ರಾಮ ಸಾಂಗತ್ಯ
ಇಂದಿರಾಜಾನಕಿ ಎಸ್ ಶರ್ಮ
ಕಾವ್ಯದ ಕರ್ತೃ ಇಂದಿರಾಜಾನಕಿ. ಕನ್ನಡದ ಅತ್ಯಂತ ಜನಪ್ರಿಯ ಸಾಂಗತ್ಯ ಲಯದಲ್ಲಿ ಪೋಣಿಸಿರುವ ಈ ಹಾಡುಗಬ್ಬ, ವಾಲ್ಮೀಕಿರಾಮಾಯಣವನ್ನು ಅತ್ಯಂತ ಸಂಗ್ರಹವಾಗಿ, ಸಾರತರವೃಗಿ ನಿರೂಪಿಸಿದ ಈ ಶೈಲಿ, ಸಹಜ ಸುಂದರ. ಕಾವ್ಯದ ಒಂದೊಂದು ಸೊಲ್ಲೂ ಇನ್ನೊಮ್ಮೆ ಮಗದೊಮ್ಮೆ ಓದುವಂತೆ, ಹಾಡುವಂತೆ, ಗುಂಗು ಹಿಡಿಸುವ ರೀತಿಯಲ್ಲಿದೆ. ಔಚಿತ್ಯದ ಗೆರೆಯನ್ನು ಅದು ಎಲ್ಲೂ ದಾಟಿಲ್ಲ.
ಪ್ರಾರ್ಥನೆ.
ಸಿಂಧುರವದನನೆ ಪ್ರಣವಸ್ವರೂಪನೆ
ವಂದಿಪೆ ಮೊದಲಿಂಗೆ ನಿನಗೆ
ಕುಂದದ ಬುದ್ಧಿಯ ಜೊತೆಗೆ ಅವಿಘ್ನವ
ತಂದೆಯೆ ಕೊಡಿಸಯ್ಯ ಎನಗೆ॥
ಒಡತೆಯು ಗೀರ್ವಾಣಿ ಸಕಲವಿದ್ಯೆಗಳಿಂಗೆ
ಪೊಡಮಟ್ಟು ಬೇಡುವೆನಮ್ಮ
ನುಡಿಗಳ ಭಂಡಾರ ನನ್ನೊಳಗಿಳಿಸೆಂದು
ಮುಡಿಚಾಚಿ ಕೋರುವೆನಮ್ಮ ॥
ಆದಿಕಾವ್ಯದಿ ಮೂಡಿ ಲೋಕಪೂಜಿತಜೊಂಡ
ಮಾಧವ ಬಂದಿಲ್ಲಿ ನೆಲೆಸು
ಆ ದಿವ್ಯ ಚರಿತೆಯ ಬರೆಯುವ ಕಾರ್ಯಕ್ಕೆ
ಸಿದ್ಧಿಯನೊಲಿದಿತ್ತು ಹರಸು ॥
ತಾರಕಮಂತ್ರದ ಸಾಕಾರಮೂರ್ತಿಯ
ಪಾರಮ್ಯ ಬರೆಯಲಿಕ್ಕಾಗಿ
ಮಾರುತಿ- ಎನಗಿಲ್ಲಿ ಸಾಫಲ್ಯ ಕರುಣಿಸು
ಕೋರುವೆ ನಿನ್ನಡಿಗೆರಗಿ॥
ಹುತ್ತದಿಂ ಮೇಲೆದ್ದ ಕಣಸಿನ ಕೂಸಿಂಗೆ
ತುತ್ತಿಟ್ಟು ಬೆಳೆಸಿದ ತವಸಿ
ಕಟ್ಟುವೆ ಪದಬಂಧ ನೀವಡಿಯಿಟ್ಟಲ್ಲಿ
ಎತ್ತಿಕೊಂಡೆನ್ನ ಹರಸಿ ॥
ಬಾಲಕಾಂಡ.
ಹಾದಿಹೋಕರ ದೋಚಿ ಬದುಕಿದ ಬೇಡನ
ಹಾದಿಯೆ ಬದಲಾಗಿ ಹೋಯ್ತು
ವೇದಜ್ಞ ಋಷಿವರ ತಿಳಿಹೇಳಿ ನೀಡಿದ್ದ
ಬೋಧನೆ ತಾರಕವಾಯ್ತು ॥
ಹತ್ತುಗೆ ಕೊಂಡಿಯ ಕಳಚಿರಲವನಿಗೆ
ಮತ್ತಂಟಿಕೊಂಡಿತ್ತು ನಂಟು
ಹುತ್ತವಾಯಿತು ಚಿತ್ತ ನಿತ್ಯ ಯೋಚನೆಮಾಡೆ
ಮತ್ತೊಮ್ಮೆ ಪಡೆದನು ಹುಟ್ಟು ॥
ವಾರಿಜನಾಭನ ನಾಮವ ಜಪಿಸುತ
ನಾರದ ಬಂದಿಹನಿಳೆಗೆ
ತೋರುತ ಬಗೆಗಣ್ಣಿನೊಳಗಡೆ ತುಂಬಲು
ತಾರಣ ದಾರಿಯ ಮುನಿಗೆ ॥
ಸ್ವಾಧ್ಯಾಯಶೀಲ ನಾರದರಿಂಗೆ ವಾಲ್ಮೀಕಿ
ಪಾದಾಭಿವಂದಿಸಿ ಕೇಳ್ದಾ
ಸದ್ಯದ ಲೋಕದಿ ಗುಣವಂತನಿರುವನೇ
ವಂದ್ಯರೇ ನೀವ್ ಹೇಳಿರೆಂದಾ ॥
ವಾಲ್ಮೀಕಿಯಾಡಿದ ಮಾತಿಗೆ ನಾರದ
ಚಿನ್ಮಯನಾ ಕಥೆ ಪೇಳ್ದ
ಬಲ್ಮೆಯ ಶ್ರೀರಾಮಚಂದ್ರನ ಚರಿತೆಯ
ನಲ್ಮೆಯಿಂ ದೇವರ್ಷಿ ನುಡಿದ ॥
ಅಧಿರಾಜನಿರುವನಯೋಧ್ಯೆಯ ನಗರದಿ
ಹದಿನಾರು ಗುಣಗಳಿಗೊಡೆಯ
ಮದುವೆಯ ಪಣಕಿಟ್ಟ ಶಿವಚಾಪವ ಭಂಗಿಸಿ
ಹಿಡೆದನು ಸೀತೆಯ ಕೈಯ ॥
ಕಟ್ಟಿ ಸೇತುವೆಯನ್ನು ಕಡಲಿನ ನಡುವಲ್ಲಿ
ಮೃತ್ಯುವಾದನು ರಾವಣಂಗೆ
ಹುಟ್ಟಿನಿಂ ಶುರುಮಾಡಿ ಪಟ್ಟವೇರೊ ತನಕ
ಕೊಟ್ಟ ಚಿತ್ರಣವನ್ನು ಮುನಿಗೆ ॥
ಸಾನುರಾಗದ ಕ್ರೌಂಚಯುಗ್ಮವ ಕಾಣುತ್ತ
ಬಾಣವನೆಸೆದನು ಬೇಡ
ಕಾನನ ತುಂಬಿತ್ತು ಚೀರುತ್ತ ಹಾರಿದ
ಹೆಣ್ಣುಹಕ್ಯಿಯ ದುಕ್ಕ - ದುಗುಡವ ॥
ತಮವನ್ನು ಕಳಕೊಂಡ ವಾಲ್ಮೀಕಿ ನಡೆದಿದ್ದ
ತಮಸೆಯ ತಂಪಾದ ದಡಕೆ
ಯಮಳದ ಕ್ರೌಂಚವು ಬಾಣಕ್ಕೆ ಗುರಿಯಾಗೆ
ಶಮನವು ಸಿಗದಾಯ್ತು ಮನಕೆ ॥
ಚಾಪಲ್ಯದಿಂ ಬೇಡ ಕೊಲ್ಲಲು ಕ್ರೌಂಚವ
ಕೋಪವು ಹೆಚ್ಚಾಯ್ತು ಮುನಿಗೆ
ಆಪಗೆ ತೀರವು ಸಾಕ್ಷಿಯಾಗಿರಲಾಗ
ಶಾಪವೆ ದಕ್ಕಿತು ಅವಗೆ ॥
ತಾಪಸ ಸಿಡಿದೆದ್ದು ಬೇಡನ ಶಪಿಸಲು
ಸಾಫಲ್ಯ ದಕ್ಕಿತು ಬಾಳ್ಗೆ
ಲೋಪವಿಲ್ಲದ ಛಂದೋಬಂಧವು ಕೂಡಿದ್ದು
ಸೋಪಾನವಾಯ್ತೊಂದು ಕೃತೆಗೆ ॥
ಶಪಿಸಿದ ಕಾರ್ಯಕ್ಕೆ ಕೊರಗುತ್ತಲಿರ್ದನು
ತಪಿಸುತ್ತ ಮುನಿ ಮನದೊಳಗೆ
ಉಪದೇಶನೀಡಲು ಸೃಷ್ಟಿಕರ್ತನು ಬಂದ
ತಪಸಿಯ ಆಶ್ರಮದೊಳಗೆ ॥
ನಾರದ ನುಡಿದಂಥ ಕಥೆಯನ್ನು- ಲೋಕೈಕ
ವೀರನ ಸ್ಥೈರವ ಲಿಖಿಸು
ಮರ್ಯಾದಾಪುರುಷೋತ್ತಮನ ಧರ್ಮ ಚರಿತೆಯ
ಮಾರುತಿವಂದ್ಯನ ನುತಿಸು ॥
ಶೋಕದಿಂದಲಿ ಬಂದ ಶಾಪವಾಕ್ಯವೆ ನಾಂದಿ
ಶ್ಲೋಕವಾಗಿಯೆ ಬಂದು ನಿಲಲಿ
ಸಾಕಲ್ಯದಿಂದ ಬರೆವಾದಿಕಾವ್ಯವು
ಲೋಕದಿ ಸ್ಥಿರವಾಗಿಯಿರಲಿ॥
ಮರ್ಮವನರಿಯುವ ಶಕ್ತಿಕೈಗೂಡಲಿ
ಧರ್ಮದ ಮಾರ್ಗದ ಸುತ್ತ
ನಿರ್ಮಮಕಾರದಿ ಸತ್ಯವನುಸಿರೆಂದು
ಬ್ರಹ್ಮನು ಸೂಚನೆಯಿತ್ತ॥
ಬೊಮ್ಮನಿಂಗಿತದಂತೆ ವಾಲ್ಮೀಕಿ ಚಿತ್ತವು
ಚಿಮ್ಮಿತ್ತು ರಸಧಾರೆಯೊಂದ
ಸಮ್ಮುದದಿಂದಲಿ ರಾಮನಚರಿತೆಯ
ಕಣ್ಮುಂದೆ ಕಂಡಂತೆ ಬರೆದ॥
ಪೂಷನ ವಂಶದಿ ಬಂದಿಹ ದಶರಥ
ಮಾಸದ ಯಶವನ್ನು ಪಡೆದ
ಕೋಸಲರಾಜ್ಯವನಾಳುತ್ತ ಪ್ರಜೆಗಳ
ಪೋಷಣೆ ನಿತ್ಯವು ಗೈದ॥
ಹಿರಿಯರಸಿ ಕೌಸಲ್ಯೆ ಸುಮಿತ್ರೆಯ ಜೊತೆಗೆ
ಕಿರಿಯಳು ಕೈಕೇಯಿ ಇರಲು
ಅರಸುಪಟ್ಟಕೆ ತಕ್ಕ ವಾರಸುದಾರನ
ಕೊರತೆಯೆ ದೊರೆಗಾಯ್ತು ಮಿಗಿಲು॥
ಪುತ್ರನಿಲ್ಲದ ಚಿಂತೆ ಕಾಡಿರಲರಸಂಗೆ
ಮಂತ್ರಿಗಳೆದುರಲ್ಲಿ ಇಟ್ಟ
ಮಂತ್ರಾಲೋಚನದಲ್ಲಿ ಯಜ್ಞದ ಸಲಹೆಯ
ಮಂತ್ರಿ ಸುಮಂತ್ರನು ಕೊಟ್ಟ॥
ಪುತ್ರಯೋಗಕ್ಕಾಗಿ ಅಶ್ವಮೇಧದ ಯಾಗ
ಛತ್ರಪತಿಯು ಮಾಡಬೇಕು
ಕಾಶ್ಯಪವಂಶದ ಮುನಿವೆಭಾಂಡಕಪುತ್ರ
ಋಷ್ಯಶೃಂಗರು ಬರಬೇಕು॥
ಗುರುವಸಿಷ್ಠ ಸುಮಂತ್ರರ ನುಡಿಕೇಳಿದರಸ
ಹೊರಟನು ಅಂಗರಾಜ್ಯಕ್ಕೆ
ಪರಮಾನಂದದಿ ರೋಮಪಾದನು ಗೆಳೆಯನ
ಬರಮಾಡಿಕೊಂಡನು ಪುರಕೆ॥
ದೊರೆ ದಶರಥ ಋಷ್ಯಶೃಂಗರ ಬೇಡಿದ
ನೆರವಿತ್ತು ಸಲಹಬೇಕೆಂದು
ಅರಸನಾಡಿದ ನುಡಿ ಕೇಳಿದ ಮುನಿವರ
ಹೊರಟನು ಕೋಸಲಕ್ಕೆಂದು ॥
ಅಂಗನೆ ಶಾಂತೆಯ ಜತೆಗೂಡಿ ಬಂದನು
ಸಿಂಗಾರಗೊಂಡಿದ್ದ ಪುರಕೆ
ಇಂಗಿತದಂತೆಯೆ ಪಟ್ಟಣವಣಿಯಾಯ್ತು
ಮಂಗಲಕರ ಜ್ಞವದಕೆ॥
ಸರಯೂವಾಹಿನಿ ಪಕ್ಕ ಚಪ್ಪರವೆದ್ದಿತು
ಪರಿವಾರದವರೆಲ್ಲ ಬಂದು
ತಿರುಗಾಟ ಮುಗಿಸಿದ ಕುದುರೆಯು ಬಂದಿತ್ತು
ಹೊರೆಯ ಕಾಣಿಕೆಗಳ ಪಡೆದು॥
ನೇಮವ ಕೈಕೊಂಡು ದಶರಥ ಕುಳಿತನು
ವಾಮಾಂಗಿಯರ ಕೂಡಿಕೊಂಡು
ಸಾಮಂತರಾಜರು ಕಪ್ಪವ ಕೊಟ್ಟರು
ಹೋಮವ ಮಾಡಲಿಕೆಂದು॥
ಅಶ್ವಮೇಧದ ಜೊತೆ ಪುತ್ರಕಾಮೇಷ್ಟಿಯ
ವಿಶ್ವಾಸದಿಂದಲೆ ಮಾಡು
ವೈಶ್ವಾನರಗೆ ಹೋಮ ಗೈಯಲು ಸಿಗುವುದು
ವಿಶ್ವಂಭರನ ಕೃಪೆ ನೋಡು॥
ಯಜ್ಞ ಮಾಡಲು ಮುನಿ ಹೇಳಲು ರಾಜನು
ಯಜ್ಞವ ಕೈಗೊಂಡು ಬಿಟ್ಟ
ಯಜ್ಞಕುಂಡದಿ ಮೂಡಿಬಂದ ಪ್ರಾಜಾಪತ್ಯ
ಯಜ್ಣಪ್ರಸಾದವನಿತ್ತ ॥
ದೇವನಿರ್ಮಿತವಾದ ಪಾಯಸ ಪಡೆಯುತ್ತ
ಭಾವುಕನಾದನು ರಾಯ
ಧಾವತಿಯಿಂದಲೆ ದಶರಥ ಹಂಚಿದ
ಜೀವಾಳವಿರುವಂಥ ಪೇಯ॥
ಅರೆಪಾಲು ಕೌಸಲ್ಯೆಗದರರ್ಧವ ಸುಮಿತ್ರೆ
ಕಿರಿಯಳಿಗಷ್ಟಾಂಶವನ್ನು
ಕರೆದಿತ್ತು ಮಿಕ್ಚೆದುದ ಸುಮಿತ್ರೆಗಿನ್ನೊಮ್ಮೆ
ದೊರೆ ಕೊಟ್ಟ ಪಾಯಸವನ್ನು॥
ನವಲಾಸ್ಯ ಮೂಡಿತು ಸತಿಯರ ಮೊಗದಲ್ಲಿ
ನವಜೀವದಂಕುರದಿಂದ
ಅವನೀಶ ಗರ್ಭಕ್ಕೆ ರಕ್ಷೆಯ ಕೊಟ್ಟ ಪುಂ
ಸವನದ ಸಂಸ್ಕಾರದಿಂದ ॥
ಚೈತ್ರಶುದ್ಧದ ನವಮಿಯ ಪುನರ್ವಸುವಂದು
ಸತ್ರದ ಫಲ ಮೂಡಿಬಂತು
ಕ್ಷತ್ರಕುಲತಿಲಕನೈದಯವು ನೃಪತಿಗೆ
ಪುತ್ರನ ರೂಪದಿ ಬಂತು॥
ಹಿರಿರಾಜಪುತ್ರಂಗೆ ರಾಮನೆಂಬಭಿದಾನ
ಭರತನೆ ಕೈಕೇಯಿ ತನಯ
ಅರಗುವರರ ಜೋಡಿ ಲಕ್ಷ್ಮಣ ಶತ್ರುಘ್ನ
ಅರಸನಿಟ್ಟನು ನಾಮಧೇಯ॥
ಅಯೋಧ್ಯಾಕಾಂಡ.
ಶ್ರವಣಕುಮಾರನು ಕುರುಡು ತಾಯ್ತಂದೆಯ
ಸೇವೆಯ ಮಾಡುತ್ತಲಿರಲು
ದಶರಥನಾ ಶರ ಕಾರಣವಾಯಿತು
ಮುನಿಪುತ್ರ ಪ್ರಾಣವ ಬಿಡಲು॥
ಆಧಾರವಾಗಿದ್ದ ಪುತ್ರನು ಸಾಯಲು
ವೃದ್ಧಂಗೆ ಹೆಚ್ಚಾಯ್ತು ಕೋಪ
ಮರಣಕ್ಕೆ ನೆಪವಾದ ಅರಸಂಗೆ ಕೊಟ್ಟನು
ನೊಂದಿದ್ದ ಮನದಿಂದ ಶಾಪ॥
ಮನದೊಳು ತಳ್ಳಿದ್ದ ಶಾಪದ ವಾಕ್ಯವು
ದಶರಥನನು ಕಾಡುತಿರಲು
ಮರಣದ ಭಯದಿಂದ ನಿಶ್ಚಯಮಾಡಿದ
ರಾಮಂಗೆ ಪಟ್ಟವ ಕೊಡಲು॥
ಮಾಡಿದ ನಿರ್ಧಾರ ಹೇಳಿದ ರಾಜನು
ಆಚಾರ್ಯ ಮಂತ್ರಿಯ ಕರೆಸಿ
ಯುವರಾಜಪಟ್ಟವ ಮಾಡಲು
ಸಿದ್ಧತೆಗವಸರಪಡಿಸಿ॥
ಶುಭಲಕ್ಷಣದ ಗಜ ವೃಷಭದ ಜೊತೆಯಲ್ಲಿ
ಬೆಳ್ಗೊಡೆ ಚಾಮರವನ್ನು
ಪುಷ್ಪದಮಾಲಿಕೆ ಔಷಧಮೂಲಿಕೆ
ರತ್ನಸುವರ್ಣಾದಿಗಳನು॥
ಸಡಗರದಿಂದಲಿ ಶೀಘ್ರವೆ ಹೊಂದಿಸಿ
ಯುವರಾಜನಭಿಷೇಕಕೆಂದು
ಗುರು ಸುಮಂತ್ರರು ಮುನಿ ವಾಮದೇವ ಕೂಡಿ
ಏರ್ಪಾಡುಮಾಡಿದರಂದು॥
ದಶರಥನಪ್ಪಣೆಯಂತೆ ಸುಮಂತ್ರನು
ರಾಮನ ಕರಕೊಂಡು ಬಂದ
ತಂದೆಯ ಚರಣಕ್ಕೆ ನಮಿಸಿದ ರಾಘವ
ಕೈಗಳ ಮುಗಿಯುತ್ತ ನಿಂದ॥
ಬರಲಿಹ ನಾಳೆಯ ಪುಷ್ಯ ನಕ್ಷತ್ರದಿ
ಯುವರಾಜಪಟ್ಟಾಭಿಷೇಕವಿಹುದು
ಅದಕಾಗಿ ನೀನಿಂದು ಪತ್ನಿಯೊಡಗೂಡಿ
ವೂರತಗಳ ಮಾಡಬೇಕಿಹುದು॥
ದಶರಥನಾಡಿದ ನುಡಿಕೇಳ್ದ ಶ್ರೀರಾಮ
ತಾಯಿಗೆ ನಮಿಸಲು ಬಂದ
ಸಾರ್ಥಕ್ಯಭಾವದಿ ಕೌಸಲ್ಯೆ ರಾಮನ
ಹರಸಿದಳಾನಂದದಿ॥
ತಾಯ ಸಿರಹರಕೆ ಪಡೆದಂಥ ಶ್ರೀರಾಮ
ತನ್ನರಮನೆಯೆಡೆ ನಡೆದ
ರಾಜಗುರು ವಸಿಷ್ಠ ನುಡಿದಂತೆ ರಾಘವ
ಉಪವಾಸವ್ರತವ ಕೈಗೊಂಡ॥
ನೆನಕೆಗಳು:
ಕರ್ತೃ: ಇಂದಿರಾ ಜಾನಕಿ ಎಸ್. ಶರ್ಮ
ಪ್ರ: ದೇರಾಜೇ ಸೀತಾರಾಮಯ್ಯ ಸಂಸ್ಮರಣ ಸಮಿತಿ,
ಓಂಕಾರ್ ಆಪ್ಸೆಟ್ ಪ್ರಿಂಟರ್ಸ,
ನ್ಯೂ ತರಗುಪೇಟೆ, ಬೆಂಗಳೂರು
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ