ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಭಾನುವಾರ, ಅಕ್ಟೋಬರ್ 14, 2018

ದೇವಕವಿ ವಿರಚಿತ ಕುಸುಮಾವಳೀ ಕಾವ್ಯಂ

ದೇವಕವಿ ವಿರಚಿತ ಕುಸುಮಾವಳೀ ಕಾವ್ಯಂ

ಈ ಕಾವ್ಯವನ್ನು ರಚಿಸಿದವನು ದೇವಕವಿ.ಕಾಲ ಸಮಾರು ೧೨೦೦. ಕುಸುಮಾವಳಿಯ ಕಥೆ ಒಂದು ಕಲ್ಪಿತ ಕಥೆ. ಇವನು ಯಾವ ದೇಶದವನು, ಯಾವ ಮತ ಸಂಪ್ರದಾಯಕ್ಕೆ ಸೇರಿದವನು ಎಂದು ಗ್ರಂಥದ ಆಧಾರದಿಂದ ಹೇಳುವುದು ಸಾಧ್ಯವಾಗಲೃರದು. ಪುರಾಣ ವಿಷಯಗಳನ್ನು ಆಯ್ದು ಲೌಕಿಕ ಕಾವ್ಯಗಳನ್ನೂ ಧಾರ್ಮಿಕ ವಿಷಯಗಳನ್ನು ಎತ್ತಿಕೊಂಡು ಧಾರ್ಮಿಕ ಕಾವ್ಯಗಳನ್ನೂ ಬರೆಯುತ್ತಿದ್ದ ಕಾಲದಲ್ಲಿ ಕಾಲ್ಪನಿಕ ವಸ್ತುವನ್ನು ಆರಿಸಿಕೊಂಡು ಕಾವ್ಯ ರಚಿಸಿದ ಕೀರ್ತಿ ದೇವಕವಿಗೆ ಸಲ್ಲುತ್ತದೆ. ಈ ಕಾವ್ಯದಲ್ಲಿ ಹದಿನೈದು ಆಶ್ವಾಸಗಳೂ ಒಟ್ಟು ೨೦೬೮ ಪದ್ಯಗಳೂ ಇವೆ. ಗ್ರಂಥದ ಕೊನೆಯಭಾಗವನ್ನು ನೋಡಿದರೆ ಕಥೆಯು ಪೂರಯಿಸಿದಂತೆ ಕಾಣುವುದಿಲ್ಲ.  ಇನ್ನೂ ಎರಡು ಮೂರು ಆಶ್ವಾಸಗಳು ಇದ್ದಿರಬಹುದೆಂದು ತೋರುವುದು. ಈ ಗ್ರಂಥವು ಚಂಪೂರೂಪದಲ್ಲಿದೆ. ದೇವಕವಿಯು ಮಹಾಕವಿಗಳಾದ ಪಂಪಾದಿಗಳ ಪಙ್ತಿಯಲ್ಲಿ ಪರಿಗಣನೆ ಮಾಡುವುದಕ್ಕೆ ತಕ್ಕವನಾಗಿರುವನು.

ಗ್ರಂಥದ ಕಥಾಸಾರಾಂಶ: ಮದನಾವತೀ ದೊರೆ ಮಣಿಕುಂಡಲ ರಾಜನಿಗೆ ಚಿತ್ರಕೂಟಪರ್ವತದ ಒಂದು ವನದಲ್ಲಿ ಕಪಿಲಮುನಿಯ ಪಾರ್ಶ್ವದಲ್ಲಿ ರೂಪವತಿಯಾದ ಸ್ತ್ರೀಯನ್ನು ಕಂಡಂತೆ ಸ್ವಪ್ನವಾಗಲು, ಅದನ್ನು ತನ್ನ ಮಂತ್ರಿಗೆ ತಿಳಿಸಿದನು. ಅದಕ್ಕೆ ಮಂತ್ರಿಯು, ಚಿತ್ರಕೂಟದ ಬಳಿ ಕಪಿಲಮುನಿ ಇರುವುದು ನಿಶ್ಚಿತವೆಂತಲೂ, ಅಲ್ಲಿಗೆ ಹೋದರೆ ಆತನನ್ನು  ನೋಡಬಹುದೆಂತಲೂ ಹೇಳಿದನು. ಆಗ ಇಬ್ಬರೂ ಅಲ್ಲಿಗೆ ಹೋಗಿ ಋಷಿಗೆ ನಮಸ್ಕರಿಸಿ ಅಲ್ಲಿರುವ ಶಿಲಾಪ್ರತಿಮೆಯ ವೃತ್ತಾಂತವನ್ನು ಕೇಳಲು, ಅವನು ಇಂತೆಂದನು. ವಿಮಲಾಪುರಿಯ ವಿಶ್ವಂಭರರಾಜನಿಗೆ ಕಂದರ್ಪನೆಂಬ ಮಗ. ಅವನ ವಿವಾಹಕ್ಕೆ ತೋರಿಸಿದ ಯಾವ ರಾಜಪುತ್ರಿಯನ್ನೂ ವರಿಸದೆ, ತಮ್ಮ ಉದ್ಯಾನದ ಮಾವಿನಮರಕ್ಕೆ ಕಟ್ಟಿದ್ದ ಕನ್ಯೆಯ ಭಾವಚಿತ್ರ ನೋಡಿ ಮೋಹಿಸಿ, ಆಕೆಯನ್ನು ಹುಡುಕಲು ಮಂತ್ರಿಕುಮಾರ ಮೇಧಾವಿಳನೊಡನೆ ಹೊರಡುತ್ತಾನೆ. ಚಂದ್ರಕಾವತೀ ದೇಶದ ಚಕ್ರವಾಕಪುರವನ್ನು ಸೇರುತ್ತಾರೆ ಆ ದೇಶದ ರಾಜ ಚಂದ್ರಧ್ವಜನ ಮಗಳೇ ಕುಸುಮಾವಳೀ.ಇವಳೂ ಕಂದರ್ಪನ ಚಿತ್ರವನ್ನು ನೋಡಿ ಮೋಹಿಸುತ್ತಾಳೆ. ಕುಸುಮಾವಳಿಯ ಸಖಿ ಕಳಭಾಷಿಣಿ ಉದ್ಯಾನದಲ್ಲಿದ್ದ ರಾಜಕುಮಾರನ್ನು ನೋಡಿ ಕುಸುಮಾವಳಿಯ ಬಳಿಗೆ ಕರೆದೊಯ್ಯುತ್ತಾಳೆ, ರಾಜಕುಮಾರಿಯೊಡನೆ ತನ್ನೂರಿಗೆ ಬರುವಾಗ ದಾರಿಯಲ್ಲಿ ವಿಶ್ರಮಿಸುತ್ತಿರುವಾಗ ಸಿಂಹವೊಂದು ಆರ್ಭಟಿಸುತ್ತ ಬಂದಿತು. ಕುದುರೆ ಹೆದರಿ ಓಡಿಹೋಗುತ್ತದೆ. ಕುಸುಮಾವಳಿ ಕುದುರೆಯ ಬೆನ್ನಟ್ಟುತ್ತಾಳೆ. ಬೇಡರ ಗುಂಪಿನಲ್ಲಿ ಸಿಕ್ಕಿ ಬೀಳುತ್ತಾಳೆ, ಅಲ್ಲಿಂದ ತಪ್ಪಿಸಿಕೊಂಡು ಕಪಿಲಮುನಿ ಆಶ್ರಯಕ್ಕೆ ಬರುತ್ತಾಳೆ. ಹಿಂಬಾಲಿಸಿದ ಬೇಡರಿಂದ ಅವಳನ್ನು ಕಾಪಾಡಲು ಶಿಲಾಪ್ರತಿಮೆಯನ್ನಾಗಿ ಮಾಡುತ್ತಾರೆ. ಕಂದರ್ಪನು ಸಿಂಹವನ್ನು ಕೊಂದು  ಕಪಿಲ ಋಷಿಯ ಬಳಿಗೆ ಬರುತ್ತಾನೆ. ಋಷಿಯ ಅನುಗ್ರಹದಿಂದ ಸ್ತ್ರೀರೂಪ ಪಡೆದು ಇಬ್ಬರೂ ವಿವಾಹವಾಗುತ್ತಾರೆ.

ಸ್ರ || ಶ್ರೀಮನ್ಮಾಂಗಲ್ಯ ಪಾತ್ರಾವಯವ ನಿವಹದೊಳ್ ತಳ್ತ ಹರ್ಷೋದ ಬಿಂದು
ಸ್ತೋಮಂ ತಾನೆಂಬಿನಂ ತೀವಿದ ವಿಬುದನದೀ ವಾಃಕಣಾನೀಕದೋಳ್ ಸಂ
ದೌಮಾಕಾರಂ ಕರಂ ಮಾರ್ಪೊಳೆಯೆ ಸಕಲ ಶಕ್ತ್ಯಂಗನಾದಂತಿರೊಪ್ಪಿ
ರ್ಪಾಮೈಮಂ ವಿಶ್ವನಾಥಂ ಕುಡುಗಖಿಳಜನಾನಂದಮಂ ನಲ್ಮೆಯಿಂದಂ||೧||

ಮ || ಎಸೆವೀರೈದು ಗುಣಾಳಿ ತಾಳವಿವರಂ ರೀತಿತ್ರಯಂ ಗೇಯದೊ
ಳ್ಪು ಸುಶಬ್ಧಾವಳಿ ಹೃದ್ಯವಾದ್ಯ ನಿವಹಂ ಶಬ್ದಾರ್ಥಜಾಲಂಕೃತಿ
ಪ್ರಸರಂ ಸತ್ಕರಣೋತ್ಕರಂ ಮೃದುಪದನ್ಯಾಸಂ ಪದನ್ಯಾಸಮಾ
ಗೆ ಸದಾ ನರ್ತಿಸುತ್ತಿರ್ಕೆ ವಾಗ್ವಧು ಮದಾಸ್ಯಾಂಭೋಜ ರಂಗಾಗ್ರದೊಳ್||೩||

ಚಂ || ವಿದಿತ ಕಥಾವಿಚಿತ್ರಮೆಸಗೀ ಕುಸುಮಾವಳಿಯೆಂಬ ನವ್ಯ ಕಾ
ವ್ಯದೆ ಕವಿರನ್ನನೋಜೆ ವರಬಾಣನ ಸೂಕ್ತಿಕಳಾ ಕಳಾಪವ
ಗ್ಗದ ಕವಿಮಾಘ ಹರ್ಷರ ವಚಶ್ಚಿಕುರೋನ್ನತಿ ರುದ್ದಭಟ್ಟನೊಳ್
ಪುದಿದ ಪದ ಪ್ರಗಲ್ಭಗುಣಮಗ್ಗಳದೇವಭಾವಗೌರವಂ||೮||

ಪೆಱತೇನೀಕುಸುಮಾವಳಿ
ಗೆಱೆಯನೆನಿಪ್ಪಾತನನ್ವಯ ಖ್ಯಾತಿಯನೆ
ನ್ನಱಿವಂದದೆ ವರ್ಣಿಸುವೆಂ
ಕಿಱುಗೂಸೆಣಿಪಂತೆ ತೊಳಪ ತಾರಾಗಣಂ||೯||

ಉ || ಚಾರು ಚರಿತ್ರವೇಲಮಮಳೋನ್ನತ ಕೀರ್ತಿಸುಧಾಂಬು ಸತ್ಯ ಗಂ
ಭೀರ ವಿವರ್ಧನಂ ವರಗುಣೋತ್ಕರ ರತ್ನ ಸಮೇತಮಪ್ಪ ಕಾ
ಶ್ಮೀರ ಕುಲಾಮೃತಾಂಬುಧಿಯೊಳುದ್ಭವಿಸಿರ್ದ್ದನುದಾರ ಸಾರಮಂ
ದಾರ ಮಹೀಜಮೆಂದೆನೆ ವಿಭಾಸುರ ಕೇಶವ ದಂಡನಾಯಕ ||೧೦||

ಮ || ಧರೆಯೊಳ್ ಕೇಶವ ದಂಡನಾಥ ವಸುದೇವಂಗಗ್ಗದಾ ಕೃಷ್ಣನಂ
ತಿರೆ ಲಕ್ಷ್ಮೀಧರ ದೇವನುದ್ಭವಿಸಿದಂ ಕಾಶ್ಮೀರ ವಂಶಪ್ರಭಾ
ಸುರ ಲಕ್ಷ್ಮೀಧರನುದ್ಘ ಮಂತ್ರ ವಿಲಸಲ್ಲಕ್ಷ್ಮೀಧರಂ ಲೋಕ ಬಂ
ಧುರ ಲಕ್ಷ್ಮೀಧರನುನ್ಮದಾಹಿತ ಜಯಾಜ್ಞಾಚಕ್ರ ಲಕ್ಷ್ಮೀಧರಂ||೧೧||

ಮ || ಸ್ರ || ವಿದಿತಾಜ್ಞಾ ಶಕ್ತಿ ಮೆಯ್ವೆರ್ಚಿದ ವರವಿಭು ಲಕ್ಷ್ಮೀಧರಂಗಾತ್ಮಜರ್ ಪು
              ಟ್ಟಿದರೀಶಂಗಾ ತ್ರಿಣೇತ್ರಂಗಳೆ ಜನಿಯಿಸಿದಂತಪ್ರತರ್ಕ್ಯ ಪ್ರಭಾವಾ
              ಸ್ಪದ ತೇಜಂ ಚಿಕ್ಕರಾಜಂ ವಿಬುಧಜನ ನುತಂ ವಿಠ್ಠಲಂ ಸೂರಿ ನೀರೇ
               ಜ ದಿನೇಶಂ ಲಾಹಿದೇವಂ ಧರೆಯೊಳೆಸೆದರೀ ದೋರ್ಬಳೋದ್ದಾಮ ಭೀಮರ್ ||೧೨||

ಚಂ || ಅತುಲ ಭುಜಾಬಲಾನಿಲಸುತಂ ಕುಶಲಾಗ್ರಣಿ ಚಿಕ್ಕರಾಜನು
ದ್ಧತ ರಿಪುಕಂಜ ಪುಂಜಕೆ ಸುಧಾಂಶು ಸುಧಾಂಶು ಸಕೀರ್ತಿ ಕೀರ್ತಿಯಾ
ಯತ ಮಹಿಮತ್ವ ವಾಗ್ವೆಭವ ಗೋಪತಿ ಗೋಪತಿ ಗೋಪತಿ ಸ್ಫುರ
ದ್ವಿತರಣ ಭೋಗ ವಾಹಳಿಯೊಳರ್ಕಜನರ್ಕಜನರ್ಕ ಸಂಭವಂ || ೧೫||

ಉ || ಆ ಮದನಾವತೀ ವಿಷಯ ಲಕ್ಷ್ಮಿಯ ವಕ್ತ್ರ ಸರೋಜದಂತೆ ಶೋ
ಭಾಮಯಮಿರ್ಪುದಲ್ಲಿ ಮಣಿನೂಪುರಮೆಂಬ ಪುರಂ ಪುರಾಧಿಪಂ
ಕಾಮಸಮ ಸ್ವರೂಪ ವಿಭವಂ ಸಕಳೇಂದು ಮರೀಚಿ ಸನ್ನಿಭೋ
ದ್ದಾಮ ಯಶಃಪ್ರಕಾಶನೆಸೆವಂ ಮಣಿಕುಂಡಲ ಭೂಮಿಪಾಲಕಂ ||೨೭||

ರತಿಯ ಗಿರಿಸುತೆಯ ರಮೆಯಾ
ಕೃತಿಯಂ ಸೊಬಗಂ ಸ್ವಭಾವಮಂ ಸಲೆ ಪೞಿಕೆ
ಯ್ವತಿ ಮಹಿಮೆವಡೆದು ಮದಿರಾ
ವತಿಯೆಸೆದಳ್ ಪಟ್ಟಮಹಿಷಿ ಮಣಿಕುಂಡಲನಾ ||೨೮||

ಅರಸರ ಚಿತ್ತಮನಲೆದಾ
ದರದಿಂದೆ ಸುಕಂಠೆಯೆಂಬ ನಾಯಿಕೆ ಕಿಲದೊಳ್
ಪರಿಚಾರಿಕೆ ಪಿಡಿದಿರ್ದಾ
ಸ್ವರವರ್ಧನವೆಸರ ವೀಣೆಯಂ ತಾಂ ಕೊಂಡಳ್ ||೩೫||

ಮ || ಕಳೆಯಂ ಪತ್ತಿಸಿ ಕೋಮಲಾಂಗುಲಿಗಳಿಂದಾ ತಂತಿಯಂ ನೀವಿ ನಿ
ರ್ಮಳಮಂ ಮಾಡಿ ನಿಜೋದ್ಘ ವಾಮ ಕುಚದೊಳ್ ಸೈತಿಟ್ಟು ಸುಸ್ಥಾನಕಂ
ಗಳನೋರಂತಿರೆ ಪೊಯ್ದು ಪೊಯ್ದು ಪದದೊಳ್ ರಾಗಂ ಮನೋರಾಗಮಾ
ಗಳೆ ಪೊಣ್ಮಲ್ಕೆ ಸುಕಂಠೆ ಬಾಜಿಸಿದಳಾ ಜಾಣಿಂ ಲಸದ್ವೀಣೆಯಂ ||೩೬||

ಚಂ || ಕಳ ಪಿಕ ಪಂಚಮಾಂಚಿತ ಮೃದುಧ್ವನಿಯಂ ಗೆಲೆವಂದು ಸುಸ್ವರಂ
ಲಳಿ ಲುಳಿ ಧಾತು ರೀತಿ ಗತಿಯೋಜೆ ಬಜಾವಣೆಠಾಯ ಸುಟ್ಟಿ ಕೋ
ಮಳ ವಳಿ ಲಾಗು ನೋಗು ಪಸರಂ ಪರಿ ಪಾಂಗು ಬೆಡಂಗು ಭಂಗಿ ಸಂ
ಗಳಿಸೆ ಸುಕಂಠೆ ಪಾಡಿ ಪುದಿದಳ್ ಮುದಮಂ ನರನಾಥ ಚಿತ್ತದೊಳ್ ||೩೭||

ಚಂ || ಕಮಲಿನಿ ಕುಟ್ಮಳಾಕೃತಿಯನೆಯ್ದೆ ರಥಾಂಗ ಚಯಂ ವಿಯೋಗ ಭೇ
ದಮನಣಮೆಯ್ದೆ ಪಶ್ಚಿಮ ದಿಗಂಗನೆ ರಾಗಮನೆಯ್ದೆ ಕೈರವಂ
ಪ್ರಮದಮನೆಯ್ದೆ ವಿಪ್ರತತಿ ಕೊಡೆ ಕುಲಾಯಮನೆಯ್ದೆ ಪುಂಶ್ಚಲೀ
ಸಮಿತಿ ಪೊಡರ್ಪನೆಯ್ದೆ ರವಿಯೆಯ್ದಿದನಾ ಕ್ಷಣಮಸ್ತಶೈಲಮಂ || ೩೯||

ತಮಗಧಿಪನಪ್ಪ ತಪನೀ
ಯ ಮಹೀಧ್ರನ ತೇಜಮಂ ಶಿರೋಮಂಡಲದೊಳ್
ಸಮಸಂದು ತಳೆದುವೆನೆ ಗಿರಿ
ಸಮುದಯ ಶಿಖರಂಗಳಲ್ಲಿ ಪೊಂಬಿಸಿಲೆಸೆಗುಂ ||೪೦||

ಮ ॥ ಸ್ರ॥ ಘನತೇಜೋಗರ್ಭದುರ್ಬ್ಬಿಂದಱಿಯದೆ ತನ್ನ ಪಾದಂಗಳಿಂ ಸ
ನ್ಮುನಿವೃಂದಾಗಣ್ಯ ಪುಣ್ಯಾಮಳತನು ತತಿಯಂ ಮುಟ್ಟಿಯುಂ ಪುಟ್ಟಿದಾದೋ
ಷ ನಿವಾರಕ್ಕಾಗಳಂತಂಬರಮನುೞಿದು ಶೈಲಾಗ್ರದೊಳ್ ತತ್ತಪೋ ರೂ
ಪನೆ ತಾಂ ಕೈಕೊಂಡವೊಲ್ ಸಾರ್ದಪರ ಗಿರಿಶಿರೋಭೂಷನಾದಂ ದಿನೇಶಂ॥೪೧॥

ಚಂ ॥ ಮಿಗೆ ನಗುವಂತುಟಾಯ್ತುಱದೆ ಕೈರವಲಕ್ಷ್ಮಿ ವಿರೋಧಿರಾಜ ಬಾ
ಧೆಗೆ ಗುಱಿಯಪ್ಪುದಾಯ್ತೆಮಗೆ ನೀಂ ದಯೆಯಿಂದುದಯಾದ್ರಿಗೆಯ್ದುವಂ
ದೊಗೆದನುರಾಗದಿಂದೆಲ ದಿನೇಶ್ವರ ರಕ್ಷಿಪುದೆಮ್ಮನೆಂದು ಕೈ
ಮುಗಿವವೊಲಾ ಕ್ಷಣಂ ಮುಗಿದುವಬ್ಜಿನಿಗಳ್ ಸರಸೀಸಮಾಜದೊಳ್ ॥೪೨॥

ಚಂ ॥ ಪಿರಿದನುರಾಗದಿಂ ನೆರೆದ ನಾನಿರೆ ಪಶ್ಚಿಮ ದಿಗ್ವಧೂಟಿಯಂ
ಖರಕರನೆಂದೆನುತ್ತುಮೆನಸುಂ ಕಲುಷಾತ್ಮಿಕೆಯಾದ ಪೂರ್ವದಿ
ಕ್ತರುಣಿಯ ವಕ್ತ್ರಮಾಗಳೆ ಕಱಂಗಿರೆ ಕಂಡಿರಲಂಜಿದಂತೆ ಭಾ
ಸ್ಕರನಿರದೊಯ್ಯನತ್ತಿೞಿದನಸ್ತ ಮಹೀಧರ ಮಸ್ತಕಾಗ್ರದೊಳ್ ॥೪೪॥

ಪದಪಿಂದೊಂದಿದ ರಜನೀ
ಸುದತಿಯ ನವ ಸಂಗದಿಂ ನಭೋವಿಟನ ಶರೀ
ರದೊಳೊಗೆದ ಪುಳಕತತಿಯೆನೆ
ಪುದಿದತ್ತುಜ್ಜ್ವಲಿಸಿ ಗಗನತಳದೊಳ್ ಭಗಣಂ ॥೪೮॥

ಮ ॥ ನಿನಗೀ ಪದ್ಮಿನಿ ತಾಂ ಸಹೋದರಿ ದಿಟಂ ನೀಂ ಪುಟ್ಟಿದಲ್ಲಿಂ ಬೞಿ
ಕ್ಕೆನಸುಂ ಪುಟ್ಟಿದಳೆನ್ನ ಗರ್ಭದೊಳಿವಳ್ಗಸಕ್ತಿಯಂ ತಾೞ್ದಿ ನಂ
ದನ ಕೈಸೋಂಕದಿರೆಂದು ಪೇೞಲಮೃತಾಂಭೋರಾಶಿಯೆೞ್ತಂದುದೆಂ
ಬಿನಮೀ ಲೋಕಮನುರ್ಬಿ ಪರ್ಬಿದುದಗುರ್ಬಿಂ ಸಾಂದ್ರ ಚಂದ್ರಾತಪಂ॥೫೦॥

ಮ ॥ ಪದೆಯುತ್ತಾಪದದೊಳ್ ಸುಕಂಠೆಗೆ ಪಸಾಯಂಗೊಟ್ಟು ಹರ್ಯಕ್ಷ ಪೀ
ಠದಿನೆೞ್ದೋಲಗಮಂ ವಿವರ್ಜಿಸಿ ನಿಜಸ್ತ್ರೀ ಸತ್ಯ ಸಂಗಾನುರಾ
ಗದಿನಿರ್ದಂ ಬೞಿಕಂ ತದೀಯ ನಿಶೆಯೊಳ್ ನಿದ್ರಾಂಗನಾಸಂಗ ಸೌ
ಖ್ಯದೊಳಿರ್ದಂ ಮಣಿಕುಂಡಲ ಕ್ಷಿತಿಪನಿಂತಾತ್ಮೀಯ ಶಯ್ಯಾಗ್ರದೊಳ್ ॥೫೧॥

ಮ॥ ದಿವಸೇಂದ್ರೋದಯಮಾದುದುಪ್ಪವಡಿಸರ್ ತಾಮಿಂದಿದೇಂ ದೇವರಂ
ದವೆನುತ್ತೊಯ್ಯನೆ ತಮ್ಮೊಳಿಂತುಸುರುತುಂ ಪ್ರಾತಃಕ್ರಿಯಾವಸ್ತು ಸಂ
ಘವನಾಗಳ್ ಪರಿಚಾರಕರ್ ಪಿಡಿದು ಸಾರ್ತಂದೆಯ್ದೆ ಪಾರ್ದಿರ್ದರ
ಲ್ತೆ ವಿಭಾಸ್ವನ್ಮಣಿಕುಂಡಲೋರ್ವಿಪನ ಶಯ್ಯಾಮಂದಿರ ದ್ವಾರದೊಳ್ ॥೫೬॥

ಮ॥ ಮಣಿ ಸಿಂಹಾಸನ ಮಸ್ತಕಾಭರಣಮಿಂದೇಕಾಗದೆಂದಾವ ಕಾ
ರಣದಿಂ ಪೇೞಿನಿತೊಂದು ಪೊೞ್ತು ತಡೆದಿರ್ದಂ ಭೂಪನೆಂದಾದಮಾ
ಕ್ಷಣದಿಂ ಶ್ರೀಮಣಿಕುಂಡಲ ಕ್ಷಿತಿಪನಿರ್ದಾ ಸೌಖ್ಯಶಯ್ಯಾಗೃಹಾಂ
ಗಣಮಂ ತಾಂ ಮತಿವರ್ಧನಾಖ್ಯ ಸಚಿವಂ ಸಾರ್ತಂದನೌತ್ಸುಕ್ಯದಿಂ ॥ ೫೭॥

ಜನಪತಿಯುಪ್ಪವಡಿಸಿ ಭೋಂ
ಕನೆ ಕಂಡೆನ್ನಾಣೆಯಿತ್ತಬಾರೈ ಮತಿವ
ರ್ಧನ ಎನೆ ಬಂದಾ ಪರ್ಯಂ
ಕ ನಿಕಟದುಚಿತಾಸನಾಗ್ರದೊಳ್ ಕುಳ್ಳಿರ್ದಂ ॥೬೦॥

ಏವೇೞ್ವೆಂ ಸಚಿವ ವಿಚಿ
ತ್ರಾವಹಮಪ್ಪೊಂದು ಪೊಸತು ಸುಸ್ವಪ್ನಮನಾಂ
ಭಾವಿಸುತಿರ್ದೆಂ ನೆಱೆ ನಿ
ದ್ರಾವನಿತೆಯೊಳಿರ್ದೆನಲ್ಲ ಕೇಳ್ ಪೇೞ್ವೆನದಂ ॥

ಇನಿತಂ ಕೇಳೆಲೆ ಮತಿವ
ರ್ಧನ ಪೇೞ್ವೆಂ ವಾಹಳಿಯ ವಿನೋದದೆ ನಾನಿ
ರ್ಪಿನಮೆನ್ನ ಹಯಂ ಕೊಂಡು
ಯ್ದನುಪಮ ಗಿರಿವರವನೊಂದನಡರ್ದುದು ಕಡುಪಿಂ ॥೬೩॥

ಉ॥ ಆ ನಗದೊಂದು ತುಂಗತೆಯಂ ಬಹುಭಂಗಿಯ ರತ್ನಶೃಂಗ ಸಂ
ತಾನ ಮರೀಚಿ ಮಾಲಿಕೆಯುಮಂ ನೆಱೆ ವಿಸ್ಮಯಮುತ್ತು ನೋಡುತಿ
ರ್ದಾನದರಗ್ರಭಾಗದೊಳೆ ಕಂಡೆನಗಣ್ಯ ವರೇಣ್ಯ ಪುಣ್ಯ ತೇ
ಜೋನಿಧಿಯಪ್ಪ ತಾಪಸ ಕುಮಾರಕನೊರ್ಬನನಸ್ತ್ರಗರ್ಭನಂ ॥೬೪॥

ತಾಪಸ ಕುಮಾರಂಗೆ ಪೊಡೆಮಟ್ಟಿಂತೆಂದೆಂ -

ಎಸೆವೀ ಮಣಿಮಯ ಶೈಲದ
ಪೆಸಱೇನೀ ಕ್ಷೇತ್ರಮಾವುದೆಂದಾನೆನಸುಂ
ಬೆಸಗೊಂಡೊಡೆ ದಶನ ಪ್ರಭೆ
ಪಸರಿಸೆ ತಾಪಸ ಕುಮಾರನೆನಗಿಂತೆಂದಂ ॥೬೫॥

ಮ॥ಸ್ರ॥ ಇದು ದಲ್ತಾಂ ಚಿತ್ರಕೂಟಾಚಲಮದೈ ವಿಪುಲಾ ಸಿಂಧು ತತ್ತೀರದೊಳ್ತೋ
ರ್ಪುದೆ ಪೆಂಪಂ ಪೆತ್ತ ಸಾರ್ವರ್ತುಕ ವನಮದರೊಳ್ ಕಾಂಚನೋದಂಚಿತಂಬೆ
ತ್ತದು ಭಾಸ್ವದ್ವಿಶ್ವನಾಥಾಯತನಮದರ ಮುಂದೊಪ್ಪುವಾಮ್ರಾವನೀಜಾ
ತದೊಳಿರ್ಪಂ ತಾಪಸವ್ಯಾವೃತ ಕಪಿಲಮಹಾಚಾರ್ಯನೆಂದಿಂತು ಪೇೞ್ದಂ ॥೬೬॥

ದಳಿತ ಶತಪತ್ರದಿಂ ಸಂ
ಚಳಿತ ಶಿಳೀಮುಖ ಸಮಾಜದಿಂ ಧೃತ ಚಕ್ರಾ
ವಳಿಯಿಂ ವಿಪುಲಾ ನದಿ ಕ
ಣ್ಗೊಳಿಪುದು ಸಂಗ್ರಾಮ ಭೂಮಿಯಂದದಿನೆಂದುಂ ॥೮೩॥

ಮ॥ಸ್ರ॥ ದಳಿತೋದಂಚದ್ವಸಂತೋದಯದ ವನ ತರುಶ್ರೇಣಿಯೊಳ್ ಚಿತ್ರ ಪತ್ರಾ
ವಳಿಯಾಗಲ್ ಮೇರುವಂ ಕಂಡರಿಸಿ ತಂದಿಟ್ಟನಂಭೋಜ ಗರ್ಭಂ
ಗಳ ತಾನೆಂಬಂತೆ ಶುಂಭತ್ಕನಕ ಮಯ ಮಹಾದೇವತಾ ಮಂದಿರಂ ಕ
ಣ್ಗೊಳಿಸುತ್ತಂ ಪೆಂಪುವೆತ್ತಿರ್ಪುದು ಮಣಿಕಲಶೋದ್ದಾಮಮಬ್ದಾಮಮಬ್ದಾಧ್ವ ಸೀಮಂ ॥೧೦೬॥

ಅಂಬುರುಹ ನಾಭನಂದದೊ
ಳಂಬರಮದು ನೋಡೆ ನಾಡೆ ಪೀತಾಂಬರಮಾ
ಯ್ತೆಂಬಿನಮದು ಪಜ್ಜಳಿಪುದು
ಜಾಂಬೂನದ ರಚಿತ ರುಚಿರಮೀಶನ ವಾಸಂ॥೧೦೭॥

ಮ॥ ಸರಸೀಜಾತ ಭವಾದ್ಯಮರ್ತ್ಯು ಮುನಿಪ ಧ್ಯಾನ ಪ್ರಭಾವಕ್ಕಗೋ
ಚರಮಪ್ಪಪ್ರತಿಮ ಪ್ರಭಾನಿಧಿ ಪರಂಜ್ಯೋತಿಸ್ವರೂಪಂ ಶಿವಂ
ಪರಮ ಸ್ಥಾವರ ಮೂರ್ತಿಯಾದನೆನೆ ಭಾಸ್ವಚ್ಚಂದ್ರಕಾಂತ ಪ್ರಭಾ
ಸುರ ಲಿಂಗ ವಿಭು ವಿಶ್ವನಾಥನೆಸೆವಂ  ತದ್ದೇವತಾವಾಸದೊಳ್ ॥೧೦೯॥

ಮ॥ಸ್ರ॥ ಪಿರದುಂ ಮುನ್ನಾವ ದೋಷಾತ್ಮಕನೆನಿಪಪವಾದಾಖ್ಯೆಯಂ ತೂಳ್ದು ವೊಂದಾ
ತುರದಿಂ ಶೀತಾಂಶು ತಾರಾವಳಿ ವೆರಸಿೞಿತಂದುರ್ವರಾ ಭಾಗದೊಳ್ ನಿ
ಬ್ಬರದಿಂ ಭಾಸ್ವತ್ತಪೋಮೂರ್ತಿಯನೆ ತಳೆದ ವೋಲ್ ತಾಪಸಾವೃತ್ತದಿಂ ಭಾ
ಸುರಮಾಗಿರ್ಪಂ ದಯಾಂಭೋನಿಧಿ ಕಪಿಲ ಮಹಾಚಾರ್ಯನಾಚಾರ್ಯವರ್ಯಂ॥೧೧೬॥

ಮ॥ ಪೊಳೆವರ್ಕೋಪಳ ಭಾಂಡದೊಳ್ ತೊಳಪ ದೀಪಂ ತದ್ಬಹಿರ್ಭಾಗದೊಳ್
ತೊಳಗುತಿರ್ದವೊಲಾ ಮುನೀಶನ ಹೃದಾತ್ಮಜ್ಯೋತಿ ಮೆಯ್ವೆರ್ಚಿ ಪ
ಜ್ಜಳಿಸುತ್ತಂ ಪೊಱಪೊಣ್ಮಿತೆಂಬತೆಱದಿಂ ವಿಭ್ರಾಜಿಸುತ್ತಿರ್ದುದ
ಸ್ಖಳಿತೋದ್ಧೂಳಿತಮಪ್ಪ ಭಸ್ಮವಿಳಸತ್ಪಾಂಡು ಪ್ರಭಾಮಂಡಲಂ॥೧೨೦॥

ಸುರನದಿಯ ಫೇನಪುಂಜದ
ಸಿರಿಯಂ ಸಲೆ ತಳೆದು ತೊಳಪ ತುಹಿನಾಚಲದೊಳ್
ದೊರೆಯಾದಂ ಕಪಿಲ ಮುನೀ
ಶ್ವರನೊದವಿದ ಪಲಿತಮಯ ಜಟಾಮಂಡಲದಿಂ ॥೧೨೧॥

ಉ॥ ನೀನೆ ಜಗತ್ರೈಕ ಗುರುವೆಂದು ಷಡಕ್ಷರಮಂತ್ರ ಘೋಷ ಮಾ
ಳಾನಕ ಮಂಗಳ ಧ್ವನಿಗಳುಣ್ಮಿ ಕರಂ ಸ್ಥಿರಮಪ್ಪಿನಂ ತಪ
ಶ್ರೀ ನಲವಿಂದ ತಾನೆ ಪರೆಕಟ್ಟಿದ ಪಟ್ಟವಿದೆಂಬಿನಂ ತ್ರಿರೇ
ಖಾ ನಿಚಿತಂ ವಿಭೂತಿಯೆಸೆದತ್ತು ಮುನೀಂದ್ರ ವಿಶಾಲ ಫಾಲದೊಳ್ ॥೧೨೨॥

ಚಾರು ತಪೋರಾಶಿಯ ರ
ಕ್ಷಾರೇಖಾ ನಿಕರಮಿಂತಿದೆನೆ ತನ್ಮುನಿ ವೃಂ
ದಾರಕನ ಕೊರಲೊಳೆಸೆದುದು
ನೀರೇರುಹದಮಳ ಸೂತ್ರಮಯದುಪವೀತಂ॥ ೧೨೮॥

ಮ॥ ಇದಿರೊಳ್ ತಾನೆಸೆದಿರ್ದುದಾವನ ಸಮೀಪ ಕ್ಷೋಣಿಯೊಳ್ ಕಾಂತಿ ಸಂ
ಪದದಿಂ ಕೌತುಕ ರೂಪದಿಂ ಪುದಿದ ಕಾಂತಾಕಾರಮೊಂದಂತದಂ
ಪದೆದಾನೀಕ್ಷಿಸುವಲ್ಲಿ ನಿನ್ನ ದನಿಯಂ ಕೇಳ್ದಿರ್ದೆನೆಂದಾನೃಪ
ಮುದದಿಂ ಪೇೞ್ದೊಡೆ ಕೇಳ್ದು ಮಂತ್ರಿ ತಲೆದೂಗುತ್ತಿರ್ದನಾಶ್ಚರ್ಯದಿಂ॥೧೩೭॥

ಮ॥ ಕನಸೆಂದಿಂತುಟು ದೇವ ಪೇೞ್ವಿರಿದು ತ್ಯಂ ಬಲ್ಲೆನಾಂ ಚಿತ್ತಕೂ
ಟ ನಗೇಂದ್ರಂ ವಿಪುಳಾತರಂಗಿಣಿ ಮಹಾಪ್ರಖ್ಯಾತ ಸಾರ್ವರ್ತುಕಂ
ಬನಮುಂಟಲ್ಲಿಯೆ ವಿಶ್ವನಾಥನದಿದೈವಂ ಕೇವಲ ಜ್ಞಾನಮಂ
ಡನನಪ್ಪಾ ಕಪಿಲ ವ್ರತೀಶನಿರುತಿರ್ಪಂ ತಾಪಸ ವ್ಯಾವೃತಂ ॥ ೧೩೮॥

ಇದು ಕಮನ ಕುಧರೇಂದ್ರ ನಂದನಾಲೋಲ ಲೋಚನ ಚಕೋರೀಸುಖಪ್ರದ
ಪರಮಾಂಗ ಕಾಂತಿಸಂತಾನ ಸಾಂದ್ರ ಚಂದ್ರಿಕಾ ವಿಭವ ಶೋಭಾಯಮಾನ
ವಿಶ್ವನಾಥ ಚರಣನಖ ಮಯೂಖೋತ್ಫುಲ್ಲ ಮಲ್ಲಿಕಾಶೇಖರ
ಕಂದರ್ಪರೇಖಾ ಪ್ರಭಾವ ಪ್ರಸಂಗೋಲ್ಲಸಿತ
ಕುಸುಮಾವಳಿ ಮಹಾ ಪ್ರಬಂಧದೊಳ್
ಮಣಿಕುಂಡಲ ಮಹೀಪಾಲಕ
ಸ್ವಪ್ನದರ್ಶನ ವನವರ್ಣನಂ
ಪ್ರಥಮಾಶ್ವಾಸಂ.

ಷಷ್ಠಾಶ್ವಾಸಂ.

ರಗಣಮನೆ ಪೋಲ್ತು ಪಿರಿದುಂ
ಸೊಗಯಿಪ ದೇವಿಯ ತದೀಯ ತನ್ಮಧ್ಯಮದಾ
ಜಗಣಮನೆ ಪೋಲ್ತು ಪಿರಿದುಂ
ಸೊಗಯಿಸಿದುದು ಗರ್ಭದರ್ಭಕನ ಕೊರ್ಬುಗೆಯಿಂ ॥೬॥

ಇಂತೆಸೆವ ಶರತ್ಸಮಯಾನಂತರದೊಳ್ ವಿಜಯಾವತಿ ಮಹಾದೇವಿ ಪರಿಪೂರ್ಣ ಗರ್ಭಿಣಿಯಾಗಿರ್ಪುದುಮಾಗಳ್

ಉದಯಿಪ ನೃಪ ತನಯಂ ತಾಂ
ಸದಮಳ ಹೃದಯಂ ದಲೆಂದು ನೆಱೆ ಸೂಚಿಸುವಂ
ದದಿನುತ್ಸಾರಿತಮಾದುದು
ಪುದಿದ ಸರೋಜಂ ಸರೋ ನಿಕಾಯದ ತೋಯಂ ॥೫೩॥

ಸಂದಮಲ್ತುದಯಿಪ ನೃಪ
ನಂದನನೀ ಕುವಲಯಾಧಿನಾಥಂ ಕಮಲಾ
ನಂದಕರನೆಂದು ಸೂಚಿಸು
ವಂದದಿನಲರ್ದತ್ತು ನೈದಿಲುಂ ನೀರಜಮುಂ ॥೫೯॥

ಎನೆ ತಾಮಾಗಳದೊರ್ಮೆಯೆ
ಜನಿಯಿಸಿದುದು ನಾಡೆ ಕೂಡೆಯುಂ ನಿಖಿಳ ಸುಹೃ
ಜ್ಜನದ ಪರಿಜನದ ಪುರಜನ
ದ ನಿಜಾಂತರ್ಮುಖದೊಳತುಳ ಹರ್ಷೋತ್ಕರ್ಷಂ॥೬೦॥

ಚಂ॥ ರವಿ ನವ ರಾಗದಿಂದಗುಣಮಾದ ನಭೋತ್ಕರಮುತ್ಕರೋಗ್ರಮಾ
ಯ್ತವಿರಳ ಹರ್ಷದಿಂ ಹರಿಗಣಂ ಗುಡಿಗಟ್ಟಿದುದಾಸ್ಪದಂಗಳೊ
ಪ್ಪುವ ಮಣಿದೀಪಿಕಾಳಿ ಕುಡಿಯಿಟ್ಟುದನಾಹತದಿಂ ಸಮಂತು ಸಂ
ಭವಿಸಿದುದೆಯ್ದೆ ದೇವ ಭವನಂಗಳ ಮಂಗಳ ವಾದ್ಯ ನಿಸ್ಸ್ವನಂ॥ ೬೧॥

ಮ॥ ಎನಿತಾನುಂ ಶುಭಚಿಹ್ನ ಕೋಟಿ ವಿದಿತಂಬೆತ್ತೆಯ್ದೆ ಪುಟ್ಟುತ್ತುಮಿ
ರ್ಪಿನಮೆಲ್ಲಾ ಗ್ರಹಮುಂ ಶುಭಸ್ಥಿತಿಯೊಳೋರಂತಿರ್ಪ್ಪ ತತ್ಕಾಲ ಸಂ
ಜನಿತೋತ್ಕೃಷ್ಟ ಮುಹೂರ್ತದೊಳ್ ಬೆಸಲೆಯಾದಳ್ ದೇವಿ ಶೋಭಾವಿನೂ
ತನನಂ ನಾಡೆ  ಜಗತ್ಪ್ರಮೋದ ಲತಿಕಾ ಸತ್ಕಂದನಂ ಕಂದನಂ॥೬೨॥

ಉ॥ ಉತ್ತಮಮಪ್ಪುದಂಚಿತ ಮುಹೂರ್ತದ ದುಂದುಭಿ ವಾದ್ಯ ನಾದಮು
ಣ್ಮುತ್ತಿರೆ ತನ್ಮುಹೂರ್ತಿಕರ ಮಂಗಳ ನಿಶ್ವನಮತ್ಯುದಗ್ರಮಾ
ಗುತ್ತಿರೆ ಸುಪ್ರಮೋದದೊದವಿಂ ಕುಲವೃದ್ಧ ವಧೂಟಿಯರ್ಕ್ಕಳಾ
ಡುತ್ತಿರೆ ಪೆತ್ತಳಾಗಳಭಿನೂತನ ಭಾನುವೆನಿಪ್ಪ ಸೂನುವಂ॥೬೩॥

ಆಗಳ್ ನಿಜ ರಾಜಲಕ್ಷ್ಮೀ ನಿಲಯಕ್ಕೆ ಮಂಗಳ ಮಣಿದೀಪ ಕಳಿಕೆಯಂ ಪಡೆದಂತೆಯುಂ, ಸಕಲ ಸಾಮ್ರಾಜ್ಯ ರಮ್ಯ ಹರ್ಮ್ಯಕ್ಕೆ ರತ್ನಕಲಶಮಂ ಪಡೆದಂತೆಯುಂ, ಮಹದೈಶ್ವರ್ಯ ಕಮಲಕ್ಕೆ ದಿವಸಕರಂ ತೇಜಮಂ ಪಡೆದಂತೆಯುಂ, ಪ್ರಬಲ ಜ್ಞಾನ ಲತೆಗೆ ಲಲಿತ ಕುಸುಮಮಂ ಪಡೆದಂತೆಯುಂ, ಶುಭ ಲಕ್ಷ್ಮಣ ವ್ರಜಕೆ ಬೀಡುದಾಣಮಂ ಪಡೆದಂತೆಯುಂ ಸತ್ಯಕಳಾನಿವಹಕ್ಕೆ ನಿಕೇತನಮಂ ಪಡೆದಂತೆಯುಂ,  ಕುಮಾರನಂ ಪಡೆವುದುಂ ಹರ್ಷವರ್ಧನೆಯಾಗಳ್ ಲೀಲೆಯಿಂದೋಲಗಳ್ ಲೀಲೆಯಿಂದೋಲಗಂಗೊಟ್ಟಿರ್ದ ನರೇಂದ್ರ ಮುಕುಂದಂಗೆ ಪೋಗಿ ಪೊಡವಟ್ಟು -

ಮ॥ ಎಲೆ ಭೂಪಾಲಕ ಚಕ್ರಿ ದೇವಿ ಪಡೆದಳ್ ಭೂಭಾನುವಂ ಸೂನುವಂ
ಲಲಿತಾಗಣ್ಯ ವರೇಣ್ಯ ಲಕ್ಷಣ ಮಣಿವ್ರಾತೌಕನಂ ತೋಕನಂ
ಜಲಧಿ ವ್ಯಾವೃತ ಕಾಶ್ಯಪೀ ಜನ ಮನೋಬ್ಜಾನಂದನಂ ಕಂದನಂ
ವಿಲಸನ್ಮೋಹನ ರೂಪ ವೈಭವ ಜಿತ ಶ್ರೀ ಪುತ್ತ್ರನಂ ಪುತ್ತ್ರನಂ ॥೬೪॥

ತನಿವೆರ್ಚಿದುತ್ಸವಾಮೃತ
ವನಧಿಯೊಳೋಲಾಡುತಿರ್ದು ನೃಪಚಕ್ರಿ ಮನೋ
ಜನಿತ ಹರುಷಾಶ್ರುಮಯ ಲೋ
ಚನದಿಂದಾಜ್ಞಾಬಳಾಸ್ಯಮಂ ವೀಕ್ಷಿಸಿದಂ॥೬೫||

ಪೊಡವೀಶನಿಂದೆ ಸಾಸಿ
ರ್ಮಡಿ ಮುದನಾಗಿಯೆ ನಿಜೋತ್ತರೀಯದ ಸೆಱಗಿಂ
ಗುಡಿಗಟ್ಟಿ ನಲಿಯುತಿರ್ದಂ
ಬಡವಂ ನಿಧಿವಡೆದ ತೆಱದಿನಾ ಮಂತ್ರಿವರಂ॥೬೬॥

ಇಂತು ನವೀನ ಮಂತ್ರಿವೆರಸು ನರೇಂದ್ರ ಮುಕುಂದಂ ನಂದನ ಮುಖದರ್ಶನೋತ್ಸುಕತೆಯಿಂ ತರಳಲುಜ್ಜುಗಿಸಿದಾ ಸಮಯದೊಳ್.  

ಮ॥ಪದಪಿಂ ಬಂದೆಲೆ ದೇವ ದೇವಿಗೆ ಕುಮಾರಂ ಪುಟ್ಟಿದುದ್ಯನ್ಮುಹೂ
ರ್ತದೊಳೀಗಳ್ ಭವದೀಯ ಮಂತ್ರಿ ಮುಕುರ ಪ್ರಜ್ಞಾಬಲಂಗಗ್ರ ಪ
ತ್ನಿ ದಲಪ್ಪಗ್ಗದ ಸುಪ್ರಭಾವತಿಗೆ ಪುತ್ತ್ರಂ ಪುಟ್ಟಿದಂ ತಾನೆನು
ತ್ತುದಿತಾನಂದದಿನಿಂತು ಬಿನ್ನವಿಸಿದಂ ಭೂಪಂಗೆ ಚಾರ ದ್ವಿಜಂ॥೬೭॥

ಉ ॥ ಆ ಸತಿ ಸುಪ್ರಭಾವತಿಗೆ ಪುಟ್ಟಿದನುತ್ತಮ ಪುತ್ರನೆಂಬುದಂ
ಭೂಸುರ ಚಾರನಿಂ ನೆಱೆಯೆ ಕೇಳ್ದರಸಂ ನಿಜ ಪಾರ್ಶ್ವ ವರ್ತಿಯಾ
ದಾ ಸಚಿವಾಗ್ರಗಣ್ಯನ ಮುಖಾಬ್ಜಮನೀಕ್ಷಿಸುತುಂ ತನೂಜ ರು
ಗ್ಭಾಸುರರಿರ್ವರಾದರೆನಗೆಂಬನುರಾಗಮನಾಗಳೆಯ್ದಿದಂ ॥೬೮॥

ಇಂತು ದ್ವಿಗುಣೀಭೂತ ಮನೋರಾಗನಾಗಿ ಚಾರ ದ್ವಿಜಂಗೆ ಪಸಾಯಮನಿತ್ತು ಪುತ್ತ್ರ ಮುಖಾವಲೋಕನದಿಂ ಪ್ರಧಾನಂ ಬೆರಸೋಲಗದಿಂ ತಳರ್ದು -

ಉ ॥ ಇಂದು ಸನಾಥಮಾಯ್ತು ಸಕಳೋರ್ವರೆಯಿಂದು ಮದೀಯ ರಾಜ್ಯವಾ
ದಂದೊರೆವೆತ್ತುದಿಂದಖಿಳ ವೈಭವವಲ್ಲಿ ಫಲಾಳಿ ಶೋಭೆಯಿಂ
ದೊಂದಿದುದಿಂತು ಸಂಜನಿಸೆ ಪುತ್ತ್ರನನೆಂದೆನುತುಂ ಸಮುದ್ಭವಾ
ನಂದದೆ ಸೂತಿಕಾನಿವಾಸಕ್ಕೆ ನೃಪಂ ನಡೆತಂದನಾ ಕ್ಷಣಂ ॥೬೯॥

ಮ ॥ ನಲವಿಂ ನರ್ತಿಪ ವೃದ್ಧಕಾಂತೆಯರುಮಂ ಬಂದೊರ್ಬಿಯೊಳ್ ಕೂಡೆ ಪೂ
ವಲಿಯಂ ಬಿತ್ತರಿಪಂಗನಾತತಿಯುಮಂ ತನ್ಮಂಗಳದ್ರವ್ಯಸಂ
ಕುಲದತ್ತಾತುರ ಯಾನ ವಾವೆಯರುಮಂ ನೋಡುತ್ತನುಮಾನಂದದಿಂ
ನೆಲೆವೆರ್ಚುತ್ತುಮಿಳೇಶನಿಂತು ಪುಗುತಂದಂ ಸೂತಿಕಾಸದ್ಮಮಂ ॥೭೦॥

ಚಂ ॥ ಮೊೞಗುವ ಮಂಗಳಾನಕ ನಿನಾದದೆ ತತ್ಸಮಯೋಚಿತ ಕ್ರಿಯಾ
ಕಳಿತ ಕುಲಾಂಗನಾ ಕಳಕಳಧ್ವನಿಯಿಂವಿಳಸನ್ಮೂರ್ತಿಕಾ
ವಳಿ ಶುಭವಾಕ್ಯಮೋದುವ ಮೃದು ಸ್ವರದಿಂ ವರ ವಾದ್ಯ ವಿಪ್ರ ಸಂ
ಕುಳ ವೇದಮಂತ್ರ ರವದಿಂದೆಸೆದಿರ್ದುದು ಸೂತಿಕಾಗೃಹಂ॥೭೧॥

ಕಂದರ್ಪನೆ ಸಂಭವಿಸಿದ
ನೆಂದನುಬಂಧಮನೆ ಮೆರೆಯಲಾ ಸಹಕಾರಂ
ಬಂದಿರ್ದುದು ಬಾಗಿಲೊಳೆನೆ
ಮಾಂದಳಿರ್ಗಳ ತೋರಣಂ ವಿರಾಜಿಸಿತೆನಸುಂ॥೭೪॥

ಜನಯಿಸಿದ ಕುಮಾರನ ಜಯ
ವನಿತೆಯ ಕಣ್ಬೆಳಗಿದೆನಿಸಿ ತತ್ಪ್ರಸವ ನಿಕೇ
ತನಮಂ ಬಳಸಿರ್ದುದು ಕಾ
ಪಿನ ಸುಭಟೋತ್ಪಾತ ಖಡ್ಗಧಾರಾ ದ್ಯುತಿಗಳ್ ॥೭೫॥

ಚಂ ॥ ಮಿಸುಗುವ ತಮ್ಮ ನುಣ್ದೊಡೆಗಳುಜ್ಜ್ವಲ ಮಜ್ಜನ ಪೀಠಮಾಗಿ ರಾ
ಜಿಸೆ ಚತುರಂಬುರಾಶಿ ಪರಿವಿಷ್ಟ ಧರಾಧಿಪ ರಾಜ್ಯ ಮಂಗಳಾ
ಭಿಸವನಮಿಂತೆಂದು ನೆಗಳ್ವಂದದಿನಂದನಿತುಸಮಂತು ಸಂ
ತಸದೊಳೆ ಬಾಲಕಂಗೆ ನೆಗಳ್ದರ್ ಜಲ ಸೇಕಮನಿಂತು ಕಾಂತೆಯರ್ ॥೭೯॥

ಚಂ ॥ ಹರಿ ಶಿಶು ರಾವ ಪೂರಿತ ಹಿಮಾದ್ರಿ ಗುಹೋದರಮಂ ಸಮಂತು ಕೇ
ಸರಿ ಪುಗುತರ್ಪವೋಲೊಗೆದ ಬಾಲಕ ರೋದನ ನಾದವಾದಮಾ
ವರಿಸಿ ವಿರಾಜಿಸಿರ್ಪ್ಪ ಶಶಿಕಾಂತದ ನೂತನ ಸೂತಿಕಾ ಗೃಹೋ
ದರಮನೆ ಪೊಕ್ಕನಾಗಳರಸಂ ಸಚಿವಂ ಬೆರಸುಣ್ಮಿದೞ್ತಿಯಿಂ ॥೮೪॥

ಮಿಸುಗುವ ಬೆಳ್ಮುಗಿಲೊಳಗುದ
ಯಿಸುವಿನಬಿಂಬದವೊಲೆಸೆವ ದುಗುಲದ ಸೆಱಗಿಂ
ಮುಸುಕಿದ ಶೋಣಚ್ಛವಿ ರಂ
ಜಿಸುವಂಗದ ಬಾಲನಂ ನೃಪಾಲಂ ಕಂಡಂ॥೮೭॥

ಚಕ್ರಧರನೀತನುರ್ವೀ
ಚಕ್ರಾಧಿಪನೀತನೆಂದು ಸೂಚಿಪ ತೆಱದಿಂ
ಚಕ್ರಾದಿ ಚಿಹ್ನಮೊಗೆದ ಕ
ರಕ್ರಮ ಕಮಲಂಗಳೆಸೆದುವಾ ಬಾಲಕನಾ ॥೯೭॥

ಅತನುವೆನಿಪತನು ಸಲೆ ತ
ನ್ನತನುತೆಯಂ ಬಿಟ್ಟು ಪುಟ್ಟಿದಂ ಕಮನೀಯಾ
ಕೃತಿಯಿಂದೆನೆ ತನುಜನ ಸ
ನ್ನುತಿವೆತ್ತ ಸುರೂಪ ವಿಭವಮೇನತಿಶಯಮೋ॥೯೮॥

ಪುರಮಂ ನಿರುಪಮ ಶೋಭಾ
ಕರಮೆನೆ ವಿರಚಿಸುವುದೆಂದು ನಿರವಿಸಿ ತದನಂ
ತರದೊಳ್ ಸುತ ಜನ್ಮೋತ್ಸವ
ಸುರಚಿರ ಗಂಭೀರ ಭೇರಿಯಂ ಪೊಡೆಯಿಸಿದಂ॥॥೧೦೩॥

ಪುರ ಜನಕಂ ಪರಿಜನಕಂ
ಪರಮಾಪ್ತ ಜನಕ್ಕಮಾತ್ಮಬಂಧು ಜನಕ್ಕಂ
ನರನಾಥ ಚಕ್ರಿ ಪಿರಿದುಂ
ಪರಿತೃಪ್ತಿಯನೆಯ್ದಲೀಪ್ಸಿತಾರ್ಥಮನಿತ್ತಂ ॥೧೧೨॥

ಮ॥ ಅಸಮಾಸ್ತ್ರೋಪಮ ರೂಪದಿಂದೆ ನಿನಗೊರ್ಬಂ ಪುಟ್ಟುವಂ ಪುತ್ರನೆಂ
ದೊಸೆದಾ ಸುಪ್ರಭಯೋಗಿ ಮುನ್ನುಸಿರ್ದವೋಲಾಕಾರದಿಂದನ್ನನಾ
ಗಿ ಸಮಂತುದ್ಭವಿಸಿರ್ದನೀ ಸುತನ ಸೌಂದರ್ಯಕ್ಕೆ ತಕ್ಕಂದದಿಂ
ಪೆಸರಿತ್ತಪೆನೆನುತ್ತುಮಿತ್ತನರಸಂ ಕಂದರ್ಪ ದೇವಾಖ್ಯಮಂ॥೧೧೫॥

ಬಳೆದ ಹೃದಯಾನುರಾಗದಿ
ನಿಳೇಶನಾಗಳ್ ನಿಜಪ್ರಧಾನಂ ಪ್ರಜ್ಞಾ
ಬಳನ ತನಯಂಗೆ ಮೇಧಾ
ವಿಳನೆಂಬುಚಿತಾಭಿಧಾನಮಂ ತಾನಿತ್ತಂ॥೧೧೬॥

ಕಮನೀಯ ನಿಜಾಂಗಸುರ
ದ್ರುಮದೆರಡುಂ ಕೆಲದೊಳೊಗೆದ ಬೀೞಲ್ಗಳೆನಲ್
ನಿಮಿರ್ದೆಸೆದುವು ಜಾನು ದ್ವಿತ
ಯಮನೆನಸುಂ ಮಿಕ್ಕು ಬಾಲಕನ ನಿಡುದೋಳ್ಗಳ್॥೧೨೬॥

ಛಂದೋಲಂಕಾರ ದ್ವಯ
ದಂದದಿನೆನಸುಂ ಸುವೃತ್ತ ಶೋಭಾವೃತದಿಂ
ಸೌಂದರ್ಯ ಕಾಂತಿ ಸಂಯುತ
ದಿಂದೆಸೆದತ್ತಾ ಕುಮಾರನೂರು ದ್ವಿತಯಂ॥೧೨೯॥

ಪಿರಿದೆಸೆವ ವದನ ವಿಧುವಿನ
ಪರಿವೇಶವಿದೆಂಬ ತೆಱದೆ ಬಹು ರುಚಿಗಳ್ ಬಿ
ತ್ತರಿಪ ನವರತ್ನ ಕಂಠಿಕೆ
ಕರಮೆಸೆದಿತ್ತಾ ಕುಮಾರಕನ ಕಂಧರದೊಳ್॥೧೩೩॥

ಮ॥ ಇನಿತೋರಂತೆ ಕರಂ ಕಡಲ್ವಱಿವಿನಂ ಪಾಡುತ್ತುಮಿರ್ಪಂಗನಾ
ಜನ ಗೇಯಧ್ವನಿಗಲ್ಲಿ ತಾಂ ನಸುನಗುತ್ತುಂ ಮತ್ತಮಾ ಲಲ್ಲೆಯಿಂ
ತೊನೆಯುತ್ತಿರ್ದ ನಿಜಾಂಗದಿಂದಮೊಲೆಯುತ್ತುಂ ತೊಟ್ಟಿಲಂ ತತ್ಕುಮಾ
ರನಿಳಾಧೀಶನ ಚಿತ್ತಮುತ್ಸವದೊಳಂ ತೂಗಾಡೆ ತೂಗಾಡುವಂ ॥೧೪೩॥

ಸುಲಲಿತಮಪ್ಪ ಬೀಣೆಗೆ ಕಳಾ ಲವ ಕಾಷ್ಠಮದೊಂದು ಸಂಗತ
ಚ್ಛಲದೊಳೆ ಸುಸ್ವರಂ ಜನಯಿಪಂತೆ ತೊದಳ್ನುಡಿಗೇಳ್ವಲಂಪಿನಿಂ
ದಲಘು ಮುದಾತ್ಮರಾಗೆ ವಿಜಯಾವತಿ ದೇವಿಯುಮಾ ನರೇಂದ್ರನುಂ
ಸಲೆ ನುಡಿಸುತ್ತುಮಿರ್ಪ ನೆವದಿಂ ನುಡಿಗಲ್ತನಿಳೇಶ ನಂದನಂ ॥೧೫೧॥

ವಿದಿತಂ ವಿಜಯಾವತಿಗಿಂ
ತುದಯಿಸಿದರ್ ತನಯರಮಳರೆಂಬವೊಲೋರಂ
ದದಿನೊಡವಳೆವರ್ ಕಂದ
ರ್ಪದೇವನುಂ ಸಚಿವಸೂನು ಮೇಧಾವಿಳನುಂ ॥೧೫೯॥

ಬಳ ಕೃಷ್ಣರ ತೆಱದಿಂದೊಡ
ವಳೆವರ್ ಕಂದರ್ಪದೇವನುಂ ತನ್ಮೇಧಾ
ವಿಳನುಂ ವಿಳಸನ್ಮತಿ ಧೃತಿ
ಬಳ ಶೀಲ ಸುರೂಪ ವೈಭವಾಭೇದತೆಯಿಂ॥೧೬೦॥

ಇದು ಕಮನ ಕುಧರೇಂದ್ರ ನಂದನಾ ಲೋಲ ಲೋಚನ ಚಕೋರೀ ಸುಖಪ್ರದ
ಪರಮಾಂಗ ಕಾಂತಿ ಸಂತಾನ ಸಾಂದ್ರ ಚಂದ್ರಿಕಾ ವಿಭವ ಶೋಭಾಯಮಾನ
ಶ್ರೀವಿಶ್ವನಾಥ ಚರಣ ನಖ ಮಯೂಖೋತ್ಪಲ್ಲ ಮಲ್ಲಿಕಾಶೇಖರ
ಕಂದರ್ಪದೇವ ಪ್ರಭಾವ ಪ್ರಶಂಸೋಲ್ಲಸಿತ ಕುಸುಮಾವಳೀ
ಮಹಾಪ್ರಬಂಧದೊಳ್ ವರ್ಷಕಾಲ ವರ್ಣನಂ
ಕುಮಾರೋದಯ ವರ್ಣನಂ
ಷಷ್ಠಾಶ್ವಾಸಂ.

ದ್ವಾದಶಾಶ್ವಾಸಂ.

ಶ್ರೀ ನಿರುಪಮ ನಿಜ ತನು ಕಿರ
ಣಾನೀಕದೆ ಭುವನ ಭವನ ನಿರ್ಮಲ ರುಚಿಯಂ
ತಾನಿರ್ಮಡಿಸುತ್ತಿರ್ದಂ
ಮಾನಧನಂ ಮಾನವೇಂದ್ರಂ ಮಕರ ಪತಾಕಂ॥೧॥

ಅಂತು ಕುಳ್ಳಿರ್ದು ಕಂದರಪದೇವಂ ಮೇಧಾವಿಳ ಪ್ರದತ್ತ ಕರ್ಪೂರ ತಾಂಬೂಲ ಗೃಹೀತನಾಗಿ ತತ್ಸರಸೀಶೋಭೆಯಂ ನೋಡುತ್ತುಮಿರ್ಪಾಗಳ್ -

ಚಂ॥ ವನರುಹಷಂಡ ಲಕ್ಷ್ಮಿಯನಭೀಕ್ಷಿಸಲಾ ವನಲಕ್ಷ್ಮಿ ಬರ್ಪವೋಲ್
ವಿನುತ ಲತಾಂಗಿ ಚಾರು ಕಳಿಕಾ ನಖೆ ಮತ್ತ ಮರಾಳಯಾನೆ ಪಾ
ವನ ಪಿಕನಾದೆಯೊರ್ವ ಕಳಭಾಷಿಣಿಯೆಂಬ ವಧೂಟಿಯಾಗಳಿಂ
ತನುಪಮಮಪ್ಪ ತತ್ಸರಸಿಗೆೞ್ತಱುತಿರ್ದಳಪೂರ್ವ ಶೋಭೆಯಿಂ॥೨॥

ಎಳಲತೆಗೆ ಲತೆಯ ಕಳೆ ಸಂ
ಗಳಿಸಿದವೋಲ್ ಕೆಳದಿ ಕನಕಲತೆಯೆಂಬಾ ಕೋ
ಮಳೆವೆಱಸು ಬರುತ್ತಿರ್ದಳ್
ಕಳಭಾಷಿಣಿ ತತ್ಸರೋಜಷಂಡಕ್ಕಾಗಳ್॥೩॥

ಚಂ॥ ಅನಿಮಿಷಕಾಂತೆಯೋ ಖಚರ ಕಾಮಿನಿಯೋ ವನದೇವಿಯೋ ದಿಶಾಂ
ಗನೆಯರೊಳೊರ್ವಳೋ ಬಗೆವೊಡಿಂತಿವಳಾವಳೆನುತ್ತುಮಾಗಳಾ
ವನಿತೆಯ ರೂಪಮಂ ಪೊಱೆವ ಮೆಯ್ವೆಳಗಂ ನಡೆ ನೋಡಿ ವಿಸ್ಮಯಂ
ಜನಿಯಿಸೆ ಮಂತ್ರಿ ಸೂನು ನೃಪಕಂತುಗೆ ತರ್ಜನಿಯಿಂದೆ ತೋಱಿದಂ॥೪॥

ಚಂ॥ ಪರಿವೃತ ನಾಳ ಕಾಂಡಪಟೆಯಾಗೆ ಸರೋಜಗೃಹಕ್ಕೆ ಬರ್ಪ ನೀ
ರ ರುಹ ವನದೇವತೆಯೊ ತಾನೆನುತುಂ ಕಮನೀಯ ಕಾಂತಿ ಬಿ
ತ್ತರಿಪ ಲತಾಂಗ ಸೌರಭ ಲೋಭದೆ ಸುತ್ತಿ ಮದಾಳಿ ಮಂಡಲಂ
ಬರೆ ಬರುತಿರ್ದ ಕಾಂತೆಯನಭೀಕ್ಷಿಸಿದಂ ನರನಾಥ ಮನ್ಮಥಂ॥೫||

ಚಂ॥ ಘಳಿಲನೆ ಕಂಡು ನಮ್ಮರಸಿಯಂ ಕುಸುಮಾವಳಿ ದೇವಿಯಂ ಮರು
ಳ್ಗೊಳಿಸಿದ ಚಿತ್ರದನ್ನನೆ ತದೀಯ ಶಿವಾಲಯ ಮತ್ತವಾರಣ
ಸ್ಥಳದೊಳಪೂರ್ವ ಸತ್ಪುರುಷನೀಯಿರುತಿರ್ದನೆ ನೋಡುನೋಡು ನೀಂ
ತಳರದೆನುತ್ತುಮಾಂತ ಕಳಭಾಷಿಣಿಗಾಗಡೆ ನಿಂದು ತೋಱಿದಳ್॥೭॥

ಚಂ॥ ಎಲೆ ಸಖಿ ನಿನ್ನ ಮಾತು ದಿಟಮಾದಪುದೀತನೆ ತಪ್ಪದಪ್ಪನೀ
ಸುಲಲಿತ ಮೂರ್ತಿ ಮಾನವರ್ಗೆಲ್ಲಿಯದಾ ಸುರರೊಳ್ ವಿಯಚ್ಚರಾ
ವಲಿಯೊಳದಾವನೋ ನುಡಿಸುವಂ ಮೊಗಮೀಯಲಿ ಕಾಯ್ದು ತಾಪಮೀ
ಯಲಿ ನಡೆ ಪೋಪಮೆಂದು ಕಳಭಾಷಿಣಿ ತಾಂ ತಳರಲ್ಕೊಡರ್ಚಿದಳ್॥೯॥

ಚಂ ॥ ನುಡಿಸದಮುನ್ನಮಿರ್ದೆಡೆಗೆ ಪೋಗದೆ ನಮ್ಮಯ ಮಾತಿಗಿಂಬುಗೊ
ಟ್ಟೊಡೆ ಕುಸುಮಾವಳೀ ವಿರಹ ವೃತ್ತಕಮಂ ಬಗೆಗೊಳ್ವ ಭಂಗಿಯಿಂ
ನುಡಿವಮದರ್ಕೊಡಂಬಡೆ ಕೃತಾರ್ಥರೆ ನಾವಿದು ನಮ್ಮ ದೇಸೆಯೊಳ್
ಗಡಣಿಸೆ ನಾಡೆ ಕೌತುಕಮೆನುತ್ತವಳ್ ತಳರ್ದಳ್ ಪ್ರಮೋದದಿಂ ॥೧೦॥

ಚಂ॥ ಅನುನಯದಿಂದಮಿಂತು ಕಳಭಾಷಿಣಿಗೆ ಭೋಂಕನೆ ಬಂದು ತನ್ನ ಕೈ
ಯನುಪಮ ಶುಭ್ರ ವಾರಿಜವನಾಗಳೆ ಕಾಣ್ಕೆಯನಿತ್ತು ಚಿತ್ತ ಸಂ
ಜನಿತ ಘನ ಪ್ರಮೋದ ಭರದಿಂದಿರದಾನರನಾಥ ಪುಷ್ಪ ಚಾ
ಪನ ಪದಪಂಕಜಕ್ಕೆಱಗಿದಳ್ ಫಳ ವಿಶ್ರುತ ಕಲ್ಪವಲ್ಲಿವೋಲ್॥೧೨॥

ಅದನಱಿದಾಗಳ್ -

ಅಱಿವಂತು ಕಾಣ್ಕೆಯಂ ಕೊ
ಟ್ಟೆಱಗಿಸೆ ನೆಗೞ್ದೀ ಮಹಾನುಭಾವನದಾರೆಂ
ದಱಿಯದೆಲೆ ಕಾಂತೆ ಪೇೞೀ
ತೆಱನಂ ನೀನೆಂದು ನುಡಿಸಿದಂ ಸಚಿವಸುತಂ॥೧೩॥

ಆನಱಿವೆ ಪೆಱತೇನಾ
ಶ್ರೀನಿಧಿ ಕಂದರ್ಪ ದೇವನೀ ವಿಭುವದಱಿಂ
ದಾನಂದದೆ ಕಾಣ್ಕೆಯನಿಶ
ತ್ತಾನೆಱಗಿದೆನೀಗಳೆಂದು ಮಾನಿನಿ ನುಡಿದಳ್॥೧೪॥

ಅದರ್ಕೆ ಸಚಿವಸುತಂ ಮತ್ತಮಿಂತೆಂದಂ -

ಕಂದರ್ಪ ದೇವನೀ ವಿಭು
ವೆಂದಱಿದೀ ತೆಱನನಬಳೆ ನೀನೀಗಳ್ ಪೇ
ೞೆಂದೆನಲಮಾತ್ಯಸುತನದ
ನಂದಾ ಲಲಿತಾಂಗಿ ಪೇೞಲುದ್ಯತೆಯಾದಳ್ ॥೧೫॥

ಅದೆಂತೆಂದೊಡೆ -

ಮ॥ ಕ್ಷಿತಿಯೊಳ್ ತಾಂ ಪೆಸರ್ವೆತ್ತುದೀ ವಿಷಯಮೆಂದುಂ ನಾಮದಿಂ ಚಂದ್ರಕಾ
ವತಿಯೆಂದೆಂಬುದು ಚಕ್ರವಾಳವೆ ಪುರಂ ಚಂದ್ರಧ್ವಜಂ ತತ್ಪುರೀ
ಪತಿ ವಿಖ್ಯಾತಿಯನಾಂತ ಚಿತ್ರಮತಿಯೆಂಬಳ್ ಪಟ್ಟದಾ ದೇವಿ ವಿ
ಶ್ರುತನೆಂಬಂ ವರಮಂತ್ರಿಯಿಂತೆಸೆವಸ್ಮತ್ಸ್ವಾಮಿ ಸಾಮ್ರಾಜ್ಯದಿಂ ॥॥೧೬॥

ಮ॥ ಚಲ ಗೋತ್ರಾಹಿತನಿಂದ್ನಗ್ನಿಯವಿನೀತಂ ನಿಷ್ಕೃತಾತ್ಮಂ ಯಮಂ
ಸಲೆ ನಕ್ತಂಚರನಲ್ತೆ ನೈರುತಿ ಜಡಂ ವಾರ್ಧೀಶ್ವರಂ ವಾಯು ಸಂ
ಚಲನುನ್ಮತ್ತ ಮನಂ ಕುಬೇರನಭವಂ ತಾನುಗ್ರನೆಂದೇೞಿಪಂ
ಪಲವುಂ ಸದ್ಗುಣ ವೃಂದದಿಂ ಮದಧಿಪಂ ಚಂದ್ರಧ್ವಜಕ್ಷ್ಮಾಧಿಪಂ ॥೧೭॥

ಉ॥ ತನ್ನೃಪ ಕಾಂತೆ ಚಿತ್ರಮತಿದೇವಿ ವಿಚಿತ್ರ ಕಳಾಪ್ರಗಲ್ಭ ಸಂ
ಪನ್ನತೆಯಿಂ ಶ್ರುತೇಶ್ವರಿ ಪರೀವೃತ ಸಚ್ಚರಿತಾತುಳ ಪ್ರಭಾ
ವೋನ್ನತಿಯಿಂದರುಂಧತಿ ನಿರಂತರ ಸಂಪದುದಗ್ರ ಸೌಖ್ಯ ಶೋ
ಭಾನ್ವಿತದಿಂದುಮಾರಮಣಿಯೆಂದೆನೆ ತಾಂ ಪಡೆದಳ್ ಪ್ರಸಿದ್ಧಿಯಂ ॥೧೮॥

ಉ॥ ಆಯತ ಚಿತ್ತೆ ಚಿತ್ರಮತಿ ದೇವಿ ನಿಜೋನ್ನತ ಭಕ್ತಿಯಿಂ ವಿಶೋ
ಭಾಯತಮಪ್ಪ ಚಿತ್ರಕವನಕ್ಕೆ ದಿನಂಪ್ರತಿ ಬಂದು ಬಂದು ಕಾ
ತ್ಯಾಯಿನಿ ದೇವಿಯಂ ಕ್ರಮ ಸಮನ್ವಿತಮಾಗೆ ಸಮಗ್ರ ಸೌರಭ
ಶ್ರೀಯ ಪೊದೞ್ಕೆವೆತ್ತ ಕುಸುಮಾವಳಿಯಿಂದಮೆ ನಿಚ್ಚಮರ್ಚಿಪಳ್ ॥೨೧॥

ಮಿಗೆ ದಿನದಿನಂಗಳೊಳ್ ನೆ
ಟ್ಟಗೆ ರಚನಾಶ್ಚರ್ಯದಿಂದೆ ಕಾತ್ಯಾಯನಿ ದೇ
ವಿಗೆ ವಿವಿಧ ಕುಸುಮಮಯ ಪೂ
ಜೆಗಳಿಂ ಚಿತ್ರಮತಿದೇವಿ ನೆಗೞುತ್ತಿರೆಯುಂ ॥೨೨॥

ಪ್ರತ್ಯಕ್ಷಮಾಗೆ ದಯೆಯಿಂ
ಕಾತ್ಯಾಯಿನಿದೇವಿ ಚಿತ್ರಮತಿದೇವಿಗೆ ತಾ
ನಿತ್ತಳ್ ಪ್ರಸೂನ ಮಾಲೆಯ
ನತ್ಯಧಿಕ ಮನೋಹರಾಂಶು ಮಾಲೆಯನಾಗಳ್ ॥೨೩॥

ಆ ಕುಸುಮಾವಳಿವೆಱಸು ಬಂದು ಚಿತ್ರಮತಿ ಚಿತ್ರಧ್ವಜಂಗಱಿಪಿದಾಗಳ್ -

ಉ॥ ದೇವಿ ಸಮಂತು ಕೂರ್ತು ನಿನಗಾ ಪರಮೇಶ್ವರೀ ಕೊಟ್ಟ ಪುಷ್ಪ ಶೋ
ಭಾವಳಿ ಮಾಲೆಯಿಂದೆ ಸುಕುಮಾರಿ ಕುಮಾರಿಯೊರ್ಬಳಪ್ಪಳೆಂ
ದಾವೃತ ಹರ್ಷನಾಗಿ ನರನಾಥನದಂ ಪದಪಿಂದೆ ಪೇೞೆ ಸಂ
ಭಾವಿಸಿ ಕೇಳ್ದು ಚಿತ್ರಮತಿ ತಾನನುರಾಗಮನಾಗಳೆಯ್ದಿದಳ್॥೨೪॥

ಅಂತು ಸಂತಸಮನೆಯ್ದುತ್ತುಮಿರೆ -

ಚಂ॥ ಜನಿಯಿಸಿದತ್ತು ಚಿತ್ರಮತಿದೇವಿಗೆ ಗರ್ಭಮದಿಂತು ನಾಡೆಯುಂ
ಜನಿಯಿಸೆ ಸೊಂಪನಾಳ್ದೆಸೆವ ಬೆಳ್ವೆಳಗಾನನ ಚಂದ್ರಬಿಂಬದೊಳ್
ಜನಿಯಿಸೆ ನುಣ್ಪುವೆತ್ತ ಪೊಸಕರ್ಪು ಕುಚಂಗಳ ಚೂಚುಕಂಗಳೊಳ್
ಜನಿಯಿಸೆ ಬಿಣ್ಪುಗೊಂಡಲಸಮಾ ನಿಜನಿರ್ಮಳ ಚಿತ್ತವೃತ್ತಿಯೊಳ್ ॥೨೫॥

ತನಗೊಗೆದ ಗರ್ಭ ದರ್ಪದೆ
ತನಮಧ್ಯಂ ತನ್ನನೊತ್ತಿತೆಂಬ ವಿಷಾದಂ
ಘನಮಾಯ್ತು ತನ್ನೊಳೆನೆ ಕ
ರ್ಪಿನೊಳೆಸೆದುದು ತೋರ್ಪ ಬಾಸೆ ತನೃಪಸತಿಯಾ॥೨೬॥

ಚಂ ॥ ಸ್ಮರ ಶರಲಕ್ಷ್ಮಿ ಮೋಹಿಸುವ ಪಗಣೆಯಂ ಪಡೆವಂತೆ ವಿದ್ರುಮೋ
ತ್ಕರ ವನಲಕ್ಷ್ಮಿ ಕಲ್ಪಲತೆಯಂ ಪಡೆವಂತೆ ಜಗನ್ಮನೋಹರ
ಸ್ಫುರದಮೃತಾಂಶುಲಕ್ಷ್ಮಿ ವಿಳಸತ್ಕಳೆಯಂ ಪಡೆವಂತೆ ಭೂಪ ಸೌಂ
ದರಿ ಪಡೆದಳ್ ವಿಚಿತ್ರತರ ರೂಪ ವಿಭಾಸುರೆಯಂ ಕುಮಾರಿಯಂ॥೩೦॥

ಚಂ॥ ವರ ಕುಸುಮಾವಳೀ ಚರಿತ ಪೂಜೆಗಳಿಂ ಪದೆದರ್ಚಿಸಲ್ ಮಹೇ
ಶ್ವರಿ ಮನಮೊಲ್ದು ದೇವಿ ಕುಸುಮಾವಳಿಯಂ ನಿನಗಿತ್ತ ದೂಸಱಿಂ
ನಿರುಪಮ ಪುತ್ರಿಯಂ ಪಡೆದೆಯೀ ಸುತೆಗಾ ಪೆಸರೊಪ್ಪುಗುಂ ದಲೆಂ
ದುರು ಮುದದಿಂದಮಿತ್ತನರಸಂ ಕುಸುಮಾವಳಿಯೆಂಬ ನಾಮಮಂ॥೩೨॥

ಮ॥ ಶ್ರುತವಿದ್ಯಾ ಸಮುದಾಯದೊಳ್ ಸರಸ ವೀಣಾವಾದ್ಯ ಮಾಲಾ ವಿಚಿ
ತ್ರತೆಯೊಳ್ ಚಿತ್ರಕಳಾ ಕಳಾಪದೊಳನೇಕಾಶ್ಚರ್ಯ ವಿಜ್ಞಾನ ಸಂ
ತತಿಯೊಳ್ ತಾಂ ಕ್ಷಿತಿಯೊಳ್ ದ್ವಿತೀಯದ ವರಶ್ರೀ ದೇವಿಯೆಂಬಂತೆ ಸಂ
ಗತಿವೆತ್ತಳ್ ಕುಸುಮಾವಳೀ ಸುದತಿ ಸತ್ಪ್ರಾಗಲ್ಭ್ಯ ಸಂಪತ್ತಿಯಿಂ॥೩೯॥

ಚಂ॥ ಪ್ರತಿದಿನ ವರ್ಧಮಾನ ವಿಭವಂಬಡೆದಿರ್ದಪುವೀ ಲಸತ್ಕುಚ
ದ್ವಿತಯಮಿದಿತ್ತಲೀ ಜಘನಮಾವಗಮುರ್ಬಿದ ಕೊರ್ವುವೆತ್ತುದಾ
ನತಿಕೃಶ ವೃತ್ತಿಯಾದೆನೆನುತುಂ ಪಿರಿದುಂ ಬಡವಾದವೋಲ್ ಮಹೀ
ನುತ ಕುಸುಮಾವಳೀ ಸತಿಯ ತಾಂತ ವಿಯತ್ತನು ಮಧ್ಯಮೊಪ್ಪುಗುಂ॥೫೧॥

ಆವಗಮನ್ಯಕ ನೃಪತಿ ತತಿ
ತಾನೆಱೆದಟ್ಟುವುದು ನಮ್ಮ ಕುಸುಮಾವಳಿಯಂ
ನಾವಾರ್ಗೆ ಕುಡುವುದೆಂದವ
ನೀವಲ್ಲಭನಿಂತು ಮಂತ್ರಿಯಂ ಬೆಸಗೊಂಡಂ ॥೬೮॥

ಉ॥ ಭೂತಳದಲ್ಲಿ ಭಾವಿಸುವೊಡೀ ಕುಸುಮಾವಳಿದೇವಿಯೊಂದು ರೂ
ಪಾತಿಶಯಕ್ಕೆ ಸಾಟಿಯ ನೃಪಾತ್ಮಜರೆಂತುಮದಿಲ್ಲ ದೇವ ಸಂ
ಪ್ರೀತಿಯೊಳೆಲ್ಲರಂ ಬರಿಸಿ ಮಾೞ್ಪುದು ನಾವೆನಸುಂ ಕುಮಾರಿಗಿಂ
ತೀ ತೆಱದಿಂ ಸ್ವಯಂವರಮನೆಂದೆನೆ ವಿಶ್ರುತ ಮಂತ್ರಿ ರಾಗದಿಂ॥೬೯॥

ಉ॥ ಆ ವರಮಂತ್ರಿ ವಿಶ್ರುತನ ಬಿನ್ನಪಮಂ ಬಗೆಗೊಂಡು ಬೇಗದಿಂ
ಭೂವರನಾ ಸ್ವಯಂವರಕೆ ತಕ್ಕನಿತುಂ ವಿಭವಂಗಳಂ ವಿಶೋ
ಭಾವಹಮಾಗೆ ಮಾಡಿ ಬರಿಸಲ್ ಬರುತಿರ್ದುದು ಕೂಡೆ ನಾಡೆ ನಾ
ನಾ ವಿಷಯ ಪ್ರಸಿದ್ಧಿಯ ಕುಲೋದ್ಭವ ವಿಕ್ರಮ ಭೂವರೋತ್ಕರಂ॥೭೦॥

ಆ ಸಮಯದೊಳ್ ಚಿತ್ರಮತಿ ಮಹಾದೇವಿ ಕುಸುಮಾವಳಿದೇವಿಸಹಿತಂ ಕಾತ್ಯಾಯನೀ ದೇವಿಗೆ ಚಿತ್ರಪೂಜೆಯಂ ಮಾಡಲೆಂದು ಚಿತ್ರಕೋದ್ಯಾನಕ್ಕೆ ವಂದಾಗಳ್ -

ಅರಸಿ ಪರಮೇಶ್ವರಿಯ ಮಂ
ದಿರಮಂ ತಾನೆಸೆವ ಕುಸುಮಪೂಜಾ ನಿಕರಂ
ಬೆರಸಿಂತು ಪೊಕ್ಕಳುಣ್ಮಲ್
ಸರಭಸದಿಂದುಚಿತವಾದ್ಯನಿಚಯನಿನಾದಂ॥೭೨॥

ಮತ್ತಮಾಗಳ್-

ಚಂ ॥ ಅರಸಿ ಮಹೇಶ್ವರೀ ಪದಪಯೋಜಮನರ್ಚಿಸುವನ್ನೆಗಂ ನಿರಂ
ತರಮೆಸೆವೀ ವನಾತಿಶಯಮಂ ಕಳಭಾಷಿಣಿಕೂಡೆ ನೋೞ್ಪಮೆಂ
ದುರು ಮುದದಿಂದೆ ಕೈವಿಡಿದು ತಾಂ ಕುಸುಮಾವಳಿದೇವಿ ಕನ್ಯಕಾ
ಪರಿಕರಯುಕ್ತದಿಂ ತಳರೂದು ನೋಡುತುಮೊಯ್ಯನೆ ಪೋಗೆವೋಗೆಯುಂ॥೭೩॥

ವಸುಧೆಯೊಳಡಂಗಿರದೆ ನೆಗೆ
ದೆಸೆವ ಕಡಾರಮನೆ ಬಡವನಡಿಮೊದಲೊಳಭೀ
ಕ್ಷಿಸಿ ಕಾಣ್ಬ ತೆಱದೆ ತೊಟ್ಟನೆ
ಕುಸುಮಾವಳಿದೇವಿ ಚಿತ್ರಪಟಮಂ ಕಂಡಳ್॥೮೦॥

ಚಂ॥ ನಿರುಪಮಿತ ಪ್ರದೇಶ ಪರಿಶೋಭೆಯನಾ ಸಮುದಾಯಶೋಭೆಯಂ
ಸುರುಚಿರ ವರ್ಣಶೋಭೆಯನುಪೇತವರಾಂಗ ಶೋಭೆಯಂ
ವರತರ ಮೂರ್ತಿಶೋಭೆಯನಭೀಕ್ಷಿಸುತಿರ್ದುವಲಂಪಿನಿಂ ತನೂ
ದರಿ ಕುಸುಮಾವಳೀ ವಿಲುಳಿತಾಕ್ಷಿಗಳಾ ಪಟಲೇಖ್ಯ ಚಿತ್ತದೊಳ್ ॥೮೧॥

ಚಂ॥ ಮಿಗೆ ಸೊಗಯಿಪ್ಪ ತತ್ಪಟದ ಚಿತ್ರ ವಿಶೋಭೆಯನೀಕ್ಷಿಸಲ್ಕವಾಂ
ತೊಗೆದವು ತಾಮೆನಲ್ಕೆ ಕುಸುಮಾವಳಿದೇವಿಯ ಕೋಮಲಾಂಗದೊಳ್
ನೆಗೆದುವು ನಾಡೆ ಘರ್ಮಜಲ ಬಿಂದುಗಳೊಳ್ ಪೊದೞ್ದಾದಮಾ ಮುದ
ಶ್ರುಗಳಿರದುಣ್ಮಿದಾ ಮನದ ಸೊಲ್ಲಮನಾಗಳೆ ಸೂಚಿಪಂದದಿಂ ||೮೩॥

ಉ॥ ಕಂತು ನವೀನ ರಾಗ ರಸಮುತ್ಕಟಮಾಗೆ ಮನಕ್ಕೆ ತೋಳ್ಗಳೋ
ರಂತಮರ್ದಪ್ಪ ಲವ್ವಳಿಸಲುಚ್ಚ ಕುಚಂ ತೊನೆವಂತೆ ಗಾತ್ರವೆ
ತ್ತಂತನಿಗೆತ್ತಲಾ ಕ್ಷಣದಿನಾ ಪಟಚಿತ್ರದ ಮೇಲೆ ಪಾಯ್ದು ವಿ
ಭ್ರಾಂತಿ ಕರಂ ಪೊದೞ್ದು ಕುಸುಮಾವಳಿ ಮೂರ್ಛೆಯನಾಗಳೆಯ್ದಿದಳ್॥೮೪॥

ಆ ಸಮಯದೊಳ್ ನಿರ್ವರ್ತಿತ ಪೂಜಾಕೃತಿಯಾಗಿ ಚಿತ್ರಮತಿ ಮಹಾದೇವಿ ಕುಸುಮಾವಳೀ ದೇವಿಯಂ ಕಾತ್ಯಾಯಿನಿದೇವಿಗೆ ಪೊಡೆಮಡಿಸಲ್ವೇಡಿ ನೋಡಿ ಕಾಣದೆ ಪೊಱಗೆ ನಿಂತು ನೋೞ್ಪಾಗಳ್ -

ಕನಕಲತೆ ಪೋಗಿ ದೇವಿಗೆ
ವಿನತಾನನೆಯಾಗಿ ಬೇಗದಿಂ ಕಿವಿಯಂ ಸಾ
ರ್ದಿನಿತಾನುಮಱಿಪಿದಳ್ ತೊ
ಟ್ಟನೆ ಕುಸುಮಾವಳಿಗೆ ತೊಡರ್ದ ಮೂರ್ಛೆಯ ತೆಱನಂ॥೧೧೬॥

ಅದಂ ಕೇಳ್ದು ವಿಸ್ಮಯಸ್ವಾಂತೆಯಾಗಿ -

ಆನೊಂದಂ ನೆಗೞ್ದೆೞ್ತರೆ
ತಾನೊಂದಂ ನೆಗೞ್ದಳಲ್ತೆ ಪರಮೇಶ್ವರಿ ಮ
ತ್ತೇನನಿದನೆನುತುಮಾಗಳ್
ಮಾನಿನಿ ಚಿತ್ರಮತಿದೇವಿ ಭೋಂಕನೆ ಬಂದಳ್॥೧೧೭॥

ಚಂ॥ ಮಿಸುಪ ಸುರೇಖೆ ರೂಪ ರುಚಿ ರಂಜಿಸುವಾ ಪಟಚಿತ್ರಮಂ ನಿರೀ
ಕ್ಷಿಸಿ ಬೆಱಗಾಗಿ ಚಿತ್ರಮತಿದೇವಿ ಸಮತಿಂದು ನೋಡೆ ನಾಡೆ ಸೋ
ಲಿಸಲಿದು ತಕ್ಕುದಲ್ತೆ ಕುಸುಮಾವಳಿದೇವಿಯನೆಂದೆನುತ್ತೆ ಭಾ
ವಿಸಿ ಪಿರಿದುಂ ಬೆರಲ್ ಮಿಡಿದು ತೂಗಿದಳಾತ್ಮ ಶಿರಸ್ಸರೋಜಮಂ॥೧೧೮॥

ಮ॥ ಇದು ಕಾತ್ಯಾಯನಿದೇವಿ ಮಾಡಿದುದೆ ಮೇಣಂತಲ್ಲಿದಂದಿಲ್ಲಿ ಕ
ಟ್ಟಿದರಾರೀ ಪಟಮಂ ಪೊದೞ್ದಿನಿತು ರೂಪಾಶ್ಚರ್ಯಭಾವಂ ನರ
ರ್ಗದು ತಾನೆಲ್ಲಿಯದೇಂ ವಿಚಿತ್ರಮೊ ಪೆಸರ್ ಕಂದರೂಪದೇವಂ ಗಡಾ
ಮದನಾಕಾರದಲಿರ್ದನಕ್ಕುಮೆನುತಿರ್ದಳ್ ದೇವಿ ಮೇಧಾವಿಳಾ॥೧೧೯॥

ದೇವಿ ತಡಮಾಯ್ತು ನಿಮ್ಮಂ
ದೇವಿ ಬರಲ್ವೇೞ್ದಳಾ ಮಹಾದೇವಿಗೆನು
ತ್ತಾವೇಗದೆ ಕುಸುಮಾವಳೀ
ದೇವಿಯನೊಡಗೊಂಡು ಮೆಲ್ಲನಲ್ಲಿಂ ತಳರ್ದೆಂ॥೧೨೪॥

ಉ॥ ತಾನರಸಂಗೆ ಬಂದರಸಿ ತತ್ಕುಸುಮಾವಳಿದೇವಿ ಚಿತ್ರಕೋ
ದ್ಯಾನದೊಳಾ ವಿಚಿತ್ರಪಟ ಪುರುಷನಂ ನಡೆ ನೋಡಿ ಸೋಲ್ತು ಮೂ
ರ್ಛಾ ನಿಚಿತಾತ್ಮೆಯಾದ ತೆಱನಂ ನೆಱೆ ಪೇೞ್ದೊಡೆ ಕೇಳ್ದು ವಿಸ್ಮಯಾ
ಸೀನ ಮನಸ್ಕನಾಗಿ ಬೆರಗಾದನಿದೇನೆನುತುಂ ನರೇಶ್ವರಂ ॥೧೨೮॥

ಮ॥ ಭವೆ ನಿನ್ನೀ ಪ್ರಿಯ ದತ್ತಪುತ್ತ್ರಿಕೆಗೆ ಚಿತ್ರಾವಸ್ಥೆ ಕೈಕೊಂಡುದೆ
ನ್ನ ವಶಂ ತಾನಣಮಲ್ತು ದೇವಿದಯೆಯಂ ನೀಂ ಮಾೞ್ಪುದೆಂದರ್ಥಿಸು
ತ್ತವೆ ಕಾತ್ಯಯನಿ ದೇವಿಗೀಕೆವೆರಸಾಗಳ್ ನಮ್ರೆಯಾಗಿರ್ದೆನಾ
ನವಧಾನಂ ಧೃತಿಯಿಂ ಕೞಲ್ದು ಪಿರಿದಾನುಂ ಪೊೞ್ತು ಮೇಧಾವಿಳಾ॥೧೬೮॥

ಕಳಭಾಷಿಣಿ ಪೇೞ್ದುದನಾ
ಗಳೆ ನೆಱೆ ಕೇಳ್ದೊಯ್ಯನನೊರ್ಬರೊರ್ಬರ ಮೊಗಮಂ
ಘಳಿಲನೆ ವಿಕ್ಷಿಸಿ ಮೇಧಾ
ವಿಳನುಂ ಕಂದರ್ಪ ದೇವನುಂ ಬೆಱಗಾದರ್॥೧೭೪॥

ಚಂ॥ ಎನಗದು ಸತ್ಯಮಾಯ್ತೊಗೆದ ದಿವ್ಯ ರವಂ ನೆಱೆ ಪೇೞಲೆನ್ನ ಮಾ
ತನೆ ಮಿಗೆ ಕೇಳ್ದು ಬಾಳ್ವ ಕುಸುಮಾವಳಿದೇವಿಗೆ ದೇವ ಸತ್ಯಮೆಂ
ದೆನಿಪುದು ಬಂದು ನೀಮೆನಿತುಮಾ ಕಳಭಾಷಿಣಿ ಗಾತ್ರ ವಲ್ಲರೀ
ವಿನಮಿತ ಗಾತ್ರೆಯಾದಳವನೀಶ ಮನೋಜ ಪದಾಬ್ಜ ಮೂಲದೊಳ್॥೧೭೫॥

ಮ॥ಸ್ರ॥ ಮೊದಲೊಳ್ ಕಂಡಲ್ಲಿ ನೀವೀಕೆಗೆ ಮಿಗೆ ಮೊಗಮಿತ್ತಿರ್ದಿರಿರ್ದಂದದಿಂ ಮಾ
ೞ್ಪುದು ದೇವರ್ ಪೂಣ್ದಿವಳ್ಗೆಂದುದನೆನುತಮೆ ಮೇಧಾವಿಳಂ ಬಿನ್ನಪಗೆ
ಯ್ವುದನಾದಂ ಕೇಳ್ದು ನೀನೆಂಬಿನಿತನಬಲೆ ದಲ್ ಮಾೞ್ಪೆವೇೞೆಂದೆನುತ್ತೊ
ಪ್ಪಿದನೆೞ್ದಂ ಲೀಲೆಯಿಂದಂ ಕೃತಿರತಿ ರಮಣಂ ಸಾಹಸೋದ್ದಾಮಭೀಮಂ ॥೧೭೬॥

ಇದು ಕಮನ ಕುಧರೇಂದ್ರ ನಂದನಾ ಲೋಲ ಲೋಚನ ಚಕೋರೀ ಸುಖಪ್ರದ
ಪರಮಾಂಗ ಕಾಂತಿ ಸಂತಾನ ಸಾಂದ್ರ ಚಂದ್ರಿಕಾ ವಿಭವ ಶೋಭಾಯಮಾನ
ಶ್ರೀ ವಿಶ್ವನಾಥ ಚರಣ ನಖ ಮಯೂಖೋತ್ಪಲ್ಲಮಲ್ಲಿಕಾ ಶೇಖರ
ಕಂದರ್ಪದೇವ ಪ್ರಭಾವ ಪ್ರಶಂಸೋಲ್ಲಸಿತ ಕುಸುಮಾವಳೀ
ಮಹಾಪ್ರಬಂಧದೊಳ್ ಕುಸುಮಾವಳೀ ಲಲಿತೋದಯ
ವರ್ಣನಂ ಕಮನೀಯ ರೂಪವರ್ಣನಂ
ಚಿತ್ರಪಟ ದರ್ಶನ ವರ್ಣನಂ
ಕುಸುಮಾವಳೀ ವಿರಹ ವರ್ಣನಂ
ದ್ವಾದಶಾಶ್ವಾಸಂ.  

ತ್ರಯೋದಶಾಶ್ವಂ.

ಚಂ॥ ಪರಿಜನಂ ಪುರೀಜನಮನಾರುಮನೀಯೆಡೆಯಲ್ಲಿ ಕಾಣದಂ
ತಿರದೊಡಗೊಂಡು ಪೋಪಿದುವೆ ಕಾರ್ಯಮಿದಲ್ಲದೆ ಕಾಣರಾರೆನು
ತ್ತುರವಣೆಯಿಂದಮೀ ತೆರದೊಳೀ ನೃಪಕಂತುವನುಯ್ವೆಯಾದೊಡಂ
ಕರತಳದಲ್ಲಿ ಬಯ್ತಿನನುಯ್ವ ಮರುಳ್ಗೆಣೆಯಾಗದಿರ್ದಪಯ್ ॥೩೧॥

ಇಂತೆಂದ ಸಚಿವಸುತನ ವಚನಕ್ಕಂತೆಗೆಯ್ವೆನೆಂದು ಕಳಭಾಷಿಣಿ ಪರಿಲಬ್ಧ ಪ್ರಸಾದೆಯಾಗೆ ಪವನಂಜಯಾಶ್ವನನೇಱಿ ನೃಪಕಂತುವಂ ಪೆಱಗೇಱಿಸಿ ಕೊಂಡು ಮೇಧಾವಿಳಂ ಪರಿಕಲಿತ ಶಿಶಿರೋಪಚಾರ ವಸ್ತುವ್ರಾತನಾಗಿ ಬರೆ ಪುರಮಂ ಪೊಕ್ಕು ನಿಜಾಗಾರ ದ್ವಾರದೊಳ್ ತುರಂಗಮದಿಂದವನಿತಳಕ್ಕವತರಿಸಿದಾಗಳ್ -

ಉ॥ ಒಟ್ಟಜೆಯಿಂದೆ ಮೆಯ್ವೆಳಗು ಸಂಜೆಯ ಕೞ್ತಲೆಯಂ ಕಡಂಗಿ ಬೆಂ
ಗುಟ್ಟುತಿರಲ್ಕೆ ನಿಂದೆಸೆಯುತಿರ್ದ ನರೇಂದ್ರ ಮನೋಭವಂಗೆ ಕೈ
ಗೊಟ್ಟೊಡಗೊಂಡು ಬಂದು ಕಳಭಾಷಿಣಿ ಪೊಕ್ಕಳಪೂರ್ವ ಸೋಭೆಯಿಂ
ದಿಟ್ಟಿಗೆ ಬೀರುವೊಂದು ತುಹಿನೋಪಲದೊಪ್ಪುವ ಗುಪ್ತ ಗೇಹಮಂ ॥೩೨॥

ಉ॥ ಕಾರಣಮಾವುದಿಂದಿನಿತು ವೇಗದಿನೆನ್ನಯ ಸಾರ್ಗೆ ವಂದೆ ಮಂ
ದಾಕಿನಿ ದೇವಿಯೆಂತು ವಿರಹಾಗ್ನಿಯೊಳಿರ್ದಪಳಲ್ಲಿ ಸೇವೆಗಾ
ರಾರಿರುತಿರ್ದಿರೇನೆನಗೆ ಕೋಪಿಸುತಿರ್ದಳೆ ಪೇೞೆನುತ್ತುಮಾ
ದ್ವಾರಮುಖೋರ್ವಿಯಲ್ಲಿ ಕಳಭಾಷಿಣಿ ತಾಂ ಬೆಸಗೊಂಡಳಂಜುತುಂ॥೩೯॥

ಉ॥ ನೀಂ ಪೊಱಮಟ್ಟು ಬಂದೆ ಕಳಭಾಷಿಣಿ ಬಂದ ಬೞಿಕ್ಕಮಾರೊಳಂ
ತು ಪೆಱತೊಂದುಮಂ ನುಡಿಯದೇನುಮನೀಕ್ಷಿಸದಂಗಜಾಗ್ನಿ ತಾ
ಪಂ ಪಿರಿದಾಗೆ ಮಾೞ್ಪ ಶಿಶಿರ ಕ್ರಿಯೆಯಂ ಕರದಿಂ ನಿವಾರಿಸು
ತ್ತುಂ ಪದೆಪೞ್ಗಿ ವಿಸ್ಮೃತಿಯನೆಯ್ದಿದಳಾಗಳೆ ದೇವಿ ಶಯ್ಯೆಯೊಳ್ ॥೪೧॥

ಚಂ॥ ಮುಗಿದ ಕಟಾಕ್ಷದಿಂದಮುದಿರ್ವಶ್ರುಗಳೊಳ್ ಪೊಳೆವುತ್ತಮಾಸ್ಯದಿಂ
ದೊಗೆವ ನಿಜೋಚ್ಚ ನಿಶ್ವಸಿತಮೊಯ್ಯನೆ ಮಗ್ಗುಲನೋಷ್ಠ ಬಿಂಬದಿಂ
ಮಿಗು ಮಿಗುತಿರ್ಪ ಮೆಯ್ದೆಗೆಯುತ್ತುಂ ವಿರಹಾನಳನೊಳ್ ಮುೞುಂಗಿ ನೆ
ಟ್ಟಗೆ ಬಗೆಗುಂದುತಿರ್ದಳೆನಸುಂ ಕುಸುಮಾವಳಿ ದೇವಿ ಶಯ್ಯೆಯೊಳ್ ॥೪೭॥

ಚಂ॥ ಭಯ ಚಕಿತಾತ್ಮೆಯಾಗಿ ಕಳಭಾಷಿಣಿ ಭೂಪ ಮನೋಭವಂಗೆ ದೇ
ವಿಯ ತೆಱವೆಂತುಟೆಂಬುದನೆ ಮುಂ ಕೆಳೆಯಂ ಬೆಱಸೆಯ್ದೆ ಕೇಳ್ದು ವಿ
ಸ್ಮಯ ಮನನಾಗುತಿರ್ದೊಡನವಳ್ ಮಗುಳಾಗಳೆ ಪೇೞ್ದು ದೇವ ನಿ
ಮ್ಮಯ  ನಯನಾಂಶು ಭಾಜನೆಯನಾಗಿಪುದೀಗಳೆ ಬಂದು ಕಾಂತೆಯಂ ॥೬೪॥

ಇನಿಯಳ ತನು ಸಂಗಮನಾಂ
ಪನುವಿಂ ತಾನಲ್ತೆ ಬಂದನನುಪಮನೆನುತುಂ
ತನು ರುಚಿ ಮುಂಬರಿಯೆ ಮನೋ
ಜ ನರೇಂದ್ರಂ ಜವದೆನಿಂತು ನಡತರುತಿರ್ದಂ॥೬೯॥

ಮ॥ಸ್ರ॥ ಇರದತ್ಯಾಸಕ್ತಿ ಮುಂದುಯ್ದುದು ತವಕದಿನೆಂಬಂತಿರಾತ್ಮೀಯ ನೇತ್ರ
ಸ್ಫುರಿತಾಂಶು ಶ್ರೇಣಿ ತಾಂ ಮುಂಬರಿಯೆ ನೃಪ ಮನೋಜಂ ತುಷಾರೋಲ್ಲಸನ್ಮಂ
ದಿರಮಂ ಸಾರ್ತಂದು ಬಲ್ಮುತ್ತುಗಳೊಳೆಸೆವ ನೀಲಂಗಳಂ ಕೋದವೋಲ್ ಷ
ಟ್ಚರಣ ವ್ಯಾಮಿಶ್ರದಾ ಪೂವಿನ ತೆರೆಯೆಡೆಯೊಳ್ ಬಂದು ನಿಂದಿರ್ದನಾಗಳ್ ॥೭೫॥

ಆ ಸಮಯದೊಳ್ -

ಮ॥ಸ್ರ॥ ವಿಲಸಲ್ಲಾವಣ್ಯ ಶೇಷ ಸ್ಥಿತಿಯೆನಿಪ ಕೃಶಾಂಗಂ ಬೆಳರ್ಪೇಱಿದಾಸ್ಯೋ
ಜ್ಜ್ವಲ ಪದ್ಮಂ ತ್ಯಕ್ತಹಾರ ಸ್ತನಕಲಶಯುಗಂ ವ್ಯಸ್ತ ಭೃಂಗಾಳಕಂ ಪ್ರ
ಸ್ಖಲಿತೋದ್ಯದ್ವೇಣಿ ಬಾಸುೞ್ವೆರದಮಳ ಕಪೋಲ ಸ್ಥಳಂ ತಾಪದಿಂದಿ
ರ್ಪಳಿದಾ ಬಿಂಬಾಧರಂ ನೂರ್ಮಡಿಸಿತಬಲೆಯೊಳ್ ತೋರ್ಪ ಸೌಂದರ್ಯದೊಳ್ಪಂ॥

ತನುತೆ ನೆಲೆಗೊಂಡು ಮೊಗಮೊ
ಯ್ಯನೆ ಶಬ್ದದ ಸುೞಿವನುೞಿದು ತರುಣಿ ಲಸದ್ವಾ
ಹಿನಿಯಂತೆ ಕಂಠಗತ ಜೀ
ವನೆಯಾಗಿರ್ದಳನಿಳೇಶ ಮದನಂ ಕಂಡಂ॥೭೭॥

ದೇವಿ ಪೆಱತೇಂ ಭವಚ್ಚೇತೋ
ವರ ಕಂದರ್ಪದೇವ ದರ್ಶನಮೆನಗಾ
ಯ್ತಾ ವನದೊಳಿಂತು ತಡೆದೆನ
ದೇವೇೞ್ವೆನೆನುತ್ತುಮಬಲೆ ತಾನಿಂತುಸಿರ್ದಳ್ ॥೮೯॥॥

ಮ॥ ಇನಿಯಂ ಕಣ್ಬೊಲನಾದನೆಂಬ ನುಡಿ ಕರ್ಣೋಪಾಂತಮಂ ಸೋಂಕೆ ಮೆ
ಯ್ಯನಿಲಂ ಸೋಂಕಿದ ಕಲ್ಪವಲ್ಲಿಯವೊಲಾಗಳ್ ಕಂಪನಂಗೊಂಡು ತೊ
ಟ್ಟನೆ ರೋಮಾಂಚಮನಪ್ಪುಕೆಯ್ದು ನಯನಂ ಹರ್ಷಾಶ್ರುಮಂ ತಾಳೆ ಕಾಂ
ತೆ ನಾಜ ಸ್ವಾಂತದೊಳಾದ ಸೌಖ್ಯ ಸುಧೆಯೊಳ್ ತಾನಿರ್ದಳೋಲಾಡುತುಂ॥೯೦॥

ಮ॥ ತರದೇಂ ಬರ್ಪುದೆ ತೊಟ್ಟನಿಲ್ಲಿಗೆ ಮಹೀಭೃತ್ಕಂತುವಂ ದೇವಿ ಮೆ
ಯ್ಗರೆದಾತಂ ಬರವೇೞ್ಕುಮೆಂದಿರದೆ ನಿನ್ನಂ ತಂದೆ ಚಂದ್ರಧ್ವಜಂ
ಪಿರಿದುಂ ಕಾಯ್ಗುಮೊ ಕಾಯದಿರ್ಕುಮೊ ಸಮಂತೆಂದಗಳಾನಂಜಿ ಸಾ
ದರದಿಂ ತಂದೆನದೊಂದು ಗುಪ್ತ ಕುಟಿಗಿಂತೀಗಳ್ ಭವತ್ಕಾಂತನಂ॥೯೭॥

ಎಂದು ಇಂತು ಬಿನ್ನವಿಸಿದ ಕಳಭಾಷಿಣಿಯ ವಚನಕ್ಕೆ ಚಕಿತಮತಿಯಾಗಿ -

ಉ॥ ನೀನತಿ ಬುದ್ಧಿವಂತೆ ಕಳಭಾಷಿಣಿಯೆನ್ನದೆ ದುಃಪ್ರವೇಶಮೆಂ
ದಾ ನೃಪ ಕಂತುಗಿಂತುಸಿರ್ವರೇನಿನನೀ ನುಡಿಗೇಳ್ದು ಬೇಸಱಂ
ತಾನೊಳಕೈಯದಿರ್ದಪನೆ ಪೋದಪನೆಂಬಭಿಶಂಕೆಯಿಂ ಕರಂ
ಜಾನಿಸುತಿಕ್ಕಿದಳ್ ಕದಪನಾ ಕುಸುಮಾವಳಿ ಪಾಣಿ ಪದ್ಮದೊಳ್॥೯೮॥

ಮ॥ಸ್ರ॥ ಇನಿಯಂ ತಾಂ ಬಂದನೆಂಬಾಳಿಯ ನುಡಿ ಕಿವಿಯಂ ತಾಗಿದಾವೇಗದಿಂ ಜು
ಮ್ಮನೆ ಘರ್ಮಂ ಪೊಣ್ಮೆ ಗಾತ್ರಂ ನಡುಗೆ ಮುಖಸರೋಜಂ ವಿವರ್ಣಕ್ಕೆ ಪಕ್ಕಾ
ಗೆ ನಿಜ ಸ್ವಾಂತಂ ಪ್ರಕಾಶಂಗೊಳುತಿರೆ ತೆರೆದಶ್ರೂದ ಮಿಶ್ರಾಕ್ಷಿಯಂ ಭೋಂ
ಕನೆ ಭೂಭೃತ್ಕಂತುವಂ ನೋಡಿದಳಬಲೆ ಸಮಂತೊಂದಿದಾಹ್ಲಾದದಿಂದಂ ॥೧೦೯॥

ಮ॥ಸ್ರ॥ ತಳಮಂ ತಳ್ತೂರಿಶಮೆಯ್ಯಂ ಮುರಿದಲರ್ವಸೆಯಿಂದೇೞುತಿರ್ಪಲ್ಲಿ ಶಯ್ಯಾ
ತಳಮಂ ಸಾರ್ತರ್ಪ ಕಂದರ್ಪನ ಬರವು ಕರಂ ಕ್ರೀಡೆಯಂ ಬೀಱೆ ತತ್ಕೋ
ಮಳೆ ಪಾಯ್ದಾಲಿಂಗನಂಗೆಯ್ದೊಗೆದ ಪುಳಕ ಸಂದೋಹದೊತ್ತಂಬದೊಳ್ ತಾಂ
ಮುೞುಗಿರ್ದಾಗಳ್ ನಿತಾಂತಂ ಪಡೆದಳತನು ಸೌಖ್ಯಾಮೃತಾಸಾರದೊಳ್ವಂ ॥೧೧೦॥

ಅಂಗಾಂಗ ಸಂಗಮದಿಂದಮ
ನಂಗಸುಖಂ ಸಮನೆ ಸಮನಿಸುತ್ತಿರೆಯುಂ ಭೂ
ಪಂಗಜನುಮನಾ ಲಲಿತ ಲ
ತಾಂಗಿಯುಮಾಂತಿರ್ದಳಲರ್ದ ಮಿಸುಪಲರ್ವಸೆಯೊಳ್॥೧೧೧॥

ಅಂತವರೊರ್ಬರೊರ್ಬರ್ ಪರಸ್ಪರಾಲೋಕನಮಾತ್ರದಿಂ ಪರಮ ಸುಖ ಪೀಯೂಷ ಪರಿತೃಪ್ತರಾಗಿ ಕುಸುಮಾವಳೀ ದೇವಿಯುಂ ಕಂದರ್ಪದೇವನುಮಿರ್ಪುದುಂ ಆ ಸಮಯದೊಳ್ ಮೇಧಾವಿಳನಿಂತೆಂದಂ -

ಮ॥ಸ್ರ॥ ಇರದೀಗಳ್ ಪೋಗಿ ನಾಮಿಂತಱಿಪಿ ಕಳಿಪೆಯುಂ ಶಿಷ್ಟರೆೞ್ತಂದು ವಿಶ್ವಂ
ಭರ ಭೂಪಂ ಬೇಡಿದಂ ತ್ವತ್ಸುತೆಯನೊಸೆದು ಕಂದರ್ಪ ದೇವಂಗೆನಲ್ ಚ
ಚ್ಚರದಿಂ ಚಂದ್ಧ್ವಜೋರ್ವೀಪತಿ ಪದೆದಿದಿರ್ವಂದಿವನೀ ದೇವಿಯಂ ಬಿ
ತ್ತರಮಾಗಲ್ ದೇವ ಕೈಕೊಳ್ವುದು ಪರಿಣಯನಖ್ಯಾತಿಯಂ ಪ್ರೀತಿಯಿಂದಂ ॥೧೧೨॥

ತನಗಿಂತಾ ಮೇಧಾವಿಳ
ನೆನೆ ಕೇಳುತ್ತಿರ್ದು ಚಿತ್ತದೊಳ್ ಬಗೆಗೊಂಡೊ
ಯ್ಯನೆ ನೋಡಿದನಾಗಳ್ ಮಾ
ನಿನಿ ಕುಸುಮಾವಳಿಯ ವದನಮಂ ನೃಪಮದನಂ ॥೧೧೩॥

ಮ॥ ಇರಲೇಂ ಬರ್ಪುದೆ ದೇವಿ ಪೇೞ್ ಬಗೆವೊಡೀ ಮೇಧಾವಿಳಂ ಪೇೞ್ದವೋಲ್
ಬರಿಪೆಂ ನಿನ್ನಯ ತಾತನಂ ತಡೆಯದಸ್ಮಾತ್ತಾತನೊಂದಾಗೆಯುಂ
ಪರಮ ಪ್ರೀತಿಯವರ್ಗೆ ಪುಟ್ಟೆ ನೆಗೞ್ವೆಂ ವೈವಾಹಮಂ ನಿನ್ನೊಳಾಂ
ಬರೆ ಪಾರುತ್ತಮೆ ನೀನಿರೆಂದು ನುಡಿದಂ ಭೂಪಾಲ ಪುಷ್ಪಾಯುಧಂ ॥೧೧೫॥

ಮ॥ಸ್ರ॥ ಎನಗೀಗಳ್ ಪೋಪಮೇೞೆನ್ನದೆ ವಿವರಿಸಿಯಿಂ ಪೋಪೆನೆಂದೇಕದುಂ ತೊ
ಟ್ಟನೆ ಪೇೞಲ್ ದೇವ ಮಚ್ಚಿತ್ತಮನಱಿಯದನೇ ಪಿಂಗಿ ಪಿಂತಾನಿರಲ್ ಬ
ಲ್ಲೆನೆ ಒಯ್ಯಲ್ಬಾರದೆಂಬೀ ನೆವದಿನಿರಿಸಿ ನೀಂ ಪೋಗೆಯುಂ ನಿಲ್ಕುಮೆಂತೀ
ತನು ತಾಂ ಸೌತ್ಸುಖ್ಯಮಪ್ಪೆನ್ನಸು ಬೞಿವಿಡಿದೇಂ ಬಾರದೇ ನಿನ್ನ ಬೆನ್ನೊಳ್ ॥೧೧೯॥

ಉ॥ ನೀವೊಡಗೊಂಡು ದೇವಿಯರನುಯ್ವುದು ನಮ್ಮ ಪುರಕ್ಕೆ ದೇವ ಮ
ತ್ತಾವುದಗಾಧಮಾಂ ತಡೆಯದೀ ಕಳಭಾಷಿಣಿ ಮುಖ್ಯಮಪ್ಪ ಕ
ನ್ಯಾವಳಿಯೆಲ್ಲಮಂ ಪೆಱಗಣಿಂ ನೆಱೆ ತಂದಪೆನೆಂದೆನುತ್ತೆ ಮೇ
ಧಾವಿಳನಂತೊಡಂಬಡಿಸಿದಂ ನರನಾಥ ಮನೋಜನಂ ನೃಪಾ ॥೧೨೪॥

ಇಂತು ಸಮಾಳೋಚಿಸಿ ಕಳಭಾಷಿಣೀ ನಿವಾಸದೊಳಿರ್ದ ಪವನಂಜಯಾಶ್ವನಂ ಪಲೂಲಣಿಸಿ ಕರಿಸೆ ಕಂದರ್ಪದೇವಂ ಕುಸುಮಾವಳಿ ದೇವಿವೆರಸು ಸಮಾರೂಢನಾಗಿ ಮೇಧಾವಿಳನಂ ತಡೆಯಪ್ಪುದೆಂದು ನೇಮಿಸಿ ನೀನಿಲ್ಲಿಯೆ ನಿಲ್ಲೆಂದು ನಿಲಿಸಿ -

ಮ॥ಸ್ರ॥ ಕಮಳಕ್ಕುದ ಅಬೋಧ ಭಾಸ್ವದ್ವಿಭವಮನೆನಸುಂ ಬೀಱುತುಂ ವಾಸರ ಶ್ರೀ
ರಮಣೀಸಂಗಾನುರಕ್ತಂ ರವಿ ಪೊಱಮಡುತಿರ್ಪಲ್ಲಿ ತಾನೇಱಿ ದಿವ್ಯಾ
ಶ್ವಮನಾತ್ಮ ಶ್ರೀ ಸಮೇತಂ ತ್ವರಿತದೆ ಪೊಱಮಟ್ಟಂ ಮಹಾ ಚಿತ್ರಕೋದ್ಯಾ
ನಮನಾಗಳ್ ರಾಗದಿಂದಂ ಕೃತಿರತಿರಮಣಂ ಸಾಹಸೋ ದ್ದಾಮ ಭೀಮಂ ॥೧೨೫॥

ಇದು ಕಮನ ಕುಧರೇಂದ್ರ ನಂದನಾ ಲೋಲ ಲೋಚನ ಚಕೋರೀ ಸುಖಪ್ರದ
ಪರಮಾಂಗ ಕಾಂತಿ ಸಂತಾನ ಸಾಂದ್ರ ಚಂದ್ರಿಕಾ ವಿಭವ ಶೋಭಾಯಮಾನ
ಶ್ರೀವಿಶ್ವನಾಥ ಚರಣ ನಖ ಮಯೂಖೋತ್ಪಲ್ಲ ಮಲ್ಲಿಕಾಶೇಖರ
ಕಂದರ್ಪದೇವ ಪ್ರಭಾವ ಪ್ರಶಂಸೋಲ್ಲಸಿತ ಕುಸುಮಾವಳೀ
ಮಹಾಪ್ರಬಂಧದೊಳ್ ಕುಸುಮಾವಳೀ ದೇವಿ
ಶಿಶಿರೋಪಚಾರ ವರ್ಣನಂ ಕಂದರ್ಪ
ದೇವ ದರ್ಶನ ವರ್ಣನಂ ತ್ರಯೋದಶಾಶ್ವಂ.

ಕೃತಜ್ಞತೆಗಳು.
ಸಂಪಾದಕರು: ಕಡಬದ ನಂಜುಂಡ ಶಾಸ್ತ್ರೀ
ಕನ್ನಡ ಸಾಹಿತ್ಯ ಪರಿಷತ್ತು
ಪಂಪಮಹಾಕವಿ ರಸ್ತೆ,
ಚಾಮರಾಜಪೇಟೆ,
ಬೆಂಗಳೂರು-೫೬೦೦೧೮.








ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ