ಜೈಮಿನಿ ಭಾರತ 4 - ದೊಡ್ಡಬೆಲೆ ನಾರಾಯಣಶಾಸ್ತ್ರಿ
ಸೂಚನೆ:- ಜಡಿದು ಭದ್ರಾವತಿಯೊಳಮಲತರ ವಾಜಿಯಂ।
ಪಿಡಿದು ಕಲಿಯೌವನಾಶ್ವನ ಚಾತುರಂಗಮಂ ।
ಬಡಿದನವನಲ್ಲಿ ಕಾಣಿಸಿಕೊಂಡು ಹಸ್ತಿನಾವತಿಗೆ ಭೀಮಂ ಬಂದನು॥
ಭೀಮಂ= ವೃಕೋದರನು, ಭದ್ರಾವತಿಯೊಳು= ಭದ್ರಾವತಿ ಎಂಬ ನಗರದಲ್ಲಿ, ಅಮಲತರ= ಯಾಗಾರ್ಹಮಾಗಿರತಕ್ಕ
(ನಿರ್ಮಲವಾದ), ವಾಜಿಯಂ= ಅಶ್ವವನ್ನು, ಜಡಿದು=ಅಡ್ಡಗಟ್ಟಿಕೊಂಡು, ಪಿಡಿದು=ಹಿಡಿದುಕೊಂಡು, ಕಲಿ= ಶೂರ್ಗ್ರೇಸರ-
ನಾದ, ಯೌವನಾಶ್ವನ = ಯೌವನಾಶ್ವನೆಂಬ ಭೂಪಾಲನ, ಚಾತುರಂಗಮಂ= ಹಸ್ತಿ, ಅಶ್ವ, ರಥ, ಪದಾತಿ, ಎಂಬ ನಾಲ್ಕು ಬಗೆಯಾದ ದಂಡನ್ನೂ, ಬಡಿದು= ತಾಡಿಸಿಬಿಟ್ಟು( ಒಕ್ಕಲಿಕ್ಕಿ) ಅವನನು= ಆ ಯೌವನಾಶ್ವನೆಂಬ ದೊರೆಯನ್ನು, ಅಲ್ಲಿ= ಆ ಅಶ್ವಬಂಧನದೆಡೆಯಲ್ಲಿ, ಕಾಣಿಸಿಕೊಂಡ= ನೋಡಿದಂಥವನಾಗಿ,(ಎದುರ್ಗೊಂಡು) ಹಸ್ತಿನಾವತಿಗೆ = ಹಸ್ತಿನಾಪುರಿಗೆ,ಬಂದನು=ಹಿಂದಿರುಗಿ ಬಂದು ಸೇರಿದನು.
ಜನಮೇಜಯಕ್ಷಿತಿಪ ಕೇಳ್ ಪ್ರಣಯ ಕಲಹದೊಳ್ ।
ಮುನಿದ ಕಾಂತೆಯ ಕುಪಿತ ವದನಾರವಿಂದದೊಳ್ ।
ಮಿನುಗುವೆಳನಗೆ ತೋರುವನ್ನೆಗಂ ಚಿತ್ತದೊಳ್ ಕುದಿವ ನಾಗರಿಕನಂತೆ॥
ಅನಿಲಸುತನಾಹಯಂ ಪೊಳಲ ಪೊರಮಡುವಿನಂ।
ಮನದುಬ್ಬೆಗದೊಳೆ ಚಿಂತಿಸಿ ಮತ್ತೆ ಕರ್ಣಜಾ।
ತನ ವದನಮಂ ನೋಡುತನುತಾಪದಿಂ ತನ್ನ ಪಳಿದುಕೊಳುತಿಂತೆಂದನು॥೧॥
ಪ್ರತಿಪದಾರ್ಥ:- ಜನಮೇಜಯ= ಜನಮೇಜಯನೆಂಬ ನಾಮಧೇಯವುಳ್ಳ, ಕ್ಷಿತಿಪ= ರಾಜೇಂದ್ರನೆ, ಕೇಳು=ಲಾಲಿಸು, ಪ್ರಣಯ= ಪ್ರೀತಿಯುಕ್ತಮಾದ, ಕಲಹದೊಳ್= ವ್ಯಾಜ್ಯದಲ್ಲಿ, ಮುನಿದ= ಸಿಟ್ಟುಗೊಂಡ, ಕೌಂತೇಯ= ವೃಕೋದರನ, ಕುಪಿತ=ಆಗ್ರಹಯುಕ್ತಮಾದ, ವದನ= ಮೋರೆಯೆನ್ನವ, ಸರೋಜದೊಳ್= ಮೋರೆಯಲ್ಲಿ, ಮಿನುಗುವ= ಹೊಳೆಯುತ್ತಿ-
ರುವ, ಎಳನಗೆ= ಹುಸಿನಗೆಯನ್ನು, ತೋರುವ= ತೋರ್ಪಡಿಸತಕ್ಕ, ಅನ್ನೆಗಂ= ವರೆಗೂ, ಚಿತ್ತದೊಳ್= ಹೃದಯದಲ್ಲಿ, ಕುದಿವ= ದುಃಖಪಡುತ್ತಿರುವ, ಅನಾಗರಿಕನಂತೆ= ಮಂದಮತಿಯಹಾಗೆ, ಅನಿಲಸುತನು= ವಾಯುನಂದನನಾದ ಆ ಭೀಮಸೇನನು, ಆ ಹಯಂ= ಆ ಅಶ್ವವು, ಪೊಳಲ= ನಗರದಿಂದ, ಪೊರಮಡುವಿನಂ= ಹೊರಕ್ಕೆ ಬರುವ ಪರ್ಯಂತವೂ, ಮನದ= ಹೃದಯದ, ಉಬ್ಬೆಗದೊಳ್= ದುಃಖದಲ್ಲಿಯೇ,ಚಿಂತಿಸಿ=ಕೊರಗಿ, ಮತ್ತೆ=ತಿರುಗಿ,ಕರ್ಣಜಾತನ= ವೃಷಧ್ವಜನ, ವದನಮಂ= ಆಸ್ಯವನ್ನು, ನೋಡುತ= ದೃಷ್ಟಿಸುತ್ತ, ಅನುತಾಪದಿಂ= ಸಂತಾಪದಿಂದ, ತನ್ನ=ತನ್ನನ್ನು ತಾನೆ, ಪಳಿದು ಕೊಳುತ= ಹೀಯಾಳಿಸಿಕೊಳ್ಳುತ್ತ, ಇಂತೆಂದನು= ಮುಂದೆ ಹೇಳುವಂತೆ ಹೇಳುತ್ತಾನೆ.
ತಾತ್ಪರ್ಯ:- ಅನಂತರದಲ್ಲಿ ಜೈಮಿನಿರುಷಿಯು ಜನಮೇಜಯರಾಯನನ್ನು ಕುರಿತು ಇಂತೆಂದನು, ಕೇಳೈ ಜನಮೇಜಯನೆ !
ಆ ಬಳಿಕ ಮಧ್ಯಾಹ್ನಸಮಯವಾದ ಕೂಡಲೇ ಹಯಮೇಧಾರ್ಹವಾದ ಐತ್ತಮಾಶ್ವವು ಹೊರಗೆ ಬರಲಿಲ್ಲವಲ್ಲಾ ಎಂಬುದಾಗಿ
ದುಃಖಿಸುತ್ತಲಿರುವ ವೃಕೋದರನು ಕರ್ಣನಂದನನನ್ನು ಕುರಿತು ಎಲೈ ಕರ್ಣತನುಜನಾದ ವೃಷಧ್ವಜನೆ, ಇಷ್ಟು ಹೊತ್ತಾದರೂ ಕೂಡ ಈ ಪಟ್ಟಣದಿಂದ ಹೊರಕ್ಕೆ ಉತ್ತಮಾಶ್ವವು ಬರಲೇ ಇಲ್ಲವಲ್ಲಾ ॥೧॥
ಉದ್ರೇಕದಿಂ ಮುನಿವರನೊಳಾಡಿ ತಪ್ಪಿದ ಗು।
ರುದ್ರೋಹಮೊಂದಚ್ಯುತನೊಳಾಡಿ ಹೊಳೆದ ದೈ।
ವದ್ರೋಹಮೆರಡರಸನವಸರಕೊದಗದ ಸ್ವಾಮಿದ್ರೋಹಮೈದೆ ಮೂರು॥
ಮದ್ರಚಿತ ವೀರಪ್ರತಿಜ್ಞೆ ಕೈಗೂಡದಾ ।
ತ್ಮದ್ರೋಹಮದುವೆ ನಾಲ್ಕಿದರಲಿ ಸಂಗಡಕೆ ಧ।
ರ್ಮದ್ರೋಹಮೈದಾಗದಿಹುದೆ ತನಗಶ್ವಮಂ ಕಂಡು ಕೊಂಡೊಯ್ಯದಿರಲು॥೨॥
ಪ್ರತಿಪದಾರ್ಥ:-ಉದ್ರಕದಿಂ= ಪೌರುಷದಿಂದ, ಮುನಿವರನೊಳು= ಋಷಿವರ್ಯನಾದ ವ್ಯಾಸಮುನಿಪನಲ್ಲಿ,ಆಡಿ= ಮಾತನಾಡಿಬಿಟ್ಟು, ತಪ್ಪಿದ= ನೆರವೇರಿಸದಿರತಕ್ಕ, ಗುರುದ್ರೋಹ= ಗುರುವಿನ ಮಾತಿಗೆ ಮೀರಿದಂಥ ದುರಿತವು, ಒಂದು= ಒಂದಾಗಿದೆ, ಅಚ್ಯುತನೊಳು=ಶ್ರೀಕೃಷ್ಣನೊಂದಿಗೆ, ಆಡಿ= ಪ್ರತಿಜ್ಞೆಮಾಡಿ, ಹೋದ=ನೆರವೇರಿಸದ, ದೈವದ್ರೋಹ= ದೇವತಾ ಸಂಬಂಧವಾದ ನಿಂದೆಯು, ಎರಡು= ಎರಡನೆಯದಾಗಿದೆ, ಅರಸನ= ರಾಜನ, ಅವಸರಕ್ಕೆ= ಯಾಗದ ಸಮಯಕ್ಕೆ, ಒದಗದ= ದೊರೆಯದ, ಸ್ವಾಮದ್ರೋಹಂ= ಒಡೆಯನಿಗೆ ಮಾಡಿದ ಅಪರಾಧವು, ಐದೆ= ಚೆನ್ನಾಗಿ, ಮೂರು = ಮೂರನೆಯದಾಗಿದೆ, ಮದ್ರಚಿತ= ನನ್ನಿಂಗೈಯಲ್ಪಟ್ಟ, ವೀರಪ್ರತಿಜ್ಞೆ = ಪರಾಕ್ರಮದ ಪ್ರಮಾಣವು, ಕೈಗೂಡದ= ಆಗದೆಹೋದ, ಆತ್ಮದ್ರೋಹ= ಸ್ವಾತ್ಮ ಸಂಬಂಧವಾದ ನಿಂದೆಯು, ಅದುವೆ= ಎಂಬತಕ್ಕದ್ದೆ, ನಾಲ್ಕು= ನಾಲ್ಕನೆಯದು, ಇದರಸಂಗಡಕೆ= ಇವುಗಳ ಜತೆಗೆ, ತನಿಗೆ= ನನಿಗೆ, ಅಶ್ವಮಂ= ಹಯವನ್ನು, ಕಂಡು= ಈಕ್ಷಿಸಿ, ಕೊಂಡ= ಹಿಡಿದುಕೊಂಡು,ಒಯ್ಯದೆ= ಧರ್ಮನಂದನನಬಳಿಗೆ ತೆಗೆದುಕೊಂಡು ಹೋಗದೆ, ಇರಲು= ಇದ್ದಹಾಗಾದರೆ, ಧರ್ಮದ್ರೋಹಂ= ಧರ್ಮವಿರುದ್ಧವಾದ ಮಾರ್ಗವೇ, ಐದು= ಪಂಚಮಸಂಖ್ಯೆಯ ನಿಂದೆಯು,ಆಗದೆ= ಸಂಭವಿಸದೆ, (ಒದಗದೆ), ಇಹುದೆ= ಇದ್ದೀತೆ ? ಎಂದರೆ ಆಗುವುದೇ ನಿಶ್ಚಯವೆಂದು ಭಾವವು.
ತಾತ್ಪರ್ಯ :- ನಾನು ಇನ್ನು ಕುದುರೆಯನ್ನು ಕಾಣುವ ಬಗೆ ಹೇಗೆ ? ಸುಮ್ಮನೆ ಅಹಂಕಾರದಿಂದ ಮಾತ್ರವೇ ವ್ಯಾಸಮಹರ್ಷಿ-
ಗಳೊಂದಿಗೆ ಕುದುರೆಯನ್ನು ಹಿಡಿದು ತರುವೆನೆಂದು ಶಪಥವಂ ಗೈದು ಗುರುದ್ರೋಹವನ್ನು ಸಂಪಾದಿಸಿಕೊಂಡಂತೆಯೂ, ಶ್ರೀಕೃಷ್ಣಸ್ವಾಮಿಯೊಡನೆಯೂ ಸುಳ್ಳು ಪ್ರಮಾಣಮಾಡಿದೈವದ್ರೋಹಕ್ಕೆ ಗುರಿಯಾದಂತೆಯೂ, ಯುಧಿಷ್ಠಿರನು ಮಾಡಬೇಕೆಂದಿರುವ ಅಶ್ವಮೇಧಯಾಗಕ್ಕೆ ಕುದುರೆಯನ್ನು ತಂದು ಕೊಡುತ್ತೇನೆಂದು ಒಪ್ಪಿ, ಕೊಟ್ಟ ಭಾಷೆಯನ್ನು ತಪ್ಪಿ ನಡೆಯುವುದರಿಂದ ಸ್ವಾಮಿದ್ರೋಹಕ್ಕೆ ಈಡಾದಹಾಗೂ, ನಾನು ಮಾಡಿದ ಪ್ರತಿಜ್ಞೆಗೆ ನನ್ನಿಂದಲೇ ಭಂಗವುಂಟಾದ್ದರಿಂದ ಆತ್ಮದ್ರೋಹಕ್ಕೆ ಪಾತ್ರನಾದಂತೆಯೂ, ಮಾಡಿದ ಪ್ರತಿಜ್ಞೆಯನ್ನು ನೆರವೇರಿಸದೆ ಧರ್ಮಕ್ಕೆ ವ್ಯತಿರಿಕ್ತವಾಗಿ ನಡೆದನಾದ್ದರಿಂದ ಧರ್ಮದ್ರೋಹಕ್ಕೆ ಒಳಗಾದಂತೆಯೂ ಆಗಿರುವೆನು.
ಪುಸಿದನೆ ಬಯಲ್ಗೆ ವೇದವ್ಯಾಸಮುನಿ ಪುಸಿದೊ।
ಡಸುರಾರಿ ಸೈರಿಪನೆ ಸೈರಿಸದೊಡೊಳ್ಳಿತೆಂ।
ದುಸಿರುವುವೆ ಶಕುನಂಗಳುಸಿರಿದೊಡಭಾಗ್ಯನೇಭೂವರನಭಾಗ್ಯನಾಗೆ॥
ಮಸುಳಿಪುದೆ ಶಶಿಕುಲಂ ಮಸುಳಿಸಿದೊಡದ್ದಪುದೆ।
ವಸುಧೆಯದ್ದೊಡೆ ತನ್ನ ನುಡಿ ಬಂಜೆಯಪ್ಪುದಿದು ।
ಪೊಸತದೇಂ ಪಾಪದಿಂ ಕಾಣಿಸದೊ ತುರಗಮೆಂದನಿಲಜಂ ಚಿಂತಿಸಿದನು॥೩॥
ಪ್ರತಿಪದಾರ್ಥ :- ವೇದವ್ಯಾಸಮುನಿ =ವ್ಯಾಸಮಹರ್ಷಿಯು, ಬಯಲ್ಗೆ= ಇಲ್ಲಿ ಅಶ್ವವಿಲ್ಲದಿದ್ದರೂಕೂಡಾ, ಪುಸಿದನೆ= ಇದೆ ಎಂಬುದಾಗಿ ಅನೃತವನ್ನು ನಡಿದನೆ? ಪುಸಿದೊಡೆ= ವೇದವ್ಯಾಸರು ಅನೃತವನ್ನು ಹೇಳಿದ್ದ ಪಕ್ಷದಲ್ಲಿ, ಅಸುರಾರಿ= ರಾಕ್ಷಸಾಂತಕನಾದ ಕೃಷ್ಣಸ್ವಾಮಿಯು, ಸೈರಿಪನೆ= ತಡೆದಿದ್ದಾನೆಯೆ? ಸೈರಿಸಿದೊಡೆ= ಶ್ರೀಕೃಷ್ಣನೂ ಶಾಂತಚಿತ್ತನಾಗಿದ್ದಲ್ಲಿ, ಶಕುನಂಗಳು= ಮಂಗಳಸೂಚಕಂಗಳಾದ ನಿಮಿತ್ತಗಳು, ಒಳ್ಳಿತೆಂದು= ಕಲ್ಯಾಣವಾಗುತ್ತದೆಂದು,ಉಸುರವವೆ= ನುಡಿಯುತ್ತವೆಯೆ? ಉಸುರಿದೊಡೆ=ಅವೂ ಅನೃತ ಸೂಚಕಂಗಳಾಗಿದ್ದರೆ, ಭೂವರನು= ರಾಜಾಗ್ರಣಿಯಾದ ಯುಧಿಷ್ಠಿರನು
ಅಭಾಗ್ಯನೆ= ಮಂದಭಾಗ್ಯನೆ? ಅಭಾಗ್ಯನಾಗೆ= ಆತನೂ ನಿರ್ಭಾಗ್ಯನಾದಲ್ಲಿ, ಶಶಿಕುಲಂ= ಇಂದುವಿನ ಸಂತತಿಯು, ಮಸಳಿಪುದೆ= ಕಾಂತಿಯುಕ್ತವಾದೀತೆ? ಮಸುಳಿದೊಡೆ= ಅದೂ ಕಾಂತಿವಿಹೀನವಾದರೆ, ವಸುಧೆ=ಧರಾಮಂಡಲವು, ಅದ್ದಪುದೆ= ವಶವಾಗಿರು(ಕುಸಿಯು)ತ್ತದೆಯೆ? ಅದ್ದಡೆ= ಇಳೆಯೂ ವಶವರ್ತಿಯಾಗಿ(ಕುಸಿದು ಬಿ)ದ್ದಲ್ಲಿ, ತನ್ನ= ಸ್ವಕೀಯವಾದ, ನುಡಿ=ವಚನವು, ಬಂಜೆಯಪ್ಪುದೆ= ವ್ಯರ್ಥವಾದದ್ದು.ಅಹುದೆ= ಆದೀತೆ? ಇದು=ಈ ವಾಕ್ಯವು, ಪೊಸತು= ನೂತನವಾಗಿದೆ, ಅದೇಂಪಾಪದಿಂ= ಯಾವತೆರದ ದುರಿತಾತಿಶಯದಿಂದ,ತುರಗಂ= ಅಶ್ವವು, ಕಾಣಿಸದೊ=ದೃಷ್ಟಿಪಥಕ್ಕೆ ಬಾರದಿರ್ಪುದೊ? ಎಂದು= ಎಂಬೀರಿತಿಯಾಗಿ, ಅನಿಲಜಂ=ವಾಯುಸೂನುವಾದ ವೃಕೋದರನು, ಚಿಂತಿಸಿದನು= ಆಲೋಚನೆಯನ್ನು ಮಾಡುತ್ತಿದ್ದನು.
ತಾತ್ಪರ್ಯ = ಈ ನಗರದಲ್ಲಿ ಕುದುರೆ ಇಲ್ಲದಿದ್ದರೆ ವ್ಯಾಸರುಷಿಗಳು ಸುಳ್ಳು ಹೇಳುತ್ತಿದ್ದರೆ? ಅವರು ಸುಳ್ಳು ಹೇಳಿದರೆ ಶ್ರೀಕೃಷ್ಣಸ್ವಾಮಿಯು ಸುಮ್ಮನಿರುತ್ತಿದ್ದರೆ? ಅವರು ಸೈರಿಸಿಕೊಂಡಿದ್ದರೂ ಶುಭಶಕುನಂಗಳು ಸುಳ್ಳು ಸೂಚಿಸಿದುವೊ?
ಶಕುನಂಗಳು ಅಶುಭ ಸೂಚಿದ್ದರೆ ಭೂನಾಥನು ಅಭಾಗ್ಯನೆ? ಒಂದುವೇಳೆ ಧರ್ಮಜನು ಅಭಾಗ್ಯನಾದರೆ ಚಂದ್ರವಂಶದ ಕೀರ್ತಿಯು ಮಸುಕಾಗುವುದೆ? ಹಾಗಾದರೆ ನಾವು ಗಳಿಸಿರುವಸಾಮ್ರಾಜ್ಯ ಹೋಗುವುದೆ? ಇಂಥಾ ಪರಿಶುದ್ಧವಾದ ನಮ್ಮ ವಂಶವು ಎಡರ್ಗಳಿಗೆ ಸಿಕ್ಕಿದರೆ ನಮಗೆ ಈ ರಾಜ್ಯವು ನಮ್ಮ ಸ್ವಾಧೀನವಾದರೂ ಕೂಡ ನಾನು ಅನೃತವಾದಿಯೆ? ಯಾವ ದುರಿತಗಳಿಂದ ನಮಗೆ ಕುದುರೆಯು ಕಾಣಿಸದೋ ಗೊತ್ತಿಲ್ಲವಲ್ಲಾ.
ಪಾತಕಿಗೆ ನುಡಿದ ಸೊಲ್ ಪುಸಿಯಹುದು ಪರದಾರ।
ಸೂತಕಿಗೆ ನೆನೆದೆಣಿಕೆ ಬಯಲಹುದು ಗುರುವಿಪ್ರ ।
ಘಾತಕಿಗೆ ಕಾಣ್ಬೊಡವೆ ಮರೆಯಹುದು ತಥ್ಯಮಿದು ಜಗದೊಳೆನಗಾವಭವದ॥
ಜಾತಕಿಲ್ಬಿಷವೊ ಯಾದವಕುಲ ಮಹಾಂಬುನಿಧಿ।
ಶೀತಕಿರಣಂ ತನ್ನ ಶರಣರನುಳಿದನೊ ಹಯ।
ಮೇತಕಿಂತಕಟ ಕಾಣಿಸದೊ ಶಿವಶಿವಯೆಂದು ಪವನಜಂ ಚಿಂತಿಸಿದನು॥೪॥
ಪ್ರತಿಪದಾರ್ಥ:- ಪಾತಕಿಗೆ= ದುರಿತದಿಂದ ಕೂಡಿದವನಿಗೆ,ನುಡಿದ= ಹೇಳಿದ, ಸೊಲ್ಲು=ವಚನವು, ಪುಸಿಯು=ಮಿಥ್ಯೆಯು, (ಅನೃತವು), ಅಹುದು=ಆಗುತ್ತದೆ, ಪರದಾರ= ಮತ್ತೊಬ್ಬರ ಪತ್ನಿಯಲ್ಲಿ, ಸೂತಕಿಗೆ= ಆಕಾಂಕ್ಷೆಯುಳ್ಳ ಮನುಷ್ಯನಿಗೆ, ನೆನೆದ= ಸ್ಮರಣೆಮಾಡಿಕೊಂಡ,ಎಣಿಕೆ= ಇಷ್ಟಾರ್ಥವು, ಬಯಲು=ಬರಿದು, ಅಹುದು= ಆಗಿಹೋಗುವುದು, ಗುರು=ಆಚಾರ್ಯರನ್ನೂ, ವಿಪ್ರ= ಭೂಸುರರನ್ನೂ ಸಹ, ಘಾತಕಿಗೆ= ಕೊಲೆಮಾಡಿದವನಿಗೆ, ಕಾಣ್ಬೊಡವೆ= ಗೋಚರವಾಗುವ ವಸ್ತುವೂ, ಮರೆಯು= ದೃಷ್ಟಿಗೆ ಬೀಳದ್ದು, ಅಹುದು= ಆಗುತ್ತದೆ, ಇದು= ಈ ನುಡಿಯು, ಜಗದೊಳಗೆ= ಲೋಕದಲ್ಲಿ, ತಥ್ಯಂ= ಯಥಾರ್ಥವು, ಎನಗೆ= ನನಗೆ, ಆವ ಭವದ= ಯಾವ ಜನ್ಮದ ಪ್ರಕಾರ, ಜಾತ= ಉತ್ಪನ್ನವಾದ, ಕಿಲ್ಭಿಷವೊ= ದುರಿತವೋ, ಯಾದವ= ಯದುಮಹಾರಾಯನ ಸಂಬಂಧವಾದ, ಕುಲ=ಸಂತತಿಯೆಂಬ, ಮಹಾ= ದೊಡ್ಡದಾದ, ಅಂಬುನಿಧಿ= ಕಡಲಿಗೆ, ಶೀತ= ತಣ್ಣಗಿರುವ, ಕಿರಣಂ= ಕರಗಳುಳ್ಳ ಇಂದುವಿನಂತಿರುವ ಕೃಷ್ಣಸ್ವಾಮಿಯು, ಶರಣರನು= ತನ್ನನ್ನು ಶರಣು ಹೊಂದಿರತಕ್ಕ ನಮ್ಮನ್ನು, ಉಳಿದನೋ= ಬಿಟ್ಟು ಬಿಟ್ಟನೋ, ಹಯಂ=ಅಶ್ವವು, ತನಗೆ, ಯಾತಕೆ= ಯಾವ ಕತದಿಂದ, ಇಂತು= ಈ ತೆರನಾಗಿ, ಕಾಣಿಸದೊ= ದೃಷ್ಟಿಗೆ ಬೀಳುವುದಿಲ್ಲವೊ, ಅಕಟ= ಅಯ್ಯೊ! ಶಿವಶಿವ= ಹರಹರ, ಎಂದು= ಹೀಗೆಂದು, ಪವನಜಂ= ವಾಯುನಂದನನಾದ ಭೀಮಸೇನನು, ಚಿಂತಿಸಿದನು= ವ್ಯಸನಾ-
ಕ್ರಾಂನಾಗಿದ್ದನು.
ತಾತ್ಪರ್ಯ:- ಪಾಪಿಷ್ಟನು ಆಡಿದ ಮಾತು ಸುಳ್ಳಾಗುವುದೂ, ಅನ್ಯರ ಹೆಂಡಿರಲ್ಲಿ ಆಸೆಯುಳ್ಳವನ ಇಷ್ಟವು ಸಿದ್ಧವಾಗದಿರು-
ವುದೂ, ಗುರುಹತ್ಯ ಬ್ರಹ್ಮಹತ್ಯಗಳನ್ನು ಮಾಡಿದವರ ಕಣ್ಣಿಗೆ ಕಾಣಬೇಕಾದ ಒಡವೆಯು ಕಾಣದೆ ಮಾಯವಾಗುವುದೂ ಸ್ವಾಭಾವಿಕವಾಗಿರುವುದು.ಇವುಗಳಲ್ಲಿ ನಾನು ಯಾವುದಕ್ಕೂ ಸೇರಿದವನಲ್ಲಾ? ಯೃವ ಕಾರಣದಿಂದ ನನಗೆ ಅಶ್ವವು ಗೋಚರಿಸದೊ,ಅಥವಾ ಯದುಕುಲಕ್ಕೆ ರತ್ನದಂತಿರುವ ಶ್ರೀಕೃಷ್ಣಮೂರ್ತಿಯ ಅನುಗ್ರಹವು ನಮ್ಮಲ್ಲಿ ತಪ್ಪಿಹೋಯಿತೊ ಏನೋ?
ತಲ್ಲಕ್ಷಣಂಗಳಿಂ ಸಲ್ಲಲಿತಮಾದ ಹಯ।
ಮಿಲ್ಲಿ ವಿಧಿವಶದಿಂದಮಿಲ್ಲದಿರ್ದೊಡೆ ಧರಾ
ವಲ್ಲಭನ ರಂಜಿಸುವ ಮೆಲ್ಲಡಿಗಳಂ ಕಾಣಬಲ್ಲೆನೆ ಮಹೀತಳದೊಳು
ಎಲ್ಲಿರ್ದೊಡಾತಾಣದಲ್ಲಿ ಪೊಕ್ಕರಸಿ ತಂ।
ದಲ್ಲದೆನ್ನಯ ಭಾಷೆ ಸಲ್ಲದಿದಕೆಂತೆನುತೆ।
ಘಲ್ಲಿಸುವ ಚಿಂತೆಯಿಂ ನಿಲ್ಲದೆ ವೃಕೋದರಂ ತಲ್ಲಣಿಸುತಿರ್ದನು॥೫॥
ಪ್ರತಿಪದಾರ್ಥ:- ತತ್= ಆ ಅಶ್ವಮೇಧಾರ್ಹವಾದ, ಲಕ್ಷಣಗಳಿಂ= ಗುರುತುಗಳಿಂದ, ಸಲ್ಲಲಿತಂ= ಅತಿ ಮನೋರಂಜಿತ-
ವಾದದ್ದು, ಅಹ= ಆಗಿರತಕ್ಕ, ಹಯಂ= ಅಶ್ವವು, ವಿಧಿವಶದಿಂದ= ದೇವರಕೃಪೆಯಿಂದ,ಇಲ್ಲದಿರ್ದೊಡೆ= ಇಲ್ಲದಿದ್ದ ಪಕ್ಷಕ್ಕೆ,
ಧರಾವಲ್ಲಭನ= ಪೃಥ್ವೀಶ್ವರನಾದ ಯುಧಿಷ್ಠಿರನ, ರಂಜಿಸುವ = ಹೊಳೆಯುವ, ಮೆಲ್ಲಡಿಗಳಂ = ಕೋಮಲಂಗಳಾದ ಪಾದ-
ಯುಗ್ಮವನ್ನು, ಕಾಣಬಲ್ಲೆನೆ= ಈಕ್ಷಿಸಲು ಶಕ್ತನಾಗುವೆನೆ?, ಮಹೀತಳದೊಳು= ಧರಾವಲಯದಲ್ಲಿ, ಎಲ್ಲಿರ್ದೊಡಂ= ಯಾವ ಸ್ಥಳದಲ್ಲಿದ್ದಾಗ್ಗೂ, ತಾನು= ನಾನು, ಅಲ್ಲಿಗೆ= ಆ ಪ್ರದೇಶಕ್ಕೆ, ಪೊಕ್ಕು= ಪರವೇಶಮಾಡಿ, ಅದ= ಆ ಅಶ್ವವನ್ನು, ಅರಸಿ=
ಅನ್ವೇಷಣೆಮಾಡಿ, ತಂದಲ್ಲದೆ= ತೆಗೆದುಕೊಂಡು ಬಂದಹೊರತು, ಎನ್ನಯ= ನನ್ನ ಸಂಬಂಧವಾದ, ಭಾಷೆ= ಶಪಥವು, ಸಲ್ಲದು= ನೆರವೇರುವುದಿಲ್ಲ, ಇದಕೆ= ಇದು ನೆರವೇರುವುದಕ್ಕೆ,ಎಂತು= ಹೇಗೆ, ಎನುತ= ಎಂಬುದಾಗಿ ನುಡಿಯುತ್ತ, ಘಲಿಸುವ= ಚಪಲಯುಕ್ತವಾದ, ಚಿಂತೆಯಿಂ= ವ್ಯಸನದಿಂದ, ವೃಕೋದರ= ಅನಿಲಜನು, ನಿಲ್ಲದೆ= ಸುಮ್ಮನಿರದೆ, ತಲ್ಲಣಿಸುತ= ಭ್ರಾಂತನಾಗುತ್ತ, ಇರುತಿರ್ದನು= ಇದ್ದವನಾದನು.
ತಾತ್ಪರ್ಯ:- ಹಾಗಿಲ್ಲದಿದ್ದರೆ ಈ ದೇಶದಲ್ಲಿ ಒಂದುವೇಳೆ ಅಶ್ವಮೇಧಾರ್ಹವಾದ ಕುದುರೆಯೇ ಇಲ್ಲದಿದ್ದರೆ ಮತ್ತೆಲ್ಲಿರುವುದೋ ಅಲ್ಲಿಗೇ ಹೋಗಿ ಕುದುರೆಯನ್ನು ತಂದು ಧರ್ಮನಂದನನ ಪಾದಾರವಿಂದಗಳಿಗೆ ಒಪ್ಪಿಸಬೇಕಲ್ಲದೆ ಸುಮ್ಮನೆ ಯುಧಿಷ್ಠಿರನ ಬಳಿಗೆ ಹೋಗಿ ನಿಂತು ನನ್ನ ಶಪಥವನ್ನು ಸುಳ್ಳಾಗಿ ಎಂದೆಂದಿಗೂ ಮಾಡಿಕೊಳ್ಳಲಾರೆನೆಂಬುದಾಗಿ ನಾನಾ ಪ್ರಕಾರವಾಗಿ ಚಿಂತಿಸುತ್ತಿದ್ದನು.
ಅನಿತರೊಳನೇಕ ಸೇನೆಗಳ ಸನ್ನಾಹದಿಂ।
ಘನವಾದ್ಯ ರಭಸದಿಂ ಸೂತರ ಪೊಗಳ್ಕೆಯಿಂ।
ದನುಕರಿಸಿದಮಲ ವಸ್ತ್ರಾಭರಣ ಗಂಧಮಾಲ್ಯಾದಿಗಳ ಪೂಜೆಯಿಂದೆ॥
ವಿನುತಾತಪತ್ರ ಚಮರಂಗಳಿಂದೆಡಬಲದೊ।
ಳನುವಾಗಿ ವಾಘೆಯಂ ಪಿಡಿದು ನಡೆತಪ್ಪ ನೃಪ।
ತನುಜರಿಂದಾ ಹಯಂ ನೀರ್ಗೆ ಪೊರಮಟ್ಟು ಸಂಭ್ರಮದೊಳೈತರುತಿರ್ದುದು॥೬॥
ಪ್ರತಿಪದಾರ್ಥ:- ಅನಿತರೊಳು= ಆ ಕಾಲಕ್ಕೆ ಸರಿಯಾಗಿ, ಅನೇಕ= ಬಗೆಬಗೆಯಾದ, ಸೇನೆಗಳ= ಚತುರಂಗಬಲಗಳ, ಸನ್ನಾಹದಿಂ= ಸಮೂಹದಿಂದ, ಘನ=ಅತಿಶಯವಾದ, ವಾದ್ಯ= ದುಂದುಭಿ ಮುಂತಾದ್ದರ, ರಭಸ= ಘರ್ಜನೆಯ ಸಮೂಹದಿಂದಲೂ, ಸೂತರ= ಸ್ತುತಿಪಾಠಕರ, ಪೊಗಳ್ಕೆಯಿಂದ= ಸ್ತುತಿವಚನಗಳಿಂದಲೂ, ಅನುಕರಿಸಿದ= ಜೊತೆಯಾಗಿರುವ, ಅಮಲ= ಪರಿಶುದ್ಧವಾದ, ವಸ್ತ್ರ= ಉಡಿಗೆಗಳು, ಆಭರಣ = ತೊಡಿಗೆಗಳು, ಗಂಧ= ಪರಿಮಳದ್ರವ್ಯವು, ಮಾಲ್ಯ= ಪುಷ್ಪಗಳೇ, ಆದಿ= ಮುಂತಾದ, ಪೂಜೆಯಿಂದ= ಸಪರ್ಯೆಗಳಿಂದ,ವಿನುತ= ಸ್ತೋತ್ರಾರ್ಹವಾದ, ಆತಪತ್ರ= ಶ್ವೇತಚ್ಛತ್ತ, ಚಾಮರಗಳಿಂದ= ಚವರಿಗಳಿಂದಲೂ, ಎಡಬಲದೊಳ್= ಇರ್ಕಡೆಗಳಲ್ಲೂ, ಅನುವಾಗಿ= ಸೇರಿದವರಾಗಿ, ವಾಜಿಯಂ= ಅಶ್ವವನ್ನು, ಪಿಡಿದು= ಹಿಡಿದುಕೊಂಡು, ನಡೆತಪ್ಪ= ಹೊರಟುಬರುತ್ತಿರುವ, ನೃಪತನುಜರಿಂ= ಅರಸುಕುವರರಿಂದ, ಆ ಹಯಂ= ಆ ಅಶ್ವವು, ನೀರ್ಗೆ= ಜಲಪಾನಕ್ಕಾಗಿ, ಪೊರಮಟ್ಟು = ಮುಂದೆ ಹೊರಟು, ಸಂಭ್ರಮದೊಳು= ಆನಂದಾತಿಶಯದಿಂದ, ಐತರುತ್ತಿರ್ದುದು= ಬಿಜಯಮಾಡುತ್ತಿತ್ತು.
ತಾತ್ಪರ್ಯ:- ಆ ಕಾಲಕ್ಕೆ ಸರಿಯಾಗಿ ಭದ್ರಾವತಿಯ ಒರ ಬಾಗಿಲೆನಿಂದ ಹಸ್ತ್ಯಶ್ವರಥಪದಾತಿಗಳೆಂಬ ಚತುರ್ವಿಧ ಸೈನ್ಯದಿಂದ ಋವರಿಸಲ್ಪಟ್ಟು ಇರುವುದಾಗಿಯೂ, ದುಂದುಭಿಯೇ ಮೊದಲಾದ ಅನೇಕ ವಾದ್ಯಧ್ವನಿಗಳಿಂದ ಕೂಡಿಯೂ, ಸ್ತುತಿಪಾಠಕರಿಂದ ಹೊಗಳಿಸಿಕೊಳ್ಳುತ್ತಲೂ, ದಿವ್ಯಾಭರಣಂಗಳಿಂದಲೂ ಪರಿಮಳಯುಕ್ತಮಾದ ಗಂಧಮಾಲ್ಯಾದಿಗಳಿಂದ ಅಲಂಕೃತವಾಗಿಯೂ, ಎಡಬಲಭಾಗಗಳಲ್ಲಿ ಚಾಮರಗಳನ್ನು ಬೀಸುವುದರಿಂದಲೂ, ಶ್ವೇತಚ್ಛತವನ್ನು ಹಿಡಿದು ಇರುವುದರಿಂದಲೂ ಪಕ್ಕಗಳಲ್ಲಿ ಕಾವಲ್ಗಾರರಾಗಿರುವ ರಾಜಪುತ್ತರ ಗಡಣದಿಂದಲೂ ರಾರಾಜಿಸುತ್ತಲಿರುವ ಒಂದಾನೊಂದು ಅಶ್ವವು ಹೊರಭಾಗದಲ್ಲಿ ಸಂಭ್ರಮಾತಿಶಯದಿಂದ ಬರುತ್ತಿತ್ತು.
ವಿದುಬಿಂಬದುದಯಮಂ ಕಂಡೊತ್ತರಿಸಿ ಪಯೋ।
ನಿಧಿ ಮೇರೆವರಿದುಕ್ಕುವಂತೆ ನಿರ್ಮಳವಾದ ।
ಸುಧೆಯೇಳ್ಗೆಯಂ ಕಂಡು ಪುಳಕಂ ನೆಗಳ್ದು ಜಂಭಾರಿ ಸಂಭ್ರಮಿಸುವಂತೆ॥
ಅಧಿಕಬಲ ಯೌವನಾಶ್ವಾವನಿಪನೈಶ್ವರ್ಯ।
ವಧುವಿನ ಕಟಾಕ್ಷದಂತೊಪ್ಪುವ ತುರಂಗಮಂ।
ಕುಧರೋಪಮಾನ ಪವಮಾನಜಂ ಕಂಡು ನೆರೆ ಸುಮ್ಮಾನಮಂ ತಾಳ್ದನು॥೭॥
ಪ್ರತಿಪದಾರ್ಥ:- ವಿಧು= ಇಂದುವಿನ, ಬಿಂಬ= ಮಂಡಲದ, ಉದಯವನು= ಉತ್ಪತ್ತಿಯಾಗುವಿಕೆಯನ್ನು, ಕಂಡು= ಈಕ್ಷಿಸಿ,
ಒತ್ತರಿಸಿ= ತಳ್ಳಿ, ಪಯೋನಿಧಿ= ಪಾಲ್ಗಡಲು, ಮೇರೆವರಿದು= ಎಲ್ಲೆಯನ್ನತಿಕ್ರಮಿಸಿ, ಉಕ್ಕುವಂತೆ= ಉಲ್ಬಣವಾಗುವಹಾಗೆ, ನಿರ್ಮಲವಾದ= ಪರಿಶುದ್ಧವಾದ, ಸುಧೆಯ= ಅಮರ್ದುವಿನ, ಏಳ್ಗೆಯೆ= ಹೆಚ್ಚಿಕೆಯನ್ನು, ಕಂಡು= ಈಕ್ಷಿಸಿ, ಜಂಭಾರಿ= ದೇವೇಂದ್ರನು, ಸಂಭ್ರಮಿಸುವಂತೆ= ಹರ್ಷವನ್ನೈದುವತೆರನಾಗಿ, ಅಧಿಕ= ಹೆಚ್ಚಾದ, ಬಲ= ಸೇನೆಯಿಂದ ಕೂಡಿರತಕ್ಕ, ಯೌವನಾಶ್ವಾವನಿಪನ= ಯೌವನಾಶ್ವನೆಂಬ ಮಹೀಪಾಲನ,ಐಶ್ವರ್ಯ= ಸಾಮ್ರಾಜ್ಯವೆನ್ನುವ, ವಧುವಿನ= ಸ್ತ್ರೀಯ ,ಕಟಾಕ್ಷದಂತೆ= ನೋಟಗಳೋಪಾದಿಯಲ್ಲಿ, ಒಪ್ಪುವ= ಪ್ರಕಾಶಿಸತಕ್ಕ, ತುರಂಗಮಂ= ಅಶ್ವವನ್ನು, ಕುಧರ= ಗಿರಿಗೆ, ಉಪಮ=ಸದೃಶವಾದ, ಪವಮಾನಜಂ = ವಾಯುಸೂನುವಾದ ಭೀಮಸೇನನು, ಕಂಡು= ಈಕ್ಷಿಸಿ, ನೆರೆ = ಹೆಚ್ಚಾಗಿ, ಸುಮ್ಮಾನಮಂ= ಸಂತೋಷವನ್ನು, ತಾಳ್ದನು= ಪಡೆದನು.
ತಾತ್ಪರ್ಯ:- ಪೂರ್ಣಚಂದ್ರಬಿಂಬವನ್ನು ನೋಡಿ ಸಮುದ್ರರಾಜನು ಮಿತಿಮೀರಿದ ಆನಂದದಿಂದ ಕೂಡಿರುವಂತೆಯೂ, ಪರಿಶುದ್ಧವಾದ ಅಮೃತೋತ್ಪತ್ತಿಯಾದ್ದನು ನೋಡಿದ ದೇವೇಂದ್ರನ ಸಂತೋಷದಂತೆಯೂ, ಮಹಾಬಲದಿಂದಲೂ, ಶಕ್ತಿಯಿಂದಲೂ ಮೆರೆಯುತ್ತಿರುವ ಭದ್ರಗಿರಿರಾಜನ ಐಶ್ವರ್ಯವೆಂಬ ನಾರಿಯ ಸುಲಕ್ಷಣಯುಕ್ತವಾದ ಕಟಾಕ್ಷಗಳಂತೆಯೂ ದಿವ್ಯ ತೇಜಸ್ಸಿನಿಂದ ವಿರಾಜಮಾನವಾಗಿಯೂ, ಯಜ್ಞಾರ್ಹವಾಗಿಯೂ ಇರುವ ಅಶ್ವವು.
ಚತುರಪದಗತಿಯ ಸರಸಧ್ವನಿಯವರ್ಣಶೋ।
ಭಿತದಲಂಕಾರದ ಸುಲಕ್ಷಣದ ಲಾಲಿತ ।
ಶ್ರುತಿರಂಜನದ ವಿಶೇಷಾರ್ಥಸಂಚಿತದ ವಿಸ್ತಾರದಿಂ ಪೊಸತೆನಿಸುವ॥
ನುತ ಸತ್ಕವಿಪ್ರೌಢತರ ಸುಪ್ರಬಂಧದಂ।
ತತಿ ಮನೋಹರಮೆನಿಪ ವಾಜಿಯಂ ಕಂಡು ಹ।
ರ್ಷಿತನಾಗಿ ನೋಡುತಿರ್ದಂ ಕಲೃವೆದನಪ್ಪ ಮಾರುತಿ ಮಹೋತ್ಸವದೊಳು॥೮॥
ಪ್ರತಿಪದಾರ್ಥ:- ಚತುರ= ಯುಕ್ತಿಯುಕ್ತಮಾದ, ಪದ= ಅಡಿಗಳ(ಪಾದಗಳ) ಗತಿಯ= ಬಗೆಯುಳ್ಳ, ರಸ= ಶೃಂಗಾರ ಮೊದಲಾದ ನವರಸಗಳು, ಧ್ವನಿಯ= ಆಶ್ಚರ್ಯಸೂಚಕವಾಗಿರುವ, ವರ್ಣ= ಆಕಾರವೇ ಮೊದಲಾದ ಅಕ್ಕರಂಗಳಿಂದ, ಶೋಭಿತದ=ರಂಜಿಸುತ್ತಿರುವ, ಅಲಂಕಾರದ= ಉಪಮಾ ಮೊದಲಾದ ನಾನಾ ಅಲಂಕಾರಗಳಿಂದ, ಸುಲಕ್ಷಣವಾದ =
ಕಾವ್ಯಾದಿಗಳಿರುವ ನಿಬಂಧನೆಗಳು ಕೂಡಿರುವ, ಲಾಲಿತ= ಸರಳವಾಗಿಯೂ,ಶ್ರುತಿರಂಜನದ= ಕರ್ಣಾನಂದವನ್ನು
ಉಂಟುಮಾಡತಕ್ಕವುಗಳಾಗಿಯೂ ಇರುವ, ವಿಶೇಷಾರ್ಥ= ನಾನಾ ವಿಧವಾದ ಶ್ಲೇಷಾರ್ಥಗಳಿಂದ, ಸಂಚಯದ= ಗುಂಪುಳ್ಳ, ( ಸಂಚಿತ= ಅನ್ವಿತಂಗಳಾಗಿರುವ ಎಂದೂ ಪಾಠಾಂತರದಲ್ಲಿ), ವಿಸ್ತಾರದಿಂ = ವೈಶಾಲ್ಯದಿಂದ, ಪೊಸದು=ನವೀ-
ನವಾದದ್ದು, ಎನಿಸುವ= ಎನ್ನುವಂಥ, ನುತ= ಸ್ತುತ್ಯಾರ್ಹವಾದ, ಸತ್ಕವಿ= ಒಳ್ಳೆ ಕವಿತ್ವವಂಗೈಯ್ಯುವವನಿಂದ ರಚಿತಮಾದ, ಸುಪ್ರಬಂಧದಂತೆ= ಸತ್ಕೃತಿಯೋಪಾದಿಯಲ್ಲಿ, ( ಇದು ಕಾವ್ಯಪರವಾದ ಅರ್ಥವು) ಚತುರ=ಚಾತುರ್ಯವುಳ್ಳ, ಪದ= ಅಡಿಗಳ, ಗತಿಯ=ಚಲನೆಯಿಂದ ಕೂಡಿದ, ಸರಸ= ಪ್ರೀತಿಸೂಚಕಮಾದ, ಧ್ವನಿಯ= ಶಬ್ಧಸಹಿತವಾದ, ವರ್ಣ=ಕಪ್ಪು, ಬಿಳೈಪು,ಹಳದಿಯೇ ಮೊದಲಾದ ವರ್ಣಗಳ ಸಮುದಾಯದಿಂದ, ಶೋಭಿತದ= ಹೊಳೆಯುತ್ತಿರುವ, ಅಲಂಕಾರದ=
ವಸ್ತ್ರಾಭರಣಗಳಿಂದ ಶೋಭಿಸುತ್ತಿರುವ, ಸುಲಕ್ಷಣದ= ಅಶ್ವಮೇಧಯಜ್ಞಕ್ಕೆ ತಕ್ಕ ಚಿಹ್ನೆಗಳಿಂದ ಒಡಗೂಡಿರುವ, ಲಾಲಿತ= ಕೋಮಲವಾದ, ಶ್ರುತಿ= ಕರ್ಣಗಳಿಂದ, ರಂಜನದ= ಪ್ರಕಾಶಿಸುತ್ತಿರುವಂಥ, ವಿಶೇಷ= ಅತ್ಯಧಿಕಮಾದ, ಅರ್ಥ=ಚತುರ್ವಿಧ ಪುರುಷಾರ್ಥಂಗಳ, ಸಂಚಯದ=ರಾಶಿಯ, ( ಸಂಚಿತ= ಸೇರಿರುವ ಎಂದು ಪಾಠಾಂತರ ) ವಿಸ್ತಾರದಿಂ = ಹೆಚ್ಚಿಕೆಯಿಂದ, ಪೊಸತು= ನೂತನವಾದದ್ದು, ಎನಿಸುವ= ಎಂದು ಹೇಳಿಸಕೊಳ್ಳುವ, ನುತ= ಮನ್ನಣೆಯಂ ಮಾಡಿಸಿಕೊಳ್ಳುವ, ( ಇದು ಹಯಮೇಧಾರ್ಹವಾದ ಅಶ್ವಪರವಾದ ಅರ್ಥವು), ಸತ್ಕವೆಪ್ರೌಢರ= ಒಳ್ಳೇ ಕವೀಶ್ವರರ, ಸುಪ್ರಬಂಧದಂತೆ= ಸತ್ಕಾವ್ಯದ ಹಾಗೆ, ಅತಿಮನೋಹರಮಾದ= ಅತಿ ಚೆಲ್ವಾದ, ವಾಜಿಯಂ= ಅಶ್ವವನ್ನು, ಕಲಾವಿದನು= ಸಕಲ ವಿದ್ಯಾಪ್ರವೀಣನು,ಅಪ್ಪ= ಆಗಿರುವಂಥ, ಮಾರುತಿ= ವಾಯುಸೂನುವಾದ ವೃಕೋದರನು, ಮಹೋತ್ಸವದೊಳು= ಆನಂದಾತಿಶಯದಿಂದ, ನೋಡುತಿರ್ದಂ= ಈಕ್ಷಿಸುತ್ತಿದ್ದನು.
ತಾತ್ಪರ್ಯ = ಚಮತ್ಕಾರವಾದ ನಡಿಗೆಯ ವಿಲಾಸದಿಂದಲೂ, ಮನೋರಂಜಕವಾದ ಕಂಠಧ್ವನಿಯಿಂದಲೂ, ಕಪ್ಪು, ಬಿಳುಪು, ಹಳದಿ ಮೊದಲಾದ ಬಣ್ಣಗಳಿಂದ ಕೂಡಿಯೂ, ಸುಲಕ್ಷಣಲಕ್ಷಿತಮಾಗಿಯೂ, ಒಳ್ಳೆಯದಾಗಿರುವ ಕರ್ಣಗಳಿಂದ ಶೋಭಿಸುತ್ತಲೂ, ಇರುವುದನ್ನು ಪರ್ತೋಪಮಾನನಾಗಿಯೂ, ಸಕಲ ಕಲಾವಿಶಾರದನಾಗಿಯೂ ವಾಯು ಪುತ್ರನಾಗಿಯೂ ಇರುವ ಭೀಮಸೇನನು ನೋಡಿ ಇದುವರೆಗೆ ಅಶ್ವವನ್ನು ಕಾಣದೆಯಿದ್ದುದರಿಂದುಂಟಾಗಿದ್ದ ಶೋಕಾಗ್ನಿಯ ಮಹಾಜ್ವಾಲೆಯನ್ನು ಆನಂದಾತಿಶಯದಿಂದುಂಟಾದ ಬಾಷ್ಪಂಗಳಿಂದ ಶಮನಮಾಡಿ.
ಮೂಜಗದೊಳೀ ತುರಂಗಮವೇ ಪೊಸತೆಂದು ವರ।
ವಾಜಿಯಂ ನಿಟ್ಟಿಸುವ ಭೀಮಸೇನನ ಪದಸ।
ರೋಜಯುಗಕ್ಕೆರಗಿ ಮೇಘನಾದಂ ನೀವು ನೋಳ್ಪುದೆನ್ನದಟನೀಗ॥
ವಾಜಿಯಂ ತಹೆನೆನುತ್ತಲ್ಲಿಂ ತಳರ್ದು ಮಾ।
ಯಾಜಾಲಮಂ ಬೀಸಿದಂ ನಭೋಮಂಡಲ।
ಕ್ಕಾಜನಪನಶ್ವರಕ್ಷೆಯಬಲಂ ಕಂಗೆಡಲ್ ಭೂಪ ಕೇಳದ್ಭುತವನು॥೯॥
ಪ್ರತಿಪದಾರ್ಥ:- ಅರಸ= ಎಲೈ ಜನಮೇಜಯ ಮಹೀಪಾಲನೆ, ಕೇಳು= ಲಾಲಿಸು, ಈ ತುರಂಗಮವೆ= ಈ ಅಶ್ವವೇ, ಮೂಜಗದೊಳು= ಸ್ವರ್ಗ, ಮರ್ತ್ಯ, ಪಾತಾಳಂಗಳಲ್ಲಿಯೂ, ಪೊಸತು= ನವೀನವಾದ್ದು, ಎಂದು= ಎಂಬತೆರನಾಗಿ, ವರವಾಜಿಯಂ= ಉತ್ತಮಾಶ್ವವನ್ನು, ನೀಂಟಿಸುವ= ದೃಷ್ಟಿಸುತ್ತಿರುವ, ಭೀಮಸೇನನ=ವೃಕೋದರನ, ಪದಸರೋಜ= ಅಡಿದಾವರೆಯ, ಯುಗಕ್ಕೆ= ಎರಡಕ್ಕೆ, ಮೇಘನಾದಂ= ಮೇಘವರ್ಣನು, ಎರಗಿ= ನಮಸ್ಕಾರಮಾಡಿ, ನೀವು=ನೀವು, ಈಗ= ಈ ಸಂದರ್ಭದಲ್ಲಿ, ಎನ್ನ= ಮದೀಯವಾದ, ಅಧಟನು= ಶೌರ್ಯವನ್ನು, ನೋಳ್ಪುದು= ಪರೀಕ್ಷಿಸಬೇಕು, ವಾಜಿಯಂ= ಅಶ್ವವನ್ನು, ತಹೆನು= ಹಿಡಿದುಕೊಂಡು ಬರುವೆನು, ಎನುತ= ಎಂದು ನುಡಿಯುತ್ತ, ಅಲ್ಲಿಂ= ಆ ಸ್ಥಳದಿಂದ, ತಳರ್ದು=ಮುಂದೆ ನಡೆದು, ಆ ಜನಪನ= ಆ ಯೌವನಾಶ್ವನ, ಅಶ್ವರಕ್ಷೆಯ= ಹಯರಕ್ಷಣೆಗಾಗಿ ನೆರೆದಿರುವ, ಬಲಂ=ದಂಡು, ಕಂಗೆಡುವವೋಲ್= ಕಳೆಗುಂದುವಂತೆ, ಮಾಯಾಜಾಲಮಂ= ಮಂಕುಬಲೆಯನ್ನು, ನಭೋಮಂಡಲಕ್ಕೆ= ಗಗನಮಾರ್ಗಕ್ಕೆ, ಬೀಸಿದಂ= ಚೆಲ್ಲಿದನು.
ತಾತ್ಪರ್ಯ:- ಕೊಂಡು ಸ್ವರ್ಗ, ಮರ್ತ್ಯ, ಪಾತಾಳಗಳಲ್ಲಿ ಎಲ್ಲಿಯೂ ಇಂಥಾ ಉತ್ತಮಾಶ್ವವನ್ನು ನೋಡಲೇ ಇಲ್ಲ. ಆಹಾ !
ಇದರ ಸೌಂದರ್ಯ ವರ್ಣಿಸಲು ಯಾರಿಗೆತಾನೆ ಸಾಧ್ಯವು ಎಂದು ಕರ್ಣಪುತ್ರನೊಂದಿಗೆ ಹೇಳುತ್ತಿರುವಾಗ ಹಿಡಿಂಬಿಯ ಮೊಮ್ಮಗನಾದ ಮೇಘನಾದನು ಭೀಮಸೇನನ ಬಳಿಗೆ ಬಂದು ಸಾಷ್ಟಾಂಗ ದಂಡಪ್ರಣಾಮವಂಗೈದು, ಎಲೈ ತಂದೆಯೇ ನನಗೆ ಆಜ್ಞೆಯನ್ನು ದಯಪಾಲಿಸು, ಈಗಲೇ ಹೋಗಿ ಯೌವನಾಶ್ವನ ಸೈನ್ಯವನ್ನೆಲ್ಲಾ ಧೂಳೀಪಟವನ್ನಾಗಿಮಾಡಿ ಕುದುರೆಯನ್ನು ಹಿಡಿದು ತರುತ್ತೇನೆ. ನನ್ನ ಸಾಹಸವನ್ನು ನೋಡೆಂದು ನುಡಿದು ಆತನ ಅನುಜ್ಞೆಯನ್ನು ಪಡೆದು ಅಶ್ವರಕ್ಷಣೆಗೆ ಬಂದು ನೆರೆದಿರುವ ಸೈನ್ಯವನ್ನೆಲ್ಲಾ ಮಾಯಾಪಾಶಕ್ಕೆ ಗುರಿಮಾಡಿದನು.
ತುರುಗಿತೆತ್ತೆತ್ತಲುಂ ಪ್ರಳಯಕಾಲದ ಮೇಘ।
ಮೆರಗುತಿವೆ ಬರಿಯ ಬರಸಿಡಿಲ್ಗಳೆತ್ತೆತ್ತಲುಂ।
ಕರೆಯುತಿದೆ ಬಿರುಗಾಳಿ ದೂಳನೆತ್ತೆತ್ತಲುಂ ಕತ್ತಲೆಗಳಿಟ್ಟಣಿಸಿವೆ॥
ತೆರೆಯಬಾರದು ಕಣ್ಣ ಮರೆದು ಕಣ್ದೆರೆಯೆ ದಿ।
ಕ್ಕರಿಯಬಾರದು ಮಹಾದ್ಭುತಮಿದೆತ್ತಣದೊ ಜಗ।
ದೆರೆಯನೇ ಬಲ್ಲನೆನುತಿರ್ದುದಾ ಸೈನಿಕಂ ಹೈಡಿಂಬಿಕೃತಮಾಯೆಗೆ॥೧೦॥
ಪ್ರತಿಪದಾರ್ಥ:- ಎತ್ತಲುಂ= ಎಲ್ಲೆಡೆಗಳಲ್ಲೂ, ಪ್ರಳಯಕಾಲದ = ವಿನಾಶಕಾಲದ, ಮೇಘಂ= ಮೋಡವು, ತುರುಗಿತು= ಮುಚ್ಚಿಕೊಂಡಿತು, ಎತ್ತೆತ್ತಲೂ= ಎಲ್ಲಾ ಸ್ಥಳಗಳಲ್ಲಿಯೂ, ಬರಿಯ= ಸಾಂದ್ರವಾದ, ಬರ= ಬರತಕ್ಕ, ಸಿಡಿಲ್ಗಳು= ಸಿಡಿಲುಗಳ ಗುಂಪು, ಎರಗುತಿವೆ= ಕೆಳಗೆ ಉರುಳುತ್ತಿರುವುವು, ಎತ್ತೆತ್ತಲು= ನಾನಾಪ್ರದೇಶಗಳಲ್ಲಿಯೂ, ಬಿರುಗಾಳಿ = ಕಠಿಣವಾದ ವಾಯುವು, ಧೂಳ್ಗಳ= ರಜೋವಿಶೇಷವನ್ನು, ಕರೆವುತಿದೆ= ಎರಚುತಿದೆ, ಎತ್ತೆತ್ತಲು= ಅಶೇಷ ಸ್ಥಳದಲ್ಲಿಯೂ, ಕತ್ತಲೆಗಳು= ತಮೋರಾಶಿಗಳು, ಇಟ್ಟಣಿಸಿವೆ= ಕವಿದುಕೊಂಡಿವೆ, ಕಣ್ಣ=ನಯನಗಳನ್ನು, ತೆರೆಯೆ= ತೆಗಿಯಲು, ಬಾರದು= ಆಗುವುದಿಲ್ಲ, ಮರೆದು= ಮಯ್ಮರೆತು, ಕಣ್ದೆರೆಯೆ= ನಯನಂಗಳನ್ನು ತೆಗೆದರೆ, ದಿಕ್ಕು= ದಿಕ್ಕುಗಳು, ಅರಿಯಬಾರದು= ಕಾಣುವುದಿಲ್ಲ, ಇದು ಮಹಾದ್ಭುತಂ= ಈ ಅತ್ಯಾಶ್ಚರ್ಯವು, ಎತ್ತಣದೊ= ಯೃವಸ್ಥಳದ್ದೊ, ಜಗದ= ಲೋಕಂಗಳ, ಎರೆಯನೆ= ಒಡೆಯನಾದ ಸ್ವಾಮಿಯೆ, ಬಲ್ಲನು= ಅರಿತಿರುವನು, ಎಂದು= ಎಂಬುದಾಗಿ, ಆ ಸೈನಿಕಂ= ಆ ಸೇನಾಜನವು, ಹೈಡಿಂಬಿ= ಹಿಡಂಬಿಯ ಪುತ್ರನಾದ ಮೇಘವರ್ಣನಿಂದ, ಕೃತ= ಆಚರಿಸಲ್ಪಟ್ಟ, ಮಾಯೆಗೆ= ಮರುಳು ಬಿಜ್ಜೆಗೆ, ಎನುತ= ಮೇಲಿನಂತೆ ನುಡಿಯುತ್ತ, ಇರ್ದುದು= ಇತ್ತು.
ತಾತ್ಪರ್ಯ:- ಈ ಮಹಾಮಾಯಾಜಾಲದೊಳು ಸಿಲುಕಿದ ಯೌವನಾಶ್ವ ಭೂಪಾಲನ ಸೇನಾನಿಕಾಯವು ಬೆಚ್ಚರಗೊಂಡು ಎಲ್ಲೆಲ್ಲಿಯೂ ಮಹಾಪ್ರಳಯದ ಮೇಘವು ಕವಿದು ಸಿಡಿಲು ಮಿಂಚು ಗುಡುಗುಗಳಿಂದಲೂ ಅಂಧಕಾರಾತಿಶಯದಿಂದಲೂ ಕೂಡಿ ಕಣ್ಣನ್ನು ತೆರೆಯಲು ಆಗದಂತೆಯೂ ಮರೆತು ಕಣ್ಣುಬಿಟ್ಟೊಡನೆಯೇ ಬಿರುಗಾಳಿಗಳಿಂದ ಉಂಟಾದ ಧೂಳು ತುಂಬಿಕೊಳ್ಳುವಂತೆಯೂ ಎಲ್ಲಿ ನೋಡಿದರೂ ದಿಕ್ಕುಗಳೇ ಕಾಣದಿರುವಂತೆಯೇಇರುವ, ಇಂಥಾ ಅತ್ಯದ್ಭುತಕೃತ್ಯವನ್ನು ಎಸಗಿದವರು ಯಾರೆಂಬುದು ಜಗನ್ನಾಯಕನಾದ ಸ್ವಾಮಿಗೇ ವೇದ್ಯವಲ್ಲದೆ ನಮ್ಮಿಂದ ಅರಿಯಲು ಅಸದಳವಾಗಿದೆಯೆಂದು ನುಡಿಯುತ್ತ .
ಗಗನದೊಳ್ ಸುಳಿಯುತನಿಮಿಷನೊರ್ವನಿವನ ಮಾ।
ಯೆಗೆ ಭಯಂಗೊಂಡು ಕಡುವೇಗದಿಂ ಪೋಗಿ ವ।
ಜ್ರಿಗೆ ದೂರಲಾತಂ ಚರರ ಕಳುಪಿ ಕೇಳಿದೊಡೀತ ನಾಂ ಭೀಮಸುತನ॥
ಮಗನಧ್ವರಕೆ ಹಯವನೊಯ್ದಪೆನೆನಲ್ಕವಂ ।
ಮಗುಳದಂ ಪೋಗಿ ಸುರಪತಿಗೆ ಬಿನ್ನೈಸೆ ನಸು।
ಇನಗುತವಂ ದೇವರ್ಕಳೊಡಗೂಡಿ ಬಂದನಲ್ಲಿಗೆ ಸಮರಮಂ ನೋಡಲು॥೧೧॥
ಪ್ರತಿಪದಾರ್ಥ:- ಗಗನದೊಳ್= ಆಕಾಶದಲ್ಲಿ, ಸುಳಿವುತ= ತಿರುಗಾಡುತ್ತಾ, ಓರ್ವಂ= ಒಬ್ಬಾನೊಬ್ಬ, ಅನಿಮಿಷನು= ಸುರನು, ಇವನ= ಈ ಹೈಡಿಂಬಿಯ, ಮಾಯೆಗೆ= ಕೃತಕವಿದ್ಯೆಗೆ, ಭಯಗೊಂಡು= ದಿಗಿಲುಬಿದ್ದು, ಕಡು=ಹೆಚ್ಚಾದ, ವೇಗದಿಂ= ಜಾಗ್ರತೆಯಿಂದ, ಪೋಗಿ= ನಡೆದು, ವಜ್ರಿಗೆ= ಅಮರೇಂದ್ರನಿಗೆ, ಪೇಳಲು= ಅರುಹಲು, ಅವನು= ಆ ಸುರನಾಥನು, ಆಳ್ಗಳಂ= ದೂತರನ್ನು, ಕಳುಪಿ= ಅಟ್ಟಿ, ಕೇಳಿಸಿದೊಡೆ= ಪತ್ತೆ ಮಾಡಿದರೆ ಅಥವಾ ಹುಡುಕಿಸಿದರೆ, ಈತನು= ಇವನು, ಆ ಭೀಮಸುತ= ಆ ಭೀಮಸೇನನ ತನುಜನ, ಸುತ=ಪುತ್ರನಾದವನು, ಅಧ್ವರಕೆ= ಯಾಗಕ್ಕಾಗಿ, ಹಯವನು= ಅಶ್ವವನ್ನು, ಒಯ್ದಪನು= ಸೆಳೆದುಕೊಂಡು ಹೋಗುತ್ತಿರುವನು, ಎನಲ್ಕೆ= ಎಂದರುಹಲು, ಅವಂ= ಆ ದೇವೇಂದ್ರನ ಆಳು, ಮಗುಳೆ= ಮತ್ತೆ, ಅದಂ= ಆ ನುಡಿಯನ್ನು, ಪೋಗಿ= ಹೋಗಿ, ಸುರಪತಿಗೆ = ಅಮರಾಧಿಪನಿಗೆ,ಬಿನ್ನೈಸೆ= ಬಿನ್ನಹಮಂಗೈ-
ಯ್ಯಲು, ಅವಂ= ಆ ಮಹಾರಾಜನಾದ ಇಂದ್ರನು, ನಸುನಗುತ್ತ= ಮುಗುಳ್ನಗೆಯಂ ತಾಳಿ, ದೇವರ್ಕಳ= ಸುರರಿಂದ, ಒಡಗೂಡಿ= ಸೇರಿದವನಾಗಿ,ಸಮರಮಂ= ರಣವನ್ನು, ನೋಡಲು= ಈಕ್ಷಿಸಲು, ಅಲ್ಲಿಗೆ= ಆ ಭದ್ರಾವತೀನಗರದೆಡೆಗೆ, ಬಂದನು= ಐತಂದನು.
ತಾತ್ಪರ್ಯ:- ಈ ಮಹದದ್ಭುತವನ್ನು ನೋಡುತ್ತಿದ್ದ ಒಬ್ಬಾನೊಬ್ಬ ದೇವದೂತನು ಭಯಗ್ರಸ್ತನಾಗಿ ಇಂದ್ರನ ಬಳಿಗೆ ಹೋಗಿ ಅರುಪಲು, ಆಗ ದೇವೇಂದ್ರನಿಂದ ಕಳುಹಲ್ಪಟ್ಟ ಅವನ ದೂತರು ಆಕಾಶಮಾರ್ಗಕ್ಕೆ ಬಂದು ಇದನ್ನೆಲ್ಲಾ ನೋಡಿಕೊಂಡು ಹೋಗಿ ಅಮರಾಧಿಪತಿಗೆ ವಿಜ್ಞಾಪನೆಯಂಮಾಡಲು ಆಗ ಶಚೀಪತಿಯು ನಸುನಗುತ ಅವನು ಭೀಮಸೇನನ ಮಗ ಘಟೋತ್ಕಚನ ಪುತ್ರ ಮೇಘನಾದ. ಧರ್ಮರಾಜನ ಯಜ್ಞಕ್ಕಾಗಿ ಕುದುರೆಯನ್ನು ಕೊಂಡೊಯ್ಯುತ್ತಿದ್ದಾನೆ, ಎಂದು ಹೇಳಿ ಅನೇಕ ದೇವತೆಗಳಿಂದೊಡಗೂಡಿ ಭದ್ರಾವತೀನಗರದೆಡೆಗೆ ಬಂದು ಈ ಯುದ್ಧವನ್ನು ನೋಡಲೆಳಸಿದ ದೇವತೆಗಳು ವ್ಯೋಮಮಂಡಲದಲ್ಲಿ ನಿಂತು ಜಯಾಪಜಯಗಳನ್ನು ಪರೀಕ್ಷಿಸುತ್ತಿದ್ದರು.
ಇತ್ತಲೀಕುದುರೆಗಾಪಿನ ಭಟರ ಕಣ್ಗೆ ಬ।
ಲ್ಗತ್ತಲೆಗಳಂ ಧೂಳ್ಗಳಂ ಕವಿಸಿ ಭೀತಿಯಂ।
ಬಿತ್ತಿ ನೆಲಕಿಳಿದು ಪಡಿವಾಘೆಯಂ ಪಿಡಿದರಸುಮಕ್ಕಳಂ ಬೀಳೆಹೊಯ್ದು॥
ತತ್ತುರಗಮಂ ಕೊಂಡು ಚಿಗಿದನಾಗಸಕೆ ಸರ।
ದತ್ತಣಿಂದಂಚೆ ಬೆಳುದಾವರೆಯನಳ್ತಿಯಿಂ।
ಕಿತ್ತು ನಭಕೇಳ್ವಂತೆ ಮೇಘನಾದಂ ಭೀಮಕರ್ಣಜರ್ ಬೆರಗಾಗಲು॥೧೨॥
ಪ್ರತಿಪದಾರ್ಥ:- ಇತ್ತಲು= ಈ ಎಡೆಯಲ್ಲಿ, ಕುದುರೆಗಾವಲರ= ಅಶ್ವರಕ್ಷಕರಾದ, ಭಟರ=ಯೋಧರ, ಕಣ್ಗೆ= ನಯನಂಗಳಿಗೆ,ಬಲು=ಅಧಿಕವಾದ, ಕತ್ತಲೆಗಳಂ= ಅಂಧಕಾರಗಳನ್ನೂ, ಧೂಳ್ಗಳಂ= ರಜೋವಿಶೇಷವನ್ನೂ, ಕವಿಸಿ= ವ್ಯಾಪಿಸುವಂತೆ ಮಾಡಿ, ಭೀತಿಯಂ= ಹೆದರಿಕೆಯನ್ನು, ಬಿತ್ತಿ=ಹರಡಿ, ನೆಲಕೆ= ಇಳೆಗೆ, ಇಳಿದು= ಬಂದು, ಪಡಿ=ಶೂರನಾಗಿ, ವಾಘೆಯಂ= ಅಶ್ವವನ್ನು, ಪಿಡಿದ= ಹಿಡಿದುಕೊಂಡಿರುವಂಥ, ಅರಸುಮಕ್ಕಳಂ= ರಾಜಕುವರರನ್ನು, ಬೀಳಹೊಯ್ದು= ಭೂಮಿಗೆ ಕೆಡವಿ, ತತ್=ಆ, ತುರಗಮಂ= ಅಶ್ವವನ್ನು, ಕೊಂಡು= ತೆಗೆದುಕೊಂಡು, ಸರದ= ಕಾಸಾರದ, ಅತ್ತಣಿಂ= ಎಡೆಯಿಂದ, ಅಂಚೆ= ಹಂಸಪಕ್ಷಿಯು, ಬೆಳ್ದಾವರೆಯನು= ಪುಂಡರೀಕವನ್ನು, ಅರ್ಥಿಯಿಂ= ಕುತೂಹಲದಿಂದ, ಕಿತ್ತು= ತುಂಡುಮಾಡಿ, ನಭಕೆ= ಗಗನಕ್ಕೆ, ಏಳ್ಪಂತೆ= ಏರುವಹಾಗೆ, ಮೇಘನಾದಂ = ಹೈಡಿಂಬಿಯು, ಭೀಮಕರ್ಣಜರು= ವಾಯುನಂದನ ಭೀಮ, ಕರ್ಣನಂದನ ವೃಷಸೇನರು, ಬೆರಗಾಗಲು= ಅಚ್ಚರಿಯನ್ನೈದುತಿರಲು, ಆಗಸಕೆ= ಅಂತರಿಕ್ಷಕ್ಕೆ, ಚಿಗಿದನು= ಹಾರಿದನು.
ತಾತ್ಪರ್ಯ:- ಹೀಗಿರುವಲ್ಲಿ ಮೇಘವರ್ಣನು ಯೌವನೃಶ್ವನ ಸೇನಾಂಗಣದಲ್ಲಿ ಮಾಯಾಜಾಲದಿಂದ ಹೆಚ್ಚಾದ ಕತ್ತಲನ್ನೂ, ಧೂಳನ್ನೂ ಉಂಟುಮಾಡಿ ನೆಲಕ್ಕೆ ಇಳಿದುಬಂದು ಆತ್ಮರಕ್ಷಣೆಗಾಗಿ ಅದರ ಹತ್ತಿರದಲ್ಲಿ ನೆರೆದಿರುವವರನ್ನೆಲ್ಲಾಬೀಳಕೆಡವಿ,
ಹಂಸಪಕ್ಷಿಯು ಸರೋವರದಲ್ಲಿರುವ, ಪುಂಡರೀಕವನ್ನು ಕಿತ್ತು ಆಕಾಶಕ್ಕೆ ತೆಗೆದುಕೊಂಡು ಹೋಗುವಂತೆ ಯಾಗಾರ್ಹವಾದ ಅಶ್ವವನ್ನು ಹಿಡಿದುಕೊಂಡು ಆಕಾಶಮಾರ್ಗಕ್ಕೆ ಹಾರಿ ಭೀಮ ಕರ್ಣತನಯರನ್ನುಕೂಡ ಬೆರಗುಮಾಡುತ್ತಿದ್ದನು.
ರಾಹು ತುಡುಕಿದ ಚಂದ್ರಮಂಡಲವೊ ಗರುಡನು।
ತ್ಸಾಹದಿಂದೆತ್ತಿ ಕೊಂಡೊಯ್ವಮೃತಕಲಶವೊ ಬ।
ಲಾಹಕಂ ತಾಳ್ದ ಬೆಳ್ಮಿಂಚಿನೊಬ್ಬುಳಿಯೊ ಪೊಸತೆನೆ ಘಟೋತ್ಕಚತನಯನು॥
ಬಾಹುಬಲದಿಂದೆಡದ ಕಕ್ಷದೊಳಿರುಂಕಿದ ಮ।
ಹಾಹಯಂ ಗಗನಮಾರ್ಗದೊಳೈದುತಿರೆ ಕುದುರೆ।
ಗಾಹಿನ ಚತುರ್ಬಲಂ ಕಂಡು ಬೊಬ್ಬಿರಿದಾರ್ದು ಕಾಳಗಕೆ ಮುಂಕೊಂಡುದು॥೧೩॥
ಪ್ರತಿಪದಾರ್ಥ:- ರಾಹು= ರಾಹುವೆಂಬುವವನು, ತುಡುಕಿದ= ಹಿಡಿದುಕೊಂಡ, ಚಂದ್ರಮಂಡಲವೊ= ಇಂದುಬಿಂಬವೊ, ಗರುಡನು= ಗುತ್ಮಂತನು, ಉತ್ಸಾಹದಿಂದ =ಶೌರ್ಯಾತಿಶಯದಿಂದ, ಎತ್ತಿಕೊಂಡು = ತೆಗೆದುಕೊಂಡು, ಒಯ್ವ= ಹೋಗುವ, ಅಮೃತಕಲಶವೊ= ಸುಧಾಪೂರ್ಣವಾದ ಶಾತಕುಂಭಕುಂಭವೊ, ಬಲಹಾಕಂ= ಮೋಡಗಳ ರಾಶಿಯು, ತಾಳ್ದ= ಹೊಂದಿರತಕ್ಕ, ಬೆಳ್ಮಿಂಚಿನ= ಶ್ವೇತವಾದ ವಿದ್ಯುತ್ತಿನ,ಬಬ್ಬುಳಿಯೊ=ರಾಶಿಯೋ, ಪೊಸದು=ನವೀನವಾದ್ದು, ಎನೆ= ಎಂದು ನುಡಿಯಲು, ಘಟೋತ್ಕಚನುಜನು= ಘಟೋತ್ಕಚನ ಪುತ್ರನಾದ ಮೇಘವರ್ಣನು, ಬಾಹು= ಬುಜಗಳ, ಕಕ್ಷದೊಳ್= ತೋಳುಗಳ ಸಂದುಗಳಲ್ಲಿ, ಇರುಂಕಿದ= ಬಚ್ಚಿಟ್ಟುಕೊಂಡಿರುವಂಥ, ಮಹಾಹಯಂ=ಶ್ರೇಷ್ಠವಾದ ಕುದುರೆಯು, ಗಗನಮಾ-
ರ್ಗದೊಳು= ಆಕಾಶಮಾರ್ಗದಲ್ಲಿ, ಐದುತಿರೆ= ನಡೆಯುತ್ತಿರಲು, ಕುದುರೆಗಾಹಿನ= ಅಶ್ವರಕ್ಷಕರ, ಚತುರ್ಬಲಂ= ನಾಲ್ಕುತೆರನಾದ ದಂಡು, ಕಂಡ=ಈಕ್ಷಿಸಿ, ಬೊಬ್ಬಿರಿದು= ಭೋರ್ಗರೆದು,ಆರ್ದು= ಸಿಂಹನಾದವಂ ಮಾಡುತ್ತ, ಕಾಳಗಕೆ= ರಣಕ್ಕೆ, ಮುಂಕೊಂಡುದು= ಅನುವಾಯಿತು.
ತಾತ್ಪರ್ಯ:- ಆಗ ಯೌವನಾಶ್ವನ ಸೈನ್ಯವು ರಾಹುಗ್ರಸ್ತೇಂದು ಮಂಡಲದಂತೆಯೂ, ಗರುಡನು ತೆಗೆದುಕೊಂಡು ಹೋಗುತ್ತಿರುವ ಅಮೃತಕಲಶದಂತೆಯೂ, ಮುಗಿಲ್ಗಳಿಂದ ಹೊರಹೊರಡುತ್ತಿರುವ ಬೆಳ್ಮಿಂಚಂತೆಯೂ, ಹೊಳೆಯುತ್ತಿರುವ ಮೇಘನಾದನ ಕಂಕುಳಲ್ಲಿ ಸಿಕ್ಕಿರುವ ಕುದುರೆಯನ್ನು ನೋಡಿ ಸಿಂಹನಾದವಂ ಮಾಡುತ್ತ ಯೌವನಾಶ್ವನ ಸೈನ್ಯವು ಯುದ್ಧಕ್ಕೆ ಅನುವಾಯಿತು.
ಜೋಡಾಗಿ ಪೂಡುವೊಡೆ ಸಾಲದೇಳೇ ಹಯಂ।
ಜೋಡಿಸುವೆನೀ ತುರಗಮಂ ತನ್ನ ತೇರ್ಗೆಂದು।
ಗಾಢದಿಂ ಬಾಂಗೆತ್ತಿ ಕೊಂಡೊಯ್ಯದಿರನಬ್ಜಸಖನೆಂಬ ಶಂಕೆಯಿಂದೆ॥
ರೂಢಿಸಿದ ಮಂದೇಹಸೇನೆ ಬಂದೆಣ್ದೆಸೆಗೆ।
ಮಾಡಿದುದೊ ಮುತ್ತಿಗೆಯನೆನೆ ಮೇಘನಾದನ ವಿ।
ಭಾಡಿಸಿ ಚತುರ್ಬಲಂ ಕವಿಯೆ ಲೆಕ್ಕಿಸದವಂ ಸೈವರಿದನಾಗಸದೊಳು॥೧೪॥
ಪ್ರತಿಪದಾರ್ಥ:- ಏಳಶ್ವಂಗಳಂ=ಸಪ್ತಾಶ್ವಗಳನ್ನು, ಪೂಡಲು= ತೇರಿಗೆ ಹೂಡಲು, ಇನ್ನೊಂದು= ಬೇರೆವೊಂದು, ಕುದುರೆಯಂ= ಹಯವನ್ನು, ಎನ್ನ=ನನ್ನ, ತೇರ್ಗೆ= ರಥಕ್ಕೆ,(ಗಾಡಿಗೆ), ಜೋಡಿಸುವೆನು=ಸೇರಿಸುತ್ತೇನೆ, ಎಂದು=ಎಂಬುದಾಗಿ, ಎನುತ= ನುಡಿಯುತ್ತ, ಹರಿಯಂ=ಕುದುರೆಯನ್ನು, ಸಗಾಢದಿಂದ= ಜಾಗ್ರತೆಯಾಗಿ, ಬಾನ್ಗೆ= ಅಂತರಿಕ್ಷಕ್ಕೆ, ಅಬ್ಜಸಖಂ= ರವಿಯು, ಎತ್ತಿಕೊಂಡು= ಕರೆದುಕೊಂಡು, ಒಯ್ಯದೆ=ಹೋಗದೆ, ಇರನು= ಬಿಡುವುದಿಲ್ಲ, ಎಂಬ=ಅನ್ನುವ, ಶಂಕೆಯಿಂ= ಸಂದೇಹದಿಂದ, ರೂಢಿಸಿದ= ಹೆಸರುವಾಸಿಯಾದ, ಮಂದಿ=ಜನರು, ನೆರೆದುಬಂದು= ಒಟ್ಟುಗೂಡಿಬಂದು, ಎಣ್ದೆಸೆಗೆ= ಎಂಟು ದಿಕ್ಕುಗಳಿಗೂ, ಮುತ್ತಿಗೆಯನು= ಆಕ್ರಮಿಸುವಿಕೆಯನ್ನು, ಮಾಡಿದರೊ= ಗೈದರೊ, ಎನೆ= ಎಂಬಂತೆ, ಚತುರ್ಬಲಂ= ನಾಲ್ಕು ಬಗೆಯಾದ ಸೇನೆಯು, ಕವಿಯೆ=ಮುಸುಕಲು, ಆವಂ= ಆ ಮೇಘನಾದನು, ಲೆಕ್ಕಿಸದೆ=ಲಕ್ಷ್ಯಕ್ಕೆ ತಾರದೆ, ಆಗಸದೊಳು= ಅಂತರಿಕ್ಷದಲ್ಲಿ, ಸೈವರಿದನು= ಮುಂದುವರಿಯುತ್ತಿದ್ದನು.
ತಾತ್ಪರ್ಯ:- ಸೂರ್ಯನು ತನ್ನ ರಥಕ್ಕೆ ಕಟ್ಟಿರತಕ್ಕ ಏಳು ಕುದುರೆಗಳ ಜೊತೆಗೆ ಇದನ್ನೂ ಕಟ್ಟುವುದಕ್ಕಾಗಿ ಕೊಂಡುಹೋಗುತ್ತಲಿರುವನೊ ಎಂಬ ಭ್ರಾಂತಿಯನ್ನುಂಟುಮಾಡಿ ಆಕಾಶಮಾರ್ಗದಲ್ಲಿ ಕುದುರೆಯನ್ನು ಸೆಳೆದೊಯ್ಯುತ್ತಿರುವ ಮೇಘನಾದನನ್ನು ಅಷ್ಟದಿಕ್ಕುಗಳಲ್ಲಿಯೂ ಯೌವನಾಶ್ವನ ಸೈನ್ಯವು ಮುತ್ತಿಕೊಂಡರೂ ಕೂಡ ಮೇಘವರ್ಣನು ಅದನ್ನು ಲಕ್ಷ್ಯವೇ ಮಾಡದೆ ಗಗನಮಂಡಲವನ್ನು ಸೇರಿಬಿಟ್ಟನು.
ಬಳಿಕಾಬಲಂ ಕಂಡುದಭ್ರಮಾರ್ಗದೊಳೆ ಮುಂ।
ದಳೆಯುತಿಹ ಮೇಘನಾದನನೆಲವೊ ಬರಿಮಾಯೆ।
ಗಳನೆಸಗಿ ಮೋಸದೊಳ್ ತುರಗಮಂ ಕೊಂಡು ಬಾಂದಳಕಡರ್ದೊಡೆ ನಿನ್ನನು॥
ಉಳುಹುವರೆ ಯೌವನಾಶ್ವನ ಸುಭಟರಕಟ ನಿ।
ನ್ನಳವನರಿಯದೆ ಬಂದು ಕೆಣಕಿದೆಯಲಾ ಜೀವ।
ದುಳಿವನಾರೈದುಕೊಳ್ಳೆನುತಾತನಂ ಮುತ್ತಿಕೊಂಡು ಕವಿದಿಸುತಿರ್ದುದು॥೧೫॥
ಪ್ರತಿಪದಾರ್ಥ:- ಬಳಿಕ = ಮೇಘನಾದನು ಅಶ್ವವನ್ನು ಅಂತರಿಕ್ಷಮಾರ್ಗಕ್ಕೆ ಒಯ್ದಮೇಲೆ, ಆ ಬಲಂ= ಆ ದಂಡು, ಅಭ್ರಮಾರ್ಗದೊಳು= ಅತರಿಕ್ಷಪ್ರದೇಶದಲ್ಲಿ, ಮುಂದಳೆವುತ= ಅಶ್ವದಿಂದೊಡಗೂಡಿ ನಡೆಯುತ್ತ, ಇಹ=ಇರತಕ್ಕ, ಮೇಘನಾದ= ಮೇಘವರ್ಣನನ್ನು, ಕಂಡು=ಈಕ್ಷಿಸಿ, ಎಲವೊ=ಅಯ್ಯ, ಬರಿ=ವ್ಯರ್ಥವಾದ, ಮಾಯೆಗಳನು= ಕಪಟಕೃತ್ಯವನ್ನು, ಎಸಗಿ= ನೆರವೇರಿಸಿ, ಮೋಸದೊಳು= ಕೃತ್ರಿಮದಿಂದ, ತುರಂಗಮಂ= ಅಶ್ವವನ್ನು, ಬಾಂದಳಕೆ= ಅಂತರಿಕ್ಷಕ್ಕೆ, ಕೊಂಡು=ಸೆಳೆದೊಯ್ದು, ಅಡರ್ದೊಡೆ= ಸೇರಿಕೊಂಡರೆ, ಯೌವನಾಶ್ವ= ಯೌವನಾಶ್ವಭೂಪಾಲನ, ಸುಭಟರು=ಯೋಧರು, ನಿನ್ನನು = ನಿನ್ನನ್ನು, ಉಳುಹುವರೆ= ಜೀವದೊಡನೆ ಬಿಟ್ಟಾರೆ? ಅಕಟ=ಅಯ್ಯೊ, ನಿನ್ನಳವ= ನಿನ್ನ ಶೌರ್ಯವನ್ನೆ ನೀನು, ಅರಿಯದೆ= ಗೊತ್ತುಮಾಡಿಕೊಳ್ಳದೆ, ಬಂದು=ಐತಂದು, ಕೆಣಕಿದೆಯಲಾ= ಕೀಟಲೆಮಾಡಿದೆಯಲ್ಲವೆ? ಜೀವದ= ಅಸುವಿನ, ಉಳಿವ= ಇರುವಿಕೆಯನ್ನು, ಆರೈದುಕೊಳ್ಳು= ಸ್ಥಿರಪಡಿಸಿಕೊ, ಎನುತ= ಎಂದು ನುಡಿಯುತ್ತ, ಆತನಂ= ಅವನನ್ನು, ಮುತ್ತಿಕೊಂಡು= ವ್ಯಾಪಿಸಿಕೊಂಡು, ಕವಿದು= ಸುತ್ತುಕಟ್ಟಿ, ಎಸುತಿರ್ದರು= ಸರಳ ಮಳೆಯಂ ಚರೆಯುತ್ತಿದ್ದರು.
ತಾತ್ಪರ್ಯ:- ಈ ರೀತಿಯಲ್ಲಿ ಮುಂದುವರಿದು ಹೋಗುತ್ತಿರುವ ಮೇಘನಾದನನ್ನು ಭದ್ರಗಿರಿರಾಜನ ಸೇನಾನಾಯಕರು ಕಂಡುಕೊಂಡು ಆಕಾಶಮಾರ್ಗದಲ್ಲಿರುವ ಮೇಘನಾದನನ್ನು ಕುರಿತು ಏನಯ್ಯಾ ಇಂಥ ಕಪಟಕೃತ್ಯವನ್ನೆಸಗಿ ಅಶ್ವವನ್ನು ಕೊಂಡೊಯ್ದಮಾತ್ರವೇ ನೀನು ಗೆದ್ದೆ, ಎಂದು ತಿಳಿದಿರುವೆಯಾ? ನಿನ್ನ ಶಕ್ತಿಯೇ ನಿನಗೆ ಗೊತ್ತಿಲ್ಲದೆ ಈ ರೀತಿ ಯೌವನಾಶ್ವನ ಸೈನಿಕರಾದ ನಮ್ಮೊಂದಿಗೆ ಕಾದಲುಜ್ಜುಗಿಸಿ ಏತಕ್ಕೆ ಪ್ರಾಣವನ್ನು ಕಳೆಕೊಳ್ಳಲಿಚ್ಚಿಸುವೆ? ಎಂದು ನುಡಿಯುತ್ತ ಅವನ ಸುತ್ತಲೂ ಮುತ್ತಿಕೊಂಡಿರುವುದನ್ನು.
ಪಿಂತಿರುಗಿ ನೋಡಿದಂ ಕಂಡೆನಲ್ಲವೆ ಜೀವ।
ಮಂ ತೆಗೆದುಕೊಂಡೊಯ್ವ ಕಾಲನಂ ಪೆಣನಟ್ಟು।
ವಂತಾಯ್ತಲಾ ನಿಮ್ಮ ಸಾಹಸಂ ಜಾಗುಜಾಗೆನುತೆ ಹೈಡಿಂಬಿ ನಗುತೆ॥
ಸಂತತಂ ಕರೆವ ಕಲ್ಮಳೆಗಳಂ ಸೃಜಿಸಿ ಬಲ।
ಮಂ ತವೆ ಪೊರಳ್ಚಿ ಮುಂದಳೆಯಲಾಪುಯ್ಯಲೂ।
ರಂ ತಾಗೆ ಪೊರಮಟ್ಟುದಾ ನೃಪನ ಸೈನ್ಯಮಕ್ಷೌಹಿಣಿಯ ಗಣನೆಯಿಂದೆ॥೧೬॥
ಪ್ರತಿಪದಾರ್ಥ:- ಪಿಂತಿರುಗಿ = ಹಿಂದಿರುಗಿ ನೋಡಿ, ಇದಂ= ಈ ಅಶ್ವರಕ್ಷಕ ಸೇನೆಯನ್ನು, ಕಂಡನು= ಈಕ್ಷಿಸಿದನು, ಅಲ್ಲವೆ= ಆಗಲಿಲ್ಲವೆ, ಜೀವಮಂ= ಹರಣವನ್ನು, ಕೊಂಡೊಯ್ದು= ಸೆಳೆದುಕೊಂಡು ನಡೆಯುವ, ಕಾಲನಂ=ಯಮಧರ್ಮರಾಯ-
ನನ್ನು, ಪೆಣನ= ಶವವು, ಅಟ್ಟುವಂತೆ= ಅಟ್ಟುತ ಹೋಗುವ ಹಾಗೆ, ಆಯ್ತಲಾ= ಆಯೆತಲ್ಲವೆ? ನಿಮ್ಮ =ನಿಮ್ಮಗಳ, ಸಾಹಸಂ = ಪರಾಕ್ರಮವು, ಜಾಗುಜಾಗು= ಬಹು ಹುಷಾರಾದ್ದು, ಎನುತೆ= ಎಂದು ನುಡಿಯುತ್ತ, ಹೈಡಿಂಬಿ = ಹಿಡಿಂಬಿಯ ಮೊಮ್ಮಗನಾದ ಮೇಘವರ್ಣನು, ನಗುತ= ಹಾಸ್ಯಮಂಗೈಯುತ್ತ, ಸಂತತಂ= ಊನವರತವೂ, ಕರೆವ= ಎರಚುತ್ತಲಿರುವ, ಕಲ್ಮಳೆಗಳಂ= ಶಿಲಾವರ್ಷವನ್ನು, ಸೃಜಿಸಿ= ಹುಟ್ಟಿಸಿ, ಬಲವಂ= ದಂಡನ್ನೆಲ್ಲಾ, ತವೆ=ಚನ್ನಾಗಿ, ಪೊರಳ್ಚಿ= ನೆಲಕ್ಕೆ ಕೆಡವಿ, ಮುಂದಳೆಯಲು= ಮುಂದೆಮುಂದೆ ನಡೆದುಬರುವ ವೇಳೆಯಲ್ಲಿ, ಆ ಪುಯ್ಯಲು= ಆ ಹಾವಳಿಯು, ಊರ= ಭದ್ರಾವತೀ ನಗರವನ್ನು, ತಾಗೆ= ಮುಟ್ಟಲು, ಆ ನೃಪನ= ಆ ಭದ್ರಾವತೀರಾಜನ, ಸೈನ್ಯಂ= ಬಲವು, ಅಕ್ಷೋಹಿಣಿಯ= ಅಕ್ಷೋಹಿಣಿ ಪ
ಎನ್ನುವ, ಗಣನೆಯಿಂದ= ಸಂಖ್ಯೆಯಿಂದ ಕೂಡಿ, ಪೊರಮಟ್ಟುದು= ಯುದ್ಧಕ್ಕೆ ನಡೆಯಿತು.
ತಾತ್ಪರ್ಯ:- ಮೇಘನಾದನು ನೋಡಿ ಅವರನ್ನು ಕುರಿತು ಓಹೋ! ನಿಮ್ಮೀ ಶೌರ್ಯವು ಪ್ರಾಣಾಪಹರಣಮಂ ಮಾಡಿಕೊಂಡು ಹೋಗುತ್ತಿರುವ ಯಮನೊಂದಿಗೆ ಮಾಡಿದ ಹೆಣದ ಶೌರ್ಯದಂತೆ ಆಯಿತೆಂದು ನುಡಿಯುತ್ತಲೂ ಅವರನ್ನೆಲ್ಲಾ ನೋಡಿ ಹಾಸ್ಯಮಾಡಿ ನಗುತ್ತಲೂ ಶಿಲಾವರ್ಷಗಳಿಂದ ಅವರನ್ನು ಹಿಂಸೆ ಪಡಿಸುತ್ತಲೂ ಮುಂದೆ ಮುಂದೆ ಹೋಗುತ್ತಿದ್ದನು. ಈ ಸುದ್ಧಿಯು ಭದ್ರಾವತೀ ನಗರದಲ್ಲಿದ್ದ ಯೌವನಾಶ್ವನಿಗೆ ತಿಳಿಯಲು ಆತನು ಒಂದು ಅಕ್ಷೋಹಿಣಿ ಸೈನ್ಯವನ್ನು ಕೂಡಲೆ ಯುದ್ಧಕ್ಕೆ ಸಿದ್ಧಪಡಿಸಿ ಹೊರಡಿಸಿದನು.
ತನ್ನೊಳಿರ್ದಮಲ ಹಯರತ್ನಮಂ ಕೊಂಡು ಕಳ।
ವಿನ್ನಭಸ್ಥಳಕೊಯ್ಯದನೆಂಬ ಕಡುಗೋಪದಿಂ।
ಬೆನ್ನಬಿಡದೆದ್ದು ನಡೆದುದೊ ಗಗನಕೀಧರಣಿಯೆನೆಘಟೋತ್ಕಚತನುಜನು॥
ಮುನ್ನ ಮಾಡಿದ ರಜದ ಮಾಯೆಗಿಮ್ಮಡಿಸಿ ಪಡಿ।
ಯನ್ನೆಗಳ್ಚಿದರೊ ವೈರಿಗಳೆನೆ ರಣೋತ್ಸಾಹ ।
ದಿನ್ನಡೆವ ಚಾತುರಂಗದ ಪದಹತಕ್ಕೇಳ್ವ ಧೂಳ್ ಮಸಗಿತಂಬರದೊಳು॥೧೭॥
ಪ್ರತಿಪದಾರ್ಥ:- ತನ್ನೊಳುಂ= ತನ್ನ ಬಳಿಯಲ್ಲಿ, ಇರ್ದ=ಇಟ್ಟುಕೊಂಡಿದ್ದ, ಅಮಲ= ಪರಿಶುದ್ಧವಾದ, ಹಯರತ್ನಮಂ= ಉತ್ತಮಾಶ್ವವನ್ನು, ಬಂದು=ಐತಂದು, ಕಳವಿನಿಂ= ಚೌರ್ಯದಿಂದ,ನಭಸ್ಥಳಕೆ= ಗಗನದೆಡೆಗೆ, ಒಯ್ದನು= ಕೊಂಡು ನಡೆದನು, ಎಂಬ=ಎನ್ನುವ, ಕಡು= ಅತ್ಯಂತ, ಕೋಪದಿಂ= ಕ್ರೋಧದಿಂದ, ಬೆನ್ನಬಿಡದೆ= ಹಿಂಬಾಲಿಸದೆ, ಗಗನಕೆ = ಆಕಾಶಕ್ಕೆ, ಧರಣಿ= ಇಳಾಮಂಡಲವು, ಎದೂದುದೋ= ಮೇಲಕ್ಕೆ ನಡೆಯೆತೊ!, ಎನಲು=ಎಂಬಂತೆ, ಘಟೋತ್ಕಚತನು-
ಜನು= ಭೀಮನ ಮಗನಾದ ಘಟೋತ್ಕಚನ ಪುತ್ರನು, ಮುನ್ನ= ಪೂರ್ವಕಾಲದಲ್ಲಿ, ಮಾಡಿದ=ರಚಿಸಿದ,ರಜದ=ರಜಸ್ಸಿನ, ಮಾಯೆಗೆ= ಕೃತಕಕ್ಕೆ, ಇಮ್ಮಡಿಸಿ= ಎರಡು ಪಾಲು ಅಧಿಕವಾಗಿ, ವೈರಿಗಳು= ಹಗೆಗಳು, ಪ್ರಶಿಯಂ= ಬದಲಾಗಿ, ನೆಗಳ್ಚಿದರೊ= ನಡೆಸಿರುವರೊ, ಎನೆ= ಎಂಬಂತೆ, ರಣ= ಆಜಿಯ, ಉತ್ಸಾಹದಿಂ= ಸಂತೋಷದ ಹುಮ್ಮಸ್ಸಿನಿಂದ, ನಡೆವ= ನಡೆದು ಬರುತ್ತಿರುವ, ಚತುರಂಗ= ನಾಲ್ಕು ತೆರನಾದ ಸೇನೆಯ, ಪದ=ಅಡಿಗಳ, ಹತಕ್ಕೆ= ಘಾತಕ್ಕೆ(ತಾಡನೆಗೆ) ಏಳ್ವ= ಮೇಲ್ಗಡೆಗೆ ಬರುವ, ಧೂಳು= ರಜೋವಿಶೇಷವು, ಅಂಬರದೊಳು=ಗಗನಾಂಗಣದಲ್ಲಿ, ಮಸಗಿತು=ಕವಿಯಿತು.
ತಾತ್ಪರ್ಯ:- ಭೂಮಿಯಲ್ಲಿದ್ದ ಅಶ್ವವೆಂಬ ರತ್ನವನ್ನು ಕದ್ದುಕೊಂಡು ಹೋಗುತ್ತಿರುವ ಮೇಘನಾದನನ್ನು ಹಿಂದಟ್ಟಿ ಹೋಗುವ ಧರಾಮಂಡಲವೆಂದೂ, ಮೊದಲು ರಜೋಮಾಯೆಯನ್ನು ಕಲ್ಪಿಸಿದ್ದಕ್ಕೆ ಪ್ರತೀಕಾರವನ್ನು ಮಾಡಲುದ್ಯುಕ್ತ-
ರಾದ ಯೌವನಾಶ್ವನ ಭಟರು ಇಮ್ಮಡಿಯಾಗಿ ಈಗ ರಜೋವಿಶೇಷವನ್ನುಂಟುಮಾಡಿರುವಂತೆಯೂ, ತೋರುತಿರುವ ಭದ್ರಾವತೀರಾಜನ ಅಕ್ಷೋಹಿಣೀ ಸೈನ್ಯದ ಪಾದಘಾತದಿಂದೊಗೆದ ಧೂಳು ನಭೋಮಂಡಲವನ್ನು ವ್ಯಾಪಿಸಿತು.
ಪಟಹ ನಿಸ್ಸಾಳ ತಮ್ಮಟ ಭೇರಿಗಳ ಸಮು।
ತ್ಕಟನಾದಮುಗ್ರ ಗಜಘಟೆಯ ಘಂಟಾರವಂ।
ಚಟುಲ ವಾಜಿಗಳ ಖುರಪುಟದ ರಭಸಂ ಹರಿವ ಸುಟಿಯ ರಥಚಕ್ರಧ್ವನಿ॥
ಲಟಕಟಿಪ ಸಮರಲಂಪಟರ ಭುಜಗಳ ಹೊಯ್ಲ।
ಧಟರ ಚಾಪಸ್ವನಂ ಪಟುಭಟರ ಬೊಬ್ಬೆಯಾ।
ರ್ಭಟೆಗಳೊಂದಾಗಿ ಸಂಘಟಿಸಿತೀಬ್ರಹ್ಮಾಂಡ ಘಟಮಿಂದೊಡೆಯದಿರದೆನೆ॥೧೮॥
ಪ್ರತಿಪದಾರ್ಥ:- ಪಟಹ= ನಗಾರಿ ಎಂಬ ವಾದ್ಯವಿಶೇಷ, ನಿಸ್ಸಾಣ= ಸಮರಕಾರ್ಯಗಳನ್ನು ತಿಳಿಸುವ ವಾದ್ಯವಿಶೇಷವು,
ತಮ್ಮಟ= ತಬಟೆಯು, ಭೇರಿ= ಭೇರಿ ಎನ್ನುವ ವಾದ್ಯದ, ಸಮುತ್ಕಟ= ಹೆಚ್ಚಾದ, ನಾದಂ= ಶಬ್ಧವು, ಉಗ್ರ= ಕ್ರೋಧಾವಿಷ್ಟ-
ವಾದ, ಗಜಘಟೆಯ= ಹಸ್ತಿ ಸಂಚಯದ, ಘಂಟಾರವಂ= ಘಂಟಾನಾದವು, ಚಟುಲ= ವೇಗವುಳ್ಳ, ವಾಜಿಗಳ= ಅಶ್ವಗಳ, ಖುರಪುಟದ= ಗೊರಸುಗಳ ಬುಡದ, ರಭಸಂ=ಧ್ವನಿಯು, ಹರಿಸುತ್ತ= ಮುಂದಕ್ಕೆ ನಡೆಸುತ್ತ, ಇಹ=ಇರತಕ್ಕ, ರಥದ= ಗಾಡಿಯ, ಚಕ್ರ= ಪಾರಂಬಳಗಳ, ಧ್ವನಿ= ಕಿರ್ರೆಂಬ ಶಬ್ಧವು, ಲಟಕಟಿಪ= ಪಿಸುನುಡಿಗಳನ್ನಾಡುವ, ಸಮರ= ರಣದಲ್ಲಿ, ಲಂಪಟರ= ಆಶೆಯುಳ್ಳ ವೀರರ, ಭುಜಹೊಯ್ಲು= ಭುಜಗಳನ್ನು ತಾಡಿಸಿಕೊಳ್ಳುವುದು,ಬಹು=ಅನೇಕರಾದ, ಭಟರ=ವೀರರ, ಚಾಪಸ್ವನಂ= ಚಾಪಧ್ವನಿಯು, (ಸಿಂಜಾರವವು) ಪಟುತರದ= ಬಹುಶೌರ್ಯಸೂಚಕವಾದ, ಬೊಬ್ಬೆಯ= ಸಿಂಹನಾದದ, ಆರ್ಭಟಗಳು= ಕೂಗುಗಳು, ಒಂದಾಗಿ= ಒಂದುಗೂಡಿ, ಬ್ರಹ್ಮಾಂಡಘಟಂ= ಬ್ರಹ್ಮಾಂಡಮಂಡಲವೆಂಬ ಗಡಿಗೆಯು, ಇಂದು= ಈ ಹೊತ್ತು, ಒಡೆಯದೆ= ನುಚ್ಚು ನುಚ್ಚಾಗದೆ, ಇರದು= ಎರುವುದಿಲ್ಲವು, ಎನೆ=ಎನ್ನುವ ಹಾಗೆ, ಸಂಘಟಿಸಿತು= ಒಂದುಗೂಡಿತು. (ಒಂದುಗಲೆಯಿತು)
ತಾತ್ಪರ್ಯ:- ಭೇರೀಪಟಹಾದಿವಾದ್ಯಧ್ವನಿಗಳೂ, ಹಸ್ತಿಗಳ ಘಂಟಾರವವೂ,ಕುದುರೆಗಳ ಖುರಪುಟದ ಪಟಪಟಧ್ವನಿಯೂ, ರಥಚಕ್ರಸ್ವನಂಗಳೂ,ಯೋಧರ ಸಿಂಹನಾದವೂ, ಬಿಲ್ಲುಗಳ ಸಿಂಜಾರವವೂ, ಏಕೀಭವಿಸಿ ಬ್ರಹ್ಮಾಂಡಮಂಡಲವೆಂಬ ಗಡಿಗೆಯನ್ನು ಒಡೆದು ಪುಡಿಪುಡಿಮಾಡುವುದೆಂಬ ತೆರದಿಂದ ರಣಾಂಗಣವು ಪ್ರಕಾಶಿಸುತ್ತಿತ್ತು.
ಎತ್ತಿಬಹ ಸತ್ತಿಗೆಯ ಮೊತ್ತಂಗಳೆತ್ತಲುಂ।
ಕತ್ತಲಿಸೆ ಪೊತ್ತ ಮಸೆವೆತ್ತ ಬಲ್ಗತ್ತಿಗಳ।
ಕಿತ್ತು ಭಟರೆತ್ತಿ ಜಡಿಯುತ್ತಿರಲ್ಕತ್ತ ಬೆಳಗಿತ್ತುವವು ಮತ್ತೆ ಬಲಕೆ॥
ಸುತ್ತಲುಂ ಕೆತ್ತವೋಲ್ ಮತ್ತಗಜಮೊತ್ತರಿಸಿ ।
ಮುತ್ತಿನಡೆಯುತ್ತೆಲರನೊತ್ತಿ ನಿಲೆಸುತ್ತಿರಲು।
ದತ್ತಚಮರೋತ್ಥಿತ ಮರುತ್ತತಿಯೊಳುತ್ತಮ ಹಿಮೋತ್ತರಂ ಬಿತ್ತರಿಸಿತು॥೧೯॥
ಪ್ರತಿಪದಾರ್ಥ:- ಎತ್ತಿ= ಮೇಲಕ್ಕೆತ್ತಿ ಹಿಡಿದು, ಬಹ= ಐತರ್ಪ, ಸತ್ತಿಗೆಯ= ಆತಪತ್ರಂಗಳ, ಮೊತ್ತಂಗಳು= ಸಮೂಹವು, ಎತ್ತಲು= ನಾನಾಕಡೆಯೂ, ಕತ್ತಲೆಸೆ= ತಮೋರಾಶಿಯಂ ಬೀರಲು, ಪೊತ್ತ=ಧರಿಸಲ್ಪಟ್ಟ, ಮಸೆವೆರ್ತ= ಸಾಣೆಗೆ ಕೊಟ್ಟ, ಬಲ್ಗತ್ತಿಗಳ= ಅನೇಕ ಕತ್ತಿಗಳನ್ನು, ಕಿತ್ತು= ಚೀಲದಿಂದ ಹೊರಕ್ಕೆ ಸೆಳೆದು, ಭಟರು= ಪದಾತಿಗಳು, ಜಡಿವುತ್ತೆ= ತಿರುಗಿಸುತ್ತ, ಇರಲೂ= ಇರಲಾಗಿ, ಅವು=ಆ ಖಡ್ಗಂಗಳು, ಬಲಕೆ=ದಂಡಿಗೆ, ಅತ್ತ= ಮತ್ತೊಂದೆಡೆಯಲ್ಲಿ, ಬೆಳಗ= ಕಾಂತಿಯನ್ನು, ಇತ್ತವು=ಕೊಟ್ಟವು, ಮತ್ತೆ= ತಿರುಗಿ, ಮತ್ತಗಜಂ= ಮದ್ದಾನೆಯು, ಸುತ್ತಲುಂ= ಎಲ್ಲಾ ಕಡೆಯೂ, ಕೆತ್ತವೋಲ್= ಜೋಡಿಸಿದಂತೆ, ಒತ್ತರಿಸಿ= ಸಾಂದ್ರಮಾಗಿ, ಮುತ್ತಿ= ಕವಿದುಕೊಂಡು, ನಡೆವುತ್ತ= ಹೊರಡುತ್ತ, ಎಲರಂ= ವಾಯುವನ್ನು, ಒತ್ತಿ=ಅಡ್ಡಗಟ್ಟಿ, ದತ್ತ= ಅಲ್ಲಾಡಿಸುತ್ತಲಿರುವ, ಚಮರ= ಚೌರಿಗಳಿಂದ, ಉತ್ಥಿತ= ಉತ್ಪತ್ತಿಯಾದ,ಮರುತ್= ವಾಯುವಿನ, ತತಿಯೊಳು= ರಾಶಿಯಲ್ಲಿ, ಉತ್ತಮ= ಒಳ್ಳೆಯದಾದ, ಹಿಮೋತ್ತರ= ಶೈತ್ಯಾಧಿಕ್ಯವು, ಬಿತ್ತರಿಸಿತು.
ತಾತ್ಪರ್ಯ:- ಆಗ ಯೌವನಾಶ್ವನ ಸೇನಾಜನಗಳು ಒರೆಗಳಿಂದ ಕತ್ತಿಗಳನ್ನು ಸೆಳೆದು ಝಳಪಿಸುತ್ತಲೂ, ಸಿಂಹಗರ್ಜನೆಗಳನ್ನು ಮಾಡುತ್ತಲೂ, ಬಾಹು ಮೂಲಗಳನ್ನು ಮುಷ್ಟಿಗಳಿಂದ ಅಪ್ಪಳಿಸುತ್ತಲೂ, ವೀರಾಟೋಪದ ನುಡಿಗಳನ್ನು ನುಡಿಯುತ್ತಲೂ ಮುಂದುವರಿಯುತ್ತಿದ್ದರು. ಮದ್ದಾನೆಗಳು ಘೀಂಕರಿಸುತ್ತ ದಿಕ್ಕು ದಿಕ್ಕಿನಲ್ಲಿಯೂ ನೆರೆದವು.
ತಡೆಯೊಳಿರ್ದಖಿಳ ಮೇಘಂಗಳಂ ಪ್ರಳಯದೊಳ್ ।
ಬಿಡಲು ಘುಡಿಘುಡಿಸುತ್ತೆ ನಡೆವಂದದಿಂದೆ ಬೊ।
ಬ್ಬಿಡುತವಧಿಯಿಲ್ಲದೈತರುತಿರ್ಪ ಯೌವನಾಶ್ವನ ಸೈನ್ಯಮಂ ನೋಡುತೆ॥
ಎಡಗಯ್ಯ ತುರುಗಮಂ ಬಲಿದಡವಳಿಸಿ ತನ್ನ।
ಕಡುಗಮಂ ಜಡಿದನಿಬರೆಲ್ಲರಂಚಿತ್ತದೊಳ್ ।
ಗಡಣಿಸದೆ ಕಲಿಘಟೋತ್ಕಚಸುತಂ ನಸುನಗುತೆ ಗಗನದೊಳ್ ಬರುತಿರ್ದನು॥೨೦॥
ಪ್ರತಿಪದಾರ್ಥ:- ತಡೆಯೊಳು= ಬಂಧನದಲ್ಲಿ, ಇರ್ದ= ಸಿಕ್ಕಿದ್ದ, ಅಖಿಲ= ಸಮಸ್ತವಾದ, ಮೇಘಂಗಳಂ = ಮುಗಿಲ್ಗಳನ್ನು, ಪ್ರಳಯದೊಳ್= ಪ್ರಪಂಚಕ್ಕೆ ನಾಶಕಾಲವು ವೊದಗಿದಾಗ, ಬಿಡಲು= ವರ್ಷಿಸಲು ಕಳುಹುವಲ್ಲಿ, ಘುಡಿಘುಡಿಸುತ= ಗುಡಗುಡ ಎಂಬ ಧ್ವನಿಗೆಯ್ಯುತ, ನಡೆವಂದದಿಂ= ನಡೆಯುವಹಾಗೆ, ಬೊಬ್ಬಿಡುತ= ಭೋರ್ಗರೆಯುತ್ತಾ, ಅವಧಿಯಿಲ್ಲದೆ= ಮಿತಿಯಿಲ್ಲದೆ,ಐತರುತಿರ್ಪ= ಸಮೀಪವನ್ನು ಹೊಂದತಕ್ಕದ್ದಾಗಿರುವ, ಯೌವನಾಶ್ವನ = ಯೌವನಾಶ್ವನೆಂಬ ಪೊಡವಿಪನ, ಸೈನ್ಯಮಂ= ದಂಡನ್ನು, ನೋಡುತ= ನಿರುಕಿಸುತ್ತ, ಎಡಗೈಯ= ವಾಮಬಾಹುವಿನಬಳಿವಸೇರಿರುವ, ತುರಂಗಮಂ= ಹಯವನ್ನು ಪಿಡಿದು, ಅಳವಡಿಸಿ= ಸಿದ್ಧನಾಗಿ, ತನ್ನ= ಸ್ವಕೀಯವಾದ, ಖಡುಗಮಂ= ಅಸಿಯನ್ನು, ಜಡಿದು=ಅಲ್ಲಾಡಿಸಿ, ಅನಿಬರೆಲ್ಲರಂ= ಅಷ್ಟು ಜನಗಳನ್ನು, ಚಿತ್ತದೊಳ್= ತನ್ನ ಎದೆಯಲ್ಲಿ, ಗಣಿಸದೆ = ಲೆಕ್ಕಿಸದೆ, ಕಲಿ=ಶೂರಾಗ್ರಣಿಯಾದ, ಘಟೋತ್ಕಚ= ಘಟೋತ್ಕಚನೆಂಬ ರಕ್ಕಸನ, ಸುತಂ= ತನುಜನಾದ ಮೇಘವರ್ಣನು, ನಸುನಗುತ= ಮುಗುಳ್ನಗೆಯನ್ನೈ-
ದುತ್ತ, ಗಗನದೊಳ್= ಆಗಸದಲ್ಲಿ, ಬರುತ=ಐತರುತ್ತ, ಇರ್ದನು= ಇದ್ದನು.
ತಾತ್ಪರ್ಯ:- ಈ ರೀತಿಯಾಗಿ ಮಹಾಪ್ರಳಯ ದಿನದಲ್ಲಿನ ಮೇಘಸಮುದಾಯಂಗಳ ಗುಡಗುಡಧ್ವನಿಯಂತೆ ದಿಕ್ಕುದಿಕ್ಕಿ-
ನಲ್ಲಿಯೂ, ತಂಡತಂಡವಾಗಿ ಕವಿಯುತ್ತಿರುವ ಯೌವನಾಶ್ವಾವನಿಪನ ಸೇನಾ ನಿಕಾಯವನ್ನು ನೋಡಿ, ಶೂರಾಗ್ರಣಿಯಾದ ಮೇಘನಾದನು ತನ್ನ ಎಡಗೈಯಲ್ಲಿ ಕುದುರೆಯನ್ನು ಪಿಡಿದು, ಒರೆಯಲ್ಲಿದ್ದ ಮತ್ತು ಹೊಸದಾಗಿಸಾಣೆಗೆ ಕೊಟ್ಟಿದ್ದ ಖಡ್ಗವನ್ನು ಬಲಗೈಯಿಂದ ಸೆಳೆದುಕೊಂಡು, ಶತ್ರುರಾಜರ ಅಷ್ಟ ಸಹಸ್ರ ಸಂಖ್ಯಾತರಾದ ಪದಾತಿಗಳನ್ನು ಸಂಹರಿಸಿ, ಅವರ ರಥಾಶ್ವಗಳನ್ನು ಬಿಲ್ಲುಬತ್ತಳಿಕೆಗಳನ್ನೂ ನುಚ್ಚುನುಚ್ಚಾಗಿ ಮಾಡಿ ಕೆಳಗೆ ಉರುಳಿಸಿ ಅವರನ್ನು ಹಾಸ್ಯಮಾಡುತ್ತ ಮುಂದುಮುಂದಕ್ಕೆ ಬರುತ್ತಿರುವಾಗ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ