ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಭಾನುವಾರ, ಸೆಪ್ಟೆಂಬರ್ 17, 2017

ಗಿರಿಜಾ ಕಲ್ಯಾಣ - ಹರಿಹರ


ಗಿರಿಜಾ ಕಲ್ಯಾಣ - ಹರಿಹರ
ಪ್ರಥಮಾಶ್ವಾಸಂ•
ಹೈಮಾಚಲವರ್ಣನಂ.

ಶ್ರೀಮಚ್ಚೈಲೇಂದ್ರಪುತ್ರೀ ಗುರುತರಹೃದಯಕ್ಷೀರವಾರಾಚಂದ್ರಂ
ವ್ಯೋಮಾರ್ಕೇಂದುಕ್ಷಮಾತ್ಮಾನಲಜಲತಪಮಾನಾಷ್ಟಮೂರ್ತಿಪ್ರಸಿದ್ಧಂ
ಪ್ರೇಮಂಭೆತ್ತೀಗೆ ಸದ್ಭಕ್ತಿಯನೆಮಗಮರಾನೀಕಮಾಣಿಕ್ಯಮೌಳಿ
ಸ್ತೋಮಾಂಘ್ರಿದ್ಯೋತಿ ಪಂಪಾಪುರದರಸ ವಿರೂಪಾಕ್ಷನಾನಂದದಿಂದಂ ||೧||

ಶ್ರೀಹೇಮಾದ್ರೀಂದ್ರ ಚೂಡಸ್ತಿರಕರಣಸಮಾರೂಢ ಪದ್ಮಾಸನಸ್ಥಂ
ಕೋಹಂ ಸೋಹಂಗಳೆಂಬಾ ಗಜೆಬಜೆ ಪುಗದಾನಂದಸಂವಿತ್ತು ಕಂದ
ರ್ಪಾಹಂಕಾರಪ್ರವಿಧ್ವಂಸನಕರನಿಟಿಲಾಕ್ಷಂ ಶಿವಂ ಪಾರ್ವತೀಶಂ
ನೇಹಂ ಕೈಮುಕ್ಕು ಪಂಪಾಪುರಪತೀದಯೇಯಿಂ ನೋಡಿ ರಕ್ಷಿಕ್ಕೆ ನಮ್ಮಂ ||೩||

ಮಂಗಳಮೂರ್ತಿ ಮಾನಿನಿ ಮಹೋಜ್ವಳೆ ಮಾನ್ಯೆ ಮಹಾಮಹೇಶನ
ರ್ಧಾಂಗಿ ಮಹೋವಿರಾಜಿತೆ ಮಹಾಶೀವಭಕ್ತೆ ಮಹಾ ಪತಿವ್ರತೋ
ತ್ತುಂಗೆ ಮಹಾತ್ರಿಲೋಚನೆ ಮಹಾನಿಧಿ ತನ್ನ ವಿವಾಹವರ್ಣನಾ
ಸಂಗತಿಯೆಂದು ಮತ್ಕೃತಿಗೆ ಪಾರ್ವತಿ ಮಾಳ್ಕೆ ಮಹೋತ್ಸವಂಗಳಂ ||೪||

ಎನ್ನೀ ಕಾವ್ಯಕ್ಕೆ ನಿರ್ವಿಘ್ನದಿನತುಳನವೀನಾರ್ಥವಾಕ್ಯಪ್ರಸನ್ನೋ
ತ್ಪನ್ನಾಲಂಕಾರಮಂ ಕೂಡುಗೆ ವಿಪುಳಕಪೋಳಸ್ಥಳಾಂತಸ್ಥಳೀ ಸಂ
ಭಿನ್ನೋದ್ಯದ್ದಾನಧಾರಾಪ್ರಬಳಪರಿಮಳಾಸಕ್ತಭೃಂಗಾವಳೀ ಸಂ
ಪನ್ನ ಪ್ರೋದ್ಭೂತಝಂಕಾರಿತರವಮುದಿತಾನಂದವೇಶಂ ಗಣೇಶಂ ||೫||

ಚತುರ ಚತುರ್ಮುಖನೆಲ್ಲಾ
ಶ್ರುತಿಗಳನೊಲವಿಂದೆ ಕಲ್ತ ಶಿವನ ವಿವಾಹೋ
ನ್ನತಿಯಾ ಕೃತಿಯೆಂದೆನೆ ಭಾ
ರತಿಯೆನಗನುಕೂಲೆಯಾಗದಿರಲಣ್ಮುವಳೇ ||೯||

ಕೊಂಡಾಡುಗೆ ಕಲ್ತೋದುಗೆ
ಮುಂಡಾಡುಗೆ ಮುದ್ದಿಸುಗೆ ಮರಲ್ದಪ್ಪುಗೆ ಕೈ
ಕೊಂಡೀಕಾವ್ಯಮನಗಜೆಯ
ಗಂಡನಲಂಪಿಂದೆ ಹಂಪೆಯ ವಿರೂಪಾಕ್ಷಂ ||೧೦||

ಅತುಳತರಾರ್ಥಮರ್ಥದನುವೃತ್ತಿಪದಂ ಪದದಿಚ್ಛೆಬಂಧಮೂ
ರ್ಜಿತಪದಬಂಧ ಸಂಧಿ ನವರೀತಿ ಸುರೀತಿ ಗುಣಂ ಸದೃಕ್ಕಲಂ
ಕೃತಿ ಸದಲಂಕೃತಿಪ್ರತಿಮಮೊಪ್ಪುವ ಭಾವಮನೂನ ಭಾವದು
ನ್ನತರಸಮೆಂದು ಸತ್ಕವಿಗಳಾಲಿಸೆ ಪೇಳ್ದಪೆನೀಪ್ರಬಂಧಮಂ ||೧೧||

ಕಾವ್ಯಂ ತಾನಿದು ನವರಸ
ಸೇವ್ಯಂ ಗಿರಿರಾಜಾಧಿನಾಥನುರುತರಕರ್ಣ
ಶ್ರಾವ್ಯಂ ವಸುಧಾತಳದೊಳ್
ನವ್ಯಂ ಭೂತೇಶ ಭಕ್ತಜನತಾ ಭಾವ್ಯಂ ||೧೪||

ಸೇವ್ಯಂ ಸೌಖ್ಯಂ ಪ್ರಸನ್ನಂ ನವರಸವಿಭವಂ ಪುಣ್ಯಪುಂಜಂ ಶುಭಂ ವಾ
ಗ್ದೇವ್ಯಾವಾಸಂ ವಿವೇಕೋನ್ನತಜಲನಿಧಿ ಸಂಸಾರ ವಿಶ್ರಾಮದೇಶಂ
ದಿವ್ಯಜ್ಞಾನೋಕ್ತಿಮಾರ್ಗಂ ನಿರತಿಶಯಪದಂ ಕೂರ್ತುಪೇಳ್ವಳ್ತಿಯಿಂದಂ
ಕಾವ್ಯಂ ಕಲ್ಪಾಂತರ ಸ್ಥಾಯಿಯೆನಿಪ ನುಡಿ ಸತ್ಯಂ ಕವೀಶಾಧಿಪತ್ಯಂ ||೧೬||

ಸುರತರುವಿನಂತೆ ಸುಜನರ
ಸಿರಿಯಂತೆ ಸರೋಜದಂತೆ ಸುಧೆಯಂತೆ ಸುಧಾ
ಕರ ಕಿರಣದಂತೆ ಹಂಪೆಯ
ಹರಿದೇವನ ಕಾವ್ಯಮಖಿಳ ಸೇವ್ಯಂ ನವ್ಯಂ ||೧೭||

ಪ್ರಿಯವಚದಂತೆ ಪುಣ್ಯತತಿಯಂತೆ ಸುಧಾಕರನಂತೆ ಕೂರ್ತ ಮು
ಗ್ಧೆಯ ಕಡುನೇಹದಂತಮೃತದಂತೆ ವಸಂತಕನಂತೆ ಪುಷ್ಪಮಾ
ಲೆಯ ಪೊಸಗಂಪಿನಂತೆ ಮಲಯಾನಿಲನಂತೆ ಮರಾಳನಂತೆ ಹಂ
ಪೆಯ ಹರಿದೇವನೊಪ್ಪಿರೆ ನಿಮಿರ್ಚಿದ ಕಾವ್ಯಮಿಳಾಜನೋತಾಸವಂ ||೧೮||

ಕ್ಷುದ್ರಂಗೆ ಸಕಲಸುಜನೋ
ಪದ್ರವರೂಪಂಗೆ ಪರರ ಕಾವ್ಯಾರ್ಥಮಂ
ಛಿದ್ರಿಸುವಂಗತಿಶಬ್ದ ದ
ರಿದ್ರಂಗಕ್ಕುಮೆ ನವೀನಕಾವ್ಯಾರಂಭಂ ||೨೬||

ಒಳಗಱಿಯದೆ ಸತ್ಕಾವ್ಯದ
ಕಳೆಯಱಿಯದೆ ಲಘುತರತ್ವದಿಂ ನಾಲ್ಕೆರಡಾ
ಯ್ಕುಳಿ ಮಾತನಾಡಿಯುಱೆ ಹೆ
ಹೆಕ್ಕಳಮಿಕ್ಕಿದೊಡೊಲ್ವರೇ ಕವೀಂದ್ರಾಭರಣರ್ ||೨೭||

ಗಿರಿಜಾಕಲ್ಯಾಣಮಿಂತೀನುತಕೃತಿಯ ಪೆಸರ್ ಭಾಪುರೇ ! ಕಾವ್ಯನಾಥಂ
ಗಿರಿಜಾನಾಥಂ ಕಥಾಸಂಗತಿ ವರಗಿರಿಜೋದ್ವಾಹಮೀಕಾವ್ಯಮಂ ಬಿ
ತ್ತರದಿಂ ತಾನೊಲ್ದು ಪೇಳ್ದಂ ಶಿವಕವಿ ಹರಿದೇವಂ ಮಹೋತ್ಸಾಹದಿಂದಂ
ಪರಮಾನಂದಾಬ್ಧಿ ಪಂಪಾಪುರದರಸ ವಿರೂಪಾಕ್ಷ ಸಾಕ್ಸಾತ್ಸುಪುತ್ರಂ ||೩೩||

ಜಾಣಂ ರಸಿಕಂ ಸುಜನ
ಪ್ರಾಣಂ ಕವಿತಾನಿಧಾನನಧಿಕಂ ಪುಣ್ಯಾ
ಕ್ಷೂಣಂ ವರಗಿರಿಜಾ ಕ
ಲ್ಯಾಣಮನೊರೆದಂ ವಿವೇಕಿ ಹರಿಹರದೇವಂ ||೪೧||

ಆ ವಿಸ್ತಾರಗಭೀರವಾರಿನಿಧಿಯಿಂದಂ ಪಶ್ಚಿಮಾಂಬೋಧಿಗಂ
ತೀವಿರ್ದೊಪ್ಪುವುದಾತ್ತಗಹ್ವರ ಗುಹಾಸಂತಾನಪರ್ಯಂತ ಗೋ
ತ್ರಾವಾಸೋಜ್ವಲ ಗಂಡಶೈಲಶಿಖರಪ್ರೋದ್ಭೂತಭೂಜಾತಪ
ತ್ರಾವೇಶೋನ್ನತ ಭೀಮರೂಪಧರದೇವಾಗಮ್ಯ ಹೈಮಾಚಳಂ ||೪೮||

ವಚನ : ಆ ಸಂಭ್ರಮದೊಳೊರ್ವಪುಳಿಂದಂ ತನ್ನ ನಚ್ಚಿನನಾಯಂ ಮೊಲನ ಸರುವಂ ತೋಱಿ ಕೀಱಿಟ್ಟಾಗಳ್

ನಡೆನಡೆದು ನಸುಬಳುಂಕು
ತ್ತೆಡಬಲನಂ ನೋಡಿ ಕೂಡೆಯಾಘ್ರಾಣಿಸುತಂ
ಗಿಡುವಿನ ಸರುವಿನ ದರುವಿನ
ಮಡುವಿನ ಬಳಿಗೊಂಡು ಶುನಕನಟ್ಟಿತು ಮೊಲನಂ ||೮೫||

ಅಟ್ಟಿದೊಡೆ ತಿರುಗಿ ಮುರಿ ಮುರಿ
ದೊಟ್ಟೈಸುತೆ ಕೊಂಕಿ ಪರಿಯುತೆಡನಂ ಬಲನಂ
ದಿಟ್ಟಿಸುತೆ ನಿಂದು ನಿಲ್ಲದೆ
ನಿಟ್ಟೋಟದೊಳೋಡಿತೆಸೆವಮಸಕದ ಶಶಕಂ ||೮೬||

ಧೀರಂ ಪಿಂಗಳಲೋಚನಂ ನಿಶಿತ ದಂಷ್ಟ್ರಂ ಭೀಷ್ಮವಕ್ತ್ರಂ ಘನ
ಕ್ರೂರಂ ವಜ್ರ ಸಮಾನ ರೋಮನಿಚಯಂ ಸಂಪೂರ್ಣಕಾಯಂ ಸ್ಥಿರಂ
ಶೂರಂ ರೌದ್ರಗಭೀರಚಿತ್ತನತಿಮಾನಿ ಸ್ವಲ್ಪಪುಚ್ಛಾನ್ವಿತಂ
ಘೋರ್ರಣ್ಯಚರಂ ವಿರಾಜಿಸಿದುದುದ್ಯದ್ಭೀಕರಂ ಸೂಕರಂ|| ೧೦೦||

ಅಷ್ಟಮಾಶ್ವಾಸಂ•
ಕಾಮದಹನ ವರ್ಣನಂ•

ಗರಳಧರನುರಗಭೂಷಂ
ಸರಸಿಜಭವ ಮಸ್ತಕ ಪ್ರಯುಕ್ತರಂ ಭೀ
ಕರಭಾಳ ಲೋಚನಂ ಭ
ಕ್ತಿರಸಮನೆಮಗೀಗೆ ಹಂಪೆಯ ವಿರೂಪಾಕ್ಷಂ ||೧||

ಕೀರತುರಗ ಸಂಘಮಯಮೀಧರೆ ಪುಷ್ಪಚಯಾಸ್ತ್ರ ಶಸ್ತ್ರ ವಿ
ಸ್ಯಾರ ಸುಗಂಧ ವೃಂದಮಯಮೀ ಕಕುಭಂ ಮಕರಂದ ಸಾಂದ್ರ ಸಂ
ಚಾರ ರಜೋನಿಕಾಯಮೀನಭಮೆಂದೆನೆ ಕೌತುಕಪ್ರದಂ
ಮಾರನೃಪಾಲಸೇನೆ ನಡೆದಿತ್ತು ಜಿತೇಂದ್ರಿಯ ಚಿತ್ತಶೋಷಣಂ ||೨||

ವಚನ: ಇಂದು ನೆರೆದು ನಡೆವ ಕುಸುಮಕೋದಂಡನ ಕಮನೀಯ ಬಲದ ಹಿಂದೆ  

ಘಳಿಲನೆ ಕಂಪನದಿಂ ಮುನಿ
ಗಳ ಕರತಳದಕ್ಷಮಾಲೆ ಬೀಳುತ್ತಿರೆ ಕೋ
ಕಿಳಕುಳ ನಿಸ್ಸಾಳದಳಂ
ಧಳಂ ಧಳಂ ಧಳನಿನಾದ ಮುಣ್ಮಿತ್ತಾಗಳ್ ||೩||

ವಚನ: ಇಂತು ಕಂತುರಾಜನ ಚತುರಂಗಬಲಂ ದಿವಸೇಂದ್ರನ ಮುಂದಣ ತಮಃಪಟಲದಂತೆ
ನಂದೀಶ್ವರನ ಕೋಪದ ಕಡುಗಾಯ್ಪಿಂ ನೋಡೆ ನೋಡೆ ಮಾಯವಾಗೆ

ನುಡಿದಂ ಮದನಂ ತನ್ನೊಳ್
ಬೆಡಂಗಿದೇನೀ ಗಣೇಶನೀ ಯೆಱನಿನ್ನಾ
ಮೃಡನಂ ನಡೆದೆಸುವೊಡೆ ಸಂ
ಗಡವಾರಾರಳವದಾರ ಶಕ್ಯಮಶಕ್ಯಂ ||೧೨||

ಅಱಿದೆಂ ನಿನ್ನಯ ಬರವಂ
ಕಱೆಗೊರಲನ ತೀವ್ರ ತಪಮನೆಳ್ಪಟ್ಟುವುದೀ
ತೆಱದಿಂದೆನ್ನಿಷ್ಟಮದೆ
ನ್ನರಕೆಯದೆನ್ನಿಚ್ಛೆಯೆನ್ನಲಾಭಂ ಲೋಭಂ ||೧೭||

ನಾನಾ ವಿಧದಿಂ ರುದ್ರನ
ನೂನತಪೋಭರದ ಬೆಸುಗೆಯಂ ಬಿಡಿಸೊಲವಿಂ
ಶ್ರೀನಂದನ ನೀನಂಜದಿ
ರಾನಿರ್ದಪೆನಾನೆ ರಕಷೆಯಾನೆ ಸಹಾಯಂ ||೧೮||

ಇನ್ನಂಜೆನಂಜೆನಾಹಾ
ಉನ್ನತ ಬಲವಾಯ್ತೆನುತ್ತೆ ವಿಭ್ರಮ ಬಳಸಂ
ಪನ್ನಂ ಕಾಮಂ ತೆಗೆದಂ
ತನ್ನಗ್ಗದುದಂಚ ಪಂಚಬಾಣಮನಾಗಳ್ ||೪೩||

ನಳನಳಿಸುವಿಕ್ಷುಚಾಪದೊ
ಳಳವಡೆ ನಡೆನೋಡಿ ಹೂಡುತೈದಂಬಂ ಸಂ
ಚಳಿಸದ ಶಂಕರನ ಮನಂ
ಚಳಿಯಿಪುದಂ ಸಾರ್ದು ಪಾರ್ದು ತೆಗೆನೆಱೆದಿರ್ದಂ ||೪೪||

ಪೊಗೆದುದು ಪೊತ್ತಿದತ್ತುಕಿಡಿಯಿಟ್ಟುದು ನಾಲ್ದೆಸೆದೋಱಿದತ್ತು ಬಾನ್
ಗೊಗೆದುದು ನಿಂದು ಪೊಂಬೆಳಗುಮಂ ಪರಪುತ್ತದು ಧಂಧಗಿಲ್ ಧಗಿಲ್
ಧಗಿಲೆನುತಟ್ಟಿ ತಟ್ಟಿದುದು ಮುಟ್ಟಿತು ಸುಟ್ಟಿತುತಿಂದು ತೇಗಿದ
ತ್ತಗಿಯದೆ ನಿಂದ ಪೂಗಣೆಯನಂ ಹಂಪೆಯಾಳ್ದನಾ ||೪೭||

ಇಟ್ಟಣಿಸಿ ಘುಡುಘುಡಿಸಿಕಿಡಿ
ಗುಟ್ಟಿ ಕನಲ್ದಡಸಿ ಸಿಡಿಲ ಬಳಗದ ಮುಳಿಸಂ
ತೊಟ್ಟುದು ಬಿಸುಗಣ್ಣುರಿ ಪೊಱ
ಮಟ್ಟುದು ಸುಟ್ಟುದು ರತೀಶನಂ ನಿಮಿಷಾರ್ಧಂ ||೪೮||

ಮೊಱೆಯೋ ಮೊಱೆಯೋ ಶಿವಧೋ
ಕಱೆಗೊರಲನ ಕಣ್ಣ ದಾಳಿ ಕುಸುಮಾಯುಧನಂ
ನೆಱೆ ಮುತ್ತಿತ್ತಯ್ಯೋ ಇದ
ನಱಿವವರಿಲ್ಲಕ್ಕಟಾ ಕೃಪಾಳುಗಳಿಲ್ಲಾ||೭೫||

ಗಿರಿಜೆಯ ಪದಯುಗದೊಳ್ ರತಿ
ಪೊರಳ್ದು ಪುಯ್ಯಲ್ಚಿ ಪೆರ್ಚಿದಳಲಿಮ್ಮಡಿಸು
ತ್ತಿರೆ ಪಳಯಿಸುತುಂ ದುಃಖಾ
ತುರೆ ಶೋಕಂಗೆಯ್ದು ಸುಯ್ದು ಪೊಯ್ದಳಲುತ್ತುಂ ||೭೯||

ಕರುಣಿಸು ತಾಯೇ ತವರೇ
ಪರಿರಕ್ಷಿಸು ದಯೆಯೊಳೀಕ್ಷಿಸುಡುಗಿಸು ನೋವಂ
ಪರಿಹರಿಸು ದಃಖಮಂ ವರ
ಗಿರಿರಾಜತನೂಜೆ ಕಾದುಕೊಳೆನ್ನಸುವಂ ||೮೦||

ವಚನ : ಎಂದಳಲ್ವ ರತಿಯಂ ಕಂಡು ಮನಂಗೊಂಡು
ಬೇಡುಡುಗು ಶೋಕರಸಮಂ
ನೀಡಾಗದೆ ನಿನ್ನ ವಲ್ಲಭನನೀಶ್ರನಂ
ಬೇಡುವೆನಾವರ್ಥದೊಳಂ
ಮಾಡುವೆನೆಲೆ ಪರಮಹರ್ಷಮಂ ನಿನಗೆ ರತೀ ||೮೧||

ಎಂದಗಜೆ ಬೆಸಸೆ ಶೋಕಮ
ನಂದುಡುಗುತಡಂಗಿಸುತ್ತುಮಳಲಂ ಮನದೊಳ್
ಸಂದಣಿಪ ದುಃಖಮಂ ಮಱೆ
ದೊಂದಿದಳ್ ರತಿ ಭವಾನಿಯುಜ್ಜ್ವಳವಚಮಂ ||೮೨||

ನವಮಾಶ್ವಾಸಂ :
ಪಾರ್ವತೀ ತಪೋವರ್ಣನಂ ವಿರೂಪಾಕ್ಷ ಪ್ರತ್ಯಕ್ಷೀಕರಣ ವರ್ಣನಂ :

ಕಾರುಣ್ಯಕರನಭವಂ
ಘೋರತಪೋಮಯ ತಪಃ ಪ್ರಮೋದಾವೃತ ವಿ
ವಿಸ್ತಾರಫಲಪ್ರದನೆಮಗೀ
ಗೋರಂತತಿ ಭಕ್ತಿಯಂ ವಿರೂಪಾಕ್ಷ ಶಿವಂ ||೧||

ಬಂದು ತಪೋನಿವೇಶನಮನೀಕ್ಷಿಸಿ ಬರ್ಪ ನಿದಾಘಕಾಲದೊಳ್
ಸಂದ ನಗಾಗ್ರದಲ್ಲಿ ನಿಲವೇಳ್ಕುಮೆನುತ್ತಮೆ ನಿಂದು ಮೇನಕಾ
ನಂದನೆ ತದ್ವಿಳಾಸಿನಿಯರಾನನಮಂ ನಡೆನೋಡಿ ಕಾಣುತುಂ
ಸೌಂದರಿಯರ್ ಜಟಾರಚನೆಯಂ ತರದಿಂ ಭರದಿಂದೊಡರ್ಚಿದರ್ ||೨||

ವಿರಚಿಸಿದರ್ ಜಡೆಗಳನಾ
ದರದಿಂ ದರಹಸಸಿತಬಿಸಿರುಹಾನನೆಯರ್ ಶಂ
ಕರನರಸಿಗೆ ಗಿರಿಜಾತೆಗೆ
ವರಭಸಿತಮನಂಗತತಿಯೊಳುದ್ಧೂಳಿಸಿದರ್ ||೩||

ವರಭಸಿತೋದ್ಧೂಳನಮಂ
ಗಿರಿಜೆಗೆ ಸುರಸತಿಯರೊಲ್ದು ಮಾಳ್ಪೆಡೆಯೊಳ್ ಕ
ಪುರದ ರಜದಿಂದೆ ಪುಷ್ಪೋ
ತ್ಕರಮಾಲೆಯನೊಸೆದು ಪೊರೆವ ತೆಱನಾಯ್ತಾಗಳ್ ||೪||

ವಾರಿಜಮುಖಿಯರ್ ಸಖಿಯರ್
ತಾರಾಚಲನಾಥನರಸಿಗನುನಯದಿಂದಂ
ಸಾರಮಮೃದುತರವಿಮಳವಿ
ಸ್ತಾರಿತವಲ್ಕಲಮನೊಪ್ಪವಡಿಸುತ್ತಿರ್ದರ್ ||೫||

ಸಾಕ್ಷಾಚ್ಛಂಕರವಕ್ತ್ರಮಿ
ವಕ್ಷಯಸುಖಮೀವ ಸುಕೃತಫಲಮಿವು ಸತ್ಯಂ
ರಕ್ಷೆಯಿವೆನುತಗಜಗೆ ರು
ದ್ರಾಕ್ಷಿಗಳಂ ಕೂಡೆ ತೊಡಿಸಿದರ್ ಮಾನಿನಿಯರ್ ||೬||

ವಚನ : ಇಂತು ಭಕ್ತಿಜ್ಞಾನವೈರಾಗ್ಯಯುಕ್ತಮಪ್ಪ ತಪೋಮಂಡನಂಗಳಂ ಸಂಗಡಮಿರ್ದಂಗನೆಯರ್
ಶೃಂಗರಿಸೆ ಮಂಗಳಮುಖಿ ಹೊಂಗಿ ಹೊರೆಯೇಱೆ

ಸಂದಣಿಸುವ ಜಡೆ ಬೆನ್ನಂ
ಮಂದಯಿಸಿ ಮುಸುಕುತಿಳಿಯೆ ನೀಲಾಂಬುದಮಂ
ಪಿಂದಿಕ್ಕಿ ಮುಂದೆ ಬೆಳಗುತೆ
ನಿಂದೆಳಮಿಂಚಿನವೊಲಗಜೆ ನೆಱೆ ಮೆಱೆದಿರ್ದಳ್ ||೭||

ಅಳವಡೆ ಮುನ್ನಂ ಪತ್ತಿದ
ಕಳಂಕಮಂ ಪೊರ್ದದಂತೆ ನಭದಿಂದಿಳಿತಂ
ದಿಳೆಯೊಳ್ ಶಂಭುಗೆ ಮಿಗೆ ಶಶಿ
ಕಳೆ ತಪಮಿರ್ಪಂತೆ ಗಿರಿಜೆ ತಪದೊಳ್ ನಿಂದಳ್ ||೮||

ಆಸುರದ ಗಿರಿಜೆಯಗ್ರವಿ
ಭಾಸುರತಪಕಂಜಿ ನಭದ ತಪನಂ ನಡೆಯು
ತ್ತಾ ಸರಿಸಮಂ ಕರಂ ಬಿ
ಟ್ಟೋಸರಿಸಿಯೆ ನಡೆವನೆಂದೊಡೇವಣ್ಣಿಪೆನೋ ||೧೫||

ಮ||ಸ್ರ|| ದೆಸೆಯಂ ಕಾಹೇಱಿಸುತ್ತುಂ ತೃಣಕುಲಲತೆಯಂ ಸೀದು ಕರ್ಪೇಱಿಸುತ್ತುಂ
ರಸೆಯಂ ಸಂತಾಪಿಸುತ್ತುಂ ಜಳಭರಿತತಟಾಕಂಗಳಂ ಶೋಷಿಸುತ್ತುಂ
ಸಸಿಯಂ ವೃಕ್ಷಾಳಿಯಂ ಸುಟ್ಟುರಿಪುತೆ ಮೃಗಮಂ ಬೇಯಿಸುತ್ತದ್ರಿಯಂ ದ
ಳ್ಳಿಸಿ ಸೀಳುತ್ತುಂ ವಿಶಾಳಂ ದವಶಿಖಿಯವೊಲಳ್ದತ್ತಮೋಘಂ ನಿದಾಘಂ ||೧೭||

ನಡೆಯಲ್ಕೊಂದಡಿಯಿಟ್ಟು ಕಾಯ್ದ ನೆಲನಂ ಕಾಲ್ ಮುಟ್ಟಿ ಚುಯ್ಯೆಂದು ಬೆಂ
ದೊಡೆ ಮತ್ತೊಂದಡಿಯೆತ್ತಲಾಱದಳಲಿಂ ಕಣ್ಮುಚ್ಚಿ ಹಸ್ತಾಗ್ರಮಂ
ಕಡೆವಾಯೊಳ್ ಸೆಱೆಯಿಟ್ಟು ನೆತ್ತಿ ಬಿರಿದೆತ್ತಲ್ಮುತ್ತುಗಳ್ ಸುತ್ತಲುಂ
ಸಿಡಿಯುತ್ತಿರ್ಪಿನಮಿರ್ದುದೊಂದತಿ ಮದೇಭಂ ಭೀಷ್ಮಧೊಳ್ ಗ್ರೀಷ್ಮದೊಳ್ ||೨೪||

ಜಯೆ ವಿಜಯೆಗಳಿಗಿದು ಪೊಸತತಿ
ಶಯವೀ ಶಿಶಿರದೊಳದೇಂ ಭವಾನಿ ವಸಂತೋ
ದಯಸೂಚನೆಯಾದುದು ನಿ
ಮ್ಮಯೆ ಪುಣ್ಯ ತಪಃಪ್ರಭಾವ ಕಾರಣಮಲ್ತೆ ||೮೮||

ಎನುತಿರೆ ಬಂದು ಭಾವಿಸಿ ತಪೋವನಮಂ ಶಶಿಮೌಳಿ ಪೊಕ್ಕು ಮೆ
ಲ್ಲನೆ ಬರುತುಂ ಪಥಶ್ರಮವನಾಂತು ಬಳಲ್ದವೊಲಾಗಿ ತೇಂಕುತುಂ
ಮನದೊಳನೂನಸಂಪದಮನೆಯ್ದುತುಮೀಕ್ಷಿಸುತಿರ್ಕೆಲಂಗಳಂ
ಘನಮಹಿಮಂ ಸ್ವತಂತ್ರವಿಭು ಪೊರ್ದಿದನೊಂದು ವಿನೂತ್ನಚೂತಮಂ ||೮೯||

ಎಳವಾಳೆಯ ಸುಳಿಯೆಲೆಯೊಳ್
ನಳನಳಿಸುವ ಕಂದಮೂಲಮಂ ನವಜಂಬೂ
ಫಳವಾಮ್ರಫಳಂ ಕದಳೀ
ಫಳಂಗಳಂ ತೀವಿ ತಂದು ಮುಂದಿಳಿಪುತ್ತುಂ ||೯೧||

ಎಲೆಯತಿಥಿ ಬಳಲ್ದಿರೆಮ್ಮೀ
ಫಲದಿಂದಂ ನಿಮ್ಮ ಪಸಿವನುಡುಗಿಸಿಯೆನೆ ಸೈ
ಫಲಮಂ ಕೆಯ್ಕೊಂಡಪೆವೀ
ಲಲನೆಯದಾರ್ ತಪವಗಣ್ಣಯವಾವನ ಪುಣ್ಯಂ ||೯೨||

ಇವರಿರವಿನ ಚಿಂತಾರತಿ
ನಿನಗೇಕೀ ಕ್ಷುಧೆಯನೀ ಪಥಶ್ರಮಮಂ ತೀ
ರ್ಚುವಬಗೆಯಂ ಬೇಗಂ ಮಾ
ಡುವುದೆನೆ ನಸುನಗುತೆ ವಿಪ್ರನಂದಿಂತೆಂದಂ ||೯೩||

ಬೆಸಗೊಂಡೊಡೆ ದೋಷಮೆ ಈ
ಪೊಸಕನ್ನೆ ತಪೋನಿರೋಧದಿಂದಿರ್ದೊಡೆ ಸೈ
ರಿಸಬರ್ಪುದೆ ತಪಮಂ ಮಾ
ಣಿಸುವವರಿಲ್ಲಾ ಸಹಾಯಸಂಪದಮಿಲ್ಲಾ ||೯೪||

ಎನೆ ಕೇಳ್ದಾ ಗಿರಿಜೆ ಮನದೊಳ್
ಮುನಿಯುತ್ತುಂ ಜಪವನುಡುಗಿ ಜಪಮಾಲೆಯನೊ
ಯ್ಯನೆ ಕೆಯ್ಯೊಳೋಸರಿಸಿ ಮೆ
ಲ್ಲನೆ ಕಣ್ದೆಱೆಯುತ್ತೆ ಕಂಡಳಾ ವರ ವಟುವಂ ||೯೫||

ನೆಗೆವ ಜಡೆಮುಡಿಯನೊತ್ತು
ತ್ತೊಗೆವಭುಜಾವಳಿಯನಡಂಗಿಸುತ್ತೂರುಗಳಿಂ
ಮಿಗುವ ವೃಷೇಂದ್ರನನೌಂಕು
ತ್ತಗಲದೆ ನಿಜಮೂರ್ತಿಯೊಳಗೆ ಗಜಬಜಿಸುತ್ತುಂ ||೯೮||

ಈ ಸುಕುಮಾರತೆಯೀ ನಿಲ
ವೀ ಸುಕರತೆಯೀ ನವೀನಯೌವನಮದವೀ
ಭಾಸುರತೆಯೀ ಸುಧಾಮಯ
ವೀ ಸುಖದೊಳ್ ತಪಮಿದೆಂತು ಬಂದುದು ಮುಗ್ಧೇ ||೧೦೦||

ನಿನಗೇತಕೀ ತರುಣತೆಯೊಳ್
ಘನತಪವೆಡೆಗೊಂಡುದಕಟ ನವಲತೆಯಂ ಸೂ
ರ್ಯನ ಬಿಸಿಲಿಂ ಕೊರಗಿಪ ದು
ಷ್ಟನನೆನಗಱಿಪಬಲೆ ಸೌಕುಮಾರ್ಯಾವರಣೇ ||೧೦೧||

ಬಗೆವೆರ್ಚಿ ಕೇಳುತಿರ್ದಪೆ
ಮಿಗೆ ಪೇಳ್ದಪೆನೆಲೆಲೆ ಧೂರ್ತವಿಪ್ರನೆ ಕೇಳ್ ಶಂ
ಭುಗೆ ಕಾರುಣ್ಯಾಬ್ಧಿಗೆ ಶೂ
ಲಿಗೆ ಕರುಣಂ ಪುಟ್ಟುವಂತೆ ತಪದಿಂದಿರ್ಪೆಂ ||೧೦೯||

ಎನುತಂ ಗದ್ಗದಿಸುತೆ ಪುಳ
ಕನಿಕಾಯಮನಾನುತಶ್ರುವಂ ಕಳೆಯುತ್ತುಂ
ಘನಹರ್ಷಚಿತ್ತೆಯಾಗು
ತ್ತೆ ನಗೇಶ್ವರಪುತ್ರಿ ಶಂಕರನ ಪೆಸರ್ಗೊಂಡಳ್ ||೧೧೦||

ವಚನ : ಎಂದು ವಿರೂಪಾಕ್ಷಂಗೆ ತಪಮಿರ್ದಪೆನೆಂಬ ನುಡಿಯಂ ಕೇಳ್ದು ದುಷ್ಟ ಧರಾಮರ ನಟ್ಟಹಾಸದಿಂದಿಂತೆಂದಂ  

ಅಕ್ಕಕ್ಕು ಕಾಮಹರನೊಳ್
ಮುಕ್ಕಣ್ಣನೊಳಖಿಳವೇದ ಶಾಸ್ತ್ರಕ್ರಮಮಂ
ಮಿಕ್ಕವನೊಳ್ ಪಿತೃವನದೊಳ್
ಪೊಕ್ಕವನೊಳದೆಂತು ಚಿತ್ತವಿಟ್ಟೆ ಲತಾಂಗೀ ||೧೧೧||

ಪುಲಿದೊವಲುಡಿಗೆಯ ಹಾವಿನ
ನೆಲೆದೊಡಿಗೆಯ ನೊಸಲ ಕಣ್ಣ ಖಟ್ವಾಂಗದ ಪಂ
ದಲೆಗಳ ಮಾಲೆಯ ಶೂಲದ
ಕಲಿಗಂಜದೆ ಮನವನೆಂತು ಮಾಡಿದೆ ಮುಗ್ಧೇ ||೧೧೪||

ವಚನ : ಎಂದು ವಿಪ್ರಂ ನುಡಿದ ಶಿವನಿಂದೆಗೆ ಭವಾನಿ ಮುನಿದು ಕನಲ್ದು ಕಿನಿಸಿ ಕಿಡಿಕಿಡಿ ವೋಗಿ

ತಪವದಂತಿರ್ಕೆ ಮಾಡುವ
ಜಪವಿರ್ಕೆ ಮೃಗಾಂಕಮೌಳಿಯಂ ಭರದಿಂ ಧ್ಯಾ
ನಿಪುದಿರ್ಕೆ ಶಂಭುವಂ ನಿಂ
ದಿಪುದಂ ಕೇಳ್ವೊಂದು ಪಾಪವಿಂದೆನಗಾಯ್ತೇ ||೧೧೫||

ಆದ ನಿರೋಧದ ನಿಂದೆಯ
ನಾದರಿಸದೆ ಭಸಿತದಿಂದೆ ವಿಪ್ರನಿಡೆ ಪೋ
ಪೋದುದು ವಟುವೇಶಂ ಶಿವ
ನಾದೊಡದೇಂ ಪುಸಿ ದಿಟಕ್ಕೆ ನಿಲ್ವುದೆ ಜಗದೊಳ್ ||೧೧೭||

ಮುಗಿಲ ತೆಱೆ ಸರಿದ ಶಶಿಯಂ
ತೊಗೆದ ತಮಂ ತೆಗೆದ ತರುಣತರಣಿಯ ತೆಱದಿಂ
ಪೊಗೆ ತಳ್ಗಿದಗ್ನಿಯಂತಿರೆ
ಮಿಗೆ ವೇಷಂ ತೊಲಗಿ ಶಂಭು ತೊಳಗುತ್ತಿರ್ದಂ ||೧೧೮||

ಜಡೆಮುಡಿ ಪಂಚಮುಖಂ ನೆಗೆ
ದುಡುಪತಿಕಳೆ ದಶಭುಜಂ ತ್ರಿಣೇತ್ರಂ ಗಾತ್ರಂ
ಬಿಡಿದ ನವಭೂತಿ ಪುಲಿದೊವ
ಲುಡಿಗೆಗಳಿಂ ಶಂಕರಂ ಕರಂ ಮೆಅಱೆದಿರ್ದಂ ||೧೧೯||

ವಚನ : ಆ ಸಮಯಥೊಳ್

ಸರಿದುದು ಪುಸಿವೇಷದ ತೆಱೆ
ಸುರಿದುದು ಕೆಯ್ನೀರ ತೆಱದೆ ಪೂವಳೆ ಸರಿಸಂ
ಬರಿದುದು ಜೀರಿಗೇ ಬೆಲ್ಲದ
ಪರಿಯಿಂ ಮುಳಿದಿಟ್ಟ ಭಸಿತಮದೆ ಮದುವೆಯವೋಲ್ ||೧೨೦||

ದಶಮಾಶ್ವಾಸಂ •
ಪಾರ್ವತಿಪರಮೇಶ್ವರ ವಿವಾಹವರ್ಣನಂ •

ಶ್ರೀ ಗಿರಿಜಾವಲ್ಲಭನಖಿ
ಳಾಗಮದುರ್ಲಭನಪಾರಸುಲಭಂ ಕಾರು
ಣ್ಯಾಗಾರಂ ಭಕ್ತಿಯನೆಮ
ಗೀಗೆ ಸದಾವರದ ಹಂಪೆಯ ವಿರೂಪಾಕ್ಷಂ ||೧||

ಆಗಳ್ ಕಂಡಗಸುತೆ ಬೆಱ
ಗಾಗುತೆ ಸರಿವರಿಸಿಕೊಳುತೆ ವಲ್ಕಲವಸನಾ
ಭೋಗಮನತಿಲಜ್ಜಿತೆ ತಲೆ
ವಾಗಿದಳನುರಾಗವೇಱಿ ಪುಳಕಿಸುತಿರ್ದಳ್ ||೨||

ಅವಳೋಕನದಿಂ ಸೆಳೆದಳ್
ಶಿವನಂ ಮನದಿಂದ ತೆಗೆದಳಪ್ಪಿದಳತ್ಯು
ತ್ಸವದಿಂ ಚಿತ್ತದೊಳೆಳಸುತೆ
ತವಕಂ ಮಿಗೆ ಚುಂಬಿಸಿದಳಹಂಕಾರದೊಳಂ ||೩||

ಉಡುಪತಿಬಿಂಬಮಂ ನಗುವ ನಿರ್ಮಳವಕ್ತ್ರಮನಾಸೆ ಮಿಕ್ಕು ಧೀಂ
ಕಿಡುವ ಕಟಾಕ್ಷಮಾಲೆಗಳನುನ್ನತಪೀನಪಯೋಧರಂಗಳಂ
ಮೃಡನೊಸೆದೀಕ್ಷಿಸುತ್ತೆ ನಿಲಲಾಱದಪರ್ಣೆಯ ಪುಣ್ಯ ಹಸ್ತಮಂ
ಪಿಡಿದನಶೇಷ ದೇವಕುಲಮೌಳಿವಿರಾಜಿತ ಪಾದಪಂಕಜಂ ||೪||

ಗಿರಿಸುತೆಯಳ್ಕಱಿಂ ನಡೆಯ ತಾರಗಿರೀಂದ್ರನಿವಾಸದಲ್ಲಿಗ
ತ್ಯುರುತರಲೀಲೆಯಿಂದಮೆನೆ ದೇವ ಗಿರೀಶ್ವರನಲ್ಲಿಯೆನ್ನನಾ
ದರದೊಳಗೆ ಬೇಡಿಯೂರ್ಜಿತವಿವಾಹಮದಚ್ಚರಿಯೆನಿಪ್ಪ ಮಾಳ್ಕೆಯಂ
ಕರುಣಿಪುದೆಂದುದಂ ಸಲಿಸವೇಳ್ಪುದು ಬೇಳ್ಪೆನಿದಂ ಸದಾಶಿವಾ ||೫||

ಎಂದಗಜೆ ನುಡಿಯೆ ಮಹಿಮಾ
ವೃಂದನೊಡಂಬಡುತೆ ಸುಖದೊಳಿರ್ಪವಸರದೊಳ್
ಬಂದು ರತಿ ಮುಕುಳಿತಾನನೆ
ನಿಂದುಮ್ಮಳದಿಂದೆ ಮುಂದೆ ಮೆಯ್ಯಿಕ್ಕಿರ್ದಳ್ ||೬||

ರತಿ ಮೆಯ್ಯಿಕ್ಕಿರ್ದೊಡೆ ಪಾ
ರ್ವತಿ ಬಿನ್ನಯ್ಸಿದಳಧೀಶನ ಕೇಳೀಲಲನಾ
ಪತಿಯಪ್ಪ ಕಾಮನಂ ಪಶು
ಪತಿ ನಿಮ್ಮಿಂ ಪಡೆದು ಕೊಡುವೆನೆಂದಾಂ ನುಡಿದೆಂ ||೭||

ಎನೆ ಕೇಳ್ದು ಶಂಕರಂ ಗಿರಿ
ತನಯಾಮಧುರಾಸ್ಯಮಂ ನಿರೀಕ್ಷಿಸಿ ನಗುತುಂ
ನೆನೆದಾಗಳ್ ಕಾಮನನಂ
ಗನಾಗಿ ಕುಡುತಿರ್ಕೆ ರತಿಗೆ ಸುಖಸಂಪದಮಂ ||೮||

ಇದಿರ್ಗೊಂಡಂ ಗಿರಿರಾಜನೂರ್ಜಿತತಪೋವಿಸ್ತಾರೆಯಂ ಧೀರೆಯಂ
ಸದಲಂಕಾರಮನಾಂತ ಪಿಂಗಳಜಟಾಸಂಪನ್ನೆಯಂ ಚೆನ್ನೆಯಂ
ಮುದದಿಂ ವಲ್ಕಲವಸ್ತ್ರವಿಸ್ತರಿತಶೋಭಾಗಾತ್ರೆಯಂ ಸ್ತೋತ್ರೆಯಂ
ಪಡೆದಾಹಾ ಗಿರಿಜಾತೆಯಂ ಸಕಳಕಾಂತಿಸ್ತೋಮೆಯಂ ರಾಮೆಯಂ ||೧೩||

ಭರದಿಂ ನಡೆತಂದು ರಾಜಗೃಹಮಂ ಸಂತೋಷದಿಂ ಪೊಕ್ಕು ಭಾ
ಸ್ಕರ ಕೋಟಿಪ್ರಭೆಯಂ ಸಭಾಸದನದೊಳ್ ಬೀಱುತ್ತುವಿರ್ಪುದ್ಘವಿ
ಷ್ಟರಂ ತುಷ್ಟಿಯನೇಱಿ ಶೈಳಪತಿಯಂ ಶರ್ವಾಣಿಯಂ ಸ್ನೇಹದಿಂ
ದಿರೆ ಮೇನಾವಧು ಬಂದಳೀಕ್ಷಿಸಿದಳೀಷತ್ಗಾತ್ರೆಯಂ ಪುತ್ರಿಯಂ ||೧೪||

ನೆನೆಯದ ಮುನ್ನಂ ಬಂದರ್
ವಿನುತಾಶೇಷರ್ ಜಟಾಧರರ್ ಭಸಿತಾಂಗರ್
ಘನಮಹಿಮಾರುಂಧತಿ ಬೆ
ನ್ನನೆ ಬರೆವರೆ ಸಪ್ತಋಷಿಯರತಿಮುದದಿಂದಂ ||೧೮||

ಬಂದಭವಂಗತಿಸುಖಮುಖ
ದಿಂದಂ ಮೆಯ್ಯಿಕ್ಕಿ ಹರ ಬರ್ದುಂಕಿದೆವೆನುತುಂ
ಸಂದಣಿಸಿ ಪುಳಕಮೆಳ್ತರೆ
ನಿಂದಿರ್ದು ಶಶಾಂಕಮೌಳಿ ಬೆಸನೇನೆನುತುಂ ||೧೯||

ಇರೆ ಕಂಡು ಕರುಣದಿಂ ಶಂ
ಕರನಾ ಋಷಿಗಳ್ಗೆ ಬೆಸಸಿದಂ ಪೋಪುದು ಭೂ
ಧರನಾಥನಲ್ಲಿಗತ್ಯಾ
ದರಮಂ ಮಾಡುವುದು ಬೇಡುವುದು ಗಿರಿಸುತೆಯಂ ||೨೦||

ಮನದೊಳ್ ಪರಮೋತ್ಸಾಹಂ
ಜನಿಯಿಸಿ ಗಿರಿರಾಜನೆಸೆವ ಋಷೀಗಳನಿದಿರ್ಗೊಂ
ಡನುನಯದಿಂ ತಂದುಚ್ಚಾ
ಸನದೊಳ್ ಕುಳ್ಳಿರಿಸಿ ವಿನಯವಿನಮಿತನಾದಂ ||೨೨||

ವಚನ : ಅಂತು ವಿನಯದಿಂದೆಱಗಿ

ಸುರಲೋಕದಲ್ಲಿ ಸುಖದಿಂ
ಭದಿರುತುಂ ಬರವಿಂತು ನಿಮಗೆ ದೊರೆಕೊಂಡುದಿದೆ
ಮ್ಮುರುತರಭಾಗ್ಯಮೆನುತ್ತುಂ
ಗಿರಿರಾಜಂ ಸಪ್ತಋಷಿಗಳಂ ಕೇಳಲೊಡಂ ||೨೩||

ವರಮುನಿಗಳ್ ಮನದೋಂದಾ
ದರದಿಂ ನುಡಿದರ್ ಶಿವಂ ಶಶಾಂಕಧರಂ ಶಂ
ಕರನಭವಂ ನಿರ್ಮಾಯಂ
ಗಿರಿಜೆಯ ಬೇಡುವೊಡೆ ತಿಳುಪಿ ಕಳುಪಿದನೆಮ್ಮಂ||೨೪||

ಗಿರಿಪತಿ ಚಾರರಂ ಕಳುಪಿ ನಿರ್ಜರಲೋಕದ ವಿಶ್ವಕರ್ಮನಂ
ಬರಿಸಿ ನಯೋಕ್ತಿಯಿಂ ನುಡಿದು ಮನ್ನಿಸಿ ಬೇಳ್ಪುದನಿತ್ತು ಚಂದ್ರಶೇ
ಖರನ ಮದೀಯಪುತ್ರಿಯ ವಿವಾಹಶುಭೋಚಿತಮಂಟಪಾದಿ ಭಾ
ಸುರವರಚಿತ್ರಪತ್ರಕುಳಮಂ ನೆಱೆ ನಿರ್ಮಿಪುದಿಂದೆ ಬೇಗದಿಟ ||೨೭||

ಎನೇ ನಲಿದು ವಿಶ್ವಕರ್ಮಂ
ನೆನೆಯದ ಮುನ್ನಂ ಸಮುದ್ರ ಮುದ್ರಿತವೀಶ್ವಾ
ವನಿಪರಿಗತವಿಭವಾಸ್ಪದ
ಘನಮಂಟಪವೆಸೆದುದುಮುಂದೆ ತೋಱಿತ್ತಾಗಳ್ ||೨೮||

ಭದ್ರಾನನೆಯರ್ ನವಕುಸು
ಮದ್ರವಯುತಜಲದೆ ಮಜ್ಜನಕ್ಕೆಱೆಯುತೆ ಕ
ಲ್ಪದ್ರುಮಶಾಖಾನ್ವಿತೆಗೆ ಹ
ರಿದ್ರಾಪರಿಮಳಮನಂಗದೊಳ್ ಸಮನಿಸಿದರ್ ||೩೦||

ಅಂಬಿಕೆಯ ಸುಧಾವಯವ ಕ
ದಂಬದ ಚೆಲ್ವಿಂಗೆ ದೃಷ್ಟಿಯಾಗದ ತೆಱದಿಂ
ಬಿಂಬಾಧರೆಯರ್ ತೊಡಸಿದ
ರೆಂಬಂತಿರೆ ಮೆಱೆದುವರರೆ ಭೂಷಣತತಿಗಳ್ ||೪೫||

ಮಿಗಿಲೆತ್ತಂ ಜ್ಯೋತಿಗಂ ಪಾವಕರುಚಿ ಎಸೆವಾ ಜ್ಯೋತಿಗಂ ಪಾವಕಂಗಂ
ಮೃಗಲಕ್ಷ್ಮಜ್ಯೋತ್ನ್ಸೆಯೆಂತು ಕರಮಸದಳಮಾ ಜ್ಯೋತಿಗಂ ಪಾವಕಂಗಂ
ಮೃಗಲಕ್ಷ್ಮಜ್ಯೋತ್ನ್ಸೆಗಂ ಭಾಸ್ಕರರುಚಿ ಪಿರಿದಾ ಜ್ಯೋತಿಗಂ ಪಾವಕಂಗಂ
ಮೃಗಲಕ್ಷ್ಮಜ್ಯೋತ್ನ್ಸೆಗಂ ಭಾಸ್ಕರರುಚಿಗಮತರ್ಕ್ಯಂ ವಿರೂಪಾಕ್ಷತೇಜಂ ||೬೨||

ವಚನ : ಎಂದು ಪೊಗಳುತ್ತಿರ್ಪ ಸಮಯದೊಳ್ ಶಿವನ ವಿವಾಹಕ್ಕೆ ಸಕಲ ದೇವಕುಲಂ  ಹರ್ಷದಿಂ ಬರುತಿರ್ಪಲ್ಲಿ

ಸುರಪತಿಯಾನೆಯಂ ಹುತವಹ ತಗರಂ ಸಮವರ್ತಿ ಕೋಣನಂ
ನಿರೃತಿ ಮನುಷ್ಯನಂ ಜಳಧಿಪಂ ನೆಗಳಂ ಪವಮಾನನೇಣನಂ
ಹರಸಖನಶ್ವಮಂ ಶಶಿಧರ ವೃಷಮಂ ನಲಿದೇಱಿ ಬಂದರ
ತ್ಯುರುತರ ನಂದಿವಾಹನ ವಿವಾಹಮಹೋತ್ಸವದೇಳ್ಗೆಗಳ್ಕಱಿಂ ||೬೩||

ಸಂಗಡಿಸಿದ ಶಂಖಂ ಚ
ಕ್ರಂ ಗದೆ ಶಾರ್ಙ್ಗಂಗಳೆಸೆಯೆ ಗರುಡಾಸನದೊಳ್
ಪಿಂಗದೆ ಬಂದಂ ಯುತಚತು
ರಂಗಂ ಮಾಧವನುಮಾಧವಂ ಮಚ್ಚುವಿನಂ ||೭೦||

ಭರದಿಂದಂ ತನ್ನ ಬಲಂ
ಬೆರಸೊಲವಿಂ ಹಂಸೆಯೇಱಿ ತೊಳತೊಳಗುತ್ತುಂ
ಸರಭಸದಿಂದಂ ನಡೆತಂದಂ
ಸರಸಿಜಭವನಭವನಭಯಮೀಯೆ ಸರಾಗಂ ||೭೧||

ಹರಿ ಜಯಜೀಯ ಜೀಯೆನೆಯಜಂ ಮಝಭಾಪೆನೆ ದೇವವೀಧಿ ದೇ
ವುರೆ ಸುರರಾಜರಾಜಧಿರುರೇ ಎನೆ ಸನ್ಮುನಿಗಳ್ ಸರಾಗದಿಂ
ಹರಿಹರ ರುದ್ರ ಭದ್ರಯೆನೆ ನಿಂದ ಗಣಾವಳಿಯಳ್ಕಱಿಂ ಮದೀ
ಶ್ವರ ಭಲರೇ ಕಪರ್ದಿಯೆನೆ ನಂದಿಯನೇಱಿದನೆಮ್ಮ ಶಂಕರಂ ||೭೯||

ಮುತ್ತೈದೆಯರೊತ್ತೊತ್ತೆಯ
ನೊತ್ತರಿಸುತೆ ಬೆಳಗಿನೊಳಗೆ ಹೊಸಬೆಳಗಂ
ಸುತ್ತುಂ ಸವಿನೋಟಮ ನೀ
ಯುತ್ತುಂ ಜವನಿಕೆಯ ನೆಲೆಗೆ ಶಿವನೈತಂದಂ ||೮೨||

ವಚನ : ಆ ಸಮಯದೊಳ್ ಪಾರ್ವತಿದೇವಿ ನಿಟ್ಟೈದೆ ಮೆಟ್ಟಕ್ಕಿಯಂ ಮೆಟ್ಟಿ ತೆಱೆಯ
ಮಱೆಯಂ ಮಱೆಗೊಂಡು ನಿಂದಿರ್ಪಲ್ಲಿ,

ನಲ್ಲರ ನಡುವುಪಚಾರಂ
ಸಲ್ಲಲಿತೇಕ್ಷಣದ ನಡುವೆ ಪಕ್ಷ್ಮಪುಟಂ ಸಂ
ಫುಲ್ಲರಮಧ್ಯದೊಳ್ ಮಿಗೆ
ಸೊಲ್ಲಿರ್ಪಂತಿರ್ದುದಲ್ಲಿ ತೆಱೆ ಹರನಿದಿರೊಳ್

ವಚನ : ಅಂತಿರ್ಪ ಜವನಿಕೆಯನತಿಸ್ನೇಹದಿಂ ನೋಡಿ

ಅವಿಭೇದಪ್ರಕೃತಿಗಳೆನಿ
ಪವಯವದಿಂದೊಪ್ಪುವರ್ಧನಾರೀಶ್ವರರೊಳ್
ಜವನಿಕೆ ನಡುವೊಡ್ಡಿತು ಕಾ
ಕಾಲವಶದಿನಾವಂಗಮಾವುದಾಗದು ಧರೆಯೊಳ್ ||೮೪||

ಬೆಳಗಿನ ಬೀಜಾವಳಿಯೊ
ರ್ಬುಳಿಯೋ ನಕ್ಷತ್ರರಾಶಿಯೋ ನವಪುಣ್ಯಂ
ಗಳ ಪುದುವೋ ಚಂದ್ರಿಕಾತಂ
ಡುಳವೋ ಎನೆ ತೊಳಗಿ ತೋರ್ಪ ಮೆಟ್ಟಕ್ಕಿಗಳಂ ||೮೫||

ಕಾಂತಿಮಯಂ ಶಶಿಚೂಡಂ
ಶಾಂತಂ ನವಭೋಗಿಯೆನಿಪ ಲೀಲಾವಾಸಂ
ಸಂತಂ ಸುರುಚಿರಹರ್ಷಮ
ಯಂ ತಡೆಯದೆ ಮೆಟ್ಟಿ ನಿಂದ ಸಮನಂತರಥೊಳ್ ||೮೬||

ಅಮರಗುರು ಸಕಳವೇದಾ
ಗಮಕೋವಿದನೊಲ್ದು ಭಕ್ತಿಯಿಂದಂ ಪುಣ್ಯಾ
ಹಮೆನುತ್ತುಮಿತ್ತ ರಾಜತ್
ಸುಮುಹೂರ್ತಂ ಬಂದು ತೆಱೆಯನೋಸರಿಸಲೊಡಂ ||೮೯||

ಆನಿರೆ ಮತ್ತೋರ್ವಳ್ ಗಡ
ತಾನಿರ್ಪಳ್ ಜಡೆಯೊಳೆನುತೆ ಮುಳಿದಿಡುವಂತಾ
ಮಾನಿನಿ ಜೀರಿಗೆ ಬೆಲ್ಲದೊ
ಳಾನುತೆ ಶಿವನುತ್ತಮಾಂಗಮಂ ಪಡೆದಿಟ್ಟಳ್ ||೯೧||

ಮೃಡನಾಗಳ್ ಗಿರಿಜೆಯ ಚೆ
ಲ್ವಿಡಿದ ಮೊಗಂಗಂಡು ಸಾತ್ತ್ವಿಕಂ ಕೆಯ್ಕೊಂಡೊ
ಲ್ದಿಡುವಾ ಜೀರಿಗೆ ಬೆಲ್ಲಂ
ಸಡಿಲ್ದು ಕಂಪನದೆ ಬಿಳ್ದುವಗಜೆಯ ಪದದೊಳ್ ||೯೨||

ನಲಿನಲಿದು ಬಂದು ಗಿರಿಪತಿ
ಯೊಲವಿಂದಂ ಗಿರಿಜೆಸಹಿತವುಂ ನಾವೆಲ್ಲವುಂ
ನೆಲೆದೊಳ್ತಿರ್ ಬಳಿದೊಳ್ತಿರ್
ಸಲೆದೊಳ್ತಿರ್ ನಿಮಗೆನುತ್ತೆ ಧಾರೆಯನೆರೆದಂ ||೯೫||

ಇಳೆಯೊಳ್ ಪೆರ್ಮಳೆಯುಂ ಸಮಸ್ತಫಲಮುಂ ಸಂತೋಷಮುಂ ಧರ್ಮಸಂ
ಕುಳಮುಂ ಸತ್ಯಮುಮೀಶ್ವರಾರಾಚನೆಯ ಸೊಂಪುಂ ಶ್ರೀಯುಮಾಯುಂ ನಿರಾ
ಕುಳಮೆಂದು ನೆಲಸಿರ್ಪುದೊಂದು ತೆಱನಂ ತಾಂ ಮಾಳ್ಕೆ ಸರ್ವೇಶ್ವರೀ
ವಿಳಸತ್ ಸಂಗಸುಖಾಬ್ಧಿಶೀತಕಿರಣಂ ಪಂಪಾಪುರಾಧೀಶ್ವರಂ ||೧೧೫||

ಕೃಪೆ .
ವಿದ್ವಾನ್ ಎಂ. ಜಿ. ನಂಜುಂಡಾರಾಧ್ಯ
ಪ್ರಕಾಶನ. ಕ .ಸಾ.ಪ.
ಚಾಮರಾಜಪೇಟೆ
ಬೇಂಗಳೂರು-18 

2 ಕಾಮೆಂಟ್‌ಗಳು: