾಂ
ಹರಿಯೊಳಗಿರ್ಪೆನೆನಲ್ ಸಾ
ಗರದಾಧಿಕ್ಯವನದಾವನಭಿವರ್ಣಣಿಸುವಂ ||೩೧||

ಮೀಂಗಳ್ ಶತಯೋಜನದಗ
ಲಂಗವಳಂ ಪೆಱವು ಬಂದು ನುಂಗುವುವುಮವಂ
ನುಂಗುವವಂ ನುಂಗುವುದಂ
ನುಂಗುವವೊಲಬ್ಧಿಯೊಳ್ ಮಹಾಮತ್ಸ್ಯಂಗಳ್|| ೩೩||

ಶರಧಿಯ ಗುಣಮಂ ಪೇೞ್ವರಿ
ಗರಿದೆಂತನಲದುವೆ ಮುನ್ನಭಯದಿಂ ದಾಮೋ
ದರನುಂ ಗಿರಿಗಳ್ ಮಱೆಯುಗೆ
ಸುರರಾಸುರ ಭಯವ ಬಿಡಿಸಿತಂದು ಸಮುದ್ರಂ ||೩೮||

೩) ಪರ್ವತ ವರ್ಣನಂ.

ಸುರನಿಕರಂ ಪುಳಿಂದರಮರಾಂಗನೆಯರ್ ಶಬರಿಯರ್ ದಿಶಾ
ಕರಿ ಮೃಗರಾಜ ಸಿದ್ಧರಸಮೊಜ್ಜರಮೊಪ್ಪುವ ಹೇಮಕಾಂತ ಭಾ
ಸುರದವವಹ್ನಿ ರತ್ನನಿಚಯಂ ತಿಱಿಕಲ್ಲೆನೆ ಪದ್ಮಜಂ ಧರಾ
ತರುಣಿಗೆ ರಂಜಿಸಿಟ್ಟ ಕೃತಕಾದ್ರಿಯೊಲೊಪ್ಪಿತು ಮೇರುಪರ್ವತಂ ||೫||

ನಳನಳಿಸುತ್ತ ಸುತ್ತಿಡಿದು ತೋರ್ಪ ಕದಂಬಕದಂಬದಿಂ ಚಳ
ಜ್ಜಳಜಮನೊತ್ತರಿಪ್ಪ ಘನದೀರ್ಘಸಕೋಮಳ ವಂಶವಂಶದಿಂ
ಬಳಸಿದುವೆತ್ತಲು ತುಱುಗಿ ಪರ್ವಿದಗುರ್ವಿನಬಿಂಬಬಿಂಬದಿಂ
ದಿಳೆಯೊಳಗೊಪ್ಪುತಿರ್ಪುದು ಹಿಮಾಚಲವಾಶ್ರಿತಗೋತ್ರಗೋತ್ರದಿಂ ||೮||

ಇಭಸಂಘಾಲಿಸಿಕಪ್ರತಿಧ್ವನಿ ಗುಹಾರಮ್ಯಮಂ ಜರತ್ತಾಪಸಂ
ಕ್ಷುಭಿತ ಕ್ರೂರಮೃಗಪ್ರಕೀರ್ಣಕಟಕಂ ನಿತ್ಯಂಧಕಾರಂ ಮಣಿ
ಪ್ರಭವಸಾಥಾನನಿಕುಂಜವೆನ್ನಿದರೊಳೆಂದೊಪ್ಪಿರ್ದುದೌನ್ನತ್ಯದಿಂ
ನಭಮಂ ಚುಂಬಿಸುತಿರ್ಪೊಂದು ಕುಧರಂ ಭೂಪಾಲವಿದ್ಯಾಧರಾ||೧೪||

ಗಿರಿಯೊಂದಂತರದಲ್ಲಿಯ
ತರುವಿನ ನಡುವಣ್ಗೆ ನಡೆದ ಶಾಖಾಗ್ರದ ಕೆಳ
ಗಿರೆ ಧ್ರುವನರಮನೆಯೆನೆ ಹ
ಸರಳಿಸಿದಾ ಗಿರಿಯ ತುದಿಯನಾವಂ ಬಲ್ಲಂ ||೩೭||

ಬಿಡದೆಸೆಪಲರಿಂದಂ ಪೊಣ್ಮುತಿರ್ಪಚ್ಚಗಂಪಂ
ಬಿಡದಲರ್ಗಳ ಜೊಂಪಂ ಜೋಲ್ದು ಚೆಲ್ವಾಗೆ ಬಿಣ್ಪಂ
ಬಿಡದ ಮರಗಳಿಂದಂ ಬೆಳ್ಳಿವೆಟ್ಟಕ್ಕೆ ನಿಚ್ಚಂ
ಪಡಿವೆನಿಸುವುವೆತ್ತಂ ರಂಗುಗಲ್ಲೆಂಬ ಬೆಟ್ಟಂ ||೪೩||

೩)  ಅ : ಋಷ್ಯಾಶ್ರಮವರ್ಣನಂ.

ಕರೆವಂತಾಡುವ ಪಲ್ಲವಪ್ರಕರದಿಂ ಮಂದಾನಿಲಂ ಸೋಂಕೆ ಬೀ
ೞ್ವರಲಿಂದರ್ಚಿಸುವಂತೆ ಕೋಕಿಲರವಪ್ರಧ್ವಾನದಿಂ ಸ್ವಾಗತ
ಸ್ವರಮಂ ಬಿತ್ತರಿಪಂತೆ ತೋಱಿ ಮೆಱೆಯುತ್ತಿರ್ದಪ್ಪುವಲ್ಲಿರ್ದ ಮಾ
ಮರನುಂ ಪೊರ್ದಿದ ಮಾನಸರ್ಗೆ ನಿಜದಿಂದಾತಿಥ್ಯಸತ್ಕಾರಮಂ ||೫೧||

ಶ್ರುತಿಮಾರ್ಗಶ್ರವಣಂ ಪುರಾಣಕಥನಂ ಷಟ್ಕರ್ಮಸಂಭಾಷಣಂ
ಶ್ರುತಿಚೇತೋವ್ಯಸನಂ ಸಮಸ್ತಪರುಷವ್ಯಾಕೀರ್ಣಮುಂ ಪೆಂಪುವೆ
ತ್ತಿತಿಹಾಸಂ ಸ್ರೃತಿವಿಸ್ಮಯಂ ಸಕಲಧರ್ಮಾಧರ್ಮನೈರೂಪಣ
ಸ್ಥಿತಿವೈಶೇಷಿಕದಿಂದದೇಂ ಮೆಱೆದುದೋ ಚೆಲ್ವಾಗೆ ಋಷ್ಯಾಶ್ರಮಂ ||೬೪||

೩) ಆ: ಅರಣ್ಯವರ್ಣನಂ.

ಹರಿಯಂತಿಂದುವಿನಂತೆ ಕೃಷ್ಣಮೃಗಸಂಶ್ಲೇಷಂ ಸುರಾವಾಸದಂ
ತುರಗಾಧೀಶ್ವರನಂತೆ ಕೌಶಿಕವಿಭೋಗಂ ಕಾಮನಂತಬ್ಧಿಯಂ
ತಿರೆ ಚಂಚದ್ಯುತಿಸಂಯುತಾನಿಮಿಷವೃಂದಂ ವ್ಯೋಮದಂತಬ್ಜವಿ
ಷ್ಟರನಂತುಜ್ವಳರಾಜಹಂಸವಿಭವಂ ರೌದ್ರಾನನಂ ಕಾನನಂ||೧೨೩||

ಪರಶಿವಗೇಣನೊಂದುರೆ ನಿಶಾಪತಿಗೊಂದೆ ಸುರಾಧಿನಾಥಗಂ
ಕರಿಯಿಹುದೊಂದೆ ಕಾಲನಿಗೆ ಕಾಸರಮೊಂದೆ ಕುಮಾರಗೆಂತುಮೊ
ಪ್ಪಿರೆ ಶಿಖಿಯೊಂದದೈಸೆಯೆನಗಾ ಹರಿಣಂ ಕರಿ ಕಾಸರಂಗಳುಂ
ಬರುಹಿಯುಲೆಕ್ಕಮಿಲ್ಲಮೆನಗಾರ್ ಸರಿಯೆಂದೆಸೆದತ್ತು ಕಾನನಂ ||೧೨೮||

೩) ಇ : ಗಜವರ್ಣನಂ.

ಕೊಳದೊಳಗೊಂದಿ ಮಿಂದು ಬಸವೂವುಡಿಯಂ ತೆಗೆದೊಟ್ಟಿಕೊಂಡು ತ
ನ್ನಳಿನದುಕೂಲನಾಂತು ನೆೞಲಾದೆಡೆಯಲ್ಲಿ ಮಲಂಗಿ ಮೆಲ್ಲನು
ರ್ಬುಳಿಸಿದ ನಲ್ಮೆಯಿಂದೆ ಪಿಡಿಯಂ ಪಿಡಿದಲ್ಲಿಯೆ ಕೂಡಿ ನಿಚ್ಚಲುಂ
ಸುಳಿವಳಿಗಳ್ಗೆ ದಾನಮಯಮಾಗಿರುತಿರ್ದುದದೊಂದನೇಕಪಂ ||೧೫೭||

೩) ಈ : ಸಿಂಹವರ್ಣನಂ.

ಕರದ ನಖಂಗಳಿಂದುಗಿದು ಕೋಪದಿ ಸೀಳ್ದು ಸಿಱುಂಬುಳಾಡಿ ಕುಂ
ಕುಂಜರಗುರುಕುಂಭಮಂಡಲದಿನಲ್ಲುಗುತಂದು ತುಳುಂಕಿಕೊಂಡು ನೆ
ತ್ತರ ಪೊಸಲಜ್ಜೆಯೊಳ್ ಕೆದಱಿ ಕಂಗೆಸೆದಿರ್ದುದು ರಕ್ತಸಿಕ್ತ ಕೇ
ಸರಮೆಸೆದತ್ತು ಕೇಸರಿಯ ಬೀರದ ಬಿತ್ತುಗಳಂತೆ ಮುತ್ತುಗಳ್ ||೧೬೨||

೩) ಉ : ಪಂದಿಯ ವರ್ಣನಂ.

ಉರಿ ತೀಡುತ್ತಿರ್ಪ ಕಣ್ಣಿಂದೆಳೆವೆಱೆಯೊಗೆದಂತಿರ್ಪ ಕೋರ್ದಾಡೆ ಮೆಯ್ವೆ
ತ್ತಿರೆ ಸಂಧ್ಯಾಕಾಲದಾಕಾರಮನನುಕರಿಸುತ್ತಿರ್ಪ ತನ್ನೊಂದು ಕಾಯಂ
ದರಿಯಂ ಕೋಡೆತ್ತಿ ಕೋಡೊಳ್ ತೊಡರ್ದು ಬಿಡದೆ ಸೊಕ್ಕಿರ್ದ ಬೆನ್ನಿಂ ದಿಟಂ ದಿ
ಕ್ಕರಿ ಕೈಬಿಟ್ಟಿರ್ದುದೆಂಬಂತೆಸೆದುದಡವಿಯೊಳ್ ದೀರ್ಘದೇಹಂ ವರಾಹಂ||೧೬೫||

೩) ಊ : ಭೇರುಂಡವರ್ಣನಂ.

ಮರದಿಂದಾ ಸರ್ಪನಂ ಹಸ್ತಿಯೆ ಪಿಡುಗುಂ ಹಸ್ತಿಯಂ ಸರ್ಪನಂ ಕೇ
ಸರಿ ಕೋಪಾಟೋಪದಿಂ ಪಾಯ್ದಿರದೆ ಪಿಡುಗುಮಾ ಹಸ್ತಿಯಂ ಸರ್ಪನಂ ಕೇ
ಸರಿಯಂ ಸಿಂಹಾರಿಯೆಂಟುಂ ಪದದಲಿಱಿಗುಮಾ ಹಸ್ತಿಯಂಸರ್ಪನಂ ಕೇ
ಸರಿಯಂ ಸಿಂಹಾರಿಯಂ ಪಕ್ಕದೊಳಿಱುಕಿಯೆ ಪಾಱಿತ್ತು ಭೇರುಂಡಮಾಗಳ್ ||೧೬೬||

೩) ಋ : ಪುಲಿಯ ವರ್ಣನಂ.

ಪುಲ್ಲೆಯ ಹಿಂಡನೊಂದು ಪುಲಿ ಕುತ್ತಱೊಳೊಯ್ಯನೆಕಂಡು ಹಜ್ಜೆಯಂ
ಮೆಲ್ಲನೆ ಮೆಟ್ಟಿ ಹುಲ್ಲೊಳೆ ಹುದುಂಗಿ ಹುದುಂಗಿಯವಕ್ಕೆ ಲಂಘಿಸು
ತ್ತಲ್ಲಣದಿಂ ಕುನುಂಗಿ ನೆಱೆ ನಿಟ್ಟಿಸಿ ನೀಳ್ದ ಕೊರಳ್ಗೆ ಪಾಯ್ದು ತ
ಳ್ತುಳ್ಳೆದೆನೆತ್ತರಂ ಪದೆದು ಪೀರ್ದೆಳೆದಿಕ್ಕಿದುದಿಕ್ಕೆದಾಣದೊಳ್ ||೧೭೦||

೩)  ಎ : ಶಬರರ ವರ್ಣನಂ

ಉಡೆದೊವಲುಟ್ಟು ಕಾಳಿಕೆಯ ಕುಪ್ಪಸವಿಟ್ಟು ಪದಂಗಳಲ್ಲಿ ಮೆ
ಲ್ಲಡಿಗಳ ಸಾರ್ಚಿಕೊಂಡು ಹದವಿಲ್ಲು ಸರಳ್ಗಳನುಗ್ರನಾಯ್ಗಳಂ
ಬಡಿಗೆಯ ಕೋಲ್ಗಳಂ ಬಲೆಯ ದೀಹದ ಹಕ್ಕಿಯ ಕೂರಿತಿಟ್ಟಿಯಂ
ಪಿಡಿದುಮರಣ್ಯದೊಳ್ ಚರಿಸುತ್ತಿರ್ದನದೊರ್ವ ಪುಳಿದನಾಯಕಂ ||೨೦೨||

೩) ಏ : ಶಬರೀವರ್ಣನಂ.

ಬೆತ್ತದ ಕಂಕಣಂ ಬಳಹದೋಲೆ ಕುರುಳ್ಗಳವಟ್ಟ ಕಾಡಪೂ
ಕತ್ತರಿವೀಲಿಯುಳ್ಳಡೆ ವನೇಭಜಮೌಕ್ತಿಕಹಾರಯಷ್ಟಿ ಬೆಂ
ಗೊತ್ತಿದ ಬಿಲ್ಸರಳ್ ಗದಗದಿಪ್ಪ ಕುಚಂ ಸುಲಿಪಲ್ಲಕಾಂತಿ ಚೆ
ಲ್ವೆತ್ತಧರಂ ಮನಂಗೊಳೆ ಪುಳಿಂದಿಯರೊಪ್ಪುಗುಮಾ ವನಾಂತರದೊಳ್ ||೨೧೨||

೩) ಐ : ಬೇಟೆಯ ವರ್ಣನಂ.

ಪುಲಿವಲೆ ಕೊಂಬು ಕಲ್ಲಿ ಮಿಡಿ ಕಣ್ಣು ತೊವಲ್ವಲೆ ಸಿಕ್ಕಿದಕ್ಕು ಪೆ
ರ್ಮೊಲವಲೆ ಸಂದ ಹಾಸುವಲೆ ನೀರ್ವಲೆ ಮೇಲ್ವಲೆ ಸೊರ್ಕುವಾರ್ದು ಪೆ
ರ್ಬಲೆ ಬಿಡುವಾರು ಸೋವಲೆಯೆಂಬಿನಿತಂ ಪೊರೆಗಟ್ಟಿ ಕಾನನ
ಸ್ಥಳದೊಳಗೊಲ್ದು ತೋಹುವಿಡಿದೊಡ್ಡಿಯರೆಯ್ದೆ ಪುಳಿಂದನಾಯಕರ್ ||೨೫೬||

ಎಲೆಯಲೆ ಹೋಯ್ತುಹೋಯ್ತು ಮೊಲನಟ್ಟಿಱಿಯಟ್ಟಿರಿ ಸಾರುಸಾರು ಪೆ
ರ್ಬುಲಿಯುಲಿಯಟ್ಟಿಪೋದಪುದಯಾರ್ದೆಸೆ ಯಿತ್ತಲಿತ್ತಲೆ
ಕ್ಕಲನಿದಿರಾಗಿ ಬರ್ಪುದಿದೆ ನಾಯ್ವಿಡು ನಾಯ್ವಿಡುಗೆಂದೆನುತ್ತ ಹೆ
ಗ್ಗಲಿಸುವ ಬೇಡರುಬ್ಬರವಗುರ್ವಿಸಿತಾ ವನದೇಶಮಧ್ಯದೊಳ್ ||೨೭೧||

೩) ಒ : ಹುಲಿಯ ಬೇಟೆ.

ಪೊಱಮಡೆ ಕಂಡುಕಂಡು ಮಿಗೆ ದಂಡೆಯನಿತ್ತು ಕಱತ್ತು ಹತ್ತೆ ಸಾ
ರ್ದುಱುಬಿಗಿಲುತ್ತ ಸುತ್ತಿದ ಕಿರಾತಕುಲಂ ಮಝ ಭಾಪೆನುತ್ತೆ ಬೊ
ಬ್ಬಿಱಿಯೆ ಕುನುಂಗಿ ಕುಕ್ಕುರಿಸಿ ಸಿಱ್ಱನೆ ಕೀೞ್ತಲಗಿಂ ಕಡಂಗಿ ಕಾ
ಯ್ದಿಱಿದನದೊರ್ವ ಲುಬ್ಧಕನುಗರ್ವಿನ ಪೆರ್ಬುಲಿಯಂ ವನಾಂತರದೊಳ್ ||೩೦೯||

೩) ಓ : ಆನೆಯ ಬೇಟೆ.

ಘನಗಜರಾಜನೊಂದು ಶಶಿಕಾಂತಶಿಲಾಂತದಿಂ ತನ್ನ ರೂಪ ನೆ
ಟ್ಟನೆ ಕರಿಗೆತ್ತು ಕೋಪಮಿಗೆ ತಾಗೆ ರದಂಗಳುಡಿರ್ದು ಬಿಂಬಮಂ
ವಿನಯದಿ ನೋಡಿನೋಡಿ ಕರದಿಂ ತಡವುತ್ತಿರಲಾ ಮದೇಭಮಂ
ವನಚರನಿಕ್ಕೆ ಬಂದು ಸಲೆ ನಿಟ್ಟಿಸಿ ಬಣ್ಣಿಸಿದಂ ಮನೋಜನಂ ||೩೪೯||

೪) ಪುರವರ್ಣನಂ.

ಸತತಂ ಮಾಂಗಲ್ಯದಿಂದಚ್ಯುತ ಸುಖಭರದಿಂ ಸಂತತಂ ಪದ್ಮ ಪೀಠಾ
ನ್ವಿತದಿಂ ಸೌಂದರ್ಯದಿಂ ಕೋಮಲಮೃದುತರದಿಂ ವಾರ್ಧಿಸಂಭೂತಸೀಮಾ
ಯುತದಿಂ ಸದ್ರಾಕ್ಷದಿವ್ಯಾಮೃತ ಶಶಿಸಹಜಾತತ್ವದಿಂ ಕಾಮಜನ್ಮ
ಸ್ಥಿತಿಯಿಂ ಚೆಲ್ವಾದ ದೇಶಂ ಪರಿಕಿಪೊಡೆ ಮಹಾಲಕ್ಷ್ಮಿಯಂತೊಪ್ಪಿ ತೋರ್ಕುಂ ||೧೦||

ಪುಲ್ಲಿನ ಲಂಬಳಂ ಮರದ ಕೋಲ್ ನರೆಗಂಬಳಿ ಬಾರಟೊಪ್ಪಿ ಬೆಂ
ಗಲ್ಲಿಯ ಬುತ್ತಿಯುಂ ಬಿದಿರ ಕೋವಿ ಕಳಾವದ ತೋಳಬಂದಿ ಪೆ
ರ್ಬಿಲ್ಲುಶರಂಗಳುಂ ಪಿಕಿಲಿದುಪ್ಪುಳಮಾಲಿಕೆ ಕಾಲಕೆರ್ಪು ನಿಂ
ದಲ್ಲಿಯದಲ್ಲಿ ಗೊಲ್ಲವಡೆಗಳ್ ತುಱುಗಾಯ್ವರರಣ್ಯಮಧ್ಯದೊಳ್ ||೪೪||

ಅಲಘುಕುಚದ್ವಯಂ ಕಚಭರಂ ತೊಲೆಯುತ್ತಿರೆ ಹಸ್ತಕಂಕಣಂ
ಘಲಕೆನೆ ಮುತ್ತಿನೋಲೆ ಕದಪಂ ಪೊಡೆಯುತ್ತಿರೆ ಸುತ್ತಿನೇಣು ಕೋ
ಮಲಕರಪಲ್ಲವಂಗಳೊಳ್ ನಿಡುವಡಂಗಿರೆ ಬಟ್ಟನೋಟದಿಂ
ಮಲಹರಿ ದೇಸಿ ತೋಡಿಯೆನೆ ಪಾಡಿ ಮೊಸರ್ ಕಡೆದರ್ ಲತಾಂಗಿಯರ್ ||೫೪||

ತೆನೆಗೊಂಡೆಯ್ದುವ ರಾಜಕೀರನನಹೋ ನೀಲೋತ್ಪಲಂಗೆತ್ತು ಭೋಂ
ಕೆನಲಿಟ್ಟೆಬ್ಬಿಪ ಪಾಮರೀಕುಚಯುಗಂ ತಾಂ ಮೇಲುದಂ ನೂಂಕಲಾ
ಸ್ತನಯುಗ್ಮಕ್ಕೆ ಜಗತ್ತುಗಳ್ ಬೆಲೆಯೆಯೆಂಬಂತೊಪ್ಪಲಾ ಪಾಂಥಲೋ
ಚನಮೇಂ ಪುಣ್ಯಮನಾಂತುದೋ ಸ್ಪರುಶನಸ್ತ್ರೀಸೌಖ್ಯಮೆಂತಿರ್ಪುದೋ||೧೦೨||

೪) ಅ : ಪ್ರಪಾಗೃಹವರ್ಣನಂ.

ವರನಾಭಿ ಸುೞಿಗಳಂ ತೋಳ್
ತರಂಗಮಾಲೆಗಳನಂಬಕಂ ಮತ್ಸ್ಯಮನಂ
ಗರುಚಿ ರುಚಿರಾಂಬುವಂ ಪೋ
ಲ್ತುರವಣೆ ನದಿಯಂದದಿಂ ಪ್ರಪಾಕಾಂತೆಯಿರಲ್ ||೧೨೯||

೪) ಆ : ಕೊಳದ ವರ್ಣನಂ.

ವಾಸವಗೇಹದಂತನಿಮಿಷೋಲ್ಲಸಿತಂ ರಘುನಾಥಸೈನ್ಯದ
ಗ್ರೇಸರದಂತೆ ನೀಲಕುಮುದಂ ನಳ ಕೇಸರಸೆವ್ಯಮಾನ ಕಂ
ಸಾಸುರವೈರಿಯಂತೆ ಕಮಲಾಲಯಚಕ್ರಸುಪರ್ಣಶೋಭಿತಂ
ಭಾಸುರರಾಜಹಂಸೆಗಳಿನಂಬರದಂತೊಲಿದೊಪ್ಪಿತಾ ಕೊಳಂ ||೧೪೯||

ಇದೆ ಮೀನ್ಗಳ್ ಮೀನ್ಗಳುದ್ಯದ್ಭ್ರಮರಮನೊಳಕೊಂಡಬ್ಜವಬ್ಜಂ ಬಳಕ್ಷಾ
ಸ್ಪದಹಂಸಂ ಹಂಸವತ್ಯದ್ಭುತಲಲಿತಲಸತ್ ಪುಷ್ಕರಂ ಪುಷ್ಕರಂ ತ
ಪ್ಪದಿಳಾಭಾಗಕ್ಕೆ ನೈರ್ಮಲ್ಯಮನೆಸಗೆ ಶರತ್ಕಾಲದಾಕಾಶವೆಳ್ತಂ
ದುದೆನಲ್ ಚೆಲ್ವಾದ ಪದ್ಮಾಕರಮನೊಲವಿನಿಂ ಕಂಡು ಕೊಂಡಾಡುತಿರ್ದಂ ||೧೬೮||

ಹರಿಯಂತಾ ಹಿಮರೋಚಿಯಂತೆ ಕಮಲೋಪೇತಪ್ರಭಾವಂ ಮಹೇ
ಶ್ವರನಂತಾ ದನುಜಾರಿಯಂತೆ ಕುಮುದಪ್ರೋದ್ಭಾಸುರಂ ಪದ್ಮಮಂ
ದಿರೆಯಂತಾ ಗಿರಿಜಾತೆಯಂತೆ ವರಹಂಸೋದ್ಯುಕ್ತದಿಂದಿಂತು ವಿ
ಸ್ತರಮಾಗಿರ್ದುದು ಚೆಲ್ವುವೆತ್ತುಮನಿಶಂ ಶ್ವೇತಾಂಬುಜಾತಾಕರಂ ||೧೭೭||

೪) ಇ : ವಾಯುವಿನ ವರ್ಣನೆ

ತಿಳಿದ ಕೊಳಂಗಳೊಳ್ ಸುೞಿದು ಸೀರ್ಪನಿಯಂ ಬಿಡದೆತ್ತಿಕೊಂಡು ಪೂ
ಗಳ ಪೊಸಗಂಪಿನೊಳ್ ಪೊರೆದು ತುಂಬಗಳಿಂಚರದಿಂದರಳ್ದು ಕೆಂ
ದಳಿರ್ಗಳ ತೊಂಗಲೊಳ್ ತೊಡರ್ದು ಕೂಡುವ ನಲ್ಲರ ನೀಳ್ದ ಸೇದೆಯಂ
ಸೆಳೆದೆಲರಲ್ಲಿ ತೀಡಿದುದು ಮೆಲ್ಲನೆ ಮೆಲ್ಲನೆ ಬಂದು ಬಿರ್ದಿನಂ||೧೮೮||

೪ ) ಈ : ವನವರ್ಣನೆ.

ಸಿರಿತಂದಿಕ್ಕಿದಶೋಕೆ ವಾಗ್ವನಿತೆಯಿಟ್ಟಾಮ್ರಂ ಶಚೀದೇವಿಯಿ
ಟ್ಟರನೇರಿಲ್ ಮಿಗೆ ರಂಭೆಯಿಟ್ಟ ಕದಳೀಷಂಡಂ ಸುರಸ್ತ್ರೀಯರಿ
ಟ್ಟರವಿಂದಾಕರಮೂರ್ವಶೀವಧು ಸರಾಗಂ ತಂದ ಪೂಗದ್ರುಮಂ
ತರದಿಂದಂ ರತಿಯಿಟ್ಟ ದಾಡಿಮಕುಳಂ ಸರ್ವರ್ತುಕೋದ್ಯಾನದೊಳ್ ||೨೪೮||

ಕುಸುಮಶರಂಗೆ ವಸಂತಂ
ಪೊಸಪೊಂಗಳಸಂಗಳಲ್ಲಿ ಸೌರಭ್ಯಸುಧಾ
ರಸಮಂ ತಂದಿರಿಸಿದವೋ
ಲೆಸೆದವು ಫಳಭಾರಮಾತುಳಂಗವ್ರಾತಂ ||೨೬೮||

ಎಲೆ ನಾರು ಸುಱುಗು ಗೆಣಸುಂ
ಫಲ ಕುಸುಮ ಕಾಯಿ ದಿಂಡುಮೆಂಬಿನಿತಱೊಳಂಶ
ಸಲೆ ಕಾರ್ಯಕೊದಗುತೊಪ್ಪುವ
ಚೆಲುವೆಸೆದಿಹ ಬಾೞೆಮರೆಗಳೊಪ್ಪುಗು ವನದೊಳ್ ||೨೭೧||

ಪಲಗಾಲ ಬಾೞ್ದೆನೆನ್ನಯ
ಸಲುಗೆಯ ಕಂದಗಳ ನೋಡಿ ಸಲಹೆನುತಿಳೆಗಂ
ತಲೆವಾಗುತೆ ಕೈಲೆಡೆಗೊಡು
ವೊಲು ಮೋತೆಗಳೊಪ್ಪಿ ಮೆಱೆದುವಾ ವನವನದೊಳ್ ||೨೭೨||

ಗಿಳಿಗಳನೋದಿನುಗ್ಗಡಣೆ ಕೋಕಿಲನಿಸ್ವನಕಾಹಳಂ ಫಲಂ
ಗಳ ಪನಸೆಯ್ದೆ ಮದ್ದಳಿಗನುದ್ಘಮರಾಳಿಯೆ ಗಾಯಕರ್ ಲತಾ
ವಳಿ ನಟಿಯರ್ ಮರಂಗಳೊಲವುಂ ತಲೆದೂಕು ಕೞಲ್ಚಿ ಬೀೞ್ವಹ
ಣ್ಣೆಲೆ ಮಿಗೆ ಮೆಚ್ಚೆನಲ್ ನವಿಲು ನರ್ತನಗೆಯ್ವುವು ನಂದನಂಗಳೊಳ್||||೩೦೬||

ಋತುಗಳ ಸೆಜ್ಜೆ ತುಂಬಿಗಳ ಭೋಜನಶಾಲೆ ಮನೋಜನಸ್ತ್ರಸಂ
ತತಿಯ ಸಮುದ್ಭವಸ್ಥಲ ಕುಮಾರಸಮೀರಣನಾಡುವಂಗಣಂ
ರತಿಯ ಲತಾಗೃಹಂ ನೆಗೞ್ದ ಪೆಂಪಿನದೊಂದು ಕರಂಡಮೆಂದೆನ
ಲ್ಕತಿಶಯಮಾಗ ವರ್ಣಿಸುವೆನಲ್ಲಿದಲ್ಲಿಯ ಪುಷ್ಪವಾಟಿಯಂ ||೪೦೭||

ಜಾತಿ ವಸಂತಕಂಗೆ ಪಗೆ ತಾವರೆ ಚಂದಿರಗಾಗದುತ್ಪಲಂ
ಭೂತಳಲೋಚನಂಗೆ ವಿಷ ಸಂಪಗೆ ತುಂಬಿಗೆ ಮುಂ ವಿರುದ್ಧಕಂ
ಕೇತಕಿ ಶಂಕರಂಗೆ ರಿಪು ಸತ್ಕರವೀರ ಸಮೀರಗಾಗದೆಂ
ದೋತುಮನಂಗ ಮಲ್ಲಿಗೆಗೆ ಕಟ್ಟಿದನುದ್ಗಮ ರಾಜಪಟ್ಟಮಂ||೪೬೪||

ಉದಯಾಂಗನೆ ದಿವಸೇಂದ್ರನ
ವದನಮನಿಟ್ಟಿಸುತೆನಕ್ಕೊಡಂ ಸುಲಿಪಲ್ಗಳ್
ಗದಗದಿಸಿ ತೋಱುತಿರ್ಪಂ
ದದೊಳಿರವಂತಿಗಳ ವಲ್ಲಿಗಳ್ ಕಂಗೊಳಿಕುಂ||೪೭೯||

ಬಿಗಿಯಪ್ಪಿ ಪುಷ್ಪರಸಮಂ
ತೆಗೆದೀಂಟಿ ತುಳುಂಕಿ ತೂಱಿ ತೇಂಕಾಡಿ ಮನಂ
ಮಿಗೆ ಸೊರ್ಕಿ ಜಿನುಗಿ ಜೀವಿಸಿ
ಮಘಮಘಿಸಿತ್ತೊಂದು ಮಧುಕರಂ ಮಲ್ಲಿಗೆಯೊಳ್ ||೫೨೫||

ಅವನೀದೇವಸಮೂಹಮೋದುವುದನಾದಂ ಕೇಳ್ದು ಕೇಳ್ದೋದುತಿ
ರ್ಪುವು ವೇದಂಗಳನೋದಿ ತಪ್ಪುವಿಡಿದಿಂತೇವಾಸಿಗಳ್ಗೋದಗೇ
ಳ್ವುವು ತಮ್ಮೋದಿನ ಬಲ್ಮೆಯಿಂ ದ್ವಿಜವರರ್ಗಾನಂದಮಂ ಮಾಡುತಿ
ರ್ಪುವು ಕೇಳೀಶುಕಸಾರಿಕಾತತಿಗಳಾಗಳ್ ದೇವಸದ್ಮಂಗಳೊಳ್ ||೬೦೯||

೪) ಉ : ಘಟ್ಟಿವಳ್ತಿಯರ ವರ್ಣನೆ.

ಎಸೆವ ಪುರಂಧ್ರಿಯರ್ ಪದೆದು ಸಂಗಡಮಿರ್ದು ಮನೋನುರಾಗದಿಂ
ದಸುವೆಯ ಕಲ್ಗಳಂ ತೊಳೆದು ಚಂದನಮಂ ಪನನೀರ್ಗಳಿಂದೆ ಜಾ
ರಿಸಿ ಹಿಮಚೂರ್ಣಮಂ ತಳೆದು ಕಂದುಗಳಂ ಪಿಡಿದೌಂಕಿ ನೂಂಕಿದರ್
ದೆಸೆದೆಸೆಗೆಲ್ಲ ಕಂಪೆಸೆಯೆ ಘಟ್ಟಿಮಗುಳ್ಚುಗು ಘಟ್ಟಿವಳ್ತಿಯರ್ ||೬೬೮||

ತುಂಬಿಯ ಮಾಲೆಯೀಯಲರಮಾಲೆ ನಖಾಳಿಯ ಕಾಂತಿಮಾಲೆಯೀ
ಯಂಬುಜಲೋಚನಾಂಶುಘನಮಾಲೆಯೊಳಾವುದಕೀವೆನರ್ಥಮಂ
ರಂಭೆಗೆ ಪಾಟಿಯಾದ ವಧುವೆಂದೆನೆ ತನ್ಕಟಾಕ್ಷದೋರೆಯಿಂ
ತಾಂ ಬೆದಕಲ್ಕೆ ಭಾಪು ಬೆಲೆಗೊಟ್ಟವನೆಯ್ದಿದನೇಂ ಪ್ರವೀಣನೋ||೬೯೧||

೪) ಊ : ಜೂಜುಗಾರರ ವರ್ಣನೆ.

ತಾಗುವ ದಾಯಮಂ ತೆಗೆವ ತಪ್ಪಿಸಿ ಸಾರಿಯನೊಡ್ಡಿಕೊಂಬ ಗೆ
ಲ್ವಾಗಱಿದೊಡ್ಡನೇಱಿಸುವ ಮೆಯ್ಯಱಿದಕ್ಷವನೊಯ್ಯನೆತ್ತಿ ಕೈ
ವೇಗದೊಳಾರ್ದು ಢಾಳಿಸುವ ಪಾವುಗೆಸಾಕೆನಲ್ವೇೞ್ವ ಬಿನ್ನಣ
ಕ್ಕಾಗರಮಾಗಿ ನೆತ್ತಗಳನತ್ತಣ ಜೊತ್ತುಗಳಿಂ ನೆಗಳ್ಚಿದರ್ ||೬೯೭||

೪) ಋ : ವೇಶ್ಯಾವಾಟಿಯ ವರ್ಣನೆ.

ಕಡಲೊಡೆಯನಿತ್ತ ರನ್ನದ
ತೊಡವಂ ತೊಡು ಗೌರಿಯಿತ್ತ ಪೊಂಬಟ್ಟೆಯಂ ನೀ
ನುಡು ಸಸಿಯಟ್ಟಿದ ಪೂವಂ
ಮುಡಿಯೆಂಬೀರವಮೆ ಸೂಳೆಗೇರಿಯೊಳೆಲ್ಲಂ ||೭೧೮||

ಪುರುಡಿಸಿ ಮೋಹದಿಂ ಮುಳಿದು ಮುದ್ದಿಸಿ ಕೋಪಿಸಿ ಸೋಲ್ತರಂದದಿಂ
ಸುರಿದು ದೃಗಂಬುವಂ ಧನದಪೇಕ್ಷೆಯಂ ಮಾಡದೆ ಕೂರ್ತು ಕೂಡುವಂ
ತಿರೆ ವಿಟ ಸೊಲ್ತ ಭಾವವನೆ ಕಂಡವನರ್ಥವ ಕೊಂಬುದೆಂದುಮೀ
ಪರಿವಿಡಿಯಿಂದೆ ಮುಗ್ಧೆಯರ ವೃದ್ಧೆಯರೋದಿಸುತಿರ್ಪರಾವಗಂ ||೭೨೨||

ಸರಸಿಜನಾಭನಂ ಸಿರಿ ಮನೋಭವನಂ ರತಿಯಿಂದುಮೌಳಿಯಂ
ಗಿರಿಜೆ ಸುರೇಶನಂ ಶಚಿ ಚತುರ್ಮುಖನಂವರವಾಣಿ ತಾರಕಾ
ಪರಿವೃಢನಂ ಸಮಂತೆಸೆವ ರೋಹಿಣಿ ಪಾರ್ಶ್ವದೊಳಿಟ್ಟುಕಾಯ್ವರಾ
ಪುರದ ವಿಳಾಸಿನೀಜನದ ಗಾಡಿಗೆ ಬೆಚ್ಚಿ ನಿಜಾತ್ಮನಾಥರಂ ||೭೩೪||

೪) ಎ :ರಾಜಾಲಯ ವರ್ಣನೆ.

ವಿಮಲಪ್ರಾಸಾದಭಿತ್ತಿಪ್ರಕಟಘನಸುಧಾಕಾಂತಿಗಳ್ ಚಂದ್ರಿಕಾವಿ
ಭ್ರಮಮೆಂಬಂತೊಪ್ಪೆ ನಾನಾಮಣಿಮಯ ಕಲಶಶ್ರೇಣಿಗಳ್ನಾಕದೊಳ್ ಚಿ
ತ್ರಮನೆತ್ತಂ ಬೇಱೆ ಭಾಸ್ವತ್ಕುಮುದಮನೊಲವಿಂ ಪೆರ್ಚಿಸುತ್ತಂ ಮಹಾಸಂ
ಭ್ರಮದಿಂ ಚೆಲ್ವಾದ ರಾಜಾಲಯಮಭಿನವಪೂರ್ವಾದ್ರಿಯಂತೊಪ್ಪಿ ತೋರ್ಕುಂ ||೭೩೮||

೫) ನಾಯಕಾಭ್ಯುದಯವರ್ಣನಂ.

ರನ್ನದ ಕಂಭ ನೀಲಮಯ ಬೋದಿಗೆ ಪಚ್ಚೆಯ ಚೆಲ್ವದೂಲಗಳ್
ಚಿನ್ನದ ಮೇಲುಮುಚ್ಚಳ ಸುಮೌಕ್ತಿಕ ಲೋವೆಯ ಚುಂಚು ವಜ್ರದಿಂ
ಚೆನ್ನೆಸೆದೊಪ್ಪುತಿರ್ಪ ಕಲಶಂ ಮೃಗನಾಭಿಯ ಸುತ್ತು ಭಿತ್ತಿ ಬಾ
ವನ್ನದಿನರ್ಥಿಯಿಂದೆ ಮೆಱೆಗುಂ ಧರಣೀಶನ ಮಂತಣಾಗೃಹಂ||೫||

ಉಡಿನೂಲು ಸಡಿಲೆ ಮೆಲ್ಲುಲಿ
ಪೊಡರೆ ನಿಜಾವಯವದ ಶೋಭೆ ರಂಜಿಸೆ ಬಂದರ್
ಗಡಣದಿ ನಲ್ನಡುವಿನ ಬಡ
ನಡುವಿನ ಸೆಳೆನಡುವಿನಸಯಿನಡುವಿನ ಸತಿಯರ್||೨೨||

ಅನ್ನಯಮುಂಟೆಯಾ ನೃಪನ ದೇಶದೊಳಿಲ್ಲ ಸುಮಾರ್ಗವೃತ್ತಿಯೊಳ್
ಮನ್ನಣೆಯುಂಟೆವುಂಟುಮವಿಚಾರವನೀತಿಗಳುಂಟೆಯಿಲ್ಲ ಸಂ
ಪನ್ನರು ಸತ್ಕಲಾವಿದರ ಗೋಷ್ಠಿಗಳುಂಟೆನಲುಂಟು ಭಾಗ್ಯದೊಳ್
ತನ್ನೊಲವುಂಟೆಯಿಲ್ಲವೆನಲಾ ವಿಜಯಾಧಿಪಭೂಪನೊಪ್ಪುವಂ||೬೦||

ನಡೆವೆಡೆ ಕಣ್ಣನೀರ ಪೊನಲಿಂ ಕೆಸಱೆೞ್ದೊಡಮಲ್ಲಿ ಪೋಗುತುಂ
ಮಡವವು ಜಾಱಿ ಬೀೞ್ದು ಬೞಿಕಾ ಕೆಸಱಂ ತೊಳೆಯಲ್ ತದಶ್ರುಗಳ್
ಬಿಡದಿರೆ ಮತ್ತೆ ಮತ್ತೆ ಕೆಸಱಾಗುತಿರಲ್ ತೊಳೆವುತ್ತಮಿರ್ಪುದುಂ
ಪಡೆದು ಪಲುಂಬಿ ವೈರಿಸತಿಯರ್ ಚರಿಪರ್ ಚಲದಂಕಮಲ್ಲನಾ ||೯೪||

ಪಗೆಗಳ ರಕ್ತಧಾರೆಯಭಿಷೇಕ ಮಿದುಳ್ಳೆಲು ಗಂಧವಕ್ಷತಾ
ಯುಗಳ ನಿವೇದ್ಯ ಖಂಡತತಿವೀಳ್ಯದೊಳಷ್ಟವಿಧಾರ್ಚನಂಗಳಿಂ
ಸೊಗಸಿತು ಖಳ್ಗಲಿಂಗ ರಣದೇಗುಲದೊಳ್ ಜಗದೇಕಮಲ್ಲನಾ ||೧೦೬||

ಅರಿಗಳ ರುಧಿರಮೆಪೊಯ್ ನೀರ್
ಪಿರಿದುಂಪೊಗರೆಲೆಗಳೆಸೆವ ಜಸಮೆ ಕುಸುಮೋ
ತ್ಕರಮುರು ಶೌರ್ಯಂ ಫಲಮಾ
ಗಿರಲೆಸೆದುದು ಖಳ್ಗಲತಿಕೆ ತನ್ನೃಪವರನಾ ||೧೧೩||

೫) ಅ : ಸಂಗೀತ.

ಜನಸಂಸ್ಥಾನಮನೆಯ್ದೆ ತಾಂಕಿ ಬಿಡದಿರ್ಪಾ ಮಂದ್ರ ಮಧ್ಯೋರ್ದ್ವ ಸು
ಸ್ವನದಂ ಸಶ್ರುತಿಮಾರ್ಗನಾಗಮಕದಿಂ ತಾನಂಗಳಿಂ ವರ್ಣದಿಂ
ದಿನದಿಂ ಗೀಱನೆ ತೋಱಿ ಪೋಪ ಪೊಳೆಪಿಂದಂ ಷಡ್ಗ್ರಹೋಚ್ಚಾರದಿಂ
ಸನಯಂ ನ್ಯಾಸದ ನಿಲ್ಕೆಯಿಂದೆ ವರ ಕಾಂಭೋಜ್ಯಾಖೆಯಂ ಪಾಡಿದಳ್ ||೧೩೯||

ಗತಿ ಗಮಕಕ್ಕೆ ಹಸ್ತಯುಗ ವಕ್ಷಕೆಯಕ್ಷಿಗಳನೆಯ್ದಿ ಮಾನಸ
ಕ್ಕತಿಶಯಮಾನಸಂ ಪರಮಭಾವಕೆ ಭಿವಮುದಾರಮುದಾಹರಕ್ಕೆ ಸಂ
ಗತಿ ಕುಡೆ ಕೈಶಿಕೀ ವಿಲಸದಾರುಭಟೀ ಘನಸಾತ್ಯಕೀಶುಭಾ
ರತಿಯ ವಿಲಾಸವೃತ್ತಿಗಳನಾ ಸಭೆ ಹೋಯೆನೆ ರಂಭೆಯಾಡಿದಳ್ ||೧೬೪||

ತಿರ್ರನೆಯುಪ್ಪರಕ್ಕೆ ನೆಗೆಯುತ್ತವೆ ನೀಡಿದ ಕೈಯುಗಂ ಕರಂ
ಮಿರ್ರನೆ ಮಿಂಚುತಿಪ್ಪುಡುಗಳಾಗಿರಲಾಕೆಯ ವಕ್ತ್ರಚಂದ್ರಮಂ
ಸರ್ರನೆ ಪೋಗುವಾಗಸದ ಚಂದಿರನಲ್ಲಿಗೆ ಧಾಳಿಮಾಳ್ಪವೋಲ್
ಗಿರ್ರನೆಯಂತರಭ್ರಮಣೆಯಂ ಸಲೆ ತೋಱಿದಳಂದು ಚಂದದಿಂ ||೧೬೮|

೫) ಆ : ಔದಾರ್ಯ.

ಪದೆದಿನಿಸಂ ತಳರ್ಚುವ ತಳರ್ಚಿದುದಂ ಮೊಳಕಾಲ್ಗೆ ತರ್ಪ ತಂ
ದುದನೊಲವಿಂ ತಱುಂಬುವ ತಱುಂಬಿದುದಂ ಪೆಗಲಲ್ಲಿಗೆತ್ತುವೆ
ತ್ತಿದುದ ನೆತ್ತಿಯೊಳ್ ತಳೆದು ಪೊಂಗಳಭಾರಮನೊಯ್ವ ವಿಪ್ರವೃಂ
ದದ ಪಡೆಮಾತೆ ಪೇೞದೆ ಯುಧಿಷ್ಠಿರ ರಾಜನುದಾರದೇೞ್ಗೆಯಂ ||೧೮೫||

ಕೆಲದೊಳ್ ನಿಂದೂಳಿಗಕ್ಕಂ ಪರಿಪರಿದೆಡೆಯಾಡುತ್ತಲಿರ್ಪಂ ತುರುಷ್ಕಂ
ಬಲಮುದ್ಯತ್ ಕ್ಷೇಪದಿದಂ ನಡೆವ ಪಡೆವಳಂ ಚೋಳನುಂ ಚಂಡ ಬಾಹಾ
ಬಳದಿಂದೆಯ್ದಿಪ್ಪ ಮಾವಂತರ ಬೞಿವೆಸನಾಳ್ ಗೌಳನಿನ್ನಾವ ರಾಯರ್
ತಲೆದೋರ್ಪರ್ ನಾರಸಿಂಹಗಮಮ ಸಮರಸಿಂಹಂಗೆ ವಿಕ್ರಾಂತದಿಂ ||೧೯೫||

೫)  ಇ :  ವಿವಾಹವರ್ಣನಂ.

ಸಾರಸುವರ್ಣವೇದಿಕೆ ದುಕೂಲವಿತಾನಮಪೂರ್ವಭಂಗಿ ಭೃಂ
ಗಾರ ಘಟಾಳಿ ಪೂರ್ಣಕಲಶಂ ಮಣಿದೀಪಿಕೆ ಪಲ್ಲವೋಲಸತ್
ತೋರಣಮುತ್ಸವಧ್ವಜಮೆನಿಪ್ಪವು ಮಂಗಳಲಕ್ಷ್ಮಿ ತೊಟ್ಟಲಂ
ಕಾರನಿಕಾಯದಂತಿರೆ ಮನೋಹರಮಾಯ್ತು ವಿವಾಹಮಂಟಪಂ ||೯||

೫) ಈ :ಮದುವಣಿಗ

ಕುಸುಮಿತಮಾದ ಪದ್ಮಲತೆಯೊಳ್ ಪೊಸಕೇದಗೆಯುಳ್ಳೆಸಳ್ಗಳೊಳ್
ಪೊಸೆವಿನಮುಣ್ಮಿ ಪೊಣ್ಮಿದನಿತಲ್ಲದೆ ತುಂಬಿಗಳಂ ಪೊದೞ್ದು ಲಾ
ಗಿಸಿದಪುದೆಂಬಿನಂ ಸುದತಿಯರ್ ಪಡೆದಾತನ ದೇಹಮೆಯ್ದೆ ಝೋಂ
ಪಿಸುತಿರೆ ಪೂಸಿದರ್ ಮೃದುಕರಾಂಬುಜದಿಂ ನವಗಂಧತೈಲಮಂ||೨೬||

೫) ಉ : ಸ್ತ್ರೀವರ್ಣನಂ.

ಪೊಂಗಿದ ಪಾದಮುಂ ಸಮಪಾದಾಂಗುಲಿಯುಂ ಮೃದುಗೂಢಗುಲ್ಫಮುಂ
ಮಂಗಳವೃತ್ತವಕ್ಷಜಗಳೊಪ್ಪುವ ಕೋಮಲಪೂರ್ಣಜಾನುಯು
ಗ್ಮಂಗಳುಮೇೞ್ಗೆವೆತ್ತುರುನಿತಂಬಮುಮಲ್ಪಸುಮಧ್ಯಮುಂ ಸಮು
ತ್ತುಂಗ ಭುಜಂಗಳುಂ ವಿಕಸಿತಾನನಮುಂ ಮೆಱೆದಿರ್ಪುವಾಕೆಯೊಳ್ ||೩೭||

ಪದ ನಡು ಕಂಠ ಕರ್ಣಯುಗ ಪುರ್ಬು ಬೆರಳ್ಗಳು ಸಣ್ಣವಾರು ಮ
ತ್ತಧರ ಕಪೋಲ ದಂತ ನಖ ಗುಹ್ಯ ಬಸಿರ್ ತೆಳುವೆಂಬಿವಾಱು ಕೊ
ರ್ವಿದ ಕುಚ ನೇತ್ರ ನಾಸಿಕ ಕಟೀತಟವೊಳ್ದೊಡೆ ಕೇಶಬಂಧವೆಂ
ಬಧಿಕವಿವಾಱು ಕಾಂತೆಯರ ಚೆಲ್ವಿಕೆಗಂ ಪದಿನೆಂಟು ಲಕ್ಷಣಂ ||೪೦||

ವರವಕ್ಷೋಜಭರಕ್ಕೆ ನೂತ್ನ ತನುಮಧ್ಯಂ ಭಗ್ನಮಾದಪ್ಪುದೆಂ
ದಿರದಬ್ಜೋದ್ಭವಸೂರೆಗೊಟ್ಟ ನವನೀಲಸ್ತಂಭಮೆಂಬಂತೆ ಸೌಂ
ದರಮಾಗಿರ್ದುದು ಬಾಸೆ ನೀಳ್ದ ನಗೆಗಣ್ ಕರ್ಣಾಂತಮಾಗೊಪ್ಪಿರಲ್
ಗಿರಿಜಾಯವ್ವನಸಂಪದಕ್ಕೆ ತನುವೆಂತಿಂಬಪ್ಪುದೋ ರುದ್ರನಾ ||೫೧||

ಉಡದ ಸುವಸ್ತ್ರದಂತೆ ಗಿಳಿ ಸೋಂಕದ ಮಾವಿನ ಪಣ್ಣಿನಂತೆ ಪೊನ್
ತೊಡಿಸದ ರತ್ನದಂತೆ ಬಲು ಜಟ್ಟೀಗ ಕಾಯ್ದ ನಿದಾನದಂತೆ ಕೈ
ದುಡುಕದ ಕಾಸಿಯಂತೆ ಕಳನೇಱದ ಕಾಳೆಗದಂತೆ ಕಂತುಕೋ
ಲಿಡದ ಧನುಪ್ರಕಾಂಡದವೊಲಿರ್ದಳು ಕನ್ನೆ ಕುಲಾಭಿಮಾನದಿಂ ||೬೦||

ಅಲರಂಬಾಕೆಯ ಚೆಂದದಿಂ ಸುೞಿದುದೋ ಮಿಂಚಂಗನಾಭಂಗಿಯಿಂ
ನೆಲಸಿತ್ತೋ ತ್ರಿಜಗನ್ಮೋಹನಸುಖಂ ಸ್ತ್ರೀವೇಷದಿಂ ಬಂದು ಸಂ
ಚರಿಸಿತ್ತೋ ಮಲಯಾನಿಳಂ ಸತಿಯ ರೂಪಂ ತಾಳ್ದುದೋ ಕಾಮಿನೀ
ಚಲದಿಂ ಚಂದ್ರಿಕೆ ಮೂರ್ತಿವೆತ್ತುದೆನಿಸಲ್ ಕಂಜಾಕ್ಷಿ ಕಣ್ಗೊಪ್ಪಿದಳ್ ||೭೧||

ಗಿಳಿಗಳಿಗಂಚೆ ಕೊಂಚೆ ವಚಮುಂ ಕಚಮುಂ ಕುಚಮುಂ ತಳಿರ್ಗೆ ಕೋ
ಗಿಲೆಗೆಳೆವಳ್ಳಿಗೊರ್ಗುದರಮುಂ ಕರಮುಂ ಸರಮುಂ ಗಜಕ್ಕೆ ಪೊಂ
ಜಳೆಗೆಳೆವಾೞೆಗೋಳಿನಡೆಯುಂ ಪೊಡೆಯುಂ ತೊಡೆಯುಂ ಝಷಕಕ್ಕೆ ಪೂ
ಗೆಲೆಗೆಣೆ ಕಣ್ಮಲರ್ಪಿನ ಸಂತನುವುಂ ಹನುವುಂ ವಧೂಟಿಯಾ ||೮೧||


೫) ಊ : ಪಾದಾದಿಕೇಶಪರ್ಯಂತ ಶೃಂಗಾರ ವರ್ಣನಂ.

ಸಲ್ಲದು ಸೆಣಸಲ್ ತನಗಿನಿ
ಸಲ್ಲದು ಚೆಲ್ವೆನಿಸಿ ಗೆಲ್ದ ಸತಿಯಡಿದಳಿರ್ಗಳ್
ಪಲ್ಲವಕಮನೀಯತೆಯಿಂ
ಪಲ್ಲವಕೆ ಮನಃಪ್ರಮೋದಮಂ ಪೆರ್ಚಿಸುಗುಂ ||೧೨೧||

ತತ್ತರುಣಿಯ ಮೆಲ್ನಡೆಗಳ
ಬಿತ್ತರಮಂ ನೋಡಿ ನೋಡಿ ಸಂತಸದಿಂದಂ
ಪತ್ತುಮೊಗಮಾಗಿ ಮೆಲ್ಲಡಿ
ಮುತ್ತಂ ಮುಕ್ಕುಳಿಸಿದಂತೆ ಸೊಗಯಿಪುವುಗುರ್ಗಳ್ ||೧೨೯||

ಮದದಾನೆ ಸೋಲ್ವುದೆನ್ನಯ
ಮೃದುಗತಿಗೇವಾೞ್ತೆ ನೀವೆನುತ್ತಂಚೆಗಳಂ
ಪದಲಕ್ಷ್ಮಿ ಜಱೆವ ತೆಱದಿಂ
ಸುದತಿಯ ನೂಪುರದ ನುಣ್ಚರಂ ಸೊಗಯಿಸುಗುಂ ||೧೩೫||

ಸ್ಮರರಾಮಂ ಲಾವಣ್ಯದ
ಶರಧಿಯ ರೋಮಾಳಿಸೇತುವೊಡೆಯಂತೆ ತನ್ನಯ
ವರಧನುವಿಂ ತಿರುಪಿದವೋಲ್
ತರುಣಿಯ ಸುೞಿನಾಭಿ ಸುಗಮದಿಂ ರಂಜಿಸುಗುಂ ||೧೬೧||

ಶಶಿಮೊಗದೊಳ್ ನಕ್ಷತ್ರಂ
ಮಿಸುಪುದು ಮರ್ಯಾದೆಯೆಂದು ಸಕಲಜನಂ ಭಾ
ವಿಸುತಿರೆ ನುಣ್ಬೆಳಗಿಂ ರಂ
ಜಿಸುಗುಂ ನಾಸಾಗ್ರದಲ್ಲಿ ಮೂಗುತಿಯವಳಾ ||೨೭೨||

೬) ವಿವಾಹವರ್ಣನಂ.

ನವರತ್ನಸ್ತಂಭಂಗಳಿಂ
ನವಚಾಮರ ಪಟ್ಟನಿಚಯ ಮೇಲ್ಕಟ್ಟುಗಳಿಂ
ನವಮೌಕ್ತಿಕ ಲಂಬಣದಿಂ
ವಿವಾಹಮಂಟಪದ ನಡುವೆ ಪಸೆ ರಂಜಿಸುಗುಂ ||೨೮೪||

ತಾಳ ಮದ್ದಳೆ ಮೃದಂಗಂ
ಡೋಳುಂ ತಂಬಟವು ಭೇರಿ ಮುರಜಂ ಬೊಂಬುಳಿ
ಕಾಳೆಯು ತಿತ್ತಿರಿ ಶಂಖಂ
ಪೇಳುವೊಡಂ ಬಹಳವಾದ್ಯಮುಣ್ಮಿದುವಾಗಳ್ ||೨೯೦||

ಬಳವಿಗೆಯಪ್ಪ ವೇದರುತಿಗೇಯರವಂ ಪಟಹಸ್ವನಂ ಪುರೀ
ಕಳಕಳದಿಂ ದಳಂಬಡೆದು ವಿಶ್ವಜಗಜ್ಜನಕೀರ್ತನಾರವಂ
ಗಳಿಗಿನಿಸೇೞ್ಗೆವೆತ್ತು ದಿಗಿಭವ್ರಜಭೃಂಹಿತ ಭೂರಿನಾದದಿಂ
ದಳವಿಯನಾಂತು ಘೂರ್ಣಿಪಿನಮಾ ಗೃಹಮಂ ಪುಗುತಂದನುರ್ವಿಪಂ ||೩೦೭||

ಸುದತಿಯರನುನಯದಿದಂ
ಪ್ರದಕ್ಷಿಣಂ ಬಂದು ದಕ್ಷಿಣಾವರ್ತಶಿಖಾ
ಸ್ಪದನಂ ಹೋಮಾನಲನಂ
ಮದುವಕ್ಕಳ್ ಮಿಸುಪ ಲಾಜೆಯಂ ಪೂಜಿಸಿದರ್ ||೩೧೧||

ಪರಿಕರಿಸಿ ಸುರಿವ ಪಟವಾ
ಸರಜ ಸುರಿದಮಳಮೌಕ್ತಿಕ್ಕ್ಷತನಿಕರಂ
ಕರಮೆಸೆದತ್ತು ಬಿಸಿಲ್ ಮೞೆ
ಸುರಿವಂತೆವೊಲಾ ವಿವಾಹಸಮನಂತರದೊಳ್ ||೩೧೨||

ಶೀತಕರೋದಯದೊಳಂಬುಧಿ ಘೂರ್ಣಿಸುವಂದದಿಂ ಜಗತ್
ಖ್ಯಾತವಿವಾಹದುತ್ಸವದೆ ಘೂರ್ಣಿಸುತಿರ್ಪ ರಸಪ್ರಸಂಗ ಸಂ
ಗೀತನಿನಾದದಿಂ ದೆಸೆಯೊಳುಣ್ಮುವ ಮಾರ್ದನಿಗಳ್ ದಿಶಾಧಿಪ
ವ್ರಾತಮೆ ರಾಗದಿಂ ಪರಸುವಂತೆವೊಲೊಪ್ಪಿದುದಾ ನೃಪಾಲನಾ ||೩೧೪||

೭) ಕುಮಾರೋದಯ ವರ್ಣನಂ.

ಧನಧಾನ್ಯಂ ಬಂಧುಮಿತ್ರರ್
ವನಿತಾತತಿ ರಾಜ್ಯಮೆಂಬುದೇವುದೊ ಮುದ್ದಿಂ
ಬಿನದವನೊಡರ್ಚಿಯಾಡುವ
ತನಯಂ ಸಂಸಾರಸುಖದ ಸೀಮೆಯದಲ್ತೇ ||೮||

ಅಪ್ಪೆಪ್ಪೆನುತ್ತಂ ಪರಿತಂ
ದಪ್ಪುವ ಜೈಮುಂಡೆನುತ್ತೆ ನೊಸಲ್ಗೆಳಸುವ ಕೈ
ಚಪ್ಪಣೆಗುಟ್ಟಲ್ ಕುಣಿಕುಣಿ
ದೊಪ್ಪುವ ಬಾಲಕನ ಪಡೆವುದಂತದು ಭಾಗ್ಯಂ||೧೧||

ಉಡೆಘಂಟೆ ಮುರುಹು ಮಾಗಾಯ್
ಸೊಡರ್ವಕ್ಕಿನ ಬೊಟ್ಟು ವ್ಯಾಘ್ರನಖ ಜೆಡೆದುರುಗಲ್
ಸಡಗರದ ಗೆಜ್ಜೆಯಂದುಗೆ
ದೊಡವಿನ ಬಾಲಕನ ಪಡೆವನೇನು ಕೃತಾರ್ಥ||೧೨||

ಎಳವೆಱೆ ಬೆಳೆಯದ ಗಗನ
ಸ್ಥಳ ಸಸಿ ಬೆಳೆಯದ ಧರಿತ್ರಿ ಮೌಕ್ತಿಕರತ್ನಂ
ಬೆಳೆಯದ ಶುಕ್ತಿಕೆ ಗರ್ಭಂ
ಬೆಳೆಯದ ಬಾಲಕಿಯ ಬಸಿಱನರ್ಥಕಮಲ್ತೆ ||೨೦||

ಮೊಲೆಯುಣುತಕ್ಕಱಿಂ ನಗುವ ನಿಂದಿರುತಪ್ಪುವ ಪಿಂಗಿ ಪೊಂಗುತಂ
ಮಲೆವ ಮರಳ್ವ ಕಂಗಳನಲರ್ಚುವ ಮುಚ್ಚುವ ನೋಡುತಾಡುತುಂ
ನಲಿನಲಿದುರ್ಬುತುಂ ತೊಲೆವುತಂತೆಳೆವಳ್ಳಿಯ ಮುದ್ದಿನೊಪ್ಪಿನೊಳ್
ನೆಲಸಿದ ಪುತ್ರಿಯಂ ಬಯಸುತ್ತಿರ್ದಪುದೆನ್ನ ಮನಂ ಪ್ರಿಯಾ ||೨೭||

ತೊಳಗುವ ಮೆಯ್ಗಳೊಳ್ ನಿಮಿರ್ದ ಕುಂಕುಮದಿಂದಮರ್ದುಟ್ಟ ಮುಯ್ಪಿನಿಂ
ದಳವಡೆ ತೊಟ್ಟ ಪೊಂದೊಡಿಗೆಯಿಂ ಚಲಕೋಮಲಹಸ್ತಶಾಖೆಯೊಳ್
ಸೆಳೆಸೆಳೆಗೊಂಬಿನಂತೆ ಪೊಳೆವೊಂದು ವಿಳಾಸದಿನಗ್ಗಳಂ ತಳಿ
ರ್ತೆಳಲತೆಯಂತೆ ತೋಱಿದರುಣಾಧರೆ ಪುಷ್ಪಿತೆಯೆಂಬುದೊಪ್ಪದೇ ||೭೫||

ಕಡೆದನೊ ಚಂದ್ರನೀ ರಮಣಿಯಂ ಮದನಂ ಬಿಸಕಾಂಡಗರ್ಭದಿಂ
ಪಡೆದನೊ ಪದ್ಮಗರ್ಭನೆನೆ ಭೂಷಣವಸ್ತ್ರವಿಲೇಪನಾದಿಗಳ್
ಪಡೆಯೆ ವಿಲಾಸಮಂ ದಶನಸಂತತಿಯಿಂ ದರಹಾಸಲಕ್ಷ್ಮಿ ನೂ
ರ್ಮಡಿಸಿ ಬೆಡಂಗುವೆತ್ತುದು ನರೇಂದ್ರವರೂಥವರಪ್ರಸಾದನಂ||೯೧||

ಬರೆತೆಗೆದಪ್ಪಿಯಪ್ಪಿ ಮುದದಿಂ ಮೊಗದೊಳ್ ಮೊಗಮಿಕ್ಕಲಿಕ್ಕಿ ಸು
ಯ್ಯೆರಲೆಡೆಯಾಡೆ ಜಿಹ್ವೆ ನಲಿದಾಡೆ ಸುಖಂ ಸುೞಿದಾಡೆ ಲೀಲೆ ಮೋ
ಹರಿಸೆ ಗಳಂ ಚಮತ್ಕರಿಸೆ ಗದ್ಗದವಾಂತಿರೆ ಕಂಪಂ ಕೊನ
ರ್ತಿರೆ ಪುಳಕಂ ನೆಗೞ್ತಿರೆ ಪರಸ್ಪರವಾರ್ತದೊಳೊಲ್ದು ಕೂಡಿದರ್ ||೧೦೪||

ರವಿಯಿಂ ಭಾಸುರಮೂರ್ತಿ ಪೂರ್ಣಶಶಿಯಿಂ ಸದ್ವೃತ್ತನಿಂದ್ರೇಭದಿಂ
ದವನೀಭರ್ತೃ ಸುರಾದ್ರಿಯಿಂ ಸ್ಥಿರತರಂ ಪಂಕೇಜದಿಂ ಶ್ರೀವಧೂ
ಭವನಂ ವಾರಿಧಿಯಿಂದಪಾರಮಹಿಮಂ ಕಲ್ಪದ್ರುವಿಂ ಸತ್ವಗೌ
ರವಯುಕ್ತಂ ಮೃಗರಾಜನಿಂ ಪುರುಷಸಿಂಹಂ ನಂದನಂ ಪುಟ್ಟುಗುಂ||೧೧೭||

೭) ಅ : ಗರ್ಭವರ್ಣನೆ.

ವನಿತೆಯ ಗರ್ಭಚಿಹ್ನವತಿಕೌತುಕಮೆಂತೆನೆ ರತ್ನನೂಪುರ
ಧ್ವನಿಗಲಸಿತ್ತು ಮಂದಗತಿಯೊಳ್ ನಡುಕಾಂಚಿಗೆ ಭಿನ್ನವಾದುದಾ
ನನರುಚಿ ಚಂದ್ರನೆಂಬ ಪಣೆಗೊಪ್ಪಿದು ದುಗ್ಧಕುಚಾಗ್ರಿಮಕ್ಕೆ ಕ
ಪ್ಪನುನಯಮಾದುದಂಗಲತೆ ಕಾಂತಿಯನಾಂತುದು ಸೌಖ್ಯಭಾವದಿಂ ||೧೨೪||

ವಿಳಸತ್ಪ್ರಭಾಳಿ ಶಶಿಮಂ
ಡಳಮದು ಕುಮುದಾವಭಾಸಿಯೆನೆ ತಿಳಿಗೊಳದೊಳ್
ನೆಲಸುವ ತೆಱದಿಂ ಗರ್ಭಂ
ನೆಲೆಸಿದುದು ವಿಳಾಸವತಿಗೆ ಪುಣ್ಯೋದಯದೊಳ್ ||೧೩೩||

ಬಸಿಱೆಂದೆನಿಸುವ ಪೊಲದೊಳ್
ಶಿಶುವೆನಿಸುವ ಸಸಿ ಮಡಲ್ತು ಪೊಡಕರಿಸುತ್ತುಂ
ಪಸರಿಸಿ ಪರ್ವಿದವೋಲೆದೆ
ಯ ಸಿರಿಯ ಪಸುರೇಱಿತಂಗನೆಗೆ ಗರ್ಭದೊಳಂ ||೧೫೧||

ಮೂಡುವ ಶೀತದೀಧಿತಿಗೆ ಕಾಲಪಿತಂ ಪ್ರಸವೋತ್ಸವಂಗಳಂ
ಮಾಡುವ ಮಾೞ್ಕೆಯಿಂದೆ ಸುರಭೂರುಹದಿಂ ನೆಗೆದಂಕುರಕ್ಕೆ ಕೊಂ
ಡಾಡಿ ವಸಂತಕಂ ಜನನಕರ್ಮವನೊಪ್ಪಿರೆ ಮಾಡುವಂದದಿಂ
ಮಾಡಿದನೞ್ಕಱಿಂದೆ ಗಿರಿರಾಜನ ಜಾತೆಗೆ ಜಾತಕರ್ಮಮಂ ||೧೬೬||

೮) ಚಂದ್ರೊದಯವರ್ಣನಂ.

ಅರುಣಾಂಶುಗಳಿಂ ಪಶ್ಚಿಮ
ಗಿರಿಕೂಟಮನರ್ಕ ಪೂರ್ಪಲ್ಲವ ಚಯಮಂ
ನೆರಪೆ ಪಡುಷನೇಸಱೆಸೆದುದು
ಶರನಿಧಿನಾಥಂಗೆ ಪಿಡಿದ ಮಾಣಿಕಗೊಡೆಯೆನಲ್||೪||

ಅದು ಪೂರ್ವಾಂಗನೆಯಿಡೆ ನೆಗೆ
ದೊದೆವುತೆ ಬೆಳಬೆಳಗುತೆಯ್ದೆ ಪಶ್ಚಿಮಶೈಲಾ
ಗ್ರದ ಮೇಲೆ ಬೀೞ್ವ ಮಾಣಿ
ಕ್ಯದ ಕಂತುಕದಂತಿರೆಸೆದುದುರ್ಕನ ಬಿಂಬಂ ||೧೦||  

೮) ಅ :ಸೂರ್ಯಾಸ್ತಮಯ.

ಕಡೆಗವಲೊಳ್ ನಿಜಾಂಗವಳಿರಕ್ತದಿನೊಪ್ಪಿರೆ ಬಲ್ಪುಗೆಟ್ಟು ತೀ
ರ್ಪೊಡೆಗೆಡೆಯಲ್ ತುರಂಗತತಿ ಮುಗ್ಗೆ ಸರೋಜಮುಖಂ ನಿರೋಧಮಂ
ಪಡೆದಿರೆ ಮಂಡಲಾಗ್ರಕರದುಗ್ರತೆಗುಂದಿರೆ ರಾಜಹಂಸನಂ
ಗೆಡೆಗುಡಲಾರ್ಪನೆಂಬ ಬಗೆಯಿಂ ದಿನನೆಯ್ದಿದನಸ್ತಶೈಲಮಂ ||೧೩||

ಕಮುದಿನಿಯಿಟ್ಟ ಶಾಪ ನೆಱೆ ತಾಗಿತೊ ನೊಂದ ಪಗಲ್ಗೆ ಮುಪ್ಪುಬಂ
ದಮರ್ದಪುದೆಂಬ ನೋವೊ ದಿವಮಾನಿನಿಯಂ ಜನರೆಲ್ಲ ನೋಡೆ ಕೂ
ಟಮನೆಡೆಮಾಡಿದಂ ನಯಮೊ ಪೇಸದೆ ಮೀಂಗಳ ಪಾದಮೆಲ್ಲಮಂ
ವಿಮಲತಿಗೆಟ್ಟು ನುಂಗಿದಳಲೋಯೆನೆ ಜಾಱಿದನರ್ಕನಬ್ಧಿಯೊಳ್ ||೨೫||

ಲೋಕಮನೆಲ್ಲಮಂ ಸಲೆ ತೊೞಲ್ದು ಬೞಲ್ದು ವರೂಥಮಂ ಹಯಾ
ನೀಕಮನೊಯ್ದು ಪೆಂಪಿನಪರಾದ್ರಿಯ ಕುಂಜದೊಳಿಟ್ಟು ಮತ್ತೆ ನಿ
ರ್ವ್ಯಾಕುಳದಿಂ ತದದ್ರಿತಟದೊಳ್ ಸುಖನಿದ್ರೆಯೊಳಿರ್ಪೆನೆಂಬವೋಲ್
ಕೋಕನದಪ್ರಿಯಂ ಪದೆಪಿನಿಂ ಪದದೆಯ್ದಿದನಸ್ತಶೈಲಮಂ||೨೯||

ಪೂಡುವ ಕುದುರೆ ಬೆಸಂ ಕೊಂ
ಡೋಡುವತೇರ್ಗೊಂದೆ ಗಾಲಿ ಸಾರಥಿ ಪೆೞವ
ಕೇಡಿಂಗಲಸಿದೊಡಕ್ಕುಮೆ
ನೋಡೆನುತಿನ ಕೆಡೆದನಸ್ತಗಿರಿ ಮಸ್ತಕದೊಳ್||೩೮||

ದಿನಯಾತ್ರಾನಿಗಮಕ್ರಮಕ್ಕೆ ವಿಷಮಂ ಸಪ್ತಾಶ್ವಮಿನ್ನೊಂದು ವಾ
ಹನಮಂ ತಂದು ಸಮಂತುರಂಗಮೆನಿಪಂತಾಂ ಮಾೞ್ಪೆನೆಂಬೊಂದು ಭಾ
ವನೆಯಿಂದುತ್ಸವ ರಾಗಮಂ ತಳೆದು ಸೂರ್ಯಂ ಪಶ್ಚಿಮಾಂಭೋಧಿಯಂ
ಮನಮೊಲ್ದೆಯ್ದಿದನೆಂದು ಬಣ್ಣಿಸೆ ಜಗಂ ಚೆಲ್ವಾಯ್ತು ಸಂಧ್ಯಾಗಮಂ||೪೦||

ನಗಿಸುತ್ತುಂ ನೆಯ್ದಿಲಂ ದಟ್ಟಡಿಯಿಡಿಸುತ ತೆಂಗಾಳಿಯಂ ಗೂಡುದೊಟ್ಲಂ
ಪುಗಿಸುತ್ತುಂ ಪಕ್ಕಿಯಂ ಕೞ್ತಲೆಯ ಭುಜಮನೆತ್ತುತ್ತೆ ಕೋಕಕ್ಕೆ ಪೆರ್ದುಂ
ಬಿಗಳಿಂದಂ ಜೋಗುಳಂಬಾಡಿಸುಕಮಲಮಂ ತೂಂಕಡಂಗೆಯ್ಯುತ್ತೆತ್ತಂ
ಮಿಗೆ ಸಂಧ್ಯಾಕಾಂತೆಯಾಗಳ್ ಮೆಱೆದಳು ಪಲವುಂ ಮಕ್ಕಳಂ ಪೆತ್ತ ತಾಯೊಲ್ ||೪೩||

ಅಂಬರ ಮಣಿ ಮುೞುಗಿದನೆನ
ಲಂಬುಧಿಯೊಳ್ ಹಿಮಕರಾಂಶುಗಳ್ ಪುಟ್ಟುಗುಮೆಂ
ದಂಬರ ಹರಿ ಪೊದೆಯಲ್ ಪೀ
ತಾಂಬರಮಂತೆಗಿಸಿದವೊಲಾಯ್ತು ಸಂಧ್ಯಾರಾಗಂ ||೪೬||

8) ಆ : ಮುಕುಳಿತ ಪದ್ಮ:-

ಇನನಸ್ತಂಗತನಾದನಾತನೞಿವಿಂದೇನುತ್ಸವಂ ಬೀತು ಕೋ
ಕನಿಕಾಯಕ್ಕಿನಿತಾಯ್ತು ಶೋಕವಿನನಸ್ತಪ್ರಾಪ್ತಿಯಂ ಪಾಱುತಿ
ಪ್ಪನಿತೊಂದೊಂದುವಮುತ್ಪಲಕ್ಕಿನಿತವಂ ನೋಡಲ್ಕೆ ತಾನಾಱದ
ಬ್ಜಿನಿ ಕಣ್ಮುಚ್ಚುವ ಮಾೞ್ಕೆಯಿಂ ಮುಗಿದುವೆತ್ತಂ ಪದ್ಮಪತ್ರೋತ್ಕರಂ ||೫೨||

ದಿನಕರನೆಂಬ ಸಿಂಹಮಿರದೊಯ್ಯನೆ ಪಾಯ್ತರಲೆಯ್ದೆ ಕಂಡು ತ
ದ್ಘನತಿಮಿರೌಘದಂತಿ ಘಟೆಗಳ್ ಪರಿಧಾಳಿಯನಿಟ್ಟವೋಲ್ ತಮಂ
ಜನಿಯಿಸಲಂತದಕ್ಕೆ ಮಿಗೆ ಭಾಸ್ಕರನಿಟ್ಟನೊ ಬೇಹಿನಾಳ್ಗಳಂ
ಯೆನಿಸಿಯೆ ಸಂಜೆಗೆಂಪು ಪುದಿದೊಪ್ಪಿದುದಂಬರಮಬ್ಧಿಮಧ್ಯದೊಳ್ ||೫೮||

೮) ಇ :-ವಿಕಸಿತ ಕುಮುದ.

ಪಗಲತಿ ಮಿತ್ರನೊಳ್ ಸುರತಗೋಷ್ಠಿ ಕರದ್ವಿಜರಾಜ ಪಾದದೊಳ್
ಪಗೆ ಮಧುಪಪ್ರಸಂಗವನಿಶಂ ಜಡಸಂಗತಿ ಕಂಟಕತ್ವಮೆಂ
ಬಗಣಿತ ದುರ್ಗುಣಕ್ಕೆ ನೆಲೆಯಾದ ಸರೋಜಿನಿ ಕೆಟ್ಟಳೆಂದಣಂ
ನಗುವವೊಲೇನರಲ್ದವೊ ಸುಧಾಕರಸಂಗಮದಿಂದಲುತ್ಪಲಂ||೫೯||

೮) ಈ :- ಕೋಕ ವಿರಹ.

ಮಿಡುಕುವ ಕಂಠವಿರ್ದೆಸೆಯೆ ಜೊಲ್ಲು ಮರಳ್ಚಿದೆಱಂಕೆ ಬಿಟ್ಟಬಾಯ್
ಗಡಣದ ಕಣ್ಣನೀರ್ಗಳರೆಮುಚ್ಚಿದ ಕಣ್ ಬಿಸುಸುಯ್ವ ಸುಯ್ಲಿನಿಂ
ತಡಬಡವಾಗಿತಮ್ಮ ತನು ರಂಜಿಸೆ ಕೋಕಕುಲಂ ವಿಯೋಗದಿಂ
ಮಡದಿಯನೆಲ್ಲಿಯುಂ ತಿರುಗಿ ಕಾಣದೆ ನಿಂದವದೊಂದು ತಾಣದೊಳ್ ||೬೪||

ಬಿಸುಸುಯ್ಯುತ್ತೋಪಳಂಕಾಣದೆ ಕಳವಳದಿಂ ಕಂಜಕಿಂಜಲ್ಕದೊಳೀ
ಕ್ಷಿಸಿ ಪೊಕ್ಕುಂ ಬಚ್ಚೆಯಂ ತಾವರೆಯೆಲೆವಱೆಯೊಳ್ ನೋಡಿ ಶೈವಾಲದೊಳ್ ಸೋ
ದಿಸಿ ನೀಳಾಂಭೋಜದೊಳ್ ನಿಟ್ಟಿಸಿ ತೆರೆಯೆಡೆಯೊಳ್ ಪೊಕ್ಕು ಸುತ್ತಂ ತೊೞಲ್ದಾ
ಲಿಸುತಯ್ಯೋಯೆಂದೞಲ್ದತ್ತಸಮಶರನೆಸಲ್ ಕೀಲಿತಾಂಗಂ ರಥಾಂಗಂ ||೭೪||

೮) ಉ :- ಕತ್ತಲೆ.
ನಸುಗೞ್ತಲೆಯರೆಗೞ್ತಲೆ
ಮುಸುಗೞ್ತಲೆ ಭೇದವೞಿದ ಪೆರ್ಗೞ್ತಲೆ ನಾ
ಲ್ದೆಸೆಗೞ್ತಲೆ ಪೊಸಗೞ್ತಲೆ
ರಸಗೞ್ತಲೆಯೆನಿಸಿ ಕೂಡಿ ತೀವಿತು ತಿಮಿರಂ ||೭೬||

ಧರೆಯೊ ಸತ್ವ ರಜೋಗುಣ
ವೆರಡುಂ ಪುಸಿಯಾಗಿ ಘನತಮೋಗುಣವೊಂದಾ
ವರಿಸಿತ್ತವನಿಯ ನೆನಲ
ಚ್ಚರಿಯೊಳ್ ತೀವಿರ್ದುದಂಧಕಾರಾಕಾರಂ||೯೦||

ತುಂಬಿಯ ಬಂಬಲಂತೆ ಬಲಿಭೋಜನರಾಜಿಗಳಂತೆ ಸೀಳ್ದ ನೀ
ಲಾಂಬರದಂತೆ ರಾತ್ರಿಯ ಶಿರೋರುಹದಂತೆ ಜಲಪ್ರವಾಹದೊಳ್
ತುಂಬಿ ಪೊದೞ್ದ ಕಮ್ಮಡುಗಳಂತಿಡಿದಿದ್ದಿಲಪುಂಜದಂತೆ ಪಾ
ಪಂ ಬೆಳೆದಂತೆ ಕರ್ಗಿ ಕವಿದತ್ತು ತಮಂ ಭುವನಾಂತರಾಳದೊಳ್ ||೯೭||

ಕುಜಮೆಲ್ಲಂ ಬಗೆಯಲ್ ತಮಾಲ ನಗಮೆಲ್ಲಂ ನೀಲಶೈಲಂ ನದೀ
ವ್ರಜಮೆಲ್ಲಂ ಯಮುನಾಜಲಂ ಕಮಲಮೆಲ್ಲಂ ಕೋಮಲೇಂದೀವರಂ
ಪ್ರಜೆಯೆಲ್ಲಂ ಪುರುಷೋತ್ತಮರ್ ದೆಸೆಗಳೆಲ್ಲಂ ಕೃಷ್ಣಪಕ್ಷಾಖ್ಯಮೆಂ
ದು ಜಗಂ ಬಣ್ಣಿಸೆ ಮರ್ಬುಮುರ್ಬಿಪದದಿಂ ಪರ್ವಿತ್ತುಸರ್ವೋರ್ವಿಯಂ ||೧೦೨||

೮) ಊ :- ದೀವಿಗೆಯ ವರ್ಣನೆ.

ಪಣತೆಗೆ ಭಾನು ಬತ್ತಿಗೆ ಸರಸ್ವತಿ ಮೇಣುರಿಗಗ್ನಿಯಗ್ರಕಂ
ಗಣಪಡೆ ಲಕ್ಷ್ಮಿ ತೈಲಕೆ ನಿಶಾಕರನಂತಧಿದೈವಮಾಗಿ ಟೆಂ
ಟಣಿಸುತೆ ತೋರ್ವ ಕೞ್ತಲೆಯ ಮೊತ್ತಮನೋಡಿಸಿ ಸುಪ್ರಕಾಶದೊಂ
ದಣಿಯೆನಿಸಿರ್ಪ ದೀಪ ಪರಿಭಾವಿಸೆ ಮಂಗಳದಂಗಮಲ್ಲವೇ||೧೧೪||

ನೆಲಸಿ ನೆಲಗೊಂಡ ಪೆರ್ಗ
ೞ್ತಲೆಯೊಳಗಂ ಕೂಡೆ ಕೂಡೆ ಮಿನಿಮಿನಿಸುತ್ತುಂ
ಪಲವುಂ ದೀವಿಗೆಗಳ್ ಕ
ೞ್ತಲೆ ಪೂತಂತೊಪ್ಪುತಿರ್ದುವಾ ಮನೆಮನೆಯೊಳ್ ||೧೧೯||

ಆವರಿಸಿದ ಕೞ್ತಲೆಯಂ
ತೀವಿಯೆ ನೆಱೆ ನೋೞ್ಪುದೆಂದು ಸೂರ್ಯಂ ಕೞಿಪಿದ
ಬೇವಿನ ಚರರುಗಳೆಂದೆನೆ
ದೀವಿಟಿಗೆಗಳೆದ್ದವಿಂದು ನೃಪನೋಲಗದೊಳ್ ||೧೨೪||

೮) ಋ :- ಜಾರೆಯರು:-

ಮಾವನು ರೋಗಿಯತ್ತೆ ಮಿಗಿಲಂಧಕಿ ಚೇಟಿಗೃಹಕ್ಕೆ ಸೇರಳಾ
ಭಾವನು ಮೈದುನಂ ಪತಿಯುಮೂರಿಗೆ ಪೋದರು ಪೌಳಿ ಬಿೞ್ದುದೀ
ದೀವಿಗೆಗೆಣ್ಣೆಗಾಣೆ ಕಡೆಯೆಮ್ಮೆಯವಾಸಮು ಕಾವರಿಲ್ಲಮಿ
ನ್ನೇವೆನುಮೊರ್ವಳೆಂದು ಪದಿರಿಂದಲಿ ಪೇೞ್ದಳು ಜಾರೆ ಜಾರೆಗಂ ||೧೩೮||

ಕುಱುಕುಱುಗೊಂಡು ನಿಂದು ಸಲೆ ನೋಡುತ ಕೆಮ್ಮನೆ ಕೆಮ್ಮಿ ಕಿನ್ನೆಯಂ
ತುಱಿಸುತ ಸನ್ನೆಯಿಂ ಕರೆದು ನಾಲಗೆಯಾಡುತ ನೆತ್ತಿ ಮೇಲುದಂ
ತೆಱೆದು ಕುಚದ್ವಯೋನ್ನತಮನೊಯ್ಯನೆ ತೋಱುತ ಭಾವಕೇಶಮಂ
ತೆಱೆಯುತ ಕಟ್ಟುತಂ ಬಿಡುತಲೈದಿತು ಜಾರೆಯರೊಂದು ಭಾವದಿಂ ||೧೪೦||

ಕೇರಿಗೆ ದೂರವಾದೆ ನಿನಗಾನೊಲಿದುಂ ಪೊಱಗಾದೆನಕ್ಕಟಾ
ಕೂರದ ಮೆಚ್ಚದರ್ಗೆ ಲಘುವಾದೆನನಂಗನ ಪುಷ್ಪಬಾಣದಿಂ
ಘೋರಕೆ ಸಂದು ಬೆಂದು ಮನೆಗಾಗಿರೆ ನಾಂ ಪಗೆಯಾದೆನೆಂದು ಸಂ
ಸಾರವು ಸಾರವೇಯೆನುತಲಿಕ್ಕಿದಳಂಗನೆ ಕಣ್ಣನೀರ್ಗಳಂ ||೧೪೮||

೮) ಎ:- ನಕ್ಷತ್ರವರ್ಣನೆ.

ಶಿಶು ಬಂದನೆಂದು ವಾರಿಧಿ
ವಸುಧೆಯೊಳಿಹ ಜನದ ದೃಷ್ಟಿತಾಗುವುವೆನುತುಂ
ಸಸಿನೆ ನಿವಾಳಿಸಿ ಚೆಲ್ಲಿದ
ಪೊಸಮುತ್ತಿನ ಸೇಸೆಯಂತೆ ತಾರೆಗಳೆಸೆಗುಂ ||೧೮೯||

ಇಂದಮೃತಕರನ್ ಬಂದಪ
ನೆಂದು ದಿಶಾಂಗನೆಯರೊಲಿದು ಚೆಲ್ಲಿದ ಮೊಲ್ಲೆಯ
ಮಂದೈಸಿದ ಮುಗುಳುಗಳೆನೆ
ಬಂದೆಸೆದುವು ಗಗನರಂಗದೊಳ್ ತಾರಗೆಗಳ್ ||೨೦೦||

ಇನಿಸಾನುಂ ಬೇಗದಿಂ ಬಂದುಗೆಯ ಮುಗುಳಲರ್ದಂತೆ ಕೆಂಪಾಗೆ ಮತ್ತೊಂ
ದಿನಿಸಾನುಂ ಬೇಗದಿಂ ಸಂಪಗೆಯ ಮುಗುಳಲರ್ದಂತೆ ಸೊಂಪಾಗೆ ಮತ್ತೊಂ
ದಿನಿಸಾನುಂ ಬೇಗದಿಂ ಮಲ್ಲಿಗೆಯ ಮುಗುಳಲರ್ದಂತೆ ಬೆಳ್ಪಾಗೆ ಮತ್ತೊಂ
ದಿನಿಸಾನುಂ ಬೇಗದಿಂ ಪ್ರಜ್ವಲಿಸಿತು ಜಗತೀಚಕ್ರಮಂ ಚಂದ್ರಬಿಂಬಂ ||೨೩೫||

೮) ಏ :- ಬೆಳದಿಂಗಳಿನ ವರ್ಣನೆ :

ಸಲೆ ನೋಡಲ್ ಸುರಗಂಗೆ ಕೋಟಿಮುಖದಿಂದೆೞ್ತಂದಳಲ್ತಲ್ತು ನಿ
ರ್ಮಳ ದುಗ್ಧಾಂಬುಧಿ ಮೇರೆದಪ್ಪಿ ಕವಿದತ್ತಲ್ತಲ್ತು ಗೌರೀಶನು
ಜ್ವಲ ಸತ್ಪಂಚಮಮೂರ್ತಿ ಧಾರಿಣಿಯನಿಂದಪ್ಪಿರ್ದುದಲ್ತಲ್ತು ಕೇ
ಳಿಳೆಯೊಳ್ ಕೌತುಕಮೆಂಬಿನಂ ಪಸರಿಸಿತ್ತಾನಂದಚಂದ್ರಾತಪಂ ||೩೨೪||

ಪುಗಿಸಿದವಷ್ಟಪರ್ವತಗುಹಾಂತರಮಂ ಕೆಲವಂ ಗವಾಕ್ಷದಿಂ
ದುಗಿದವು ದೇವಸದ್ಮದೊಳಡಂಗಿದವಂ ಬಯಲಿಂಗೆ ಬಿರ್ದವಂ
ತಗುಳ್ದಱೆಯಟ್ಟಿ ನುಂಗಿದುವು ಪೆರ್ಮರದೊಳ್ ಸೆಱೆಗೆಯ್ಯೆ ಪರ್ಣಸಂ
ಧಿಗಳೊಳೆ ನಿಂದು ನಿಟ್ಟೊರಸಿ ಕೊಂದವು ಕೞ್ತಲೆಯಂ ಹಿಮಾಂಶುಗಳ್ ||೩೩೮||

೮) ಐ :- ಎಳೆವೆಱೆಯ (ಬಾಲಚಂದ್ರ ) ವರ್ಣನೆ.

ಚಂದಿರನೆನಿಪ್ಪಪೂಪವ
ಬಂಧಿಸಿ ತೊಡೆವುತ ತಿನುತಲಿನಿಸಂ ಬಿಸುಟ್ಟುದೊ
ಚಂದದಲಿ ರಾಹುವೆಂದೆನೆ
ಚಂದಿರಗಱೆಯೊಪ್ಪಿದತ್ತು ಗಗನಾಂಗಣದೊಳ್ ||೩೪೫||

೮) ಒ :- ಅರ್ಧಚಂದ್ರ ವರ್ಣನೆ.

ಗಗಗನವಧೂಟಿ ಕೂರ್ತು ಶಶಿಕಾಂತದ ತಂಪಿನೊಳಾರ್ದ್ರಗಂಧಮಂ
ಮೊಗೆಮೊಗೆದಷ್ಟದಿಗ್ವನಿತೆಯರ್ಕಳ ಮೆಯ್ಯೊಳೆಚೆಲ್ಲಿ ತ
ನ್ನುಗುರ್ಗಳಿನಾತ್ಮದೇಹದೊಳು ಸಿಂಪಿಸಿಕೊಂಡಳೆಂಬ ಮಾೞ್ಕೆಯಿಂ
ಸೊಗಯಿಪ ಜೊನ್ನದಿಂ ಮೆಱೆವ ತಾರೆಯೊಳೊಪ್ಪಿದನರ್ಧಚಂದ್ರಮಂ ||೩೪೯||

೮) ಓ :- ಪೂರ್ಣಚಂದ್ರ ವರ್ಣನೆ.

ಇರುಳೆನಿಸಿರ್ಪ ತೋಂಟವಳನಂಬರಮೆಂಬ ಲತಾಂತವಾಟಿಯಂ
ಪೊರೆಯಲೆನುತ್ತ ಬಂದು ವರುಣೇಂದ್ರದಿಶಾರ್ಣವದೊಳ್ ಕಬಂಧಮಂ
ಸುರುಚಿರರತ್ನಯುಗದಿಂ ಮೊಗೆದಪ್ಪನೆನಿಪ್ಪೊಲೊಪ್ಪುಗುಂ
ಪರಿಕಿಸೆ ಪೌರ್ಣಮೀದಿನದ ಸಂಜೆಯೊಳೊಪ್ಪುವ ಭಾಸ್ಕರೇಂದುಗಳ್ ||೩೫೯||

೮) ಔ :- ಪರಿವೇಷದ ಚಂದ್ರ.

ಪ್ರತಿದಿನಪೂರ್ವಪಕ್ಷದೊಳೆ ಪೆರ್ಚಿದ ಬಿಂಬದಿನಾ ಸುಧಾರಸಂ
ಕ್ಷಿತಿಗೊಸರ್ಗೆಂದು ದೇವತತಿ ಕಟ್ಟಿದ ಕಟ್ಟೆಯೊ ರಾಹುಬಾಧೆಗಾ
ವೃತಮೆನಲೀಶ್ವರಂ ನೆಗೞ್ದ ರಕ್ಷೆಯೊ ರಕ್ಕಸರೊಯ್ಯದಂತೆ ತ
ತ್ಸತಿ ನಡೆಗೋಂಟೆಯಂ ರಚಿಸಿಕೊಟ್ಟಿರವೋ ಗುಡಿಗಟ್ಟಿದಿಂದುವೋ ||೩೬೦||

೮) ಅಂ :-ರಾಹುಗ್ರಸ್ತನಾದ ಚಂದ್ರ.

ಇರುಳೆಂಬಂಬುಜಲೋಚನಂ ಚರಿಸುತುಂ ಬಾನೆಂಬರೇಪಳ್ಳಿಯೊಳ್
ವರ ಗೋಪಾಳಮನೆತ್ತುತೈತರೆ ತಮಂ ತಾನೆಂಬ ಗೋಪಸ್ತ್ರೀ ತ
ತ್ಕರದಿಂದಿಕ್ಕಲು ನೀಲದರ್ವಿಯೆಡೆಯಿಂ ಪೆರ್ವಣ್ಣೆಯಂ ತಂದವೋಲ್
ಪಿರಿದುಂ ಪೌರ್ಣಮಿಯೊಳ್ ವಿಧುಂತುದಣಲೊಳ್ ಸಿಕ್ಕಿರ್ದನಬ್ಜಾಹಿತಂ||೩೬೧||

೮) ತ :- ರಾತ್ರಿವಿಹಾರ.

ನಲ್ಲರ ಕೂಟದೊಂದು ಸವಿಯಂ ಪರಿಭಾವಿಸುತಿರ್ಪ ಕಾಂತೆಯರ್
ಬಲ್ಲಿದರಕ್ಕ ಬಂದು ಪತಿ ಸೋಂಕೆ ಮನಂ ಮರುಳಾಗಿಸೆ ಲೀಲೆಯಿಂ
ದೆಲ್ಲಿಗೆ ಪೋಪೆನೇನನೊಸೆದಾಡುವೆನೇನೆನುತಿರ್ದಪೆನೆಂಬುದಂ
ಬಲ್ಲರೆ ಕಾಮನಾಣೆ ರತಿಯಾಣೆ ವಸಂತಕನಾಣೆ ಕೇಳ್ ಸಖೀ||೩೯೪||

ತನುಲತೆ ಶೋಭೆಯಂ ತಳೆದು ನಿಲ್ವಿನೆಗಂ ಮುಖಲಕ್ಷ್ಮಿ ಪೂರ್ಣಚಂ
ದ್ರನನಿೞಿಕೆಯ್ದು ನಿಲ್ವಿನೆಗಮಾಭರಣಪ್ರಭೆಗಳ್ ಪೊರಳ್ದು ನಿ
ಲ್ವಿನೆಗಮಪಾಂಗಮಾಲಿಕೆ ವಿಜೃಂಭಿಸಿ ನಿಲ್ವಿನೆಗಂ ಮನೋಭವಂ
ನನೆಗಣೆದೊಟ್ಟು ನಿಲ್ವಿನೆಗಮೊತ್ತೆಗೆ ನಿಂದೆಳವೆಣ್ಗಳೊಪ್ಪಿದರ್ ||೪೧೦||

೮) ಥ :- ಮುಗ್ಧಭಾವ :

ಇನಿಯನಗಲ್ದು ಪೆರ್ದೆಸೆಗೆ ಪೋದೊಡೆ ಬಂಬಲುಬಾಡಿ ಚಿಂತೆಯಿಂ
ಕನಕಲತಾಂಗಿ ತನ್ನ ಶಯನಂಗಳೊಳ್ ಮಲಗಿರ್ದು ನಲ್ಲನಂ
ಕನಸಿನೊಳಪ್ಪಿಕೊಂಡು ಮುಸುಕಂ ತೆಱೆದೊಯ್ಯನೆ ನೋಡಿ ಕಾಣದಾ
ಮನೆಯೊಳಗಿರ್ಪನೆಂದು ಸೊಡರ್ವತ್ತಿಸಿ ನೋಡಿದಳೊಂದು ಜಾವಮಂ||೫೪೫||

ಇದಿರುಳು ಗ್ರಹಣ ಮಗಳೆ
ನಿಂದಿರದಿರು ಮನೆಯಮುಂದೆಯೆಲೆ ಶಶಿವದನೇ
ಚಂದಿರನಿನಗಧಿಕವೆನುತಂ
ಬಂದಡಸುಗು ರಾಹು ನಿನ್ನ ಮುಖಮಂಡಲಮಂ||೫೬೧||

ಮನದೊಳ್ ಕೂರ್ಪಾಸ್ಯದೊಳ್ ಮಾನತೆ ಬಗೆಗೊಳೆ ರೋಷಂ ಲಸದ್ವಾಕ್ಯದೊಳ್ ಗ
ರ್ಜನೆ ಚಂಚತ್ ದೃಷ್ಟಿಯಿಂದೀಕ್ಷಣೆಯೊಳನುನಯಂ ಪುರ್ಬಿನಿಂ ಜರ್ಬು ದೂತೀ
ಜನದೊಳ್ ಚಿತ್ತಾನುತಾಪಂ ಪ್ರಿಯರತಿಮುಖದೊಳ್ ಕೋಪಮೊಪ್ಪಲ್ಕೆ ಪೆಂಪಾ
ದ ನವೀನ ಪ್ರೌಡಿಯಿಂದಂ ಪ್ರಣಯಕಲಹಮಾಯ್ತೋಪನೊಳ್ ಕಾಂತೆಗಾಗಳ್ ||||೭೩||

ಉಯ್ಯಲೆ ಚಿತ್ತವೃತ್ತಿಯಱಿದಾಡುವ ವಲ್ಲಭನಲ್ಲಿಗುಯ್ಯಲೇಂ
ಉಯ್ಯಲೆ ಬೇಟಮಂ ಬೆಳಸಿ ನಲ್ಮೆಯನಾಂಟಿಪಗೀಗ ಉಯ್ಯಲೇಂ
ಉಯ್ಯಲೆ ಪುಷ್ಪಚಾಪಶರಸನ್ನಿಭನಪ್ವನಲ್ಲಿಗುಯ್ಯಲೇ
ಉಯ್ಯಲೆಂದು ತಾಂ ರಭಸದಿಂ ಸತಿ ಪಾಡುತಲುಯ್ಯಲಾಡಿದಳ್ ||೫೮೫||

೯)  ಸೂರ್ಯೋದಯವರ್ಣನಂ.

ಅಮೃತಕರಸಂಗಮಂ ಮಾ
ಡಿ ಮಗುೞ್ದೆಂತುಷ್ಣಕರಗೆ ಮೆಯ್ಯೊಡುಡವೆನೆಂ
ಬಮಳಿನ ಸುಕುಮಾರತೆಯಿಂ
ಕುಮುದಿನಿ ತಲೆವಾಗಿ ದುಗುಡಮಂ ತಳೆದಿರ್ದಳ್ ||೪||

ಒದವಿದ ಗಗನಾಂಗಣದೊಳ್
ಕೆದಱಿದ ಪೂವಲಿಯ ಕಸವನೇಂ ಕಳೆದರೊ ದಿ
ಕ್ಸುದತಿಯರೆಂಬಂದದಿನೊ
ರ್ಮೊದಲೆ ಮೀನ್ ಪರೆದು ಪೋದವರುಣೋದಯದೊಳ್ ||೭||

೯) (೧) ಶಂಖ.

ಜನಿಸಿದ ತಾಣಮೇಂ ವಾರ್ಧಿ ಸಹೋದರಿಯೆಂ ದರಿದ್ರೆಯೇಂ
ಘನತರ ಭಾಗ್ಯಲಕ್ಷ್ಮಿವೊಡಹುಟ್ಟಿದನೇಂ ಲಘುವೇ ಹಿಮಾಂಶು ಭಾ
ವನೆನಿಪನೇನು ಜಾವಳನೆಕೃಷ್ಣನುಮೆಂಬುದ ಕೇಳಿ ಮರ್ತ್ಯರೆ
ನ್ನನೆ ಮಿಗೆ ಕಚ್ಚಿ ಕೊಲ್ವರೆನುತೂಳ್ವವೊಲಾದುದು ಶಂಖನಿಸ್ವನಂ ||೧೨||

೯) (೨) ಗತಜಾರೆ.

ಮದದಲರ್ದಂಗಮುಬ್ಬುವ ನವಿರ್ ಪರಿತಪ್ಪ ಬೆಮರ್ಕೆ ಸಿಕ್ಕುಗಳ್
ಕದಲದ ಜವ್ವನಂ ಕುಱುಪನಾನದ ಬಾಯ್ದೆಱೆ ತಾಗದಾ ಪೊಯಿಲ್
ಪದಿರ್ವಡಿ ನೀಳ್ದ ಸುಯ್ ಮಿಡುಕುವಳ್ಳೆರ್ದೆ ಜರ್ವುವ ಪುರ್ವು ಚಿತ್ರದಿಂ
ದೊದವಿರೆ ಜಾತಿಜಾರೆ ನೆಱೆ ಜಾರನೊಳಿರ್ದು ಜಲಕ್ಕನೆಯ್ದಿದಳ್ ||೨೭||

೯) (೩) ಗತದೀಪ.

ಸಲೆ ಸಖನಾದೊಡಂ ಬಲವದುಳ್ಳನಿತುಂ ಹಿತವಂತನಪ್ಪನೀ
ಕಲಿಯುಗದಲ್ಲವಂ ಬಡವನಾದೊಡೆ ಬಲ್ಲೆಳೆ ಶತ್ರುವಪ್ಪುದೇ
ನೆಲೆಯಿನಿಪಂದಮಂ ಧರೆಗೆ ತೋಱುವವೋಲುದಯಾನಿಳಂ ಕರಂ
ಬಗಿದು ಗವಾಕ್ಷದೊಳ್ ಪುಗುತೆ ದೀವಿಗೆಯಂ ಕೆಡಿಸಿತ್ತು ನಂದುವೋಲ್ ||೨೮||

೯) ( ೪) ಪಡುವಣ ಚಂದ್ರ.

ಕಟ್ಟಿದ ಕುದುರೆ ದಶಂ ಬಿಳಿ
ದಷ್ಟಾದಶ ವಜ್ರಮಮಲ ನೀಲಧ್ವಜದಿಂ
ಕಟ್ಟಿರಲು ಸೂತಶಂಖನ
ಕಟ್ಟಳೆಯಿಂ ಶಶಿಯು ಕೆಡೆದನಸ್ತಂಗಿರಿಯೊಳ್ ||೪೪||

೯) (೫) ಕೋೞಿ.

ಪಕ್ಕದ್ವಂದ್ವಂಗಳಂ ಝಾಡಿಸಿಕೊರಳ ನಿಮಿರ್ದೆತ್ತಿ ಮೂಗಿಂದೆ ಗೋಣಂ
ಹಿಕ್ಕುತ್ತಂ ಬಂದು ದೇಹಾವಳಿಗಡಱಿ ದಿಶಾದೇವಿ ನೀಂ ಪೋಗುಪೋಗೀ
ಗರ್ಕಂ ಪೂರ್ವಾಚಲಕ್ಕೆಯ್ದಿದನೆನುತೆ ಚರರ್ ಸಾಱುವೊಂದಂದದಿಂದಂ
ಕುಕ್ಕೂಕೂಯೆಂಬನಾದಂ ನೆಗೞೆ ನಗರದೊಳ್ ಕೂಗಿತಾ ತಾಮ್ರಚೂಡಂ ||೫೪||

ತಲೆಯೊಳ್ ವಿದ್ರುಮಮಂ ನಿಜಾಕ್ಷಿಯುಗದೊಳ್ ಮಾಣಿಕ್ಯಮಂ ಪಕ್ಷಸಂ
ಕುಲದೊಳ್ ಪಚ್ಚೆಯನಿಂದ್ರನೀಲವನಲಂಪಿಂ ಗರ್ಭದೊಳ್ ಮೌಕ್ತಿಕಾ
ವಲಿಯಂ ವಜ್ರಮನಗ್ರಚಂಚುಪುಟದೊಳ್ ಪಾದಂಗಳೊಳ್ ಮಿಕ್ಕು ನಿ
ರ್ಮಳ ರತ್ನಂಗಳನಾವಗಂ ನೆನಯಿಸಲ್ ಸಾರ್ದಿರ್ದುವಾ ಕೋೞಿಗಳ್ ||೫೮||

೯) (೬) ವಿಕಸಿತ ಪದ್ಮ.

ತರುಣಿಯರಾಸ್ಯಕಂ ಹರಿಯನೇತ್ರಕೆ ನಾಲ್ಮೊಗನಾದ ತಾಣಕಂ
ಸಿರಿಯನಿವಾಸಕಂ ಮದನನಾರಿಯ ಬಾಣಕೆ ತಾನೆಯಾಗಿ ಸಾ
ಸಿರದಳದಿಂ ಪವಿತ್ರತರಪುಷ್ಪಮದಾದರವಿಂದಸಂಕುಳಂ
ಬಿರಿದುವು ತನ್ನ ಕಂಡ ರವಿಯೆಂತಹ ಸೈಪಿನ ರೂಪನಪ್ಪನೋ ||೬೪||

೯) (೭) ಕೋಕಕೂಟ.

ಮನಸಿಜನಂಬು ನಾಂಟಿ ಮನಮುಂ ತನುವುಂ ಮಿಗೆ ನೊಂದು ನೋ
ವಿನೊಳ್ ವನಿತೆಯರಾತ್ಮವಲ್ಲಭರನೆಯ್ದುತೆ ಕಾಣದೆ ತಮ್ಮ ನಲ್ಲರಂ
ವನರುಹಮಿತ್ರನೀಕ್ಷಣವೇ ತಂದಪನೆಂದವು ಪೂರ್ವದಿಕ್ಕಿನೊಳ್
ಜನಿಸುವ ಭಾನುಮಂಡಲಮನೀಕ್ಷಿಸುತ್ತಿರ್ದುವು ಜಕ್ಕವಕ್ಕಿಗಳ್||

೯) (೮) ಕಿರಣೋದಯ.

ಇಳೆಯಮುಸುಂಕಂ ಮೆಲ್ಲನೆ
ಕಳೆವುತ್ತೆಚ್ಚಱಿಸುತಂ ರಥಾಂಗಮನಬ್ಜಂ
ಗಳನೆವೆದೆಱೆಯಿಸುತಂ ದೆಸೆ
ಗಳನೆಬ್ಬಿಸುತೆದ್ದವಾಗಳಿನಕಿರಣಂಗಳ್ ||೮೭||

೯) ( ೯) ಮಂಡಲೋದಯ.

ಮುಗಿಯಲನುವಾಯ್ತು ನೆಯ್ದಿಲು
ಮಗಲಲ್ಕನುವಾಯ್ತು ಜಾರವನಿತೆಯರೆಲ್ಲಂ
ನಗೆಯಂ ತಾಳ್ದವು ತಾವರೆ
ಜಗಮಂ ಬೆಳಗಲ್ಕೆ ಸೂರ್ಯನುದಯಂಗೆಯ್ದಂ ||೯೪||

ಕಮಲವಿಕಾಸ ಮೂಡೆ ಮಧುಪಂಗಳ ಕಂಠದಿ ನಾದ ಮೂಡೆ ಚೆಂ
ಗುಮುದಕೆ ಚಿಂತೆ ಮೂಡೆಣೆವಕ್ಕಿಯತೆಕ್ಕೆಗೆ ಹರ್ಷ ಮೂಡೆ ಬ
ಲ್ತಿಮರಕೆ ಚಿಂತೆ ಮೂಡೆ ಕವಿತಾಜನಚಿತ್ತಕೆ ಯುಕ್ತಿ ಮೂಡೆ ಸಂ
ಭ್ರಮ ಜನಕಣ್ಗೆ ಮೂಡೆ ಉದಯಾದ್ರಿಯಮೇಲೆ ಜಗಾಕ್ಷ ಮೂಡಿದಂ ||೧೦೨||

೯) (೧೦) ಮಧ್ಯಾಹ್ನ.

ಧರೆ ಪೊತ್ತಲ್ ಸೂರ್ಯಕಾಂತಂ ಭುಗಿಲಿಡಲುಱೆ ಕಾಯ್ದಾಪಗಾವಾರಿ ಬತ್ತಲ್
ಗಿರಿಗಳ್ ಪೋೞಾಗಿ ಬೀೞಲ್ ದಿಗಿಭಸಮುದಯಂ ಗೀೞಿಡಲ್ ನೋೞ್ಪೂಡತ್ಯಾ
ಸರಮಪ್ಪ ವ್ಯೋಮಕೇಶಾಖ್ಯನ ನೊಸಲುರಿಕಣ್ಣೆಂಬವೋಲ್ ತೀವ್ರತೇಜೋ
ತ್ಕರಮಂ ಬೀಱುತ್ತೆ ಮಧ್ಯಾಹ್ನದ ಸಮಯದೊಳೊಪ್ಪಿರ್ದುದಾದಿತ್ಯಬಿಂಬಂ||೧೨೨||

೯) (೧೧) ಮೂಱುಜಾವ.

ಸುರಪತಿ ಪಶ್ಚಿಮಾಂಗನೆಗೆ ಕೂರ್ತೊಡನಟ್ಟುವ ರತ್ನದರ್ಪಣಂ
ಹರಿಪದಬಾಲಕಂ ಪಿಡಿಯುತಾಡುವ ಗುಂಜಿಯದೊಂದು ಕಂತುಕಂ
ವರುಣನ ರಾಜಧಾನಿಗೆಸೆದೊಪ್ಪುವ ಹರ್ಮ್ಯದ ಹೇಮಕುಂಭಮೆಂ
ಬುರುತರಭಾವದಿಂ ಕಿರಣಸಾಸಿರನೊಪ್ಪಿದ ಮೂಱುಜಾವದೊಳ್ ||೧೨೫||

೧೦)ಋತುವರ್ಣನಂ.
೧)ವಸಂತ ಋತುವರ್ಣನಂ.

ಶಿಶಿರದ ಪೊಸಲತೆಯಂ
ಪೊಸವಸಂತಸಮಯಪ್ರವೇಶಮಂ ತಮ್ಮೊಳ್ ಸಂ
ದಿಸಿ ಬಣ್ಣಿಸಲಱಿದಾದೊಡ
ಮೆಸೆವಾಱು ಋತುಸಂಧಿಯಂ ವೀಭಾಗಿಸಿ ಪೇೞ್ವೆಂ ||೨||

ಮುದದಿಂದಂ ಮಧುದೂತಿಯಂ ಮೊಗಮಲರ್ಚುತ್ತಂ ವಿರಾಜಪ್ಪ ಚೂ
ತದ ಮೆಯ್ಯೊಳ್ ಪುಳಕಂಗಳಂ ನೆಗಪುತುಂ ಸಾರ್ದನ್ಯಪುಷ್ಟಕ್ಕೆ ಕಂ
ಠದ ನಾದಂ ನೆಲೆವರ್ಚಿಸುತ್ತೆ ಬನಮಂ ವೈವರ್ಣಮಂ ಮಾಡುತು
ರ್ಬಿದಲಂಪಿಂದೆ ವಸಂತರಾಜನೊಸೆದೆೞ್ತಂದಂ ಜಗದ್ವಲ್ಲಭಂ ||೧೭||

ತಳಿರಂ ತಾಳ್ದಿ ಬೞಲ್ದು ಪೊತ್ತು ನೆನೆಯಂ ಪೂಗೊಂಚಲಂ ಪೇಱಿ ಬ
ಳ್ವಳನಳ್ಳಾಡುವ ಭೃಂಗ ಕೋಕಿಳಶುಕವ್ರಾತಂಗಳಿಂ ಬೞ್ಕುವೀ
ಸೆಳೆಗೊಂಬುಂ ಕೊನೆಗೊಂಬುಮೆಂತು ಫಳಭಾರಕ್ಕಾರ್ಪುವೆಂದಾಂತವೋಲ್
ಎಳಮಾವಂ ಮಲೆಯಾನಿಳಂ ಬಳಸಿಕೊಂಡಿರ್ದತ್ತು ಚೈತ್ರಾದಿಯೊಳ್||೨೩||

ಪೊಸಮಕರಂದಮೆಂಬ ಬೆಮರುಣ್ಮಿರೆ ತೆಂಬೆಲರಂಬ ಸುಯ್ಯೆಲರ್
ಪಸರಿಸಿರೆ ಗುಜ್ಜಮೆಂಬ ಮೊಲೆ ಚಪ್ಪರಿದೊಪ್ಪೆ ಸಿತಾಬ್ಜಮೆಂಬ ಕಣ್
ಮಿಸುಪ ಪರಾಗಮೆಂಬ ನಸುಗೆಂಪಿನೊಳೊಂದಿರೆ ನಾಡೆ ಕಣ್ಗೆ ಶೋ
ಭಿಸಿದಳಲಂಪಿನಿಂ ನೆರೆದು ನಂದನಲಕ್ಷ್ಮಿ ವಸಂತಕಾಂತನೊಳ್ ||೪೯||

೨) ಗ್ರೀಷ್ಮಋತು.

ಇನಿತಾನುಂ ಮೃಗತೃಷ್ಣೆಯಂ ಪಡೆಯುತುಂ ದಿಗ್ಭಾಗದೊಳ್ ತಳ್ತ ಕಾ
ನನದೊಳ್ ಬೇಗೆಯನಿಕ್ಕುತುಂ ಕದಡುತುಂ ನೀರ್ದಾಣಮಾದಂತುಟಂ
ಬಿನದಂ ತಪ್ಪೆಡೆಯೊಳ್ ತೆರಳ್ಚಿ ತೊವಲಂ ತಂದಿಕ್ಕುತುಂ ಬೇಂಟೆಗಾ
ಱನವೋಲ್ ಬೇಸಗೆ ಬಂದು ಪೊಕ್ಕು ಕವಿದತ್ತೆತ್ತಂ ಮಹೀಭಾಗಮಂ ||೫೭||

ಪಾಱುವ ಪಕ್ಕಿ ಕೋಡ ಗಱಿ ಸೀಯದೆವಿಲ್ಲೆಲೆಯಿರ್ದ ಪೆರ್ಮ
ತಾಱದವಿಲ್ಲರಣ್ಯಮೃಗಯಾಧದ ಬೆನ್ ಪುಣಿಚೆರ್ದುಬಾಯ್ಗಳಿ
ರ್ಪಾಱದವಿಲ್ಲ ಬಿೞ್ದೊಡೆದು ಪಾಱದವಿಲ್ಲ ಪಯೋಧಿ ತಾಯ್ಮಣಲ್
ತೋರದವಿಲ್ಲದೇಂ ಪ್ರಳಯಕಾಲಮೊ ತೀವ್ರ ನಿದಾಘಕಾಲಮೋ||೬೭||

ವನಮೃಗರಾಜಿಗಳ್ ತೃಷೆಯ ಕೋಟಲೆಯಿಂ ವನಮಂ ತೊೞ
ಲ್ದಿನ ಕಿರಣಂಗಳಿಂ ಕೆಡೆದು ಚೇಷ್ಟಿಸೆ ಕಂಡು ಮರೀಚಿಕಾಜಲ
ಕ್ಕನುನಯದಿಂ ಪರಂಪರಿದು ಲಂಘಿಸುತುಂ ಮೆಗೆ ಮೆಯ್ಯ ತಾರುತ
ಟ್ಟಿಸಲಸುವಿಂದಗಲ್ದುದಿನಿತಿಲ್ಲ ದುರಾಸೆಯೊಳಾರೊ ಬೀೞದರ್ ||೮೫||

ಕೆಱೆನೀರ್ ತವುತರೆ ಬಱು
ಗೆಱೆಯಾದುವು ತೊಱೆಗಳುರ್ಕುಗೆಟ್ಟಱತು ಬಯ
ಲ್ದೊಱೆಯಾದುವು ಬಾಂದೊಱೆ ಬಿಸು
ದೊಱೆಯಾದುದು ಕಾಲವಶವದೇನಾಗಿಸದೋ||೧೧೧||

೩) ವರ್ಷಋತು.

ಒಟ್ಟಿದ ವಾರಿದೇರುಗಳವೋಲ್ ಕೆಲವೊಪ್ಪಿರೆ ದೂರಭಾಗದೊಳ್
ಕಟ್ಟಿದ ಗಂಧವಾರಣದವೋಲ್ ಕೆಲವೊಪ್ಪಿರೆ ತಳ್ತ ಕರ್ಪೊಡಂ
ಬಟ್ಟೆಸೆದೆತ್ತಿದೋಳಿಗುಡಿವೋಲ್ ಕೆಲವೊಪ್ಪಿರೆ ನೀರದಂಗಳೊಂ
ದಿಟ್ಟಳಮೊಪ್ಪಿದತ್ತು ಮೞೆಗಾಲದ ಬೀಡಿನವೋಲ್ ನಭಸ್ಥಳಂ||೧೩೦||

ಧಾರೆಗಳವನಿಯನೊಳಪೊ
ಕ್ಕೋರಂತುಚ್ಚಳಿಸಿ ಬೀೞುತಿರೆ ನಭದೊಳ್ ಭೋ
ರ್ಭೋರೆನುತಿರುಳುಂ ಪಗಲುಂ
ಜೋರೆನುತುಂ ತೆಱಪುಗುಡದೆ ಕಱೆದುವು ಮೞೆಗಳ್ ||೧೮೪||

ಜಂಭಾರಿಯೆ ಮೇಘದೊಳಂ
ಕುಂಭಿನಿಯಂ ಸಲಹಲೆಂದು ಗಗನದಿನಿೞಿಯಲ್
ಕುಂಭೀನಸಗಳ ಬಿಟ್ಟೊಲ್
ಕುಂಭದ್ರೋಣಂಗಳಾಗಿ ಸುರಿದುವು ಮೞೆಗಳ್ ||೨೦೦||

ಉಗುೞುತ್ತುಂ ಸಿಡಿಲೆಂಬ ತೋರಗಿಡಿಯಂ ಕಾಲೂಱಿ ಭೂಭಾಗಗದೊಳ್
ಗಗನಾಭೋಗಮನೆಯ್ದಿ ನೀಳ್ದ ಘನವೇಣೀಬಂಧನಂಗೆಯ್ದುಮಿಂ
ಚುಗಳೆಂಬಳ್ಕುವ ದಾಡೆಗಳ್ ಪೊಳೆಯೆ ಚಂದ್ರಾದಿತ್ಯರಂ ನುಂಗಿ ಬೇ
ಸಗೆಯಂ ಬೆರ್ಚಿಸಿ ಘರ್ಜಿಸುತ್ತಮೊಗೆದಂ ಕಾರೆಂಬ ಕಾಳಾಸುರಂ ||೨೧೦||

೪) ಶರದೃತು ವರ್ಣನೆ.
ಜನವನುರಾಗವೇಱಿ ಪೊರಮಟ್ಟು ಕೃಷಿವ್ಯವಸಾಯವೃಂದಮಂ
ಮನದೊಲವಿಂದೆ ಮಾಡುತಿದೆ ಕೋಟರದಿಂ ನೆಗೆತಂದು ಪಕ್ಕಿಗಳ್
ಕೊನೆದಳಿರ್ಗೊಂಬಿನೊಳ್ ಬಿಸಿಲನಾಂತಿವೆ ಹಂಸಕುಳಂ ಬನಂಗಳಿಂ
ದನುವಿಸಿ ಕೂಡೆ ಪೊಣ್ಮುತಿವೆ ಪಾರ್ವತಿ ನೋಡು ಶರದ್ವಿಲಾಸಮಂ ||೨೧೮||

ಅರಗಿಳಿಯ ಹಿಂಡು ಬಂದುಗೆ
ಯರಲಂದದ ಚಂಚುವಿಂದೆ ಕೞಮೆಯ ತೆನೆಯಂ
ಬರೆಕರ್ಚಿ ನೆಗೆದು ಪಾರ್ದವು
ಶರದಂ ಪುಗೆ ಪಾಱಿಪೋಪ ಸುರಚಾಪದವೊಲ್||೨೪೬||

೫) ಹೇಮಂತ ವರ್ಣನೆ.

ಉಂಡ ಕೊರ್ಬಿಂದೆ ನೋಡಾ
ಕೆಂಡಕೆ ನೊಣವೆಱಗಬಲ್ಲುದೆಂಬರಮಾತಂ
ಖಂಡಿಸುವಂತಾ ನೊಣಗಳ್
ಕೆಂಡಮನಾಖಂಡಮೆಂದು ಸಾರ್ದುವು ಹಿಮದೊಳ್ ||೨೨೫೯||

ಹಿಮಕಂಜಿ ಮುಗ್ಧಕಪಿಗಳ್
ತಮತಮಗೆಯ್ತಂದು ಮುತ್ತದಲರಂ ಕಿಚ್ಚೆಂ
ದಮಮ ಬಱಿಗಾಲುಷ್ಣಂ
ಸಮನಿಸದಿರೆ ನಾಚಿ ಹೊೞಲಮಱೆಯಂ ಸಾರ್ಗುಂ ||೨೬೪||

ಉಱೆ ಶೀತಂ ಪತ್ತಿದೊಡಿರ
ಲಱಿಯದೆ ಜೀವಂ ಬಿಗುರ್ತು ಜಠರಾಗ್ನಿಯನೆ
ಚ್ಚಱಿಸೆ ಹೊಗೆಯುಸುರಪಥದಿಂ
ಪೊರಮಡುವುದು ಜನದ ಮುಖದೊಳಲ್ಲದೊಡುಂಟೇ||೨೭೬||

೬)ಶಿಶಿರ ಋತುವರ್ಣನೆ.

ಒದವೆ ರಸಂ ವನಾಮಳಕಸಂತತಿ ಕೋಮಳಮಾದುದೆತ್ತಲುಂ  
ಬದರಿಫಲಾಳಿಯಿಂದಧರಮಾದುದು ಕಂಜವನಾಳಿ ನಂಜು ಮು
ಟ್ಟಿದ ತೆಱನಾಯ್ತು ವುತ್ಪಲಕದಂಬ ಕದಂಬಕ ಹರ್ಷಕಾರಿಯಾ
ದುದು ಹಿಮಕಾಲವೀ ಶಿಶಿರಾಗಮವಾದ ಬೆಡಂಗಿದೆಂಬಿನಂ||೩೦೦||

ಮೃಗಸಂತತಿಯಂ ಕೊಳರ್ವ
ಕ್ಕಿಗಳಂ ಪಕ್ಷಿಗಳನದ್ರಿತಟದೊಳ್ ಕೊಳದೊ
ತ್ತುಗಳೊಳ್ ಮಿಗೆ ಕೋಟರದೊಳ್
ಪುಗಿಸುತ್ತುಂ ಬಂದನಮಮ ಶಿಶಿರನೃಪಾಲಂ ||೩೧೨||

೧೧) ವನವಿಹಾರ ವರ್ಣನ.

ವನಪಾಲರ್ ಪೇೞ್ವ ಭೂಪರ್ ತರುಣಿಯರೊಡನಾನಂದದಿಂದೆಯ್ದೆ ಪೋಪಾ
ಬನದೊಳ್ ಪೂಗೊಯ್ವ ಪೂವಿಂ ತುಡುಗೆಯನೊಲವಿಂ ಮಾೞ್ಪ ತೂಗುಯ್ಯಲಂ ಮಾ
ವಿನೊಳಾಡುತಿರ್ಪ ಬೆಟ್ಟೇರುವ ಮರನಡರ್ವಾ ಕಾವಣಕ್ಕೋಪ ತಂತಿಂ
ಮ್ಮಿನಿಯರ್ ಸಯ್ತುಂಬುದುಂ ವರ್ಣಿಸುಗೆ ಕವಿ ವನಕ್ರೀಡೆಯೊಳ್ ನಾಡೆ ರಮ್ಯಂ ||೧||

ತೆಗೆವುತ್ತಂ ಮೇಲುದಂ ಪೆರ್ಮೊಲೆಗೆ ಪರಿಚಯಂ ಹಸ್ತದಿಂದೊತ್ತುತಂ ಹಸಾ
ವಗಿಸುತ್ತಂ ಜೋಲ್ವ ಧಮ್ಮಿಲ್ಲಮನಳವಡಿಸುತ್ತಂ ಕುರುಳ್ದೊಂಗಲಂ ನೀ
ವಿಗೆ ಕಾಂಚೀಧಾಮಮಂ ಹಸಾರ್ಚುತಬಲೆಯರೋರೊರ್ವರೊಂದೊಂದು ಪಾಂಗಿ
ಬಗೆಗೊಂಡೇೞ್ವನ್ನೆಗಂ ತನ್ನೊಡನೆ ನೃಪ ವನಕ್ರೀಡೆಗೆಂದೆದ್ದನಾಗಳ್ ||೧೨||

ಸ್ಮರಕೃತಕಾಚಲಶಿಖರಾಂ
ತರಲತೆ ಮೇಲ್ವಾಯ್ದುವೊಂದು ಸೋಗೆಯ ಬಿಣ್ಪಿಂ
ಧರೆಗೆಱುಗುವಂತದೊರ್ವಳ್
ವರವಧು ಬಿಡುಮುಡಿಯನೆಸೆದು ಪಿಡಿಯಿಂದಿಳಿದಳ್ ||೨೧||

ನಡೆಗೊಳಲಂಚೆ ನುಣ್ಗುರುಳೊಳಾಱಡಿ ತೋಳ್ಗಳೊಳಳ್ಳೆಗೊಂಬು ಸೋ
ರ್ಮುಡಿಗಳೊಳೆಯ್ದೆ ಸೋಗೆ ಪೊಸಪೆರ್ಮೊಲೆಯೊಳ್ ಫಪೊಣರ್ವಕ್ಕಿ ನಿಚ್ಚಲುಂ
ಕಡುಮುಳಿಯುತ್ತಮಿರ್ಪವನೆ ಮೇಲೊಳಕೊಂಡೆವೆನುತ್ತ ಕಾಯ್ದು ಧಾ
ಳಿಡುವವೊಲಾ ವನಕ್ಕೆ ನಡೆತಂದುದು ಪೆಂಡಿರ ತಂಡವೇೞ್ಗೆಯಿಂ ||೩೦||

ನಱುಸುಯ್ಗೆ ತುಂಬಿಗಳ್ ಬಂ
ದೆಱಗೆ ಕರಾಂಬುಜದಿ ಕಮಳಮುಖಿ ಸೋವುತ್ತಂ
ಮಿಱುಗುವ ನೀಲದ ಬಟ್ಟಿನ
ತಿಱಿಕಲ್ಗಳನಾಡುವಂತೆ ಸತಿ ಸೊಗಯಿಸಿದಳ್ ||೪೯||

ಪುಳಿನತಮಾಲಪಲ್ಲವದ ಕೋಮಳ ಶಾಖೆಯ ಚೆಲ್ವನೆಯ್ದೆ ಗೆ
ಲ್ದಲಘುಕಟೀತಟಂಗಳರುಣಾಂಘ್ರಿತಳಂಗಳ ದೋರ್ಲತಾಯುಗಂ
ಗಳ ಜಯತೂರ್ಯನಾದಮನೆ ಕಾಂಚಿಯ ಮೆಲ್ಲುಲಿಗೆಜ್ಜೆಯಿಂಚರಂ
ವಳಯದ ನುಣ್ಚರಂ ನೆಗೞೆ ನಂದನದೊಳ್ ಸುೞಿದರ್ ಲತಾಂಗಿಯರ್ ||೭೧||

ಕಚಬಂಧಂ ಬಿಡುವಂತು ನೀವಿ ಶಿಥಿಲತ್ವಂಬೆತ್ತು ನೀಲಾಳಕ
ಪ್ರಚಯಂ ಸೂಸೆ ಲತಾಂಗಲೇಖೆ ಬೆಮರಂ ತಾಳ್ದಿರ್ದ ಚೆಲ್ವಂಶುಕಂ
ಕುಚದೊತ್ತಿಂ ನಸುಜೋಲ್ದು ಕಂಗೆಸೆಯೆ ಬಂದರ್ ಮೂರ್ತಿಶೋಭಾಭರ
ಪ್ರಚಯಸ್ವಾಂತೆಯರಾದವೋಲ್ ವನವಿಹಾರಶ್ರಾಂತೆಯರ್ ಕಾಂತೆಯರ್ ||೮೬||

ನವಹಾರಂ ನೇವುರಂ ಮೇಖಲೆ ಪೊಸಕಡಗಂ ಜೂಳಿಯಂ ಸೂಸಕಂ ಚೆ
ಲ್ವವತಂಸಂ ಜಂಘೆಯುಂ ಮೂಗುತಿ ಚಳಕಿಗೆ ತೋಳ್ಬಂದಿ ಮಿಂಚೋಲೆ ಕಪ್ಪೊ
ಪ್ಪುವಿನ ಗ್ರೈವೇಯಕಂ ಪೊಂಜಱಿಗೆಯೆನಿಪಿದಂ ಮಾಡಿ ಚೆಲ್ವೆತ್ತು ನಾನಾ
ಯುವತೀ ಸಂತಾನಕಂ ಸಿಂಗರಿಸೆ ಪದಪಿನಿಂ ಕಾಂತೆ ಕಣ್ಗೆಡ್ಡಮಾದಳ್ ||೯೬||

೧೨) ಜಲಕ್ರೀಡಾವರ್ಣನಂ.

ಮರುಗದ ಚಂಡು ಮಲ್ಲಿಗೆಯ ದಂಡೆ ಕುರಂಗದ ಕರ್ಣಪೂರವಂ
ಬುರುಹದ ನೀಳಕಂಚುಳಿಕೆ ಪಾದರಿಯಂದುಗೆ ಕುಂದಕುಟ್ಮಳೋ
ತ್ಕರದ ತುರುಂಬು ಕರ್ಪುರದ ಮೂಗುತಿ ಚಂದನವಾರಿ ತಂಪುವ
ಚ್ಚರಿವಡೆದೊಪ್ಪಲಂದು ಜಲಕೇಳಿಗೆ ಬಂದುದು ಕಾಮಿನೀಜನಂ ||೨||

ಮೃದುತರ ಶಾಲಿಯುತ್ತಮದ ವಸ್ತ್ರಮನುಟ್ಟು ಸುಕೇಶಭಾವಮಂ
ಮುದಮುಗೆ ವೇಣಿಯಂ ಬಲಿದು ಕತ್ತುರಿಮಿಶ್ರಿತಗಂಧಸಾರಮಂ
ಸದಮಲಮಪ್ಪ ಮೆಯ್ದೊರೆಯದೊಯ್ಯನೆಯೊರ್ವರನೋರ್ವರೀಕ್ಷಿಸು
ತ್ತೊದವಿದ ರಾಗದಿಂ ಕೊಳನ ಪೊಕ್ಕರು ಚಾಪಲ ಚಾರುನೇತ್ರೆಯರ್ ||೧೩||

ನಿಱಿಯಂ ಸೂಸಿ ಕಲಂಕಿ ನುಣ್ದೊಡೆಗಳೊಳ್ ಕೈಯಿಕ್ಕಿ ಮೆಯ್ವೆರ್ಚುತಂ
ಪೊಱವಾಱಂ ಪರಿದೇಱಿ ಪೊಕ್ಕು ಪೊಕ್ಕೞೊಳಪೊಕ್ತೆಯ್ತಂದು ಸವ್ಯಾನಮಂ
ತೆಱೆದುತ್ತುಂಗ ಕುಚಾಗ್ರಮಂ ತುಡುಕಿ ಗಾಡಾಲಿಂಗನಂಗೆಯ್ದು ಕೈ
ಸೆಱೆಗೊಂಡತ್ತು ತರಂಗಸಂಹತಿ ವಿಟಾಂಗಂಬೊಲ್ ಜಲಕ್ರೀಡೆಯೊಳ್ ||೧೯||

ಓರೋರ್ವರೊಳೋರೊರ್ವರ್
ವಾರಿಗಳಂ ಚೆಲ್ಲುವಲ್ಲಿ ಜಲದೇವತೆಯರ್
ಕಾರೊಳಗಾಡುವವೋಲಿರೆ
ಹಾರೈಸುತೆ ನಲಿವುತ್ತಾಡಿದರೋಕುಳಿಯಂ ||೨೫||

ತುಳ್ಕೆ ದರಸ್ಮಿತಂ ವದನದಿಂದನುರಾಗರಸಂ ಕಟಾಕ್ಷದಿಂದಂ
ತುಳ್ಕೆ ಕುಚಾಗ್ರದಿಂ ತುಳುಕೆ ಹಾರಮರೀಚಿ ಲತಾಂಗಲೇಖೆಯಿಂ
ತುಳ್ಕೆ ವಿಳಾಸವಂಗಜನ ಬಾಳ ಪೊಗರ್ ನಿಜಬಾಹುದಂಡದಿಂ
ತುಳ್ಕೆ ತುಳುಂಕಿದಳ್ ಹರಿಯಮೇಲೆ ಪೆಱಳ್ ತರಳಾಕ್ಷಿ ತೋಯಮಂ ||೫೩||

ಮೃಗಲೋಚನೆಯರ್ ಸಲಿಲಾ
ವಗಾಹಮಂ ಮಾಣ್ದು ಪೊಱಗೆ ನಿಲೆ ಕೞ್ತಲೆ ತಾ
ರಗೆಯನುಗುೞ್ದಪುದೆಂಬಿನ
ಮೊಗೆತಂದುವು ಸಲಿಲಬಿಂದುಗಳ್ ಸೋರ್ಮುಡಿಯೊಳ್ ||೮೨||

ಘುಸೃಣರಸಾವಗಾಹಭರಮಂ ರದನಚ್ಛದರಾಗಭೋಗವಾ
ಗಿಸೆ ಘನಸಾರಚಂದನಜಳಪ್ಲವಮಂ ದರಹಾಸಕಾಂತಿಗಳ್
ಪಸರಿಸೆ ಮನ್ಮಥೋತ್ಸವರಸಾಮೃತದೊಳ್ ಮುೞುಗಾಡಿ ಮೂಡಿ ಸಂ
ದಿಸೆ ಪುಳಕಂ ನೋಪಂ ಮೆಱೆದನಂಗನೆಯೊಳ್ ಜಲಕೇಳಿಲೀಲೆಯಂ ||೮೮||

ತರಳವಿಲೋಚನದ್ಯುತಿ ದರಸ್ಮಿತಕಾಂತಿ ನವೀನಮೌಕ್ತಿಕಾ
ಭರಣಮರೀಚಿ ಕಂಗೊಳಿಸೆ ಮಂಗಳಲಕ್ಷ್ಮಿಯ ಮೇಳದಾಕೆಯರ್
ನೆರೆದವೊಲಾಗಳಂತವುರದಂಗನೆಯರ್ ನಡತಂದು ಬಾಹುವ
ಲ್ಲರಿ ಕುಡೆ ದೇಸೆಯಂ ತ್ರಿಭುವನಪ್ರಭುಗಿಕ್ಕಿದರೊಲ್ದು ಸೇಸೆಯಂ ||೯೫||

೧೩) ಮಧುಪಾನವರ್ಣನಂ.

ಮನಮನೊಱಲ್ಚೆ ನೂಪುರದ ಮೆಲ್ಲುಲಿ ಕಾಂಚಿಯ ಮಂಜುಳಸ್ವನಂ
ತನಗಿನಿದೀಯೆ ಕಂಕಣಝಣತ್ಕೃತಮೊಪ್ಪಿರೆ ತೋರಹಾರಮೊ
ಯ್ಯನೆ ಮೊಲೆಯಂ ಪಳಂಚಲೆಯೆ ರಾಗರಸಂ ಕರಗಣ್ಮೆ ವಾರಕಾ
ಮಿನಿ ನಯದಿಂ ಕರಂ ನಲಿದು ನರ್ತಿಸಿದಳ್ ಮಧುಪಾನಗೋಷ್ಠಿಯೊಳ್ ||೮||

ಕಡುಹುಳಿಗಳ್ಳದೊಂದುವರೆವಟ್ಟಲನಿಟ್ಟಿಣೆಯಲ್ಕೆ ಮೂಱುಸೂೞ್
ಮಿಡಿಮಿಡಿದರ್ಧಮಂ ಕುಡಿದು ಚಪ್ಪಱಿದಿಕ್ಕಿದ ಸಣ್ಣಮೀನ್ಗಳಂ
ಮಿಡಿಗಳವಂ ಕುಱುಂಕಿ ಮುಗುಳೊಟ್ಟಲು ಡಱ್ಱನೆ ತೇಗಿ ಬಾೞ್ಗೆಯೆ
ನ್ನೊಡಯನೆನುತ್ತದೇಂ ಮೆಱಿದರೋ ಸುಖಿಗಳ್ ಮಧುಪಾನಕೋವಿದರ್||೧೨||

ಆರಿವರುಟ್ಟ ಹೂವೆಲೆಗೆ ನಿನ್ನಯ ಬಾಯದು ನಮ್ಮ ತಮ್ಮನಾ
ದಾರಿಯೊಳಿರ್ದ ಚಪ್ಪರದ ಮೇಲೊಗೆತಂದನುಯಿಂದ ನಾಳೆ ಕೇ
ಳಾರಿಯರಮ್ಮ ಕಟ್ಟಿದಳು ಹೆಬ್ಬುಲಿಯಂ ಕರೆಯಲ್ಕೆ ನೊಂದು ಹೆ
ಮ್ಮಾರಿಯೆ ಬಲ್ಲುದೆಂದೆನುತಲೊರ್ವಳು ಸೊರ್ಕಿಯೆ ನೃತ್ಯವಾಡಿದಳ್||೨೧||

೧೪) ಸುರತಕ್ರೀಡೆ.

ಹಾರಮನೊಯ್ಯನೋಸರಿಸುವಂತೆ ಕುಚಂಗಳ ಮೇಲೆ ನಾಂಟಿಪಂ
ಕೂರುಗುರಿಂದೆ ಮತ್ತೆ ಪಣೆಗತ್ತುರಿಬೊಟ್ಟು ಕಲಂಕಿತೆಂದು ತಾ
ನೋರೆಯನೊಮ್ಮೆ ತಿದ್ದುವವೊಲೊಯ್ಯನೆ ಚುಂಬಿಪನಕ್ಕ ನೋಡೆ ಚಿ
ತ್ತಾರಮನೆಲ್ಲಿ ಕಲ್ತನೆ ಮನೋವರ ಸತ್ಕವಿ ಕಾಮಭೂವರಂ||೪||

ಪೊಸಸುಸಿಲ್ ನೃಪಾತ್ಮಜೆ ವಿದಗ್ಧೆಯವೊಲ್ ಪ್ರಿಯನೊಲ್ದು ಮೇಳಿಪೊಂ
ದೆಸಕದೆ ನಾಣನೊಕ್ಕು ಗತಭೀತಿಯಿನಪ್ಪುವ ಲಲ್ಲೆಗೆಯ್ವ ಚುಂ
ಬಿಸುವ ಮರಳ್ವ ಮೈಗೊಡುವ ಮೆಯ್ಮಱೆವಕ್ಕಱುಮಾಸೆಗೆಯ್ವುತಿ
ರ್ಪಸಿಯಳದೇಂ ಮನಂಬಡೆದಳೋ ಚದುರಿಂ ಮುದದಿಂದೆ ಭೂಪನಾ ||೧೮||

ಮನವರಳೆ ಮುಖವರಳೆ ಲೋ
ಚನವರಳೆ ಕಪೋಲವರಳೆ ಕಂಠವರಳೆ ಸು
ಯ್ಯನುವರಳೆ ತನುವರಳೆ ಮಿ
ಕ್ಕನುಭವಸುಖವರಳೆ ಸುರತಸುಖದಿಂದಿರ್ದರ್ ||೩೪||

ಬೆಮರ್ಗಳನೂದಿ ನುಣ್ದೊಡೆಗಳಂ ಪಿಡಿದೌಂಕಿ ಬೆರಲ್ಗಳೆಲ್ಲಮಂ
ಕ್ರಮದೊಳೆ ಕೋದು ತಳ್ತು ಚಿಟುಕಿತ್ತು ತೊಡಂಕಿದ ಕುಂತಳಂಗಳಂ
ಸಮುದಯಮೊಪ್ಪೆ ನೀವಿ ರಸದಂಬುಲಮಂ ಸವಿಮಾಡಿ ನೀವಿ ಮೇ
ಲಮರಿ ಬೞಲ್ದ ತನ್ನಿನಿಯಳಂ ನೃಪನಾರಿಸಿದಂ ರತಾಂತದೊಳ್ ||೯೭||

೧೫) ವಿಪ್ರಲಂಭವರ್ಣನಂ.

ಸ್ಮರವಶದಿನನ್ಯ ಜನ್ಮಾಂ
ತರಕೋತಸಂಸ್ಕಾರದಿಂ ವಿಭೋಗಸ್ಪೃಹೆಯಿಂ
ವರಚಾತುರ್ಯ ಕಳಾಗಮ
ಪರಿಣತಿಯಿಂ ಸ್ನೇಹ ಪ್ರೀತಿಗಳ್ ಸಂಭವಿಕುಂ ||೨||

೧) ಪೂರ್ವಾನುರಾಗಂ.

ಇನಿಯಂ ಪ್ರಾಣಮಗಲ್ದುಪೋಪ ತೆಱದಿಂದೆನ್ನಿಂದಗಲ್ದಿರ್ದನಾ
ತನಪೋಗಿಂಗೆನಗಕ್ಕ ನೋವಿನಿಸುಮಿಲ್ಲೇಕೆಂದೊಡೊಂದುಂಟು ನ
ಲ್ಲನ ಚಿತ್ತಂ ಪೆಱಪಿಂಗೆ ಪಿಂಗದೆ ತಗುಳ್ದೋರಂತೆ ನಿಷ್ಕಾರಣಂ
ನೆನೆವೀ ಚಿತ್ತದ ಮಾಯ್ದ ನಾಣಿಲಿತನಕ್ಕಾಂ ನೋಂತೆನಬ್ಜಾನನೇ ||೫||

೨) ಮಾನಾಖ್ಯೆ.

ಪ್ರಿಯೆಯೊಡನಾದ ಕೂಟದೊಳಗಲ್ಕೆಯೊಳಾರಯೆ ಕೂಟದಿಂದಗ
ಲ್ಕೆಯೆ ಕರಮೊಳ್ಳಿತೆನ್ನಬಗೆಗೆಂತೆನೆ ನೆಟ್ಟನೆ ನೋೞ್ಪೊಡಂತೆ ಮ
ತ್ಪ್ರಿಯೆಯನೆ ಕಾಣ್ಪೆನೊರ್ವಳನೆ ಭಾವಿಪೊಡೀಗ ಕಣ್ಗೆ ತ
ನ್ಮಯಮೆನಗೀ ಜಗತ್ರಿತಯಮೆಲ್ಲಮಗಲ್ಕೆಯೊಳೆನ್ನನಲ್ಲಳಾ ||೬||

೩) ಪ್ರವಾಸಂ.

ಕೆಳದೀ ಕೀರಾಳಿಗಳ್ ಕೈಯೆಡೆ ನಿನಗೊಡಲಂ ತಾಳಲಾರ್ತಪ್ಪೆನಿಲ್ಲೀ
ಗಳಿವೊಂದಂ ಬೇಡ ಕಾಂತಂ ತಳರ್ದನೆನಗಿರಲ್ ತಕ್ಕುದಲ್ಲೆಂದು ಕೈಗೆ
ಯ್ಯೆಳೆಯಳ್ ತನ್ನಂ ಪರಿಚ್ಛೇದಿಸಿ ಬಗೆಯದೆ ಬಂದುಣ್ಮಿ ಪರ್ವಿದ ಬೆಳ್ದಿಂ
ಗಳ ಕೋಳ್ಗಂ ತಂಬೆಲರ್ಗಂ ಪ್ರಿಯ ಶರಣೆನುತುಂ ಸಾರ್ಚಿದಳ್ ಮೆಯ್ಯನೊರ್ವಳ್ ||೯||

೪) ಕರುಣಾತ್ಮಕಂ.

ನೋಟಂ ಚಿಂತೆ ಸುಯಿಲ್ ಜಱ
ದೂಟಂ ಬಿಡುವಂಗ ಬಡವು ವಿಕಳಂ ಮೌನಂ
ನಾಂಟಿಸಿದ ಮೂರ್ಛೆ ಪರಣಂ
ದಾಂಟಲ್ಕಂ ಪತ್ತವಸ್ಥೆಗಳ್ ಸೊಗಯಿಸುಗುಂ ||೧೧||

೫) ಸಂತಾಪ.

ಇಂಬಱಿದು ನುಡಿವ ನುಡಿಯುಮೊ
ಡಂಬಡಿಪೆನಿಸಿದ ವಿಲಾಸಮಂ ವರರೂಪಾ
ಡಂಬರಮುಮಾರ ಬಗೆಯಂ
ನಂಬಿಸಿ ಪತ್ತಿಸವೆ ಚತುರಚತುರಾನನಾ||೨೦||

೬) ಚಿಂತೆ.

ಆಲೇಪನ ಕಜ್ಜಲ ತಾಂ
ಬೂಲಂ ಸ್ರಗ್ಭೂಷಣಾದಿ ವಿಭವಂಗಳನಾ
ಬಾಲೆ ಸಖೀಪ್ರಾರ್ಥನೆಯೊಳ್
ಮೇಳಿಸಿ ನಿನ್ನನೆ ಪಲುಂಬಿ ಪಂಬಲಿಸಿದಪಳ್ ||೨೨||

೭) ಕ್ರಿಯಾದ್ವೇಷಂ.

ಬಗೆಯದೆ ತಾಯಂ ತಂದೆಯ
ಮೊಗಕಂಜದೆ ಬಂಧುವರ್ಗಮಂ ಮೀಱಿ ಕೆಲ
ಕ್ಕಗಿಯದೆ ನಿನ್ನೊಳ್ ನೆರೆಯಲ್
ಮೃಗಶಾಬೇಕ್ಷಣೆ ತಗುಳ್ದು ಪಂಬಲಿಸಿದಪಳ್ ||೨೩||

೮) ಅಭಿಮಾನಚ್ಯುತಿ.

ಕಳವಳಿಸಿದಪಳ್ ಬಾಯೞಿ
ದೆಳಸಿದಪಳ್ ಬೀದಿಬೀದಿಯೊಳ್ ನಿನ್ನಂ ಕೋ
ಮಳೆ ಪಿಡಿಯಲೆಂದು ಸಾರ್ದಳ
ವಳಿಸಿದಪಳವಳ್ಗೆ ನೀನೆ ಕರುಣಿಸವೇಳ್ಕು ||೨೪||

೯) ಮರಣಾವಸ್ಥೆ.

ಅನವರತಮೆಸುವ ಕಾವನ
ನನೆಯ ಸರಲ್ ಸವೆಯೆ ಸವೆಯದಾಕೆಯ ಪದ್ಮಾ
ನನದಿನೆಡೆಗುಡದೆ ಪೊಣ್ಮುವ
ಘನಸಾರಾಮೋದಮುಖ್ಯ ಮಂದಶ್ವಾಸಂ ೨೫||

೧೦) ಮರಣ.

ತಳಿರ್ಗೊಂಬಂ ಬಲಗೊಂಡು ಚಂದ್ರಬಲಮಂ ಕೈಕೊಂಡು ತೆಂಗಾಳಿಯಂ
ಕೆಳೆಗೊಂಡಾಮ್ರಮನೊತ್ತುಗೊಂಡು ಮಧುವಂ ಮುಂದಿಟ್ಟು ಪುಷ್ಪಾಸ್ತ್ರಸಂ
ಕುಳಮಂ ತೀವಿರೆ ತೊಟ್ಟು ನಲ್ಲರೞಿವಂ ಪಾರ್ದೆಚ್ಚನಿಂತೀಗಳೀ
ಖಳನೀ ಪಾತಕನೀ ಬಹುವ್ಯಸನನೀ ಚಂಡಾಲನೀ ಮನ್ಮಥಂ ||೨೬||

೧೧) ಮನ್ಮಥಾಗಮನ.

ಅಳಿಗಳ್ ಸೇನಾಬ್ಧಿ ಮಂದಾನಿಲಪತಿ ನಡೆವಾ ರಾಜಹಂಸಾಳಿಯಶ್ವಾ
ವಳಿಗಳ್ ಮಾಕಂದ ದಂತಿವ್ರಜರಥತತಿಯಂತಾ ರಥಾಂಗಂಗಳುಂ ಕೋ
ಕಿಳನಾದಂ ನಾಸ್ವನಂ ಪಾಠಕರುಲಿ ಶುಕಾನೀಕಮುಂ ರಾಜಮಿತ್ರಂ
ಚೆಲುವಿಂ ಪಿಂದೈದಲುಂ ಭೂಪತಿರತಿಪತಿಯೆೞ್ತಂದನಂತಾ ಜನಕ್ಕಂ ||೪೧||

ಮಡದಿಯರ ಮೆಯ್ಯ ಕಂಪುಂ
ಕಡುಮೆಱೆವಿನಮಿಟ್ಟ ಕತ್ತುರಿಯ ಪೊಸಗಂಪಂ
ಮುಡಿಯಲರ್ಗಳ ನಱುಗಂಪುಂ
ಗಡಣಿಸಿ ಕಡೆಗೋಡಿವರಿದುವೊಡ್ಡೋಲಗದೊಳ್ ||೪೮||

೧೨) ವಿರಹ.

ಪದೆದನುತಾಪದಿಂ ತನು ಬೆಳರ್ತುದು ನಾಣಭರಂ ತೆರಳ್ಚಿ ಪೊ
ಣ್ಮಿದ ಘನಘರ್ಮವಾರಿ ತೊಱೆಯಾದುದು ಚಿತ್ತದ ಕೂಟದಿಂದೆ ಬ
ತ್ತಿದುದು ಬೆಡಂಗುವೆತ್ತ ಬೆಳರ್ವಾಯ್ದೆರೆ ಕನ್ನೆಯ ನಲ್ಮೆ ಮಾಗಿಯಾ
ದುದು ಮೞೆಗಾಲಮಾದುದದಱೆ ಬೇಸಿಗೆಯಾದುದನಂಗಸೃಷ್ಟಿಯಿಂ ||೬೩||

ಇನಿಯನ ಕಾಣದಾ ತರುಣಿ ಸೈರಿಸಲಾಱದೆ ಕಾಮತಾಪವಂ
ಘನತರಶೈತ್ಯಮೆಂದು ಕೊಳನೊಳ್ ಪುಗಲಾ ಕೊಳನುರ್ಕಿ ಬೇಯೆ ಕೀ
ರನು ಜಲವೀಂಟಿ ವಿದ್ರುಮವನೊಂದ ಕರ್ದುಂಕುತೆ ಭೂಜವೇಱಲಾ
ವನತರು ಬೆಂದು ನಿಂದುರಿಯುತಿರ್ದುದು ನೋೞ್ಪೊಡಮೇಂ ವಿಚಿತ್ರಮೋ ||೭೩||

ಮುಡಿಯಂ ಕಟ್ಟಳ್ ಮುದ್ದುಗೆಯ್ವ ಮೊಗಮಂ ನಿರ್ದೋಱಳಿಂಬಿಂ ಕಳ
ಲ್ದುಡೆಯಂ ಸಾರ್ಚಳು ಕಣ್ಗೆ ಕಪ್ಪಿಡಳು ನುಣ್ಮೈ ಯರ್ಚಳೊಯೆಂದು ತಾಂ
ನುಡಿಯಲಳ್ ಪೊಂದೊಡವಂ ತೊಡಳ್ ಪಸಿವುದೋಱಳ್ ಕಾಮನಂಬಿಂಗೆ ಸಂ
ದಡಿಯಾದಳ್ ಲಲಿತಾಂಗಿಯೆಂದು ಸಖಿಯರ್ ಕಣ್ಣೀರ್ಗಳಂ ತುಂಬಿದರ್ ||೮೭||

ಮೇಳಿಸಿ ಪೊರ್ದಿದಾಳಿಯರ ಮೆಯ್ ಬಿಸುಪೇಱಿ ಬೆಮರ್ತುದಂಗದೊಳ್
ಬಾಲಮೃಣಾಳಿಕಾಸಮಿತಿ ಚುಯ್ಯೆನುತುಂ ನೊರೆಯಿಟ್ಟುದಶ್ರುಧಾ
ರಾಳಿ ಕದಂಪಿನೊಳ್ ಕುಡಿದು ಬತ್ತಿದುದೊಯ್ಯನೆ ಬೀಸುತಿರ್ಪ ಪೊಂ
ಬಾೞೆಯ ಚಾಮರಂಗಳಱೆಸೀದುವು ತನ್ವಿಯ ದೇಹದಾಹದಿಂ||೯೮||

೧೩) ಪುರುಷವಿರಹ.
ಎಳಲತೆಯಲ್ಲಿ ನಿಂದು ನಿಲಲಾಱದೆ ಕೇಳೀಗೃಹಾಂತರಾಳದೊಳ್
ಕಳವಳದಿಂದ ಪೊಕ್ಕು ಪೋಗಲಾಱದೆ ನಂದನದಲ್ಲಿ ಸಂತತಂ
ತೊಳಲಿ ಕೊಳಂಗಳೊಳ್ ಬೞಲಿ ಕಾಮಶರಾವಳಿಗಳ್ಕಿ ಸೋಗೆ ಕೋ
ಗಿಲೆ ಗಿಳಿಗಳ್ಗೆ ಬಳ್ಕಿ ಕುದಿದುಂ ನೆಱೆ ತಳ್ಕಿದನಾ ನರೇಶ್ವರಂ ||೧೭೦||

ಕಾವನ ಪೂವಿನಂಬ ನಗೆಗೊಣ್ಗೊನೆಯಿಂದಸಿತೇಕ್ಷುಚಾಪಮಂ
ಬಾವಿಸಿ ಪುರ್ಬಿನಿಂ ಮೆಱೆವ ತುಂಬಿಗಳಂ ಕುರುಳೋಳಿಯಿಂದೆ ರಾ
ಜೀವದ ಮೊಗ್ಗೆಯಂ ಕುಚದಿ ಪೂರ್ಣಶಶಾಂಕನ ವಕ್ತ್ರದಿಂದೆ ತ
ದ್ಭಾವದಿ ಗೆಲ್ದಳಂ ನೆನೆದು ಸಾಯದೊಡಂ ಬಡವಾಗಲೀಯರೇ||೧೮೬||

ಕುಸುಮಸುಗಂಧಿ ಸತ್ಕಲೆಯ ಕಾಮಿನಿ ಕಾಮನ ಪಟ್ಟದಾನೆಯೆ
ನ್ನಸುಗೊಳದಂಚೆ ಚಂದ್ರಮುಖಿ ರನ್ನದ ಪುತ್ಥಳಿ ಕೋಮಲಾಂಗದಿಂ
ದೆಸೆವ ಸುಜಾಣೆ ಕೇಳೆರಡು ಕಂಗಳು ಸಾಲವು ನಿನ್ನ ರೂಪನೀ
ಕ್ಷಿಸುವಡೆ ಸಾವಿರಕ್ಷಿಗಳ ನಿರ್ಮಿಸದಾದನು ಪದ್ಮಸಂಭವಂ ||||೧೯೬||

ಮುಗ್ದೆಯ ಕೈರವನೇತ್ರ ವಿ
ದಗ್ಧೆಯವೋಲ್ ಮುಳಿಸನಾಂತೊಡಾನೆಂತುೞಿವೆಂ
ದಗ್ಧಾಂತರಂಗನಾದೆಂ
ದುಗ್ಧಂ ವಿಷಮಾದೊಡಿಳೆಯೊಳಾನೆಂತಿರ್ಪೆಂ ||೨೦೨||

ಇದು ಸರಸ್ವತೀ ಸರ್ವಾಂಗದರ್ಪಣಾಯಮಾನ ಪ್ರತಿಭಾಸನೂತನ ಪುರಾತನ
ಪ್ರಮಾಣಸುಕವಿಪುಂಗವ ಮಲ್ಲನಿರ್ಮಿತ ಕಾವ್ಯಸಾರಮಹಾಪ್ರಬಂಧದೊಳ್
ವಿಪ್ರಲಂಭವರ್ಣನಂ ಪಂಚದಶಾಶ್ವಾಸಂ ಸಂಪೂರ್ಣಂ.

ಇಲ್ಲಿಗೆ ಗ್ರಂಥಸಮಾಪ್ತಿಯಾಗಿದೆ. ‘ ಸೂಕ್ತಿಸುಧಾರ್ಣ’ ದಪ್ರಕಾರ ಅಷ್ಠಾದಶವರ್ಣನ
ಗಳಿಗೆ ಸೇರಿದ ಮಂತ್ರ,ದೂತ,ಆಗಮನ,ಪ್ರಕರಣಗಳು ಉಪಲಬ್ಧವಲ್ಲ. ಪೂರ್ಣ
ಗ್ರಂಥವು ಪೀಠಿಕಾಪ್ರಕರಣದೊಂದಿಗೆ ಹತ್ತೊಂಬತ್ತು ಆಶ್ವಾಸಗಳಿಂದ ಕೂಡಿದ್ದಿರ
ಬಹುದೆಂದು ಊಹಿಸಲಾಗಿದೆ.

ಕೃತಜ್ಞತೆಗಳು.

ಎನ್. ಅನಂತರಂಗಾಚಾರ್, ಎಂ.ಎ.,ಬಿ.ಟಿ.

ನೃಸಿಂಹಪ್ರಾಸಾದಂ
ಸರಸ್ವತೀಪುರಂ.
ಮೈಸೂರು.
ಪ್ರಕಾಶಕರು
ಕನ್ನಡ ಸಾಹಿತ್ಯ ಪರಿಷತ್ತು
ಪಂಪ ಮಹಾಕವಿ ರಸ್ತೆ
ಚಾಮರಾಜಪೇಟೆ , ಬೆಂಗಳೂರು- ೫೬೦೦೧೮.












ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ