ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಬುಧವಾರ, ಜುಲೈ 16, 2025

ಜೈಮಿನಿ ಭಾರತ 7 - ದೊಡ್ಡಬೆಲೆ ನಾರಾಯಣಶಾಸ್ತ್ರಿ

ಜೈಮಿನಿ ಭಾರತ 7 - ದೊಡ್ಡಬೆಲೆ ನಾರಾಯಣಶಾಸ್ತ್ರಿ


ಸೂಚನೆ:- ಅಧ್ವರಕೆ ಯಾದವರ ಗಡಣದಿಂ ದಾನವ ಕು। 

ಲಧ್ವಂಸಿ ಹಸ್ತಿನಾವತಿಗೆ ಬಿಜಯಂಗೆಯ್ಯು। 

ತಧ್ವರದೊಳ್ ತಾಗಿದನುಸಾಲ್ವನಂ ಗೆಲ್ದು ಪಾಂಡವರನುರೆ ಪಾಲಿಸಿದನು॥ 


ಪ್ರತಿಪದಾರ್ಥ:- ದಾನವಕುಲಧ್ವಂಸಿ= ರಾಕ್ಷಸಾಂತಕನಾದ ಶ್ರೀಕೃಷ್ಣಸ್ವಾಮಿಯು,  ಅಧ್ವರಕೆ= ಯುಧಿಷ್ಠಿರನು ಎಸಗುವ ಹಯಮೇಧಕ್ಕೆ,ಯಾದವರು= ಯದೈವಂಶಜರ, ಗಡಣದಿಂ= ಸಮುದಾಯದಿಂದ, (ಯುಕ್ತನಾಗಿ) ಹಸ್ತಿನಾವತಿಗೆ,= ಇಭಪುರಿಗೆ, ಬಿಜಯಂಗೈವುತ= ಹೊರಡುತ್ತ, ಅಧ್ವದೊಳ್= ದಾರಿಯಲ್ಲಿ, ತಾಗಿದ= ಎದುರುಬಿದ್ದ, ಅನುಸಾಲ್ವನಂ= ಅನುಸಾಲ್ವನೆಂಬ ನಾಮಧೇಯವುಳ್ಳ ರಕ್ಕಸನನ್ನು, ಗೆಲ್ದು= ಭಂಗಪಡಿಸಿ ಅಥವಾ ಅಪಜಯವುಂಟಾಗುವಂತೆ ಮಾಡಿ, ಪಾಂಡವರನು= ಧರ್ಮಾದಿಗಳನ್ನು,ಉರೆ=ಹೆಚ್ಚಾಗಿ, ಪಾಲಿಸಿದನು= ಸಲಹಿದನು. 


ಅ॥ವಿ॥ ದಾನವಕುಲಧ್ವಂಸಿ= ದಾನವ-ಅಸುರರ, ಕುಲ= ವಂಶವನ್ನು, ( ಷ. ತ. ) ಧ್ವಂಸಿ= ಹಾಳುಮಾಡಿದವನು(ದ್ವಿ, ತ ) 


ಭೂರಮಣ ಕೇಳನಿಲತನಯನಂ ಕೂಡಿಕೊಂ। 

ಡಾರೋಗಿಸಿದಬಳಿಕಾ ನವಕುಸುಮಗಂಧ ಕ। 

ರ್ಪೂರ ತಾಂಬೂಲಮಂ ಕೊಟ್ಟು, ಕೃತವರ್ಮನಂ ಕರೆಸಿ ಧರ್ಮಜನ ಮಖಕೆ॥ 

ವಾರಣನಗರಿಗೀಗ ನಮ್ಮೊಡನೆ ನಡೆತರಲಿ । 

ದ್ವಾರಕೆಯೊಳಿರ್ದ ಜನರೆಲ್ಲರುಂ ಪೊಯ್ಸಿ ಗೂ। 

ಡಾರಮಂ ಪೊರಗೆ ಸಾರಿಸು ಪುರದೊಳೆಂದು ಮಧುಸೂದನಂ ನೇಮಿಸಿದನು॥೧॥ 


ಪ್ರತಿಪದಾರ್ಥ:- ಭೂರಮಣ= ಪೊಡವಿಪನಾದ ಜನಮೇಜಯನೆ,  ಕೇಳು= ಲಾಲಿಸು, ಅನಿಲತನಯನಂ= ವಾಯುಸೂನುವನ್ನು, ಕೂಡಿಕೊಂಡು= ಜೊತೆಮಾಡಿಕೊಂಡು, ಆರೋಗಿಸಿದ ಬಳಿಕ= ಭೋಜನಮಾಡಿದಮೇಲೆ, ನವ= ನೂತನವಾದ, ಕುಸುಮ= ಹೂಗಳು, ಗಂಧ= ಸುವಾಸನಾದ್ರವ್ಯಗಳು, ಕರ್ಪೂರ= ಪಚ್ಚೆಗಪ್ಪುರವು, ತಾಂಬೂಲಮಂ= ವೀಳೆಯದೆಲೆ ಅಡಿಕೆ ಮೊದಲಾದವನ್ನು, ಕೊಡುತ= ಈಯುತ್ತ, ಕೃತವರ್ಮನಂ = ಕೃತವರ್ಮನೆಂಬ ನಾಮಧೇಯದಿಂದ ಯುಕ್ತನಾದ ಯದುಕುಲ ಚಮೂಪನನ್ನು, ಕರೆಸಿ= ಐತರಬೇಕೆಂದು ಹೇಳಿ, ಧರ್ಮಜನ= ಧರ್ಮಪುತ್ರನ, ಮಖಕೆ= ಅಶ್ವಮೇಧವೆಂಬ ಕ್ರತುವಿಗೆ, ಈಗ= ಈಗಲೆ, ವಾರಣನಗರಿಗೆ= ಗಜಪುರಿಗೆ, ನಮ್ಮೊಡನೆ= ನಮ್ಮೊಂದಿಗೆ, ದ್ವಾರಕೆಯೊಳು= ದ್ವಾರಕಾನಗರದಲ್ಲಿ, ಇರ್ದ= ಇರತಕ್ಕ, ಜನರೆಲ್ಲರೂ= ಸಮಸ್ತ ಪ್ರಜೆಗಳೂ, ನಡೆತರಲಿ= ಐತರಲಿ, ಪೊರಗೆ= ಊರಾಚೆಯ ಕಡೆಯಲ್ಲಿ, ಗೂಡಾರಮಂ= ಬಿಡಾರವನ್ನು( ಡೇರೆಯನ್ನು) ಪೊಯ್ಸು= ಮಾಡಿಸು, ಪುರದೊಳು= ನಗರದಲ್ಲೆಲ್ಲಾ, ಪೊರೆಗೆ= ಹಸ್ತಿನಾವತಿಗೆ ಹೊರಡಲು ಸಿದ್ಧರಾಗಿರಬೇಕೆಂಬುದಾಗಿ, ಸಾರಿಸು= ಪ್ರಕಟಪಡಿಸು, ಎಂದು= ಎಂಬತೆರನಾಗಿ, ಮಧುಸೂದನಂ= ಹರಿಯು, ನೇಮಿಸಿದನು= ಅಪ್ಪಣೆಯನ್ನಿತ್ತನು. 


ಅ॥ವಿ॥ ಮಧು= ಮಧುವೆಂಬ ರಕ್ಕಸನನ್ನು, ಸೂದನ= ಕೊಂದವನು,(ದೂವಿ. ತ.) ಮಧು= ಒಬ್ಬ ರಾಕ್ಷಸ, ಒಂದು ಉದ್ಯಾನವನ, ಸಿಹಿಪದಾರೂಥ, ಹೆಂಡ, ಎಂಬ ಅರ್ಥಗಳನ್ನೊಳಗೊಂಡಿರುವುದು,  ಅನಿಲತನಯ= ಅನಿಲ -ವಾಯುವಿನ, ತನಯಂ= ಪುತ್ರನು, (ಷ. ತ. ) ಅನಿಲ=ಗಾಳಿ, ಅನಲ=ಅಗ್ನಿ, ಕುಸುಮವೂ ಗಂಧವೂ ಕರ್ಪೂರವೂ ತಾಂಬೂಲವೂ= ಕುಸುಮಗಂಧಕರೂಪೊರ ತಾಂಬೂಲಗಳು( ದ್ದಂದ್ದ. ಸ ) ನವ= ಹೊಸದಾದ, ಕುಸುಮ ಗಂಧ ಕರ್ಪೂರ ತಾಂಬೂಲಗಳು( ವಿ. ಪೂ. ಕ. ಸ. ) 


ತಾತ್ಪರ್ಯ :- ಅನಂತರದಲ್ಲಿ ಜೈಮಿನಿಋಷಿಯು ಜನಮೇಜಯರಾಯನಂ ಕುರಿತು,  ಕೇಳು ಜನಮೇಜಯನೆ,  ಈ ಪರಿಯಾಗಿ ಶ್ರೀಕೃಷ್ಣಸ್ವಾಮಿಯಿಂದ ಸತ್ಕರಿಸಲ್ಪಟ್ಟ ವೃಕೋದರನು ಸಂತುಷ್ಟಾಂತರಂಗನಾಗಿ ಮುರಹರನನ್ನು ಕುರಿತು,  ಪ್ರಭುವೆ, ಯುಧಿಷ್ಠಿರನು ಮಾಡಬೇಕೆಂದಿರುವ ಕ್ರತುವಿನ ಗಡುವು ಅತಿ ಸಮೀಪವಾಯಿತಾದ್ದರಿಂದ ತಮ್ಮನ್ನು ಸಕಲ ಪರಿವಾರ ಸಮೇತವಾಗಿ ಜಾಗ್ರತೆಯಿಂದ ಕರೆತರಬೇಕೆಂದು ನನಿಗೆ ಆಜ್ಞಾಪಿಸಿದನು. ಆದಕಾರಣ ಶೀಘ್ರವಾಗಿಯೇ ಪ್ರಯಾಣಕ್ಕೆ ಸಿದ್ಧರಾಗಬೇಕೆಂದು ಕೇಳಿಕೊಂಡನು. ಅನಿಲಜನ ಈ ತೆರನಾದ ನುಡಿಗಳನ್ನು ಕೇಳಿದೊಡನೆಯೇ ಮಧುವೈರಿಯು ತನ್ನ ಮುಖ್ಯ ಚಮೂಪನಾದ ವಾರ್ಷ್ಣೇಯನನ್ನು ಜಾಗ್ರತೆ ಕರತರಬೇಕೆಂದು ಹೇಳಿಕಳಿಸಲು ಆ ಸೇನಾನಾಯಕನು ತಡಮಾಡದೆ ಬಂದು ಸ್ವಾಮಿಗೆ ಸಾಷ್ಟಾಂಗಪ್ರಮಾಣವನ್ನರ್ಪಿಸಿ ಅಪ್ಪಣೆ ಏನೆಂದು ಕೇಳಿಕೊಂಡನು, ಆಗ ದಾನವಾಂತಕನಾದ ಶ್ರೀಕೃಷ್ಣಸ್ವಾಮಿಯು ವಾರ್ಷ್ಣೇಯನನ್ನು ಕುರಿತು, ಎಲೈ ಸೇನಾನಾಯಕನೆ, ಇಭನಗರದಲ್ಲಿ ಧರ್ಮರಾಯನು ಅಶ್ವಮೇಧಯಾಗಮಂ ಮಾಡಲೆಳಸಿರುವುದರಿಂದ ನಮ್ಮನ್ನೆಲ್ಲಾ ಅಲ್ಲಿಗೆ ಕರೆದುಕೊಂಡು ಹೋಗಬೇಕೆಂದು ವಾಯುಸುತನಾದ ಭೀಮಸೇನನು ಬಂದಿರುವನು ಆದಕಾರಣ ದ್ವಾರಕಾನಗರದ ಪ್ರಜೆಗಳೆಲ್ಲಾ ನನ್ನೊಂದಿಗೆ ಹಸ್ತಿನಾವತಿಗೆ ಪಯಣ ಸನ್ನದ್ಧರಾಗಲೆಂದು ಊರಲ್ಲೆಲ್ಲಾ ದಂಡೋರೆಯ ಮೂಲಕ ಪ್ರಸಿದ್ಧಪಡಿಸು. ಡೇರೆಯ ಸಾಮಾನುಗಳನ್ನು ಊರಹೊರಗೆ ಸಾಗಿಸಿ ಸಿದ್ಧವಾಗುವಂತೆ ಮಾಡು. 


ವಸುದೇವ ಹಲಧರರ್ ಪೊಳಲಿನಲ್ಲಿರ್ದು ಪಾ। 

ಲಿಸಲುಳಿದ ಪ್ರದ್ಯುಮ್ನ ಗದ ಸಾಂಬನನಿರುದ್ಧ । 

ನಿಶಠ ಶಠನಕ್ರೂರ ಸಾತ್ಯಕಿ ಪ್ರಮುಖ ಯಾದವರೆಮ್ಮ ಕೂಡೆ ಬರಲಿ॥ 

ಒಸಗೆ ಮಿಗೆ ದೇವಕಿಯೊಡನೆ ತೆರಳಲರಸಿಯರ್ । 

ಪೊಸತೆನಿಪ ವಸ್ತುವಂ ತೆಗೆಸು ಭಂಡಾರದಿಂ। 

ದೆಸೆವ ಪುರಜನ ಪರಿಜನ ಸ್ತ್ರೀಯರೈದಲೆಂದಸುರಾರಿ ನೇಮಿಸಿದನು॥೨॥


ಪ್ರತಿಪದಾರ್ಥ:-ವಸುದೇವ =ವಸುದೇವನೆಂಬ ನಮ್ಮ ಪಿತನು, ಹಲಧರನು= ಬಲಭದ್ರನೆಂಬ ನಮ್ಮ ಅಗ್ರಜನು, ಪೊಳಲಿನಲ್ಲಿ= ನಗರದಲ್ಲಿ, ಇರ್ದು= ನೆಲಸಿ, ಪಾಲಿಸಲಿ= ಕಾಪಾಡುತ್ತಿರಲಿ, ಪ್ರದ್ಯುಮ್ನ = ಪ್ರದ್ಯುಮ್ನನೆಂಬ, ಗದುಗದನೆಂಬ ಹೆಸರುಳ್ಳ, ಸಾಂಬ= ಸಾಂಬನೆನ್ನತಕ್ಕ, ಅನಿರುದ್ಧ= ಅನಿರುದ್ಧನೆಂಬನಾಮಧೇಯವಂಧರಿಸೆದ, ಶಠ= ಶಠನು, ನಿಶಠನು= ನಿಶಠನು, ಅಕ್ರೂರ= ಅಕ್ರೂರನು, ಸಾತ್ಯಕಿ= ಸಾತ್ಯಕಿಯು, ಪ್ರಮುಖರು= ಇವರೇ ಆದಿಯಾದ,  ಯಾದವರು= ಯದುಕುವರರು, ಎಮ್ಮಕೂಡ= ನಮ್ಮ ಜೊತೆಯಲ್ಲಿಯೇ, ಬರಲಿ= ಬರತಕ್ಕವರಾಗಲಿ, ಪೊಸಗೆಮಿಗೆ= ನೂತನವಾದ ಉಡಿಗೆತೊಡಿಗೆಗಳ ಶೃಂಗೃರಾತಿಶಯಮಂ ತಾಳಿ, ದೇವಕಿಯೊಡನೆ= ನಮ್ಮ ತಾಯಿಯೊಂದಿಗೆ, ಅರಸಿಯರು= ಪಟ್ಟಮಹಿಷಿಯರಾದ ರುಕ್ಮಿಣಿ, ಸತ್ಯಭಾಮೆಯರು, ಬರಲಿ=ಐತರಲಿ, ಭಂಡಾರದಿಂದ =ಕೋಶದಿಂದ, ಪೊಸತೆನಿಪ = ನವೀನವಾದ, ವಸ್ತುವಂ= ಪುರುಳ್ಗಳನ್ನು,  ತೆಗೆಸು= ತರಹೇಳು, ಎಸೆವ= ಹೊಳೆಯುವ, ಪುರಜನ= ನಗರವಾಸಿಗಳು, ಪರಿಜನ= ಚಾಕರಿಯವರು, ಸ್ತ್ರೀಯರು = ನಾರಿಯರು, ಐದಲಿ= ಬರತಕ್ಕವರಾಗಲಿ, ಎಂದು=ಎಂಬತೆರನಾಗಿ,  ಅಸುರಾರಿ= ದೈತ್ಯಾರಿಯಾದ ಕೃಷ್ಣನು, ನೇಮಿಸಿದನು.  


ಅ॥ ವಿ॥ ಪ್ರದ್ಯುಮ್ನ = ಇವನು ಶ್ರೀಕೃಷ್ಣನಿಂದ ರುಕ್ಮಿಣಿಯಲ್ಲಿ ಜನಿಸಿದವನು,  ಸಾಂಬ= ಜಾಂಬವತಿಯು ಹಡದ ಮಗನು, ಹಲ= ನೇಗಿಲನ್ನು, ಧರ=ಧರಿಸಿದವನು ಬಲರಾಮ, (ದ್ವಿ. ತ. ) 


ತಾತ್ಪರ್ಯ:- ವಸುದೇವನೂ, ನೇಗಿಲನ್ನೇ ಆಯುಧವಾಗಿವುಳ್ಳ ಬಲರಾಮನೂ ಸಹ ನಾವು ಹಸ್ತಿನಾವತಿಯಿಂದ ಹಿಂದಿರುಗಿ ಬರುವವರೆಗೂ ದ್ವಾರಕಾನಗರದ ರಾಜ್ಯಭಾರವನ್ನು ನಡೆಸುತ್ತಿರಲಿ. ಪ್ರದ್ಯುಮ್ನ, ಗದ,ಸಾಂಬ, ಅನಿರುದ್ಧ,  ಶಠ, ನೆಶಠ, ಅಕ್ರೂರ, ಸಾತ್ಯಕಿಯೇ ಮೊದಲಾದ ಇತರರು ನಮ್ಮನ್ನು ಹಿಂಬಾಲಿಸಲಿ,ಭಂಡಾರದಲ್ಲಿ ನವೀನವಾಗಿರೈವ ಹೊಸಹೊಸದಾದ ವಸ್ತ್ರಾಭರಣಗಳನ್ನೆಲ್ಲಾ ತೆಜೆಸಿ ಹಸ್ತಿನಾವತಿಗೆ ಸಾಗಿಸಲು ಪ್ರಯತ್ನಿಸು. ರುಕ್ಮಿಣಿ ಸತ್ಯಭಾಮೆಯೇ ಮೊದಲಾದ ಪಟ್ಟಮಹಿಷಿಯರೆಲ್ಲಾ ಅಮೌಲ್ಯವಾದ ಉಡಿಗೆತೊಡಿಗೆಗಳಿಂದಲಂಕೃತರಾಗಿ ದೇವಕೀದೇವಿಯೊಡನೆ ಪ್ರಯಾಣಕ್ಕೆ ಸಿದ್ಧರಾಗಲಿ, ಜನರೊಂದಿಗೆ ಊರಿನಲ್ಲೆರುವ ಎಲ್ಲಾ ಸ್ತ್ರೀಯರೂ ಮತ್ತು ಚೇಟಿಯರೂ ಸಹ ಹೊರಡಲಿ ಎಂದು ಆಜ್ಞಾಪಿಸಿದನು. ಶ್ರೀಕೃಷ್ಣಮೂರ್ತಿಯ ಈ ಸರಿಯಾದ ಅನುಜ್ಞೆಯನ್ನು ಶಿರದೊಳಿಟ್ಟು ಹಸ್ತಿನಾವತಿಗೆ ಧರ್ಮಪುತ್ರನು ಮಾಡುವ ಯಾಗಕ್ಕೆ ಪೌರಜನರೆಲ್ಲಾ ಹೊರಡಲು ಸಿದ್ಧರಾಗಲೆಂದು ವಾರ್ಷ್ಣೇಯನು ಅನೇಕವಾದ ವಾದ್ಯಧ್ವನಿಗಳಿಂದ ಪ್ರಸಿದ್ಧಪಡಿಸಿದನು. 


ಬಳಿಕ ಕೃತವರ್ಮಕನ ನೇಮದಿಂ ನಗರದೊಳ್। 

ಮೊಳಗಿದುವು ನಿಸ್ಸಾಳಕೋಟಿಗಳ್ ಪೊರಮಟ್ಟು । 

ದುಳಿಯದೆ ಸಮಸ್ತ ಜನಮೈದಿದುವು ದೇವಕಿ ಯಶೋದೆಯರ ದಂಡಿಗೆಗಳು॥ 

ಕೆಳದಿಯರ್ವೆರಸಿ ರುಕ್ಮಿಣಿ ಸತ್ಯಭಾಮಾದಿ । 

ಲಲನೆಯರ ಪಲ್ಲಕ್ಕಿಗಳ ಸಾಲ್ಗಳಂದು ಕೆಲ। 

ಬಲದ ಸುಯ್ದಾನದಿಂ ತೆರಳಿದುವು ಕೋಶದ ಸುವಸ್ತುಗಳನೆತ್ತಿಸಿದರು॥೩॥


ಪ್ರತಿಪದಾರ್ಥ:- ಬಳಿಕ= ತರುವಾಯ, ಕೃತವರ್ಮನ= ಚಮೂಪನಾದ ಕೃತವರ್ಮನ, ನೇಮದಿಂ = ಅನುಜ್ಞೆಯಿಂದ, ನಿಸ್ಸಾಳಕೋಟಿಗಳು= ಕೋಟಿಪ್ರಕಾರವಾದ ಭೇರೀಮೃದಂಗಾದಿಗಳ ಸ್ವನಂಗಳು, ಮೊಳಗಿದವು= ಭೋರ್ಗರೆದವು, ನಗರದೊಳ್ ಉಳಿಯದೆ= ಪಟ್ಟಣದಲ್ಲಿ ಯಾರೂ ನಿಲ್ಲದೆ, ಸಮಸ್ತಜನರೂ= ಅಶೇಷಪ್ರಜೆಗಳೂ, ಪೊರಮಟ್ಟುದು= ಹೊರಟವರಾದರು, ದೇವಕಿಯಶೋದೆಯರ= ಕೃಷ್ಣನ ತಾಯಿಯರಾದ ದೇವಕಿ ಮತ್ತು ಯಶೋದೆಯರ, ದಂಡಿಗೆಗಳು= ಪಲ್ಲಕ್ಕಿಗಳು, ಐದಿದವು= ಮುಂದುವರಿದುವು, ಕೆಳದಿಯರ್ವೆರಸಿ= ಸಂಗಾತಿಯರಿಂದೊಡಗೂಡಿ, ರುಕ್ಮಿಣಿಸತ್ಯಭಾಮೆ= ಶ್ರೀ ಕೃಷ್ಣನ ಪಟ್ಟಮಹಿಷಿಯರಾದ ರುಕ್ಮಿಣಿ ಸತ್ಯಭಾಮೆಯರು, ಆದಿ= ಮುಂತಾದ, ಲಲನೆಯರ= ಸ್ತ್ರೀಯರ,  ಪಲ್ಲಕ್ಕಿಗಳು= ದಂಡಿಗೆಗಳು, ಸಾಲ್ಗಳ= ಇವುಗಳ ಶ್ರೇಣಿಗಳು, ಕೆಲಬಲದ= ಉಭಯಪಾರ್ಶ್ವಗಳ, ಸುಯಿಧಾನದಿಂದ= ಅಂಗರಕ್ಷಕರಿಂದ, ತೆರಳಿದವು= ನಡೆದವು, ಕೋಶದ= ಭಂಡಾರದಲ್ಲಿದ್ದ, ಸುವಸ್ತುಗಳು= ಧನಕನಕರಾಶಿಗಳು, ಧಾನ್ಯಗಳು, ವಸ್ತ್ರಾಭರಣಗಳೇ ಮುಂತಾದವನ್ನು, ಎತ್ತಿದರು= ಆನೆ, ಒಂಟೆ, ಆಳುಗಳು, ಗಾಡಿಗಳು, ಇವುಗಳಲ್ಲಿ ಹೇರಿದರು.


ತಾತ್ಪರ್ಯ:- ಅನಂತರದಲ್ಲಿ ಮುಖ್ಯ ಸೇನಾನಾಯಕನಾದ ವಾರ್ಷ್ಣೇಯನು ಶ್ರೀಕೃಷ್ಣಮೂರ್ತಿಯ ಬಳಿಗೆ ಬಂದು, ಮಹಾಪುಭೊ, ತಮ್ಮ ಆಜ್ಞೆಯನ್ನು ಶಿರಸಾವಹಿಸಿ ದ್ವಾರಕಾನಗರದ ಅಶೇಷರಾದ ಪ್ರಜೆಗಳೂ, ರುಕ್ಮಿಣೀ ಸತ್ಯಭಾಮೆಯರೇ ಮೊದಲಾದ ಪೌರನಾರಿಯರೂ, ನಿನ್ನ ಮಾತೆಯರಾದ ದೇವಕಿ ಯಶೋದೆಯರೂ ಪ್ರಯಾಣಸನ್ನದೂಧರಾಗಿ ಹೊರಟಿರುವರು, ಭಂಡಾರದಲ್ಲಿನ ಅಮೌಲ್ಯವಾದ ಧನಕನಕ ವಸ್ತ್ರಾಭರಣಗಳನ್ನೆಲ್ಲಾ ಬಂಡಿಗಳಲ್ಲಿಯೂ, ಹಸ್ತ್ಯಶ್ವಗಳ ಮೇಲೆಯೂ ಹಾಕಿಸಿ ಸಿದ್ಧಪಡಿಸಿರುವೆನೆಂದು ಅರಿಕೆ ಮಾಡಿದನು. 


ಸುತ ಸೋದರ ಜ್ಞಾತಿ ಮಿತ್ರ ಬಾಂಧವ ಪುರೋ। 

ಹಿತರೊಡನೆ ಪೊರಮಟ್ಟನಸುರಾಂತಕಂ ಸಮಾ। 

ವೃತವಟುಗಳಿಂದೆ ಸನ್ನಿಹಿತಶಾಸ್ತ್ರಂಗಳಿಂ ದ್ವಿಜರಾಯುಧಂಗಳಿಂದೆ॥ 

ಚತುರಂಗಬಲದಿಂದೆ ಭೂಭುಜರ್ ದ್ರವ್ಯದಿಂ । 

ದತುಳ ಸಂಭಾರದಿಂ ವೈಶ್ಯರೈದಿತು ಶೂದ್ರ । 

ವಿತತಿ ನಾನಾಜಾತಿಗಳ ನೆರವಿಯಿಂ ತಮ್ಮತಮ್ಮ ವಿನಿಯೋಗದಿಂದೆ॥೪॥ 


ಪ್ರತಿಪದಾರ್ಥ:- ಅಸುರಾಂತಕಂ= ರಕ್ಕಸರಿಗೆ ಅಂತಕನಾದ ಹರಿಯು, ಸುತ=ಪುತ್ರರು, ಸಹೋದರ= ಭ್ರಾತೃಗಳು, ಜ್ಞಾತಿ= ದಾಯಾದಿಗಳು, ಬಾಂಧವ್ಯ= ನೆಂಟರಿಷ್ಟರು, ಪೈರೋಹಿತರು= ಹವ್ಯಕವ್ಯಯಗಳನ್ನು  ಮಾಡಿಸತಕ್ಕವರು, ಒಡನೆ= ಇವರೇ ಮೊದಲಾದವರೊಂದಿಗೆ, ಸಮಾವೃತ= ಸ್ನಾತಕರ್ಮದಿಂದ ಶುದ್ಧರಾದ, ವಟುಗಳಿಂ= ಮುಂಜಿಯಾದ ಬಾಲಕರಿಂದ, ಸನ್ನಿಹಿತ= ಜೊತೆಯಾಗಿರುವ, ಶಾಸ್ತ್ರಂಗಳಿಂದ= ಧರ್ಮಶಾಸ್ತ್ರವೇ ಮೊದಲಾದವುಗಳಿಂದ, ದ್ವಿಜರ= ಬ್ರಾಹ್ಮಣರ, ಆಯತಂಗಳಿಂದ= ಹೆಚ್ಚಿಕೆಯಿಂದ, ಭೂಭುಜರು= ರಾಜರು, ಚತುರಂಗಬಲದಿಂದ = ಹಸ್ತ್ಶಶ್ವರಥಪದೃತಿಗಳಿಂದಲೂ, ವೈಶ್ಯರು= ವ್ಯಾಪಾರಿ ವರ್ಗದವರು, ದ್ರವ್ಯದಿಂ= ಹಣದರಾಶಿಯಿಂದಲೂ, ಶೂದ್ರವಿತತಿ= ಒಕ್ಕಲಿಗರ ಗುಂಪು,ಅತುಲ= ಅಸಮಾನವಾದ, ಭಾರದಿಂ= ಹೊರೆಗಳಿಂದಲೂ, ನಾನಾಜಾತಿಗಳ = ಬೇರೆಬೇರೆ ಪಂಗಡದವರ, ನೆರವಿಯಂ= ಸೇರುವಿಕೆಯಿಂದ, ತಂತಮ್ಮ ವಿನಿಯೋಗದಿಂದ= ಅವರವರಿಗೆ ನಿಯಾಮಕವಾದ ಕೃತ್ಯಗಳುಳ್ಳವರಾಗಿ, ಐದಿತು= ಮುಂದುವರಿದರು. 


ಅ॥ ವಿ॥ ದ್ವಿಜ= ದ್ವಿ-ಎರಡು ಸಾರಿ, ಜ= ಜನ್ಮವುಳ್ಳವರು. 


ತಾತ್ಪರ್ಯ:- ಈ ಪರಿಯಾದ ವಾರ್ಷ್ಣೇಯನ ಬಿನ್ನಪವನ್ನು ಕೇಳೆದ ಅಸುರವೈರೆಯು ಸಂತೋಷಪಟ್ಟು ವಾರ್ಷ್ಣೇಯನನ್ನು ಸತ್ಕರಿಸಿ,  ಅನಂತರ ತಾನು ಪುತ್ರಮಿತ್ರ ಸಹೋದರರಿಂದಲೂ ಜ್ಞಾತಿವರ್ಗದಿಂದಲೂ ಕೂಡಿದವನಾಗಿ, ಪುರೋಹಿತರನ್ನು ಸಂಗಡಲೇ ಕರೆದುಕೊಂಡು,  ಅನೇಕರಾದ ಬ್ರಹ್ಮಚಾರಿಗಳಿಂದಲೂ ಶಾಸ್ತ್ರನಿಯಮಗಳನ್ನು ನಿಷ್ಕರ್ಷಿಸಿರುವ ವಿಧವಿಧವಾದ ಗ್ರಂಥಸಮುದಾಯದಿಂದಲೂ ಯುಕ್ತನಾಗಿ ಪ್ರಯಾಣವಂ ಬೆಳಸಿದನು, ಇವನ ಹಿಂದೆಯೇ ವೇದವೇದಾಂಗ ಪಾರಂಗತರಾದ ಅನೇಕ ವೆಪ್ರವರ್ಯರೂ, ಸಕಲೈಶ್ವರ್ಯದಿಂದೊಡಗೂಡಿದ ವೈಶ್ಯರೂ, ಅನೇಕರಾದ ಶೂದ್ರರೂ ಹೊರಟರು.


ಒಟ್ಟೆಗಳ ವೇಸರದ ಪೊರೆಯಾಳ ಕಂಬಿಗಳ। 

ಕೊಟ್ಟಿಗೆಯ ಕೊಲ್ಲಾರಬಂಡಿಗಳ ಮೇಲೆ ಸರ। 

ಕಿಟ್ಟಣಿಸಿ ನೂಕಿದುದು ಗೋಮಹಿಷಿಕುಲದ ಕೀಲಾರ ಬಿಡದೆಯ್ದಿತೊಡನೆ॥ 

ದಟ್ಟೈಸಿದುವಾನೆ ಕುದುರೆಯ ರಥದ ಸೇನೆ ಪೊರ। 

ಮಟ್ಟುದಂದಣದ ಪಲ್ಲಕ್ಕಿಗಳ ರಾಜಿ ಸಾ। 

ಲಿಟ್ಟು ನಡೆದವು ಛತ್ರ ಚಾಮರ ಪತಾಕೆಗಳ್ ತೆರಳಿತು ಜನಂ ಮುದದೊಳು॥೫॥ 


ಪ್ರತಿಪದಾರ್ಥ:- ಒಟ್ಟೆಗಳ= ಉಷ್ಟ್ರಂಗಳ, ವೇಸರದ= ಅಶ್ವ ಗಾರ್ಧಭಂಗಳ ಸಂಯೋಗದಿಂದ ಜನಿಸಿದ ಮೃಗಗಳ, ಪೊರೆಯಾಳ= ಭಾರ ಹೊರುವರ, ಕಂಬಿಗಳ= ಭುಜದ ಮೇಲೆ ಅಡ್ಡೆ ಕಟ್ಟಿಗೆಯಲ್ಲಿ ಹೇರನ್ನು ಹೊರತಕ್ಕವರು, ಗೊಟ್ಟಿಗೆಯ= ಮೂಟೆ ಹೊರತಕ್ಕವರ, ಕೊಲ್ಲಾರ= ವೃಷಭಗಳಮೇಲೆ ಹಾಕಿದ ಕಂಟಲೆಗಳ,(ಚೀಲಗಳ) ಬಂಡಿಗಳ= ಗಾಡಿಗಳ, ಮೇಲೆ= ಮೇಲ್ಭಾಗದಲ್ಲಿ,ಸರಕು= ಅಕ್ಕಿ, ಬೇಳೆ, ತುಪ್ಪ ಮೊದಲಾದವುಗಳನ್ನು, ಇಟ್ಟಣಿಸಿ= ಹೇರಿ, ನೂಕಿದುದು= ಸಾಗಿತು, ಗೋ= ಎತ್ತುಗಳ, ಮಹಿಷ=ಕೋಣಗಳ, ಕುಲ= ಸಮುದಾಯವು, ದಾರಿ= ಹಾದಿಯನ್ನು, ಬಿಡದೆ= ಬಿಡುವಿಲೂಲದೆ, ದಟ್ಟಿಸಿದವು= ದಟ್ಟವಾಗಿ ಹೋಗುತ್ತಿದ್ದವು, ಆನೆ= ಹಸ್ತಿಯು, ಕುದುರೆ= ಅಶ್ವವು, ರಥದ= ತೇರಿನ, ಸೇನೆ= ಪದಾತಿಯು, ಪೊರಮಟ್ಟುದು= ಮುಂದುವರಿಯಿತು, ಅಂದಣದ= ವಿಮಾನಗಳ, ಪಲ್ಲಕ್ಕಿಗಳ =ಪಾಲಕಿಗಳ, ರಾಜಿ=ಶ್ರೇಣಿಯು, ಛತ್ರ= ಶ್ವೇತಾತಪತ್ರವು,ಚಾಮರ= ಚೌರಿಗಳು, ಪತಾಕಿ= ಬಾವುಟಗಳು, ಸಾಲಿಟ್ಟ= ಪಙ್ತಿಯಾಗಿನಡೆದವು= ಹೊರಟವು, ಜನಂ= ಪ್ರಜೆಗಳೆಲ್ಲರೂ,ಮುದದೊಳು= ಆನಂದಾತಿಶಯದಿಂದ, ತೆರಳಿತು= ಪ್ರಯಾಣಮಾಡಿದರು.


ತಾತ್ಪರ್ಯ:- ಒಂಟೆಗಳಮೇಲೂ, ಗಾಡಿಗಳಲ್ಲಿಯೂ, ಜನಗಳತಲೆಯಮೇಲೆಯೂ, ಬೇಕಾದಷ್ಟು ಧಾನ್ಯಗಳನ್ನು ತುಂಬಿ ಕಳುಹಿಸಿದರು. ಹಾಲನ್ನು ಕೊಡುವ ಅತ್ಯುತ್ತಮವಾದ ಧೇನುಗಳೂ, ಎಮ್ಮೆಗಳೂ, ಗುಂಪು ಗುಂಪಾಗಿ ಹೋಗುತ್ತಿದ್ದವ.

ಹಸ್ತ್ಯಶ್ವ ರಥಪದಾತಿಗಳೂ, ಪಲ್ಲಕ್ಕಿಗಳ ಸಾಲ್ಗಳೂ ಮೆರೆದವು, ಶ್ವೇತಾತಪತ್ರವನ್ನು ಚಾಮರಂಗಳನ್ನೂ ಉಳ್ಳ ಜನಸಮುದಾಯವೂ ಹಿಂಬಾಲಿಸಿ ಹೊರಟಿತು. 


ವಿಟರ ಮೇಳಂಗಳಿಂ ಚೇಟಿಯರ ಗಡಣದಿಂ । 

ನಟ ವಿದೂಷಕ ವಂದಿ ಗಾಯಕರ ತಂಡದಿಂ। 

ಕಟಕಿಧ್ವನಿ ವ್ಯಂಗ್ಯ ಸರಸೋಕ್ತಿಗಳ ಬೆಡಗು ಬಯಲನಗೆ ನೋಟಂಗಳ॥ 

ನಟನೆಗಳ ನಡೆಯ ಭಂಗಿಯ ಬರಿಯ ಬೇಟದತಿ। 

ಕುಟಿಲಾಂಗದೊಲವುಗಳ ವಾರನಾರೀಜನಂ। 

ಕಟಕದೊಳ್ ಕಾಮುಕರ ನಡೆಗೆಡಿಸುತೊಗ್ಗಿನಿಂ ಪೊರಮಟ್ಟು ಬರುತಿರ್ದುದು॥೬॥ 


ಪ್ರತಿಪದಾರ್ಥ:- ವಿಟರ= ಮನ್ಮಥಬಾಣಪೀಡಿತರಾದವರ, ಮೇಳಂಗಳಿಂ = ಜೋಡಣೆಗಳಿಂದಲೂ, ಚೇಟಿ= ದಾಸಿಯರ, ಗಡಣದಿಂ= ಸಮುದಾಯದಿಂದಲೂ, ನಟ= ನರ್ತನವನ್ನು ಶಿಕ್ಷಿಸತಕ್ಕವರ, ವಿದೂಷಕ= ಹಾಸ್ಯಗಾರ, (ನಕಲಿಯವರ), ವಂದಿ= ಹೊಗಳಭಟರ, ಗಾಯಕರ= ಸಂಗೀತವನ್ನು ಹೇಳುವರ, ತಂಡದಿಂ= ಸಮೂಹದಿಂದ, ಕಟಕಿಧ್ವನಿ= ಹಾಸ್ಯದ ನುಡಿಗಳ, ವ್ಯಂಗ್ಯಸರಸೋಕ್ತಿಗಳ= ಅನ್ಯಾಯಾರ್ಥವನ್ನು ಕೊಡತಕ್ಕ ಸವಿನುಡಿಗಳ, ಬೆಡಗು=ಚಮತ್ಕಾರವು,  ಬಯಲನಗೆ= ಕಾರಣವಿಲ್ಲದೆ ನಗತಕ್ಕದ್ದರ, ನೋಟಗಳ= ವಿರಹವೇದನೆಯನ್ನುಂಟುಮಾಡುವ ಕಟಾಕ್ಷದ, ನಡೆಯ= ಮನ್ಮಥವಿಕಾರವನ್ನು ಕಾಣಿಸುವ ಗಮನದ, ಪಙ್ತಿಯ= ಶ್ರೇಣೆಯ, ಬರಿಯ=ಶೂನ್ಯವಾದ, ಬೇಟದ= ಯೌವನಸ್ಥರನ್ನು ಸೂರೆಗೊಳ್ಳುವ, ಕುಟಿಲ= ವಂಚನೆಯನ್ನು ಮಾಡುವ, ಅಂಗದ= ಅವಯವಗಳುಳ್ಳ, ಒಲವುಗಳ= ರತಿಸುಖದ ಭಾವಾತಿಶಯದ, ವಾರನಾರೀಜನಂ= ವೇಶ್ಯಾಂಗನೆಯರು,ಕಟಕದೋಳ್= ಕಾಲ್ಬಲದ ಮಧ್ಯಭಾಗದಲ್ಲಿ, ಒಗ್ಗಿನಿಂ= ದಟ್ಟವಾಗಿ, ಪೊರಮಟ್ಟು = ಹೊರಟು, ಬರುತಿರ್ದುದು= ಸಮೀಪವನ್ನು ಸೇರುತ್ತಿತ್ತು.


ತಾತ್ಪರ್ಯ:- ಅನೇಕರಾದ ವಿರಹಿಗಳಿಂದಲೂ, ನರ್ತನ ಗಾಯಕ ಸಮಾಜದಿಂದಲೂ , ಹಾಸ್ಯದಿಂದ ಬೆರಗುಮಾಡುವ ಜನರಿಂದಲೂ ಕೂಡಿದ ವಾರಾಂಗನೆಯರು ವಿಟಪುರುಷರ ನಡಿಗೆಯನ್ನು ತಗ್ಗಿಸುತ್ತಲೂ ಜನಗಳ ಮನಸ್ಸನ್ನು ಚಂಚಲವಾಗುವಂತೆ ಮಾಡುತ್ತಲೂ ಸೇನಾಮಧ್ಯದಲ್ಲಿ ನಡೆದರು. 


ನಾಗಪತಿಗಸದಳಂ ಕಮಠಂಗರಿದು ದಿಶಾ। 

ನಾಗತತಿಗಳವಲ್ಲ ಧರಿಸಲರಿದೆಂಬಂತೆ। 

ನಾಗಣಿಸಲರಿಯೆನಿದು ಪೊಸತೆನಲ್ ಪಣಹ ನಿಸ್ಸಾಳ ಕಹಳಾರವದೊಳು॥ 

ಸಾಗರದ ಮಧ್ಯದಿಂದೆದ್ದುದೋ ಮತ್ತೊಂದು । 

ಸಾಗರಂ ಪೇಳೆನಲ್ಕಖಿಳ ಯಾದವಕಟಕ । 

ಸಾಗರಂ ದ್ವಾರಕಾನಗರಮಂ ಪೊರಮಟ್ಟು ನಡೆಗೊಂಡುದೇವೇಳ್ವೆನು॥೭॥ 


ಪ್ರತಿಪದಾರ್ಥ:-ನಾಗಪತಿಗೆ= ಫಣೀಂದ್ರನಿಗೆ, ಅಸದಳಂ= ಅಶಕ್ಯವು, ಕಮಠಂಗೆ= ತಾಂಬೇಲಿಯಾಗಿರುವ ಹರಿಗೆ, 

(ಕೂರ್ಮನಿಗೆ) ಅರಿದು= ಸಾಧ್ಯವಲ್ಲವು, ನಾಗತತಿಗೆ= ಅಷ್ಟದಿಗ್ಗಜಗಳಿಗೆ, ಅಳವಲ್ಲ= ವಶವಾಗುವುದಲ್ಲವು,ಆದಕಾರಣ, ಧರಿಸಲು= ಹೊತ್ತಿರಲು, ಅರಿದು= ಅಸದಳವು, ಎಂಬಂತೆ= ಎನ್ನುವಹಾಗೆ, ನಾಂ=ನಾನು, ಗಣಿಸಲು=ಎಣಿಕೆಮಾಡಲು, ಅರಿಯೆನು= ತಿಳಿಯಲಾರೆನು, ಇದಂ= ಈ ಕಾರ್ಯವು, ಪೊಸತು= ನವೀನವಾದ್ದು, ಎನಲ್= ಎಂಬತೆರನಾಗಿ, ಪಟಹ= ಪಟಹಗಳ, ನಿಸ್ಸಾಳ =ಅದಕ್ಕಿಂತಲೂ ಚಿಕ್ಕವುಗಳ, ಕಹಳ ಕೊಂಬಿನ, ರವದೊಳು= ಶಬ್ಧಗಳೊಂದಿಗೆ, ಸಾಗರದ ಮಧ್ಯದಿಂ= 

ಕಡಲಿನ ನಡುವಿನಿಂದ, ಮತ್ತೊಂದು ಸಾಗರಂ= ಬೇರೊಂದುಅಬ್ಧಿಯು, ಎದ್ದುದೊ= ಮೇಲಕ್ಕೆದ್ದು ಬಂದಿದೆಯೋ, ಪೇಳು= ಅರಹು, ಎಂಬೊಲ್= ಎಂಬತೆರನಾಗಿ, ಅಖಿಳ=ಎಲ್ಲಾ, ಯಾದವಕಟಕ= ಯದು ಸಮೂಹವೆಂಬ, ಸಾಗರಂ=ಕಡಲು, ದ್ವಾರಕಾನಗರಮಂ= ದ್ವಾರಕಾಪುರಿಯಿಂದ, ಪೊರಮಟ್ಟು = ನಡೆದು, ನಡೆಗೊಂಡುದು=ಹೊರಡುತ್ತಿತ್ತು, ಏವೇಳ್ವೆನು= ಏನೆಂದು ನುಡಿಯಲಿ, ಯಾದವರ ಸೈನ್ಯವನ್ನು ಸಮುದ್ರಕ್ಕಿಂತಲೂ ಅತಿಶಯವೆಂದು ಹೇಳುವುದರಿಂದ ಉತ್ಪ್ತೇಕ್ಷಿಯು. 


ತಾತ್ಪರ್ಯ:- ಇದನ್ನು ನೋಡಿದವರಿಗೆ ಸಮುದ್ರ ಮಧ್ಯದಿಂದ ಮತ್ತೊಂದು ಸಾಗರವು ಎದ್ದು ಬರುತ್ತಿರುವುದೊ ಎಂಬ ಭ್ರಾಂತಿಯನ್ನುಂಟುಮಾಡುವಂತೆ ತೋರುವ ಸಕಲ ವಾದ್ಯಧ್ವನಿಗಳಿಂದಲೂ , ಆನೆ, ಕುದುರೆ, ರಥ, ಕಾಲ್ಬಲವೆಂಬ ನಾಲ್ಕು ತೆರನಾದ ಸೈನ್ಯದಿಂದಲೂ, ಪುರವಾಸಿಗಳ ತಂಡತಂಡಗಳಿಂದಲೂ, ನರ್ತಕ, ಗಾಯಕ, ಮತ್ತು ವೇಶ್ಯಾಸ್ತ್ರೀಯರ ಸಮೂಹದಿಂದಲೂ ಕೂಡಿ, ದ್ವಾರಕಾನಗರದಿಂದ ಹಸ್ತಿನಾವತಿಗೆ ಹೊರಟ ಯಾದವರ ಸೇನಾ ಸಮುದ್ರಕ್ಕೆ ನೈಜವಾದ ಮಹಾರ್ಣವವೂ ಕೂಡ ಎಣೆಯಾಗಿರಲಿಲ್ಲ. 


ಕಳಿಪುತೈತಂದ ವಸುದೇವ ಬಲಭದ್ರರಂ । 

ಬಳಿಕ ವಂದಿಸಿ ಪರಕೆಗೊಂಡು ಸಂತೈಸಿ ನಿಜ। 

ನಿಳಯರಕ್ಷೆಗೆ ನಿಲಿಸಿ ಭೀಮನಂ ಬೀಳ್ಕೊಳಿಸಿ ಸಿತ ಹಯಾರೂಢನಾಗಿ॥ 

ಉಳಿದ ಯಾದವರೆಲ್ಲರಂ ಕೂಡಿಕೊಂಡು ಮುಂ। 

ದಳೆದು ಮಧುಸೂದನಂ ಮಧ್ಯಮಾರ್ಗದೊಳೊಂದು । 

ಕೊಳನಿರಲ್ಕಲ್ಲಿ ಬೀಡಂಬಿಡಿಸಿ ನಸುನಗುತೆ ರುಕ್ಮಿಣಿಯೊಳಿಂತೆಂದನು॥೮॥ 


ಪ್ರತಿಪದಾರ್ಥ:- ಮಧುಸೂದನಂ= ಮಧುವೆಂಬ ರಕ್ಕಸನನ್ನು ಕೊಂದ ಹರಿಯು, ಕಳುಪುತ= ಕಳುಹಿಸಿಕೊಡುತ್ತ, ಐತಂದ= ಒಡನೆ ಬಂದಿರತಕ್ಕ, ವಸುದೇವಬಲಭದ್ರರಂ= ವಸುದೇವ ಮತ್ತು ಬಲರಾಮನನ್ನು, ವಂದಿಸಿ= ಪ್ರಣಾಮವಂಗೈದು, ಬಳಿಕ= ಆಮೇಲೆ, ಪರಕೆಗೊಂಡು= ಆಶೀರ್ವಚನಮಂತಾಳಿ, ನಿಜ= ಸ್ವಕೀಯವಾದ, ನಿಳಯ= ಮಂದಿರದ, ರಕ್ಷೆಗೆ= ಕಾವಲಿಗೆ, ನಿಲಿಸಿ=ಬಿಟ್ಟು, ಭೀಮನಂ= ವೃಕೋದರನನ್ನು, ಬೀಳ್ಕೊಡಿಸಿ= ವಸುದೇವನಿಗೂ ಬಲರಾಮನಿಗೂ ವಂದನೆಯಂ ಮಾಡಿ, ತಾ= ತಾನು, ಹಯಾರೂಢನು= ಅಶ್ವಾರೋಹಣಮಾಡಿದವನು, ಆಗಿ= ಆಗಿಬಿಟ್ಟು, ಉಳಿದ= ಮಿಕ್ಕ, ಯಾದವರೆಲ್ಲರಂ= ಅಶೇಷರಾದ ಯಾದವವಂಶಜರನ್ನು, ಕೂಡಿಕೊಂಡು= ಜೊತೆಯಲ್ಲಿ ಕರೆದುಕೊಂಡು,  ಮಧ್ಯಮಾರ್ಗದೊಳು= ಹಾದಿಯನಡುವೆ, ಒಂದು= ಒಂದಾನೊಂದು, ಕೊಳಂ= ಸರೋವರವು, ಇರಲ್=ಇರಲಾಗಿ, ಅಲ್ಲಿ= ಅದರ ತಡಿಯಲ್ಲಿ , ಬೀಡಂ=ದಳವನ್ನು, ಬಿಡಿಸಿ= ನಿಲ್ಲಿಸಿ, ನಸುನಗುತ= ಹುಸಿನಗೆ ತೋರುತ್ತ, ರುಕ್ಮಿಣಿಯೊಳು= ರುಕ್ಮಿಣಿಯೊಂದಿಗೆ, ಇಂತೆಂದನು. 


ತಾತ್ಪರ್ಯ:- ಈ ರೀತಿಯಲ್ಲಿ ಅಪರಿಮಿತ ಸೇನಾವೃತನಾಗಿ ಹೊರಟ ಕೃಷ್ಣಮೂರ್ತಿಯನ್ನು ಸಾಗಕಳುಹಿಸುವುದಕ್ಕಾಗಿಇವನ ತಂದೆಯಾದ ವಸುದೇವನೂ ಮತ್ತು ಅಣ್ಣನಾದ ಬಲರಾಮನೂ ಬಂದಿದ್ದರು. ಶ್ರೀಕೃಷ್ಣಸ್ವಾಮಿಯು ತನ್ನನ್ನೇ ಹಿಂಬಾಲಿಸಿ ಬರುತ್ತಿರುವ ವಸುದೇವ ಬಲಭದ್ರರನ್ನು ಊರಿಗೆಹೋಗಿ, ತಾನು ಪುನಃ ಹಿಂತಿರುಗಿ ಬರುವವರೆಗೂ ರಾಜ್ಯಭಾರವನ್ನು ನಡೆಯಿಸುತ್ತಿರಬೇಕೆಂದು ತಿಳಿಸಿದವನಾಗಿ ಅವರೀರ್ವರೂ ಸಾಷ್ಟಾಂಗಪ್ರಮಾಣವಂಗೈಯಲು ಅವರು ಶ್ರೀಕೃಷ್ಣನಿಗೆ ಸಂತೋಷದಿಂದ ಆಶೀರ್ವಾದವಂಮಾಡಿ ತಾವು ದ್ವಾರಕಾನಗರದ ರಕ್ಷಣೆಗಾಗಿ ಹಿಂತಿರುಗಿ ಹೊರಟುಹೋದರು. ಆಗ ಕೃಷ್ಣನು ಭೀಮನಿಂದಲೂ ವಸುದೇವ ಬಲರಾಮರಿಗೆ ನಮಸ್ಕಾರವನ್ನು ಮಾಡಿಸಿ, ವೃಕೋದರನ ಮತ್ತು ಯಾದವರ ದಂಡಿನಿಂದೊಡಗೂಡಿ ತಾನು ಕುದುರೆಯಮೇಲೆ ಕುಳಿತುಕೊಂಡು ನಡೆಯುತ್ತಾ ಇರಲು, ಮಧ್ಯಮಾರ್ಗದಲ್ಲಿ ಒಂದಾನೊಂದು ಸರೋವರವು ಕಾಣಬಂದಿತು,. ಕೃಷ್ಣಸ್ವಾಮಿಯು ಆ ಸರೋವರದ ತಡಿಯಲ್ಲಿ ತನ್ನ ಸೈನ್ಯವನ್ನೆಲ್ಲಾ ನಿಲ್ಲಿಸಿ ತಾನೂ ಶ್ರಮಪರಿಹಾರವಂ ಮಾಡಿಕೊಳ್ಳಬೇಕೆಂದು ಕುದುರೆಯಿಂದ ಕೆಳಗಳಿದು ತನ್ನ ಪಟ್ಟಮಹಿಷಿಯಾದ ರುಕ್ಮಿಣಿಯನ್ನು ಕುರಿತು ಇಂತೆಂದನು.  


ರಾಜಮುಖಿ ನೋಡೀ ಸರೋವರದ ಪದ್ಮಿನಿಗೆ । 

ರಾಜಹಂಸಕ್ರೀಡೆ ಪುನ್ನಾಗಕೇಳಿ ವಿ। 

ಭ್ರಾಜಿತಮಧುಪಗೋಷ್ಠಿ ಸಂದಪುದು ರವಿಗೆ ತಾನರಸಿಯಾದಪಳದೆಂತೋ॥ 

ಸ್ತ್ರೀಜನಕೆ ಸಹಜಮಿದು ಮೇಲೆ ಕರ್ದಮಜಾತೆ । 

ಮಾಜುವಳೆದೆಯೊಳಿರ್ದ ಕೃಷ್ಣತೆಯನಿದು ಜಗಕೆ । 

ಸೋಜಿಗವೆ ಚಂಚಲೆಯಲಾ ಪತಿಯನೆಣಿಸುವಳೆ ಪೇಳೆಂದೊಡಿಂತೆಂದಳು॥೯॥ 


ಪ್ರತಿಪದಾರ್ಥ:- ರಾಜಮುಖಿ= ಇಂದುವದನೆಯಾದ ರುಕ್ಮಿಣಿಯೇ, ನೋಡು= ಈಕ್ಷಿಸು, ಈ ಸರೋವರದ= ಶ್ರೇಷ್ಠವಾದ ಈ ಕಾಸಾರದ, ಪದ್ಮಿನಿಗೆ= ತಾವರೆಯ ಬಳ್ಳಿಗೆ, ರಾಜಹಂಸ= ಉತ್ತಮನಾದ ಭೂಪತಿಯ, ಕ್ರೀಡೆ= ಆಡುವಿಕೆಯು, ಪುನ್ನಾಗ= ಮಾನವರಲ್ಲಿ ಮೇಲಾದವರೊಂದಿಗೆ, ಕೇಳಿ= ಕ್ರೀಡೆಯಿಂದ, ವಿಭ್ರಾಜಿತ= ಹೊಳೆಹೊಳೆವ, ಮಧುಪಗೋಷ್ಠಿ= ಭೃಂಗಗಳಸಂಗ, ಸಂದವುದು= ಆಗಿರುವುದು, ತಾನು= ನಾನಾದರೊ, ರವಿಗೆ= ತರಣಿಗೆ, ಅರಸಿ= ರಾಣಿಯು, ಆದಪಳು= ಆಗುತ್ತಾಳೆ, ಅದುಎಂತೋ= ಅದುಹೇಗೊ, ಇದು=ಈ ಪರಿಯಿಂದಿರ್ಪುದು, ಸ್ತ್ರೀಜನಕೆ = ನಾರಿಯರಿಗೆ, ಸಹಜಂ= ನೈಜವಾದದ್ದು, ಮೇಲೆ= ಪರರಲ್ಲಿ ಆಸಕ್ತರಾದಬಳಿಕ, ಕರ್ದಮಜಾತೆ= ಕೆಸರಿನಲ್ಲಿಶಜನಿಸಿದ್ದು, ಎದೆಯೊಳು= ಹೃದಯಭಾಗದಲ್ಲಿ, ಇರ್ದು= ಇದ್ದಂಥ, ಕೃಷ್ಣತೆಯನ್ನು= ಮೋಸವನ್ನು, ಮಾಜುವಳು= ಬಚ್ಚಿಟ್ಟುಕೊಳ್ಳತಕ್ಕವಳು, ಸೋಜಿಗವೊ= ಅಚ್ಚರಿಯಾಗಿರುವುದೆ? ಎಂದರೆ ಸಹಜವೇ ಆಗಿದೆ. ಚಂಚಲೆ= ಅಪಚಿತ್ತಳು, ಪತಿಯನು= ಇನನನ್ನು, ಎಣಿಸುವಳೆ= ಬಗೆಯುವಳೆ? ಪೇಳು= ಉಸಿರು( ಇದು ರುಕ್ಮಿಣಿಯ ಪರವಾಗಿ) ರಾಜಮುಖಿ= ಹಿಮಾಂಶುವಿಗೆ ಎದುರಾಗಿರುವ ಕಪ್ಪುಕಮಲನೇ, ನೋಡು= ಪರಿಕಿಸು, ಈ ಸರೋವರದ= ಈ ಕಾಸಾರಗಳಿಂ ಮೇಲ್ಮೆಯ ನ್ನೈದಿದ, ಪದ್ಮಿನಿಗೆ= ಬಳ್ಳಿಯನ್ನೆ ಅವಯವಗಳಾಗಿವುಳ್ಳ ಸ್ರ್ರೀಗೆ, ರಾಜಹಂಸ= ಅರಸಂಚೆಯ ಸಂಗಡ, ಕ್ರೀಡೆ= ವಿಹರಿಸತಕ್ಕದ್ದು, ಪುನ್ನಾಗ= ಪುನ್ನಾಗವೆಂಬ ಹೂವಿನೊಂದಿಗೆ, ಕೇಳಿ= ವಿನೋದದಿಂದಕೂಡಿ, ವಿಭ್ರಾಜಿತ= ಮೆರೆಯುತ್ತಿರುವ, ಮಧುಪ= ಮಯಕಪದಾರ್ಥಗಳನ್ನು ಸೇವಿಸುವರ, ಗೋಷ್ಠಿ= ಸಂಗವು, ಸನಿದಪುದು= ಆಗುವುದು, ತಾನು= ತಾನೇ, ರವಿಗೆ= ದ್ಯುಮಣಿಗೆ, ಅರಸಿ= ಮಹಿಷಿಯು, ಆದಪಳು= ಆಗುವಳು, ಅದೆಂತೊ=ಅದುಹೇಗೊ, ಸ್ತ್ರೀಜನಕೆ = ಹೆಂಗಸರಿಗೆ, ಇದು= ಈ ವಿಧವಾಗಿರುವುದು, ಸಹಜಂ= ಸಹಜವು, ಮೇಲೆ= ಬೇರೆಯವರಕಡೆ ಮನಮಂಬಿಟ್ಟ ತರುವಾಯ,  ಕರ್ದಮಜಾತೆ = ಪಾತಕದಿಂದುಂಟಾದದ್ದು, ಎದೆಯೊಳು= ಹೃದಯದಲ್ಲಿ, ಇರ್ದ= ಆಗಿರುವುದಾದ, ಕೃಷ್ಣತೆಯನು= ಕಪ್ಪನ್ನು, ಮಾಜುವಳು= ಕಾಣಿಸಕೂಡದೆಂದು ನಟಿಸುವಳು, ಸೋಜಿಗವೊ= ವಿಸ್ಮಯವನ್ನುಂಟುಮಾಡತಕ್ಕದ್ದೊ, ಚಂಚಲೆ= ಅಲ್ಲಾಡುತ್ತಿರುವ ಮನವುಳ್ಳವಳು, ಪತಿಯನು= ಒಡೆಯನನ್ನು, ಎಣಿಸುವಳೆ= ಗಮನಕ್ಕೆ ತರುವಳೆ? ( ಇದು ಸರೋವರದ ಕಮಲಪುಷ್ಪದ ಪರವಾಗಿ) ರಾಜಮುಖಿ= ಅರಸರಕಡೆಗೆ ಗಮನವಿಟ್ಟು ಇರುವ ಹೆಂಗಸೆ, ನೋಡು= ಆಲೋಕಿಸು, ಈ ಸರೋವರದ= ಈ ಸರಸ್ಸನ್ನು ಅವಲಂಬಿಸಿರುವ, ಪದ್ಮಿನಿಗೆ= ಪದ್ಮಿನಿಜಾತಿಯ ಹೆಂಗಸಿಗೆ, ರಾಜಹಂಸ= ಶಶಿರವಿಗಳೊಂದಿಗೆ ಸೇರಿ, ಕ್ರೀಡೆ= ಕಾಮಬಾಧೆಯನ್ನು ಪರಿಹರಿಸಿಕೊಳ್ಳತಕ್ಕದ್ದು, ಪುನ್ನಾಗ=ಮದಗಜದೊಡನೆ, ಕೇಳಿ= ಸಂತೋಷದಿಂದ, ವಿಭ್ರಾಜಿತ= ಮಿರುಗುಟ್ಟುವ, ಮಧುಪ= ಸುಧಾಪಾನಮಾಡುವರ, ಗೋಷ್ಠಿ= ಜತೆಯು, ಸನಿದವುದು= ಸಿದ್ಧಿಸುವುದು, ತಾನು= ತಾನಾಗಿಯೇ, ರವಿಗೆ= ವಿಭಾವಸುವಿಗೆ, ಅರಸಿ= ಕಾಂತೆಯು, ಆದಪಳು= ಆಗುತ್ತಾಳೆ, ಅದೆಂತೊ=ಅದುಹೇಗೊ, ಸ್ತ್ರೀಜನಕೆ= ನಾರಿಯರಿಗೆ, ಇದು= ಈತೆರನಾದದ್ದು, ಸಹಜಂ= ನೈಜವು, ಮೇಲೆ= ಇತರರೊಡನೆ ಗಮನವಿಟ್ಟ ತರುವಾಯ, ಕರ್ದಮಜಾತೆ = ಸುವಾಸನೆಯ ಕುಲದಲ್ಲಿ ಜನಿಸಿದವಳು, ಎದೆಯೊಳು= ಹೊಕ್ಕಳಲ್ಲಿ, ಇದ್ದ= ಉಂಟಾದ,  ಕೃಷ್ಣತೆಯನು= ಕುಚಾಗ್ರಗಳ ಕಪ್ಪುಬಣ್ಣವನ್ನು, ಮಾಜುವಳು= ಕಾಣಿಸದಂತೆ ಮಾಡಿದವಳು, ಸೋಜಿಗವೊ= ಭ್ರಾಂತಿಯನ್ನುಂಟುಮಾಡತ-

ಕ್ಕದ್ದೊ, ಚಂಚಲೆ= ಧೃಢಚಿತ್ತವಿಲ್ಲದವಳು, ಪತಿಯನು= ವಲ್ಲಭನನ್ನು, ಎಣಿಸುವಳೆ= ಮರ್ಯಾದೆಯಿಂದ ನೋಡಿಯಾಳೆ, 

( ಇದು ಕಾಮುಕಳಾದ ಸ್ತ್ರೀಯಪರವಾದ ಅರ್ಥವು) ಪೇಳು= ಹೇಳತಕ್ಕವಳಾಗು, ಎಂದೊಡೆ= ಎಂದು ಶ್ರೀಕೃಷ್ಣನು ಹೇಳಲಾಗಿ, ಇಂತೆಂದಳು= ಮುಂದೆ ಹೇಳುವಂತೆ ನುಡಿದಳು. 


ಆ॥ ವಿ॥ ಮಧುವನ್ನು ಪಾನಮಾಡುವುದು ( ಕೃ. ವು. ) ಕರ್ದಮಜಾತೆ = ಸುರ ಯಕ್ಷ ಕರ್ದಮಜಾತಿಗಳು. 


ತಾತ್ಪರ್ಯ:- ಎಲೈ ಪ್ರಾಣನಾಯಕಿಯೆ! ಈ ಕಾಸಾರದಲ್ಲಿರುವ ತಾವರೆ ಲತೆಯನ್ನು ನೋಡು, ಇದು ರಾಜಹಂಸಕ್ರೀಡೆ, ಪುನ್ನಾಗಕೇಳಿ, ವಿಭ್ರಾಜಿತ ಮಧುಪಗೋಷ್ಠಿ ಇವುಗಳಿಂದ ಕೂಡಿ ಎಂದರೆ ಶ್ರೇಷ್ಠನಾದ ರಾಜಾಧಿರಾಜನ ಸಹವಾಸವಂ ಮಾಡಿಕೊಂಡು, ಮನುಜವರ್ಯಾರೊಂದಿಗೆ ಕ್ರೀಡಾಸ್ಪದವಾಗಿದ್ದು ಪ್ರಕಾಶಮಾನವಾದ ಅಳಿವಿಂಡಿನಿಂದ ಮೆರೆಯುತ್ತಲಿರುವ ಸೂರ್ಯನರಾಣಿಯು ಹೇಗಾಗುತ್ತದೆಯೊ ಕಾಣೆನು. ಈ ತೆರನಾಗಿರುವುದು ಸ್ತ್ರೀಯರಿಗೆ ಸ್ವಭಾವವೇ ಆಗಿದೆಯಲೂಲವೆ ? ಇಂಥಾದ್ದಲ್ಲಿ ಪರಪುರುಷರೊಂದಿಗೆ ಸೇರಬೇಕೆಂಬ ಮನವುಂಟಾದ ಬಳಿಕ ಮನಸ್ಸನ್ನು ನಿಷ್ಕಲ್ಮಷವಾಗಿಟ್ಟುಕೊಂಡು ವಂಚನೆಯಬುದ್ಧಿಯಿಲ್ಲದೆಯೂ ಚಿತ್ತಚಾಂಚಲ್ಯವನ್ನೈದದೆಯೂ ತನ್ನ ಗಂಡನೇ ಗುರುವೆಂದೂ ದೈವವೆಂದೂ ಎಣಿಸಿಕೊಂಡು ಭಕ್ತಿಯುಳ್ಳವಳಾಗಿರುವಳೇ ? ಹೇಳು, ಎಂದು ಹಾಸ್ಯೋಕ್ತಿಗಳನ್ನಾಡಿದನು. ( ಎಲೈ ಕನ್ನೈದಿಲೆಯೆ ! ಲತೆಗಳಿಂದ ಮಾಡಲ್ಪಟ್ಟ ಶರೀರವುಳ್ಳ ಹೆಂಗಸಿಗೆ ರಾಜಹಂಸದೊಂದಿಗೆ ಸಂಯೋಗವೂ, ಪುನ್ನಾಗಪುಷ್ಪದೊಡನೆ ಸಂತೋಷವೂ, ಮಧುಪಾಳಿಗಳ ಸಂಮೇಳನವೂ, ಆದ ತರುವಾಯ ಸೂರ್ಯನ ರಾಣಿಯಾಗುವುದು ಹೇಗೆ ? ಈ ಪದ್ಮಿನಿಯು ಕೃಷ್ಣತೆಯನ್ನುಂಟಾಗಿ ಚಂಚಲಚಿತ್ತವುಳ್ಳದ್ದಾಗಿದೆಯಾದ್ದರಿಂದ ತನ್ನ ಒಡೆಯನನ್ನೂ ಗಣನೆಗೆ ತರುವುದಿಲ್ಲವೆಂದು ಸರೋವರದಲ್ಲಿರುವ ಕನ್ನೈದಿಲೆಯ ಪರವಾಗಿಯೂ ಮತ್ತು ( ಅರಸರಕಡೆ ಗಮನವಿಟ್ಟು ಸೂರ್ಯಚಂದ್ರರೊಂದಿಗೆ ವಿರಹತಾಪವನ್ನು ಕಳೆದುಕೊಳ್ಳುತ್ತಲೂ, ಮದ್ದಾನೆಯೊಂದಿಗೆ ಸಹವಾಸವಂ ಮಾಡುತ್ತಲೂ ಇರುವ ಚಂಚಲಚಿತ್ತದಿಂದ ಕೂಡಿದ ಸ್ತನಗಳ ತುದಿಯಲ್ಲಿ ಕಪ್ಪು ಬಣ್ಣವುಳ್ಳ ಕಾಮುಕಳಾದ ಸ್ತ್ರೀಯ ಪರವಾಗಿಯೂ ಅನ್ವಯಿಸುವಂತೆ) 


ದೇವ ನೀ ಪದ್ಮಿನಿಗೆಪಳಿವನಾರೋಪಿಸುವು। 

ದಾವ ಸಮ್ಮತಿ ರಾಜಹಂಸ ಪುನ್ನಾಗ ಮಧು। 

ಪಾವಳಿಯನೋವಲಾಗದೆ ಮಾತೆ ಮಕ್ಕಳೊಡಗೂಡಿರ್ದೊಡೇಂ ಧರೆಯೊಳು॥ 

ಜೀವನಂ ನಿಂದೊಡಾದುದು ಪಂಕಮಿಲ್ಲಿ ತಾ। 

ನಾವಿರ್ಭವಿಸಿದೊಡೇಂ ನಡುನಡುಗಿದೊಡೆ ಚಂಚಲೆಯೆ ನಾವರಿಯೆವಿದನೆಂದಳು॥೧೦॥ 


ಪ್ರತಿಪದಾರ್ಥ:- ದೇವ= ಒಡೆಯನಾದ ಕೃಷ್ಣಮೂರ್ತಿಯೆ,ನೀಂ= ನೀವಾದರೊ, ಪದ್ಮಿನಿಗೆ = ಬಳ್ಳಿಗೆ, ಬಳ್ಳಿಯಹಾಗೆ ಕೋಮಲಾಂಗಿಯಾದ ನನಿಗೆ, ಪಳಿವನು= ನಿಂದೆಯನ್ನು, ಕಳಂಕವನ್ನು, ಆರೋಪಿಸುವದು= ಕಲ್ಪಿಸಿ ನುಡಿಯುವುದು, ಅವಸಮ್ಮತ= ಯಾವ ವಿಧಾನವು, ಇನನರಸಿಯಾದ ಪದ್ಮಿನಿಯು, ರಾಜಹಂಸ= ಹಂಸವಕ್ಕಿ, ಪುನ್ನಾಗ= ಪುನ್ನಾಗವೆಂಬ ಹೂ, ಮಧುಪಾಳಿಯನು= ಅಳಿವಿಂಡೇ ಮೊದಲಾದವನ್ನು, ಓರ್ವಲಾಗದೆ= ಸಾಕಕೂಡದೆ, ಧರೆಯೊಳು= ಇಳೆಯಲ್ಲಿ, ಮಾತೆ=ಜನನಿಯು, ಮಕ್ಕಳೊಡಗೂಡಿರ್ದೊಡೇಂ= ಹಸುಳೆಗಳೊಂದಿಗೆ ಸೇರಿದ್ದರಿಂದ ದೋಷವೇನು, ಜೀವನ=ಉದಕವು, 

ಜೀವನದ ಮಾರ್ಗವು, ನಿಂದೊಡೆ= ನಿಂತುಬಿಟ್ಟಲ್ಲಿ,ಇಲ್ಲಿ= ಈ ಕಾಸಾರದಲ್ಲಿಮತ್ತು ಈ ಎಡೆಯಲ್ಲಿ, ಪಂಕಂ= ಕೆಸರು, ದೋಷವು, ತಾಂ= ತಾನು, ಆವಿರ್ಭವಿಸಿದೊಡೆ= ಜನಿಸಿದಲ್ಲಿ,ಏಂ= ತೊಂದರೆ ಏನಿರುವುದು, ಕೃಷ್ಣಹೃದಯಕೆ= ಕರ್ರಗಿರುವ ಎದೆಯ ಪ್ರದೇಶಕ್ಕೆ, ಮತ್ತು ಶ್ರೀಕೃಷ್ಣನಲ್ಲಿಯೇ ಆಸಕ್ತವಾದ ಮನಕ್ಕೆ, ದೋಷಂ= ದುರಿತವು, ಆವುದು= ಎಲ್ಲಿಯದು, ಆಣ್ಮಂಗೆ= ರಾಜನಿಗೆ, ಒಡೆಯನಿಗೆ, ನಡನಡುಗಿದೊಡೆ= ದಿಗಿಲುಬಿದ್ದು ಅಲ್ಲಾಡಿದರೆ, ಚಂಚಲೆಯೆ= ಅಸ್ಥಿರಹೃದಯಳೆ, ಇದನು= ಈ ವಿಧಾನವನ್ನು, ನಾವು= ನಾವಾದರೊ, ಅರಿಯೆವು= ತಿಳಿದುಕೊಳ್ಳಲಾರೆವು, ಎಂದಳು= ಎಂದು ನುಡಿದಳು. 


ತಾತ್ಪರ್ಯ :- ಶ್ರೀಕೃಷ್ಣಸ್ವಾಮಿಯ ಈ ಪರಿಯಾದ ಪರಿಹಾಸ್ಯದ ಮಾತುಗಳನ್ನು ಕೇಳಿ ರುಕ್ಮಿಣಿಯು ಎಲೈ ಪ್ರಾಣನಾಥನೆ ! ಪದ್ಮಿನಿಯಂತೆ ಕೃಶಾಂಗಿಯಾದ ನನ್ನಲ್ಲಿ ನೀನು ಇಂಥಾ ದೋಷವನ್ನು ಚಿಂತಿಸಬಹುದೆ ! ಇನನರಸಿಯಾದ ಪದ್ಮಿನಿಯನ್ನು ತಮ್ಮ ಉದರನಿಮಿತ್ತನಾಗಿ ಹಂಸಪಕ್ಕಿಗಳೂ, ಪುನ್ನಾಗಕುಸುಮಂಗಳೂ ಅಳಿವಿಂಡೂ=ಆಶ್ರಯಿಸಿದರೆ ಅವುಗುಳನ್ನು ಕಾಪಾಡಿದ ಮಾತ್ರಕ್ಕೆ ಏನು ದೋಷ ? ಮಾತೆಯು ತನ್ನಣುಗನೊಂದಿಗೆ ಸೇರಿದ್ದರೆ ಇದರಲ್ಲಿ ಅನುಮಾನಕ್ಕೆ ಕಾರಣವೇನಿರುವುದು ? ನೀರು ಕಡಮೆಯಾಗಿ ಕೆಸರಾಗಿದ್ದರೆ ಅದನ್ನು ಪಾಪವೆಂದು ದೂರಬಹುದೆ ? ಕೃಷ್ಣ ಹೃದಯದವಳಾದ ನನ್ನಲ್ಲಿ ಎಂದರೆ ಕೃಷ್ಣನೇ ಸ್ವಪ್ನದಲ್ಲಿಯೂ ಒಡೆಯನೆಂದು ಭಾವಿಸಿರತಕ್ಕ ನನ್ನ ಮೇಲೆ ಇಂಥಾ ದೂರನ್ನು ಹಾಕಲು ನಿಮಿತ್ತವೇನಿದೆ ? ಪತಿಗಾಗಿ ಭಯದಿಂದ ನಡುಗುತ್ತಿದ್ದರೆ ನನ್ನನ್ನು ಚಪಲಚಿತ್ತಳೆಂದೂ ಪರಪುರುಷನನ್ನೆಳಸತಕ್ಕವಳೆಂದು ಯೋಚಿಸಬಹುದೇ ? 


ಪುರುಷನೊರ್ವಂಗೆ ನಾರಾಯರುಂಟು ಪಲಬರೀ । 

ಧರೆಯೊಳಂಗನೆಗೆ ಪತಿಯೋರ್ವನೆ ಗತಿಯೆಂಬ। 

ಪರಿವಿಡಿಯ ನರುಹಿಸುವೊಡಾವಿರ್ವರಲ್ಲದೊರ್ವರುಮಿಲ್ಲಮಿನ್ನು ಬರಿದೆ॥ 

ಸರಸಿಯೊಳಗಣ ಪದ್ಮಿನಿಯನೆ ದೂಷಿಸಬೇಡ। 

ಪರಮಪಾವನೆಯೆಂದು ಶಿವನುತ್ತಮಾಂಗದೊಳ್ । 

ಧರಿಸಿದನೆನಲ್ ಪತಿವ್ರತೆಯಲ್ಲದಿಹಳೆ ಪೇಳೆಂದು ರುಕ್ಮಿಣಿ ನುಡಿದಳ್॥೧೧॥ 


ಪ್ರತಿಪದಾರ್ಥ:- ಪುರುಷನೊರ್ವಂಗೆ = ಒಬ್ಬ ಗಂಡಾಳಿಗೆ, ನಾರಿಯರು= ಸ್ತ್ರೀಯರು (ಹೆಂಡತಿಯರು) ಪಲಬರು= ಬಹುಜನರು, ಉಂಟು=ಇದ್ದಾರೆ, ಈ ಧರೆಯೊಳು= ಈ ಪೊಡವಿಯಲ್ಲಿ, ಅಂಗನೆಗೆ= ನಾರಿಗೆ, ಪತಿಯು=ರಮಣನು, ಓರ್ವನೆ= ಒಬ್ಬನು ಮಾತ್ರವೇ, ಗತಿ= ಪಾಲಿಸತಕ್ಕವನು, ಎಂಬ= ಎನ್ನ ತಕ್ಕ, ಪರಿವಿಡಿಯನು= ವಿಧಾನವನ್ನು, ಅರುಹಿಸುವೊಡೆ= ತಿಳಿಸಬೇಕಾದರೆ, ಆವೀರ್ವರಲ್ಲದೆ= ನಮ್ಮಿಬ್ಬರನ್ನು ಬಿಟ್ಟರೆ, ಓರ್ವರುಂ= ಮತ್ತೆ ಯಾರೂ, ಇಲ್ಲ= ಇಲ್ಲವು, ಇನ್ನೈ=ಮುಂದೆ, ಬರಿದೆ= ವ್ಯರ್ಥವಾಗಿ,  ಸರಸಿಯೊಳಗಣ= ಕಾಸಾರವನ್ನಾಶ್ರಯಿಸಿರತಕ್ಕ, ಪದ್ಮಿನಿಯಂ= ತಾವರೆಯನ್ನು, ದೂಷಿಸಲುಬೇಡ= ಅಪವಾದಕ್ಕೆ ಗುರಿಮಾಡಬೇಡ, ಪರಮಪಾವನೆ= ಬಹು ಪರಿಶುದ್ಧಳು, ಎನಲ್= ಎಂಬತೆರನಾಗಿ,  ಶಿವನು= ಹರನು, ಉತ್ತಮಾಂಗದೊಳ್= ತಲೆಯಲ್ಲಿ, ಧರಿಸಿದನು= ತಾಳಿದನು, ಎನಲ್= ಎಂದು ನುಡಿಯಲು, ಪತಿವ್ರತೆ= ಗಂಡನಲ್ಲಿ ಭಕ್ತಿಯುಳ್ಳವಳು, ಅಲ್ಲದೌ= ಆಗದೆ, ಇಹಳೆ= ಇದ್ದಾಳೆಯೆ, ಪೇಳು= ಹೇಳು(ಉಸುರು) 

ಎಂದು= ಎಂಬ ಪರಿಯಾಗಿ, ರುಕ್ಮಿಣಿ = ಶ್ರೀಕೃಷ್ಣನ ಪಟ್ಟದರಸಿಯು, ನುಡಿದಳು= ಹೇಳಿದಳು.


ತಾತ್ಪರ್ಯ:- ಈ ಲೋಕದಲ್ಲಿ ಒಬ್ಬ ಗಂಡನಿಗೆ ಹೆಂಡತಿಯರು ಅನೇಕರಿರಬಹುದೆಂದೂ, ಒಬ್ಬ ಹೆಂಗಸಿಗೆ ಪತಿಯೊಬ್ಬನೆ ಎಂದೂ ಶಾಸ್ತ್ರಸಿದ್ಧವಾಗಿರುವ ವಚನವು ನಮ್ಮೀರ್ವರಲ್ಲಿಯೇ ಅನ್ವಯಿಸತಕ್ಕದ್ದಾಗಿರುವುದು. ಆದ್ದರಿಂದ ಕಾಸಾರವನ್ನವಲಂಬಿಸಿರತಕ್ಕ ಪದ್ಮಿನಿಯನ್ನು ನೀನು ಎಂದಿಗೂ ದೂಷಿಸತಕ್ಕದ್ದಲ್ಲ. ಅದು ಬಹು ಶ್ರೇಷ್ಠವಾದುದೆಂದೂ ಹರನು ತನ್ನ ಶಿರದಲ್ಲಿಯೇ ಧರಿಸಿದಾನೆ. ಹೀಗಿರುವಲ್ಲಿ ನೀನು ಪದ್ಮಿನಿಯನ್ನು ಪತಿವ್ರತೆಯಲ್ಲವೆಂದು ನುಡಿಯಬಹುದೇ ? ಎಂಬುದಾಗಿ ರುಕ್ಮಿಣಿಯು ಶ್ರೀಕೃಷ್ಣಸ್ವಾಮಿಯೊಂದಿಗೆ ಹೇಳಿದಳು. 


ನರಕಾಂತಕ ಕೇಳ್ ಬಳಿಕ ರುಕ್ಮಿಣಿಯ ಮಾತಿಂಗೆ। 

ನರಕಾಂತಕಂ ಮೆಚ್ಚಿ ನಸುನಗುತೆ ನಿಂದು ವಾ। 

ನರಕಾಂತಕೇತನಾಗ್ರಜನೊಳ್ ಸರಸವಾಡುತೊಲವಿಂದೆ ಪಾಳೆಯವನು॥ 

ಸರದ ಸುತ್ತಣ ತೀರದೊಳ್ ಬಿಡಿಸಿ ಸುಭಟಪ್ರ। 

ಸರದ ಸುಯ್ಯಾನದಿಂದಿರ್ದನೆಂದು ಪರಿವಾ। 

ಸರದ ಸೂರ್ಯೋದಯದೊಳಲ್ಲಿಂದ ಯಾದವರ ದಂಡು ನಡೆದುದು ಪಥದೊಳು॥೧೨॥ 


ಪ್ರತಿಪದಾರ್ಥ:- ನರಕಾಂತಕ = ಮನುಜೇಂದ್ರನಾದ ಜನಮೇಜರಾಯನೆ, ಕೇಳು= ಲಾಲಿಸು,  ಬಳಿಕ= ತರುವಾಯ, ರುಕ್ಮಿಣಿಯ ಮಾತಿಗೆ= ರುಕ್ಮಿಣಿಯು ಹೇಳಿದ ಪಡಿನುಡಿಗೆ, ನರಕಾಂತಕಂ= ಕೃಷ್ಣಸ್ವಾಮಿಯು,  ಮೆಚ್ಚಿ= ಸಂತುಷ್ಟನಾಗಿ,  ನಸುನಗುತ= ಮುಗುಳ್ನಗೆಯನ್ನೈದುತ್ತ, ನಿಂದು= ನಿಂತವನಾಗಿ, ವಾನರಕಾಂತಕೇತನ= ಫಲ್ಗುಣನ, ಅಗ್ರಜನೊಳ್= ಜ್ಯೇಷ್ಠ ಭ್ರಾತೃವಾದ ವೃಕೋದರನೊಂದಿಗೆ, ಸರಸವಾಡುತ= ಪರಿಹಾಸವಂ ಗೈಯುತ್ತ, , ಒಲವಿಂದ= ವಿಶ್ವಾಸದಿಂದ, ಪಾಳಯವನು= ಸೈನ್ಯವನ್ನು, ಸರಸಿ= ಸರೋವರದ, ಸುತ್ತಣ= ಆವರಣದ, ತೀರದೊಳ್= ತಡಿಯಲ್ಲಿ,  ಬಿಡಿಸಿ= ನಿಲ್ಲಿಸಿ,  ಸುಭಟ= ಯೋಧಾಗ್ರೇಸರರ, ಪ್ರಸರ=ಗುಂಪಿನ, ಸುಯಿಧಾನದಿಂದ = ಕಾವಲಿನಿಂದ, ಇರುಳ= ನಿಶಿಯನ್ನು, ಕಳೆದು= ನೀಗಿ, ಅಪರವಾಸರದ= ಮುಂದಿನ ದಿನದ, ಸೂರ್ಯೋದಯದೊಳು= ರವಿಯು ಉದಯವಾಗುವ ವೇಳೆಗೆ, ಅಲ್ಲಿಂದ= ಆ ಸರಸ್ಸಿನ ಬಳಿಯಿಂದ,ಯಾದವರ= ಯದುವಂಶಜರ, ದಂಡು= ಸೈನ್ಯವು, ಪಥದೊಳು= ಹಾದಿಯಲ್ಲಿ,  ಆಗ= ಆ ಕಾಲದಲ್ಲಿ,  ನಡೆದುದು= ಮುಂದುವರಿಯಿತು. 


ತಾತ್ಪರ್ಯ:- ಎಲೈ ಜನಮೇಜಯನೆ ಕೇಳು, ಆ ಬಳಿಕ ಶ್ರೀಕೃಷ್ಣನು ಈ ರೀತಿಯಲ್ಲಿ ನುಡಿಯುತ್ತಿರುವ ರುಕ್ಮಿಣಿಯ ಮಾತುಗಳನ್ನು ಕೇಳಿ ತನ್ನ ಮನದಲ್ಲಿಯೇ ಮುಗುಳ್ನಗೆಯಂ ತಾಳಿ, ಭೀಮಸೇನನೊಂದಿಗೆ ಸರಸಸಲ್ಲಾಪಂಗಳಂ ಮಾಡುತ್ತಾ ಆ ಸರೋವರದ ಸುತ್ತಲೂ ಸೈನ್ಯವು ನಿಲ್ಲಲು ಏರ್ಪಡಿಸಿ ತಮ್ಮ ಅಂಗರಕ್ಷಣೆಗೆ ಅನೇಕ ಜನ ಕಾವಲುಗಾರರನ್ನು ನಿಯಮಿಸಿಕೊಂಡು ಆ ರಾತ್ರಿಯಲ್ಲಿ ಅದೇ ಸರಸ್ಸಿನ ತಡಿಯಲ್ಲಿಯೇ ಸುಖವಾಗಿ ಕಳೆದರು. ಮರುದಿನ ಬೆಳಿಗ್ಗೆ ಯದುಕುಲಜರ ಸೈನ್ಯದಿಂದೊಡಗೂಡಿದ ಹರಿಯು ಅದನ್ನು ಬಿಟ್ಟು ಮುಂದೆ ಹೊರಟರು. 


ಆ ಮಾಧವಂ ಪಯಣಗತಿಯಿಂದೆ ಗಜಪುರದ। 

ಸೀಮೆಗೈತಂದು ಗಂಗಾನದಿಯ ತೀರದೊಳ್। 

ಭೀಮನಂ ಸುಯ್ದಾನಕಿರಿಸಿ ಯಾದವಕಟಕಸಾಗರವನಲ್ಲಿ ಬಿಡಿಸಿ॥ 

ಭೂಮೀಶ ದರ್ಶನೋತ್ಸವಕೆ ಬಿಜಯಂಗೈದ । 

ನಾ ಮಧ್ಯಮಾರ್ಗದೊಳ್ ಕಂಡುದು ಮಹಾಜನಂ । 

ತಾಮರಸನೇತ್ರನಂ ತಮತಮಗೆ ನುತಿಸಿದರ್ ನಿಗಮಾಗಮೋಕ್ತಿಯಿಂದೆ॥೧೩॥ 


ಪ್ರತಿಪದಾರ್ಥ:- ಆ ಮಾಧವಂ= ಆ ಶ್ರೀಯಃಪತಿಯು, ಪಯಣಗತಿಯಿಂದ= ಪ್ರಯಾಣದ ತೆರದಿಂದ, ಗಜಪುರದ= ಹಸ್ತಿನಾವತಿಯ, ಸೀಮೆಗೆ= ಎಲ್ಲೆಗೆ, ಐತಂದು= ಬಂದು, ಗಂಗಾನದಿಯ = ದೇವನದಿಯ, ತೀರದೊಳ್= ತಟದಲ್ಲಿ,  ಭೀಮನಂ= ವೃಕೋದರನನ್ನು,  ಸುಯಿದಾನಕೆ= ರಕ್ಷಣೆಗಾಗಿ( ಕಾವಲಿಗೆ) ಇರಿಸಿ=ನಿಲ್ಲಿಸಿ,  ಯಾದವ= ಯದುವಂಶದ, ಕಟಕ= ದಳವೆಂಬ, ಸಾಗರವನ= ಆರ್ಣವವನ್ನು, ಅಲ್ಲಿ= ಆ ಸುರನದಿಯ ದಡದಲ್ಲಿ, ಬಿಡಿಸಿ= ನಿಲ್ಲಿಸಿ, ಭೂಮೀಶ= ಪೊಡವಿಪನಾದ ಧರ್ಮತನಯನ,  ದರ್ಶನೋತ್ಸವಕೆ= ಈಕ್ಷಿಸಬೇಕೆಂಬ ಬಯಕೆಗೆ, ಬಿಜಯಂಗೈದನು= ನಡೆದನು, ಆ ಮಧ್ಯಮಾರ್ಗದೊಳ್ = ಆ ದಾರಿಯ ಮಧ್ಯದಲ್ಲಿ, ಮಹಾಜನಂ= ಅಲ್ಲಿನ ಜನಪದವು, ತಾಮರಸನೇತ್ರನಂ = ಶ್ರೀಕೃಷ್ಣಸ್ವಾಮಿಯನ್ನು, ಕಂಡುದು= ಈಕ್ಷಿಸಿತು, ತಮತಮಗೆ = ತಮ್ಮಷ್ಟಕ್ಕೆ ತಾವೆ, ನಿಗಮ= ಬ್ರಹ್ಮನ ಮುಖದಿಂದ ಬಂದ ವೇದವಚನಗಳ,ಆಗಮ= ಆಗಮಂಗಳ, ಉಕ್ತಿಯಿಂದ= ವಚನಗಳಿಂದ, ನುತಿಸಿದರು= ತ್ರಿಮೂರ್ತಿಯಾಗಿರತಕ್ಕ ಸ್ವಾಮಿಯೆಂದು ಅವರವರ ಕುಲದೇವರಂತೆ ಹೊಗಳಿದರು. 


ಅ॥ ವಿ॥ ಪಯಣ(ತ್ಬ) ಪ್ರಯಾಣ(ತ್ಸ) ತಾಮರಸನೇತ್ರನು= ತಾಮರಸ- ಪದ್ಮಪತ್ರದಂತೆ, ನೇತ್ರನು- ಕಣ್ಣುಗಳನ್ನಳ್ಳವನು

( ಹರಿಯು ) ನಿಗಮ= ಋಗ್ವೇದವೇ ಮೊದಲಾದ ನಾಲ್ಕು ವೇದಗಳು, ಆಗಮ= ಶಿವ, ವಿಷ್ಣು,  ಪಾಂಚರಾತ್ರ ಮೊದಲಾದ  ಪದ್ಧತಿಗಳು. 


ತಾತ್ಪರ್ಯ:- ಬಹೈದೂರ ನಡೆದು ಬರಲಾಗಿ ಹಸ್ತಿನಾವತಿಯ ಪ್ರಾಂತವು ಕಾಣಿಸಿತು. ಆಗ ಶ್ರೀಕೃಷ್ಣಸ್ವಾಮಿಯು ತನ್ನ ಸಮಸ್ತ ಪರಿವಾರವನ್ನೂ ಭೀಮಸೇನನ ಕಾವಲಿನಲ್ಲಿರಿಸಿ, ತಾನು ಮಾತ್ರ ಏಕಾಕಿಯಾಗಿ ಧರ್ಮಜನ ದರೂಶನವಂ ಮಾಡಿಕೊಳ್ಳಬೇಕೆಂದುಜ್ಜುಗಿಸಿ ಹೊರಟನು. ಈ ರೀತಿಯಲ್ಲಿ ಬರುತ್ತಿರುವ ಕೃಷ್ಣಸ್ವಾಮಿಯನ್ನು ಹಸ್ತಿನಾವತಿಯ ಜನರು ನೋಡಿ ತಮ್ಮ ಕುಲದೇವರೆಂದು ಹೊಗಳಿದರು.  


ಶ್ರುತಿ ಧರ್ಮಶಾಸ್ತ್ರಾಗಮ ಸ್ಮೃತಿ ವಿಚಾರದಿಂ। 

ಗತಿಗೆಟ್ಟ ಬ್ರಹ್ಮಹತ್ಯಾದಿಪಾತಕಕೆ ನಿ। 

ಷ್ಕೃತಿ ತವಸ್ಮರಣಮಾತ್ರದೊಳಪ್ಪುದೆಂದೊಡಾಶ್ರಮನಾಲ್ಕರೊಳ್ ಮಾಡಿದ॥ 

ವ್ರತ ದಾನ ಜಪ ತಪಸ್ಸ್ವಾಧ್ಯಾಯ ಪೂಜೆ ಸ। 

ತ್ಕ್ರತು ಸಮಾಧಿಗಳೆಮಗೆ ನಿನ್ನನೀಕ್ಷಿಸಲನು। 

ಷ್ಠಿತಮಾದುವೆಂಬುದೇಂ ನುತಿಯೆ ನಿನಗೆಂದು ಹರಿಯಂ ಪೊಗಳ್ದರಾ ಪಾರ್ವರು॥೧೪॥ 


ಪ್ರತಿಪದಾರ್ಥ:- ಶ್ರುತಿ= ವೇದವಚನಗಳ, ಧರ್ಮಶಾಸ್ತ್ರ= ಕೃತ್ಯಾಕೃತ್ಯಗಳನ್ನು ತಿಳಿಸುವನಿಯಮಗಳುಳ್ಳ ಗ್ರಂಥಗಳ, ಆಗಮ= ಶಿವ, ವಿಷ್ಣು, ಪಾಂಚರಾತ್ರಾ ಮೊದಲೃದವುಗಳ, ಸ್ಮೃತಿ= ಮನುಚಕ್ರವರ್ತಿ, ಗೌತಮ, ಪರಾಶರ ಇವರು ಮಾಡಿರುವ ಕಟ್ಟಳೆಗಳ, ವಿಚಾರದಿಂ= ಪರಿಶೀಲನೆಯಿಂದ, ಗತಿಗೆಟ್ಟ= ಆಮುಷ್ಮಿಕ ಸುಖವನ್ನು ನೀಗಿಕೊಂಡ, ಬ್ರಹ್ಮಹತ್ಯಾ= ಬ್ರಾಹ್ಮಣನನ್ನು ಕೊಲ್ಲುವುದೇ, ಆದಿ= ಮೊದಲಾದ, ಮಹಾಪಾತಕಳೆ= ಪಂಚಮಹಾಪಾತಕಗಳಿಗೆ, ನಿಷ್ಕೃತಿ= ಅವುಗಳಿಂದುಂಟಾಗುವ ಬಾಧಕಗಳನ್ನು ನೀಗುವ ಪ್ರತಿಕೃತಿ(ಪ್ರಾಯಶ್ಚಿತ್ತ) ತವ= ನಿನ್ನಿನ್ನಸಂಬಂಧವಾದ, ಸ್ಮರಣಮಾತ್ರದೊಳ್= ಧ್ಯಾನವೊಂದರಿಂದಲೆ, ಅಪ್ಪುದು= ಸಿದ್ಧಿಸುವುದು,ಎಂದೊಡೆ= ಎಂದು ನುಡಿದಮೇಲೆ, ಆಶ್ರಮ ನಾಲ್ಕರೊಳ್= ಆಶ್ರಮ ಚತುಷ್ಟಯಗಳಲ್ಲಿ, ಮಾಡಿದ=ಎಸಗಿದ, ವ್ರತ= ವೇದೋಕ್ತ ವ್ರತಗಳೂ, ಚಾಂದ್ರಾಯಣವೇ ಮೊದಲಾದ ಸ್ಮೃತಿಯಲ್ಲಿ ಹೇಳುವ ವ್ರತಗಳೂ, ಅಷ್ಟಾದಶ ಪುರಾಣಗಳಲ್ಲಿ ಹೇಳುವ ವ್ರತಗಳೂ, ದಾನ= ದಶದಾನಗಳು, ಜಪ= ಗಾಯತ್ರಿಯೇ ಮೊದಲಾದ ಜಪಗಳೂ, ತಪ= ತಪಸ್ಸು, ಸ್ವಾಧ್ಯಾಯ = ಅಭ್ಯಾಸವು, ಪೂಜೆ= ಧೂಪ,ದೀಪ, ನೈವೇದ್ಯ, ತಾಂಬೂಲಾದಿಗಳಿಂದ ದೇವರನ್ನು ಮನಃಪೂರ್ವಕವಾಗಿ ಅರ್ಚಿಸುವುದು, ಸತ್ಕ್ರತು= ಒಳ್ಳೆಯ ಯಾಗಗಳು, ಸಮಾಧಿಗಳು= ನೆರವೇರಿಸುವುದು, ಎಮಗೆ= ನಮಗಾದರೊ, ನಿನ್ನನು = ಭಗವಂತನನ್ನು, ಈಕ್ಷಿಸಲು= ದೃಷ್ಟಿಸಲು, ನಿಷ್ಠಿತಮಾದವು= ಪ್ರಾಪ್ತವಾದವು, ಎಂಬುದ= ಎಂದು ನುಡಿಯುವುದು, ನಿನಗೆ= ನಿನ್ನ ವಿಷಯದಲ್ಲಿ,  ನುತಿ= ಹೊಗಳಿಕೆ-

ಯಾಗಿದೆಯೇ( ನೈಜವೇ ಆಗಿರುವುದು ) ಎಂದು= ಎಂಬ ತೆರನಾಗಿ, ಪಾರ್ವರು= ಭೂಸುರರು, ಹರಿಯಂ= ಕೃಷ್ಣಸ್ವಾಮಿಯನ್ನು, ಪೊಗಳ್ದರು= ನುತಿಸಿದರು. 


ಅ॥ವಿ ॥ಪಂಚಮಹಾಪಾತಕಂಗಳು= ಚಿನ್ನಕದಿಯುವುದು, ಹೆಂಡಕುಡಿಯುವುದು,ಬ್ರಾಹ್ಮಣನನ್ನು ಕೊಲ್ಲುವುದು, ಗುರುಪತ್ನೀಗಮನಮಾಡುವುದು, ಮೇಲ್ಕಂಡ ನಾಲ್ಕುತೆರನಾದವರೊಂದಿಗೆ ಸೇರುವುದು, ಇವುಗಳು. ಆಶ್ರಮಚತುಷ್ಟ-

ಯಂಗಳು= ಬ್ರಹ್ಮಚರ್ಯ, ಗಾರ್ಹಸ್ತ್ಯ,ವಾನಪ್ರಸ್ಥ, ಯತಿ ಎಂಬಿವುಗಳು. ದಶದಾನಗಳು= ಹಸು, ಭೂಮಿ, ಎಳ್ಳು, ಸುವರ್ಣ, ತುಪ್ಪ, ವಸ್ತ್ರ, ಧಾನ್ಯ, ಬೆಲ್ಲ, ಹಣ, ಉಪ್ಪು, ಎವುಗಳ ದಾನವು, ಜಪ= ಹೇಳಿದ ಮಂತ್ರಗಳನ್ನೇ ಅನೇಕಾವರ್ತಿ ಹೇಳುತ್ತಾ ದೇವರನ್ನು ಧ್ಯಾನಿಸುವುದು. ತಪ= ಅನೇಕ ಮಂತ್ರಗಳಿಂದ ಸ್ವಾಮಿಯನ್ನು ಮೆಚ್ಚಿಸುವುದು. 


ತಾತ್ಪರ್ಯ:- ಎಲೈ ಪರಮಪಾವನಮೂರ್ತಿಯೆ ! ಜಗದ್ರಕ್ಷಕನೇ ! ನಾಲ್ಕು ವೇದಗಳು,  ಅನೇಕ ಧರ್ಮಶಾಸ್ತ್ರಗಳು ಮೊದಲಾದವುಗಳಿಂದ ಪರಿಶುದ್ಧತೆಯನ್ನು ಪಡೆಯಲವಕಾಶವಿಲ್ಲದಿರುವುದರಿಂದ ನಮಗೆ ಬ್ರಹ್ಮಹತ್ಯಾದಿ ಘೋರದುರಿತ-

ಗಳೆಲ್ಲವೂನಿನ್ನ ನಾಮೋಚ್ಛಾರಣ ಮಾತ್ರದಿಂದಲೇ ಪರಿಹಾರವನ್ನೈದುತ್ತಿರುವವು. ಚತುರ್ವರ್ಣದವರೂ ತಮ್ಮತಮ್ಮ ಧರ್ಮವನ್ನವಲಂಬಿಸಿ ಮಾಡಿದ ಅನೇಕ ವ್ರತಗಳು, ದಾನಧರ್ಮಗಳು,ಯಜ್ಞಾದಿಗಳು ಇವುಗಳಿಂಟಾಗುವ ಅತ್ಯಧಿಕವಾದ ಪುಣ್ಯವು ನಿನ್ನ ಸಂದರ್ಶನಮಾತ್ರದಿಂದಲೇ ಲಭಿಸಿರುವುದು ಎಂಬುದಾಗಿ ಹೊಗಳುತ್ತಿದ್ದರು. 


ಕಾಣಿಕೆಯನಿತ್ತೆರಗಿ ಕಂಡುದು ಸಕಲಜನ । 

ಶ್ರೇಣಿ ತಮತಮಗೆ ಮುಗಿದೆತ್ತಿದರ್ ನೊಸಲೆಡೆಗೆ। 

ಪಾಣಿಗಳನಾ ಪಥದೊಳೊರ್ವನರ್ತಕಿ ಬಂದು ನಾನಾಪ್ರಕಾರದಿಂದೆ॥ 

ವೇಣು ವೀಣಾದಿ ಸಂಗೀತ ವಾದ್ಯಶ್ರುತಿಯ । 

ಕೇಣಿಗೊಂಡುರುಪು ತಿರುಪಭಿನವಕಳಾ ಸಪ್ರ। 

ಮಾಣದ ಸುನೃತ್ತದಿಂ ಮೆಚ್ಚಿಸಿದಳಚ್ಯುತನನಚ್ಚರಿಯರಚ್ಚರಿಯೆನೆ॥೧೫॥


ಪ್ರತಿಪದಾರ್ಥ :- ಕಾಣಿಕೆಯನು= ಮರ್ಯಾದಾ ದ್ರವ್ಯವನ್ನು (ಕಪ್ಪವನ್ನು ) ಇತ್ತು= ಕೊಟ್ಟು,  ಎರಗಿ= ನಮಸ್ಕಾರಮಾಡಿ, 

ಸಕಲಜನ= ಸರ್ವ ಪ್ರಜೆಗಳ, ಶ್ರೇಣಿ= ಪಙ್ತಿಯು, ಪಾಣಿಗಳ= ಹಸ್ತಗಳನ್ನು, ನೊಸಲ= ಹಣೆಯಭಾಗದ, ಎಡೆಗೆ= ಪ್ರದೇಶಕ್ಕೆ, ಮುಗಿದು= ಸೇರಿಸಿಕೊಂಡು, ಕಂಡುದು= ಕೃಷ್ಣನ ಸಂದರ್ಶನ ಸುಖವನ್ನೈದಿತು, ಆ ಪಥದೊಳ್= ಆ ದಾರಿಯಲ್ಲಿ, ಓರ್ವ= ಒಬ್ಬಳಾದ, ನರ್ತಕಿ= ನೃತ್ಯಗಾತಿ, ಬಂದು=ಐತಂದು, ನಾನಾಪ್ರಕಾರದಿಂದ= ಬೇರೆಬೇರೆ ರೀತಿಗಳಿಂದ,

ವೇಣು= ಕೊಳಲು, ವೀಣಾ= ವಿಪಂಚಿಯು, ಆದಿ= ಮುಂತಾದ, ಸಂಗೀತವಾದ್ಯ= ಗಾನರವದ, ಸ್ಮೃತಿಯ= ನೆನಪಿನ ಅಥವಾ ಶ್ರುತಿಯನ್ನು, ಕೇಣಗೊಂಡು= ಸರಿಯಾಗುವಂತೆ ಮಾಡಿ, ಉರಪು= ಮುಂದರಿದು ಬರುವುದು, ತಿರುಪು= ಹಿಂದಿರುಗುವುದು, ಅಭಿನವ= ನೂತನವಾದ, ಕಲಾ= ಅಭಿನಯವಿದ್ಯೆಯ( ಭರತಶಾಸ್ತ್ರದ ), ಸಪ್ರಮಾಣದ= ಒಡಂಬಡಿಕೆಯಿಂದ ಯುಕ್ತಮಾದ, ಸುನೃತ್ತದಿಂ = ನರ್ತನದಿಂದ, ಅಚ್ಚರಿಯರು= ಅಲಂಕಾರ ವಿಶೇಷದಿಂದಲೂ ನರ್ತನ ಅಭಿನಯಾದಿಗಳಿಂದಲೂ ಮೆರೆಯುವ ದೇವಲೋಕದ ವೇಶ್ಯಾಂಗನೆಯರು, ಅಚ್ಚರಿಯೆನೆ= ವಿಸ್ಮಯ ಪಡುತ್ತಿರುವಂತೆ, ಅಚ್ಯುತನನು= ಹರಿಯನ್ನು, ಮೆಚ್ಚಿಸಿದಳು= ಸಂತೋಷಪಡಿಸಿದಳು. 


ತಾತ್ಪರ್ಯ:- ಆ ಇಭನಗರ ವಾಸಿಗಳಲ್ಲನೇಕರು ಶ್ರೀಕೃಷ್ಣನ ಪಾದಾರವಿಂದಗಳಿಗೆ ಅಧಿಕವಾದ ಕಾಣಿಕೆಯನ್ನರ್ಪಿಸುತ್ತಲೂ ಮತ್ತೆ ಕೆಲವರು ಬಾರಿಬಾರಿಗೂ ನಮಸ್ಕಾರವನ್ನು ಮಾಡುತ್ತಲೂ ಇದ್ದರು. ಹೀಗಿರುವಲ್ಲಿ ಒಬ್ಬ ನರ್ತಕಿಯು ಶ್ರೀಕೃಷ್ಣನ ಎದುರಿಗೆ ವೀಣೆಯನ್ನು ನುಡಿಯಿಸಿ ಸಂಗೀತವನ್ನು ಹೇಳಿ, ಭರತಶಾಸ್ತ್ರಪ್ರಕಾರವಾಗಿ ಅಭಿನಯಂಗಳಂತೋರಿಸಿ ಕುಣಿದಾಡುತ್ತಾ ಕೃಷ್ಣನು ಮರುಳಾಗಿ ನೋಡುತ್ತಿರುವಂತೆ ಮಾಡಿ ಅವನ ಮನಸ್ಸಿಗೆ ಅತ್ಯಾನಂದವನ್ನುಂಟುಮಾಡಿದಳು. 


ನಾಗನಗರಿಯನಗಧರಂ ಪೊಕ್ಕು ಬರುತಿರ್ದ । 

ನಾಗ ನಗರಿಪು ಮುಖ್ಯರೈದೆ ಸಾಸಿರಪೆಡೆಯ । 

ನಾಗನಗರೀಯಾಂಗತಲ್ಪದವನಿವನೆಂದು ಗಗನದೊಳ್ ಕೈವಾರಿಸೆ॥ 

ಬಾಗಿಲಂ ಸಾರ್ದು ತಮತಮಗೆ ಕಾಮಿನಿಯರಿಂ। 

ಬಾಗಿ ಲಂಬಿಸುವಲರ್ಮುಡಿಗಳ ತಿರಂಗಳಿಂ। 

ಬಾಗಿ ಲಕ್ಷ್ಮೀಪತಿಗೆ ವಂದಿಸಿದರೊಲವಿಂದೆ ರಾಜಮಾರ್ಗಾಂತರೊಳು॥೧೬॥ 


ಪ್ರತಿಪದಾರ್ಥ :- ಅಗಧರಂ= ಹರಿಯು, ನಾಗನಗರಿಯನು= ಇಭಪುರಿಯನ್ನು, ಪೊಕ್ಕು = ಪರವೇಶಮಾಡಿ, ಬರುತಿರ್ದನು=

ಐತರುತ್ತಿದ್ದನು, ಆಗ= ಆ ಕಾಲದಲ್ಲಿ, ನಗರಿಪುಮುಖ್ಯರು= ಶಚೀಪತಿಯೇ ಮೊದಲಾದವರು,ಐದೆ= ಚನ್ನಾಗಿ, ಸಾಸಿರಪೆಡೆಯ= ಸಹಸ್ರಫಣಿಗಳುಳ್ಳ,ನಾಗನ= ಆದಿಶೇಷನ, ಗರೀಯ= ಬಹುದೊಡ್ಡ, ಅಂಗ= ದೇಹವೇ,ತಲ್ಪದವನು= 

ಸೆಜ್ಜೆಯಾಗಿ ಮಾಡಿಕೊಂಡಿರುವವನು, ಇವನು= ಈ ಕೃಷ್ಣನು, ಎಂದು= ಎಂಬತೆರನಾಗಿ, ಗಗನದೊಳ್= ಅಂತರಿಕ್ಷದಲ್ಲಿ, ಕೈವಾರಿಸೆ= ಸ್ತುತಿಸಲು, ಕಾಮಿನಿಯರು= ಪೌರನಾರಿಯರು, ಬಾಗಿಲಂ= ಬಾಗಿಲನ್ನು, ಸಾರ್ದು= ಹೊಂದಿ, ತಮತಮಗೆ =

ತಮ್ಮಲ್ಲಿ ತಾವೆ, ಇಂಬಾಗಿ= ಸಂತೋಷದಿಂದಕೂಡಿ, ಲಂಬಿಸುವ= ಅಲ್ಲಾಡುತ್ತಿರುವ, ಅಲರ್ಮುಡಿಗಳ= ಪುಷ್ಪಗಳಿಂದ ಕೂಡಿರುವ ಜಡೆಗಳನ್ನುಳ್ಳ, ಶಿರಂಗಳಂ= ಶೀರ್ಷಗಳನ್ನು, ಬಾಗಿ= ನೆಲಕ್ಕೆ ಬಗಗುವಂತೆ ಮಾಡಿಕೊಂಡು, ಲಕ್ಷ್ಮೀಪತಿಗೆ = ಸಿರಿಯರಮಣನಿಗೆ, ರಾಜಮಾರ್ಗ=ರಾಜಬೀದಿಯ, ಅಂತರದೊಳು= ಮಧ್ಯಭಾಗದಲ್ಲಿ, ಒಲವಿಂದ= ವಿಶ್ವಾಸದಿಂದ, ವಂದಿಸಿದರು= ನಮಸ್ಕರಿಸಿದರು. 


ಅ॥ ವಿ॥ ಅಗಧರಂ= ಅಗ-ಗಮನವಿಲ್ಲದ್ದು, ಎಂದರೆ ಚಲಿಸದಿರುವುದು ಪರ್ವತವು(ಗೋವರ್ಧನಗಿರಿ), ಅಗ= ಗೋವರ್ಧನ ಪರ್ವತವನ್ನು,  ಧರಂ= ಮೇಲಕ್ಕೆತ್ತಿದವನು,( ಕೃಷ್ಣನು) ದ್ವಿ. ತ. ನಗರಿಪುಮುಖ್ಯರು= ನಗಗಳರಿಪು 

(ಷ. ತ.) ನಗರಿಪುವೇಮುಖ್ಯರು (ಆ. ಪೂ. ಕ.) ಅಲರ್= ಹೂವು, ಎಲರ್=ಗಾಳಿ. 


ತಾತ್ಪರ್ಯ:- ಶ್ರೀಕೃಷ್ಣನು ಇನ್ನೂ ಮುಂದೆ ಹೋಗುತ್ತಿರುವಾಗ ರಾಜಮಾರ್ಗದ ಎರಡೂ ಕಡೆಯಲ್ಲಿಯೂ ನೆರೆದು ಹೊಸದಾಗಿ ಸುವಾಸನೆಯಿಂದ ಕೂಡಿರುವ ಹೂಗಳಿಂದಲಂಕೃತವಾದ ಆದಿಶೇಷನನ್ನೆ ಹಾಸಿಗೆಯಾಗಿಮಾಡಿಕೊಂಡಿರುವ,

ಶ್ರೀಕೃಷ್ಣಮೂರ್ತಿಯು ಬರುತ್ತಿರುವುದನ್ನು ನೋಡಿ ಕೈಗಳನ್ನು ಜೋಡಿಸಿಕೊಂಡು ವಂದನೆಗಳನ್ನರ್ಪಿಸುತ್ತಿದ್ದರು, ಅದೇ ಕಾಲದಲ್ಲಿಯೇ ಅಂತರಿಕ್ಷದಲ್ಲಿ ಇಂದ್ರಾದಿ ದೇವತೆಗಳೆಲ್ಲರೂ ಶ್ರೀಕೃಷ್ಣಸ್ವಾಮಿಯನ್ನು ನುತಿಸುತ್ತಿದ್ದರು. 


ರಾಜಮಾರ್ಗದ ಕೆಲಬಲದ ಗೋಪುರದೊಳಿರ್ದ। 

ರಾಜವದನೆಯರಗರು ಚಂದನ ಸುಧೂಪ ನೀ। 

ರಾಜನ ಫಲಾಳಿ ತಾಂಬೂಲ ಬಹುವಿಧ ಕುಸುಮ ಲಾಜ ದೂರ್ವಾಕ್ಷತೆಗಳ॥ 

ರಾಜಿಗಳನಳವಡಿಸೆ ಮಣಿತೋರಣಪ್ರಭೆ ವಿ। 

ರಾಜಿಸುವ ಧರ್ಮಸುತನರಮನೆಯ ಬಾಗಿಲ್ಗೆ। 

ರಾಜೀವಲೋಚನಂ ಬರೆ ಕೇಳ್ದು ಭೂವರನಿದಿರ್ಗೊಂಡನುತ್ಸವದೊಳು॥೧೭॥ 


ಪ್ರತಿಪದಾರ್ಥ:- ರಾಜಮಾರ್ಗದ = ದೊಡ್ಡಬೀದಿಯ, ಕೆಲಬಲದ= ಇಕ್ಕೆಲದ, ಗೋಪುರದೊಳು= ಮಹಡಿಗಳ ಮೇಲೆ, ಇರ್ದ=ನೆರೆದ, ರಾಜವದನೆಯರು= ಇಂದುಮುಖಿಯರು, ಅಗರ=ಕರಿಯಗಂಧದಮರದ, ಚಂದನ=ಸಿರಿಗಂಧದ, ಧೂಪ=ಹಾಲಮಡ್ಡಿ, ಊದಕಡ್ಡಿ, ಮೊದಲಾದವುಗಳ, ನೀರಾಜನ= ಕರ್ಪೂರವೇ ಮೊದಲಾದವುಗಳ ಮಂಗಳಾರತಿಯ, ಫಲಾಳಿ= ಹಣ್ಣುಗಳ, ತಾಂಬೂಲ= ಅಡಿಕೆ ಎಲೆ ಇವುಗಳ, ಬಹುವಿಧ= ನಾನಾಪ್ರಕಾರವಾದ, ಕುಸುಮ= ಹೂಗಳು, ಲಾಜ=ಅರಳು, ದೂರ್ವ= ಚಿಗುರುಹುಲ್ಲು, ಅಕ್ಷತೆಗಳ= ಸೇಸೆಗಳ, ರಾಜಿಗಳ= ಪಙ್ತಿಗಳ, ಮಣಿ=ನವರತ್ನಖಚಿತವಾದ, ತೋರಣದ= ಬಾಗಿಲಿಗೆ ಅಲಂಕೃತವಾಗಿರುವತೋರಣದ, ಪ್ರಭೆ=ತೇಜಸ್ಸು, ನಳನಳಿಸೆ= ಮಿರುಮಿರುಗುತ್ತಿರಲಾಗಿ, ವಿರಾಜಿಸುವ= ಕಾಂತಿಯುಕ್ತನಾಗಿರುವ, ಧರ್ಮಸುತನ= ಯುಧಿಷ್ಠಿರನ, ಅರಮನೆಯ =ರಾಜಭವನದ, ಬಾಗಿಲ್ಗೆ= ದ್ವಾರದ ಬಳಿಗೆ, ರಾಜೀವ= ತಾವರೆಯಂತೆ, ಲೋಚನಂ= ನೇತ್ರಗಳನ್ನುಳ್ಳ ಹರಿಯು, ಬರೆ=ಐತರಲು, ಕೇಳ್ದು=ಆಲಿಸಿ, ಭೂವರನು= ಪೊಡವಿಪನಾದ ಧರ್ಮನಂದನನು, ಉತ್ಸಾಹದೊಳು= ಆನಂದಾತಿಶಯದಿಂದ, ಇದಿರ್ಗೊಂಡನು. 


ತಾತ್ಪರ್ಯ:- ಕೃಷ್ಣಮೂರ್ತಿಯು ರ್ಜಬೀದಿಯ ಇಕ್ಕೆಲದಲ್ಲಿಯೂ, ನೆರೆದಿರುವ ಚಂದ್ರಮುಖಿಯರ ಗಂಧಪುಷ್ಪಾ ಕ್ಷತೆ ಧೂಪದೀಪನೈವೇದ್ಯ ತಾಂಬೂಲ ನೀರಾಜಿನಗಳಿಂದ ಕೂಡಿದ ಅರ್ಚನೆಯ ಕೈಕೊಳ್ಳುತ್ತ ಯುಧಿಷ್ಠಿರನ ಅರಮನೆಯ ಮುಂದುಗಡೆಯಲ್ಲಿ ಬರುತ್ತಿರುವುದನ್ನು ಧರ್ಮರಾಯನು ಚರರಿಂದ ತಿಳಿದು ಅತ್ಯುತ್ಸವದಿಂದ ತಡಮಾಡದೆ ಶ್ರೀಕೃಷ್ಣಸ್ವಾಮಿಯ ದರ್ಶನ ಲಾಭವನ್ನು ಪಡೆದನು. 


ಧರ್ಮಸುತನಂ ಕಂಡು ನಗುತೆ ಮುರರಿಪು ಹೇಮ। 

ನಿರ್ಮಿತವರೂಥದಿಂದಿಳಿದು ನೃಪವರನಡಿಗೆ। 

ನಿರ್ಮಲಕಿರೀಟಮಂ ಚಾಚುತಿರೆ ತೊಲಗಿ ಹರಿಯಂಘ್ರಿಗರಸಂ ನಮಿಸಲು॥ 

ಪೆರ್ಮೆಯಿಂ ತೆಗೆದು ಬಿಗಿಯಪ್ಪಲವನೀಶ್ವರಂ । 

ನಿರ್ಮಾಯನಂ ಮಗುಳೆ ತಕ್ಕೈಸಲಾಗಳಮ। 

ರರ್ಮಹೀಪಾಲಕನ ಪೂರ್ವಕೃತಪುಣ್ಯಮಂ ಬಣ್ಣಿಸಿದರಂಬರದೊಳು॥೧೮॥ 


ಮುರರಿಪು = ಮುರಾಂತಕನಾದ ಕೃಷ್ಣನು, ಧರ್ಮಸುತನಂ= ಯುಧಿಷ್ಠಿರನನ್ನು, ಕಂಡು= ನೋಡಿ, ನಸುನಗುತ= ಮುಗುಳ್ನಗೆಯನ್ನೈದುತ್ತ, ಹೇಮ= ಚಿನ್ನದಿಂದ, ನಿರ್ಮಿತ= ಎಸಗಲ್ಪಟ್ಟ, ವರೂಥದಿಂದ= ಸ್ಯಂದನದಿಂದ, ಇಳಿದು= ಕೆಳಗಿಳಿದು, ನೃಪ= ರಾಜರುಗಳಲ್ಲೆಲ್ಲಾ, ವರನ= ಮೇಲಾದ ಯುಧಿಷ್ಠಿರನ, ಅಡಿಗೆ= ಕಾಲ್ಗಳಿಗೆ, ನಿರ್ಮಲ=ಸ್ವಚ್ಛವಾದ,  ಕಿರೀಟಮಂ= ಶಿರೋಭೂಷಣವನ್ನು, ಚಾಚುತ್ತ= ನೀಡುತ್ತ, ಇರೆ= ಇರಲಾಗಿ, ತೊಲಗಿ=ಪಕ್ಕಕ್ಕೆ ಹೋಗಿ, ಹರಿಯು= ಶ್ರೀಕೃಷ್ಣಮೂರ್ತಿಯು, ಅಂಘ್ರಿಗಳಿಗೆ= ಅಡಿಗಳಿಗೆ, ಅರಸಂ= ದೊರೆಯು, ನಮಿಸಲು= ಪ್ರಣಾಮಂಗೈಯಲು, ಪೇರ್ವೆಯಿಂ= ಪ್ರೀತ್ಯತಿಶಯದಿಂದ, ತೆಗೆದು= ಪಿಡಿದು, ಬಿಗಿಯಪ್ಪಲು= ಬಾಚಿ ತಬ್ಬಿಕೊಳ್ಳಲಾಗಿ, ಅವನೀಶ್ವರಂ= ಯುಧಿಷ್ಠಿರನು ಕೂಡ, ನಿರ್ಮಾಯನಂ= ಮಾಯಾರಹಿತನಾದ ಕೃಷ್ಣನನ್ನು, ಮಗುಳೆ= ತಿರುಗಿ, ತಕ್ಕೈಸಲು= ಮನ್ನಣೆಯಂ ಮಾಡಲು, ಆಗಲು=ಆ ಕಾಲದಲ್ಲಿ, ಅಮರರು= ನಿರ್ಜನರು, ಅಂಬರದೊಳು= ಆಗಸದಲ್ಲಿ, ಮಹೀಪಾಲನ= ಯುಧಿಷ್ಠಿರ ಮಹಾರಾಜನ, ಪೂರ್ವಕೃತ= ಪೂರ್ವಾರ್ಜಿತ, ಪುಣ್ಯಮಂ= ಸತ್ಕಾರ್ಯಗಳನ್ನು ಕುರಿತು, ಬಣ್ಣಿಸಿದರು= ಹೊಗಳಿದರು. 


ಅ॥ವಿ॥ ನೃಪನಂ(ಸ.ತ.) ಅಮರರು= ಮರಣವಿಲ್ಲದವರು, ಅಂಬರ= ವಸ್ತ್ರಮತ್ತು ಆಕಾಶ. ಬಣ್ಣಿಸು(ತ್ಭ.) ವರ್ಣಿಸು(ತ್ಸ) 


ತದನಂತರದೊಳಾ ಮುರಾಂತಕಂ ಧೃತರಾಷ್ಟ್ರ । 

ವಿದುರ ಕೃಪ ಗಾಂಧಾರಿ ಕುಂತಿಯರ್ಗಭಿನಮಿಸಿ। 

ಮುದದಿಂದೆ ನರ ನಕುಲ ಸಹದೇವ ವೃಷಕೇತು ಯೌವನಾಶ್ವಾದಿಗಳನು॥ 

ಪದಕಮಲಕೆರಗಿದೊಡೆ  ತೆಗೆದು ತಕ್ಕೈಸಿ ದ್ರೌ। 

ಪದಿ ಸುಭದ್ರೆಯರನೊಲವಿಂದೆ ಕಾಣಿಸಿಕೊಂಡು । 

ಪದುಳಮಂ ಕೇಳ್ದು ಸುಗೋಷ್ಠಿಯಿಂ ಕುಳ್ಳಿರ್ದ ಬಳಿಕ ನೃಪನಿಂತೆಂದನು॥೧೯॥


ಪ್ರತಿಪದಾರ್ಥ:- ತದನಂತರದೊಳು= ಆ ಮೇಲೆ, ಮುರಾಂತಕಂ= ಮುರವೈರಿಯಾದ ಕೃಷ್ಣನು, ಧೃತರಾಷ್ಟ್ರ= ಧೃತರಾಷ್ಟ್ರನೆಂಬ ಕುರುಪತಿಗೂ, ವಿದುರ= ಧೃತರಾಷ್ಟ್ರನ ಅನುಜನೂ ಶೂದ್ರಸ್ತ್ರೀಯ ಮಗನೂ ಆದ ವಿದುರನಿಗೂ, ಕೃಪ= ಕೃಪನಿಗೂ, ಗಾಂಧಾರಿ = ಕುರುಪತಿಯ ಹೆಂಡತಿಗೂ, ಕುಂತಿಯರ್ಗೆ= ಕುಂತಿದೇವಿಯೇ ಮೊದಲಾದವರಿಗೆ, ಅಭಿನಮಿಸಿ= ನಮಸ್ಕಾರ ಮಾಡಿ,  ಮುದದಿಂದ= ಆನಂದದಿಂದ, ನರ=ಪಾರ್ಥ, ನಕುಲ,ಸಹದೇವ, ವೃಷಕೇತು, ಯೌವನಾಶ್ವಾದಿಗಳನು-

ನಕುಲ, ಸಹದೇವ, ವೃಷಧ್ವಜ, ಯೌವನಾಶ್ವಾವನಿಪನೆ ಮೊದಲಾದವರು, ಪದಕಮಲಕೆ= ಅಡಿದಾವರೆಗೆ,ಎರಗಿದೊಡೆ= ಪ್ರಣಾಮಮಾಡಲು,ತೆಗೆದು= ಆಲಂಗಿಸಿಕೊಂಡು, ತಕ್ಕೈಸಿ= ಉಪಚರಿಸಿ, ದ್ರೌಪದಿ ಸುಭದ್ರೆಯನು= ಪಾಂಚಾಲಿ ಸುಭದ್ರೆ ಇವರನ್ನು, ಕಾಣಿಸಿಕೊಂಡು= ನೋಡಿ, ಪದುಳಮಂ= ಕುಶಲಪ್ರಶ್ನೆಯನ್ನು,ಕೇಳ್ದು= ಮಾಡಿ, ಸುಖಗೋಷ್ಠಿಯಿಂ = ಆನಂದಮಯವಾದ ಸಲ್ಲಾಪಂಗಳಿಂದ, ಕುಳ್ಳಿರ್ದ ಬಳಿಕ= ಕುಳಿತುಕೊಂಡಿದ್ದನಂತರ, ನೃಪನು= ಯುಧಿಷ್ಠಿರನು, ಇಂತು= ಮುಂದೆ ಹೇಳುವಂತೆ, ಎಂದನು= ನುಡಿದನು. 


ಅ॥ವಿ॥ ಕಮಲದಂತಿರುವ ಪದ ( ಪದಕಮಲ, ಉ, ಉತ್ತರಪದ, ಕ) ಪದಕಮಲ,ಸ, ಸಮಾಸಪದ-ಅಡಿದಾವರೆ ( ಕ, ಸ, ಪದ) 


ತಾತ್ಪರ್ಯ:-ಅನಂತರದಲ್ಲಿ ಕೃಷ್ಣಮೂರ್ತಿಯು ಧೃತರಾಷ್ಟ್ರ, ವಿದುರ, ಕೃಪಾಚಾರ್ಯ,ಗಾಂಧಾರಿ, ಕುಂತಿದೇವಿಯೇ ಮೊದಲಾದವರಿಗೆ ನಮಸ್ಕಾರ ಮಾಡಿ ತನ್ನ ಪಾದಕಮಲಗಳಲ್ಲಿ ಬಿದ್ದ ಅರ್ಜುನ, ನಕುಲ, ಸಹದೇವ, ಇವರನ್ನೂ, ವೃಷಧ್ವಜ, ಯೌವನಾಶ್ವಾದಿಗಳನ್ನೂ ಸಂತೋಷದಿಂದ ತಬ್ಬಿಕೊಂಡು,  ಪಾಂಚಾಲಿ ಸುಭದ್ರೆಯರನ್ನು ಕುಶಲಪ್ರಶ್ನೆಗಳಿಂದ ಸಂತೋಷಪಡಿಸಿ, ಸುಖಾಸೀನನಾಗಿ ಕುಳಿತುಕೊಂಡಿದ್ದನು.


ದೇವ ದೇವಕೀದೇವಿ ಮೊದಲಾದವರ್ಗೆ ವಸು। 

ದೇವ ಹಲಧರ ಮನ್ಮಥಾದಿಗಳ್ಗಖಿಳರಾ।

 ಣೀವೃಸಕೈದೆ ಪದುಳಮೆಭೀಮಸೇನನೇಗೈದನಾರುಂ ಬಾರದೆ॥ 

ನೀವೆ ಚಿತ್ತೈಸಿದಿರಿದೇನೆನೆ ಸಮಸ್ತ ಪ್ರ। 

ಜಾವಿಭವದಿಂದೆ ಮಾರುತಿಸಹಿತ ಬಂದು ಗಂ। 

ಗಾವರನದೀತೀರದೊಳ್ ಬೆಟ್ಟುದೆಮ್ಮಕಟಕ ನೋಳ್ಪೊಡೇಳೆಂದನು॥೨೦॥


ದೇವ= ಒಡೆಯನಾದ ಕೃಷ್ಣಸ್ವಾಮಿಯೇ, ದೇವಕೀದೇವಿ= ನಿಮ್ಮ ತಾಯಿಯಾದ ದೇವಕಿಯೇ, ಮೊದಲೃದವರ್ಗೆ= ಆದಿಯಾದವರಿಗೆ, ವಸುದೇವ= ವಸುದೇವನು, ಹಲಧರ= ಬಲಭದ್ರನು, ಮನ್ಮಥ= ಮದನನು, ಆದಿಗಳಿಗೆ= ಇವರೇ ಮೊದಲಾದವರಿಗೆ, ಅಖಿಳ= ಸಕಲರಾದ, ರಾಣಿವಾಸಕೆ= ಅರಸಿತಿಯರಿಗೆ, ಐದೆ= ಚೆನ್ನಾಗಿ, ಪದಳಮೆ= ಕುಶಲವೇ ? ಭೀಮಸೇನನು= ವೃಕೋದರನು, ಏಗೈದನು= ಏನನ್ನು ಎಸಗಿದನು, ಆರುಂಬಾರದೆ= ಯಾರೊಬ್ಬರೂ ಇಲ್ಲದೆ, ನೀವೇ= ನೀವು ಮಾತ್ರವೆ, ಚಿತ್ತೈಸಿದಿರಿ= ಬಿಜಯಂಗೈದಿರಿ,ಇದೇನು=ಇದು ಏತಕ್ಕೆ, ಎನೆ= ಎಂದು ಪ್ರಶ್ನೆ ಮಾಡಲು, ಸಮಸ್ತ= ಅಶೇಷವಾದ, ಪ್ರಜಾ= ಲೋಗರ, ವಿಭವದಿಂದ= ಸಂಭ್ರಮಾತಿಶಯದಿಂದ, ಮಾರುತಿಸಹಿತ= ವಾಯುಪುತ್ರನೊಂದಿಗೆ, ಬಂದು= ಐತಂದು, ಗಂಗಾ= ಸುರನದಿಯ, ತೀರದೊಳ್= ತಡಿಯಲ್ಲಿ, ಬಿಟ್ಟುದು= ನೆರೆದಿರುವುದು, ಎಮ್ಮಯ= ನಮ್ಮ ಸಂಬಂಧವಾದ,  ಕಟಕಮಂ= ದಳವನ್ನು, ನೋಳ್ಪೆವು= ದೃಷ್ಟಿಸೋಣ, ಏಳು= ನಡೆ, ಎಂದನು= ಎಂಬುದಾಗಿ ಹೇಳಿದನು.  


ತಾತ್ಪರ್ಯ:- ಆಗ ಧರ್ಮರಾಯನು ಕೃಷ್ಣಸ್ವಾಮಿಯನ್ನು ಕುರಿತು ಎಲೈ ಪಾವನಮೂರ್ತಿಯೇ ! ನಿಮ್ಮ ತಾಯಿಯಾದ ದೇವಕೀದೇವಿಯೂ,ತಂದೆಯಾದ ವಸುದೇವನೂ, ಅಣ್ಣನಾದ ಬಲರಾಮನೂ, ರುಕ್ಮಿಣೀ ಸತ್ಯಭಾಮೆಯೇ ಮೊದಲಾದವರೂ ಕ್ಷೇಮವಾಗಿದಾರೆಯೇ ? ನಿಮ್ಮನ್ನು ಕರೆತರಲು ಬಂದ ವೃಕೋದರನೆಲ್ಲಿ? ಯಾರೂ ಬರದೆ ನೀವು ಒಬ್ಬರೇ ಬರಲು ಕಾರಣವೇನು ? ಎಂದು ಕೇಳಿದನು. ಆಗ ಮುರಾಂತಕನು ಧರ್ಮನಂದನನನ್ನು ಕುರಿತು, ಎಲೈ ಧರ್ಮಸೂನುವೇ, ನಮ್ಮ ಸಕಲ ಸೈನ್ಯವೂ, ದ್ವಾರಕಾನಗರದ ಸರ್ವಪ್ರಜೆಗಳೂ, ಭೀಮಸೇನನೂ ಸಹ ನನ್ನೊಡನೆಯೇ ಬಂದರು. ಅವರನ್ನೆಲ್ಲಾ ಗಂಗಾನದಿಯ ದಡದಲ್ಲಿಯೇ ಬಿಟ್ಟು ನಾನೊಬ್ಬನೇ ಬಂದಿರುವೆನು, ಅವರನ್ನು ನೋಡಿಕೊಂಡು ಬರುವುದಕ್ಕೆ ಜಾಗ್ರತೆಯಲ್ಲಿ ಹೊರಡೆಂದು ನುಡಿದನು. 





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ