ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಭಾನುವಾರ, ಮೇ 13, 2018

ಕುಮುದೇಂದು ರಾಮಾಯಣ

ಕುಮುದೇಂದು ಕವಿ ವಿರಚಿತ
ಕುಮುದೇಂದು  ರಾಮಾಯಣ

ನಮ್ಮ ದೇಶದಲ್ಲಿ ಅನೇಕ ರಾಮಾಯಣ ಸಂಪ್ರದಾಯಗಳಿವೆ. ಇವುಗಳೆಲ್ಲದರಲ್ಲಿ ಜೈನ ಪರಂಪರೆಯ ರಾಮಾಯಣವೂ ಒಂದು. ಇದುವರೆಗೆ ಸಿಕ್ಕ ಕನ್ನಡ ಕಾವ್ಯಗಳಲ್ಲಿ ಅತ್ಯಂತ ಹಳೆಯ ರಾಮಾಯಣವೆಂದರೆ ಕ್ರಿ. ಶ. ಹನ್ನೊಂದನೇ ಶತಮಾನದ
ಕೊನೆಯಲ್ಲಿ ಬದುಕಿದ್ದ ಅಭಿನವ ಪಂಪನೆಂದು ಪ್ರಸಿದ್ಧನಾದ ನಾಗಚಂದ್ರನ “ರಾಮಚಂದ್ರ ಚರಿತ ಪುರಾಣ” ಅಥವಾ” ಪಂಪರಾಮಾಯಣ. ಈ ಕವಿ ಸುಮಾರು ೧೨೬೫ ರಲ್ಲಿದ್ದನೆಂದು ಬಹುಜನ ಅಭಿಪ್ರಾಯ. ಈ ಪರಂಪರೆಯನ್ನು ಅವನ ನಂತರ ಹಲವಾರು ಕವಿಗಳು ಮುಂದುವರಿಸಿದ್ದಾರೆ.  ಕುಮುದೇಂದು, ದೇವಪ್ಪ ಕವಿ, ದೇವಚಂದ್ರ, ಚಂದ್ರಸಾಗರವರ್ಣಿ ಈ ಪರಂಪರೆಯನ್ನು ಅನುಸರಿಸಿ ರಾಮಾಯಣವನ್ನು ಬರೆದಿದ್ದಾರೆ.

ಕುಮುದೇಂದುವು “ ಪಂಪರಾಮಾಯಣವನ್ನು “ ತನ್ನ ಕತೆಗಾಗಿ ಅನುಸರಿಸಿದ್ದಾನೆ. ಇದು ವರ್ಣಕ ಕಾವ್ಯ. ನಾಲ್ಕು ಬಗೆಯ ಷಟ್ಪದಿಗಳಲ್ಲಿ ಕಾವ್ಯವನ್ನು ರಚಿಸಿದ್ದಾನೆ. ರಾಘವಾಂಕನ ನಂತರ ಇಷ್ಟು ಷಟ್ಪದಿಗಳನ್ನು ಬರೆದ ಕವಿಗಳಲ್ಲಿ ಇವನೇ ಮೊದಲನೆಯವನು. ಷಟ್ಪದಿಗಳ ದೃಷ್ಟಿಯಿಂದ ಈ ಕಾವ್ಯಕ್ಕೆ ತುಂಬ ಮಹತ್ವವಿದೆ. ಇವನು ಲಲಿತವಾಗಿ ಸಲೀಸಾಗಿ ಬರೆಯಬಲ್ಲ. ಹೀಗಾಗಿ  “ಕುಮುದೇಂದು ರಾಮಾಯಣ “ ಕ್ಕೆ ಕನ್ನಡ ಸಾಹಿತ್ಯ ಶ್ರೇಣಿಯಲ್ಲಿ ತನ್ನದೇ ಆದ ಸ್ಥಾನವಿದೆ.

ಈತನ ತಂದೆಯ ಹೆಸರು ಪದ್ಮನಂದೆವ್ರತಿ. ತಾಯಿಯ ಹೆಸರು ಕಾಮಾಂಬಿಕೆ. ತನ್ನ ತಂದೆ ಸಾಹಿತ್ಯ ಕುಮುದವನಚಂದ್ರ,
ಚತುರ್ವಿಧ ಪಾಂಡಿತ್ಯ, ಕಳಾಶತದಳವಿಕಸನದಿನಮಣಿ, ವಾದಿಧರಾಧರಕುಳಿಶನೂ ಆಗಿದ್ದವನೆಂದು ಕವಿಯ ಹೆಮ್ಮೆ.
ಆತನ ದೊಡ್ಡಪ್ಪನ ಹೆಸರು ಅರ್ಹನಂದಿವ್ರತಿ. “ಪರಮಾಗಮ ನಾಟಕ, ತರ್ಕ, ವ್ಯಾಕರಣ, ನಿಘಂಟು, ಛಂದೋಲಂಕೃತಿ
ಚರಿತ ಪುರಾಣ, ಷಡಂಗ ಶ್ರುತಿ, ನೀತಿ ಸ್ಮೃತಿ, ವೇದಾಂತ, ಭರತ, ಸುರತ, ಮಂತ್ರೈಷಧಿ ಸಂಹಿತೆ, ನರತುರಗಗಜಮಣಿಗಣ
ಪರೀಕ್ಷಾ ಪರಿಣತ “ ನಾಗಿದ್ದನಂತೆ.

ಕವಿಗೆ ಪರವಾದಿಗಿರಿವಜ್ರ, ವಾದಿಗಜಕೇಸರಿ, ವಾದಿಭಾಳಲೋಚನ, ವಾದಿಧರಾಧರಕುಳಿಶ, ಪರವಾದಿಗಂಡಭೇರುಂಡ, ಕವಿರಾಜಶಿಖಾಮಣಿ, ಸರಸಕವಿತಿಲಕ, ಸರಸಕವಿಮುಖತಿಲಕ, ಕವಿಕುಳಭಾಳಲಲಾಮ ಎಂಬ ಬಿರುದುಗಳಿದ್ದುವಂತೆ.
ಇವನು ಸ್ತುತಿಸಿರುವ ಪೂರ್ವ ಕವಿಗಳೆಂದರೆ ಗುಣವರ್ಮ, ಜಯವರ್ಮ, ಗಜಗ, ಗುಣನಂದಿ, ನಯವರ್ಮ, ಹೊನ್ನ, ಪಂಪ, ರನ್ನ, ಸುಮನೋಬಾಣ, ಜನ್ನಯ.

ಶ್ರೀ ಮದುರಗ ನರ ಸುರಪತಿನಾಥ ಸಂ
ಸ್ತೋಮ ಮಕುಟಮಣಿಗಣರಾರಾಜಿತ
ಸಾಮೋದ್ಭವರಿಪು ಪೀಠಾಲಂಕೃತ ಚರಣಕಮಳಯುಗಳಂ|
ರಾಮಾಚ್ಯುತ ಸೀತಾನಂತ ಮಂಗಳ
ನಾಮಂ ಮುನಿ ಸುವ್ರತತತಿಫಳ ಚಿನ್ಮಯ ಪದಮಂ ಪದೆದೀಗೆ||೧||

ಯೋಗಮತಂ ಭಸ್ಮಮಯಂ ಕ್ಷಣೀಕಂ
ಸೌಗತ ಪಕ್ಷಂ ಭಾಟ್ಟಶ್ರುತ್ಯಾ
ದ್ಯೋಗಂ ಹಿಂಸಾನಂದಂ ಸೇವ್ಯರು ನಿರ್ಗುಣವಾದಿಗಳು
ಏಗೆಯ್ದುಂ ಚಾರ್ವಾಕರನಾತ್ಮರ
ನಾಗಮಮೆಂದೊಲ್ಲದೆ ವಾಗ್ದೇವತೆ
ರಾಗದೆ ವಾಸುಪೂಜ್ಯಮುನೀಂದ್ರರ ವದನಾಂಬುಜದೊಳು ನೆಲಸಿದಳು||೨೪||

ಅನುನಯದಿಂ ಗುಣವರ್ಮನ ಜಯವ
ರ್ಮನ ಗಜಗನ ಗುಣನಂದಿಯ ನಯವ
ರ್ಮನ ಹೊನ್ನನ  ಹಂಪನ ರನ್ನನ ಸುಮನೋಬಾಣನ ಜನ್ನಯನ
ಜಿನಗುಣಮಣಿಮಯಕಾವ್ಯಕಥಾವ
ರ್ಣನ ಸೌವರ್ಣಪದಕವೆಮ್ಮಯ ಮತಿ
ವನಿತೆಗೆ ಕಂಠಾಭರಣತೆಯಂ ತಳೆದಿಕ್ಕೆ ಕವೀಂದ್ರಪರಂಪರೆಯ||೩೩||

ಎಳಸದರಾರ್ ಶರದಿಂದುವ ಚಂದ್ರಿಕೆ
ಗೆಳಸದರಾರ್ ಹರಿಚಂದನದಣ್ಪಿಂ
ಗೆಳಸದರಾರ್ ನವವಿಕಸಿತ ವಿಚಕಿಳಲಲಿತಾಮಂಜರಿಗೆ
ಎಳಸದರಾರ್ ನವಯೌವನಲಕ್ಷ್ಮಿಗೆ
ಯೆಳಸದರಾರ್ ನವಯುವತೀನಿವಹಕೆ
ಎಳಸದರಾರ್ ಕುಮುದೇಂದು ಮುನೀಶ್ವರ ವಿರಚಿತ ಕಾವ್ಯಕಥಾರಸಕೆ||೪೪||

ಕೃತಿಯಿಕ್ಷ್ವಾಕುನೃಪಾಳಚರಿತ್ರಂ
ಕೃತಿಗಧಿಪತಿ ಚರಮಾಂಗಂ ರಾಮಂ
ಕೃತಿಯಂ ವಿರಚಿಸಿದಂ ಕವಿರಾಜಶಿಖಾಮಣಿ ಕುಮುದೇಂದು
ಬ್ರತಿಪತಿಯೆನೆ ರಸಭಾವನಿರಂತರ
ಮತಿಶಯಮತಿಗಂಭೀರಂ ಲೋಕ
ಸ್ತುತಮಪ್ರತಿಮಮನರ್ಘ್ಯಂ ಮಾಡದೆ ತತ್ಕೃತಿ ಜಗಕೆ ಚಮತ್ಕೃತಿಯಂ ||೪೭||

ಹೊಡೆಯೆಂಬುದು ಬೆಳೆಗೆಯ್ಗಳೊಳಲ್ಲದೆ
ನುಡಿಗಳೊಳಿಲ್ಲ ಮರಾಳದೊಳಲ್ಲದೆ
ನಡೆಯೆಂಬುದು ಬೇಳ್ಪತಿಥಿಯೊಳಿಲ್ಲುಪವನಮಾಲೆಗಳಲ್ಲಿ
ಕುಡಿಯೆಂಬುದು ಲತೆಗಳೊಳಲ್ಲದೊಡಂ
ಬಡಲಿಲ್ಲ ಜಿನಾಳಿಯೊಳತಿಶಯದಿಂ
ಪಡಿಯೆಂಬುದು ಪೆಣ್ಣಾನೆಯೊಳಲ್ಲದೆ ದಂಡದೊಳಿಲ್ಲಾ ದೇಶದೊಳಂ||೫೮||

ಕೊಱೆಯೆಂಬುದು ಗಿಣಿಯುಣಿಸಿನೊಳಲ್ಲದೆ
ತಱೆಯೆಂಬುದ ಖೈರಂಗಳೊಳಲ್ಲದೆ
ಯೊಱೆಯೆಂಬುದು ಗವಸಣಿಗೆಯೊಳಲ್ಲದೆ ಕೂರಿಹ ಕೈದುಗಳ
ಕಱೆಯೆಂಬುದು ಶಿವಕಂಠದೊಳಲ್ಲದೆ
ಮೊಱೆಯೆಂಬುದು ಸಂಬಂಧದೊಳಲ್ಲದೆ
ಇಱೆಯೆಂಬುದು ಬೇಂಟದ ಸೂಳೆಯ ಮುಡುಹಿನೊಳಲ್ಲದೆ ನಾಡೊಳಗಿಲ್ಲ||೫೯||

ಪೆಣ್ಗಳ ಕೆಂದಳದಾಸ್ಯಸುಧೆಯ ನಗೆ
ಗಣ್ಗಳ ಸೋಂಕಿನ ನನಗೊನೆಯೋಗಿಹ
ಪಣ್ಗಳಿದಸುಕೆಯ ಕೇಸರದಕುರವಕದ ತರುಪರಿಕರದಿಂ
ಪಣ್ಗಾಯ್ ತೀವಿದ ಶರ್ಕರೆವಾಳೆಯ
ಬಿಣ್ಗೊಣೆಯಿಂದುಪವನಮಾಳಿಕೆಗಳು
ಕಣ್ಗಂ ಮನಕಮಲಂಪಂ ಮಾಡುವುವೆಸೆವ ಸುಕೋಶಲ ಜನಪದದ||೬೭||

ಎರಡನೆಯ ಸಂಧಿ.

ಭರತ ತ್ರಿಖಂಡದೊಳು
ಧರಣಿಗಾಶ್ಚರ್ಯಮೆನೆ
ಪಿರಿದು ರಾಜಿಪಾರ್ಯಾಖಂಡಕೆ
ಸುರುಚಿರಾಲಂಕಾರ
ಮರರೆ ಕೋಶಲದೇಶವು ||೧೨||

ನದಿಗಳಿಂ ಗಿರಿಗಳಿಂ
ನದತತಿಗಳಿಂದ ಸಂ
ಮ್ಮದವೆನಿಸ ತೋಱುವುದ್ಯಾನಚಯದಿಂ
ಪುದಿದಿಕ್ಷುವಾಟದಿಂ
ಮದದಳಿಕುಳಕಲಿಲ
ಸದಭಿಮತ ಕುಸುಮವಾಟೀಕೋಟಿಯಿಂ||೧೫||

ಕಳವೆ ಕೆಯಿಗಳೊಳು ಮಂ
ಡಳಿಸಿರ್ದುವರಗಿಳಿಯ
ಬಳಗಮದು ಸೋಯದೀಕ್ಷಿಪ ಸತಿಯರ
ವಿಳಸಿತಾಪಾಂಗಾಂಶು
ಪಳಕಿನೊಳು ತಾವಸೆಯ
ಲಿಳೆಗೆತ್ತಿದಂತೆಸೆಯೇ ಪೀಲಿದಳೆಯಂ ||೨೦||

ಕನಕಗಿರಿಯಂ ಕ್ಷೀರ
ವನಧಿಬಡಬಾನಳನ
ಘನತೆಗಳುಕಿಯೆ ಶರಣ್ಬೊಕ್ಕ ತೆಱದಿ
ಅನುದಿನಂ ಮೆಱೆವಗಳಿ
ಗನುಕೂಲಮಾಗಿ ಕಾಂ
ಚನಪರಿಧಿ ಬಳಸಲಾ ಪುರಮೆಸೆವುದು||೨೫||

ರುಚಿರ ನವರತ್ನದಿಂ
ರಚಿಯಿಸಿದ ಕಾಂಚನದ
ರಚಿತಮಾಗಿರ್ದರಮನೆಯ ಚೆಲುವನು
ಸಚರಾಭರೈಕಪತಿ
ಗಚಳ ಭಕ್ತಿಯೊಳಿಂದ್ರ
ರಚಿಯಿಸಿದನೆನೆ ಬಣ್ಣಿಪಣ್ಣನಾವಂ||೩೩||

ಆ ಪುರಕ್ಕಧಿಪನವ
ನೀಪಾಳ ಮೌಳಿಮಣಿ
ದೀಪಿಕಾ ನೀರಾಜಿತಾಂಘ್ರಿಕಮಳಂ
ಶ್ರೀಪವಿತ್ರಿತಮಾದ
ರೂಪಮನುವಂಶೈಕ
ದೀಪನಾದಂ ನಾಭಿರಾಜನೆಂಬಂ ||೩೬||

ಸುರದನುಜಮನುಜಖೇ
ಚರಲೋಕದಂಗನಾ
ಪರಿತಂದ ಪುಣ್ಯಲಾವಣ್ಯಾಣುವಿಂ
ವಿರಚಿಸಿದನರ್ತಿಯಿಂ
ಸರಸಿರುಹಭವನೆನಿಪ
ತರುಣಿ ಮರುದೇವಿ ನಾಭಿಯ ವಲ್ಲಭೆ||೩೭||

ಸುರನರೋರಗಮಕುಟ
ಸುರುಚಿರಾನರ್ಘ್ಯಮಣ
ಪರಿಚುಂಬಿತಾಂಘ್ರಿ ಪಂಕೇಜಯುಗಳಂ
ಮರುದೇವಿಗಂ ನಾಭಿ
ನರಪತಿಗೆ ಪುಟ್ಟಿದಂ
ಪುರುದೇವನೆಂಬವನೀ ವಲ್ಲಭಂ||೩೮||

ಭರತಷಟ್ ಖಂಡೈಕ
ಪರಿವೃಢಂ ತಾನಖಿಳ
ಧರಣಿಪಾಳಕಮೌಳಿಲಾಲಿತ ಪದಂ
ವರ ಯಶಸ್ವತಿಗೆ
ಪುರುಜಿನಾಧಿಪತಿಗಂ
ಭರತೇಶಂ ಚಕ್ರಿತನುಜಾತನಾದಂ ||೩೯||

ಅಕುಟಿಲದೊಳಖಿಳ ವಿ
ದ್ಯಾಕುಶಲನಾನಮ್ರ
ಭೂಕಾಂತ ಶಿಖರಪಾದಾರವಿಂದಂ
ಶ್ರೀಕಾಂತಸುತಮೂರ್ತಿ
ಲೋಕೈಕ ನುತಯಶ
ಶ್ರೀಕಾಂತ ವಿಜಯರಥನೆಂಬ ನೃಪತಿ||೪೨||

ಆ ಮಹೀಶನ ವನಿತೆ
ಯಾಮಹಿಮಶೀಲವತಿ
ಕಾಮಿನೀರತ್ನಮನವದ್ಯಚರಿತೆ
ಹೇಮಂತಿಕಾಂಗಿ ಗುಣ
ಧಾಮೆ ಸೌಭಾಗ್ಯನಿಧಿ
ಹೇಮಮಾಲಿಕೆಯೆಂಬ ಪಟ್ಟದರಸಿ||೪೩||

ಆತತಾಮಳಚರಿತೆ
ಭೂತಳವಿನೂತೆಗುಣ
ಶೀತಾಂಶುವದನೆ ಸೌಭಾಗ್ಯವದನೆ
ಖ್ಯಾತಿವಿತತ ಪ್ರಥಮೆ
ಜಾತಿಯಾದಳು ವನಿತೆ
ಯಾತಂಗೆಸೆವ ಕೀರ್ತಿಶ್ರೀಯೆಂಬಳು||೪೫||

ಆ ಕುಳದೊಳಮಳ ವಿ
ದ್ಯಾಕಾಮಿನೀಕಾಂತ
ನಾಕೀರ್ಣ ಕರ್ಣಾವತಂಸ ಸುಗುಣಂ
ಲೋಕೈಕ ವಿಶ್ರುತವಿ
ವೇಕನುದ್ಭವಿಸೆದಂ
ಭೂಕಾಂತನನರಣ್ಯನಧಿಕಪುಣ್ಯಂ||೮೪||

ಆ ಮಹೀಶನ ವನಿತೆ
ತಾಮರಸವದನೆ ಪೌ
ಲೋಮಿಯಂ ಲಾವಣ್ಯದಿಂ ಗೆಲುವಳು
ಶ್ಯಾಮಾಂಗಿಯೆನಿಸಿ ಪೃ
ಥ್ವೀ ಮಹಾದೇವಿಯಾ
ಕಾಮಿನಿಗನಂತರಥನು ದಶರಥನು ||೮೫||

ತನಯರಾದರು ಭುವನ
ಜನಮನೋಹರ ಚರಿತ
ರನವದ್ಯಶೀಲರುರ್ವೀಪಾಲರು
ಅನರಣ್ಯನೊಸೆದು ನಿಜ
ತನಯರಂ ಕರೆದು ಪಾ
ವನ ಗಭೀರೋದಾರ ಸೂಕ್ತಿಯಿಂದ || ೮೬||

ರವಿ ಶಶಿಗಳೊಲಿದು ಗಗ
ನವನಿರದೆ ಬೆಳಗುವಂ
ತವಿತರ್ಕಯತೇಜಪ್ರಕಾಶಯುತರು
ಕುವರರಿಕ್ಷ್ವಾಕು ವಂ
ಶವ ಬೆಳಗಲೆನರಾದ
ರಿವರೆನಗೆ ಸಾಕು ರಾಜ್ಯದ ತೃಷ್ಣೆಯು ||೮೭||

ಅಂತೆನುತ್ತಾ ನೃಪನ
ನಂತರಥನಾಸ್ಯಮಂ
ಸಂತೋಷದಿಂ ನೋಡಿ ಪರಮಾನಂದದಿಂ
ಇಂತೆಂದನೆಲೆ ತನುಜ
ನೀಂ ತಳೆಧರಾಭಾರ
ವಾಂ ತಳೆವೆನುನ್ನತದ ಜಿನದೀಕ್ಷೆಯಂ||೮೮||

ಎನಲೊಡನನಂತ ರಥ
ನನುನಯದಿನೆಂದನತಿ
ವಿನಯವಿನುತಂ ಮುಗಿದು ಕರಕಮಳಮಂ
ಇನಿತು ಹೇಯಂ ನಿಮಗೆ
ಎನಗೆಂತುಪಾದೇಯ
ಮನುಚಿತಮನೀವುದುಚಿತಮೆ ಸುತಂಗೆ ||೮೯||

ಅಂತೊಡಂಬಡದಿರಲ
ನಂತರಥನಾತನಂ
ಸಂತೈಸಲಾಱದನರಣ್ಯ ನೃಪನು
ಮುಂತಿರ್ದ ದಶರಥಂ
ಗಂತಾ ತನೂಜಂಗೆ
ಸಂತಸದಿನೊಸೆದು ಪಟ್ಟವ ಕಟ್ಟಿದಂ||೯೦||

ಮೂರನೆಯ ಸಂಧಿ

ಸುರಭಿಯಂ ಪಶುವೆಂದು ನೋಡ
ರ್ಪರುಷಮಂ ಕಲ್ಲೆಂದು ಮುಟ್ಟ
ರ್ಮರನಿದೆಂದಾದರಿಸರೊಪ್ಪುವ ಕಲ್ಪಪಾದಪಮಂ
ಎರಡು ಚಿಂತಿಸುತಿರ್ಪಗಸಣೆಗೆ
ಭರದಿ ಚಿಂತಾಮಣಿಗೆ ಕನಲುವ
ರರರೆ ದಶರಥನೃಪನ ರಾಜ್ಯದೊಳರ್ಥಿಸಂಕುಳವು||೮||

ಅಸಿತಕುವಳಯದಳ ವಿಲೋಚನೆ
ಯಸಮಶರಮದರದನಿ ಕುಂಭಸ
ದೃಶಪಯೋಧರೆ ಕಂಬುಕಂದರೆ ಸಾಂದ್ರಚಂದ್ರಮುಖಿ
ಕುಸುಮಕೋಮಳೆಯರಸಿಯಾದಳು
ವಸುಮತೀಪತಿ ದಶರಥಂಗೆ ವಿ
ಲಸಿತೆ ಗುಣರಾಜಿತೆಯುಮೆನಿಸಿದಪರಾಜಿತಾದೇವಿ ||೧೦||

ವಟಫಳಾಧರೆ ಸರಸಕಾಂಚನ
ಪುಟಘನಸ್ತನೆ ಕುಮುದಲೋಚನೆ
ಚಟುಲ ಷಡುಪದ ಕುಟಿಲಕುಂತಳೆ ಲಲಿತತನುಮಧ್ಯೆ
ಸ್ಫುಟಕುಸುಮಶರಘನಕಲಹ ಲಂ
ಪಟನೆನಿಪ ದಶರಥಮಹೀಶನ  
ನಿಟಿಲತಟಘಟಿತಾಂಘ್ರಿಕಮಳೆ ಸುಮಿತ್ರೆ ಸತಿಯಾಗೆ ||೧೧||

ನಗೆಮೊಗಂ ಶೀತಾಂಶು ಬಿಂಬವ
ನಗೆ ನಯನವಸಿತೋತ್ಪಳಂಗಳ
ನಗೆ ಕುಚದ್ವಯನಂಗಭವ ಮಾತಂಗಕುಂಭವನು
ನಗೆಯುಗುರು ಕೇತಕಿಯದಳಮಂ
ನಗೆ ವಿಳಾಸಂ ರತಿಶಚಿಯರಂ
ಮಿಗೆ ಚೆಲುವೆ ಸುಪ್ರಭೆ ತನ್ನರೇಂದ್ರಂಗರಸಿ ತಾನಾಗೆ ||೧೨||

ಅವರು ಮೂವರುವಲ್ಲಭೆಯರಬಿ
ಭವಿಸೆ ನರಸುರನಾಗಲೋಕದ
ಯುವತಿಯರ ಲಾವಣ್ಯಪುಣ್ಯಯವಿಳಾಸದುನ್ನತಿಯಂ
ಭುವನಪತಿ ದಶರಥನೃಪಾಳಂ
ವಿವಿಧ ಕುಸುಮಾಯುಧ ಸುಖವನನು
ಭವಿಸುತವರೊಳು ರಾಜ್ಯಪದದೊಳು ಲೀಲೆಯಿಂದಿರಲು||೧೩||

ಕತಿಪಯಾಪ್ತಪರೀತನಖಿಳಂ
ಕ್ಷಿತಿಪತಿಪ್ರತತಿಪ್ರಣೂತಂ
ಸಿತಚಚಮರರುಹಪವನ ಪರಿವರ್ತಿತ ಕರ್ಣಪೂರಂ
ಶತಮಖನವೊಲು ನೂತ್ನರತ್ನಂ
ನುತಖಚಿತಸಿಂಹಾಸನದೊಳ
ಪ್ರತಿಮನೊಡ್ಡೋಲಗದೊಳಿರ್ಪುದುಮಾ ಸಮಯದಲ್ಲಿ||೧೪||

ನಾರದಂ ನೀರದಪಥದಿನತಿ
ಚಾರುತರ ಧವಳಾಂಗನಮಳಿನ
ವಾರಿರುಹವರ ಸೂತ್ರ ಲಸದುಪವೀತ ಪರಿಪೂತಂ
ಭೂರಮಣನಾಸ್ಥನಮಂ ಪುಗೆ
ಸಾರತರ ಧವಳೋತ್ತರೀಯನು
ದಾರಗಂಭೀರಾಕೃತಿ ಪ್ರಬಳಾಜಿಲಂಪಟನು||೧೫||

ವಿತತ ನೇತ್ರಷಾಢರಾಜಿತ
ನತಿಧವಳ ಕೌಪೀನವಾಸಂ
ಶತದಳಾಮಳತಂತುಕೃತ ಯಜ್ಞೋಪವೀತಧರಂ
ಧೃತ ಕಮಂಡಳನುಜ್ವಳಾಂಗಾ
ನ್ವಿತನೆನಿಪ ನಾರದನ ಕಂಡಾ
ಕ್ಷಿತಿಪನಿದಿರೆದ್ದಾಗಳಿಚ್ಛಾಕಾರಮಂ ಮಾಡೆ||೧೬||

ಕನಕಪೀಠದೊಳಿರಿಸಿ ತತ್ವದ
ವನರುಹಮನರ್ಚಿಸಿ ವಿನಯದಿಂ
ದನುನಯದಿನಿಂತೆಂದನಿಲ್ಲಿಗ ನಿಮ್ಮ ಬಂದಂದಂ
ಮನಕತೀವ ಕುತೂಹಳತೆಯಂ
ಜನಿಯಿಸುತ್ತಿರ್ದಪುದು ನೀವಿದ
ನೆನಗೆ ತಿಳಿಪುವುದೆನಲು ನಾರದನಾಗಳಿಂತೆಂದಂ||೧೭||

ಮಿಸುಪ ಜಂಬೂದ್ವೀಪದೊಳು ಶೋ
ಭಿಸುವ ಪೂರ್ವ ವಿದೇಹದೊಳು ಸಲೆ
ಪೆಸರ್ವಡೆದವರ ಪುಂಡರೀಕಪುರಾಧಿಪತಿಯೆನಿಪ
ಎಸೆವ ಸೀಮಂಧರಜಿನರ ವಂ
ದಿಸಿ ಬರುತ್ತಿರ್ದಪೆವೆನುತ್ತಿರೆ
ದೆಸೆಯನೋಡಿಯೆಹರೆಯವೇಳ್ದಂ ಸನ್ನೆಯಿಂದೋಲಗಮಂ||೧೮||

ಧರೆಯ ವಿವಿಧನೃಪಾಳಜಾಳಂ
ಧರಣಿಪತಿ ದಶರಥನುಮಾತನ
ವರಸಚಿವನೆನಿಸಿದ ಸಮುದ್ರಹೃದಯನುಮಱಿವಂತೆ
ಭರದೆ ಕಟ್ಟೇಕಾಂತದೊಳು ವಿ
ಸ್ತರದಿನಿಂತೆಂದಱಿಪಿದಂ ಬಂ
ಧುರ ದಶನರುಚಿ ಬೆಳಗೆ ಪರಿಷದ್ವಳಯಮಂ ಕೂಡೆ ||೧೯||

ಇಂದು ಲಂಕಾಪುರಕೆ ಪರಮಾ
ನಂದದಿಂದಂ ಶಾಂತಿಜಿನಪತಿ
ವಂದನಾರ್ಥಂ ಪೋಗಿ ನೆಗಳ್ದ ವಿಭೀಷಣನಮುಂದೆ
ಬಂದು ಸಾಗರಬುದ್ಧೊಯೆಂಬವ
ನೊಂದು ಮಾತಂ ಪೇಳ್ದನದ ತಾ
ನೊಂದು ನಿಮಗದನಱಿಪ ಬಂದೆಂ ಕೇಳಿ ನೀವಿದನು|| ೨೦||

ಇದು ಶಿಲಾಶಾಸನ ವಿಭೀಷಣ
ವಿದಿತಮಾಗಿರೆ ಕೇಳಿದನು ಜಾನಕಿ
ಯ ದೆಸೆಯಿಂದಾ ದಾಶರಥಿಯೊಳು ಕಾದಿ ದಶವದನಂ
ಕದನದಿಂದಂ ಸಾವನೆನೆ ಕೇ
ಳ್ದುದಿತ ಕೋಪಾಟೋಪದಿಂ ಕಾ
ರ್ಯದ ವಿನಾಶಂ ಕಾರಣದಮಾರಣಮೆನುತ್ತಿರ್ದಂ|| ೨೧||

ದಶರಥನುಮಂ ಜನಕನುಮನಾಂ
ವಿಶಸನಮನೆಯ್ದಿಸುವೆನೀಗಳೆ
ಶಶವಿಷಾಣದ ತೆಱದಿ ಮಾಡುವನಿವನು ನುಡಿದುದನು
ದಶದಿಶಾವಳಯದೊಳು ಬಳಿಕಂ
ದಶಮುಖನನಾರ್ಗೆಲುವರೆಂದರಸ
ದೃಶಕಟೂಕ್ತಿಗಳಿಂ ನುಡಿದನಱಿದಿಹುದು ನೀವಿದನು||೨೨||

ಜನಕಪತಿಗಂ ಪೇಳ್ವೆನಾನಿದ
ನೆನುತ ನೀರದಪಥ ನಾರದ
ನನುನಯದೆ ತಾಂ ಪೋದನಿತ್ತಲು  ದಶರಥನೃಪಾಳಂ
ದನುಜನೋರ್ವಂ ಬಂದು ಗಡ ನ
ಮ್ಮನೆ ಗಡಂ ಕೊಲುವಂ ಗಡವನಾ
ವನೊ ವಿಭೀಷಣನೆಂಬವಂ ಗಡ ನೋಳ್ಪೆನಿದನಾನು||೨೩||

ಎನೆ ಸಮುದ್ರಹೃದಯ ಸಚಿವನತಿ
ವಿನಯದಿಂದಿಂತೆಂದನಾಗಳು
ವನಧಿಪರಿವೃತಮಾದ ಧರೆಯೊಳು ನಿಮಗಿದಿರದಾವಂ
ಇನಿತು ಕಾರ್ಯಕ್ಕಾನೆ ಸಾಲ್ವೆಂ
ದಿನದಿನಾಂ ಮತ್ತೊಂದು ವಾರ್ತೆಯ
ನನುನಯದಿ ಕೇಳ್ದೆಂ ನೃಪಾಳಕ ಚಿತ್ತವಿಪುದಿದನು||೨೪||

ನೆರೆದ ಮಂಗಳಪುರದಧೀಶ್ವರ
ನಗಣಿತಾಮರ ಕೀರ್ತಿನಿಳಯಂ
ಸಗರ ವಿಭವೋದ್ಭಾಸಿ ಶುಭಮತಿಯೆಂಬನಾ ನೃಪನ
ಮಗಳು ಕೈಕೆಯು ವಲ್ಲಭೆಯು ಮೂ
ಜಗವನೆಱಗಿಸಿಕೊಂಬಳೆಂಬುದು
ಮಿಗೆ ಕರಂ ಜನಜನಿತಮಾ ಸ್ತ್ರೀರತ್ನ ನಿಮಗೆ ಯೋಗ್ಯಂ ||೨೫||

ಅತ್ತ ದಶರಥನುಂ ಜನಕನು
ದಾತ್ತರಖಿಳ ವಿನೋದಮಂ ನೋ
ಡುತ್ತ ಮಂಗಳನಾಮಧೇಯ ನಗರಮುಮನೆಯ್ತಂದು
ಚಿತ್ತಜನ ವೈಯಾಳಿಯೆಂಬವೊ
ಲುತ್ತರೋತ್ತರ ವಿವಿಧಮಣಿಮಯ
ಭಿತ್ತಿಯಿಂದೊಪ್ಪುವ ಸ್ವಯಂಬರಮಂಟಪವ ಕಂಡು ||೩೩||

ಆ ಸಮಯದೊಳು ಸಕಳ ಶೋಭಾ
ವಾಸಮೆನಿಸಿದ ನೂತ್ನರತ್ನದ
ಲೇಸೆನಿಪ ದಂಡಿಗೆಯ ಮೇಲತಿ ಸುಲಲಿತಾಕೃತಿಯ
ಆ ಸಭೆಯನಿಳಿಕೆಯ್ವ ಚೆಲುವ ವಿ
ಳಾಸಿನಿಯರೊಡನಂಗಜಂ ಸಲೆ
ಸೂಸೆ ಜನಕೆ ನಿಜಾಸ್ತ್ರಮಂ ಬರೆ ಕೈಕೆ ಮುದದಿಂದ||೩೭||

ಆರುಮಂ ಮೆಚ್ಚದೆ ಬಳಲ್ವಾ
ನಾರಿ ಬರುತಂ ಬಲದ ಕೆಲದೊಳು
ದಾರ ಗಂಭೀರಾಕೃತಿಯ ರಘುವೀರನಿರೆ ಕಂಡು
ಕೈರವಾಯತ ಲೋಲಲೋಚನೆ
ಧೀರತನಮಂ ಬಿಟ್ಟು ನಯವಿದೆ
ಚಾರು ಮಂಗಳ ಮಾಲೆಯಂ ಲೀಲೆಯೊಳು ಸೂಡಿದಳು||೪೨||

ತರುಣಿಯಱಿಯದೆಯೋರ್ವ ದೇಶಾಂ
ತರಿಗೆ ಮಾಲೆಯನಿಕ್ಕಿದಳು ನಾ
ವಿರೆಯೆನುತ್ತಂ ಸಕಳಧಾರಿಣಿಪಾಳಕರು ಮುಳಿದು
ಇರದೆ ನಾವಾತನ ರಣಾಂಗಣ
ಧರೆಯ ಗೆಲಿದಾ ಕನ್ನೆಯಂ ಚೆ
ಚ್ಚರದೆ ಕೊಂಬೆವೆನುತ್ತ ಕೋಪಿಸಿ ತೆರಳೆ ತಮತಮಗೆ||೪೪||

ಭರದೆ ಕೈಕೆಯ ತಂದೆ ಶುಭಮತಿ
ಯಿರದೆ ರಥಮಂ ಪಣ್ಣಿಕೊಂಡತಿ
ತ್ವರಿತದಿಂದೆಯ್ತಂದು ರಘುಪತಿಗೆಂದನಿಂತೆಂದು
ಪುರವ ಪುಗಿ ನೀವಿರ್ವರುಂ ನಾ
ನರಳಸರಳಿಂಗಳುಕದೆಲ್ಲಾ
ಧರಣಿಪಾಳರನೆನ್ನ ನಿಷ್ಠುರಶರದಿನಳುಕಿಸುವೆಂ ||೪೫||

ಎನೆ ನೆಗಳ್ದ ರಘುನಂದನಂ ಮಾ
ವನ ನುಡಿಗೆ ನಸುನಗುತಮಿಂತೆಂದ
ಕಿನಿತು ಸಂಭ್ರಮಮೇವುದಿಲ್ಲಿಯೆ ನೀವು ನೋಡುತಿರೆ
ಕನಲ್ದ ಕೇಸರಿಗಂಧಸಿಂಧುರ
ಘನಘಟೆಯನೆಬ್ಬಟ್ಟುವಂದದಿ
ನನಿಬರುಮನಂತಕನ ಬಾಣಸಕೆಯ್ದೆ ಸಲಿಸುವೆನು ||೪೬||

ಏಱಿ ರಥಮಂ ಕೈಕೆ ತನ್ನೊಡ
ನೇಱುವಂತಿರೆ ವೀರಲಕ್ಷ್ಮಿಯೆ
ಕೀಱಿ ಸಾರಥಿ ಹಯವ ಚೋದಿಸೆ ಬೆಳುಗೊಡೆಯ ತೆಱದಿಂ
ತೋಱಿ ಹಳವಿಗೆ ಮಿಳಿರ್ದು ಮಿಳ್ಳಿಸೆ
ಮೀಱುವಹಿತರ ಹೃದಯ ಹವ್ವನೆ
ಹಾಱಿ ಹರಿದುದು ರಣದೊಳಾರಥ ಕೋಟಿರಥವಾಗೆ ||೪೭||

ಅಸುಹೃದವನೀಪಾಳಕರ್ಗ
ರ್ಜಿಸಿಯಸುಂಗೊಳೆ ಮುಸುಱಿ ಮುತ್ತಲ
ದಸದಳ ನಾನೊರ್ವನೆಂದೇ ಸೆಡೆದು ನೋಡಿದನೆ
ದೆಸೆದೆಸೆಗೆ ರಘುಬಲವನೆಲ್ಲವ
ಕುಸುರಿದಱಿಯಲು ಮಸಗಿ ಮಾಣದೆ
ದಶರಥಂ ಕಾಳಾಗ್ನಿ ರುದ್ರನಕಾರ್ಯ ಕೈಕೊಂಡಂ||೪೮||

ಪೊಡವಿಯೊಳಗಿರ್ದುರಗರಾಜನ
ಹೆಡೆ ಹೆಡೆಯನಪ್ಪಳಿಸಿ ದಿಗಿಭವ
ನೊಡನೊಡನೆ ಪೆಳಱಿಸಿ ತಪನರಥತುರಗಸಂಚಯವ
ಗಡಗಡನೆ ನಡುಗಿಸಿ ಧರಿತ್ರಿಯೊ
ಳೆಡೆಬಿಡದೆ ತೀವಿತ್ತದೆತ್ತಂ
ಬಿಡದೆ ದಶರಥ ನೃಪನ ಧನುರ್ಗುಣ ಘೋರ ಟಂಕಾರಂ ||೪೯||

ಪ್ರಳಯಜಲದಂಗಳಕಱೆವವಮೊ
ಕ್ಕಳವೆನಿಪ ವಿಷವರ್ಷದಂದದಿ
ನಳವಿಗಳಿದಂಬಿನ ಮಳೆಯನಾ ಭೂಭುಜರ್ಕಱೆಯೆ
ಕಳೆಯೆ ದಶರಥನೃಪನ ಸಾರಥಿ
ಮಿಳಿರೆ ಹಳವಿಗೆ ಕೈಕೆ ಚೋದಿಸಿ
ದಳು ರಥವನಾಗಳೆ ಮನೋರಥದೊಡನೆ ನಲವಿಂದ ||೫೦||

ಭರದೆ ಹೇಮಪ್ರಭನುಮಂ ಸಂ
ಗರದೊಳಾಗಳು ದಶರಥಂ ಗೆಲೆ
ಸುರಿದರಮರರು ಪುಷ್ಪವೃಷ್ಟಿಯನಾರ್ದು ಜಯಯೆನುತ
ಭರದೆ ಪೊಣ್ಮಿಂತಭಯಘೋಷಂ
ಧರಣಿಪಾಳಕರಂಜಿ ಕಂಡ
ರ್ಕರುಣದಿಂದವರ್ಗಭಯಮಂ ಕೊಟ್ಟೆಯ್ದೆ ಕಳುಪಿದನು ||೫೫||

ಇರದಳಂಕೃತಮಾದ ಮಂಗಳ
ಪುರದ ಶೋಭೆಯನೀಕ್ಷಿಸುತ್ತಂ
ಮೆರೆಯುವೈರಾವತವ ಶಚಿವೆರಸೇಱೆ ಬರ್ಪಂತೆ
ತರುಣಿ ಕೈಕೆಯ ಮುಂದೆ ಮದಸಿಂ
ಧುರ ವರಸ್ಕಂಧದೊಳೆ ಬಂದಂ
ಬರೆ ಜನಕನುಂ ಶುಭಮತಿಯುಮಿಕ್ಕೆಲದ ಗಜದೊಳು ರಘೂಜಂ ||೫೭||

ಬಲಿದು ದಶರಥನುಂ ಜನಕನುಂ
ಕೆಲವು ದಿನವಾಪುರದೊಳಿರ್ದತಿ
ಬಳರಿರದೆ ನಿಜಪುರಕೆ ಪೋಗಲು ಶುಭಮತಿಗೆ ಪೇಳೆ
ಲಲಿತವಾಹನವಸ್ತುಚಯಮಂ
ಪಲವು ಪರಿಯವ ತರಿಸಿ ಕೊಟ್ಟಂ
ದಲಘು ವಿಭವದೆ ಕಳುಹಿದಂ ಜಾಮಾತೃ ಸಂತರಿರ್ವರುಂ ||೬೦||

ರಂಗದಮಳಿನ ಕುಸುಮದಿಂದಂ
ಸಂಗಳಿಸಿದಾ ಕಲ್ಪಲತಿಕೆ ಮ
ಮನಂಗೊಳಿಸುವೊಂದಂದದಿಂದಂ ಪುಷ್ಪವತಿಯಾಗೆ
ಭೃಂಗಕುಂತಳೆ ಕುಸುಮಕೋಮಳೆ
ತುಂಗಕುಚೆ ಲಲಿತಾಂಗಿ ಮೆಱೆದಳ
ನಂಗಜಂಗಮಲತೆಯೆ ಪುಷ್ಪಿತವಾಯಿತೆಂಬಂತೆ ||೬೬||

ಹರುಷಗರ್ಭವನಿಳೆ ತಳೆಯುತಿರೆ
ತರುಣಿಗರ್ಭವನಂತು ತಳೆದಾ
ದರದೆ ನವಮಾಸದವಸಾನ ಪ್ರಸವಸಮಯದೊಳು
ಧರಣಿ ರೋಹಣಶೈಲಮಂ ಶಾ
ರ್ವರಿ ಸುಧಾಕರದೀಧಿತಿಯ ಹಡೆವಂತೆ
ಹಡೆದಳು ರಮಣಿ ಸುತನಂ ಕಳಸಗುಣಯುತಂ ||೭೭||

ಸೀಮೆಗಳೆದುತ್ಸಾಹದಿಂದಂ
ಭೂಮಿಪತಿ ದಶರಥನತೀವ
ಪ್ರೇಮದಿಂ ಹತ್ತನೆಯ ದಿನದೊಳು ಶುಭಮುಹೂರ್ಥವನು
ರಾಮಣೀಯಕ ಮೂರ್ತಿ ಕೀರ್ತಿಸು
ಧಾಮುಯಂ ನಯನಾಭಿರಾಮಂ
ರಾಮನೆಂಬನ್ವರ್ಥನಾಮದೆ ನಾಮಕರಣವಮಾಡೆ ||೮೫||

ಮಿಸುಪ ಪಳುಕಿನ ತೊಟ್ಟಿಲೊಳು ತೆ
ತ್ತಿಸಿದ ನವರತ್ನದ ಬೆಳಗು ದೆಸೆ
ದೆಸೆಗೆ ಪಸರಿಸೆ ಕೆದಱಿದಿಂದ್ರ ಧನುವಿನ ತೆಱದಿಂದ
ಎಸೆವ ಹಂಸೆಯ ಕಿಱಿಯ ಹಂಸಂ
ಮುಸುಕಿ ಹಾಸಿದುಕೂಲದೊಳು ರಂ
ಜಿಸಿದನಿಂಗಡಲೊಳಗೆ ರಾಮಂ ಪಾರಿಜಾತದ ತೆಱದಿಂ ||೮೬||

ಸರಸಸಾಹಿತ್ಯ ಬೆಳೆವವೊಲು
ಸುರತರು ನಿಧಿಯುಮೆಂಬವೊಲು ವರ
ಶರದಮಳ ಬಾಳೇಂದು ಬಿಂಬಂ ಕ್ರಮದೆ ಬೆಳೆವವೊಲು
ಧರೆಯ ಭಾಗಯದ ಬೆಳಸಬೆಳೆವವೊ
ಲರಿನೃಪರೆರ್ದೆವಳರೆ ಬೆಳೆವವೊ
ಲರರೆ ಬೆಳೆದಾ ರಾಮಚಂದ್ರಂ ಕಳೆಯೆ ಬೆಳೆವಂತೆ ||೯೩||

ಇರೆ ಕೆಲವು ದಿನದಿಂದ ಮೇಲಾ
ಧರಣಿಪಾಳನ ಮೋಹವಲ್ಲಿಗ
ಳಿರದೆಫಳ ಗರ್ಭವ ತಳೆವವೊಲು ತಳೆಯೆ ಗರ್ಭವನು
ವರ ಸುಮಿತ್ರೆಗೆ ಕೈಕೆಗಾ ಸುಪ್ರಭೆಗೆ
ತರುಣಿಯರಿಗೆ ಕ್ರಮದಿ ನಂದ
ನರು ಲಕ್ಷ್ಮಣ ಭರತ ಶತ್ರುಘ್ನರು ತನಯರಾಗೆ ||೯೪||

ಧರಣಿ ಪಾಲ ಲಲಾಮ ರಾಮಂ
ಸ್ಥಿರತರಾಯತ ಲಕ್ಷ ಲಕ್ಷ್ಮಣ
ನುರುಚರಿತ ಭರತಂ ವಿದಿತರಿಪು ವಿಘ್ನಶತ್ರುಘ್ನಂ
ಭರದೆ ಬೆಳೆದರು ಶಸ್ತ್ರಶಾಸ್ತ್ರೋ
ತ್ಕರಕಳಾಪರಿಣತವನಲ್ಲಿಂ
ಧರೆಯೊಳಾರುಂ ತಮತಮಗೆ ಮಿಗಿಲಿಲ್ಲೆನೆ ತಳೆದರವರು ||೯೭||

ಎನ್ನ ಮಗಳಂ ಜಾನಕಿಯನಾ
ಮುನ್ನಮೇ ರಾಮಂಗೆ ಕೊಟ್ಟು ಮ
ಮಹೋನ್ನತಿಯಿನೀನಮ್ಮಕೊಳುಕೊಡೆಗುದಯಿಸುತ್ತಿರಲು
ಎನ್ನನೊರ್ವಂ ಖೇಚರಂ ಪ್ರ
ಚ್ಛನ್ನಕಪಟದಿನೊಯ್ಯೆ ಪೋದುದ
ನಿನ್ನುಳಿದುದಂ ಬಂದ ಮಾನಿಸನಿಂದ ಕೇಳುವುದು||೧೦೮||

ದೆಸೆಯ ಕಡೆಯೊಳು ನಿಲ್ಕೆ ಮೇಣಾ
ಗಸದೊಳಿರ್ಕೆ ಪಯೋಧಿಯೊಳ್ಪುಗೆ
ರಸೆಯೊಳಗೆ ಮೇಣಿರ್ಕೆ ಖೇಚರನಕ್ಕೆ ಸುರನಕ್ಕೆ
ಬೆಸಸುವುದುದೇವೆನ್ನನೀಗಳೆ
ಕುಸುರಿದಱಿವೆಂ ಕರುಳನುಚ್ಚುವೆ
ನೊಸೆದು ದೆಸೆವಲಿಗೆದಱುವೆಂ ನಾನೆಂದ ಲಕ್ಷ್ಮಣನು ||೧೧೧||

ಧರೆಯನಾಗಸಕಾಗಸಮನೀ
ಧರೆಗೆ ಮಾಳ್ಪೆ ಸುರಾದ್ರಿಯಂ ಕಿ
ಳ್ತೆರದಗಸ್ತ್ಯನ ತೆಱದಿನಬ್ಧಿಯನೊಕ್ಕುಡಿತೆ ಕುಡಿವೆಂ
ಸುರನರಾಸುರ ಖಚರಲೋಕವ
ನೊರಸಿಮುಕ್ಕುವ ಬಗೆಯ ತಂದ
ರ್ಭರತ ಶತ್ಘ್ನರ್ಜನಕನಂ ಖಚರನೊಯ್ಯುದಕೆ ||೧೧೨||

ನಾಲ್ಕನೆಯ ಸಂಧಿ

ದೇವ ಮಿಥುಳೇಶ್ವರನ ವಲ್ಲಭೆ
ದೇವಿಗೆಮ್ಮ ವಿದೇಹಿಗರ್ಢಿಯಿ
ನಾವರಿಸೆ ವರಗರ್ಭ ಚಿಹ್ನಂ ಶುಭಮುಹೂರ್ತದೊಳು
ಪಾವನರನಮಳ್ಗಳನಖಿಳಧಾ
ತ್ರೀ ವಿನುತರಂ ಗಂಡುಪೆಣ್ಗಳ
ನಾ ವನಿತೆ ಬೆಸಲಾಗಲವರ್ಗಳ ಜಾತಕರ್ಮದಲಿ ||೨||

ಅರಸನೊರ್ವಂ ಕೋಪದಿಂ ತ
ತ್ಪ್ರಸವಗೇಹವ ಪೊಕ್ಕು ಮಾಣದೆ
ಮಸಗಿ ಗರ್ಜಿಸಿ ಗಂಡುಕೂಸಂ ಕೊಂಡಾಗಸಕ್ಕೊಗೆಯೆ
ಅಸಮವೆನಿಪಾ ಮಿಥುಳೆಯೊಳಗೆಯಿ
ದಸದಳಂ ಹಾಹಾ ನಿನಾದಂ
ಮುಸುಕಿದುದು ಶೋಕಾಂಧಕಾರಂ ಕೂಡೆ ಪುರಜನಮಂ ||೩||

ದೇವ ಸಕಳನಿಮಿತ್ತಶಾಸ್ತ್ರ ಕ
ಳಾವಿದಂ ಮತ್ತೊರ್ವನಾಗಳೆ
ಪಾವನಾಕೃತಿ ಬಂದು ಜನಕಂಗೆಂದನಿಂತೆಂದು
ಆವ ಖೇದಂ ಬೇಡ ನಿನಗೆ ಮ
ಹಾನುಭಾವಂ ನಿನ್ನ ತನುಜನಿ
ಳಾವಿನುತ ಖಚರೇಶನಗಿಯೆ ಕಾಣ್ಗಿಂತು ನಿಮ್ಮ ||೫||

ಆ ತನೂಜೆಗೆ ಹತ್ತನೆಯ ದಿನ
ಸೀತೆಯೆಂದಾ ಪೆಸಯಿಸುಟ್ಟು
ಪ್ರೀತಿಯಿಂದಂ ಬೆಳೆಕತ್ತಿರೆ ಬೆಳೆದು ವೈದೇಹಿ
ಸೀತೆದೀಧಿತಿಕಳೆಗಳಿಂದಂ
ಶ್ರೀತನೂಜನೆ ಮಾಡಿದಾ ಸಂ
ಜಾತ ಕೌತುಕದಿಂದ ಕನ್ನೆಯೆನೀಸಿದಳು ಕ್ರಮದಿಂ ||೭||

ಸರಸ ಕುಸುಮಾಯುಧಸಸುಧಾರಸ
ಭರಿತ ರುಚಿರಾರುಣೀಮಣಿಮಯ
ಸುರುಚಿರ ಕರಂಡಕದಂತೆ ಕಾಂತಿಯತಳೆದ ಧರೆಮಣಿಯ
ತರದೆ ಬೆಳುದಿಂಗಳ ಮೊಳೆಗಳಂ
ತಿರೆ ವಿರಾಜಿಪ ದಂತಪಂತಿಗ
ಳರರೆ ಜಾನಕಿಗೊಪ್ಪುಗುಂ ರಾಣಿಯರ ಮುಖಮುಕುರೆ||೧೭||

ಅವರು ಸಾಧಾರಣರೆ ಭರತ
ಕ್ಕವತರಿಸಿದೆಂಟನೆಯ ಬಲಕೇ
ಶವರು ದಶರಥತನುಜರಿಂತೀ ರಾಮಲಕ್ಷ್ಮಣರು
ಅವರ ಹೆಸರಿಗೆ ಶಬರಸೇನಾ
ನಿವಹ ಕೆಡೆವುದಿದಾವ ಕೌತುಕ
ವವರೆ ಭರತತ್ರಿಖಂಡಮಂಡಳಗಧಿಪತಿಗಳಲ್ತೆ ||೪೧||

ದೈರ್ಯದಿಂದೌದಾರ್ಯದಿಂ ಗಾಂ
ಭೀರ್ಯದಿಂ ಘನ ಶೌರ್ಯದಿಂದಾ ನಿಜ
ವೀರ್ಯದಿಂದಾ ದಾಶರಥಿಗಳ್ಗಾರು ಸರಿಯೆನಲು
ಕಾರ್ಯಮೆನಗಿದು ಕೊಟ್ಟೆನಾಂ ತಾ
ತ್ಪರ್ಯದಿಂದಂ ಜಾನಕಿಯನಾ
ಶ್ಚರ್ಯವಿಕ್ರಮ ರಾಮಚಂದ್ರಂಗಱಿದಿಹುದು ನೀವು ||೪೨||

ಅಂತು ಬರೆ ವೈದೇಹಿ ಮುದದಿಂ
ಕಂತುರಾಜನ ಮಂತ್ರದೇವತೆ
ಯಂತೆ ರನ್ನದ ಮಂಟಪದೊಳಿರೆ ಸಖಿಯರುಂ ತಾನುಂ
ಬ್ರಾಂತನಾರದನವರ ಮುಂದ
ತ್ಯಂತ ವಿಕಟವಿಕಾರಗಿರಿ ಕಂ
ಡಂತೆ ಭರದಿಂದೋಡಿಪೋಗಿಯೆ ಕದವನಿಕ್ಕಿದರು||೪೫||

ಖಚರಪತಿಯಿರದಾತನಂ ಕಂ
ಡುಚಿತ ಭಕ್ತಿಯ ಮಾಡಿ ಬಳಿಕಂ
ರುಚಿರತರವಹ ಚಿತ್ರಪಟಮಂ ನಾರದಂ ಕೊಟ್ಟು
ಅಚಳಚಿತ್ತದಿ ನೋಡು ನೀನಿದ
ಸುಚರಿತಂಗೆ ಭವತ್ತನೂಜೆಗೆ
ರುಚಿರಕೋಮಳೆಯುಂ ಪ್ರಭಾಮಂಡಳೆಗೆ ತಕ್ಕಳೆಂದು ||೫೦||

ಆರ ಮಗಳಿಂತೀಕೆಯೆಂದು ವಿ
ಚಾರಿಸಲು ಖಚರಂಗೆ ನುಡಿದಂ
ನಾರದಂ ಮಿಥಿಳಾಪುರಾಧಿಪ ಜನಕ ಭೂಭುಜನ
ನಾರಿಯೆನಿಪ ವಿದೇಹಿಗಿಂತೀ
ಕೈರವಾಯತ ನೇತ್ರೆ ಪುಟ್ಟಿದ
ಳಾರಿಗಂಗನೆಯಾದೊಡಾತಂ ಭರತದಧಿಪತಿಯು||೫೩||

ಬಲುಹು ವಾಘೆಯ ವಾಘೆಯೆಚ್ಚಱು
ತಳೆದ ಕೂರಸಿ ಬೆರಳ ಚಮ್ಮಟಿ
ಚೆಲುವ ಬಯಸಿಕೆಯಂ ಕವಣಿಯವದಾಸವೆಸದಿರಲೂ
ಜಲದ ಪಥದೊಳು ನಡೆವ ಶಕ್ರನೆ
ಗೆಲುವ ರೇಖಾಯ್ದತೆಯೊದವಿರೆ
ಕುದುರೆಯೊಡನೆಱಗಿಸಿದನಂತಿರೆ ಪೋದನಂಬರಕೆ ||೬೫||

ಸುರನೊ ಮೇಣ್ ಖಚರನೊ ಜನ್ಮಾಂ
ತರ ವಿರೋಧಿಯಂದೋರ್ವನಿಂತೀ
ತುರಗವೇಷದೆ ಬಂದು ನೃಪನಂ ಕೊಂಡೊಯ್ದನೆಂದು
ಪುರಜನಂಗಳ್ಬಾಯ ಬಿಟ್ಟಳು
ತಿರಲದೊರ್ವ ನಿಮಿತ್ತಕೋವಿದ
ನಿರದೆ ಬರ್ಪಂ ಜನಕನೆನುತಂ ಕಳೆದನವರಳಲಂ ||೬೬||

ತುರಗವೆತ್ತಲುಜನಕಪತಿಯಂ
ತ್ವರಿತದಿಂ ಕೊಂಡೊಯ್ದು ವಿದ್ಯಾ
ಧರ ವಿಷಯದೊಳಗೆಸೆವ ರಥನೂಪುರ ಚಕ್ರವಾಳಕ್ಕೆ
ಪುರದ ಬಹಿರುಪವನದೊಳಗಾವ
ತರಿಸಿ ನಿಂದಿರಲಾ ವಸಂತನ
ಪರಿಯೊಳಾ ವನವೀಧಿಯೊಳು ಬಂದಿಳಿದನಾ ಹಯವ||೬೭||

ಮನದ ಕೋಪವನಱಿಯಲೀಯದೆ
ಜನಕಪತಿಯಿಂತೆಂದನಾಗಳು
ತನುಜೆಯಂ ರಾಮಂಗೆ ಕೊಟ್ಟೆಂ ದಶರಥ ಸುತಂಗೆ
ಜನಜನಿತವಿದು ಮೀಱಿ ಕೊಟ್ಟೊಡೆ
ಜನಿಯಿಸದಯಪಕೀರ್ತಿ ನೀನುಂ
ಮುನಿಯದಿರು ನುಡಿದೆರಡು ನುಡಿವವನುಂನೃಪಾಳಕನೆ||೭೭||

ಭರದೆ ಸನ್ಮತಿವೆಸರವಂ ಖೇ
ಚರನದೊರ್ವಂ ನುಡಿದನಾಗಳೆ
ತರುಣಿಯರನಾರಾರು ಬೇಡರು ರಾಜಪುತ್ರಕರು
ಎರೆದೊಡಂತೀವುದೇ ವಿಚಾರಿಸಿ
ದೊರೆಯಱಿದು ಕುಲವಱಿದು ವಿದ್ಯಾ
ಪರಿಣತೆಯನಱಿದೀವುದೆಂದಡೆ ಜನಕನಿಂತೆಂದಂ ||೭೮||

ಅವರ ಕುಲವಿಕ್ಷ್ವಾಕುವಂಶಂ
ಭುವನಭುಂಭುಕಮಱಿಯಿದಿರೆನಿಪ
ವಿವರು ಸಾಧಾರಣಾ ಪುರುಷರೇ ರಾಮಲಕ್ಷ್ಮಣರು
ಅವನಿಪತಿ ದಶರಥನ ಸುತರಿಳೆ
ಗವತರಿಸಿದ ಬಲ್ಚ್ಯುತರನೀ
ವವರನೇಳಿಸಬೇಡೆನಲು ಮುಳಿದಿಂದುಗತಿಯೆಂದಂ||೭೯||

ಪುರುಜಿನೇಶ್ವರ ಸನ್ನಿಧಾನದೊ
ಳುರಗರಾಜಂ ನಮಿವಿನಮಿಗ
ಳ್ಗುರಗ ವಿದ್ಯಾಧಿಷ್ಟಿತಂಗಳನೆರಡು ಬಿಲ್ಲುಗಳಂ
ಭರದೆ ಕುಡೆ ನಮಗಾ ಪುರಾತನ
ಗುರುಪರಂಪರೆಯಿಂದ ಬಂದಾ
ನರರದಂ ಪಿಡಿದೇಱಿಸಿರ್ದೊಡೆ ಜಾನಕಿಯುಮವರ್ಗೆ ||೮೧||

ಅಂತಿರದೆ ಮಂತ್ರೀಜನಕೆ ಸಾ
ಮಂತ ಕೋಟಿಗೆ ಪರಿಜನಕೆ ಶು
ದ್ಧಾಂತ ಕಾಂತಾಜನಕೆ ಖೇಚರಲೋಕದಂದಮುಮಂ
ಸಂತಸದೆ ತಾ ಪೋದ ಘನವೃ
ತ್ತಾಂತಮಂ ಬಂದಂದಮಂ ಭೂ
ಕಾಂತನಱಿಪಿಯೆ ಬೆಸಸಿ ಬಳಿಕಂ ಗೃಹಮಹತ್ತರನು ||೮೭||

ಆ ಪುರದ ಬಹಿರುಪವನದೊಳಾ
ಚಾಪಯುಗಮಿಕ್ಕೆಲದೊಳಾ ಸುರ
ಚಾಪಮೆನೆ ಬಳಸಿರ್ದ ಮಣಿಮಯ ಪರಿಧಿಯಿಂದೊಳಗೆ
ಗೋಪುರಂಗೊಳ್ ನಾಲ್ಕೆಸೆಯೆ ಧಾ
ತ್ರೀಪತಿಯ ಬೆಸದಿಂದ ರತ್ನಕ
ಳಾಪದಿಂದಾತಂ ಸ್ವಯಂಬರಗೃಹವ ಮಾಡಿಸಿದಂ||೮೮||

ಬಿಲ್ಲನೇಱಿಸುಗುಂ ನಿಜ ಭೂ
ವಲ್ಲರಿಯನೇಱಿಸುವ ತೆರದಿಂ
ಬಿಲ್ಲನೇಱಿಸಿ ಕಂತುರಾಜಂ ಭರದೆ ಜಾನಕಿಗೆ
ಇಲ್ಲಿ ದೇವರ ಮುಂದೆ ನುಡಿವುದ
ದಲ್ಲ ವಿನಯದಿ ಕಾಣ್ಬುದೆಲ್ಲವ
ನಲ್ಲಿ ದೇವಯಿದಾವ ಗಹನಂ ರಾಮಚಂದ್ರಂಗೆ ||೯೩||

ಐದನೆಯ ಸಂಧಿ.

ಶ್ರೀ ಕೌಶಲ್ಯೆ ಸುಮಿತ್ರೆ ಸುಸುಪ್ರಭೆ
ಕೈಕೆವೆರಸು ರಾಘವ ಲಕ್ಷ್ಮೀಧರ
ಲೋಕವಿನೂತ ಭರತ ಶತ್ರುಘ್ನರು ಸಹಿತಾನಂದದಲಿ
ಭೂಕಾಂತಂ ಗಜರಥಹಯ ಸುಭಟಾ
ನೀಕಮೆಸೆಯೆ ಕವಿಮುಖತಿಳಕಂ ಸುಪ
ತಾಕೆ ವಿರಾಜಿಸೆ ಬಂದನು ದಶರಥನಿರದೆ ಮಿಥಿಳೆಗೆ ಭರದೆ ||೧||

ಚಾರುಮುಖೇಂದುವನೋಲಗಿಸುವ ವರ
ತಾರಾಗಣಮೆನೆ ಸೇರುವೆವೆರಸಿದ
ನೇರಾಣಿಯ ಹೊಸಮುತ್ತಿನ ತ್ರಿಸರವ ಕೊರಲೊಳು ತಂದಿಕ್ಕಿ
ಸಾಹರತರಾಯತ ಭುಜಲತೆಯೊಳು ಕೇ
ಯೂರವನಂಗನೆ ಚಂದನಲತೆಯೊಳು
ರಾರಾಜಿಪ ನಾಗಿಣಿಯೆನೆ ತೊಡಿಸೆ ಯುವತಿಗೆ ರಾಮನ ಸತಿಗೆ ||೯||

ಪರಿಣಯನ ಮುಹೂರ್ತದ ಲಗ್ನಮಿದಾ
ದರದಿಂ ಬರಹೇಳೆನೆ ಜನಕಂ ಚೆ
ಚ್ಚರದಿಂ ಮಣಿಮಯರಥಮಂ ಚಾಮರದಡಪದ ಡವಕೆಗಳ
ಪರಿಚಾರಕಿಯರುವೆರಸಿರದೇಱಿಯೆ
ಸರಸದ ಕೆಳದಿಯರೈನೂರ್ವರು ಬರು
ತಿರೆ ಮಂಗಳದಾರತಿ ಸ್ವಯಂವರ ಗೃಹಕೆ ಶೋಭಾವಹಕೆ||೧೬||

ಮುದಮೊದವಿರೆ ಬಂದಾಕೆ ಸ್ವಯಂವರ
ಸದನದ ಮಧ್ಯದ ಚೌಪಳಿಕೆಯ ನೀ
ಲದ ಕಂಭದ ಕೆಲದೊಳು ಸಖಿಯರು ಸಹಿತಿರೆ ಜಾನಕಿಯಂದು
ಪದಪಿಂ ವಿದ್ರುಮಲತೆ ಬಳಸಿದ ಶಾ
ರದಲಕ್ಷ್ಮಿಯುಮಂ ತಾರಾವಳಿ ಬಳ
ಸಿದ ಶಶಿಕಳೆಯಂ ಕಳೆಯನಿಸಿದಳಾ ಕಾಂತೆ ರತಿಯೆಂಬಂತೆ ||೨೩||

ಕೆಲಕೆಲಬರ್ಕೀಲಿಸಿದಂತಿರ್ದ
ರ್ಕೆಲಕೆಲಬರ್ಸ್ತಂಭಿಸಿದಂತಿರ್ದ
ರ್ಕೆಲಕೆಲಬರ್ಮೂರ್ಚಿಸಿದಂತಿರ್ದರು ವಸುಧಾಪಾಲಕರು
ಕೆಲಕೆಲಬರ್ಪಾವಡರ್ದಂತಿರ್ದ
ರ್ಕೆಲಕೆಲಬರ್ಮೆಯಿಮಱೆದಂತಿರ್ದ
ರ್ಗೆಲೆ ಚಿತ್ರದ ಸಭೆಯಂ ಸಭೆ ಜಾನಕಿ ಪುಗಲು ರತಿಯಂ ಮಿಗಲು ||೨೬||

ವೀರತೆಯುಂ ಶೂರತೆಯುಂ ರುಚಿರೋ
ದಾರತೆಯುಂ ಗುಣಗಂಭೀರತೆಯುಂ
ಧೀರತೆಯುಂ ಪುದುವಿಲ್ಲೆನೆ ತನ್ನೊಳು ಕೌಸಲ್ಯೆಯ ತನಯಂ
ರಾರಾಜಿಸಿ ಕಡಲೊಳು ಕೈವಂದ ನ
ಮೇರುವಿದೆಂಬಂತಾ ಸಭೆಯೊಳಗಾ
ಕೈರವಲೋಚನೆ ಕಂಡಳು ದಶರಥಸುತನನುರ್ವೀಮತನ ||೨೮||

ಹಲಮುಂ ವಜ್ರಾವರ್ತಮುಮಿಂತೀ
ಲಲನಾರತ್ನಂ ಜಾನಕಿಯುಂ ಮೈ
ಗಲಿ ರಾಮನ ಕೈಸಾರ್ದವು ಸಾರ್ವತ್ರಿಖಂಡಕ್ಷಿತಿಯೆನಲು
ಸುಲಲಿತ ಗದೆಯುಂ ಪದಿನೆಣ್ಬರು ವರ
ಲಲನಾರತ್ನಂಗಳುಮೀ ಬಿಲ್ಲುಂ
ಜಲರುಹನಾಭನ ಸಾರ್ದವು ತೊದಳಿಲ್ಲೆಂದುದುರ್ವರೆಯಂದು ||೪೨||

ನೇವುರರವದಿಂದಂ ಸೊಗಯಿಪ ಹಂ
ಸಾವಳಿಯಂ ರಸನಾಸೂತ್ರದೆ ಕಳ
ರಾವದೆ ಸಾರಸಚಯಮುಂ ಸೌರಭದಿಂದಲುವಳಿಕುಳಮಂ
ಆವರಿಸುತ್ತಿರೆ ಬಂದಳು ಘನಲ
ಜ್ಜಾವನತಾನನೆ ಜಾನಕಿ ರಾಘವ
ದೇವಂಗಿಕ್ಕಿದಳೊಲವಿಂ ಮಾಲೆಯನಿರದೆ ನೆರೆವಾತುರದೆ||೪೫||

ಭರದಿಂ ಬಂದು ವಿದಗ್ಧಾಪುರಮನಾ
ದರದಿಂ ನೋಡುತ್ತಂ ಪೊಱವೊಳಲಂ
ಸುರಚಾಪದೆ ಮಾಡಿದವೊಲೊಪ್ಪುವ ಮಣಿಮಯತೋರಣಮಂ
ಪುರವೀಥಿಗೆ ಬಂದಿಂತಿದು ಜನ್ಮಾಂ
ತರದೊಳು ತೊದಳಿಲ್ಲೆನ್ನಯ ಪಟ್ಟಣ
ವರಮನೆಯೆನ್ನದು ಜನಮೆನ್ನದು ದಿಟಮೆಂದ ಮುಚ್ಚೆಗೆ ಸಂದ ||೬೪||

ಇರದಂಬರಚರರಾತನನಾಗಳೆ
ಭರದಿಂದುಗತಿಯಮುಂದಕೆ ತರೆ
ತುರಿಪದೆ ತಾತಂ ಶೀತಳಕ್ರಿಯೆಯಂ ಮಾಡಿಸಲೆಚ್ಚತ್ತು
ಕರಕಮಳಂಗಳ ಮುಗಿದೊಲವಿಂ ಪಿತೃ
ಚರಣಯುಗಂಗಳಿಗೆಱಗಿ ಗಭೀರ
ಸ್ವರದಿಂ ಭವವಾರಂ ಮಱೆಯಿಸದೆಂದನತಿಭಯದಿಂದ||೬೫||

ನಿನಗೀ ಮೂರ್ಚೆಗೆ ಕಾರಣವೇನೆಂ
ದೆನೆ ಖಚರೇಂದ್ರಂಗೆಂದಂ ಕೌತುಕ
ವನೆ ತಳೆದಿರೆ ಸಭೆ ಮುದದೆ ಪ್ರಭಾಮಂಡಳನಂದಿಂತೆಂದಂ
ಎನಗೆ ಸಹೋದರಿ ಜಾನಕಿ ಜನಕಂ
ಜನಕಂ ತಾಯಿ ವಿದೇಹಿ ಬಲು ಮೈ
ದುನನಾನವರ್ಗಾನಾದೆನು ಬಱಿದೆಂ ಮುನಿದೆಂ ಪುಣ್ಯದಿ ನೆನೆದೆಂ||೬೬||

ಇಲ್ಲಿಗೆ ತಂದು ಜನ್ಮಾಂತರರಿಪು
ವಲ್ಲಿಂದೆನ್ನನದೊರ್ವಂ ದೇವನ
ದೆಲ್ಲಮನಱಿದರ್ದೇವರು ಬಿನ್ನವಿಸಲು ದೇವಾ ಹದನಂ
ಬಿಲ್ಲುಂ ನಮ್ಮಿಂದನ್ಯರಸಾರಿದು
ವಲ್ಲದಱಿಂಬಱಿದೇಮುನಿದೆಂ ಭವ
ವಲ್ಲಿಯ ತೊಡರಾರಂ ಮಱೆಯಿಸದೆಂದನತಿ ಮುದದಿಂದ||೬೭||

ಇತ್ತಲು ಜಾನಕಿ ರಾಮಾದಿಗಳನು
ದಾತ್ತರ್ಜನಕಾದಿಗಳತಿ ಮುದದಿಂ
ದಿತ್ತು ಮಣಿಮಯ ವಿಭೂಷಣವಾಹನಚಯಮಂ ಬಳುವಳಿಯಂ
ಬಿತ್ತರದಿಂ ಕಳಿಪಲು ದಶರಥ ಭೂ
ಪೋತ್ತಮನಮರೇಂದ್ರನವೊಲಯೋಧ್ಯಾ
ಪತ್ತನಮಂ ಪುಗುತಂದಂ ಲೀಲೆಯೊಳೊಲಿದು ಸುಖದಿ ನಲಿದು||೭೧||

ಹತ್ತನೆಯ ಸಂಧಿ.

ಪಲ್ಲವಿ :-
ಮಾಯಾಮೃಗಪತಿನಾದದೆ ಘನರವ
ಜಾಯಾಪತಿ ರಾಮನ ತೊಲಗಿಸಿಯ
ನ್ಯಾಯದಿನೊಯ್ದನು ಜಾನಕಿಯನು ನಿಜ ವಿನಾಶಕಾಲದೊಳಾಗಳೆ ರಾವಣನು

ಗಗನಾರ್ಣವದ ಬಹಿತ್ರಮಿದೆನೆ
ಸೊಗಯಿಪ ಪುಷ್ಪಕ ಸುವಿಮಾನಮನಂ
ದಗಣಿತ ಕೋಪಾಟೋಪಂ ರಾವಣನೇಱಿ ಭರದಿಂದ
ಬಗೆಯಿಂ ಮುನ್ನಮೆ ದಂಡಕವನಮಂ
ಪುಗಬೇಕೆಂದೆಯ್ತರುತಂ ಕಂಡಂ
ಖಗಮೃಗನಗಗಹನದೊಳಾಗಹನದೊಳಿರ್ದಾಂ ದಂಡಕಗಿರಿವನಮಂ||೨||

ಅದಱೊಳು ಬರುತಂ ಕ್ರೌಂಚನದಿಯ ತೀ
ರದ ತಣ್ಬುಳಿನ ತಾಣದೊಳೆಸೆಯೆ ಬೆ
ಳೆದ ಪಂಚವಟಿಯೊಲೊಪ್ಪುವ ಲತಿಕಾಮಂಟಪದೊಳಗಾಗ
ಮದನನ ವಾಮೋಪಾಂತದ ರತಿಯೋ
ತ್ರಿದಶಪತಿಯ ಪಾರ್ಶ್ವದ ಶಚಿಯೋ ಮೇ
ಣ್ಸುದತೀರತ್ನಮಿದೆಲ್ಲಿಯದೆನುಂತ ರಾಮನರಸಿಯಿರಲು ಕಂಡಂ ||೨||

ಧರಣಿಯ ಚೆಲುವೊಂದೆಡೆಗೆ ನೆರೆದುದೋ
ಸುರತಕಳಾನಿಧಿಯಧಿದೇವತೆಯೋ
ಸುರುಚಿರಲಾವಣ್ಯಾಮೃತರಸ ಮೇಣ್ತೀವಿದ ಕರಡಗೆಯೊ
ಸರಸ ಸುಧಾಂಶುಮೃಣಾಳಿಕೆಗಳಿನಂ
ಬುರುಹಭವಂ ಕಾಮನೆಯಾಗಿಯೆ ಮೇ
ಣ್ವಿರಚಿಸಿದನು ಈ ಕನ್ನೆಯನೆನುತಂ ನೋಡುತ್ತಿರ್ದನು ದಶವದನಂ ||೪||

ನೆಱೆಯವು ತೋಳಾಲಿಂಗಿಸಲಿಪ್ಪತ್ತು
ನೆಱೆಯವು ಅಧರಂ ಚುಂಬಿಸೆ ಹತ್ತುಂ
ನೆಱೆಯವು ಹತ್ತುಂ ನಾಸಿಕವಂಗಲತೆಯ ಘನಪರಿಮಳಕೆ
ನೆಱೆಯವು ಕಣ್ಣಿಪ್ಪತ್ತುಂ ನೋಡಲು
ನೆಱೆಯವು ಕಿವಿಯಿಪ್ಪತ್ತುಂ ಕೇಳಲು
ನೆಱೆಯವು ಕಳಕಂಠರುತಿಯನನಳಿಪಿಂ ನೋಡಿ ರಾವಣ ಜಾನಕಿಯಂ ||೧೦||

ಅನಯಕ್ಕಂಜದೆ ಪಾತಕವೆಂಬುದ
ನಿನಿಸುಂ ನೆನೆಯದೆ ನರಕಗತಿಗೆ ಸಾ
ಧನವೆಂದಳ್ಕದೆ ನಿಜಕುಲ ಕಿಡುಕಿಡೆಂದು ವಿಚಾರಿಸದೆ
ಮನುಮಥನಂಬಿಗೆ ಗುಱಿಯಾಗಿಯೆ
ನೆನೆದವಲೋಕಿನಿ ವಿದ್ಯೆಯನಡುಬರೆ
ವನಿತಾಬರತ್ನಮಿದೆಲ್ಲಿಯದೀತನುಮಾರುಯೆಂದು ಬೆಸಗೊಂಡಂ ||೧೫||

ಗತಿಮತಿಯುಂ ಗಿತಿ ವಿದ್ಯಾಹಾಗಿದು
ರಿತಬಂಧನಕರವೆಂದಂಜದೆ ದೇ
ವತೆಯಂ ಬೆಸಗೊಳಲಿವರಾರೆಂದು ಪಾತಕ ರಾವಣನು
ಅತಿಶಯಮೆನಿಸಿದಯೋಧ್ಯಾಪುರದಧಿ
ಪತಿ ದಶರಥ ಭೂಪಾಲಂಗಾದ
ರ್ಪುತ್ರರೆಂಟನೆಯ ಬಲಾಚ್ಯುತರೆನಿಸಿದ ರಾಮಲ್ಷ್ಮಣರೆಂದಿವರು ||೧೬||

ಪುರುಪರಮೇಶ್ವರ ಸನ್ನಿಧಿಯೊಳು ಖೇ
ಚರಪತಿವಿನಮಿನಮಿಗಳಿಗೆ ಮುದದಿಂ
ದುರುಗೇಂದ್ರಂ ಕೊಟ್ಟೆರಡುಂ ಬಿಲ್ಲುಮನೇಱಿಸಿದತಿಬಲರು
ಧರಣಿಗೆರಡು ಕಣ್ಣೆಂಬಂತಿರಲವ
ತರಿಸಿದವರು ಲೋಕತ್ರಯಧೀರರುಮ
ವರೊಳಗೀತಂ ಬಲರಾಮಂ ಚರಮದೇಹನುದ್ಧತನು||೧೮||

ಇಳೆಯೊಳಗಣದೋರ್ವಳಘನದರ್ಪಾ
ನಳರೆನಿಸಿದ ಭೂಪಾಲರನೆಲ್ಲರ
ನಲೆದಣ್ಣನ ಬೆಸದಿಂದೀಗಳು ದಂಡಕಗಿರಿವರದಲ್ಲಿ
ಸುಲಲಿತಸೂರ್ಯಹಾಸವಕೊಂಡಂತಿ
ಬಲ ಶಂಭುಕದೂಷಣ ತ್ರಿಶರರುಮಂ
ಗೆಲಿದು ಖರನೊರ್ವನ ಕೊಲಲಿರ್ದಪನೀತನನುಜಲಕ್ಷ್ಮಣನು||೧೯||

ಆತಂ ಖರನೊಳು ಕಾದುತ್ತಿರ್ದಪ
ನೀತಂ ನಿಜಪತಿಯಂ ಜನಕ ತನೂ
ಜಾತೆಯನೆಸೆವ ಪ್ರಭಾಮಂಡಳನನುಜಾತೆಯನತಿ ಮುದದಿಂ
ಸೀತೆಯನನುಪಮ ಸಿತವ್ರತವಿ
ವಿಖ್ಯಾತೆಯನೀಯೆಡೆಯೊಳು ಕಾದಿರ್ದಪ
ನಾತನ ಕೀರ್ತಿಲತಾವೃತಧರಣೀ ರಾಮನಿನಕುಲಪರಿರಾಮಂ ||೨೦||

ಎನುತಿರೆ ದೇವತೆ ಕೇಳ್ದು ದಶಾಸ್ಯಂ
ಮುನಿದಿವನೆಲ್ಲವನಱಿದೇಂ ಪೇಳೀ
ತನನೀಗಳೆಯೀಕಾಂತೆಯ ಹೊರೆಯಿಂ ತೊಲಗಿಸುವಂದವನು
ಮನಸಿಜನಂಬಿಂದೆಸುತಿರ್ದಪ
ನೆನಗಿಂತೀ ಕನ್ನೆಯ ಗಾಢಾಲಿಂ
ಗನದಿಂದಲ್ಲದೆ ಜೀವಿಪುದರಿದೆನೆ ದೇವಿ ಕೇಳ್ದು ಕಡುಮುಳಿದು ||೨೩||

ಮತ್ತೇಕೀಪರಿ ಪರಿಯಿಂದನುಚಿತ
ವೃತ್ತಿಯೊಳೆಸಗುತ್ತಿರೆ ಕೇಳ್ದಾದು
ರ್ವೃತ್ತರನಾರ್ಶಿಕ್ಷಿಸುವರು ನೀನಲ್ಲದೆ ಪೆಱರುರ್ವಿಯೊಳು
ಉತ್ತಮ ಸತ್ವಂಗಕ್ಕಟ ನಿನಗೀ
ಚಿತ್ತಮಿದೆತ್ತಣಿನಾದುದು ಬಿಡುಬಿಡು
ಚಿತ್ತಭವನ ಉಗ್ರಾವೇಶಮನೀನಪ್ಪುಕೆಯ್ವರೇ ದಶವದನಾ ||೨೪||

ಧುರದೊಳು ದಿಗು ಪಾಲಕರಂ ಗೆಲಿದೆಂ
ಶರನಿಧಿಗಳ ತ್ರಿಕೂಟಾಚಲದೊಳು
ಗಿರಿದುರ್ಗಂ ಲಂಕಾಪುರವಾರೆನಗಿದಿರೆಂದೆನ್ನದಿರು
ಉರಿವರೀ ನಿನ್ನಯ ತೇಜಮುಮಂ
ಪರವನಿತಾ ರತಿಯಿಂ ಕಿಡಿಸದೆ ದು
ರ್ಧರಭುಜಬಲರೊಡನೆಡರದಿರೆಡರಲು ಕಿಡುಕಿಡುವೆ ||೨೬||

ಕಡಲಂ ಬಗೆಯರು ಲಂಕಾಪುರಮಂ
ಸುಡದಿರರಿಂತಾ ಪುರದುಪವನಮಂ
ಕಡಲೆಯಗಿಡುವಂ ಕೀಳ್ವಂತಿರೆ ಸಲೆ ಕೀಳದೆ ಮಾಣ್ದಿರರು
ಎಡರಿದಡಂ ನೀ ಸಹಿತಂ ದನುಜರ್ಕಳ
ನಡುಬಲಮಂ ಮಾಡುವರು ಕೃತಾಂತಂ
ಗೆಡರದಿರೆಡರದಿರೆಡರಿದೆಯಾದಡೆ ಕಿಡುಕಿಡುವೆ ದನುಜೇಂದ್ರಾ ||೨೮||

ಹಲವಂ ಹೇಳದೆ ನೀನಿಂತೀತನ
ತೊಲಗಿಸುವಂದವನೆನಗಱಿಪೆಂದತಿ
ಮುಳಿದು ದಶಾಸ್ಯಂ ಬೆಸಗೊಳಲೊಡನಿಂತೆಂದಳು ಕನಲುತ್ತಂ
ಮುಳಿದುಕೃತಾಂತನ ತೆಱದಿಂ ಖೇಚರ
ಬಲಮಂ ಕೊಲಲೆಂದೀತನ ತಮ್ಮಂ
ತಳರುತ್ತೆನಗರಿದಾದಡೆ ಮಾಳ್ಪೆಂ ಸಿಂಹನಾದವನೆಂದೆಂದಂ ||೨೯||

ಆ ದೆಸೆಗೀಗಳೆ ಪೋಗಿಯೆ ಸಿಂಹನಿ
ನಾದವ ಮಾಡಿದೆನೆಂದಡೆ ಪಿರಿದು ವಿ
ಷಾದದೆ ತೆರಳ್ಗುಂ ತಮ್ಮನ ಮೋಹದಿನಿಂತೀಯತುಲಬಲಂ
ಖೇದಮುಮಂ ಖೇಚರಕುಲಕೆಯ್ದೆ ಪ್ರ
ಮಾದಮುಮಂ ನಿಜಬಂಧುಗಳಿಗೆ ನಿ
ರ್ವೇದಮುಮಂ ಬಳಿಕಂ ಮಾಡೆಂದು ಪೋದುದವಲೋಕಿನಿ ವಿದ್ಯೆ ||೩೦||

ಗುಣಹಾನಿಗೆ ಬೆಚ್ಚದೆ ಬಲುಪಿಂ ರಾ
ವಣನಾಗಳೆ ತನ್ನಂ ಬೆಸಸಲು ಲ
ಕ್ಷ್ಮಣನಿರ್ದಾ ದೆಸೆಗವಲೋಕಿನಿಯತಿ ಮುಳಿಸಿಂದಂ ಪೋಗಿ
ರಣಭೂಮಿಯೊಳಂದು ಲಂಕಾಪತಿಯ ಮ
ರಣಸೂಚಕ ಮೃತ್ಯುದನಿಯೆನೆ ಧಾ
ರುಣಿನುತ ರಾಮಂ ಕೇಳ್ವಂತಿರೆ ಮಾಡಿತು ಸಿಂಹನಿನಾದವನು ||೩೧||

ಕಡುಗಲಿ ಲಕ್ಷ್ಮೀಧರನಲ್ಲಿಗೆ ನಾಂ
ಪಡಿಬಲವಾಗಿಯೆ ಪೋದೆಂ ತಡೆಯೆನು
ವರಘಳಿಗೆಯೊಳೆಯ್ತಪ್ಪೆಂ ನೀನಂಜದಿರಂಬುಜವದನೆ
ನುಡಿ ನೆರವಾಗಿ ಜಟಾಯುವಿರ್ದಪಂ
ಯೆಡರಿ ಗೆಲುವರಾರನುಜನ ತಾಂ
ನಡೆದಂ ಕಲ್ಪಾಂತದ ಯಮನಂತಿರೆ ಕಾಳಗಕ್ಕೆ ರಘುರಾಮಂ ||೩೫||

ಅರಿದೆನ್ನನುಜಂಗನುವರಮೆಂದು
ತ್ವರಿತದೆ ರಾಮಂ ಪೋಪುದುಮಿತ್ತಲು
ನರಕಕ್ಕಿಳಿವ ತೆಱದಿ ಪುಷ್ಪಕದಿಂದಿಳಿದಾ ರಾವಣನು
ಸುರುಚಿರ ಚಂದ್ರಕಳೆಯನರವರಿಸದೆ
ಭರದಿಂ ರಾಹುಪಿಡಿವವೊಲು ಪಿಡಿದಾ
ತುರದಿಂ ತನ್ನ ವಿಮಾನಕ್ಕೊಯ್ದನು ಶೀಲಮೂರ್ತಿ ಜಾನಕಿಯಂ ||೩೬||

ಆಗಳದಂ ಕಂಡೆಯ್ದಿ ಜಟಾಯು ನ
ಭೋಗತಿಯಿಂ ರಾವಣನ ವಿಮಾನಂ
ಪೋಗುತ್ತಿರೆ ಸೈರಿಸದತಿ ಕಡುಪಿಂ ಕಿಡಿಕಿಡಿವೋಗುತ್ತಂ
ಪೋಗದಿರೆಂಬಂತಿರೆ ಗರ್ಜಿಸಿ ಮುಂ
ದಾಗಸದಿಂದೆಯ್ತಪ್ಪ ಸಿಡಿಲವೊಲು
ತಾಗಿತ್ತದಟಿಂ ತಾಗುವ ತೆಱದಿಂ ಶರಭದೊಡನೆ ಭೇರುಂಡಂ ||೩೭||

ಬಾಳೆಯ ಕದಳಿಯ ಕಡಿವಂತಿರೆ
ತೋಳಿಪ್ಪತ್ತಂ ದರದರದಿಂ ತಱಿವೆಂ
ನೀಲೋತ್ಪಲಕುಲಮಂ ಖಂಡಿಪವೊಲು ಖಂಡಿಸುವೆಂ ತಲೆಯಂ
ಹೀಲಿಯ ಕಣ್ಣಿಂ ಕಣ್ತೀವುವಿನಂ
ಶೂಲದಿನಿಱಿವಂತಿರೆ ಚಂಚುಗಳಿಂ
ಲೀಲೆಯಿನಱಿವೆಂ ನೋಡೆಂಬಂತಿರೆ ತಾಗುತ್ತಿರ್ದುದು ಖಗರಾಜಂ||೩೮||

ಹುಡಿಹುಡಿ ಮಾಡುವೆನೀ ಪುಷ್ಪಕಮಂ
ಕಡಿಖಂಡವ ಮಾಡುವೆನಿಂತಿವನಂ
ಕಡುಗಲಿತನದಿಂದೆನ್ನೊಡೆಯನ ಮಡದಿಯನೆಳೆದೊಯ್ದವನಂ
ಮೃಡನುರಿಗಣ್ಣೊಳಂ ತೊಡರ್ದು
ಬದುಕಿ ಹೋಹವನಾರೆಂಬಂತೆಡೆ
ಗೊಡದಡಸಿ ಹೋಯೆನುತಾಗಲು ದನುಜೇಂದ್ರನೊಡನೆ ವಿಹಗೇಂದ್ರಂ ||೩೯||

ಕಡುಕೆಯ್ದಡಿಗಡಿಗೆಯ್ತರುತಿರ್ದಪು
ದೆಡೆಗುಡದೆನಗಿದು ನೋಡೆಂದೆನುತಂ
ಪಿಡಿದು ಜಡಿದು ಕಡುಮುಳಿದಾ ಪಾಪಂ ಚಂದ್ರಹಾಸದೊಳು
ಹೊಡೆಯೆ ಜಟಾಯುವನೆರಡೆಱಕೆಗಳಿ
ಕ್ಕಡಿಯಾಗಲು ಬಿರ್ದುದು ಮುಗಿಲಿಂದಂ
ಹೊಡೆಯಲೊಡನೆ ಬೀಳುವ ಕುಲಗಿರಿಯೆಂತಂತೆ ಗಗನದಿನುರ್ವಿಯೊಳು ||೪೧||

ಕೊರಗಿದುದಾಗಳೆ ಮುಖಸರಸಿರುಹಂ
ಕರೆಗಣ್ಮಿದುವಾಗಳೆ ಕಣ್ಬನಿಗಳು
ಕರಗಿದುವಾಗಳೆ ತನುಲತೆ ಕಾರ್ಶ್ಯಕಸೀಮೆಯನೆಯ್ದತ್ತಂ
ಉರಿದುದು ದುಃಖಾನಲವಾಗಳೆ ನಿ
ಷ್ಠುರತರಮಾಗಿರೆ ಮನದೊಳು ಹೃದಯಂ
ಬಿರೆವಂತಾಗಳೆಯಾದುದು ಸೀತೆಗೆ ರಾಮಚಂದ್ರನ ವಿರಹದಲಿ ||೪೪||

ಕಳವಳಿಸಿದಳಳವಳಿದಳು ಸುಯ್ದಳು
ಬಳಲ್ವಳು ಬಸವಳಿದಳು ಬೆಂಡಾದಳು
ಚಳವಾದಳು ಬಾವಳಿಸಿದಳಳಲ್ದುಳು ನೊಂದಳು ಮಱುಗಿದಳು
ಮುಳಿದಳು ಮೆಯ್ಮಱೆದಳು ಮರುಳಾದಳು
ತಳೆದಳು ಮೂರ್ಚ್ಛೆಯನಾಗಳು ಜಾನಕಿ
ಬಲಭದ್ರನ ಕಾಣದೆ ಶೋಕಾನಳನಳುರೆ ತನ್ನ ಹೃದಯವನು||೪೬||

ಅನುಜಂಗನುವರಮರಿದಾಯ್ತೆಂದೆ
ನ್ನಿನಿಯಂ ರಣಕೇಳಿಗೆ ಪೋದಡೆ ಕ
ಳ್ಳನ ತೆಱದಿಂ ಪಿರಿದುಯ್ದಿದಪನೆನ್ನನಿದೊರ್ವಂ ಮಾಯಾವಿ
ದನುಜಮನುಜದಿವಿಜರೊಳೊರ್ವರು ರಾ
ಮನ ಕಿವಿಗೀ ವಾರ್ತೆಯನೆಯ್ದಿಸಿದಡಿ
ವನನೀಗಳೆ ಕುಱಿದಱಿ ಮಾಡನೆಯೆಂದಳುತಲಿರ್ದಳು ಜನಕಸುತೆ ||೪೯||

ಕಟ್ಟಕಡೆಯ ರುಚಿ ಚಿಂತಾಭರದಿಂ
ನಟ್ಟಡವಿಯೊಳದ್ದುತ ಬರೆ ಹುಲಿ ದೆಸೆ
ಗೆಟ್ಟ ತರುಣಹರಿಣಿಯ ತೆಱದಿಂದಂ ನೊಂದುಂ ಮಱುಗುತ್ತಂ
ದಿಟ್ಟಿಗಳೆರಡಱಿನುಗೆಗಣ್ಬನಿ ಬಾ
ಯ್ವಿಟ್ಟಸುಪಟ್ಟಿಗೆಟ್ಟು ಬರುತ್ತಿರೆ
ಕಟ್ಟಿದಿರೊಳು ಬರುತಂ ರಾವಣನಂ ರತ್ನಜಟಿ ಖಚರಂ ಕಂಡಂ ||೫೯||

ಆಗಸದೊಳು ಬರುತಂ ಪೆಂಬುಯ್ಯಲ
ನಾಗಳೆ ಕೇಳ್ದಾ ಖಚರಂ ಸಿಡಿಮಿಡಿ
ಯಾಗಿ ವಿಚಾರಿಸಿ ರಾವಣನೆಂದಱಿದೆಯ್ದಿ ಮುಂದಣ್ಗೆ
ಸಾಗರದಂತಿರೆ ರಾವಣ ಕೇಳ್ ನಿನ
ಗಾಗದು ಸೀಮೆಯ ಮೀಱಿ ನಡೆಯಲುಂ
ಬೇಗದಿ ಪರವನಿತೆಯ ಬಿಡು ಬಿಡದಿದ್ದೊಡೆ ನಿನ್ನ ಕೀರ್ತಿ ಮಸುಳಿಸದೇ||೬೦||

ರಸೆಯೊಳ್ಕೆಲರ ನ್ಯಾಯಪದದೆ ವ
ರ್ತಿಸುತಿರೆ ದಂಡಿಸುವಾತನಿಗೀ
ತಂ ಸದೃಶಕೃತ್ಯದೆ ನೆಗಳುತ್ತಿರೆ ಮಾಣಿಸುವರು ಪೆಱರಾರು
ಬಿಸುಡು ಬಿಸುಡು ಪರವನಿತೆಯನೀಗಳೆ
ಬಿಸುಡದೆ ಹೋದಡೆ ಕೇಳಿಂತಿಲ್ಲಿಂ
ಮಿಸುಕದೆಲಗುದೆಂ ಪೆಂಬುಯ್ಯಲ ಕೇಳ್ದಾ ಪೋಪೆನಲ್ಲೆಂ ದನುಜೇಂದ್ರಾ||೬೧||

ಹಲವಱೊಳೇಂ ಬಿಡು ಬೇಗದಿ ನೀನೀ ಪರ
ಲಲನೆಯನೀಗಳೆ ಬಿಡದೆನ್ನೊಳು
ಪಲವರಿ ಮಾಡಿದೆಯಾದಡೆ ನಿನ್ನೀ ತಲೆಯ ಹತ್ತುವನೆಯ್ದೆ
ತೊಲಗಿಸುವೆಂ ನಿನ್ನಟ್ಟೆಯ ದೆಸೆಯಂ
ಬಿಲುಗೊಳು ಕಲಿಯಾಗಕ್ಕಟ ಹೋಗದ
ಬಲುಪುಲ್ಲಂ ನಿನಗೀ ಬುದ್ಧಿಯ ನೆಗಳ್ದಂದೇ ಹೋಯಿತು ಕೇಳೆಲವೋ ||೬೨||

ಹದುಳಂ ಹೋಗಕ್ಕಟಸಾಯದೆ ನಿನ ಸ
ಗದುವೆನ್ನೊಳು ಲೇಸಲ್ಲದು ರಾವಣ
ನಿದಿರೊಳುಕಾದಿಬದುಂಕಿದರಿಲ್ಲೆಂಬುದ ನೀಂ ಕೇಳ್ದರಿಯಾ
ತ್ರಿದಶ ದನುಜ ಮನುಜರೊಳಾರೆನ್ನಯ
ಪದಕಮಳವನೋಲೈಸದೆ ಬಾಳ್ವ
ರ್ಕದನಕ್ರೀಡೆಗೆ ಮನವುಂಟಾದಡೆ ಕಾದೆ ಬಿಲುಗೊಳು ನೀಂ ಖಚರಾ||೬೩||

ಆಗಳ್ ವಿದ್ಯಾಚ್ಛೇದಮನಾತಂ
ಗಾಗಿಸಿ ಕೆಡಹಿ ದಶಾಸ್ಯಂ ಕಡುಪಿಂ
ಪೋಗುತ್ತಿರೆ ಪ್ರತಿವಿದ್ಯೆಯನಱಿಯದೆ ಬಿರ್ದು ರತ್ನಜಟಿ
ಈಗಳಿದಂ ರಾಮಂಗಱಿಪುವರಾ
ರ್ಪೋಗಿಯೆನುತ್ತಂ ತಾಂ ಕಡುಪಿಂ ಬೆಂ
ಡಾಗಿ ಹಲುಂಬುತ್ತಿರೆಯುಂ ನೊಂದಾಗಳೆತ್ತಲು ಜನಕಸುತೇ||೭೧||

ನಿರುಪಮ ಗುಣನಿಧಿ ರಾಮನ ಕೈಯುಂ
ಗುರವೆನ್ನಲ್ಲಿಗೆ ಬಪ್ಪನೆವರಂ
ನಿರಸನವೆನಗದು ಬಾರದೆ ತಡೆದಡೆ ಬಿಡುವೆಂ ದೇಹವನು
ಪರಮಜಿನನೆ ದೇವಂ ರಾಘವನೆ
ಪುರುಷಂ ಜಿನಮುನಿಗಳ್ ಗುರುಗಳ್ ಮಿ
ಕ್ಕರನಱಿಯೆಂ ತ್ರಿಕರಣಶುದ್ಧಿಯೊಳಂ ಪೇಳಿ ಬಳಕೃಷ್ಣರಿಗಿದನು||೭೪||

ಎನೆ ರಾವಣನಿಂತೆಂದಂ ನಿನಗಿನ್ನಿ
ನಿನಿಯಗಿನಿಯನೆಂಬೀ ನುಡಿಯಂ ಬಿಡು
ಮಾಣಿದನೆನ್ನಯ ಮೈದುನನಾಜಿಯೊಳಿರ್ವರುಮಂ ಸಲೆ ಕೊಂದಂ
ಮನುಜಿಪ್ರಸವಾಂಪವೆ ಖೇಚರರೊಳು
ನೆನೆಯದಿರೆನ್ನೀ ಮಾತಂ ಮನದೊಳು
ದನುಜಮನುಜದಿವಿಜಾಧೀಶ್ವರನಾನೆನೆಗಿಂ ಸತಿಯಾಗಿರು ಸೀತೆ ||೭೫||

ರಣದೊಳು ತನ್ನಂ ಕೊಲುತಿರ್ದಡೆ ಲ
ಕ್ಷ್ಮಣನಲ್ಲಿಂ ಸಿಂಹದದನಿಗೈದಡೆ
ಮಣಿಯದೆ ರಾಮಂ ಬಿಲುಗೊಂಡೆಯ್ದಿದಡಾತನುಮಂ ಮುಳಿದು
ಹೆಣಮಯ ಮಾಡಿದನೆನ್ನಯ ಮೈದುನ
ನಣಕಂ ಸೊಗಯಿಸುವುದೆ ಖೇಚರರಿಗೆ
ಗಣನಾತೀತಂ ಬರಿದಾಳಿರ್ವರೆ ಪೇಳ್ಮಾಡಲಿರ್ಪರೆ ಜನಕಸುತೇ||೭೬||

ಎನೆ ಕಿವಿಗಾನುಡಿಯೈತರೆ ಜಾನಕಿ
ಮನಗುಂದಿದಳಳವಳಿದಳು ಸುಯ್ದಳು
ನೆನೆದಳು ಹಂಬಲಿಸಿದಳಂತಾಗಳೆ ಮೂರ್ಚೆಯೈದಿದಳು
ಇನಿತಾನುಂ ಹೊತ್ತಿಂಗೆಚ್ಚೆತ್ತಳು
ಮುನಿವವರೆನೆವೆನ್ನರು ರಾಮನ ಲಕ್ಷ್ಮ
ಣನುಮನ್ನಾರ್ಕೊಲುವರು ಜಗದೊಳಗೆಂದಳೆಂದು ಮನದಲ್ಲಿ||೭೭||

ಆಗದು ಪರಪುರುಷರೊಳು ಮಹಾಸತಿ
ಗೇಗೆಯ್ದುಂ ನುಡಿಯಲು ನುಡಿದಂದೇ
ಪೋಗದಿರದು ಶೀಲವ್ರತಮದಱಿಂ ನುಡಿಯನುಚಿತವೆಂದು
ಮಾಗಿಯ ಕೋಗಿಲೆಯಂತಿರೆ ಮೋನಮ
ನಾಗಳು ಕೈಕೊಂಡಿರೆ ಜನಕಜೆ ತಾಂ
ಪೋಗಿ ಭರದೆ ಲಂಕಾಪುರವರಮಂ ಪೊಕ್ಕನಿದಿರ್ವರೆ ನಿಜಸೇನೆ ||೭೮||

ಪುರುಷವ್ರತಮಂ ರಕ್ಷಿಸಿದಡೆ ನಿನ
ಗುರುಮುದದಿಂ ಬೆಸಕೈವೆವದಲ್ಲದೆ
ಪರವನಿತೆಯರ ಗುಣಾಚ್ಯುತಿ ಮಾಡಿದೆಯಾದಡೆ ಬಲುಪಿಂದ
ಇರೆವಾರುಂ ಬೆಸಕೈಯವು ನೀನಿದ
ಪರಿಭಾವಿಸು ದಶಕಂಧರಯೆಂದೆನು
ತಿರೆ ವಿದ್ಯಾದೇವತೆಗಳು ಸುತ್ತಂ ಪುರವಂ ಪೊಕ್ಕನು ದನುಜೇಂದ್ರಂ ||೭೯||

ಅಗಣಿತಮೆನಿಸಿದ ನಿಜನಂದನದೊಳು
ಪೊಗುತಿರೆ ರಾವಣನಾತನ ಕೇಡಿಂ
ಗಗಿದಪುವೆನಲಲ್ಲಿಯ ವೃಕ್ಷಂಗಳುನಡನಡನಡುಗಿದವು
ಪುಗಲ್ಪುಗಲೆಂದವು ಕೋಗಿಲೆಗಳದಂ
ಬಗೆಯದೆ ನಿಜಲೀಲಾಮಂಟಪದೊಳು
ಜಗತೀ ಜಾತೆಯನಿರಿಸಿಯಸುರರಂ ಕಾಪುವೇಳ್ದನತಿಬಳರಂ ||೮೦||

ಅಂತಂಬರಸೇನೆಯತಾನಾಗಳ
ನಂತಮುಮಂಕಾಪಿರಿಸಿ ದಶಾಸ್ಯಂ
ತಾಂ ತನ್ನರಮನೆಗಲ್ಲಿಂ ತಳರ್ದುಂ ಪೋಗಿ ಬೇಗದೊಳೊಳಗೆ
ಅಂತಾ ಪುರಕಾಮಿನಿಯರನೆಲ್ಲರ
ನಂತಾ ಜಾನಕಿಯನೊಡಂಬಡಿಸಲು
ಕಂತುಗ್ರಹಪೀಡಿತನಟ್ಟಿದನೆನಲೇನಮಾಡರು ಕಾಮಿಗಳು ||೮೧||

ಆಗಳು ರಾವಣನರಸಿಯರೆಲ್ಲಂ
ಬೇಗದಿ ಜಾನಕಿಯಲ್ಲಿಗೆ ಬರುತತಿ
ರಾಗದಿನೆಱಗಿ ದಶಾಸ್ಯನ ಸಿರಿಯಂ ಪೇಳುತ್ತಿರೆ ಭರದಿಂ
ಏಗೈದು ಕೇಳಳು ನೆನೆಯಳು ನುಡಿ
ಗಾಗಳು ಜಾನಕಿ ತನ್ನೆರ್ದೆಯಂ
ತಾಗುತ್ತಿರೆ ಶೋಕಾನಳನವನಿಜೆ ನೆನೆವುತ್ತಿರ್ದಳು ರಾಘವನಂ ||೮೨||

ಹೆಣಮಯವಾಗಿರ್ದುದು ರಣಮೆತ್ತಂ
ವ್ರಣದ ಸಮುದ್ರಂ ಮೊರೆವುತ್ತಿರ್ದುದು
ಕುಣಿವುತ್ತಿರ್ದಪವಂಬರಚರರಟ್ಟೆಗಳೆಲ್ಲೆಡೆಗಳೊಳು
ರಣದೊಳು ಸಿಂಗನಿನಾದವನೊರ್ವಂ
ಮಣಿಯದೆ ಮಾಡಿದನಾಗಲೆವೇಳ್ಕುಂ
ಪ್ಲಣಯಿನಿ ಜಾನಕಿಯೆಂತಿರ್ದಪಳೋ ಎನ್ನುತ ಕಂಡಂ ಲಕ್ಷ್ಮಣನಂ ||೮೪||

ಬರುತಿದ್ದಣ್ಣನ ಕಂಡಾಗಳೆ ಚೆ
ಚ್ಚರದಿಂದಿದಿರ್ವಂದಡಿದಳಿರ್ಗಳಿ
ಗೆಱಗಿ ಖರಚರಕುಲಕಾಲಾಂತಕನಿರದೆಂದನಿಂತೆಂದು
ಪಿರಿದು ಭಯಂಕರವೆನಿಸಿದ ಗಹನಾಂ
ತರದೊಳು ದೇವಿಯನಿರಿಸಿ ಭರದೆ ದೇ
ವರು ಬಂದಂದಂ ಇನಿತಂ ಮಾಡಿದನವ ಮತ್ತೊರ್ವಂ ನಾನು ಮಾಡೆನು ನಿಮ್ಮಾಣೆ||೮೫||

ಅನುಜಂಗನುವರಮರಿದಲ್ಲಿದು ಸಿಂ
ಹನಿನಾದವ ಮಾಡಿದವನು ಮತ್ತೊ
ರ್ವನು ಘನವಾಗಿಯೆಯೆಡಗಣ್ಕೆತ್ತುತ್ತಿರ್ದಪುದೇನಂ ಪೇಳ್ದಪುದೊ
ಎನಂತು ರಾಘವನೈತಂದಂ ಹ
ಮ್ಮನೆ ಲತಿಕಾ ಮಂಟಪದಲ್ಲಿಗೆ ಪಾ
ವನಗುಣನಿಳಯಂ ನಿರುಪಮಮಹಿಮಂ ವಾದಿಶರಭಭೇರುಂಡಂ ||೮೭||

ಹದಿನಾಲ್ಕನೆಯ ಸಂಧಿ.

ಪಲ್ಲವ :-

ವನಧಿಯನುತ್ತರಿಸಿ ವಜ್ರಪರಿಧಿಯನೊಡೆದು
ದನುಜಸುತನಂ ಕೊಂಡು ಬನವನೋಡದೆ ಕಿತ್ತು
ಜನಕಸುತೆಗುಂಗುರಮನಿತ್ತು ಪುರಮಂ ಸುಟ್ಟು ಚೂಡಾಮಣಿಯ ಕೊಂಡು ಹನುಮ ಬಂದ

ಶ್ರೀರಮಣಸುರಕಾಂತಾರದಾವಾನಳನು
ದಾರ ಸುರಯಾಜನಾಸ್ಥಾನ ಮಂಟಪಮಧ್ಯ
ಚಾರುಸಿಂಹಾಸನದೊಳಿರ್ದು ಬಳಸಿದ ಕಪಿಧ್ವಜರನನುನಯದಿ ನೋಡಿ
ಆರಿಲ್ಲಿ ಲಂಕಾಪುರಕ್ಕೆ ಬಲುಪಿಂ ಪೋಗಿ
ಧಾರುಣೀಸುತೆಗೆನ್ನ ಕೈಯ ರವಿಮಂಡಲದ
ಚಾರುಮುದ್ರಿಕೆಯಿತ್ತು ಚೂಡಾಮಣಿಯ ಕೊಂಡು ಬಪ್ಪ ಭಟರೇಳಿಮೆನೆ ಕುಮುದಚಂದ್ರ || ||೨||

ಶ್ವರನ ಭಾಳಲೋಚನವನೆಯ್ದಿದರುಂಟೆ
ವಾಸುಕಿಯ ಹೆಡೆಯ ಮಾಣಿಕವ ತೆಗೆದವರುಂಟೆ
ಆಸುರದ ಸಿಡಿಲಪಿಡಿದವರುಂಟೆ ಸಿಂಹದ ನಿವಾಸಮಂ ಪೊಗುವರುಂಟೆ
ಈ ಶರದಿಯಂ ದಾಂಟಿ ಲಂಕಾಪುರಕೆ ಪೋಗಿ
ಯಾ ಸೀತೆಗುಂಗುರವನಿತ್ತು ಬರ ಹೇಳಿದನು
ದಾಶರಥಿಯೆಂದು ಬಿರುದಿನ ಕಪಿಧ್ವಜರಂದು ನೆಲನ ಬರೆವುತ ಮೌನಗೊಂಡಿರ್ದರು||೩||

ನಳ ನೀಲ ಸುಗ್ರೀವ ಬಲಭೀಮ ಬಾಹುಲಿಕ
ಕುಳಶೈಲ ಗಂಧಮಾದನ ತಾಳಸೇನತುಂ
ಡಿಲ ಗವಯ ತಕ್ಷಖಗಪಾಕ್ಷ ಸೂರ್ಯಜ್ಯೋತಿ ರತ್ನಜಟಿ ಪಾವಕಜಟಿ
ಕುಳಿಕಕಾಳಾನಳ ವಿರಾದಿತವಿದುರ್ದಾದಿ
ಬಲಮಖಱರೈದೆ ತಲೆಯರಿಕುತ್ತಿನುಡಿಯದಿರೆ
ಬಲಿಮುಖಪತಾಕಾಗ್ರಗಣ್ಯನೆರ್ದು ಹನುಮನೆನಗೀವುದೀ ಬೆಸನನೆನುತಾಗಳು||೪||

ನರನಾಥ ನಿಮ್ಮ ಕೈಯುಂಗುರವನಿತ್ತು ಚೆ
ಚ್ಚರದೆ ಚೂಡಾಮಣಿಯ ಕೊಂಡು ಕಂಡಂಬಿಕೆಯ
ಚರನಂತೆ ಪೋಗಿ ಬರ್ಪವನಲ್ಲ ಪವನಂಜಯಂಗಮಂಜನೆಗುದಯಿಸಿ
ಕರಸರಸಿಯಂ ಪೊಗುವ ತೆಱದಿ ಲಂಕಾಪುರಮ
ನುರವಣಿಸಿ ಪೊಕ್ಕು ಕಮಲಮೃಣಾಳಮಂ ಕೀಳ್ವ
ಪರಿಯಿಂದೆ ದಶಶಿರನ ದಶಶಿರಂಗಳ ಕಿತ್ತು ಜಗದಂಬಿಕೆಯನಿಲ್ಲಿಗಾಂ ತಪ್ಪೆನು ||೫||

ಮಕರಾಕ್ಷಮಹಾಕಾಯನ ಸಿರಮೆ ಒಲೆ
ಕಲ್ಲು ವಜ್ರಮುಖನ ತಲೆ ಬಳಕೆಯಂ
ಖಪ್ಪರವ ಮಾಡಿಟ್ಟು ಸಕಳರಾಕ್ಷಸರ ಪಿಳಿದಾರಕ್ತಮಂ ತೀವಿ ಇಡಂಗಿಯ ಸೌದೆ ಮಾಡಿ
ಶಕುತಿಯಿಂದೆನ್ನ ಕೋಪಾಗ್ನಿಯಿಂದವೆ ಉರುಪಿ
ಉಕ್ಕುವರುಧಿರದಿಂ ರಾವಣನ ನಾಯಿಕಿ ಕುಂ
ಭಕರ್ಣನ ಹುದಿನಂ ತೊಳಸಿಯಟ್ಟು ರಸಬುತ್ತಿಯನೆ ರಣವೂಡಿ ಬಹೆನೆಂದ ವೀರಹನುಮ ||೭||

ಮಣಿಮಯ ವಿಮಾನಮಂಗಣನಾತಿವರ್ತಿವಾ
ರಣತುರಗರಥಪದಾತೀಪ್ರಬಲಸೈನ್ಯಮಂ
ರಣವೀರನಾಗಿರಿಯ ಮೇಗಿರಿಸಿಕೊಂಡು ವಜ್ರದಗದೆಯನಾನಂದಮಂ
ಫಣಿಪತಿಯುಗಿಯೆಶಕೂರ್ಮಪತಿಯುಗಿಯೆ ತಾರಾ
ಗಣವುದುರೆ ನೆಲನದಿರೆ ಕುಲಗಿರಿಗಳಲ್ಲಾಡೆ
ಯಣುವನದಟಿಂ ಸಿಂಹಲಂಘನಮಲಂಘಿಸಿದನಬ್ಧಿಯಂ ದಾಂಟಿ ಲಂಕಾಪುರ||೧೩||

ಕಮಳವಿಲ್ಲದ ಕೊಳಂ ಪ್ರಮದೆಯಿಲ್ಲದ ಪುರಂ
ಚಮರಿಯಿಲ್ಲದ ವನಂ ಭ್ರಮತಿಯಿಲ್ಲದ ಲತಿಕೆ
ಸುಮತಿಯಿಲ್ಲದ ಜನಂ ಸಮತೆಯಿಲ್ಲದ ಜಾತರೂಪಧರಮುನಿಮುಖ್ಯರು
ರಮಣೀಜನಂಗಳಿಲ್ಲದ ಲೀಲೆ ಲಲಿತವಿ
ಭ್ರಮವಿಲ್ಲದಂಗನೆಯರಾಯವಿಲ್ಲದ ಬೀಯ
ಕ್ರಮವಿಕ್ರಮಂಗಳಿಲ್ಲದ ಸಂಭಟರೆಲ್ಲ ಲಂಕಾದ್ವೀಪದೊಳಗಿರ್ದ ನಾಡೊಳೆಯ್ದೆ ||೧೭||

ಪರಿಕಿಸೆ ಸ್ಥಲದುರ್ಗಜಲದುರ್ಗಗಿರಿದುರ್ಗ
ವನದುರ್ಗಪಂಕದುರ್ಗಂಗಳೆಲ್ಲಂ ಕೂಡಿ
ನೆಱೆದೊಪಡೇಂ ಲಂಕಾಭಟನ ಲಂಕೆಗೆಣೆಯಾಗಲಾರ್ತಪುವೆ ಜಗದೊಳೆನಿತುಂ
ಪಿರಿದು ಕೌತುಕದೆ ಪಲಪ್ರವನನಾಟಿಕಾ
ತರುಲತಾಗೃಹಕೂಪದಿಂಪಟಾಕೆ ಮಕರಣ
ಪರಿಕೃತಮನ ಸುರಪುರಮಂ ಕಾಮರೂಪಿಣೀವಿದ್ಯೆಯಿಂ ಪೊಕ್ಕನಣುವಂ ||೨೦||

ಮಿಗಿಲೆನಿಪ ಗಂಧಿಗರ ಕೇರಿಯೊಳು ರುದ್ರಭಾ
ಗೆಗೆ ಬಂದು ಕುಳ್ಳಿರ್ದು ವೈದ್ಯರನುತಿರ್ದರಾ
ರಿಗಮರಿದು ಧನ್ವಂತರೀ ಮುಖುದಿರ್ದರ್ಗೆ ರಾವಣನ ವಿರಹವ್ಯಥೆ
ಅಗಣಿತ ಮಹಿಮೆ ಮಹಾಸತಿ ಸೀತೆ ತೃಣಕೆಯುಂ
ಬಗೆಯಳಾವಿನನಾಕೆಂ ತಂದನಲ್ಲ ಲಂ
ಕೆಗೆ ಮಾರಿಯಂ ತಂದನೆಂತುಂ ಪತಿವ್ರತೆಯ ಸುಯಲದೆನೇನಮಾಗಿಸಿದು ಕೇಡು ||೩೩||

ಸುರಪತಿಯ ವಿರಹದಿಂ ಕರಗಿರ್ದ ಶಚಿಯೊ ಹಿಮ
ಕರನ ವಿರಹದಿ ಕೊರಗಿರ್ದ ಶಾರ್ವರಿಯೊ
ಖರಕರನ ವಿರಹದಿಂ ನಾಡೆಯುಂ ಪಾಡಳಿದು ಬಾಡಿರ್ದದಿನಲಕ್ಷ್ಮಿಯೋ
ಹರವಿರಹದಿಂ ಚಿಂತಿಸುತಿರ್ದ ಪಾರ್ವತಿಯೊ
ಹರಿವಿರಹದಿಂದ ದೂರಿಸಿದ ಗೋಮಿನಿಯೊ ಪೇ
ಳ್ದರೆಯೊಳೇರಾಮವಿಯೋಗದಿಂ ಜನಕಸುತೆಯಿರೆ ದನುಜರಾ ಹನುಮನಂಕಂಡರು ||೧೧೭||

ಹೊಗೆಗೊಂಡ ಚಂದನಲತಾಮಂಜರಿಗೆ ಮಂಜು
ವಿಗೆಗೊಂಡ ಪದ್ಮಿನಿಗೆ ಧೂಳಿಹತ್ತಿದ ಪುತ್ಥ
ಳಿಗೆ ಬಿಸಿಲು ತಾಗಿಸಿತೋತ್ಪಲವನರ್ಶರೀಗೆ ಮಾಸಿರ್ದ ರಸಚಿತ್ರಿಕ
ಮುಗಿಲ ಮುಸುಕಿಂ ಮಗುಳ್ದುಮಿಸುಪ ಶಶಿಕಳೆಗೆ ಬೆಂ
ಕಿಗೆ ಕರಂ ಬಡವಾದನಂಗೆಯತನುಗೆ ಪಾಟಿ
ಪಾಟಿ ಸಮಾಸರಿಸಮಾನಮೆನೆ ತೋಣೆಯಂಬಿನ ಜನಕಸುತೆಯಿರ್ದಳು ||೧೧೮||

ಜಿನಸಮಯಕಮಲವನತಿಕಸನದಿವಾಲಕ್ಷ್ಮಿ
ಜಿನಸಮಯಕುಮುದವನವರ್ದನಿನಿಶಾಲಕ್ಷ್ಮಿ
ಜಿನಸಮಯವನಮಾಳಿಕಾದ್ವಯದನಯದ ಪುಷ್ಪಕಮಲವಸಂತಲಕ್ಷ್ಮೀ
ಜಿನಸಮಯಶಾಸ್ತ್ರಪ್ರಮಾಣಚಯ ಜಯಲಕ್ಷ್ಮಿ
ಜಿನಸಮಯಮುಚಿತಘನ ಪುಣ್ಯಲಕ್ಷ್ಮೀ ರಘು
ದಿನಕರನ ರಾಘವನ ಸರ್ವಾಂಗಲಕ್ಷ್ಮಿಯೆಂದು ಕೈಮುಗಿದೆಱಗಿದನಣುವನು ||೧೪೩||

ಬೇಗ ಪೊಱಮಡಲಿಯಾನೆಗಳೈದೆ ನಱೆಪಣ್ಣಿ
ಬೇಗಪೊಱಮಡಲಿ ಕುದುರೆಗಳೈದೆ ಪಲ್ಲಣಿಸಿ
ಬೇಗಪೊಱಮಡಲಿ ರಥಪುಟಕೋಟಿಗಳು ಮೈದೆ ಸರಕಟಿಸಿ ಭರವಸದಲಿ
ಬೇಗ ಪೊಱಮಡಲಿ ದಾನವವೀರಭಟರೈದೆ
ಬೇಗ ಪೊಱಮಡಲಿ ಸೇನಾನಾಯಕರ ಕೊಂದ
ನೀಗಳೈತಂದು ವಜ್ರಮುಖನಂ ರಾಮದೂತನೆಂಬಬ್ಬರವಗುರ್ವಿಸಿತ್ತು ||೧೬೧||

ಕದಪಿನೊಳು ಬೆವರುಣ್ಮೆ ಕಿಸುಸೆರೆಗಳೈದೆ ನಯ
ನದೊಳಗುರ್ಬಿಸೆ ಮಬ್ಬು ಪರ್ಬೆ ಮುಖದೊಳು ಲಲಾ
ಟದೊಳು ಭೀಷಣಮೆನೆತ್ರಿಪತಾಕೆಯೋಗೆಯೆ ತುಟಿಕೆತ್ತೆ ಕುಡಿಮೀಸೆಯೊಡನೆ
ಬದವೆ ಪುಳಕಂ ಪುಬ್ಬು ಗಂಟಿಕ್ಕಿ ಮೂಜಗಂ
ಗದಗಂಪಮಂ ಪಡೆಯೆ ಕೋಪದಿಂ ಪೋಗಿ ದಶ
ವದನನೋಲಗಶಾಲೆಯೊಪಳು ಸಿಂಹಪೀಠಮನಳಂಕರಿಸಿಯಬ್ಬರವಿದೇನೆನುತಿರೆ ||೧೬೩||

ಆಗಳೈತಂದ ಸುರಪತಿಗೆ ಸಾಷ್ಟಾಂಗನುತ
ನಾಗಿ ಬಿನ್ನಯಿಸಿದನು ಬರ್ವನಂದಿಂತೆಂದು
ಸಾಗರವನುತ್ತರಿಸಿ ವಜ್ರಮಯ ಲಂಕಿಣಿಯ ವಿದ್ಯಾಪರಿಧಿಯನು ಬಡೆದು
ತಾಗುತಿರ್ದಪನುಱದೆ ವಜ್ರಮುಖನೊಡನೆ ಲಯ
ವಾಗುತಿರ್ದಪುದು ದಾನವಸೇನೆಯೈದೆ ನೀಂ
ಬೇಗದಿಂ ಪಡಿಬಲನಟ್ಟದಿರ್ದಡೆ ರಾಮದೂತನಾತಂ ಸೀತೆಯಂ ಕಾಣ್ಬನು||೧೬೪||

ಆ ಕ್ಷಣದಿನೈತಂದು ನೆಱೆ ಮುಂದೆ ನಿಂದಿರ್ದ
ರಾಕ್ಷಸೇಂದ್ರರಿಗೈದೆ ಲಂಕಿಣೀಪರಿಧಿಯಂ
ರಕ್ಷಿಸುವ ವಜ್ರಮುಖನೊಡನೊರ್ವ ಬಂದು ಭರದಿಂ ತಾಗುತಿರ್ದಪಂ  
ಈಕ್ಷಿಸುತ್ತಿರದವನ ತಲೆಯನೀಗಳೆ ತಂದು
ದಕ್ಷತನಮಂ ತೋರ್ಪುದಿರದೆ ನೀವೆಂದು ರ
ಕ್ಷೇಕಷಣಂ ದಶಕಂಧರಂ ಬೆಸಸೆ ತಮತಮಗೆ ಭಾಷೆಯಂ ಕೊಡುತಲ್ಲಿಂ ತಳರ್ದರು||೧೬೬||

ದನುಜಾಂಗನೆಯರೈದೆ ಭಯಚಕಿತಚಿತ್ತೆಯರ್
ತಮತಮಗೆ ಮಂಡೋದರಿಗೆ ನುಡಿದರಿಂತೆಂದು
ಜನಕಜೆಯ ಕನಸೆ ದಿಟವಾಯ್ತು ರಾಘವನ ದೂತಂ ಬಂದನೊರ್ವನೆಂದು
ಜನವಿಂದು ಬೊಬ್ಬಿಡುತ್ತಬ್ಬರಿಸುತ್ತಿರ್ದಪುದು
ಮುನಿದು ಕಾಳಗಕೆ ಪೊಱಮಡಿಸುತಿರ್ದಪುದು ಸೇನೆ
ಘನಭೇರಿ ನಿಸ್ಸಾಳ ಕಹಳಾರವಂ ವ್ಯಾಪಿಸುತ್ತಿರ್ದಪುದು ಚತುರ್ದಶಭುವನಮಂ ||೧೬೭||

ಸೀತೆಯೆಂದಳ್ ತನ್ನ ಮನದೊಳಾ ಸಮಯದೊಳ್
ಭೀತಿಯಿಂ ತವೆ ಕಂಡ ಕನಸು ದಿಟವಾದಡೆ ಪು
ರಾತನ ಭವದೊಳು ಪಾರ್ಜಿಸಿದ ಪುಣ್ಯದ ಫಲಂ ದಿಟದಿನೆನಗುಂಟಾದಡೆ
ಮಾತೇನೊ ರಾಘವನ ಕೈಯ ರವಿಮಂಡಳವಿ
ನೂತಮುದ್ರಿಕೆಯನೆನ್ನಲ್ಲಿ ಗದಟಿಂದೆ ತಂ
ದೀ ತರುಣಿಯರ್ನೋಡೆ ತಂದೀವ ನಿರುಪಮ ಮಹಾನುಭಾವನೀಗಳೆ ಬಂದಪಂ ||೧೬೮||

ಅನುವಸರದೊಳು ಬೊಬ್ಬೆಯಾದಂದಕಟಕಟಘ
ಮ್ಮನೆ ಮಗುಳ್ದನ ಸುರನಂತವನ ನೊಸಲಕ್ಕರ ದಿ
ನಿನ ಕುಲಾಧಿಪತಿ ಬಪ್ಪನ್ನೆಗಂ ತೊಡೆಯದಿರಲಿದಾಗವೇಳ್ಕದೆಂದು
ಮುನಿದಾಂ ಕೊಲುವೆನೆಂದು ಮಸಗಿ ಬರುತಿರ್ದೊಡರ
ಮನೆಗೆ ನುಣ್ಣನೆಯಣ್ಣವಳಿಯದೆ ಮಗುಳ್ದನೆ ಜ
ನನಿ ಸಮಯದೊಳಧೀಶ್ವರನ ಮುದ್ರಿಕೆಯನು ಕಾಣಿಕೆಯನೀವೆನೆಂದಂ ಪವನಜಂ ||೧೬೯||

ದೇವಿ ಜಾನಕಿಯೊರ್ವಳಱಿವ ಮಿಕ್ಕಸುರ ಕಾಂ
ತಾವಳಿಯಱಿಯದ ರೂಪದ ವಿದ್ಯೆಯಂ ತಳೆದು  
ದೇವ ರಾಘವನಟ್ಟಿದಿನಮಂಡಳದ ಮುದ್ರಿಕೆಯನು ಕಾಣಿಕೆಯನಿತ್ತು
ಪಾವನಿ ನಿಜಾಂಬಿಕೆಗೆ ಸಾಷ್ಟಾಂಗವೆಱಗಿ ಸ
ದ್ಭಾವದಿಂ ರೋಮಾಂಚಕಿತ ಗಾತ್ರನಾಗಿನು
ರ್ವೀ ಭಾಗದಿ ನೆರ್ದು ಕೈಮುಗಿದು ನಿಂದಿರೆ ಜಗಜ್ಜನನಿ ಕಂಡು ನಿರ್ಭರ ಹರುಷದಿಂ ||೧೭೦||

ಇನ ಕುಲಲಲಾಮ ರಾಮ ತನ್ನ ಕೈಯೊಳಗಿರ್ದ
ರವಿಮಂಡಳದ ಮುದ್ರಿಕೆಯ ನೀ ಮಹಾನುಭಾ
ವನಕೈಯೊಳಿತ್ತು ಪಿರಿದೆನಿಪ ಕರುಣದಿನೆನಗಿದಂ ಕಳುಪಿದಂ ಪುಣ್ಯಫಲದಿಂ
ಕನಸೊ ಮೇಣಿದು ಭ್ರಾಂತಿಯೊ ಮೇಣಿದು
ದನುಜಮಾಯೆಯೊ ಮೇಣಿದೆನ್ನ ಸಂಕಲ್ಪಶತ
ಜನಿತಭಾವವೊ ಮೇಣಿದತ್ಯಂತ ನಿಶ್ಚಯಮಾಯೆನುತ ಪತಿಯುಂಗುರಮನೀಕ್ಷಿಸಿದಳು ||೧೭೧||

ಕರಕಮಳದೊಳು ಹೃದಯದೊಳು ಪದ್ಮದೊಳು ಪೀನ
ವರಕುಚಾಂಭೋಜದೊಳು ಮುಖಪುಂಡರೀಕದೊಳು
ದರಕೋಕನದದಳದೊಳುತ್ತಮಾಂಗಾಂಬುರುಹದೊಳು ಮಕುಟ ಸರಸಿಜದೊಳು
ಧರಣೀತನೂಜೆ ನಲವಂ ತಳೆದು ತನ್ನ ನಿಜ
ಪುರುಷನಟ್ಟಿದ ರತ್ನಮುದ್ರಿಕೆಗೆ ಪೊಡವಟ್ಟು
ಪರಮಾನುರಾಗದಿಂ ರಘುಪತಿಯನೀಕ್ಷಿಪಂತೀಕ್ಷಿಸುತ್ತಿರ್ದಳಂಬುಜದಳಾಕ್ಷಿ ||೧೭೨||

ಕೈಗೆ ಬಂದುದು ಕಲ್ಪವೃಕ್ಷಮೆಂದೆಂಬಂತೆ
ಕೈಗೆ ಬಂದುದು ಕಾಮಧೇನುವೆಂದೆಂಬಂತೆ
ಕೈಗೆ ಬಂದುದನಂತ ಕೋಟಿ ವೃದ್ಧಿಯೆನಿಪ ಸಿದ್ಧರಸವೆಂಬಂತಿರೆ
ಕೈಗೆ ಬಂದುದು ಸುಚಿಂತಾಮಣಿಯೆಯೆಂಬಂತೆ
ಕೈಗೆ ಬಂದುದು ರಘುಪತಿಯ ಚಿತ್ತವೆಂಬಂತೆ
ಕೈಗೆ ಬಂದುಂಗುರ ಮನನುರಾಗದಿಂದೆ ಜಾನಕಿ ನೋಡುತಿರ್ದಳಾ ಸಮಯದಲ್ಲಿ ||೧೭೫||

ಹನುಮನಿಂತೆಂದನೆಲೆ ತಾಯೆಯದುಮುದ್ರೆಯ
ಲ್ಲಿನ ಕುಲಲಲಾಮರಾಮನ ತೋಳಬಂದಿ ನಿ
ಶ್ಚಳದಿನಿರ್ದಪ ಸಲಕ್ಷ್ಮಣನಾಗಿ ಖರದೂಷಣರ ಬಂದಮನಾಡಿಸಿ
ತಿಳಿದು ಸಿಂಹಧ್ವನಿವ್ಯತಿಕರಮನರ್ಕಜಟಿ
ಕುಳಕುಮಾರನನರ್ಧಮೃತನಿಂಶಜಟಾಯುವಿಂ
ಬಳಿಕ ಕಪಿಕುಲಮನಾದರಿಸಿ ಕಿಷ್ಕಿಂಧದಿಂ ಬರಲಿರ್ದಪಂ ಮುಂದೆ ಬಂದೆ ನಾನು ||೧೭೭||

ರಣಭೂಮಿಯೊಳು ಸಿಂಹನಾದಮಂ ವೀರಲ
ಕ್ಷ್ಮಣನಱಿಯದಂತೆ ರಾಮಂ ಕೇಳ್ವ ತೆಱದಿ ರಾ
ವಣನೆಸಗೆ ಮಾಯೆಯಿಂ ನಿಮು ಹೊರೆಯಿಂದ ರಘುವಲ್ಲಭನನಂದಗಲಿಸಿ
ಗುಣಹೀನನಿಂದು ಕಳೆಯಂ ರಾಹು ಪಿಡಿವಂತೆ
ಮಣಿಯದೈತಂದು ನಿಮ್ಮಂ ಪಿಡಿದು ತನ್ನ ನಿಜ
ಮಣಿವಿಮಾನದೊಳಿಟ್ಟು ಲಂಕಾಪುರಕ್ಕೆ ಭರದಿಂ ಬಂದನಲ್ಲಿಂ ಬಳಿಕ್ಕ ತಾಯೆ ||೧೮೭||

ಗಱಿವೆಟ್ಟದಂತೆ ಬಿರ್ದಿರೆ ಜಟಾಯನಕಂಡು
ಅಱಿದು ಕರುಣಿಸಿ ಪಂಚಪದ್ಮನಾತಂಗೆ ಜಗ
ದೆಱೆಯನಾಗಲೆವೇಳ್ದು  ಸುಗತಿಯಂ ಮಾಡಿ ನಿರ್ಮಲ ಮಹಾಗಹನದೊಳಗೆ
ಅಱಸಿ ಕಾಣದೆ ಮೂರ್ಛೆಯೊಳೆ ಲಕ್ಷ್ಮಣನಲ್ಲಿ  
ಗಱಸುತಂ ಬಂದಣ್ಣನು ಕಂಡು ತಾನಲ್ಲಿ
ನೆಱೆ ಮೂರ್ಛೆಯೋಗೆ ಬಂದಲ್ಲಿಗೆ ವಿರಾಧಿತನ ವೀರನೆಚ್ಚಱಿಸಿದರ ಕಂಡು ತಾಯೆ ||೧೯೦||

ಅಂತು ಕಿಷ್ಕಿಧ ಪುರದೊಳು ರಾಮಲಕ್ಷ್ಮಣರ
ನಂತಬಳರೆನೆ ನಿಮ್ಮನಱಸುತಂ ಸುಗ್ರೀವ
ಕಾಂತಾರದೊಳಗೆ ಬರುತಂ ಬಿರ್ದ ರತ್ನಜಟಿಯಿರೆ ಕಂಡುಕೊಂಡು ಬಂದಂ
ಭ್ರಾಂತಿಲ್ಲ ರಾವಣನೆ ಪಿಡಿದೊಯ್ದನೆಂಬುದಂ
ತಾಂ ತಿಳಿದರಾತನಿಂದುದ್ಧರಿಸಿದಂ ಜಗ
ತ್ಕಾಂತಲಕ್ಷ್ಮೀವರಂ ಸಿದ್ಧಾಚಳಮನಿನ್ನು ಲಂಕೆಗೈತಂದಪರು ಭರದೆ ತಾಯೆ ||೧೯೩||

ಕುಲಪರಿಭವಮನೈದೆ ಕಳೆದರು ಬಲಾಚ್ಯುತರು
ಹಲವು ಮಾತೇನವರ್ಗ ನಾಂ ಕಿಂಕರಂ ಮಹಾ
ಬಳರ್ಗೆ ತಾಂ ಬಂದು ಕಿಂಕರ ಭಾವಮಂ ತಳೆವುದೆಂದು ಲೇಖನಮನಟ್ಟಿದಂ
ಬಲಿಮುಖಪ್ರತಾಪ ಸುಗ್ರೀವ ತಾಂ ಬಂದು ರವಿ
ಕುಳತಿಳಕರಂ ಕಂಡ ನೆಲಸಿದೆಂದಾಸ್ಯಮಂ
ತಳದನುಂಗುರಮನಟ್ಟಿದೊಡೆ ನಿಮ್ಮಲ್ಲಿಗಾಂ ಕೊಂಡು ಬಂದೆಂ ಜಗತ್ರಯಾಂಬಿಕೆ ||೧೯೫||

ದಿವಿಜ ದಾನವ ಮಾನವರ್ಗಸಾಧ್ಯನು ಸಕಳ
ಭುವನಕಂಟಕನ ಲಂಕಾಭಟನ ಪುರಮನಾ
ರ್ಣವಮನುತ್ತರಿಸಿ ವಿದ್ಯಾಪರಿಧಿಯಿಂ ಮುಱಿದುಮಿಂತೀ ತ್ರಿಕೂಟಗಿರಿಯಂ
ಜವನಮುಖಕುಹರದೊಳು ಪುಗುವಂತೆ ಪೊಕ್ಕುಗಡ
ರವಿಮಂಡಳದ ಮುದ್ರಿಕೆಯಂ ತಂದನೆಂಬ ನುಡಿ
ಕಿವಿಗೆ ಸೊಗಯಿಸುವುದೇ ಚಿತ್ತಕ್ಕೊಡಬಡುವುದೇ ಪಿತ್ತದುದ್ರೇಕಮಿದು ನಿನಗವನಿಜೆ ||೧೯೭||

ಈವನಮುಮೀಚಿತ್ರಮಂಟಪಮು ಮೀದನುಜ
ರೀವಿಯಚ್ಚರ ವಿಳಾಸಿನಿಯರು ರುಚಿರಸುಧಾ
ತ್ರೀವಲ್ಲಭನ ರಾಘವನ ಸಮೀಪಕ್ಕೊಯ್ವೆನೇಳಿಯಂಬಿಕೆಯೆಂಬುದುಂ
ಪಾವನಿಯ ನುಡಿಗೆ ದನುಜಾಂಗನೆಯರೈದೆ ಭಯ
ವಾವರಿಸಿ ನಡುಗಿ ಜಾನಕಿಯ ಮಱೆಯಂ ಪೊಗಲು
ದೇವಿಯೆಂದಳು ದೇವನೆಂತಿದಂ ಬೆಸಸಿದಂ ನಿನಗೆಯೆನೆ ಹನುಮನಿಂತೆಂದನಾಗ ||೧೯೯||

ಇನಮಂಡಳದ ಮುದ್ರಿಕೆಯನಿತ್ತು ನಿಮಗೆ ನಿ
ಮ್ಮನವದ್ಯಚೂಡಾಮಣಿಯ ನೀಸಿಕೊಂಡು ಘ
ಮ್ಮನೆ ಬಪ್ಪುದೆಂದು ಬೆಸಸಿದನೀತನೆನೆ ಕೇಳ್ದು ಜನಕನಂದನೆಯೆಂದಳು
ಅನಿತನೇ ಮಾಳ್ಪುದಲ್ಲಿಂದಧಿಕಮಂ ಮಾಳ್ಪು
ದನುಚಿತಂ ನಿನಗೆ ನಾನಗ್ನಿಸಂಶುದ್ಧೆಯಿಂ
ದಿನಕುಲಲಲಾಮನಂ ತಿಳಿಪಿ ನಲ್ಲನಿಂ ಕಾಣ್ಣಿನಿಲ್ಲ ಮುನ್ನಮೆ ಕಾಣ್ಬದಾವ ಪೆಂಪು ||೨೦೦||

ಎನೆ ಬೇಗದಿಂ ತೆಗೆದು ಚೂಡಾಮಣಿಯನನಿಲ
ತನಯಂಗೆ ಜನಕನಂದನೆಯಿತ್ತು ಮಗನೆ ಘ
ಮ್ಮನೆ ಪೋಗು ತಡೆಯಲಾಗದು ತಡೆದೊಡಾಗದಿಂದಸುರರಿಂದ ನಿನಗಪೃಯಂ
ಎನಗೋಸುಗಂ ಕಾದಿ ಮುನ್ನಿರ್ವರಾಜಿಯೊಳು
ಘನವಾಗಿನೊಂದರದು ಕಾರಣದಿನೆಂಬುದುಂ
ಹನುಮಂತ ನಗುತ ಕೈಮುಗಿದೀಸಿಕೊಂಡು ಮೈಯಿಕ್ಕಿಮತ್ತಿಂತೆಂದನೊಂದು ಮಾತಂ ||೨೦೪||

ನಿಮಗೆ ಮಯಸುತೆ ನುಡಿವುದಂ ತಿಳಿವೆನೆಂದು ಬಂ
ದಮರರಿಪು ಮಱೆಗೊಂಡು ಕೇಳುತ್ತಿರ್ದತ್ತ ಸಂ
ಭ್ರಮಮಾಗಿ ತ್ವರಿತದಿಂ ಪೋಗದಿರೆ ಖಳನಂಗನೆಯರೈದೆ ನೋಡಿನೋಡೆ
ಸಮದೇಭಮಂ ಸಿಂಹಮುರಗಮಂ ಗರುಡಂ ತ
ಮಮನರ್ಕನಡವಿಯಂ ದಾವಾಗ್ನಿ ಕಿಡಿಸುವಂ
ತಮಮ ಮಝಬಾಪ್ಪುಭಾಪೆನೆ ಮೂಜಗಂ ಕೊಂದವನಚಬಂದಮನಾಡಿಸದೆ ಪೋಪೆನೆ ||೨೦೫||

ಯಕ್ಷನಾನೆಯನಾಗಳಂತೆ ಕಡುಪಿಂದೆ ರು
ದ್ರಾಕ್ಷೆಯ ಮರಂಗಳಿಂದಕ್ಷನ ಕುದುರೆಯನಿ
ದ್ರಾಕ್ಷೆಯ ಮರಂಗಳಿಂದಕ್ಷನ ರಥಂಗಳಂ ಪಕ್ಷದಮರಂಗಳಿಂದ
ಯಕ್ಷನಾಳಳದಟ್ಟನೊಟ್ಟೈಸಿ ನೆಱೆ ಕೊಲಲು
ರಾಕ್ಷೆಯ ಮರಂಗಳಿಂ ಪೊಯ್ದೈದೆ ತವಿಸಿಯಾ
ಯಕ್ಷನುಮನಕ್ಷದ ಮರಂಗಳಿಂದಪ್ಪಳಿಸಿಬೇಗದಿಂ ಕೊಂದಂ ಮರುನ್ನಂದನಂ ||೨೧೧||

ಸುರಸರಣಿಯಿಂ ದವವಸುರಿಯೆ ಕುಸುಮಾಸಾರ
ವಿರದೆ ಪವನಂಜಯ ಸುತಂ ಜನಕನಂದನೆಯ
ಚರಣಕಮಲಕ್ಕೆ ಪರಮಾನುರಾಗದಿನೆಱಗೆ ಪರಸೆ ಮುದದಿಂದಂಬಿಕೆ
ಸುರವೈರಿಸುತನಕ್ಷನಸ್ತಮಿಸೆ ಮನದೊಳಗೆ
ಭರದಿ ಮಂಡೋದರೀ ಮುಖ್ಯದನುಜಾಂಗನಾ
ಪರಿಕರಕ್ಕೈದೆ ದುಃಖಾಗ್ನಿಯುದ್ಭವಿಸೆ ನಂದಿಸಿಯವರ್ಗೆಂದಂ ಮರುನ್ನಂದನಂ ||೨೧೪||

ದನುಜರೆಲ್ಲಂ ಕರಂ ಮಾಯಾವಿಗಳು ನಿಮ್ಮ  
ಮನಮನೆಂತಾದೊಡಂ ಭೇದಿಸುವುಪಾಯಮಂ
ನೆನೆವರದಱಿಂದಾರುಮಂ ನಂಬಲಾಗದು ಬೆದಱಲಾಗದು ಮಾಯೆಗೆ
ಎನಗೆ ಬೀಳ್ಕೊಡೆ ಯಕ್ಷನಳಲಿಂಗೆಯಸುರವಡೆ
ಯಿನಿತುಂ ಬರುತ್ತಿರ್ದಪುದು ಕಾದಲೆಂದು ಮುಳಿ
ದನುವರದೊಳಿದನೈದೆ ಪರ್ದಿಂಗೆ ಬಿರ್ದಿಕ್ಕೆ ಲಂಕೆಯಂ ನೆಱೆ ಸುಟ್ಟು ತೆರಳ್ವೆ ನಾನು ||೨೧೯||

ನಿನ್ನನ್ನರತುಳಬಳರೆನಿತುಂಟು ರಾಘವನ
ಸನ್ನಿಧಾನದೊಳಂಜನೇಯ ತನುಜ ವಿನಯಸಂ
ಪನ್ನದಗಣಿತಪರಾಕ್ರಮರೆಂದು ಜನಕಸುತೆ ಕೇಳೆ ಹನುಮಂತನೆಂದಂ
ಎನ್ನೀ ಜನನಿ ಸೀತೆ ಸಹಸ್ರಲಕ್ಷತದಿರ್ಪ
ರುನ್ನತ ಕ್ರಮವಿಕ್ರಮ ಪ್ರತಿಮ ವೈರಿ ಸಂ
ಪನ್ನೆಗೆ ಗರುಡ ಮಹೋದ್ಧಕರಿರ್ದಪರು ಜಗನ್ಮಾತೆ ಕೋಟಾಕೋಟಿ ಖಚರೇಂದ್ರರು||೨೨೨||

ಕೌತುಕದಿನದ ಕೇಳ್ದು ಪವನಸುತನಂ ಜಗ
ನ್ಮಾತೆ ಪಲವಂದದಲರ್ಮೆಯಿಂದ ವಾರಾತ ತನು
ಜಾತ ನಿನಗೆ ಕ್ಷೇಮ ವಿಜಯಾಯಾತ್ರೆ ಸಿದ್ಧಿಸಿದ್ಧಿಪುದೆಂದು ಪರಸೆ
ಪ್ರೀತಿಯಿಂ ಬೀಳ್ಕೊಂಡು ತಳರ್ದನಲ್ಲಿಂ ಜಗತ್
ಖ್ಯಾತನಸಮ ವಾದಿದಂಕಂದ ಕುದ್ಧಾನಳನ ಗು
ಣಾತಿಶಯರತರತ್ನಾಕರಕಳಾನಿಧಿಯ ಪರವಾದಿಯ ಗಂಡಭೇರುಂಡನೊಳು ||೨೨೩||

ಕೃತಜ್ಞತೆಗಳು.
ಡಾ. ಪಿ. ವಿ. ನಾರಾಯಣ
ಸಂಪಾದಕರು.
ಪ್ರಕಾಶನ.
ಕನ್ನಡ ಸಾಹಿತ್ಯ ಪರಿಷತ್ತು
ಪಂಪಮಹಾಕವಿ ರಸ್ತೆ . ಚಾಮರಾಜಪೇಟೆ ,
ಬೆಂಗಳೂರು- ೫೬೦೦೧೮.

















ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ