ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಬುಧವಾರ, ಮೇ 28, 2025

ಜೈಮಿನಿ ಭಾರತ 3 - ದೊಡ್ಡಬೆಲೆ ನಾರಾಯಣಶಾಸ್ತ್ರಿ

ಜೈಮಿನಿ ಭಾರತ 3 - ದೊಡ್ಡಬೆಲೆ ನಾರಾಯಣಶಾಸ್ತ್ರಿ


ಮೂರನೆಯ ಸಂಧಿ.


ಸೂಚನೆ:- ಹಸ್ತಿನಾವತಿಯಿಂ ತಳರ್ದು ಭದ್ರಾವತಿಯ। 

ವಿಸ್ತಾರಮಂ ತೋರಿದಂ ಸಮೀಪದ ಗಿರಿಯ। 

ಮಸ್ತಕದೊಳಿರ್ದನಿಲಸಂಭವಂ ಕರ್ಣ ತನಯಂಗೆ ಸಂಪ್ರೀತಿಯಿಂದೆ॥ 


ಪ್ರತಿಪದಾರ್ಥ:- 

ಹಸ್ತಿನಾವತಿಯಂ= ಹಸ್ತಿನಾಪುರಿಯನ್ನು, ತಳರ್ದು= ಬಿಟ್ಟು, ಕರ್ಣತನಯಂಗೆ= ಕರ್ಣನಸೂನುವಾದ ವೃಷಧ್ವಜನಿಗೆ, ಸಂಪ್ರೀತಿಯಿಂದ= ಅಧಿಕವಾದ ವಿಶ್ವಾಸದಿಂದ, ಸಮೀಪದ= ಭದ್ರಾವತಿನಗರದ ಪಕ್ಕದಲ್ಲಿರುವ, ಗಿರಿಯ= ಪರ್ವತದ, ಮಸ್ತಕದೊಳು= ತುದಿಯಲ್ಲಿ, ಇರ್ದ=ಇದ್ದಂಥ, ಅನಿಲಸಂಭವಂ= ವಾಯುಸುತನು, ಭದ್ರಾವತಿಯ=ಭದ್ರಾವತಿಯೆಂಬ ಪಟ್ಟಣದ, ವಿಸ್ತಾರಮಂ= ವೈಶಾಲ್ಯವನ್ನು, ತೋರಿದಂ= ಅರುಹಿದನು. 


ಹಸ್ತಿನಾಪುರಿಯನ್ನು ಬಿಟ್ಟು, ಭದ್ರಾವತಿ ನಗರದ ಪಕ್ಕದ ಗಿರಿಯ ತುದಿಯಲ್ಲಿ ಇದ್ದ ನಗರವನ್ನು ವೃಷಧ್ವಜನಿಗೆ ಅಧಿಕವಿಶ್ವಾಸದಿಂದ ತೋರಿಸಿದನು.


ಭೂವಧೂರಮಣ ಕೇಳೈಮುಂದೆ ನಡೆವ ಸುಕ। 

ಥಾವಿಸ್ತಾರವನಿನ್ನು ಪಯಣಗತಿಯಿಂದೆ ಭ। 

ದ್ರಾವತೀದೇಶಮಂ ಪೊಕ್ಕರನಿಲಜ ವೃಷಧ್ವಜ ಘಟೋತ್ಕಚತನುಜರು। 

ಆವಗಂ ನಿರ್ಮಲಶ್ರೀಕರಗ್ರಾಹಿ ಮ। 

ತ್ತಾವಗಂ ಪ್ರಣುತವನಮಾಲಾ ಸುಶೋಭಿ ತಾ। 

ನಾವಗಂ ಮನ್ಮಥೋದ್ಭವಕಾರಿ ಹರಿವೊಲಾನೆಂಬ ಪೆಂಪಿಂದೆಸೆದುದು॥೧॥ 


ಪ್ರತಿಪದಾರ್ಥ:- ಭೂವಧೂರಮಣ= ಜನಮೇಜಯನೇ, ಮುಂದೆ= ಆನಂತರದಲ್ಲಿ, ನಡೆಸುವ= ನಡೆಯುವಂಥ, ಕಥಾವಿಸ್ತರಮಂ= ಕಥೆಯ ವೈಶಾಲ್ಯವನ್ನು, ಕೇಳೈ= ಲಾಲಿಸು, ಪಯಣ= ಪ್ರಯಾಣದ, ಗತಿಯಿಂದ= ಗಮನದಿಂದ, ಅನಿಲಜ= ವಾಯುಸುತನಾದ ವೃಕೋದರನು, ವೃಷಧ್ವಜ= ಕರ್ಣನಂದನನು, ಘಟೋತ್ಚತನುಜರು= ಘಟೋತ್ಚನ ಪುತ್ರನಾದ ಮೇಘನಾದನೇ ಮೊದಲಾದ ಮೂರುಮಂದಿಯೂ, ಭದ್ರಾವತೀದೇಶಮಂ= ಭದ್ರಾವತೀ ನಗರವನ್ನು, ಪೊಕ್ಕರು= ಸೇರಿದರು. ಆ ಪಟ್ಟಣವು, ಹರಿಯೊಲು= ಪದ್ಮನಾಭನಂತೆ,ಆವಗಂ=ಅನವರತವೂ, ಶ್ರೀ= ಐಶ್ವರ್ಯದ ಮತ್ತು ಲಕ್ಷ್ಮಿಯ, ಕರ= ಉಂಟಾಗುವಿಕೆ ಮತ್ತು ಕೈಯನ್ನು, ಗ್ರಾಹಿ= ಧರಿಸಿರುವುದು ಮತ್ತು ಹಿಡಿದಿರುವುದು, (ಭದ್ರಾವತಿ ನಗರ ಮತ್ತು ವಿಷ್ಣು) ಪ್ರಣುತ= ಸ್ತೋತ್ರಾರ್ಹವಾದ, ವನಮಾಲಾ= ಉದ್ರಾನಗಳ ಸಾಲು ಮತ್ತು ತುಳಸೀಹಾರ ಇವುಗಳಿಂದ, ಸುಶೋಭಿ= ಹೆಚ್ಚಾಗಿ ಹೊಳೆಯುತ್ತಿರುವುದು,ತಾನು= ಅದು, ಆವಗಂ= ಯಾವಾಗಲೂ, ಮನ್ಮಥ= ಕಾಮವನ್ನು ಮತ್ತು ಮದನನನ್ನು, ಉದ್ಭವ= ಆಧಿಕ್ಯ ಮತ್ತು ಸೃಷ್ಟಿಯನ್ನು, ಕಾರಿ=ಎಸಗಿದವನು ಮತ್ತು ಎಸಗಿದ್ದು ಆಗಿರುವ ಕಾರಣದಿಂದ, ಆಂ= ನಾನು, ( ಭದ್ರಾವತಿ ನಗರಿಯು ) ಹರಿಯವೋಲ್= ಮಹಾ ವಿಷ್ಣುವಿನಂತೆಯೆ ಇರುವೆನೆನ್ನುವ, ಪೆಂಪಿಂದ= ಹೆಮ್ಮೆಯಿಂದ. ಎಸೆದುದು= ಹೊಳೆಯಿತು.


ಅ. ವಿ :- ಭೂವಧು (ಸಂ. ಪೂ) ಭೂವಧೂರಮಣ( ಷ.ತ) ನಿರ್ಮಲಶ್ರೀ( ವಿ. ಪೂ) ನಿರಮಲಶ್ರೀಯಕರ(ಷ. ತ) 

ನಿರ್ಮಲಶ್ರೀಕರವನ್ನು ಗ್ರಾಹಿ(ಕೃ. ವೃ) ಪ್ರಣುತಮಾದವನಮಾಲಾ(ವಿ. ಪೂ) ಪ್ರಣುತವನಮಾಲೆಯಿಂದಸುಶೋಭಿ(ತೃ. ತ) 

ಪಯಣ=ತ್ಬ, ಪ್ರಯಾಣ= ತ್ಸ) ಹರಿ=ವಿಷ್ಣು, ಕೋತಿ, ಕಪ್ಪೆ, ಸಿಂಹ, ಮೊದಲಾದ ನಾನಾರ್ಥಗಳನ್ನೀಯುವುದು. 

ತಾತ್ಪರ್ಯ:- ಅನಂತರದಲ್ಲಿ ಜೈಮಿನಿಯು ಧರಾವಲ್ಲಭನಾದ ಜನಮೇಜಯನನ್ನು ಕುರಿತು, ಕೇಳೈ ಜನಮೇಜಯನೆ ಮುಂದೆ ನಡೆದ ಕಥಾವೃತ್ತಾಂತವನ್ನು ಪೇಳುವೆನು, ಬಳಿಕ ವಾಯುಸೂನುವಾದ ವೃಕೋದರನೂ, ಕರ್ಣತನುಜನಾದ ವೃಷಧ್ವಜನೂ, ಹಿಡಿಂಬಿಯ ಮೊಮ್ಮಗನಾದ ಮೇಘವರ್ಣನೂ ಸಹ ಧರ್ಮಪುತ್ರನಾದ ಯುಧಿಷ್ಠಿರನು ಕೊಟ್ಟ ಅಪ್ಪಣೆಯನ್ನು ತಮ್ಮ ತಮ್ಮ ತಲೆಗಳಲ್ಲಿ ಧರಿಸಿದವರಾಗಿ ಹಸ್ತಿನಾವತಿಯಿಂದ ಪ್ರಯಾಣಬೆಳಸಿ ಮುಂದೆ ಬರುತ್ತಿರುವಾಗ ಆ ಯೌವನಾಶ್ವನಾಶ್ವನೆಂಬ ಮಹಾರಾಯನ ದೇಶದ ಎಲ್ಲೆಯು ಅಧಿಕವಾದ ಐಶ್ವರ್ಯವನ್ನು ಧರಿಸಿ,  ಮನೋಹರಗಳಾದ ಉದ್ಯಾನಗಳನ್ನೊಳಗೊಂಡು, ಮಹಾತಿಶಯವುಳ್ಳದ್ದಾಗಿ ಲಕ್ಷ್ಮೀರಮಣನಾಗಿಯೂ,ತುಲಸೀಮಾಲಾಂಕೃತನಾಗಿಯೂ, ಮನ್ಮಥನ ಉತ್ಪತ್ತಿಗೆ ಕಾರಣಭೂತನಾಗಿಯೂ ಇರುವ ಮಹಾವಿಷ್ಣುವಿಗೆ ನಾನೂ ಸಮಾನವಾಗಿದ್ದೇನೆಂಬ ಹೆಮ್ಮೆಯಿಂದ ಹೊಳೆಯುತ್ತಲಿರುವುದನ್ನು. 


ಎಲ್ಲಿಯುಂ ಪರಿವ ಪೆರ್ದೊರೆಯಿಂದೆ ಕೆರೆಯಿಂದೆ । 

ಯೆಲ್ಲಿಯುಂ ಕುಸುಮದಾಗರದಿಂದೆ ಸರದಿಂದೆ। 

ಯೆಲ್ಲಿಯುಂ ರತ್ನಮಯದಿಳೆಯಿಂದೆ ಬೆಳೆಯಿಂದೆ ಮಣಿಕೃತಕ ಶೈಲದಿಂದೆ॥ 

ಯೆಲ್ಲಿಯುಂ ಸುಳಿವ ಗೋವ್ರಜದಿಂದೆ ಗಜದಿಂದೆ। 

ಯೆಲ್ಲಿಯುಂ ಕತ್ತುರಿಯ ಮೃಗದಿಂದೆ ಖಗದಿಂದೆ । 

ಯೆಲ್ಲಿಯುಂ ವಿರಚಿತ ಭವನದಿಂದೆ ಜನದಿಂದೆಯಾನಾಡ ಸಿರಿ ಮೆರೆದುದು॥೨॥


ಪ್ರತಿಪದಾರ್ಥ:- ಎಲ್ಲಿಯುಂ=ಎಲ್ಲಾ ಕಡೆಯಲ್ಲಿಯೂ, ಪರಿವ=ಪ್ರವಹಿಸುತ್ತಿರುವ, ಪೆರ್ದೊರೆಯಿಂದ=ಹೆಚ್ಚಿಗೆಯ ಹೊಳೆಗಳಿಂದಲೂ, ಕೆರೆಯಿಂದ= ಕೆರೆಗಳಿಂದಲೂ, ಎಲ್ಲಿಯುಂ= ಸಮಸ್ತವಾದ ಪ್ರದೇಶಗಳಲ್ಲಿಯೂ, ಕುಸುಮದ= ಪ್ಷ್ಪಗಳ,ಆಗರದಿಂದ= ಗೃಹಗಳಿಂದಲೂ, ಸರದಿಂದ= ಸರೋವರಗಳಿಂದಲೂ, ಎಲ್ಲಿಯುಂ= ಎಲ್ಲೆಡೆಗಳಲ್ಲಿಯೂ, ರತ್ನಮಯದ= ರತ್ನಖಚಿತವಾದ, ಇಳೆಯಿಂದ=ಧರಾಮಂಡಲದಿಂದಲೂ, ಬೆಳೆಯಿಂದ= ಪೈರುಗಳ ಭೂಮಿಯಿಂದಲೂ, ಮಣಿ= ರತ್ನಗಳಿಂದ, ಕೃತಕ=ರಚಿಸಲ್ಪಟ್ಟ, ಶೈಲದಿಂದ= ಬೆಟ್ಟದಿಂದಲೂ, ಎಲ್ಲಿಯುಂ= ಸರ್ವಪ್ರದೇಶದಲ್ಲೂ, ಸುಳಿವ= ತಿರುಗಾಡುತ್ತಿರುವ, ಗೋವ್ರಜದಿಂದ= ಧೇನುಸಮೂಹದಿಂದಲೂ,ಗಜದಿಂದಲೂ= ಹಸ್ತಿಸಮೂಹದಿಂದಲೂ, ಎಲ್ಲಿಯೂ= ಅಶೇಷಸ್ಥಳಗಳಲ್ಲಿಯೂ,ಕತುತುರಿಯ= ಕಸ್ತೂರಿಮೃಗಗಳಿಂದಲೂ, ಖಗದಿಂದಂ= ಹಕ್ಕಿಗಳಿಂದಲೂ, ಎಲ್ಲಿಯ= ಎಲ್ಲಾ ಕಡೆಗಳಲ್ಲಿಯೂ, ವಿರಚಿತ= ಮಾಡಲ್ಪಟ್ಟ, ಭವನದಿಂದ= ಗೃಹಗಳಿಂದಲೂ, ಜನದಿಂದ= ಮನುಷ್ಯರಿಂದಲೂ, ಆ ನಾಡ= ಆ ಜನಪದದ, ಸಿರಿ=ಐಶ್ವರ್ಯವು ,ಮೆರೆದುದು=ಕಾಂತಿಯನ್ನೈದಿತು. 


ತಾತ್ಪರ್ಯ = ಮತ್ತು ಯಾವಯಾವಕಡೆ ತಿರುತಿರುಗಿನೋಡಿದರೂ ಕೂಡ ಭೋರೆಂದು ಹರಿಯುತ್ತಿರುವನದಿಗಳು, ದೊಡ್ಡ ದೊಡ್ಡ ಕೆರೆಗಳು, ಮನೋಹರವಾದ ಆರಾಮಂಗಳು, ಸರೋವರಗಳು,ರತ್ನಗರ್ಭಿತವಾದ ಭೂಪ್ರದೇಶಗಳು, ಎತ್ತರಮಾದ ಮೈದಾನಂಗಳು,ಮಾಡುವೆಟ್ಟಗಳು,ದನದ ಮಂದೆಗಳು, ಆನೆಯ ಹಿಂಡುಗಳು,ಕಸ್ತೂರಿಮೃಗಗಳು, ಪಕ್ಷಿಗಳುಗುಂಪುಗಳು, ದೊಡ್ಡ ದೊಡ್ಡ ಮನೆಗಳು ಇವುಗಳಿಂದ ಅತಿ ಮನೋಹರವಾಗಿರುವುದನ್ನೂ ಕಂಡರು. 


ಅಂಚೆವಿಂಡಾಡದಕೊಳಂ ಕೊಳಗಳೊಳು ಸಲೆ ಪ। 

ಳಂಚಿ ಸುಳಿಯದ ಗಾಳಿ ಗಾಳಿಗಳ ಬಳಿವಿಡಿದು। 

ಸಂಚರಿಸದೆಳದುಂಬಿ ತುಂಬಿಗಳ ಬಿಡಯಕಿಂಪೆನಿಸದಚ್ಚಲರಲರ್ಗಳ॥ 

ಗೊಂಚಲೆರಗಿಸದ ಲತೆ ಲತೆಗಳಡರದತಳ್ಕಿ। 

ನಿಂ ಚಿಗುರದಿಮ್ಮಾವು ಮಾವುಗಳ ಚೆಂದಳಿರ್। 

ಮಿಂಚದ ಬನಂ ಬನಗಳಿಂ ಬಳಸದೂರೂರ್ಗಳಿಲ್ಲದೆಡೆಯಿಲ್ಲಿಳೆಯೊಳು॥೩॥ 


ಪ್ರತಿಪದಾರ್ಥ:- ಇಳೆಯೊಳು = ಭದ್ರಾವತೀ ದೇಶಕ್ಕೆ ಸಂಬಂಧಪಟ್ಟ ಭೂಪ್ರದೇಶದಲ್ಲಿ, ಅಂಚೆ= ಹಂಸಪಕ್ಕಿಗಳ, ವಿಂಡು= ಗುಂಪು, ಆಡದ= ತಿರುಗಾಡದಿರುವ, ಕೊಳಂ=ಬಾವಿಗಳು, ಕೊಳಗಳೊಳು= ಆ ಪ್ರಕಾರವಾದ ಕೊಳಗಳಲ್ಲಿ, ಸಲೆ=ಚನ್ನಾಗಿ, ಪಳಂಚಿ= ಆವರಿಸಿಕೊಂಡು, ಸುಳಿಯದ= ಚಲಿಸದಿರುವ, ಗಾಳಿ=ವಾಯುವು, ಗಾಳಿಗಳ= ಆ ಪವನಗಳ, ಬಳಿವಿಡಿದು= ದಾರಿಯನ್ನೈದಿ, ಸಂಚರಿಸದ= ಸಂಚಾರಮಾಡದೆ ಇರುವ, ಎಳದುಂಬಿ= ಮರಿದುಂಬಿಗಳು, ದುಂಬಿಗಳಬಿಡಯಕೆ= ಆ ಅಳಿಗಳ ಗುಂಪಿಗೆ, ಇಂಪೆನಿಸದ= ಸುಖದೋರದ, ಅಚ್ಚಲರು= ಕಲ್ಮಸರಹಿತವಾದ ಪುಷ್ಪಗಳು, ಅಲರ್ಗಳ= ಆ ಹೂಗಳ, ಗೊಂಚಲ= ಗುಡ್ಫಂಗಳನ್ನು, ಎರಗಿಸದ=ಬಿಡದಿರುವ, ಲತೆ= ಎಳಬಳ್ಳಿಗಳು, ಲತೆಗಳು= ಆ ಬಳ್ಳಿಗಳ ರಾಶಿಗಳು, ಅಡರದ= ಆಕ್ರಮಿಸದಿರುವ, ತಳ್ಕಿನಿಂ= ಪ್ರಕಾಶದಿಂದ, ಚಿಗುರಿಸದ= ಚಿಗುರನ್ನು ಹೊಂದದಿರುವ, ಮಾವು= ಚೂತವೃಕ್ಷಗಳು, ಮಾವುಗಳ= ಆ ಚೂತವೃಕ್ಷಂಗಳ, ಚಂದಳಿರ್= ಕೆಂಪು ಚಿಗುರುಗಳಿಂದ,ಮಿಂಚದ= ಹೊಳೆಯದಿರುವ, ಬನಂ=ತೋಟಗ-

ಳು, ಬನಂಗಳಿಂ= ಆ ರೀತಿಯಾದ ಉದ್ಯಾನಗಳಿಂದ, ಬಳಸದ= ಆವರಿಸದ, ಊರು= ಹಳ್ಳಿಗಳು, ಊರ್ಗಳಿಲ್ಲದ= ಆ ತೆರನಾದ ಹಳ್ಳಿಗಳಿಂದ ಕೂಡದ, ಎಡೆ= ಸ್ಥಳಗಳು, ಇಲ್ಲ=ಇರಲಿಲ್ಲ. 


ತಾತ್ಪರ್ಯ:- ತರುವಾಯ ಮತ್ತೆ ಸ್ವಲ್ಪ ಮುಂದೆ ನಡೆಯಲುಮನೋಹರವಾದ ಕೊಳಗಳು ಕಾಣಬಂದವು. ಅವುಗಳಲ್ಲಿ ಹಂಸಪಕ್ಷಿಗಳು ಆಟವನ್ನಾಡುತ್ತಿದ್ದವು, ಅಲ್ಲಿ ಮಂದಮಾರುತವು ಬೀಸುತ್ತಿದ್ದದ್ದರಿಂದ ಎಲ್ಲೆಲ್ಲಿಯೂ ಭೃಂಗಗಳು ಹಾರಾಡುತ್ತಿದ್ದವು. ಎಲ್ಲೆಲ್ಲಿಯೂ ಸುವಾಸನೆಯುಳ್ಳ ಪುಷ್ಪಗಳೂ, ಎಳೆಬಳ್ಳಿಗಳೂ ತುಂಬಿ ನೋಟಕ್ಕೆ ಅತ್ಯಂತ ರಮಣೀಯ-

ವಾಗಿತ್ತು. ಮಾವಿನ ಮರಗಳ ಚಿಗರಿನಿಂದ ಎಲ್ಲಾ ಊರುಗಳೂ ಕಾಂತಿಯುಕ್ತವಾಗಿದ್ದವು. ಇವುಗಳಿಂದ ರಹಿತವಾದ ಊರೇ ಈ ಭದ್ರಾವತಿ ನಗರಕ್ಕೆ ಸೇರಿಲ್ಲವೆಂಬಂತೆ ಹೊಳೆಯುತ್ತಿತ್ತು. 


ಬೆಳೆಯದ ಪೊಲಂಗಳಂ ಬೆಳ್ದಾವರೆಗಳಲ। 

ರ್ದಳೆಯದಕೊಳಂಗಳಂ ಮಣಿಶಿಲಾ ರೋಚಿಯಿಂ। 

ಪೊಳೆಯದಚಲಂಗಳಂ ತರುಣಾರುಣ ಪ್ರಭಾಲಕ್ಷ್ಮಿಯಂ ನಗುವಂತಿರೆ॥ 

ತಳೆಯದ ಬನಂಗಳಂ ಕಿವಿಯೊಳಿಡಿದಾಸರಂ । 

ಕಳೆಯದ ಸೊನಂಗಳಂ ಮನಕನವರತಸುಖಂ। 

ಮೊಳೆಯದ ಜನಂಗಳಂ ಮುಳಿದರಸಲಾಂ ಕಾಣೆನಾಮಹೀಮಂಡಲದೊಳು॥೪॥ 


ಪ್ರತಿಪದಾರ್ಥ:- ಆ ಮಹೀಮಂಡಲದೊಳು= ಆ ಭದ್ರಾವತೀನಗರಕ್ಕೆ ಸೇರಿದ ಸ್ಥಳಂಗಳಲ್ಲಿ, ಬೆಳೆಯದ= ಫಲಿಸದಿರುವ, ಪೊಲಂ= ಕೊಳಗಳನ್ನು, ವಣಿಶಾಲಾ= ರನ್ನ ಮನೆಗಳ, ರೋಚಿಯಿಂ= ಪ್ರಕಾಶದಿಂದ, ಪೊಳೆಯದ= ಕಾಂತಿಯನ್ನೀಯದಿ-

ರುವ, ಅಚಲಂಗಳಂ= ಗಿರಿಗಳನ್ನು, ತರುಣ= ಹೊಸದಾದ, ಅರುಣ= ಸೂರ್ಯನ ಸಾರಥಿಯ, ಪ್ರಭಾ= ಹೊಳಪೆಂಬ, ಲಕ್ಷ್ಮಿಯಂ= ಸಂಪತ್ತನ್ನು, ನಗುವಂತೆ= ಹಾಸ್ಯಮಾಡುವಹಾಗೆ, ಇದೆ=ಇರಲು, ತಳೆಯದ= ಚಿಗುರುಗಳಿಂದ ರಹಿತವಾದ,  ಬನಂಗಳಂ= ತೋಟಗಳನ್ನು, ಕಿವಿಯೊಳು= ಕಿವಿಯಲ್ಲಿ , ಇಡಿದು= ಸೇರಿ, ಆಸರಂ= ಶ್ರಮವನ್ನು, ಕಳೆಯದ= ನೀಗದಿರುವ, ಸ್ವನಂಗಳಂ= ಸಂಗೇತಾಲಾಪಂಗಳನ್ನು, ಮನಕೆ= ಹೃದಯಕ್ಕೆ, ಅನವರತ= ಸರ್ವದಾ, ಸುಖಂ= ಸೌಖ್ಯವು, ಮೊಳೆಯದ= ಅಂಕುರಿಸದಿರುವ,ಜನಂಗಳಂ= ಪ್ರಜೆಗಳನ್ನು, ಮುಳಿದು= ಬೇಸರಗೊಂಡು,ಅರಸಲು= ಹುಡುಕಲಾಗಿ, ಕಾಣೆನು= ನೋಡಲೇ ಇಲ್ಲವು. 


ಅಧಿಕ. ವಿಶೇಷ:- "ಬೆಳೆ" ಎಂಬುದು ಸಸ್ಯವೃದ್ಧಿಯಲ್ಲಿಯೂ, " ಬಳೆ" ಇತರ ವಸ್ತುಗಳ ಅಭಿವೃದ್ಧಿಯಲ್ಲಿಯೂ ಪ್ರಯೋಗಿಸಲ್ಪಡುವುದು. 


ತಾತ್ಪರ್ಯ = ಆ ನಾಡಿನಲ್ಲಿ ಎಲ್ಲೆ ನೋಡಿದರೂ ಫಲಭರಿತವಾದ ಹೊಲಗಳು ಕಾಣುತ್ತಲಿದ್ದುವಲ್ಲದೆ ಬೀಡು ಭೂಮಿಯನ್ನು ನೋಡುವುದು ಬಹು ಅಪೂರ್ವವಾಗಿತ್ತು, ಸರೋವರಗಳಲ್ಲಿ ಕಮಲ ಪುಷ್ಪಂಗಳು ತುಂಬಿ ರಮಣೀಯವಾಗಿತ್ತಲ್ಲದೆ ಇವುಗಳಿಂದ ರಹಿತವಾದ ಕಾಸಾರವೊಂದೂ ಕಾಣದು. ಪರ್ವತಗಳೆಲ್ಲಾ ರತ್ನಖಚಿತವಾಗಿದ್ದವು. ಉದ್ಯಾನವನ ಲಕ್ಷ್ಮಿಯಂ=

ಶ್ರೀ ಮಹಾಲಕ್ಷ್ಮಿಯನ್ನು ಕೂಡ ಹಾಸ್ಯಮಾಡುವಂತೆ ಇತ್ತು. ಎಲ್ಲಿ ನೋಡಿದರೂ ಸಂಗೀತರವವೂ ಸಜ್ಜನಾಲಾಪವೂ ಕೇಳಿ ಬರುತ್ತಲಿದ್ದುವೇ ಹೊರತು ಇವುಗಳು ಇಲ್ಲದೆಡೆಗಳನ್ನು ಕಾಣುವುದೇ ದುರ್ಲಭವಾಗಿತ್ತು. 


ಉರ್ವರೆಯ ಶಾಲಿಗಳ ಪಾಲ್ದೆನೆಗೆ ನಭದಿಂ ಮು। 

ಸುರ್ವ ಗಿಳಿವಿಂಡುಗಳನುಲಿಯಿಂದೆಪಾಮರಿಯ। 

ರೆರ್ವಿಸಿದೊಡಿರದೆ ಬಾಂದಳಕೆ ಮುಗುಳೇಳ್ವವೊಲ್ ಕಲಮಂಗಳಿಕ್ಕೆಲದೊಳು॥ 

ಕೊರ್ವಿ ನಳನಳಿಸಿ ನೀಳ್ದುರೆ ಬೆಳೆದ ರಸದಾಳಿ । 

ಗರ್ವುಗಳ ಸೋಗೆಗಳ ಪಸುರುವೊಗರಾಗಸಕೆ। 

ಪರ್ವುತಿಹುದಾನಾಡೊಳೆಲ್ಲಿಯುಂ ದಾರಿಗರ ಕಣ್ಗೆ ಕೌತುಕಮಾಗಲು॥೫॥ 


ಪ್ರತಿಪದಾರ್ಥ:- ಆ ನಾಡೊಳು= ಆ ಭದ್ರಾವತೀ ದೇಶದಲ್ಲಿ, ಉರ್ವರೆಯ= ಪೈರುಗಳು ಬೆಳೆಯಲು ಅರ್ಹತೆಯನೈದಿದ ಭೂಪ್ರದೇಶದ, ಶಾಲಿಗಳ= ನೆಲ್ಲಿನ ಪೈರುಗಳ, ಪಾಲ್ದೆನೆಗೆ= ಹಾಲು ಹಿಡಿದಿರುವ ತೆನೆಗಳಿಗೆ, ನಭದಿಂ = ಅಂತರಿಕ್ಷದಿಂದ, ಮುಗುರ್ವ= ಮುಂದರಿದು ಹಾರಿಬರುವ, ಗಿಳಿವಿಂಡುಗಳ= ಶುಕಸಮೂಹಗಳನ್ನು, ಪಾಮರಿಯರು= ರೈತರ ಹೆಂಗಸರು, 

(ಒಕ್ಕಲಗಿತ್ತಿಯರು), ಉಲಿಯಿಂದ= ಕೂಗುವಿಕೆಯಿಂದ, ಎರ್ವಿಸಿದೊಡೆ= ಚದರಿಸಲಾಗಿ, ಇರದೆ= ಅದೇಸ್ಥಳವನ್ನಾಶ್ರಯಿ-

ಸದೆ, ಬಾಂದಳಕೆ= ಅಂತರಿಕ್ಷಮಾರ್ಗಕ್ಕೆ, ಮಗುಳೆ=ಪುನಃ, ಏಳ್ವವೊಲ್= ಹಾರಿಹೋಗುವಂತೆ, ಕಲಮಂಗಳ= ನೆಲ್ಲಿನ ಗದ್ದೆಗಳ, ಇಕ್ಕೆಲದೊಳು= ಉಭಯಪಾರ್ಶ್ವಗಳಲ್ಲಿಯೂ, ಕೊರ್ವಿ= ಮದಿಸಿ,(ಪಕ್ವವಾಗಿ) ನಳನಳಿಸಿ= ಹೊಳೆಹೊಳೆಯುತ್ತ,

ನೀಳ್ದು= ನಿಂತುಕೊಂಡು,ಉರೆ= ಅಧಿಕವಾಗಿ, ಬೆಳೆದ= ಬೆಳೆದಿರುವ,ರಸದಾಳಿ= ರಸತಾಳೆ ಎಂಬ ಭೇದವುಳ್ಳ, ಕರ್ವುಗಳ= ಕಬ್ಬುಗಳ ಅಥವಾ ಇಕ್ಷುದಂಡಗಳ, ಸೋಗೆಗಳ= ಗರಿಗಳ, ಪಸರುವಗರು= ಹಸರು ಬಣ್ಣವು,ಆಗಸಕೆ=ಅಂತರಿಕ್ಷಕ್ಕೆ, ಪರ್ವುತ= ಹಬ್ಬುತ್ತ, ದಾರಿಗರು= ಪ್ರಯಾಣಿಕರ, ಕಣ್ಣಿಗೆ =ನಯನಂಗಳಿಗೆ, ಕೌತುಕಂ=ಅಚ್ಚರಿಯು, ಆಗಲು= ಆಗಲಾಗಿ, ಎಲ್ಲಿಯುಂ= ಎಲ್ಲಾ ಸ್ಥಳಗಳಲ್ಲಿಯೂ, ಇತ್ತು= ಆಗಿತ್ತು. 


ತಾತ್ಪರ್ಯ:- ಮತ್ತು, ಆ ದೇಶದ ಎಲ್ಲಾ ಗದ್ದೆಗಳಲ್ಲಿಯೂ ಭತ್ತದ ಪೈರು ಚೆನ್ನಾಗಿ ಬಲಿತಿರುವ ತೆನೆಗಳನ್ನು ತಿನ್ನಲು ಬಯಸಿ ಬರುವ ಗಿಳಿವಿಂಡನ್ನು ಕಾವಲಗಾರ್ತಿಯರು ಚದರಿಸಿ ಬಿಡಲಾಗಿ ಅವುಗಳೆಲ್ಲಾ ಗದ್ದೆಗಳ ಆಕಾಶಕ್ಕೆ ಹಾರಿದಂತೆ ಮಾಡಿ ಗದ್ದೆಗಳ ಎರಡೂ ಕಡೆ ಬೆಳೆದಿರುವ ರಸದಾಳೆ ಕಬ್ಬುಗಳ ಮೇಲೆ ಕುಳಿತು ನಭೋಮಂಡಲದವರೆಗೂ ವ್ಯಾಪಿಸಿವೆಯೊ ಎಂಬಂತೆ ಕಬ್ಬಿನ ಪೈರುಗಳು ಬೆಳೆದಿರುವುದನ್ನು ದಾರಿಗರು ನೋಡಿ ಆಶ್ಚರ್ಯ ಪಡುತ್ತಿದ್ದರು. 


ತಂಬೆಲರ ಸೊಗಸಿಂಗೆ ತಲೆದೂಗುವಂತೆ ತಳೆ। 

ದಂಬುಜದ ಪರಿಮಳಕೆ ಶಿರವನೊವೆವಂತೆ ಮರಿ। 

ದುಂಬಿಗಳ ಗಾನಕ್ಕೆ ಕೊರಲನೊಲೆದಾಡುವಂತೊಯ್ಯೊಯ್ಯನೊಲೆದಾಡುವ॥ 

ಪೊಂಬಣ್ಣಮೆಸೆವ ಕಳಮಶ್ರೀಯ ಪರಿಚರ್ಯೆ। 

ಯಂ ಬಿಡದೆ ಮಾಳ್ಪ ಕೆಳದಿಯರೆನಲ್ ಕೀರ ನಿಕು। 

ರುಂಬಮಂ ಸೋವಲೆಂದಲ್ಲಿರ್ದ ಪಾಮರಿಯರಧ್ವಗರ ನಡೆಗೆಡಿಸಿದರು॥೬॥ 


ಪ್ರತಿಪದಾರ್ಥ:- ತಂಬೆಲರ= ತಂಗಾಳಿಯ, ಸೊಗಸಿಂಗೆ= ಚೆಲ್ವಿಗೆ,( ಮನೋಹರತ್ವಕ್ಕೆ), ತಲೆದೂಗುವಂತೆ= ತಲೆಯನ್ನು ಅಲ್ಲಾಡಿಸುವ ಹಾಗೆ, ತಳೆದ= ಪೂರ್ಣವಾಗಿರುವ, ಅಂಬುಜದ= ತಾವರೆಯ, ಪರಿಮಳಕೆ= ಸುರಭಿಗೆ, ಶಿರವನು= ಶಿರಸ್ಸನ್ನು, ಒಲವಂತೆ= ತೂಗುವಂತೆ, ಮರಿದುಂಬಿಗಳ=ಸಣ್ ಸಣ್ಣ ಭೃಂಗಂಗಳ, ಗಾನಕ್ಕೆ= ಹಾಡುವಿಕೆಗೆ, ಕೂರಳನು= ಕಂಠವನ್ನು, ಒಲದಾಡುವಂತೆ= ಚಲಿಸುತ್ತಿರುವಂತೆ, ಒಯ್ಯೊಯ್ಯನೆ= ಮೆತ್ತಮೆತ್ತಗೆ, ಒಲದಾಡುವ= ಅಲ್ಲಾಡುವ, ಪೊಂಬಣ್ಣಂ= ಚಿನ್ನದ ವರ್ಣದಿಂದ,  ಎಸೆವ= ಹೊಳೆಯುತ್ತಿರುವ, ಕಳಮಶ್ರೀಯ= ಭತ್ತದ ಪೈರೆಂಬ ಲೋಕಮಾತೆಯ, 

ಪರಿಚರ್ಯೆಯಂ= ಚಾಕರಿಯನ್ನು(ಉಪಚಾರವನ್ನು) ಬಿಡದೆ=ತಪ್ಪದೆ, ಮಾಳ್ಪ= ಎಸಗುವ, ಕೆಳದಿಯರು= ಸಂಗಾತಿಯರು, 

ಎನಲು= ಎಂಬಂತೆ, ಕೀರನಿಕುರಂಬಮಂ= ಗಿಳಿವಿಂಡನ್ನು,  ಸೋವಲು= ಅಟ್ಟಲು, ಎಂದು= ಎಂಬತೆರನಾಗಿ, ಅಲ್ಲಿ= ಆ ನೆಲ್ಲಿನ ಗದ್ದೆಯಲ್ಲಿ, ಇದ್ದ=ಇದ್ದಂಥ, ಪಾಮರಿಯರು= ಒಕ್ಕಲಗಿತ್ತಿಯರು, ಅಧ್ವಗರ= ಮಾರ್ಗಸ್ಥರ, ನಡೆ= ಗಮನವನ್ನು, ಕೆಡಿಪರು= ಭಂಗಪಡಿಸುತ್ತಿರುವರು. 


ತಾತ್ಪರ್ಯ:-ಅಲ್ಲದೆ ಮಂದಮಾರುತವೂ, ಕಮಲ ಪುಷ್ಪಗಳ ಸುರಭಿಯೂ, ಸಂಗೀತರವವೂ ಜನರ ಮನಸ್ಸನ್ನು ಎಂತು ಆನಂದಗೊಳಿಸುವುದೋ ಅದೇತೆರನಾಗಿ ಎಲ್ಲೆಡೆಗಳಲ್ಲಿ ಬೆಳದಿರುವ ಹಳದಿ ಬಣ್ಣದ ಬತ್ತದ ತೆನೆಗಳ ಸಮೂಹವೂ. ಜಿಳಿವಿಂಡುಗಳ ಕಂಠಧ್ವನಿಯೂ, ರೈತರ ಹೆಂಗಸರ ಶಬ್ಧ ಪರಂಪರೆಯೂ ಮಾರ್ಗಸ್ಥರ ಮನಸ್ಸನ್ನು ಆನಂದಗೊಳಿಸುತ್ತಿತ್ತು.


ಪಾಲ್ದೆನೆಯೊಳಂಡಿಸಿದ ಗಿಳಿವಿಂಡನಬಲೆಯರ್। 

ಕಾಲ್ದೆಗೆಯಲಾರ್ದುಕೈಪರೆಗುಟ್ಟುವಂಡಲೆಗೆ। 

ತೇಲ್ದು ಮೇಲುದು ಜಾರೆ ತೋರ್ಪ ಪೊಂಗೊಡಮೊಲೆಯನಂಬುಜದಮುಕುಳಮೆಂದು॥ 

ಸೋಲ್ದೆರಗಿ ತಿರುತಿರುಗಿ ಬರುತಿರ್ಪ ತುಂಬಿಗಳ। 

ಸಾಲ್ದಿವಿಜಗಿರಿಯ ಬಳಸುವ ತಮೋರಾಜಿಯಂ। 

ಪೋಲ್ದು ಸಲೆ ಕಂಗೊಳಿಸುತಿರ್ಪುದಾ ಭೂತಲದೊಳೇನಚ್ಚರಿಯನು॥೭॥ 


ಪ್ರತಿಪದಾರ್ಥ:-ಪಾಲ್ದೆನೆಯೊಳು= ಹಾಲು ಹಿಡಿದ ನೆಲ್ಲಿನತೆನೆಗಳಲ್ಲಿ, ಅಂಡಿಸಿದ= ಕುಳಿತಿರುವ, ಗಿಳಿವಿಂಡನು= ಶುಕಸ-

ಹವನ್ನು, ಅಬಲೆಯರು= ಬೆಳೆಗೆ ಕಾವಲಿರುವ ಹೆಂಗಸರು, ಕಾಲೂದೆಗೆಯಲು= ನಡೆಯಲು, ಆರ್ದು= ಧ್ವನಿಗೈಯುತ್ತ, ಕೈಪರೆಗುಟ್ಟುವ= ಕರಗಳನ್ನು ಪರಸ್ಪರ ತಟ್ಟುವುದರ, ಅಡಲೆಗೆ= ಬಾಧೆಗೆ, ತೇಲ್ದು= ಜಾರಿಹೋಗಿ, ಮೇಲುದ= ಮೇಲ್ಸೆರಗು, ಜಾರೆ= ಜಾರಲು, ತೋರ್ಪ=ಕಂಡುಬರುವ, ಪೊಂಗೊಡ= ಚಿನ್ನದ ಬಿಂದಿಗೆಯ ಹಾಗಿರುವ, ಮೊಲೆಯನು=ಕುಚವನ್ನು, ಅಂಬುಜದ ಮುಕುಳಮೆಂದು= ತಾವರೆಯ ಮೊಗ್ಗೆಂದು, ಸೋಲ್ದು= ಭ್ರಾಂತಿಪಟ್ಟು, ಎರಗಿ= ಕುಚಗಳ ಸಮೀಪಕ್ಕೆ ಬಂದು, ತಿರುತಿರುಗಿ=ಸುತ್ತಿ ಸುತ್ತಿ, ಬರುತಿರ್ಪ= ಹತ್ತಿರಕ್ಕೆ ಬರುವಂಥ, ತುಂಬಿಗಳ= ಭೃಂಗಗಳ, ಸಾಲು=ಹಂತಿಯು, ದಿವಿಜಗಿರಿಯಂ

= ಸುವರ್ಣ ಪರ್ವತವನ್ನು, ಬಳಸಿದ= ಆವರಿಸಿಕೊಂಡಿರುವ, ತಮೋರಾಜಿಯಂ = ಅಂಧಕಾರದ ಸಮೂಹವನ್ನು,  ಪೋಲ್ದು= ಹೋಲಿಕೆಯಾಗಿ, ಸಲೆ=ಚಚೆನ್ನಾಗಿ, ಆ ಭೂತಲದೊಳು= ಆ ಭದ್ರಾವತೀ ಪ್ರದೇಶದಲ್ಲಿ,  ಕಂಗೊಳಿಸುತ= ಕಾಣುತ, ಇರ್ಪುದು=ಇದೆ, ಅಚ್ಚರಿಯನು= ಈ ಆಶ್ಚರ್ಯವನ್ನು,  ಏನೆಂಬೆನು= ಎಂತು ವರ್ಣಿಸಲಿ. 


ತಾತ್ಪರ್ಯ:- ಅಲ್ಲದೆ ಹಾಲು ಹಿಡಿದಿರತಕ್ಕ ಭತ್ತದ ತೆನೆಗಳ ಮೇಲೆ ಕುಳಿತಿರುವ ಭೃಂಗಾಳಿಯನ್ನು ಕೈಚಪ್ಪಾಳೆ ತಟ್ಟುತ್ತಾ ಓಡಿಸಲುದ್ಯುಕ್ತರಾದ ಒಕ್ಕಲಗಿತ್ತಿಯರ ಸೀರೆಯ ಸೆರಗು ಜಾರಿಹೋಗಲು ಅಲ್ಲಿ ಪೀತವರ್ಣವಾಗಿ ಹೊಳೆಯುವ ಕುಚಮಂಡಲವನ್ನು, ಅರಸಿನ ಬಣ್ಣವುಳ್ಳ ಕಮಲದ ಮೊಗ್ಗೆಂದು ಭಾವಿಸಿ ಭತ್ತದ ತೆನೆಗಳಿಂದ ಚದರಿಸಲ್ಪಟ್ಟ ಅಳಿವಿಂಡು ಬಂದು ಮುತ್ತಿಕೊಂಡು ಕೈಲಾಸಗಿರಿಯನ್ನು ಆವರಿಸಿರತಕ್ಕ ಅಂಧಕಾರವೋ ಎಂಬಂತೆ ಆಶ್ಚರ್ಯವನ್ನುಂಟುಮಾಡುವ ತೆರದಿಂದ ನೋಟಕರಿಗೆ ಅತಿ ಮನೋಹರವಾಗಿತ್ತು. 


ಶಾಲಿಗಳ ಕೈಗಂಪ ಪೊಲಗಾವ ಪಾಮರಿಯ। 

ರೋಳಿಗಳ ಮೈಗಂಪ ಸತತ ಕುಸುಮಿತ ತರು ಲ। 

ತಾಳಿಗಳ ಪೂಗಂಪ ತಿಳಿಗೊಳಂಗಳೊಳಲರ್ದ ಪೊಚ್ಪೊಪೊಂದಾವರೆಗಳ॥ 

ಧೂಳಿಗಳ ತನಿಗಂಟನುಂಡು ಮಿಂಡೆದ್ದ ಭೃಂ। 

ಗಾಳಿಗಳ ಬಳಗಂ ಪರಿಯಲೊಡನೆ ಸುಳಿವ ತಂ। 

ಗಾಳಿಗಳ ಕಡುಗಂಪ ಸೇವಿಸುತೆ ಪಥಿಕರಾಸರ್ಗಳೆವರಾನಾಡೊಳು॥೮॥ 


ಪ್ರತಿಪದಾರ್ಥ:- ಆ ನಾಡೊಳು= ಆ ಜನತೆಯಲ್ಲಿ, ಶಾಲಿಗಳ= ನೆಲ್ಲುಪೈರುಗಳ, ಕೈಗಂಪ= ತೆನೆಗಳ ಸುವಾಸನೆಯನ್ನು, ಪೊಲಗಾವ= ಗದ್ದೆಗೆ ಕಾವಲಿರುವ, ಪಾಮರಿಯರ= ಒಕ್ಕಲಗಿತ್ತೆಯರ, ಓಳಿಗಳ= ಗುಂಪಿನ, ಮೈಗಂಪ= ಶರೀರದವಾಸ-

ನೆಯನ್ನು, ಸತತ=ಅನವರತವೂ, ಕುಸುಮಿತ= ಹೂಬಿಟ್ಟ, ತರು= ವೃಕ್ಷಗಳ, ಲತಾ= ಎಳೆಬಳ್ಳಿಗಳ, ಅಳಿಗಳ= ಸಾಲುಗಳ, ಪೂಗಂಪ= ಅಲರ್ಗಂಪನ್ನು, ತಿಳಿಗೊಳದೊಳು= ಸ್ವಚ್ಛವಾದ ಉದಕವುಳ್ಳ ಕೂಪದಲ್ಲಿ, ಅಲರಿರ್ದ= ವಿಕಸಿತವಾದ, ಪೊಚ್ಚ= ನೂತನವಾದ,  ಪೊಂದಾವರೆಗಳ= ಹರಿದ್ವರ್ಣಮಾದ ಕಮಲಪುಷ್ಪಂಗಳ, ಧೂಳಿಗಳ= ಧೂಳಿನ, ತನಿಗಂಪನು= ಇಂಪಾದವಾಸನೆಯನ್ನು, ಉಂಡು= ಮೆದ್ದು, ಎದ್ದು= ನಡೆದು, ಭೃಂಗಾಳಿಗಳ= ಅಳಿವಿಂಡುಗಳ, ಬಳಗಂ= ಕುಲದವು, ಪರಿಯಲು= ತಿರುಗಾಡುತ್ತಿರಲು, ಒಡನೆ= ಕೂಡಲೆ, ಸುಳಿವ= ಚಲಿಸುವ, ತಂಗಾಳಿಗಳ= ಮಂದಮಾರುತಂಗಳ, ಕಡುಗಂಪ= ಹೆಚ್ಚಾದ ಸುವಾಸನೆಯನ್ನು,  ಸೇವಿಸುತ= ಆಘ್ರಾಣಿಸುತ್ತ, ಪಥಿಕರು= ದಾರಿಗರು, ಆಸರಗಳೆವರು= ದಾರಿನಡೆದ ಬಳಲಿಕೆಯನ್ನು ನೀಗಿಕೊಳ್ಳುತ್ತಾರೆ, 


ತಾತ್ಪರ್ಯ:- ಅದೂ ಅಲ್ಲದೆ ಆ ದೇಶದ ಎಲ್ಲಾ ಭಾಗದಲ್ಲಿಯೂ ವ್ಯಾಪ್ತವಾಗಿರುವ ಭತ್ತದ ತೆನೆಗಳ ಸುವಾಸನೆಯನ್ನೂ, ಹೊಲದ ಕಾವಲ್ಗಾತಿಯರ ದೇಹದ ಸುವಾಸನೆಯನ್ನೂ, ಎಳೆ ಬಳ್ಳಿಗಳಲ್ಲಿ ಬಿಟ್ಟಿರುವ ಪುಷ್ಪಂಗಳ ಸುಗಂಧವನ್ನೂ,ತಾವರೆ ಹೂಗಳ ಸುರಭಿಯನ್ನೂ,ಆಘ್ರಾಣಿಸಿ ಆನಂದವನ್ನು ಅನುಭವಿಸುತ್ತಿದ್ದ ಭೃಂಗಾಳಿಯೇ ತುಂಬಿರುವುದನ್ನು ನೋಡಲು ಪರಮ ಸಂತೋಷವೂ, ಮಂದಮಾರುತವು ಬೀಸುತ್ತಿದ್ದದ್ದರಿಂದ ಆನಂದಾತಿಶಯವೂ ಉಂಟಾಗಿ ಮಾರ್ಗಸ್ಥರಿಗೆ ಲೇಶವೂ ಆಯಾಸವೆಂಬುದೇ ತೋರುತ್ತಿರಲಿಲ್ಲ.


ಬಟ್ಟೆ ಬಟ್ಟೆಯೊಳೆಲ್ಲಿಯುಂ ಕುಳಿರ್ವೆಸಿದರ। 

ವಟ್ಟಿಗೆಯ ಸದನಂಗಳಿಂದೆ ಬಾಗಿಲ್ಗೆ ಪೊರ। 

ಮಟ್ಟು ಕಲಶಮನೆತ್ತಿ ನೀರೆರೆವ ಕಾಮಿನಿಯರುರುಬಾಹುಮೂಲದೆಡೆಗೆ॥ 

ದಿಟ್ಟಿ ಪರಿಸರಿದು ಮೊಗಮೊರ್ಗುಡಿಸೆ ಸರಿಸಕಳ । 

ವಟ್ಟಜಲಧಾರೆ ಪೊರಸೂಸೆ ಬಯಲಿಗೆ ಬಾಯ। 

ಬಿಟ್ಟು ನಗಿಸುವರಲ್ಲಿ ತೃಷೆಯಿಂದೆ ಬಂದ ಪಥಿಕರ್ಕಳಾ ಬಾಲೆಯರನು॥೯॥ 


ಪ್ರತಿಪದಾರ್ಥ :-ಬಟ್ಟೆ ಬಟ್ಟೆಯೊಳು= ದಾರಿ ದಾರಿಯಲ್ಲಿ,  ಎಲ್ಲಿಯುಂ= ಎಲ್ಲೆಡೆಗಳಲ್ಲಿಯೂ,ಕುಳಿರ್ವೆರಸಿದ= ತಂಪಾಗಿರುವ, ಅರವಟ್ಟಿಗೆಯ= ದಮ್ಮಣಿಯ(ಅರವಂಟಿಗೆ) ಸದನಂಗಳಿಂದ=ಗೃಹಗಳಿಂದ, ಬಾಗಿಲ್ಗೆ= ಬಾಗಿಲ ಬಳಿಗೆ,ಪೊರಮಟ್ಟು= ನಡೆದು, ಕಲಶಮನು= ಕಲಶಗಳನ್ನು,ಎತ್ತಿ= ಎತ್ತಿ ಹಿಡಿದುಕೊಂಡು,ನೀರ=ಉದಕವನ್ನು, ಎರೆವ=ಸುರಿಯುವ, ಕಾಮಿನಿಯರ= ಸ್ತ್ರೀಯರ, ಉರು= ಅಧಿಕಮಾದ, ಬಾಹುಮೂಲದ= ಭುಜದ ಸಂದುಗಳ ಅಂದರೆ ಕಂಕಳಿನ, ಎಡೆಗೆ= ಸ್ಥಾನಕ್ಕೆ, ದಿಟ್ಟಿ=ನೋಟವನ್ನು,  ವರಿವರಿದು= ಬಿಟ್ಟು ಬಿಟ್ಟು,  ಮೊಗಂ= ಮೋರೆಯು, ಓರ್ಗುಡಿಸಿ= ಅರ್ಧ ಹಿಂದುಮಾಡಿಕೊಂಡು, ಸರಿಸಕೆ= ಸಮೀಪಕ್ಕೆ, ಬಳಿವಟ್ಟ= ಬರುವ, ಜಲಧಾರೆ= ನೀರಿನ ಧಾರೆಯು, ಪೊರಸೂಸಿ= ಹೊರಗೆಬಂದು,ಬಯಲಿಗೆ= ಬರಿದಾದ ಸ್ಥಳಕ್ಕೆ,  ಬಾಯ= ಬಾಯನ್ನು, ಬಿಟ್ಟು= ತೆರೆದು, ಅಲ್ಲಿ= ಭದ್ರಾವತಿ ಪಟ್ಟಣದ ಪ್ರದೇಶದಲ್ಲಿ, ತೃಷೆಯಿಂದ= ನೀರಡಿಕೆಯಿಂದ,ಬಂದ=ಸಮೀಪಸ್ಥರಾದ, ಪಥಿಕರ್ಕಳು= ದಾರಿಗರು, ಆ ಬಾಲೆಯರನು= ಆ ಬಾಲಕಿಯರನ್ನು, ನಗಿಸುವರು= ಹಸನ್ಮುಖರಾಗಿ ಮಾಡುವರು. 


ತಾತ್ಪರ್ಯ:- ಆ ದೇಶದಲ್ಲಿ ಎಲ್ಲೆಲ್ಲಿ ನೋಡಿದರೂ ತಣ್ಣಗಿರುವ ಉದಕದಿಂದ ಕೂಡಿದ ಅರವಟ್ಟಿಗೆಗಳು ಕಾಣಬರುತ್ತಿದ್ದವು.

ನವಯೌವನವನ್ನು ತಾಳಿರುವ ಬಾಲಕಿಯರು ಕೈಗಳಲ್ಲಿ ತಂಬಿಗೆಗಳನ್ನು ಹಿಡಿದುಕೊಂಡು ಅರವಟ್ಟಿಗೆಗಳ ಬಾಗಿಲ್ಗಳಲ್ಲಿ ನಿಂತು ನೀರಡಿಕೆಯಿಂದ ಬರುವ ಮಾರ್ಗಸ್ಥರ ಮನದಣಿವಂತೆ ನೀರನ್ನು ಹುಯ್ಯುವದಕ್ಕುದ್ಯುಕ್ತರಾಗಿ ಅವರ ಚಲ್ವಿಗೆ ಮೆಚ್ಚಿ 

ಅವರಲ್ಲಿ ರತಿಕ್ರೀಡೆಯನ್ನನುಭವಿಸಬೇಕೆಂಬ ಕುತೂಹಲವುಳ್ಳವರಾದರೂ ಲಜ್ಜಾಪರವಶರಾಗಿ ಮುಖವನ್ನು ಓರೆಮಾಡಿ-

ಕೊಂಡು ನೀರೆರೆಯುತ್ತಿರಲು ಆ ಉದಕಧಾರೆಯು ಕೆಳಗೇ ಬಿದ್ದು ಹೋಗುತ್ತಲಿತ್ತು. ಇದನ್ನು ನೋಡಿದ ಪಥಿಕರ ಮನಸ್ಸನ್ನೂ ಶಾತಕುಂಭಂಗಳಿಂದಲಂಕೃತರಾಗಿರುವ ನಾರೀಮಣಿಗಳ ಮನೋಭಿಲಾಶೆಯನ್ನೂ ಬಂಣಿಸಲು ಅಸದಳವಾಗಿತ್ತು


ಸ್ವಾದು ಸ್ವಚ್ಛತೆ ಶೈತ್ಯಮಾಮೋದಮೊಂದಿ ಸೊಗ। 

ಸಾದ ಲಲಿತಾಂಗಿಯರ ಕರತಳದ ವಿಮಲ ಕಲ। 

ಶೋದಕವನೊಲಿದೀಂಟುತಿರ್ದೊಡಂ ಮನದಣಿಯದಧ್ವಗರ್ಗಾ ಹೆಂಗಳ॥ 

ಮಾದಳಿರ ಪಳಿವ ಚೆಂದುಟಿಯ ಸವಿಗೆಳನಗೆಯೊ। 

ಳಾದರಿಪ ಕಡೆಗಣ್ಣ ನಿಚ್ಚಳಕೆ ಪೀವರಪ। 

ಯೋಧರದ್ವಯವನಪ್ಪುವ ತಂಪಿಗೆಸೆವ ಮೈಗಂಪಿಂಗೆ ಬಯಸಿ ಬಯಸಿ ॥೧೦॥ 


ಪ್ರತಿಪದಾರ್ಥ:- ಸ್ವಾದ= ಮಾಧುರ್ಯವು, ಸ್ವಚ್ಛತೆ= ಪಾರಿಶುಧ್ಯವು, ಶೈತ್ಯ=ತಂಪಾಗಿರುವ, ಆಮೋದಂ= ಒಳ್ಳೆವಾಸನೆಯು, ಇವುಗಳನ್ನು, ಒಂದಿ= ತಾಳಿ, ಸೊಗಸಾದ= ಇನಿದಾಗಿರುವ, ಲಲಿತಾಂಗಿಯರ= ಸುಂದರಾಂಗಿಯರ, ಕರತಲದ= ಕೈಯಲ್ಲಿರುವ, ಅಮಲ=ಸ್ವಚ್ಛವಾದ, ಕಲಶೋದಕವನು= ಕಲಶದಲ್ಲಿನ ಜಲವನ್ನು, ಒಲಿದು=ಆಶಿಸಿ, ಈಂಟುತ= ಪಾನಮಾಡುತ್ತ, ಇರ್ದೊಡಂ= ಇದ್ದರೂ, ಅಧ್ವಗರ್ಗೆ= ದಾರಿಗರಿಗೆ, ಮನವು= ಮನಸ್ಸು, ಮಾದಳಿರ= ಚೂತವೃಕ್ಷದ ಕೆಂದಳಿರನ್ನು, ಪರಿವ= ಅಲೆಗಳೆಯುವ, ಚೆಂದುಟಿಯ= ರಕ್ತವರ್ಣದ ಅಧರದ, ಸವಿಗೆ= ಸ್ವಾರಸ್ಯಕ್ಕೆ, ಎಳೆನಗೆಯೊಳು= ಹುಸಿನಗೆಯಲ್ಲಿ,ಆದರಿಪ= ಉಪಚರಿಸುವ, ಕಂಗಡೆಯ= ಕಡೆಗಣ್ಣಿನ, ನಿಚ್ಚಳಕೆ= ಪರಿಶುದ್ಧತೆಗೆ, ಪೀವರ= ಗಾತ್ರವಾದ (ಬಲಿತ) ಪಯೋಧರದ್ವಯವನು=ಕುಚಯುಗ್ಮವನ್ನು, ಅಪ್ಪುವ= ತಬ್ಬಿಕೊಳ್ಳುವ,ತಂಪಿಗೆ= ಶೈತ್ಯಕ್ಕೆ, ಎಸೆವ= ಹೊಳೆಯುವ, ಮೈಗಂಪಿಗೆ= ದೇಹ ಸುವಾಸನೆಗೆ, ಬಯಸಿ ಬಯಸಿ = ಆಶಿಸಿ ಆಶಿಸಿ, ದಣಿಯದು= ಸಂತುಷ್ಟಿಯನ್ನೈದದು,


ತಾತ್ಪರ್ಯ  ಮಾರ್ಗಸ್ಥರು ಅರವಟ್ಟಿಗೆಗಳ ಬಳಿಗೆ ಬಂದು ಆ ಕೋಮಲಾಂಗಿಯರು ತಮ್ಮ ಕೈಗಳಲ್ಲಿರುವ ರುಚಿಯಾಗಿಯೂ ನಿರ್ಮಲವಾಗಿಯೂ ತಣ್ಣಗೂ ಸುವಾಸನೆಯುಳ್ಳದ್ದಾಗಿಯೂ ಇರುವ ನೀರನ್ನೊಳಕೊಂಡಿರುವ ಕಲಶಂಗಳಿಂದೆರೆದ ಉದಕ ಮಾತ್ರದಿಂದಲೇ ತೃಪ್ತಿಪಡದೆ ಆ ನಾರೀಮಣಿಗಳ ರಕ್ತ ವರ್ಣದ ಅಧರಾಮೃತದ ರುಚಿಯನ್ನೂ, ಮುಗುಳ್ನಗೆಯಿಂದ ಕೂಡಿದ ಅವರ ನೋಟವನ್ನೂ, ಅವರ ಕುಚಾಲಿಂಗನದಿಂದೊಗೆವ ತಂಪನ್ನೂ, ಅವರ ಮೈಗಂಪನ್ನೂ ಅನುಭವಿಸಿ ತೃಪ್ತಿಪಡಬೇ-

ಕೆಂದು ಹಾರೈಸುತ್ತಿದ್ದರು. 


ತಳಿರೆಡೆಯೊಳಿರ್ದ ಮಾವಿನ ತೋರ ತನಿವಣ್ಣ । 

ಗಿಳಿ ಕರ್ದುಂಕಿದೊಡೆ ರಸಮೊಸರಿ ಸೋರ್ವಂತೆ ಹೆಂ। 

ಗಳ ಕರತಳದ ಪೊಂಗಳಸದ ಜುಳಿಗೆಯೊಳಿಟ್ಟ ಬೆರಲಂ ತೆಗೆದು ಬಿಡಲ್ಕೆ॥ 

ಲಲಿತ ಚಂಪಕ ತನುಚ್ಛಾಯೆಯಿಂ ಕೆಂಪಿಡಿದ। 

ಜಳಧಾರೆ ಕಂಗೊಳಿಸುತಿರ್ಪುದಧ್ವಶ್ರಮಂ। 

ಗಳನಾಂತು ಬಂದ ಪಥಿಕರ್ಕಳೀಂಟುವ ಸಮಯದೊಳ್ ಪ್ರಪಾಶಾಲೆಗಳೊಳು॥೧೧॥ 


ತಳಿರ= ಪಲ್ಲವಂಗಳ, ಎಡೆಯೊಳು= ಹತ್ತಿರದಲ್ಲಿ, ಇರ್ವ=ಇರತಕ್ಕ, ಮಾವಿನ= ಚೂತವೃಕ್ಷದ, ತೋರ=ಗಾತ್ರಮಾದ, ತನಿವಣ್ಣ = ಮಾಗಿದ ಹಣ್ಣನ್ನು, ಗಿಳಿ=ಗಿಳಿಯು, ಕರ್ದುಂಕಿದೊಡೆ= ಕಡಿಯಲಾಗಿ, ರಸಂ= ಸಾರವು, ಒಸರಿ=ಜಿನುಗಿ, ಸೋರ್ವಂತೆ= ದ್ರವಿಸುವಹಾಗೆ, ಹೆಂಗಳ= ಸ್ತ್ರೀಯರ, ಕರತಳದ= ಕೈಯಲ್ಲಿರುವ, ಪೊಂಗಳಸದ= ಚಿನ್ನದ ಕಲಶಂಗಳುಳ್ಳ, ಅಂಜಳಿಯೊಳು= ಬೊಗಸೆಗಳಲ್ಲಿ, ಇಟ್ಟು=ಇಟ್ಟಂಥ, ಬೆರಳಂ= ಅಂಗುಳಿಯನ್ನು,ತೆಗೆದು= ಈಚೆಗೆ ತೆಗೆದುಬಿಟ್ಟು, ಬಿಡಲ್ಕೆ= ಜಲವನ್ನೆರೆಯುತ್ತಿರಲಾಗಿ,ಲಲಿತ= ಅತಿ ಮೃದುವಾದ, ತನು=ದೇಹದ, ಛಾಯೆಯಂ= ನೆಳಲಿನಿಂದ, ಕೆಂಪಿಡಿದ= ರಕ್ತವರ್ಣವಂತಾಳ್ದ, ಜಲಧಾರೆ= ನೀರಿನ ಧಾರೆಯು, ಅಧ್ವಶ್ರಮಂಗಳನು= ದಾರಿಯ ಬಳಲಿಕೆಯನ್ನು, ಆಂತು=ತಾಳಿ, ಬಂದ= ಐತಂದ, ಪಥಿಕರ್ಕಳು= ದಾರಿಗರು, ಈಂಟುವ= ಪಾನಮಾಡುವ, ಸಮಯದೊಳು= ಕಾಲದಲ್ಲಿ, ಪ್ರಪಾಶಾಲೆಗಳೊಳು= ಧರ್ಮ ಪಾನೀಯಶಾಲೆಗಳಲ್ಲಿ, ಕಂಗೊಳಿಸುತಿರ್ಪುದು= ಥಳಥಳಿಸುತ್ತಿಲಿರುವುದು. 


ತಾತ್ಪರ್ಯ :- ಆ ಧರ್ಮಪಾನೀಯಶಾಲೆಗಳಲ್ಲಿ ನೀರನ್ನು ಕೊಟ್ಟು ಬಾಯಾರಿಕೆಯನ್ನು ನೀಗಿಸುವ ಕೋಮಲಾಂಗಿಯರ

ಕೈಯುಮಾವಿನ ಎಳೆಚಿಗುರನ್ನು ಅಲ್ಲಗಳೆಯುವಂತೆ ಕೆಂಪಾಗಿದ್ದವು. ರಕ್ತವರ್ಣದ ಚಿಗುರುಗಳ ಮಧ್ಯದಲ್ಲಿರುವ ಮಾವಿನ ಹಣ್ಣನ್ನು ಗಿಳಿಗಳು ಬಂದು ಕಡಿಯಲು ಅದರ ರಸವು ಒಸರುತ್ತ ಕೆಂಪಗೆ ಕಾಣುತ್ತಿರುವುದೊ ಎಂಬಂತೆ ಆ ನಾರಿಯರು ತಮ್ಮ ಕೈಬೆರಳುಗಳಿಂದ ಸುರಿಸುತ್ತಿರುವ ಉದಕ ಧಾರೆಯು ಭ್ರಾಂತಿಯನ್ನುಂಟುಮಾಡುತ್ತಲೂ,


ಲಲಿತ ಕರತಳದೊಳ್ ಪಿಡಿದ ಚಂದ್ರಕಾಂತಕೃತ। 

ಕಲಸಮಾಸ್ಯೇಂದುಮಂಡಲರುಚಿಗೊಹರ್ವ ನಿ। 

ರ್ಮಲ ಜಲಮಿದೆಂಬಂದದಿಂದೆ ಸೊಗಯಿಪ ಶೀತಾಂಬುಧಾರೆಯನೀಂಟುತೆ॥ 

ಲಲನೆಯರ ಕೋಮಲಾವಯವ ಲಾವಣ್ಯಮಂ। 

ಸಲೆಕಂಡು ಮೆಚ್ಚಿ ಮನಮುಳುಗಿದಾನಂದದಿಂ। 

ತಲೆದೂಗುವರ್ ಪಥಿಕರಾನೀರ್ಗೆ ತಣಿವ ನೆವದಿಂದಮಾ ಜನಪದದೊಳು॥೧೨॥ 


ಪ್ರತಿಪದಾರ್ಥ:-ಲಲಿತ= ಮೃದುವಾದ, ಕರತಳದೊಳ್= ಅಂಗೈಯಲ್ಲಿ, ಪಿಡಿದ= ಹಿಡಿದುಕೊಂಡಿರುವ, ಚಂದ್ರಕಾಂತ = ಇಂದು ಕಾಂತವೆಂಬ ಕಲ್ಲಿನಿಂದ, ಕೃತ=ರಚಿಸಿರುವ, ಕಲಶಂ=ಕಲಶವು, ಆಸ್ಯ= ವದನವೆಂಬ, ಇಂದುಮಂಡಲ= ಚಂದ್ರಬಿಂಬದ,ರುಚಿಗೆ= ಪ್ರಕಾಶಕ್ಕೆ,ಒಸರ್ವ= ಸ್ರವಿಸುವ, ನಿರ್ಮಲ= ಪರಿಶುದ್ಧವಾದ, ಜಲಂ=ನೀರು, ಇದು ಎಂಬಂದದಿಂ = ಇದು ಎಂಬತೆರನಾಗಿ, ಸೊಗಯಿಸುವ= ಇನಿದಾಗಿರುವ, ಶೀತಾಂಬುಧಾರೆಯನು= ತಂಣೀರಿನಧಾರೆಯನ್ನು, ಈಂಟುತ= ಪಾನಮಾಡುತ್ತ, ಲಲನೆಯರ= ಸ್ತ್ರೀಯರ, ಕೋಮಲ= ಮೆತ್ತನಾದ,ಅವಯವ=ಶರೀರದ, ಲಾವಣ್ಯವಂ= ಸೊಗಸನ್ನು ಸಲೆ= ಚೆನ್ನಾಗಿ,  ಕಂಡು= ದೃಷ್ಟಿಸಿ, ಮೆಚ್ಚಿ =ಒಪ್ಪಿಕೊಂಡು, ಮನ=ಮನಸ್ಸು, ಮುಳುಗಿದ= ಮಗ್ನವಾಗಿರುವ, ಆನಂದದಿಂ= ಆಹ್ಲಾದದಿಂದ, ಆ ನೀರ್ಗೆ= ಆ ಉದಕಕ್ಕೆ, ದಣಿವ= ಸಂತುಷ್ಟಿಯಾಯಿತೆಂಬ, ನೆಲದಿಂದ= ಕಾರಣದಿಂದ, ಪಥಿಕರು= ಮಾರ್ಗಸ್ಥರು, ಆ ಜನಪದದೊಳು= ಆ ನಾಡಿನಲ್ಲಿ,  ತಲೆದೂಗುವರ್= ಸಂತೋಷಪಡುವರು. 


ತಾತ್ಪರ್ಯ :- ಅವರ ಕೈಗಳಲ್ಲಿರುವ ಕಲಶಂಗಳು ಚಂದ್ರಕಾಂತ ಶಿಲೆಯಿಂದ ಮಾಡಲ್ಪಟ್ಟವಾದ್ದರಿಂದಲೇ ಆ ನಾರೀಮಣಿಗಳ ಮುಖವೆಂಬ ಚಂದ್ರನ ಮರೀಚಿಕೆಯು ಕರಗಿ ತಂಪಾದ ನೀರಾಗಿ ಹೋಗಿರುವಂತೆಯೂ ತೋರುತ್ತಿತ್ತು. ಇಂತಹ ಅತಿ ಸ್ವಚ್ಛವಾಗಿಯೂ ಪರಿಶುದ್ಧವಾಗಿಯೂ ಇರೈವ ನೀರನ್ನು ಮಾರ್ಗಸ್ಥರು ಪಾನಮಾಡಿ ಸಂತೋಷಪಡುತ್ತಲೂ ಆ ಸ್ತ್ರೀಯರ ಸೌಂದರ್ಯಾತಿಶಯವಂ ಕಂಡು ಹಿಗ್ಗುತ್ತಲೂಇದ್ದರು. 


ಏಂ ತಾಳ್ದುದೋ ಚೆಲ್ವನೀದೇಶಮೆಂದು ನಲ। 

ವಾಂತು ಮುಂದಳೆಯುತಿರೆ ಕಂಡರವರಾ ಪುರ। 

ಪ್ರಾಂತದೊಳ್ ಸನ್ನೆಗೈದಿನಿಯರಂ ಬರಿಸಿ ನವರತಿಕಲಾಪ್ರೌಢಿಯಿಂದೆ॥ 

ಸ್ವಾಂತಸುಖಮಂ ಪಡೆವ ಪೌರನಾರಿಯರ ವಿ। 

ಶ್ರಾಂತಿಗಮರಿದ ರನ್ನವಾಸರೆಗಳಿಂದೆ ಶಶಿ। 

ಕಾಂತಶಿಲೆಗಳ ಕಂದರಂಗಳಿಂದತಿಮನೋಹರಮಾದ ಗಿರಿಯೊಂದನು॥೧೩॥ 


ಈ ದೇಶಂ= ಈ ನಾಡು, ಚೆಲ್ವಂ= ಸೌಂದರ್ಯವನ್ನು, ಏಂ ತಾಳ್ದುದೋ= ಹೇಗೆ ತಾಳಿತೋ,ಎಂದು=ಎಂಬುದಾಗಿ, ನಲವಾಂತು= ಆನಂದವನ್ನು ತಾಳಿ, ಮುಂತೆ=ಮುಂಭಾಗದಲ್ಲಿ, ಅಳೆವುತಿರೆ= ಹೊರಡುತ್ತಿರಲು, ಅವರು=ಆ ವೃಕೋದರ, ವೃಷಧ್ವಜ,ಮೇಘನಾದರು, ಆ ಪುರಪ್ರಾಂತದೊಳು= ಆ ಭದ್ರಾವತೀಯೆಡೆಯಲ್ಲಿ, ಸನ್ನೆಗೈದು= ಸೈಗೆಯನ್ನು ಮಾಡಿ, ಇನಿಯರಂ= ವಿಟಪುರುಷರನ್ನು, ಬರಿಸಿ= ಸಮೀಪಸ್ಥರನ್ನಾಗಿ ಮಾಡಿಕೊಂಡು, ನವ= ಹೊಸದಾದ, ರತಿಕಲಾ= ಮದನಕಲೆಯ, ಪ್ರೌಢಿಯಿಂದ= ಚಾತುರ್ಯದಿಂದ, ಸ್ವಾಂತಸುಖಮಂ= ಹೃದಯಾಹ್ಲಾದವನ್ನು, ಪಡೆವ= ತಾಳುವ, ಪೌರ= ನಗರದ, ನಾರಿಯರ= ಸ್ತ್ರೀಯರ, ವಿಶ್ರಾಂತಿಗೆ= ಆಯಾಸವನ್ನು ನೀಗುವುದಕ್ಕೆ, ಅಮರಿದ= ಅನುಕೂಲ್ಯಮಂ ಪಡೆದ, ರನ್ನ=ಮಣಿಖಚಿತಮಾದ, ವಾಸರಂಗಳಿಂದ= ಶಿಲಾಪರ್ಯಂಕಗಳಿಂದ, ಶಶಿಕಾಂತ= ಇಂದುಕಾಂತದ, ಶಿಲೆಗಳ=ಕಲ್ಲುಗಳ, ಕಂದರಂಗಳಿಂದ= ಗವಿಗಳಿಂದಲೂ, ಅತಿಮನೋಹರಮಾದ= ಬಹುವಾಗಿ ಮನವನ್ನು ರಂಜಿಸುವಂತಹ, ಗಿರಿಯೊಂದನು= ಒಂದಾನೊಂದು ಬೆಟ್ಟವನ್ನು, ಕಂಡರು= ಮುಂಗಡೆಯಲ್ಲಿ ನೋಡಿದರು.



ತಾತ್ಪರ್ಯ = ಇವುಗಳನ್ನೆಲ್ಲಾ ನೋಡಿ ನೋಡಿ ಆಹಾ! ಈ ದೇಶವು ಎಷ್ಟು ಚನ್ನಾಗಿದೆ ಎಂಬುದಾಗಿ ಅತ್ಯಾಶ್ಟರ್ಯ ಪಡುತ್ತಾ ಭೀಮ, ವೃಷಕೇತು, ಮೇಘನಾದರು ಮತ್ತೆ ಸ್ವಲ್ಪ ದೂರ ಮುಂದೆ ನಡೆಯಲು, ಆ ಭದ್ರಾವತೀನಗರ ಪ್ರಾಂತದಲ್ಲಿ ಒಂದಾನೊಂದು ಪರ್ವತವು ಕಾಣಬಂದಿತು. ಆ ಗಿರಿಯು ಆ ನಾಡಿನ ಪೌರನಾರಿಯರು ವಿಟರನ್ನು ಬರಮಾಡಿಕೊಂಡು ರತಿಕ್ರೀಡಾ ಸರಸಸಲ್ಲಾಪಗಳ ಸುಖಗಳನ್ನನುಭವಿಸಲು ಯೋಗ್ಯಮಾದ ಮಣಿಖಚಿತವಾಗಿರುವ ಪರ್ಯಂಕಗಳಿಂದಲೂ, ಚಂದ್ರಕಾಂತಶಿಲೆಗಳ ಗುಹೆಗಳಿಂದಲೂ ತುಂಬಿ ನೋಟಕರಿಗೆ ಬಹು ರಮಣೀಯವಾಗಿ ಕಾಣುತ್ತಿತ್ತು.


ಆ ಗಿರೆಯ ಮಸ್ತಕವನಡರಲ್ಕದರ ಪೂರ್ವ। 

ಭಾಗದೊಳ್ ಮೆರೆವ ಭದ್ರಾವತಿಯ ಸಿರಿಗೆ ತಲೆ। 

ದೂಗುತೆ ವೃಕೋದರಂ ನುಡಿದನೆಲೆ ವೃಷಕೇತು ನೋಡಿದೈ ಕೌತುಕವನು॥ 

ಈಗಳೀ ನಗರಂ ಮಹೀಲಲನೆಗಾಸ್ಯಾಬ್ಜ। 

ಮಾಗಿರ್ಪುದೆತ್ತಲುಂ ಗಗನದೆಡೆಗೇಳ್ವ ಬಹು। 

ಯಾಗಧೂಮಂಗಳೆಂಬಾಲೋಲನೀಲಾಳಕಾವಳಿಯ ಚೆಲ್ವಿನಿಂದೆ॥೧೪॥ 


ಪ್ರತಿಪದಾರ್ಥ:- ಆ ಗಿರಿಯ= ಆ ಪರ್ವತದ, ಮಸ್ತಕವನು= ತುದಿಯನ್ನು, ಅಡರಲ್ಕೆ= ಏರಲು, ಅದರ= ಆ ಪರ್ವತದ, ಪೂರ್ವಭಾಗದೊಳು= ಪೂರ್ವದಿಕ್ಕಿನಲ್ಲಿ, ಮೆರೆವ= ಹೊಳೆಯುತ್ತಿರುವ, ಭದ್ರಾವತಿಯು=ಭದ್ರಾವತೀನಗರದ,ಸಿರಿಗೆ= ಐಶ್ವರ್ಯಕ್ಕೆ,ತಲೆದೂಗುತ್ತ= ಮೆಚ್ಚಿಕೊಳ್ಳುತ್ತ, ವೃಕೋದರನು= ವಾಯುಸುತನಾದ ಭೀಮಸೇನನು, ಎಲೆ ವೃಷಕೇತು= ಅಯ್ಯಾ ವೃಷಧ್ವಜನೇ ! ಈ ಕೌತುಕವನು=ಈ ಅಚ್ಚರಿಯನ್ನು, ನೋಡಿದೈ= ಈಕ್ಷಿಸಿದೆಯಾ,ಈಗಳು= ಈಗ, ನಗರಂ= ಭದ್ರಾವತೀನಗರವು,ಎತ್ತಲುಂ= ಎಲ್ಲೆಡೆಗಳಲ್ಲಿಯೂ, ಗಗನದ= ಅಂತರಿಕ್ಷದ, ಎಡೆಗೆ= ಸಮೀಪಕ್ಕೆ, ಏಳ್ವ= ಎದ್ದು ಬರುವ, ಬಹು=ಅನೇಕವಾದ, ಯಾಗಧೂಮಂಗಳು= ಯಜ್ಞ ನಿಮಿತ್ತವಾದ ಧೂಮ್ರವು, ಎಂಬುವ=ಎಂದು ಹೇಳುವ, ಆಲೋಲ= ಸುಳಿದಾಡುತ್ತಿರುವ, ನೀಲ=ಕರ್ರಗಿರುವ,ಅಲಕಾವಳಿಯ= ಮುಂಗುರುಳಿನ ಸಾಲಿನ,ಚೆಲ್ವಿನಿಂದ=ಸೊಗಸಿನಿಂದ, ಮಹೀಲಲನೆಗೆ= ಧರೆ ಎಂಬ ನಾರೀಮಣಿಗೆ, ಆಸ್ಯಾಬ್ಜಂ= ವದನಾರವಿಂದವು, ಆಗಿರ್ಪುದು= ಆಗಿರುತ್ತದೆ. 


ತಾತ್ಪರ್ಯ :- ಈ ಪರ್ವತದ ಸೌಂದರ್ಯಾತಿಶಯವನ್ನು ನೋಡಿ ಸಂತಸಂತಾಳ್ದು ಅನಂತರದಲ್ಲಿ ಆ ಭೀಮ, ವೃಷಧ್ವಜ, ಮೇಘನಾದರು ಮೂವರೂ ಅದರ ಶಿಖರವನ್ನೇರಿದರು. ತರುವಾಯ ಆ ಪರ್ವತದ ಪೂರ್ವ ದಿಗ್ಭಾಗದಲ್ಲಿ ನೋಡಲಾಗಿ ಅಲ್ಲಿ ಯೌವನಾಶ್ವನಿಂದಾಳಲ್ಪಡುತ್ತಿರುವ ಭದ್ರಾವತೀನಗರಿಯು ಕಂಡಿತು. ಆಗ ಭೀಮಸೇನನು ಈ ಪುರದ ಸೌಂದರ್ಯವನ್ನು ನೋಡಿ ಆಶ್ಚರ್ಯಪಡುತ್ತ ಕರ್ಣಸುತನಾದ ವೃಷಧ್ವಜನನ್ನು ಕುರಿತು, ಎಲೈ ವೃಷಕೇತುವೇ ? ಈ ಪಟ್ಟಣದ ಸೌಂದರ್ಯವನ್ನು ನೋಡಿದೆಯಾ ! ಈ ಪುರಿಯು ಭೂಮಿಯೆಂಬ ಹೆಂಗಸಿನ ಮುಖಕಮಲವಾಗಿ ಮೇಲಕ್ಕೇಳುವ ಯಜ್ಞ ಸಂಬಂಧವಾದ ಧೂಮ್ರವೆಂಬ ಮುಂಗುರುಳಿನಿಂದ ಕೂಡಿ ಎಷ್ಟು ಸುಂದರವಾಗಿದೆ ನೋಡು. 


ಎನಿಸು ಜನಮಿರೂದೊಡಂ ತ್ರಿದಶಜನಕಾವಾಸ। 

ಮೆನಿಪುದಮರಾವತೀಪತ್ತನಂ ಮೂಜಗದೊ। 

ಳೆನಿಸು ಜಸವಡೆದೊಡಂ ಗುಹ್ಯಕಾಸ್ಪದಮೆನಿಪುದಳಕಾಪುರಂ ತಿಳಿವೊಡೆ॥ 

ಎನಿಸುಜನಮಿರಲೆನಿಸುಜಸವಡೆಯಲದರಿಂದೆ । 

ತನಗಿನಿಸು ಕುಂದಿಲ್ಲಮೆಂಬ ಪೆಂಪಿಂದೆ ಪುರ। 

 ವನಿತೆ ಗಹಗಹಿಸಿ ನಗುವಂತೆಸೆವ ಸೌಧಂಗಳ ಮೌರೀಚಿ ನೋಡೆಂದನು॥೧೫॥


ಪ್ರತಿಪದಾರ್ಥ:- ಅಮರಾವತೀಪಟ್ಟಣಂ= ಅಮರಾವತಿಯೆಂಬ ದೇವೇಂದ್ರನ ರಾಜಧಾನಿಯು, ಔನಿಸುಜನಂ= ಎಷ್ಟುಮಂದಿಯು, ಇರ್ದೊಡಂ= ಇದ್ದಾಗ್ಯೂಕೂಡ, ತ್ರಿದಶಜನಕೆ= ದೇವತೆಗಳಿಗೆ(ಹದಿಮೂರು) ಜನರಿಗೆ, ಆವಾಸ= ನೆಲೆಯಾದ, ಮೂಜಗದೊಳು= ತ್ರಿಲೋಕಂಗಳಲ್ಲಿಯೂ, ಅಳಕಾಪುರಂ= ಧನಪತಿಯಾದ ಕುಬೇರನಗರವೂ, ಎನಿಸು= ಎಷ್ಟು. ಜಸವಡೆದೊಡಂ= ಯಶ್ಸ್ಸನ್ನೊಂದಿದರೂ,ಗುಹ್ಯಕೆ= ಹೆಸರುವಾಸಿಗ( ಯಕ್ಷರೆಂಬವರಿಗೆ) ಆಸ್ಪದಂ=ಇಲ್ಲದ್ದಾಗಿದೆ, ಮತ್ತು ಆಸರೆಯಾಗಿದೆ, ತಿಳಿವೊಡೆ= ಯೋಚಿಸಿದರೆ, ಎನಿಸುಜನಂ= ಎಷ್ಟುಮಂದಿಯು, ಇರಲು=ಇದ್ದರೂ, ಎನಿಸು= ಎಷ್ಟು ಮಾತ್ರದ, ಜಸವೊಡೆಯಲು=ಯಶಸ್ಸನ್ನೈದಿದರೂ, ಗುಹ್ಯಕಾಸ್ಪದವೆಂಬ ನಾಮಧೇಯವು ಹೋಗಲಿಲ್ಲ. ಅದರಿಂದ= ಆದ ಕಾರಣ, ತನಿಗೆ= ನನಿಗೆ, ಇನಿಸು= ಸ್ವಲ್ಪವಾದರೂ, ಕುಂದು= ಭಾದಕವು, ಇಲ್ಲಂ=ಇರುವುದಿಲ್ಲ, ಎಂಬ = ಎನ್ನತಕ್ಕ, ಪೆಂಪಿಂದಂ= ಅಭಿವೃದ್ಧಿಯಿಂದ,ಪುರವನಿತೆ= ಭದ್ರಾವತಿಯೆಂಬ ನಗರಿಯು, ಗಹಗಹಿಸಿ ನಗುವಂತೆ= ಗೇಲಿಗೆಬ್ಬಿಸಿ ನಗುವಹಾಗೆ, ಎಸೆವ= ಹೊಳೆಯುವ, ಸೌಧಂಗಳ= ಮಹಡಿಗಳ, ಮರೀಚಿ= ಹೊಳಪನ್ನು, ನೋಡು= ಈಕ್ಷಿಸು, ಎಂದನು=

ಎಂಬುದಾಗಿ ಹೇಳಿದನು. 


ತಾತ್ಪರ್ಯ = ದೇವೇಂದ್ರನ ರಾಜಧಾನಿಯಾದ ಅಮರಾವತೀ ಪಟ್ಟಣದಲ್ಲಿ ಎಷ್ಟು ಜನವಿದ್ದರೂ ಕೂಡ, ಅದು ಸುರರಿಗೆ ಆಸರೆಯಾದ್ದೆಂದೂ, ಕುಬೇರನ ಅಳಕಾಪಟ್ಟಣವು ಎಷ್ಟು ಧನವಿದ್ದು ಪ್ರಸಿದ್ಧವಾಗಿದ್ದರೂ ಯಕ್ಷರಿಗೆ ಆಶ್ರಯವಾಗಿದೆ ಎಂದೂ ಈ ನಮ್ಮ ಪಟ್ಟಣದಲ್ಲಿ ಎಷ್ಟು ಪ್ರಜೆಗಳಿದ್ದರೂ ಎಷ್ಟು ಐಶ್ವರೂಯವಿದ್ದರೂಕೂಡಮತ್ಯಾರಿಗೂ ಆಶ್ರಯವಾದದ್ದು ಎಂದೆಂದಿಗೂ ಆಗುವುದಿಲ್ಲವೆಂಬ ಹೆಮ್ಮೆಯಿಂದ ಈ ಪುರವೆಂಬ ಸ್ತ್ರೀಯು ಅಮರಾವತೀ ಮತ್ತು ಅಳಕಾಪಟ್ಟಣಗಳನ್ನು ನೋಡಿ ಕೇಕೆ ಹಾಕಿಕೊಂಡು ಹಾಸ್ಯಮಾಡಿ ನಗುವಂತಿರ್ಪ ಎತ್ತರವಾದ ಉಪ್ಪರಿಗಿಗಳಿಂದ ಮೆರೆಯುವುದನ್ನು ನೋಡಿದೆಯಾ ? 


ಶ್ವೇತಾದ್ರಿಯಶಿಖರದೊಳ್ ಕಂಗೊಳಿಸುವುಜ್ಜ್ವಲ। 

ಜ್ಯೋತಿರ್ಲತೆಯೊ ಮೇಣು ಸಲ್ಲಲಿತ ಶುಭ್ರ ಜೀ। 

ಮೂತದೊಡ್ಡಿನ ಮೇಲೆ ಪೊಳೆವ ಸೌದಾಮಿನಿಯೊ ಶಿವನ ಮಸ್ತಕದೊಳೆಸೆವ॥ 

ಶೀತಾಂಶುರೇಖೆಯೋ ಬಗೆವೊಡೀನಗರದ ವಿ। 

ನೂತನ ಪ್ರಾಸಾದದಗ್ರದೊಳ್ ಸುಳಿವಂಬು। 

ಜಾತನಯನೆಯರ ತನುವಲ್ಲರಿಯ ಕಾಂತಿಯೋ ಕರ್ಣಸುತ ನೋಡೆಂದನು॥೧೬॥ 


ಪ್ರತಿಪದಾರ್ಥ:- ಶ್ವೇತಾದ್ರಿ= ಈಶ್ವರನಿಗೆ ನೆಲೆಯಾದ ಕೈಲಾಸಗಿರಿಯ, ಶಿಖರೊಳ್= ತುದಿಯಲ್ಲಿ,  ಕಂಗೊಳಿಸುವ=ಥಳಥಳಿ-

ಸುತ್ತಿರುವ, ಉಜ್ವಲ = ಬೆಳಗುತ್ತಿರುವ, ಜ್ಯೊತಿರ್ಲತೆಯೊ= ಕಾಂತಿವಿಶಿಷ್ಟವಾದ ಬಳ್ಳಿಯೊ, ಮೇಣ್= ಅದೂ ಅಲ್ಲದೆ, ಸಲ್ಲಲಿತ= ಅತಿಮನೋಹರವಾದ, ಜೀಮೂತದ= ಮೋಡಗಳ, ಒಡ್ಡಿನ= ಗುಂಪಿನ. ಮೇಲೆ= ಮೇಲ್ಗಡೆಯಲ್ಲಿ, ಪೊಳೆವ= ಥಳಥಳಿಸುವ, ಸೌದಾಮಿನಿಯೊ= ವಿದ್ಯುತ್ತೊ, ಶಿವನ= ಹರನ, ಮಸ್ತಕದೊಳ್=ಶೀರ್ಷದಲ್ಲಿ, ಎಸೆವ= ಹೊಳೆಯುತ್ತಿರುವ, ಶೀತಾಂಶುರೇಖೆಯೊ= ಇಂದುಲೇಖೆಯೊ, ಬಗೆವೊಡೆ= ಆಲೋಚಿಸಿದರೆ, ಈ ನಗರದ= ಈ ಪುರದ, ವಿನೂತನ= ನವೀನವಾದ, ಪ್ರಾಸಾದದ= ಮಹಡಿಗಳ, ಅಗ್ರದೊಳ್= ತುದಿಯಲ್ಲಿ, ಸುಳಿವ=ತಿರುಗಾಡುವ,ಅಂಬುಜಾತನಯನೆಯರ= 

ಪದ್ಮಪತ್ರಾಕ್ಷಿಯರ, ತನು=ಶರೀರವೆಂಬ, ವಲ್ಲರಿಯ= ಲತೆಯ, ಕಾಂತಿಯೊ= ಹೊಳಪೊ, ಕರ್ಣಸುತ= ಎಲೈ ಕರ್ಣತನುಜನಾದ ವೃಷಧ್ವಜನೆ, ನೋಡು=ಈಕ್ಷಿಸು. 


ತಾತ್ಪರ್ಯ:- ಈ ಪಟ್ಟಣವು ಕೈಲಾಸಪರ್ವತದಲ್ಲಿ ಥಳಥಳನೆ ಹೊಳೆಯುತ್ತಿರುವ ತೇಜಸ್ಸೆಂಬ ಬಳ್ಳಿಯೋ ಎಂಬಂತೆಯೂ, ಮೇಘಮಂಡಲದಲ್ಲಿ ಹೊಳೆಯುತ್ತಿರುವ ಮಿಂಚೆಂಬಂತೆಯೂ, ಈಶ್ವರನ ತಲೆಗೆ ಭೂಷಣವಾದ ಚಂದ್ರರೇಖೆಯೆಂಬಹಾ- 

ಗೂ, ಮತ್ತು ಈ ಪುರದ ಉಪ್ಪರಿಗೆಗಳ ಮೇಲ್ಗಡೆಯಲ್ಲಿ ಸಂಚರಿಸತಕ್ಕ ಕಮಲಮುಖಿಯರ ದೇಹಕಾಂತಿಯೋ ಎಂಬಂತೆಯೂ, ಎಂಥಾ ತೇಜೋವಿಶಿಷ್ಟಮಾಗಿದೆ.


ನಳನಳಿಪ ತರುಣತೆಯ ಸೊಂಪುವೆತ್ತರುಣತೆಯ । 

ತಳಿರಿಡಿದ ತೋರಣದ ಚೆಲ್ವನಾಂತೋರಣದ । 

ತೊಳಪ ಕಳಸದ ಗುಡಿಯ ಸಾಲ್ದಳೆದ ಕನ್ನಡಿಯ ಸೆಳೆಯ ಸೀಗುರಿ ಚಮರಿಯ॥ 

ಚಲಿತ ಲೀಲಾಸ್ಯದ ಪತಾಕೆಗಳ ಲಾಸ್ಯದ ಪ। 

ವಳದ ಮುತ್ತುಗಳ ಗೊಂಚಲ್ಗಳೊತ್ತುಗಳ ಗೊಂ। 

ದಳದ ಬಗೆ ಕಂಗಳಿಂಬಿಗೆ ಕೌತುಕಂಗಳಿಂ ಬೀದಿಗಳೊಳೆಸೆದಿರ್ಪುವು॥೧೭॥ 


ಪ್ರತಿಪದಾರ್ಥ :- ನಳನಳಿಪ= ಹೊಳೆಯುವ,  ತರುಣತೆಯ=ಯೌವನದ, ಸೊಂಪುವೆತ್ತ= ಮನೋಹರವಾಗಿರುವ, ಅರುಣತೆಯ= ರಕ್ತವರ್ಣವುಳ್ಳ,ತಳಿರು=ಪಲ್ಲವಗಳಿಂದ, ಇಡಿದ=ತುಂಬಿದ, ತೋರಣದ= ಬೀದಿಬಾಗಿಲಲ್ಲಿ ಕಟ್ಟಿರುವ ತೋರಣದ, ತೊಳಪ= ಹೊಳೆಯುತ್ತಿರುವ, ಕಲಶದ= ಕಲಶವುಳ್ಳ, ಗುಡಿಯ= ಮಂಟಪಗಳ ಎಂದರೆ ಸಣ್ಣ ಮನೆಗಳ, ಸಾಲ್ದಳೆದ= ಹಂತಿಯಾಗಿರುವ, ಕನ್ನಡಿಯ=ದರ್ಪಣದ, ಸಾಲ=ಸಾಲಿನ, ಸೀಗುರಿ= ರವಿಯ ಮತ್ತು ಇಂದುವಿನ ಪಾನಸಂಬಂಧವನ್ನೈದಿದ( ಸೂರೆಪಾನ) ಚಮರಿಯ=ಚಮರಿಯ, ಚಲಿತ=ಅಲ್ಲಾಡುತ್ತಿರುವ, ಲೀಲಾ= ಮನೋಹರವಾದ,  ಆಸ್ಯದ= ಮೋರೆಯುಳ್ಳ, ಪತಾಕೆಗಳ= ಬಾವಟಗಳ, ಲಾಸ್ಯದ= ನರ್ತನೆಯ, ಪವಳ= ಪ್ರವಾಳಂಗಳ, ಮುತ್ತುಗಳ= ಮುತ್ತಿನ ಮಣಿಗಳ, ಗೊಂಚಲುಗಳು= ಗುಚ್ಛಗಳು, ಒತ್ತುಗಳಲಿ= ದಟ್ಟವಾಗಿ ವ್ಯಾಪಿಸಿ, ಗೊಂದಳದ= ಜನಗಳ ಗುಂಪಿನ, ಬಗೆ=ತೆರನಾಗಿ, ಕಂಗಳ=ನಯನಂಗಳ, ಇಂಬಿಗೆ= ಮನೋಹರತ್ವಕ್ಕೆ, ಕೌತುಕಂಗಳಿಂ= ಅಚ್ಚರಿಗಳಿಂದ, ಬೀದಿಗಳೊಳು= ರಾಜಬೀದಿಗಳಲ್ಲಿ, ಎಸೆದಿರ್ಪವು= ಥಳಥಳಿಸುತ್ತಲಿರ್ಪವು. 


ಅಧಿಕ. ವಿಷಯ:- ಈ ಪಟ್ಟಣವು ಬಹು ಭಾಗ್ಯವುಳ್ಳದ್ದೆಂದು ತೋರ್ಪಡಿಸಲು ಈ ರೀತಿ ಹೇಳಿದೆಯಾದ್ದರಿಂದ ಇದನ್ನು ಅತಿಶಯೋಕ್ತ್ಯಲಂಕಾರವೆಂಬುದಾಗಿ ತಿಳಿಯಬೇಕು.


ತಾತ್ಪರ್ಯ:- ಆಗತಾನೆ ಚಿಗುರಿರುವುದರಿಂದ ಅತಿ ಕೆಂಪಾಗಿಯೂ ಮೃದುವಾಗಿಯೂ ಇರುವ ಚಂದಳಿರ್ಗಳ ತೋರಣಂಗಳೂ,ಥಳಥಳನೆ ಹೊಳೆಯುತ್ತಿರುವ ಕಲಶಂಗಳುಳ್ಳ ಮಂಟಪಗಳೂ, ಸಾಲಾಗಿಯೂ, ನೋಟಕರಿಗೆ ಪರಮಾನಂದವುಂಟಾಗುವಂತೆಯೂ ಕಟ್ಟಿರುವಕನ್ನಡಿಗಳೂ, ಸಣ್ಣ ಚಾಮರಂಗಳ ಚಲನೆಯೂ, ಬೃವಟಗಳ ಕುಣಿತವೂ, ಪ್ರವಾಳ ಮತ್ತು ಮುತ್ತುಗಳ ಗೊಂಚಲುಗಳೂ,ಬೀದಿಬೀದಿಗಳಲ್ಲೂ ಗುಂಪಗುಂಪಾಗಿ ನೆರೆದಿರುವ ಜನಸಮುದಾಯವೂ, 

ಹರ್ಷಾತಿಶಯವನ್ನುಂಟುಮಾಡುತ್ತಲೂ, ಮಹದೈಶ್ವರ್ಯವನ್ನು ಸೂಚಿಸುತ್ತಲೂ, ಇರುವುದು.


ಒತ್ತರಿಸಿದುನ್ನತ ಪ್ರಾಸಾದದಬಲೆಯರ। 

ವೃತ್ತವದನೇಂದು ಮಂದಸ್ಮೇರಚಂದ್ರಿಕೆಯೊ। 

ಳುತ್ತುಂಗ ದೇವಾಲಯದ ಗೋಪುರದ ಮಾಣಿಕದ ಕಲಶದೆಳವಿಸಿಲೊಳು॥ 

ಕತ್ತಲೆ ಪರಿವುದಲ್ಲದೀ ನಗರದೊಳ್ ಬೇರೆ।

 ಮತ್ತೆ ಸೋಮಾದಿತ್ಯ ಕಿರಣಂಗಳೈದುವೊಡೆ।

ಸುತ್ತಲುಂ ಮುಗಿಲ ಮುಟ್ಟಿದ ಕೋಟೆಗಳ ವಳಯವಣುಗ ನೋಡಚ್ಚರಿಯನು॥೧೮॥ 


ಒತ್ತರಿಸಿದ= ಸೇರಿರುವ, ಉನ್ನತ= ಎತ್ತರವಾದ, ಪ್ರಾಸಾದದ= ಉಪ್ಪರಿಗೆಗಳಲ್ಲಿರುವ, ಅಬಲೆಯರ= ನಾರಿಯರ, ವೃತ್ತ= ವರ್ತುಲಾಕಾರವಾದ, ವದನದ= ಆನನದ, ಸುಮಂದಸ್ಮೇರ= ಅರೆನಗೆಯೆಂಬ, ಚಂದ್ರಿಕೆಯೊಳು= ಇಂದುಕಿರಣಂಗಳಲ್ಲಿ, ಉತ್ತುಂಗ=ಎತ್ತರವಾದ, ದೇವಾಲಯ= ದೇವರ ಗುಡಿಗಳ, ಗೋಪುರದ= ಕಟ್ಟಕಡೆಯಲ್ಲಿರುವುದಾದ, ಮಾಣಿಕದ= ರತ್ನದ, ಕಲಶದ= ಸುವರ್ಣಕುಂಭಗಳ, ಎಳವಿಸಿಲೊಳು= ಬಾಲಸೂರ್ಯನ ಕಿರಣಗಳಿಂದ, ಈ ನಗರದೊಳು= ಈ ಪುರದಲ್ಲಿ, ಕತ್ತಲೆ= ತಮೋರಾಶಿಯು, ಪರ್ವುತಿದೆ= ಹೊರಟುಹೋಗುತ್ತಲಿದೆ, ಬೇರೆ= ಇದನ್ನು ಬಿಟ್ಟು, ಸೋಮ=ಇಂದುವಿನ, ಆದಿತ್ಯ= ರವಿಯ, ಕಿರಣಂಗಳು= ಕಿರಣಗಳು, ಐದುವಡೆ= ಸಮೀಪಕ್ಕೆ ಬರಲು, ಸುತ್ತಲುಂ= ಎಲ್ಲಾ ಕಡೆಯು, ಮುಗಿಲ= ಅಂತರಿಕ್ಷಮಾರ್ಗವನ್ನು, ಮುಟ್ಟಿದ= ಸೋಂಕುತ್ತಲಿರುವ, ಕೋಟೆಗಳ ವಲಯವು=ಕೋಟೆಗಳ ಆವರಣವು,(ಇರುವುದು) ಅಚ್ಚರಿಯನು= ಈ ಆಶ್ಚರ್ಯವನ್ನು, ನೋಡು= ಈಕ್ಷಿಸು, ಇದು ಉತ್ಪ್ರೇಕ್ಷೆಯು. 


ತಾತ್ಪರ್ಯ:- ಎಲೈ ಕರ್ಣನಂದನಾ! ಇನ್ನೂ ಈ ಪಟ್ಟಣದ ಭಾಗ್ಯವನ್ನು ತಿಳಿಸತ್ತೇನೆಕೇಳು, ಈ ನಗರದ ಸುತ್ತಲೂ ಬಲವಾಗಿಯೂ ಆಕಾಶವನ್ನು ಎಟುಕಿಸುವುದಾಗಿಯೂ ಇರುವ ಕೋಟೆಯು ಆವರಿಸಿಕೊಂಡು ಸೂರ್ಯ ಚಂದ್ರರ ಪ್ರವೇಶಕ್ಕೆ ತಡೆಯನ್ನುಂಟುಮಾಡಿದಾಗ್ಯೂ ಕೂಡಾ ಆ ಪುರದ ಉಪ್ಪರಿಗೆಗಳಲ್ಲಿರುವ ಪದ್ಮಮುಖಿಯರ ಮುಖವೆಂಬ ಚಂದ್ರನ ಮುಗುಳ್ನಗೆಯೆಂಬ ಬೆಳುದಿಂಗಳೂ, ಗೋಪುರಾಗ್ರಂಗಳಲ್ಲಿ ಮಿರುಮಿರುಗುತ್ತಿರ್ಪ ಕಲಶಂಗಳ ಪ್ರಭೆಯೆಂಬೆ- 

ಳೆವಿಸಿಲೂ ದಿವಾರಾತ್ರಿಗಳಲ್ಲಿಯೂ ಬೆಳಕನ್ನೀಯುತ್ತ ಅತ್ಯಾನಂದಕರವಾಗಿದೆ.


ಕುಸಿದು ಪಾತಾಳದೊಳಗಿರ್ದ ಪಲಕಾಲಮಂ। 

ದ್ವಿಸಹಸ್ರ ನಯನಂಗಳಿಂದೆ ನೋಡಿದೊಡೆ ಕಾ। 

ಣಿಸಿ ಕೊಳ್ಳದೀ ಪುರದಗಳ ಘಾತಮಿದನಜಂ ಬಲ್ಲನೋ ಕೇಳ್ವೆನೆಂದು॥ 

ಬಿಸಜಸಂಭವನ ಪೊರೆಗೆಂದಿಳೆಯನುಗಿದುಚ್ಚ। 

ಳಿಸಿ ಬಳೆದ ಫಣಿಪತಿಯ ಮಣಿವೆಡೆಯ ಸಾಲಿವೆನ। 

ಲೆಸೆವುವಾಗಸದೊಳೀ ಪೊಳಲ ಕೋಟೆಯ ರನ್ನದೆನೆಗಳೆಲ್ಲಾ ದೆಸೆಯೊಳು॥೧೯॥ 


ಪ್ರತಿಪದಾರ್ಥಂ:-ಪಲಕಾಲಮಂ= ಬಹುಕಾಲ, ಪಾತಾಳದೊಳಗೆ=ಅಧೋಲೋಕದಲ್ಲಿ, ಇರ್ದು= ಇರುವುದಾಗಿ, ಕುಸಿದು= ಬಾಗಿಹೋಗಿ, ದ್ವಿಸಹಸ್ರನಯನಂಗಳಿಂದ= ಎರಡು ಸಾವಿರ ನೇತ್ರಗಳಿಂದ, ನೋಡಿದೊಡೆ= ಈಕ್ಷಿಸಿದರೂ, ಈ ಪುರದ= ಈ ನಗರದ, ಅಗಳ= ಕಂದಕದ, ಘಾತಂ= ಆಳವು, ಕಾಣಿಸಿಕೊಳ್ಳದು= ಗೋಚರಿಸುವುದಿಲ್ಲ, ಇದನು= ಈ ಕಂದಕದ ಆಳವನ್ನು

ಅಜಂ= ವಿರಂಚಿಯು, ಬಲ್ಲನೋ=ಅರಿತಿರುವನೊ, ಕೇಳ್ವೆನು= ಕೇಳುತ್ತೇನೆ, ಎಂದು=ಎಂಬುದಾಗಿ, ಬಿಸಜಸಂಭವನ= ಕಮಲದಲ್ಲಿ ಹುಟ್ಟಿದ ಬ್ರಹ್ಮನ, ಪುರಿಗೆ= ನಗರಕ್ಕೆ, ಎಂದು ಎಂಬುದಾಗಿ, ಇಳೆಯನು=ಧರಾಮಂಡಲವನ್ನು, ಉಗಿದು= ಭೇದಿಸಿಕೊಂಡು, ಉಚ್ಚಳಿಸಿ= ಮೇಲ್ಗಡೆಗೆ ಬಂದು, ಬೆಳೆದ= ಬೆಳೆದಿರುವಂಥ, ಫಣಿಪತಿಯ = ಸರ್ಪರಾಜನ, ಮಣಿವೆಡೆಯ= ರತ್ನಗರ್ಭಿತವಾದ ಹೆಡೆಗಳ, ಸಾಲು= ಹಂತಿಯು, ಇವು=ಇವುಗಳು, ಎನಲು= ಎಂಬಂತೆ, ಆಗಸದೊಳು= ಅಂತರಿಕ್ಷದಲ್ಲಿ, ಈ ಪೊಳಲ= ಈ ಪಟ್ಟಣದ, ಕೋಟೆಯ= ಆವರಣದ, ರನ್ನದೆನೆಗಳು=ರನ್ನಮಯವಾದ ತೆನೆಗಳು, ಎಲ್ಲಾ ದೆಸೆಯೊಳು= ಸಮಸ್ತ ದಿಗ್ಭಾಗಗಳಲ್ಲಿಯೂ, ಎಸೆವುದು= ಥಳಥಳಿಸುತ್ತಿದೆ.


ತಾತ್ಪರ್ಯ:- ಮತ್ತು ಪಾತಾಳಲೋಕದವರೆಗೂ ಬಗ್ಗಿ ಎರಡು ಸಹಸ್ರ ಕಣ್ಣುಗಳನ್ನಿಟ್ಟುಕೊಂಡು ಪರೀಕ್ಷಿಸಿ ನೋಡಿದರೂ ಕೂಡ ಈ ಕೋಟೆಯ ಆಳವನ್ನು ತಿಳಿಯಲಾರದೆ ಮತ್ತೆ ಭೂಮಿಯನ್ನು ಭೇದಿಸಿಕೊಂಡು ಮೇಲಕ್ಕೆದ್ದು ಬಂದು ಸೃಷ್ಟಿಕರ್ತನಾದ ಕಮಲಸಂಭವನೆಡೆಗೆ ಹೋಗಿ ಈ ಕೋಟೆಯ ಆಳವೆಷ್ಟಿದೆಯೋ ಕೇಳಿ ಬರುವೆನೆಂದು ಹೋಗುತ್ತೆರುವಂತೆ- 

ಯೂ, ಆದಿಶೇಷನ ರತ್ನ ಸಹಿತವಾದ ಹೆಡೆಗಳೆಂಬಂತೆಯೂ ಇರೈವ ರತ್ನಖಚಿತವಾದ ಕೋಟೆಯ ಪ್ರಾಕಾರದ ತೆನೆಗಳು ಕಾಣಬರುತ್ತ ಜನರಿಗೆ ಎಷ್ಟು ಆನಂದದಾಯಕಂಗಳಾಗಿ ಭಾಗ್ಯಾತಿಶಯಸೂಚಕಂಗಳಾಗಿವೆ.


ವಾಯುಪಾಶಂ ಪರಿಯೆ ಧರೆಗುರುಳ್ದಪೆವಿದಕು। 

ಪಾಯಮಿನ್ನೇನೆಂದು ನವರತ್ನ ಖಚಿತ ಕಮ। 

ನೀಯ ಕಾಂಚನಮಯೋತ್ಪನ್ನ ದೃಢಪ್ರಾಕಾರದೊತ್ತುಗೊಂಡಲ್ಲಲ್ಲಿಗೆ ।

ದಾಯ ಮಿಗೆ ನಿಲಿಸಿದರೊ ಖೇಚರರ್ ತಮ್ಮಶೋ।

ಭಾಯಮಾನಾಲಯಂಗಳನೆನಲ್ ಕಣ್ಗೆ ರಮ। 

ಣೀಯವಾಗಿವೆ ಕರ್ಣತನಯ ನೋಡೀಪುರದ ಮುಗಿಲಟ್ಟಳೆಯ ಸಾಲ್ಗಳು॥೨೦॥


ಪ್ರತಿಪದಾರ್ಥ:- ಕರ್ಣತನಯ= ಎಲೈ ವೃಷಧ್ವಜನೇ? ವಾಯು = ಗಾಳಿಯೆಂಬ, ವಾಶಂ=ಹುರಿಯು, ಪರಿಯೆ= ಕಡಿದುಹೋಗಲು, ಧರೆಗೆ= ಇಳೆಗೆ, ಉರುಳ್ದಪೆವು= ಹೊರಳುವೆವು, ಇದಕೆ= ಈ ಕಾರ್ಯಕ್ಕೆ, ಉಪಾಯಂ=ಚಮತ್ಕಾರವು,

(ಚಾತುರ್ಯವು), ಇನ್ನು, ಏನೆಂದು= ಏನಿರುವುದೆಂಬುದಾಗಿ,ನವರತ್ನಖಚಿತ= ವಜ್ರ, ವೈಡೂರ್ಯ, ಗೋಮೇಧಿಕ, ಪುಷ್ಯರಾಗ, ಮರಕತ, ಮಾಣಿಕ್ಯ, ಮುತ್ತು, ಹವಳ, ನೀಲಗಳೆಂಬ ಒಂಬತ್ತು ರತ್ನ ವಿಶೇಷಗಳಿಂದ ಕೆತ್ತಿದ, ಕಮನೀಯ= ಮನೋರಂಜಕವಾದ,  ಕಾಂಚನಮಯ= ಸುವರ್ಣಮಯವಾದ, ಉನ್ನತ= ಎತ್ತರವಾದ, ದೃಢ=ಬಲವಾದ, ಪ್ರಾಕಾರ= ಆವರಣದಿಂದ, ಒತ್ತುಗೊಂಡ= ದಟ್ಟವಾಗಿಸೇರಿ, ಅಲ್ಲಿಗಲ್ಲಿಗೆ= ಅಷ್ಟಷ್ಟು ಸ್ಥಳಕ್ಕೆ, ಖೇಚರರು= ಸುರರು, ತಮ್ಮ=ತಮ್ಮಗಳ,

ಶೋಭಾನಮಾಯ= ಹೊಳೆಯುತ್ತಿರುವ,ಆಲಯಂಗಳನು= ಸ್ಥಾನಂಗಳನ್ನು, ದಾಯಮಿಗೆ= ಹೋಲಿಕೆಗೆ ಸರಿಯಾಗಿ, ನಿಲಿಸಿದರೊ= ನಿಲ್ಲುವಂತೆ ಎಸಗಿದರೊ, ಎನಲು= ಎಂಬಂತೆ, ಕರ್ಣತನಯ= ಕರ್ಣತನಯನಾದ ವೃಷಧ್ವಜನೇ ? ರಮಣೀಯಮಾಗಿ= ಬಹುಚೆಲ್ವಾಗಿ,ಇದೆ=ಇರುವುದು, ಈ ಪುರದ= ಈ ನಗರದ, ಮುಗಿಲ= ಅಂತರಿಕ್ಷವನ್ನೈದುತ್ತಿರು, ಅಟ್ಟಲೆಯ= ಬುರುಜುಗಳ,ಸಾಲ್ಗಳ= ಶ್ರೇಣಿಗಳನ್ನು, ನೋಡು=ಈಕ್ಷಿಸು. 


ತಾತ್ಪರ್ಯ :- ಎಂಬುದಾಗಿ ಹೇಳುತ್ತ ಮತ್ತೆ ವೃಷಕೇತುವನ್ನು ಕುರಿತು, ಅಯ್ಯಾ ಕರ್ಣತನುಜನೇ ಕೇಳು, ಗಾಳಿ ಎಂಬ ಹಗ್ಗವು ಕಡಿದುಶಬಿದ್ದರೆ ಕೆಳಗೆ ಉರುಳದಿರಬೇಕೆಂದು ನವರತ್ನ ಖಚಿತವಾಗಿಯೂ, ಹೃದಯಾಹ್ಲಾದಕರವಾಗಿಯೂ,ಸ್ವರ್ಣಮಯ-

ವಾಗಿಯೂ, ಬಲವಾಗಿಯೂ ಇರುವ ಸುತ್ತುಗಟ್ಟುಗಳಿಂದ ಕೂಡಿ, ಸುರರೆಲ್ಲರೂ ತಮ್ಮತಮ್ಮ ಕೋರಿಕೆಗೆ ಸರಿಯಾಗಿ ಅಲ್ಲಲ್ಲಿ ನಿವಾಸಸ್ಥಾನಗಳನ್ನು ಮಾಡಿಕೊಂಡಿರುವರೋ ಎಂಬಂತೆಯೂ ಎಟಕಿಸಿಕೊಳ್ಳುವಹಾಗೆ ಇದೆಯೋ ಎಂಬಂತೆಯೂ ಅತ್ಯುನ್ನತಗಳಾಗಿರುವ ಈಶನಗರದ ಕೋಟೆಯ ಬುರುಜುಗಳ ಸೌಂದರ್ಯವು ವರ್ಣಿಸಲಸದಳಮಾಗಿರ್ಪುದು. 


 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ