ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಶನಿವಾರ, ಡಿಸೆಂಬರ್ 20, 2025

ಜೈಮಿನಿ ಭಾರತ 24 - ದೊಡ್ಡಬೆಲೆ ನಾರಾಯಣಶಾಸ್ತ್ರೀ

 ಜೈಮಿನಿ ಭಾರತ 24 - ದೊಡ್ಡಬೆಲೆ ನಾರಾಯಣಶಾಸ್ತ್ರೀ


ಸೂಚನೆ:- ಪತ್ನಿಯರ ದೆಸೆಯಿಂದ ಮಡಿದಿರ್ದ ಪಾರ್ಥಂ ಪ್ರ। 

ಯತ್ನದಿಂ ನಿಜಸುತಂ ತಂದ ಸಂಜೀವಕದ। 

ರತ್ನದಿಂ ಕೃಷ್ಣಪ್ರಸಾದದಿಂ ಜೀವಿಸಿದನುರ್ವಿಗಾಶ್ಚರ್ಯಮೆನಲು॥ 


ಪ್ರತಿಪದಾರ್ಥ :- ಕೃಷ್ಣಪ್ರಸಾದದಿಂ= ಶ್ರೀಕೃಷ್ಣನ ದಯೆಯಿಂದ,(ಅನುಗ್ರಹ ಬಲದಿಂದ) ಪತ್ನಿಯರ ದೆಸೆಯಿಂದ = ತನ್ನರಸಿಯರಾದ ಉಲೂಪಿ ಚಿತ್ರಾಂಗದೆಯರಿಂದ, ನಿಜಸುತಂ= ತನ್ನ ಕುವರನಾದ ಬಭ್ರುವಾಹನನ, ಪ್ರಯತ್ನದಿಂದ = ಸಾಹಸದಿಂದ, ತಂದ= ತೆಗೆದುಕೊಂಡು ಬಂದ, ಸಂಜೀವಕದ=ಜೀವವನ್ನು ಕೊಡಬಲ್ಲ, ರತ್ನದಿಂ= ಮಣಿಯಿಂದ, ಉರ್ವಿಗೆ= ಭೂಮಂಡಲಕ್ಕೆ, ಅಚ್ಚರಿಯೆನಲ್= ಆಶ್ಚರ್ಯವೋ ಎಂಬಂತೆ,ಮಡಿದಿರ್ದ= ಮರಣವನ್ನೈದಿರ್ದ, ಪಾರ್ಥಂ= ಧನಂಜ-

ಯನು, ಜೀವಿಸಿದನು= ಬದುಕಿದನು. 


ತಾತ್ಪರ್ಯ:- ಯುದ್ಧದಲ್ಲಿ ಮಡಿದಿದ್ದ ಅರ್ಜುನನು ಚಿತ್ರಾಂಗದೆ ಉಲೂಪಿಯರ ದೆಸೆಯಿಂದಲೂ, ಬಭ್ರುವಾಹನನು ತಂದ ಸಂಜೀವಕ ರತ್ನದಿಂದಲೂ, ಶ್ರೀಕೃಷ್ಣನ ಪ್ರಸಾದದಿಂದಲೂ ಜಗತ್ತು ಆಶ್ಚರ್ಯ ಪಡುವಂತೆ ಬದುಕಿದನು. 


ರಾಯಕೇಳಲ್ಲಿಗಸುರಾಂತಕಂ ಬಂದು ಕೌಂ। 

ತೇಯನಂ ನೋಡದಿರನನ್ನೆಗಂ ಸೈರಿಪೈದು। 

ಪಾಯಮುಳ್ಳೊಡೆ ನರನ ಜೀವಮಂ ಪಡೆವುದಂತಗ್ನಿ ಪ್ರವೇಶದಿಂದೆ॥ 

ಸಾಯಲೇನಹುದೆಂದಳಲ್ದು ಸುತನಂ ಬೈದು। 

ಬಾಯಾರಿ ಚೀರಿ ಚಿತ್ರಾಂಗದೆ ಹಲುಬಲೊಂದು। 

ಪಾಯಮಂ ಕಂಡು ನುಡಿದಳ್ ಪನ್ನಗೇಂದ್ರಸಂಭವೆ ಬಭ್ರುವಾಹನಂಗೆ॥೧॥ 


ಪ್ರತಿಪದಾರ್ಥ :- ರಾಯ= ಎಲೈ ಜನಮೇಜಯರಾಯನೆ, ಕೇಳು=ಲಾಲಿಸು, ಅಸುರಾಂತಕಂ= ಶ್ರೀ ಕೃಷ್ಣನು, ಅಲ್ಲಿಗೆ= ರಣರಂಗಕ್ಕೆ, ಬಂದ= ಬಂದವನಾಗಿ, ಕೌಂತೇಯನಂ= ಪಾರ್ಥನನ್ನು, ನೋಡದೆ ಇರನು= ನೋಡದೆ ಇರುವುದಿಲ್ಲ, ಅನ್ನೆಗಂ=ಅದುವರೆಗೂ,ಸೈರಿಸುವುದು= ತಡೆದುಕೊಳ್ಳಬೇಕು,ಉಪಾಯಂ ಉಳ್ಳೊಡೆ= ಯಾವುದಾದರೂ ದಾರಿ ಇದ್ದರೆ, ನರನ=ಫಲುಗುಣನ, ಜೀವಮಂ= ಪ್ರಾಣವನ್ನು, ಪಡೆವುದು= ಹೊಂದಬಹುದು, ಅಗ್ನಿಪ್ರವೇಶದಿಂದ= ಬೆಂಕಿಯಲ್ಲೆ ಬೀಳುವುದರಿಂದ, ಇಂತು= ಈ ತೆರನಾಗಿ, ಸಾಯಲು= ಪ್ರಾಣಬಿಟ್ಟರೆ,ಏನಹುದು= ಪ್ರಯೋಜನವಂನು, ಎಂದು= ಎಂಬತೆರನಾಗಿ, ಚಿತ್ರಾಂಗದೆಯು,ಸುತನಂ= ಮಗನನ್ನು ಬೈದು= ದೂಷಿಸಿ, ಬಾಯಾರಿ= ಬಾಯೆಲ್ಲ ಒಣಗಿಹೋಗಿ, ಚೀರಿ= ಕೂಗಿಕೊಂಡು, ಹಲುಬಲು= ಸಂಕಟಪಡಲು, ಪನ್ನಗೇಂದ್ರ= ಸರ್ಪಾಧಿಪನ, ಸುತೆ= ಕುವರಿಯಾದ ಉಲೂಪಿಯು, ಒಂದು=ಒಂದಾದ, ಉಪಾಯಮಂ= ಚಮತ್ಕಾರವನ್ನು, ಕಂಡು= ಊಹಿಸಿ, ಬಭ್ರುವಾಹನಂಗೆ= ಪಾರ್ಥಜನೊಡನೆ,  

ನುಡೆದಳ್= ಹೇಳಿದಳು. 


ಅ॥ವಿ॥ ಅಸುರ+ಅಂತಕ= ಅಸುರಾಂತಕ(ಸ. ದೀ. ಸಂ.)ಅಗ್ನಿ (ತ್ಸ) ಅಗ್ಗಿ (ತ್ಭ) ಪನ್ನಗ=ಪತ್-ಕಾಲ್ಗಳಿಂದ, ನಗ= ನಡೆಯದಿರುವುದು(ಕೃ . ವೃ. ಸಂ.) ಪನ್ನಗ=ಸರೂಪಗಳ, ಇಂದ್ರ=ಒಡೆಯ,(ಷ. ತ. ಸ.) 


ತಾತ್ಪರ್ಯ:- ಎಲೈ ಜನಮೇಜಯನೆ ಕೇಳು, ಆ ಬಳಿಕ ಚಿತ್ರಾಂಗದೆಯು, ಅಗ್ನಿಪ್ರವೇಶ ಮಾಡಬೇಕೆಂದಿದ್ದ ಬಭ್ರುವಾಹನನನ್ನು ಕುರಿತು ಎಲೈ ಕುವರನೆ ಶ್ರೀ ಕೃಷ್ಣನು ಅರ್ಜುನನಿಗೆ ಪರಮ ಮಿತ್ರನಾದ್ದರಿಂದ ಪಾರ್ಥನು ಮಡಿದ  ಸುದ್ಧಿಯನ್ನು ಕೇಳಿ ಇಲ್ಲಿಗೆ ಬಾರದಿರನು,ಕೃಷ್ಣ ಪ್ರಸಾದದಿಂದ ಫಲುಗುಣನ ಪ್ರಾಣವು ಉಳಿಯಬಹುದು, ನೀನು ದುಷ್ಕಾರ್ಯವನ್ನು ಗೈದು ಈಗ ಅಗ್ನಿಯ ಬಾಯಿಗೆ ತುತ್ತಾದ ಮಾತ್ರಕ್ಕೆ ಯೃವ ಮಹತ್ಕಾರ್ಯವನ್ನು ಮಾಡಿದಂತಾಗುತ್ತದೆ? 

ಎಂದು ನಾನಾ ಪ್ರಕಾರವಾಗಿ ದೂಷಿಸಿ ಒಣಗಿದ ಬಾಯುಳ್ಳವನಾಗಿ, ದುಃಖಾಗ್ನಿಯಿಂದ ಬೆಂದು ಬೆಂಡಾಗುತ್ತಿದ್ದಳು. ಈ ರೀತಿಯಲ್ಲಿ ಬಭ್ರುವಾಹನ ಜನನಿಯು ಶೋಕದಿಂದಿರುವಾಗ,ಸರ್ಪರಾಜನ ಕುವರಿಯಾದ ಉಲೂಪಿಯು ಅರ್ಜುನನ ಜೀವವನ್ನು ಮತ್ತೆ ಪಡೆಯಬಹುದಾದ ಯುಕ್ತಿಯೊಂದನ್ನು ಕಂಡುಕೊಂಡುಪಾರ್ಥಜನನ್ನು ಕುರಿತು.  


ಮಗನೆ ಮಡಿದರ್ಜುನಂ ಮಗುಳೇಳ್ವತೆರನಂ ನಿ। 

ನಗೆ ಪೇಳ್ವೆ ನಾನೀಗ ಪಾತಾಳ ಲೋಕದೊಳ್। 

ಖಗರಾಜನೊರಸಿದಹಿ ನಿಕರದಸು ಮರಳ್ವಂತೆ ಫಣಾವರಂ ಬೇಡಿಕೊಳಲು॥ 

ಅಗಜಾರಮಣನಿತ್ತ ಸಂಜೀವಕದ ಮಣಿಯು। 

ರಗಪತಿಯೊಳಿಹುದದಂ ಸತ್ವದಿಂ ತರಬಲ್ಲ। 

ವಿಗಡರಂ ಕಾಣೆನೀ ಮೂಜಗದೊಳೆನೆ ಬಭ್ರುವಾಹನಂ ಖತಿಗೊಂಡನು॥೨॥ 


ಪ್ರತಿಪದಾರ್ಥ :- ಮಗನೆ=ಕುವರನೌ, ಮಡಿದ= ಪ್ರಾಣಬಿಟ್ಟ, ಅರ್ಜುನನು= ಪಾರ್ಥನು, ಮಗುಳ್= ಮತ್ತೆ, ಏಳ್ವ= ಮೇಲಕ್ಕೆ ಏಳತಕ್ಕ,ತೆರನಂ=ಬಗೆಯನ್ನು, ನಾನು=ನಾನಾದರೊ, ಈಗ= ಈ ಸಂದರ್ಭದಲ್ಲಿ, ನಿನಗೆ= ನಿನ್ನೊಡನೆ, ಪೇಳ್ವೆ= ಹೇಳುತ್ತೇನೆ, ಖಗರಾಜನು= ಗರುಡನು, ಒರಿಸಿದ=ಸಂಹಾರಮಾಡಿದ, ಅಹಿ=ಹಾವುಗಳ, ನಿಕರದ= ಸಮುದಾಯದ, ಅಸು= ಜಿವವು, ಮರಳ್ವಂತೆ= ಮತ್ತೆ ಪ್ರಾಪ್ತವಾಗುವಂತೆ, ಫಣಿವರಂ= ವಾಸುಕಿಯು, ಬೇಡಿಕೊಳಲು= ಈಶ್ವರನನ್ನು ಆರಾಧಿಸಲು, ಅಗಜಾರಮಣಂ= ಪರಮೇಶ್ವರನು, ಇತ್ತ= ದಯಪಾಲಿಸಿದ, ಸಂಜೀವಕದಮಣಿಯು= ಸಂಜೀವಕವೆಂಬ ಜೀವರತ್ನವು, ಪಾತಾಳಲೋಕದೊಳು= ನಾಗಲೋಕದೊಳಗೆ,ಉರಗಪತಿಯೊಳು= ಹಾವುಗಳ ರಾಜನಾದ ವಾಸುಕಿಯ ಹತ್ತಿರ, ಇಹುದು= ಇರುವುದು, ಈ ಮೂಜಗದೊಳು= ಈ ಮೂರುಲೋಕಗಳಲ್ಲಿಯೂ, ಸತ್ವದಿಂ= ಶಕ್ತಿಯಿಂದ, ಅದಂ= ಆ ಜೀವಮಣಿಯನ್ನು, ತರಬಲ್ಲ= ಸಾಧಿಸಿಕೊಂಡು ಬರತಕ್ಕ, ವಿಗಡಂ= ಪರಾಕ್ರಮಿಗಳನ್ನು, ಕಾಣೆನು= ನೋಡಲೇ ಇಲ್ಲವು, ಎನೆ= ಎಂದು ಉಲೂಪಿಯು ನುಡಿಯಲು, ಬಭ್ರುವಾಹನಂ= ಪಾರ್ಥಜನು, ಖತಿಗೊಂಡನು= ಕೋಪಗೊಂಡನು. 


ಅ॥ವಿ॥ ಖ=ಆಕಾಶದಲ್ಲಿ,  ಗ=ಗಮಿಸುವುದು, ಖಗರಾಜ( ಷ. ತ. ಸ. )ಖಗ= ಹಕ್ಕಿಗಳ, ರಾಜ= ಒಡೆಯ (ಗರೈಡ) (ಷ. ತ. ಸ.)ಕರ=ಕೈ, ಸೊಂಡಿಲು, ಕಿರಣ, ನಿಕರ= ಸಮೂಹ, ಫಣಿ+ವರ=ಫಣಿವರ ( ಷ. ತ. ಸ.) ಅಗಜಾ+ರಮಣಂ= ಅಗಜಾರಮಣಂ(ಷ. ತ. ಸ. ) ಉರ+ಎದೆಯಲ್ಲಿ,  ಗ+ಗಮಿಸುವುದು(ತೃ. ತ. ಸ.) ಉರಗ+ಸರ್ಪಗಳ, ಪತಿ+ಒಡೆಯ (ಷ. ತ. ಸ. ) ಮೂಜಗಂ( ದ್ವಿ. ಸ. ) 


ತಾತ್ಪರ್ಯ:- ಎಲೈ ಅರ್ಜುನಿಯೆ, ಸತ್ತುಹೋಗಿರುವ ನಿಮ್ಮ ತಂದೆಯು ಮತ್ತೆ ಬದುಕಲು ಸಹಾಯಕವಾದ ಉಪಾಯವೊಂದನ್ನು ನಿನಗೆ ತಿಳೆಸುವೆನು. ಪಾತಾಳ ಲೋಕದಲ್ಲಿರುವ ಸರ್ಪಗಳನ್ನು ಗರುಡನು ಕೊಂದುಹಾಕಿದರೆ ಅವುಗಳ ಪ್ರಾಣವನ್ನು ಪುನಃ ಪಡೆಯಲನುಕೂಲವಾಗಿರಲೆಂದು ನಾಗೇಂದ್ರನಾದ ಆದಿಶೇಷನನ್ನು ಏಶ್ವರನನ್ನು ಬೇಡಿಕೊಳ್ಳಲಾಗಿ ಹರನು ತನ್ನಲ್ಲಿದ್ದ ಸಂಜೀವಕ ರತ್ನವನ್ನು ಆದಿಶೇಷನಿಗೆ ಕೊಟ್ಟನು. ಸರ್ಪರಾಜನು ಪಾತಾಳಲೋಕಕ್ಕೆ ಬಂದು, ಗರುಡನ ಬಾಧೆಯಿಲ್ಲದೆ ಸುಖವಾಗಿ ಇದ್ದಾನೆ. ಈಗ ಆ ಮಣಿಯು ಆದಿಶೇಷನಲ್ಲೆರುವುದು. ಊವನನ್ನು ಗೆದ್ದು ಜೀವರತ್ನವನ್ನು ಸಾಧಿಸಿಕೊಂಡು ಬರತಕ್ಕ ಶೂರಾಗ್ರೇಸರರು ಈ ಮೂರುಲೋಕಗಳಲ್ಲಿಯೂ ಇಲ್ಲವೆಂದು ನುಡಿದಳು. 


ಸಂಜೀವಕದ ಮಣಿಯನೀಗ ತಾರದೊಡೆ ತ। 

ನ್ನಂ ಜನನಿ ಪೆತ್ತಳೇತಕೆ ಮತ್ತೆ ಮಡಿದಿಹ ಧ। 

ನಂಜಯನ ಹರಣಮಂ ಪಡೆವೆನವನೀಯದೊಡೆ ಫಣಿಲೋಕಮಂ ಸುಡುವೆನು॥ 

ಕಂಜಜ ಕಪರ್ದಿಗಳೊಳ್ ತೊಡಕಿದೊಡೊರಲ್ಚುವೆಂ। 

ಭಂಜಿಸುವೆನಖಿಳ ದಿಕ್ಪಾಲಕರಂ ಸೆಣಸಿದೊಡೆ।

ಸಂಜಾತನಾದುದಕೆ ಸಫಲಮಾಯ್ತೆನುತುಬ್ಬಿದಂ ಬಭ್ರುವಾಹನನಂದು॥೩॥ 


ಪ್ರತಿಪದಾರ್ಥ :- ಈಗ= ಈಗಲಾದರೊ, ಸಂಜೀವಕದ ಮಣಿಯನು= ಜೀವರತ್ನವನ್ನು, ತಾರದೊಡೆ= ತರದಿದ್ದರೆ, ಜನನಿ= ಮಾತೆಯು, ತನ್ನ= ನನ್ನನ್ನು,  ಏತಕೆ= ಯಾವಪ್ರಯೋಜನಕ್ಕಾಗಿ,ಪೆತ್ತಳು= ಹಡೆದಳು, ಮಡಿದಿಹ= ಸತ್ತು ಹೋಗಿರತಕ್ಕ ಧನಂಜಯನ= ಪಾರ್ಥನ, ಪ್ರಾಣಮಂ= ಹರಣವನ್ನು, ಮತ್ತೆ=ತಿರುಗಿ, ಪಡೆವೆನು= ಹೊಂದುವೆನು, ಈಯದೊಡೆ= ಜೀವರತ್ನವನ್ನು ಕೊಡದಿದ್ದರೆ, ಫಣಿಲೋಕಮಂ= ನಾಗಲೋಕವನ್ನೇ, ಸುಡುವೆನು= ಸುಟ್ಟು ಬೂದಿಮಾಡುವೆನು, ಕಂಜಜ= ಬ್ರಹ್ಮನಾಗಲಿ, ಕಪರ್ದಿಗಳ್= ಶಿವನೇ ಆಗಿರಲಿ, ತೊಡಕಿದರೆ= ಪ್ರತಿಭಟಿಸಿ ನಿಂತರೆ, ಒರಲ್ಚುವೆಂ= ನೆಲವನ್ನು ಕಚ್ಚುವಂತೆ ಕೆಡವಿಬಿಡುತ್ತೇನೆ, ಸೆಣಸಿದೊಡೆ= ಯುದ್ಧಕ್ಕೆ ಬಂದರೆ, ಅಖಿಳ=ಸಮಸ್ತ,  ದಿಕ್ಪಾಲಕರಂ= ದಿಕ್ಪತಿಗಳನ್ನೂ ಕೂಡ, ಭಂಜಿಸುವೆನು = ಭಗ್ನರನ್ನಾಗಿ ಮಾಡುವೆನು, ಸಂಜಾತನು= ಅರ್ಜುನನ ಹೊಟ್ಟೆಯಲ್ಲಿ ಹುಟ್ಟಿದ್ದಕ್ಕೆ, ಸಫಲಂ= ಪ್ರಯೋ-

ಜನಕರವಾದದ್ದು, ಆಯ್ತು= ಆಗಿಬಿಟ್ಟಿತು,  ಎನುತ= ಎಂದು ನುಡಿಯುತ್ತ,  ಬಭ್ರುವಾಹನಂ= ಪಾರ್ಥಜನು, ಅಂದು= ಆಗ, ಉಬ್ಬಿದಂ= ಹರ್ಷಗೊಂಡನು. 


ಅ॥ವಿ॥ ಫಣವುಳ್ಳದ್ದು=ಫಣಿ, ಫಣಿಲೋಕ(ಷ. ತ. ಸ. ) ಕಂಜಜ=ಕಂ-ನೇರೆನಲ್ಲಿ, ಜ- ಹುಟ್ಟಿದ್ದು  ಕಮಲ ( ಷ. ತ. ಸ. ) ಕಂಜ= ಕಮಲದಲ್ಲಿ, ಜ=ಹುಟ್ಟೆದವನು (ಬ್ರಹ್ಮ) ಸಫಲಂ= ಫಲದಿಂದ ಸಹಿತವಾದದ್ದು (ಬ. ಸ.) 


ತಾತ್ಪರ್ಯ:- ಉಲೂಪಿಯು ಈ ತೆರನಾಗಿ ಹೇಳಿದ ನುಡಿಗಳನ್ನು  ಬಭ್ರುವಾಹನನು ಕೇಳಿ ಕೋಪಾಗ್ನಿಯಿಂದ ಬೆಂದು ತನಿಗೆಂಡಗಳನ್ನು ಕಾರುತ್ತ, ಎಲೈ ಮಾತೆಯೆ, ನಾನು ಹೋಗಿ ಸಂಜೀವಕ ರತ್ನವನ್ನು ತಾರದಿದ್ದರೆ ನನ್ನನ್ನು ಚಿತ್ರಾಂಗದೆಯ ಮಗನೆಂದು ಕರೆಯಬೇಡ, ಈಗಲೆ ಹೋಗಿ ಮೊದಲು ಜೀವಮಣಿಯನ್ನು ತಂದು ಫಲುಗುಣನ ಹರಣವನ್ನು ಹಿಂದಿರುಗಿಸುವೆನು, ಸರ್ಪರಾಜನು ದಿವ್ಯರತ್ನವನ್ನು ಕೊಡದಿದ್ದರೆ,ಪಾತಾಳಲೋಕವನ್ನೆಲ್ಲಾ ಅಗ್ನಿಗೆ ಆಹುತಿ ಮಾಡುವೆನು. ಇಂದ್ರೃದಿ ಅಷ್ಟದಿಕ್ಪತಿಗಳಾಗಲೀ, ಹರನಾಗಲೀ,ಬ್ರಹ್ಮನಾಗಲೀ ಯೃರು ಎದುರಾದರೂ ಅವರನ್ನು ನಿರ್ಮೂಲನ ಮಾಡಿ ಬಿಡುವೆನು. ಈಗ ನಾನು ಅರ್ಜುನನ ಹೊಟ್ಟೆಯಲ್ಲಿ ಹುಟ್ಟಿದ್ದಕ್ಕೆ ಸಾರ್ಥಚವಾಗುವುದು. ಅನುಮಾನವಿಲ್ಲದೆ ಜೀವರತ್ನವನ್ನು 

ತಂದು ಪಾರ್ಥನ ಪ್ರಾಣವನ್ನುಳಿಸುವೆನು. 


ಮರುಳಾಟಮೇಕೆ ನಿನ್ನದಟು ಕೊಳ್ಳದು ಮಗನೆ। 

ಗರಳಮಯದುರಿಯೊಳೆವೆ ಸೀವುದು ಕಣಾ ನೋಡ। 

ಲುರಗಪತಿ ಶೇಷರಾಜನ ಕೋಶದೆಡೆಯೊಳಿಹ ಸಂಜೀವಕದ ಮಣಿಯನು॥ 

ತರಬಲ್ಲನಾವವಂ ಗುಳಿಕ ವಾಸುಕಿ ತಕ್ಷ। 

ಕರ ಶಂಖ ಪದ್ಮ ಕರ್ಕೋಟಕಾದಿಗಳ ಭೀ। 

ಕರ ವಿಷೋತ್ಕರದಿಂದೆ ಕಾಹು ಬಲಿದಿಹುದೆನಲುಲೂಪಿಗವ ನಿಂತೆಂದನು॥೪॥


ಪ್ರತಿಪದಾರ್ಥ :- ಮಗನೆ= ಕುವರನಾದ ಪಾರ್ಥಜನೆ,ಮರುಳಾಟಂ= ಹುಚ್ಚುತನವು(ಅವಿವೇಕವು) ಏಕೆ= ಏನು ಪ್ರಯೋಜನ, ನಿನ್ನ=ನಿನ್ನದಾದ, ಅಧಟು= ಸಾಮರ್ಥ್ಯವು,ಕೊಳ್ಳದು= ಪಾತಾಳಲೋಕದಲ್ಲಿ ಪ್ರಯೋಜನಕ್ಕೆ ಬರಲಾರದು, ನೋಡಲು= ನೋಡಿದಮಾತ್ರದಿಂದಲೆ, ಎವೆ= ಕಣ್ಣುರೆಪ್ಪೆಗಳೆಲ್ಲಾ,ಗರಳಮಯ=ವಿಷದಿಂದ ಕೂಡಿದ, ಉರಿಯೊಳು= ಜ್ವಾ-

ಲೆಯಿಂದ, ಸೀವುದು ಕಣಾ= ಸೀದುಹೋಗುತ್ತದಲ್ಲವೆ, ಆವವಂ= ಯಾವಪರಾಕ್ರಮಿತಾನೆ,ಉರಗಪತಿ= ಸರ್ಪಾಧೀಶನಾದ, ಶೇಷರಾಜನ= ಆದಿಶೇಷನ, ಕೋಶದ=ಖಜಾನೆಯ,(ಬೊಕ್ಕಸದ) ಎಡೆಯೊಳು= ಸ್ಥಾನದಲ್ಲಿ, ಇಹ=ಇರತಕ್ಕ, ಸಂಜೀವಕ-

ದಮಣಿಯನು= ಜೀವರತ್ನವನ್ನು, ತರಬಲ್ಲನು= ತರಲು ಶಕ್ತನಾದವನು,ಗುಳಿಕ=ಗುಳಿಕನೆಂಬವನ,ವಾಸುಕಿ= ವಾಸುಕಿ ಎನ್ನತಕ್ಕ, ತಕ್ಷಕ= ತಕ್ಷಕನೆಂಬ ಹೆಸರುಳ್ಳ, ಶಂಖ= ಶಂಖನೆನ್ನುವನ,ಪದ್ಮ=ಪದ್ಮನೆನ್ನುವನ,ಕರ್ಕೋಟಕಂ= ಕರ್ಕೋಟಕನ, ಆದಿಗಳ= ಮೊದಲಾದವರ, ಭೀಕರ= ಅತಿಭಯಂಕರವಾದ,ವಿಷೋತ್ಕರದಿಂದ= ಹೆಚ್ಚಾದ ವಿಷದಿಂದ, ಕಾವ= ಕಾವಲು, ಬಲಿದು= ಬಲವಾಗಿ,ಇಹುದು= ಇರುವುದು, ಎನಲು= ಎಂದು ನುಡಿಯಲು, ಅವನು= ಆ ಪಾರ್ಥಜನು, ಉಲೂಪಿಗೆ= 

ಉಲೂಪಿಯೊಂದಿಗೆ, ಇಂತು= ಮುಂದೆ ಹೇಳುವಂತೆ, ಎಂದನು=ನುಡಿದನು.  


ಅ॥ವಿ॥ ವಿಷ+ಉತ್ಕರ= ವಿಷೋತ್ಕರ ( ಗು. ಸಂ. ) ಕಾಹು- "ಕಾ" ಎಂಬ ಧಾತುವಿನಿಂದುಂಟಾದ ಭಾವನಾಮ, 


ತಾತ್ಪರ್ಯ:- ಅತ್ಯುತ್ಸಾಹದಿಂದ ಕೂಡಿರುವ ಬಭ್ರುವಾಹನನನ್ನು ನೋಡಿ ಉಲೂಪಿಯು ಎಲೈ ಕುವರನೆ, ನಿನಗೇನು ಭ್ರಾಂತಿಯೋ ಕಾಣೆನು, ಸರ್ಪರಾಜನೆದುರಿಗೆ ನಿಲ್ಲಲು ನಿನಗೆ ಸಾಧ್ಯವೆ? ಅಲ್ಲಿಗೆ ಹೋದರೆ ವಿಷಮಯವಾದ ಉರಿಯನ್ನು ತಪ್ಪಿಸಿಕೊಂಡು ಬರಲು ನಿನ್ನಿಂದಾಗುವುದೆ? ಸರೂಪರಾಜನಾದರೊ, ಆ ಮಣಿಯನ್ನು ತನ್ನ ಭಂಡಾರದೊಳಗಿರಿಸಿ, ಅತಿಯಾದ ವಿಷದಿಂದ ಕೂಡಿರುವ ಭಯಂಕರರಾದ ಗುಳಿಕ, ವಾಸುಕಿ, ತಕ್ಷಕ, ಶಂಖ, ಪದ್ಮ, ಕರ್ಕೋಟಕಾದಿಗಳನ್ನು ಕಾವ-

ಲಿರಿಸಿರುವನು. ಅವರೆಲ್ಲರೂ ಬಹು ಜತನದಿಂದ ಕಾವಲಿರುವರು. 


ಈ ಮಹಾಹಿಗಳ ವಿಷಕಳುಕುವೆನೆ ಯೆನ್ನ ಮಾ। 

ತಾಮಹಂ ಹರಿಗೆ ಹಾಸಿಗೆಯಾದವಂ ಮಂಲೆ। 

ಭೂಮಿಯಂ ಪೊತ್ತವಂ ಶೇಷರಾಜಂ ಗಾಸಿಯಹನೆಂಬ ಭಯಮಲ್ಲದೆ॥ 

ಆ ಮಣಿಯನೀಯದೊಡೆ ಸಪ್ತಪಾತಾಳಮಂ। 

ಸಾಮರ್ಥ್ಯದಿಂದ ಭೇದಿಸಿಕೊಂಡು ಬಂದು ಸು। 

ತ್ರಾಮಸುತನಂ ಬರ್ದುಕಿಸದೆ ಮಾಣ್ದಪೆನೆ ತಾಯೆ ಹೇಳೆಂದೊಡಿಂತೆಂದಳು॥೫॥ 


ಪ್ರತಿಪದಾರ್ಥ :- ತಾಯೆ= ಮಾತೆಯಾದ ಉಲೂಪಿಯೆ, ಆ ಮಹಾಹಿಗಳ= ಆ ದೊಡ್ಡ ಹಾವುಗಳ, ವಿಷಕೆ= ನಂಜಿಗೆ, ಅಳುಕುವೆನೆ= ಹೆದರುತ್ತೇನೆಯೇ, ತನ್ನ=ನನ್ನ, ಮಾತಾಮಹಂ= ತಾಯಿಗೆ ಜನಕನಾಗಿರುವ ಆದಿಶೇಷನೆಂಬ ಸರ್ಪರಾಜನು, ಹರಿಗೆ= ಶ್ರೀಕೃಷ್ಣನಿಗೆ, ಹಾಸಿಗೆಯು= ಹಾಸಿಗೆಯೋಪಾದಿಯಲ್ಲಿ,ಆದವಂ= ಆಗಿದ್ದಾನೆ,ಮೇಲೆ= ಇದೂ ಅಲ್ಲದೆ,ಭೂಮಿಯಂ

= ಭೂಮಂಡಲವನ್ನು, ಪೊತ್ತವಂ= ಹೊತ್ತಿರತಕ್ಕವನು, ಆದ= ಆಗಿರುವ, ಶೇಷರಾಜಂ = ಹಾವುಗಳೊಡೆಯನು, ಘಾಸಿಯಹನು= ಆಯಾಸಗೊಳ್ಳುವನು, ಎಂಬ= ಎನ್ನತಕ್ಕ, ಭಯಂ= ಹೆದರಿಕೆಯು,ಅಲ್ಲದೆ= ಉಂಟಾಗಿದೆಯೆ ಹೊರತು, 

ಆ ಮಣಿಯನು= ಆ ಮಾಣಿಕ್ಯವನ್ನು,ಈಯದೊಡೆ= ಕೊಡದಿದ್ದರೆ, ಸಾಮರ್ಥ್ಯದಿಂದ= ಪರಾಕ್ರಮದಿಂದ, ಸಪ್ತ= ಏಳು,

ಪಾತಾಳಮಂ= ಪಾತಾಳಲೋಕಗಳನ್ನು,ಭೇದಿಸಿಕೊಂಡು = ಸೀಳಿಕೊಂಡು, ಬಂದು=ಬಂದವನಾಗಿ, ಸುತ್ರಾಮಸುತನಂ= ಪಾರ್ಥನನ್ನು,ಬದುಕಿಸದೆ= ಪ್ರಾಣವುಂಟಾಗುವಂತೆ ಮಾಡದೆ, ಮಾಣ್ದಪೆನೆ= ಇರುತ್ತೇನೆಯೆ, ಹೇಳು= ಉಸಿರೈ, ಎಂದೊಡೆ= ಎಂಬುದಾಗಿ ಬಭ್ರುವಾಹನನು ಹೇಳಲು, ಇಂತು= ಮುಂದೆ ಹೇಳುವಂತೆ, ಎಂದಳು= ನುಡಿಯಲಾರಂಭಿಸಿದಳು. 


ಅ॥ವಿ॥ ಮಹ+ಅಹಿ= ಮಹಾಹಿ (ಸ. ದೀ. ಸಂ.)ಸುತ್ರಾಮ+ಕುವರನು= ಸುತ್ರಾಮಕುವರನು(ಷ.ತ.ಸ.)


ತಾತ್ಪರ್ಯ:-ಉಲೂಪಿಯನ್ನು ಕುರಿತು ಎಲೌ ತಾಯೆ ನೀನು ಹೇಳಿದ ಶಂಖ, ತಕ್ಷಕ, ಗುಳಿಕಾದಿಗಳ ಘೋರವಿಷಕ್ಕೆ ನಾನೆಂದಿಗೂ ಹೆದರುವುದಿಲ್ಲ, ನಿಮ್ಮ ತಂದೆಯಾದ ನಾಗೇಂದ್ರನು ಶ್ರೀಮನ್ನಾರಾಯಣನಿಗೆ ಹಾಸಿಗೆಯಾಗಿಯೂ, ನನಗೆ ತಾತನಾಗಿಯೂ ಇರುವುದರಿಂದ ತೊಂದರೆಪಡಿಸುವುದು ಧರ್ಮವೆರುದ್ಧವೆಂಬಭಯವೇ ಅಲ್ಲದೆ ಮತ್ತೇನೂ ಇಲ್ಲವು, ಸರ್ಪರಾಜನು ಮಣಿಯನ್ನು ಕೊಡಲು ಹಿಂದೆಗೆದದ್ದೇ ಆದರೆ ಸಪ್ತಪಾತಾಳಗಳನ್ನು ಭೇದಿಸಿಕೊಂಡು ಜೀವರತ್ನವನ್ನು ತಂದು ಪಾರ್ಥನ ಪ್ರಾಣವನ್ನುಳಿಸದೆ ಬಿಡತಕ್ಕವನೇ ಅಲ್ಲವೆಂಬುದಾಗಿ ಹೇಳಿದನು. 


ಒಂದು ಮೊದಲೊಂಬತ್ತುನೂರು ಕಡೆಯಾದ ಪೆಡೆ। 

ಯಿಂದೆಸೆವ ನಾಗಂಗಳತಿ ವಿಷೋಲ್ಬಣದುರುಗ। 

ವೃಂದ ವೋಲೈಸುವುದು ಸಾಸಿರ ಮೊಗದ ಶೇಷರಾಜನಂ ಪಾತಾಳದ॥ 

ಮಂದಿರದೊಳೊಮ್ಮೊಮ್ಮೆಗರುಡನಲ್ಲಿಗೆ ಬಂದು। 

ಕೊಂದಹಿಗಳಂ ಬರ್ದುಕಿಪೊಡೆ ತೋರಿಸುವರಲ್ಲ। 

ದೆಂದುಂ ತೆಗೆಯರಾ ಮಣಿಯನೆಂದುಲೂಪಿ ನುಡಿಯಲ್ಕಾತ ನಿಂತೆಂದನು॥೬॥ 


ಪ್ರತಿಪದಾರ್ಥ :- ಒಂದು=ಒಂದೆಂಬ ಸಂಖ್ಯೆಯು,ಮೊದಲು= ಮೊದಲ್ಗೊಂಡು, ಒಂಬತ್ತು= ಒಂಬತ್ತೆನ್ನುವ, ನೂರು= ನೂರೆಂಬ ಸಂಖ್ಯೆಯು, ಕಡೆಯಾದ= ಕೊನೆಯಾಗಿರುವ,ಪೆಡೆಯಿಂದೆ= ಹೆಡೆಗಳಿಂದ,ಎಸೆವ= ಥಳಥಳಿಸುವ, ನಾಗಂಗಳು= 

ಹಾವುಗಳು, ಅತಿ= ಬಹು ಹೆಚ್ಚಾದ, ವಿಷೋಲ್ಬಣದ= ಕ್ರೂರವಾದ ನಂಜಿನಿಂದ ಕೂಡಿದ, ಉರಗವೃಂದಂ= ಹಾವುಗಳ ಸಮುದಾಯವು, ಸಾವಿರ ಮೊಗದ= ಸಹಸ್ರ ಮುಖಗಳಿಂದ ಕೂಡಿದ, ಶೇಷರಾಜನಂ= ಋದಿಶೇಷನೆಂಬ ಸರ್ಪಗಳ ದೊರೆಯನ್ನು, ಓಲೈಸುವುದು= ಸೇವೆಯನ್ನ ಮಾಡುತ್ತಿರುವುದು, ಪಾತಾಳದ= ಪಾತಾಳಲೋಕದಲ್ಲಿರತಕ್ಕ, ಮಂದಿರದೊಳು

= ಮನೆಯಲ್ಲಿ, ಒಮ್ಮೊಮ್ಮೆ=ಒಂದೊಂದು ಬಾರಿ, ಗರುಡನು= ಗರುತ್ಮಂತನು, ಅಲ್ಲಿಗೆ= ಆ ನಾಗಲೋಕಕ್ಕೆ, ಬಂದು=

ಐತಂದು, ಕೊಂದ= ಕೊಂದುಹಾಕಿದ, ಅಹಿಗಳಂ= ಹಾವುಗಳನ್ನು, ಬದುಕಿಪಡೆ= ಬದುಕಿಸಲು,ಆ ಮಣಿಯನು= ಆ ಜೀವರತ್ನವನ್ನು, ತೋರಿಸುವರು= ತೋರಿಸುತ್ತಾರೆ, ಅಲ್ಲದೆ= ಅದನ್ನು ಬಿಟ್ಟರೆ, ಎಂದುಂ= ಯಾವಾಗಲೂ, ಆ ಮಣಿಯನು=ಆ ಜೀವರತ್ನವನ್ನು, ತೆಗೆಯರು= ತೆಗೆಯುವುದೇ ಇಲ್ಲ, ಎಂದು=ಎಂಬುದಾಗಿ, ಉಲೂಪಿಯು= ನಾಗಕನ್ನಿಕೆಯು, ನುಡಿಯಲ್ಕೆ= ಹೇಳಲಾಗಿ,ಆತನು= ಆ ಅರ್ಜುನಿಯು, ಇಂತು= ಮುಂದೆ ಹೇಳುವಂತೆ, ಎಂದನು= ನುಡಿದನು. 


ಅ॥ವಿ॥ ವಿಷ+ಉಲ್ಬಣ= ವಿಷೋಲ್ಬಣ (ಗು. ಸ.) ಮೊಗ (ತ್ಭ)ಮುಖ (ತ್ಸ) 


ತಾತ್ಪರ್ಯ:- ಆಗ ಉಲೂಪಿಯು ಎಲೈ ಅರ್ಜುನಿಯೇ ಕೇಳು,ಆ ನಾಗಲೋಕದಲ್ಲಿ ಒಂದು ಹೆಡೆ  ಮೊದಲ್ಗೊಂಡು ಒಂಬತ್ತುನೂರು ಹೆಡೆಗಳುಳ್ಳ ಹಾವುಗಳು ತುಂಬಿವೆ. ಇವುಗಳೆಲ್ಲವೂ ಸಹಸ್ರ ಮುಖವುಳ್ಳ ಆದಿಶೇಷನನ್ನು ಸೇವಿಸುತ್ತ- 

ಲಿರುವುವು, ಅಲ್ಲಿಗೆ ಯಾವಾಗಲಾದರೂ ಗರುಡನು ಬಂದು ಸರ್ಪಗಳನ್ನು ಕೊಂದು ಹೋದಾಗ ಮಾತ್ರ ಆ ಮಣಿಯನ್ನು ತೋರಿಸುವರು, ಉಳಿದ ವೇಳೆಯಲ್ಲಿ ಅದನ್ನು ಈಚೆಗೆ ತೆಗೆಯುವುದೇ ಇಲ್ಲವೆಂದು ನುಡಿಯುತ್ತಲಿರುವುದನ್ನು ಕೇಳಿ 

ಬಭ್ರುವಾಹನನು ತನ್ನ ಜನನಿಯಾದ ಉಲೂಪಿಯನ್ನು ಸಂಬೋಧಿಸಿ,


ಲೇಸನಾಡಿದೆ ತಾಯೆ ಪಾತಾಳದಲ್ಲಿಹ ಮ। 

ಹಾಸರ್ಪ ಸಂಕುಳವನೆಲ್ಲಮಂ ಕೊಂದಳಿದ। 

ವಾಸವನ ಸುತನಂ ಮಡಿದ ವೀರವೃಷಕೇತುವಂ ಬಿದ್ದ ಸೈನಿಕವನು॥ 

ಆ ಸುಮಣಿಯಂ ಕೊಂಡು ಬಂದೆಬ್ಬಿಸಿದ ಬಳಿಕ । 

ಮೀಸಲಾಗಿರ್ದ ಸಂಜೀವಕವನೀವೆಂ ಗ। 

ತಾಸುವಾಗಿರ್ದ ಫಣಿಗಳ್ಗೆಂದೈ ಪಾರ್ಥಜಂ ನುಡಿದೊಡವಳಿಂತೆಂದಳು॥೭॥ 


ಪ್ರತಿಪದಾರ್ಥ :- ತಾಯೆ= ಎಲೌ ಜನನಿಯೆ, ಲೇಸನಾಡಿದೆ= ಬಹು ಚೆನ್ನಾಗಿ ಹೇಳಿದೆ, ಪಾತಾಳದಲ್ಲಿ= ಪಾತಾಳಲೋಕ-

ದೊಳಗೆ, ಇಹ= ನೆಲಸಿರತಕ್ಕ,ಎಲ್ಲಮಂ= ಸಕಲವಾದ, ಮಹಾಸರ್ಪಸಂಕುಲವನು= ದೊಡ್ಡ ಹಾವುಗಳ ಸಮೂಹವನ್ನು, ಕೊಂದು= ಪ್ರಾಣವನ್ನು ಹೋಗಲಾಡಿಸಿಕೊಳ್ಳುವಂತೆ ಮಾಡಿ, ಅಳಿದ= ಪ್ರಾಣವನ್ನು ನೀಗಿಕೊಂಡಿರತಕ್ಕ, ವೃಸವನ= ಇಂದ್ರನ, ಸುತನಂ= ಪಾರ್ಥನನ್ನು, ಮಡಿದ= ಸತ್ತು ಹೋಗಿರುವ, ವೀರ= ಪರಾಕ್ರಮಿಯಾದ, ವೃಷಕೇತುವಂ= ವೃಷಧ್ವಜ-

ನನ್ನೂ, ಬಿದ್ದ= ನೆಲವನ್ನು ಕಚ್ಚಿರತಕ್ಕ, ಸೈನಿಕವನು= ದಳವನ್ನು, ಸಹ, ಆ ಸುಮಣಿಯಂ= ಆ ಜೀವರತ್ನವನ್ನು, ಕೊಂಡು-

ಬಂದು=ತೆಗೆದುಕೊಂಡು ಬಂದು,ಎಬ್ಬಿಸಿದ ಬಳಿಕ= ಬದುಕಿಸಿದ್ದಾದನಂತರ, ಮೀಸಲಾಗಿ= ಸತ್ತವರನ್ನು ಪುನಃ ಬದುಕಿಸ- 

ಲೋಸುಗವೇ,ಇರ್ದ= ಇರತಕ್ಕ, ಸಂಜೀವಕವನು= ಸಂಜೀವಕರತ್ನವನ್ನು, ಗತಾಸುವಾಗಿ= ಪ್ರಾಣಗಳನ್ನು ನೀಗಿಕೊಂಡು, ಇರ್ದ= ಇದ್ದಂಥ, ಫಣಿಗಳ್ಗೆ= ಹಾವುಗಳಿಗೆ, ಈವೆ= ಕೊಟ್ಟುಬಿಡುತ್ತೇನೆ, ಎಂದೈ= ಎಂಬತೆರನಾಗಿ, ಪಾರ್ಥಜಂ= ಬಭ್ರುವಾ-

ಹನನು, ನುಡಿದೊಡೆ= ಹೇಳಲಾಗಿ, ಊವಳು= ಆ ಉಲೂಪಿ, ಇಂತು= ಮುಂದೆ ಹೇಳುವಂತೆ, ಎಂದಳು= ಹೇಳಿದಳು. 


ತಾತ್ಪರ್ಯ:- ಎಲೌ ಮಾತೆಯೇ, ಬಲು ಚೆನ್ನಾಗಿ ಹೇಳಿದೆ, ಪಾತಾಳ ಲೋಕದಲ್ಲಿರುವ ಅಶೇಷವಾದ ಸರ್ಪಗಳನ್ನು ಸಂಹರಿಸಿ ಸಂಜೀವಕ ಮಣಿಯನ್ನು ತಂದು, ಸತ್ತು ಬಿದ್ದಿರುವ ಅರ್ಜುನ ವೃಷಕೇತುಗಳನ್ನೂ ಈ ಅಪಾರವಾದ ಸೈನ್ಯವನ್ನೂ ಬದುಕಿ-

ದನಂತರ ಪಾತಾಳದಲ್ಲಿ ನನ್ನಿಂದ ಸತ್ತು ಬಿದ್ದ ಉರಗಗಳ ಜೀವದಾನಕ್ಕಾಗಿ ಆ ದಿವ್ಯ ಮಣಿಯನ್ನು ಮತ್ತೆ ಆದಿಶೇಷನಿಗೆ ಕೊಟ್ಟು ಕಳುಹಿಸುವೆನು. ಇದರಲ್ಲಿ ಲೇಶವೂ ಅನುಮಾನವಿಲ್ಲೆಂದು ನುಡಿದನು. 


ತನಯ ಕೇಳನ್ಯರೊಳ್ ಕೊಳ್ವ ಕಜ್ಜದ ಮಾಳ್ಕೆ। 

ವಿನಯದಿಂದೆಸಗಿದೊಡೆ ಸಲೆ ಸುಗುಣಮಾದಪುದು। 

ಮೊನೆಯ ಮೇಲಪ್ಪುದಾಯಾಸಮಂತದರಿಂದೆ ನೀನತಕ್ರಮಿಸಬೇಡ॥ 

ತನಗುಂಟು ಕೆಳೆ ಪುಂಡರೀಕನೆಂಬಹಿಯೊರ್ವ। 

ನನುಕೂಲನೆಮ್ಮ ತಂದೆಗೆ ಮಂತ್ರಿ ತಾನೀಗ। 

ನೆನೆದೊಡಿಲ್ಲಿಗೆ ಬರ್ಪನಾತನಂ ಕಳುಹಿ ತರಿಸುವೆನಾ ಮಣಿಯನೆಂದಳು॥೮॥ 


ಪ್ರತಿಪದಾರ್ಥ :- ತನಯ=ಕುವರನೆ, ಕೇಳು=ಲಾಲಿಸು, ವಿನಯದಿಂದ= ನಮ್ರಭಾವದಿಂದ,ಎಸಗಿದೊಡೆ= ಮಾಡಿದ ಹಾಗಾದರೆ,ಸಲೆ=ಚನ್ನಾಗಿ, ಸುಗುಣಂ= ಒಳ್ಳೇ ಗುಣದಿಂದ ಕೂಡಿದ್ದು, ಆದಪುದು= ಆಗುತ್ತದೆ, ಮೊನೆಯಮೇಲೆ= ಕಠಿನೋಕ್ತಿಗಳನ್ನಾಡಿದ ಬಳಿಕ, ಆಯಾಸಂ= ಕಷ್ಟವು, ಅಪ್ಪುದು=ಆಗುತ್ತದೆ, (ಅದರಿಂದ) ಅಂತರದಿಂದ= ಮೃದುನುಡಿಗೂ ಕಠಿನವಚನಕ್ಕೂ ಈ ತೆರನಾದ ಭೇದವಿರುವುದರಿಂದ , ನೀನು = ನೀನಾದರೊ, ಅತಿಕ್ರಮಿಸಬೇಡ= ಮಿತಿಯನ್ನು ಮೀರಬೇಡ, ಪುಂಡರಕನೆಂಬ = ಪುಂಡರೀಕನೆಂಬ ಹೆಸರುಳ್ಳ, ಅಹಿಯೊರ್ವನು= ಒಂದು ಹಾವು, ತನಗೆ= ನನಗಾದರೊ, ಒಳವು= ಬೇಕಾದವನು, ಉಂಟು= ಆಗಿದಾನೆ, ಎಮ್ಮತಂದೆಗೆ= ನಮ್ಮ ತಂದೆಯಾದ ಆದಿಶೇಷನಿಗೆ, ಅನುಕೂಲನು= ಬೇಕಾದವನಾಗಿದಾನೆ,ಮಂತ್ರಿ= ಅವನಿಗೆ ಮುಖ್ಯಾಮಾತ್ಯನು,ತಾನು= ನಾನಾದರೊ,ಈಗ= ಈ ಕಾಲದಲ್ಲಿ, ನೆನೆದೊಡೆ= ಧ್ಯಾನಮಾಡಿದರೆ, ಇಲ್ಲಿಗೆ=ಈ ಎಡೆಗೆ,ಬಪ್ಪನು= ಬರುವನು, ಆತನಂ= ಆ ಪುಂಡರೀಕನನ್ನು, ಕಳುಹಿ= ಹೋಗುವಂತೆ ಒಪ್ಪಿಸಿ, ಆ ಮಣಿಯನು= ಆ ರತ್ನವನ್ನು,  ತರಿಸುವೆನು= ತರಿಸುತ್ತೇನೆ,ಎಂದಳು= ಎಂಬುದಾಗಿ ಉಲೂಪಿಯು ಅರ್ಜುನಿಗೆ ಹೇಳಿದಳು. 


ಅ॥ವಿ॥ ಕಜ್ಜ(ತ್ಭ) ಕಾರ್ಯ ( ತ್ಸ) ಬಪ್ಪನು "ಬರು" ಎಂಬ ಧಾತುವಿನ ಭೂತಕಾಲ, ಪುಂಡರೀಕ=ಹುಲಿ, ಪುಂಡರೀಕನೆಂಬ ಹೆಸರುಳ್ಳ ಸರ್ಪಶ್ರೇಷ್ಠನು,ಬೆಳ್ದಾವರೆ, ಕೆಂದಾವರೆ. ನೆನೆ= ಸ್ಮರಿಸು, ಒದ್ದಿಯಾಗುವುದು. (ಕ್ರಿಯಾರ್ಥಗಳು) 


ತಾತ್ಪರ್ಯ:- ಪಾರ್ಥಜನ ಈ ಪರಿಯಾದ ಶಪಥವನ್ನಾಲಿಸಿದ ನಂತರ ಉಲೂಪಿಯು ಮತ್ತೆ ಅರ್ಜುನಾತ್ಮಜನನ್ನು ಕುರಿತು ಎಲೈ ಬಾಲಕನೆ, ಪರರ ಒಡವೆಯು ನಮ್ಮ ಕೈಗೆ ಬರಬೇಕಾದರೆ ಸವಿನುಡಿಯಿಂದ ಸಾಧ್ಯವು. ನೇನು ಈ ಪರಿ ದುಡುಕಿದರೆ ಉಭಯರಿಗೂ ಬಹಳ ಕಷ್ಟವಾಗುವುದರಿಂದ ನೀನು ಸರ್ವಥಾ ಈ ದುಡುಕುಬುದ್ಧಿಯನ್ನು ಬಿಟ್ಟುಬಿಡು. ಆತುರಪಡಲಾ-

ಗದು, ಸರ್ಪರಾಜನ ಮಂತ್ರಿಯಾದ ಪುಂಡರೀಕನೆಂಬವನು ನನಗೆ ಕೇವಲ ಆಪ್ತನಾಗಿದಾನೆ. ನಾನು ನೆನೆದರೆ ಅವನು ಇಲ್ಲಿಗೆ ಬರುವನು. ಆತನ ಮೂಲಕ ಸಂಜೀವಕ ಮಣಿಯು ಇಲ್ಲಿಗೆ ಬರುವಂತೆ ಮಾಡುವೆನು. ಸ್ವಲ್ಪ ಸುಧಾರಿಸೆಂದು ನುಡಿದಳು. 


ಇಂತೆಂದುಲೂಪಿ ಬಳಿಕಾ ಪುಂಡರೀಕನಂ। 

ಚಿಂತಿಸುವಿನಂ ಬಂದಿದೇಕೆ ಬರಿಸಿದೆಯೆನಲ। 

ನಂತನಲ್ಲಿಗೆ ಪೋಗಿ ನಿನ್ನ ತನುಜೆಯ ಕರ್ಣಾತಾಟಂಕದುಳಿವಿಗಳಿದ॥ 

ಕುಂತೀಕುಮಾರಕಂ ತನ್ನ ರಮಣಂ ಬರ್ದುಕು। 

ವಂತಮೃತ ಸಂಜೀವಕದ ಮಣಿಯನೇವುದೆಂ। 

ದಂತರಿಸದಖಿಳ ವೃತ್ತಾಂತಮಂ ಪೇಳ್ದದಂ ಕೊಂಡು ಬಾ ನಡೆಯೆಂದಳು॥೯॥


ಪ್ರತಿಪದಾರ್ಥ :- ಉಲೂಪಿ= ಉಲೂಪಿಯಾದರೊ,ಇಂತು= ಈ ತೆರನಾಗಿ, ಎಂದು=ಹೇಳಿ, ಆ ಪುಂಡರೀಕನಂ= ಆ ಪುಂಡರೀಕನೆಂಬ ಹಾವನ್ನು, ಸ್ಮರಿಸುವಿನಿಂ= ಚಿಂತಿಸಿದ ಮಾತ್ರಕ್ಕೇ, ಬಂದು= ತನ್ನ ಬಳಿಗೆ ಬಂದವನಾಗಿ, ಇದೇಕೆ= ಯಾವಪ್ರಯೋಜನಕ್ಕಾಗಿ, ಬರಿಸಿದೆ= ನನ್ನನ್ನು ಬರಮಾಡಿದೆ,ಎನಲು= ಎಂದು ಪುಂಡರೀಕನು ಪ್ರಶ್ನೆಯನ್ನು ಮಾಡಲು, ಅನಂತನಲ್ಲಿಗೆ= ಸರ್ಪರಾಜನ ಬಳಿಗೆ, ಪೋಗಿ= ಹೋಗಿ, ನಿನ್ನ =ನಿನ್ನವಳಾದ, ತನುಜೆಯ= ಕುವರಿಯ, ಕರ್ಣತಾಟಂಕದ= ಕರ್ಣಾಭರಣದ, ಉಳಿವ= ಸ್ಥಿರತ್ವವನ್ನು, ಕಳೆದ=ನೀಗಿದ, ಕುಂತೀಕುಮಾರಕಂ = ಕುಂತೀದೇವಿಯ ಸುತನು, ತನ್ನ= ಉಲೂಪಿಯೆಂಬ ನಿನ್ನ ಕುವರಿಯ, ರಮಣಂ= ಕಾಂತನಾದ ಪಾರ್ಥನು, ಬದುಕುವಂತೆ= ಪ್ರಾಣವನ್ನು ಪಡೆಯುವ ತೆರನಾಗಿ, ಮೃತ= ಸತ್ತುಬಿದ್ದವರನ್ನು, ಸಂಜೀವಕದ= ಬದುಕುವಂತೆ ಮಾಡುವ, ಮಣಿಯನು= ಜೀವರತ್ನವನ್ನು, ಈವುದು= ಕೊಡಬೇಕು, ಎಂದು= ಎಂಬುದಾಗಿ, ಆಂತರಿಸದೆ= ಸ್ವಲ್ಪವಾದರೂ ಉಳಿಸದೆ, ಅಖಿಳ= ಸಕಲವಾದ, ವೃತ್ತಾಂತಮಂ = ವರ್ತಮಾನವನ್ನೂ, ಪೇಳ್ದು= ಹೇಳಿದವನಾಗಿ, ಅದಂ= ಆ ರತ್ನವನ್ನು, ಕೊಂಡುಬಾ= ತೆಗೆದುಕೊಂಡು ಬರುವನಾಗು,ನಡೆ= ಹೊರಡು, ಎಂದಳು. 


ಅ॥ವಿ॥ ಕುಂತೀಕುಮಾರಕಂ (ಷ. ತ. ) 


ತಾತ್ಪರ್ಯ:-ತನ್ನ ಮನದಲ್ಲಿ ಆ ಪುಂಡರೀಕನನ್ನು ಧ್ಯಾನಿಸಿದ ಮಾತ್ರಕ್ಕೇ ಆತನು ಬಂದು ಉಲೂಪಿಯ ಎದುರಿಗೆ ನಿಂತವನಾಗಿ, ನಾಗೇಂದ್ರನ ಕುವರಿಯನ್ನು ಕುರಿತು, ಎಲೌ ತಾಯೇ ನನ್ನನ್ನು ಬರಮಾಡಿಕೊಂಡ ಕಾರಣವೇನು? ಎಂಬುದಾಗಿ ಕೇಳಿದನು. ಉಲೂಪಿಯು ಆ ಪುಂಡರೀಕನನ್ನು ನೋಡಿ, ಎಲೈ ಸರ್ಪವರ್ಯನೆ, ಕುಂತೀದೇವಿಯ ಮಗನಾದ ಅರ್ಜುನನ ಮರಣವು ನನ್ನ ಕರ್ಣಾಭರಣ ಮಾಂಗಲ್ಯಗಳನ್ನು ಹೋಗಲಾಡಿಸಿರುವುದೆಂದೂ, ಆ ಪಾರ್ಥನ ಪ್ರಾಣವನ್ನು ಮತ್ತೆ ಪಡೆಯಲು ಸಂಜೀವಕ ಮಣಿಯು ಬೇಕೆಂದೂ ನಾನು ಕೇಳಿದೆನೆಂಬುದಾಗಿ ನಿನ್ನ ಒಡೆಯನೂ ನನ್ನ ತಂದೆಯೂ ಆದ ಆದಿಶೇಷನಿಗೆ ಇಲ್ಲಿಯ ಸಂಗತಿಯನ್ನೆಲ್ಲಾ ತಿಳಿಸಿ ತಡಮಾಡದೆ ಜೀವರತ್ನವನ್ನು ತೆಗೆದುಕೊಂಡು ಬಾರೆಂದು ನುಡಿದು ಬಹುವಾಗಿ ದುಃಖಿಸುತ್ತಲಿದ್ದಳು. 


ಆ ಪುಂಡರೀಕ ಫಣಿ ಬಳಿಕ ದುಃಖಿತೆಯಾದು। 

ಲೂಪಿಯಂ ಸೈತಿಟ್ಟು ಸಂಜೀವಕದ ಮಣಿಗೆ। 

ಪೋಪೆನಾನಹಿಪತಿಯ ಸಮಯಮಂ ಕಾಣ್ಬುದರಿದಲಿ ತಳುವಾಗದಿರದು॥ 

ಈ ಪಾರ್ಥನಂಗ ಕಳಿವಾಗದಿರದನ್ನೆಗಂ। 

ರೂಪು ಕೆಡದಂತೆ ಕಚ್ಚುವೆನೀಗ ಮದ್ವಿಷಂ। 

ವ್ಯಾಪಿಸಲೊಡಲ್ ಕಳಲದೆನೆ ಬಭ್ರುವಾಹನಂ ಕೇಳ್ದು ಮತ್ತಿಂತೆಂದನು॥೧೦॥


ಪ್ರತಿಪದಾರ್ಥ :- ಬಳಿಕ = ಉಲೂಪಿಯು ಈ ತೆರನಾಗಿ ಹೇಳಿದ ಮೇಲೆ, ಆ ಪುಂಡರೀಕ ಫಣಿ= ಆ ಸರ್ಪಶ್ರೇಷ್ಠನಾದ ಪುಂಡರೀಕನು, ದುಃಖಿತೆಯಾದ = ದುಂಖದಿಂದಕೂಡಿದ, ಉಲೂಪಿಯಂ= ಉಲೂಪಿಯನ್ನು, ಸೈಪಿಟ್ಟು=ಸಂತೈಸಿ, ಆಂ= ನಾನಾದರೊ, ಸಂಜೀವಕದ ಮಣಿಗೆ= ಜೀವರತ್ನದ ಸಲುವಾಗಿ, ಪೋಪೆನು= ಹೋಗುತ್ತೇನೆ, ಅಹಿಪತಿಯ= ಸರ್ಪರಾಜನ, ಸಮಯಮಂಕಾಣ್ಬುದು= ಭೇಟಿಯಾಗುವ ಕಾಲವನ್ನು ನಿರೀಕ್ಷಿಸುವುದು,ಅರಿದು=ಅಸಾಧ್ಯವು, ಅಲ್ಲಿ= ಆದಿಶೇಷನ ಸಮಯ ನಿರೀಕ್ಷೆಯಲ್ಲಿ, ತಳುವಾಗದೆ= ತಡವಾಗದೆ, ಇರದು= ಇರುವುದಿಲ್ಲ, ಈ ಪಾರ್ಥನ= ಈ ಧನಂಜಯನ, ಅಂಗಕೆ= ಅವಯವಕ್ಕೆ, ಅಳಿವು= ತೊಂದರೆಯು, ಆಗದೆ ಇರದು= ಆಗದೆ ಇರುವುದಿಲ್ಲವು, ಅನ್ನೆಗಂ= ಅಲ್ಲಿಯವರೆಗೆ, ರೂಪು= ಕಾಂತಿಯು, ಕೆಡದಂತೆ= ಕುಂದದ ತೆರನಾಗಿ, ಕಚ್ಚುವೆನು= ಕಚ್ಚಿಬಿಡುತ್ತೇನೆ, ಈಗ= ಈಗಲಾದರೊ, ಮದ್ವಿಷಂ= ನನ್ನ ನಂಜು, ವ್ಯಾಪಿಸಲು= ಆವರಿಸುವುದರಿಂದ,ಒಡಲ್=ದೇಹವು, ಕಳಲದು= ಕೆಟ್ಟು ಹೋಗುವುದಿಲ್ಲ,ಎನೆ= ಎಂದು ನುಡಿಯಲು, ಬಭ್ರುವಾಹನಂ= ಪಾರ್ಥಜನು, ಕೇಳ್ದು= ಕೇಳಿದವನಾಗಿ, ಮತ್ತೆ=ತಿರುಗಿ, ಇಂತು= ಮುಂದೆ ಹೇಳುವಂತೆ,  ಎಂದನು= ನುಡಿದನು.  


ತಾತ್ಪರ್ಯ:- ಪುಂಡರೀಕನಾದರೊ ಉಲೂಪಿಯ ಕಡುದುಃಖವನ್ನು ನೋಡಿ ತಾನೂ ಸಂಕಟಪಟ್ಟು ಆಕೆಯನ್ನು ಸಮಾಧಾ-

ನಪಡಿಸಿ, ಆ ಉಲೂಪಿಯನ್ನು ಕುರಿತು,  ನಾನಾದರೊ ಜೀವರತ್ನವನ್ನು ತರಲು ಹೋಗುವೆನು, ಆದಿಶೇಷನೊಂದಿಗೆ ಮಾತ-

ನಾಡಲು ತಕ್ಕ ಕಾಲವು ಒದಗುವುದೇ ಕಷ್ಟವು,ಸಮಯ ನಿರೀಕ್ಷಣೆಯನುನು ಮಾಡಬೇಕಾಗಬಹುದು,ನಾನು ಹಿಂದಿರುಗಿ ಬರುವವರೆಗೂ ಈ ಪಾರ್ಥನ ಮೈಯಲ್ಲಿ ಕಾಂತಿಯು ಕುಂದದಂತೆ ಕಚ್ಚಿಹೋಗುವೆನು. ಇಲ್ಲವಾದರೆ ಶರೀರಕ್ಕೆ ಹಾನಿ ಬಂದೀತೆಂದು ನುಡಿದನು. ಆಗ ಬಭ್ರುವಾಹನನು ಈ ಮಾತನ್ನು ಕೇಳಿ.  


ಎಲೆ ಪುಂಡರೀಕ ಕೇಳೀ ಕರ್ಣಸಂಭವಂ। 

ಕಲಿ ಚೆಲ್ವನತಿಬಲಂ ಶುಚಿ ಸುಗುಣಿ ಕೋವಿದಂ। 

ಕುಲವಿವರ್ಧನನೀತನಂಗಮಂ ಕೆಡದಂತೆ ಮೊದಲೆ ನೀ ಕಚ್ಚಿ ಬಳಿಕ ॥ 

ಫಲುಗುಣನ ದೇಹಮಂ ಕಚ್ಚೆನಲೊಡರ್ಚಿ ಫಣಿ। 

ತಿಲಕನವರಿರ್ವರ ಶರೀರಂಗಳಂ ಕಚ್ಚಿ। 

ಸಲೆ ಸಂತವಿಟ್ಟು ನಂಬುಗೆಗೊಟ್ಟು ಬೀಳ್ಕೊಂಡು ಪಾತಾಳಕೈತಂದನು॥೧೧॥


ಎಲೆ ಪುಂಡರೀಕ = ಎಲೈ ಪುಂಡರೀಕನೆ, ಕೇಳು=ಲಾಲಿಸು, ಈ ಕರ್ಣಸಂಭವಂ= ಈ ಕರ್ಣಸುತನಾದರೊ, ಕಲಿ=ಶೂರ, ಚೆಲ್ವನು=ರೂಪವಂತನು, ಅತಿಬಲಂ= ಬಹು ಬಲಿಷ್ಠನು, ಶುಚಿ= ಪವಿತ್ರನಾದವನು,ಸುಗುಣಿ= ಒಳ್ಳೆಯ ಗುಣಗಳಿಂದ ಕೂಡಿರತಕ್ಕವನು, ಕೋವಿದಂ= ಒಳ್ಳೆಯದು ಕೆಟ್ಟದ್ದೆಂಬ ವಿವೇಚನೆಯನ್ನರಿತವನು,ಕೈಲ= ನಮ್ಮ ಚಂದ್ರವಂಶವನ್ನೆಲ್ಲಾ, ವಿವರ್ಧನಂ= ಮೇಲ್ಮೆಯಿಂದ ಮೆರೆಯುತ್ತಿರುವಂತೆ ಮಾಡುವವನು, ನೀಂ=ನೀನು, ಈತನ= ಇಂತಹನ, ಅಂಗಮಂ= ದೇಹವನ್ನು, ಕೆಡದಂತೆ= ಕೆಟ್ಟು ಹೋಗದ ತೆರನಾಗಿ, ಮೊದಲೆ= ಪ್ರಾರಂಭದಲ್ಲಿಯೇ,ಕಚ್ಚಿ= ಕಡಿದು, ಬಳಿಕ =ತರುವಾಯ, ಫಲುಗುಣನ= ಪಾರ್ಥನ, ದೇಹಮಂ= ಅವಯವವನ್ನು, ಕಚ್ಚು= ಕಚ್ಚುಬಿಡು, ಎಂದು= ಎಂದು ನುಡಿಯಲು, ಫಣಿಕುಲ-

ತಿಲಕನು= ಸರ್ಪಶ್ರೇಷ್ಠನಾದ ಪುಂಡರೀಕನು, ಒಡರ್ಚಿ= ಆಗಿಯೇ ಆಗಲೆಂದು ಒಪ್ಪಿ, ಅವರೀರ್ವರ = ಪಾರ್ಥ ಕರ್ಣಸುತ-

ರ,ಶರೀರಂಗಳಂ= ಅವಯವಗಳನ್ನು, ಕಚ್ಚಿ=ಕಡಿದು,ಸಲೆ=ಚನ್ನಾಗಿ, ಸಂತವಿಟ್ಟು = ಸಮಾಧಾನವನ್ನು ಹೇಳಿ, ನಂಬಿಕೆಗೊ-

ಟ್ಟು= ನೆಚ್ಚಿಕೊಂಡಿರುವಂತೆ ಹೇಳಿ, ಬೀಳ್ಕೊಂಡು= ಅವರ ಅಪ್ಪಣೆಯನ್ನು ಪಡೆದು, ಪಾತಾಳಕೆ= ನಾಗಲೋಕಕ್ಕೆ, ಐತಂದನು= ಬಂದನು. 


ತಾತ್ಪರ್ಯ:-ಎಲೈ ಪುಂಡರೀಕನೆ, ಇಲ್ಲಿ ಬಿದ್ದಿರುವ ಕರ್ಣನಂದನನಾದರೊ ಬಹು ಸುಂದರನು,ವೀರನು,ಸುಗುಣಸಾಂದ್ರನು, ಪವಿತ್ರನು,ಸಕಲಶಾಸ್ತ್ರಜ್ಞನು, ಚಂದ್ರ ವಂಶಕ್ಕೆ ಹೆಸರನ್ನು ತರತಕ್ಕವನು, ಆದಕಾರಣ ಈತನ ದೇಹವನ್ನು ಮೊದಲು ಕಚ್ಚಿ ಅನಂತರ ಕಿರೀಟಿಯ ಅಂಗವನ್ನು ಕಚ್ಚೆಂದು ನುಡಿಯಲು ಪುಂಡರೀಕನು ಆ ಪಾರ್ಥಜನ ಇಷ್ಟಾರ್ಥದಂತೆ ವೃಷಕೇತು ಧನಂಜಯರ ಅವಯವಗಳನ್ನು ಕಚ್ಚಿದವನಾಗಿ, ಶಾಂತೋಕ್ತಿಗಳಿಂದ ಅವನನ್ನು ಸಂತೈಸಿ ಜಾಗ್ರತೆಯಲ್ಲಿಯೇ ಸಂಜೀವಕ ಮಣಿಯನ್ನು ತರುವೆನೆಂಬ ನಂಬಿಕೆಯಿತ್ತು ಅವರ ಅನುಜ್ಞೆಯನ್ನು ಪಡೆದು ನಾಗಲೋಕಕ್ಕೆ ತೆರಳಿದನು. 


ಅತಳದಾಶ್ಚರ್ಯಮಂ ವಿತಳದ ವಿಚಿತ್ರಮಂ। 

ಸುತಳದ ಸುರುಚಿಯಂ ಮಹಾತಳದ ಮಣಿಮಯೋ। 

ನ್ನತಿಯಂ ತಳಾತಳದ ತಾಣದತಿಶಯಮಂ ರಸಾತಳದ ರಂಜಿತವನು॥ 

ಪ್ರತಿದಿನದೊಳರಿದರಿಯುತಾ ಪುಂಡರೀಕಫಣಿ। 

ಪತಿ ನೋಡಿ ನೋಡಿ ವಿಸ್ಮಿತನಾಗುತೈದಿದಂ।

 ವಿತತ ರತ್ನ ಪ್ರಭಾ ಶೋಭಿತದ ಪಾತಾಳಲೋಕದಹಿರಾಜನೆಡೆಗೆ॥೧೨॥ 


ಪ್ರತಿಪದಾರ್ಥ :- ಅತಳದ= ಅತಳವೆನ್ನತಕ್ಕ ಲೋಕದ, ಆಶ್ಚರ್ಯಮಂ= ಅಚ್ಚರಿಯನ್ನು, ವಿತಳದ= ವಿತಳವೆನ್ನುವುದರ, ವಿಚಿತ್ರಮಂ= ವೈಚಿತ್ರ್ಯವನ್ನು, ಸುತಳದ= ಸುತಳವೆನ್ನುವುದರ, ಸುರುಚಿಯಂ= ಪ್ರಭೆಯನ್ನು, ಮಹಾತಳದ= ಮಹಾತಳ-

ವೆಂಬ ಪ್ರಪಂಚದ, ಮಣಿಮಯ= ರತ್ನವಿಕಾರವಾದ, ಉನ್ನತಿಯಂ= ಹೆಚ್ಚಿಕೆಯನ್ನೂ, ತಳಾತಳದ= ತಳಾತಳವೆನ್ನುವುದರ, ತಾಣದ= ಪ್ರದೇಶದ, ಅತಿಶಯಮಂ= ಹೆಚ್ಚುಗಾರಿಕೆಯನ್ನು, ರಸಾತಳದ= ರಸಾತಳವೆಂಬ ಲೋಕದ, ರಂಜಿತವನು= ಕಾಂತಿಯನ್ನು, ಪ್ರತಿದಿನದೊಳು= ನಿತ್ಯವೂ, ಅರಿದರಿವುತ= ತಿಳಿದು ತಿಳಿದು ಕೊಳ್ಳುತ್ತಾ,ಆ ಪುಂಡರೀಕಫಣಿಪತಿ= ಆ 

ಪುಂಡರೀಕನೆಂಬ ಸರ್ಪಶ್ರೇಷ್ಠನು, ನೋಡಿ ನೋಡಿ= ಚನ್ನಾಗಿ ನಿರುಕಿಸಿ,ವಿಸ್ಮಿತನು= ಅಕ್ಕರೆಯಿಂದ ಕೂಡಿದವನು, ಆಗುತ= ಆಗಿ, ನಿರತ= ಹೆಚ್ಚಾದ, ರತ್ನ= ಮಣಿಗಳ, ಪ್ರಭಾ= ಕಾಂತಿಯಿಂದ, ಶೋಭಿತದ= ಪ್ರಕಾಶಿಸುತ್ತಲಿರುವ, ಪಾತಾಳಲೋಕದ= ಪಾತಾಳಲೋಕದಲ್ಲಿರತಕ್ಕ,  ಅಹಿಪತಿಯ= ಸರ್ಪರಾಜನ, ಎಡೆಗೆ= ಹತ್ತಿರಕ್ಕೆ,  ತದಿದಂ= ಹೋಗಿ ಸೇರಿದನು. 


ತಾತ್ಪರ್ಯ:- ಅತಳಲೋಕದಚ್ಚರಿಯನ್ನೂ,ವಿತಳಲೋಕದವೈಚಿತ್ರ್ಯಗಳನ್ನೂ,ಸುತಳಲೋಕದ ಕಾಂತ್ಯತಿಶಯವನ್ನೂ, ಮಹಾತಳಲೋಕದ ರತ್ನವೈಭವಗಳನ್ನೂ ,ತಳಾತಳದ ಮಹಿಮೆಯನ್ನೂ, ರಸಾತಳದ ತೇಜಸ್ಸನ್ನೂ, ನೋಡಿ ಅಚ್ಚರಿಗೊಂ-

ಡವನಾಗಿ, ಅತ್ಯಧಿಕ ರತ್ನಕಾಂತಿಯಿಂದ ದೇದೀಪ್ಯಮಾದ ಪಾತಾಳಲೋಕವನ್ನು ಹೊಕ್ಕನು.


ಫಲಿತ ಕಾಂಚನ ವೃಕ್ಷಲತೆಗಳ ಬನಂಗಳಿಂ। 

ಜ್ವಲಿತ ನವರತ್ನ ಸೌಧಂಗಳಂ ಪುರಂಗಳಿಂ। 

ಕಲಿತ ಪೀಯೂಷ ದೀರ್ಘಿಕೆಗಳಿಂ ಕನಕಾರವಿಂದದ ಕೊಳಂಗಳಿಂದೆ॥ 

ಲಲಿತ ಲಾವಣ್ಯದುರಗಾಂಗನೆಯರಿಂ ಸಮಾ। 

ಕುಲಿತಮಾಗಿಹ ಭೋಗವತಿಯ ನದಿಯಿಂದೆ ನಿ। 

ಶ್ಚಲಿತ ಸುಖನಿಲಯಮೆನಿಸಿರ್ದ ಪಾತಾಳಕ್ಕೆ ಪುಂಡರೀಕಂ ಬಂದನು॥೧೩॥ 


ಪ್ರತಿಪದಾರ್ಥ :- ಫಲಿತ= ಫಲಭರಿತವಾದ, ಕಾಂಚನವೃಕ್ಷ= ಚಿನ್ನದ ತರುಗಳ,ಲತೆಗಳ= ಬಳ್ಳಿಗಳ, ಬನಂಗಳಿಂದ= ಉದ್ಯಾನಗಳಿಂದ, ಜ್ವಲಿತ= ಪ್ರಕಾಶಿಸುತ್ತಿರುವ, ನವರತ್ನ= ವಜ್ರವೈಢೂರ್ಯಾದಿಗಳಿಂದ ಕೆತ್ತಿದ, ಸೌಧಂಗಳ= ಮಹಡಿಗ- 

ಳಿಂದ, ಪುರಂಗಳಿಂ= ನಗರಗಳಿಂದ, ಕಲಿತ=ಕೂಡಿರತಕ್ಕ, ಪಿಯೂಷ= ಸುಧಾರಸದ, ದೀರ್ಘಿಕೆಗಳಿಂ= ಕೊಳಗಳಿಂದಲೂ, ಕನಕ=ಸುವರ್ಣಮಯವಾದ, ಅರವಿಂದದ= ತಾವರೆಗಳ ಸಮೂಹದಿಂದ ಕೂಡಿದ, ಕೊಳಂಗಳಿಂದ= ಕಾಸಾರಗಳಿಂದ-

ಲೂ, ಲಲಿತ= ಕೋಮಲೆಯರೂ, ಲಾವಣ್ಯ= ಸೊಬಗಿನಿಂದ ಕೂಡಿದವರೂ ಆದ, ಉರಗಾಂಗನೆಯರಿಂ= ನಾಗಕನ್ನಿಕೆಯರಿಂದ, ಸಮಾಕಲಿತಂ= ಸೇರಿದ್ದು, ಆಗಿಹ= ಆಗಿರತಕ್ಕ, ಭೋಗವತಿಯ = ಭೋಗವತಿಯೆನ್ನುವ, ನದಿಯಿಂ-

ದ= ನದಿಯಮೂಲಕವಾಗಿ, ನಿಶ್ಚಲಿತ= ಶಾಶ್ವತವಾದ, ಸೈಖನಿಲಯಂ= ಸುಖಪರಂಪರೆಯಿಂದ ಕೂಡಿದ್ದು, ಎನಿಸಿರ್ದ= ಎನ್ನಿಸಿಕೊಂಡಿರತಕ್ಕ,ಪಾತಾಳಕ್ಕೆ= ಪಾತಾಳಲೋಕಕ್ಕೆ, ಪುಂಡರೀಕಂ= ಪುಂಡರೀಕನೆಂಬ ಸರ್ಪಶ್ರೇಷ್ಠನು, ಬಂದನು= ಐತಂದನು. 


ಅ॥ವಿ॥ ಬನ(ತ್ಭ) ವನ(ತ್ಸ) ಕನಕ+ಅರವಿಂದ=ಕನಕಾರವಿಂದ(ಸ. ದೀ. ಸಂ.)


ತಾತ್ಪರ್ಯ:- ಆ ಪಾತಾಳಲೋಕವಾದರೋ ಫಲಭರಿತ ಸುವರ್ಣ ತರುಗಳು, ಬಳ್ಳಿಗಳು ಮೊದಲಾದವುಗಳಿಂದ ಕೂಡಿಯೂ, ಪ್ರಕಾಶಗಳಾದ ವಜ್ರ ವೈಢೂರ್ಯಾದಿಗಳಿಂದ ಮೆರೆಯುವ ಮಹಡಿಯ ಮನೆಗಳಿಂದ ತುಂಬಿಯೂ, ಅಮೃತ 

ಪೂರಿತ ಹೊಂಡಗಳಿಂದ ಕೂಡಿದ, ಚಿನ್ನದ ಕಮಲಗಳಿಂದೊಡಗೂಡಿರುವ ಸರೋವರಗಳಿಗೂ ಆಕರವಾಗಿಯೂ, ಬಹು 

ಸುಕುಮಾರಿಯರಾದ ನಾಗಕನ್ನಿಕೆಯರ ವೈಭವದಿಂದೊಪ್ಪುತ್ತಲೂ, ಭೋಗವತಿ ಎಂಬ ನದಿಗೆ ಆಸರೆಯಾಗಿಯೂ ಇತ್ತು. 


ನವರತ್ನಮಯದ ಗೋಪುರದ ಕಾಂತಿಯ ದಿವ್ಯ। 

ಭವನದಿಂ ನಾಗ ವಧುಗಳ ನೃತ್ತಗೀತದು। 

ತ್ಸವದಿಂದ ಪುಣ್ಯ ಗಂಧೋತ್ಕರದ ಪದ್ಮವನ ಪುಷ್ವಾಪಟಿಕೆಗಳಿಂದೆ॥

ವಿವಿದೋಪಚಾರ ಕೃತಪೂಜೆಗಳ ನಾನಾ ವಿ। 

ಭವದಿಂದೆಸೆವ ಮಹಾ ಹಾಟಕೇಶ್ವರನೆಂಬ। 

ಶೆವಲಿಂಗಮಿರೆ ಭೋಗವತಿಯ ತಟದೊಳ್ ಕಂಡು ಪುಂಡರೀಕ ಮಣಿದನು॥೧೪॥ 


ಪ್ರತಿಪದಾರ್ಥ :- ನವರತ್ನಮಯದ = ನವರತ್ನಗಳಿಂದ ಕೂಡಿದ, ಗೋಪುರದ= ಗೋಪುರಗಳ, ಕಾಂತಿಯ= ಪ್ರಕೃಶದ, ದಿವ್ಯ = ಮನೋಹರವಾದ, ಭವನದಿಂ= ಮಂದಿರದಿಂದಲೂ, ನಾಗವಧುಗಳ= ಸರ್ಪಕನ್ನೆಯರ, ನೃತ್ತ= ಕುಣಿಯುವಿಕೆಯು

ಗೀತದ= ಸಂಗೀತ ಮೊದಲಾದವುಗಳ, ಉತ್ಸವದಿಂದ=ವೈಭವದಿಂದಲೂ, ಪುಣ್ಯಗಂಧ= ಸುಕೃತಾಸ್ಪದವಾದ ಪರಿಮಳದ, ಉತ್ಕರದ= ಆಧಿಕ್ಯದಿಂದ ಕೂಡಿದ, ಪದ್ಮವನ= ಕಮಲಗಳಿಂದು ತುಂಬಿರುವ ವನಗಳಿಂದಲೂ,(ಪುಷ್ಪವಾಟಿಕೆಗಳಿಂದ

ಕುಸುಮಬನಂಗಳಿಂದಲೂ) ವಿವಿಧ= ತಂಡತಂಡವಾದ, ಉಪಚಾರ= ಉಪಚಾರಗಳಿಂದ, ಕೃತ= ರಚಿಸಲ್ಪಟ್ಟಿರುವ, ಪೂಜೆಗಳ= ಸಪರ್ಯೆಗಳ, ನಾನಾ= ವಿಧವಿಧವಾದ, ವಿಭವದಿಂದ= ಸಂಭ್ರಮದಿಂದ,  ಎಸೆವ= ಹೊಳೆಯುವ,ಮಹಾ-

ಹಾಟಕೇಶ್ವರನೆಂಬ= ಹಾಟಕೇಶ್ವರನೆಂಬ ಹೆಸರಿನ, ಶಿವಲಿಗಂ= ಹರಲಿಂಗವು, ಭೋಗವತಿಯ ತೀರದೊಳು= ಭೋಗವತೀ

ನದಿಯ ದಡದಲ್ಲಿ, ಇರೆ= ನೆಲಸಿರಲಾಗಿ, ಪುಂಡರೀಕಂ= ಪುಂಡರೀಕನೆಂಬ ಸರ್ಪಶ್ರೇಷ್ಠನು,  ಕಂಡು= ನೋಡಿ, ಮಣಿದನು= 

ನಮಸ್ಕರಿಸಿದನು. 


ತಾತ್ಪರ್ಯ:- ಆ ಭೋಗವತೀ ನದಿಯ ದಡದಲ್ಲಿ ರತ್ನಖಚಿತವಾದ ಗೋಪುರಗಳಿಂದೊಡಗೂಡಿದ ಆಲಯವೊಂದರಲ್ಲಿ ನಾಗವಧುಗಳ ನೃತ್ತಗೀತಾದಿ ವೈಭವಗಳಿಂದಲೂ,ಸುವಾಸನೆ ಬೀರುವ ತೃವರೆ ಹೂಗಳು, ಕುಸುಮೋದೂಯಾನಗಳು, ಇವುಗಳಿಂದ ಕೂಡಿಕೊಂಡು, ಬಗೆಬಗೆಯೃದ ಪೂಜೆಗಳನ್ನು ಕೈಕೊಳ್ಳುತ್ತಾ ಮೆರೆಯುತ್ತಿರುವ ಹಾಟಕೇಶ್ವರನೆಂಬ ಶಿವಲಿಂಜವು ಇರಲು ಪುಂಡರೀಕನು ನೋಡಿ ನಮಸ್ಕಾರ ಮಾಡಿ ಮುಂದೆ ಹೊರಟು ಆದಿಶೇಷನ ಅರಮನೆಯನ್ನು ಪ್ರವೇಶಿಸಿದನು. 


ದಿವ್ಯಭವನದೊಳನೇಕಾಸುರ ಸುರಾದಿ ನಿಖಿ।

ಳ ವ್ಯಾಳ ವೃತನಾಗಿ ವರ ಫಣಾಮಣಿ ಸಹ। 

ಸ್ರವ್ಯೂಹದರ್ಚಿಯಿಂದುರು ಕಾಯಕಾಂತಿಯಿಂ ದೇದೀಪ್ಯಮಾನನಾಗಿ॥ 

ಅವ್ಯಾಕುಲದೊಳಚ್ಯುತ ಧ್ಯಾನದಿಂದೆ ಕ। 

ರ್ತವ್ಯದಿಂದವನಿಯಂ ತಾಳ್ದನರ್ಘ್ಯೋತ್ತಮ। 

ದ್ರವ್ಯಕಧಿಪತಿಯಾಗಿ ರಂಜಿಸುವ ಶೇಷನೋಲಗಕುರುಗನೈತಂದನು॥೧೫॥ 


ಪ್ರತಿಪದಾರ್ಥ :- ದಿವ್ಯ= ದೇವತೆಗಳಿಗೆ ಒಪ್ಪಿಕೆಯಾದ, ಭವನದೊಳು= ಮಂದಿರದಲ್ಲಿ,ಅನೇಕ= ಬಹುಜನಗಳಿಂದ, ಅಸುರ= ರಕ್ಕಸರು, ಸುರ= ಬೃಂದಾರಕೋತ್ತಮರು,ಆದಿ= ಮೊದಲಾದವರಿಂದಲೂ,ನಿಖಿಳ= ಸಕಲ, ವ್ಯಾಳ= ಹಾವುಗಳಿಂದಲೂ,ವೃತನಾಗಿ= ಸುತ್ತುಗಟ್ಟಲ್ಪಟ್ಟವನಾಗಿ, ವರ= ಶ್ರೇಷ್ಠನಾದ, ಫಣಾ= ಹಣೆಗಳಲ್ಲಿರತಕ್ಕ,(ಹೆಡೆಗಳೊಳಗಿ-

ರುವ) ಮಣಿಸಹಸ್ರವ್ಯೂಹದ= ಸಾವಿರ ರತ್ನ ಸಮುದಾಯದ, ಅರ್ಚಿಯಿಂ= ತೇಜಸ್ಸಿನಿಂದ ಕೂಡಿದ, ಉರು=ಅಧಿಕವಾದ, ಕಾಯ=ದೇಹದ, ಕಾಂತಿಯಿಂ= ಪ್ರಕಾಶದಿಂದ,ದೇದೀಪ್ಯಮಾನನಾಗಿ=ಪ್ರಕಾಶದಿಂದ ಕೂಡಿ, ಅವ್ಯಾಕುಲದೊಳು= ಸ್ಥಿರಚಿತ್ತ-

ದಿಂದ, ಅಚ್ಯುತ= ನಾರಾಯಣನ, ಧ್ಯಾನದಿಂದ = ಸ್ಮರಣೆಯಿಂದ,ಕರ್ತವ್ಯದಿಂದ= ಮಾಡಬೇಕಾದ ಕೆಲಸದಿಂದ, ಅವನಿಯಂ=ಭೂಮಂಡಲವನ್ನು, ತಾಳ್ದು= ಹೊಂದಿ, ಅನರ್ಘ್ಯ= ಅಪರೂಪವಾದ,ಉತ್ತಮ= ಮೇಲ್ಮೆಯನ್ನೈದಿದ, ದ್ರವ್ಯಕೆ= ಹಣದ ರಾಶಿಗೆ, ಅಧಿಪತಿಯಾಗಿ=ಒಡೆಯನಾಗಿ, ರಂಜಿಸುವ= ಹೊಳೆಹೊಳೆವ, ಶೇಷನ= ಸರ್ಪರಾಜನ, ಓಲಗಕೆ= ಸಭಾಭವನಕ್ಕೆ, ಉರಗನು= ಪುಂಡರೀಕನು, ಐತಂದನು= ಬಂದನು. 


ತಾತ್ಪರ್ಯ:- ಆ ರಾಜಮಂದಿರದಲ್ಲಿ ಅನೇಕ ಸುರಾಸುರರಿಂದಲೂ, ಸರ್ಪಾನೇಕಗಳಿಂದಲೂ, ಕೂಡಿಕೊಂಡು ಸಹಸ್ರ ಹೆಡೆ- 

ಗಳಲ್ಲಿಯೂ ಇರುವ ಸಾವಿರಾರು ರತ್ನಗಳ ಕಾಂತೆಯಿಂದ ಮೆರೆಯುತ್ತ ಅಪರಿಮಿತವಾದ ಐಸಿರಿಯಿಂದೊಡಗೂಡಿದವನಾಗಿ ಸಭಾ ಮಂಟಪವನ್ನಲಂಕರಿಸಿರುವ ಸರ್ಪರಾಜನ ಸಭಾಭವನವನ್ನು ಪ್ರವೇಶಿಸಿದನು. 


ಪುಂಡರೀಕಂ ಸಮಯಮರಿದುರಗ ರಾಜನಂ। 

ಕಂಡೆರಗಿ ನುಡಿದನವಧರಿಸೆಲೆ ಫಣೀಂದ್ರ ಭೂ।

ಮಂಡಲದ ರಾಯರೊಳ್ ಪಾಂಡುಸುತ ಕೌರವರ್ಗಾದುದಾಹವಮದರೊಳು॥ 

ದಿಂಡುದರಿದರಹಿತರಂ ಭೀಷ್ಮನಂ ಕೊಂದನಾ। 

ಖಂಡಲಾತ್ಮಜನದರ ಪಾತಕೆ ನೃಪತಿ ಕೈ। 

ಕೊಂಡನಚ್ಯುತನಾಜ್ಞೆಯಿಂ ಕ್ರತುವನಾಯ್ತು ಗಂಗಶಾಪಮರ್ಜುನಂಗೆ॥೧೬॥ 


ಪ್ರತಿಪದಾರ್ಥ :- ಪುಂಡರೀಕಂ= ಪುಂಡರೀಕನೆಂಬ ಸರ್ಪವರ್ಯನು, ಸಮಯಂ= ದೊರೆಯೊಂದಿಗೆ ಮಾತನಾಡಲನು- 

ಕೂಲವಾದ ಕಾಲವನ್ನು, ಅರಿದು=ತಿಳಿದು, ಉರಗರಾಜನಂ= ಸರ್ಪಾಧೀಶನನ್ನು, ಕಂಡು= ಈಕ್ಷಿಸಿ,  ಎರಗಿ= ನಮಸ್ಕರಿಸಿ, 

ಎಲೆ ಫಣೀಂದ್ರ= ಎಲೈ ಆದಿಶೇಷನೆ, ಅವಧರಿಸು= ನನ್ನ ವಿಜ್ಞಾಪನೆಯನ್ನಾಲಿಸು, ಭೂಮಂಡಲದ= ಪ್ರಪಂಚದ, ರಾಯರೊಳು= ಅರಸರಲ್ಲಿ, ಪಾಂಡುಸುತಕೌರವರ್ಗೆ= ಪಾಂಡವರಿಗೂ ಕೌರವರಿಗೂ, ಆಹವಂ= ಕಾಳಗವು, ಆದುದು= 

ಉಂಟಾಯಿತು, ಅದರೊಳು= ಆ ಯುದ್ಧದಲ್ಲಿ, ಅಖಂಡಲಾತ್ಮಜನು= ಫಲುಗುಣನು, ಅಹಿತರಂ= ವೈರಿಗಳನ್ನು, ದಿಂಡು-

ದರಿದು= ಶರೀರವನ್ನು ಸೀಳಿ, ಭೀಷ್ಮನಂ= ಗಂಗಾಪುತ್ರನನ್ನು, ಕೊಂದನು= ವಧೆಸಿದನು,ನೃಪತಿ= ಯುಧಿಷ್ಠಿರನು,  ಅವರ= 

ಕೌರವಾದಿಗಳನ್ನೂ, ಭೀಷ್ಮನೇ ಮೊದಲಾದವರನ್ನೂ,ಕೊಂದ=ಸಂಹರಿಸಿದ, ಪಾತಕಕೆ= ಕೊಲೆಯ ಪಾಪವೆಲ್ಲಾ ಹೋಗುವು-

ದಕ್ಕಾಗಿ, ಕ್ರತುವನು= ಅಶ್ವಮೇಧಮಹಾ ಯಾಗವೊಂದನ್ನು, ಅಚ್ಯುತನ= ಕೃಷ್ಣಸ್ವಾಮಿಯ,ಆಜ್ಞೆಯಿಂ= ಅನುಜ್ಞೆಯನ್ನು ಕೊಟ್ಟದ್ದರಿಂದ, ಕೈಕೊಂಡನು=ಪ್ರಯತ್ನ ಮಾಡಿದನು, ಅರ್ಜುನಂಗೆ=ಪಾರ್ಥನಿಗೆ,ಗಂಗಾಶಾಪಂ= ದೇವಗಂಗೆಯ ಶಾಪವು,

ಆದುದು= ಉಂಟಾಯಿತು, ಎಂದನು= ಎಂಬುದಾಗಿ ಹೇಳಿದನು. 


ಅ॥ವಿ॥ ಫಣಿ+ಇಂದ್ರ=ಫಣೀಂದ್ರ (ಸ.ದೀ. ಸಂ. ) ದಿಂಡು+ತರಿದು=ದಿಂಡುದರಿದು (ವ್ಯಂಜನ ಸಂಧಿ) ಆತ್ಮ=ತನ್ನಲ್ಲಿ, ಜ+ ಹುಟ್ಟಿದವನು (ಷ.ತ.) ಅಖಂಡಲ= ದೇವೇಂದ್ರನ, ಆತ್ಮಜ= ಮಗನು(ಅರ್ಜುನ, ಷ. ತ. ) 


ತಾತ್ಪರ್ಯ:- ಸಮಯವರಿತು ಆ ರಾಜನಿಗೆ ಅಡ್ಡಬಿದ್ದು ಎಲೈ ಫಣಿರಾಯನೇ! ಕೇಳು, ಭೂಲೋಕದಲ್ಲಿ ಕೌರವರಿಗೂ ಪಾಂಡವರಿಗೂ ಯುದ್ಧ ನಡೆದು ಅದರಲ್ಲಿ ಪಾಂಡುತನಯರಿಂದ ಧಾರ್ತರಾಷ್ಟ್ರರೆಲ್ಲಾ ಹತರಾದರು. ಆ ಕದನದಲ್ಲಿಯೇ ಗಂಗಾಪುತ್ರನಾದ ಭೀಷ್ಮನನ್ನು ಅರ್ಜುನನು ಕೊಂದುಹಾಕಿದನು. ಕುರುಪಾಂಡವರಿಗೆ ದ್ರೋಣ, ಭೀಷ್ಮೃದಿಗಳುಕೂಡ ಹತರಾದರು, ಆ ಬಳಿಕವೇ ಪಾಂಡವರೇ ಹಸ್ತಿನಾವತಿಗೆ ಚಕ್ರವರ್ತಿಗಳಾದರು. ಯುದ್ಧದಲ್ಲಿ ದಾಯಾದರನ್ನೂ, ಗುರಗಳನ್ನೂ ಕೊಂದ ಪಾಪ ಪರಿಹಾರಕ್ಕಾಗಿ ಕೃಷ್ಣನ ಪ್ರೇರಣೆಯಿಂದ ಅಶ್ವಮೇಧಯಾಗವನ್ನು ಮಾಡಲುಜ್ಜುಗಿಸಿ ಕುದುರೆಯ ಹಿಂದೆ ಅರ್ಜುನನನ್ನು ಅದರ ಬೆಂಗಾವಲಿಗಾಗಿ ಕಳುಹಿದನು. ಅಶ್ವರಕ್ಷಣೆಯನ್ನು ಮಾಡುತ್ತಾ ದೇಶಗಳನ್ನು ಸುತ್ತುತ್ತಿದ್ದನು. ಗಂಗಾದೇವಿಯು ತನೂನ ಮಗನೃದ ಭೀಷ್ಮನನ್ನು ಅರ್ಜುನನು ಯುದ್ಧದಲ್ಲಿ ಕೊಂದನೆಂದು ತಿಳಿದು ಬಹುವಾಗಿ ದುಃಖಿಸಿ ನನ್ನ ಮಗನನ್ನು ಕೊಂದ ಕಿರೀಟಿಯ ತಲೆಯನ್ನು ಅವನ ಸುತನು ಛೇದಿಸಿಬಿಡಲೆಂಬುದಾಗಿ ಶಾಪವನ್ನು ಕೊಟ್ಟಳು. ಪಾರ್ಥನು ನಾನಾದೇಶಗಳನ್ನು ಸುತ್ತಿ ಸುತ್ತಿ ಕೊನೆಗೆ ತನ್ನ ಮಗನಾದ ಬಭ್ರುವಾಹನನ ರಾಜಧಾನಿಯ ಬಳಿಗೆ ಬಂದನು. ಅಲ್ಲಿ ಪಾರ್ಥ ಬಭ್ರುವಾಹನನಿಗೆ ಘೋರ ಯುದ್ಧವಾಯಿತು. 


ಆ ಜಾಹ್ನವಿಯ ಶಾಪದಿಂ ಬಭ್ರುವಾಹನಂ। 

ವಾಜಿಸಹಿತೈದಿದ ಧನಂಜಯನ ತಲೆಯಂ ಮ। 

ಹಾಜಿಯೊಳ್ ತರಿಯೆ ಪತಿಶೋಕಮಂ ತಾಳಲಾರದೆ ನಿನ್ನ ಮಗಳುಲೂಪಿ॥ 

ತೇಜದಿಂದೆಸೆವ ಸಂಜೀವಕದ ಮಣಿಯಂ ಪ್ರ। 

ಯೋಜನಕೆ ತಹುದೆಂದು ಕಳುಹಿದೊಡೆ ಬಂದೆನೀ। 

ವ್ಯಾಜದಿಂದೆ ನೋಡೆನುತೆ ಕೊಟ್ಟನವಳ ಕುರುಹಂ ಪನ್ನಗೇಶ್ವರಂಗೆ॥೧೭॥ 


ಪ್ರತಿಪದಾರ್ಥ:- ವಾಜಿಸಹಿತ= ಅಶ್ವಸಮೇತನಾಗಿ,ಐದಿದ= ಕುದುರೆಯ ಬೆಂಗಾವಲಿನ ಸಲುವಾಗಿ ಬಂದ, ಧನಂಜಯನ= ಫಲುಗುಣನ, ತಲೆಯಂ= ಶಿರಸ್ಸನ್ನು ,ಬಭ್ರುವಾಹನಂ= ಪಾರ್ಥಸುತನು,ಮಹಾಜಿಯೊಳ್= ದೊಡ್ಡ ಯುದ್ಧದಲ್ಲಿ, ಆ ಜಾಹ್ನವಿಯ = ಆ ಸುರನದಿಯ, ಶಾಪದಿಂದ= ಕೊಟ್ಟವರದಿಂದ,ತರಿಯೆ= ಛೇದಿಸಲು, ನಿನ್ನ ಮಗಳು= ನಿನ್ನ ಸುತೆಯಾದ ಉಲೂಪಿಯು, ಪತಿಶೋಕಮಂ= ಗಂಡನು ಸತ್ತ ದುಃಖವನ್ನು, ತಾಳಲಾರದೆ= ಸಹಿಸಲಾರದೆ, ತೇಜದಿಂದ= ಹೆಚ್ಚಾದ ಕಾಂತಿಯಿಂದ, ಎಸೆವ=ಹೊಳೆಯುವ, ಸಂಜೀವಕದ ಮಣಿಯನು= ಜೀವರತ್ನವನ್ನು,  ಪ್ರಯೋಜನಕೆ= ಪಾರ್ಥನನ್ನು ಜೀವ

-ಸಹಿತನಾಗುವಂತೆ ಮಾಡಲು, ತಹುದು= ತರಬೇಕು, ಎಂದು= ಎಂಬುದಾಗಿ, ಕಳುಹಿದೊಡೆ= ಕಳುಹಿಸಲಾಗಿ, ಈ ವ್ಯಾಜದಿಂದ= ಈ ನಿಮಿತ್ತದಿಂದ, ಇದೆ=ಇಗೊ, ನೋಡು=ಈಕ್ಷಿಸು, ಎನುತ= ಎಂದು ನುಡಿಯುತ್ತ,ಫಣೀಶೂವರಂಗೆ= ಆದಿಶೇಷನಿಗೆ, ಅವಳ= ಆತನ ಕುವರಿಯ,ಸಂಬಂಧದ, ಕುರುಹಂ= ಗುರುತನ್ನು,ಇತ್ತನು= ಕೊಟ್ಟನು. 


ಅ॥ವಿ॥ ಫಣಿ=ಹಾವುಗಳ, ಗಣ=ಗುಂಪು -ಫಣಿಗಣ( ಷ. ತ. ಸ.) ಫಣಿಗಣದ+ಈಶ್ವರ ( ಷ. ತ. ಸ.) ಗಣ+ಈಶ್ವರ =ಗಣೇಶ್ವರ( ಗು. ಸಂ ) 


ತಾತ್ಪರ್ಯ:- ಗಂಗಾಂಬಿಕೆಯ ಕ್ರೂರವಾದ ಶಾಪದ ಬಲದಿಂದ ಬಭ್ರುವಾಹನನು ಅರ್ಜುನನ ತಲೆಯನ್ನು ಕತ್ತರಿಸಿ ಹಾಕಿದನು. ಈ ಧನಂಜಯನ ಮರಣವಂ ನಿನ್ನ ಕುವರಿಯೂ ಅರ್ಜುನನ ಮಡದಿಯೂ ಆದ ಉಲೂಪಿಯನ್ನು ಅಪಾರ ಶೋಕ ಸಾಗರದಲ್ಲಿ ಮುಳುಗಿಸಿರುವುದು. ಕಿರೀಟಿಯ ಜೀವವನ್ನು ಮತ್ತೆ ಪಡೆದು ಸಂತೋಷದ ಕಡಲನ್ನೈದಬೇಕೆಂಬ ಇಚ್ಛೆಯಿಂದ ನಿನ್ನ ತನೂಜೆಯಾದ ಉಲೂಪಿಯು ನಿನ್ನಲ್ಲಿರುವ ಸಂಜೀವಕ ಮಣಿಯನ್ನು ತೆಗೆದುಕೊಂಡು ಬಾರೆಂದು ನನ್ನನ್ನು ಕಳುಹಿಸಿರುವಳು. ನನ್ನ ಮಾತು ಸಟೆಯೆಂದೆಣಿಸಕೂಡದೆಂದು ನುಡಿದು ಉಲೂಪಿಯು ಕೊಟ್ಟಿದ್ದ ಕುರುಹುಗಳನ್ನು

( ಆಭರಣಗಳನ್ನು) ಸರ್ಪರಾಜನ ಕೈಯಲ್ಲಿ ಕೊಟ್ಟನು. 


ಆ ಪುಂಡರೀಕನಿಂತೆಂದುರಗ ರಾಜಂಗು। 

ಲೂಪಿ ಕಳುಹಿದ ಕರೂಣಕಂಠ ಭೂಷಣದ ಸೂವ। 

ರೊಪಮಂ ಮುಂದರಿಸಿ ನಿನ್ನ ನಿಜ ಜಾಮಾತನರ್ಜುನಂ ಸುಜನನಿಳೆಗೆ॥ 

ಶ್ರೀಪತಿಯ ಸಖನಿಂದ್ರಸೂನು ಧರ್ಮಾನುಜಂ। 

ಭೂಪಾಲರೊಳ್ ಪೆಸರ್ವಡೆದವಂ ಜೀವಿಸೆ ಪ। 

ರೋಪಕಾರಂ ಪೊಲ್ಲಮಲ್ಲ ನಿನಗದರಿಂದೆ ಕುಡುವುದು ಮಣಿಯನೆಂದನು॥೧೮॥ 


ಪ್ರತಿಪದಾರ್ಥ :- ಆ ಪುಂಡರೀಕನು= ಆ ಪುಂಡರೀಕನೆಂಬ ಸರ್ಪಶ್ರೇಷ್ಠನು,ಇಂತು= ಈ ಪರಿಯಾಗಿ,ಎಂದು= ನುಡಿದು, ಉಲೂಪಿ= ಆದಿಶೇಷನ ಕುವರಿಯು, ಕಳುಹಿದ= ಕಳುಹಿಸಿಕೊಟ್ಟ, ಕರ್ಣ= ಕಿವಿಯಲ್ಲಿಟ್ಟು ಕೊಳ್ಳುವ, ಕಂಠ= ಕುತ್ತಿಗೆ ಹಾಕಿ-

ಕೊಳ್ಳುವ, ಭೂಷಣದ= ಒಡವೆಗಳ, ಸ್ವರೂಪಮಂ= ಆಕೃತಿಯನ್ನು,ಉರಗರಾಜಂಗೆ= ಸರ್ಪರಾಜಂಗೆ, ಮುಂದೆ= ಎದುರಾಗಿ, ಇರಿಸಿ= ಇಟ್ಟು, ನಿನ್ನ = ನಿನ್ನವನಾದ, ನಿಜ= ಸ್ವಕೀಯವಾದ, ಜಾಮಾತನು= ಅಳಿಯನಾದ ಪಾರ್ಥನು,ಇಳೆಗೆ= ಭೂಮಂಡಲದಲ್ಲೆಲ್ಲಾ, ಸುಜನನು= ಮೇಲಾದವನು,ಶ್ರೀಪತಿಯ= ಲಕ್ಷ್ಮೀಕಾಂತನಾದ ಕೃಷ್ಣಮೂರುತಿಯ, ಸಖನು= ಸ್ನೇಹಿತನು, ಇಂದ್ರಸೂನು= ಇಂದ್ರನ ಕುವರನು, ಧರ್ಮಾನುಜಂ= ಯುಧಿಷ್ಠಿರನ ಸಹಜಾತನು, ಭೂಪಾಲರೊಳ್= ಅರಸುಗಳ ಸಮುದಾಯದಲ್ಲೆಲ್ಲಾ, ಪೆಸರ್ವಡೆದವಂ= ಪ್ರಸಿದ್ಧನಾದವನು,ಜೀವಿಸೆ= ಪ್ರಾಣಗಳನ್ನು ತಾಳಿದ್ದರೆ, 

ಪರೋಪಕಾರಂ= ಇತರರಿಗೆ ನೆರವಾಗತಕ್ಕವನು,ನಿನಗೆ= ನಿನಗಾದರೊ,ಪೊಲ್ಲಂ= ಬೇರೆಯಾದವನಲ್ಲ, ಅದರಿಂದ= ಆ ನಿಮಿತ್ತದಿಂದ, ಮಣಿಯನು= ಜೀವರತ್ನವನ್ನು, ಈವುದು= ಕೊಡುವುದು,ಎಂದನು= ಎಂದು ನುಡಿದನು. 


ಅ॥ವಿ॥ಧರ್ಮ+ಅನುಜಂ=ಧರ್ಮಾನುಜಂ ( ಸ. ದೀ. ಸಂ.) ಪರ+ಐಪಕಾರ= ಪರೋಪಕಾರ( ಗು. ಸಂ.)


ತಾತ್ಪರ್ಯ:-ಎಲತ ನಾಗೇಂದ್ರನೆ ಅರ್ಜುನನು ನಿನಗೆ ಅಳಿಯನಾಗಬೇಕು, ಲೋಕದಲ್ಲೆಲ್ಲಾ ಮೇಲಾದವನು. ಲಕ್ಷ್ಮೀಕಾಂತನಾದ ಕೃಷ್ಣನಿಗೆ ಪರಮಮೆತ್ರನು. ದೇವೇಂದ್ರನ ಮಗನು.  ಧರ್ಮಾತ್ಮನಾದ ಧರ್ಮರಾಯನ ತಮ್ಮನು. ರಾಜಾಗ್ರಣಿಯು. ಅರ್ಜುನನನ್ನು ಬದುಕಿಸುವುದರಿಂದ ಪರೋಪಕಾರ ಮಾಡಿದ ಫಲವು ನಿನಗುಂಟಾಗುವುದರಿಂದ ಸಂಜೀವಕ ಮಣಿಯನ್ನು ಕೊಡೆಂದು ಹೇಳಿದನು.


ಶೇಷರಾಜಂ ಬಳಿಕ ತನ್ನ ತನುಜೆಯ ಕರ್ಣ। 

ಭೂಷಣವನಾ ಕಂಠಸೂತ್ರಮಂ ಕಂಡು ಸಂ। 

ತೋಷವರ್ಜಿತನಾಗಿ ಪೊರೆಯೊಳಿಹ ತಕ್ಷಕಾದ್ಯಹಿಪತಿಗಳಂ ನೋಡುತೆ॥ 

ದೋಷಮೇನಿದಕೆ ಮಣಿಯಂ ಕುಡುವೆವೈಸಲೆ ವಿ। 

ಶೇಷ ಫಲಮಹುದಾರ್ಜಿಸಿದ ವಸ್ತು ಲೋಗರಭಿ। 

ಲಾಷೆಗಾದೊಡೆ ಪಾರ್ಥನುತ್ತಮಂ ವೈಷ್ಣವಂ ಜಾಮಾತಾನೆಮಗೆಂದನು॥೧೯॥ 


ಪ್ರತಿಪದಾರ್ಥ :- ಶೇಷರಾಜಂ = ಆದಿಶೇಷನು,ಬಳಿಕ =ಪುಂಡರೀಕನು ತನ್ನೆದುರಿಗೆ ಉಲೂಪಿಯ ಒಡವೆಗಳನ್ನಿರಿಸಿ ಜೀವರತ್ನವನ್ನು ಅರ್ಜುನನ ಪ್ರಾಣದಾನಕ್ಕಾಗಿ ಕೊಡಬೇಕೆಂದು ಕೇಳಿದ ನಂತರ, ತನ್ನನುಜೆಯ= ತನ್ನ ಕುವರಿಯ, ಕರ್ಣಭೂಷಣವನು= ಕರ್ಣಾಭರಣವನ್ನು,ಕಂಠಸೂತ್ರಮಂ= ಮಾಂಗಲ್ಯದೊಂದಿಗಿರುವ ಒಡವೆಯನ್ನು, ಕಂಡು= ನಿರುಕಿಸಿ,ಸಂತೋಷವರ್ಜಿತನಾಗಿ= ಕಡುದುಃಖದಿಂದ ಕೂಡಿ, ಪೊರೆಯೊಳು= ಪಕ್ಕದಲ್ಲಿ, ಇಹ= ಇರತಕ್ಕ, ತಕ್ಷಕ=ತಕ್ಷಕನೇ, ಆದಿ= ಮೊದಲಾದ, ಅಹಿಪತಿಗಳಂ= ಸರ್ಪವರ್ಯರನ್ನು, ನೋಡುತ= ಈಕ್ಷಿಸುತ್ತ, ಮಣಿಯಂ= ಸಂಜೀವಕ ಮಣಿಯನ್ನು, ಕೊಡುವೆನು= ಅರ್ಜುನನಿಗಾಗಿ ಕೊಡುತ್ತೇನೆ, ಇದಕೆ= ಈ ವಿಷಯದಲ್ಲಿ, ದೋಷಂ= ಬಾಧಕವು, ಏನು= ಏನುತಾನೆ, ಇಹುದು=ಇರುವುದು, ಆರ್ಜಿಸಿದ= ಗಳಿಸಿದ, ವಸ್ತು= ವಸ್ತುವಾದರೊ,ಲೋಗರ= ಪ್ರಪಂಚದ ಪ್ರಜೆಗಳ,ಅಭಿಲಾಷೆಗೆ= ಕೋರಿಕೆಗೆ, ಆದೊಡೆ= ಆದಪಕ್ಷದಲ್ಲಿ ,ಐಸಲೆ= ಇನ್ನೂ, ವಿಶೇಷ=ಹೆಚ್ಚಾದ,ಫಲಂ= ಪ್ರಯೋಜನವು, ಅಹುದು= ಆಗುತ್ತದೆ, ಪಾರ್ಥನು = ಫಲುಗುಣನಾದರೊ, ಉತ್ತಮಂ= ಬಹು ಒಳ್ಳೆಯವನು,ವೈಷ್ಣವಂ= ಕೃಷ್ಣಭಕ್ತನು, ಮತ್ತು ಸ್ನೇಹಿತನು, ಎಮಗೆ= ನನಗಾದರೊ, ಜಾಮಾತನು= ಅಳಿಯನಾಗಬೇಕು,ಎಂದನು=ಎಂಬುದಾಗಿ ನುಡಿದನು.  


ತಾತ್ಪರ್ಯ:- ಸರ್ಪರಾಜನಾದರೊ ಪುಂಡರೀಕನ ಈ ಪರಿಯಾದ ನುಡಿಗಳನ್ನಾಲಿಸಿ ತನ್ನ ಕುವರಿಯ ಕಂಠಸೂತ್ರ ಕರ್ಣಾಭರಣಗಳನ್ನು ನೋಡಿ ಕಡು ದುಃಖಿತನಾಗಿ ಪಕ್ಕದಲ್ಲಿರುವ ತಕ್ಷಕಾದಿ ಸಕಲ ಸರ್ಪಗಳನ್ನು ಕುರಿತು ಎಲೈ ಉರಗಮುನಿಗಳಿರಾ! ಈ ಅರ್ಜುನನು ವಿಷ್ಣು ಭಕ್ತನೂ ಸದ್ಗುಣಿಯೂ ಮತ್ತು ನನ್ನ ಅಳಿಯನೂ ಆಗಿದಾನೆ, ಆತನಿಗೆ ಈ ಜೀವಮಣಿಯನಿತ್ತು ಪರೋಪಕಾರದ ಫಲಕ್ಕೆ ಭಾಗಿಯಾಗುವೆನು. ಈ ವಿಷಯದಲ್ಲಿ ನಿಮ್ಮ ಅಭಿಮತವೇನಿರುವುದೆಂದು ಕೇಳಿದನು. 


ಕೇಳಿ ದುಮ್ಮಾನದಿಂ ತಮತಮಗೆ ನಿಖಿಳ ಸ। 

ರ್ಪಾಳಿ ಚಿಂತಿಸೆ ಬಳಿಕ ಧೃತರಾಷ್ಠ್ರನೆಂಬ ದು।

ರ್ವ್ಯಾಳಪತಿ ನುಡಿದನೆಲೆ ನಾಗೇಂದ್ರ ತಮ್ಮವಸರಕ್ಕೆ ಬೇಹುರದನ್ಯರ॥ 

ವೇಳೆಗಿತ್ತೊಡೆ ಮರಳಿ ಬಂದಪುದೆ ಮಾನವರ್। 

ಖೂಳರಕೃತಘ್ನರುಪಕಾರಮಂ ಬಲ್ಲರೆ ವೃ। 

ಥಾಳೋಚನೆಗಳೇತಕಿದಕೆ ಮಣಿಯಂ ಕುಡದಿರೆನೆ ಫಣಿಪನಿಂತೆಂದನು॥೨೦॥ 


ಪ್ರತಿಪದಾರ್ಥ :- ಕೇಳಿ=ಆದಿಶೇಷನು ಸಂಜೀವಕ ಮಣಿಯನ್ನು ಕೊಡುತ್ತೇನೆಂದು ಹೇಳಿದ್ದನ್ನು ಕೇಳಿದವನಾಗಿ, ಅಖಿಳ= ಸಕಲ, ಸರ್ಪಾಳಿ= ಸರ್ಪಗಳ ಸಮುದಾಯವು, ತಮತಮಗೆ= ತಮ್ಮತಮ್ಮಲ್ಲಿ, ದುಮ್ಮಾನದಿಂ= ದುಂಖದಿಂದ,ಚಿಂತಿಸೆ= ಆಲೋಚನೆಮಾಡುತ್ತಿರಲಾಗಿ,ಬಳಿಕ =ಆಮೇಲೆ, ಧೃತರಾಷ್ಟ್ರನೆಂಬ= ಧೃತರಾಷ್ಠ್ರನೆಂಬ ಹೆಸರುಳ್ಳ,ದುರ್ವ್ಯಾಳಪತಿ= ದುರ್ಮಾರ್ಗಿಯಾದ ಸರ್ಪರಾಜನು, ನುಡಿದನು= ಮುಂದೆ ಹೇಳುವಂತೆ ಹೇಳಿದನು, ಎಲೆ ನಾಗೇಂದ್ರ = ಎಲೆ ಪನ್ನಗಾಧೀಶ್ವರನೆ, ನಮ್ಮ= ನಿಮ್ಮ, ಅವಸರಕೆ= ವೇಳೆಗೆ,ಬಹುದು= ಬರತಕ್ಕದ್ದಾಗಿದೆ,ಅದ= ಅಂತಹ ಮಣಿಯನ್ನು, ಅನ್ಯರ= ಹೆರವರ, ವೆಳೆಗೆ= ಕಾಲಕ್ಕೆ, ಇತ್ತೊಡೆ= ಕೊಟ್ಟರೆ, ತಿರುಗಿ= ಮತ್ತೆ,ಬಂದಪುದೆ= ಬಂದೀತೆ,ಮಾನವರೈ= ನರರಾದರೊ,ಖೂಳರು= ಬಹು ದುಷ್ಟರು, ಕೃತಘ್ನರು= ಉಪಕಾರಸ್ಮರಣೆಯಿಲ್ಲದವರು,ಉಪಕಾರಮಂ= ನೀನು ಮಾಡಿದ್ದು ಒಳ್ಳೆಯ ಕೆಲಸವೆಂದು,ಬಲ್ಲರೆ= ತಿಳಿದುಕೊಳ್ಳುವರೆ, ವೃಥಾ= ನಿಷ್ಪ್ರಯೋಜನವಾದ,ಆಲೋಚನೆಗಳು= ಯೋಚನೆಗಳು, ಏತಕೆ= ಏನು ಸಾರ್ಥಕವು, ಇದಕೆ= ಈ ಕಾರ್ಯಕ್ಕಾಗಿ,ಮಣಿಯಂ= ಜೀವರತ್ನವನ್ನು, ಕೊಡದೆ = ಕೊಟ್ಟುಬಿಡದೆ, ಇರು= ಎರೈವನಾಗು, ಎನೆ= ಎಂದು ಧೃತರಾಷ್ಟ್ರನೆಂಬ ಸರ್ಪಶ್ರೇಷ್ಠನುಹೇಳಲು, ಇಂತು=ಮುಂದೆ ಹೇಳುವಂತೆ, ಎಂದನು= ನುಡಿದನು. 


ತಾತ್ಪರ್ಯ:- ನಾಗೇಂದ್ರನ ಈ ತೆರನಾದ ನುಡಿಗಳನ್ನಾಲಿಸಿದ ಸರ್ಪಾಳಿಯು ಸಂಜೀವಕದ ಮಣಿಯನ್ನು ಕೊಡಲು ಇಷ್ಟವಿಲ್ಲದೆ ತಮ್ಮತಮ್ಮಲ್ಲಿಯೇ ಚಿಂತಿಸುತ್ತಲಿರುವಾಗ,ಧೃತರಾಷ್ಟ್ರನೆಂಬ ದುಷ್ಟನಾಗವು ಉರಗೇಂದ್ರನನ್ನು ನೋಡಿ 

ಎಲೈ ಪ್ರಭುವೇ ಈ ಮಣಿಯು ನಮ್ಮ ಆಪತ್ಕಾಲಕ್ಕೆ ಸಹಾಯವಾಗಿದೆ, ಇದನ್ನು ಇತರರಿಗೆ ಕೊಟ್ಟ ಬಳಿಕ ಹಿಂದಿರುಗುವುದು ಅಸಾಧ್ಯವು ಅಲ್ಲದೆ ಮಾನವರಿಗೆ ಕೊಟ್ಟರಂತೂ ಪುನಃ ನಿನ್ನ ಕೈಸೇರುವುದೆಂಬುದನ್ನು ಎಂದಿಗೂ ಎಣಿಸಬೇಡ. ಅವರಲ್ಲಿ 

ಕೃತಜ್ಞತೆಯೆಂಬುದು ಕನಸು, ಮಣಿಯನ್ನು ಕೊಡಕೂಡದೆಂದು ನುಡಿದನು. 




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ