ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಭಾನುವಾರ, ಮೇ 27, 2018

ಕರ್ಣಪಾರ್ಯ ವಿರಚಿತ ನೇಮಿನಾಥ ಪುರಾಣ( ಹರಿವಂಶಂ).

ಕರ್ಣಪಾರ್ಯ ವಿರಚಿತ ನೇಮಿನಾಥ ಪುರಾಣ( ಹರಿವಂಶಂ).

ಕವಿಯ ಕಾಲ ಸುಮಾರು ೧೧೬೫. ಈತ ಮತ್ತೊಂದು ಕಾವ್ಯ ವೀರೇಶ ಚರಿತೆ ಬರೆದಿದ್ದಾನೆ.  ಆದರೆ ಈ ಕಾವ್ಯ ದೊರೆತಿಲ್ಲ. ಈತನ ಸ್ಥಳ ತಂದೆ ತಾಯಿಯ ಬಗ್ಗೆ ಎಲ್ಲಿಯೂ ಹೇಳೀಕೊಂಡಿಲ್ಲ.

ಜಗನ್ನಾಥವಿಜಯದ ಕವಿ ರುದ್ರಭಟ್ಟನು ( ಸು. ೧೧೮೫ )  “ ಕಣ್ಣಮಯ್ಯನ ಜಾಣ್ನುಡಿ “ ಯನ್ನು ಮೇಚ್ಚಿಕೊಂಡಿದ್ದಾನೆ. ಆಂಡಯ್ಯ ಕವಿ ( ೧೨೩೫) ಕಬ್ಬಿಗರ ಕಾವದಲ್ಲಿ “ ಕಣ್ಣಪಯ್ಯನ ಕಡುಜಾಣ್ “
ಮಿಗಿಲಾದುದೆಂದು ಕೊಂಡಾಡಿದ್ದಾನೆ. ಪಾರ್ಶ್ವಪಂಡಿತಕವಿ ಕಣ್ಣಪನ “ಇಂಪುಂ ಪುದಿದರ್ಥ ಗೌರವ ಗುಣ “
ದೊಡ್ಡದೆಂದು ತುಂಬ ಇಷ್ಟಪಟ್ಟಿದ್ದೆನೆ.

ಆದರೆ ಮೂರನೆಯ ಮಂಗರಸ ಮತ್ತು ದೊಡ್ಡಯ್ಯ ಎಂಬ ಕವಿಗಳು ಕಣ್ಣಪನನ್ನು ನೆನೆದಿದ್ದಾರೆ. ಇವರು ಈ ಕಣ್ಣಪನನ್ನೂ, ಇವನ ಕೃತಿಗಕ್ಷನ್ನೂ ಹೆಸರಿಸಿ ನೆನೆದಿದ್ದಾರೆ.

ಕವಿಯ ಪೋಷಕ ಲಕ್ಷ್ಮ ಎಂಬ ಹೆಸರಿನ ಪ್ರತಿಷ್ಠಿತ. ಈ ಲಕ್ಷಮನ ದೊರೆ ವಿಜಯಾದಿತ್ಯ. ಈ ರಾಜ ಶಿಲಹಾರ ವಂಶದವನು. ಇವರು ಆಳಿದ ಪ್ರದೇಶ ಈಗಿನ ಬೆಳಗಾವಿ ನಗರದಿಂದ ಹಿಡಿದು ಕೊಲ್ಲಾಪುರದವರೆಗೆ ಬರುವ,
ಮತ್ತು ಸಾತಾರವನ್ನೂ ಒಳಗೊಂಡ ಸೀಮೆಯೆಂದು ಚರಿತ್ರಕಾರರೂ ತಿಳಸದ್ದಾರೆ. ದೊರೆ ವಿಜಯಾದಿತ್ಯನು ಆಳಿದ
ಕಾಲ ೧೧೪೦-೧೧೭೫ ಎಂದು ಇತೀಹಾಸಕಾರರು ಹೇಳಿದ್ದಾರೆ. ಈಗ ಸಿಗುವ ಕಾರಣಗಕ್ಷನ್ನು ಉಪಯೋಗಿಸಿಕೊಂಡು ಕರ್ಣಪಾರ್ಯನ ಕಾಲವನ್ನು ಸು. ೧೧೬೫  ಎಂದು ಹೇಳಬಹುದೇ ಹೊರತು ಅದಕ್ಕಿಂತ
ನಿರ್ದಿಷ್ಟಗೊಳಿಸಿ ಹೇಳಲು ಕಷ್ಟವಿದೆ.

ಪ್ರಥಮಾಶ್ವಾಸಂ.

ಶಾ|| ಶ್ರೀಲೀಲಾಸದನಂ ನಿಜಾಂಘ್ರಿಕಮಳದ್ವಂದ್ವಂ ಲಸದ್ದಿವ್ಯವಾ
ಕ್ಶ್ರೀಲೀಲಾಸದನಂ ನಿಜಾಸ್ಯಕಮಳಂ ನಿಸ್ಸೀಮ ಕಾರುಣ್ಯಸು
ಶ್ರೀಲೀಲಾಸದನಂ ಸುಹೃತ್ಕಮಳಮಾದಕ್ಷೂಣನೀಕ್ಷಯ
ಶ್ರೀಲೀಲಾಸ್ಪದಮಂ ಸಮಂತು ನಮಗಂ ಶ್ರೀ ನೇಮಿಭಟ್ಟಾರಕಂ||೧||

ಚಂ|| ಪರಮ ಜಿನೇಂದ್ರ ಲಪನಾಂಶು ಲಸತ್ಸರಸೀಮರಾಳೆ ವಿ
ಸ್ತರಭುವನಾಶ್ರಯ ಪ್ರಥಿತವಸ್ತುನಿಕಾಯಮಣಿಪ್ರದೀಪೆ ಭಾ
ಸುರಸಕಳೋರ್ವರಾ ವಿನುತೆಯಾದ ಸರಸ್ವತಿ ಮನ್ಮುಖಾಬ್ಜದೊಳ್
ನಿರುಪಮರಾಗದಿಂ ಪುದಿದು ನಿಲ್ಕೆ ಜಗತ್ರಯನೇತ್ರೆ ಸಂತತಂ ||೮||

ಉ|| ಸಂದ ಸಮಂತಭದ್ರಯತಿಪೋತ್ತಮರಂ ಕುಮತಾದಿ ವಜ್ರರಂ
ಮಂದರಧೈರ್ಯರಂ ಸುಗುಣಭದ್ರರನಾ ಗುಣಭದ್ರದೇವರಂ
ಬಂದಿಪೆನೀಗೆ ತನ್ಮುನಿಗಳಕ್ಷಯಮೋಕ್ಷಸುಖೈಕಹೇತುವಂ
ಸುಂದರಮಪ್ಪ ತಮ್ಮ ಗುಣದುನ್ನತಿಯಂ ಭುವನಪ್ರಣೂತಮಂ ||೯||

ಕಂ|| ಪೊನ್ನನ ರನ್ನನ ಪಂಪನ
ಸನ್ನುತ ಕವಿತಾಗುಣಕ್ಕೆ ಸರಿದೊರೆ ಸಮನ
ಪ್ಪನ್ನರ್ ಕಾವ್ಯಕಳಾಸಂ
ಪನ್ನರ್ ಪೆಱರೊಳರೆ ಧರೆಯೊಳಿನ್ನುಂ ಮುನ್ನಂ ||೨೧||

ಮ|| ಪ್ರತಿಪಕ್ಷೋದ್ಧತ ರಾಜತೇಜಮುಡುಗಲ್ಕಾಶಾಕುಳೇಳಾತಳಾ
ನ್ವಿತ ಸಂಪೂರ್ಣ ಸುವರ್ಣ ಸೇವ್ಯಕರನತ್ಯುಗ್ರ ಪ್ರತಾಪಂ ಧರಾ
ಹಿತಧರ್ಮೋದ್ದುರ ಜನ್ಮಭೂಮಿಯೊಗೆದಂ ಗೋಮಂತ ಶೈಲಾಗ್ರದಿಂ
ಧೃತ ಭಾಸ್ವತ್ಕಮಳಾವಭಾಸಿ ವಿಜಯಾದಿತ್ಯಂ ಜಗದ್ದೀಪಕಂ ||೨೬||

ಚಂ || ವಿತತ ಕಳಾಪ್ರವೀಣತೆಯಿನೆಯ್ದೆ ಸರಸ್ವತಿ ರೂಪಿನೇೞ್ಗೆಯಿಂ
ರತಿ ಸೊಬಗಿಂದೆ ಹೈಮವತಿ ದರ್ಶನಶುದ್ಧತೆಯಿಂದೆ ಸಂದ ರೇ
ವತಿ ಪತಿಭಕ್ತಿಯಿಂ ನೆಗೞ್ದರುಂದತಿಯೆಂದು ಪೊದೞ್ದು ಬಣ್ಣಿಕುಂ
ನುತ ವಿಜಯಾವನೀಶಸತಿಯಂ ಸಲೆ ಪೊನ್ನಲದೇವಿಯಂ ಜಗಂ ||೨೭||

ಮ|| ಸ್ರ|| ಧರೆಯೊಳ್ ವಿಖ್ಯಾತಮಾದೀ ಹರಿಕುಳಮನಿಳಾಸ್ತುತ್ಯಮಂ ಪೇೞೆ ಬರ್ಕುಂ
ಕುರುವಂಶಂ ತಾನೆನಲ್ಕೀ ಕಥೆಗಳೆರಡುಮಂಭೋನಿಧಿದ್ವಂದ್ವಮಂತಾ
ಗಿರೆಯುಂ ಶ್ರೀಗೋಪರ್ಣಾರ್ಯಪ್ರಮುಖಬುಧಜನಂ ಪೇೞಿಮೆಂದೊಡಾಂ ಸಾ
ದರದಿಂ ಮದ್ವಾಕ್ಯಬಾಹಾಪ್ರಬಳದಿನೊಲಿದಿಂತೀಸಲುದ್ಯುಕ್ತನಾದೆಂ ||೩೮||

ಕಂ|| ಕೊಲೆಯುಂ ಪುಸಿಯುಂ ಕಳವುಂ
       ಕುಲಟಾಸಂಗಮಮುಮಧಿಕ ಕಾಂಕ್ಷೆಯುಮೆಂಬೀ
        ಖಲಕರ್ಮಹೇತುಗಳನವಿ
         ಚಲಮತಿಯಂ ಬಿಸುಟು ನೆಗೞ್ವುದಿದು ತಾಂ ಧರ್ಮಂ ||೮೧||

ಉ|| ಸಾರದೆ ಮದ್ಯಮಾಂಸಮಧುಸೇವೆಯ ಬಟ್ಟೆಗೆ ನೆಟ್ಟನೞ್ತಿಯಿಂ
ಕ್ಷೀರತರುಪ್ರತಾನಫಲಸಂಕುಳಮಂ ತೊಱೆದೆಯ್ದೆ ಮಾಯ್ದ ಸಂ
ಸಾರದಸಾರವೃತ್ತಿಗಗಿದಿರ್ಪುದು ಧರ್ಮಮದೀ ಜಿನೇಂದ್ರ ವಿ
ಸ್ತಾರಮತಪ್ರಯುಕ್ತತೆಯಿನಿಕ್ಕುಮದಿಲ್ಲದೊಡಿಲ್ಲ ನಿಶ್ಚಯಂ ||೮೨||

ತೃತೀಯಾಶ್ವಾಸಂ.

ಶಾಂತನುಗೆ ನಿಜಧರಿತ್ರೀ
ಕಾಂತತ್ವಮನಿತ್ತು ಶಕ್ತಿವಿಭು ದೀಕ್ಷೆಯನ
ಭ್ರಾಂತಂ ಪಾರಾವ್ರಾಜಕ
ಸಂತತಿಯೊಳ್ ತಳೆದನಾ ಪರಾಶರಸಹಿತಂ ||೧೨||

ವಚನ || ಇತ್ತಲಾ ಶಾಂತನುವುಂ ರಾಜ್ಯಪದದೊಳ್ ಪದುಳಂ ನಿಂದು ಸುಖದಿನಿರಲೊಂದು ದಿನದೊಳ್ ಆ ಪುರದ ಬಹಿರ್ಭಾಗದೊಳ್ ಒರ್ವ ವಿದ್ಯಧರಿ ವಿದ್ಯಾಪ್ರಭಾವದಿನೊಂದಗಾಧಕೂಪಮಂ ಸಮೆದು ಅದಱೊಳಗೆ ತನ್ನ ರನ್ನದ ತೊಡವನಿಕ್ಕಿ ಕೆಲದೊಳಿರ್ದು

ಶೋಕಿಸುತ್ತಿರೆ ಕೇಳ್ದಂದವ
ಳೋಕಿಸಲೆಂದಂತು ಬಂದು ಶಾಂತನುನರಪಂ
ವ್ಯಾಕುಳನಾದಂ ಕಂಡಂ
ತಾಕೆಯನಂಗಜಪತಾಕೆಯಂ ಖೇಚರಿಯಂ||೧೩||

ವಚನ || ಅಂತು ಸೋಲ್ತಾ ಶಾಂತನು ಕಂತುಶರಾಕ್ರಾಂತನಾಗಿ ತತ್ಕಾಂತೆಯ ಸಮೀಪಕ್ಕೆ ಬಂದೇಕೆ ಶೋಕಿಪ್ಪೆಯೆನಲಾಕೆಯಿಂತೆಂದಳ್

ಎಸೆವೆನ್ನ ರನ್ನದೊಡವಂ
ಬಿಸುಟೀ ಕೂಪದೊಳೆ ಬಿೞ್ದುದನೀಗಳ್ ಸಾ
ಹಸದಿಂ ತೆಗೆವವರಿಲ್ಲದೆ
ದೆಸೆಗೆಟ್ಟಾನೞತುವಿರ್ದೆನೆಂಬುದುಮಾಗಳ್ ||೧೪||

ವಚನ || ಶಾಂತನುರಾಜನಾಂ ತೆಗೆವೆನೆನೆ ತತ್ಕಾಂತೆಯಂತಾದೊಡಾ ನಿನಗೆ ವನಿತೆಯಪ್ಪೆನೆಂಬುದುಂ ತದವನಿಪಂ ತ್ವದೀಯವೃತ್ತಾಂತಮನೆನಗೆ ನಿವೇದಿಸೆನಲಿಂತೆಂದು ಪೇೞ್ದಳ್. ಈ ವಿಜಯಾದ್ರಿಗಿರಿಯ ದಕ್ಷಿಣ ಶ್ರೇಣಿಯೊಳ್ ಪೃಥ್ವೀತಿಳಕಮೆಂಬ ಪುರವರಮದನಾಳ್ವಂ ಮಹೀಧರನೆಂಬ ಖಚರವರನಾತನ ಮಹಾದೇವಿ ಮನೋಹರಿದೇವಿಗಾಂ ಲಕ್ಷ್ಮೀಮತಿಯೆಂಬ ಸುತೆಯಾಗಿರ್ದೊಂದುದೆವಸಂ ಶ್ರೀಪಂಚಮಿಯ ನೋಂಪಿಯುಪವಾಸದೊಳಂ ಸಂಚಲಚಿತ್ತದಿಂ ಕಾಂಚನಾಚಳಕ್ಕೆ ವಂದದಱಕೃತ್ತ್ರಿಮ ಜಿನಾಲಯದೊಳರ್ಹತ್ಪ್ರತಿಕೃತಿಗಳಂ ಪೂಜಿಸಿರ್ದೆನಿರೆ

ಚಾರಣರಲ್ಲಿಗೆವರಲೀ
ದಾರುಣ ಸಂಸರಣಹರಣ ಧರ್ಮಮನಾನಾ
ಧೀರರೊಳೆ ಕೇಳ್ದು ಖಳಸಂ
ಸಾರದ ಸಾರತಿಕೆಯೆನ್ನ ಬಗೆವುಗೆ ಬಂದೆಂ ||೧೫||

ವಚನ|| ಬಂದು ಮದೀಯ ಮಾತಾಪಿತೃಗಳ್ಗೆ ಗಂಧೋದಕಮುಮನಶೇಷಾದೋಷಾಪಹರಮಪ್ಪ ಶೇಷಾಕ್ಷತಂಗಳುಮಂ ಕೊಟ್ಟು ಮದೀಯಜನಕನಂಘ್ರಿಕೋಕನದಂಗಳಂ ಪಿಡಿದೆನ್ನ ಬೇೞ್ಪುದಂ ದಯೆಗೆಯ್ಯಿಮೆನೆ ಮಜ್ಜನಕನಿಂತೆಂದಂ.

ಗುರುವಚನಮಪ್ಪುದೆಂತುಂ
ಪರಿಹರಿಸಲ್ ಬಾರದಲ್ಲಿ ಖಚರರೊಳಿರೆ ಸ
ಚ್ಚರಿತ ಪ್ರತಿಕೂಲರ್ ಭೂ
ಚರರೊಳ್ಳಿದರಲ್ಲಿ ಭಾಷೆಯಿಂ ಪುದುವಾೞ್ವೆಂ ||೧೭||

ಎಂದವನಿಯೊಳಱಸುತ್ತುಂ
ಬಂದೀ ನಿನ್ನನ್ವಯ ಪ್ರಸಿದ್ಧಿಗಮಿಂತೀ
ಸೌಂದರ್ಯಕ್ಕಂ ಪಡೆದಾ
ನೊಂದಿದ ಮನದಿಂದಮಿಂತಿದಂ ಪಣ್ಣಿರ್ದೆಂ ||೧೮||

ವಚನ || ಎನೆ ಶಾಂತನುವೊಗೆದ ಸಂತಸದಿಂ ಆ ಕೂಪಾಂತರಿತಭೂಷಣಮನಿರದೆ ಶರದಿಂ ತರದಿಂ ಪುಂಖಾನುಪುಂಖವೆಚ್ಚು ತೆಗೆದೀವುದುಮನಂತರಮಾ ಕಾಂತೆ ತದವನಿಪತಿಗಿಂತೆಂದಳ್. ಎನಗಾದ ತನುಜರಂ ದ್ಯುನದಿಯೊಳಾಂ ಬಿಡುವುದರ್ಕ್ಕಂ ಕಡೆಯೊಳಾಂ ತಪಂಬಡುವುದರ್ಕ್ಕಮೊಡಂಬಡುವುದೆಂದು ನಿಲೆ ನುಡಿಯಿಸಿ

ಮ || ಧರಣೀವಲ್ಲಭ ನೀಂ ಮಹಾಮಹಿಮೆಯಿಂ ಬಂದುದ್ಘಮಂದಾಕಿನೀ
ವರವೇಳಾವನದೊಳ್ ಸಮಂತಿರು ಮುದಂಬೆತ್ತಾನುಮಾ ನಿಮ್ನಗಾಂ
ತರದಿಂ ಬಂದಪೆನಿಂತೆನಿಪ್ಪ ದಿನದಂದಿಂತಪ್ಪ ಪೊೞ್ತೆಂದು ಖೇ
ಚರಿ ಪೇೞ್ದಾಗಳ್ ಪೋಗಿ ತನ್ನ ಗುರುಗಳ್ಗಾ ವಾರ್ತೆಯಂ ರಾಗದಿಂ ||೧೯||

ವಚನ || ನಿವೇದಿಸಿ ನಿಲ್ಲದಾ ದಿನದೊಳಾ ಮಾರ್ಗದಿಂ ಬರೆ

ಮ || ನರನಾಥಂ ಪರಮೋತ್ಸವಂಬೆರಸು ಬಂದಾಯಂದದಿಂದಂದು ತ
ತ್ಸುರಸಿಂಧೂದರದಿಂ ಸುಧ್ಧಾಬಿಸುತೆಯಂತಾ ಶ್ರೀಮತೀಕನ್ನೆ ಭಾ
ಸುರವಿದ್ಯಾಧರದೇವತಾವ್ರತೆಯಿರಲ್ ಕಂಡೆಯ್ದೆ ಭೂಮಂಡಳಂ
ನಿರುತಂ ಗಂಗೆಯೆ ಬಂದಳೆಂದೆನಲಿದಿರ್ಗೊಂಡಂ ಧರಾಧೀಶ್ವರಂ ||೨೦||

ವಚನ || ಅಂತಿದಿರ್ಗೊಂಡು ತಂದು

ಆ ನದಿಯೊಳಂದು ಬಂದಾ
ಮಾನಿನಿಯಂ ಭೂಪನರಸಿ ಮಾಡಿರ್ದನಿರ
ಲ್ಕೀ ನೆಲನದನಜ್ಞಾನದಿ
ನಾ ನರಪತಿಗರಸಿ ಗಂಗೆ ತಾನೆಂದೂಳ್ಗುಂ ||೨೧||

ವಚನ || ಅಂತು ಶಾಂತನುವಿನೊಳಾ ಕಾಂತೆ ಗಂಗಾದೇವಿಯೆಂಬ ಪೆಸರಾಗೆ ಸುಖದಿನಿರೆ ತನಗೆ ಯಥಾಕ್ರಮದಿಂ ಪುಟ್ಟಿದೆಣ್ಬರ್ ತನೂಜರಂ ಸುರನದಿಯೊಳ್ ಬಿಟ್ಟಂತುಮಾಡಿ ವಿದ್ಯಾದೇವತೆಯರಿಂ ಮಹೀಧರಖೇಚರಂಗಟ್ಟೆ ಮತ್ತಮೊಂಬತ್ತನೆಯ ತನುಜನಂ ತನ್ನದಿಯೊಳಿಕ್ಕಿ ಭೀತಿಯಂ ತಳೆದಳೆ ಮಗುೞ್ದು ತರೆ ನಡಪಿ ಭೀಷ್ಮನೆಂಬಭಿದಾನಮನಿಟ್ಟು ಮತ್ತಂ ಗಂಗಾತನೂಜನಪ್ಪುದಱಿಂ ಗಾಂಗೇಯನುಮೆಂಬ ನಾಮಮಂ ತಳೆದು
ಬಳೆದಶೇಷಕಳಾಕಳಾಪದೊಳತಿಪ್ರಥಿತಪ್ರವೀಣನುಂ ಅಕ್ಷೀಣದೋರ್ದ್ರವಿಣನುಮಾಗೆ

ಶಾ || ಈತಂಗೀ ಧರೆಯೊಳ್ ಧರಾಧರಸುತರ್ ಪೇೞಾರ್ ಸಮಂಬರ್ಪ ವಿ
ಖ್ಯಾತರ್ ಭೂತಳದೊಳ್ ಸಮಂತೆನೆ ಜನಂ ನಿರ್ಣಿಕ್ತ ವಿದ್ಯಾಗುಣೋ
ಪೇತಂ ಭೀಷ್ಮನಿರಲ್ ತದಂಬಿಕೆ ಲಸದ್ವೈರಾಗ್ಯಸಂಯುಕ್ತೆ ಸಂ
ಜಾತಾನಂದದಿನಿತ್ತು ವಿದ್ದೆಗಳನಾ ಭೀಷ್ಮಂಗೆ ನಿರ್ವ್ಯಾಕುಳಂ ||೨೨||

ವಚನ || ಅಂತು ಗಂಗಾದೇವಿ ಗಾಂಗೇಯಂಗಿತ್ತಾತ್ಮೀಯವಲ್ಲಭನಪ್ಪ ಶಾಂತನು ರಾಜನುಮನೊಡಂಬಡಿಸಿ

ಪೋಗಿ ಜಿನಮಾರ್ಗದೀಕ್ಷೆಯ
ನಾಗಳೆ ತಳೆದಮಳಚರಿತದಿಂ ನಡೆದು ಬೞಿ
ಕ್ಕಾಗಣನಿ ಮುಡಿಪಿ ಸುಖದೊಂ
ದಾಗರಮಂ ಪೊಕ್ಕಳಚ್ಯುತಾಭ್ಯಂತರಮಂ ||೨೩||

ಮಂದಾಕಿನಿಗೊಂದು ದಿನಂ
ಬಂದರಸಂ ಕಂಡನಲ್ಲಿ ಋಷ್ಯಾಶ್ರಮದೊಳ್
ನಿಂದಿರೆ ಮೇನಕಿಯನ್ನಳ
ನಿಂದುನಿಭಾನನೆಯನೊರ್ವಳಂ ಕನ್ನಿಕೆಯಂ ||೨೪||

ವಚನ || ಅಂತು ಕಂಡಿಕ್ಷುಕೋದಂಡಶರಶಲಾಕಾಕೀಲಿತ ಹೃದಯನಾಗಿ

ಮ || ಅಳಿನೀಸಂಕುಳಮೀ ಚಳಾಳಕಚಯಂ ಪಾಠೀನಮೀ ನೆತ್ರಮು
ಜ್ಜ್ವಳಲಾವಣ್ಯಮೆ ತೋಯಮಾಸ್ಯಮೆ ಲಸತ್ಪಂಕೇಜಮಾಗೊಪ್ಪೆ ನಿ
ರ್ಮಳ ಕಾಸಾರದ ಮಾೞ್ಕೆಯಂತೆಸೆಯುತಿರ್ದಾ ಕಾಂತೆ ಮತ್ತೆಂತು ಪೇೞ್
ತಳೆದಳ್ ಮನ್ಮಥನುಗ್ರತೇಜಮೆ ಕರಂ ತಾಂ ಮೂರ್ತಿವೆತ್ತಂದಮಂ ||೨೫||

ವಚನ || ಎಂದಿಂದುಕುಳನಾ ತಳೋದರಿಯಂ ತತ್ತಾಪಸಾಶ್ರಮಾಧಿಪತಿಯಪ್ಪ ವಸುವೆಂಬ ತಪಸ್ವಿಯ ಸುತೆಯಪ್ಪುದಂ ನೆಟ್ಟನಱಿದು

ಎರೆದಟ್ಟಿದೊಡಾ ಭೌತಿಕ
ನರಸಂ ತಾನೆಂದು ಕುಡುವೆನಲ್ಲೆಂ ಕನ್ಯಾ
ವರೆಯಂ ಗತಯೌವನರ್ಗೆನ
ಲುರಿದಂ ವಿರಹಾಗ್ನಿ ಪೆರ್ಚೆ ಶಾಂತನುಭೂಪಂ || ೨೬||

ವಚನ || ಅಂತು ದುಸ್ಸಹಪರಿತಾಪದಿನರಸನಿರೆ ಸುರಸಿಂಧುಸುತನದನಱಿದಾ ಗೊರವನಲ್ಲಿಗೆ ವಂದು ನಿಮ್ಮ ಸುತೆಯಂ ಶಾಂತನುಭೂಪತಿಗೀಯಿಮೆಂಬುದುಮಾತನೆಂದಂ. ಅಣ್ಣ ನಿಮ್ಮ ದೊರೆಯ ರಾಜ್ಯಾರ್ಹನಪ್ತ್ಯನಿರೆ ಬೞಿಕೆನ್ನ ಮಗಳ್ಗಾದ ಸುತರ್ ನಿನಗೆ ಕಿಂಕರರಕ್ಕುಮೆಂದು ಬೆಟ್ಟನೆ ನುಡಿಯೆ ಭೀಷ್ಮಂ ತೊಟ್ಟನಿಂತೆಂದಂ.

ನಿರುತಂ ಕೇಳಿಮಿದೊಂದನೆ
ಪರಿಹರಿಸಿದೆನೀ ಭವಕ್ಕೆ ಸುದತಿಯರಂ ನೀಂ
ಪರಮಾನುರಾಗದೀಯೆನೆ
ಗೊರವಂ ಹರ್ಷಪ್ರಕರ್ಷಮಂ ತಳೆದಿರ್ದಂ ||೨೭||

ಧೀರಂ ಮದೀಯತನಯಂ
ಮಾರನಿಭಂ ತೊಱೆದನೆನ್ನ ಕಾರಣದಿಂದಂ
ಚಾರುತರಸ್ತ್ರೀಯರನೆಂ
ದೋರಂತಾ ಭೂಪನಂತು ಚಿಂತೆಯನಾಂತಂ ||೨೮||

ವಚನ || ಅಂತೊಗೆದ ಖೇದದಿನಾ ಧರಾಧೀಶ್ವರಂ ರಾಜ್ಯೈಶ್ವರ್ಯವಿಮುಖನಾಗಿ ಸಪ್ತಗುಣಾಸ್ಥಾನೋಪಾಸಕನಾದಂ ತಚ್ಚಿತ್ರವೀರ್ಯನುಮೊಂದು ಸಮರದೊಳ್ ಪರಕ್ಷತ್ರಪುತ್ರರೊಳ್ ಕಾದಿ ಕಱುತ್ತವರಂ ಕೊಂದು ತಾನುಂ ಕೀನಾಶಾವಾಸಮಂ ಪೊಕ್ಕಂ ಬೞಿಕ್ಕೆ ಗಂಗಾಪುತ್ರನಾ ವಿಚಿತ್ರವೀರ್ಯನಂ ರಾಜ್ಯಭರಧುರಂಧರನಂ ಮಾಡಿ ಸುಖದಿಂದಿರ್ದು

ಅಂಬಾಳೆಯಂಬೆಯಂಬಿಕೆ
ಯೆಂಬವರಂ ಕಾಶಿದೇಶನೃಪತನುಜೆಯರಂ
ಶಂಬರಸೂದನಸದೃಶಂ
ತಾಂ ಬೇಡಲ್ ವಿಚಿತ್ರವೀರ್ಯನನುಪಮಶೌರ್ಯಂ ||೨೯||

ಕುಡದಿರೆ ನದೀತನೂಜಂ
ನಡೆದಾತನ ಮೇಲೆ ಭೀಮಕೋಪಂ ತನಗಾಂ
ತೆಡಱಿದರನಿಕ್ಕಿ ತಂದಾ
ನಳಿನೀನೇತ್ರೆಯರನಾ ವಿಚಿತ್ರಂಗಿತ್ತಂ ||೩೦||

ವಚನ || ಈವುದುಮಾ ವಿಚಿತ್ರವೀರ್ಯನವರೊಳ್ ವಿಚಿತ್ರತರರಥಕ್ರೀಡಾನೀಡನಾಗಿರ್ಪುದುಮಂಬೆಗೆ ಧೃತರಾಷ್ಟ್ರನೆಂಬ ಜಾತ್ಯಂಧಕಂ ತನೂಜನಾದಂ, ಅಂಬಿಕೆಗೆ ಪಾಂಡುವುಂ, ಅಂಬಾಳೆಗೆ ವಿದುರನುಮೆಂಬ ತನಯರಾದರ್ ಆ ವಿಚಿತ್ರವೀರ್ಯಕ್ಷಿತಿಪನುಂ ಕ್ಷಯರೋಗದಿಂ ವಿಗತಜೀವಿತನಾದಂ ಆ ಕುಮಾರರಂತೆ ಬಳೆದಶೇಷಕಳಾಕುಶಲತೆಯಿಂ ನವಯೌವನದೊಳಂ ನೆಱೆದು

ಅಕಳಂಕವಂಶಸಂಭವ
ರಕುಟಿಳರಪ್ರತಿಮ ಶೌರ್ಯರನುಪಮಧೈರ್ಯರ್
ಮಕರಧ್ವಜಸಮರೂಪರ್
ಪ್ರಕಟಯಶೋನಿಳಯರಹಿತನೃಪಕುಳವಿಳಯರ್ ||೩೧||

ವಚನ :- ಇಂತು ಭುವನಪಾವನಮಾದ ಕುರುವಂಶರತ್ನಾಕರದೊಳುದಯಿಸಿದೆಮ್ಮ ಕುಮಾರರಖಿಳನೃಪಕುಮಾರಚೂಡಾರತ್ನಮೆಂದು ಸವಿಸ್ತರಮಱಿಪುವುದುಮಂಧಕವೃಷ್ಣಿಮಹಾರಾಜಂ
ಸಂತೋಷಮಂ ತಳೆದಿಂತೆಂದಂ.

ಉ ||ಈ ತೆಱದಿಂ ಮಹೋನ್ನತಿಕೆವೆತ್ತು ಕುರುದ್ವೂಹರ್ಗೀವುದರ್ಕ್ಕೆ ಪೇ
ೞೇತಱ ಮಂತಣಂ ಪೆಱತು ಕನ್ನೆಯನಿತ್ತಪೆನಗ್ರಜಾತರಾ
ರಾತರುಣರ್ಕಳೊಳ್ ತಿಳಿಯಪೇೞಿಮಗೆಂದೊಡೆ ಮಂತ್ರಿಯೆಂದನು
ರ್ವೀತಳಸೇವ್ಯನಪ್ಪ ಧೃತರಾಷ್ಟ್ರನೆನಲ್ಕದನಾ ಧರಾಧಿಪಂ ||೩೨||

ವಚನ :- ಅಂತು ತನ್ನಂತರ್ಗತದೊಳ್ ಬಗೆದಂಧಕಮಹಾರಾಜನಾ ಕುಮಾರಂ ಜಾತ್ಯಂಧಕನಾದೊಡಂ ರಾಜ್ಯಾರ್ಹನೆಂಬ ಬಗೆಯಿಂ ನಿಜಾನುಜಾತನಂ ನರಪತಿವೃಷ್ಣಿಯನೊಡಂಬಡಿಸಿ ಗಾಂಧಾರಿಯಂ ಕುಡೆ ಪಡೆದು ಮಂತ್ರಿಜನಂ ಮಗುೞ್ದು ಬಂದು ಗಾಂಗೇಯಂಗಱಿಪೆ ಕರಮೊಸೆದು ಶುಭದಿನದೊಳೆ ಮಹಾವಿಭವದಿಂ ಸೌರಿಪುರಕ್ಕೆ ಪೋಗಿ ಸಲ್ಲಗ್ನದೊಳಾನಕಸ್ವನದಿಂ ಸಲಗ್ನಮಾಗೆ ಧೃತರಾಷ್ಟ್ರಂಗಂ ಗಾಂಧಾರಿಗಂ ಪಾಣಿಗ್ರಹಣಮಂ ಮಾಡೆ.

ನರಪತಿವೃಷ್ಣಿಯುಮೊಸೆದಾ
ಸುರಸಿಂಧುಜನುಂ ಮಹಾಮಹಾದ್ಭುತವಿಭವೋ
ತ್ತರಮೆಸೆಯಲಂದು ಮಾಡಿದ
ಪರಿಣಯನಮನಾವನೆಯ್ದೆ ಬಣ್ಣಿಸಲಱಿವಂ ||೩೩||

ವಚನ|| ಅಂತೆನಿಸಿದ ವಿವಾಹಮಂ ಶುಭದಿನದೊಳ್ ಮಹೋತ್ಸವದಿಂ ಮಾಡಿದನಂತರವತಿ ಪ್ರಶಸ್ತದಿನದೊಳ್ ಅನೇಕ
ವಸ್ತುವಾಹನಸಂದೋಹಮನಿತ್ತು ಕಳಿಪೆ ಹಸ್ತಿನಪುರಮಂ ಪೊಕ್ಕು ಸುಖದಿನಿರ್ದು ಮತ್ತಮಾ ದೇವಾಪಗಾಪತ್ಯಂ ಪಾಂಡುಕುಮಾರಂಗೆ ಕೊಂತಿಯಂ ಬೇಡಿ ಅಟ್ಟಿದೊಡಂಧಕವೃಷ್ಣಿಮಹಾರಾಜಂ ಪಾಂಡುರೋಗಮುಳ್ಳಂಗೆಂತು ಕುಡುವುದೆನೆ.

ಆ ಕೊಂತಿಯ ರೂಪಂ ಕೇ
ಳ್ದಾಕುಳಮೊದವಲ್ಕೆ ಕಂತುಶರಸಂಹತಿಯಿಂ
ದಾಕುಳಿತನಾಗಿ ಕೀರ್ತಿಪ
ತಾಕಂ ಮಱುಗುತುಮಿರಲ್ಕೆ ಪಾಂಡುಕುಮಾರಂ ||೩೪||

ಅದನಱಿದು ನದಿಯತನಯಂ
ಮುದದಿಂದಾ ಕನ್ನೆಯಂ ಪೆಱರ್ಗೀಯಲ್ಕೀ
ಯದಿರಲ್ ಕೆಲದಿವಸದಿನ
ಭ್ಯುದಯಪರಂ ಪಾಂಡು ತನ್ನ ಪುರದುಪವನದೊಳ್ ||೩೫||

ವಚನ :- ಇರಲೊರ್ವನಂಬರೇಚರುಮಾ ವನೋದರದೊಳಿರ್ದಾತ್ಮೀಯಕಾಮಮುದ್ರಿಕೆಯನಲ್ಲಿ ಮಱೆದುಪೋಗೆ ಪಾಂಡುಕುಮಾರಂ ಕಂಡುಕೊಂಡಿರ್ಪುದುಮನ್ನೆಗಮಾ ಖಚರಂ ಮಗುೞ್ದು ಬಂದು ತನ್ನ ಮುದ್ರಿಕೆಯಂ ಮುನ್ನಿರ್ದ ತಾಣದೊಳ್ ಕಾಣದೆ ಮಾಣದಱಸುತಿರಲಾ ಕುಮಾರನಾತನಲ್ಲಿಗೆ ವಂದೇನನಱಸುವಿರೆಂಬುದುಂ ತದಂಬರೇಚರನೆಂದನೆನ್ನ ರತ್ನಮುದ್ರಿಕೆಯಂ ಇಲ್ಲಿ ಮಱೆದು ಪೋದೆನೆಂಬುದುಂ.

ಎನೆ ಪಾಂಡುಕುಮಾರಂ ಭೋಂ
ಕೆನೆ ತನ್ಮುದ್ರಿಕೆಯನಿಲ್ಲಿ ಕಂಡೆಂ ಪಿಡಿಯೆಂ
ದೆನಲೀಸಿಕೊಂಡು ಖೇಚರ
ನನುಪಮ ಹರ್ಷಪ್ರಕರ್ಷಮಂ ತಳೆದೆಂದಂ ||೩೬||

ಭೂನುತ ಮಹಾನುಭಾವ ಯ
ಶೋನಿಧಿಯೈ ಕೊಟ್ಟೆ ತೊಟ್ಟನೀ ಮುದ್ರಿಕೆಯಂ
ನೀನಿದು ದಿವ್ಯಂ ಬಗೆಯಲ
ನೂನಗುಣಂ ಕಾಮಮುದ್ರಿಕಾಖ್ಯಂ ನೃಪತೀ||೩೭||

ವಚನ:- ಎಂಬುದುಂ ಪಾಂಡುಕುಮಾರನಂತಪ್ಪೋಡೀ ಸನ್ಮದ್ರಿಕೆಯನೆಮ್ಮೊಳ್ ಕೆಲವು ದೆವಸಮಿರಲೀಯೆಂಬುದುಂ ತದಂಬರಚರಂ “ ತಥಾಸ್ತು “ ವೆಂಬುದುಂ ಮಂತ್ರಪೂರ್ವಕಮಿತ್ತಾನೀ ವಿಜಯಾರ್ಧದ ದಕ್ಷಿಣಶ್ರೇಣಿಯ ಕಿನ್ನರಗೀತಪುರದ
ನಿವಾಸಿಯೆಂ ವಜ್ರಮಾಲಿನಿಯೆಂಬೆನೆಂದು ಪೇೞ್ದು ಪೋಪುದುಂ ಬೞಿಕ್ಕಂ ಕುಮಾರನೊಂದುದಿನಂ ಕಾಮಮುದ್ರಿಕಾ
ಸಾಮರ್ಥ್ಯದಿಂ ವಿಮಾನಮಂ ಪಡೆದೊಡನಾಡಿಗಳ್ವೆರಸೇಱಿ ನೀರದಪಥದಿಂ ಭೋಂಕನೆ ಸೌರಿಪುರಕ್ಕೆವಂದು.

ಘನಪಥದಿಂ ಕೊಂತಿಯ ಕಾಂ
ಚನಹರ್ಮ್ಯದ ಪೆಱಗಣೆಸೆವ ನಂದನವನಕಾ
ಜನಪತಿಯಿೞಿತರ್ಪುದುಮಾ
ಘನಜಘನೆಯುಮಂದು ನಾಲ್ಕುನೀರ್ಮಿಂದಾಗಳ್ ||೩೮||

ನಿಜಸಖಿಯರೊಡವರಲ್ ಸಾ
ಮಜಗತಿ ವನದೊಳಗೆ ಪೊಕ್ಕು ಕಂಡಳ್ ಮೀನ
ಧ್ವಜನಿಭನಂ ಪಾಂಡುವನಂ
ಬುಜಲೋಚನೆ ಪುದಿದ ಲತೆಯ ಜೊಂಪದೊಳಾಗಳ್ ||೩೯||

ವಚನ:- ಅಂತು ಕಂಡು ಕೋಕನದವದನೆಯೀ ಕುಮಾರನಾರ್ಗೆನಲೊಡವಂದ ಬಂಧೂಕಾಧರೆಯರಂದು ಗಾಂಧಾರಿಯ ಪರಿಣಯನ ಕಲ್ಯಾಣದೊಳ್ ಕಂಡಱಿದೀತಂ ಪಾಂಡುಕುಮಾರನೆಂದು ಪೇೞಲ್ ಅವರನ್ಯೋನ್ಯಾಸಕ್ತಿಯಿಂ ನೋೞ್ದುದುಂ ಕಂಡು ಸಖೀಕದಂಬಕಂ ತಮ್ಮೊಳೊಂದಿ ಗಂಧರ್ವವಿವಾಹ ವಿಧಿಯಿಂದಾ ವಧೂವರರಂ ಕೂಡುವುದುಮವರ್ ತಮ್ಮೊಳೆ ಕೂಡಿ ನಾಡೆಯುಮಾಸಕ್ತರಾಗಿರ್ದರಂ ( ಸಖೀಜನಂ) ಸಖೀಜನಂಗಳಗಲ್ಚಲ್ಮಗುೞ್ದು ಗಗನಮಾರ್ಗದಿಂ ಮನಃಪವನವೇಗದಿಂ ಗಜಪುರಮನೆಯ್ದಿ ಪಾಂಡುಕುಮಾರನಿರ್ದನಿತ್ತಲಾ ಕೊಂತಿಯುಂ ಮುನ್ನಿನಂತೆ ತನ್ನ ಚೆಂಬೊನ್ನ ಮಾಡಮಂ ಪೊಕ್ಕಿರ್ದಳಿರೆ

ಚಂ || ಒಗೆದುದು ಗರ್ಭಚಿಹ್ನಮದನಾ ಸಖಿಯರ್ಕಳೆ ಕಂಡು ಗೂಢದಿಂ
ಬಗೆಗೊಳೆ ಕನ್ನೆಯಂ ಪಿಡಿದುಕೊಂಡಿರೆ ಗರ್ಭಪರಿಪ್ರಪೂರ್ತಿಯಿಂ
ಮೃಗಧರವಕ್ತ್ರೆ ಪೆತ್ತೊಡೆ ಕುಮಾರನನಾಗಳೆ ಕೊಂಡುಬಂದವರ್
ಸೊಗಯಿಸುತಿರ್ಪ ಮಂದಸಿನೊಳಿಕ್ಕಿ ಬೞಿಕ್ಕೆ ಸುವರ್ಣವರ್ಗಮಂ ||೪೦||

ವಚನ :- ಅಂತು ಬಾಳಕನ ಕೆಲದೊಳ್ ಸುರಿದಿರಿಸಿ ಮಂಜೂಷೆಯ ಕೆಲವಲಗೆಯೊಳೀ ರತ್ನಂಗಳಂ ಕೊಂಡೀ ಕುಮಾರನಂ ಪ್ರಯತ್ನದಿಂ ರಕ್ಷಿಸುಗೀತಂ ಸೋಮವಂಶಸಂಭವನೆಂಬಕ್ಕರಮಂ ಬರೆದು ಮಂದಸಿನ ಮರದೊಳಮರ್ಚಿ ಜಗುನೆಯೊಳ್ ಬಿಟ್ಟು ಬರೆ

ಶಾ || ಆ ಮಂಜೂಷೆಯುಮಂ ಮಹಾಹ್ರದಿನಿಯೊಳ್ ಪೋಪಲ್ಲಿ ಚಂಪಾಪುರೋ
ದ್ದಾಮಾರಾಮಸಮೀಪದೊಳ್ ಪೊೞೆಯೊಳಿರ್ದಾಯಂಬಿಗರ್ ಕಂಡು ನಿ
ಸ್ಸೀಮಾನಂದದಿನಂತವರ್ ತೆಱೆವುದುಂ ಸಂಗ್ರಾಮವಾರಾಶಿಗಾ
ಭೂಮಿಖ್ಯಾತಿಯ ಕರ್ಣಧಾರಕನೆನೆಂದಾ ಬಾಳಕಂ ತೋರ್ಪವೋಲ್ ||೪೧||

ಪಿಡಿದೆರಡುಂ ಕರ್ಣಂಗಳ
ನುಡುಪತಿನಿಭವಿಭವನರ್ಭಕಂ ಶುಭಲಕ್ಷ್ಮ
ಕ್ಕೆಡೆಯಾದನಿರಲ್ ಕಂಡಂ
ದೊಡರಿಸಿದತಿರಾಗದಿಂದವಂದವರೊಯ್ದರ್ ||೪೨||

ವಚನ :- ಅಂತವರೊಯ್ದಾದಾರಕಂ ಕರ್ಣಧಾರಕನಾಗಿರ್ದುದಱಿಂ ಕರ್ಣವೆಂಬ ಪೆಸರಕ್ಕೆಂದೊಸೆದು ನಡಪುತ್ತಿರೆ ತತ್ಪುರೀವರಂ ಸೂರ್ಯನೆಂಬರಸಂ ತಾನಪುತ್ರಿಕನಾ ಕುಮಾರನ ಬಂದ ವೃತ್ತಕಮನಱಿದು ತರಿಸಿ ನೋಡಿ

ವರ ಭೂಭುಜಲಕ್ಷಣಮಾ
ವರಿಸಿದ ದೇಹಮಕುಲದೊಳಗಾಗದು ತಾಂ
ಪರಿಕಿಸೆ ತಿಪ್ಪೆಯೊಳೇಂ ತಾ
ವರೆ ಪುಟ್ಟುಗುಮೆ ಪುಟ್ಟದೆಂದಾ ಸೂರ್ಯಂ ||೪೩||

ವಚನ :- ಮತ್ತಮಾ ಮಂಜೂಷೆಯಂ ತರಿಸಿ ಕಂಡದಱ ಕೆಲವಲಗೆಯೊಳ್ ವಿರಚಿತಮಾದಕ್ಷರಂಗಳಂ ಪರೀಕ್ಷಿಸಿ ಸೋಮವಂಶಜನೆಂದಱಿದದಂ ಪ್ರಕಾಶಿಸದೆ ತನ್ನಿಮೆಂದಾ ಕುಮಾರನನೆತ್ತಿಕೊಂಡು ತನ್ನಗ್ರವಧು ರಾಧೆಯೆಂಬಳ್ಗೆ ಕುಡೆ ನಡೆಪುತ್ತುಮಿರ್ಪುದುಮಾ ನೃಪಂಗಮಾ ರಾಧೆಗಮೀ ಕರ್ಣನೆಂಬಂ ತನೂಜನಾದನಂತಿರ್ವರುಂ ಬಳೆದರಿತ್ತಲಾ ಕೊಂತಿಯೊಳ್ ಗಂಧರ್ವವಿವಾಹದಿಂ ಪಾಂಡುಕುಮಾರಂ ನೆರೆದುದನಂಧಕವೃಷ್ಣಿ ಮಹಾರಾಜಪ್ರಮುಖರಱಿದು

ಮ || ನವಗಿನ್ನೇನುಮೆನಲ್ಕೆವಾರದದಱಿಂದೀಕೊಂತಿಯಂ ಪಾಂಡುಗು
ತ್ಸವದಿಂದೀವುದೆ ಕಜ್ಜಮೆಂದು ಬರವೇೞ್ದೀಯಲ್ಕೆ ತತ್ಪಾಂಡುಭೂ
ಭುವನೇಶಂ ತದನುಪ್ರಭೂತೆಯೆನಿಪಾ ಭದ್ರಾಂಗಿ ಮದ್ರ್ಯನ್ವಿತಂ
ಪ್ರವಿವಾಹೋತ್ಸವದೀವೊಡೀಯಿಮೆನೆ ಮದ್ರೀಸಂಯುತಂ ಕೊಂತಿಯಂ ||೪೪||

ಕುಡೆ ತಳೆದು ಬಳೆದ ಹರ್ಷ
ಕ್ಕೆಡೆಯಾಗಿ ಬೞಿಕ್ಕೆ ತನ್ನ ನಗರಿಗೆ ವಂದಿ
ರ್ದಡರ್ವಹಿತರೆಱಗೆ ಜಸಮಂ
ಪಡೆದು ವಸುಂಧರೆಯೊಳೆಸೆದು ಸುಖದಿಂದಿರ್ದರ್ ||೪೫||

ಮ || ದೆಸೆಯೊಳ್ ಘೂರ್ಣಿಸೆ ಮಂಗಳಾನಕರವಂ ಹರ್ಮ್ಯಾಳಿಯೊಳ್ ಕೂಡೆ ಮಿ
ಳ್ಳಿಸೆ ಕೇತೂತ್ಕರಮೆಯ್ದೆ ಪಾಂಡುಮಹಿಪಂ ತಜ್ಜಾತಕರ್ಮೋತ್ಸವಂ
ಪಸರಂಬೆತ್ತಿರೆ ಮಾಡಿ ಪತ್ತು ದಿನದೊಳ್ ಸಾನಂದದಿಂ ದಿಟ್ಟನಂ
ದಸಮಾನಂಗೆ ಯುಧಿಷ್ಠಿರಾಹ್ವಯಮನಾ ವಿಶ್ವಂಭರಾವಲ್ಲಭಂ ||೫೬||

ಪವನಂ ಸುಟ್ಟುರೆಯಾಗಿ ಸುತ್ತಿ ಶಿಶುವಂ ಕಾದಿರ್ಪುದುಂ ಪಾಂಡು ತ
ನ್ನವರಂದರ್ಭಕನಂ ಬಿಸುಟ್ಟ ತೆಱನಂ ಕೇಳ್ದೇನದೆಂದಾ ಪರೇ
ತವನಕ್ಕಾಗಳೆ ಬಂದು ತನ್ನ ಸುತನಂ ನೋಡಲ್ಕೆ ತದ್ವಾಯು ಪಿಂ
ಗುವುದುಂ ಕಂಡು ಕುಮಾರನಂ ಪದೆಪಿನಂ ತಂದಂ ಮಹೀವಲ್ಲಭಂ ||೫೯||

ಸುತನಂ ಚರಮಾಂಗನನ
ಪ್ರತಿಮಪರಾಕ್ರಮನನತುಳ ತೇಜೋಧಿಕನಂ
ವಿತತ ಯಶೋನಿಧಿಯಂ ನಿ
ರ್ಜರಿತರಿಪುವಂ ಪಡೆದಳಂದು ಭೂಸಂಸ್ತುತನಂ ||೬೧||

ವಚನ :- ಆಗಳಾ ಪಾಂಡುರಾಜಂ ಜಾತಕರ್ಮಮಂ ಮಾಡಿ ಮಗಂಗರ್ಜುನನೆಂಬ ಪೆಸರನಿಟ್ಟು ಮತ್ತಂ ಇಂದ್ರೋತ್ಸವದೊಳ್ ಪುಟ್ಟಿದನಪ್ಪುದಱಿನಿಂದ್ರತನಯನೆಂದಾ ಧರಾಧಿಪನೆನೆನಲದಱಿನಾ ಕುಮಾರನಂ
ಧರಾತಳಂ ಸುರರಾಜಸುತನೆಂಬರ್. ಅಂತು ಮೂವಱುಂ ಚರಮಾಂಗಕುಮಾರರ್ ಬಳೆಯುತ್ತುಮಿರೆ ತದಚ್ಯುತ
ದಿವೌಕರಿರ್ವರುಂ ಬಂದು ಮದ್ರಿದೇವಿಯ ಗರ್ಭದೊಳ್ ನೆಲಸೆ

ಆ ಮದ್ರೀದೇವಿ ಪಡೆದಳ್
ಭೂಮಿಸ್ತುತರೆನಿಪಮಳ್ಗಳಂ ಮಕ್ಕಳನು
ದ್ದಾಮ ಯಶೋನಿಳಯರನಭಿ
ರಾಮ ಗುಣಾಕರರನಹಿತಕುಳಭೀಕರರಂ ||೬೨||

ವಚನ :- ಅಂತಾ ತನೂದ್ವಹದ್ವಯಕ್ಕೆ ನಕುಳ ಸಹದೇವರೆಂಬ ಪೆಸರನಿಟ್ಟು ಸುಖದಿನಿರೆ

ಧೃತರಾಷ್ಟ್ರಮಹೀಪತಿಗಂ
ಕ್ಷತಿನುತ ಗೆಂಧಾರಿದೇವಿಗಂ ನಂದನನ
ಪ್ರತಿಮತರಶೌರ್ಯನಾದಂ
ಜಿತರಿಪು ದುರ್ಯೋಧನಾಖ್ಯನವನಿಪಮುಖ್ಯಂ ||೬೩||

ವಚನ || ಮತ್ತಂ ತದನುಜರಾಗಿ ದುಶ್ಯಾಸನ, ದುರ್ಮರ್ಷಣ, ದುರ್ದರ್ಶನಾದಿ ನೂರ್ವರ್ ತನುಜರುಂ ದುಶ್ಶಲ್ಯೆಯುಮೆಂಬ ತನುಜೆಯುಮಾಗಿ ಬಳೆದು ಅಕ್ಷರಾದಿ ವಿದ್ಯಾವಿಚಕ್ಷಣರಾಗಿರಲ್ ಆಗಳಂಧಕ ನೃಪಾಳನಾ ದುಃಶಲ್ಯಾಕುಮಾರಿಯಂ ಸಿಂಧುದೇಶದ ಸೈಂಧವಂಗೆ ಕೊಟ್ಟಂ ಉೞಿದ ನೂರ್ವರ್ ಕುಮಾರರುಂ ಪಾಂಡುಕುಮಾರರಯ್ವರೊಳಾದ ಬಾಲಕ್ರೀಡೆಯಾದಿ ಮಾತ್ಸರ್ಯಮತಿಯಿನನ್ವಿತರಾಗಿ ಮಱೆಯಿಸಿ
ವಿಷಮಿಶ್ರಮೋದಕವ್ಯತಿಕರಮನೋರೊರ್ವರೊಳೊಡರ್ಚೆ ಗಾಂಗೇಯ ಧೃತರಾಷ್ಟ್ರಾದಿಗಳ್ ಅವರಂ ನಿಯಾಮಿಸುತ್ತುಂ ನಡಪೆ ನಡೆಯುತ್ತುಮಿರ್ದರಿರೆ

ಚತುರ್ಥಾಶ್ವಾಸಂ.

ಉ :- ಪೇೞಿಮಿದೇಂ ವಿಪಂಚಿವಿಡಿದೀ ಪೊೞಲೊಳ್ ಜನಸಂಚಯಂ ಕರಂ
ಲೀಳೆಯಿನಿರ್ದುದೇಕೆಯೆನಲಾ ನುಡಿಗೇಳ್ದಿರದಾತನಿಂತೆಂದನಿಂ
ಕೇಳ ಮಹಾತ್ಮನಿಭ್ಯಕುಳನಿಲ್ಲಿ ಸದಗ್ರಣಿ ಚಾರುದತ್ತನಾ
ಭೀಳಸುತೇಜನಾ ವಿಭುತನೂಭವೆ ಭಾವಭವಾಸ್ತ್ರಮೆಂಬಿನಂ ||

ಮ|| ಸ್ರ|| ಎಸೆವಳ್ ಗಂಧರ್ವದತ್ತಾಹ್ವಯದಿನತಿಮದೋನ್ಮತ್ತೆ ಸದ್ರೂಪವೆತ್ತೀ
ವಸುಧಾಸಂಸೇವ್ಯೆ ವೀಣಾವಿತತಿಯ ಮದದಿಂದಾಕೆ ಮೆಚ್ಚಳ್ ಕರಂ ಭಾ
ವಿಸಲಾ ಗಂಧರ್ವದೇವವ್ರಜಮುಮನದಱಿಂ ತನ್ನನಾ ವಿದ್ಯೆಯೊಳ್ ರಂ
ಜಿಸುವನ್ನಂಗಲ್ಲದಾಗೆಂ ಸತಿ ಎನಲದನೇಗೊಂಡು ತಚ್ಚಾರುದತ್ತಂ ||೧೮||

ಚಂ|| ಬಗೆಯಲಿದಂಗದೇಶವಿದಱೊಳ್ ಸಲೆ ಸಂದುದು ಚಂಪೆಯೆಂಬುದೀ
ನಗರಮಿದಂ ನುತಂ ವಿಮಳವಾಹನಭೂಭುಜನಾಳ್ವನಿಲ್ಲಿ ವೈ
ಶ್ಯಗಣವಿಶಿಷ್ಟನಿರ್ಪನಭಯಂ ವಿಭುಮಾನಿತ ಭಾನದತ್ತ ನಾ
ತಗೆ ನಿಜಭಾರ್ಯೆ ದೇವಿಲೆಯವರ್ ಸುಖಮಂ ತಳೆದಿರ್ದರಿರ್ಪಿನಂ ||೨೨||

ವಚನ || ಅಂತಿರ್ಪುದುಮೀ ಪುರಕ್ಕೆ ಚಾರಣರಪ್ಪವಧಿಜ್ಞಾನಿಗಳ್ ಬರಲವರನಾ ದೇವಿಲೆ ಪೋಗಿ ಬಂದಿಸಿ ಬೆಸಸಿಮೆನಗೆ ತನಯರಿಲ್ಲದೀ ಜನನಮಿಂತೆ ಪೋಕುಮೋ ಮೇಣ್ ತನೂಭವರ್ ಜನಿಯಿಸುಗುಮೋ ಪೇೞಿಮೆನೆ ಮುನಪರವಧಾರಿಸಿ ನಿನಗೊರ್ವನಸಾಧಾರಣನಪ್ಪುದಾರ ದಾರನಕ್ಕುಮೆನೆ

ಸಂತೋಷದಿಂ ಬಂದಿರದೊಂದುದೆವಸಂ ಕನಸಿನೊಳಾ ಚಾರಣರ್ ತನಗೆ ಮಾಣಿಕಮನಿತ್ತುದಂ ಕಂಡೊಸೆದಿರೆ ಕೆಲವಾನು
ದಿವಸಕ್ಕೆ ಗರ್ಭಮಾಗಿ ನವಮಾಸಂ ನೆಱೆದು ಮಗಂಬಡೆಯೆ

ನಿರ್ಭರರಾಗದಿನಂದು ನಿ
ಜಾರ್ಭಕನಂ ಜಾತಕರ್ಮಮಂ ನಿರ್ಮಿಸಿದಂ
ಗರ್ಭೀಕೃತ ಜಿನಮತನಾ
ವಿಭೂತಸುಪುಣ್ಯನಿಭ್ಯವಂಶವರೇಣ್ಯಂ ||೨೩||

ವಚನ || ಅಂತು ನಿರ್ವರ್ತಿತ ಜಾತಕರ್ಮಮಂ ದಶಮ ದಿನದೊಳ್

ಮತ್ತೇಂ ಚಾರಣರೀಯಲ್
ಪೆತ್ತೆಂ ನಾಮೀ ಕುಮಾರನಂ ಪ್ರಥಿತಯಶೋ
ವಿತ್ತನನದಱಿಂದೀ ವಿಭು
ಗುತ್ತಮಮಿದು ಚಾರುದತ್ತನೆಂಬಭಿಧಾನಂ ||೨೪||

ವಚನ :- ಎಂದು ಪೆಸರನಿಟ್ಟೊಸಗೆಯಂ ಮಾೞ್ಪುದುಮಾ ಪುರೀನಾಥನಮಾತ್ಯರಯ್ವರಾ ದಿನದೊಳೆ ತನಯರಂಬಡೆಯೆ
ಭಾನುದತ್ತನಾ ಕುಮಾರರಂ ಚಾರುದತ್ತನೊಡೆವಳೆವಂತಾಗಿ ಬೇಡಿ ತಂದವರ್ಗೆ ಹರಿಸಖಂ ಗೋಮುಖಂ ವರಾಹಕಂ ಪರಂತಪಂ ಮರುಭೂತಿಯೆಂಬಭಿಧಾನಂಗಳನಿಡಲವರ್ ಚಾರುದತ್ತನೊಳೊಂದಿರಲಾ ಚಾರುದತ್ತನಕ್ಷರಾದಿ ಕಳಾಕಳಾಪದೊಳತಿಪರಿಣತನಾಗ

ಮಹನೀಯಮಪ್ಪ ವಿದ್ಯಾ
ಮಹಿಮೆಯನಾಂತೆಸೆದನಂದು ಸಂದಿರ್ದ ಪಿತಾ
ಮಹನಿಂದಗ್ಗಳಮೆಂದೆನೆ
ಮಹಿಮಹಿತಂ ಚಾರುದತ್ತನಮಳಿನಚಿತ್ತಂ ||೨೫||

ವಚನ :- ಅಂದಾ ಪುರಬಹಿರ್ಭಾಗದಂಗಮಂದಿರಮೆಂಬ ಗಿರಿವರದ ಮೇಲೆ ಯಮಧರರೆಂಬ ಮುನಿವರರ್ ಮುನ್ನೆ

ಮ || ಘನಕರ್ಮಾಷ್ಟಕಮಂ ಪಡಲ್ವಡಿಪುದುಂ ತತ್ಪಾವನಸ್ಥಾನಮಂ
ಜನಿತಾನಂದದಿನರ್ಚಿಸಲ್ ವಿವಿಧಭವ್ಯಶ್ರೇಣಿ ಯಾತ್ರಾಪ್ರವ
ರ್ತನಮಂ ಮಾಡಿ ಸಮಂತು ಮಾರ್ಗಶಿರದೊಳ್ ಪೋಗುತ್ತೆ ಪೂಜಾವಿಧಾ
ನನಿಮಿತ್ತಂ ವಿವಿಧಾರ್ಚನಾ ಸಹಿತವಂದಾ ಭಾನುದತ್ತಾಹ್ವಯಂ ||೨೬||

ಸಿದ್ಧಾರ್ಥಂಗಂ ನಿರ್ಮಳ
ಬುದ್ಧಿಯೆನಿಪ್ಪಾ ಸುಮಿತ್ರೆಗಂ ಪುಟ್ಟಿದಳಂ
ಶ್ದ್ಧಗುಣನಿಳಯೆಯಂ ಮದ
ನೋದ್ಧುರುತರ ಶಕ್ತಿಯೆನಿಪ ಮಿತ್ರಾವತಿಯಂ||೩೮||

ಬೇಡಿ ಪಡೆದೊಸೆದು ದೆಸೆಯೊಳ್
ಕೂಡಿರೆ ಪಟುಪಟಹನಿಸ್ವನಂ ಶುಭದಿನದೊಳ್
ನಾಡಾಡಿಗಳುಂಬಮೆನಲ್
ಮಾಡಿದನಂತಾತ್ಮಜಂಗೆ ಜಂಗೆ ಮದುವೆಯನೆಸೆಯಲ್||೩೯||

ಮ || ಎನೆ ತದ್ದೇವಿಲೆಯೆಂದಳೆಂತು ಮರುಳಾದಂ ಚಾರುದತ್ತಂ ಮಹಾ
ತ್ಮನದೇನೆಂಬುದುಮಾ ಸುಮಿತ್ರೆಯಱಿಪಲ್ ಕೇಳ್ದೆಂದಳಿಂತಪ್ಪುದ
ರ್ಕೆನಸುಂ ಚಿಂತಿಸವೇಡ ಶಾಸ್ತ್ರಪರನಾಗಿರ್ದಂ ಸಮಂತೆಯ್ದೆ ಮ
ತ್ತನಯಂ ಮಾಣಿಪೆನಂತದಂ ಪದೆದು ನೀಂ ಪೋಗೆಂಬುದುಂ ಪೋಪುದುಂ||೪೩||

ವಚನಾ :- ಆಗುಳಾದೇವಿಲೆ ತನ್ನ ಮೈದುನನಪ್ಪ ರುದ್ರದತ್ತನಂ ಕರೆದೇಕಾಂತದೊಳಿಂತೆಂದಳ್

ಭವದೀಯ ತನೂಜಾತಂ
ನವಯೌವನದೊಳ್ ಶಾಸ್ತ್ರಜಡತೆಯಂ ತಾಳ್ದಿ ಮನೋ
ಭವಸುಖಮನೊಲ್ಲದಿರೆ ಸಂ
ಭವಿಸಿದುದಾತಂಕಮೆನಗೆ ಮಿತ್ರವತಿಯಿಂ ||೪೪||

ವಚನ :- ಆಗಳ್ ರುದ್ರದತ್ತನತಿಹರ್ಷಚಿತ್ತನಾಗಿ ಚಾರುದತ್ತನನಂತೊಡಗೊಂಡು ಬಂದಾ ದೇವತಾ ಗೃಹದ ನೃತ್ಯಮಂಟಪಮನೆಯ್ದಿ ಪುಗುವುದುಂ ಅಲ್ಲಿ ಮನಸಿಜನ ಮಸೆದಲರ್ಗಣೆಯೆನಿಸಿಯುಂ ಕುಡುಮಿಂಚಿನ
ಸಂಭಾರಣೆಯೆನಿಸಿಯುಮೆಸೆದು ವಿವಿಧ ನರ್ತನಪ್ರವರ್ತನದದೊಳತಿಚದುರೆಯೆನಿಸಿ ನರ್ತಿಸುವ ನರ್ತಕಿಯುಂ
ಎಸೆದು ಪಸರಿಸುವ ಸುಧಾಸಾರಮೆನಿಸುವಿಂಪಿನ ಸೊಂಪುವೆತ್ತೆಸೆವ ಗೇಯಮುಂ ಅದಂ ಸೋಯಲೀಯದದಮೃತ
ವಾರ್ಧಿನಿನದಮನನುಕರಿಸುವನೇಕ ವಾದ್ಯಲಯಂಗಳುಂ ಮನಂಗೊಳೆ ಚಾರುದತ್ತನಿರ್ಪುದುಮಲ್ಲಿ

ಪ್ರೇಕ್ಷಣಮಂ ಮುದದಿಂ ಬಂ
ದೀಕ್ಷಿಪ ವಿಟತತಿಯ ಕಣ್ಗೆ ಬಲೆಯೆನಿಸಿದ ಕಂ
ಜಾಕ್ಷಿಯರಿರೆ ಪಲರಲ್ಲಿ ವಿ
ವಕ್ಷಿತನಾ ಚಾರುದತ್ತನಭಿವೀಕ್ಷಿಸಿದಂ ||೪೬||

ಏೞಿಂ ಬಿಜಯಂಗೆಯ್ಯಿಂ
ಲೀಳೆಯಿನಿತ್ತೆಮ್ಮ ಹರ್ಮ್ಯದೊಳ್ ಕುಳ್ಳಿರಿಮೀ
ವ್ಯಾಳಗಜಂಗಳ್ ಪೋಗ
ಲ್ಕಾಳಾಪಪದೊಳೇನೊ ಬೞಿಕೆ ಪೋಗಿಂ ಮುದದಿಂ ||೫೦||

ವಚನ :- ಎನೆ ರುದ್ರದತ್ತಂ ಚಾರುದತ್ತನ ಮುಖಾರವಿಂದಮಂನೋಡೆ ಆತಂ ನಕ್ಕುಮಾದೊಡೇನೆನೆ

ಮ || ಇದುವಂ ನೋಡುವಮೆಂದು ಬಂದು ಮದನಾಕಾರಂ ಬುಧಾಧಾರನು
ನ್ಮದವೈರಿಚ್ಛಿದನುದ್ಘಹರ್ಮ್ಯತಳದೊಳ್ ಕುಳ್ಳಿರ್ದನಲ್ಲಿರ್ದ ಸ
ನ್ಮೃದುವಿಸ್ತೀರ್ಣಮೆನಿಪ್ಪ ಬಿತ್ತರಿಗೆಯೊಳ್ ಭೂಷಾಂಶು ತದ್ಗೇಹಮಂ
ಪುದಿಯಸ್ ಬಾಳದಿನೇಶನಂತೆಸೆದನಾ ವೈಶ್ಯಪುತ್ರೇಶ್ವರಂ ||೫೧||

ಮಸೆದಸಮಾಸ್ತ್ರನ ಶಸ್ತ್ರಮೊ
ಕುಸುಮಾಯುಧನುಗ್ರಚಾಪವಿದ್ಯೆಯೊ ಪೇೞಿಂ
ಬೆಸಕಮನಾಂತೆೞ್ತಂದಳ್
ಪೊಸಯಿಸೆ ಭೂಷಾಂಶು ಶಕ್ರಚಾಪಶ್ರೀಯಂ||೫೨||

ವಚನ :- ಅಂತೆಸೆವ ವಸಂತತಿಳಕೆ ಬಂದು ಕೆಲದ ನೆಲದ ಬಿತ್ತರಿಗೆಯೊಳಿರ್ಪುದುಮಾಕೆಯ ಪರಿಚಾರಿಕೆಯರ್ ನೆತ್ತವಲಗೆಯಂ ತಂದು ಮುಂದಿಟ್ಟು ಚಾರುದತ್ತ ನೀನೆಲ್ಲ ವಿದ್ಯೆಯೊಳಂ ವಿದಗ್ಧನೆಯಾದೊಡಂ

ಉ || ನೆತ್ತಮನಾಡಲೀ ಘನಸುವೃತ ಪಯೋಧರೆಯೊಳ್ ಪೊಣರ್ಕೆ ಕೇ
ಳತ್ತಳಗಂ ದಿಟಂ ನಿಮಗದೆಮ್ಮೊಡನಾಡುವುದೆಂದೊಡೆಂದನೀ
ಮುತ್ತಮೆಯೊಳ್ ಕರಂ ಪೊಣರೆ ಸೋಲ್ವುದು ತಪ್ಪದೆನಲ್ಕೆ ಕೇಳ್ದು ಕಾ
ಡುತ್ತಿರದಾಡಿಮೆಂದೆನೆ ಮನೋಮುದದಿಂ ಪೊಣರ್ದಾಡುತಿರ್ಪುದುಂ ||೫೩||

ವಚನ :- ಆಗಳಾ ಚಾರುದತ್ತನ ಸಹಚರರ್ ಕಣ್ಸನ್ನೆಯಿನೊರ್ವರೊರ್ವರೆ ಪೋಪುದುಂ ರುದ್ರದತ್ತನುಂ ಕ್ಷುದ್ರತೆಯಿನಲ್ಲಿಂ ಮೆಲ್ಲನೆೞ್ದು ಪೋಗೆ ಚಾರುದತ್ತನೊಂದು ಪಲಗೆಯಂ ಸೋಲೆ ವಸಂತತಿಳಕೆ ಸೋಲಮನೀಯಿಂ ಬನ್ನಿಮೆಂದು ಕೆಯ್ಯನತಿರಾಗದಿಂ ಪಿಡಿದೊಯ್ಯೆ

ಅಂಗಜನಂ ರತಿ ರತಿಯಿಂ
ಸಂಗತ ಮಣಿರಮ್ಯಹರ್ಮ್ಯದತ್ತೊಯ್ವವೊಲು
ತ್ತುಂಗ ಕುಚೆಯೊಯ್ದಳಪಹಸಿ
ತಾಂಗಜನಂ ಚಾರುದತ್ತನಂ ಮುದದಿದಂ ||೫೪||

ವಚನ :- ಅಂತೊಯ್ದು ಸುರಮ್ಯಹರ್ಮ್ಯದೊಳ್ ಎಸೆವ ಹರಿನೀಳಕುಟ್ಟಿಮ ವಿರಾಜಮಾನಮುಂ ಅತಿರುಚಿರವಿಚಿತ್ರ
ಪಾತ್ರೀಭೂತಭಿತ್ತಿವಿಸ್ತರಮಂ ಸಮೀಚೀನ  ವಿತಾನಾದಾನಮುಮಾಗಿ ಸೊಗಯಿಸುವ ಕ್ಷುದ್ರಭದ್ರದೊಳೆಸೆವ ಪ್ರವಾಳಪ್ರತಿಪಾದುಕಾ ಪ್ರವಿರಾಜಿತ ಕಾಂಚನಮಂಚೋಪರಿಸ್ಥಿತ ಸುಧಾಸಿಂಧುಬಂಧುರ ಫೇನಾಯಮಾನಪ್ಚ್ಛದಾಚ್ಛಾದಿತ
ಹಂಸತಳ್ಪತಳದೊಳಿರ್ವರುಮಿರೆ ಪರಿಚಾರಿಕೆಯರತಿಸುರಭಿಘನಸಾಕಾಶ್ಮೀರಮೃಗಮದಾದಿಸುಗಂಧದ್ರವ್ಯಮುಮನತಿಸೇವ್ಯ
ಕುಸುಮಾಳಾವಳಿಯುಮಂ ಬಹುಳತಾಂಬೂಳಮುಮನವಟಯ್ಸಿ ತಂದಿರಿಸಿ ಪೋಗೆ

ಭೋಗೋಚಿತ ವಸ್ತುವನಾ
ಭೋಗಿಗಳಂದೆಯ್ದೆ ತಾಳ್ದಿ ನಿರುಪಮ ಸುರತೋ
ದ್ಯೋಗದಿನಿರ್ದಂದಾಪರಿ
ಯೋಗಡಿಸದೆ ಮದನಸುಖಸುಧಾಸ್ವಾದನದಿಂ ||೫೫||

ವಚನ :- ಅಂತು ಸಂತೃಪ್ತ ಮದನಕ್ರೀಡಾನೀಡರಾಗಿರ್ಪುದುಂ ಪರಿಚಾರಿಕೆಯರ್ ವಂದೇೞಿಮೆನಲೆೞ್ದು ಮಜ್ಷನಭೋಜನಾದಿಗಳಿಂ ಸಂತೃಪ್ತರಾಗಿ ನಿರಂತರಮಂತು ಸಲೆ ಪಲವುದೆವಸಂ ವಸಂತತಿಳಕೆಯ ಜನನಿ ತನಗೆ ಧನಾಗಮಮಂ ಕಾಣದೆ ಮಾಣದೆ ವಿಷಾದಮುತ್ತು ಸೈರಿಸದೆ ತನ್ನ ಪರಿಚಾರಿಕೆಯರಂ ಕರೆದು ದೇವಿಲೆಯಲ್ಲಿಗೆ
ಮೆಲ್ಲನಟ್ಟಿ ಚಾರುದತ್ತಂ ಬಿಯಕ್ಕೆ ತಕ್ಕುದಂ ಬೇಡಿದನೆನೆ ದೇವಿಲೆ ಕರಮೊಳ್ಳಿತ್ತುವೆಂದು ಬೇಮ್ಪಿದನೊಯ್ಯಿಮೆನೆ
ದೀನಾರಮಂ ದಿನಂಪ್ರತಿ ಸಾಸಿರಮಾ ಪರ್ವದಿನದೊಳ್ ಪತ್ತು ಸಾಸಿರಂ ಎಂಬೀ ಗಣನೆಯಿಂ

ಉ || ಇಂತು ನಿರಂತರ ತರಿಸೆ ಚಿತ್ತಗಿ ವಿತ್ತಮನಬ್ದವಾಱಱಿಂ
ದಂ ತವೆ ಷೋಡಶಪ್ರಮಿತಕೋಟಿಸುವರ್ಣಮದಂ ಸಮಂತು ಕಂ
ಡಿಂತಿರವಿನ್ನಮೋಘವೆನಗಂ ಪೞಿ ಸಾರ್ಗುಮೆನುತ್ತುದಾತ್ತನ
ಭ್ರಾಂತಿಯಿನಾಂತನಂದು ಜಿನದೀಕ್ಷೆಯನಾಂ ವಿಭು ವೈಶ್ಯಪುಂಗವಂ ||೫೬||

ವಚನ :- ಅಂತಾ ಭಾನುದತ್ತಂ ಜಿನದೀಕ್ಷಾಕ್ಷಮನಾದನನ್ನೆಗಂ

ಅನುಪಮ ವಸಂತತಿಳಕೆಯೊ
ಳನುನಯದಿಂದಂತು ಚಾರುದತ್ತನಿರಲ್ ತ
ದ್ಧನಮುಂ ತವುತಂದದು ಸಂ
ಜನಿಯಿಸೆ ಮತ್ತಾಱುವರ್ಷವಾ ಕ್ರಮದಿಂದಂ ||೫೭||

ವಚನ :- ಪನ್ನೆರಡಬ್ದ ಪರಿವರ್ತನಂ ನೆಱೆಯೆ

ಮೂವತ್ತಿರ್ಕೋಟಿಯನಂ
ತಾವಗಮನುದಿನದಿನಡಕಿಕೊಂಡುಂ ಮತ್ತಾ
ಕಾವಲೆಯದು ನೆಱೆಯದೆ ದು
ರ್ಭಾವೆ ಕರಂ ಬೇಡಿಯಟ್ಟಿದಳ್ ಮಱುದೆವಸಂ ||೫೮||

ಅಟ್ಟಲುಮಕೃಷ್ಟ ದೇವಿಲೆ
ನೆಟ್ಟನೆ ಮುದಮುತ್ತು ಸದನಮಂ ಮಾಱಿಯುಮಂ
ದಟ್ಟಿದಳೆ ಪೊನ್ನನೆನೆ ಸಿರಿ
ಕೆಟ್ಟೊಡಮಭ್ಯಾಸವೇನೊ ಕಿಡುಗುಮೊ ಪೇೞಿಂ ||೫೯||

ವಚನ :- ಅಂತಟ್ಟುವುದುಂ ಅವಂ ಕಳೆದುಕೊಂಡು ಮತ್ತಂ ಮಱುದೆವಸಮಾಕೆಯ ಪರಿಚಾರಿಕೆಯರ್ ಬಂದುಮಾ ದೇವಿಲೆಯಂ ತನ್ನೀಡದೊಳ್ ಕಾಣದೆ ಮಾಣದಱಸಿ ತದ್ಗೃಹವಿಕ್ರಯಪ್ರಪಂಚಮನಱಿದು ಸಿದ್ಧರ್ಥನ ಮನೆಯೊಳ್ ಸೊಸೆಯು ತಾನುಮಿರಲವಂದಿರಲ್ಲಿಗೆ ವಂದು ಬೇಡುವುದುಂ ದೇವಿಲೆ ನಾಣ್ಚಿ ತಲೆಯಂ ಬಾಗಿಮೋನಮಂ ತಳೆದು

ಮ|| ಇರೆ ಮಿತ್ರಾವತಿಯೆಂದಳಕ್ಕ ನಿಮಗಿಂತೇಕೀ ತ್ರಪಾಭಾರದು
ಬ್ಬರಮಿಂದಿಗೆ ಮದೀಯ ಭೂಷಣಗಣಂ ಸಾಲ್ಗುಂ ದಲೆಂದಾ ತನೂ
ದರಿ ಕೊಟ್ಟಟ್ಟೆ ವಿಭೂಷಣಪ್ರಕರಮಂ ಕೊಂಡಂತವರ್ ಪೋಗಿ ವಿ
ಸ್ತರದಿಂ ಪೇೞ್ಷುದುಮಾಕೆ ಕೇಳ್ದು ತೊಡವಂ ಮತ್ತಟ್ಟಿ ವಿಭ್ರಾಂತಿಯಿಂ ||೬೦||

ತಳೆದು ಧನಹೀನನಾದೀ
ಯಳಿಯನನೇತೆಱದಿನಿೞಿಪಿ ಕಳೆವೆನೆನುತ್ತು
ಮ್ಮಳಿಸಿ ಮಗಳಲ್ಲಿಗಟ್ಟಿದ
ಳಿೞಿಕೆಯ ನಿಸ್ಸಾರಮಪ್ಪ ವಸ್ತುವನಾಗಳ್ ||೬೧||

ವಚನ :- ಅಂತು ಚಾರುದತ್ತಂ ಗತವಿತ್ತನಾದುದಂ ವಕ್ರೋಕ್ತಿಯಿನಱಿಪಲಟ್ಟುವುದುಂ ವಸಂತತಿಳಕೆ ನಿಜಾಂಬಿಕೆಯ ಮನದ ಧನದ ಲಂಪಳತೆಯನಳುಂಬಮಂ ಕಂಡು ಕಣ್ಬರಿಗೆಟ್ಟು ತಂದ ಪರಿಚಾರಿಕೆಯರಂ ಕರೆದು ನಿರಾಕರಿಸಿ
ಚಾರುದತ್ತನತ್ತಾರುಮಂ ಸಾರಲೀಯದಿರ್ಪುದುಮೊಂದು ದಿನಂ

ಮ|| ಸ್ರ || ಎಳದೆಂಗುಂ ತೀವಿ ಸೊರ್ಕಂ ಬಳಯಿಪ ಜಳಮಂ ಚಾರುದತ್ತಂಗಮಾ ಕೋ
ಳೆಗಂ ಕೊಟ್ಟಟ್ಟಲಂತಿರ್ವರುಮಱಿಯದದಂ ಪೀರ್ದು ಸೊರ್ಕಿದೊಡೆಯ್ತಂ
ದಳಿಯಂ ನಿರ್ದ್ರವ್ಯನೀತಂಗಿರವು ಘಟಿಸದಿಂ ಬೇಗಮೊಯ್ದಿಕ್ಕಿ ಬನ್ನಿಂ
ಪೊೞಲೊಳ್ ನೀಮೆಂದೊಡೆಯ್ತಂದಿೞಿಪಿ ಬೆಸದವರ್ ಪೋಗೆ ತಚ್ಚಾರುದತ್ತಂ ||೬೨||

ವಚನ || ಅಂತು ಚೌವಟ್ಟದ ತಿಪ್ಪೆಯೊಳಿರೆ ಕಿಱಿದು ಸಮಯದಿಂ ಸೊರ್ಕಿನುರ್ಕು ತಿಳಿಯಲೆೞ್ದು

ಮ || ನೆಗೆದುತ್ತುಂಗ ಸುರಮ್ಯಹರ್ಮ್ಯದುಪರಿಪ್ರಸ್ತಾರವೆತ್ತೀ ಕುವ
ವಸ್ತುಗಳಿಂದಂ ನೆಗೆದಿರ್ಪ ತಿಪ್ಪೆಯಿದು ತಾನೆತ್ತಿಲ್ಲಿಗಾರ್ ತಂದರೇಂ
ಪಗೆಯುಂಟೇ ಪೆಱತೇನೊ ಕುಂಟಣಿಯಿನಾಯ್ತಿಂತಪ್ಪವಸ್ಥಾಂತರಂ
ಬಗೆಯಲ್ಕಿಂತುಟೆ ಕರ್ಮದೊಂದುದಯದಿಂದೇನಾಗದೋ ನಿಶ್ಚಯಂ ||೬೩||

ವಚನ || ಎಂದಾ ಮಹಾನುಭಾವಂ ವಿಗತಿವಿಷಾದಭಾವನಾಗಿ ಸ್ವಕೀಯಸದನಕ್ಕೆ ಬರ್ಪುದುಮಲ್ಲಿರ್ದನೋರ್ವಂ ಬರ್ಪರಾರೆಂಬುದುಂ ನಾಂ ಚಾರುದತ್ತನೆನಲಂ ನೀನೇಕೆ ಬಂದೆಯೆನೆ ನೀನಾರ್ಗೆನಲಾತಂ ತದ್ಗೃಹವಿಕ್ರಯಪ್ರಪಂಚಮನಱಿಪುವುದುಂ ಅಸ್ಮದೀಯಜನನಿಯೆಲ್ಲಿರ್ದಳೆನೆ ಭವದೀಯ ಮಾತುಳಾ ಗಾರದೊಳ್
ಸೊಸೆಯುಂ ತಾನುಂ ಇರ್ದಳೆನಲಲ್ಲಿಗೆವಂದು ದೇವಿಲೆಯಂ ಕಂಡು

ಜನನುತೆಗಾತ್ಮಾಂಬಿಕೆಗಂ
ದನುನಯದಿಂದೆಱಗಿ ಪರಸಿ ತಜ್ಜನನಿ ಯಶೋ
ಧನೆ ಸಂತಸದಿಂ ಪೆರ್ಚಿದ
ಳನುಪಮೆ ವಿಧುಗಂಡ ವಾರ್ಧಿ ಪೆರ್ಚುವ ತೆಱದಿಂ ||೬೪||

ವಚನ || ಆಗಳಾ ಸುಚರಿತ್ರವತಿಯಪ್ಪ ಮಿತ್ರಾವತಿಯಾತ್ಮವಲ್ಲಭನಂಗಸಂಗತಮಪ್ಪ ಧೂಳಿಯಂ ಕಂಡು
ಮಜ್ಜನಕುಜ್ಜುಗಮಂ ಮಾಡಿ ಸಸ್ನೇಹದಿಂ ಸ್ನಾನವಿಧಾನಮಂ ನಿರ್ವರ್ತಿಸಿ ತದನಂತರಂ ಮಣಿ ಭಾಜನಮನಿಟ್ಟು
ಭೋಜನದೊಳ್ ಸಂತುಷ್ಟನಂ ಮಾೞ್ಪುದುಂ ಚಾರುದತ್ತನದಂ ಮನದೆಗೊಂಡಾತ್ಮೀಯ ಜನನಿಯ ಮುಖಾರವಿಂದಮಂ ನೋಡಿ

ಮ|| ಸ್ರ || ನಿವಗೆನ್ನಂತಪ್ಪ ಪುತ್ರಂ ಸಮನಿಸೆ ಸವಸಂದತ್ತು ದೌಸ್ಥಿತ್ಯಮತ್ಯಂ
ತವೆನಲ್ಕೆನ್ನಿಂದಮಾರ್ ಚಿಃ ಬಗೆಯಲವನಿಯೊಲ್ ಕಷ್ಟರುಂ ಭ್ರಷ್ಟರುಂ ಸಂ
ಭವಿಸರ್ ಕೇಳ್ ತಾಯೆ ನಮ್ಮನ್ವಯದಿಭಕುಳದಲ್ಲಾಂ ಬಿಯಂಗೆಯ್ದನಿತ್ತ
ಕ್ಕವಿದೆಂತು ನೋಡಲಿಂತಿಮ್ಮಡಿಯ ಧನಮುಮಂ ಧರ್ಮದಿಂ ಪೆತ್ತು ಬರ್ಪೆಂ ||೬೫||

ವಚನ || ಅಂತಾತ್ಮ ಜನನಿಗೆ ಕೃತಪ್ರತಿಜ್ಞನಾಗಿರಲಾ ಸಮಯದೊಳ್ ಸಿದ್ಧಾರ್ಥಂ ಬಂದು ತತ್ಪ್ರಪಂಚಮನಱಿದು ಚಾರುದತ್ತಂಗಿಂತೆಂದನೆನ್ನ ಮನೆಯೊಳಿನ್ನುಂ ಪದಿನಾಱುಕೋಟಿ ಪೊನ್ನಿರ್ದುದವಂ ಕೊಂಡು ಮುನ್ನಿನಂತೆ ಸುಖದಿನಿರಿಮೆನೆ
ಚಾರುದತ್ತಂ ಒಡಂಪಟ್ಟು ಬಂದು ಬಂಧುಗಳ್ಗೆ ಕೆಯ್ಯಾಂಪ ಗಾಂಪೇವುದೆಂದು ನಮಗೆಯಸಾಧ್ಯಮೇನೆನೆ ಸಿದ್ಧಾರ್ಥಂ ಕೇಳ್ದಂತಾದೊಡಿಂ ವ್ಯವಹರಣಕ್ಕೆ ತಕ್ಕ ಭಂಡಮನೊಯ್ವುದೆನೆ ದರಸ್ಮಿತವದನನಿಂತೆಂದಂ

ಪರದಂ ಮೊದಲಂ ಬೇೞ್ಪೊಡೆ
ಪರದನೆ ಶೂರತೆಯನಪ್ಪುಕೆಯ್ದು ಮತ್ತಂ
ನೆರವಂ ಪಾರ್ವೊಡೆ ಶೂರನೆ
ಪರಮಾರ್ಥಂ ಸ್ವಾರ್ಥಪರನವಂ ಪರಹಿತನೇ ||೬೬||

ವನದುರ್ಗದೊಳೌಷಧಿಗಳ್
ವನನಿಧಿತಟದಲ್ಲಿ ಚಂದನಾವನಿಜಂಗಳ್
ಘನಗುಹೆಯೊಳ್ ರತ್ನಂಗಳ್
ಜನಿಯಿಸವೇಂ ಸಾಹಸಾದಿಗಳ್ಗರಿದುಂಟೇ ||೬೭||

ವಚನ || ಅದಱಿಂ ಸಕಳವಿದ್ಯಾನಿಪುಣನೆನಿಪ ವಣಿಗಗ್ರಣಿಗಮಕ್ಷೂಣ ದೋರ್ದ್ರವಿಣನಪ್ಪ ಸುಭಟಂಗಮರ್ಥಮುಮಂ ನೆರವುಮಂ ಪಾರ್ವುದು ಕಷ್ಟಂ ಅದಱಿಂದಮೊಂದು ಶಂಕೆಯುಮಿಲ್ಲದಿಮೆಂದಾ ಮಹಾತ್ಮನಾತ್ಮಜನನಿಯ ಪದಪಯೋಜಕ್ಕೆಱಗಿ ಸಿದ್ಧರ್ಥಸೆಟ್ಟಿಗಂ ವಿನತನಾಗಿ ನಿಜನಿತಂಬಿನಿಯುಮಂ ಸಂತೈಸಿ

ಚಂ || ನಿರುಪಮನಂದು ಪೇೞ್ದು ಪೊಱಮಟ್ಟಿರದಾಗಳೆ ದಕ್ಷಿಣಾಸೆಯೊಳ್
ಬರುತಿರೆ ಸಾರ್ಥಮೊಂದನಸಮೋದ್ಯಮತತ್ಪರನಂದು ಕಂಡದಂ
ತ್ವರಿತದಿನೆಯ್ದಿವಂದು ಮುದದಿಂದದನೊಂದಿ ಸುಖಪ್ರಯಾಣದಿಂ
ದಿರೆ ಬೞಿಸಂದು ಬಂದಿರದೆ ಕೂಡಿದನಾತನೊಳಂದು ಮಾತುಳಂ || ೬೮||

ವಚನ || ಅಂತು ಸಿದ್ಧಾರ್ಥಂ ಸಿದ್ಧಪುರುಷಾರ್ಥನಾಗಿ ಚಾರುದತ್ತನೊಡಗೂಡಿ ನಡವುದಮಾ ಸಾರ್ಥಮಳಕಾವಿಷಯದೊಳನ್ಯಮಾರ್ಗನಿರ್ಗತಮಾಗೆ ತಮ್ಮಿರ್ವರುಮಂತೆ ನಡೆದು ಶಿಷ್ಟಮಾಲಿಯೆಂಬ
ನದೀತೀರಮನೆಯ್ದಿವಂದಲ್ಲಿಯ ಗಂಧಯುಕತಪ್ರಯೋಗಯೋಗ್ಯಮಾದ ಸುಗಂಧಮೂಳಿಕೆಗಳುಮಂ
ನೆಱೆಯಱಸಿಕೊಂಡು ಪೊಱೆಗಟ್ಟಿ ಪೊತ್ತು ಚಾರುದತ್ತನುಂ ಸಿದ್ಧಾರ್ಥನುಂ ಬಂದು ಪಳಾಸಪುರಮಂ ಪೊಕ್ಕು

ಅವರಂದು ಸಮಂತೌಷಧಿ
ನಿವಹಂಗಳನಲ್ಲಿ ಮಾಱಿ ನೆರಪಿದ ಕಾರ್ಪಾ
ಸವನತ್ತಲೊಯ್ಯೆ ವನದೊಳ್
ದವಾಗ್ನಿ ಪತ್ತಲ್ಕೆ ಕೂಡೆ ಬೇಯಲ್ ಮತ್ತಂ ||೬೯||

ಕೇಡೆಂಬುದುಂ ತನ್ನ ಮನಂ
ನೋಡಲ್ಕಾಗಿರ್ಕುಮಾದೊಡುದ್ಯಮದಿಂದ
ಲ್ಲಾಡೆ ವಿಷಿಧಮತಿಯೊಳ್  
ಕೂಡದೆ ನಡೆಯಲ್ ಧನಾಗಮಂ ಸಮನಿಸದೇ ||೭೦||

ವಚನ || ಎಂದು ಚಾರುದತ್ತನೊಡವಂದ ಪರದರಂ ಪರೆಯಲೀಯದೆ ನೆರಪಿಕೊಂಡು ಬರೆ ಕಾಡೊಳ್ ಬೇಡವಡೆ ಪಳಂಚಲೊಡವಂದ ಪರದರೆಲ್ಲರುಂ ಸಂಚಳಿಸೆ ಚಾರುದತ್ತಂ ಚಾಪಹಸ್ತನಾಗಿ ಭೋರೆಂದಿಸಲವಂದಿರಂ ಬೆಂದಗುೞ್ದು ತಾನಂದು ಮಗುೞ್ದಂತೆ ಪೋಗೆ ಮಲಯಗಿರಿಯ ಪಿರಿಯಗುಹಾಗಹ್ವರಂಗಳೊಳ್ ರತ್ನಂಗಳಂ ಕೊಂಡುಬರೆ ತತ್ಪ್ರದೇಶದೊಳ್ ಚಮೂರಘರ್ಜನೆಗಗಿದೊಡವಂದರಂದು ಪರಿಯೆಯಿರ್ವರುಂ ಬರೆ ಶಬರಸಂಹತಿಯ ಪೋರ್ಕುಳಿಯೊಳ್ ರತ್ನನಿಚಿತಮಪ್ಪಲಾಬುವಾ ವಿಪಿನದೊಳ್ ಕೆಡೆವುದುಂ ಮತ್ತಮಂತಂತನೇಕಾವಸ್ಥಾಂತರಂಗಳಂ
ಕಳೆದು ಬರೆ

ಸಂಗತ ಸದ್ಗೃಹಮೆಸೆಯೆ ಮ
ನಂಗೊಳಿಸಿದುದಂ ಪ್ರಿಯಂಗುಪತ್ತನಮಂ ತ
ತ್ತುಂಗಭುಜನೆಯ್ದೆ ಪೊಕ್ಕನ
ನಂಗನಿಭಂ ಚಾರುದತ್ತ ನವಿಳ ಚಿತ್ತಂ ||೭೧||

ವಚನ :- ಅಂತು ಪುಗುವುದುಮಲ್ಲಿ ವೀಥ್ಯಂತದೊಳ್ ಚಾರುದತ್ತ ಸಿದ್ಧಾರ್ಥರಂ ಭಾನುದತ್ತಶೆಟ್ಟಿಯ ನಾವಿಕಪ್ರಮುಖನಪ್ಪ
ಸುರೇಂದ್ರದತ್ತಂ ಕಂಡು ವಿಸ್ಮಯಮುತ್ತವರನೊಯ್ದು ಮಜ್ಜನಭೋಜನಾದಿಯಿಂ ತಣಿಸಪಿ ತದನಂತರದೊಳ್ ತದಾಗಮನ
ಪ್ರಪಂಚಮನಱಿದಾತನೆಂದಂ ಎನ್ನ ಧನಮೆನಿತನಿತುಮಂ ಕೆಯ್ಕೊಂಬುದೆನೆ ಸಿದ್ಧಾರ್ಥನಿಂತೆಂದಂ ಎನ್ನಧನಮನೊಲ್ಲದೆ
ಬಂದನೇನುಮೆನ್ನದಿರಿಮೆಂಬುದುಂ ಚಾರುದತ್ತನೆಂದಂ

ಮೂವತ್ತಿರ್ಕೋಟಿಯನಂ
ತೋವದೆ ತವೆ ತಿಂದು ತಂದೆಯರ್ಥಮನೆನಸುಂ
ಭಾವಿಸದದನಿಂ ಮತ್ತಂ
ಭೂವಳಯಂ ಪೞಿಯೆ ಕೊಂಬೆನೇ ಪೇೞಿಮಿದಂ ||೭೬||

ಅದಱಿಂದಾ ತಂದೆಯ ಮಾ
ಡಿದ ಜಿನಗೇಹಂಗಳೆಲ್ಲಿಯೊಳವಲ್ಲಿಗೆ ಸ
ಮ್ಮದದಿಂದಮಟ್ಟು ನೀನೆಂ
ಬುದಮಟ್ಟಿದನಾಗಳಂತೆ ತದ್ವೈಶ್ವೇಶಂ ||೭೭||

ಚಂ || ಅಪಘನಮೆಂತು ನೋೞ್ಪೊಡಮಪಾಯಕರಂ ಕರವಂತದರ್ಕೆ ಪೇೞ್
ವಿಪುಳಯಶೋಧನಂ ನಿಧನಮದಲ್ಲದದಿಂತು ಸಮಂತು ಸಾರ್ವೊಡ
ಗ್ಲಪಿತಮನಸ್ಕನಾಗಿ ಕುಡುವಂ ಚತುರಂ ಧನಮಂ ದಲೆಂದುಮೆಂ
ದುಪಚಿತಪುಣ್ಯನಾ ಜಿನಗೃಹಾಂತರಮಂ ಪುಗುತಂದು ಭಕ್ತಿಯಿಂದಂ ||೮೦||

ವಚನ :- ಅಂತು ಪೊಕ್ಕು ಜಿನೇಂದ್ರನಂ ಸ್ತುತಿಯಿಸಿ ಪೊಱಮಟ್ಟು ಬಂದು

ಸೆರಗಂ ಬಗೆಯದೆ ಪಾಂಡ್ಯನ
ಸುರಿಗೆಯನಂದೀೞ್ದುಕೊಂಡು ಬರಿಯಂ ನೇರ್ದಂ
ತರಿದಿತ್ತು ವಿಕ್ರಮಾಂಕನ
ಕರದೊಳ್ ವೀರಂ ಪರೋಪಕಾರಮನಾಂತಂ ||೮೧||

ವಚನ :- ಅಂತು ಕೊಟ್ಟು ಪೋಗಿ ಜಿನಾಲಯದ ಮುಂದೆ ಬಿೞ್ದು ಮೂರ್ಛಿತನಾಗೆ ವಿಕ್ರಮಾದಿತ್ಯನಾ ಸೇಕದಿಂದಂ
ವೇದನೆ ಪಿಂಗಿದಂತೆ ಬಂದು ಸಂಜೀವನಪ್ರಯೋಗದಿಂ ಚಾರುದತ್ತನನೆತ್ತಿ ಕೆಯ್ಮುಗಿದಿಂತೆಂದಂ

ಆನೀ ಧಾತ್ರಿಯೊಳ್ ಕಃ
ಕೇನಾರ್ಥಿ ಕೋ ದರಿದ್ರ ಎಂದಿತ್ತು ಮಹಾ
ದಾನದ ದಾನಿಯಾಗಿರೆ
ನೀನೆನ್ನಂ ಕೆಯ್ಯನಾನಿಸಿತ್ತಿದು ಚೋದ್ಯಂ ||೮೨||

ವಚನ :- ಎಂದಿಂತನೇಕ ತೆಱದಿಂ ಮಚ್ಚಿ ಬಿಚ್ಚಳಿಸಿ ಬೞಿಯಂ ತನ್ನ ದಿವ್ಯರೂಪಂ ತೋಱಿ ಚಾರುದತ್ತಂಗೆಂದಂ ಆಂ ದೇವನೆಂ ನಿನ್ನ ಪರೋಪಕಾರಭಾವಮಂ ನಿರೀಕ್ಷಿಸಲಿದನೊಡರ್ಚಿದೆಂ ನಿನ್ನಂತು ಮಹಾತ್ಮನಾವನುಮಿಲ್ಲ ಎಂದು
ವಸುಧಾರೆಯಂ ಕಱೆದು ವೀರಪ್ರಭದೇವಂ ಪೋಗಲೊಡಂ

ಸುರನಂತು ಸುರಿದ ರತ್ನೋ
ತ್ಕರಮೆಲ್ಲಮನರ್ಥಿಜನಕಮಾ ಪುರಜನಕಂ
ಕರೆದಿತ್ತು ಚಾರುದತ್ತಂ
ನಿರುಪಮನಂದುೞಿದುವಂ ಜಿನಾಲಯಕಿತ್ತಂ ||೮೩||

ಧನದತ್ತನಂದು ಕಂಡಾ
ತನೆಯೆ ಮಹಾತ್ಮ್ಯಕ್ಕೆ ಚೋದ್ಯಮುತ್ತು ಕರಂ ಸಂ
ಜನಿತಮುದನಿರಿಸಲಿರ್ದಾ
ಧನದತ್ತಂಗಱಿಪಿ ಪೋಗಲುದ್ಯುತನಾದಂ ||೮೪||

ಮ ||ಪರಮಾರ್ಥಂ ಧನದಿಚ್ಛಯುಳ್ಳ ಪುರುಷಂ ನಿರ್ಬಂಧದಿಂ ಸೂತವಿ
ಸ್ತರವಿದ್ಯಾವಿದನಪ್ಪುದಲ್ಲದೆ ವೃಥಾಯಾಸಂಗಳಿಂದಪ್ಪುದೇಂ
ನಿರುತಂ ಪೇೞೆನೆ ಚಾರುದತ್ತನಿದುವಂ ನೋೞ್ಪೆಂ ದಲೆಂದೞ್ತಿಯಿಂ
ಗೊರವಂಗೆಂದನದುಂಟೆ ಪೇೞಿಮೆನಲಾ ಧೂರ್ತಂ ಮಹೋತ್ಸಾಹದಿಂ ||೮೫||

ರಸಮಂ ತರ್ಪಂ ಬಾಯೆಂ
ದುಸಿರ್ದೊಯ್ದಾ ಚಾರುದತ್ತನಂ ತಾಪಸನ
ರ್ವಿಸುವ ಮನದೊಳಗೆ ತೋಱಿದ
ನಸಮಾಸಸ್ತ್ರನಿಭಂಗೆ ಕೂಪಮಂ ಕುಟಿಲತೆಯಿಂ ||೮೬||

ತರುಣನೆ ನೀಂ ಪುಗಲಂಜುವೆ
ಯಿರು ಪೊಕ್ಕಪೆನಾನೆನಲ್ಕೆ ತದ್ಭಕ್ಷುಕನಾ
ನಿರುಪಮನಾ ನುಡಿಗಾಗಳ್
ಸರೋಷನಾಂ ಪುಗುವೆನೆಂಬುದುಂ ಪುಗಿಮೆಂದಂ ||೮೭||

ವಚನ :- ಆಗಳ್ ಚಾರುದತ್ತಂ ಪುಗೆ ತಾಪಸಂ ಸಂತಸಂಬಟ್ಟೆಂದಂ ಈ ನೇಣಂ ಪಿಡಿದಿೞಿದು ಬೞಿಕೀ ಸೋರೆಯ ಗುಂಡಿಗೆಯೊಳ್ ರಸಮಂ ಮುಟ್ಟದೋಸರಿಸಿ ನೀಡುವುದು ಮತ್ತಂ ನಿನಗೆ ನೀಡಿರದೆ ನೀಡಿದ ನೇಣಂ ಕಂಡು
ದೃಢಮಾಗಿ ಪಿಡಿದು ಬಾ ತೆಗೆದಪ್ಪೆನೆನಲಿೞಿದು ರಸಮನಾ ಮಾರ್ಗದಿಂ ತೀವಿ ನೇಣನಲ್ಲಾಡೆ

ಅಗುಣತಮಂ ತಾಪಸನಾ
ಸುಗುಣಮನಂತೆಯ್ದಿ ತೆಗೆಯೆ ತನ್ನತ್ತಲವಂ
ಗಗಣಿತವೆನಿಸಿದ ರಸಮಾ
ವಗಮಾದುದು ಗುಣದೊಳೊಂದಿದೊಂಗರಿದುಂಟೇ ||೮೮||

ವಚನ :- ಅಂತವಂ ತನಗಭೀಷ್ಟಪ್ರದಮಾದ ಗುಣಮನಧಃಕರಿಸನೆಂಬಂತಾ ಕ್ಷುದ್ರಂ ಚಾರುದತ್ತನಂ ಛಿದ್ರಿಸಿ ಪೋಗೆ ಪಿರಿದು ಪೊೞ್ತಱಿಂ ನೇಣ ಬರವಂ ಕಾಣದೆ ಆ ಪುರಾಣಕೂಪದೊಳಾಪದಮನೆಯ್ದಿ ತನ್ಮಹಾಪುರುಷಂ ತನ್ನೊಳಿಂತೆಂದಂ

ಮ || ರಸಮಂ ತಾಪಸನೆನ್ನನಿಕ್ಕಿ ಪಡೆದಂ ಪೇಮೀನದರ್ಕೇಕೆ ಚಿಂ
ತಿಸುವೆಂ ನಿಶ್ಚಯದಿಂದೆ ಸಾವು ದೊರೆಕೊಂಡಿರ್ದತ್ತಿದರ್ಕಿಲ್ಲಿ ಭಾ
ವಿಸಲೆಂತುಂ ಪೆಱತೊಂದುಪಾಯಮಣಮಿಲ್ಲೇಂ ಮಾತಿದರ್ಕಿನ್ನುಸ
ನ್ಯಸನಂಬೆತ್ತು ಸಮಾಧಿಯಿಂದಸುವನೊಕ್ಕಾಂ ಪೊರ್ದುವೆ ನಾಕಮಂ ||೮೯||

ವಚನ :- ಅಂತು ನಿಶ್ಷಚಯಿಸಿ ತತ್ಕೂಪಕುಕ್ಷಿನಿಕ್ಷಿಪ್ತನೊರ್ವನೆಂದಂ ಅಣ್ಣಾ ತೊಱೆಯವೇಡ ಪೊಱಮಡುವುಪಾಯಮಿರ್ದುದು ಎಂಬುದುಂ

ಎನೆ ಚಾರುದತ್ತನೆಂದಂ
ನಿನಗಿಲ್ಲದುಪಾಯಮೆನಗದೆಂತಾದುದೊ ಪೇ
ೞೆನಲಾತನೆಂದನಣ್ಣನೆ
ನಿನಗಾದೀ ಗೋರಿ ಗೊರವನಿಂದೆನಗಾಗಲ್||೯೦||

ವಚನ :- ಬಂದೀಯಂಧಕೂಪದೊಳ್ ಬಿೞ್ದು ತೃಷ್ಣಾಪರನೆಂ ರಸಮಂ ನೀರೆಗೆತ್ತು ಮೊಗೆಯಲೆನ್ನ ಕರಯುಗಂಗಳ್ ಕೊೞಿತೞಿದು ಬೀೞಲಿರ್ದುವು ನಿನಗುಪಾಯಮಂ ಪೇೞ್ದೆನೀ ರಸಮನಸದೃಶಮಪ್ಪುದು ಬಂದು ಕುಡಿದು ಪೋಪುದು. ಅದಱ ವಾಲಮಂ ಪಿಡಿದುಪೋಗು ಎಂದುಕಂಠಗತಪ್ರಾಣನಾಗೆ ಚಾರುದತ್ತನಾತಂಗೆ ಸಮಾಧಿವಡೆವುದುಂ ಉಡು ಬಂದಾ
ರಸಮಂ ಕುಡಿದು ಮಗುೞೆಬಾಲಮಂ ಪಿಡಿದು ನೇಲುತ್ತುಂ ಪುಣ್ಯವಶದಿಂ ಪೊಱಮಟ್ಟು

ಮ || ಇದು ಚಿತ್ರಂ ರಸಕೂಪದೊಳ್ ಪದೆಪಿನಿಂದಾಂ ಬಂದು ಪೊಕ್ಕಿರ್ಪುದೆ
ತ್ತದಯಂ ತಾಪಸನಿಕ್ಕಿಪೋಗೆ ಪಿರಿದೊಂದಾಪತ್ತುವೆತ್ತಿರ್ಪುದೆ
ತ್ತಱದೊಳ್ ಸದ್ಗುಣನಿರ್ದು ಬರ್ಪ ತೆಱನಂ ಪೇೞ್ದೀತನುಂ ಸತ್ತುದೆ
ತ್ತಿದಸಂಭಾವ್ಯಮೆ ಭಾವಿಸಲ್ಕಘಟಮಂತಾ ಕರ್ಮನಿರ್ಮಾಪಣಂ || ೯೧||

ವಚನ :- ಎಂದಲ್ಲಿಂ ತಳರ್ದು ಒಂದಗುರ್ವಿನ ಪೆರ್ವಾವು ಪುಟ್ಟಿರ್ಪುದುಮದಱ ಮೇಗಱಿಯದೆ ಕಿಱಿದಂತರಂ ನಡೆವನ್ನೆಗಮೊಂದು ವನಸೈರಿಭಂ ಕಂಡು ತೊಟ್ಟನೆ ಮುಟ್ಟಿವರೆ ಚಾರುದತ್ತನೋಡುತ್ತಿರ್ಪುದುಮದಱ ಪದಘಾತದಿಂ
ಪುಟ್ಟಿದ ರವಕ್ಕಾ ಭೈರವೋರಗನೆೞ್ದದಂ ತೊಟ್ಟನೆ ನುಂಗುವುದುಮನಂತರಮಾ ವನಾಂತರದಿಂ ಬರುತೊಂದು
ತರಂಗಿಣಿಯಂ ಕಂಡು

ಅದಱೊದವಿದ ತೀರದೊಳು
ನ್ಮದ ಷಟ್ಚರಣಪ್ರತಾನಗಾನದಿನಂದೊ
ಪ್ಪಿದ ಪೂತ ಚೂತಭೂಜದೊ
ಳುದಿತಯಶಂ ಬಂದು ಕುಳ್ಳಿರಲ್ ಮುದದಿಂದಂ ||೯೨||

ವಚನ :- ಅಂತಿರ್ಪುದುಂ ರುದ್ರದತ್ತಂ ಹರಿಸಖಾದಿ ಸಹಾಯ ಸಮೇತಂ ಬರೆ ಚಾರುದತ್ತಂ  ಕಂಡಿದಿರೆೞ್ದು ವಿನತನಾಗಿ ತನಗೆಱಗಿದ ಸಹಾಯಸಮಿತಿಯಂ ಪರಸಿ ತದನಂತರಂ ಕ್ಷೇಮಕುಶಲೋಕ್ತಿಯಿನಿರ್ದು ಚಾರುದತ್ತಂಗೆಂದಂ ಅಯ್ಯ ಮದೀಯ ಜನನಿಯುಂ ಸಹಧರ್ಮಿಣಿಯುಂ ಸುಖದಿನಿರ್ದರೆ ಎನಲಾತನಿಂತೆಂದಂ

ಚಾದಗೆ ಘನಕಾಲಮನೆಂ
ತಾದರದಿಂ ಪಾರ್ದು ತೃಷ್ಣೆಯಿಂ ತಾಳ್ದಿರ್ಪಂ
ತಾದಮೆ ನಿಮ್ಮಂ ಕಾಣ್ಬ ಸು
ಖೋದಯಮಂ ಬಯಸಿ ಜೀವಿಸುತ್ತವರಿರ್ದರ್ ||೯೩||

ಉ || ದಂತಿನಿ ದಂತಿಯಂ ವನದೊಳಬ್ಜಿನಿಯೊಳ್ ಕಳಹಂಸಿ ಹಂಸನಂ
ಕಂತುವನಾ ರತಿಪ್ರಮದೆ ನಂದನದೊಳ್ ನೆಱೆ ಕಾಣದಂತತಿ
ಭ್ರಾಂತಿಯನಪ್ಪುಕೆಯ್ವ ತೆಱದಿಂ ಭವದೀಯವಿಯೋಗದಿಂದಮೇಂ
ಮಂತಣಮಾ ವಸಂತತಿಳಕಾಂಗನೆ ಚಿಂತೆಯನಾಂತು ಸಂತತಂ ||೯೪||

ಚಂ || ಸರಸಿರುಹಂ ದ್ವಿರೇಫತತಿಯಂ ವಿಪಿನಂ ಮದದಂತಿಯೂಥಮಂ
ಸ್ಮರಿಯಿಸವೆಂತಗಲ್ದೆರ್ದೆಯೊಳಂತೆ ವಿಟೀಜನಮುಂ ವಿಟರ್ಕಳಂ
ನಿರುಪಮ ಚಿಂತಿಸರ್ ನುಡಿಯವೇಡಿದನೆಂಬುದುಮಾತನೆಂದನಾ
ವರವಧುವನ್ನಳಲ್ಲ ಪರಿವೀಕ್ಷಿಸೆ ತಚ್ಚರಿತಂ ಜನಸ್ತುತಂ ||೯೫||

ತೊಱೆದು ಸಲೆ ಸಾರವಸ್ತುವ
ನೆಱೆ ತನುವಂ ತವಿಸಿ ಕೇಶಮಂ ಜಡೆಯೆಱಿದಿಂ
ಪೆಱತೇನೊ ಚಾರುದತ್ತಂ
ಪೊಱಗಾಗೀ ಭವಕೆ ಸೋದರರ್ ವಿಟರೆಲ್ಲಂ ||೯೬||

ವಚನ :- ಎಂದು ತತ್ಕಾಂತೆಯಸ್ಪಂದಿತಸ್ವಾಂತೆಯಾಗಿರ್ದಳೆಂದು ರುದ್ರದತ್ತಪ್ರಮುಖಸಹಾಯ ಸಮೂಹಮುಮಱಿಪೆ
ತದನಂತರಂ ಭವದೀಯ ಜಳಯಾತ್ರಾಪ್ರಥಿತ ವೃತ್ತಾಂತಮನನಂತರಂ ನಿವೇದಿಸೆಂಬುದುಂ ಚಾರುದತ್ತನೃಪಂ ಸವಿಸ್ತರಮಱಿಪೆ ವಿಸ್ಮಯಮುತ್ತು ಬೞಿಕ್ಕಂತಲ್ಲಿಂ ತಳರ್ದು ಬಂದು ಸುಂದರಶ್ರೀಪುರಮನೆಯ್ದಿ ಪೊಕ್ಕಿರಲವರನಲ್ಲಿಯ
ಪರದಂ ಪ್ರಿಯಮಿತ್ರನೆಂಬನಱಿದಿರಿಸಲಿರೆ ಚಾರುದತ್ತನನೇಕ ವಿದ್ಯಾಚಯೋಪಾಧ್ಯಾಯನಾಗೆ ಮನ್ನಣೆಯಿನಾದೇನಾನುಂ
ದೀನಾರದಿನಂದು ಸಂದ ಗಾಂಧಾರಿವಿಷಯದೊಳ್ ಕಾಚವಳನಿಚಯಮಂ ಸ್ವೀಕರಿಸಿ ವೋಗಿ ವೇತ್ರಗಿರಿಯ ವೇತ್ರಲತಾ
ಪ್ರತಾನದಿನವ್ಯಚ್ಛಿನ್ನಮಾದಚ್ಜಿನ್ನಶಿಳಾಭಿಧಾನ ಗುಹಾಭ್ಯಂತರದಿನುರ್ಚಿವೋಗಿ ರಮ್ಯಹರ್ಮ್ಯ ಗಿರಿವರನಿತಂಬದೊಳ್ ಇಂಬುವೆತ್ತ ಶಬರಶಿಬಿರದೊಳ್ ಕಾಚಮಯ ಭಂಡವಿಕ್ರಯಮಂ ಮಾಡಿ ಪೋಗಿ ರೂಢಿವಡೆದಿರ್ದ ರಜತಗಿರಿವನೋದರವಾಸಿ ಪಾರಸಿಕವಳ್ಳಿಯಂ ಸಾರ್ದು ಕುಳ್ಳಿರ್ಪುದುಮೊರ್ವನನೇಕ ಭಾಷಾವಿಶೇಷಜ್ಞನಪ್ಪ ತತ್ಪಲ್ಲೀನಿವಾಸಕನಂ ಕಂಡು ಚಾರುದತ್ತಂ ಸಂಭಾಷಿಸುತಿರ್ದು ಬೞಿಕ್ಕಿಂತೆಂದಂ

ಪೇೞೀ ರತ್ನ ದ್ವೀಪ
ಕ್ಕಾಳಾಪದೊಳೇನೊ ಬಟ್ಟೆಯಂ ನೆಟ್ಟನೆನಲ್
ಕೇಳುಂಟಜಪಥಮತ್ಯಾ
ಭೀಳತರಂ ಬಗೆವೊಡೆಂದನಾ ಪಾರಸಿಕಂ ||೯೭||

ಚಂ || ನೆಗೆದಸಿದಾಗಿ ನೀಳ್ದ ಸಿಲೆಯಿರ್ಕೆಲನುಂ ಸಲೆ ಸಂದಗಾಧವೇಂ
ಬಗೆವೊಡೆ ಕಲ್ಲ ಕೇರ್ಗಣೆ ತದಗ್ರದೊಳೊಂದಿದ ದುರ್ಗಮಾರ್ಗದೊಂ
ದಗಲಮುಮತ್ತ ನಾಲ್ವೆರಲದಂ ನಡೆವನ್ನನುದಾತ್ತನೆನ್ನನೀ
ಜಗದೊಳೆ ಪೇೞಿವಣ್ಣತುಳಧೀರವರೇಣ್ಯನತರ್ಕ್ಯಸಾಹಸನ ||೯೮||

ವಚನ :- ಎಂದಜಪಥಸ್ವರೂಪಕಥನಮಂ ಮಾೞ್ಪುದುಂ ಚಾರುದತ್ತನಾ ಮಾರ್ಗಗಮನೋಪಾಯಮೆಲ್ಲಮನೀ
ಪುರುಷನಿಂ ನೆಱೆಯಱಿದಿರಿಮೆಂದು ತಾನತ್ತೊಂದೆಡೆಗೆ ಪೋಗೆ ರುದ್ರದತ್ತನಾತನಿಂ ತಿಳಿದು ಚಾರುದತ್ತಂಗಱಿಪು-
ವುದುಮಾತನಿಂತೆಂದಂ

ಮ || ಇದಱೊಳ್ ಪೋಗಿ ಮದೀಯಪುಣ್ಯದೊದವಂ ನೋೞ್ಪಂ ದಲೆಂದಾ ಗುಣಾ
ಸ್ಪದನೇೞಂ ಪದಪಿಂದೆ ಪೋಂತನತುಳಂ ತಂದಂತವಂ ಕೂಡೆ ಸ
ಮ್ಮದದಿಂ ಶಿಕ್ಷಿಸೆ ಶಿಕ್ಷೆಯಂ ತಳೆಯೆ ಬಂದಾ ಮಾರ್ಗದೊಳ್ ನಿಂದು ಸಾ
ದರದಿಂ ತನ್ನವರ್ಗೆಂದನೀಕುಪಥಮಂ ಮುನ್ನೋಡಿ ಬರ್ಪನ್ನೆಗಂ ||೯೯||

ವಚನ :- ಇಲ್ಲಿರಿಮೆಂದು ನಿಜಸಹಾಯರನಿರಿಸಿ ತದ್ಧೀರನಾ ವಿಷಮಮಾರ್ಗಂಬಿಡಿದು ಪೋಗೆವೋಗೆ

ದುರ್ಗಮಮಪ್ಪಾ ಪಥದೊಳ್
ನಿರ್ಗ್ಗಹನನದಿನಂದು ಪೋಗಿ ಕಂಡು ನಿರುತಂ
ಭೋರ್ಗರೆವ ವಿಂಧ್ಯದಿಂ ಪುದಿ
ದಾರ್ಗಮಗುರ್ವಿಸುತುಮಿರ್ದ ಸಮಭೂತಳಮಂ ||೧೦೦||

ವಿಭು ಚಾರುದತ್ತನನುಪಮ
ನಭಯಂ ಮನುನಿಭಚರಿತ್ರನಸುಹೃಚ್ಯೈತ್ರಂ
ಶುಭತುಂಗನಿಂತು ಸಂಸ್ತುತ
ವಿಭವೋದಯನಿರ್ದನೆಂಬುದುಂ ವಸುದೇವಂ ||೧೨೦||

ಎಸೆವ ಮಣಿಕಟಕಮಂ ಮಿ
ಕ್ಕಸದೃಶಮಂ ಕೊಟ್ಟನಂದು ಗಂಧರ್ವಾರ್ಯಂ
ಗಸುಹೃದ್ದಮನೆನೆ ಪೇೞ್ ಭಾ
ವಿಸೆ ಪಿರಿದುಂ ಕೂರ್ತೊಡಿರ್ಕುಮೇ ದೌಸ್ಥಿತ್ಯಂ ||

ಸ್ಮರಣೆ.
ಹಂ. ಪ. ನಾಗರಾಜಯ್ಯ
ಆರ್. ವಿ. ಕುಲಕರ್ಣಿ
ಪ್ರಕಾಶಕರು :- ಕನ್ನಡ ಸಾಹಿತ್ಯ ಪರಿಷತ್ತು
ಪಂಪಮಹಾಕವಿ ರಸ್ತೆ
ಚಾಮರಾಜಪೇಟೆ.
ಬೆಂಗಳೂರು - ೫೬೦೦೧೮ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ