ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಬುಧವಾರ, ಮೇ 7, 2025

ಜೈಮಿನಿ ಭಾರತ - ದೊಡ್ಡಬೆಲೆ, ನಾರಾಯಣಶಾಸ್ತ್ರಿ


ಕನ್ನಡಕವಿ ಸಾರ್ವಭೌಮನೆನಿಸಿದ ಲಕ್ಷ್ಮೀಶಕವಿಯು

ಮೃದುಮಧುರಪದ ವಿಚಿತ್ರ ಸರಸಾಲಂಕಾರ ಚಮತ್ಕಾರವಾಗಿರುವಂತೆ 

ಲೋಕೋಪಕಾರಾರ್ಥವಾಗಿ ರಚಿಸಿರುವ, 


ಜೈಮಿನಿ ಭಾರತವೆಂಬ ಮಹಾಕಾವ್ಯವು. 


ಬ್ರ॥ ಶ್ರೀ ॥ ದೊಡ್ಡಬೆಲೆ, ನಾರಾಯಣಶ್ತ್ರೀಯವರಿಂದ ರಚಿಸಲ್ಪಟ್ಟ


ಪ್ರತಿಪದಾರ್ಥ, ತಾತ್ಪರ್ಯ, ಅವಯವಾರ್ಥ, ಸಂಧಿ, ಸಮಾಸ, ಅಲಂಕಾರ,  

ಛಂದೋವಿವರಣ ಮುಂತಾದುವುಗಳಿಂದೊಡಗೂಡಿರುವ

"ಜೈಮಿನಿ ಭಾರತ ಭಾನುಪ್ರಭೆ" 

ಎಂಬ ಟೀಕೆಯಿಂದೊಡಗೂಡಿ ಪರಿಷ್ಕೃತಮಾಗಿ. 

ಇದರ ಸರ್ವ ಸ್ವಾತಂತ್ರ್ಯವನ್ನು ಪಡೆದಿರುವ, 

ಬೆಂಗಳೂರು ಸಿಟಿ ಚಿಕ್ಕಪೇಟೆ ಬುಕ್ಡಿಪೊ ಪ್ರೈವೇಟರ್, 

ಟಿ. ಎನ್. ಕೃಷ್ಣಯ್ಯಶೆಟ್ಟಿಯವರ ಸ್ವಕೀಯ. 


ಶ್ರೀ ಮಹಾ ಗಣಪತಯೇನಮಃ. 

ಟೀಕಾ ತಾತ್ಪರ್ಯ ಸಹಿತ ಜೈಮಿನಿಭಾರತವು. 

ಮೊದಲನೆಯ ಸಂಧಿ. 

ಪೀಠಿಕೆ. 

ಶ್ರೀವಧುವಿನಂಬಕ ಚಕೋರಕಂ ಪೊರೆಯೆ ಭ । 

ಕ್ತಾವಳಿಯ ಹೋತ್ಕುಮುದ ಕೋರಕಂ ಬಿರಿಯೆ ಜಗ। 

ತೀವಲಯದಮಲಸೌಭಾಗ್ಯ ರತ್ನಾಕರಂ ಪೆರ್ಚಿನಿಮ್ಮೇರೆವರಿಯೆ॥ 

ಆವಗಂ ಸರಸಕರುಣಾಮೃತದ ಕಲೆಗಳಿಂ। 

ತೀವಿದೆಳೆನಗೆಯ ಬೆಳದಿಂಗಳಿಂ ಪಸರಿಸುವ। 

ದೇವಪುರನಿಲಯ ಲಕ್ಷ್ಮೀರಮಣನಾಸ್ಯಚಂದ್ರನಾನಂದಮೆಮಗೀಯಲಿ॥೧॥ 


ಕಂದ॥ ವಂದಾರುಮನುಜ ಬೃಂದಕೆ । 

ಬೃಂದಾರಕತರುವೆನಿಪ್ಪ ನಾರಾಯಣನಂ॥ 

ಮಂದೇತರಮತಿಗಾಗಿಯೆ। 

ಸಂದೇಹವತೊರೆದು ನಿಂದುವಂದಿಸುತಿರುವೆ॥೧॥ 


ಸೋಮನ ಶಿರದೊಳ್ಧರಿಸಿಹ। 

ಸೋಮನ ಚರಣಾಬ್ಜವನ್ನೆ ನೆನೆಯುತೆ ಮನದೊಳ್॥ 

ಮಾಮಕಮತಿಯನುರೂಪದಿ। 

ಜೈಮಿನಿಯಾಭಾರತಕ್ಕೆ ಟೀಕೆಯಗೈವೆಂ॥೨॥ 


ನಾರಾಯಣನಂ ನೆನೆಯುತೆ । 

ನಾರಾಯಣಶರ್ಮನೀಗರಚಿಸಿಹಕೃತಿಯೊಳ್॥ 

ಕಾರುಣ್ಯಾಮೃತನಿಧಿಗಳ್। 

ಸಾರಾಂಶಾದಾನದಿಂದೆ ತೋಷಿಕೆ ವಿಬುಧರ್॥೩॥ 


ಅವತಾರಿಕೆ: ಸ್ವಸ್ತಿಶ್ರೀಮತ್ಸಮಸ್ತ ಭೂಮಂಡಲಮಂಡನಾಯಮಾನವಾಗಿ,ಸಕಲ ಕಲ್ಯಾಣಗುಣಗಳಿಗೆ ನೆಲೆಯೆನಿಸಿ, ನಿಖಿಲಸಂಪದಗಳಿಗೆ ತೌರೂರಾದ ಕರ್ಣಾಟಕ ಜನಪದದೊಳು  ಪ್ರಖ್ಯಾತಿಯನ್ನು ಪಡೆದಿರುವ ಮಹಾಕವಿಗಳೊಳ-

ಗೋರ್ವನಾದ ಶ್ರೀಯುತ ಲಕ್ಷ್ಮೀಶನೆಂಬ ಕವಿಯು, ಜೈಮಿನಿ ಮಹಾಮುನಿಯ ಕೃತಿಯಾಗಿರುವ ಅಶ್ವಮೇಧ ಪರ್ವದ ಕಥೆಯನ್ನು ಕನ್ನಡಿಗರ ಮೇಲ್ಮೆಗಾಗಿ ಕರ್ಣಾಟ ಭಾಷೆಯೊಳು ವಾರ್ಧಿಕ ಷಟ್ಪದಿಯ ಪದ್ಯರೂಪವಾಗಿ, ಮೃದುಮಧುರಪದ  

ಶೈಲಿಯಿಂದ ರಚಿಸಬೇಕೆಂದು ನೆನೆದು, ತಾನು ಕೈಕೊಂಬ ಕೃತಿಯು ಅಂತರಾಯವಿಲ್ಲದೆ ನೆರವೇರಲೋಸುಗವೂ, ಮುಂದಿನ ಕಾರ್ಯಕರ್ತರಿಗೆ ಸತ್ಸಂಪ್ರದಾಯಶಿಕ್ಷೆಗಾಗಿಯೂ, ಆಶೀರ್ವಾದ, ನಮಸ್ಕಾರ, ವಸ್ತು ನಿರ್ದೇಶಗಳೆಂಬ ಮಂಗಳಗಳೊಳ-

ಗೊಂದಾದ ಆಶೀರ್ವಾದ ರೂಪವಾಗಿರುವ ಮಂಗಳವನ್ನು " ಶ್ರೀವಧುವಿನಂಬಕ" ಎಂಬ ಪದ್ಯರೂಪದಿಂದ ರಚಿಸುತ್ತಲಿದ್ದಾನೆ. 


ಟೀಕು: ಶ್ರೀ = ವಿಷ್ಣುವಿನ ಪ್ರಾಣಕಾಂತೆಯಾದ ಲಕ್ಷ್ಮೀದೇವಿಯೆಂಬ, ವಧುವಿನ = ಸ್ತ್ರೀಯ, ಅಂಬಕ = ನೇತ್ರವೆಂಬ, ಚಕೋರಕಂ = ಚಕೋರವೆಂಬಹಕ್ಕಿಯು, ಪೊರೆಯೆ= ಕಾಪಾಡಲ್ಪಡಲು, ಭಕ್ತ = ಭಕ್ತಿಯುಳ್ಳವರ, ಆವಳಿಯ = ಗುಂಪಿನ,ಹೃತ್ = ಎದೆಯೆಂಬ, ಕುಮುದ = ಕರೀಕಮಲದಹೂವಿನ, ಕೋರಕಂ= ಮೊಗ್ಗು, ಬಿರಿಯೆ = ವಿಕಾಸವನ್ನೈದಲು, ಜಗತೀ =ಪ್ರಪಂಚದ, ವಲಯದ= ಸುತ್ತುಗಟ್ಟಿನ, ಅಮಲ = ಪರಿಶುದ್ಧವಾದ, ( ಕಶ್ಮಲರಹಿತವಾದ ) ಸೌಭಾಗ್ಯ = ಐಶ್ವರ್ಯವೆನ್ನುವ, ರತ್ನಾಕರಂ =ಕಡಲು, ಪೆರ್ಚಿನಿಂ= ಅಧಿಕವಾಗುವಿಕೆಯಿಂದ, ಮೇರೆವರಿಯೆ= ದಡವನ್ನು ಮೀರಿಬರಲು, ಆವಗಂ =ಸದಾಕಾಲ್ಲಿಯೂ, ಸರಸ = ಶೃಂಗಾರವೇ ಆದಿಯಾದ ನವರಸಗಳಿಂದ ( ಪ್ರೀತಿಯಿಂದೊಡಗೂಡಿದ ) ಕರುಣಾ = ಕರುಣೆಯೆಂಬ, ಅಮೃತದ =ಅಮೃತಮಯವಾದ, ಕಲೆಗಳಿಂ = ಷೋಡಶಕಳೆಗಳಿಂದ, ( ತೇಜಸ್ಸುಗಳಿಂದ ) ತೀವಿದ =ವ್ಯಾಪ್ತಿಯಾದ, ಎಳನಗೆಯ= ಹುಸಿನಗೆಯೆಂಬ, ಬೆಳದಿಂಗಳಿಂ = ಬೆಳದಿಂಗಳಿನಿಂದ ( ಚಂದ್ರಕಿರಣಗಳಿಂದ ) ಪಸರಿಸುವ= ಹರಡಿಕೊಂಡಿರುವ ( ಕಾಂತಿಯನ್ನು ಹೊಂದಿರುವ ) ದೇವಪುರನಿಲಯ = ದೇವಪುರವೆಂಬ ಹಳ್ಳಿಯನ್ನು 

ನಿವಾಸಸ್ಥಾನವಾಗಿಮಾಡಿಕೊಂಡಿರತಕ್ಕ, ಲಕ್ಷ್ಮಿ =ಲಕ್ಷ್ಮೀದೇವಿಗೆ, ರಮಣನ= ಗಂಡನಾದ ವಿಷ್ಣುವಿನ, ಆಸ್ಯ = ವದನವೆಂಬ, 

ಚಂದ್ರ= ಇಂದುವು, ನಮಗೆ = ನಮ್ಮಗಳಿಗೆ, ಆನಂದಂ = ಸಂತೋಷವನ್ನು, ಈಯಲಿ= ದಯಪಾಲಿಸಲಿ, (ಈ ಅರ್ಥವು 

ವಿಷ್ಣು ಪರವಾದದ್ದು ) 


ಶ್ರೀ = ಶಾರದೆಯೆಂಬ, ವಧುವಿನ= ಹೆಂಗಸಿನ, ಅಂಬಕ = ನೇತ್ರವೆಂಬ, ಚಕೋರಕಂ= ಚಕೋರವೆಂಬ ಹಕ್ಕಿಯು, ಪೊರೆಯೆ= ಸಲಹಲ್ಪಡಲು, ಭಕ್ತ = ಬ್ರಹ್ಮನನ್ನೇ ಸದಾಧ್ಯಾನ ಮಾಡುತ್ತಿರುವ ಸನಕಸನಂದನರೆಯೆ ಮೊದಲಾದವರ, ಆವಳಿಯ = ಗುಂಪಿನ, ಹೃತ್= ಎದೆಯೆನ್ನುವ, ಕುಮುದ = ಕನ್ನೈದಿಲೆಯ, ಕೋರಕಂ= ಮೊಗ್ಗು, ಬಿರಿಯೆ= ವಿಕಸಿತಮಾಗಲು,ಜಗತೀ=ಭೂಮಿಯ, ವಲಯದ= ಮಂಡಲದ, ( ಬ್ರಹ್ಮನಿಂದ ಉತ್ಪನ್ನವಾದ ಇಳಾಮಂಡಲದ) ಅಮಲ= ಪರಿಶುದ್ಧವಾದ,  ಸೌಭಾಗ್ಯ = ಸಂಪತ್ತೆನ್ನತಕ್ಕ, ರತ್ನಾಕರಂ= ಅಬ್ಧಿಯು, ಪೆರ್ಚಿನಿಂ= ಆದಿಕ್ಯದಿಂದ, ಮೇರೆವರಿಯೆ= ಮಿತಿಮೀರಿ ಬರುತ್ತಿರಲಾಗಿ, ಆವಗಂ= ಸರ್ವಕಾಲದಲ್ಲಿಯೂ, ಸರಸ= ಪ್ರೀತಿಯುಕ್ತವಾದ,(ತನ್ನ ಭಕ್ತರಲ್ಲಿ ) 

ಕರುಣಾ= ಕರುಣೆಯಿಂದೊಡಗೂಡಿದ, ಅಮೃತದ ಕಲೆಗಳಿಂ=ಅಮೃತವಿಶಿಷ್ಟವಾದ ತೇಜಸ್ಸುಗಳಿಂದ, ತೀವಿದ= ಪೂರಿತವಾದ, ಎಳೆನಗೆಯ= ಅರೆನಗೆಯೆಂಬ, ಬೆಳದಿಂಗಳಿಂ= ಬೆಳದಿಂಗಳಿನಿಂದ,  ಪಸರಿಸುವ= ಕಾಂತಿಯನ್ನೀವ, ದೇವಪುರ= ಸುರಸಮೃನವಾದ ಸತ್ಯಲೋಕವೆ, ನಿಲಯ= ವಾಸಸ್ಥಾನವಾಗುಳ್ಳ, ಲಕ್ಷ್ಮೀರಮಣನ= ಸರಸ್ವತೀ ಪ್ರಿಯನಾದ ಕಮಲಾಸನನ, ಆಸ್ಯ= ಮೋರೆಯೆಂಬ, ಚಂದ್ರ=ಇಂದುವು, ಆನಂದಂ= ಸಂತೋಷವನ್ನು,  ಎಮಗೆ=ನಮಗೆ, ಈಯಲಿ= ಕರುಣಿಸಲಿ." ಲಕ್ಷ್ಮೀ" ಎಂಬ ಪದಕ್ಕೆ ಲಕ್ಷಣಯುಕ್ತಳಾದವಳು (ಸರಸ್ವತಿ) ಎಂದು ಅರ್ಥವು. ( ಈ ಅರ್ಥವು ಬ್ರಹ್ಮ ಪರವಾದದ್ದು ) 


ಈ ಪದ್ಯದಲ್ಲಿ ಪ್ರಾರಂಭದೊಳಗೆ ಪ್ರಯೋಗಿಸಿರುವ " ಶ್ರೀ  " ಎಂಬ ಶಬ್ಧವು ನಾನಾರ್ಥಗಳಿಂದೊಡಗೂಡಿ ಅಂದರೆ ಐಶ್ವರ್ಯ, ಮಂಗಳ, ಶಾರದೆ, ಲಕ್ಷ್ಮೀದೇವಿ, ಕಳೆ ಎಂಬ ಅರ್ಥಗಳಿಂದ ಗರ್ಭಿತವಾಗಿರುವುದಲ್ಲದೆ ವರ್ಣಗಣವೇ ಮೊದಲಾದವುಗಳಿಗೆಪಾರಿಶುಧ್ಯವನ್ನೂ ವಿದ್ಯಾರ್ಥಿಗಳಿಗೂ ಬೋಧಕರಿಗೂ, ಏಳಿಗೆಯನ್ನೂ ಈಯತಕ್ಕದ್ದಾಗಿರುವುದು. 

ಶ್ರೀವಧು, ಅಂಬಕಚಕೋರ, ಹೃತ್ಕೋಶಕ, ಸೌಭಾಗ್ಯರತ್ನಾಕರ ರೂಪಕಾಲಂಕಾರವೆಂದರಿಯಬೇಕು. 

ಲಕ್ಷ್ಮಿಯ ರಮಣ ( ಷ. ತ. ಸ. ) 

ಈ ಪದ್ರದಲ್ಲಿ ಚಂದ್ರ ಆನಂದಂ ಈಯಲಿ ಎಂಬುದೇ ಪ್ರಧಾನವಾಗಿ ಸಕರ್ಮಕ ಕರ್ತರಿ ವಾಕ್ಯವು - ಚಂದ್ರ ( ಕರ್ತೃ ) 

ಆನಂದ (ಕರ್ಮ) ಈಯಲಿ(ಕ್ರಿಯೆ) ಇದು ಪ್ರಾರ್ಥನಾಸೂಚಕವಾದದ್ದು. 


ತಾತ್ಪರ್ಯ: (೧) ವಿಷ್ಣು ಪತ್ನಿಯಾದ ಲಕ್ಷ್ಮೀದೇವಿಯ ಕಣ್ಣುಗಳೆಂಬ ಚಕೋರಂಗಳನ್ನು ಸಲಹುವ, ಭಗವದ್ಭಕ್ತರಾದವರ 

ಮುಕುಳಿತಮಾದ ಹೃದಯವೆಂಬ ಕುಮುದ ಪುಷ್ಪವನ್ನು ವಿಕಾಸಪಡಿಸುವ, ಪ್ರಪಂಚದ ಐಶ್ವರ್ಯವೆಂಬ ಅಬ್ಧಿಯು 

ಮೇರೆಯನ್ನತಿಕ್ರಮಿಸಿ ಬರುವಂತೆ ಮಾಡುವ, ಅನವರತವೂ ಶೃಂಗಾರರಸವೇ ಮೊದಲಾದ ನವರಸಗಳಿಂದ ಭರಿತವಾಗಿರುವ,ಕೃಪಾಸಮುದ್ರನಾದ, ಸುಧಾವಿಶಿಷ್ಟವಾದ ಕಳೆಯಿಂದೊಡಗೂಡಿರುವ, ಯಾವಾಗಲೂ ಹಸನ್ಮುಖಿಯಾಗಿರುವ, ದೇವತೆಗಳ ಪಟ್ಟಣದಲ್ಲಿ ವಾಸಿಸುವಂಥ, ಶ್ರೀಮನ್ನಾರಾಯಣ ಮೂರ್ತಿಯ ಮುಖವೆಂಬ 

ಶಶಾಂಕನು ಸಂತೋಷ ಸಮೃದ್ಧಿಯನ್ನು ದಯಪಾಲಿಸಿ (ಬ್ರಹ್ಮಾನಂದವನ್ನಿತ್ತು) ನಮ್ಮನ್ನು ಕಾಪಾಡಲಿ ಎಂದು ಭಾವವು. 

ಅಂದರೆ ಸಮಸ್ತ ಲೋಕಗಳೂ ವಿಷ್ಣುವಿನಿಂದ ವ್ಯಾಪಿಸಲ್ಪಟ್ಟಿರುತ್ತವೆಂದೂ, ಸಕಲ ಪ್ರಾಣಿ ಸಮುದಾಯವೂ ತತ್ತತ್ಕರ್ಮಾನುಸಾರವಾಗಿ ಪಡೆಯುವ ಆನಂದವು ಅತ್ಯಲ್ಪವೆಂದೂ, ಇಹಪರಗಳಿಗೆ ಸಾಧನೆಯಾದ ಬ್ರಹ್ಮಾನಂದವೆ ಬಲು ದೊಡ್ಡದಾದುದರಿಂದ ಆ ಅಸಾಧಾರಣವಾದ ಆನಂದವನ್ನು ನಮಗೆ ಕೊಟ್ಟು ಕಾಪಾಡಲಿ ಎಂಬುದಾಗಿಯೂ; ಸರ್ವಂತರ್ಯಾಮಿಯಾಗಿ ಸರ್ವಲೋಕ ಶರಣ್ಯನಾಗಿರುವ ವಿಷ್ಣುವನ್ನು ಪ್ರಾರ್ಥಿಸಿದ್ದಾನೆ. ಮತ್ತು ಪ್ರಾರಂಭದಲ್ಲಿ " ಶ್ರೀವಧು" 

ಎಂಬ ಮಂಗಳೋಕ್ತಿಯನ್ನು ಪ್ರಯೋಗಿಸಿದ್ದಾನೆಂದು ಗೊತ್ತಾಗುವುದು. ( ಇದು ವಿಷ್ಣುಪರವಾದದ್ದು ) 


೨) ಶಾರದೆ ಎಂಬ ಸ್ತ್ರೀಯ ನಯನಂಗಳೆನ್ನುವ ಚಕೋರಗಳನ್ನು ರಕ್ಷಿಸುವ, ಬ್ರಹ್ಮಧ್ಯಾನಪರರಾದ ಸನಕಸನಂದನರೆಯ ಮೊದಲಾದವರ ಹೃದಯಗಳಿಗೆ ಆಹ್ಲಾದವನ್ನೆಸಗುವ,ಬ್ರಹ್ಮದೇವರಿಂದಲೆ ಉತ್ಪತ್ತಿಯಾದ ಈ ಪ್ರಪಂಚದ ಐಶ್ವರ್ಯಾತಿ-

 ಶಯಗಳಿಂದೊಡಗೂಡಿದ, ಸಮುದ್ರವನ್ನು ಮೇರೆಯನ್ನತಿಕ್ರಮಿಸುವಂತೆ ಮಾಡತಕ್ಕ,  ತಾಪಸಶ್ರೇಷ್ಠರಾದವರಲ್ಲಿ ಪ್ರೀತಿ- 

ಯನ್ನೂ, ಕರುಣೆಯನ್ನೂ, ಇಟ್ಟುಕೊಂಡಿರುವ, ಅರೆನಗೆಯೆಂಬ ಬೆಳ್ದಿಂಗಳಿಂದ ಪ್ರಕಾಶಿಸುವ, ಸತ್ಯಲೋಕನಿವಾಸಿಯಾಗಿ- 

ರುವ ಕಮಲಾಸನನ ಮುಖಚಂದ್ರನು ಸಂತೋಷವನ್ನು ನಮಗೆ ದಯಪಾಲಿಸಲಿ ಎಂಬ ಬ್ರಹ್ಮಪರವಾದ ಭಾವವೂ ತೋರುವಂತೆ ರಚಿಸಿರುವನು. 


ಚಕೋರವೆಂಬ ಪಕ್ಷಿಯು ಚಂದ್ರಿಕೆಯನ್ನು ಪಾನಮಾಡುವುದು, ಚಂದ್ರೋದಯದಲ್ಲಿ ಕುಮುದಪುಷ್ಪಗಳು ಅರಳುವುದು, ಬೆಳ್ದಿಂಗಳು ಬಿದ್ದೊಡನೆ ಕಡಲು ಉಕ್ಕುವುದೂ ಲೋಕಪ್ರಸಿದ್ಧವು. ನಗೆಯು, ಧರ್ಮವು, ಸುಗುಣವು, ಕೀರ್ತಿಯು, ಈ ಮುಂತಾದವುಗಳು ಬೆಳ್ಳಗಿರತಕ್ಕವುಗಳೆಂದು ವರ್ಣಿಸುವುದು ಕವಿಸಮಯ ಸಿದ್ಧವಾಗಿದೆ.  


ಈಶ್ವರನ ಕಾಂತೆಯಾದ ಪಾರ್ವತಿಯ ನೇತ್ರಗಳೆಂಬ ಚಕೋರ ಪಕ್ಷಿಗಳನ್ನು ರಕ್ಷಿಸುವಂಥ, ತನ್ನ ಪರಮ ಭಕ್ತರ ಮುಕುಳಿತಮಾದ ಹೃದಯ ಕಮಲವನ್ನು ಬಿಚ್ಚುವಂತೆ ಮಾಡುವ, ಲೋಕದ ಸಂಪತ್ತಿನ ರಾಶಿಯನ್ನು ಮಿತಿಮೀರಿಸುವ, ಯಾವಾಗಲೂ ನವರಸಗಳಿಂದ ಪೂರ್ಣನಾಗಿರುವ, ಕರುಣಾನಿಧಿಯಾದ, ಅಮೃತಕಳೆಯಿಂದೊಡಗೂಡಿರುವ, ಸಂತೋಷಚಿತ್ತನಾದ, ದೇವಪುರದ ಕೈಲಾಸಪರ್ವತದಲ್ಲಿ ನೆಲೆಯಾಗಿರುವ ಚಂದ್ರಶೇಖರನ ವದನಚಂದ್ರನು ಶಾಶ್ವತ 

ಸುಖವನ್ನಿತ್ತು ಯಾವಾಗಲೂ ಪಾಲಿಸಲಿ. ಶಿವಾ, ಭವಾನಿ, ರುದ್ರಾಣಿ, ಶರ್ವಾಣಿ, ಸರ್ವಮಂಗಳೆ, ಇತ್ಯಾದಿ ಪದಗಳಂತೆ

ಶ್ರೀ, ಲಕ್ಷ್ಮಿ,  ಕಮಲೆ, ಅಂಬಿಕೆ, ಗೌ, ಷಷ್ಠೀ, ಜಯೆ, ದೇವಸೇನೆ ಈ ಮುಂತಾದ ಪದಗಳೂ ಪಾರ್ವತಿಗೆ ಪರ್ಯಾಯ ಪದಗಳಾಗಿವೆ. ಯಾವುದೊಂದು ಎಡರು ಬಾರದೆ ಗ್ರಂಥವು ಪೂರ್ಣವಾಗಬೇಕೆಂದು ಕವಿಯು ಪರಮೇಶ್ವರ ಪ್ರಾರ್ಥನಾ ರೂಪವಾದ ಮತ್ತೊಂದು ಮಂಗಳವನ್ನು ರಚಿಸುತಲಿದ್ದಾನೆ. 


ವೃತ್ತ ವಿಷಯ: ಈ ಗ್ರಂಥದಲ್ಲಿ ವೃತ್ತಗಳು ಷಟ್ಟದಿಯ ಜಾತಿಗೆ ಸೇರಿರುವುವು. ಷಟ್ಪದಿಯಲ್ಲಿ ಪ್ರತಿಯೊಂದು ಪದ್ಯಕ್ಕೂ ಆರು ಪಾದಗಳಿರುತ್ತವೆ. ಅವುಗಳೊಳಗೆ ಪೂರ್ವಾರ್ಧಕ್ಕಿರುವ ಲಕ್ಷಣವೆ ಉತ್ತರಾರೂಧಕ್ಕೂ ಇರುವುದು. ಈ ಷಟ್ಪದಿಗಳಲ್ಲಿ, ಶರಷಟ್ಪದಿ, ಕುಸುಮ ಷಟ್ಪದಿ,  ಭೋಗ ಷಟ್ಪದಿ, ಭಾಮಿನಿ ಷಟ್ಪದಿ,  ಪರಿವರ್ಧಿನಿ ಷಟ್ಪದಿ,  ವಾರ್ಧಿಕ ಷಟ್ಪದಿ,  ಎಂದು ಆರು ವಿಧವುಂಟು. ಒಂದು ಎರಡನೆಯ ಪಾದಗಳಲ್ಲಿ ಎಷ್ಟೆಷ್ಟು ಮಾತ್ರೆಗಳಿರುವುವೋ, ಅಷ್ಟೂ ಮತ್ತು ಅದರಲ್ಲಿ ಅರ್ಧ, 

ಹೆಚ್ಚಾಗಿ ಇನ್ನೊಂದು ಗುರು ಸಹ ಮೂರನೆಯ ಪಾದದಲ್ಲಿರುವುದು. ಇದರ ಹಾಗೆಯೇ ಉತ್ತರಾರ್ಧವೂ ಇರುವುದು. ಪ್ರಕೃತವಾದ ವಾರ್ಧಿಕ ಷಟ್ಪದಿಯಲ್ಲಿ ಸಮನ್ವಯವೆಂತೆಂದರೆ :- 


(೧) ಶ್ರೀ ವಧುವಿ ನಂಬಕಚ ಕೋರಕಂ ಪೊರೆಯೆ 


(೨)  ಕ್ತಾವಳಿಯ ಹೃತ್ಕುಮುದ ಕೋರಕಂ ಬಿರಿಯೆ ಜಗ 


(೩)  ತೀವಲಯ ದಮಲಸೌ ಭಾಗ್ಯರ ತ್ನಾಕರಂ ಪೆರ್ಚಿನಿ ಮ್ಮೇರೆವರಿ ಯೆ  (ಇದು ಪ್ಸ್ತಾರ ಕ್ರಮ ) 


ಇಲ್ಲಿ ಐದು ಮಾತ್ರೆಗಳ ಗಣಗಳು ಒಂದು ಎರಡನೆಯ ಪಾದಗಳಲ್ಲಿ ನಾಲ್ಕು ನಾಲ್ಕೂ, ಮೂರು ಆರನೆಯ ಪಾದದಲ್ಲಿ ಆರು ಗಣಗಳೂ ಮತ್ತು ಒಂದು ಗುರುವೂ ತಾಳಕ್ರಮವಾಗಿ ಇದ್ದು ಅರ್ಧ ಪದ್ಯಕ್ಕೆ ಎಪ್ಪತ್ತೆರಡು ಮಾತ್ರೆಗಳೂ ಪೂರ್ಣ ಪದ್ಯಕ್ಕೆ 

ಒಂದುನೂರ ನಲವತ್ತನಾಲ್ಕು ಮಾತ್ರೆಗಳೂ ಇರುವುದು ಎಂದು ತಿಳಿಯಬೇಕು. (ಪ್ರಾಸ) ಪದ್ಯದ ಪ್ರತಿಯೊಂದು ಪಾದದ ಮೊದಲನೆಯ ಎರಡು ಸ್ವರಗಳ ನಡುವೆ ಒಂದೇ ವ್ಯಂಜನವಿರಬೇಕೆಂಬ ನಿಯಮವೇ ಪ್ರಾಸವೆನ್ನಲ್ಪಡುವುದು. ಇದರಲ್ಲಿ 

ಸಿಂಹಪ್ರಾಸ, ಗಜಪ್ರಾಸ, ಶರಭಪ್ರಾಸ, ಅಜಪ್ರಾಸ, ವೃಷಭಪ್ರಾಸ, ಎಂಬಿವೇ ಮೊದಲಾದ ಪ್ರಾಸಗಳು ಕನ್ನಡದಲ್ಲಿ ಪ್ರಸಿದ್ಧಿಗೊಂಡಿವೆ. ವರ್ಣಗಳಲ್ಲಿ ಲಘುವೆಂತಲೂ, ಗುರುವೆಂತಲೂ ಎರಡು ಭೇದ, ಗಣಗಳು ಮ,ಯ,ರ,ಸ,ತ,ಜ,ಭ,ನ,

ಎಂಬುದಾಗಿ ಎಂಟುವಿಧ. 


ಯ ಮಾ ತಾ ರಾ ಜ ಭಾ ನ ಸ ಲ ಗಂ

ಈ ವರ್ಣಗಳೊಳಗೆ ಮೊದಲಿನಿಂದಲೂ ಒಂದೊಂದು ವರ್ಣದಿಂದ ಮೂರುಮೂರು ವರ್ಣಗಳನ್ನೇ ಎಣಿಸಿಕೊಂಡರೆ ಮೊದಲನೆಯ ವರ್ಣದಿಂದ ಆಯಾಗಣದ ಹೆಸರೂ ಪ್ರತಿಮೂರು ವರ್ಣಗಳ ಮೇಲೆ ತೋರಿರುವ ಗುರುತುಗಳಿಂದ ಆಯಾ ಗಣದಲ್ಲಿರಬೇಕಾದ ಮಾತ್ರೆಗಳೂ ತಿಳಿದು ಬರುತ್ತವೆ. 

ಉದಾ:- ೧)ಯಮಾತಾ (೨)ಮಾತಾರ (೩) ತಾರಾಜ (೪) ರಾಜಭಾ (೫) ಜಭಾನ (೬) ಭಾನಸ (೭) ನಸಲ (೮) ಸಲಗಂ


ಆದಿಮಧ್ಯಾವಸಾನೇಷು ಯರತಾಯಾಂತಿಲಾಘವಂ।ಭಜಸಾಗೌರವಂಯಾಂತಿ ಮನೌತುಗುರುಲಾಘವೌ॥ 


ಅಂದರೆ ಮೊದಲಲ್ಲಿ ಲಘುವಿದ್ದರೆ ಯ ಗಣವೆಂದೂ, ನಡುವೆ ಲಘುವಿದ್ದರೆ ರಗಣವೆಂದೂ, ಅಂತ್ಯ ಲಘುವಾದರೆ ತಗಣವೆಂದೂ, ಮತ್ತು ಆದಿ ಗುರುವಾದರೆ ಭಗಣವೆಂದೂ, ಮಧ್ಯಗುರುವಾದರೆ ಜಗಣವೆಂದೂ, ಅಂತ್ಯಗುರುವಾದರೆ ಸಗಣವೆಂದೂ, ಮ ನ ಗಣಗಳು ಕ್ರಮವಾಗಿ ಲಘು ಗುರು ವುಳ್ಳದ್ದೆಂದೂ ತಿಳಿದುಕೊಂಡು ಎಲ್ಲಾ ಪದ್ಯಗಳಲ್ಲೂ ಗಣಗಳನ್ನು ಗೊತ್ತು ಮಾಡಬೇಕು. 


ಇಲ್ಲಿ ಶ್ರೀವಧು ಎಂಬೆಡೆಯಲ್ಲಿ ಆದಿ ಗುರುವಾದ್ದರಿಂದ ಭಗಣವೂ,ಮತ್ತು ದೇವತಾವಾಚಕವು ಆಗಿದೆ. 

ಶ್ಲೋಕ:- ದೇವತಾವಾಚಕಾಯೇಚ ಯೇಚಮಂಗಳವಾಚಕಾಃ। ತೆಸರ್ವೆನೈವನಿಂದ್ಯಾಃಸ್ಯುರ್ಲಿಪಿತೋಗಣತೋಪಿವಾ॥ 

ಮೊದಲಲ್ಲಿ ಭಗಣಪ್ರಯೋಗದಿಂದ ವಾಚಕರಿಗೆಲ್ಲಾ ಮಂಗಳವನ್ನೂ ಸಂಪತ್ಪರಂಪರೆಯನ್ನೂ ಕೊಡುವುದು. ಪ್ರಾರಂಭದಲ್ಲಿ ದೇವತಾವಾಚಕವಾದ ಆಶೀರೂಪಕವಾದ ಮಂಗಳವನ್ನು ಬರೆದಿರುವುದರಿಂದ ಈ ಕೃತಿಯ ಬರವಣಿಗೆ ಮತ್ತು ಗಣಗಳಲ್ಲಿನ

ದೋಷಗಳು ಅನಿಂದ್ಯಗಳಾಗಿರಲೆಂದು ಮಹಾ ಕವಿಯಾದ ಲಕ್ಷ್ಮೀಶನು ಪ್ರಯೋಗಿಸಿರುವಂತೆ ಊಹಿಸಬಹುದು. 


ಒತ್ತಕ್ಷರದ ಹಿಂದಿನ ಅಕ್ಷರವೂ , ಸೊನ್ನೆಯಿಂದೊಡಗೂಡಿರುವ ಅಕ್ಷರವೂ, ದೀರ್ಘಾಕ್ಷರವೂ, ವಿಸರ್ಗದಿಂದ ಕೂಡಿರುವ ವರ್ಣವೂ, ಗುರು ವರ್ಣವೆಂತಲೂ, ಉಳಿದ ವರ್ಣಗಳೆಲ್ಲ ಲಘು ವರ್ಣಗಳೆಂತಲೂ ತಿಳಿಯಬೇಕು. ಇದಲ್ಲದೆ ಪದ್ಯಪಾದದ ಕೊನೆಯ ಅಕ್ಷರವನ್ನು ಸಂದರ್ಭಾನುಸಾರ ಲಘುವಾಗಿದ್ದರೂ ಗುರುವನ್ನಾಗಿ ಭಾವಿಸಬಹುದು



ಟೀಕೆ :- ಶ್ರೀ = ಪಾರ್ವತಿ ಎಂಬ, ವಧುವಿನ = ನಾರೀಮಣಿಯ, ಅಂಬಕ= ನೇತ್ರವೆಂಬ, ಚಕೋರಕಂ = ಚಕೋರಹಕ್ಕಿಯು, 

ಪೊರೆಯೆ = ಸಲಹಲ್ಪಡಲು, ಭಕ್ತ=ತನ್ನ ಭಕ್ತರಾದವರ, ಆವಳಿಯ= ಗುಂಪಿನ, ಹೃತ್ಕುಮುದ = ಎದೆಯೆಂಬ ಕಪ್ಪು ತಾವರೆಯ, ಕೋರಕಂ =ಮೊಗ್ಗು, ಬಿರಿಯೆ = ಅರಳಲು, ಜಗತೀವಲಯದ = ನಿನ್ನಿಂದ ರಕ್ಷಿಸಲ್ಪಡುತ್ತಿರುವ ಭೂಮಂಡಲದ, ಸೌಭಾಗ್ಯ = ಸೊಬಗೆಂಬ, ರತ್ನಾಕರಂ = ಕಡಲು, ಪೆರ್ಚಿನಿಂ= ಅತಿಶಯದಿಂದ, ಮೇರೆವರಿಯೆ= ದಡಮೀರಿ ಬರುತ್ತಿರಲಾಗಿ, 

ಆವಗಂ= ಸದಾ, ಸರಸ= ಮನೋರಂಜಕವಾದ, ಕರುಣಾ= ಕಾರುಣ್ಯವೆಂಬ, ಅಮೃತದಕಲೆಗಳಿಂ= ಸುಧಾಕಾಂತಿಗಳಿಂದ, ತೀವಿದ= ಪರಿಪೂರ್ಣತೆಯನ್ನೈದಿದ, ಎಳೆನಗೆಯ= ಮಂದಹಾಸವೆಂಬ, ಬೆಳದಿಂಗಳಿಂ= ಬೆಳದಿಂಗಳಿನಿಂದ, ಪಸರೆಸುವ= ಹರಡತಕ್ಕ, ದೇವಪುರ= ದೇವತಾವಾಸವಾದ ಕೈಲಾಸಗಿರಿಯೆ, ನಿಲಯ= ಸ್ಥಾನವಾಗುಳ್ಳ, ಲಕ್ಷ್ಮೀ= ಲಕ್ಷ್ಮಿಯೆಂಬ ನಾಮಧೇಯವುಳ್ಳ ಪಾರ್ವತಿಯ, ರಮಣನ= ಪ್ರಿಯನಾದ ಪರಮೇಶ್ವರನ, ಆಸ್ಯ= ಮುಖವೆಂಬ, ಚಂದ್ರ= ಕುಮುದಬಂಧುವು ( ಇಂದುವು ) ಎಮಗೆ= ನಮಗೆ, ಆನಂದಂ= ಸಂತೋಷವನ್ನು,  ಈಯಲಿ= ಕೊಟ್ಟು ಪಾಲಿಸಲಿ. 

ಈ ಪದ್ಯದ ಮೂಲದಲ್ಲಿ ಲಕ್ಷ್ಮೀರಮಣನಾಸ್ಯಚಂದ್ರಾನಂದ ನಮಗೀಯಲಿ ಎಂಬುದರಲ್ಲಿ ಆನಂದ ಎಂಬ ಪದಕ್ಕೆ ಕರ್ಮಪದ ಅರ್ಥವಾಗುವುದಿಲ್ಲವಾದ್ದರಿಂದ " ಲಕ್ಷ್ಮೀರಮಣನಾಸ್ಯ ಚಂದ್ರಾನಂದಮೆಮಗೀಯಲಿ ಎಂದು ತಿದ್ದಿ ಆಸ್ಯಚಂದ್ರ,

ಆನಂದಂ ಎಮಗೆ ಈಯಲಿ ಎಂದು ಪದಭೇದಮಾಡುವಂತೆ ತಿದ್ದಬೇಕು. ( ಇದು ಪರಮೇಶ್ವರನ ಪರವಾದ ಅರ್ಥವು) 

ಅ. ವಿ. ಲಕ್ಷ್ಮಿ = ಲಕ್ಷಣಯುಕ್ತಳು, (ಪಾರ್ವತಿ ) ಎಂದು ಹೇಳಬಹುದು. 


ಪಾವನತುಲಾಭರಣಮಂ ಮಾಡಿಕೊಂಡೆಸೆವ। 

ಪಾವನತರಸ್ವರೂಪಂ ನಾರದಾದಿಮುನಿ। 

ಪಾವನತಪಾದಪಂಕೇರುದ್ವಂದ್ವಮಿಂದುಕಲಾವತಂಸಮುಮೆಂಬ॥ 

ಭಾವನೆಯನೊಡಗೂಡಿಸುವಸಕಲ ಸುರರ ಸಂ । 

ಭಾವನೆಯ ಕೈಗೊಂಬ ಲೋಕವಿಸ್ತರಣ ಪ್ರ। 

ಭಾವನಯನತ್ರಯಂ ದೇವಗಂಗಾಧರಂ ಸಲಹುನಿಚ್ಚಂ ನಮ್ಮನು॥೨॥ 


ಪಾವನತುಲಾಭರಣಮಂ ಮಾಡಿಕೊಂಡೆ।

 ಪಾವನತರಸ್ವರೂಪಂ ನಾರದಾದಿ ಮುನಿ। 

ಪಾವನತ ಪಾದ ಪಂಕೇರುಹದ್ವಂದ್ವನಿಂದು ಕಲಾವತಂಸನುಮೆಯ॥ 

ಭಾವನೆಯನೊಡಗೂಡಿಸುವ ಸಕಲ ಸುರರ ಸಂ। 

ಭಾವನೆಯ ಕೈಕೊಳ್ವ ಲೋಕವಿಸ್ತರಣ ಪ್ರ। 

ಭಾವ ನಯನತ್ರಯಂ ದೇವ ಗಂಗಾಧರಂ ಬಿಡದೆ ಸಲಹುಗೆ ನಮ್ಮನು॥೨॥ 


ಪಾವನ=ಸರ್ಪವನ್ನು, ಅತುಲ=ಅಸದೃಶವಾದ, ಆಭರಣಮಂ = ಆಭರಣವನ್ನಾಗಿ, ಮಾಡಿಕೊಂಡು= ಎಸಗಿ, ಎಸೆವ= ಹೊಳೆಯುವ, ಪಾವನತರ= ಬಹಳ ಪರಿಶುದ್ಧವಾದ,  ಸ್ವರೂಪಂ= ಆಕೃತಿಯಿಂದ ಕೂಡಿದ, ನಾರದ= ನಾರದರೆ, ಆದಿ= ಮುಂತಾದ , ಮುನಿ=ತಾಪಸರಿಂದ, ಅವನತ= ನಮಸ್ಕಾರಮಾಡಿಸಿಕೊಳ್ಳುವ, ಪಾದಪಂಕೇರುವ= ಪಾದಕಮಲಗಳ, ದ್ವಂದ್ವಂ= ಎರಡನ್ನುಳ್ಳ, ಇಂದು = ಚಂದ್ರನ, ಕಲಾ= ಪ್ರಕಾಶವನ್ನು( ಹದಿನಾರನೆಯ ಒಂದು ಭಾಗವನ್ನು,) ಅವತಂಸಂ= ಶಿರಸ್ಸಿಗೆ ಅಲಂಕಾರವಾಗಿ ಮಾಡಿಕೊಂಡಿರುವ, ಉಮೆಯ= ಗೌರಿಯ, ಭಾವನೆಯನು= ಇಷ್ಟಾರ್ಥವನ್ನು, ಒಡಗೂಡಿಸುವ= ಕೈಗೂಡಿಸತಕ್ಕ, ಸಕಲ=ಅಶೇಷರಾದ, ಸುರರ=ವಿಭುದರು ಮಾಡಿದ,ಸಂಭಾವನೆಯನು= ಸಪರ್ಯೆಯನ್ನು( ಪೂಜೆಯನ್ನು) ಕೈಕೊಂಬ= ಸ್ವೀಕರಿಸತಕ್ಕ, ಲೋಕ= ಸ್ವರ್ಗ, ಮರ್ತ್ಯ ಪಾತಾಳಂಗಳಲ್ಲಿ, ವಿಸ್ತರಣ= ಖ್ಯಾತಮಾದ, ಪ್ರಭಾವ= ಮಹಿಮೆಯಿಂದ ಕೂಡಿದ,  ನಯನತ್ರಯಂ= ಮುಕ್ಕಣ್ಣನಾದ, ದೇವ= ಸ್ವಾಮಿಯಾದ, ಗಂಗಾಧರಂ= ಶಂಕರನೆ, ನಿಚ್ಚಂ= ಅನವರತವೂ, ನಮ್ಮನು= ನಮ್ಮನ್ನು, ಸಲಹು= ಸಂರಕ್ಷಿಸು. 


ಈ ಪದ್ಯದಲ್ಲಿ ನಾರದ, ಕೃದ್ವತಿ, ಪಂಕೇರುಹ, ಎಂಬುದು ಅಲುಕ್ಸಮಾಸ, ಇಂದುವಿನ ಕಳಾ ( ಷ. ತ.) ಇಂದು ಕಳೆಯೇ ಅವಂತಂಸವಾಗುಳ್ಳ ( ಬ. ಸ ) ಲೋಕವಿಸ್ತರಣ ( ಷ. ತ. ) ಲೋಕವಿಸ್ತರಣ ಪ್ರಭಾವ( ಷ. ಬ.)


ಪೂರ್ವದಲ್ಲಿ ಪಾತಾಳಲೋಕದಲ್ಲಿ ತಪಸ್ಸುಮಾಡುತ್ತಿದ್ದ ಕಪಿಲ ಋಷಿಯ ಬೆನ್ನ ಹಿಂಗಡೆಯಲ್ಲಿ ಇಂದ್ರನಿಂದ ಗೋಪ್ಯವಾಗಿಟ್ಟಿದ್ದ ಯಜ್ಞಾಶ್ವವನ್ನು ತೆಗೆದುಕೊಳ್ಳುವುದಕ್ಕುದ್ಯುಕ್ತರಾದ ಸಗರಚಕ್ರವರ್ತಿಯ ಅರವತ್ತು ಸಹಸ್ರಜನ ಪುತ್ರರೂ ಕಪಿಲಋಷಿಯ ತಪೋಭಂಗದ ವ್ಯಾಜದಿಂದ ಆತನ ನೇತ್ರಾಗ್ನಿಯಿಂದಲೆ ದಗಧರಾದರು. ಅವರಿಗೆ ಸದ್ಗತಿಯನ್ನುಂಟುಮಾ-

ಡಲು ತದ್ಗೋತ್ರಜನಾದ ಭಗೀರಥನು ಅನೇಕ ವರ್ಷಗಳು ತಪಸ್ಸುಮಾಡಿ ಸ್ವರ್ಗಲೋಕದಲ್ಲಿರುವ ಗಂಗಾನದಿಯು ಭೂಲೋಕಕ್ಕೆ ಬರುವಂತೆ ಮಾಡಿದನು. ಆ ನದಿಯು ಸ್ವರ್ಗದಿಂದ ಒಂದೇ ಉರುಬೆಗೆ ಭೂಮಿಯಮೇಲೆ ಬಿದ್ದರೆ ಅದರ ವೇಗದಿಂದ ಪ್ರಪಂಚವೇ ನಾಶವಾದೀತೆಂದು ಪರಮೇಶ್ವರನು ಮೊದಲು ಅದನ್ನು ತನ್ನ ಜಡೆಯಲ್ಲಿ ಧರಿಸಿ ಅನಂತರ ಭೂಲೋಕಕ್ಕೆ ಬಿಟ್ಟುಬಿಟ್ಟನು. ಅಂದಿನಿಂದಲೂ ಈಶ್ವರನಿಗೆ ಗಂಗಾಧರನೆಂಬ ಹೆಸರು ಬಂದಿದೆ.


ಈ ಪದ್ಯದಲ್ಲಿ " ದೇವಗಂಗಾಧರಂ ನಮ್ಮನು ಸಲಹು" ಎಂಬುದು ಸಕರ್ಮಕ ಕರ್ತರಿಪ್ರಯೋಗ. ( ನೀನು ಎಂಬ ಕರ್ತೃವು ಅಧ್ಯಾಹಾರವು. 


ತಾತ್ಪರ್ಯ:- ಹಾವುಗಳನ್ನೇ ಆಭರಣವಾಗಿ ಧರಿಸಿ ವಿರಾಜಮಾನನು, ಪರಿಶುದ್ಧಸ್ವರೂಪನು, ಮಹರ್ಷಿಗಳಾದ ನಾರದಾದಿಗಳಿಂದ ವಂದ್ಯವಾದ ಪಾದಾರವಿಂದಗಳುಳ್ಳವನು, ಇಂದುರೇಖೆಯನ್ನು ತಲೆಯಲ್ಲಿ ಧರಿಸಿದವನು, ಗಿರಿಜೆಯ ಮನೋಭೀಷ್ಟ ಸಿದ್ಧಿಯಂಗೈವನು, ಆಶೇಷ ದೇವತಾಗಣದಿಂದ ಸಂಪೂಜ್ಯನಾದವನೂ ಆಗಿ, ಲೋಕವಿಖ್ಯಾತವಾದ 

ಮಹಾತ್ಮೆಯುಳ್ಳ, ಸೂರ್ಯ ಚಂದ್ರ ಅಗ್ನಿಗಳೇ ಕಣ್ಣುಗಳಾಗಿರುವ, ಭಗೀರಥರಾಯನ ಇಷ್ಟಸಿದ್ಧಿಗಾಗಿ ಮೊದಲು ಗಂಗೆಯನ್ನು ಜಡೆಯಲ್ಲಿ ಧರಿಸಿ ಪುನಃ ಹೊರಕ್ಕೆ ಬಿಟ್ಟಂಥ, ಪರಮೇಶ್ವರನು ನಮ್ಮನ್ನು ಎಡೆಬಿಡದೆ ಸಂರಕ್ಷಣೆಯನ್ನು ಮಾಡಲಿ" ವಿಘ್ನಗಳು ಹೇರಳವಾಗಿದ್ದು ಗ್ರಂಥವು ಪರಿಸಮಾಪ್ತಿಯನ್ನು ಹೊಂದದೇ ಹೋದೀತೆಂದು ನೆನೆದು ಸಕಲ ಪುರುಷಾರ್ಥಪ್ರದನೂ, ಆದಿಪೂಜ್ಯನೂ ಆಗಿರುವ ವಿಘ್ನೇಶ್ವರನ ಪ್ರಾರ್ಥನಾ ರೂಪವಾದ ಮಂಗಳವನ್ನು ಪುನಃ ರಚಿಸಿದಾನೆಂದರಿಯಬೇಕು. 


ಪ್ರಸ್ತುತದೊಳೊಗೆದ ಮುಂಬೆಳಗಮಲದಂತದ ಗ। 

ಭಸ್ತಿ ನವ ಪೂರ್ವ ಸಂಧ್ಯಾರುಣಂ ಭಾಳವಿ। 

ನ್ಯಸ್ತ ಸಿಂಧೂರಮಂಕುರಿಪ ಪೊಂಬಿಸಿಲೊಡನೆ ಮೂಡುವೆಳನೇಸರೆಸೆವ॥ 

ಮಸ್ತಕದ ಮಣಿಮಕುಟಮಾಗಲುದಯಾಚಲದ । 

ವಿಸ್ತಾರದಂತೆ ಭದ್ರಾಕೃತಿಯೊಳೊಪ್ಪುವ ಸ। 

ಮಸ್ತಸಿದ್ಧಿಪ್ರದಾಯಕ ವಿನಾಯಕ ಮಾಳ್ಪುದೆಮಗೆ ನಿರ್ವಿಘ್ನತೆಯನು॥೩॥


ಪ್ರತಿಪದಾರ್ಥ:- ಪ್ರಸ್ತುತದೊಳು= ಕಾಲಕ್ಕೆ ಸರಿಯಾಗಿ,  ಒಗೆದ=ಉಂಟಾದ,  ಮುಂಬೆಳಗು= ಪ್ರಾತಃಕಾಲದ ಕಾಂತಿಯು, ಅಮಲ= ಪರಿಶುದ್ಧವಾದ, ದಂತದ= ಕೋರೆಹಲ್ಲಿನ, ಗಭಸ್ತಿ= ಮರೀಚಿಯು(ಕಿರಣವು) ನವ= ನೂತನವಾದ, ಪೂರ್ವ= ಮೂಡಲಲ್ಲಿರುವ, ಸಂಧ್ಯಾರುಣಂ= ಸಂಜೆಗೆಂಪು, ಭಾಳ= ಫಾಲದಲ್ಲಿ(ಹಣೆಯಲ್ಲಿ) ವಿನ್ಯಸ್ತ= ಇಡಲ್ಪಟ್ಟಿರುವ, ಸಿಂಧೂರಂ= ಕುಂಕುಮವು, (ಚಂದ್ರ) ಅಂಕುರಿಪ= ಉತ್ಪತ್ತಿಯಾಗುತ್ತಲಿರುವ, ಪೊಂಬಿಸಿಲೊಡನೆ = ಚಿನ್ನದ ವರ್ಣವಾದ ಬಿಸಿಲಿನ ಜೊತೆಯಲ್ಲಿ, ಮೂಡುವ= ಉತ್ಪನ್ನವಾಗುವ, ಎಳನೇಸರು= ಪ್ರಾತಃಕಾಲದ ಸೂರ್ಯನು, ಎಸೆವ=ಹೊಳೆಯುವ, ಮಸ್ತಕದ= ಶಿರಸ್ಸಿನ, ಮಣಿ =ರತ್ನಗಳಿಂದ ಕೆತ್ತಲ್ಪಟ್ಟ, ಮಕುಟಂ=ಕಿರೀಟವು, ಅಗಲು=ಅಗಲವಾಗಿ, ಉದಯಾಚಲದ= ಪೂರ್ವದಿಕ್ಕಿನ ಪರ್ವತದ, ವಿಸ್ತಾರದಂತೆ= ವಿಶಾಲತೆಯಹಾಗೆ, ಭದ್ರ= ಮಂಗಳಕರವಾದ, ಆಕೃತಿಯೊಳು= ಆಕಾರದಿಂದ, ಒಪ್ಪುವ=ಹೊಳೆಯುತ್ತಲಿರುವ ಎಂದರೆ ಸಹಿತವಾಗಿರುವ, ಸಮಸ್ತ= ಅಶೇಷವಾದ, ಸಿದ್ಧಿ=ಇಷ್ಟಾರ್ಥಗಳನ್ನು, ಪ್ರದಾಯಕಂ=ದಯಪಾಲಿಸತಕ್ಕ, ವಿನಾಯಕ= ಗಣೇಶನೇ, ಎಮಗೆ=ನಮಗೆ, ನಿರ್ವಿಘ್ನತೆಯನು= ತೊಂದರೆಗಳಿಲ್ದಿದಿ-

ರುವುದನ್ನು,(ಅಡ್ಡಿಗಳಿಲ್ಲದಿರುವುದನ್ನು) ಮಾಳ್ಪುದು= ಉಂಟುಮಾಡಬೇಕು, 


ಈ ಪದ್ಯದಲ್ಲಿ " ವಿನಾಯಕ ನಿರ್ವಿಘ್ನತೆಯನು ಮಾಳ್ಪುದು" ಎಂಬುದು ಪ್ರಧಾನವಾದ ಸಕರ್ಮಕ ಕರ್ತರಿ ವಾಕ್ಯವು. ಬೆಳಕಿನ ಮುಂದು=ಮುಂಬೆಳಗು ( ಅ. ಭಾ. ಸ.) ಉದಯಾಚಲ, ಭದ್ರಾಕೃತಿ, ಸಂಧ್ಯಾರುಣ ಈ ಮೂರೂ ಸವರ್ಣದೀರ್ಘಸಂಧಿ, ಭದ್ರ=ಆನೆಯ, ಆಕೃತಿ=ಮುಖದ ಆಕಾರವುಳ್ಳವನು, ವಿ=ತೊಂದರೆ, (ಎಡರುಗಳಿಗೆ) ನಾಯಕಂ= ಒಡೆಯ. ( ಷ. ತ. ) 


ಭೂವ್ಯೋಮ ಪಾತಾಳ ಲೋಕಂಗಳಲ್ಲಿ ಸಂ। 

ಭಾವ್ಯರೆಂದೆನಿಸಿಕೊಳ್ವಖಿಳದೇವರ್ಕಳಿಂ । 

ಸೇವ್ಯನಾದಜನ ಪಟ್ಟದ ರಾಣಿ ವರದೆ ಕಲ್ಯಾಣಿಫಣಿವೇಣಿ ವಾಣಿ॥ 

ಕಾವ್ಯಮಿದು ಭುವನದೊಳ್ ಸಕಲ ಜನರಿಂದ ಸು। 

ಶ್ರಾಯಮಪ್ಪಂತೆನ್ನ ವದನಾಬ್ಜದಲ್ಲಿ ನೀ । 

ನೇ ವ್ಯಾಪಿಸಿರ್ದಮಲಸುಮತಿಯಂ ತಾಯೆನಗೆ ತಾಯೆ ನಗೆಗೂಡಿ ನೋಡಿ॥೪॥ 


ಪ್ರತಿಪದಾರ್ಥ:- ಭೂವ್ಯೋಮಪಾತಾಳಲೋಕಂಗಳಲ್ಲಿ= ಸ್ವರ್ಗ,  ಮರ್ತ್ಯ, ಪಾತಾಳಂಗಳೆಂಬ ತ್ರಿಲೋಕಗಳಲ್ಲಿಯೂ, ಸಂಭಾವ್ಯರು= ಪೂಜಾರ್ಹರು, ಎಂದು=ಎಂಬುದಾಗಿ, ಎನಿಸಿಕೊಂಬ= ಹೇಳಿಸಿಕೊಳ್ಳತಕ್ಕ, ಅಖಿಲ= ಅಶೇಷವಾದ, ದೇವರ್ಕಳಿಂ= ಸುರರಿಂದ, ಸೇವ್ಯಮಾದ= ಸೇವಾರ್ಹರಾಗಿರುವ, ಅಜನ=ಕಮಲಾಸನ, ಪಟ್ಟದರಾಣಿ= ಪಟ್ಟಮಹಿಷಿಯಾ-

ಗಿರುವ, ವರದೆ= ಇಷ್ಟಾರ್ಥಪ್ರದೆಯಾದ, ಕಲ್ಯಾಣಿ= ಮಂಗಳಕರಳಾದ, ಫಣಿವೇಣಿ=ನಾಗವೇಣಿಯಾದ, (ಕರಿಯ ಹಾವಿನಂತೆ ಉದ್ದವಾದ ಮತ್ತು ಕಪ್ಪಾದ ಜಡೆಯುಳ್ಳ) ತಾಯೆ= ಜನನಿಯಾದ, ವಾಣಿ=ಶಾರದೆಯೆ, ಇದುಕಾವ್ಯಂ= ಈ ಕೃತಿಯು. ಭುವನದೊಳ್= ಪ್ರಪಂಚದಲ್ಲಿ, ಸಕಲಜನರಿಂದೆ= ಎಲ್ಲರಿಂದಲೂ, ಸುಶ್ರಾವ್ಯಂ= ಶ್ರವಣಾರ್ಹವಾದ್ದು, ಅಪ್ಪಂತೆ= ಆಗುವರೀತಿಯಾಗಿ, ಎನ್ನ=ನನ್ನ, ವದನ= ಮುಖವೆಂಬ, ಅಬ್ಜದಲ್ಲಿ= ಕಮಲದಲ್ಲಿ( ಕಮಲದಂತಿರುವ ನನ್ನ ಮುಖದಲ್ಲಿ) ನೀನೆ ವ್ಯಾಪಿಸಿ= ನೀನು ಆವರಿಸಿಕೊಂಡು, ಇರ್ದು=ಇದ್ದು, ನಗೆಗೂಡಿ= ಆಹ್ಲಾದದಿಂದೊಡಗೂಡಿ, ನೋಡಿ= ಈಕ್ಷಿಸಿ, ಎನಗೆ=ನನಗೆ, ಅಮಲ=ಪರಿಶುದ್ಧವಾದ, ಸು=ಒಳ್ಳೆಯ, ಮತಿಯಂ= ಬುದ್ಧಿಯನ್ನು, ತಾ=ದಯಪಾಲಿಸು. 


ಈ ಪದ್ಯದಲ್ಲಿ " ನೀನು, ಅಮಲಮತಿಯಂ ತಾ" ಎಂಬುದು ಪ್ರಧಾನವಾದ ಸಕರ್ಮಕ ಕರ್ತರಿ ವಾಕ್ಯವು. ಜ =ಜನ್ಮವು 

ಅ=ಇಲ್ಲದವನು (ಅಜ) ಮತ್ತು ಅ=ಹರಿಯಿಂದ, ಜ=ಉತ್ಪನ್ನನಾದವನು,(ಅಜ) ಫಣವುಳ್ಳದ್ದು ಫಣಿ, ಅಪ್=ನೀರಿನಲ್ಲಿ

ಜ=ಹುಟ್ಟಿದ್ದು,(ಅಬ್ಜ) ವದನವೆಂಬ ಅಬ್ಜ=ವದನಾಬ್ಜ(ಅ. ಪೂ. ಕ. ) 


ತಾತ್ಪರ್ಯ:- ಇನ್ನು ಮುಂದೆ ಸಕಲ ಶಬ್ಧಾರ್ಥ ಸ್ವರೂಪಳಾದ ಶಾರದೆಯನ್ನು ಪ್ರಾರ್ಥಿಸುತಲಿದ್ದಾನೆ. ಭೂಲೋಕ, ಪಾತಾಳ, 

ಸ್ವರ್ಗಲೋಕಗಳೆಂಬ ಮೂರು ಲೋಕಗಳಲ್ಲಿಯೂ ಪೂಜಾರ್ಹರಾಗಿ ಇರತಕ್ಕ ಅಶೇಷರಾದ ತ್ರಿದಶರಿಂ ಸೇವ್ಯಳಾದ, ಬ್ರಹ್ಮನಿಗೆ ಮುಖ್ಯ ಮಹಿಷಿಯಾಗಿರುವ, ಇಷ್ಟಾರ್ಥ ಸಿದ್ಧಿಯಂ ಗೈಯುವ ಮತ್ತು ಮಂಗಳಕರಳಾಗಿರತಕ್ಕ ಹಾವಿನಂತೆ ಉದ್ದವಾದ ಜಡೆಯುಳ್ಳ ತ್ರೈಲೋಕ್ಯಜನನಿಯಾಗಿರುವ ಶಾರದೆಯೇ ! ಈ ಪ್ರಪಂಚದಲ್ಲಿರುವ ಸಕಲ ಜನರಿಗೂ ಆನಂದವನ್ನು ಉಂಟುಮಾಡುವಂತೆ ನಾನು ಈ ಕೃತಿಯನ್ನು ರಚಿಸಲು ನೀನು ನನ್ನ ಮುಖ ಕಮಲವನ್ನು ಆಶ್ರಯಿಸಿ ಪರಿಶುದ್ಧವಾದ ಜ್ಞಾನವನ್ನು ನನಗೆ ಕರುಣಿಸಿ ಕಾಪಾಡಬೇಕೆಂದು ಪ್ರಾರ್ಥಿಸುತ್ತೇನೆ.


ಪಾರದೆ ಪದಾರ್ಥಮಂ ವರಯತಿಗೆ ಭಂಗಮಂ । 

ತಾರದೆ ನಿಜಾನ್ವಯಕ್ರಿಯಗಳ್ಗೆ ದೂಷಣಂ। 

ಬಾರದೆ ವಿಶೇಷಗುಣ ಗಣ ಕಲಾ ಗೌರವಂ ತೀರದೆ ದುರುಕ್ತಿಗಳ್ಗೆ॥ 

ಸೇರದೆ ಸುಮಾರ್ಗದೊಳ್ ನಡೆವ ಸತ್ಪುರುಷನ ಗ। 

ಭೀರದಶೆಯಂ ಪೋಲ್ವ ಕಾವ್ಯಪ್ರಬಂಧಮಂ। 

ಶಾರದೆಯ ಕರುಣದಿಂ ಪೇಳ್ವೆನಾಂ ದೋಷಮಂ ತೊರೆದೆಲ್ಲರುಂ ಕೇಳ್ವುದು॥೫॥ 


ಪ್ರತಿಪದಾರ್ಥ:- ಪದ= ಶಬ್ಧಸಮುದಾಯದ, ಅರ್ಥಮಂ= ಅಭಿಪ್ರಾಯವನ್ನು,  (ಪರ=ಇತರರ, ಅರ್ಥಮಂ=ವಸ್ತುವನ್ನು ಎಂದು ಪಾಠಾಂತರವು) ಎಂದರೆ ಬೇರೆಯಾದ ಅರ್ಥವೆಂಬುದನ್ನು, ಪಾರದೆ=ಪಡೆಯದೆ, ( ಹೆರರೊಡವೆಯನೂನಪಹರಿ- 

ಸದೆ) ವರ=ಉತ್ತಮವಾದ,  ಯತಿಗೆ= ಯತೀಶ್ವರನಿಗೆ, ಮತ್ತು ಪದ್ಯಗಳ ಯತಿ ಎಂಬ ಸ್ಥಳಕ್ಕೆ, ಭಂಗಮಂ= ರಾಹಿತ್ಯವನ್ನು, ಮತ್ತು ಅಮರ್ಯಾದೆಯನ್ನು, ತಾರದೆ = ಬರಮಾಡದೆ, (ಉಂಟುಮಾಡದೆ) ನಿಜ=ತನ್ನದಾದ, ಅನ್ವಯಂ= ಅನ್ವಯ ಯುಕ್ತವಾದ ಪದಗಳಿಗೆ, ಮತ್ತು ಕುಲಕ್ಕೆ, ಕ್ರಿಯೆಗಳ್ಗೆ= ತಿಙಂತಗಳಿಗೆ ಮತ್ತು ಕಾರ್ಯಗಳಿಗೆ, ದೂಷಣಂ= ಅಪವಾದವು ಮತ್ತು ತಪ್ಪು, ಬಾರದೆ= ಒದಗದಂತೆ, ವಿಶೇಷ = ಬಹಳವಾಗಿ ಮತ್ತು ಅತಿಯಾಗಿ, ಗುಣ= ಕೃತಿಸಂಬಂಧಗುಣಗಳೆ ಮತ್ತು ಕಾಂತಿಯೇ ಮೊದಲಾದವುಗಳ, ಗಣ= ಮಾತ್ರೆಗಳಿಂದ ಯುಕ್ತವಾದ ಮತ್ತು ಸಮೂಹದ, ಕಲಾ= ಪ್ರಕಾಶದ,ಮತ್ತು ಬಿಜ್ಜೆಯ, ಗೌರವಂ= ಗಾಂಭೀರ್ಯವನ್ನು ಮತ್ತು ಗೌರವವನ್ನು,  ತೀರದೆ= ವಿಸರ್ಜಿಸದೆ, ಸು= ಒಳ್ಳೆಯದಾದ, ಮಾರ್ಗದೊಳ್=ದಾರಿಯಲ್ಲಿ ಮತ್ತು ದ್ರಾಕ್ಷೆಯಪಾಕದ ಪದ್ಧತಿಯಲ್ಲಿ,  ನಡೆವ= ತಿರುಗುತ್ತಿರುವ, ಸತ್ಪುರುಷನ= ಸತ್ಸಂ- 

ಪ್ರದಾಯವುಳ್ಳವನ, ಗಭೀರ= ಗಾಂಭೀರ್ಯವಾದ, ದೆಶೆಯಂ= ತೆರನನ್ನು, ಪೋಲ್ವ= ಒಪ್ಪತಕ್ಕ, ಪ್ರಬಂಧಮಂ = ಕಾವ್ಯವನ್ನು, ( ಕಥೆಯನ್ನು)ಶಾರದೆಯ= ಸರಸ್ವತೀದೇವಿಯ, ಕರುಣೆಯಿಂ=ದಯೆಯಿಂದ, ನಾಂ = ನಾನು, ಪೇಳ್ವೆನು= ಹೇಳುತ್ತಿದ್ದೇನೆ, ದೋಷಮಂ= ನಿಂದೆಯನ್ನು, ತೊರೆದು= ವಿಸರ್ಜಿಸಿ, ( ಎಣಿಸದೆ) ಎಲ್ಲರೂ= ಸಮಸ್ತರೂ, ಕೇಳ್ವುದು= ಲಾಲಿಸಬೇಕು. 


ಈ ಪದ್ಯದಲ್ಲಿ " ನಾಂ ಕಾವ್ಯಪ್ರಬಂಧಮಂ ಪೇಳ್ವೆಂ" ಎಲ್ಲರುಂ ಇದಂ ಕೇಳ್ವುದು, ಎಂಬೆರಡು ಪ್ರಧಾನವಾದ ಸಕರ್ಮಕ ಕರ್ತರಿ ವಾಕ್ಯಗಳಿರುವುವು. ಇದಂ ಎಂಬ ಕರ್ಮಪದವು ಅಧ್ಯಾಹಾರವು. ( ಅರ್ಥಚಮತ್ತಕಾರದಿಂದಲೂ, ಸರಸಗುಣಾಲಂಕಾರಗಳಿಂದಲೂ ಒಡಗೂಡಿ ಕೇಳುವುದಕ್ಕೆ ಇಂಪಾಗಿಯೂ ಎರುವ ಕಾವ್ಯ ರಚನೆಗೆ ದ್ರಾಕ್ಷಾಪಾಕವೆನ್ನುವರು.) 


ತಾತ್ಪರ್ಯ:- ಇತರರ ಪದಾರ್ಥಕ್ಕೆ ಆಶೆಪಡದೆ ಶ್ರೇಷ್ಠನಾದ ಯತೀಶ್ವರನಿಗೆ ಅಪಮಾನವನ್ನು ಉಂಟುಮಾಡದಂತೆ ಪ್ರೇಮಿಸತಕ್ಕ, ತನ್ನ ಸಂತತಿಗೂ ತನ್ನಿಂಗಯ್ಯಲ್ಪಡುವ ಕಾರ್ಯಕ್ಕೂ, ಕಾವ್ಯಕ್ಕೂ ಯಾವ ವಿಧವಾದ ಕುಂದೂ ಇಲ್ಲದಂತೆಯೂಒಳ್ಳೆ ಕುಲದಲ್ಲಿ ಹುಟ್ಟತಕ್ಕದ್ದು, ಔದಾರ್ಯಸ್ವಭಾವ, ಅಧಿಕವಾದ ಐಶ್ವರ್ಯವಿರುವುದು. ಇವೇ ಮೊದಲಾದ ಸದ್ಗುಣಗಳನ್ನೂ ವಿದ್ಯಾಸಂಬಂಧವಾದ ಮರ್ಯಾದೆಯನ್ನು ಹೊಂದಿ, ತುಚ್ಛಮಾರ್ಗವನ್ನು ಪರಿತ್ಯಜಿಸಿಸನ್ಮಾರ್ಗವನ್ನೇ ಅವಲಂಬಿಸಿ ಇರುವ ಧಾರ್ಮಿಕನ ಹಾಗೆ, ಬಹಳ ಗಂಭೀರವಾದ ಮಾರ್ಗವನ್ನು ಅನುಸರಿಸಿ, ಯಾವ ವಿಧವಾದ ದೋಷವೂ ಇಲ್ಲದೆನಿರೂದುಷ್ಟವಾದ ಯತಿಸ್ಥಾನ ಮೊದಲಾದ್ದರಲ್ಲಿಯೂ ದೋಷವಿಲ್ಲದಿರುವ,ಸುಬಂತ ತಿಙಂತ ಸಂಬಂಧವಾದ ಯಾವ ನ್ಯೂನತೆಗೂಅವಕಾಶವಿಲೂಲದಿರುವ, ನಿರೂದೋಷವಾದ ಎಂದರೆ ಅಶುಭವಾದ ಮಾತುಗಳು ಮತ್ತು ಅಪಶಬ್ಧಗಳು ಯಿಲ್ಲದಿರುವ ಕೃತಿಸಂಬಂಧವಾದ ಎಲ್ಲಾ ಗುಣಗಣಗಳಿಂದಲೂ ಕೂಡಿರುವ ಈ ಕಾವ್ಯವನ್ನು ಸಕಲರೂ ದೋಷವನ್ನೆಣಿಸದೆ ಸಂತೋಷಚಿತ್ತದಿಂದ ಲಾಲಿಸಬೇಕು. ಶಾರದೆಯ ಅನುಗ್ರಹದಿಂದ ನಾನು ಹೇಳುತ್ತೇನೆಂದು ಕವಿಯು ಪ್ರಾರ್ಥಿಸಿದ್ದಾನೆ.  


ಛಂದಸ್ಸು ಲಕ್ಷಣಮಲಂಕಾರ ಭಾವರಸ। 

ಮೊಂದಿ ಕಲೆವೆತ್ತ ಸತ್ಕೃತಿ ಚಮತ್ಕೃತಿ ಯುಕ್ತಿ| 

ಯೊಂದುಮಿಲ್ಲದ ಕಾವ್ಯಮಶ್ರಾವ್ಯಮಹುದೆಂದರಿಯದೆ ಕವಿತೆಯನು ಬರಿದೆ॥ 

ದಂದುಕಕ್ಕೊಳಗಾಗಿ ಪೇಳ್ದೆನೆಂದೆನ್ನ ನಗು| 

ವಂದಮಂ ಮಾಡದೆನಗೊಲಿದಿತ್ತನಮಲಮತಿ| 

ಯಂ ದೇವಪುರದ ಲಕ್ಷ್ಮೀರಮಣನೆಂದರಿದು ಕೇಳ್ವುದೆಲ್ಲಾ ಸುಜನರು॥೬॥ 


 ಪ್ರತಿಪದಾರ್ಥ:-


ಛಂದ= ಛಂದಸ್ಸನ್ನೂ, ಸು= ಒಳ್ಳೇದಾದ, ಲಕ್ಷಣಂ= ಅಸಮವಾದ ಧರ್ಮಚಿಹ್ನೆಯನ್ನು( ಕೃತಿಯ ಲಕ್ಷಣವನ್ನು) ಭಾವ= ಅಭಿಪ್ರಾಯ, ರಸ= ಶೃಂಗಾರವೇ ಮೊದಲಾದ ನವರಸಗಳು ಇವುಗಳನ್ನು,  ಒಂದಿ= ಸೇರಿ, ಕಲೆವೆತ್ತ= ಕಾಂತಿಯಂ ತಾಳಿದ, ಸತ್ಕೃತಿ=ಸದ್ಗ್ರಂಥವು, ಚಮತ್ಕೃತಿ=ಚತುರೋಕ್ತಿಯು, ಒಂದುಂ= ಇದು ಯಾವುದೂ, ಇಲ್ಲದ= ಇಲ್ಲದೆಯಿರುವ, ಕಾವ್ಯಂ= ಕೃತಿಯು, ಅಶ್ರಾವ್ಯಂ= ಕೇಳಲನರ್ಹವಾದದ್ದು, ಅಕ್ಕೆ= ಆಗಲಿ, ಎಂದು=ಎಂಬುದಾಗಿ,  ಕವಿತೆಯನು= ನಾನು ರಚಿಸಿದ ಗ್ರಂಥವನ್ನು, ಬರಿದೆ= ಅನ್ಯಾಯವಾಗಿ, ಜರಿದು= ಹೀಯಾಳಿಸಿ, ದಂದುಗಕ್ಕೆ= ಅಪಹಾಸ್ಯಕ್ಕೆ, ಒಳಗಾಗಿ= ಗುರಿಯಾಗಿ, ಪೇಳ್ವೆ= ಹೇಳಿದ್ದೇನೆ, ಎಂದು= ಎಂಬುದಾಗಿ, ಎನ್ನ= ನನ್ನನ್ನು, ನಗುವಂದಮಂ= ನಗೆಗೀಡಾಗಿ, ಮಾಡದೆ=ಎಸಗದೆ, ಎನಗೆ= ನನಗೆ, ದೇವಪುರ(ದ) = ದೇವಪುರವೆಂಬ ಊರೇ ವಾಸವಾಗಿ ಉಳ್ಳ, ಲಕ್ಷ್ಮೀರಮಣನ= ವಿಷ್ಣುವಿನ, ಅಮಲ= ಪರಿಶುದ್ಧವಾದ,  ಮತಿಯಂ= ಅರಿವನ್ನು, ಒಲಿದು= ವಿಶ್ವಾಸದಿಂದ, ಇತ್ತನು= ದಯಪಾಲಿಸಿದನು, ಎಂದು= ಎಂಬುದಾಗಿ,  ಎಲ್ಲಾ ಸುಜನರು= ಅಶೇಷರಾದ ಸತ್ಪುರುಷರೂ, ಅರಿದು= ತಿಳಿದುಕೊಂಡು, ಕೇಳ್ವುದು= ಲಾಲಿಸಬೇಕು.  


ಈ ಪದ್ಯದಲ್ಲಿ " ದೇವಪುರದ ಲಕ್ಷ್ಮೀರಮಣನುಅಮಲಮತಿಯ ಇತ್ತಂ" ಎಲ್ಲಾ ಸುಜನರು ಇದಂ ಕೇಳ್ವುದು" ಈ ಎರಡೂ ಸಕರ್ಮಕ ಕರ್ತರಿ ವಾಕ್ಯಗಳು. 

 ಛಂದಸ್ಸು:- ಪದ್ಯಗಳ ರಚನಾಭಿಜ್ಞಾನ ಶಾಸ್ತ್ರವು.  

ರಸ:- ಶೃಂಗಾರ, ವೀರ, ಕರುಣ, ಅದ್ಭುತ, ಹಾಸ್ಯ, ಭಯಾನಕ, ಭೀಭತ್ಸ, ರೌದ್ರ, ಶಾಂತಿ ಎಂಬ ಒಂಬತ್ತು ರಸಗಳು. 


ತಾತ್ಪರ್ಯ:- ಸಾಧಾರಣವಲ್ಲದಿದ್ದರೂ,ಧರ್ಮಮಾರ್ಗವನ್ನೂ, ಉಪಮಾಲಂಕಾರವೇ ಮೊದಲಾದ ಅಲಂಕಾರಗಳನ್ನೂ, ಸದ್ಭಾವವನ್ನೂ ಉಳ್ಳ ಗ್ರಂಥಕ್ಕೆ ಶ್ರೇಷ್ಠವಾದ ಗ್ರಂಥವೆಂಬ ನಾಮಧೇಯವು ಬರುವುದು. ಕಾವ್ಯದಲ್ಲಿ ಯುಕ್ತಿಚಾತುರ್ಯಗ- 

ಳಿಲ್ಲದಿದ್ದರೆ ಕೇಳುವುದಕ್ಕೆ ಮನ ಒಪ್ಪುವುದಿಲ್ಲವೆಂಬತೆರನಾದ ಹಾಸ್ಯೋಕ್ತಿಗಳಿಗೆಮಾತ್ರವೇ ಈ ಗ್ರಂಥವನ್ನು ಕವಿಯು ಬರೆದನೆಂದು ಜನರುತಿಳಿಯದೆ ದೇವಪುರವಾಸಿಯಾದ ಶ್ರೀಮನ್ನಾರಾಯಣ ಮೂರ್ತಿಯೇದಿವ್ಯಾನುಗ್ರಹವನ್ನು ಕರುಣಿಸಿ ಸುಜ್ಞಾನದಿಂದ ಈ ಕೃತಿಯನ್ನ ಬರೆಯಿಸಿದನೆಂದರಿತು ಅಶೇಷರಾದ ಸುಜನರೂ ಕೇಳಬೇಕು ಎಂದು ಭಾವವು. ಇದರಿಂದ ಈ ಕೃತಿಯು ಕವಿಯ ಸ್ವಬುದ್ಧಿ ಮಾತ್ರ ಕಲ್ಪಿತವಲ್ಲವೆಂತಲೂ ದೈವಾನುಗ್ರಹದಿಂದಲೇಕವಿತೆಯು ಕವಿತೆಯು ಹೊರಟಿರು-

ವುದೆಂತಲೂ, ಆದುದರಿಂದಲೇ ನಿರೂದೋಷವಾಗಿ ಸರ್ವಜನರಿಗೂ ಶ್ರಾವ್ಯವಾಗಿರುವುದೆಂತಲೂ ಕವಿಯು ತನ್ನ ಆಶಯವನ್ನು ಹೊರಪಡಿಸಿದ್ದಾನೆ. 


ಕೆನೆವಾಲ ಕಡೆದು ನವನೀತಮಂ ತೆಗೆದು ಬಾ। 

ಯ್ಗಿನಿದಾಗಿ ಸವಿಯದದರೊಳಗೆ ಪುಳಿವಿಳಿದು ರಸ। 

ವನೆ ಕೆಡಿಸಿದೊಡೆ ಕರೆದ ಸುರಭಿಗಪ್ಪುದೆ ಕೊರತೆ ಕಾವ್ಯಮಂ ಕೇಳ್ದು ಮಥಿಸಿ॥ 

ಜನಿಸಿದ ಪದಾರ್ಥವಂ ತಿಳಿದು ನೋಡದೆ ವಿನೂ। 

ತನಕವಿತೆಯೆಂದು ಕುಂದಟ್ಟು ಜರೆದೊಡೆ ಪೇಳ್ದ । 

ವನೊಳಾವುದೂಣೆಯಂ ಜಾಣರಿದನರಿದು ಮತ್ಸರವ ಮರೆದಾಲಿಸುವುದು॥೭॥ 


ಪ್ರತಿಪದಾರ್ಥ:- ಕೆನೆವಾಲ=ಕೆನೆಯಿರತಕ್ಕ ಹಾಲನ್ನು, ಕಡೆದು= ಮಥನಮಾಡಿ, ನವನೀತಮಂ= ಬೆಣ್ಣೆಯನ್ನು, ತೆಗೆದು= ಈಚೆಗೆ ತೆಗೆದು(ಎತ್ತಿ) ಬಾಯಿಗೆ= ರಸನೆಗೆ, ಇನಿದಾಗಿ= ರುಚಿಯಾಗಿರುವಂತೆ, ಸವಿಯದೆ= ಆಸ್ವಾದಿಸದೆ, ಅದರೊಳಗೆ= ಅದರಲ್ಲಿ, (ಬೆಣೆ) ಪುಳಿವಿಡಿದು=ಹುಳೆಯನ್ನು ಆಗಮಾಡಿಸಿ, ರಸವನೆ=ಅದರ ರುಚಿಯನ್ನು, ಕೆಡಿಸಿದೊಡೆ= ನಿರ್ನಾಮಮಾಡಿದರೆ( ಹಾಳುಮಾಡಿದರೆ) ಕರೆದಸುರಭಿಗೆ= ಹಾಲನ್ನಿತ್ತ ಗೋವಿಗೆ, ಕೊರತೆ= ಬಾಧಕವು, (ನ್ಯೂನತೆಯು) ಅಪ್ಪುದೆ= ಪ್ರಾಪ್ತವಾದೀತೆ, ಕಾವ್ಯಮಂ ಕೇಳ್ದು= ಕೃತಿಯನ್ನು ಕೇಳಿ, ಮಥಿಸಿ= ಚನ್ನಾಗಿ ಪರಿಶೀಲಿಸಿ,ಜನಿಸಿದ= ಅದರಿಂದುಂಟಾದ, ಪದಾರ್ಥವಂ= ವಸ್ತುವನ್ನು( ಅರ್ಥಸ್ವಾರಸ್ಯವನ್ನು) ತಿಳಿದು= ತಿಳಿದುಕೊಂಡು,  ನೋಡದೆ= ಲಕ್ಷಿಸದೆ, ವಿನೂತನ= ಹೊಸದಾಗಿರುವ, ಕವಿತೆ ಎಂದು= ಕೃತಿಯೆಂಬುದಾಗಿ, ಕುಂದಿಟ್ಟು= ದೋಷವನ್ನುಂಟುಮಾಡಿ, ಜರೆದೊಡೆ= ಹೀಯಾಳಿಸಿದರೆ, ಆವುದು= ಯಾವುದು, ಊಣೆಯಂ= ದೋಷವು? ಜಾಣರು= ಪ್ರಾಜ್ಞರಾದವರು, ಇದನು= ಇದನ್ನು, ಅರಿದು= ಚನ್ನಾಗಿ ಯೋಚಿಸಿ,  ಮತ್ಸರವನು= ಕೋಪವನ್ನು, (ದ್ವೇಷಬುದ್ಧಿಯನ್ನು) ಉಳಿದು= ಬಿಟ್ಟು,  ಕೇಳ್ವುದು= ಲಾಲಿಸತಕ್ಕದ್ದು. 


ತಾತ್ಪರ್ಯ:- ಕೆನೆಯುಳ್ಳ ಹಾಲನ್ನು ಕಡೆದು ಬೆಣ್ಣೆಯನ್ನು ಬೇರ್ಪಡಿಸಿ ರುಚಿಯಾಗಿ ಮಾಡಿಕೊಂಡು ತಿಂದು ಸಂತೋಷಪಡುವುದನ್ನು ಬಿಟ್ಟು, ಅದರಲ್ಲಿ ಹುಳಿಯೂ ಅಸ್ವಾರಸ್ಯವೂ ಉಂಟಾಗುವಂತೆ ಮಾಡಿಕೊಂಡು 

ಅಮೃತೋಪಮವಾದ ಹಾಲನ್ನಿತ್ತ ಹಸುವನ್ನು ನಿಂದಿಸಿದರೆ ಆ ದೂಷಣೆಯು ಹಸುವಿಗೆ ಹೇಗೆ ಸಲ್ಲಲಾರದೋ ಹಾಗೆಯೇ ನಾನು ಮಾಡಿರುವ ಈ ಕಾವ್ಯಗ್ರಂಥವನ್ನು  ಆಮೂಲಾಗ್ರವಾಗಿ ಪರಿಶೋಧಿಸಿ ತಿಳಿಯದೆ ಸುಮ್ಮನೆ ನೂತನ ಗ್ರಂಥವೆಂದು 

ಅಸೂಯೆಯಿಂದ ತಿರಸ್ಕರಿಸಿದಲ್ಲಿ ಆ ದೋಷವು ನನಗೆ ಅನ್ವಯಿಸತಕ್ಕದ್ದಲ್ಲ. ಪ್ರಾಜ್ಞರು ಗುಣೈಕ ಪಕ್ಷಪಾತಿಗಳಾಗಿ ಕೇಳಬೇಕೆಂದು ಭಾವವು. 


ಜಾಣರಂ ತಲೆದೂಗಿಸದೆ ನುಡಿದೊಡಾಪದ । 

ಕ್ಕೂಣೆಯಂ ಬಹುದೆಂದು ಸರಸೋಕ್ತಿಯಿಂದೆ ಗೀ। 

ರ್ವಾಣ ಪುರನಿಲಯ ಲಕ್ಷ್ಮೀವರಂ ತಾನೆ ಸಂಗೀತ ಸುಕಲಾ ನಿಪುಣನು॥ 

ವೀಣೆಯಿಂ ಗಾನಮಂ ನುಡಿಸುವಂದದೊಳೆನ್ನ । 

ವಾಣಿಯಿಂ ಕವಿತೆಯಂ ಪೇಳಿಸಿದನೆಂದರಿದು। 

ಕೇಣಮಂ ತೊರೆದು ಪುರುಡಿಸುವರಂ ಜರೆದು ಕಿವಿದೆರೆದು ಕೇಳ್ವುದು ಸುಜನರು॥೮॥ 


ಪ್ರತಿಪದಾರ್ಥ:- ಜಾಣರಂ= ಪ್ರಾಜ್ಞರಾದವರನ್ನು, ತಲೆದೂಗಿಸದೆ= ಮನಮೆಚ್ಚಿಸದೆ, ನುಡಿದೊಡೆ= ಮಾತನಾಡಿದರೆ, ಆ ಪದಕ್ಕೆ= ಆ ವರ್ಣಸಮುದಾಯಕ್ಕೆ, ಊಣೆಯಂ= ದೋಷವು, ಬಹುದು= ಉಂಟಾಗುವುದು, ಎಂದು= ಎಂಬುದಾಗಿ,  ಸರಸ= ರಸಭರಿತವಾದ, ಉಕ್ತಿಯಿಂದ= ವಚನಗಳಿಂದ, ಗೀರ್ವಾಣಪುರಂ= ದೇವಪುರವೆಂಬ ಗ್ರಾಮವನ್ನೆ, ನಿಲಯ= ಸ್ಥಾನವಾಗುಳ್ಳ, ಲಕ್ಷ್ಮಿವರಂ= ಲಕ್ಷ್ಮೀದೇವಿಯ ಗಂಡನಾದ ವಿಷ್ಣುವು, ತಾನೆ= ಅವನೇ, ಸಂಗೀತ= ಸಂಗೀತಶಾಸ್ತ್ರವೆಂಬ, 

ಸುಕಲಾ= ಸದ್ವಿದ್ಯೆಯಲ್ಲಿ, ನಿಪುಣನು= ಚತುರನು, ವೀಣೆಯಿಂ= ವೀಣೆಯಿಂದ, ಗಾನಮಂ= ಮನೋಲ್ಲಾಸಕರವಾದ 

ಹಾಡನ್ನು, ನುಡಿಸುವ= ಉಂಟುಮಾಡುವ, ಅಂದದೊಳು=ರೀತಿಯಲ್ಲಿ,  ( ತೆರನಾಗಿ) ಎನ್ನ= ಮದೀಯವಾದ, ವಾಣಿಯಿಂ= ಮಾತಿನಿಂದ, ಕವಿತೆಯಂ= ಕೃತಿಯನ್ನು, ಪೇಳಿಸಿದನೆಂದು= ಹೇಳುವಹಾಗೆ ಮಾಡಿದನೆಂಬುದಾಗಿ, ಅರಿದು= ತಿಳಿದು, ಕೇಣಮಂ= ಹುರುಡನ್ನು, ತೊರೆದು= ವಿಸರ್ಜಿಸಿ, ಪುರುಡಿಸುವರಂ= ಅಸೂಯಾಪರರನ್ನು, ಜರಿದು= ಹೀಯಾಳಿಸಿ,  ಕಿವಿದೆರೆದು= ಗಮನವಿಟ್ಟು( ಕಿವಿಗೊಟ್ಟು) ಎಲ್ಲಾ ಸುಜನರು= ಸತ್ಪರುಷರೆಲ್ಲರೂ, ಕೇಳ್ವುದು= ಲಾಲಿಸಬೇಕು.  


ತಾತ್ಪರ್ಯ:- ಬಾಯಿಂದ ಹೇಳಬಹುದಾದ ರಾಗಗಳನ್ನು ವೀಣೆಯ ಮುಖಾಂತರ ನುಡಿಸುವಂತೆ ನಾನು ರಚಿಸುವ ಗ್ರಂಥದಲ್ಲಿ ಪ್ರಯೋಗಿಸುವುಗಳು ಸುಷ್ಠುವಾಗಿಲ್ಲದಿದ್ದರೆ ವಿದ್ವಾಂಸರು ಒಪ್ಪುವುದಿಲ್ಲವೆಂದೂ, ಆ ಪದಕ್ಕೆ ಕೊರತೆಯುಂಟಾಗುತ್ತದೆದೂ, ಅರಿತು ಶ್ರೀಮನ್ನಾರಾಯಣಮೂರ್ತಿಯೇ ನವರಸಭರಿತಮಾದ ಮಾತುಗಳಿಂದ ರಚಿಸುವಂತೆ ನನಿಗೆ ಪ್ರೇರಣೆಯನ್ನು ಮಾಡಿರುವನಾದುದರಿಂದ ಸತ್ಪುರುಷರಾದವರು ಮಾತ್ಸರ್ಯವನ್ನು ಬಿಟ್ಟು ಇದನ್ನು ಕೇಳಬೇಕು. 


ದುಷ್ಟಾಹಿ ಘೋರತರ ವಿಷವದನದಿಂದೆ ಸಂ। 

ದಷ್ಟಮಾಗಿರುತಿರ್ದೊಡಂ ದೋಷಮಿರ್ದೊಡಂ । 

ನಷ್ಟ ಕಲೆಯಾದೊಡಂ ಚಂದ್ರನಂತೆನ್ನ ಕಾವ್ಯದ ರಸಂ ಸುಮನಸರ್ಗೆ॥ 

ಇಷ್ಟಮಾಗದೆ ಮಾಣದಿನ್ನಾವನಾದೊಡಂ । 

ಕಷ್ಟಮಂ ಬಗೆವವಂ ಚೋರಂಗೆ ವಿರಹಿಗಂ। 

ದೃಷ್ಟಾಂತಮಾಗಿ ಸಲ್ವಂ ಧರಾವಲಯದೊಳ್ ಸಂದೇಹಮೇನಿದರೊಳು॥೯॥ 


ಪ್ರತಿಪದಾರ್ಥ:- ದುಷ್ಟ= ನೀಚವಾದ, ( ನೀಚನೆಂಬ) ಅಹಿ= ಹಾವಿನ, ಘೋರತರ= ಬಹಳ ಕಠಿಣವಾದ, ವಿಷವದನದಿಂದ= ನಂಜಿನಿಂದ ಕೂಡಿದ ಮೋರೆಯಿಂದ, ಮತ್ತು ನಂಜಿಗೆ ಸಮಾನವಾದ ಮುಖದಿಂದ, ಸಂದಷ್ಟಮಾಗಿ= ಕಡಿಯಲ್ಪಟ್ಟದ್ದಾಗಿ ಮತ್ತುನಿಂದಿಸಲ್ಪಟ್ಟದ್ದಾಗಿ, ಇರುತಿರ್ದೊಡಂ= ಇದ್ದರುಕೂಡ, ದೋಷಂ= ಅಪರಾಧವು ಮತ್ತು ನಿಶಿಯು, ಇರ್ದೊಡೆ= ಇದ್ದೃಗ್ಗೂ, ನಷ್ಟ=ಗತಿಸಿದ, ಕಲೆಯಾದೊಡಂ= ಕಾಂತಿಯುಳ್ಳದ್ದಾದರೂ ಎಂದರೆ ಕಳಾಹೀನವಾದಾಗ್ಗೂ ಅಥವಾ ಪರಿಪೂರ್ಣತೆಗೆ ವ್ಯತಿರಿಕ್ತವಾದರೂ, ಚಂದ್ರನಂತೆ= ಇಂದುವಿನ ಹಾಗೆ, ಎನ್ನ= ನನ್ನ, ಕಾವ್ಯದ= ಕೃತಿಯ, ರಸಂ= ಸಾರಾಂಶವು( ಸ್ವಾರಸ್ಯವು) ಸುಮನಸರ್ಗೆ= ಸುರರಿಗೂ ಮತ್ತು ಪಂಡಿತರಿಗೂ, ಇಷ್ಟಮಾಗದೆ = ಒಪ್ಪಿಗೆಯಾಗದೆ, ಮಾಣದು= ಇರುವುದಿಲ್ಲ, ಇನ್ನು= ಇತರರು, ಆವನಾದೊಡಂ= ಯಾರಾದಾಗ್ಗೂ, ಕಷ್ಟಮಂ= ಕಠಿಣವೆಂಬುದನ್ನು, ಬಗೆವವಂ= ಆಲೋಚನೆಯಂ ಗೆಯ್ವವನು, ಚೋರಂಗೆ= ಕಳವು ಮಾಡುವವನಿಗೂ, ( ಕಳ್ಳನಿಗೂ) ವಿರಹಿಗಂ= ವಿರಹ ವೇದನೆಯಿಂದ ಕೂಡಿರುವವನಿಗೂ, ದೃಷ್ಟಾಂತಮಾಗಿ= ಹೋಲಿಕೆಯಾಗಿ, ಧರಾವಲಯದೊಳ್=ಪ್ರಪಂಚದಲ್ಲಿ.  ಸಲ್ವಂ= ಇರುವನು, ಇದರೊಳು= ಈ ವಿಚಾರವಾಗಿ, ಸಂದೇಹಂ= ಸಂಶಯವು, ಏಂ= ಏನಿರುವುದು ? ( ಅನುಮಾನವೇನಿದೆ) 

( ಯಾವ ಅನುಮಾನವೂ ಇಲ್ಲವೆಂದು ಅರ್ಥ ) 


ತಾತ್ಪರ್ಯ:- ಚಂದ್ರನು ವಿಷವುಳ್ಳ ರಾಹುವೆಂಬ ಕೆಟ್ಟ ಹಾವಿನಿಂದ ಕಚ್ಚಲ್ಪಟ್ಟು ಕಾಂತಿಯನ್ನೆಲ್ಲಾ ಹೋಗಲಾಡಿಸಿಕ್ಕೊಂಡು ರಾತ್ರಿಯಿಂದ ಕೂಡಿಯಿದ್ದರೂ ಸಕಲ ಸುರರೂ ಅವನನ್ನು ಪ್ರೀತಿಸುವಂತೆ ನನ್ನ ಕಾವ್ಯದಲ್ಲಿರುವ ರಸವನ್ನೆಲ್ಲಾ ನೀಚರು ಹೀಯಾಳಿಸಿದರೂ, ಕಳಾಹೀನವೆಂದರೂ, ದೋಷಸಹಿತವಾದದ್ದೆಂದರೂ ಕೂಡ ಇದು ವಿದ್ವಾಂಸರ ಮನಸ್ಸಿಗೆ ಹಿತವನ್ನುಂಟುಮಾಡುತ್ತದೆ. ಇದನ್ನು ಯಾರೂ ಕಠಿನ ಅಥವಾ ಕ್ಲಿಷ್ಟ ಎಂದು ತಿಳಿಯಕೂಡದು. ಹಾಗೆ ತಿಳಿದರೆ ಅಂಥವರು ಕಳ್ಳರಿಗೂ, ಕಾಮಿಗಳಿಗೂ ಹೋಲುವರು. 


ಮೊಗಮಾವ ಲೀಲೆಯಿಂದೆಸೆವುದಾ ಭಾವಮಂ। 

ಮಗುಳೆ ತೋರುವುದಲ್ಲದನ್ಯ ಪ್ರಕಾರದಿಂ ।

ಸೊಗಯಿಪುದೆ ರನ್ನಗನ್ನಡಿ ಧರೆಯೊಳಾರಾಜಿಸುವ ಕನ್ನಡದ ನುಡಿಗಳ॥ 

ಬಗೆಯರಿದರಾವಲಕ್ಷಣದಿಂದೆ ಮುನ್ನ ಕ। 

ಬ್ಬಗಳನುಸುರಿದರದೇ ಲಕ್ಷ್ಯಮಲ್ಲದೆ ಪೆರತೆ। 

ನಗೆ ಸಲ್ಲದದರಿಂದೆ ಪೂರ್ವ ಸತ್ಕವಿಗಳ್ಗೆನಮಿಸಿ ನಾಂ ಕೃತಿವೇಳ್ವೆನು॥೧೦॥ 


ಪ್ರತಿಪದಾರ್ಥ:- ಮೊಗಂ = ಮೋರೆಯು, ಆವ= ಯಾವರೀತಿಯಾದ, ಲೀಲೆಯಿಂ= ವಿಳಾಸದಿಂದ, ಎಸೆವುದು= ಹೊಳೆಯುವುದೋ, ಆ ಭಾವವಂ= ಅದೇ ವಿಲಾಸವನ್ನೆ, ಮಗುಳೆ = ತಿರುಗಿ, ರನ್ನ= ರತ್ನಖಚಿತವಾದ, ಕನ್ನಡಿ=ಕನ್ನಡಿಯು,

(ದರ್ಪಣವು)ಅನ್ಯಪ್ರಕಾರದಿಂದ= ಬೇರೆ ರೀತಿಯಾಗಿ, ಸೊಗಯಿಪುದೆ= ಕಾಣುತ್ತದೆಯೆ, ಧರೆಯೊಳು= ಪ್ರಪಂಚದಲ್ಲಿ,  ಆರಾಜಿಸುವ= ಹೆಸರುವಾಸಿಯನ್ನೈದಿರುವ, ಕನ್ನಡದ =ಕನ್ನಡ ಭಾಷೆಯ, ನುಡಿಗಳ= ಪದಸಮೂಹದ, ಬಗೆಯ= ವಿಧಾನವನ್ನು,  ಅರಿದರು= ತಿಳಿದಿರತಕ್ಕವರು, ಆವಲಕ್ಷಣದಿಂದ= ಯಾವಚಿಹ್ನೆಯಿಂದ, ಮುನ್ನ= ಪುರಾತನಕಾಲದಲ್ಲಿ, ಕಬ್ಬಗಳ= ಕಾವ್ಯಗಳನ್ನು, ಉಸುರಿದರ್= ಹೇಳಿದರೋ, ಅದೇಲಕ್ಷ್ಯಂ= ಪುರಾತನಕೃತಿಗಳಲ್ಲಿ ಉಕ್ತವಾಗಿರುವಚಿಹ್ನೆಯೆ, ಅದಲೂಲದೆ= ಹೊರತು, ಪೆರತು= ಅನ್ಯವಾದದ್ದು, ಎನಗೆ=ನನಗೆ, ಸಲ್ಲದು= ಬಾರದು, ಅದರಿಂದ= ಆ ಕಾರಣದಿಂದ,  ಪೂರ್ವ= ಪೂರ್ವಿಕರಾದ, ಸತ್ಕವಿಗಳ್ಗೆ= ಸತ್ಕವಿಸಾರ್ವಭೌಮರಿಗೆ, ನಾಂ= ನಾನು, ನಮಿಸಿ= ವಂದನೆಗಳನ್ನು ಅರ್ಪಿಸಿ, ಕೃತಿ= ಈ ಕಾವ್ಯಗ್ರಂಥವನ್ನು, ಪೇಳ್ವೆನು= ಹೇಳುತ್ತೇನೆ. 


ಮೊಗ(ತ್ಭ) =ಮುಖ(ತ್ಸ) ,ಕಬ್ಬ( ತ್ಭ)= ಕಾವ್ಯ( ತ್ಸ), ರನ್ನ(ತ್ಭ)= ರತ್ನ (ತ್ಸ), ರನ್ನ +ಕನ್ನಡಿ (ಆದೇಶಸಂಧಿ ) ಕನ್ನಡ (ತ್ಭ)= ಕರ್ಣಾಟ (ತ್ಸ). ಸಲ್ಲದು, ಪೇಳ್ವೆನು, ಈ ಎರಡು ಸಕರ್ಮಕ ಕ್ರಿಯಾಪದಗಳು. 


ರತ್ನಖಚಿತವಾದ ಕನ್ನಡಿಯನ್ನು ತೆಗೆದುಕೊಂಡು ಮುಖವನ್ನು ನೋಡಿಕೊಂಡರೆ ಮುಖದ ಕಾಂತಿಯೇ ಕನ್ನಡಿಯಲ್ಲಿ ಪ್ರತಿಬಿಂಬವಾಗಿ ಕಾಣಿಸುವುದು ಅನ್ಯಪ್ರಕಾರವಾಗಿ ಕಾಣಿಸದಿರುವಂತೆ, ಪುರಾತನ ಕವಿಗಳು ಹೇಳಿರುವ ಕರ್ಣಾಟಕ ಶಬ್ಧಶೈಲಿಯನ್ನನುಸರಿಸಿಯೇ ನಾನೂ ಈ ಗ್ರಂಥವನ್ನು ಬರೆಯುವೆನಾದ್ದರಿಂದ ಲೋಕವಿಖ್ಯಾತರಾಗಿ, ಕವಿತಾಮಾರ್ಗವನ್ನು ಬಲ್ಲ ಸತ್ಕವಿಗಳಿಗೆ ಗ್ರಂಥಾರಂಭದಲ್ಲಿ ನಮಸ್ಕಾರವನ್ನು ಮಾಡುತ್ತೇನೆ. 


ವಿದ್ವತ್ಸಭಾವಲಯಮರಿಯೆ ವಿರಚಿಸಿದಂ ಭ। 

ರದ್ವಾಜ ಗೋತೂರಭವನಣ್ಣಮಾಂಕನ ಸುತಂ। 

ಸದ್ವಿನುತ ಕರ್ಣಾಟ ಕವಿ ಚೂತವನ ಚೈತ್ರ ಲಕ್ಷ್ಮೀಶನೆಂಬೊರ್ವನು॥ 

ಹೃದ್ವನಜದೊಳ್ ದೇವಪುರದ ಲಕ್ಷ್ಮೀಶನ ಪ। 

ದದ್ವಯವನಾವಗಂ ಧ್ಯಾನಿಸುವರಡಿಗಳಂ । 

ಸದ್ವಿನಯದಿಂ ಭಜಿಪ ಬಲ್ಪಿಂದೆ ವಿಮಲ ಜೈಮಿನಿ ಭಾರತದ ಕಥೆಯನು॥೧೧॥ 


ಪ್ರತಿಪದಾರ್ಥ:- ವಿದ್ವತ್= ಪಂಡಿತರ, ಸಭಾವಲಯಂ= ಸಮುದಾಯವು, ಅರಿಯೆ= ತಿಳಿಯುವುದಕ್ಕಾಗಿ, ಭರದ್ವಾಜ= ಭರದ್ವಾಜನೆಂಬ ಮಹರ್ಷಿಯ, ಗೋತ್ರ= ವಂಶದಲ್ಲಿ, ಭವನು=ಉತ್ಪನ್ನನಾದ, ಅಂಣಮಾಂಕನ= ಅಂಣಮಾಂಕನೆಂಬುವನ

ಸುತಂ= ಪುತ್ರನಾದ, ಸದ್ವಿನುತ= ಸಜ್ಜನರಿಂದ ಶ್ಲಾಘಿಸಲ್ಪಟ್ಟವನಾದ, ಕರ್ಣಾಟಕವಿ= ಕನ್ನಡ ಪಂಡಿತರೆಂಬ, ಚೂತವನ= ಮಾವಿನ ಮರಗಳ ಸಮೂಹಕ್ಕೆ, ( ತೋಪಿಗೆ ) ಚೈತ್ರ= ವಸಂತಸಮಯದಂತಿರುವ, ಲಕ್ಷ್ಮೀಶನು=ಲಕ್ಷ್ಮೀಶನೆಂಬ ನಾಮಧೇಯವುಳ್ಳ, ಓರ್ವನು= ಒಬ್ಬ ಕವಿಯು, ಹೃದ್ವನಜದೊಳು= ಕಮಲದಂತಿರುವ ಮನಸ್ಸಿನಲ್ಲಿ,  ( ಹೃತ್ಕಮಲದಲ್ಲಿ ) 

ದೇವಪುರದ= ದೇವತೆಗಳಿಗೆ ನಿವಾಸಸ್ಥಾನವಾದ ಪಟ್ಟಣದಲ್ಲಿರುವ, ಲಕ್ಷ್ಮೀಶನ= ನಾರಾಯಣ ಮೂರ್ತಿಯ,ಪದದ್ವಯವನು= ಪಾದಯುಗ್ಮವನ್ನು, ಆವಗಂ= ಸದಾಕಾಲದಲ್ಲಿಯೂ, ಧ್ಯಾನಿಸುವರ=ಸ್ಮರಿಸತಕ್ಕವರ, 

(ಭಕ್ತರ ) ಸದ್ವಿನಯದಿಂ = ಉತ್ತಮವಾದ ಮಾರ್ಗದಿಂದ, ಭಜಿಪ= ಧ್ಯಾನಿಸುವ, ಬಲ್ಪಿದ= ಸಾಮರ್ಥ್ಯದಿಂದ, ವಿಮಲ= ಪರಿಶುದ್ಧವಾದ,  ಜೈಮಿನಿಭಾರತ= ಜೈಮಿನಿ ಮುನೀಂದ್ರನಿಂದ ರಚಿಸಲ್ಪಟ್ಟ, ಭಾರತದ= ಸಂಸ್ಕೃತ ಮಹಾಭಾರತದಲ್ಲಿ 

ಪಾಂಡುಪುತ್ರರ ಸಂಬಂಧವಾದ, ಕಥೆಯನು= ಇತಿಹಾಸವನ್ನು, ವಿರಚಿಸಿದಂ= ಮಾಡಿದವನಾದನು. 


ತಾತ್ಪರ್ಯ:- ಭರದ್ವಾಜ ಮುನಿಯ ಗೋತ್ರದಲ್ಲಿ ಜನಿಸಿದವನು,ಅಣ್ಣಮಾಂಕನೆಂಬಾತನ ತನಯನು, ಸಜ್ಜನರಲ್ಲಿ ಹೆಸರುವಾಸಿಯನ್ನು ಪಡೆದವನು, ಕನ್ನಡ ಕವಿಗಳೆಂಬ ಸೀಮಾವಿನ ಗಿಡಗಳ ತೋಪಿಗೆ ವಿಕಾಸವನ್ನುಂಟುಮಾಡುವ ಚೈತ್ರಮಾಸದಂತಿರುವವನೂ ಆದ ಲಕ್ಷ್ಮೀಶನೆಂಬ ಕವಿಯು ನಿಜಹೃದಯ ಕಮಲದಲೂಲಿ ಶ್ರೀಮನ್ನಾರಾಯಣನ ಪಾದಕಮಲ ಯುಗಳವನ್ನು ನೆನೆಯುವ ಮಹಾನುಭಾವರನ್ನು ಭಜಿಸುವ ಒಲ್ಮೆಯಿಂದ ನಿರ್ಮಲವಾದ ಈ ಜೈಮಿನಿಭಾರತ 

ಕಥೆಯನ್ನು ಹೇಳಿದನು. 


ವರ ವರ್ಣದಿಂದೆ ಶೋಭಿತಮಾಗಿ ರೂಪ ವಿ। 

ಸ್ತರದಿಂದೆ ಚೆಲ್ವಾಗಿ ಮಧುರತರ ನವರಸೋ। 

ದರ ಭರಿತದಿಂದೆ ವಿಲಸಿತಮಾಗಿ ಸುಮನೋನುರಾಗದಿಂ ಪ್ರಚುರಮಾಗಿ॥ 

ನಿರುತ ಮಂಜುಳ ಶಬ್ಧದಿಂದೆ ಕಿವಿಗಿಂಪಾಗಿ। 

ಚರಿಸುವ ಸುಲಲಿತ ಷಟ್ಪದಿಗಳೆಡೆಬಿಡದೆ ಝೇಂ।

 ಕರಿಸದಿರ್ಪುವೆ ಬಂದು ನೆರೆದ ವಿದ್ವತ್ಸಭಾನೀರೇರುಹಾಕರದೊಳು ॥೧೨॥ 


ವರ= ಉತ್ತಮವಾದ,  ವರ್ಣದಿಂದ = ಅಕ್ಷರಗಳಿಂದ ಮತ್ತು ಕೃಷ್ಣವರ್ಣದಿಂದ, ಶೋಭಿತಮಾಗಿ = ಪ್ರಕಾಶವನ್ನೈದಿದ,ರೂಪವಿಸ್ತರದಿಂದ= ರೂಪ ವರ್ಣಸಮುದಾಯಸ್ವರೂಪದ ಮತ್ತು ಆಕೃತಿಯ, ವಿಸ್ತರದಿಂದ= ಆದಿಕ್ಯದಿಂದ,  ಚೆಲ್ವಾಗಿ= ಕಾಂತಿಯುಕ್ತಮಾಗಿ, ಮಧುರತರ= ಬಹು ಸಿಹಿಯಾದ, ನವ=ನೂತನವಾದ,ಮತ್ತು ಒಂಬತ್ತನೆಯ ಸಂಖ್ಯೆಯುಳ್ಳ, ರಸ= ಶೃಂಗಾರವೇ ಮೊದಲಾದ ರಸವು ಮತ್ತು ಹೂಗಳ ಮಕರಂದವೇ, ಉದರ= ಗರ್ಭದಲ್ಲಿ ಮತ್ತುಪದಸಮೂಹದ ಮಧ್ಯಭಾಗದಲ್ಲಿ,  ಭರಿತದಿಂದ= ಪೂರ್ಣವಾಗಿರುವುದರಿಂದ ಮತ್ತು ಒಳಗೊಂಡಿರುವುದರಿಂದ, ವಿಲಸಿತಮಾಗಿ = ಕಾಂತಿಯುಕ್ತವಾಗಿ ಮತ್ತು ಮನಸ್ಸಿಗೆ ಸಂತೋಷವನ್ನು ಕೊಡತಕ್ಕದ್ದಾಗಿ, ಸುಮನಃ= ವಿದ್ವಾಸರ ಮತ್ತು ಹೂಗಳ, ಅನುರಾಗದಿಂ= ವಿಶ್ವಾಸದಿಂದ, ಪ್ರಚುರಮಾಗಿ= ಪ್ರಸಿದ್ಧಿಯನ್ನು ತಾಳಿ, ನಿರತ= ಸದಾ ಕಾಲದಲ್ಲೂ, ಮಂಜುಳ= ಮನಸ್ಸಿಗೆ ಇಂಪಾದ, ಶಬ್ಧದಿಂದ= ಅಕ್ಷರ ಸಮುದಾಯದಿಂದ ಮತ್ತು ಧ್ವನೆಯಿಂದ, ಕಿವಿಗೆ= ಕಿವಿಗಳಿಗೆ, ಇಂಪಾಗಿ= ಆನಂದದಾಯಕಳಾಗಿ, ಚರಿಸುವ= ತಿರುಗಾಡುವ ಮತ್ತು ಪ್ರಕಟವಾಗುವ ಸುಲಲಿತ= ಮನೋಹರವಾದ ಮತ್ತು ಮೃದುವಾದ, ಷಟ್ಪದಿಗಳು= ಆರಡಿಗಳು(ಭೃಂಗಗಳು) ಮತ್ತು ಆರು ಪಂಙ್ತಿಗಳುಳ್ಳ ಪದ್ಯಗಳು, ಬಂದು= ಸಮೀಪವನ್ನೈದಿ, ನೆರೆದ= ಸೇರಿರತಕ್ಕ, ವಿದ್ವತ್ಸಭಾ= ವಿದ್ವನ್ಮಂಡಲಿಯೆಂಬ, ನೀರೇರುಹಾಕಾರದೊಳು= ಸರೋವರದಲ್ಲಿ, ಎಡೆಬಿಡದೆ= ಅವಕಾಶವನ್ನೀಯದೆ, ಝೇಂಕರಿಸದೆ= ಧ್ವನಿಮಾಡದೆ, ಇರ್ಪವೆ= ಇರುತ್ತವೆಯೇ,( ಧ್ವನಿಮಾಡದೆ ಇರುವುದಿಲ್ಲ) 


ವರ್ಣ(ತ್ಸ) = ಬಣ್ಣ( ತ್ಭ) , ಷಟ್=ಆರು, ಪದಿ=ಕಾಲುಗಳುಳ್ಳದ್ದು (ದುಂಬಿ) 

ಪೀಠಿಕೆ ಎಂಬ ಮೊದಲನೆಯ ಸಂಧಿಯು ಸಮಾಪ್ತಮಾದುದು. 


ತಾತ್ಪರ್ಯ:- ಉತ್ತಮವಾದ ಮೇಘವರ್ಣದಿಂದ ಪ್ರಕಾಶಿಸುತ್ತಿರುವ, ವಿಸ್ತಾರವಾದ ಆಕಾರವುಳ್ಳದ್ದಾದ್ದರಿಂದ ನೋಡುವುದಕ್ಕೆ ಅಲಂಕಾರವಾದ, ಅತ್ಯಂತ ಮಧುರವಾದ ಮತ್ತು ನೂತನವಾದ ಮಕರಂದವನ್ನು ತನ್ನ ಗರ್ಭದಲ್ಲಿ ಧರಿಸಿರುವುದರಿಂದಲೇ ಕಾಂತಿಯಿಂದ ಕೂಡಿದ,  ಹೂಗಳನ್ನು ಕಂಡರೆ ವಿಶ್ವಾಸವುಳ್ಳವೆಂಬ ಹೆಸರನ್ನು ಸಂಪಾದಿಸಿಕೊಂಡು ಕರ್ಣಾನಂದವನ್ನು ಉಂಟುಮಾಡುತ್ತಿರುವ, ಅಸದೃಶವಾದ ಹಾಡುಗಳಿಂದ ಕೂಡಿರುವ ದುಂಬಿಗಳಹಾಗೆ ಉತ್ತಮವಾದ ಆಕಾರಮೊದಲ್ಗೊಂಡು ಳಕಾರದವರೆಗಿನ ಅಕ್ಷರಗಳಿಂದ ಕೂಡಿಯೂ,ದೊಡ್ಡ ಪದ್ಯಗಳ ಸಮೂಹದಿಂದಲೂ, ಪದ್ಯಗಳ ಮಧ್ಯಭಾಗಗಳಲ್ಲಿ ಶೃಂಗಾರವೇ ಮೊದಲಾದ ನವರಸಗಳಿಂದ ಭರಿತವಾಗಿರುವುದರಿಂದಲೂ ವಿದ್ವಾಂಸರ ಸಮೂಹಕ್ಕೆ ಕುತೂಹಲವನ್ನೂ ಸಂತೋಷವನ್ನೂ ಇತ್ತು ಪ್ರಕಟವಾಗಿರುವ ಈ ಆರು ಪಾದಗಳನ್ನುಳ್ಳ ಪದ್ಯಗಳು ( ಮತ್ತು ಭ್ರಮರಗಳು) ಸಭೆಯಲ್ಲಿ ನೆರೆದಿರುವ ಅಶೇಷ ವಿದ್ವನ್ಮಂಡಲಿಗೆ ಆನಂದವನ್ನು ಕೊಡತಕ್ಕವುಗಳಾಗಿವೆ ಎಂಬುದು ಭಾವವು. 


ಟೀಕಾ ತಾತ್ಪರ್ಯ ಸಹಿತ ಜೈಮಿನಿಭಾರತದೊಳ್ ಪೀಠಿಕಾಸಂಧಿಯೆಂಬ ಮೊದಲನೆಯ ಸಂಧಿಯು ಸಮಾಪ್ತಮಾದುದು.  


ನೆನಕೆ:- ಟೀಕೆ- ದೊಡ್ಡಬೆಲೆ ನಾರಾಯಣಶಾಸ್ತ್ರಿ

ಪ್ರಕಟಣೆ: ಟಿ. ಎನ್ . ಕೃಷ್ಣಯ್ಯಶೆಟ್ಟಿ

ಶ್ರೀ ವೆಂಕಟೇಶ ಮುದ್ರಾಕ್ಷರಶಾಲೆ.


















 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ