ಜೈಮಿನಿ ಭಾರತ 5 - ದೊಡ್ಡಬೆಲೆ ನಾರಾಯಣಶಾಸ್ತ್ರಿ
ಐದನೆಯ ಸಂಧಿ.
ಸೂಚನೆ॥ ಧರ್ಮಜಂ ಯೌವನಾಶ್ವನನಿದಿರ್ಗೊಂಡು ನೃಪ।
ಧರ್ಮದಿಂ ಕೃಷ್ಣನಂ ದ್ವಾರಕಗೆ ಕಳುಹಿ ವರ।
ಧರ್ಮಂಗಳಂ ಕೇಳ್ದನೊಲವಿಂದೆ ಸಲೆ ಬಾದರಾಯಣ ಮುನೀಶ್ವರನೊಳು॥
ಪ್ರತಿಪದಾರ್ಥ :-
ಧರ್ಮಜಂ= ಧರ್ಮರಾಯನು, ಯೌವನಾಶ್ವನನು= ಯೌವನಾಶ್ವನೆಂಬ ಮಹಾರಾಜನನ್ನು, ಇದಿರ್ಗೊಂಡು= ಎದುರು- ಗೊಂಡವನಾಗಿ,ನೃಪಧರ್ಮದೊಳ್= ರಾಜಮರ್ಯಾದೆಯನ್ನನುಸರಿಸಿ, ಕೃಷ್ಣನಂ = ಶ್ರೀಕೃಷ್ಣಸ್ವಾಮಿಯನ್ನು, ದ್ವಾರಕಿಗೆ= ದ್ವಾರಕಾನಗರಕ್ಕೆ, ಕಳುಹಿ= ಕಳುಹಿಸಿಕೊಟ್ಟು, ಬಾದರಾಯಣ ಮುನೀಶ್ವರನೊಳು=ವ್ಯಾಸಮಹರ್ಷಿಯಿಂದ, ವರ= ಉತ್ತಮವಾದ, ಧರ್ಮಂಗಳಂ = ಧರ್ಮಮಾರ್ಗವನ್ನು, ಒಲವಿಂದ=ವಿಶ್ವಾಸದಿಂದ, ಕೇಳ್ದನು= ಲಾಲಿಸಿದನು.
ತಾತ್ಪರ್ಯ:- ಧರ್ಮರಾಯನು ಯೌವನಾಶ್ವನನ್ನು ಇದಿರ್ಗೊಂಡು ರಾಜ್ಯ ರಾಜಮರ್ಯಾದೆಯನ್ನನುಸರಿಸಿ ಸತ್ಕರಿಸಿ, ಶ್ರೀಕೃಷ್ಣಸ್ವಾಮಿಯನ್ನು ಕರೆತರಲು ದ್ವಾರಕೆಗೆ ಕಳುಹಿಸಿ, ವೇದವ್ಯಾಸಮುನಿಯಿಂದ ಧರ್ಮರಹಸ್ಯಗಳನ್ನು ಕೇಳಿದನು.
ಸತ್ಸಂಗತಿಯನಾಲಿಸಿನ್ನೆಲೆ ಮಹೀಶ್ವರ ಮ।
ರುತ್ಸುತನ ಮನೆಗೆ ಬೀಳ್ಕೊಟ್ಟನೊಲವಿಂ ಭಕ್ತ।
ವತ್ಸಲಂ ಬಳಿಕಿತ್ತಲರಸಾಳ್ಗಳಾ ಯುಧಿಷ್ಠಿರಭೂಮಿಪತಿಗೆ ಬಂದು॥
ತ್ಯತ್ಸಮೀಪದ ಸೇವೆಗೋಸುಗಂ ತನ್ನ ಸಂ।
ಪತ್ಸಹಿತಮಾ ಯೌವನಾಶ್ವ ಧರಣೀಂದ್ರನ ।
ತ್ಯುತ್ಸವದೊಳೈತಂದನಿದೆ ನಿನ್ನ ಪಟ್ಟಣದ ಬಾಹ್ಯದೇಶದೊಳೆಂದರು॥೧॥
ಎಲೈ ಮಹೀಶ್ವರ= ಜನಮೇಜಯನೆಂಬ ಭೂಕಾಂತನೆ, ತತ್ಸಂಗತಿಯನು= ಆ ಯೌವನಾಶ್ವನು ಬಂದ ವಿವರವನ್ನು, ಇನ್ನು= ಮುಂದೆ, ಆಲಿಸು=ಕೇಳುವನಾಗು, ಭಕ್ತ= ದಾಸರಲ್ಲಿ, ವತ್ಸಲಂ=ವಾತ್ಸಲ್ಯವುಳ್ಳ ಕೃಷ್ಣಸ್ವಾಮಿಯು, ಒಲವಿಂ= ಮುದದಿಂದ, ಮರುತ್ಸುತನ= ವಾಯುಸೂನುವನ್ನು, ಮನೆಗೆ= ತನ್ನ ಮಂದಿರಕ್ಕೆ, ಬೀಳ್ಕೊಟ್ಟನು= ಹೋಗ ಹೇಳಿದನು, ಬಳಿಕ=ಅನಂತರ, ಇತ್ತಲು= ಈ ಕಡೆಯಲ್ಲಿ, ಅರಸಾಳ್ಗಳು= ಧೊರೆಯ ಸೇವಕರು, ಯುಧಿಷ್ಠಿರ ನೃಪನ= ಧರ್ಮತನಯನ, ಮನೆಗೆ= ಮಂದಿರಕ್ಕೆ, ಬಂದು=ಐತಂದು, ತ್ವತ್ಸಸಮೀಪದ= ನಿನ್ನ ಹತ್ತಿರದ,ಸೇವೆಗೋಸುಗಂ= ಸೇವಾರ್ಥವಾಗಿ, ಯೌವನಾಶ್ವ=ಯೌವನಾಶ್ವನೆಂಬ ಹೆಸರುಳ್ಳ,ಧರಣೀಂದ್ರನು= ಭೂಕಾಂತನು, ತನ್ನ=ಸ್ವಕೀಯವಾದ, ಸಂಪತ್ಸಹಿತಲೆ= ಸಾಮ್ರಾಜ್ಯದೊಂದಿಗೆ, ಇದೆ=ಈಗಲೆ,ನಿಮ್ಮಪಟ್ಟಣದ= ನಿಮ್ಮ ಪೊಳಲಿನ, ಬಾಹ್ಯಪ್ರದೇಶಕೆ= ಹೊರಗಡೆಯಲ್ಲಿ, ಅತ್ಯುತ್ಸವದೊಳು= ಸಂತೋಷಾತಿಶಯದಿಂದ,ಐತಂದನು= ಬಂದಿರುವನು, ಎಂದು=ಎಂಬ ತೆರನಾಗಿ, ವಿಜ್ಞಾಪಿಸಿದರು= ಅರಿಕೆಮಾಡಿದರು.
ತಾತ್ಪರ್ಯ :- ಅನಂತರದಲ್ಲಿ ಜೈಮಿನಿಋಷಿಯು ಜನಮೇಜಯರಾಯನನ್ನು ಕುರಿತು, ಕೇಳೈ ಜನಮೇಜಯನೆ, ಭೀಮಸೇನನು ಧರ್ಮರಾನಿಗೂ ಶ್ರೀಕೃಷ್ಣಸ್ವಾಮಿಗೂ ತನ್ನ ವಿಜಯವನ್ನು ಸವಿಸ್ತಾರವಾಗಿ ವಿಜ್ಞಾಪಿಸಿ, ಅವರ ಅನುಜ್ಞೆಯಿಂದ ತನ್ನ ಅಂತಃಪುರಕ್ಕೆ ವಿಶ್ರಮಿಸಿಕೊಳ್ಳುವುದಕ್ಕಾಗಿ ಹೊರಟು ಹೋದನು. ಇತ್ತ ಹಲವು ಸೇವಕ ಜನರು ಯುಧಿಷ್ಠಿರನ ಆಸ್ಥಾನಕ್ಕೆ ಬಂದು ಧರ್ಮಜನನ್ನು ಕುರಿತು, ಎಲೈ ಪ್ರಭುವೆ ಭದ್ರಾವತಿಯ ರಾಜನಾದ ಯೌವನಾಶ್ವನು ಸಕಲ ಸೇನಾಪರಿವೃತನಾಗಿ ತಮ್ಮ ಸೇವೆಗಾಗಿ ಬರುತ್ತಿರುವನೆಂದು ತಿಳಿಸಲು,
ಉಚಿತಮಂ ತೆಗೆದವರ್ಗಿತ್ತು ಬಳಿಕನುಜ ಮಂ।
ತ್ರಿಚಮೂಪ ಸಾಮಂತ ಗುರು ಪುರೋಹಿತ ಸುಭಟ।
ನಿಚಯಮಂ ಕರೆಸಿಕೊಂಡಸುರಾರಿಸಹಿತಖಿಳ ಚತುರಂಗಸೈನ್ಯದೊಡನೆ॥
ಅಚಲನಿಭದಿಭದ ಮೇಲಡರಿ ಸಿಂಗರದ ಗುರು।
ಕುಚೆಯರರಸಿಯಕೂಡೆ ಬರಲಿ ಗುಡಿತೋರಣದ ।
ರಚನೆ ಮೆರೆಯಲಿ ಪುರದೊಳೆನುತೆ ಪೊರಮಟ್ಟನವನಿಪನೊಸಗೆವರೆ ಮಸಗಲು॥೨॥
ಪ್ರತಿಪದಾರ್ಥ:- ಅವರ್ಗೆ=ಆ ಸೇವಕರಿಗೆ, ಉಚಿತಮಂ= ಮರ್ಯಾದಾರ್ಥವಾದ ವಸ್ತ್ರಾಭರಣಗಳನ್ನು, ತೆಗೆದಿತ್ತು= ತೆಗೆಯಿಸಿಕೊಟ್ಟವನಾಗಿ, ಬಳಿಕ=ತರುವಾಯ, ಅನುಜ=ಸಹೋದರರು, ಮಂತ್ರಿ=ಅಮಾತ್ಯರು, ಚಮೂಪ= ಸೇನಾನಾಯಕರು, ಸಾಮಂತ= ಆಶ್ರಿತರಾಜರು, ಗುರು= ಶ್ರೇಷ್ಠರಾದ ಗುರುಗಳು, ಸುಭಟ= ವೀರರು ಇವರ, ನಿಚಯಮಂ= ಸಮುದಾಯವನ್ನು, ಕರಿಸಿಕೊಂಡು= ಕೂಡ ಸೇರಿಸಿಕೊಂಡು, ಅಸುರಾರಿಸಹಿತ= ಕೃಷ್ಣನ ಸಮೇತವಾಗಿ, ಅಖಿಲ= ಸಕಲವಾದ, ಚತುರಂಗಸೈನ್ಯದೊಡನೆ= ಹಸ್ತ್ಯಶ್ವಾದಿಗಳೊಂದಿಗೆ, ಅಚಲ= ಗಿರಿಗೆ, ನಿಭದ=ಸದೃಶವಾದ,ಇಭದ-
ಮೇಲೆ= ಹಸ್ತಿಯಮೇಲ್ಗಡೆ, ಅಡರಿ=ಏರಿ,ಸಿಂಗರದ= ಅಲಂಕಾರವುಳ್ಳ,ಗುರುಕುಚೆಯರ= ಪೀವರ ಸ್ತನವುಳ್ಳ ನಾರಿಯರು,
ದ್ರೌಪದಿಯಕೂಡೆ= ದ್ರುಪದನಂದನೆಯೊಂದಿಗೆ, ಬರಲಿ=ಐತರಲಿ, ಪುರದೊಳು= ಪೊಳಲಲ್ಲಿ,ಗುಡಿತೋರಣದ= ತೋರಣ ಮೊದಲಾದುವುಗಳ, ರಚನೆ= ಅಂದವಾಗಿ ಮಾಡುವುದು, ಮೆರೆಯಲಿ= ಚೆನ್ನಾಗಿ ಹೊಳೆಯಲಿ,ಎನುತ= ಎಂದು ನುಡಿಯುತ್ತ, ಜಸಗೆವರೆ= ಶುಭಸೂಚಕವಾದ್ಯಗಳು,ಮಸಗಲು= ಪ್ರಕಟವಾಗುತ್ತಿರಲು, ಅವನಿಪನು= ಯುಧಿಷ್ಠಿರನು, ಪೊರಮಟ್ಟನು= ಮುಂದಕ್ಕೆ ನಡೆದನು.
ತಾತ್ಪರ್ಯ:- ಧರ್ಮನಂದನನು ಅವರಿಗೆ ಅನೇಕ ಬಹುಮಾನಗಳನ್ನು ಕೊಟ್ಟು ಕಳುಹಿಸಿ ತನ್ನ ಅನುಜರು, ಮಂತ್ರಿಯು, ,ಚತುರಂಗಬಲವು,ಅನೇಕ ಸಾಮಂತರಾಜರು, ಗುರು ಪುರೋಹಿತರು ಇವರನ್ನೆಲ್ಲಾ ಜಾಗ್ರತೆಯಲ್ಲಿ ಬಂದೊದಗಬೇಕೆಂದು ಹೇಳಿ ಕಳುಹಿಸಲು ಎಲ್ಲರೂ ಸಿದ್ಧವಾದರು. ಧರ್ಮರಾಯನು ಶ್ರೀಕೃಷ್ಣಸ್ವಾಮಿಯೊಂದಿಗೆ ಚತುರಂಗಬಲಸಮಂತನಾಗಿ, ಪರ್ವತೋಪಮವಾದ ಪಟ್ಟದ ಆನೆಯಮೇಲೆ ಕುಳಿತುಕೊಂಡು ಮಂಗಳಧ್ವನಿಯೊಡನೆ ಸಂಭ್ರಮದಿಂದ ಯೌವನಾಶ್ವ ಮಹಿಪನನ್ನು ಎದುರುಗೊಳ್ಳಲು ಹೊರಟನು. ದ್ರೌಪದೆ, ಸುಭದ್ರೆ, ಮೊದಲಾದ ಅಂತಃಪುರ ಸ್ತ್ರೇಯರೂ ಅನೇಕ ನಾರೀಮಣಿಗಳೂ ಇವರ ಜತೆಯಲೂಲಿಯೇ ಹೊರಟರು. ಅಷ್ಟು ಹೊತ್ತಿಗೆ ಪಟ್ಟಣವೆಲ್ಲಾ ನಾನಾಲಂಕಾರಗಳಿಂದ ಮೆರೆಯಲು ಪ್ರಾರಂಭವಾಯಿತು.
ಸಿಂಗರದೊಳಾ ಹಸ್ತಿನಾವತಿಯೊಳಿರ್ದ ಜನ।
ಜಂಗುಳಿ ಮಹೀಪಾಲನೊಡನೆ ಪೊರಮಟ್ಟು ಬಳಿ।
ಕಂಗನೆಯರಾ ದ್ರೈಪದಸುತೆಯ ಪೊನ್ನಂದಳೆದ ಕೂಡೆ ಸಂದಣಿಸಿ ಬರಲು॥
ಮಂಗಳಧ್ವಾನದಿಂದುಲಿಯುವ ಭೇರಿಗಳ ನಾ।
ದಂಗಳೈದಿದುವಷ್ಟದಿಕ್ಪಾಲಕರ ಪಟ್ಟ।
ಣಂಗಳ್ಗೆ ಪಾಂಡವರ ಪುರದ ಸಂಭ್ರಮವನೆಚ್ಚರಿಸಿ ನಾಚಿಸುವಂತಿರೆ॥೩॥
ಪ್ರತಿಪದಾರ್ಥ:- ಸಿಂಗರದೊಳು= ಅಲಂಕಾರದಿಂದ, ಹಸ್ತಿನಾವತಿಯೊಳು= ಹಸ್ತಿನಾವತಿ ಪಟ್ಟಣದಲ್ಲಿ, ಇರ್ದ=ಇದ್ದಂಥ, ಜನಜಂಗುಳಿ = ಜನಗಳಗುಂಪು, ಮಹೀಪಾಲನೊಡನೆ= ಧರ್ಮರಾಯನ ಕೂಡೆ, ಪೊರಮಟ್ಟಬಳಿಕ= ಹೊರಟುಹೋದ ತರುವಾಯ,ಅಂಗನೆಯರು= ಸ್ತ್ರೀಯರು,ಆ ದ್ರುಪದಸುತೆಯ= ಆ ದ್ರುಪದ ಪುತ್ತಿ ದ್ರೌಪದಿಯ, ಪೊನ್ನಂದಳದಕೂಡೆ= ಚಿನ್ನದ ಪಲ್ಲಕ್ಕಿಯ ಜೊತೆಯಲ್ಲಿ, ಸಂದಣಿಸಿ= ಸಾಂದ್ರವಾಗಿ ಸೇರಿ,ಬರಲು= ಸಮೀಪವನ್ನೈದಲು, ಮಂಗಳಧ್ವಾನದಿಂದ=
ಕಲ್ಯಾಣಸೂಚಕವಾದ ವಾದ್ಯಧ್ವನಿವಿಶೇಷದಿಂದ, ಉಲಿವ= ಶಬ್ಧಮಾಡುತ್ತಲಿರುವ,ಭೇರಿಗಳ= ಭೇರಿ ಎಂಬ ವಾದ್ಯ ವಿಶೇಷದ, ನಾದಂಗಳು= ಸ್ವನಂಗಳು, ಅಷ್ಟದಿಕ್ಪಾಲಕರ= ಎಂಟು ದಿಕ್ಕುಗಳನ್ನೂ ಸಂರಕ್ಷಿಸತಕ್ಕ ಇಂದ್ರಾದಿ ದೇವತೆಗಳ, ಪಟ್ಟಣಂಗಳಿಗೆ=ನಗರಂಗಳಿಗೆ,ಪಾಂಡವರ= ಪಾಂಡನಂದನರ, ಪುರದ=ಪಟ್ಟಣವಾದ ಹಸ್ತಿನಾವತಿಯ, ಸಂಭ್ರಮವನು= ಸಾಮ್ರಾಜ್ಯವನ್ನು, ಎಚ್ಚರಿಸಿ= ಸ್ಮೃತಿಪಥಕ್ಕೆ ತಂದು, ನಾಚಿಸುವಂತೆ= ಲಜ್ಜೆಯನ್ನುಂಟುಮಾಡುವಹಾಗೆ,ಇರೆ=ಇರಲು, ಐದಿದವು= ಹೊರಟವು.
ತಾತ್ಪರ್ಯ:- ಆ ನಗರವಾಸಿಗಳೆಲ್ಲಾ ರಾಯನನ್ನೆ ಹಿಂಬಾಲಿಸಿದರು. ಈ ರೀತಿಯಲ್ಲಿ ಪೌರ ನಾರಿಯರು ಮತ್ತು ಪುರಜನರೆ-
ಲ್ಲರೂ ಅತ್ಯುತ್ಸವದಿಂದ ಹೊರಟು ಬರುತ್ತಿರುವುದರಿಂದಲೂ ಭೇರಿ ಮೊದಲಾದ ವಾದ್ಯಧ್ವನಿಗಳು ಅಷ್ಟದಿಕ್ಕುಗಳಿಗೂ ವ್ಯಾಪಿಸಿ ಅವರ(ಅಷ್ಟಟದಿಕ್ಪಾಲಕರ) ಐಶ್ವರ್ಯವೂಕೂಡ ಯುಧಿಷ್ಠಿರನ ಭಾಗ್ಯಕ್ಕೆ ಎಣೆಯಿಲ್ಲವೆಂದು ನಾಚಿಸುತ್ತಿತ್ತು.
ಭದ್ರಗಜಕಂಧರದೊಳರಸನೆಸೆದಿರ್ದಂ ಲ।
ಸದ್ರತ್ನಭೂಷಣಂಗಳ ಕಾಂತಿಯಂ ಮೂಡ।
ಣದ್ರಿಯೊಳ್ ತೊಳಗುವೆಳನೇಸರೆನೆ ಬಳಿಕಿದಿರ್ಗೊಂಬ ಹರ್ಷವನೆ ಕಂಡು॥
ಭದ್ರಾವತೀಶ್ವರನೆನಿಪ ಯೌವನಾಶ್ವಂ ಜ।
ಗದ್ರಾಜನಾದ ಪಾಂಡವನೆಡೆಗೆ ಬಂದಂ ಸು।
ಹೃದ್ರಾಗದಿಂ ತನಗೆ ಭೀಮನಭಿಮುಖನಾಗಿ ಬರಲಾತನೊಡನೆ ನಗುತೆ॥೪॥
ಪ್ರತಿಪದಾರ್ಥ:- ಮೂಡಣದ್ರಿಯೊಳ್= ಪೂರ್ವಗಿರಿಯಲ್ಲಿ, ತೊಳಗುವ = ಥಳಥಳಿಸುವ,ಎಳನೇಸರ್= ಬೆಳಗಿನ ರವಿಯು, ಎನೆ=ಎಂಬಂತೆ, ಭದ್ರ= ಮಂಗಳಕರವಾದ, ಗಜ=ಹಸ್ತಿಯ, ಕಂಧರದೊಳ್= ಕಂಠದ ಮೇಲೆ, ಲಸತ್ = ಹೊಳೆಯುತ್ತಿರುವ, ರತ್ನ= ನವರತ್ನಖಚಿತವಾದ, ಭೂಷಣಂಗಳ= ತೊಡಿಗೆಗಳ, ಕಾಂತಿಯಿಂ= ಪ್ರಕಾಶದಿಂದ, ಅರಸನು=ಯುಧಿಷ್ಠಿರನು, ಎಸೆದಿರ್ದಂ= ಹೊಳೆಯುತ್ತಿದ್ದನು, ಬಳಿಕ = ಅನಂತರ, ಭದ್ರಾವತೀಶ್ವರಂ=ಭದ್ರಾವತಿ ಅರಸು, ಎನಿಪ= ಎನ್ನುವ, ಯೌವನಾಶ್ವಂ= ಯೌವನಾಶ್ವ ಭೂಪಾಲನು, ಇದಿರ್ಗೊಂಬ= ದರ್ಶನವನ್ನು ತೆಗೆದುಕೊಳ್ಳಬೇಕೆಂಬ, ಹರ್ಷವನೆ= ಆನಂದವನ್ನೆ, ಕಂಡು= ದೃಷ್ಟಿಸಿ, ಮಹತ್=ಅಧಿಕವಾದ, ರಾಗದಿಂದ= ಪ್ರೀತಿಯಿಂದ, ತನಗೆ= ಯೌವನಾಶ್ವನಿಗೆ, ಅಭಿಮುಖವಾಗಿ= ಎದುರಾಗಿ, ಭೀಮಂ= ವೃಕೋದರನು, ಬರಲು=ಐತರಲು, ಆತನೊಡನೆ= ಅವನೊಂದಿಗೆ, ನಗುತ= ಸಂತೋಷವನ್ನೈದುತ್ತ, ಜಗದ್ರಾಜನಾದ= ಸಾರ್ವಭೌಮನಾದ, ಪಾಂಡವನ=ಯುಧಿಷ್ಠಿರನ, ಎಡೆಗೆ=ಹತ್ತಿರಕ್ಕೆ,ಬಂದಂ= ಬಂದು ಸೇರಿದನು. ಇದು ಉತ್ಪ್ರೇಕ್ಷಾಲಂಕಾರವು
ತಾತ್ಪರ್ಯ:- ಹೀಗಿರುವಾಗ ಉದಯಪರ್ವತದಲ್ಲಿ ಆಗತಾನೆ ಹುಟ್ಟಿದ ಬಾಲಸೂರ್ಯನಂತೆ ಮಂಗಳಕರವಾದ ಆನೆಯ ಕುಂಭಸ್ಥಳದಲ್ಲಿ ಥಳಥಳನೆ ಹೊಳೆಯುವ ರತ್ನಮಯವಾದ ಉಡಿಗೆತೊಡಿಗೆಗಳಿಂದೊಪ್ಪಿ ಬರುತ್ತಿರುವ ಯುಧಿಷ್ಠಿರನ ಬಳಿಗೆ ಯೌವನಾಶ್ವನು ತನ್ನನ್ನೆದುರುಗೊಳ್ಳಲು ಸಮೀಪಸ್ಥನಾಗುತ್ತಲಿರುವ ವೃಕೋದರನಿಂದೊಡಗೂಡಿ ಐತರಲು ಆಗ ಧರ್ಮಜನು ತನಗಭಿಮುಖವಾಗಿ ಬರುತ್ತಲಿರುವ ವಾಯುನಂದನ ಯೌವನಾಶ್ವರನ್ನು ನೋಡಿ (ಆನೆಯಿಂದ ಕೆಳಗಿಳಿದು ನಿಂತುಕೊಂಡನು. ಯೌವನಾಶ್ವನು ಕೂಡಲೆ ಧರ್ಮಾತ್ಮನಾದ ಧರ್ಮಪುತ್ರನ ಬಳಿಗೆ ಬಂದು ಸಾಷ್ಟಾಂಗಪ್ರಮಾಣವಂ ಮಾಡಿ ಬಹುವಿಧವಾದ ಕಾಣಿಕೆಯನ್ನು ಇತ್ತು ಕೈಗಳನ್ನು ಮುಗಿದು ನಿಂತಿರಲು ಧರ್ಮರಾಯನು ಯೌವನಾಶ್ವನನ್ನು ಬಾಚಿ ತಬ್ಬಿಕೊಂಡು ಅವನನ್ನು ಕುರಿತು, ಎಲೈ ರಾಜನೆ, ನೀನೂ ನನ್ನನುಜರಾದ ಭೀಮಾರ್ಜುನ ನಕುಲಸಹದೇವರಿಗೆ ಸಮಾನನಾದ್ದರಿಂದ ನಿನಗೆ ಸ್ವಾಮಿ ದರ್ಶನ ಫಲವು ಲಭಿಸುವುದೇನೂ ಅಸಾಧ್ಯವಲ್ಲವೆಂದು ನುಡಿದು ಶ್ರೀಕೃಷ್ಣಸ್ವಾಮಿಯನ್ನು ತೋರಿಸಿದನು. )
ವಾಯುಸುತನೊಡನೆ ತಾನಿರ್ದ ಪೊರೆಗಾಗಿ ಬ।
ರ್ಪಾ ಯೌವನಾಶ್ವನಂ ಕಂಡಿಭವನಿಳಿದು ನಿಂ।
ದಾ ಯುಧಿಷ್ಠಿರನರೇಶ್ವರನಡಿಗೆ ಕಾಣಿಕೆಯನಿತ್ತೆರಗಿ ಕೈಮುಗಿಯಲು ॥
ಪ್ರೀಯದಿಂದಾತನಂ ತೆಗೆದು ತಕ್ಕೈಸಿ ಮಾ।
ದ್ರೇಯ ಭೀಮಾರ್ಜುನರ ಸಮವೆನಗೆ ನೀನದರಿ।
ನೀ ಯಾದವೇಂದ್ರನಂ ಭಾವಿಸೆಂದರಸಂ ಮುಕುದನಂ ತೋರಿಸಿದನು॥೫॥
ಪ್ರತಿಪದಾರ್ಥ:- ವಾಯುಸುತನೊಡನೆ= ವಾಯುನಂದನನ ಸಂಗಡ, ತಾಂ=ತಾನು, ಇರ್ದು= ಸೇರಿಕೊಂಡು, ಇಭವನು= ಹಸ್ತಿಯನ್ನು, ಇಳಿದು, ನಿಂದು=ನಿಂತುಕೊಂಡು, ಆ ಯುಧಿಷ್ಠಿರನ= ಆ ಪಾಂಡುನಂದನನ, ಅಡಿಗೆ= ಪಾದಗಳಿಗೆ, ಬೇಕಾದ= ಮನವೊಪ್ಪತಕ್ಕ, ಕಾಣಿಕೆಯನು= ವಸ್ತುಗಳ ರಾಶಿಯನ್ನು, ಇತ್ತು=ಕೊಟ್ಟವನಾಗಿ, ಕೈಮುಗಿಯಲು= ಕರತಳವನ್ನು ಜೋಡಿಸಲು, ಪ್ರೀತಿಯಿಂದ= ಸಂತೋಷದಿಂದ, ಆತನಂ= ಯೌವನಾಶ್ವ ಕ್ಷಿತಿಪತಿಯನ್ನು, ತೆಗೆದು=ಚಾಚಿ, ತಕ್ಕೈಸಿ=ಆಲಿಂಗಿಸಿ, ಯೌವನಾಶ್ವನನ್ನು ಕುರಿತು, ನೀನು ಎನಗೆ= ನನಗೆ, ಮಾದ್ರೇಯ= ಮಾದ್ರಿದೇವಿಯ ಸುತರಾದ ನಕುಲ ಸಹದೇವರಿಗೂ, ಭೀಮಾರ್ಜುನರ= ಭೀಮಾರ್ಜುನರೆಂಬ ನನ್ನ ನಾಲೂವರು ಅನುಜರಿಗೂ, ಸಮಾನವು= ಸದೃಶನು, ಅದರಿನಿಂ= ಕಾರಣ, ಈ ಯಾದವೇಂದ್ರನ= ಈ ಕೃಷ್ಣಸ್ವಾಮಿಯನ್ನು, ಭಾವಿಸು= ಹೃದಯದಲ್ಲೆ ನೆನೆ, ಎಂದು= ಎಂಬುದಾಗಿ, ಅರಸಂ=ಯುಧಿಷ್ಠಿರನು, ಯೌವನಾಶ್ವ ಭೂಪತಿಗೆ, ಮುಕುಂದನಂ= ಮೋಕ್ಷಪ್ರದನಾದ ಶ್ರೀಕೃಷ್ಣಮೂರ್ತಿಯನ್ನು, ತೋರಿದಂ= ಈಕ್ಷಿಸುವಂತೆ ಮಾಡಿದನು.
ತಾತ್ಪರ್ಯ:- ಆಗ ಧರ್ಮಜನು ತನಗಭಿಮುಖರಾಗಿ ಬರುತ್ತಲಿರುವ ವಾಯುನಂದನ ಯೌವನಾಶ್ವರನ್ನು ನೋಡಿ ಆನೆಯಿಂದ ಕೆಳಗಿಳಿದು ನಿಂತುಕೊಂಡನು, ಯೌವನಾಶ್ವನು ಕೂಡಲೆ ಧರ್ಮಾತ್ಮನಾದ ಧರ್ಮನಂದನನ ಬಳಿಗೆ ಬಂದು ಸಾಷ್ಟಾಂಗಪ್ರಮಾಣವಂ ಮಾಡಿ ಬಹುವಿಧವಾದ ಕಾಣಿಕೆಯನ್ನು ಇತ್ತು ಕೈಗಳನ್ನು ಮುಗಿದು ನಿಂತಿರಲು ಧರ್ಮರಾಯನು ಯೌವನಾಶ್ವನನ್ನು ಬಾಚಿ ತಬ್ಬಿಕೊಂಡು ಅವನನ್ನು ಕುರಿತು ಎಲೈ ರಾಜನೆ,ನೀನೂ ನನ್ನನುಜರಾದ ಭೀಮಾರ್ಜುನ ನಕುಲ ಸಹದೇವರಿಗೆ ಸಮಾನನಾದ್ದರಿಂದ ನೆನಗೆ ಸ್ವಾಮಿ ದರ್ಶನ ಫಲವು ಲಭಿಸುವುದೇನೂ ಅಸಾಧ್ಯವಲ್ಲವೆಂದು ನುಡಿದು ಶ್ರೀಕೃಷ್ಣಸ್ವಾಮಿಯನ್ನು ತೋರಿಸಿದನು.
ಬಳಿಕವಂ ಕಂಡನುತ್ಪಲದಳಶ್ಯಾಮ ಕೋ।
ಮಲತರಶರೀರನಂ ನವರತ್ನ ಮಕುಟ ಕುಂ ।
ಡಲ ಕನಕ ಕೇಯೂರಹಾರನಂ ಪ್ರಕಟ ಕಟಿಸೂತ್ರ ಮಣಿಮಂಜೀರನಂ॥
ವಿಲಸಿತ ಶ್ರೀವತ್ಸ ಕೌಸ್ತುಭ ಶುಭೋದರನಂ ।
ಲಲಿತ ಪೀತಾಂಬರೋಜ್ವಲದಲಂಕಾರನಂ।
ಜಲಜಸಮ ಚರಣಯುಗ ಮೋಹನಾಕಾರನಂ ಲಕ್ಷ್ಮೀಮನೋಹಾರನಂ॥೬॥
ಪ್ರತಿಪದಾರ್ಥ:- ಬಳಿಕ= ಧರ್ಮರಾಯನು ಕೃಷ್ಣನನ್ನು ತೋರಿಸಿದಮೇಲೆ, ಅವಂ= ಯೌವನಾಶ್ವನೆಂಬ ಮಹಿಪನು, ಉತ್ಪಲದಳಶ್ಯಾಮ=ಉತ್ಪಲ- ಕರಿಕಮಲದ-ದಳ-ರೇಕಿನಂತೆ-ಶ್ಯಾಮ-ಕಪ್ಪುಬಣ್ಣದಿಂದ ಕೂಡಿದ, ಕೋಮಲತರ= ಬಹುಮೃದುವಾದ, ಶರೀರನಂ= ಗಾತ್ರವುಳ್ಳ, ನವರತ್ನಮಯ= ವಜ್ರವೈಢೂರ್ಯಾದಿಗಳಾದ ಒಂಬತ್ತು ಬಗೆಯ ರತ್ನಮಣಿಗಳ, ಮಕುಟ= ಶಿರೋಭೂಷಣವಾದ ಒಡವೆಯು, ಕುಂಡಲ= ಕರ್ಣಾಲಂಕೃತಗಳಾದ ಹತ್ತ ಕಡಕುಗಳು, ಕನಕ= ಸುವರ್ಣಮಯಗಳಾದ, ಕೇಯೂರ= ಭುಜಕೀರ್ತಿಗಳು, ಹಾರನಂ= ಕಂಠಾಭರಣಗಳು, ಇವುಗಳಿಂದ ಕೂಡಿದ, ಪ್ರಕಟ= ಪ್ರಸಿದ್ಧವಾದ, ಕಟಿಸೂತ್ರ= ಉಡಿದಾರವು, ಮಣಿ= ರತ್ನಖಚಿತಂಗಳಾದ,ಮಂಜೀರನ= ಕಾಲ್ಬಳೆಗಳುಳ್ಳ,ವಿಲಸಿತ= ಥಳಥಳಿಸುತ್ತಿರುವ,ಶ್ರೀವತ್ಸ = ಶ್ರೀವತ್ಸವೆಂಬ ನಾಮಧೇಯದಿಂದ ಅನ್ವಿತವಾದ ಗುರ್ತಿನಿಂದಲೂ, ಕೌಸ್ತುಭ= ಕೌಸ್ತೈಭವೆನ್ನುವರತ್ನದಿಂದಲೂ ಕೂಡಿದ, ಶುಭ= ಭದ್ರಕರಮಾದ, ಉರನಂ= ಹೃದಯದ ಭಾಗವುಳ್ಳವನಾದ, ಲಲಿತ= ಮನೋಹರವಾದ, ಪೀತಾಂಬರ= ಹಳದಿಯ ಬಣ್ಣದ ಪಟ್ಟೆ ಮಡಿಯಿಂದ, ಉಜ್ವಲ =ಥಳಥಳಿಸುವ, ಅಲಂಕಾರನಂ= ಕಾಂತಿಯುಳ್ಳ, ಜಲಜ= ಕೆಂದಾವರೆಯನ್ನು ಹೋಲುವ,ಚರಣಯುಗ= ಅಡಿಗಳನ್ನುಳ್ಳ, ಮೋಹನ= ಇಷ್ಟಸಿದ್ಧಿಯಂಗೈವ, ಆಕಾರನಂ= ಸ್ವರೂಪವುಳ್ಳ, ಲಕ್ಷ್ಮೀ= ಲಕ್ಷ್ಮೀದೇವಿಯ, ಮನ= ಹೃದಯವನ್ನು,ಹಾರನಂ= ವಶಮಾಡಿಕೊಂಡಿರತಕ್ಕವನಾದ
ಶ್ರೀ ಕೃಷ್ಣಮೂರ್ತಿಯನ್ನು,ಕಂಡನು= ಈಕ್ಷಿಸಿದನು.
ತಾತ್ಪರ್ಯ:- ಆಗ ಯೌವನಾಶ್ವಮಹಿಪನು ಕನ್ನೈದಿಲೆಯಂತೆ ಕಪ್ಪಾಗಿರುವ ಅತಿ ಮೃದುವಾದ ದೇಹದಲ್ಲಿ ನವರತ್ನಖಚಿತವಾಗಿ ಸೂರ್ಯನ ತೇಜಸ್ಸನ್ನು ನಿರಾಕರಿಸುತ್ತಿರುವ ಕರ್ಣಕುಂಡಲ ಕಿರೀಟ ಕೇಯೂರಾದಿಗಳಿಂದೊಡಗೂಡಿ,ಉತ್ತಮವಾದ ಉಡಿದಾರ ಕಾಲ್ಕಡಗಗಳನ್ನು ಹಾಕಿಕೊಂಡು ಶ್ರೀವತ್ಸಾಂಕಿತನಾಗಿ, ಕೌಸ್ತುಭಮಣಿಯಿಂದಲೂ ಪೀತಾಂಬರದಿಂದಲೂ ಪ್ರಕಾಶೆಸುತ್ತಿರುವ ಕಮಲದಂತೆ ಪಾದಗಳನ್ನುಳ್ಳ ಲಕ್ಷ್ಮೀಕಾಂತನಾದ ಮತ್ತು,
ಅಚ್ಚ್ಯುತನ ಮಂಗಳ ಶ್ರೀಮೂರ್ತಿ ಕಣ್ಮನವ।
ನೊಚ್ಚತಂಗೊಳಲೇಳ್ವ ರೋಮಪುಳಕದೊಳೆ ಮೈ।
ವೆಚ್ಚಿದತಿಹರ್ಷದಿಂದಜ ಭವ ಸುರೇಂದ್ರ ಮುನಿಮುಖ್ಯರ್ಗೆ ಗೋಚರಿಸದ॥
ಸಚ್ಚಿದಾನಂದಮಯನಂ ಕಂಡುದಿದು ಜಗದೊ।
ಳಚ್ಚರಿಯಲಾ ನರರ್ಗೆನುತಾನೃಪಾಲಕಂ।
ಬೆಚ್ಚನಸುರಾಂತಕನ ಪದಕೆ ಪೊಸಮಿಸುನಿವೆಳಗೆಸೆವ ಮಕುಟದ ನೊಸಲನು॥೭॥
ಪ್ರತಿಪದಾರ್ಥ:- ಅಚ್ಯುತನ= ರೂಪರಹಿತನಾದ ಪರಮಾತ್ಮನ, ಮಂಗಳ = ಶುಭಕರನಾದ, ಶ್ರೀಮೂರ್ತಿಯ= ಸತ್ಕುಲಸಂಪನ್ನತೆ, ಸುಜ್ಞಾನ, ಸಾಮ್ರಾಜ್ಯ ಮೊದಲಾದವುಗಳಿಂದ ಕೂಡಿರುವ, ದಿವ್ಯ= ಮನೋರಂಜಕಮಾದ, ಆಕೃತಿಯು=ಆಕಾರವು, ಕಣ್ಮನವನು= ಯೌವನಾಶ್ವ ನೆಂಬ ಧರಾವಲ್ಲಭನ ಹೃದಯ ನಯನಂಗಳನು,ಅಚ್ಯುತಂಗೊಳಲು= ಪರಮಾತ್ಮನನ್ನು ಈಕ್ಷಿಸುದರಲ್ಲೆ ಮನಸ್ಸನ್ನು ನೆಲೆಯಾಗಿಡಲು, ಏಳ್ವ= ಪ್ರಾಪ್ತವಾಗುತ್ತಲಿರುವ,ಪುಳಕದೊಳೆ= ರೋಮಾಂಚನದಿಂದಲೆ,ಮೈವೆಚ್ಚಿದ= ಅಭಿವೃದ್ಧಿಯಂಪಡೆದ, ಅತಿಹರ್ಷದಿಂದ= ಸಂತೋಷದಿಂದ, ಅಜ=ವಿರಂಚಿಯೂ, ಭವ=ಶಿವನೂ, ಸುರೇಂದ್ರ= ಶಚೀಪತಿಯೂ, ಮುನಿ= ತಾಪಸೋತ್ತಮರಾದ ವಶಿಷ್ಠ, ನಾರದರೇ, ಮುಖ್ಯ= ಆದಿಯಾಗಿರತಕ್ಕವರಿಗೆ, ಗೋಚರಿಸದ= ಕಾಣದಿರುವ, ಸಚ್ಚಿದಾನಂದಮಯನಂ = ಸಚ್ಚಿದಾನಂದ ಸ್ವರೂಪನಾದ ಭಗವಂತನನ್ನು, ಕಂಡೆನು= ದರೂಶನಲಾಭವಂ ಪಡೆದನು, ಜಗದೊಳು= ಲೋಕದಲ್ಲಿ, ನರರ್ಗೆ= ಮಾನವರಿಗೆ, ಅಚ್ಚರಿಯಲಾ= ಆಶ್ಚರ್ಯದಾಯಕವಾದದ್ದಲ್ಲವೆ, ಎನುತ= ಎಂದು ನುಡಿಯುತ್ತ, ಆ ನೃಪಾಲಕಂ= ಆ ರಾಜನಾದ ಯೌವನಾಶ್ವನು, ಅಸುರ=ರಕ್ಕಸರ, ಅಂತಕಂ=ಸಂಹಾರಕನಾದ ಕೃಷ್ಣಸ್ವಾಮಿಯ,ಪದಕೆ=ಕಾಲುಗಳಿಗೆ, ಪೊಸ= ಪುಟವಿಟ್ಟ, ಮಿಸುನಿಯೊಲು= ಭಂಗಾರದಂತೆ, ಎಸೆವ=ಥಳಥಳಿಸುವ, ಮಕುಟದ= ಶಿರೋಭೂಷಣವುಳ್ಳ,ನೊಸಲನು= ಫಾಲವನ್ನು, ಬೆಚ್ಚನು= ಇಟ್ಟನು.
ತಾತ್ಪರ್ಯ:- ಚ್ಯುತಿಯಿಲ್ಲದವನೂ, ಬ್ರಹ್ಮರುದ್ರೇಂದ್ರಾದಿಗಳಿಗೂ ನಾರದ ವಶಿಷ್ಠಾದಿಗಳಿಗೂ ಅಗೋಚರನೂ ಸಚ್ಚಿದಾನಂದ ಸ್ವರೂಪನೂ ಆದ ಶ್ರೀಕೃಷ್ಣಪರಮಾತ್ಮನನ್ನು ನೋಡಿ ಅತ್ಯಾನಂದಭರಿತನಾಗಿ ಆ ಮಹಾನುಭಾವನ ಪಾದಾರವಿಂದಗಳಲ್ಲಿ ಹೊಸದಾದ ನವರತ್ನಗಳಿಂದ ಥಳಥಳಿಸುತ್ತಿರುವ ತನ್ನ ಕಿರೀಟವನ್ನು ನೀಡಿ,
ಕಮಲದಳನಯನ ಕಾಳಿಯಮಥನ ಕಿಸಲಯೋ।
ಪಮಚರಣ ಕೀಶಪತಿಸೇವ್ಯ ಕುಜಹರ ಕೂರ್ಮ।
ಸಮಸತ್ಕಪೋಲ ಕೇಯೂರಧರ ಕೈರವಶ್ಯಾಮ ಕೋಕನದಗೃಹೆಯ॥
ರಮಣ ಕೌಸ್ತುಭಶೋಭ ಕಂಬುಚಕ್ರಗದಾಬ್ಜ।
ವಿಮಲಕರ ಕಸ್ತೂರಿಕಾತಿಲಕಕಾವುದೆಂ ।
ದಮಿತಪ್ರಭಾಮೂರ್ತಿಯಂ ನುತಿಸಲಾತನಂ ಹರಿ ನೆಗಪಿದಂ ಕೃಪೆಯೊಳು॥೮॥
ಪ್ರತಿಪದಾರ್ಥ:- ಕಮಲ=ಕಮಲಪುಷ್ಪಗಳ, ದಳ= ರೇಕುಗಳಂತಿರುವ, ನಯನ= ಆಲಿಗಳನ್ನುಳ್ಳ, ಕಾಳಿಯ= ಕಾಳಿ ಎಂಬ ಹಾವನ್ನು, ಮಥನ=ದಂಡಿಸಿದ, ಕಿಸಲಯ= ಚಿಗುರಿಗೆ, ಉಪಮ= ಸಮಾನವಾದ, ಚರಣ= ಪಾದಗಳುಳ್ಳ, ಕೀಶ= ಕೋತಿಗಳ, ಪತಿ=ಒಡೆಯನಾದ ಸುಗ್ರೀವನಿಂದ, ಸೇವ್ಯ= ಪೂಜೆಮಾಡಿಸಿಕೊಳ್ಳತಕ್ಕ ರಾಮಾವತಾರವನ್ನು ತಾಳಿದ್ದ, ಕುಜ= ಗೋವರ್ಧನ ಪರ್ವತವನ್ನು, ಹರ=ಮೇಲಕ್ಕೆ ಎತ್ತಿ ಹಿಡಿದುಕೊಂಡ, ಕುಜ= ಪಾರಿಜಾತವೃಕ್ಷವನ್ನು,ಹರ= ಅಪಹರಿಸಿ, ಮತ್ತು ಕುಜ=ಕುಡುಕರನ್ನು, ಹರ=ಸಂಹರಿಸುವ, ಕೂರ್ಮ= ಕೂರ್ಮಾವತಾರ ಮಾಡಿದ, ಸಮ=ನೇರವಾದ, ಸತ್ಕಪೋಲ= ಸುಂದರವಾದ ಕೆನ್ನೆಗಳಿಂದೊಡಗೂಡಿದ, ಕೇಯೂರ= ಭುಜಕೀರ್ತಿಗಳನ್ನು, ಧರ= ಹಾಕಿಕೊಂಡಿರುವ, ನೀರದ= ಮುಗಿಲಿನಂತೆ, ಶ್ಯಾಮ = ಶ್ಯಾಮಲವರ್ಣವುಳ್ಳ, ಕೋಕನದ= ಕೆಂದೃವರೆಯೇ, ಗೃಹೆಯ= ಮನೆಯಾಗುಳ್ಳ ಮಹಾಲಕ್ಷ್ಮಿಗೆ, ರಮಣ=ಪತಿಯಾದ, ಕೌಸ್ತುಭ= ಕೌಸ್ತುಭವೆನ್ನುವ ರತ್ನದಿಂದ, ಶೋಭ= ಪ್ರಕಾಶಿಸುವ, ಕಂಬು= ಶಂಖವೆಂಬ, ಚಕ್ರ= ಚಕ್ರಾಯುಧವೆನ್ನುವ, ಗದಾ= ಗದೆಯೆಂಬ ನಾಮಧೇಯದ,ಅಬ್ಜ= ಪದ್ಮವು ಮೊದಲಾದವುಗಳಿಂದ, ವಿಮಲತರ= ಅತ್ಯಂತ ಪರಿಶುದ್ಧವಾದ, ಕಸ್ತೂರಿಕಾ = ಕಸ್ತೂರಿ ಎಂಬ ಪರಿಮಳ ದ್ರವ್ಯದ,ತಿಲಕ= ಅಲಂಕಾರ ಅಥವಾ ನಾಮಗಳನ್ನುಳ್ಳ ಕೃಷ್ಣಸ್ವಾಮಿಯೇ, ಕಾವುದು= ರಕ್ಷಿಸಬೇಕು, ಎಂದು = ಎಂಬ ತೆರನಾಗಿ, ಅಮಿತ= ಹೆಚ್ಚಾದ, ಪ್ರಭಾ= ಕಾಂತಿಯುಕ್ತಮಾದ, ಮೂರ್ತಿಯಂ= ಆಕಾರವುಳ್ಳ ಸ್ವಾಮಿಯನ್ನು, ನುತಿಸಲು= ಸ್ತುತಿಸಲು, ಕೃಪೆಯೊಳು=ಕರುಣೆಯಿಂದ, ಆತನಂ= ಆ ಯೌವನಾಶ್ವ ಭೂಪಾಲನನ್ನು ನೆಗಪಿದಂ= ಮೇಲಕ್ಕೆಬ್ಬಿಸಿದನು.
ತಾತ್ಪರ್ಯ:- ಎಲೈ ಕಮಲನೇತ್ರನೆ, ಕಾಳಿ ಎಂಬ ಸರ್ಪವನ್ನು ಕೊಂದವನೆ, ಪಲ್ಲವಗಳಂತಿರುವ ಚರಣವುಳ್ಳವನೆ, ಸುಗ್ರೀವಾದಿಗಳಿಂದ ಸ್ತುತಿಸಲ್ಪಟ್ಟವನೆ, ಕೂರ್ಮಾವತಾರವನ್ನು ತಾಳಿದವನೆ, ಶ್ಯಾಮಲಾಂಗನೆ, ಕಿರೀಟ ಕೇಯೂರಾದಿಗಳಿಂದಲಂಕೃತನೆ, ಶಂಖಚಕ್ರಗದಾಪದ್ಮಂಗಳನ್ನು ಧರಿಸಿ ಕಸ್ತೂರಿಯ ತಿಲಕವುಳ್ಳ ಸ್ವಾಮಿಯೆ, ಜಗದ್ರಕ್ಷನೆ,
ದೀನಬಂಧೂ, ಭಕ್ತವತ್ಸಲಾ ಎಂಬುದಾಗಿ ನಾನಾ ಪ್ರಕಾರವಾಗಿ ಸ್ತುತಿಸುತ್ತಿದ್ದನು. ಈ ಪ್ರಕಾರವಾಗಿ ತನ್ನನ್ನು ಏಕಚಿತ್ತ
ಮನೋಭಾವದಿಂದ ಸ್ತುತಿಸುತ್ತಿದ್ದ ಯೌವನಾಶ್ವನನ್ನು ಸ್ವಾಮಿಯು ಮೇಲಕ್ಕೆಬ್ಬಿಸಲು,
ಅಧಿಕ. ವಿಷಯ:-ಕುಜ ಇದು ನಾನಾರ್ಥಪದ. ಕುಜ= ವೃಕ್ಷ, ಪರ್ವತ, ನೀಚರು, ಎಂಬ ಅರ್ಥಗಳನ್ನೊಳಗೊಂಡಿರುವುದು, ಕೂರ್ಮಾವತಾರ, - ಪೂರ್ವದಲ್ಲಿ ದೇವಾಸುರರು ಕ್ಷೀರ ಸಮುದ್ರದಲ್ಲಿರುವ ಅಮೃತವನ್ನು ಪಡೆಯಲು ಮಂದರಗಿರಿಯನ್ನು ಕಡಗೋಲಾಗಿಯೂ, ವಾಸುಕಿ ಎಂಬ ಸರ್ಪರಾಜನನ್ನುಹಗ್ಗವಾಗಿಯೂ ಮಾಡಿಕೊಂಡು ಸಮುದ್ರವನ್ನು ಮಥಿಸಿ ಅಮೃತವನ್ನು ಹೊಂದಿದ ಬಳಿಕ ಆ ಮಂದರ ಪರ್ವತವನ್ನು ಪುನಃ ಮೇಲಕ್ಕೆತ್ತಲೋಸುಗವಿಗಿ ಸ್ವಾಮಿಯು ಈ ಅವತಾರವನ್ನು ಮಾಡಿದನು.
ಎದ್ದಾ ನೃಪಂ ಕೃತಾಂಜಲಿಪುಟಾವನತನಾ।
ಗಿದ್ದಾಗ ಭೀಮನಂ ನೋಡಿ ವಿಷಯಂಗಳಂ ।
ಗೆದ್ದ ನಿರ್ಮಲತಪಸ್ವಿಗಳ ನಿಶ್ಚಲಹೃದಯಮಧ್ಯ ಪಂಕೇಜಾತದಾ॥
ಗದ್ದುಗೆಯೊಳೆಸೆವ ಚೆದ್ರೂಪನಂ ಜಗವರಿಯೆ।
ದೊದ್ದೆಯೊಳ್ ಕೂಡಿ ತೇರ್ಗುದುರೆಯಂ ಪೊಡೆವುದಂ।
ಪೊದ್ದಿಸಿದ ಪಾರ್ಥನಾರಿದರೊಳೆನಲರ್ಜುನಂ ಬಂದಾತನಂ ಕಂಡನು॥೯॥
ಪ್ರತಿಪದಾರ್ಥ:- ಆ ನೃಪನಂ= ಆ ಯೌವನಾಶ್ವ ಮಹೀಪಾಲನು, ಕೃತಾಂಜಲಿಪುಟ= ಮುಕುಳಿತಕರ ಸಂಪುಟಗಳಿಂದ, ಅವನತನು= ತಲೆ ತಗ್ಗಿಸಿದವನು, ಆಗಿದ್ದಾಗ=ಆದ ಕಾಲದಲ್ಲಿ, ಭೀಮನಂ= ವೃಕೋದರನನ್ನು, ನೋಡಿ=ಈಕ್ಷಿಸಿ, ವಿಷಯಂಗಳಂ= ಸ್ವಕ್ಚಂದನಾದಿಗಳನ್ನು, ಗೆದ್ದ=ನಿಗ್ರಹಿಸಿದ, ನಿರ್ಮಲ= ಪರಿಶುದ್ಧವಾದ, ತಪಸ್ವಿಗಳ=ಋಷಿವರ್ಯರ, ನಿಶ್ಚಲ=ಅಲ್ಲಾಡದೆ ಇರುವ, ಹೃದಯ=ಮನದ, ಮಧ್ಯ=ನಡುವಣ, ಪಂಕೇಜಾತದ= ತಾವರೆ ಹೂವಿನ, ಗದ್ದುಗೆಯೊಳು= ಆಸನದಲ್ಲಿ, ಎಸೆವ= ಹೊಳೆಯುವ, ಚಿದ್ರೂಪನಂ= ಚಿದಾನಂದರೂಪನನ್ನು, ಜಗವು=ಲೋಕವು, ಅರಿಯೆ= ಗೊತ್ತುಮಾಡಿಕೊಳ್ಳುವಂತೆ, ದೊಡ್ಡಿಯೊಳ್= ತೇರನ್ನು ನಡೆಸುವಿಕೆಯಲ್ಲಿ, ಕೂಡಿ=ಒಂದಾಗಿ,ತೇರ್ಗುದುರೆಯಂ= ರಥಕ್ಕೆ ಕಟ್ಟತಕ್ಕ ಹಯವನ್ನು, ಪೊಡೆವುದಂ= ನಡೆಸುವಿಕೆಯನ್ನು, ಪೊದ್ದಿಸಿದ= ಜೋಡಿಸಿದ, ಪಾರ್ಥನು= ಫಲ್ಗುಣನು, ಇವರೊಳು= ಇಲ್ಲಿ ನೆರೆದಿರುವವರಲ್ಲಿ,ಆರು=ಯಾರು, ಎನಲು= ಎಂದು ಪ್ರಶ್ನೆಮಾಡಲು, ಅರ್ಜುನಂ= ಕಿರೀಟಿಯು, ಬಂದು=ಸಮೀಪಕ್ಕೈದಿ, ಆತನಂ=ಆ ಯೌವನಾಶ್ವಾವನಿಪನನ್ನು, ಕಂಡನು=ಈಕ್ಷಿಸಿದನು.
ತಾತ್ಪರ್ಯ:- ಆಗ ಯೌವನಾಶ್ವನು ಎದ್ದು ತನ್ನ ಕರಕಮಲಗಳನ್ನು ಜೋಡಿಸಿಕೊಂಡು ನಮ್ರ ಭಾವದಿಂದ ನಿಂತು ಪಕ್ಕದಲ್ಲಿದ್ದ ಭೀಮಸೇನನನ್ನು ಕುರಿತು ಎಲೈ ವೃಕೋದರನೆ, ಸ್ರಕ್ಚಂದನವನಿತಾದಿಗಳನ್ನು ಬಿಟ್ಟು ಪರಿಶುದ್ಧರಾದ ತಾಪಸೋತ್ತಮರಿಗೂ ಅಗೋಚರನೂ ಚಿದ್ರೂಪನೂ ಆದ ಭಗವಂತನನ್ನು ಸಾರಥಿಯನ್ನಾಗಿಯುಳ್ಳ ಅರ್ಜುನನು ಯಾರೆಂದು ಪ್ರಶ್ನೆಮಾಡಿದನು. ಭೀಮನು ಪಾರ್ಥನನ್ನು ತೋರಿಸಲಾಗಿ, ಯೌವನಾಶ್ವನು ಆತನನ್ನು ಈಕ್ಷಿಸಿದನು.
ಗುಣದೊಳಾ ಯೌವನಾಶ್ವಕ್ಷಿತಿಪನೆರಗಿ ಫಲು।
ಗುಣನ ಮೊಗಮಂ ನೋಡಿ ನೀನಲಾ ತ್ರಿ।
ಗುಣದೊಳೊಂದದ ಘನಶೃತಿಶಿರೋಮಣಿಯನಿಳೆಯರಿಯೆ ನಿಜಭಕ್ತಿಯೆಂಬ॥
ಗುಣದಿಂದೆ ಬಂಧಿಸಿದ ಕೋವಿದನದೇಂ ಬಯಲ।
ಗುಣವಿರ್ದರಕಟ ಯೋಗಿಗಳೆಂದು ನರನ ಸ।
ದ್ಗುಣವನುರೆ ಕೊಂಡಾಡಿ ಬಳಿಕ ಸಹದೇವ ನಕುಲಾದ್ಯರಂ ಮನ್ನಿಸಿದನು॥೧೦॥
ಪ್ರತಿಪದಾರ್ಥ:- ಗುಣದೊಳು= ನಯವಿನಯಾದಿಗಳಿಂದ, ಆ ಯೌವನಾಶ್ವಕ್ಷಿತಿಪನು= ಆ ಯೌವನಾಶ್ವನೆಂಬ ಪೃಥ್ವೀಶ್ವರನು, ಎರಗಿ= ವಂದಿಸಿ, ಫಲುಗುಣನ= ಪಾರ್ಥನ, ಮೊಗಮಂ=ಆಸ್ಯವನ್ನು, ನೋಡಿ=ಈಕ್ಷಿಸಿ, ನೀನಲಾ= ನೀನೆ, ತಿಳಿಯಲ್= ಅರಿಯಲು, ತ್ರಿಗುಣಗಳು= ಸತ್ವಗುಣ,ರಜೋಗುಣ,ತಮೋಗುಣಗಳ, ಒಂದತೆ= ಕೂಡದೆ, ಘನ=ಶಾಶ್ವತವಾದ, ಶ್ರುತಿ= ವೇದವಚನಂಗಳಲ್ಲಿ, ಶಿರಃ= ಶೀರ್ಷಪ್ರಾಯವಾದ ಉಪನಿಷದ್ವಾಕ್ಯಗಳಲ್ಲಿ,ಮಣಿಯ= ರತ್ನದಹಾಗೆ ಉತ್ತಮೋತ್ತಮನಾದ ಶ್ರೀಕೃಷ್ಣ ಪರಮಾತ್ಮನನ್ನು, ಇಳೆ= ಪ್ರಪಂಚವು, ಅರಿಯೆ= ಗೋಚರವನ್ನೈದುವಂತೆ, ನಿಜ= ಸ್ವಕೀಯವಾದ, ಭಕ್ತಿಯೆಂಬ=ಭಕ್ತಿ ಎನ್ನತಕ್ಕ, ಗುಣದಿಂದ = ಪಾಶದಿಂದ, ಬಂಧಿಸಿದ= ನಿರ್ಬಂಧಿಸಿಕೊಂಡಿರತಕ್ಕ, ಕೋವಿದನು= ಪಂಡಿತನಾಗಿರುವ, ಬಯಲಗುಣವಿದ್ದರೆ= ಶಮ ದಮ ಮೊದಲಾದ ಬಾಹ್ಯ ಸಂಬಂಧ ಗುಣಂಗಳಿದ್ದರೆತಾನೆ,ಯೋಗಿಗಳು ಅದೇಂ= ಅಂಥವರು ನಿಜವಾದ ಭಕ್ತರೇ? ( ಇಲ್ಲ ) ಯಾವ ಯೋಗಾಭ್ಯಾಸವೂ ಇಲ್ಲದ ಸ್ವಾಮಿಯ ವಿಶ್ವಾಸಕ್ಕೆ ಪಾತ್ರನಾಗಿರುವುದು ಅತ್ಯಾಶ್ಚರ್ಯವು, ಎಂದು= ಹೀಗೆಂದು, ನರನ= ಪಾರ್ಥನ, ಸದ್ಗುಣವನು= ಒಳ್ಳೇ ಗುಣವನ್ನು, ಉರೆ=ಅಧಿಕವಾಗಿ,ಕೊಂಡಾಡಿ= ಸ್ತುತಿಸಿ, ಬಳಿಕ=ಆಮೇಲೆ, ನಕುಲಸಹದೇವಾದ್ಯರಂ= ನಕುಲ ಸಹದೇವ ಮೊದಲಾದವರನ್ನು, ಮನ್ನಿಸಿದನು= ಆಶೀರ್ವಾದ ಪುರಸ್ಸರವಾಗಿಮನ್ನಣೆಯಂ ಮಾಡಿದನು.
ತಾತ್ಪರ್ಯ:- ಅಯ್ಯಾ ಫಲ್ಗುಣನೆ, ತ್ರಿಲೋಕಂಗಳ ಉತ್ಪತ್ತಿಗೆ ಕಾರಣಭೂತನಾಗಿ ನಿರಾಗುಣನಾಗಿರುವ ಪರಮಾತ್ಮನನ್ನು ಭಕ್ತಿ ಪಾಶದಿಂದ ಬಂಧಿಸಿದ ನಿನಗಿಂತಲೂ ಮಹಾತ್ಮರು ಇನ್ನು ಯಾರಿರುವರು ಎಂಬುದಾಗಿ ಸ್ತೋತ್ರವಂ ಮಾಡಿಶಬಳಿಕ ನಕುಲಸಹದೇವರನ್ನೂ ಆಲಿಂಗಿಸಿಕೊಂಡನು.
ಬಳಿಕ ಹೊಳೆಹೊಳೆವ ಗೊಂಚಲೆತ್ತಲುಂ ।
ಬಳಸಿ ಕಂಗೊಳಿಸುತಿರಲಡಿಗಡಿಗೆ ಘುಡುಘುಡಿಸಿ।
ಮೊಳಗುವ ಸಿತಾಭ್ರಮಂ ಕುಲಗಿರಿತಟಪ್ರದೇಶಕೆ ಸಾರ್ಚುವನಿಲನಂತೆ॥
ಲಲಿತ ಕನಕಾಭರಣಗಳ ಕಾಂತಿಯಂ ಸುಗತಿ।
ಗುಲಿವ ಹೊಂಗೆಜ್ಜೆಗಳ ರಭಸದಿಂದೆಸೆವ ನಿ।
ನಿರ್ಮಲವಾಜಿಯಂ ಸುವೇಗಂ ತಂದು ನಿಲಿಸಿದಂ ಧರ್ಮಜನ ಸಮ್ಮುಖದೊಳು॥೧೧॥
ಪ್ರತಿಪದಾರ್ಥ:- ಬಳಿಕ= ಆಮೇಲೆ, ಹೊಳೆವ= ಪ್ರಕಾಶಿಸುವ, ಮಿಂಚಿನ= ವಿದ್ಯುತ್ತಿನ, ಗೊಂಚಲು=ರಾಶಿಯು, ಎತ್ತಲು= ಎಲ್ಲೆಡೆಗಳಲ್ಲಿಯೂ, ಬಳಸಿ=ತುಂಬಿಕೊಂಡು, ಕಂಗೊಳಿಸುತ =ಥಳಥಳಿಸುತ್ತ,ಇರಲು=ಇರಲಾಗಿ,ಅಡಿಗಡಿಗೆ= ಆಗಿಂದಾಗ್ಗೆ, ಘುಡುಘುಡಿಸಿ= ಘುಡುಘುಡುಸ್ವರದಿಂದ, ಮೊಳಗುವ= ಧ್ವನಿಯಂಗೈವ, ಸಿತಾಭ್ರಮಂ= ಶ್ವೇತವರ್ಣದ ಮುಗಿಲನ್ನು, ಕುಲಗಿರಿ= ಸಪ್ತಕುಲ ಪರ್ವತಗಳ, ತಟಪ್ರದೇಶಕೆ= ದಡದಬಳಿಗೆ, ಸಾರ್ಚುವ= ಕೂಡಿಸುವ, ಅನಿಲನಂತೆ= ಗಾಳಿಯಹಾಗೆ, ಲಲಿತ= ಮನೋಹರವಾದ, ಕನಕ=ಸುವರ್ಣದ, ಆಭರಣ= ತೊಡಿಗೆಗಳ, ಕಾಂತಿಯಂ= ಕಳೆಯನ್ನು, ಸುಗತಿಗೆ= ಸನ್ಮಾರ್ಗಕ್ಕೆ, ಉಲಿವ= ಶಬ್ಧವಾಗುವ, ಹೊಂಗೆಜ್ಜೆಗಳ = ಚಿನ್ನದ ಗೆಜ್ಜೆಗಳ, ರಭಸದಿಂ= ನಿನದದಿಂದ, ಎಸೆವ= ಹೊಳೆಯುವ, ನಿರ್ಮಲ = ಪರಿಶುದ್ಧವಾದ, ವಾಜಿಯಂ= ಅಶ್ವವನ್ನು, ಸುವೇಗಂ= ಸುವೇಗನೆಂಬ ನಾಮಧೇಯವುಳ್ಳ ಯೌವನಾಶ್ವನ ಪುತ್ರನು, ಧರ್ಮಜನ= ಯುಧಿಷ್ಠಿರನ, ಸಮ್ಮುಖದೊಳು= ಎದುರುಭಾಗದಲ್ಲಿ, ನಿಲಿಸಿದಂ= ನಿಲ್ಲುವಂತೆ ಮಾಡಿದನು.
ತಾತ್ಪರ್ಯ:- ಆನಂದಪರವಶನಾಗಿದ್ದನು. ಆಗ ವಿದ್ಯುತ್ತಿನ ಗೊಂಚಲಿನಂತೆ ಹೊಳೆಯುತ್ತಿರುವ ಗುಚ್ಚಂಗಳಿಂದಕೂಡಿ, ಗುಡಿಗಿನಿಂದ ಸೇರಿರುವ ಬಿಳಿ ಮೇಘವುಳ್ಳ ಆಗಸದಂತೆ ಹೊಳೆಯುವ ಬಿಳಿಯ ಮೈಯನ್ನುಳ್ಳ, ಸುವರ್ಣದ ಗೆಜ್ಜೆಗಳನ್ನು ಧರಿಸಿ ಝಣಝಣನೆ ಶಬ್ಧವಂ ಮಾಡುತ್ತಿರುವ ಉತ್ತಮಾಶ್ವವನ್ನು ಸುವೇಗನು ತಂದು ಧರ್ಮರಾಯನ ಎದುರಿಗೆ ನಿಲ್ಲಿಸಿದನು.
ತುರಗಮೇಧಂಗೆಯ್ಯದೊಂದಿನಿಸು ಕುಂದೆನ್ನ ।
ಸಿರದ ಮೇಲಿದೆ ತಾನಿದಂ ತಾಳಲಾರೆ ನೀಂ।
ಪರಿಹರಿಪುದೆಂದು ನಿಜಕೀರ್ತಿ ಹಯರೂಪದಿಂ ಭೂಪನಂ ಬೇಡಿಕೊಳಲು॥
ಪೊರೆಗೆ ಬಂದವೊಲೇಕಕರ್ಣದಸಿತತ್ವದಿಂ।
ಪರಿಶೋಭಿಸುವ ಶುಭ್ರವಾಜಿಯಂ ಕಾಣುತ।
ಚ್ಚರಿವಟ್ಟು ಸಕಲಜನಮೈತಂದು ನೋಡುತಿರ್ದುದು ಬಳಸಿ ದೆಸೆದೆಸೆಯೊಳು॥೧೨॥
ಪ್ರತಿಪದಾರ್ಥ:- ತುರಗಮೇಧಂ= ಹಯಮೇಧವೆಂಬ ಯಾಗವನ್ನು, ಗೈಯದೆ=ರಚಿಸದೆ, ಇನಿಸು=ಸ್ವಲ್ಪವಾದರೂ, ಕುಂದು= ದೋಷವು, ಎನ್ನ=ನನ್ನ, ಶಿರದಮೇಲೆ= ಶಿರೋಭಾಗದಲ್ಲಿ,ಇದೆ= ಇರುವುದು, ತಾನು=ನಾನು, ಇದಂ= ಈ ದುಷ್ಕೀರ್ತಿಯ-
ನ್ನು, ತಾಳಲಾರದೆ= ತಡೆಯಲಾರದೆ, ಪರಿಹರಿಪುದು= ಹೋಗಲಾಡಿಸಬೇಕು, ಎಂದು=ಹೀಗೆಂದು, ನಿಜಕೀರ್ತಿ= ತನ್ನ ಜಸವು, ಹಯರೂಪದಿಂ = ಕುದುರೆಯ ಆಕಾರದಿಂದ, ಭೂಪನಂ= ರಾಜನನ್ನು, ಬೇಡಿಕೊಳ್ಳಲು= ಕೇಳಿಕೊಳ್ಳಲಿಕ್ಕೆ, ಪೊರೆಗೆ= ಹತ್ತಿರಕ್ಕೆ, ಬಂದವೊಲ್= ಬಂದಿದೆಯೋ ಎಂಬಂತೆ, ಏಕ=ಒಂದು, ಕರ್ಣ= ಶ್ರೋತ್ರೇಂದ್ರಿಯದ, ಅಸಿತತ್ವದಿಂ= ಕರಿಯಬಣ್ಣದಿಂದ, ಪರಿಶೋಭಿಸುವ= ಪ್ರಕಾಶಿಸುವ, ಶುಭ್ರ= ಶ್ವೇತವರ್ಣದ, ವಾಜಿಯಂ= ತೇಜಿಯನ್ನು, ಕಾಣುತ= ಈಕ್ಷಿಸುತ್ತ, ಅಚ್ಚರಿಪಟ್ಟು= ಆಶ್ಚೈರ್ಯವನ್ನೈದಿ, ಐತಂದು= ಬಂದು, ದೆಸೆದೆಸೆಯೊಳು= ನಾನಾ ದಿಕ್ಕುಗಳಲ್ಲಿಯೂ, ಬಳಸಿ= ಸುತ್ತಿಕೊಂಡು, ಸಕಲ=ಅಶೇಷರಾದ, ಜನಂ= ಪ್ರಜೆಯು, ನೋಡುತಿರ್ದುದು= ಈಕ್ಷಿಸುತ್ತಲಿತ್ತು.
ತಾತ್ಪರ್ಯ:- ಅಶ್ವಮೇಧಯಾಗದಿಂದೊದಗಿದ ದೋಷವು ಮೂರ್ತಿವತ್ತಾಗಿದೇಹವೆಲ್ಲಾಬಿಳುಪಾಗಿಯೂ ಒಂದು ಕಿವಿ ಮಾತ್ರ ಕಪ್ಪಗೂ ಇರುವ ಆ ಉತ್ತಮಾಶ್ವವು ಧರ್ಮರಾಯನ ಕೀರ್ತಿಯೆ ಮೂರ್ತೀಭವಿಸಿ ಅಶ್ವಮೇಧಯಾಗವನ್ನು
ಮಾಡದ್ದರಿಂದುಂಟಾಗುವ ದೋಷವನ್ನು ತನ್ನ ತಲೆಯಲ್ಲಿ ಧರಿಸಿ ಇದನ್ನು ಪರಿಹರಿಸಬೇಕೆಂದು ಧರ್ಮಜನನ್ನು ಬೇಡಿಕೊಳ್ಳುತ್ತಿದೆಯೊ ಎಂಬಂತೆ ಪ್ರಕಾಶಿಸುತ್ತಿತ್ತು.
ಕೊಂಡುಬಂದಾ ಹಯವನೊಪ್ಪಿಸಿ ಯುಧಿಷ್ಠಿರನ ।
ಕಂಡಂ ಸುವೇಗನತಿಭಕ್ತಿಯಿಂದೆರಗಿದಂ ।
ಪುಂಡರೀಕಾಕ್ಷಂಗೆ ಬಳಿಕರ್ಜುನಾದಿಗಳ್ಗುಚಿತದಿಂ ವಂದಿಸಿದನು॥
ಬಂಡಿಪೇರೆತ್ತೊಂಟ್ಟೆಗಳ ಮೇಲೆ ತಂದಖಿಳ ।
ಭಂಡಾರಮಂ ಕರಿರಥಾಶ್ವಮಂ ನಾರಿಯರ।
ತಂಡಮಂ ಗೋಮಹಿಷ ಮೊದಲಾದ ವಸ್ತುಗಳನಾ ಕ್ಷಣದೊಳೊಪ್ಪಿಸಿದನು॥೧೩॥
ಪ್ರತಿಪದಾರ್ಥ:- ಸುವೇಗನು= ಸುವೇಗನೆಂಬವನು, ಆ ಹಯವನು= ಆ ತೇಜಿಯನ್ನು, ಕೊಂಡುಬಂದು= ತೆಗೆದುಕೊಂಡು ಬಂದು, ಒಪ್ಪಿಸಿ= ಸಮರ್ಪಣೆಮಾಡಿ,ಯುಧಿಷ್ಠಿರನ = ಧರ್ಮರಾಯನನ್ನು, ಕಂಡಂ= ಈಕ್ಷಿಸಿದನು, ಅತಿಭಕ್ತಿಯಿಂದ= ಪರಮಭಕ್ತಿಯಿಂದ, ಎರಗಿದಂ= ವಂದಿಸಿದನು, ಪುಂಡರೀಕಾಕ್ಷಂಗೆ= ಕಮಲನೇತ್ರನಿಗೆ, ಬಳಿಕ= ಅನಂತರ, ಅರ್ಜುನಾದಿಗಳ್ಗೆ= ಪಾರ್ಥನೆ ಮುಂತಾದವರಿಗೆ, ಉಚಿತದಿಂ= ಯೋಗ್ಯತೆಯನ್ನರಿತು, ವಂದಿಸಿದನು= ಎರಗಿದನು, ಬಂಡಿ= ಗಾಡಿಗಳು, ಪೇರೆತ್ತು= ದೊಡ್ಡ ವೃಷಭಗಳು, ಒಂಟೆಗಳಮೇಲೆ= ಉಷ್ಟ್ರವೇ ಮೊದಲಾದವುಗಳ ಮೇಲೆ, ತಂದ= ತೆಗೆಯಿಸಿಕೊಂಡು ಬಂದಂಥ, ಅಖಿಳ= ಎಲ್ಲಾ, ಭಂಡಾರ ಮಂ= ನಗನಾಣ್ಯ, ಕರಿ=ಆನೆಗಳು, ರಥ= ತೇರುಗಳು, ಅಶ್ವಮಂ= ಹಯಗಳನ್ನು, ನಾರಿಯರ= ಸ್ತ್ರೀಯರ, ತಂಡಮಂ= ಸಮೂಹವನ್ನು, ಗೊ= ಹಸುಗಳು, ಮಹಿಷ= ಕರೆಯುವ ಎಮ್ಮೆ, ಮೊದಲಾದ = ಮುಂತಾದ, ವಸ್ತುಗಳನು= ಪುರುಳನ್ನು, ಆ ಕ್ಷಣದೊಳು= ಒಡನೆಯೇ, ಒಪ್ಪಿಸಿದನು= ಸಮರ್ಪಣೆಯಂ ಮಾಡಿದನು.
ತಾತ್ಪರ್ಯ:- ಇಂಥಾ ಉತ್ತಮಾಶ್ವವನ್ನೂ, ಒಂಟೆಗಳಮೇಲೂ ಆನೆಗಳಮೇಲೂ ಗಾಡಿಗಳಲ್ಲಿಯೂ ತಂದಿದ್ದ ಧನಕನಕವಸ್ತ್ರಾದಿಗಳನ್ನೂ, ಅನೇಕ ಹಸುಗಳನ್ನೂ, ನಾರಿಯರನ್ನೂ, ಸುವೇಗನು ಯುಧಿಷ್ಠಿರನಿಗೊಪ್ಪಿಸಿ ಧರ್ಮಪುತ್ರನಿಗೂ, ಭೀಮಾರ್ಜುನ ನಕುಲ ಸಹದೇವರಿಗೂ ವಂದಿಸಿದನು.
ಮೇಲೆ ಪರಿತೋಷದಿಂದಾ ಯೌವನಾಶ್ವಭೂ।
ಪಾಲಕಂ ತನ್ನ ಸರ್ವಸ್ವಮಂ ತಂದು ಲ।
ಲಕ್ಷ್ಮೀಲೋಲನಂಘ್ರಿಗೊಪ್ಪಿದ ಬಳಿಕವನೊಡನೆ ಬಂದಿಹ ಸಮಸ್ತಜನರು॥
ನೀಲಮೇಘಶ್ಯಾಮಲನ ಕೋಮಲಾಂಗದ ವಿ।
ಶಾಲತರ ಲಾವಣ್ಯಲಹರಿಯ ಸುಧಾಂಬುಧಿಯೊ।
ಳೋಲಾಡುತಿರ್ದರಡಿಗಡಿಗೆವಂದಿಸಿ ನುತಿಸಿ ಜಯಜಯನಿನಾದದಿಂದೆ॥೧೪॥
ಪ್ರತಿಪದಾರ್ಥ:- ಮೇಲೆ= ತರುವಾಯ, ಪರಿತೋಷದಿಂ= ಆನಂದದಿಂದ, ಆ ಯೌವನಾಶ್ವ ಭೂಪಾಲಕಂ= ಆ ಯೌವನಾಶ್ವ ಮಹಾರಾಜನು, ತನ್ನ= ಸ್ವಕೀಯವಾದ, ಸರ್ವಸ್ವಮಂ=ಸಂಪತ್ತನ್ನೆಲ್ಲಾ ,ತಂದು= ತೆಗೆಸಿಕೊಂಡು ಬಂದು, ಲಕ್ಷ್ಮೀಲೋಲನ= ಲಕ್ಷ್ಮೀಕಾಂತನ, ಅಂಘ್ರಿಗೆ= ಪಾದಕ್ಕೆ, ಒಪ್ಪಿಸಿದ= ಅರ್ಪಣೆಮಾಡಿದ, ಬಳಿಕ= ಅನಂತರ, ಅವನೊಡನೆ= ಆ ಸುವೇಗನೊಂದಿಗೆ, ಬಂದಿಹ= ಐತಂದಿರುವ, ಸಮಸ್ತ ಜನರು= ಸಕಲ ಪ್ರಜೆಗಳು, ನೀಲಮೇಘ= ಕೃಷ್ಣವರ್ಣವಾದ ಮುಗಿಲಿನಂತೆ,ಶ್ಯಾಮಲನ= ಕಪ್ಪುಬಣ್ಣವುಳ್ಳ, ಕೋಮಲಾಂಗದ= ಸುಖದೇಹವುಳ್ಳ, ವಿಶಾಲತರ= ಬಹು ಹೆಚ್ಚಾದ, ಲಾವಣ್ಯ= ಸೌಂದರ್ಯದ, ಲಹರಿಯ= ಹರಿಯುವಿಕೆಯುಳ್ಳ,ಸುಧಾಂಬುಧಿಯೊಳ್= ಸುಧಾಪೂರ್ಣವಾದ ಕಡಲಲ್ಲಿ ಅಡಿಗಡಿಗೆ= ಬಾರಿಬಾರಿಗೂ, ವಂದಿಸಿ= ಎರಗಿ, ನುತಿಸಿ= ಸ್ತೋತ್ರಮಾಡಿ, ಜಯಜಯವೆಂಬ= ಜಯಜಯವೆನ್ನುವ, ನಿನಾದದಿಂದ= ರವದಿಂದ, ಓಲಾಡುತಿರ್ದುದು= ಹೊರಳಾಡುತ್ತಿತ್ತು.
ಅ॥ವಿ॥ ವಿಶಾಲ=ವಿಸ್ತಾರ, ಮತ್ತು ವಿಶಾಲವೆಂಬೊಂದು ನಗರ.
ಇತ್ತಲಾ ಯೌವನಾಶ್ವನ ರಾಣಿ ಕಾಣಿಕೆಯ ।
ನಿತ್ತು ಕುಂತಿಗೆ ನಮಿಸಿ ಬಳಿಕ ಪಾಂಚಾಲಭೂ।
ಭೃತ್ತನೂಜೆಯ ಚರಣ ಸೀಮೆಗಾನತೆಯಾಗಲವಳ ಕಚಭರಮೆಸೆದುದು॥
ಒತ್ತಿಡಿದ ಸಂಜೆಗೆಂಪಿನ ಮೇಲೆ ಕವಿದ ಬ।
ಲ್ಗತ್ತಲೆಯೊ ಶೋಣಗಿರಿತಟಕಿಳಿವ ಕಾರ್ಮುಗಿಲ।
ಮೊತ್ತಮೊ ಕಮಲಕೆರಗುವಳಿಕುಲಮೊ ತಳಿರ್ಗೊಂಬಡರ್ದಬರ್ಹಿಯೊ ಪೇಳೆನೆ॥೧೫॥
ಪ್ರತಿಪದಾರ್ಥ:- ಇತ್ತಲು= ಸ್ತ್ರೀಯರಿರುವ ಪಾರ್ಶ್ವದಲ್ಲಿ, ಆ ಯೌವನಾಶ್ವನರಾಣಿ = ಪಟ್ಟದರಸಿಯಾದ ಪ್ರಭಾವತಿ ಎಂಬಾಕೆಯು,ಕುಂತಿಗೆ=ಕುಂತಿದೇವಿಗೆ, ಕಾಣಿಕೆಯನು= ಮರ್ಯಾದಾ ದ್ರವ್ಯವನ್ನು, ಇತ್ತು= ಕೊಟ್ಟವಳಾಗಿ, ನಮಿಸಿದ ಬಳಿಕ = ಎರಗಿದಮೇಲೆ, ಪಾಂಚಾಲ= ಪಾಂಚಾಲದೇಶದ, ಭೂಭೃತ್= ರಾಜನ, ತನೂಜೆಯ= ಕುವರಿಯಾದ ದ್ರುಪದಪುತ್ರಿಯ,ಚರಣ=ಅಡಿಗಳ, ಸೀಮೆಗೆ=ಅಂಚಿಗೆ,ಅಥವಾ ಹತ್ತಿರಕ್ಕೆ, ಆನತಳಾಗಲು= ನಮ್ರಭಾವದಿಂದ ಎರಗಲು, ಅವಳ=ಆ ಯೌವನಾಶ್ವನ ರಾಣಿಯ, ಕುಚಭರಂ=ಸ್ತನಭಾರವುಕಾಣಿಸದ ಬಗೆ ಹೇಗೆಂದರೆ, ಒತ್ತಿಡಿದ= ಸಾಂದ್ರವಾಗಿ ನೆರೆದ, ಸಂಜೆಗೆಂಪಿನಮೇಲೆ= ಸಂಧ್ಯಾರಾಗದ ಮೇಲ್ಗಡೆಯಲ್ಲಿ, ಕವಿದ=ವ್ಯಾಪಿಸಿದ, ಬಲ್ಗತ್ತಲೆಯೊ=ತಮೋರಾಶಿಯೊ,( ಪ್ರಭಾವತಿಯು ಕಪ್ಪುಬಣ್ಣದ ಕಂಚುಕವನ್ನು ತೊಟ್ಟಿದ್ದರಿಂದ ಕರ್ರಗಿದ್ದವು), ಶೋಣ=ರಕ್ತಛಾಯೆಯಾದ, ಗಿರಿ= ಪೂರ್ವ ಪಶ್ಚಿಮದಿಕ್ಕುಗಳ ಕೊನೆಯಲ್ಲಿ ರುವ ಬೆಟ್ಟಗಳ,ತಟಕೆ= ತೀರಕ್ಕೆ,ಇಳಿವ= ಬರತಕ್ಕ, ಕಾರ್ಮುಗಿಲ= ನೀಲಮೇಘದ, ಮೊತ್ತಮೊ= ಗುಂಪೊ, ಕಮಲಕ್ಕೆ= ತಾವರೆ ಹೂವಿಗೆ,ಎರಗುವ= ಮಧುಪಾನಕ್ಕರಸಿ ಬರತಕ್ಕ, ಅಳಿಕುಲಮೊ= ಭೃಂಗಾಳಿಯೊ, ತಳಿರ್ಗೊಂಬ= ರಕ್ತ ಪಲ್ಲವಗಳಿಂದಾವರಿಸಿದ ಶಾಖೆಯನ್ನು ಅಡರ್ದ= ಏರಿದ, ಬರ್ಹಿಯೊ=ನವಿಲೊ, ಪೇಳು=ಹೇಳು, ಎನೆ= ಎಂಬಂತೆ, ಎಸೆದುದು= ಥಳಥಳಿಸಿತು.
ತಾತ್ಪರ್ಯ:- ಅತ್ತಲಾ ಯೌವನಾಶ್ವನ ರಾಣಿಯಾದ ಪ್ರಭಾವತಿಯು ಕುಂತಿ, ಸುಭದ್ರೆ, ದ್ರೌಪದಿ ಮೊದಲಾದವರ ಪಾದಗಳಿಗೆ ಎರಗಿದಳು. ಸಂಧ್ಯಾರಾಗದ ಮೇಲೆ ಆವರಿಸಿದ ತಮೋರಾಶಿಯಂತೆಯೂ, ಪೂರ್ವ ಪಶ್ಚಿಮ ದಿಗಂತಗಳಲ್ಲಿರುವ ಕೆಂಪು ಬೆಟ್ಟಗಳ ಮೇಲೆ ಕವಿದ ಕರಿಯ ಮೋಡಗಳು ಎಂಬ ಹಾಗೂ, ಕಮಲಗಳನ್ನಾಶ್ರಯಿಸುವ ಅಳಿವಿಂಡಿನ ತೆರನಾಗಿಯೂ, ಚಿಗುರಿನಿಂದ ಕೂಡಿದ ಕೊಂಬೆಯನ್ನಾಶ್ರಯಿಸಿದ ನವಿಲಿನಂತಿರುವ ಸ್ತನಗಳುಳ್ಳವಳಾಗಿಯೂ,
ದ್ವೇಷಮಂ ಬಿಟ್ಟು ಕೆಂದಾವರೆಯ ಚೆಲ್ವಿನ ವಿ।
ಶೇಷಮಂ ನೋಡಲ್ ಸಮೀಪಮಂ ಸಾರ್ದ ಪೀ।
ಯೂಷಕರಬಿಂಬಮೆನಲಾ ಪ್ರಭಾವತಿಯ ಮೊಗವಂಘ್ರಿ ದೇಶದೊಳೊಪ್ಪಿರೆ॥
ಭೂಷಣಂ ಚಲಿಸೆ ಮಣಿದೆತ್ತಿ ಬಿಗಿಯಪ್ಪಿ ಸಂ।
ತೋಷದಿಂದವಳನುಪಚರಿಸಿ ತಿರುಗಿದಳಖಿಳ ।
ಯೋಷಿಜ್ಜನದೊಳತಿವಿಲಾಸದಿಂ ದ್ರೌಪದಿ ಸುಭದ್ರಾದಿ ಸತಿಯರೊಡನೆ॥೧೬॥
ಪ್ರತಿಪದಾರ್ಥ:- ದ್ವೇಷಮಂ= ವೈರವನ್ನು, ಬಿಟ್ಟು=ವಿಸರ್ಜಿಸಿ, ಕೆಂದಾವರೆಯ= ರಕ್ತಛಾಯೆಯಾದ ಕಮಲದ, ವಿಶೇಷಮಂ= ಆಧಿಕ್ಯವನ್ನು, ನೋಡಲು= ದೃಷ್ಟಿಸಲು, ಸಮೀಪಮಂ= ಹತ್ತಿರಕ್ಕೆ, ಸಾರ್ದ=ಬಂದ, ಪೀಯೂಷಕರ= ಸುಧಾಂಶುವಿನ, ಬಿಂಬಂ= ಮಂಡಲವೊ, ಎನಲ್= ಎಂಬಂತೆ, ಆ ಪ್ರಭಾವತಿಯ= ಯೌವನಾಶ್ವನ ರಾಣಿಯ, ಮೊಗಂ=ಆಸ್ಯವು,ಅಂಘ್ರಿದೇಶದೊಳು= ಅಡಿಗಳ ಬಳಿಯಲ್ಲಿ, ಒಪ್ಪಿರೆ= ನೆರೆದಿರಲಾಗಿ, ( ಆ ದ್ರೌಪದಿಯೇ ಮೊದಲಾದವರೂ), ಭೂಷಣಂ= ತೊಡಿಗೆಗಳು, ಚಲಿಸಲು= ಅಲ್ಲಾಡುತ್ತಿರಲು,ಮಣಿದು= ನಮಸ್ಕರಿಸಿ, ಎತ್ತಿ= ಮೇಲಕ್ಕೆಬ್ಬಿಸಿ,ಬಿಗಿಯಪ್ಪಿ = ಆಲಿಂಗನವಂ ಮಾಡಿಕೊಂಡು, ಸಂತೋಷದಿಂದ = ಆಹ್ಲಾದದಿಂದ, ಅವಳನು= ಯೌವನಾಶ್ವನ ಸತಿಯನ್ನು, ಉಪಚರಿಸಿ= ಮನ್ನಿಸಿ, ಅಖಿಲಯೋಷಿದ್ಗಳೊಡನೆ= ಎಲ್ಲಾ ನಾರಿಯರೊಂದಿಗೂ, ವಿಲಾಸದಿಂ= ಆನಂದದಿಂದ, ತಿರುಗಿದರು=ನಗರಕ್ಕೆದುರಾಗಿ ಹೊರಟರು.
ಅ. ವಿ.:- ಈ ಪದ್ಯದಲ್ಲಿ ಶ್ವೇತವರ್ಣದ ಆಸ್ಯಕ್ಕೂ ರಕ್ತವರ್ಣದ ಅಡಿಗಳಿಗೂ ಶಶಿರವಿಗಳ ಹೋಲಿಕೆಯನ್ನು ಕೊಟ್ಟಿರುವುದು.
ತಾತ್ಪರ್ಯ:- ವೈರಭಾವವನ್ನು ಮರೆತು ಕೆಂದಾವರೆಯನ್ನು ನೋಡಲೆಳಸಿ ಬಂದಿರುವ ಚಂದ್ರನಂತೆ ಮುಖವುಳ್ಳ ಪ್ರಭಾವತಿ-
ದೇವಿಯನ್ನು ರತ್ನಭೂಷಣಾಲಂಕೃತರಾದ ದ್ರೌಪದಿ ಸುಭದ್ರೆ ಮೊದಲಾದವರು ಉಪಚಾರದಿಂದ ಕರೆದುಕೊಂಡು ಹೋಗುತ್ತಿದ್ದರು.
ಶೌರಿಸಹಿತರಸಂ ಬಳಿಕ ರಜತಗಿರಿಯಂತೆ।
ಗೌರಾಂಗದಿಂದೆ ಕಣ್ಗೊಳಿಸುವ ತುರಂಗಮದ।
ಸೌರಂಭಮಂ ನೋಡಿ ಬಿಗಿಯಪ್ಪಿ ಮುಂಡಾಡಿ ಹೈಡಿಂಬಿ ಕರ್ಣಜರನು॥
ಗೌರವಂ ಮಿಗೆ ಯೌವನಾಶ್ವಭೂಪಾಲನಂ।
ಪೌರುಷದೊಳುಪಚರಿಸಿ, ತಂದನಿಭಪುರಿಗಖಿಳ ।
ಪೌರಜನ ಪರಿಜನದ ರಥನಾಗವಾಜಿಗಳ ಸಂದಣಿಯ ಸಂಭ್ರಮದೊಳು॥೧೭॥
ಪ್ರತಿಪದಾರ್ಥ:- ಅರಸಂ= ಯುಧಿಷ್ಠಿರನು, ಶೌರಿಸಹಿತ= ಕೃಷ್ಣಮೂರ್ತಿಯೊಂದಿಗೆ, ಗೌರ= ಬಿಳೀಬಣ್ಣವುಳ್ಳ, ಅಂಗದಿಂ= ದೇಹದಿಂದ, ರಜತಗಿರಿಯಂತೆ= ಬೆಳ್ಳಿಯ ಬೆಟ್ಟದಹಾಗೆ( ಕೈಲಾಸಗಿರಿಯಂತೆ), ಕಂಗೊಳಿಸುವ= ಹೊಳೆಯುವ, ತುರಂಗಮದ= ಹಯದ, ಸೌರಂಭಮಂ= ಅಲಂಕಾರವಾದ ನಡಿಗೆಯ ವೇಗವನ್ನು, ನೋಡಿ= ದೃಷ್ಟಿಸಿ, ಬಿಗಿಯಪ್ಪಿ = ವೃಷಕೇತು, ಮೇಘನಾದರನ್ನು ಆಲಿಂಗನೆಮಾಡಿಕೊಂಡು, ಮುಂಡಾಡಿ= ತಲೆಯನ್ನು ಆಘ್ರಾಣಿಸಿ, ಯೌವನಾಶ್ವ ಭೂಪಾಲನಂ= ಯೌವನಾಶ್ವಾವನಿಪನನ್ನು, ಗೌರವಂ= ಮರ್ಯಾದೆಯು, ಮಿಗೆ= ಹೆಚ್ಚುವಂತೆ, ಪೌರುಷದೊಳು= ಪರಾಕ್ರಮದೊಂದಿಗೆ, ಉಪಚರಿಸಿ= ಸತ್ಕರಿಸಿ, ಅಖಿಲ= ಸಮಸ್ತವಾದ, ಪೌರಜನ= ಪಟ್ಟಣದ ಪ್ರಜೆಗಳ, ಪರಿಜನದ= ಭೃತ್ಯರ, ರಥ= ತೇರುಗಳ, ನಾಗ= ಹಸ್ತಿಗಳ, ವಾಜಿ= ಕುದುರೆಗಳ, ಸಂದಣಿಯ= ಗುಂಪಿನ, ಸಂಭ್ರಮದೊಳು= ಸಡಗರದಿಂದ, ಇಭಪುರಿಗೆ= ಹಸ್ತಿನಾವತೀ ಪಟ್ಟಣಕ್ಕೆ, ತಂದನು= ಬರಮಾಡಿಕೊಂಡನು.
ತಾತ್ಪರ್ಯ:- ಶ್ರೀಕೃಷ್ಣನಿಂದೊಡಗೂಡಿದ ಯುಧಿಷ್ಠಿರನು ಮನೋಹರವಾದ ನಡಿಗೆಯ ವೇಗದಿಂದ ತಮ್ಮೊಂದಿಗೆ ಬರುತ್ತಿರುವ ಉತ್ತಮಾಶ್ವವನ್ನು ಕಂಡು ಅತ್ಯಾನಂದದಿಂದ ಮೇಘನಾದ ವೃಷಕೇತುಗಳನ್ನು ಆಲಿಂಗಿಸಿಕೊಂಡು
ಚತುರಂಗಬಲಸಮೇತನಾಗಿ ಬಹು ಸಂಭ್ರಮದಿಂದ ಹಸ್ತಿನಾವತಿಗೆ ಕರೆತಂದನು.
ಭೂವಲ್ಲಭಂ ಮುದದೊಳಾ ಯೌವನಾಶ್ವನಂ ।
ಭಾವಿಸಿದ ಬಳಿಕ ಪಕ್ಷದ್ವಯಂ ಹರಿ ಹಸ್ತಿ।
ನಾವತಿಯೊಳಿರ್ದು ನೃಪವರನೊಳಿಂತೆಂದನೀ ಚೈತ್ರಮಾಸಂ ಪೋದುದು॥
ಈ ವೇಳೆಗಧ್ವರದ ಸಮಯವನುಪಕ್ರಮಿಸ।
ಲಾವಿರಲ್ ಬಂದೊಂದು ವರ್ಷಮಪ್ಪುದು ಮುಂದೆ।
ನೀವು ಕರೆಸಿದೊಢೆ ಬಂದಪೆವಂದಿಗೊಧವಿಧ ಸಮಸ್ತ ವಸ್ತುಗಳ ಕೊಂಡು॥೧೮॥
ಭೂವಲ್ಲಭಂ= ಯುಧಿಷ್ಠಿರನು, ಮುದದೊಳು=ಆನಂದದಿಂದ, ಭಾವಿಸಿದಬಳಿಕ= ಆ ಯೌವನಾಶ್ವನನ್ನು ಸತ್ಕರಿಸಿದಮೇಲೆ . ಹರಿ= ವಿಷ್ಣುವು, ಹಸ್ತಿನಾವತಿಯೊಳು= ಹಸ್ತಿನಾವತಿ ಎಂಬ ನಗರದಲ್ಲಿ, ಪಕ್ಷದ್ವಯಂ= ಎರಡು ಪಕ್ಷಗಳು,ಇರ್ದು= ಇದ್ದು,
ಆ ನೃಪವರನೊಳ್= ಆ ಧರ್ಮರಾಯನೊಂದಿಗೆ, ಈ ಚೈತ್ರಮಾಸಂ=ಈ ಮಧುಮಾಸವು, ಪೋದುದು= ಮುಗಿಯಿತು, ಈ ವೇಳೆಗೆ= ಈ ಸಮಯಕ್ಕೆ, ಆವು= ನಾವು, ಇರಲ್=ಇರಲು, ಅಧ್ವರದ= ಯಾಗದ, ಸಮಯವನು = ನಿಷ್ಕರ್ಷೆಯ ವೇಳೆಯನ್ನುಉಪಕ್ರಮಿಸಲು= ಆರಂಭಮಾಡಲು, ಪನ್ನೊಂದು ತಿಂಗಳು= ಹನ್ನೊಂದು ತಿಂಗಳು, ಇಪ್ಪುದು= ಇರುವುದು, ಅದರಿಂದ= ಆದಕಾರಣ, ನೀವು=ನೀವುಗಳು, ಮುಂದೆ=ಮುಂದಿನ ವರ್ಷದ ಚೈತ್ರಮಾಸದ ಸಮಯಕ್ಕೆ, ಕರೆಸಿದೊಡೆ= ಬರಮಾಡಿಕೊಂಡರೆ, ಅಂದಿಗೆ= ಆ ಸಮಯಕ್ಕೆ, ಒದಗಿದ=ದೊರೆತ, ಸಮಸ್ತ= ಸಕಲವಾದ, ವಸ್ತುಗಳ= ಪುರಳ್ಗಳನ್ನು, ಕೊಂಡು= ತೆಗೆಯಿಸಿಕೊಂಡು, ಬಂದಪೆವು= ಬಂದು ಒದಗುವೆವು, ಎಂದನು= ಎಂಬುದಾಗಿ ನುಡಿದನು.
ಅ. ವಿ. :- ಪಕ್ಷ= ಇದು ನಾನಾರ್ಥಪದವು, ಶುಕ್ಲಪಕ್ಷ ಕೃಷ್ಣಪಕ್ಷಗಳೆಂದು, ಪಕ್ಷಿಗಳ ರೆಕ್ಕೆ, ಎಡಬಲಭಾಗಗಳೆಂಬ ಅರ್ಥಗಳೂ ಆಗುವುವು.
ತಾತ್ಪರ್ಯ:- ಅದುವರೆಗೂ ನೀವು ಈ ಅಶ್ವವನ್ನು ಯೌವನಾಶ್ವ ಭೂಪತಿಯ ಸಹಾಯದಿಂದ ಕಾಪಾಡಿರಿ ಎಂದು ನುಡಿದು ದ್ವಾರಕಾ ಪಟ್ಟಣವನ್ನು ಹೋಗಿ ಸೇರಿದನು.
ರಾಯ ನೀಂ ಕರೆಸಿದೊಡೆ ನಿನ್ನಯ ಮಹಾಧ್ವರ ಸ।
ಹಾಯಕೆ ಸಮಸ್ತ ವಸ್ತುವನಖಿಳ ಯಾದವ ನಿ।
ಕಾಯಮಂ ಕೂಡಿಕೊಂಡೈತಪ್ಪೆವನ್ನೆಗಂ ಸುಯ್ದಾನದಿಂ ಹಯವನು॥
ಈ ಯೌವನಾಶ್ವಭೂಪತಿಸಹಿತ ಕಾವುದೆಂ।
ದಾ ಯಮಸುತಾದಿಗಳನಂದು ಬೀಳ್ಕೊಂಡು ಕಮ।
ಲಾಯತಾಕ್ಷಂ ಬಂಧುಕೃತ್ಯದಿಂ ದ್ವಾರಕಾಪುರಕೆ ಬಿಜಯಂಗೈದನು॥೧೯॥
ಪ್ರತಿಪದಾರ್ಥ:- ರಾಯ=ಅರಸನೆ, ನೀನು=ನೀವು, ಕರೆಸಿದೊಡೆ= ಹೇಳಿ ಕಳುಹಿಸಿದರೆ, ನಿನ್ನ=ನೀನು ಮಾಡುವ, ಮಹಾಧ್ವರ= ಮಹಾಯಾಗದ, ಸಹಾಯಕೆ=ಸಲುವಾಗಿ, ಸಮಸ್ತ= ಸಕಲವಾದ, ವಸ್ತುವನು= ಸೋಪಸ್ಕರಗಳನ್ನು,ಅಖಿಲ= ಎಲ್ಲಾ, ಯಾದವ= ಯದುಕುಲದ, ನಿಕಾಯಮಂ= ಪರಿವಾರವನ್ನೂ, ಕೂಡಿಕೊಂಡು= ಸೇರಿಸಿಕೊಂಡು, ಐತಪ್ಪೆವು= ಬರುತ್ತೇವೆ, ಅನ್ನೆಗಂ= ಅಷ್ಟರತನಕ, ಸುವಿಧಾನದಿಂದ= ವೇದವಿಧಿಯಿಂದ, ಹಯವನು= ಅಶ್ವವನ್ನು, ಆ ಯೌವನಾಶ್ವ ಭೂಪತಿಸಹಿತ= ಆ ಯೌವನಾಶ್ವ ಮನಿಂದೊಡಗೂಡಿ, ಕಾವುದು= ಕಾಪಾಡಬೇಕು, ಎಂದು=ಎಂಬುದಾಗಿ, ಆ ಯುಧಿಷ್ಠಿರಮುಖ್ಯರನು= ಧರ್ಮರಾಯ ಮುಂತಾದವರನ್ನು,ಬೀಳ್ಕೊಂಡು= ಕೇಳಿ ಹೊರಟು,
ಕಮಲಾಯತಾಕ್ಷಂ= ತಾವರೆಯ ಎಸಳಂತೆ ವಿಶಾಲ ನಯನಗಳುಳ್ಳಕೃಷ್ಣಮೂರ್ತಿಯು, ಬಂಧುಕೃತ್ಯದಿಂದ = ಬಾಂಧವ್ಯದ ಕಜ್ಜದಿಂದ, ದ್ವಾರಕಿಗೆ= ತನ್ನ ರಾಜಧಾನಿಯಾದ ದ್ವಾರಕಾಪಟ್ಟಣಕ್ಕೆ, ಬಿಜಯಂಗೈದನು, ( ಪ್ರಯಾಣವನ್ನು ಬೆಳಸಿದನು)
ತಾತ್ಪರ್ಯ :- ಅದುವರೆಗೂ ನೀವು ಈ ಅಶ್ವವನ್ನು ಯೌವನಾಶ್ವ ಭೂಪತಿಯ ಸಹಾಯದಿಂದ ಕಾಪಾಡಿರಿ ಎಂದು ನುಡಿದು ಶ್ರೀಕೃಷ್ಣಸ್ವಾಮಿಯು ಹಸ್ತಿನಾವತಿಯಿಂದ ದ್ವಾರಕಾ ಪಟ್ಟಣಕ್ಕೆ ಹೊರಟು ಹೋದನು
ಇತ್ತಲವನಿಪನಸುರಹರನ ಕಳುಹಿದ ಚಿಂತೆ।
ಗಿತ್ತು ನಿಜಬುದ್ಧಿಯಂ ಮುಂದರಿಯದಿರೆ ಬಂದು।
ಮತ್ತೆ ವೇದವ್ಯಾಸಮುನಿ ತಿಳುಹಲಮಲಮಂಟಪವನೋಜೆಯೊಳು ರಚಿಸಿ॥
ತತ್ತುರಗಮಂ ನಿಲಿಸಿ ಬಳಿಕ ಕಾವಲ್ಗೆ ರಥ।
ಮತ್ತೆ ಗಜ ಹಯ ಪದಾತಿಗಳ ಸಂದೋಹಮಂ।
ಸುತ್ತಲುಂ ಪರುಠವಿಸಿ ಕೇಳ್ದನಾ ಋಷಿಯೊಳ್ ಮರುತ್ತನೃಪತಿಯ ಕಥೆಯನು॥೨೦॥
ಪ್ರತಿಪದಾರ್ಥ:- ಇತ್ತಲು=ಇಲ್ಲಿ, ಅವನಿಪನು= ಯುಧಿಷ್ಠಿರನು, ಅಸುರಹರನ= ಕೃಷ್ಣಸ್ವಾಮಿಯನ್ನು, ಕಳುಹಿದ= ಕಳುಹಿಸಿಕೊಟ್ಟಂಥ, ಚಿಂತೆಗೆ= ವ್ಯಥೆಗೆ, ನಿಜಬುದ್ಧಿಯಂ = ತನ್ನ ಅರಿವನ್ನು, ಇತ್ತು=ಕೊಟ್ಟವನಾಗಿ, ಮುಂದರಿಯದೆ= ಏನೂ ತೋಚದೆ, ಇರೆ=ಇರಲಾಗಿ, ಮತ್ತೆ= ಪುನಃ, ವೇದವ್ಯಾಸಮುನಿ =ವ್ಯಾಸಮಹರ್ಷೆಯು, ತಿಳುಪಲು= ಧರ್ಮಬೋಧನೆಯಂ
ಗೈಯಲು, ಅಮಲ= ಪರಿಶುದ್ಧವಾದ, ಮಂಟಪವನು=ಯಜ್ಞಶಾಲೆಯನ್ನು, ರಚಿಸಿ=ನಿರ್ಮಿಸಿ, ತತ್ತುರಂಗಮಂ= ಆ ಹಯವನ್ನು, ನಿಲಿಸಿದ ಬಳಿಕ= ಯಾಗಶಾಲೆಯಲ್ಲಿ ಬಂಧಿಸಿದ ತರುವಾಯ, ಕಾವಲ್ಗೆ= ಅದರ ಪೋಷಣೆಗೆ, ರಥ=ತೇರುಗಳ
ಮತ್ತಗಜಗಳ= ಮದ್ದಾನೆಗಳ, ಹಯ=ಅಶ್ವಗಳ, ಪದಾತಿಗಳ= ಕಾಲ್ಬಲದ, ಸಂದೋಹಮಂ= ಸಮುದಾಯವನ್ನು, ಸುತ್ತಲು= ನಾನಾ ಕಡೆಯಲ್ಲಿಯೂ, ಪರುಠವಿಸಿ= ಸೇರಿಸಿ, ಆ ರುಷಿಯೊಡನೆ= ಆ ವ್ಯಾಸಮುನಿಪನಿಂದ, ಮರುತ್ತ ನೃಪತಿಯ= ಮರುತ್ತರಾಯನ, ಕಥೆಯನು=ವೃತ್ತಾಂತವನ್ನು, ಕೇಳಿದನು= ಶ್ರವಣಮಾಡಿದನು.
ತಾತ್ಪರ್ಯ:- ಶ್ರೀಕೃಷ್ಣಸ್ವಾಮಿಯು ಹಸ್ತಿನಾವತಿ ಯಿಂದ ದ್ವಾರಕಾ ಪಟ್ಟಣಕ್ಕೆ ಹೊರಟು ಹೋಗಲು ಧರ್ಮರಾಯನು ಕೃಷ್ಣನನ್ನಗಲಿದ ದುಃಖದಿಂದ ಏನೂ ತೋರದೆ ಮಗ್ನನಾಗಿ ಸುಮ್ಮನೆ ಕುಳಿತಿದ್ದನು. ಈ ರೀತಿಯಲ್ಲಿರುವ ರಾಯನಿಗೆ ವೇದವ್ಯಾಸಮಹರ್ಷಿಗಳು, ನಾನಾಪ್ರಕಾರವಾದ ಧರ್ಮ ರಹಸ್ಯಗಳನ್ನುಬೋಧೆಸಲು, ಆತನು ದುಃಖವನ್ನು ಮರೆತು ಯಜ್ಞಮಂಟಪವನ್ನು ನಿರ್ಮಾಣಮಾಡಿಸಿ, ಅಲ್ಲಿ ಯಜ್ಞಾಶ್ವವನ್ನು ಕಟ್ಟಿಸಿ, ಊದರ ಅಂಗರಕ್ಷಣೆಗೆ ಚತುರಂಗಬಲ ಸೈನ್ಯವನ್ನು ಇಟ್ಟು ಮುನಿಯನ್ನು ಕುರಿತು ಎಲೈ ಮಹರ್ಷಿಯೆ ನನಗೆ ಮರುತ್ತರಾಜನ ಕಥೆಯನ್ನು ಕೇಳಬೇಕೆಂಬ ಆಸೆಯು ಅಧಿಕವಾಗಿದೆ. ದಯಮಾಡಿ ಹೇಳಬೆಕೆಂದು ಬೇಡಿಕೊಳ್ಳಲು ಮುನಿಯು ಧರ್ಮಜನಿಗೆ ಮರುತ್ತನ ಕಥೆಯನ್ನು ಪೇಳ ತೊಡಗಿದನು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ