ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಶನಿವಾರ, ನವೆಂಬರ್ 21, 2020

ಮಹಾಲಿಂಗಸ್ವಾಮಿಯವರ ಬಾಲರಾಮನ ಸಾಂಗತ್ಯ

ಬಾಲರಾಮನ ಸಾಂಗತ್ಯ 

ಮಹಾಲಿಂಗಸ್ವಾಮಿ 

ಸಂಪಾದಕರು: ಡಾ॥ ಎಂ. ಎಂ. ಕಲಬುರ್ಗಿ. 


ಈ ಕೃತಿಯ ಕರ್ತೃ ಮಹಾಲಿಂಗಸ್ವಾಮಿ. ಈತ ಹಂಪೆಯವನು. ಚರಪತಿಯೆಂದು ಕರೆದುಕೊಂಡಿರುವುದರಿಂದ ಲಿಂಗಾಯಿತ ಜಂಗಮನೆಂಬುದು ಸ್ಪಷ್ಟ. ಶಿವಗಂಗೆಯನ್ನು ಸ್ಮರಿಸುವದರಿಂದ ಇವನು ಅಲ್ಲಿಯ ಮೇಲಣಗವಿಯ ಸಂಪ್ರದಾಯದವ-

ನಿರಬೇಕೆಂದು ಹುಲ್ಲೂರ ಶ್ರೀನಿವಾಸರಾಯರು ಊಹಿಸುತ್ತಾರೆ. ಕವಿ ತನ್ನ ಕೃತಿಯ ಕಥೆ ಜೈಮಿನಿಭಾರತಕ್ಕಿಂತ ಶ್ರೇಷ್ಠವೆನ್ನುವಲ್ಲಿ ಕನ್ನಡ ಜೈಮಿನಿಭಾರತವನ್ನೇ ಕುರಿತು ಹೇಳಿದಂತಿದೆ.ಈ ಕಾವ್ಯ ೧೮ ನೇ ಶತಮಾನದಲ್ಲಿ ರಚನೆಗೊಂಡಿರಬೇಕು. 


ಕುಮಾರರಾಮ ಜೀವಿತಕಾಲದಲ್ಲಿ ವೀರನಾಗಿ ಬಾಳಿ , ಮರಣೋತ್ತರ ಕಾಲದಲ್ಲಿ ಸಾಂಸ್ಕೃತಿಕ ವೀರನಾಗಿ , ಕೊನೆಗೆ ಪುರಾಣ ವೀರನಾಗಿ, ದೇವರಿಗಿ ಬೆಳಗಿದವ. ಬಹುಶಃ ರಣಾಂಗಣದಲ್ಲಿ ವೀರಸ್ವರ್ಗವೇರುತ್ತಲೇ (೧೩೨೭) ಇವನನ್ನು ಕುರಿತು ಜನಪದ, ಶೆಷ್ಟಪದ, ಸಾಹಿತ್ಯ ಹುಟ್ಟಲು ಆರಂಭಿಸಿರಬೇಕು. ಮುಂದೆ ಕೆಲವೇ ದಿನಗಳಲ್ಲಿ ಇದಕಾಕೆ ಇನ್ನಷ್ಟು ಘಟನೆಗಳು ಸೇರಿಕೊಂಡು ಹೊಸಕುಮಾರರಾಮ ಸಾಂಗತ್ಯ ಕೃತಿ ಹುಟ್ಟಿದೆ. ಆಮೇಲೆ ಕುಮಾರರಾಮ-ರತ್ನಾಜಿ ಇವರನ್ನು ಅರ್ಜುನ-ಊರ್ವಶಿಯರೊಂದಿಗೆ ಸಮೀಕರಿಸಿ ಕುಮಾರರಾಮಯ್ಯನ ಚರಿತ್ರೆ ರೂಪುಗೊಂಡಿರಬೇಕು. ಇಲ್ಲಿಯ ಪರಶುರಾಮ-ಕುಮಾರರಾಮರ ಹೋಲಿಕೆಯು, ಅರ್ಜುನ-ಅರಿಕೇಸರಿಗಳ ತಗುಳ್ಚಿ ಹೇಳಿದ ಕಥಾತಂತ್ರವನ್ನು ನೆನಪಿಸುತ್ತದೆ. ಆಸ್ಥಾನದಲ್ಲಿ ವಿರಾಜಮಾನನಾದ ಕುಮಾರರಾಮನ ಮಗ ಜಟ್ಟಂಗಿರಾಮ ದೊರೆಗೆ ಗುರುವು 

"ತನುಜನೆ ಕೇಳ್ ನಿಮ್ಮ ಜನಕ ಮಾಡಿದ ಕಾರ್ಯ" ಎಂದು ನುಡಿದು ಕುಮಾರರಾಮನ ಕಥೆ ವಿವರಿಸುತ್ತ ಹೋಗುವುದು, ಕುಮಾರವ್ಯಾಸನ " ಕೇಳು ಜನಮೇಜಯ ಧರಿತ್ರೀಪಾಲ" ಎಂಬ ಕಥಾತಂತ್ರವನ್ನು ನೆನಪಿಸುತ್ತದೆ. ಕುಮಾರರಾಮನನ್ನು ಕುರಿತು ಕಾವ್ಯ ರಚಿಸಿದವರು ಅನ್ನದ ಋಣಕ್ಕಾಗಿ ರಚಿಸಿದವರಲ್ಲ. ಸಂಸ್ಕೃತಿ ಬಗೆಗಿನ ಹೆಮ್ಮೆಗಾಗಿ, ಅದನ್ನು ಗೌರವಿಸುವುದಕ್ಕಾಗಿ ಬರೆದವರು. 

ಜಟ್ಟಂಗಿರಾಮ ದೈವತದವರದಿಂದ ಹುಟ್ಟಿದ ಕಾರಣ ಕಂಪಿಲರಾಯ ತನ್ನ ಮಗನಿಗೆ ರಾಮ, ರಾಮನಾಥ, ಅಥವಾ ರಾಮಯ್ಯನೆಂದು ಹೆಸರಿಟ್ಟಿರುವುದು ಸಹಜ. ಕಂಪಿಲನ ರಾಜಧಾನಿ ಹೊಸಮಲೆದುರ್ಗದ ಸಮೀಪವಿರುವ ಸಂಡೂರಿನ ಕುಮಾರಸ್ವಾಮಿ ಆ ಪ್ರದೇಶದ ಬಹುದೊಡ್ಡ ದೈವತ.ಈ ಕುಮಾರಸ್ವಾಮಿ ಶೌರ್ಯ ಮತ್ತು ಶೌಚಗಳ ಪ್ರತೀಕ.ಹುಟ್ಟಿದ ಏಳನೆಯ ದಿನಕ್ಕೆ ದೇವಸೇನಾನಿಯಾಗಿ ತಾರಕಾಸುರನನ್ನು ವಧೆಮಾಡಿದ ಈತನ ಶೌರ್ಯ ಪೈರಾಣ ಪ್ರಸಿದ್ಧ.  ಆಜನ್ಮ ಬ್ರಹ್ಮಚಾರಿಯಾಗಿದ್ದ ಕಾರಣ ಈತನ ಶೌಚವೂ ಪುರಾಣಪ್ರಸಿದ್ಧ. ಶೌರ್ಯ ಮತ್ತು ಶೌಚದಲ್ಲಿ ಈ ಷಣ್ಮುಖನನ್ನು ಹೋಲುವನೆಂಬ ಅರ್ಥದಲ್ಲಿ ರಾಮನಿಗೆ ಕುಮಾರ+ ರಾಮ ಎಂಬ ಹೆಸರು ಪ್ರಚಾರಗೊಂಡಂತಿದೆ. 


ಸಂಧಿ-ಒಂದು 


ಗೊಲ್ಲರ ಕಾಟಣ್ಣ

ರಾಜಪುತ್ರ, ಡೊಂಬರ ರತ್ನಾಜಿ,

ರಾಜಪತ್ನಿ.


ತ್ರಿಪದಿ:

ರಾಮನಾಥನ ಪ್ರೇಮದ ಚರಿತೆಯ 

ತಾಮಸವಿಲ್ಲದೆ ಪೇಳುವೆ ಭೂಮಿಪನೆ 

ಒಲಿದು ಲಾಲಿಸು ಮುದದಿ॥ 


ಸಾಂಗತ್ಯ: 

ಶ್ರೀ ಗಿರಿಜಾ ಶಂಭು ಕುವರನೆ ಗಣಪತಿ। 

ಪ್ರೇಮದಿ ಸಾಗಿಸು ಕೃತಿಯ॥ 

ಆಗಿಸು ಶೃತಿಸಾರ ಜಿಹ್ವಾಗರದೊಳು ನಿಂದು। 

ಪಾರ್ವತಿಯಣುಗ ಗಣೇಶ॥ ೧॥


ಸಾಸಿರ ಹೆಡೆಯನ ಭೂಷಣವನ್ನಿಟ್ಟ । 

ಮೂಷಕವಾಹನ ಪಿತನೆ॥ 

ಪ್ರಾಸಡಿ ಬೀಳದೆ ನಿರ್ಮಲ ಮತಿಯಿತ್ತು।

 ಈಶ ಕೊಡೆನಗೆ ಸತ್ಕೃಪೆಯ॥೨॥


ನರಮುಖವತಿಗಳೆದು ಕರಿಮುಖವ ಧರಿಸಿದೆ।

ಒಲಿದು ಮೂಷಿಕವನೇರಿದನೆ॥ 

ವಿವಹವನೊಲ್ಲದೆ ಶಾಸ್ತ್ರವನನಘ। 

ತಗಡೂರ ಬೆನವ ಕೊಡು ಮತಿಯ॥ ೪॥ 


ಭಾರತಿ ಬ್ರಹ್ಮಾಣಿ ಪಾಲಿಸು ಮತಿಯನು। 

ವೇದವಾಕ್ಯದೊಳು ಬಲ್ಲಿದಳೆ।। 

ಆಡಿಸು ನುಡಿ ಜಿಹ್ವೆತುದಿಯಾಗ್ರದೊಳು ನಿಂದು। 

ಹಾದಿವಿಡಿದಂತೆ ಬಲ್ಲವರು॥೫॥ 


ಪ್ರಳಯ ಕಾಲವ ಗೆದ್ದೆ ಭುವನವ ಹೆಪ್ಪಿಟ್ಟೆ। 

ಸಲಹುವೆ ಜಗವ ಸಂತವಿಸಿ॥ 

ಗೆಲಿದೆ ಪಾಪವ ಕಲ್ಯಾಣದೊಳು ಬಂದು।

 ಬಸವರಾಜನೆ ಕೊಡು ಮತಿಯ॥೬॥


ದೇವತೆ ಭಜನೆಯ ಮಾಡಿದೆ ಬಲ್ಲಂತೆ। 

ಕೊಂಡಾಡುವೆ ಕವೆಸ್ತೋಮವನು॥

ಕಾಳಿದಾಸನು ಕನಕ ತಾಳಪದ ಚೆನ್ನ। 

ಮೇಲೆ ಪುರಂದರವಿಠಲ॥೮॥ 


ಹರಕವಿ ಹಂಪೆಯ ಹರಿ ರಾಘವಾಂಕರ।

ಕೆರೆಯ ಪದ್ಮರಸ ಕವಿಲಿಂಗ॥ 

ಚರಣಾರವಿಂದಕ್ಕೆ ಎರಗಿ ವಂದನೆ ಮಾಡಿ। 

ಕಡಲ ವಿಸ್ತರವ ವರ್ಣಿಸುವೆ॥೯॥ 


ವರಕವಿಗಳನು ವಂದಿಸಿ ಮುಂದಲ। 

ನರಕವೀಗಳನು ಕೀರ್ತಿಸುವೆ॥ 

ಒರೆವೆನು ಕೃತಿಯನು ನುಡಿ ತಪ್ಪು ಕಂಡಡೆ। 

ಜರಿದಾಡದೆನ್ನ ತಿದ್ದುವುದು॥೧೦॥ 


ರಾಕೃತಿಯ ಸಾರ ಯಾರು ಮಾಡಿದರೆಂದು । 

ಆಡರೆ ಜನರು ಲೋಕದೊಳು॥ 

ರೂಢಿಯೊಳ್ ಕವಿರತ್ನ ಹಂಪೆಯ ಚರಪತಿ। 

ಮಾಡಿದ ಮಹಲಿಂಗಸ್ವಾಮಿ॥೧೬॥ 


ರೇವಣಾಚಾರ್ಯರ ಮೂಲಾಗ್ರ ಶಿವಗಂಗೆ। 

ಮೇಲಣಗವಿಯ ಸ್ಥಾನಗಳು॥ 

ರೂಢಿಯೊಳೀ ಕೃತಿಸ್ಥಿರಕಾಲ ನಡೆಯಲೆಂದು । 

ಮಾಡಿದ ವಿರೂಪಾಕ್ಷ ವರದಿ॥೧೭॥ 


ರಾಮನ ಕೃತಿಯೊಳು ಮೊದಲಾವುದೆಂದರೆ । 

ಚತುರಾಷ್ಟ್ರಕಧಿಕ ಹಮ್ಮೀರ॥ 

ರತ್ನಮಾಣಿಕದಂತೆ ಮೆರೆವ ಕುಮ್ಮಟದುರ್ಗ। 

ಇಪ್ಪುದು ಕಿರಣ ಪ್ರಭೆಯಂತೆ॥೧೮॥ 


ಅಮರೇಂದ್ರ ನಗರಕ್ಕೆಮಿಗಿಲಾಗಿಎರಡನೆ। 

ಕನಕ ವೈಢೂರ್ಯ ತರುವ ॥ 

ದಿನಕರನ ತುಡುಕುವ ಕೆರೆಯ ಅಗಳಿನ ನೆಲೆಯು। 

ಗಜಕೂರ್ಮ ಬೆನ್ನ ತಟ್ಟುತಲಿ॥೧೯॥ 


ಸೋಮ ಸೂರ್ಯರ ವೀಧಿ ಕಾಮಿನಿಯರ ಕೇರಿ। 

ವಾಮಲೋಚನೆಯರ ಕೇರಿ॥ 

ಮಾಣಿಕ ನವರತ್ನ ಪುಷ್ಯರಾಗವ ಕೆತ್ತೋ । 

ಜಾಣ ಪಾಂಚಾಳರ ಬೀದಿ॥೨೧॥ 


ಅಂತಪ್ಪ ಪುರವನನಂತ ಕಾಲದೊಳ್ ಪೊರೆವ ಭೂ। 

ಕಾಂತ ರಾಮೇಂದ್ರನ ತನುಜ ॥ 

ಪಂಥದಿಂ ಸಲಹೈವ ಜಟ್ಟಂಗಿರಾಯನು ಭೂ।

ಕಾಂತರಿಗೆ ತಲೆವಾಗದಂತೆ॥೨೬॥


ಧರಣಿಯ ಧೈರ್ಯಗಳು ರವಿಯ ಪರಾಕ್ರಮ।

ಹಿಮಕರನ ಶಾಂತಿ ಸಾಗರದ॥ 

ಗುಣಭಾವ ಚರಿತದಿ ತನ್ನ ರಾಜ್ಯವನಾಳ್ವ। 

ಮನಸಿಜನ ಜನಕನ ತೆರದಿ॥೨೮॥ 


ರಾಯನು ಜಟ್ಟಂಗಿನೃಪಾಲನ ಸ್ತ್ರೀಯರ ।

 ಲಾವಣ್ಯ ಪೇಳಲ್ಕೆ ಅರಿದು॥

ಕಾಮನಂಗನೆಗೆಣೆ ಸೋಮಾಜಿ ಲಿಂಗಾಜೆ। 

ಕಾಮಸತಿಯರು ನೆಲೆಸಿಹರು॥೨೯॥ 


ನೆರೆದ ವಾಲಗ ಕೇಳಿ ಗುರುವಾದ ಪ್ರಭುದೇವ। 

ಹಿಡಿದೇರಲು ಪಲ್ಲಕ್ಕಿ ಬೇಗ॥ 

ಬಿಜಯಂಗೆಯ್ಯಾಕ್ಷಣ ಕರಡೆ ಸಮ್ಮಾಳದಿ। 

ಒಡನೆ ಜಂಗಮ ಸಂದೋಹ॥೩೧॥ 


ಜನ್ಮಪಾವನರೊಪ ಗುರುವ ಕಾಣುತ ನೃಪನು।

 ಬೆದರಿದನೆದ್ದು ಕರಮುಗಿದು॥

ಎರಗಿ ಸಾಷ್ಟಾಂಗವ ಕರವೆಡಿಯೆ ಗುರುರಾಯ। 

ಹರಸುತ ಮಗನ ಹರುಷದಲಿ॥೩೨॥ 


ಬಿಜಗೊಳಿಸಿ ನೃಪವರನು ರತ್ನ ಪೀಠದಮೇಲೆ । 

ದರಹಸಿತ ವಾಲಗದಿ ಕುಳ್ಳಿರಿಸಿ॥ 

ಎರಗುತ ನೃಪೇಂದ್ರ ಕಳೆಯಲ್ಕೆ ಆಲಸ್ಯ । 

ಒರೆಯಬೇಕೆನಗೆ ಆಗಮವ॥೩೩॥ 


ಭಾರತ ಜೈಮಿನಿಯ ಕಾಳಗವೆಂದು। 

ಪೇಳಬೇಕೆನಗೆ ಸದ್ಗುರುವೆ॥ 

ಆದಿಯೊಳ್ನಡೆದಂಥ ಕಾರ್ಯ ಪ್ರಸಂಗವ। 

ಪೇಳಬೇಕೆನಗೆ ಬಾಲನಿಗೆ॥೩೪॥ 


ತನುಜ ನೋಡು ನಿಮ್ಮ ಜನಕ ಮಾಡಿದ ಕಾರ್ಯ । 

ತಣಿಯಲೋದುವುದು ಈ ಧರಣಿ॥ 

ಜೈಮಿನಿ ರಾಮಾಯಣ ಸಮವು ಭಾರತಕೆ। 

ಮಿಗಿಲಾಗಿ ಮಾಡಿ ಅಳಿದಿಹರು॥೩೫ ॥


ದಯಮಾಡಬಹುದೆನ್ನ ಗುರು ಪರಂಜ್ಯೋತಿಯೆ।

ಒರೆಯಬಹುದು ಅರಿಯದವಗೆ॥ 

ಮರಳಿ ವಂದನೆಗೈದು ಎರಗಲು ಸಾಷ್ಟಾಂಗ । 

ಒರೆವೆನು ಕೇಳು ನೃಪರಾಜ॥೩೬॥ 


ಕಾಮಗೇತಕಿ ಭೂಪಾಲ ಲಾಲಿಸು ನಿಮ್ಮ। 

ಏಳು ತಲೆಯಂತ್ರ ಎತ್ತುವೆನು॥ 

ಪೂರ್ವದೊಳಾಳಿದ ವೀರಕಸ್ತುರಿ ನಾಯ್ಕ । 

ತೀರದು ಹೊಗಳೆ ವಾಗ್ನುಡಿಯು॥೩೭॥ 


ಇಬ್ಬರಾಳಿಕೆಯೊಳು ಹಬ್ಬಿ ಬೆದವರಲ್ಲ । 

ಹೆಬ್ಬುಲಿಯಾದ ಮುಮ್ಮುಡಿಯು॥ 

ರುದ್ರನ ಒಲುಮೆಯಲಿ ಬಂದು ಸೇರಲು ಚೆಂಡು । 

ದೊಡ್ಡವನಾದನು ಇಳೆಗೆ॥ ೩೮॥ 


ರಾಯ ಮುಮ್ಮುಡಿ ನಾಯ್ಕ ಆಳಿದ ಪಟ್ಟ ಎರಡು ।

ಕಾಲ ವರ್ಷಗಳು ಒದಗಿದಡೆ ॥

ರಾಯ ಕಂಪಿಲಗೆ ನೇಮಮಾಡುತ ಪಟ್ಟವ । 

ಸೇರಲು ವೈಕುಂಠಗತಿಯ ॥೨ʼ೯॥ 


ಲಾಲೆಸು ಜಟ್ಟಂಗಿರಾಯನೆ ನಿಮುಮಜ್ಜ । 

ನಾಳಿಕೆಯೊಳಗಾದ ಕಾರ್ಯ ॥ 

ಬಾಲರ ಫಲವಿಲ್ಲದೆ ಮಾರಿದೈವವ ಭಜಿಸೆ । 

ಆಮೇಲೆ ನಿಮ್ಮಯ್ಯ ಜನಿಸೆ॥೪೦॥ 


ರಾಜೀವ ಕಂಪಿಲ ರಾಣಿಸ್ತ್ರೀಯರ ನಾಮ। 

ಮೃಗಲೋಚನೆ ಹರಿಯಮ್ಮ॥ 

ಭಾನುಪ್ರಕಾಶದ ಕಮಲಾಜಿ ಈರ್ವರೂ ಭೂ। 

ದೇವಿಯಂದದಿ ಒಪ್ಪಿಹರು॥ ೪೧॥ 


ರಂಭೆಯುರ್ವಶಿಯರ ಮರೆಸುವ ಲಾವಣ್ಯ । 

ಅಂಬುಧಿಯೆನಿಪ ಗುಣಭಾವ ॥ 

ಗಂಗೆ ಪಾರ್ವತಿಯೋಲ್ ಪತಿವ್ರತ ಭಾವಗಳು ।

ಅಂಗಜನ ಸತಿಯ ಪತಿಭಕ್ತಿ॥೪೨॥ 


ಸಮರೂಪ ಸಮಭಾವ ಸಮರತಿಯ ಸುಖದೊಳಗೆ । 

ಇನಿರಸವು ಮದ್ದು ಬೆರೆದಂತೆ॥ 

ಮದನ ಕಲೆ ಮೀರಿ ಫಲವಿಲ್ಲದೆ ಸಂತಾನ ।

 ಫಲವ ಹಂಬಲಿಸಿ ಮನದೊಳಗೆ॥೪೩॥ 


ಬಾಲರ ಚಿಂತೆಗಳಿಂದಲಿ ಇರುತಿರೆ। 

ಅಜ್ಜ ಕೇಳಯ್ಯ ಕುಮ್ಮಟದ ॥॥ 

ಏಳಿಗೆ ಶೃಂಗಾರ ಪೇಳ್ವರೆ ಅಳವಲ್ಲ। 

ರಾಯಕಂಪಿಲನ ಅರಮನೆಯ ॥೪೪॥ 


ಉದಯಾಲದಿ ರಾಯ ಹರನ ಪೂಜೆಯ ಮಾಡಿ। 

ಧರಿಸಿದನು ನವಭಸಿತವನು॥ 

ಪರಮಾನ್ನ ಭೋಜನ ಸವಿದು ಏಳಲು ನೃಪ। 

ಹರಗೆ ವಂದಿಸಿ ಕರಮುಗಿದು॥೫೭॥ 


ಹೊಡೆವ ತಂಬಟ ಭೋರಿಡುವ ಬಿರುದಿನ ಕಾಳೆ। 

ಬಡಬಾಗ್ನಿ ಬಿಸಿಲೊಳು ನಡೆಯೆ ॥ 

ಅಡವಿ ಮಾರಾಗದಿ ಒಂದು ವನಸ್ಥಳವಿರೆ ಚಟಡು। 

ಕ್ರಮಿಸಿ ನಿಲ್ಲಲು ರಾಯ ಗಳಿಗೆ॥೫೮॥ 


ರಾಯ ನಿಲ್ಲಲು ಕೇಳಿ ಬೇರೊಂದು ಕಥೆಯೊನಂದ । 

ಲಾಲಿಸಿ ರಸಿಕ ಕೋವಿದರು॥ 

ಪೂರ್ವದ ಫಲಬೀಡು ಕಾಡೊಳು ಜನೆಸಿದರೆ । 

ರಾಜನಾಗುವ ಭೋಗವಿರಲು॥೫೯॥ 


ಕಾಡಗೊಲ್ಲರದೊಡ್ಡಿ ಕೆಳಗೊಂದು ಇರುತಿರೆ । 

ನೂರಾರು ಒಕ್ಕಲು ಸುಖದಿ॥ 

ಸಾವಿರ ಹದಿನೆಂಟು ಲಕ್ಷೋಪ ಕುರಿ ಗೋವು। 

ಆಳುತ ಸಕಲ ಸಂಭ್ರಮದಿ॥೬೦॥ 


ಹಟ್ಟಿಯ ಗೊಲ್ಲರು ರೊಪ್ಪ ದೊಡ್ಡಿಯ ಹಾಕಿ । 

ಒಕ್ಕಲು ಸಿರಿ ಭಾಗ್ಯದೊಳಗೆ ॥ 

ಮಕ್ಕಳ ಫಲವಿಲ್ಲದೆ ಗೊಲ್ಲನ ಸತಿಗೆ । 

ಪೃಥ್ವಿದೇವರ ಹರಸಿಕೊಳುತ॥೬೧॥ 


ಕೆಲವು ಕಾಲದ ಮೇಲೆ ಲಲನೆ ಗರೂಭಿಣಿಯಾಗೆ।

ನಲಿದು ಹಿಗ್ಗುತಲಿರ್ದು ಮನದಿ॥ 

ಕುಲಗೋತ್ರದವರೆಲ್ಲ ಪಲ ಬಗೆ ಒಸಗೆ ಮಾಡಿ। 

ದಿನದಿನಕೆ ಹೆಚ್ಚುತ ಬರಲು ॥೬೪॥ 


ಒಂದೆರಡು ಮೂರಾಗಿ ತುಂಬಿಬರಲು ಮಾಸ । 

ಸಂಧಿಸಿ ಆರೆಂಟು ಬರಲು॥ 

ಇಂದೆನಗೆ ತುಂಬಿ ಬರಲು ಚೆಲ್ವ ಭೇರುಂಡ । 

ಉನ್ನಂತ ಗಂಡುಮಗನು॥೬೫॥ 


ಶಿಶುವನು ಕಾಣುತ್ತ ಸಿರಿಯಿಂದ  ಗೊಲ್ಲರು। 

ಇದು ಚೋದ್ಯ ನಮ್ಮ ವಂಶದಲಿ ॥ 

ಮುಡುಬ ಮೂಳನೊ ಸಹಜನೊ ಬಾಲ ಜನೆಸಿರಲು । 

ತಿಳಿಯಬೇಕೆನುತಲಿ ಅವರು॥೬೬॥ 


ಕರೆಯಿಸಿದರು ಬಲ್ಲ ಹಿರಿಯ ಶಾಸ್ತ್ರದವರ ।

 ಜನನವ ನೋಡಿ ಬಾಲಕನ॥

ಹೊಳವ ಮಾಡದೆ ಪೇಳಿ ಬಹುಕಾಲ ತಡೆದಾಕೆ। 

ಪಡೆದಾಳು ನರಹರಿ ಸುತನ॥೬೭॥ 


ನೋಡುವವರಲ್ಲಿ ವಾರ ತಿಥಿಗಳ ಮೇಲೆ। 

ಕಾರಣಾಗಲು ನಾಮವಿಡಿದು॥ 

ತೋರುವರವ ಲಗ್ನ ಮರಣ ತಂದೆಗೆ ಹೊಲ್ಲ।

 ಮೂಲನಕ್ಷತ್ರದ ಜನನ॥೬೮॥


ಕೆಟ್ಟ ಗಳಿಗೆಯಲಿ ಮುನ್ನ ಹುಟ್ಟಿದ ಶಿಶು। 

ಇಟ್ಟುಕೊಂಬುದು ಅತಿ ಕಷ್ಟ॥ 

ಹೆತ್ತರೆ ಫಲವೇನು ದುಃಖ ಬಪ್ಪಿರಿ ಕಡೆಗೆ। 

ನಷ್ಟವಲ್ಲದೆ ಲಾಭವಿಲ್ಲ॥೬೯॥


ಕಂಡುದ ನುಡಿದೆವು ಬಂದಾದ ಶಾಸ್ತ್ರದೊಳ್ ।

 ಮಂದತ್ವದೊಳಗೆ ನೀ ಬಿಡದೆ॥

ನೊಂದಿರಲೂಲದೆ ಬಾಳ ಚಂದಗಾಣದು ನಿಮ್ಮ। 

ಬಾಂಧವ್ಯ ಜನಕೆ ಕೊಡಿಯೆನಲು॥೭೦॥ 


ಹೊಳವಾಗಿ ಪೇಳ್ವಡೆ ಬಿಡದೆಮ್ಮ ಕರ್ಮಗಳು।

 ಹಿಡಿದ ಪಂಚಾಂಗಕ್ಕೆ ಹೀನ॥

ಕಡೆಗೆ ವರುಷ ಕಾಲ ಪೊಡವಿಗೆ ಗುರುತಾಗಿ । 

ದೊರೆಯಾಗಿ ಭಾಳಾಕ್ಷ ಕೊಡುಗು॥೭೧॥ 


ಬಹುಕಾಲ ತುಂಬಿದ ಬಂಜೆಗೆ ಫಲವಾಗೆ। 

ಲಯಕಾಲ ಬಿಡದು ಪಡೆದರಿಗೆ॥

 ಕುಲಗೋತ್ರದೊಳಗಾರು ಒಲ್ಲೆನೆನಲು ನಿಮ್ಮ।

ಮನೆದೇವರೆಡೆಗೆ ಹಾಕೆನಲು॥೭೨ ॥


ತನುವಿರಲು ಮಕ್ಕಳಪಡೆವುದು ಘನವೇನು। 

ಗೊನೆಯ ಬಾಳೆ ಹಣ್ಣ ತೆರದಿ॥ 

ಮನೆಯನು ಲಯಮಾಳ್ಪ ಚೆಲುವ ಸಂತಾನದಿಂದ । 

ಪಡೆವುದೇನುಂಟು ಸದ್ಗತಿಯ ॥ ೭೩॥ 


ಹೆತ್ತವರಾಮಾತ ಚಿತ್ತದೊಳ್ಕೇಳುತ । 

ದುಃಖದೊಳಗೆ ಆಳಿ ಮುಳುಗಿ ॥ 

ಹೊತ್ತಿರ್ದು ಹಗಲಿರುಳು ಹತ್ತೆಂಟು ಮಾಸವು। 

ಕಾಡಿಗಿಕ್ಕುವುದೆ ಕರ್ಮ ಶಿಶುಹತ್ಯೆ॥೭೪॥ 


ಮಕ್ಕಳಾದರೆ ಏನು ಪ್ರಾಪ್ತಿಯಿಲ್ಲದ ಬಳಿಕ। 

ಅರ್ಥವಿದ್ದೇನು ತಾನುಣುವುದೆ ॥ 

ಬೆಟ್ಟದೊಳ್ ಜೇನುಟ್ಟು ಬ್ಯಾಡರ ಪಾಲಾದ । 

ವ್ಯರ್ಥವಾಯಿತು ಎಮ್ಮ ಬದುಕು ॥೭೫॥


ಪಡೆಯದಿರಲು ನಾವು ಕಲ್ಲು ಮರನಾಗಿರಬಹುದು। 

ಹಡೆದಂದೆ ಗೈಡಿಗೆ ಹಾಕುವುದು ॥

ಪುತ್ರರೊಳಗೆ ರೋಹಿಣಿಯಂಥ ಬಾಲನ । 

ಮತ್ತೇಕೆ ನಾವು ಹಾಕುವುದು॥೭೬॥ 


ಎಲ್ಲರು ಸಾಕೆನುತ ದುಃಖದಲಿ ಕೇಳಲು। 

ಒಲ್ಲೆವು ಎಮ್ಮ ತಿಂಬುವುದು॥ 

ಹೊಲ್ಲದ ಮೂಳನ ಹೊರಗೆ ಹಾಕುವುದು ಗೋತ್ರ। 

ದಲ್ಲಿ ಒಬ್ಬರ ಕೆಡಿಸುವುದು॥೭೭॥ 


ನಮಗಂತು ಫಲವಿಲ್ಲ ನಿಮಗೇಕೆ ಭಯಭೀತಿ। 

ಮೃಡನೊಳು ನಾವು ಪಡೆದುದಿಲ್ಲ॥ 

ಅಲರಂಬ ರೂಪನ ಸಾಕಿ ಬದುಕಲು ನಾವು। 

ನಯನದಿ ನೋಡಿ ಹಿಗ್ಗೈವೆವೆ?॥೭೮॥ 


ಸಂತಾನಗೆಡುಕನ ಸಾಕಲ್ಕೆ ನಮಗಿನ್ನು । 

ಭ್ರಾಂತಿ ಲೋಕದಿ ಮಕ್ಕಳ್ಮಾರು ॥ 

ಎಂತು ಇಲ್ಲವು ಎಂದು ಎನುತವರು ಪೋಗಲು। 

ಮುಂಚೆ ತಂದರು ದೇವಾಲಯಕೆ॥೭೯॥ 


ಗೊಲ್ಲರ ಮನೆದೈವ ಬಿಲ್ಲಕಾಟಮಲಿಂಗ।

 ಅಲ್ಲಿ ಕಂಪಿಲನಿಪ್ಪ ವನದಿ॥

ಹೊಲ್ಲದ ಶಿಶು ಬೇಡ ಸಲ್ಲಲಿ ನಿಮಗೆಂದು। 

ಅಲ್ಲಿ ಬಿಟ್ಟರು ಗೈಡಿಯಲ್ಲಿ॥೮೦॥ 


ಬಿಟ್ಟವರು ನಡೆಯಲು ಇತ್ತ ಕಂಪಿಲನೃಪಗೆ । 

ಮತ್ತೆ ದೋರಲು ಉದಕ ತೃಷೆಯು॥ 

ಚಿತ್ತ ಗಮನದಿ ಹೋಗಿ ತರಲೆಂದು ಅಗ್ಗಣಿ । ೮೧॥ 

ಕಟ್ಟು ಮಾಡಿಸಲು ಊಳಿಗಕೆ॥ 


ಅರಸು ಪೇಳಲು ಚರರು ಪರಿದರು ದಿಕ್ಕಾಗಿ। 

ಹುಡುಕುತ ನಾಯ್ಕ ಮೂಲೆಯನು। 

ತಡಕಿ ಕಾಣದೆ ಅವರು ವನದ ಕಿಗ್ಗಡಿಯೊಳು । 

ಗುಡಿಯಿರಲು ಕೊಪ್ಸಹಿತ ಕಂಡು॥೮೨ ॥


ಕಂಡರು ಉದಕವ ಒಂದಾರು ಭುಜವಾಗಿ । 

ತುಂಬಿಕೊಂಡರು ತವಕದಲಿ॥

ಬಂಧನ ಬಿಡಿಪರೆ ತಡವೇಕೆ ಎನುತಲಿ। 

ಪೊರಡಲು ತವಕದಿ ಚರರು॥೮೩॥


ಬಾವಿಯಿಂದಲಿ ಹೊರಟು ದೇವಾಲಯ ಪೊಗಲು। 

ಬೋರಿಡುವ ಮೊಳಗು ದನಿಗೇಳಿ॥ 

ಅರಣ್ಯ ಗುಡಿಯೊಳುಏನು ಚೋದ್ಯವು ಎಂದು । 

ರಾಯನಿರ್ದೆಡೆಗಾಗಿ ಬರಲು॥ ೮೪॥ 


ಏನು ಮಾಯವೊ ರೂಪನೆ ಕಂಡೆವಾಲಯದಿ । 

ಒಂದು ಬಾಲನಿರಲು ತಂದೆವೆನುತ॥ 

ರಾಯ ನೋಳ್ಪುದು ಎಂದು ಮುಟದಕ್ಕೆ ಇರಿಸಲು। 

ಆ ಭೂಪ ನೋಡಿ ಬೆರಗ್ಹೊಡೆಯೆ ॥೮೫॥ 


ಹರೆಹರದೇವಿಯ ಕರೆದು ಉಲ್ಲಾಸದೊಳ್ ।

ತರಳನ ನೋಡೆನಲು ಹರಸಿ॥

ಹರನೊಲಿದು ನಮಗಿತ್ತ ಕರ ಚೆಲ್ವ ಸಂತಾನ।

 ದೊರೆಗಳಾತ್ಮದಿ ಬರಲರಿದು॥೮೬॥


ಕಾಶಿ ರಾಮೇಶ್ವರ ಗೋಕರ್ಣ ಶ್ರೀಶೈಲ । 

ಯಾತ್ರೆಯ ಮಾಡಿ ಯಪವಿಡಿದು ॥

ಬೇಕೆಂದು ಸಂತಾನ ಜಗದೀಶಸ್ತುತಿ ಮಾಡೆ। 

ಆತ್ಮದಿ ಬಾಲ ಸಿದ್ಧಿಸದು॥೮೭॥ 


ರಮಣನ ವಚನಕ್ಕೆ ಧರ್ಮಶಾಂತಿಯ ತಿದ್ದಿ। 

ಆಳೋಚನೆ ಪೇಳುತ್ತಿರಲು॥ 

ಉರಗೇಂದ್ರ ಹರನೊಳು ಪಡೆಯದ ಪಾಪಿಗೆ। 

ವರ ಶಿಶುಎಮಗೆದೋರುವುದೆ॥೮೮॥ 


ನಾವಾಗಿ ಬರಲೆಂದು ಹಾರೈಸಿ ಮಾಡಿದ । 

ದೇವನೆ ತಾನೊಲಿದಿತ್ತು ॥ 

ತನುಜರಿಲ್ಲದ ಎಮ್ಮ ಸ್ಸರಣೆ ಹರನಿಗೆ ತಟ್ಟೆ। 

ದಯಾಡೆ ಕಾಡಾಲಯದಿ॥೮೯॥ 


ಕಕ್ಕೆಯು ಫಲವಾಗೆ ಒಪ್ಪುವುದೆ ಊಟಕ್ಕೆ । 

ಉಂಬುತ ಸ್ವಾಯವಾಗಿರಲು ॥ 

ಮುಕ್ಕಣ್ಣಗೆರಗಲು ತನ್ನೊಡಲು ಪಡೆಯದ ।

 ತನುಜಪಟ್ಟಕೆ ಸಲುವುದೆ ಭೂಪ॥೯೦॥


ಆವ ಜನ್ಮದ ಶಿಶುವೊ ಭೇದಗಾಣ್ವುದು ರಾಯ । 

ನೀರು ಬೆರೆವುದೆ ತೈಲದೊಳಗೆ॥

 ಹಾದಿಯ ಗುಡಿಯೊಳು ಏನು ಕಾರಣಯಿತ್ತು । 

ಹಾದರದೊಳಗೆ ಜನೆಸಿತ್ತೊ॥೯೧॥


ಸತಿಯ ಮಾತಿಗೆ ರಾಯ ಪ್ರತಿನುಡಿಯಿಲ್ಲದೆ। 

ನುಡಿವ ನಾಲಗೆ ಪಿಡಿದಂತೆ॥ 

ಮಡದಿ ಕೇಳೆಲೆ ಕಣ್ಣುತಿಳಿಯದಿರಲು ಒಂದು। 

ಸಲಹಿ ಸಾಕಲು ಧರ್ಮ ಬರದೆ॥೯೨॥ 


ಆದರಾಗಲಿ ಕುಲಭೇದವರೂಮವ ತಿಳಿದು । 

ನೋಡಬಹುದು ಸಲಹುದಕೆ॥

ಊರೆಂಟು ಎಡಬಲದಿ ಮನೆಗಳ ತಿಳಿದು ವಿ। 

ಚಾರ ಮಾಡಲಿಬಹುದೆನಲು॥೯೩॥ 


ಹೊಲ್ಲದ ಶೆಶುವನು ಗುಡಿಯಲ್ಲಿ ಬಿಟ್ಟರು ಕಾಂತ। 

ಸಲುವ ನಾಣ್ಯಕೆ ಊನವುಂಟೆ ॥ 

ತಲೆ ಬುಡ ತಿಳಿಯದೆ ಸಲಹಿದರೆ ಸಾಕಿದ । 

ಮಗನೆಂದಾಡರೆ ಬಲ್ಲವರು॥೯೪ ॥


ರಾಣೃಆಡುವ ಮಾತು ಭೇದಗಾಣದೆ ಅರಸು। 

ಊಳಿಗ ಜನಕೆ ಪೇಳೆನಲು॥ 

ನೋಡಿ ಎಡಬಲದೊಳು ಊರ ಒಕ್ಕಲು ಇರಲು। 

ವಿಚಾರಿಸಿ ಕೇಳಬೇಕೆನಲು॥೯೫॥


ಅರಸಿ ಶ್ರೇಣಿಯನು ಬಿಡಿಸಿಕೊಳ್ಳುತ ಚರರು। 

ಹುಡುಕಲು ನಾಲ್ಕು ದಿಕ್ಕಿನಲಿ॥ 

ಅಡವಿಯೊಳಗೆ ಒಂದು ಕಾಡುಗೊಲ್ಲರ ದೊಡ್ಡಿ। 

ಸುಳುಹು ಕಾಣುತ ಹೋಗಿ ಮುತ್ತಿ॥೯೬॥ 


ಹಿಡಿ ಬಡಿ ಕೊಲ್ಲೆಂದುಗ್ಘಡಿಸಿ ಕಾರ್ಗವಿಯಲು। 

ನಡುಗಿ ಗೊಲ್ಲರು ಕಂಗೆಡಲು॥ 

ಕಡಿಯಬೇಡೆಮ್ಮನು ಕೊಡುವೆವು ಧನಧಾನ್ಯ।

 ಬಿಡು ಎಮ್ಮ ಪ್ರಾಣಧರ್ಮದಲಿ॥೯೭॥ 


ಅಂಜಲೇತಕೆ ಬನ್ನಿ ರಾಜೇಂದ್ರ ಕರೆಸಿದ। 

ಕಂದ ಸಿಕ್ಕಲು ನಿಮ್ಮ ಗುಡಿಯ॥ 

ಮುಂದಲ ಸ್ಥಿತಿಗತಿಯೆಲ್ಲೆಂದು ಕರೆಸಿದ। 

ಕುಂದು ಯಾತಕೆ ನೀವು ಬನ್ನಿ॥೯೮॥ 


ಬಾಲನ ತೆರನು ಕೇಳಲು ತೆರನ ಹೇಳುವರೆ ।

 ಜೀವ ಕೊಲ್ಲಲು ಪರಬಲವೆ ॥

ಓರಂತೆ ಗೊಲ್ಲರ ಒಡಗೊಂಡು ಬಂದರು । 

ರಾಯ ಭೂಪಾಲನಿದ್ದೆಡೆಗೆ॥೯೯॥


ಗೊಲ್ಲರು ಬೆದರುತ ಭಯದಲ್ಲಿ ಕರಮುಗಿಯೆ। 

ಅಲ್ಲಿ ಮಂತ್ರಿಗಳು ಕೇಳುವರು॥ 

ಎಲ್ಲಿ ನಿಮ್ಮಯ ಗುಡಿ ಎಲ್ಲಿಯ ಶಿನು ಬಾಲ। 

ನಿಲ್ಲದೆ ಒಳವ ಪೇಳೆಮಗೆ॥೧೦೦॥


ಸ್ವಾಮಿ ಎಮ್ಮಯ ವಂಶದಲಿ ಜನಿಸಿತು ಕಂದ। 

ತಾಯಿ ತಂದೆಗೆ ಮರಣವೆನಲು ॥ 

ಆರಾರು ಕೊಳ್ಳರು ನಮ್ಮ ತಿಂದಿತು ಎನಲು। 

ದೇವರ ಗುಡಿಗೆ ಹಾಕಿದೆವು॥೧೦೧॥


ಕೇಳಿದ ನೃಪ ನಗುತ ಮರುಳ ಗೊಲ್ಲರ ನುಡಿಗೆ।

 ಹಾಳು ಶಾಸ್ತ್ರವು ಸುಡಲಿ ನಿಮ್ಮ॥

ಭಾನು ಪ್ರಕಾಶ ಬಾಲನ ಕೊಲ್ಲಲ್ಕೆ। 

ಮೂದೇವಿ ಹಿಡಿದಳೆ ನಿಮಗೆ॥೧೦೨॥ 


ಮರಣವೆನ್ನಲು ಹೆದರಿ ತನುಜನ ಕೊಲ್ಲುವರೆ। 

ಧರ್ಮವೆ ನಿಮಗೆ ಪೃಥ್ವಿಯಲಿ। 

ಫಲವಿಲ್ಲ ಅವನಿಗೆ ವರುಷ ತೊರೆವುದೆ ಎಂದು। 

ಕರೆದು ಗೊಲ್ಲರನು ಮನ್ನಿಸಲು॥೧೦೩॥ 


ಕಾಡುಗೊಲ್ಲರ ಒಳಗೆ ತೋರುವ ಶಿಶುವಲ್ಲ। 

ಪೂರ್ವದ ಋಣವತೀರಿಸಿತು॥ 

ಸೇರುವ ಸ್ಥಾನಗಳು ಬೇರಿರಲು ನಿಮಗೆಲ್ಲ । 

ತೋರಿತೆಂದನು ರಾಜೇಂದ್ರ॥೧೦೪॥ 


ಬಾಲನ ಜನನ ನಕ್ಷತ್ರ ಮೂಲವ ತಿಳಿದು । 

ಆಗ ಗೊಲ್ಲರ ಸಂತೈಸುತಲಿ॥ 

ನೀಗಿ ದುಃಖವ ನಿಮ್ಮ ದೊರೆ ಬಾಲನಾದನು ಎಂದು।

ಆಗ ಉಡುಗೊರೆಯಿತ್ತು ಕಳುಹೆ॥೧೦೫॥ 



ನೊಂದು ಬಳಲಿಕೆ ಬೇಡ ಕುಟುಂಬ ಎಮ್ಮದು ನಿಮು । 

ಸಂದೇಹವಿಲ್ಲದೆ ಬಾಳೆನಲು ॥ 

ಹಿಂದಲ ಋಣಕಾಗೀ ಬಸುರಿಂದ ಜನಿಸಿತ್ತು ರಾ। 

ಜೇಂದ್ರನಾಗುವನು ಪೋಗೆನಲು॥೧೦೬॥ 


ತಿಳಿಸಿದ ನೃಪನಾಗ ಘನಶಾಸ್ತ್ರದವರನು । 

ನಮಗೀಗ ಶಿಶು ಸೇರಿದಂಥ॥ 

ಶುಭಹಾನಿಯೆಂಬುದ ನೆರೆ ಸೋಸಿ ಪೇಳೆಂದು। 

ತಿಥಿ ವಾರ ಗುಣಿಸಿ ನೋಡುವುದು॥೧೦೭॥ 


ರೂಢಿಗುನ್ನತವಾದ ಭೂಪ ಲಾಲಿಸು ಮುಂದೆ।

ಬಾಲನ ಸ್ಥಿತಿಗತಿಗಳಿಗೆ॥ 

ವೀರನಾಗುವ ಶಕ್ತಿರಣಧೀರನೆನಿಸಿ ಪಂಥ। 

ಗಾರ ತಮ್ಮನ ಪಡೆಯುವನು॥ ೧೦೮॥ 


ಪುತ್ರನ ಫಲದಿಂದ ಮತ್ತೊಬ್ಬ ಜನಿಸುವ। 

ಪುಷ್ಪಬಾಣಗೆ ಸಮನೆನಿಸಿ॥ 

ಕೊಟ್ಟೇವು ಬರಹವು ದೃಷ್ಟಗಳು ಈ ಹೊತ್ತು। 

ತಪ್ಪಲು ಯಮನಾಜ್ಞೆ ಭೂಪ॥೧೦೯॥ 


ಹರುಷವಾಗುತ ರಾಯ ಕರೆದು ಮಾನ್ಯ ಮಂತ್ರಿ । 

ಪರಿವಾರಕೊಪ್ಪೆ ಪೇಳೆನಲು॥ 

ಹೊರಗೊಂದು ಒಳಗೊಂದು ಹೀನ ಸ್ವರ ಆಡಲಿ ಬೇಡ। 

ಕೊರತೆ ಕಂಡರೆ ಈಗ ಪೇಳಿ॥೧೧೦॥ 


ರಾಯ ರಾಜೇಂದ್ರನೆ ಕೇಳುವುದಿನ್ನೇನು। 

ಬೀಜದ ನೆಲೆ ಕಾಣಬಂತು॥ 

ಆಗಬಹುದು ಭಕ್ಷ ಕಾವಂದರಿವರಷ್ಟೇ। 

ಪಾಗೊಂಡನಾಳ್ವನು ಗೊಲ್ಲ॥೧೧೧॥ 


ಭಾನು ಇಳಿದು ತಾಯೊಡಲ ಸೇರುವಂದದಿ । 

ರಾಯ ಪೊಗಲಾಗ ಕುಮ್ಮಟವ॥ 

ಬಸುರಿಡಿದು ಬಂದಂಥ ಶಿಶುವಿಗೆ ಮಿಗಿಲಾಗಿ। 

ಶಶಿಮುಖಿ ಸಾಕಿ ಸಲಹಿದಳು॥೧೧೩॥ 


ದೇಶಭಾಗದ ನೃಪರ ಒಡನೆ ವಾಲಗಗೊಳುತ । 

ಶೇಷಾದ್ರಿವಾಸನಾಗಿರುತಿರಲು॥

ಇರುವಂಥ ಕಾಲದೊಳು ಪರವೊಂದು ಕಥೆ ಬಂತು । 

ಒರೆದು ಕೇಳುವುದು ಬಲ್ಲವರು॥೧೧೮॥ 


ನೆರೆ ಜಾಣ ವಿಟಜನಕೆ ಇನಿಗೋಲ ರುಚಿಯಂತೆ।

ಬರುತಿದೆ ರತ್ನಿ ಪ್ರಸಂಗ॥

ಡೊಂಬರ ಕುಲದೊಳಗೆ ರಂಭೆ ಊರ್ವಶಿ ಜನೆಸಿ। 

ಕಂದರ್ಪ ರತಿಗೆ ಮಿಗಿಲೆನಿಸಿ॥೧೧೯॥ 


ಬಂದಳೆ ದ್ರೌಪದಿ ಜಾನಕಿ ಸತಿಗೆಣೆ  ಎಂಬಂತೆ।

ಬಿರಿದ ಪೊಗಳಿಪಳು॥ 

ಕೊಂಕಿದ ಕುರುಳ ಕೂಡದ ಹುಬ್ಬು ಸಿಂಗಾಡಿ। 

ಬಿಂಕದ ಮೊಲೆಯು ಬಿರಿ ಮುಗುಳು॥೧೨೦॥ 


ಶಂಖಿನಿ ಜಾತಿಗೆ ಸಮನಾಗಿ ಜನಿಸಿದಳು। 

ಎಂತಪ್ಪ ವಿಟರ ಜರೆಯುತಲಿ॥ 

ಬಡನಡುವಿನ ಬಾಲೆ ಪಿಕಸ್ವರವು ವಾಕತ್ವ। 

ಮಲೆಯ ಕಾಳಿಂಗ ಮಿಥುನದಿ॥೧೨೧॥ 


ಅರಗಿಣಿ ಮುದದೊಳು ಸರಸಿಜ ಮುಖಪದ್ಮ॥

ಕರಿಯೊ ಕೇಸರಿಯೊ ಕೂಟದಲಿ॥ 

ಕುಂಜರಗಮನತ್ವ ಚಂದ್ರನ ಕಳೆ ಕಾಂತಿ|

ಅಂಗದ ಕೆಂಪೊ ಪುಲ್ಲಿಗೆಯೊ॥೧೨೨॥


ತುಂಬಿ ತುಳುಕುವ ಪ್ರಾಯವ ಕಂಡ ವಿಟಜನರು| 

ಹಿಂದೆ ಚರಿಸುವರು ಕಡೆಮೊದಲೆ॥ 

ಅರಳುವ ಕಮಲದ ದಳದಂಥ ನಯನಗಳು| 

ಪುಣುಗಿನ ಮೃಗದ ವಾಸನೆಯು॥೧೨೩॥ 


ಮುಂದೆಲ್ಲ ರಾಜ್ಯವನು ಸಂಭ್ರಮದೊಳು ಚರಿಸಿ | 

ಬಂದಳು ಹಮ್ಮೀರಕಿಳಿದು॥

ಹಮ್ಮೀರ ದೇಶದಿ ಕುಮ್ಮಟವಿರುವುದು| 

ನಿಮ್ಮಜ್ಜನಾಳುವನು ಮಗನೇ॥ ॥೧೨೮॥ 


ಮುಮ್ಮಡಿ ಸುತನಾಳ್ವ ಹನ್ನೊಂದು ಲಕ್ಷವು ರಾಜ್ಯ| 

ಧರ್ಮಧರ್ಮದಿ ಕಂಪಿಲನು॥

ಅಂತಪ್ಪ ಕಾಲದಿ ಬಂತು ಡೊಂಬರ ಪಾಳ್ಯ| 

ಜಂತೂರಿಗಿಳಿದು ಕುಮ್ಮಟಕೆ॥೧೨೯॥ 


ಕಾಂತ ಕಂಪಿಲಭೂಪ ತ್ಯಾಗಿಯೆಂಬರು ರತ್ನಿ| 

ಮುಂಚೆ ಆಗುವಳು ಶೃಂಗರವ॥ 

ವಾಲೆ ಮೂಗುತಿ ಕಂಠ ಮುತ್ತಿನ ಡಾಬು | 

ಪಗಡೆ ಗೆಜ್ಜೆ ಕಾಲಕಡಗ ॥೧೩೦॥ 


ಶೃಂಗಾರವಾಗಲು ರಂಭೆ ಮೇನಕೆಯರು| 

ಹಿಂದು ಎನಿಸುವರು ರೂಪಿಂಗೆ॥ 

ನಾರಿ ಶೃಂಗರವಾಗೆ ನಕ್ಷತ್ರದೊಳು ಚಂದ್ರ| 

ಮೂಡಿದಂದಲಿ ತೋರುತಲಿ ॥೧೩೨॥ 


ತೀರಲು ಲಾವಣ್ಯ ನಿಲುವೈಗನ್ನಡಿ ನೋಡಿ | 

ಮೇಲೆ ಚಿಂತಾಕ ತಾನಿಡಲು॥ 

ರಾಯನೋಲಗವನು ಕೇಳುತ್ತರತ್ನಾಜಿ| 

ಸಾಗಲು ಸಂಭ್ರಮದೊಳಗೆ॥೧೩೩॥ 


ನೂರಾರು ಹೆಣ್ಗಳ ಒಡನೆ ಡೊಂಬರು ಕೂಡಿ | 

ಹೋಗಿ ಕರಮುಗಿಯೌ ರಾಯನಿಗೆ॥ 

ರಾಜಾಧಿರಾಜನೆ ತ್ಯಾಗದಿ ಕರ್ಣನೆ| 

ನೋಡಬೇಕೆಮ್ಮ ವಿದ್ಯೆಗಳ॥೧೩೪॥


ಮಹರಾಜ ನೋಡೆನುತ ಕರವ ಮುಗಿಯಲು ರತ್ನಿ| 

ನೋಡಿ ಬೆರಗ್ಹೊಡೆದ ನೃಪನಾಗ॥ 

ಕಂಡನು ಕಮಲಾಕ್ಷಿ ಬಂದಂಥ ಲಾವಣ್ಯ |

 ರಂಭೆಯೆನಬಹುದು ಕಲಿಯುಗದಿ॥೧೩೫॥ 


ಉಂಗುಷ್ಟ ನಡುನೆತ್ತಿ ತುಂಬ ನಯನದಿ ನೋಡಿ| 

ಕಂದರ್ಪ ನೆಲೆಗೆ ಮೈಮರೆದ॥ 

ಫುಲ್ಲಶರನ ತಾಪ ನಿಲ್ಲಿಸಿ ಮನದೊಳು|

 ಅಲ್ಲಿ ಕೇಳುವನು ಮಂತ್ರಿಯನು॥೧೩೬॥


ಎಲ್ಲ್ಯಾರು ಕಂಡುಂಟೆ ಈ ಸತಿ ರೂಪನೆ ಪೋಲ್ವ| 

ಹುಲ್ಲೆಗಣ್ಣಿನ ಬಾಲೆಯರನು॥

ರತಿದೇವಿ ಪರಿಗಾಣೆ ರಾವಣನು ಕೊಂಡೊಯ್ದ | 

ಜಾನಕಿ ಪೋಲ್ವಳು ನೋಡಿದರೆ॥೧೩೭॥ 


ಅಸಮಾಕ್ಷ ಇನ್ನೆಂಥ ರೂಪ ಕಾಂತೆಗೆ ಇತ್ತ| 

ಶೃತಿಮಾಡಲಳವೆ ವರ್ಣನೆಯನು

ಡೊಂಬರ ಕುಲದೊಳಗೆ ರಂಭೆ ಜನಿಸಲು ಚೋದ್ಯ| 

ಅಂಗನಿನ್ನೆಂತು ಪಡೆದಾಕೆ ॥೧೩೮॥ 


ಇಂದಿವಳಾಡುವ ವಿದ್ಯೆ ಕುಶಲವೆಂತೊ| 

ಆಡೆಂದು ವೀಳ್ಯವ ಕೊಡಲು ॥

ಗಾನವ ಪಾಡುವಳು ಕೋಗಿಲೆ ಸ್ವರಗತಿ| 

ಮೂರು ಇಮ್ಮಡಿಯ ರಾಗದಲಿ॥೧೩೯॥ 


ಲಾಗ ಪುಟಗಳ ತೋರೆ ಲೆಗ್ಗೆ ಚಂಡಿನ ತೆರದಿ | 

ಭೂಮಿ ಖೇಚರವ ಸೋಂಕದಲೆ॥ 

ತುರಗದ ಭರದೊಳು ನಡೆವಳು ಮಿಣಿಯೊಳು|

ಎರಳೆ ವ್ಯಾಘ್ರ ರೂಪದೋರುವಳು॥೧೪೦॥


ಸುತ್ತ ನೋಳ್ಪರ ಕಣ್ಗೆ ಮಿಂಚು ಪೊಳೆವಂದದಲಿ| 

ಮುಂಚೆ ನಭದೊಳಗೆ ತೋರುವಳು॥ 

ಅಣುವಿದ್ಯೆ ಶ್ರುಣುವಿದ್ಯೆ ಮಿಣಿಯಲಾಡುವ ವಿದ್ಯೆ | 

ಗಣೆಯನೇರುವ ಶ್ರುಣುವಿದ್ಯೆ॥ ೧೪೩॥॥ 


ಮಳೆಯ ಬರಸುವ ವಿದ್ಯೆ ಕಡಲುಕ್ಕಿಸುವ ಮಂತ್ರ| 

ನಡೆವ ವಿದ್ಯೆಗಳು ಖೇಚರದಿ॥ 

ನಾನಾ ವರ್ಣದ ವಿದ್ಯೆ ನೋಡುತಲಿ ನೃಪವರನು | 

ಧ್ಯಾನ ಮರೆದನು ನಿಮ್ಮಜ್ಜ॥೧೪೪ ॥ 


ರಂಭೆಯುರ್ವಶಿಯರುಂಟೆಂಬುದೆ ಹುಸಿಮಾತು| 

ಇಂದಿವಳ ನಿಜವೆನ್ನಬಹುದು॥ 

ಚಿತ್ರದ ಪ್ರತುಮೆಯೊಳ್ಪುಟ್ಟುವ ಇವಳಂಥ| 

ತಪ್ಪದೆ ಎಳ್ಳನಿತು ಭಾವ॥ ೧೪೬॥ 


ಭೂನಾಥ ಮನಸಿಟ್ಟು ಮಾದಿಗಿತ್ತಿಗೆ ಸೋಲೆ| 

ಮೇಲೆ ಆಶಿಕರಿಗಿನ್ನುಂಟೆ ॥ 

ಬಿರಿದು ನುಡಿಯಲು ಮಂತ್ರಿ ಬಿಡಲಾರೆ ಆ ಸತಿಯ | 

ಕಡಿದು ತಿಂಬುವ ಕಾಮನೆನ್ನ ॥೧೪೯॥ 


ಜಡೆದಲೆಯ ಯತಿಗಳು ಒಡನುಂಡು ಕನ್ನೆಯ | 

ಪಡೆಯದೆ ಕೈಲಾಸಪದವ ॥

ಆದುದೆ ಇದು ಎನ್ನ ರಾಜಮದದೊಳು ಮಂತ್ರಿ| 

ದೇವ ಮಾನ್ಯವರೊಳಗಿರದೆ॥೧೫೦॥ 


ಭೀಮನು ಮನಸೋತು ದನುಜೆ ಹಿಡಿಂಬೆಯ| 

ಕೂಡಲಿಲ್ಲವೆ ಕ್ಷತ್ರಿ ಕುಲದಿ॥ 

ಉಡುಗೊರೆ ವಿಳ್ಯವ ಕೊಡಿಸಿ ಡೊಂಬರ ಕಳುಹಿ | 

ಪ್ರೌಢ ರತ್ನಿಯ ರಾಜ ಕರೆದ॥೧೫೧॥ 


ಪೊಡವಿರಾಜ್ಯಕೆ ಮನೆಗೆ ಒಡೆಯಳಾಗಿರುಯೆಂದು | 

ಮಡಗಿಕೊಳ್ಳಲು ತಮ್ಮ ಬಳಿಯ॥ 

ಹಿರಿಯರು ಬಲ್ಲಂಥ ಅರುಹುಳ್ಳ ಜ್ಞಾನಿಗಳು| ಹೊರಗೆ|

 ಏಕಾಂತ ಮಾಡುವರು॥೧೫೨॥


ಕಡೆಗಾಲ ಈ ಪುರಕೆ ಸೀತೆ ಲಂಕೆಯ ಹೊಗಲು| 

ಅಳಿದ ರಾವಣ ಗಾದೆ ಇವಗೆ॥ 

ಮಂತ್ರಿ ಬ್ರಾಹ್ಮಣರು ಕೂಡಿ ಏಕಾಂತವಾಡುವರು| 

ಕಂಟಕ ಬಿಡದೀಕೆ ಕಾಲಿಂದ॥೧೫೩॥ 


ಬಂಟನಾದ ವೀರ ಬಡನಾಯನು ಕಡಿದೆಂಬ | 

ತುಂಟ ಸೂಳೆಯನು ತರಬಹುದೆ॥

ಪಟ್ಟಾಭಿಷೇಕರರು ಮುಟ್ಟರು ಪರಸ್ತ್ರೀಯ |

 ಶಕ್ತಿಯುಳ್ಳಡೆ ಸಲ್ವ ಜಾತಿಯಲಿ॥೧೫೪ ॥


ಹತ್ತೆಂಟು ತಂದಿನ್ನು ಮದುವೆಯಾಗಲು ಮೋಕ್ಷ | 

ಕೆಟ್ಟ ಸೂಳೆಯರ ಸೋಂಕಿತ ಸಲ್ಲ॥ 

ಕೇಳಯ್ಯ ಮಂತ್ರಿಗಳ ಮೇಲಿಪ್ಪ ಬೈಚಪ್ಪ| 

ಪೇಳುವೆನಿದಕೊಂದು ಕಥೆಯ ॥೧೫೫॥ 


ಲಾಲಿಸಿ ಕೇಳರಸ ಭೂಪಾಲನೆ ಜಟ್ಟಂಗಿ| 

ರಾಮ ಪೇಳುವೆ ಚಾಮರಸ ॥ 

ಭಾನಾಬ್ಧಿ ವಂಶದಲಿ ರಾಯ ತ್ರಿಶಂಕನು|

 ಹೀನ ಸತಿಯಳ ಒಡಗೂಡಿ ॥೧೫೭॥ 


ಮಾನ್ಯರ ಮಾತೇನು ಮೂರು ಶಂಕಾಳ್ದವಗೆ | 

ತೋರದೆ ಹೀನ ಬುದ್ಧಿಗಳು॥ 

ಊರ ಬಾರಿಕನ ಕುಮಾರಿ ಲಾವಣ್ಯಕೆ | 

ಹೊಲಗೇರಿಲಿ ಮನೆ ಮಾಡಿಸನೆ॥ ೧೫೮॥ 


ರಾಯ ತ್ರಿಶಂಕನು ನವಖಾಂಡ ಪೃಥ್ವಿಯನು |

 ಆಳುವನೊಂದು ಚಿತ್ರದಲಿ॥

ಪೂರ್ವವೀ ಪಣೆಯೊಳು ಆದ ಲೇಖನ ಬಿಡದು|

ಸೂರ್ಯಚಂದ್ರರಿಗೆ  ಮುಂತಾಗಿ॥೧೫೯॥


ಮತ್ತೆ ಕೇಳ್ ಬೈಚಪ್ಪ ಇತ್ತ ತ್ರಿಶಂಕನು । 

ಮತ್ತೆ ವಾಲಗದಿ ಕುಳ್ಳಿರಲು॥ 

ಚಕ್ರನಾದವ ತನ್ನ ಕುವರಿಯನೊಡಗೊಂಡು। 

ಇತ್ತಲಾಡುತಿರೆ ಬೀದಿಯಲಿ॥ ೧೬೦॥ 


ನೋಡಿದನವಳ ನಯನೇಂದ್ರಿ ದಣಿವಂತೆ| 

ಮೂಡಲು ಕುಚವು ಎದೆಯೊಳಗೆ॥ 

ಯಾರಿಂಥ ಅತಿಚೆಲ್ವೆ ಜಂಭಾರಿ ಆದಗೆ| 

ಜಾತಿ ಪದ್ಮಿನಿಯೊ ಮೇನಕಿಯೊ॥೧೬೧॥ 


ಆಳಿದೆನು ಭೂಮಿಯನು ಮೂರು ಶಂಕೊರುಷವು| 

ನಾರಿಯ ಕಾಣೆ ಇಂಥವಳ॥ 

ನೀರೆಯನೊಡಗೂಡಿ ಬೆಳಗಾಗಿ ಆಳಿದರೇನು| 

ಕೇಳುವನು ತಮ್ಮ ಮಂತ್ರಿಯ॥ ೧೬೨ ॥


ಹರನುರಿಗಣ್ಣೊಳು ಅಳಿದವನ ಗೆಲ್ವೊಡೆ|

 ಪರಶಿವಗಳವೆ ಇನ್ನೊಮ್ಮೆ॥

ಸೈರಿಸಲಾರದೆ ಸ್ಮರನ ಬಾಣದ ಲಗ್ಗೆ |

 ತರಳೆ ಯಾರೆಂದು ಕೇಳುವನು॥೧೬೩॥ 


ಊರಿಗೆ ಬಾರಿಕನ ಕುಮಾರಿಯೆಂಬರು ಭೂಪ| 

ಹೀನ ಜಾತಿಗಳು ಹೊರಕುಲದ॥

ಆದರಾಗಲಿ ಮಂತ್ರಿ ಆ ನಾರಿಗೆ ಮನಸೋತೆ| 

ಆ ಕೇರಿಯೊಳು ಅರಮನೆ ರಚಿಸು॥೧೬೪ ॥


ರಾಯನಾಡುವ ನುಡಿಗೆ ಪ್ರಧಾನನು ಗಹಗಹಿಸಿ| 

ತೂಗಿಯೆ ತಲೆಯ ಮನದೊಳಗೆ॥ 

ತೀರಿತು ಕಡೆಗಾಲ ಮೂರು ಶಂಕವನಾಳಿ ।

 ಹೀನಸತಿಯಳನು ನೆರೆಯೆಂದು॥೧೬೫॥ 


ಲಾಲಿಸಬಹುದು ಭೂಪಾಲ ಬಿನ್ನಹವನ್ನು | 

ಕ್ಷೀಣಜಾತಿಯಳು ಸತಿಯಾಕೆ॥

ಕಾಣದೆ ಮನವಿಟ್ಟಿ ಅನ್ಯ ಆಜ್ಞೆಗಳು।

ಆಗಲೆ ಯಮನೊಳಗೆನಲು॥೧೬೬॥ 


ಮರುಳ ಮಂತ್ರಿಯೆ ಕೇಳರಿಯದಾಡುವೆ ನೀನು । 

ಹಲವು ಜನ್ಮದಲಿ ಹೊಲೆಯಿಲ್ಲವೆ॥ 

ಹೊಲೆಯರ ಮನೆಯೊಳಗಿರಲೊಂದು ರತ್ನವು। 

ದೊರೆಗಳಾದವರು ಧರಿಸರೆ ॥೧೬೭॥ 


ಹೆಣ್ಣು ಹೊನ್ನಿಗೆ ರತ್ನ ಮಣ್ಣಿಗೆ ಕುಲವೇನು। 

ಸಣ್ಣ ಮಡಕೆಯಲಿ ಸೂತಕವೆ॥ 

ಕಣ್ಣಿಟ್ಟ ಬಳಿಕಲಿ ಇನ್ನೇನು ಎಲೆ ಮಂತ್ರಿ। 

ಹಣ್ಣಿದಂತಾಯ್ತು ರತಿಕಲೆಯು॥೧೬೮॥ 


ದೊರೆಗಳಿಗೆ ಕುಲವೇನು ತಿರುಕಗೆ ಭಯವೇನು। 

ಪರಮಲಿಂಗಕೆ ಹೊಲೆ ಛಲವೆ॥ 

ನವರತ್ನದೊಳಗೊಂದು ಸ್ತ್ರೀರತ್ನ ಮುಖ್ಯಳು।

 ಹರಳಯ್ಯನೊಳಗೆ ಹರನುಣನೆ॥೧೬೯॥


ದೊರೆತನವ ಮಾಳ್ಪ ನರಕವಲ್ಲದೆ ಮುಂದೆ| 

ಮರುಜನ್ಮವುಂಟೆ ಭವಭವದ ॥ 

ಧರಣಿಯೊಳ್ಬೆರೆದುಣನೆ ಜಾತಿಯೊಡೆಯರು ಡೊಂಬ| 

ತರಳೆ ಚೆನ್ನಯ ಒಡನಾಡಿ॥೧೭೦॥ 


ಪ್ರತಿ ಮಾತನಾಡದೆ ಮನೆಯ ಮಾಡಿಸು ಮಂತ್ರಿ| 

ರತಿನಾಥನಟ್ಟಳೆ ಘನವು॥ 

ಸಕಲ ಜಾತಿಗಳೊಳು ಹಿರಿಯ ಕುಲದವರಾಗಿ | 

ಪ್ರತಿ ನೀರು ಹೊರಗವರ ಮನೆಯ ॥೧೭೧॥ 


ಯಾರು ಮಾಡುವುದೇನು ಪೂರ್ವ ಜನ್ಮವು। 

ಹೀನಕುಲ ಸ್ತ್ರೀಯ ನೆರೆಯೆಂದು॥ 

ವಾಣಿಪತಿ ಬರೆದ ಭವ ಲಿಖಿತವು ಬಿಡದು। 

ಸಾಗಿಸು ಮಂತ್ರೀಶ ಮನೆಯ॥೧೭೨॥ 


ಹರಳರ ಕೇರಿಯೊಳ್ ಮನೆಮಾಡಿ ಮಂತ್ರೀಶ | 

ತಿರುಗಿ ಬಂದರಸಗೆ ಎರಗೆ॥ 

ಬೆರಸಿ ನೋಡುವೆನಿದಕೆ ಟವುಳಿ ಮಾತನುಯೆಂದು| 

ಭಯಭೀತಿಯೊಳಗೆ ಪೇಳುವನು॥೧೭೩॥ 


ಬಂದಾಗ ಕರಮುಗಿದು ರಾಜೇಂದ್ರ ಬಿನ್ನಹ ಕೇಳೊ| 

ಅಂಜುವೆ ಅರುಹಲ್ಕೆ ಮನದಿ॥ 

ನಂದಾದೀವಿಗೆ ಬೆಳಕು ಕಂಡರೆ ಕೂಡಿರ್ದ |

ಗಂಡಗೆ ಮರಣರೀತಿಯಲಿ॥೧೭೪ ॥ 


ಬೇಡ ದೀವಿಗೆ ಮಂತ್ರಿ ಮಾಡುವುದು ನೀನೇನು | 

ಸಾಗಿಸು ಸಕಲ ಭೂಷಣವ॥ 

ನಾನೊಂದನೆಣಿಸಲು ತಾನೊಂದಾಯಿತುಯೆಂದು | 

ಸಾಗಲು ಮಂತ್ರಿ ಸತಿಯೇಡೆಗೆ॥೧೭೫॥ 


ರಾಯ ತ್ರಿಶಂಕನ ರಾಣಿ ಗೃಹಕೆ ಪೋಗಿ | 

ಜೋಡಿಸಿ ಕರಗಳ ಮುಗಿದು॥

ಏನು ಹೇಳಲಿ ತಾಯಿ ಭೂಪಾಲ ಅಪಕೀರ್ತಿ | 

ಮೂಲೋಕದೊಳಗಿಲ್ಲವಮ್ಮ॥೧೭೬॥ 


ಹರಳನ ಮನೆಯೊಳಗೆ ನೆರೆ ಚೆಲ್ವೆ ಸ್ತ್ರೀಯಿರಲು| 

ಧರಣೀಶ ಭ್ರಮೆಗೊಂಡನಮ್ಮ॥ 

ರಚಿಸೆನಲು ಗೃಹವನು ಮಾಡಿಸಿ ನಿಮ್ಮೆಡೆಗೆ । 

ಉಸುರಿದೆ ದಯಮಾಡಬಹುದು॥೧೭೭॥ 


ಬೀಳು ಮಾಡದೆ ತಾಯಿ ಸೇವಕನ ಬಿನ್ನಪವ| 

ಲಾಲಿಸಿ ಅವರ ಭಾವದಲಿ॥ 

ಈ ರಾತ್ರಿ ದಯಮಾಡಿ ಆ ಗೃಹದೊಳಗಿರಲು| 

ಕಾಲನ ಭಯವಿಲ್ಲ ನೃಪಗೆ॥೧೭೮॥ 


ಲಿಖಿತದ ಬರಹವು ಅಪಕೀರ್ತಿ ಸಾಧನವು| 

ಮತಿಗೆಡಲು ನೃಪವರನ ಬುದ್ಧಿ ॥ 

ಸತಿಯರ ಭ್ರಮೆಯಿಡಲಿ ಸಲುವ ಜಾತಿಯ ಮೇಲೆ| 

ಕಿರಿ ಕುಲದೊಳಗಿಡಬಹುದೆ॥೧೭೯॥ 


ತೋರದೆ ಕುರುಹು ನೀವ್ ಹೊಸ ನೀರೆಯಂದದಿ | 

ನಾಚಿ ಮುಗುಳಂತಿರಬೇಕು ರಾತ್ರಿ॥ 

ಆಗಲೈ ಎಲೆ ಮಂತ್ರಿ ಪ್ರವೀಣನಾದವ ನೀನು3 

ಜೋಡಿಸಿದೆ ಈ ಬಗೆಯ ತಂತ್ರ ॥೧೮೦॥ 


ಒಪ್ಪಿ ಕೊಳುತಲಿ ನಾರಿ ಕೀರ್ತಿ ಪಡೆದೆಲೆ ಮಂತ್ರಿ| 

ಪೃಥ್ವಿಯೊಳುಂಟೆ ಪೋಲ್ವವರು॥ 

ಇಟ್ಟ ಭೂಷಣದುಡಿಗೆ ಕಳೆದಿಟ್ಟು ಹೊರಕುಲದೊಳಗೆ। 

ಒಪ್ಪುವ ಸ್ತ್ರೀಯಾಗಿ ನಡೆಯೆ॥೧೮೧॥ 


ರಾಯನರ್ಧಾಂಗಿಯು ಹೋಗಿರಲು ಹೊಲಗೇರಿ| 

ಗೃಹದೊಳಗೆ ದಿನಕರನು॥ 

ತಾಯ ಗರ್ಭವ ಸೇರೆ ರಾಯ ತ್ರಿಶಂಕನು | 

ಸಾಗಲು ಹರಿಸಿ ವಾಲಗವ॥೧೮೨॥ 


ಕೇಳೆನ್ನ ವರ ಮಂತ್ರಿ ಮಾಡಿದ ಕಳತ್ರಯವ| 

ರಾಣಿ ಕರ್ಣಕೆ ಮುಟ್ಟಲೆನುತ॥ 

ಹೋಗಲಾಗ ತ್ರಿಶಂಕು ಹೊಲಗೇರಿ ಗೃಹದಿ। 

ಲಲನೆಯೊಳಗೆ ಸುಖವಡೆಯೆ॥೧೮೩॥ 


ತಿಳಿಯದೆ ಸತಿ ಕುರುಹ ನೆರೆಯಲು ಹೊಸಬಾಲೆ। 

ತೆರದೊಳು ಕಂಡು ಸೈಖದೊಳಗೆ॥ 

ಅಗಲಿದ ರತಿಯನು ಅಳಿದ ಮನ್ಮಥ ಕಂಡು। 

ಕೋಡುವಂತೆ ಪಲ ಬಗೆಯ ಸುಖವ॥೧೮೪॥ 


ಘನವಾಗಿ ನೃಪನಿರಲು ಮನಸಿಜಾಂತಕನಲಿ । 

ನೆಲೆಗೊಂಡ ಸತಿಯ ಗರ್ಭದಲಿ॥

ತಂದೆ ಮಾಡಿದ ಕರ್ಮ ಕಂದರ ಕಾಡದೆ | 

ಬಿಂದು ನಿಲ್ಲಲು ಹೊಲಗೇರಿಯೊಳಗೆ॥೧೮೫॥ 


ಮುಂದಲ್ಲಿ ಜನಿಸಿದ ಹರಿಶ್ಚಂದ್ರರಾಯ ಪಾಡು| 

ಇದರಿಂದಲಾದುದು ಬೈಚಪ್ಪ ॥

ಸತ್ಯದಿ ಹರಿಚಂದ್ರ ಸಮರ್ಥನಾಗಲು ಮಂತ್ರಿ|

 ಕೀರ್ತಿಪಡೆಯನೆ ಕಾರ್ಯಚರಿತೆ॥೧೮೬॥


ಕರ್ತು ಹರನು ಮೆಚ್ಚೆ ಕೈಲಾಸ ಪದವನೆ ಕಂಡ| 

ಗೊತ್ತಹುದೆ ತ್ರಿಶಂಕನ ಮಾತು॥ 

ಶಂಕು ಮೂರಾಳ್ದನ ಉಂಟೆ ಕಥೆ ಕಾರ್ಯಗಳು |

 ಕೆಟ್ಟ ಮನುಜನಿಗೆ ಕಡೆಯಾದ॥೧೮೭॥॥


ಬಿಟ್ಟನಾದಿಯ ಗುರುವ ಮತ್ತೇಕಾಕಿಯಾಗಿ | 

ಕೆಟ್ಟೆ ಹರಿಹರನ ಕಾಣದಲೆ ॥ 

ಅಷ್ಟು ಬಾಳಿದ ಮೇಲೆ ಬುದ್ಧಿ ಕೂಡದು ಅವಗೆ| 

ಭ್ರಷ್ಟ ಕಂಪಿಲನ ಮಾತೇನು॥೧೮೮॥ 


ಅರಿದು ಮಾಡಲು ಹಾದರ ಪರರ ಭೀತಿಗಳೇನು| 

ಬರಿದೆ ನಾವೆಲ್ಲರಾಡುವುದು॥ 

ಅನರ್ಥ ನೋಡುವ ಮುಂದೆ । 

ಗೋಪ್ಯದೊಳವರು ಇರುತಿರಲು॥೧೯೨॥ 


ಮತ್ತೊಂದು ಗ್ರಹಿಸಿದ ರಾಯ ಕಂಪಿಲ ಮನದಿ। 

ಯಾತ್ರೆ ಮಾಡುವ ರಾಮೇಶ್ವರನ ॥ 

ಎನ್ನ ಮಂತ್ರೀಶನೆ ನಾಳಿನ ದಿನದೊಳು | 

ದೇವಾಲಯಕೆ ಹೋಗಬೇಕು॥೧೯೩॥ 


ಜ್ಯೋತಿರ್ಮಯನ ಗುಡಿ ರಚಿಸಿ ಶೃಂಗರ ಮಾಡಿ | 

ಭೂಪಗರುಹಲು ವರಮಂತ್ರಿ॥ 

ತೋರಣ ಮೇಲ್ಕಟ್ಟು ಬೀದಿ ಶೃಂಗರಮಾಡಿ| 

ಭೇರಿ ಕಹಳೆಗಳೊದರುತಲಿ॥೧೯೭॥ 


ಸತಿಯರು ಪಟ್ಟದರಾಣಿ ಒಡನೆ ಬಹ | 

ಸಖಿ ಜನದ ಜಾತ್ರೆ ಸಹವಾಗಿ॥ 

ಪಗಲೊಡೆಯ ರಥವೇರಿ ಪ್ರಭೆಸೂಸಿ ಬರುವಂತೆ| 

ನಗರವ ಪೊರಡೆ ರಾಜೇಂದ್ರ ॥೧೯೯॥ 


ಮೆರವಣಿಗೆ ಉತ್ಸವ ಕರಡೆ ಪಾತ್ರಗಳಿಂದ | 

ಹರನ ಊಳಿಗವ ನಡೆಸುವರು॥ 

ಅಷ್ಟಭೋಗದ ಪೂಜೆ ಕೊಟ್ಟನು ನೃಪ ಹರಗೆ| 

ಮೆಚ್ಚುವಂದದಿ ಸುರಗಣವು೨೦೧॥ 


ಜನಕನು ನಿಮ್ಮಯ್ಯ ಅಯ್ಯ ಮಾಡಿರುವಂಥ | 

ವನಕೆ ಬಿಜಯಂಗೆಯ್ಯೆ ನೋಡಲ್ಕೆ॥ 

ತಂದೆ ಹಾಕಿಸಿದಂಥ ಶೃಂಗಾರವನ ನೋಳ್ಪೆನೆಂದು | 

ನಡೆಯಲು ತಾನು ನೃಪವರನು॥೨೦೩॥ 


ಇಂತೊಮ್ಮೆ ಗುಟುಕನು ಗುಟುಕನು ಕಚ್ಚಿ ಮುದ್ದಾಡುವ| 

ಪಕ್ಷಿಗೆ ಕಡೆ ನಮ್ಮ ಜೀವ॥ 

ಮಕ್ಕಳಿಲ್ಲದ ಮನೆಯು ಒಕ್ಕಲಿಲ್ಲದ ಗ್ರಾಮ | 

ಭಕ್ತಿಯಿಲ್ಲದ ಶಿವ ಪೂಜೆ॥೨೦೯॥ 


ಮುಕ್ಕಣ್ಣನವತಾರ ಇಲ್ಲದ ಊರನು | 

ಹೊಕ್ಕರೆ ಫಲವೇನು ಕಾಂತ॥ 

ಬಾಲರಾಡದ ಮನೆಯು ದೀವಿಗಿಲ್ಲದ ದೇವಾಲ್ಯ| 

ಹಾಲು ಹಯನಿಲ್ಲದ ಹಬ್ಬ॥೨೧೦॥ 


ಮುಕ್ಕಣ್ಣ ಹರನೊಳು ಪಡೆಯದೆ ನಾವ್ ಬಂದು | 

ಇಲ್ಲ್ಯತ್ತರೇನು ಫಲ ಕಾಂತೆ॥ 

ಸತಿಯೆ ಕೇಳೆಲೆ ನಾರಿ ಮತಿಗೆಟ್ಟು ಶೋಕಿಸುವೆ| 

ಸುತರ ಪಡೆಯಲು ಸುಮ್ಮನಹುದೆ॥೨೧೫॥


ಸಿತಕಂಠನೊಳು ಮುನ್ನ ಪಡೆಯದೆ ನಾವ್ ಬಂದೈ| 

ವಿಕಳತೆಬಡುವರೆ ನಾರಿ ॥ 

ಮಕ್ಕಳಾದಡೆ ಏನು ಅಪಕೀರ್ತಿ ಸಾಧನವು| 

ಹೆತ್ತವರಿಗೆ ಬಿಡದೀನ॥೨೧೬॥ 


ಭಾಷೆ ರಾಣಿಗೆ ಇತ್ತು ಭವರೋಗ ಜಟ್ಟಿಂಗ ॥ 

ರಾಮೇಶ ಗುಡಿಗೆದ್ದು ನಡೆಯೆ॥

ಬಾಲರ ಅಪೇಕ್ಷೆ ರಾಯಗೆ ತಲೆದೋರಿ | 

ಸಾಗಲು ಹರನ ಆಲಯಕೆ॥೨೧೯॥ 


ವ್ಯಾಲದ : 


ಬೇಡುವೆನು ಹರನೆ ನಿಮ್ಮ | ದಯಮಾಡದಿರಲು |

ಹರಣಗಳನು ನೀಡುವೆನು ಪಾದದೆಡೆಯ ಹಾಯ್ದುಶೂಲವ| 

ಊನವ್ಯಾಧಿ ತನುಜರೆನಗೆ ಬೇಡ ಹರನೆ| 

ಜಗವನೊತ್ತಿ ಆಳುವಂಥ ಧೀರನೆನಗೆ ಪಾಲಿಸೆನಗೆ| 


ಅನಿತರೊಳಗೆ ಹರನು ದಯಕರಿಸಿ ಕೊರಳಿನ | 

ಹೆದೆಪುಷ್ಪವನು ತೆಗೆದಿಡಲು | ಮನಸಿಗೆಸಂಶಯ ನಿರ್ಧರವು | 

ಕಾಣದು ಗುರುವೆ ಅಭಯ ಪ್ರಸಾದ ಪಾಲಿಪುದು| 

ತಿಗುಳಾಣ್ಯ ಮುಗುಳಾಣ್ಯ ತೆಲುಗಾಣ್ಯ ಚತುರ್ದಿಕ್ಕು | 

ನವಖಾಂಡ ಇದಿರಿಲ್ಲವೆಂಬ | ಚದುರ ಪ್ರತಾಪಿಯ | 

ಹೃದಯದಿ ಕೊಡಬೇಕು | ಅಧಮನಾಗಲು ಒಲ್ಲೆ ಹರನೆ| 

ಸೋಮಧರನಿಗೆ ಶಾಂತಿ ಪುಟ್ಟಿ | ಕೋಮಳಾತ್ಮದಿ ಹಿಗ್ಗಿ ಬೇಡಿದ ವರವಿತ್ತು ಹರನು| 

ಕಾಲಭೈರವನಂಥ ಕುಮಾರನಾಗಲಿಯೆಂದು ತ್ರಿಶೂಲದ ಪ್ರಸಾದವಿಡಲು| 

ಗಂಧ ಪ್ರಸಾದವ ತಂದು ತಮ್ಮಡಿ ಕೊಡೆಯೆನಲು| 

ಒಂದಾರು ಭುಜವಾಗೆ ನೃಪನು| 

ಚಂದ್ರಧರನ ತಮ್ಮ ವಂಶವನುದ್ಧಾರವ ಮಾಳ್ಪ | 

ಮಟಡೆಯಮೇಲಿಟ್ಟುಕೊಟಡ | 

ಕದಳಿಯ ಫಲದಲ್ಲಿ ಹುದುಗಿ ಪ್ರಸಾದವ | 

ಮಡದಿ ಹರಿಯಮ್ಮಗೆ ಕೊಡಲು | ವರುಷವನೇ| 

ಯಾಕೆ ತೋರಲು | ಬೆರಗಾದ ಮನಮೂರ್ಚೆಯೊಳಗೆ| 

ಪುತ್ರ ಕೇಳೈ ನಿಮ್ಮ ಪಿತನ ಜನನತ್ವ ಹತ್ತಿತೆ | 

ಕರ್ಣಶೋಭಿತವೊ ಇತ್ತನು | ಹರಶಂಭು ಜಟ್ಟಂಗಿ | 

ರಾಮೇಶ್ವರನಾ ಶಕ್ತಿಯಾದಂಥ ವರಪಿಂಡ | 

ಜನ್ಮ ಪಾವನ ಗುರುವೆ ಮುಗಿಸಿ ಇಂದಿಗೆ ವಚನ | 

ಪಗಲೊಡೆಯ ತಾಯೊಡಲಗಂಡ | 

ಮೃಗಧರನು ಹಂಪೆ ವಿರೂಪಾಕ್ಷನ ವರದೊಳು| 

ಮುಗಿಯಲು ಪ್ರಥಮ ಏಕಸಂಧಿ| 


ಸಂಧಿ : ಎರಡು 


ಬಾಲರಾಮನ ಜನನ :


ಕಂದ: 

ಹರನಿತ್ತ ಪುಷ್ಪ ಫಲದೊಳು| 

ತರಳೆ ಹರಿಯಮ್ಮನೊಳಗೆ ಕುರುಹುದೋರಲು| 

ಹರಿಣಾಂಕನುಬ್ಬುವಂತೆ ತಾಯ ಹೃದಯದಿ| 

ಬಿರುದಾಂಕ ರೆಮೇಂದ್ರ ಜನಿಪ ವಾರ್ತೆಯ ಲಾಲಿಸಿ ॥ 


ಪದನು :


ಹೆದರಬೇಡವೊ ಮಗನೆ ಹೃದಯದೊಳೊರ್ವನು |

ಚದುರ ಪ್ರತಾಪ ಜನಿಸುವನು॥ 

ಇದಿರಿಲ್ಲ ಅವನಿಗೆ ಭುವನ ನವಖಂಡಗಳು | 

ವಿಧಿವೃಸ ಸ್ವಲ್ಪ ಕಿಂಚಿತವು ॥ ೨೦॥ 


ಛಪ್ಪನ್ನ ರಾಯರೊಳ್ ಕಪ್ಪವ ತೇಗೆವನು| 

ಸತ್ಯದೊಳು ಹರಿಚಂದ್ರನೆನಿಸುವನು॥ 

ಪರಸ್ತ್ರೀಯ ಒಪ್ಪಕೆ ಸಿಲುಕನು ಒಂದು ಕಂಟಕವುಂಟು| 

ತಪ್ಪದಾಳ್ವನು ಮೂವತ್ತೊರುಷ॥೨೧॥ 


ಸ್ವಪ್ನದಿ ಹರಬಂದು ಕೃಪೆಯ ಪಾಲಿಸಿ ಹೋಗೆ|

ನೃಪವರನು ಬೆದರಿ ಹಮ್ಮೈಸಿ ॥ 

ಈ ಪರಿ ತಿಳಿದೆದ್ದು ಎಡಬಲದ ಸತಿಯರನು| 

ತಡವರಿಸಿ ಹೆದರಿಯಬ್ಬರಿಸೆ॥೨೨॥ 


ಕಾಂತನ ಕೈಸನ್ನೆ ಕಂಡು ಸತಿಯರು ಹೆದರಿ | 

ಬಿಮ್ಮನೆ ಬಿಗಿದು ತಬ್ಬುವರು॥

ಎದೆಹಾರಗಳ ಬಿಡಿಸಿ ಏನೆಂದು ಕೇಳಲು| 

ಮೃದು ಬಾಲನಂತೆ ತೊದಲಿದನು॥೨೩॥ 


ಮಡದಿ ಕೇಳೆಲೆ ಓರ್ವ ಒಡೆಯರ ರೂಪಿಂಗೆ | 

ಸುಳಿದನು ಮುನಿಯ ವೇಷದಲಿ॥ 

ಜಡದಲೆ ಕರದೊಳು ನರನ ಕಪಾಲವು| 

ತೊಡರಿದ ಹಾವು ಮೈಯೆಲ್ಲ॥೨೬॥ 


ಅತ್ತತ್ತ ಹೋಗೆನಲು ಇತ್ತಿತ್ತ ಬರುವನು| 

ಒತ್ತಿಗೆ ಇಬ್ಬೆರಳು ಸುಳಿದು॥ 

ನೆತ್ತಿಯೊಳುರಿಗಣ್ಣು ಸುತ್ತ ಮರುಳ ತಂಡ| 

ಪೃಥ್ವಿಯೊಳಿಲ್ಲದಂಥ ರೂಪ॥ ೨೭॥ 


ಸಾವಿರ ಹಾವುಗಳ ಯಾವಲ್ಲಿ ಪಿಡಿದಿಹನೊ| 

ಆಹಾರಕೇನ ಮಾಡುವನೊ॥ 

ಬೇಡಯ್ಯ ಬೇಕಾದ ಸುವರ್ಣ ಸಾವಿರವೆನಲು| 

ಬಾಲಸಂತತಿಯ ಪೇಳಿದನು॥ ೨೯॥ 


ಭಾಳಲೋಚನ ಬಂದು ನಿಜರೂಪತೋರಿದಡೆ |

 ಹುಚ್ಚಾಗಬಹುದೆನ್ನ ಪ್ರಿಯ ॥ 

ಹುಟ್ಟು ದರಿದ್ರನಿಗೆ ಹೊಂದಿಡಲು ಕಣ್ಣೆರಡು| 

ತೋರದೆ ಅಣಕಿಸಿ ನಡೆದ ॥ ೩೦॥ 


ಹರಿಹರದೇವಿಗೆ ಘನಸ್ಥಾನವು ನಿಲ್ಲೆ| 

ಮೃಗಧರನ ವರಧೃಷ್ಟಿಯೊಳಗೆ ॥ 

ಮುಗುಳುದೋರ್ವುದು ಮೊಲೆಯು ತುದಿಗೆಂಪು ಕಪ್ಪಡರಿ| 

ಮೃಗಮದವಾಗೆ ಮೈಬಣ್ಣ ॥ 


ಒಂದೆರಡು ಮೂರಾಗೆ ಚಂದ್ರವದನೆ ದೇಹ| 

ಕಂಡನು ನೃಪ ತನ್ನ ಸತಿಯ ॥ 

ಚಂದ್ರನು ದಿನದೆನಕೆ ಪೆಚ್ಚುವ ತೆರದಿ ತ್ರಿ | 

ಮಾಸಗಳ ಒಸಗೆ ಮಾಡಿಸುವ॥೩೪ ॥


ತುಂಬಿದ ಬಸುರಿಗೆ ತುಟಿ ಬಾಯಿ ಒಣಗುತ್ತ | 

ಹಂಬಲಿಸುತ್ತ ಪಲ ಬಗೆಯ ॥ 

ಒಂಬತ್ತರೊಳವಿಗೆ ಮುಂದುವರಿಯಲು ಮಾಸ| 

ನೊಂದುಕೊಂಡನು ಚಿಂತಿಪನು ॥೩೮॥ 


ಪಟ್ಟದ ರಾಣಿಗೆ ಹುಟ್ಟಲು ಕಿರಿ ಬೇನೆ| 

ಕಟ್ಟನೆ ಕರೆಸಿ ಸೂಲಿಗರ ॥ 

ಕೊಟ್ಟು ಉಡುಗೊರೆ ತೊಡ ಬಣ್ಣ ಸತಿಯಳ| 

ಕಷ್ಟ ಕೋಟಲೆ ನಿಮದೆಂದ ॥೩೯॥ 


ಸುತನ ಜನನತ್ವ ನೋಡಲ್ಕೆ ರವಿ ಪೂರ್ವ| 

ರಥವೇರಿ ಬಂದನು ತನುಜ॥ 

ಸಿತಕಂಠ ಹರಿಬ್ರಹ್ಮ ನಂದಿ ಗರುಡನೇರಿ | 

ಮೇರು ಮಂಡಲದಿ ನೋಡುತಲಿ॥೪೦॥ 


ಶ್ರಾವಣ ಮಾಸದೊಳು ತಿಥಿ ಪಂಚ ಗುರುವಾರ| 

ಜಾವ ಎರಡನೆ ಏಳು ಘಳಿಗೆ ॥ 

ಪೌರ್ಣಮಿ ಚಂದ್ರಾಮ ಪೂರ್ವದೊಳಿಪ್ಪಂತೆ | 

ಬಾಲಕ ತೋರೆ ಸೂಲಿಗರ॥೪೨॥ 


ಫುಲ್ಲಶರನ ಪೋಲ್ವ ಪುರೈಷ ಶಿಶುವಿನ ತೊಳೆ| 

ದಲ್ಲಿ ಶಾಸ್ತ್ರಗಳ ಮಾಡುವರು ॥ 

ನಿಲ್ಲದೆ ಪಲ ಬಗೆಯ ದೃಷ್ಟಿ ಆರತಿ ಬೆಳಗಿ | 

ಚೆಲ್ವ ಬಾಲನಿಗೆ ಮೊಲೆಯೂಡಿ॥೪೪॥ 


ಪರಿದೋಡಿ ಬರುತಿರೆ ತರಳೆಯೋರ್ವಳು ದಾಸಿ | 

ಅರಸರಿಗೆ ವಾರ್ತೆ ಪೇಳಲ್ಕೆ ॥ 

ಎಡಹುತ ಮುಗ್ಗರಿಸುತ ಬರುವ ದಾಸಿಯ ಕಂಡು | 

ಎದೆ ಹಾರಿ ನೃಪನು ಕೇಳುವನು ॥೪೫॥ 


ಹಿಂಗಿತ್ತು ಜನನತ್ವ ಅಂಗನೆಗೆ ನೃಪವರನೆ| | 

ರಂಗನಾಯಕ ನಮಗೆ ಭೂಪ ॥ 

ಕುಂಜರವೈರಿ ಭೇರುಂಡನ ಮರಿ ಹೋಲ್ವ| 

ಕಂದ ಬಾಲಕನ ಪಡೆದಳು॥೪೬॥ 


ಮಂತ್ರಿ ಕೇಳ್ ಬೈಚಪ್ಪ ಚಿಂತೆ ಇಂಗಿತು ಇಂದು | 

ಮುಂತೆ ಸಮನಾದೆ ಧರಣಿಯಲಿ॥ 

ಅಂತಿಂತು ಆಗಲು ರವಿಚಂದ್ರ ಇರುತಿರ್ಪ| 

ಮುಂಚೆ ತಪ್ಪದೆ ಅಪಕೀರ್ತಿ ॥೫೦॥ 


ಗುರುರಾಯ ಫಲದೋರಿ ಬೆಳೆಸಿಕೊಂಡಿರಿ ಮನೆಯ |

 ನೆರೆ ಬಂಜೆತನ ಹಿಂಗಿತೆನಗೆ ॥

ಕರುಣದಿ ನಿಮ್ಮಯ ಮಗನ ನೋಡುವುದೆಂದು | 

ಕರದೊಳಗಿಡಲವ ಶಿಶುವ ॥೫೯॥ 


ನೋಡಲು ಮುನಿರಾಯ ಬಾಲನ ನಿಜರೂಪ| 

ತಾವರೆಗೆಣೆಯೇ ಎನ್ನಯ್ಯ ॥ 

ಜೋಡಿಲ್ಲ ಧರೆಯೊಳು ಧರ್ಮಜನನುಜನ | 

ರೀತಿಗೆ ಸಮನೆನ್ನಬಹುದು ॥೬೦॥ 


ಅರಸ ಕೇಳೆಲೆ ಭೂಪ ನರನಲ್ಲ ಈ ಬಾಲ | 

ಹರಿಣಾಂಕ ಸಮನು ಎನಬಹುದೇ ॥ 

ಬಿಡು ಮುನ್ನ ಮೂರ್ಲೋಕವಡೆದು ಕಪ್ಪವ ತಂದು | 

ಬಹುಕಾರ್ಯ ಫಲ ಸ್ಥಿತಿಗತಿ॥೬೧॥ 


ಮೊದಲು ಕಂಟಕ ರಾಯ ಮಾಡದೆ ಕಳಹಾದರ | 

ಕಳೆದಳಿವ ಮೂವತ್ತರೊಳಗೆ॥ 

ಕಿರಿಯ ಜನನಿಯಿಂದ ಮರಣ ತಪ್ಪದು ರಾಯ | 

ಮರಣವನು ತಿಳಿದಿರೋ ಮಂತ್ರಿ ॥೬೨॥ 


ನಾಮಕರಣಂಗಳ ಮಾಡಿದ ಮುನಿಗುರು | 

ರಾಮ ಕುಮರಯ್ಯನೆನುತೆ ॥

ಭೂಮಿ ಚಂದ್ರುಳ್ಳನಕ ಪೆಸರಾಗಿ ಬಾಳ್ವನೆನುತ | 

ಸಾಗಲು ಗುರುಮುನಿ ಹರಸಿ॥೬೩॥   


ಕರ್ತು : ಮಹಲಿಂಗಸ್ವಾಮಿ

ಸಂಪಾದಕರು: ಡಾ ॥ ಎಂ. ಎಂ. ಕಲಬುರ್ಗಿ, 

ಪ್ರಕಾಶಕರು: ಪ್ರಸಾರಾಂಗ ,

ಕನ್ನಡ ವಿಶ್ವವಿದ್ಯಾಲಯ ,

ಹಂಪಿ.


























 






 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ