ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಬುಧವಾರ, ಏಪ್ರಿಲ್ 30, 2025

ನೇಮಿಚಂದ್ರನ ಅರ್ಧನೇಮಿಪುರಾಣ

ನೇಮಿಚಂದ್ರನ ಅರ್ಧನೇಮಿಪುರಾಣ

ಈ ಗ್ರಂಥಕರ್ತನು ನೇಮಿಚಂದ್ರನು. ಈತ ಲೀಲಾವತೀ ಮತ್ತು ನೇಮಿನಾಥಪುರಾಣಂ ಎಂಬೆರಡು ಕೃತಿಗಳನ್ನು ರಚಿಸಿದ್ದಾನೆ. ಕವಿಯ ಕಾಲ ೧೨ ನೆಯ ಅಂತ್ಯಭಾಗ. ಈತನು ತಾನು ಚತುರ್ಭಾಷಾಚಕ್ರವರ್ತಿ ಎಂದು ಹೇಳಿಕೊಂಡಿದ್ದಾನೆ. 


ಶ್ರೀ ರಸ್ತು.

 ನೇಮಿಚಂದ್ರನ ನೇಮಿನಾಥಪುರಾಣಂ (ಅರ್ಧನೇಮಿಪುರಾಣಂ)


ಶ್ರೀವೀತರಾಗಾಯ ನಮಃ, - ಶ್ರೀ ಮತ್ಪಂಚಗುರುಭ್ಯೋ ನಮಃ.


ಶ್ಲೋ ॥ ಶ್ರೀಮತೇ ನೇಮಿನಾಥಾಯ ನಮಸ್ಸ್ಯಾದ್ವಾದಸಿಂಧವೇ । 

ಯಸ್ಮಿನ್ನುದಿತಬೋಧೇಂದೌ ತ್ರೈಲೋಕ್ಯಂ ಲಕ್ಷಣಾಯತೇ॥ 


ಶ್ರೀಯಂ ಶ್ವೇತಾತಪತ್ರಂ ಪ್ರಥಿತವಿಭವಮಂ ಚಾಮರಂ ಬೋಧಮಂ ವಾ  । 

ಕ್ಪೀಯೂಷಂ ಪೆರ್ಮೆಯಂ ಭಾಸುರತರಪಟಹಂ ಶಕ್ತಿಯಂ ಸಿಂಹಪೀಠಂ ॥ 

ಸ್ವಾಯತ್ತಂಮಾೞ್ಪೆನಂ ಭಾವಳಯವಿಳಸಿತಾಶೋಕಮಂದಾರವರ್ಷ। 

ಚ್ಛಾಚ್ಛನ್ನಾಂಗನಾದಂ ತ್ರಿಭುವನವಿನುತಂ ನೇಮಿ ರಕ್ಷಿಕ್ಕೆ ನಮ್ಮಂ ॥೧॥ 


ಲೀಳಾಗಾತ್ರೈಕಮಲ್ಲೀಮುಕುಳಮೆನಿಸೆ ನಾಸಾಗ್ರದೊಳ್ ಪಾಂಚಜನ್ಯಂ। 

ವ್ಯಾಳಂ ಶಯ್ಯಾತಳಂ ಪೂಗಣೆಯನೊಣೆಧೃತಂ ಪೈರ್ವುವಿಲ್ಲಾ ಗೆ ಶಾರ್ಙಂ॥ 

ಹೇಳಾಕೃಷ್ಟಂ ಸುಪುಷ್ಟಂ ಹರಿಮದಹರನಪ್ಪಂತೆ ಕಂದರ್ಪದರ್ಪ। 

ವ್ಯಾಳೋಳಕ್ರೀಡೆಗಾದಂ ಕುಡುಗೆಮಗೆ ಮಹೋತ್ಸಾಹಮಂ ನೇಮಿನಾಥಂ॥೨॥ 


ವಿಮಳಜ್ಞಾನಾಳಿನಾಳಂ ಸುಖಮಯಮಕರಂದಾಕರಂ ಮುಕ್ತಪಾಪ । 

ಭ್ರಮರಂಸಂಸಕ್ತಸೂಕ್ಷ್ಮೋಜ್ಜ್ವಲಗುಣಮವಗಾಹಾವಹಂಭದ್ರಮುನ್ನಿ॥ 

ದ್ರಮಪಾರಂ ಪಾವನಪ್ರಸ್ತುತಗತಿ ಭುವನಾಗ್ರಸ್ಥಿತಂ ತೋರ್ಕೆ ನಿಚ್ಚಂ । 

ನಮಗಿಂತತ್ಯಂತಲಕ್ಷ್ಮೀಲಲಿತಲಪನಮಂ ಸಿದ್ಧನೀರೇಜಷಂಡಂ ॥೩॥ 


ಆಚಾರಂ ನಿಸದಾಗಿ ಸದ್ಗುಣಗಣಂ ಮುಂತಾಗಿ ಮಂತ್ರಕ್ರಿಯಾ। 

ಳೋಚನಂ ನಿರ್ವ್ಯಭಿಚಾರಮಾಗೆ ಜಿನರಾಜಪ್ರಾಜ್ಯಸಾಮ್ರಾಜ್ಯದೊಳ್ ॥ 

ಶೌಚವ್ಯೋಚಿತಭಾಗ್ಯಲಕ್ಷ್ಮಿ ತಮಗೇಕಚ್ಛತ್ರಮಾಯ್ತೆಂದುಮೆಂ। 

ಬಾಚಾರ್ಯರ್ ನಮಗೀವರಕ್ಕೆ ನಯನಿಕ್ಷೇಪಪ್ರಮಾಣಂಗಳಂ॥೪॥ 


ರಸಮೊ ರಸಾಯನಮೋ ಶ್ರುತಿ ।

ವಸಂತಮೋ ಕಿವಿಗಳಮೃತಮೋ ನೇಮಿಯವಾಕ್॥ 

ಪ್ರಸರಮದದೆಸಕದಿಂ ನಿ। 

ಪ್ಪೊಸತಾದುದು ಜಗಕ್ಕೆ ನೇಮಿನಾಥಪುರಾಣಂ॥೩೮॥


ಕುವಳಯದಲರಂ ಕೌಮುದಿ । 

ಯ ವಿಭವಮಂ ಕಂಡು ಕೊಂಡು ಕೊನೆವಂ ಕವಿಯೋ॥ 

ರವಿಯೋ ರವಿ ಕಾಣದುದಂ । 

ಕವಿ ಕಾಣ್ಬನೆನಿಪ್ಪ ವಚನಮೇಂ ತಪ್ಪುಗುಮೇ॥೩೩॥


ಬೆಲೆಯಿಂದಕ್ಕುಮೆ ಕೃತಿ ಗಾ । 

ವಿಲ ಭುವನದ ಭಾಗ್ಯದಿಂದಮಕ್ಕುಂ ನೋೞ್ಪಂ ॥ 

ಬೆಲೆಗೊಟ್ಟು ತಾರ ಮಧುವಂ । 

ಮಲಯಾನಿಲನಂ ಮನೋಜನಂ ಕೌಮುದಿಯಂ॥೪೫॥



 ಆಶ್ವಾಸ ಎಂಟು


ಮಳೆಗಾಲದ ವರ್ಣನೆ.


ನೀರಂ ನೀರಂಧ್ರಮೇಘಂ ಸುರಿಯೆ ಮೊರೆಯೆ ಭೀಮಾರುತಂ ಕೊ ।

ಳ್ಗಾರಂ ಗಾರಂಬೊಲಾಯ್ತೆಂದಗಿಯೆ ಪಥಿಕರುಚ್ಚಾತಕಂ ಚಾತಕಂ ಕಾ ॥

ಸಾರಾಸಾರಾರ್ಥಿ ಗೋಲಂಗುಡಿಯೆ ನಲಿವನೋಜಂಬುವಂ ಜಂಬುವಂ ಸೋ ।

ತ್ಕೀರಂ ಕೀರಂ ಕರ್ದುಂಕುತ್ತಿರೆ ಕೆರಳಿಸಿದತ್ತೋವಿಕಾರಂ ವಿಕಾರಂ॥ ೨॥


ಎಳಮಿಂಚಂ ತಳೆಯಿಕ್ಕಿ ಚಾದಗೆಗಳಂ ಬಿಟ್ಟೋಡಿ ಬಲ್ಗೆಚ್ಚಲಿ ।

ಟ್ಟಳಿನೀಳಾಂಬುದದಿಂ ಬೞಲ್ದ ಗಗನಶ್ರೀ ಧೇನುವಂ ಕೋಮಳಾ ॥

ಮಳದೀರ್ಘಾಮೃತಧಾರೆಗಳ್ಸುರಿಯೆ ಭೋರ್ಭೋರೆಂಬಿನಂ ಶಕ್ರಚಾ ।

ಪಳತಾದಾಮಕದಿಂದೆ ಕಟ್ಟಿ ಕಱೆದಂ ಕಾರೆಂಬ ಗೋಪಾಳಕಂ॥೩॥


ಕಳಕೇಕಾರುತಿ ಪೋಲೆ ವೀಣುರುತಿಯಂ ಬೀಸುತೆ ಮಿಂಚೆಂಬ ಗೋ ।

ವಳಗೋಲಂ ಪೊಡೆಸೆಂಡುವೊಯ್ದು ಸಿಡಿಲಂ ಗೀರ್ವಾಣಬಾಣಸನ॥

ಚ್ಛಳದಿಂ ಕತ್ತರಿವೀಲಿಯೊಂದು ಪಣೆಕಟ್ಟಂ ಕಟ್ಟಿಕೊಂಡಭ್ರಕಂ। 

ಬಳಮಂ ಗೋವನವುಂಕಿಬಂದೊದಱಿದಂ ಕಾರೆಂಬ ಗೋಪಾಳಕಂ॥ ೪॥


ಕಡಲೊಳ್ ಪಟ್ಟಿರ್ದವಂ ಪುಟ್ಟಿರದಿರ ಬನದೊಳ್ ಬಂದು ಸಪ್ತಾರ್ಣವಂ ಮೇ 

ಗೊಡಿವಿರ್ದಂತಾಗೆ ಮಿಂಚೆಂಬುರಿ ಮಿಗೆ ನಭಮಾಶಾಮುಖಶ್ರೇಣಿಯಂ ಗೋ॥

ೞಿಡುವಂತೋರಂದದಿಂದಂ ಮೊೞಗೆ ಮುಸುಱೆ ಮೇಘೌಘಮಬ್ಜಾಕ್ಷನಂ ಬ । 

ಲ್ಸಿಡಿಲಿಂದಿಟ್ಟಾಲಿಕಲ್ಲಿಂದೆಱಗಿ ಕಱೆದುದಾಗೋಕುಲಂ ತೇಂಕುವನ್ನಂ॥ ೭॥


ಪೊಡೆವ ಸಿಡಿಲ್ಗಳನೆಳೆಯೊಳ್ । 

ಕೆಡೆದೇೞೆಂಟಣಕು ನೆಗೆದು ನುರ್ಗಪ್ಪಿನೆಗಂ ॥ 

ಪೊಡೆದಂ ಗೋವಳಿಗೋಲಿಂ । 

ಪೊಡೆಸೆಂಡಾಡುವವೊಲೇಂ ಬಲಸ್ಥನೊ ಕೃಷ್ಣಂ॥ ೯॥


ಕರಗದ ಮುಗಿಲಂ ಪರೆಯದ ।

ಸುರಧನುವಂ ಮಿಂಚಿ ಕಿಡದ ಮಿಂಚಂ ಪೊಡೆದೋ ॥

ಸರಿಸದ ಸಿಡಿಲಂ ಸಮೆಯದ । 

ಸರಿವೞೆಯಂ ಕಂಡು ಬೆಗಡುಗೊಂಡರ್ ಗೋವರ್॥೧೦॥


ಕಂಸವಧೆ


ವಚನ॥ ಅಂತು ಕಂಸಂ ಕೃಷ್ಣಂಗೆ ಕಡಿವಂದುದಂ ಕಂಡು ವಸುದೇವಂ ಬಲದೇವಂ ಬೆರಸು ಚಾತುರ್ದಂತಬಲಮಂ ಕೂಡಿಕೊಂಡು ನಿಯುದ್ಧರಂಗದ ಕೆಲದೊಳ್ ಯುದ್ಧಸನ್ನದ್ಧರಾಗಿರ್ದಾಗಳುದ್ಧತನಾಗಿರ್ದ ಕಂಸಂ ಪಡಿಯಱನಂ ಕರೆದು ಕಿವಿಯೊಳ್ ಪರ್ಚುವುದುಮಾತನಂತೆಗೆಯ್ವೆನೆಂದು ಪೋಗಿ ಯಶೋದೆಗೆಂದಂ- ನಿನ್ನ ಮಗನೆಲ್ಲಿಗಾದೊಡಂ ಕಾಳೆಗವೆಂ-

ದೊಡೆ ಪೂಣಿಗನಾಗಿ ಪರಿವರಿಯಪ್ಪನ ವ್ಯಸನಮುಂ ವ್ಯಸನಮುಳ್ಳೊಡೆ ಬಂದು ಚಾಣೂರಮಲ್ಲನೊಳ್ ಮಲ್ಲವೋರ್ದು ಪರ್ವಕ್ಕೆ ನೆರೆದರಸುಮಕ್ಕಳ ಕಣ್ಗೆ ಪರ್ವಮಂ ಮಾೞ್ಕೆಂದು ಕಂಸಮಹಾರಾಜಂ ಬೆಸಸಿಯಟ್ಟಿದಂ ; ನೀವೆ ತಿವುರುಂ ತಿಳಕಮುಂ ಬೆರಸುತ್ಪೂರಿಸಿಕೊಂಡುಬರ್ಕೆ ಕೊಳ್ಳಿಮಾತನೆಲ್ಲಿದನೆಂಬುದುಂ ಯಶೋದೆ ಮುಗುಳ್ನಗೆ ನಗುತಿಂತೆಂದಳ್-


ಎನ್ನ ಮಗನಾವ ತಿವುರಿಂ । 

ಮುನ್ನಿಕ್ಕಿದನಣ್ಣ ಶಕಟನಂ ಪೂತನಿಯಂ ॥ 

ಪನ್ನಗನಂ ಯಮಳಾರ್ಜುನ । 

ರನ್ನರಕನನವನಿನಧಿಕನೇ ಚಾಣೂರಂ॥ ೭೩॥


ವಚನ॥ ನಿಜದಿಂ ಕೂರ್ಪುಳ್ಳನುಮಂ ಕತ್ತರಿವಾಣಿಯುಮಂ ಮಸೆಯಲೇಕೆಸಿಂಗಮಾನೆಯಂ ಮುಱಿವಲ್ಲಿಗಾವಭ್ಯಾಸಮಂ ಮಾಡಿದುದು; ಮುರಾಂತಕನುಂ ಅಂತಕನುಂ ಕೊಲ್ವುದನಿನ್ನು ಕಲ್ತಪರೆ ಕೇಳಿಮೆನ್ನ ಮಗಂ ನೀರೊಳ್ನಾನಂ ಬಿಸಿಲೊಳ್ಬಾಡಂ ಬೆಂಕಿಯೊಳ್ಬಾಡಂ ಬೆಂಕಿಯೊಳ್ಬೇಯಂ ಜವನ ಕೆಯ್ಯೊಳ್ಸಾಯಂ ಏನುಂ ಬೇಡೊಡಗೊಂಡು ಪೋಗಿಮೆಂಬಿನಿತರ್ಕೆಯಂಬು-

ಜೋದರಂ ಬಂದಬ್ಬಾಪಸಿದೆನೆಂಬುದುಂ ಯಶೋದೆಯಿಂತೆಂದಳ್- 


ಸಮೆದೆಂ ಮೊಸಱಂ ಬಾಳ್ಮೊಸ। 

ಱುಮನಾಂ ಘನವಾಗಿ ತಂದೆನಿಕ್ಕಿದಪೆಂ ಲಂ ॥ 

ಚಮನೆನ್ನ ಮಲ್ಲ ಚಾಣೂ। 

ರಮಲ್ಲನಂ ಮುಱಿದು ಬಂದು ಹಸಿವಂ ಮುಱಿಯಾ॥ ೭೪॥


ಉತ್ತಮಸತ್ವದಿಂ ಪಿಡಿದು ಚಾಣೂರನಂ ನೆಲಕಿಕ್ಕಿ ಕೃಷ್ಣನಾ ।

ಳ್ದೊತ್ತಿದೊಡೊತ್ತಿ ಧಾತ್ರಿ ರಸೆಗರ್ದುದು ರಕ್ಕಸನೊಯ್ದ ಧಾತ್ರಿಯಂ ॥

ಕೆತ್ತಿದನಾತನುಂ ಹರಿಯ ಗೋವನಿಱುಂಕಿ ತದಂಘ್ರಿಘಾತದಿಂ । 

ದತ್ತ ಪತಂಗವೊಂದು ಶಕಟಂ ಮುಱಿದಾಶಕಟಂಬೊಲಿರ್ಪಿನಂ॥ ೯೩॥


ಓರೊರ್ವರನಕ್ಖಡದಿಂ।

ದೂರಂ ಪೊಱಗಿಕ್ಕಿ ಪೋರ್ದು ಪಾದಾಹತಿಯಿಂ ॥

ಭೂರೇಣುವಾಗೆ ಹರಿಚಾ ।

ಣೂರರ್ಮತ್ತೊಂದುಮಲ್ಲಗಳನಂ ಸಮೆದರ್॥೯೪॥


ಬೆದಱಿದ ಬೆಱಗಿಂ ಬೆನ್ನಿ । 

ಕ್ಕಿದ ಕೃಷ್ಣಂ ಮೊಗದೆಗೊಂಡು ಮೊಗದೊಳ್ಮೆಯ್ಸಿ॥ 

ಕ್ಕಿದ ಚಾಣೂರನನಾರ್ದೆ। 

ತ್ತಿದನವನಿಯನೆತ್ತುವಂತಿರಾದಿವರಾಹಂ॥ ೯೫॥


ಕೆಡೆದರ್ಪೋರ್ದರ್ ಪೊರಳ್ದರ್ಮಿಗೆ ಪಿಡಿದರಾರ್ದೊತ್ತಿದರ್ಮತ್ತಮೆರ್ದರ್ । 

ನಿಡುಕೆಯ್ಯಂ ಬೇಡಿದರ್ನೀಡಿದರೆೞೆದು ನೆಲಕಿಕ್ಕಿದರ್ಕೂಂಕಿದರ್ಮೇ ॥ 

ಗಡೆಯಾದರ್ಪತ್ತಿ ಗಾಯಂಗೊಳಲೆ ಮಿಡುಕದಾರಯ್ದರಾರಯ್ದ ಗಾಯ । 

ಕ್ಕೆಡೆಗೊಟ್ಟುರ್ಕಿಟ್ಟುಕೊಂಡರ್ಪೊಳೆದು ಬಿಡಿಸಿದರ್ ಕೃಷ್ಷಚಾಣೂರಮಲ್ಲರ॥ ೯೬॥


ಪಿಡಿವಡೆ ಕೃಷ್ಣನ ತೋಳುಂ । 

ತೊಡೆಯುಂ ದೊಡ್ಡಿದುವಿದೆನ್ನ ಮುಷ್ಟಿಗೆ ಪವಣಿಂ॥ 

ದಡಹಡಿಸಿ ನಳಿನನಾಭನ । 

ನಡುವಂ ಮುಱಿಯಲ್ಕೆ ನೋಡಿದಂ ಚಾಣೂರಂ॥ ೯೭॥


ಮರನಂ ಕಿೞ್ತ ಮುರಾರಿಯಾಱನೆ ಕಿೞಲ್ಮುಂಗೆಯ್ಯ ರೋಮಂಗಳಂ।

ಕರಮಂ ಕೊಟ್ಟೊಡಮಾರ್ತನಿಲ್ಲ ಪಿಡಿಯಲ್ತತ್ಞಕಾಳಿಯಗ್ರಾಹಕಂ॥

ಧರೆಯಂ ಬೆಂಬಲದೊತ್ತಿ ಪತ್ತೆಗಿರಿಯಂ ಮುನ್ನೆತ್ತಿ ಪೊತ್ತಾಮಹೀ।

ಧರನಂತಿಂತು ತಳರ್ಚಲಾಱನೆ ಕರಂ ಚಾಣೂರನೇಂ ಶಕ್ತನೋ॥ ೯೮॥


ನೆಲನುಂ ಜಲನಿಧಿಯುಂ ಸಲೆ । 

ತಲೆವತ್ತುವ ತೆಱದಿನಿರ್ದು ಕಡೆಯೊಳ್ ನೆಲನಂ ॥ 

ಜಲಧಿ ಕಿಡಿಪಂತೆ ಕಿಡಿಸಿದ। 

ನಲಸದೆ ಚಾಣೂರಮಲ್ಲನಂ ಮುರಮಥನಂ॥ ೧೧೦॥


ವಚನ॥ ಮತ್ತೆ ಬಿಡದ ಮಲ್ಲರನೃನೆ ಮೆಟ್ಟಿದುದೆ ಸಂಡೆಂಬಂದಾವೆಡೆಯಂ ಪಿಡಿದೊಡಂ ಪಿಡಿದೆಡೆಯೆ ಗಾಯಮಾಗೆ ಬಳೆಯ ಪೇಱನಾನೆ ಮೆಟ್ಟಿದಂತೆಲುವೆಲ್ಲನುರ್ಗುನುರ್ಗಾಗೆ ಮೆಯ್ಯ ತೊವಲಾಗೆ ಸಡಿಯಾಡುಗಳಂತಿವದವಲ ಬೇರಂಗಳನೀಡಾತೀ- 

ಡಾಡಿದ ಚಾಣೂರಮಥನನ ಮೇಲೆ ಯಗಸ್ತ್ಯನ ಮೇಲೆ ಕವಿದ ಕಡಲಂತೆ ಕವಿವ ಕಂಸನ ಚಾತುರ್ವಲಮಂ ಬಲದೇವನುಂ ವಸುದೇವನುಂ ಕಂಡು ತಮ್ಮ ಬಲಮಂ ಕೈವೀಸೆ ಪೆಣಮಯಂ ಮಾಡೆ ನೆತ್ತರೈಗಡಲಂ ಪರಿಯಿಸಿ ಕಟ್ಟೇವಮುಂ ಕಡುಮುಳಿಸು ಅಳವಿಗೞಿಯೆ ಸಿಗ್ಗಾಗಿ ಸೈರಿಸಲಾಱದೆ ಅಭಿನವನಾರಸಿಂಹಾಡಂಬರಮಗುರ್ವುಮದ್ಭುತಮುಮಾಗಿ- 


ಮಾಡದ ಕಂಭಮಂ ಮಲಗಿನೊಳ್ಪರಿಪಾಯ್ದು ನೆಲಕ್ಕೆ ಬಾಳನ ।

ಲ್ಲಾಡೆ ನೆಗಪ್ಪಿಕೊಂಡು ತೊಡೆಗಾನರಸಿಂಹನವುಂಕಿ ಕಂಭದಿಂ ॥ 

ಮಾಡಿದ ಕಾಳರಕ್ಕಸನನಿಕ್ಕುವವೋಲ್ ನಖದಿಂ ಕರುಳ್ಗಳಂ । 

ತೋಡಿ ಪಿಸುಳ್ದು ನೀೞ್ದು ಬಿಸುಟಂ ಕಲಿಕಂಸನನಬ್ಜಲೋಚನಂ ॥ ೧೧೭॥


ಕೆಡೆಕೆಡೆಯೆಂದರಮಗನೊದೆ। 

ದೆಡಗಾಲೊಳ್ ತೊಡರ್ದು ಕರುಳೋಳೇನಿರ್ದಂ ಕ ॥ 

ರ್ದಡಿಗಂ ಗೋವಳನಿಕ್ಕಿದ। 

ತೊಡರೊಳ್ ಮಿಗೆ ಕೋದೆೞಲ್ವ ಪಾಪೆಯ ತೆಱದಿಂ॥ ೧೧೮॥


ಕ್ಷಿತಿಗೊರ್ವನೆ ದುರ್ಜನನೊಂ । 

ದತಿವೇಗದೆ ಮಾಡುವುಪಕಾರಮನ ॥ 

ಪ್ರತಿಮರ್ ಸಜ್ಜನರಾಚಂ। 

ದ್ರತಾರಕಂ ಬರ್ದು ಮಾಡಲೇನಾರ್ತಪರೇ ॥೧೧೯॥


ಕೃತಜ್ಞತೆಗಳು, 

ಸಂಪಾದಕರು,  

ರಂ. ಶ್ರೀ. ಮುಗಳಿ. 

ಪ್ರಕಾಶಕರು: ಸಾಹಿತ್ಯ ಅಕಾಡಮಿ,  

೧೦೯,  ಎ ಡಿ ಎ ರಂಗಮಂದಿರ, 

ಜೆ. ಸಿ. ರಸ್ತೆ, ಬೆಂಗಳೂರು- ೫೬೦೦೦೨.


 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ