ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಗುರುವಾರ, ಆಗಸ್ಟ್ 28, 2025

ಜೈಮಿನಿ ಭಾರತ 12 - ದೊಡ್ಡಬೆಲೆ ನಾರಾಯಣಶಾಸ್ತ್ರಿ

 ಜೈಮಿನಿ ಭಾರತ 12 - ದೊಡ್ಡಬೆಲೆ ನಾರಾಯಣಶಾಸ್ತ್ರಿ


ಸೂಚನೆ:- ಅಪರಿಮಿತ ಸೈನ್ಯಸನ್ನಾಹದಿಂದರ್ಜುನನ। 

ಚಪಲಹಯಮಂ ಮರಾಳಧ್ವಜಂ ಪಿಡಿಯಲ್ಕೆ। 

ತಪನಸುತನಂದನ ಸುಧನ್ವರ್ಗೆ ಕಾಳಗಂ ಪೂಣ್ದುದಾಡಂಬರದೊಳು॥ 


ಪ್ರತಿಪದಾರ್ಥ :- ಅಪರಿಮಿತ = ಬಹು ಹೆಚ್ಚಾದ, ಸೈನ್ಯ=ಸೈನ್ಯದ, ಸನ್ನಾಹದಿಂದ=ಕಾರ್ಯದಿಂದ, ಮರಾಳಧ್ವಜಂ = ಚಂಪಕಾವತಿಯ ರಾಜನಾದ ಹಂಸಧ್ವಜನು, ಅರ್ಜುನನ = ಪಾರ್ಥನ, ಚಪಲ= ಚಂಚಲವಾದ, ಹಯಮಂ=ಅಶ್ವವನ್ನು, ಪಿಡಿಯಲ್ಕೆ= ಹಿಡಿದು ಕಟ್ಟಲು, ತಪನಸುತನಂದನ= ವೃಷಧ್ವಜ, ಸುಧನ್ವರ್ಗೆ= ಹಂಸಧ್ವಜನ ಮಗನಾದ ಸುಧನ್ವ ಇವರಿಗೆ, ಆಡಂಬರದೊಳು= ಅಟ್ಟಹಾಸದಿಂದ, ಕಾಳಗಂ= ಯುದ್ಧವು, ಪೂಣ್ದುದು= ಉಪಕ್ರಮವಾಯಿತು. 


ಅ॥ವಿ॥ ಮರಾಳ= ಹಂಸಪಕ್ಷಿಯ, ಧ್ವಜಂ= ಕೇತುವಿನಲ್ಲುಳ್ಳವನು, ಮರಾಳಧ್ವಜನು (ಬ.ಸ.) ತಪನನ+ಸುತ= ತಪನ ಸುತ, 

(ಷ.ತ.) ಪರಿಮಿತಿ ಇಲ್ಲದ್ದು- ಅಪರಿಮಿತ.  


ಇನ್ನು ಮೇಲಣ ಕಥೆಯನಾಲಿಸೆಲೆ ಭರತಕುಲ। 

ರನ್ನ ಜನಮೇಜಯ ಸುಧನ್ವನ ಕಟಾಹದುರಿ। 

ಯಂ ನಾರಸಿಂಹ ಜಪದಿಂ ಜಯಿಸೆ ಲಿಖಿತನೆಸಗಿದ ವೈಷ್ಣವದ್ರೋಹಕೆ॥ 

ತನ್ನರಿವನುರೆ ಜರೆದುಕೊಂಡಸುದೊರೆವೆನೆಂದು। 

ನನ್ನಿಯಿಂದಾ ತೈಲದೊಳ್ ಬೀಳಲವರ್ಗಳಂ। 

ಮನ್ನಿಸಿ ನೃಪಂ ತೆಗೆಸಲಾ ಪುರೋಹಿತನವನಿಪತಿಗೆ ಬಳಿಕಿಂತೆಂದನು॥೧॥ 


ಪ್ರತಿಪದಾರ್ಥ :- ಭರತ= ಭರತಮಹಾರಾಯನ, ಕುಲ=ವಂಶದಲ್ಲಿ, ರನ್ನ= ರತ್ನಪ್ರಾಯನಾದ, ಜನಮೇಜಯ = ಜನಮೇಜಯನೇ! ಇನ್ನು ಮೇಲಣ= ಇಲ್ಲಿಂದ ಮುಂದೆ ಹೇಳುವ, ಕಥೆಯನು= ನಡವಳಿಕೆಯನ್ನು, ಆಲಿಸು= ಕೇಳುವನಾಗು, ಕಟಾಹದ= ಕಾದ ಎಣ್ಣೆಯ ಕೊಪ್ಪರಿಗೆಯ, ಉರಿಯಂ= ಸುಡುವಿಕೆಯನ್ನು,ನಾರಸಿಂಹಜಪದಿಂ= ನೃಸಿಂಹ ಮಂತ್ರೋಚ್ಛಾರಣೆಯಿಂದ, ಜಯಿಸಿ= ಗೆಲುವನ್ನು ಹೊಂದಿ, ಲಿಖಿತನು= ಲಿಖಿತಮುನಿಯು, ಎಸಗಿದ= ಗೈದ, ವೈಷ್ಣವದ್ರೋಹಕೆ= ವಿಷ್ಣುಭಕ್ತಗೆ ಮಾಡಿದ ಪಾಪಕ್ಕೆ, ತನ್ನ ಅರಿವನು= ತನ್ನಯ ತಿಳಿವಳಿಕೆಯನ್ನು,ಉರೆ= ಬಹುವಾಗಿ, ಜರದುಕೊಂಡು= ದೂಷಿಸಿಕೊಂಡು, ಅಸುದೊರೆವೆನೆಂದು= ಪ್ರಾಣತ್ಯಾಗಮಾಡುತ್ತೇನೆಂಬುದಾಗಿ, ನನ್ನಿಯಿಂ= ನಿಜದಿಂದ, ಆ ತೈಲದೊಳ್= ಆ ಕಾದ ಎಣ್ಣೆಯಲ್ಲಿ, ಬೀಳಲು= ಬೀಳಲಾಗಿ, ಹಂಸಧ್ವಜಂ= ಹಂಸಕೇತುವು, ಅವರ್ಗಳಂ= ಸುಧನ್ವ ಲಿಖಿತರೀರ್ವರನ್ನು, ಮನ್ನಿಸಿ= ಮರ್ಯಾದೆಮಾಡಿ, ತೆಗೆಸಲು= ಕೊಪ್ಪರಿಗೆಯಿಂದೀಚೆಗೆ ತೆಗೆಯಿಸಲಾಗಿ, ಆ ಪುರೋಹಿತನು= ಪುರೋಹಿತನಾದ ಲಿಖಿತನು, ಅವನಿಪತಿಗೆ= ಭೂಪತಿಗೆ, ಬಳಿಕ = ತರುವಾಯ, ಇಂತೆಂದನು= ಮುಂದಿನಂತೆ ಹೇಳಿದನು. 


ಅ॥ವಿ॥ ಭರತ= ರಾಮನನುಜ, ದುಷ್ಯಂತರಾಯನ ಮಗ, ರನ್ನ (ತ್ಭ) ರತ್ನ ( ತ್ಸ) ನೃ= ಮನುಷ್ಯರನ್ನು, ಪ=ಪಾಲಿಸತಕ್ಕವನು- 

ರಾಜ. ಪುರ= ಪಟ್ಟಣಿಗರಿಗೆ, ಹಿತ= ಮೇಲು ಕೋರುವವನು. 


ತಾತ್ಪರ್ಯ:- ಎಲೈ ಜನಮೇಜಯ ಕ್ಷಿತೀಶನೆ! ಇನ್ನು ಮುಂದೆ ನಡೆದ ವರ್ತಮಾನವನ್ನು ವಿವರಿಪೆನು ಕೇಳು. ಆ ಸುಧನ್ವನು ಮರಳಿದ ತೈಲದ ಜ್ವಾಲೆಯ ತಾಪವಂ ನೃಸಿಂಹ ಮಂತ್ರ್ರೋಚ್ಛಾರಣೆಯ ದೆಸೆಯಿಂದ ಪರಿಹರಿಸಿಕೊಂಡು, ಯಾವ ತೊಂದರೆಯೂ ಇಲ್ಲದೆ ಸುಖಿಯಾಗಿರುತಿರಲು, ಅನಂತರದಲ್ಲಿ ಲಿಖಿತನು, ತಾನು ವಿಷ್ಣುಭಕ್ತನಾದ ಸುಧನ್ವನಿಗೆ ಮಾಡಿದ ದ್ರೋಹಕ್ಕಾಗಿ, ತಾನೂ ಕಾದೆಣ್ಣೆಯ ಕೊಪ್ಪರಿಗೆಯೊಳ್ಬೀಳಲಾಗಿ, ಅವರೀರ್ವರೂ ಯಾವ ತೊಂದರೆಯೂ, ಇಲ್ಲದೆ, ಸುಖವಾಗಿರುವದನ್ನು ಹಂಸಧ್ವಜನು ಕಂಡು, ಅವರನ್ನು ಕೊಪ್ಪರಿಗೆಯಿಂದ ತೆಗೆಯಿಸಿ ಸತ್ಕರಿಸಿದನು. ತರುವಾಯ ಲಿಖಿತನು ಹಂಸಧ್ವಜನಿಗೆ ಹೇಳಿದ್ದೇನೆಂದರೆ. 


ಭೂನಾಥ ಕೇಳ್ನಿನ್ನ ಸುತನ ದೆಸೆಯಿಂದೆ ನ। 

ಮ್ಮೀನೆಲಂ ಪ್ರಜೆ ನಾಡು ಬೇಡೂರು ಪರಿವಾರ। 

ಮಾನೆ ಕುದುರೆಗಳಿರ್ದ್ದ ಪಶು ಪಕ್ಷಿ ಮೃಗ ಕೀಟ ತರು ಗುಲ್ಮ ಲತೆಗಳೆಲ್ಲ॥ 

ಈ ನಿರುದ್ಧಕೆ ದನ್ಯವಾದುವೇಂ ಕೃತಿಯೊ ನೀಂ। 

ಭಾನುರಶ್ಮಿಗೆ ಕಂದೆರೆಯದ ಗೂಗೆಯವೊಲ।  

ಜ್ಞಾನಿ ದ್ವಿಜಾಧಮಂ ತಾನಾದೆನೀ ದ್ರೋಹಕೆಂದು ಲಿಖಿತಂ ನುಡಿದನು॥೨॥ 


ಪ್ರತಿಪದಾರ್ಥ :- ಭೂನಾಥ= ಎಲೈ ಜನಮೇಜಯರಾಯನೆ! ಕೇಳು=ಆಲಿಸು, ನಿನ್ನ ಸುತನ ದೆಸೆಯಿಂ= ನಿನ್ನಯ ಪುತ್ರನಾದ ಸುಧನ್ವನ ಸಹವೃಸದಿಂದ, ನಮ್ಮ ಈ ನೆಲಂ= ನಮ್ಮೀ ಪೃಥ್ವಿಯು, ಪ್ರಜೆ= ಜನವು, ನಾಡು=ರಾಜ್ಯವು, ಬೀಡು= ಬೀಡು ಜನರು(ಅನಾಥರು,) ಪರಿವಾರಂ= ರಾಜಕಾರ್ಯೋಪಯೋಗ್ಯರು, ಆನೆಕುದುರೆಗಳು= ಗಜಾಶ್ವಗಳು, ಇದ್ದ= ಇರುವ, ಪಶು= ಗೋವುಗಳು, ಪಕ್ಷಿ= ಹಕ್ಕಿಗಳು, ಮೃಗ=ಜಿಂಕೆ ಮೊದಲಾದವು, ಕೀಟ= ಹುಳುವಿನಂತಹ ಪ್ರಾಣಿಗಳು, ತರು= ವೃಕ್ಷಾದಿಗಳು, ಗೈಲ್ಮ= ಹೊದರುಗಳು, ಲತೆಗಳು= ಬಳ್ಳಿ ಮೊದಲಾದವು, ಎಲ್ಲಾ= ಸಮಸ್ತವೂ, ಈ ನಿರುದ್ಧಕೆ= ಇಂದಿನ ದಿವಸಕ್ಕೆ, ಧನ್ಯರು=ಪಾಪರಹಿತರು, (ಕೃತಾರ್ಥರು) ಆದರು= ಆಗಿರುವರು. ಏಂಕೃತರೋ= ಎಷ್ಟು ಪುಣ್ಯಮಾಡಿದವರೊ, ತಾಂ=ನಾನಾದರೊ, ಭಾನುರಶ್ಮಿಗೆ = ಸೂರ್ಯನ ಕಾಂತಿಗೆ, ಕಂದೆರೆಯದ= ಕಣ್ಬಿಡದಿರುವ, ಗೂಗೆಯವೋಲ್= ಉಲೂಕದಹಾಗೆ, ಅಜ್ಞಾನಿ= ದಡ್ಡನು, ದ್ವಿಜಾಧಮಂ= ಬ್ರಾಹ್ಮಣರಲ್ಲಿ ನೀಚನು, ತಾನು=ನಾನು, ಈ ದ್ರೋಹಕೆ= ವಂಚನೆಗೆ, ಆದೆನು= ಗುರಿಯಾದೆನು,ಎಂದು= ಎಂಬುದಾಗಿ, ಲಿಖಿತನು ನುಡಿದನು= ಲಿಖಿತ ಮುನಿಯು ಹೇಳಿದನು. 


ಅ॥ವಿ॥ ಗೂಗೆ(ತ್ಭ) ಘೂಕ( ತ್ಸ) , ಪಶು ಪಕ್ಷಿ….ಲತೆಗಳು,( ಬ. ದ್ವ) , ಇದು + ದ್ರೋಹ= ಈ ದ್ರೋಹ, (ಗ.ಸ.) ಭಾಃ= ಕಾಂತಿ, ಅದುಳ್ಳವನು, ಭಾನು-( ದ್ವಿಜರಲ್ಲಿ +ಅಧಮನು= ದ್ವಿಜಾಧಮ (ಷ. ತ.)


ತಾತ್ಪರ್ಯ:-ಎಲೈ ರಾಜನೇ ಕೇಳು, ನಿನ್ನ ಮಗನ ಸತ್ಸಹವಾಸದಿಂದ ನಮ್ಮೀ ರಾಜ್ಯ, ಪ್ರಜೆ, ಪರಿವಾರ,ಗಜ, ತುರಗ, ರಥಪದಾತಿಗಳು, ಪಶುಪಕ್ಷಿ ಮೃಗಾದಿಗಳು, ಸಮಸ್ತವೂ ಕೃತಾರ್ಥವೃದವು. ನಾನಾದರೊ ಸೂರ್ಯಕಾಂತಿಗೆ ಕಣ್ಣು ಬಿಡದ ಗೂಬೆಯಂತೆ ವಿವೇಕಶೂನ್ಯನೂ, ವಿಪ್ರಾಧಮನೂ, ಆಗಿರುವೆನೆಂದು ಚಿಂತಿಸುತ್ತಿರಲು. 


ಬಳಿಕಾತನಂ ಸುಮ್ಮನಿರಿಸಿ ನುಡಿದಂ ಶಂಖ। 

ನೆಲೆ ಮಹೀಪಾಲ ಹರಿಶರಣರ್ಗೆಡರ್ಗಳೆ। 

ತ್ತೊಳವು ಬೆಳುದಿಂಗಳ್ಗೆ ಬೆಮರುಂಟೆ ಬೇಸಗೆಯೊಳಿವನ ನಿಜಮಂ ಕಾಣದೆ॥ 

ಬಳಸಿದೆವು ಮೂರ್ಖತೆಯನರಿದು ಮರುಳಾದೆವಿ। 

ನ್ನುಳಿದ ಮಾತುಗಳೇಕೆ ಸಾಕೀ ಸುಧನ್ವನಂ । 

ಕಳುಹು ಕಾಳಗಕೆನಲ್ ಭೂಪನವನಂ ತೆಗೆದು ಬಿಗಿಯಪ್ಪಿದಂ ಮುದದೊಳು॥೩॥ 


ಪ್ರತಿಪದಾರ್ಥ :- ಬಳಿಕ=ಅನಂತರದಲ್ಲಿ, ಆತನ= ಆ ಲಿಖಿತಮುನಿಯನ್ನು, ಸುಮ್ಮನೆ ಇರಿಸಿ=ಮಾತನಾಡದಂತೆ ಹೇಳಿ, 

( ಸಮಾಧಾನಮಾಡಿ) ಶಂಖನು=ಶಂಖನೆಂಬ ಋಷಿಯು) ನುಡಿದಂ= ಹೇಳಿದನು, ಎಲೆ ಮಹೀಪಾಲ=ಎಲೈ ಭೂಮಿಪಾಲನೆ

ಹರಿಶರಣರ್ಗೆ= ವಿಷ್ಣು ಸೇವಕರಿಗೆ, ಎಡರ್ಗಳು= ವಿಘ್ನಗಳು, ಎತ್ತಣದು= ಎಲ್ಲಿಂದ ಬಂದೀತು, (ಬರುವುದಿಲ್ಲ) ಬೇಸಿಗೆಯೊಳು= ಬಿಸಿಲುಕಾಲದಲ್ಲಿ, ಬೆಳದಿಂಗಳಿಗೆ=ಚಂದ್ರಿಕೆಗೆ, ಬೆಮರು= ಸ್ವೇದವು ಉಂಟಾದೀತೆ, (ಯಾವಾಗ್ಗೂ ಬೆಳದಿಂಗಳಿಗೆ= ಬೆವರು ಹೇಗೆ ಉಂಟಾಗುವುದಿಲ್ಲವೋ, ಹಾಗೆಯೇ ವಿಷ್ಣುಭಕ್ತರಿಗೆ ವಿಪತ್ತುಗಳುಂಟಾಗುವುದಿಲ್ಲವೆಂಬ ಭಾವ)ಅವನ= ಆ ಸುಧನ್ವನ ನಿಜಮಂ=ವಿಷ್ಣುವಿನಲ್ಲಿರುವ ನಿಶ್ಚಲವಾದ ನಂಬಿಕೆಯನ್ನು, ಕಾಣದೆ= ನೋಡದೆ, ಮೂರ್ಖತೆಯನು=ಹಠವನ್ನು, ಬಳಸಿದೆವು= ಆಚರಿಸಿದೆವು, ಅರಿ = ( ಈ ವಿಷಯವನ್ನು)ತಿಳಿ,ಮರುಳರು =ಬುದ್ಧಿ-

ಯಿಲ್ಲದವರು, ಆದೆವು=ಆಗಿರುವೆವು, ಇನ್ನು ಉಳಿದ ಮಾತುಗಳು ಏಕೆ= ಇನ್ನು ಮಿಕ್ಕ ವಿಷಯವನ್ನೇಕೆ ಹೇಳಬೇಕು, ಸಾಕು= ಬಿಡು, ಈ ಸುಧನ್ವನಂ= ಈ ಸುಧನ್ವನನ್ನು ,ಕಾಳಗಕೆ= ಯುದೂಧಮಾಡಲಿಕ್ಕೆ, ಕಳುಹು= ಕಳುಹಿಸೆಚೊಡು, ಎನಲು= ಎಂದು ಹೇಳಲು, ಭೂಪನು= ರಾಜನು, ಅವನಂ= ಆ ಶಂಖಮಹರ್ಷಿಯನ್ನು, ತೆಗೆದು= ಹಿಡಿದು, ಮೈದದೊಳು= ಆನಂದದಿಂದ, ಬಿಗಿಯಪ್ಪಿದಂ= ತಬ್ಬಿಕೊಂಡನು. 


ಅ॥ವೆ॥ (ಶಂಖ= ಸಮೈದ್ದಶಂಖ, ಶಂಖಚೂಡ, ಶಂಖಋಷಿ) ಬೇಸಿಗೆ(ತ್ಭ) ವೈಶಾಖ ( ತ್ಸ) ,ಅರಿ=ತಿಳಿ, ಶತ್ರು, ಹರಿ= ವಿಷ್ಣು, ಸೂರ್ಯ, ಕುದುರೆ, ಸಿಂಹ, ಕೋತಿ, ನರಿ, ಕಪ್ಪೆ, ಬಿಳಿದು+ತಿಂಗಳು=ಬೆಳದಿಂಗಳು(ವೆ. ಪೂ. ಕ.) ಮೂರ್ಖನ ಭಾವ= ಮೂರ್ಖತನ, ಮೂರ್ಖತೆ. 


ತಾತ್ಪರ್ಯ:- ಶಂಖಮಹರ್ಷಿಯು ಆ ಲಿಖಿತನಂ ಸಂತವಿಟ್ಟು, ಎಲೈ ಹಂಸಕೇತುವೇ! ಹರಿಶರಣರಿಗೆಲ್ಲಿಯಾದರೂ ಕಷ್ಟಗಳುಂಟೆ! ಬೆಳದಿಂಗಳಿಗೆಲ್ಲಿಯಾದರು ಬೆಮರಿರ್ಪುದೆ? ನೃವು ಹರಿಭಕ್ತನ ಸತ್ಯಮಂ ಅರಿಯದೆ ಹಠವಿಡಿದು ಹುಚ್ಚರಾದೆವು. ಮತ್ತೆ ಯಾವದನ್ನೂ ಯೋಚಿಸದೆ ಸುಧನ್ವನಿಗೆ ಆಜ್ಞೆಯನ್ನಿತ್ತು ಕಾಳಗಕೆ ಕಳುಹಿಸುವನಾಗೆಂದುಹೇಳಲಾಗಿ ಹರ್ಷದಿಂದ ಹಂಸಧ್ವಜನು ಶಂಖನನ್ನು ಆಲಿಂಗಿಸಿಕೊಂಡು ತನ್ನ ಮಗನಾದ ಸುಧನ್ವನನ್ನು ಯುದ್ಧಕ್ಕೆ ಹೋಗುವಂತೆ ಅನುಜ್ಞೆಯಂ ಮಾಡಲು. 


ತಂದೆಯ ಚರಣಕೆರಗಿ ಶಂಖಲಿಖಿತರ ಪದಕೆ। 

ವಂದಿಸಿ ಪರಕೆಗೊಂಡು ಸಾರಥಿಯನಾದರಿಸಿ। 

ಪೊಂದೇರನಳವಡಿಸಿ ತುರಗಂಗಳಂ ಪೂಡಿ ಸಿಂಧಮಂ ನಿಡಿದುಮಾಡಿ॥ 

ಗೊಂದಣದ ಝಲ್ಲಿಗಳ ಕನಕಮಾಲೆಗಳ ಸ್ರ। 

ಕ್ಚಂದನ ವಿಭೂಷಣಾವಳಿಗಳಂ ಸಿಂಗರಿಸಿ। 

ಬಂದಡರ್ದಂ ಜಯರವದೊಳಾ ಸುಧನ್ವಂ ತಿರಸ್ಕೃತಕುಸುಮಧನ್ವನು॥೪॥ 


ಪ್ರತಿಪದಾರ್ಥ :- ತಂದೆಯ= ಜನಕನಾದ ಹಂಸಧ್ವಜನ, ಚರಣಕೆ= ಅಡಿಗಳಿಗೆ, ಎರಗಿ= ನಮಸ್ಕಾರ ಮಾಡಿ, ಶಂಖಲಿಖಿತರ = ಶಂಖ ಮತ್ತು ಲಿಖಿತ ಈ ಇಬ್ಬರ, ಪದಕೆ= ಕಾಲುಗಳಿಗೆ, ನಮಸ್ಕರಿಸಿ= ಅಡ್ಡಬಿದ್ದು, ಪರಕೆಗೊಂಡು = ಮಂಗಳಾಶೀರ್ವಾ-

ದಂ ಪೊಂದಿ, ಸಾರಥಿಯನು= ರಥ ಓಡಿಸುವವನನ್ನು, ಆದರಿಸಿ= ಪ್ರೀತಿಸಿ,ಪೊಂದೇರನು= ಚಿನ್ನದ ರಥವನ್ನು, ಅಳವಡಿಸಿ = ಸಿದ್ಧಪಡಿಸಿಕೊಂಡು, ತುರಂಗಗಳಂ= ಕುದುರೆಗಳನ್ನು,ಪೂಡಿ=ಕಟ್ಟಿ, ಸಿಂಧಮಂ= ಛತ್ರದಿಂದ ಕೂಡಿದ ಕೇತನವನ್ನು, ನೀಡುಮಾಡಿ= ಮೇಲಕ್ಕೆ ಎತ್ತಿಸಿ, ಗೊಂದಣದ= ಅಟ್ಟಲೆಗಳ ಗುಂಪಿನ, ಝಲ್ಲಿಗಳ = ಝಾಲರಿಗಳ, ಕನಕ=ಚಿನ್ನದ, ಮಾಲೆಗಳ = ಹಾರಗಳ, ಸ್ರಕ್= ಪೂಸರಗಳಿಂದ, ಚಂದನ= ಶ್ರೀಗಂಧದಿಂದ, ವಿಭೂಷಣ= ಆಭರಣಗಳ, ಅವಳಿಗಳಿಂ= ಸಮೂಹಗಳಿಂದ, ಸಿಂಗರಿಸಿ= ಶೃಂಗಾರ ಮಾಡಿಕೊಂಡು, ತಿರಸ್ಕೃತ= ಹೀಯಾಳಿಸಲ್ಪಟ್ಟ, ಕುಸುಮಧನ್ವನ= ಪೂವಿಲ್ಲನಾದ 

ಮದನನುಳ್ಳವನಾದ, ಸುಧನ್ವನೆಂಬವನು, ಜಯರವದೊಳು= ಜಯಶಬ್ಧದಿಂದ,ಬಂದು= ಬಂದು, ಅಡರ್ದ= ತೇರನ್ನು ಹತ್ತಿದನು. 


ಅ॥ವಿ॥ ಕುಸುಮವೇ ಬಿಲ್ಲಾಗುಳ್ಳವನು, ಕುಸುಮಧ್ವಜನು, ( ಬ. ಸ.) ಪೊನ್ನಿನ +ತೇರ್=ಪೊಂದೇರ್ ( ಷ. ತ. ) ಶಂಖನೂ + ಲಿಖಿಯನೂ= ಇವರು ಶಂಖ ಲಿಖಿತರು,( ದ್ವಿ. ದ್ವಂದ್ವ. ಸ. ) ಸಿಂಗರ(ತ್ಭ) ಶೃಂಗಾರ(ತ್ಸ) 


ತಾತ್ಪರ್ಯ:- ಆಗ ಸುಧನ್ವನು ತಂದೆಯಡಿದಾವರೆಗೆರಗಿ, ತಮ್ಮ ಕುಲ ಪುರೋಹಿತರಾದ ಶಂಖ ಲಿಖಿತರಪಾದಾರವಿಂದಗಳಿಗೆ ನಮಸ್ಕರಿಸಿ, ಅವರಿಂದ ಮಂಗಳಾಶೀರ್ವಾದಂ ಪೊಂದಿ, ತನ್ನ ಸಾರಥಿಯನ್ನು ಆದರಿಸಿ,ದಿ ದಿವ್ಯಗಳಾದ ರತ್ನಖಚಿತಗಳಾದ ,ಆಭರಣಗಳಿಂದಲಂಕರಿಸಿಕೊಂಡು, ಪರಿಮಳಯುಕ್ತವಾದಶ್ರೀಗಂಧವಂ ಲೇಪನಮಾಡಿಕೊಂಡು, ಸುಗಂಧದಿಂ ಯುಕ್ತಮಾದ ಪುಷ್ಪಮಾಲಿಕೆಗಳಂ ಧರಿಸಿಕೊಂಡು, ಸುವರ್ಣಮಯವಾದ ರಥವನ್ನು ತ್ತಿ ತಿರಸ್ಕೃತ ಮದನನೋಪಾದಿಯಲ್ಲಿ ಅರ್ಜುನನ ಮೇಲೆ ಯುದ್ಧಕ್ಕೆ ಹೊರಟನು. 


ಕೇಳ್ಗುಣಮಣಿಯೆ ಧರಣಿಪಾಗ್ರಣಿಯೆ ತನ್ನ ಮಗ। 

ನೇಳ್ಗೆಯಂ ಕಂಡುಬ್ಬಿದಂ ಮರಾಳಧ್ವಜಂ। 

ಸೂಳ್ಗೈದುವಾಗ ತಂಬಟೆ ಭೇರಿ ನಿಸ್ಸಾಳ ಕಹಳಾದಿ ವಾದ್ಯಂಗಳು॥ 

ತೋಳ್ಗುಟ್ಟುತಾರ್ದು ಸುಮ್ಮಾನದಿಂ ಪಟುಭಟರ್। 

ಕೇಳ್ಗೊಂಡು ಕುದಿಯುತಿರ್ದರು ಸಾರ್ಧಯೋಜನದೊ। 

ಳಾಳ್ಗಜ ತುರಂಗ ರಥವಿಟ್ಟಣಿಸಿ ನಡೆದುದುತ್ಸಾಹದಿಂ ನರನ ಮೇಲೆ॥೫॥


ಪ್ರತಿಪದಾರ್ಥ :- ಗುಣಮಣಿಯೆ= ಸದ್ಗುಣಕ್ಕೆ ರತ್ನಪ್ರಾಯನಾದ, ಧರಣಿಪಾಗ್ರಣಿಯೆ = ರಾಜಾಗ್ರಗಣ್ಯನಾದ, ಎಲೈ ಜನಮೇಜಯನೇ! ತನ್ನ=ತನ್ನಯ, ಮಗನ= ಪುತ್ರನಾದ ಸುಧನ್ವನ, ಏಳ್ಗೆಯಂ= ಅಭಿವೃದ್ಧಿಯನ್ನು, ಕಂಡು=ಈಕ್ಷಿಸಿ, ಮರಾಳಧ್ವಜಂ= ಹಂಸಪಕ್ಷಿಯೆ ಧ್ವಜದಲ್ಲಿ ಉಳ್ಳ ಹಂಸಧ್ವಜನು, ಉಬ್ಬಿದಂ= ಸಂತೋಷದಿಂದ ಹೆಚ್ಚಿದವನಾದನು,ಆಗ= ಆ ಸಮಯದಲ್ಲಿ, ತಂಬಟ= ಕನಕ ತಮ್ಮಟೆಯು, ಭೇರಿ= ದೊಡ್ಡ ನಗಾರಿಯು, ನಿಸ್ಸಾಳ = ಸಣ್ಣ ಭೇರಿಯು, ಕಹಳೆ= ಕೊಂಬಿನ ವಾದ್ಯವು, (ಇವುಗಳೇ) ಆದಿ= ಮೊದಲಾಗುಳ್ಳ, ವಾದ್ಯಗಳು= ವಾದ್ಯವಿಶೇಷಗಳು, ಸೂಳ್ಗೈದವು= ರವಗೈದವು, 

ತೋಳ್ಗುಟ್ಟುವ= ಬಾಹುಗಳನಪ್ಪಳಿಸುವ,ಆರ್ದು= ಧ್ವನಿಮಾಡಿ, ಸುಮ್ಮಾನದಿಂ = ಯುದ್ಧಾತುರದಿಂದಾದ ಆನಂದದಿಂದ, 

ಪಟು=ಬಲಾಢ್ಯರಾದ ಭಟರು= ಶೂರರು, ಕೋಳ್ಗೊಂಡು= ಬೇಟೆಯಾಡಿಕೊಂಡು, ( ಕೋಲಾಹಲ ಮಾಡಿಕೊಂಡು) ಕುದಿವುತ= ಸಿಟ್ಟಿನಿಂದ ಸುಡುತ್ತ, ಇರ್ದರು= ಇರುತ್ತಿದ್ದರು, ಸಾರ್ಧಯೋಜನದೊಳು= ಹದಿನೆಂಟು ಮೈಲು ನೆಲದ ವೆಸ್ತಾರದಲ್ಲಿ, ಚತುರಂಗ ರಥವು,( ಗಜ, ಅಶ್ವ, ರಥ, ಪದಾತಿ ಇವಕ್ಕೆ ಚತುರಂಗವೆಂದು ಹೆಸರು) ನಾಲ್ಕು ಬಗೆಯಾದ ಸೈನ್ಯವೂ ಮತ್ತು ತೇರು, ಇಟ್ಟಣಿಸಿ= ಗುಂಪುಸೇರಿ, ನರನಮೇಲೆ= ಅರ್ಜುನನಮೇಲೆ, ಉತ್ಸಾಹದಿಂದ = ಯುದ್ಧೋತ್ಸಾಹ-

ದಿಂದ, ನಡೆದುದು= ಹೊರಟಿತು. 


ಅ॥ವಿ॥ ಗುಣ=ನಡತೆ, ಬಿಲ್ಲಿನ ಹಗ್ಗ, ಮಣಿ= ರತ್ನ, ನಮಸ್ಕಾರ ಮಾಡುವುದು, ( ತೋಳಂ+ಕುಟ್ಟುತ)ತೋಳ್ಗುಟ್ಟುತ,

( ಕ್ರಿ. ಸ.) ಪಟುಗಳಾದ+ಭಟರು= ( ವಿ. ಪೂ. ಕ.)ಅರ್ಧದಿಂದ ಸಹಿತವಾದದ್ದು)ಸಾರ್ಧ, ಸಹ, (ಪೂ. ಬಹು)

ಚತುರಂಗ= ಹಸ್ತ್ಯಶ್ವ, ರಥಪದಾತಿ. 


ತಾತ್ಪರ್ಯ:- ಗುಣಾಢ್ಯನು ರಾಜಶ್ರೇಷ್ಠನು ಆದ ಜನಮೇಜಯರಾಯನೇ ತನ್ನ ಪುತ್ರನ= ವೈಭವವನ್ನು ನೋಡಿದ ಹಂಸಧ್ವಜನು ಆನಂದದಿಂದ ಉಬ್ಬಿಹೋದವನಾಗಲು, ಸುಧನ್ವನು ಆ ಸಮಯದಲ್ಲಿ ತಂಬಟ, ಭೇರಿ, ಕಹಳೆ, ನಿಸ್ಸಾಳಾದಿ ವಾದ್ಯಧ್ವನಿಗಳಿಂದಲೂ, ಭಟರ ಕೋಲಾಹಲರವದಿಂದಲೂ, ಕೋಪೋದ್ರೇಕವುಳ್ಳವರಾಗಿ ಅರ್ಜುನನಮೇಲೆಯುದ್ಧಕ್ಕೆ ಹೊರಟನು. 


ಬೆರಬೆರಸುತೊತ್ತಿಡಿದುಮುಂದೌ ಭರದಿಂದೆ ನಡೆ। 

ವರಸರಸುಗಳ ಕಂಠಮಾಲೆಗಳ ತೋರಮು। 

ತ್ತೊರಸೊರಸು ಮಿಗೆ ಪರಿದವರ ಸೂಸುದಂಬುಲದ ಚೆನ್ನೆಲದ ಮೇಲೊಕ್ಕಿರೆ॥ 

ಪೊರೆದ ಸಂಧ್ಯಾರುಣದ ಗಗನಮೆಡಲದೊಳಂ। 

ಕುರಿಸಿದುಡುಗಣದಂತೆ ರಂಜಿಸಿತು ದೆಸೆದೆಸೆಗೆ। 

ಪರಿಮಳದೆಲರ್ ಪರಿದುದಗರಚಂದನ ಯಕ್ಷಕರ್ದಮದ ಮೊಗವಾಸದ॥೬॥ 


ಪ್ರತಿಪದಾರ್ಥ :- ಬೆರಬೆರಸುತ= ಒತ್ತೊತ್ತಾಗಿ ಸೇರುತ್ತ, ಒತ್ತಿ=ತಳ್ಳಿ, ಇಡಿದು= ಗುಂಪಾಗಿ, ಮುಂದೆ= ಮುಂಭಾಗದಲ್ಲಿ, ಭರದಿಂದ= ಶೀಘ್ರವಾಗಿ, ನಡೆವ= ಹೋಗುತ್ತಿರುವ, ಅರಸರಸುಗಳ= ರಾಜಾಧಿರಾಜರ, ಕಂಠಮಾಲೆಗಳ = ಕತ್ತಿನಲ್ಲಿ ಹಾಕಿರುವ ಹಾರಗಳ, ತೋರ= ದಪ್ಪಗಳಾದ, ಮುತ್ತುಗಳು= ಮೌಕ್ತಿಕಗಳು, ಒರಸೊರಸು= ಒಂದಕ್ಕೊಂದು ತಗಲಿ ತಗಲಿ, ಪರಿದು= ಕಿತ್ತುಹೋಗಿ, ಅವರ= ಆ ರಾಜರ, ಸೂಸು= ಸ್ರವಿಸುವ, ದಂಬುಲದ= ಅಡಿಕೆಲೆಯಿಂದಾದ,ರಸದ= ದ್ರವದ, ಚನ್ನು= ಅರುಣವು, ಒತ್ತಿರೆ= ಭೂಮಿಯಮೇಲೆ ಬಿದ್ದಿರಲು, ಪೊರದ= ಹೊರದ, ಸಂಧ್ಯಾರುಣ= ಸಂಜೆಗೆಂಪಿನ, ಗಗನಮಂಡಲದೊಳು= ಅಂತರಿಕ್ಷದಲ್ಲಿ, ಅಂಕುರಿಸಿದ= ಹುಟ್ಟಿದ, ಉಡುಗಣದಂತೆ= ನಕ್ಷತ್ರಪುಂಜದ ಹಾಗೆ, ರಂಜಿಸಿತು= ಕಾಂತಿಯುಕ್ತವಾಗಿತ್ತು, ದೆಸೆದೆಸೆಗೆ= ದಿಕ್ಕುದಿಕ್ಕಿಗೂ, ಅಗರು= ಕೃಷ್ಣಾಗರು ಮತ್ತು ಶ್ವೇತಾಗರುಗಳು, ಚಂದನ= ಶ್ರೀಗಂಧವು, ಯಕ್ಷಕರ್ದಮ= ಕರ್ಪೂರ ಕಸ್ತೂರಿ ಮೊದಲಾದ ಪುಡಿ ಇವುಗಳ, ಮೊಗವಾಸದ= ಮುಖವಾಸನೆಯ, ಪರಿಮಳದ ಎಲರ್= ಸುವಾಸನೆಯಿಂದಾದ ವಾಯುವು, ಪರಿದುದು= ಸಂಚರಿಸಿತು. 


ಅ॥ವಿ॥ ಬೆರಸು+ಬೆರಸು= ಬೆಂಬೆರಸು, (ದ್ವಿ.), ಕಂಠದ+ಮಾಲೆ= ಕಂಠಮಾಲೆ (ಷ. ತ.) ಸಂಧ್ಯಾ(ತ್ಸ) ಸಂಜೆ(ತ್ಭ) ಅರುಣ=ಕೆಂಪು, ಮುತ್ತು, ಸೂರ್ಯನ ಸಾರಥಿ, ಮುತ್ತು=( ತ್ಭ) ಮೌಕ್ತಿಕ=(ತ್ಸ) 


ತಾತ್ಪರ್ಯ:- ಯುದ್ಧಕ್ಕೆ ಹೊರಟಾಗ ಜನಗಳ ಗುಂಪಿನಿಂದ ಒಬ್ಬರೊಬ್ಬರು ಒತ್ತುತ್ತಲೂ ತಳ್ಳುತ್ತಲೂ ಇದ್ದುದರಿಂದ ಯುದ್ಧಕ್ಕೆ ನೆರೆದಿದ್ದ ರಾಜರ ಕಂಠದಲ್ಲಿದ್ದ ಅಮೌಲ್ಯವಾದ ಮುಕ್ತಾಹಾರಗಳು ಕಿತ್ತುಹೋಗಿ ದೊಡ್ಡ ಮುತ್ತುಗಳು ಒಡೆದುಹೋಗಿ ನೆಲದಲ್ಲಿ ಬಿದ್ದುದರಿಂದಲೂ, ಆ ರಾಜರು ಅಡಿಕೆಲೆಯನ್ನು ಹಾಕಿಕೊಂಡು ಅಗಿಯುತ್ತಿದ್ದಾಗ ಬಾಯಿಯಿಂದ ಸ್ರವಿಸಿದ ಕೆಂಪಾದನೀರು ಭೂಮಿಯಮೇಲೆ ಬಿದ್ದಿದ್ದರಿಂದ, ಒಡೆದು ನೆಲದಲ್ಲಿ ಬಿದ್ದಿರುವ ಮುತ್ತುಗಳ ಸಮೂಹವು ನಕ್ಷತ್ರಗಳಿಗೂ, ಕೆಂಪಾದ ದ್ರವವನ್ನು ಊರುಣನಿಗೂ, ಹೋಲಿಸಿದ ಕವಿಚಮತ್ಕಾರಕ್ಕೆ ತಕ್ಕಂತೆಯೇ ಆ ಯುದ್ಧರಂಗವು ನಾನಾಪ್ರಕಾರವಾಗಿ

ಕಂಗೊಳಿಸುತ್ತಿತ್ತು. 


ಪಡೆಯೊಳನ್ಯೋನ್ಯ ಸಂಘರ್ಷಣದೊಳೊಗುವ ಪೊಂ। 

ದೊಡವುಗಳ ರೇಣುಗಳೊ ಮೈಗಳಂ ಸೋಂಕಿ ಪುಡಿ। 

ವಡೆದ ಕುಂಕುಮ ಸುಗಂಧಾನುಲೇಪನದ ಚೂರ್ಣಂಗಳೋ ಪದಘಾತಿಗೆ॥ 

ಪೊಡವಿಯಿಂದಿರದೇಳ್ವರುಣರಜಂಗಳೊ ತಿಳಿದು। 

ನುಡಿಯಲರಿದೆಂಬಿನಂ ಮೇರುವಿನ ಬಣ್ಣಮಿಂ। 

ಪಿಡಿದ ದಿವಿಜರ ಭೋಗಮಜನ ಗುಣಮೆಚ್ಚರಿಸೆ ಕೆಂಧೂಳಿ ಮಸಗಿತಾಗ॥೭॥ 


ಪ್ರತಿಪದಾರ್ಥ :- ಪಡೆಯೊಳು= ಸೇನೆಯಲ್ಲಿ,ಅನ್ಯೋನ್ನ= ಪರಸ್ಪರ ಒಬ್ಬರಿಗೊಬ್ಬರಿಗಾದ, ಸಂಘರ್ಷಣದೊಳು= ಉಜ್ಜುವಿಕೆಯಿಂದ, ಒಗುವ= ರೇಣುಗಳಾಗಿ ಉದುರಿ ಬೀಳುವ, ಪೊಂದೊಡವುಗಳ= ಚಿನ್ನದ ಆಭರಣಗಳ, ರೇಣುಗಳೊ= ಅಣುಗಳೊ, ಮೈಗಳಂ= ಒಡಲುಗಳನ್ನು, ಸೋಂಕಿ=ತಗಲಿ, ಪುಡಿವಡೆದ= ಧೂಳಾದ, ಕುಂಕುಮ= ಕುಂಕುಮ ಕೇಸರಿ-

ಯಿಂದೊಡಗೂಡಿದ, ಸುಗಂಧ=ಒಳ್ಳೆಯ ವಾಸನೆಯುಳ್ಳ, ಅನುಲೇಪನದ= ಹಚ್ಚಿಕೊಂಡಿದ್ದ ಶ್ರೀಗಂಧದ ಚೂರ್ಣಂಗಳೊ, ಪುಡಿಗಳೊ, ಪದಘಾತಿಗೆ= ಪಾದದ ತುಳಿತಕ್ಕೆ, ಪೊಡವಿಯಿಂದ= ಪೃಥ್ವಿಯಿಂದ, ಇರದೆ ಏಳ್ವ=ತಪ್ಪದೇ ಏಳುತ್ತಿರುವ, ಅರುಣರಜಂಗಳೋ= ಕೆಂಪಾದ ರೇಣುಗಳೋ, ತಿಳಿದು= ಗ್ರಹಿಸಿ, ನುಡಿಯಲು= ಹೇಳಲು, ಅರಿದು= ಸಾಧ್ಯವಲ್ಲ, ಎಂಬಿನಂ= ಎನ್ನುವ ರೀತಿಯಿಂದ, ಮೇರುವಿನ= ಕನಕಾಚಲದ, ಬಣ್ಣಮಂ= ಕಾಂತಿಯನ್ನು, ಪಿಡಿದ= ಹೊಂದಿರುವ, ದಿವಿಭಾಗಮಂ= ಆಕಾಶವನ್ನು ಕುರಿತು, ಜನವನು= ಕಾಣುವ ಜನರನ್ನು, ಎಚ್ಚರಿಪಂತೆ= ಜ್ಞಾಪಕಕ್ಕೆ ತರುವಂತೆ, ಕೆಂಧೂಳಿ= ಕೆಂಪಾದ ಧೂಳು, ಆಗ= ಆ ಸಮಯದಲ್ಲಿ, ಮುಸುಕಿತು= ಆವರಿಸಿಕೊಂಡಿತು. 


ಅ॥ವಿ॥ ಕೆಚ್ಚನೆಯ+ ಧೂಳಿ= ಕೆಂಧುಳಿ ( ವಿ. ಪೂ. ಕ.) ಪೊಡವಿ (ತ್ಭ) ಪೃಥ್ವಿ (ತ್ಸ) ವರ್ಣ (ತ್ಸ) ಬಣ್ಣ (ತ್ಭ) 


ತಾತ್ಪರ್ಯ:- ಆ ಸೇನೆಯಲ್ಲಿದ್ದ ರಾಜರ ಮತ್ತು ಚತುರಂಗಬಲಗಳ ತುಳಿದಾಟಕ್ಕೆ, ಭೂಮಿಯಿಂದ ಮೇಲಕ್ಕೆದ್ದ ಧೂಳು ಅಂತರಿಕ್ಷವನ್ನು ವ್ಯಾಪಿಸಿತು, ರಾಜರು ಧರಿಸಿದ್ಧ ಒಡವೆಗಳು ಒಡೆದು ಚೂರಾದ ಧೂಳಿಗಳೂ ಮತ್ತು ಅವರು ತಮ್ಮ ಶರೀರಕ್ಕೆ ಲೇಪನಮಾಡಿಕೊಂಡಿದ್ದ ಸುವಾಸನೆಯುಕ್ತವಾದ ಶ್ರೀಗಂಧದ ಪುಡಿಯೂ ಆ ಧೂಳಿನಲ್ಲಿ ಸೇರಿದ್ದರಿಂದ ಅಂತರಿಕ್ಷವು ಸುವರ್ಣಾದ್ರಿಗೆ ಹೋಲುತ್ತಿತ್ತು. 


ಮೊಗಗೈಗಳಿಂ ತಮ್ಮೊಡಲ ನೀರನಾನೆಗಳ್ । 

ತೆಗೆದು ಚೆಲ್ಲಲ್ ಪೊನಲ್ವರಿದ ಮಡುಗಳ ಕೆಸರೊ। 

ಳೊಗೆದ ನೃಪಮಂಡಲದ ಕನಕಾಭರಣ ಕಿರಣ ತರುಣಾತಪದೊಳಲರ್ದ॥ 

ಮಿಗೆ ಸುಳಿವ ಚಾಮರಂಗಳ ರಾಜಹಂಸಾವ। 

ಳಿಗಳ ಸಂಚಾರಮಂ ಕೆಳೆಗೊಂಡು ಬೆಳುದಾವ। 

ರೆಗಳ ಹಂತಿಗಳಂತೆ ಪಡೆಯೊಳೆಸೆದುವು ತಳ್ತಿಡಿದ ಸತ್ತಿಗೆಯ ಸಾಲ್ಗಳು॥೮॥ 


ಪ್ರತಿಪದಾರ್ಥ :- ಆನೆಗಳ= ಗಜಗಳು, ಮೊಗದ= ಮುಖದ ಹತ್ತಿರವಿರುವ, ಕೈಯಿಂದ= ಸೊಂಡಿಲಿನಿಂದ, ತಮ್ಮೊಡಲ ನೀರನು= ತಮ್ಮ ಶರೀರದಿಂದ ಸುರಿವ ಬೆವರಿನ ನೀರನ್ನು, ತೆಗೆದು=ತೆಗೆದುಕೊಂಡು, ಚಲ್ಲಲು= ಸುತ್ತಲು ಎರಚಲು, ಪೊನಲ್ವರಿದ= ಪ್ರವಹಿಸಿದ ಪ್ರವಾಹದ, ಮಡವುಗಳ= ಹಳ್ಳಗಳ, ಕೆಸರೊಳು= ಬದಿಯಲ್ಲಿ, ಒಗೆದ= ಜನಿಸಿದ, ನೃಪಮಂಡಲದ= ದೊರೆಗಳ ಗುಂಪಿನ, ಕನಕಾಭರಣ = ಚಿನ್ನದಿಂದ ನಿರ್ಮಿತವಾದ ಆಭರಣಗಳ, ಕಿರಣಗಳ= ಪ್ರಕಾಶಗಳೆಂಬ, ತರುಣ= ಬಲಿಯದ, ಆ ತಪದೊಳು= ಬಿಸಿಲಿನಲ್ಲಿ, ಅಲರ್ದ= ವಿಕಸಿತವಾದ, ಮಿಗೆ =ಹೆಚ್ಚಾಗಿ, ಸುಳಿದ= ತಿರುಗಾಡುವ, ಚಾಮರಂಗಳ=ಚಾಮರಗಳೆಂಬ, ರಾಜಹಂಸದ= ರಾಜಹಂಸಗಳ, ಅವಳಿಗಳ=ಗುಂಪುಗಳ, ಸಂಚಾರಮಂ= ತಿರುಗಾಟವನ್ನು, ಕಳೆಗೊಂಡ= ಕಾಂತಿಯುಕ್ತವಾದ, ಬೆಳ್ದಾವರೆಗಳ= ಬಿಳಿದಾದ ಕಮಲ ಪುಷ್ಪಗಳ, ಹಂತಿಗಳಂತೆ= ಸಾಲುಗಳ ಹಾಗೆ, ತಳ್ತು= ವಿಕಸಿತವಾಗಿ, ( ವಿಸ್ತರಿಸಲ್ಪಟ್ಟು) ಇಡಿದ= ಗುಂಪಾಗಿರುವ, ಸತ್ತಿಗೆಯ= ಕೊಡೆಗಳ, ಸಾಲ್ಗಳು= ಪಙ್ತಿಗಳು, ಎಸೆದವು= ಕಾಂತಿಯುಕ್ತವಾದುವು. 


ಅ॥ವೆ॥ ರಾಜ(ತ್ಸ) ರಾಯ (ತ್ಭ) ಹಂಸ (ತ್ಸ) ಅಂಚೆ (ತ್ಭ) ನೃಪರ +ಮಂಡಲ= ಷ. ತ. 


ತಾತ್ಪರ್ಯ :- ಆ ಸಮಯದಲ್ಲಿ ಆನೆಗಳು ಶರೀರದಿಂದ ಬೆವರು ನೀರನ್ನು ವಿಶೇಷವಾಗಿ ಸುರಿಸಿದವು. ರಾಜರು ಧರಿಸಿದ್ದ ಒಡವೆಗಳು ಕಾಂತಿಯುಕ್ತವಾಗಿದ್ದವು, ವಿಶೇಷವಾಗಿ ಶ್ವೇತಚ್ಛತ್ರಗಳನ್ನು ಹಿಡಿದಿದ್ದರು, ಇದು ಬೆವರು ನೀರಿನ ಪ್ರವಾಹವೆಂಬ ಮಡುಗಳ ಕೆಸರಿನಲ್ಲಿ, ಶ್ವೇತಚ್ಛತ್ರಗಳೆಂಬ ಬಿಳಿದಾವರೆಗಳು, ರಾಜರು ಧರಿಸಿದ್ದ ಒಡವೆಗಳ ಕಾಂತಿಯೆಂಬ ಸೂರ್ಯನಿಂದ ಅರಳಿದಾಗ್ಯೂ, ರಾಜಮರ್ಯಾದಾರ್ಥವಾಗಿ ಬೀಸುವ ಚಮರಿಗಳು, ರಾಜಹಂಸ ಪಕ್ಷಿಗಳಂತೆ ಪ್ರಕಾಶಿಸಿತು. 


ಮುಂಕೊಂಬ ಮಂದಿ ಕುದುರೆಗೆ ಧರಾಮಂಡಲಂ। 

ಸಂಕುಲದ ವೃದ್ಯಧ್ವನಿಗೆ ದಿಶಾಮಂಡಲಂ। 

ಸಂಖ್ಯೆಯಿಲ್ಲದೆ ಸಿಂಧ ಸೀಗುರಿ ಪತಾಕೆಗೆ ನಭೋಮಂಡಲಂ ಮೀರಿದ॥ 

ಬಿಂಕದಿಂದಿರಿವ ಕಲಿತನಕೆ ರಣಮಂಡಲಂ। 

ಸಂಕೋಚಮೆನೆ ಬಂದು ಪಿಡಿದು ಪಾರ್ಥನ ತುರಗ। 

ಮಂ ಕಟ್ಟಿ ಬಳಸಿ ಪದ್ಮವ್ಯೂಹಮಾಗಿ ನಿಂದಾರ್ದುದಾ ಸೇನೆ ನಲಿದು॥೯॥ 


ಪ್ರತಿಪದಾರ್ಥ :- ಮುಂಕೊಂಬ= ಮುಂದಾಗಿ ನುಗ್ಗಿ ಬರುವ, ಮಂದಿ=ಕಾಲ್ಬಲಕ್ಕೂ, ಕುದುರೆಗೆ= ತುರಂಗಗಳ ಸೈನ್ಯಕ್ಕೂ ಧರಾಮಂಡಲಂ= ಈ ಪೃಥ್ವೀ ಮಂಡಲವು. ಸಂಕುಲದ= ಗುಂಪಾಗಿ ಸೇರಿದ, ವಾದ್ಯಧ್ವನಿಗೆ= ನಗಾರಿ ಮೊದಲಾದವುಗಳ ರವಕ್ಕೆ, ದಿಶಿಮಂಡಲಂ= ದಿಙ್ಮಂಡಲವು, ಸಂಖ್ಯೆಯಿಲ್ಲದ= ಅಸಂಖ್ಯಾತವಾದ, ಸಿಂಧ= ಕೊಡೆಗಳಿಗೂ, ಸೀಗುರಿ= ಚೌರಿಗಳಿಗೂ, ಪತಾಕೆಗೆ= ಬಾವುಟಗಳ ಸಮೂಹಕ್ಕೆ, ನಭೋಮಂಡಲಂ= ಆಕಾಶಮಂಡಲವು, ಮೀರಿದ= ಹೆಚ್ಚಾದ, ಬಿಂಕದಿಂದ= ಗರ್ವದಿಂದ, ಇರಿವ= ತಿವಿಯುವ, ಕಲಿತನಕ್ಕೆ= ಪರಾಕ್ರಮಕ್ಕೆ, ರಣಮಂಡಲಂ= ಯುದ್ಧರಂಗವು, ಸಂಕೋಚಂ ಎನೆ= ಸ್ಥಳಸಾಲದು ಎನ್ನುವಂತೆ, ಬಂದ= ಆಗಮಿಸಿದ, ಪಾರ್ಥನ= ಫಲ್ಗುಣನ, ತುರಂಗಮಂ= ಕುದುರೆಯನ್ನು, ಕಟ್ಟಿ= ಸಮರ್ಥಿಸಿ, ಬಳಸಿ= ಸುತ್ತಲೂ ಆವರಿಸಿ, ಪದ್ಮವ್ಯೂಹವಾಗಿ= ಕಮಲದಂತೆ ಸೈನ್ಯವನ್ನು ಮೂರ್ತಿಗೊಳಿಸಿ, ನಿಂದು= ನಿಂತುಕೊಂಡು, ಆ ಸೇನೆ= ಆ ಸುಧನ್ವನ ಸೈನ್ಯವು, ನಲಿದು= ಸಂತೋಷಿಸಿ, ಆರ್ದುದು= ಅಬ್ಬರಿಸಿತು. 


ಅ॥ವಿ॥ ಅಬ್ಬರ( ತ್ಭ) ಆರ್ಭಟ ( ತ್ಸ) ಕಲಿಯಭಾವ=ಕಲಿತನ. ಪದ್ಮವ್ಯೂಹ= ಪದ್ಮದ ಆಕೃತಿಯಾದ ಸೈನ್ಯ, ವ್ಯೂಹವು = ಪದ್ಮದಂತೆ, ಪದ್ಮವ್ಯೂಹ. (ಉ. ಪೂ. ಕ.) 


ತಾತ್ಪರ್ಯ:- ಇದೂ ಅಲ್ಲದೆ ಹಸ್ತ್ಯಶ್ವ ರಥಪದಾತಿಗಳು ಭೂಭಾಗವನ್ನೂ, ಭೇರೀಮುಂತಾದವುಗಳ ವಾದ್ಯ ಘೋಷವೈ ದಿಕ್ಚಕ್ರವನ್ನೂ, ಅಸಂಖ್ಯಾತವಾದ ಛತ್ರಚಾಮರ ದ್ವಜಪತಾಕಾದಿಗಳು, ಅಂತರಿಕ್ಷ ಭಾಗವನ್ನೂ, ಹೆಚ್ಚಾದ ಗರ್ವದಿಂದೊಡ-

ಗೂಡಿದ ವೇರಭಟರ ಸಮೂಹವು ಯೈದ್ಧರಂಗವನ್ನೂ ಆವರಿಸಿಕೊಂಡಿರಲು, ಅರ್ಜುನನ ಅಶ್ವಮೇಧಯೋಗ್ಯವಾದ ಕುದುರೆಯ ಸುತ್ತಲೂ ಸುತ್ತುಗಟ್ಟಿಕೊಂಡು ಹಂಸಧ್ವಜನ ಸೇನೆಯು ಸಂತೋಷದಿಂದಾರ್ಭಟಿಸಿತು. 


ಸುತ್ತ ಪದ್ಮವ್ಯೂಹಮಂ ರಚಿಸಿ ನಡುವೆ ನರ। 

ನುತ್ತಮತುರಂಗಮಂ ಕಟ್ಟಿ ಕಾಳಗಕೆ ಭಟ। 

ರೊತ್ತಾಗಿ ನಿಂದರರಿವೀರರಂ ಬರಹೇಳೆನುತ್ತರಸನಾಜ್ಞೆಯಿಂದೆ॥ 

ಇತ್ತ ಪಾರ್ಥಂಗೆ ಚರರೈತಂದು ನುಡಿದರೀ। 

ವೃತ್ತಾಂತಮಂ ಬಳಿಕ ಪ್ರದ್ಯುಮ್ನನಂ ಕರೆದು। 

ಮತ್ತೆ ಬಂದುದು ವಿಘ್ನಮಿದಕಿನ್ನುಪಾಯಮೇನೆಂದೊಡವನಿಂತೆಂದನು॥೧೦॥ 


ಪ್ರತಿಪದಾರ್ಥ :- ಸುತ್ತ= ಅರ್ಜುನನ ಕುದುರೆಯ ಸುತ್ತಲೂ, ಪದ್ಮವ್ಯೂಹಮಂ= ಕಮಲದ ಎಸಳಿನಂತೆ, ಸೇನಾನಿರ್ಮಾ-

ಣವನ್ನು ,ರಚಿಸಿ= ನಿರ್ಮಿಸಿ, ನಡುವೆ= ಆ ಸೇನೆಯ ಮಧ್ಯದಲ್ಲಿ, ನರನ= ಪಾರ್ಥನ, ( ಉತ್ತಮ= ಯೋಗ್ಯವಾದ ಅಶ್ವಮೇಧಯೋಗ್ಯವಾದ), ತುರಂಗಮಂ= ಅಶ್ವವನ್ನು, ಕಟ್ಟಿ= ಬಂಧಿಸಿ( ಸಮರ್ಥಿಸಿ)ಕಾಳಗಕ್ಕೆ = ಜಗಳಕ್ಕೆ, ಪಟುಭಟರು= ಬಲಶಾಲಿಗಳಾದ ವೀರರು, ಅರಸನ= ದೊರೆಯಾದ ಹಂಸಧ್ವಜನ, ಆಜ್ಞೆಯಿಂದ= ಅಪ್ಪಣೆಯ ಮೇರೆಗೆ, ಅರಿವೀರರ= ಶತ್ರುಗಳಾದ ಶೂರರನ್ನು, ಬರಹೇಳು= ಯುದ್ಧಕ್ಕೆ ಬರುವಂತೆ ಹೇಳು, ಎನುತ್ತ=ಎಂದು ಹೇಳುತ್ತಾ, ಒತ್ತಾಗಿ= ಗುಂಪಾಗಿ, 

ನಿಂತುಕೊಂಡರು, ಇತ್ತ= ಈ ಕಡೆ, ಪಾರ್ಥಂಗೆ= ಅರ್ಜುನನಿಗೆ, ಚರರು= ಸೇವಕರು, ಐತಂದು= ಬಂದು, ಈ ವೃತ್ತಾಂತಮಂ= ಈ ಸಂಗತಿಯನ್ನು, ನುಡಿದರು= ಹೇಳಿದರು, ಬಳಿಕ = ಅನಂತರ, ಪ್ರದ್ಯುಮ್ನನಂ= ಕೃಷ್ಣನ ಮಗನಾದ ಪ್ರದ್ಯುಮ್ನನನ್ನು, ಕರೆಸಿ= ಬರಮಾಡಿ, ಮತ್ತೆ= ಪುನಃ, ವಿಘ್ನಂ= ತೊಂದರೆಯು, ಬಂದುದು= ಪ್ರಾಪ್ತವಾಯಿತು, ಇದಕೆ= ಈ ವಿಘ್ನಕ್ಕೆ, ಇನ್ನು= ಬೇರೆ, ಉಪಾಯಂ= ಯೋಚನೆಯು, ಏಂ ಎಂದೊಡೆ= ಏನು ಮಾಡಬೇಕೆನಲು, ಅವನು= ಆ ಪ್ರದ್ಯುಮ್ನನು,ಇಂತೆಂದನು= ಮುಂದಿನಂತೆ ಹೇಳಿದನು. 

ಅ॥ವಿ॥ ನರ= ಅರ್ಜುನ, ಮನುಷ್ಯ, ಪಾರ್ಥ= ಪೃಥೆಯ ಮಗ, ಆಜ್ಞೆ (ತ್ಸ) ಅಪ್ಪಣೆ (ತ್ಭ) 


ತಾತ್ಪರ್ಯ:-ಆಗ ಅರ್ಜುನನ ಕುದುರೆಯ ಸುತ್ತಲೂ, ಕಮಲಪತ್ರದಂತೆ ಸೇನಾರಚನೆಯನ್ನೇರ್ಪಡಿಸಿ, ಮೆಯ್ಗಲಿಗಳಾದ ಯೋಧರು ಹಂಸಧ್ವಜನ ಅಪ್ಪಣೆಯಂತೆ ಮಹಾಶೂರರಾದ ಶತ್ರು ರಾಜರನ್ನು ಕಾಳಗಕೆ ಬರುವಂತೆ ಹೇಳಿಕಳುಹಿಸಿ,ವೀರ- ಭಟರು ಒತ್ತಾಗಿ ನಿಂತಿರಲು ಹಂಸಧ್ವಜನ ಕಡೆಯ ಭೃತ್ಯರು ಅರ್ಜುನನನ್ನು ಯುದ್ಧಕ್ಕೆ ಬರಹೇಳಿದ ಸಂಗತಿಯನ್ನರಿತವರಾಗಿ ಪ್ರದ್ಯುಮ್ನನನ್ನು ಬರಮಾಡಿಕೊಂಡು, ಪುನಃ ಅಶೂವಮೇಧ ಕುದುರೆಯು ಮುಂದರಿಯಲು, ಮಹತ್ತಾದ ವಿಘ್ನ ಬಂದೊದಗಿದ ಸಂಗತಿಯನ್ನು ತಿಳಿಯಪಡಿಸಿ, ಕೇಳಲಾಗಿ, ಪ್ರದ್ಯುಮ್ನನು ಮುಂದೆ ಬರುವಂತೆ ಹೇಳಿದನದೆಂತೆನೆ. 


ನಿನ್ನಂ ಕಳುಹುವಂದು ಹಯದ ಮೇಲಾರೈಕೆ। 

ಗೆನ್ನನಟ್ಟಿದನಲಾ ಪಿತನಾತನಾಜ್ಞೆಯಂ। 

ಮನ್ನಿಸುವ ಕಾಲಮಲ್ಲವೆ ತನಗೆ ನೀನಿದಕ್ಕೆಣಿಕೆಗೊಳಬಹುದು ಬರಿದೆ॥ 

ತನ್ನ ಭುಜಬಲದಿಂದೆ ಬಿಡಿಸಿ ತಂದಪೆನಶ್ವ। 

ಮನ್ನೋಡು ಸಾಕೆನುತ ಪಾರ್ಥನಂ ಬೀಳ್ಕೊಂಡು । 

ಪನ್ನಗಾರಿಧ್ವಜನ ತನಯನೈದೆದನಹಿತಮೋಹರಕೆ ಸೇನೆಸಹಿತ॥೧೧॥ 


ಪ್ರತಿಪದಾರ್ಥ :- ನಿನ್ನಂ= ಪಾರ್ಥನೃದ ನಿನ್ನನ್ನು, ಕಳುಹವಂದು= ಶ್ರೀಕೃಷ್ಣನು ಕುದುರೆಯ ಸಂಗಡ ಕಳುಹಿಸುವಾಗ, ಹಯದ= ಕುದುರೆಯ, ಮೇಲೆ ಆರೈಕೆಗೆ= ಮೈಗಾವಲಾಗಿ, ಪಿತನು= ಎನ್ನ ತಂದೆಯಾದ ಶ್ರೀಕೃಷ್ಣನು, ಎನ್ನನು= ನನ್ನನ್ನು, ಅಟ್ಟಿದನಲಾ= ಕಳುಹಿಸಿದನಲ್ಲವೆ, ಆತನ= ಆ ಕೃಷ್ಣನ, ಅನುಜ್ಞೆಯಂ=ಅಪ್ಪಣೆಯನ್ನು, ಮನ್ನಿಸುವ= ಮರ್ಯಾದೆಯಿಂದ ನಡೆಯಿಸುವ, ಕಾಲಂ= ವೇಳೆಯು, ತನಗೆ= ನನಗೆ, ಅಲ್ಲವೆ= ಈಗ ಆಗಿರುವುದಲ್ಲವೆ? ನೀಂ=ನೀನು, ಇದಕೆ= ಈ ಅಲ್ಪಕಾರ್ಯಕ್ಕೆ, ಬರಿದೆ= ಸುಮ್ಮನೆ, ಎಣಿಕೆಗೆ= ಆಲೋಚನೆಯನ್ನು, ಗೊಳಬಹುದೆ= ಮಾಡಬಹುದೆ, ತನ್ನ=ನನ್ನ, ಭುಜಬಲದಿಂದ= ಬಾಹುಶಕ್ತಿಯಿಂದ, ಅಶ್ವಮಂ= ಕುದುರೆಯನ್ನು, ಬಿಡಿಸಿ= ಬಿಡುಗಡೆ ಮಾಡಿಕೊಂಡು, ತಂದಪೆನು= ತರುತ್ತೇನೆ, ನೋಡು= ಈಕ್ಷಿಸು, ಸಾಕು= ಬಿಡು( ಯೋಚನೆ ಮಾಡಬೇಡ) ಎನುತ= ಹೀಗೆಂದು ಹೇಳುತ್ತ, ಪಾರ್ಥನಂ= ಅರ್ಜುನನನ್ನು, ಬೀಳ್ಕೊಂಡು=ಸಮಾಧಾನಮಾಡಿಕೊಂಡು, ಪನ್ನಗಾರಿ= ಸರ್ಪಗಳಿಗೆ ಶತ್ರುವಾದ ಗರುಡನೆ, ಧ್ವಜನ= ಧ್ವಜವಾಗುಳ್ಳ ಕೃಷ್ಣನ, ತನಯನು= ಮಗನಾದ ಪ್ರದ್ಯುಮ್ನನು, ಅಹಿತಮೋಹರಕೆ= ಹಗೆಗಳ ಸೇನೆಗೆ, ಸೇನೆಸಹಿತ= ಸೇನಾಯುಕ್ತನಾಗಿ, ಐದಿದನು= ಸೇರಿದನು. 


ಅ॥ವಿ॥ ಆಜ್ಞೆ (ತ್ಸ) ಆಣೆ (ತ್ಭ) ( ಪತ್=ಕಾಲು, ನ= ಇಲ್ಲದ, ಗ= ಗಮಿಸುವುದು) -ಸರ್ಪ, ಪನ್ನಗಕ್ಕೆ ಅರಿ = ಪನ್ನಗಾರಿ, ಚ.ತ. 

ಪನ್ನಗಾರಿಯೇ ಟಕ್ಕೆಯಾಗುಳ್ಳವನು, ಪನ್ನಗಾರಿ ಧ್ವಜ ( ಬ.ಸ.) ಕಾಲ=ಸಮಯ, ಯಮಧರ್ಮ. 


ತಾತ್ಪರ್ಯ:- ನಿನ್ನನ್ನು ಕುದುರೆಯ ಸಂಗಡ ಕಳುಹಿಸುವಾಗ ಕುದುರೆಯ ಕಾವಲಿಗೆ ಶ್ರೀಕೃಷ್ಣನು ನನ್ನನ್ನು ಕಳುಹಿಸಲಿಲ್ಲವೇ? ಈಗ ಎನ್ನ ತಂದೆಯಾದ ಕೃಷ್ಣನ ಅಪ್ಪಣೆಯನ್ನು ನಡೆಸಲಿಕ್ಕೆ ಸಮಯವಲ್ಲವೇ? ಇಂಥಾ ಅಲ್ಪವಾದ ಕಾರ್ಯಕ್ಕೆ ಚಿಂತಿಸಬಹುದೆ? ನನ್ನ ಭುಜಪರಾಕ್ರಮದಿಂದ ಕುದುರೆಯನ್ನು ಬಿಡಿಸಿ ತಂದಪೆನೆನುತ ಪಾರ್ಥನಂ ಬೀಳ್ಕೊಂಡು ಪ್ರದ್ಯುಮ್ನನು ಸೇನಾಸಮೇತನಾಗಿ ಹೊರಟುಹೋದನು. 


ಲಟಕಟಿಸುತಾಗ ಸಾತ್ಯಕಿ ಸಾಂಬ ಕೃತವರ್ಮ। 

ಶಠ ನಿಶಠರನಿರುದ್ಧ ಗದ ಮುಖ್ಯರಾದ ಪಟು। 

ಭಟರಖಿಳ ಯಾದವ ಚತುರ್ಬಲಂ ಜೋಡಿಸಿತು ಸಮರಸನ್ನಾಹದಿಂದೆ॥ 

ದಿಟಮಿಂದಜಾಂಡಘಟಮೊಡೆಯದಿರದೆಂಬಿನಂ। 

ಪಟಹ ಡಿಂಡಿಮ ಡೌಡೆ ಭೇರಿ ನಿಸ್ಸಾಳ ತಂ। 

ಬಟ ಮುರಜ ಡಕ್ಕೆ ಡಮರುಗ ಕೊಂಬು ಕಹಳೆಗಳ ಬಹುಳರವಮಳ್ಳಿರಿದುದು॥೧೨॥


ಪ್ರತಿಪದಾರ್ಥ :- ಆಗ= ಆ ವೇಳೆಗೆ ಸರಿಯಾಗಿ, ಸಾತ್ಯಕಿ=ಸತ್ಯಕನ ಪುತ್ತನು, ಸಾಂಬ= ಜಾಂಬವತಿಯ ನಂದನನು, ಕೃತವರ್ಮ= ಯದುಸೇನಾಧ್ಯಕ್ಷನು, ಶಠ= ಶಠನೆಂಬುವನು, ನಿಶಠ= ನಿಶಠನು, ಅನಿರುದ್ಧ= ಅನೆರುದ್ಧನು, ಗದ= ಗದನೆ, ಆದಿ= ಮೊದಲ್ಗೊಂಡು, ಮುಖ್ಯರಾದ= ಆದಿಯಾದ, ಪಟುಭಟರು= ಬಲಾಢ್ಯರಾದ ವೀರರು, ಅಖಿಳ ಯಾದವರ= ಸಮಸ್ತ ಯದುರಾಜರ, ಚತುರ್ಬಲಂ= ಆನೆ, ಕುದುರೆ, ರಥ, ಕಾಲಾಳು, ಇವುಗಳು, ಲಟಕಟಿಸಿ= ತಂಡತಂಡವಾಗಿ ಸೇರಿ, ಸರ್ವ= ಸಕಲವಾದ, ಸನ್ನಾಹದಿಂದ=ಕಾರ್ಯದಿಂದ, (ಜೋಡಿಸಿತು= ಸೇರೆದ್ದಾಯೆತು, ಇಂದು=ಈಗ), ಅಜಾಂಡ= ಬ್ರಹ್ಮನ ಅಖಂಡವಾದ ಈ ಭೂಮಂಡಲವು, ಒಡೆಯದೆ= ಹೋಳಾಗದೆ, ಇರದು= ಇರಲಾರದು, ದಿಟಂ= ನಿಜವು, ಎಂಬಿನಂ= ಎನ್ನುವ ಹಾಗೆ, ಪಟಹ= ತಮ್ಮಟೆಯು, ಡಿಂಡಿಮ= ಸಣ್ಣನಗಾರಿ, ಡೌಡೆ= ಡೋಲು, ಭೇರಿ= ದೊಡ್ಡ ನಗಾರಿಯು, ನಿಸ್ಸಾಳ =ಸಣ್ಣನಗಾರಿಯು, ತಮ್ಮಟೆ=ತಮ್ಮಟೆಯು, ಮುರಜ=ಶಂಖವು, ಢಕ್ಕೆ= ಢಕ್ಕೆ ಎಂಬ ವಾದ್ಯವು, ಡಮರುಗ= ಬುಡುಬುಡಿಕೆಯು, ಕೊಂಬು= ಕೋಡಿನಂತೆ ಇರುವ ವಾದ್ಯ ವಿಶೇಷವು, ಕಹಳೆ== ಕಹಳಾ ಎಂಬ ವಾದ್ಯ ವಿಶೇಷವು, ಇವುಗಳ= ಇವೇ ಆದಿಯಾಗುಳ್ಳ, ಬಹುವಾದ= ಹೆಚ್ಚಾದ, ರವಂ= ಶಬ್ಧವು, ಅಳ್ಳಿರಿದುದು= ಎರಡು ಪಕ್ಕೆಗಳಲ್ಲಿಯೂ ತುಂಬಿಕೊಂಡಿತು. 


ಅ॥ವಿ॥ ಬಲ=ಬಲರಾಮ, ಸೈನ್ಯ, ಶಕ್ತಿ, ದಶಾವತೃರಗಳು= ಮತ್ಸ್ತ, ಕೂರ್ಮ, ವರಾಹ, ನಾರಸಿಂಹ, ವಾಮನ, ಪರಶುರಾಮ, ರಘುರಾಮ, ಕೃಷ್ಣ, ಬೌದ್ಧ, ಕಲ್ಕಿ. 


ತಾತ್ಪರ್ಯ:- ಆಗ ಸಾತ್ಯಕಿ, ಸಾಂಬ, ಕೃತವರ್ಮ, ಶಠ, ನಿಶಠ, ಅನಿರುದ್ಧ, ಗದ ಇವರೇ ಮುಖ್ಯರಾದ ಸೇನಾಜನರು, ವಾದ್ಯರವದಿಂದ ಕೂಡೆದವರಾಗಿ ಪ್ರಯಾಣಮಾಡಿ ಯುದ್ಧಕ್ಕೆ ಬಂದರು. ಆ ಸಮಯದಲ್ಲಿ ಹಸ್ತ್ಯಶ್ವರಥಪದಾತಿ ಇವೇ ಮೊದಲಾದ ಚತುರಂಗಬಲವೂ ಸೇರಿ ತಮಟೆ, ಡೋಲು, ನಗಾರಿ, ರಣಭೇರಿ, ದೊಡ್ಡ ನಖಾರಿ,ಢಕ್ಕೆ, ಶಂಖ, ದುಂದುಭಿ, ಕೊಂಬು, ಕಾಳಗ ತಮ್ಮಟೆ, ಇವೇ ಮೊದಲಾದ ವಾದ್ಯವಿಶೇಷಗಳು, ರವಗೈಯುತ್ತಿರಲು ಪಕ್ಕದ ಎರಡು ಭಾಗಗಳೂ ತುಂಬಿಕೊಳ್ಳುವಂತೆ ಇತ್ತು. ಸಮಸ್ತ ಯಾದವರ ಸೈನ್ಯವೂ ಪುಂಖಾನುಪುಂಖವಾಗಿ ಬರುತ್ತ ಕಾಲಕ್ಕೆ ಅನುಸಾರವಾಗಿಯೂ ನಿಯಮಕೆ ತಪ್ಪದೆಯೂ ಬಂದು ಒದಗಲು, ಬ್ರಹ್ಮಾಂಡವೇನಾದರು ಒಡೆದು ಹೋಗುತ್ತದೆಯೋ ಎಂಬಂತೆ ಯುದ್ಧಕ್ಕೆ ಅನುವಾಯಿತು.  


ಮೊಗಸಿತರಿಬಲವನನುಸಾಲ್ವಕನ ಸೇನೆಯೊ। 

ಮ್ಮೊಗದೊಳೊರೆಯುಗಿದ ಫಣಿಕುಲದಂತೆ ರಣದವಕ। 

ಮೊಗದೊದಗಿತಂಬುಧಿಯ ತೆರೆಯಂತೆ ಯೌವನಾಶ್ವನ ಸೈನ್ಯಮೊಂದೆಸೆಯೊಳು॥ 

ಯುಗದಂತ್ಯದಭ್ರದಂತೆದ್ದುದುರವಣಿಸಿ ಸಂ। 

ಯುಗಕೆ ನೀಲಧ್ವಜನ ಸೈನಿಕಂ ಬಳಿಕ ಕರ। 

ಯುಗಳಂ ಮುಗಿದು ಕಿರೀಟಿಗೆ ವಿನಯದಿಂದ ಒನ್ನೈಸಿದಂ ಕರ್ಣಸೂನು॥೧೩॥ 


ಪ್ರತಿಪದಾರ್ಥ :- ಅನುಸಾಲ್ವಕನ= ಸಾಲ್ವನ ಮಗನಾದ ಅನುಸಾಲ್ವಕನ, ಸೇನೆ= ಸೈನ್ಯವು, ಅರಿಬಲವನು= ಶತ್ರು ಸೈನ್ಯವನ್ನು, ಎರೆಯುಗಿದ= ಪರೆಯನ್ನು ಬಿಟ್ಟ, ಫಣಿಕುಲದಂತೆ =ಹಾವುಗಳ ಸಮೂಹದ ಹಾಗೆ, ಮೊಗದುದು= ಆವರಿಸಿ-

ಕೊಂಡಿತು, ಮತ್ತು ರಣದವಕ= ಯುದ್ಧಾಕಾಂಕ್ಷೆಯು,ಮೊಗದೊಡಗಿತು= ಉಪಕ್ರಮವಾಯಿತು, ಅಂಬುಧಿಯ= ಕಡಲಿನ, ತೆರೆಯಂತೆ= ಅಲೆಯ ಹಾಗೆ, ಯೌವನಾಶ್ವನ = ಯೌವನಾಶ್ವನೆಂಬುವನ, ಸೇನೆ=ಸೈನ್ಯವು, ಒಂದೆಸೆಯೊಳು= ಒಂದು ದಿಕ್ಕಿನಲ್ಲಿ ,ಮೊಗದೊಡಗಿತು= ಎದುರಾಗಿ ನಿಂತಿತು, ನೀಲಧ್ವಜನ = ಜ್ವಾಲೆಯ ಗಂಡನ, ಸೈನಿಕಂ= ಸೇನೆಯು, ಯುಗದಂತ್ಯದ= ಪ್ರಪಂಚನಾಶಸಮಯದ, ಅಭ್ರದಂತೆ= ಮೋಡದಂತೆ, ಸಂಯುಗಕೆ= ಕಾಳಗಕ್ಕೆ, ಉರವಣಿಸಿ= ರೇಗಿ, ಎದ್ದುದು= ಸಿದ್ಧವಾಯಿತು, ಬಳಿಕ = ಅನಂತರದಲ್ಲಿ, ಕರ್ಣಸೂನು= ವೃಷಧ್ವಜನು, ಕರಯುಗಳಂ= ಕೈಗಳೆರಡನ್ನೂ, ಮುಗಿದು= ಸೇರಿಸಿಕೊಂಡು, ಕಿರೀಟಿಗೆ = ಪಾರ್ಥನಿಗೆ, ವಿನಯದಿಂದ= ನಮ್ರತೆಯಿಂದ,ಬಿನ್ನೈಸಿದಂ= ಅರಿಕೆ ಮಾಡಿಕೊಂಡನು. 


ಅ॥ವಿ॥ಸಾಲ್ವನ ಮಗ=ಅನುಸಾಲ್ವ, ಅರಿಯ+ಬಲ= ಅರಿಬಲ (ಷ.ತ.) ಎರೆಯನ್ನು+ಉಗಿದ( ಕ್ರಿರಿ. ಸ.) ಫಣಿಯ+ಕುಲ

(ಷ. ತ.) ಫಣ= ಹೆಡೆ, ಅದು ಉಳ್ಳದ್ದು ಫಣಿ, ಕರ=ಕೈ, ಕಿರಣ, ಆನೆಯ ಸೊಂಡಿಲು, ಕಾಣಿಕೆ. 


ತಾತ್ಪರ್ಯ:- ಅನುಸಾಲ್ವಕನ ಸೇನೆಯು ಅರಿಬಲವನ್ನು ಪರೆಬಿಟ್ಟ ಫಣಿಯಂತೆ ಆವರಿಸಿಕೊಂಡುತು, ಮತ್ತು ಯೌವನಾಶ್ವನ ಸೇನೆಯು ಸಮುದ್ರದಲ್ಲಿ ಉಬ್ಬಿ ಮೇಲಕ್ಕೇಳುವ ತರಂಗದ ರೀತಿಯಿಂದ ಒಂದು ಭಾಗದಲ್ಲಿ ಆವರಿಸಿಕೊಂಡಿತು.ಮತ್ತೊಂದು ಕಡೆಯಲ್ಲಿ ನೀಲಧ್ವಜನೆಂಬ ವೀರನ ಸೈನ್ಯವು ಜಲಪ್ರಳಯದ ಮೇಘದ ರೀತಿಯಿಂದ ಮುತ್ತಿಗೆಯನ್ನು ಹಾಕಿತು. ಬಳಿಕ ಕರ್ಣನ ಮಗನಾದ ವೃಷಧ್ವಜನು ಕೈಗಳಂ ಮುಗಿದುಕೊಂಡು ನಮ್ರಭಾವದಿಂದ ಅರಿಕೆ ಮಾಡಿಕೊಂಡನು. 


ತಾತ ಚಿತ್ತೈಸು ಗೋಷ್ಟದಜಲಕೆ ಹರಿಗೋಲ। 

ದೇತಕೆ ವೃಥಾ ಕುದುರೆಮಂದಿಯಂ ನೋಯಿಸದಿ। 

ರೀತಳನೆಲ್ಲರಂ ತೆಗೆಸೆನಗೆ ಸೆಲವಿಂದಿನಾಹವಂ ಪರಬಲವನು॥ 

ಘಾತಿಸಿ ತುರಂಗಮಂ ತಾರದೊಡೆ ಬಳಿಕ ರವಿ। 

ಜಾತನ ಕುಮಾರಕನೆನೋಡು ಸಾಕೆನುತ ವೃಷ। 

ಕೇತು ಪಾರ್ಥನ ಬೆಸಂಬಡೆದು ರಥವೇರಿದಂ ಮೀರಿದ ಪರಾಕ್ರಮದೊಳು॥೧೪॥ 


ತಾತ= ಎಲೈ ತಂದೆಯಾದ ಪಾರ್ಥನೆ! ಗೋಷ್ಟದ= ಆಕಳಿನ ಹೆಜ್ಜೆಯಲ್ಲಿ ನಿಂತಿರುವ, ಜಲಕೆ=ನೀರಿಗೆ, ಹರಿಗೋಲು= ದೋಣಿಯು, ಅದೇತಕೆ= ತರುವುದರಿಂದೇನು ಫಲ, ವೃಥಾ= ನಿಷ್ಕಾರಣವಾಗಿ, ಕುದುರೆ= ಅಶ್ವಗಳನ್ನು, ಮಂದಿಯಂ= ಜನರನ್ನೂ, ನೋಯಿಸದಿರಿ= ಆಯಾಸಪಡಿಸಬೇಡಿ, ಈತಗಳನೆಲ್ಲರಂ= ಹೊರಟಿರುವ ಇವರೆಲ್ಲರನ್ನೂ, ತೆಗೆಸು= ಹಿಂದಕ್ಕೆ ಬರಮಾಡು, ಇಂದಿನ= ಈ ಹೊತ್ತಿನ, ಆಹವಂ= ಕಾಳಗವು, ಎನಗೆ= ನನಗೆ, ಸೆಲವು= ಅನುಜ್ಞೆಯಾಗಲಿ, ಪರಬಲವನು= ಅರಿಸೇನೆಯನ್ನು, ಘಾತಿಸಿ= ನಾಶಮಾಡಿ, ತುರಂಗಮಂ = ನಮ್ಮ ಕುದುರೆಯನ್ನು, ತಾರದೊಡೆ= ತರದೇ ಇದ್ದರೆ, ಬಳಿಕ = ರವಿಜಾತನ= ಕರ್ಣನ, ಕುಮಾರಕನೇ= ಮಗನಾದೇನೆ, ನೋಡು= ಈಕ್ಷಿಸು, ಸಾಕು=ಬಲಹೀನನೆಂಬ ಅನುಮಾನವನ್ನು ಬಿಡು, ಎನುತ= ಎಂದು ಹೇಳುತ್ತಾ, ವೃಷಕೇತು= ವೃಷಧ್ವಜನು, ಪಾರ್ಥನ = ಫಲ್ಗುಣನ, ಬೆಸಂ= ಅನುಜ್ಞೆಯನ್ನು, ಬಡೆದು=ಹೊಂದಿ, ಮೀರಿದ= ಅತಿಕ್ರಮಿಸಿದ, ಪರಾಕ್ರಮದೊಳು= ಶೌರ್ಯದಿಂದ, ರಥಂ=ತೇರನ್ನು, ಏರಿದಂ=ಹತ್ತಿದನು. 


ಅ॥ವಿ॥ ಗೋವಿನ+ಪದ(ಷ. ತ.) ಹೆಜ್ಜೆ ಹಳಗನ್ನಡ ಪಜ್ಜೆ, ರವಿಯಿಂದ+ ಜಾತ ( ತೃ. ತ.) 


ತಾತ್ಪರ್ಯ:- ಎಲೈ ತಾತನಾದ ಧನಂಜಯನೇ! ಆಕಳಿನ ಹೆಜ್ಜೆಯ ಗುರುತಿನಲ್ಲಿ ನಿಂತಿರುವ ಜಲಕ್ಕೆ( ಅದನ್ನು ದಾಟಲು) ತೆಪ್ಪ ಬೇಕಾದೀತೆ? ಅದೇಕೆ ವೃಥಾ ಸೈನಿಕರನ್ನು ನೋಯಿಸುತ್ತಿ? ಇವರನ್ನೆಲ್ಲಾ ಹಿಂದಕ್ಕೆ ಬರುವಂತೆ ಮಾಡು, ಈ ದಿನ ನನಗೆ ಅನುಜ್ಞೆಯಾದಲ್ಲಿ ಶತ್ರು ಸೈನ್ಯವನ್ನೆಲ್ಲಾ ನಾಶಮಾಡಿ, ಕುದುರೆಯನ್ನು ಬಿಡಿಸಿ ತರುವೆನು, ಹಾಗೆ ತಾರದಿದ್ದರೆ ನನ್ನನ್ನು ಸೂತ ಪುತ್ರನಾದ ಕರ್ಣನ ಕುಮಾರನೆಂದು ಕರೆದಾರೆ! ನಾನು ಬಾಲಕನೆಂದು ಅನುಮಾನಬೇಡ, ನನ್ನ ಪರಾಕ್ರಮವಾದರೂ ನೋಡೆಂದು ರಥವನ್ನೇರಿದನು. 


ತಾರಕಾಸುರನ ಪೆರ್ಬಡೆಗೆ ಮೈದೋರುವ ಕು। 

ಮಾರನಂ ತಾನಭ್ರಮಾರ್ಗದೋಳ್ ಸುಳಿವ ಮುಂ। 

ಗಾರಮಿಂಚಂ ತನ್ನ ಹೊಂದೇರುಗಿರಿಗೆರಗುವಶನಿಯಂ ತನ್ನ ಘಾತಿ॥ 

ಪೇರಡವಿಗೈದುವ ದವಾಗ್ನಿಯಂ ತನ್ನ ಪ್ರ। 

ಚಾರಂ ನೆಗಳ್ದ ನಡುವಗಲ ರವಿಯಂ ತನ್ನ। 

ವೀರಪ್ರತಾಪಂ ತಿರಸ್ಕರಿಸೆ ವೃಷಕೇತು ರಿಪುಸೈನ್ಯಮಂ ಪೊಕ್ಕನು॥೧೫॥ 


ತಾನು=ವೃಷಧ್ವಜನು, ತಾರಕಾಸುರನ= ತಾರಕನೆಂಬ ದೈತ್ಯನ, ಪೆರ್ಬಡೆಗೆ= ದೊಡ್ಡದಾದ ಸೈನ್ಯಕ್ಕೆ, ಮೈದೋರುವ= ಎದುರಾಗಿ ಪ್ರವೇಶಿಸುವ, ಕುಮಾರಕನಂ= ಸುರಸೇನಾಧಿಪತಿಯಾದ ಗುಹನನ್ನು, ತನ್ನ=ತನ್ನಯ, ಹೊಂದೇರ= ಸುವರ್ಣಮಯವಾದ ರಥವು, ಅಭ್ರಮಾರ್ಗದೋಳ್= ಅಂತರಿಕ್ಷದಲ್ಲಿ ( ಮೇಘಮಾರ್ಗದಲ್ಲಿ) ಸುಳಿವ= ತಿರುಗಾಡುವ, ಮುಂಗಾರಮಿಂಚು= ಕಾರ್ಗಾಲದ ಅವಧಿಯಲ್ಲಿ ಉಂಟಾಗುವ ಹೊಳಪನ್ನು, ತನ್ನಘಾತಿ= ತನ್ನಯ ಪೆಟ್ಟು, ಜಲಕ್ಕನೆ= ಉದುಕಕ್ಕೆ, ಎರಗುವ= ತಗಲುವ, ಅಶನಿಯಂ= ಸಿಡಿಲನ್ನು, ತನ್ನ=ತನ್ನಯ, ಪ್ರಚಾರಂ=ಅಭಿವೃದ್ಧಿಯು, ಹೇರಡವಿಗೆ= ದೊಡ್ಡ ಕಾಡಿಗೆ, ಐದು = ಉಂಟಾಗುವ, ದವಾಗ್ನಿಯಂ= ಕಾಡುಗಿಚ್ಚನ್ನು ,ತನ್ನವೀರಪ್ರತಾಪಮಂ= ಶೂರತ್ವದ ಆಟೋಪವು, ನೆಗಳ್ದು= ಆವರಿಸಿ, ನಡುವಗಲರವಿಯಂ= ಮಧ್ಯಾಹ್ನದ ಭಾನುವನ್ನು, ತಿರಸ್ಕರಿಸೆ= ಹೀಯಾಳಿಸುತ್ತಿರಲು, ವೃಷಕೇತು= ಕರ್ಣನ ಮಗನಾದ ವೃಷಧ್ವಜನು, ರಿಪುಸೈನ್ಯಮಂ= ಅರಿಬಲವನ್ನು, ಪೊಕ್ಕನು. 


ಅ॥ವಿ॥ ಕಾರಿನ+ಮುಂದು(ಅ.ಸ.) ವೀರರ+ ಪ್ರತಾಪ (ಷ.ತ.) ವೀರ(ತ್ಸ) ಬೀರ(ತ್ಭ) ಅರಣ್ಯದಲ್ಲಿ ಕಾಳ್ಗಿಚ್ಚು, ಭೂಮಿಯಲ್ಲಿ ಗರ್ಭಾಗ್ನಿಯೂ,ಸಮುದ್ರದಲ್ಲಿ ಬಾಡಬಾಗ್ನಿಯೂ ಇರುವುವಂತೆ. 


ತಾತ್ಪರ್ಯ:- ಆಗ ವೃಷಕೇತುವು ತಾರಕಾಸುರನ ದೊಡ್ಡದಾದ ಸೈನ್ಯಕ್ಕೆ ಎದುರು ಪಕ್ಷವಾಗಿ ಹೋಗುವ ದೇವತೆಗಳ ಸೇನಾಧ್ಯಕ್ಷನಾದ ಗುಹನನ್ನು, ತನ್ನ ಸುವರ್ಣಮಯವಾದ ರಥವು ಅಂತರಿಕ್ಷಮಾರ್ಗದಲ್ಲಿ ಸಂಚರಿಸುವ ಮುಂಗಾರು ಮಳೆಯಲ್ಲಿಬರು ಮಿಂಚನ್ನು, ತನ್ನ ಹೊಡೆತವು ನೀರಿಗೆ ಹೊಡೆಯುವ ಅಶನಿಯನ್ನು , ತನ್ನ ವ್ಯಾಪನೆಯು ಹೇರಡವಿಗೆ ಬಂದುಹೋಗುವ ದವಾನಲನನ್ನು, ತನ್ನ ಶೂರತ್ವದ ಆಟೋಪವು ಮೇಘಾವರಣವಿಲ್ಲದೆ ವ್ಯಾಪಿಸಿ, ಮಧ್ಯಾಹ್ನ ಕಾಲದ ಭಾಸ್ಕರನನ್ನೂ ತಿರಸ್ಕಾರ ಮಾಡುತ್ತಿರಲು, ವೃಷಧ್ವಜನುಅರಿಬಲವನ್ನು ಹೊಕ್ಕನು.


ದೂರದೊಳ್ ಕಂಡಂ ಸುಧನ್ವನಾತನ ಬರವ। 

ನಾರಿವಂ ಪಾರ್ಥನಾದೊಡೆ ಕಪಿಧ್ವಜಮಿಹುದು। 

ದಾರವೃಷಭಾಂಕಿತದ ಕೇತುದಂಡದ ಸುಭಟನಾವನೋ ಪಾಂಡವರೊಳು॥ 

ವೀರನಹನೆನುತ ಬಂದಿದಿರಾಗಿ ನಿಂದು ಪರಿ। 

ವಾರಮಂ ತೆಗೆಸಿ ಬಿಲ್ದಿರುವನೊದರಿಸುತೆ ಕೈ। 

ವಾರಿಸುತೆ ನಸುನಗುತೆ ಬಾಣಮಂ ತೂಗುತಿನಸುತಜನಂ ಬೆಸಗೊಂಡನು॥೧೬॥ 


ಪ್ರತಿಪದಾರ್ಥ :- ಸುಧನ್ವಂ= ಸುಧನ್ವನು, ಆತನ=ಆ ವೃಷಧ್ವಜನ, ಬರವನು= ಬರುವಿಕೆಯನ್ನು, ದೂರದೋಳ್= ದೂರದಿಂದಲೇ, ಕಂಡನು= ನೋಡಿದನು, ಇವಂ=ಈತನು, ಆರು=ಯಾರಾಗಿರಬಹುದು,ಪಾರ್ಥನಾದೊಡೆ= ಫಲ್ಗುಣನು ಆಗಿದ್ದರೆ, ಕಪಿಧ್ವಜಂ= ಕೇತುವಿನಲ್ಲಿ ಕೋತಿಯನ್ನುಳ್ಳದ್ದಾಗಿ, ಇಹುದು= ಇರುವುದು, ಉದಾರ= ಹೆಚ್ಚಾದ, ವೃಷಭ= ಎತ್ತೇ,ಅಂಕಿತದ= ಚಿಹ್ನೆಯುಳ್ಳ, ಕೇತುದಂಡದ =ಟೆಕ್ಕೆಯ ಕಂಬದ, ಸುಭಟನು= ವೀರನು ಅಹನು= ಆಗಿರುವನು, ಎನುತ= ಎಂದು ಹೇಳುತ್ತ, ಬಂದು= ಬಂದವನಾಗಿ, ಇದಿರಾಗಿ= ಎದುರಾಗಿ, ನಿಂದು=ನಿಂತುಕೊಂಡು, ಪರಿವಾರಮಂ= ತನ್ನ ಸುತ್ತಲಿದ್ದ ಜನವನ್ನು, ತೆಗೆಸಿ= ಅಡ್ಡ ಬರದಂತೆ ಮಾಡಿ, ಬಿಲ್ದಿರುವನು=ಧನಸ್ಸಿನ ಹಗ್ಗವನ್ನು, ಒದರಿಸುತ= ಟಂಕಾರ ಧ್ವನಿ ಮಾಡುತ್ತಾ, ಕೈವಾರಿಸುತ= ಕೈ ಬಡಿಯುತ್ತ, ಶ್ಲಾಘಿಸುತ= ಸ್ತುತಿಸುತ್ತಾ, ನಸುನಗುತ= ಮುಗುಳ್ನಗುತ್ತಾ, ಬಾಣಮಂ= ಅಂಬನ್ನು, ತೂಗುತ= ತಿರುಗಿಸುತ್ತಾ, ಇನ= ಸೂರ್ಯನ, ಸುತಪುತ್ರನಾದ ಕರ್ಣನಿಂದ, ಜನಂ= ಜನಿಸಿದ, ವೃಷಕೇತುವನ್ನು, ಬೆಸಗೊಂಡನು= ಮಾತಾಡಿಸಿದನು. 


ಅ॥ವಿ॥ ಇನ= ಸೂರ್ಯ, ಗಂಡ, ಕೈಯಂ+ಬಾರಿಸು (ಕ್ರಿ. ಸ.) ಬಿಲ್+ತಿರುವು(ದ. ಆ .ಸಂ) ಸುಷ್ಠು+ಭಟ=ಸುಭಟ. 


ತಾತ್ಪರ್ಯ:- ಆ ಬಳಿಕ ಸುಧನ್ವನು, ವೃಷಕೇತುವಿನ ಬರುವಿಕೆಯನ್ನು ನೋಡಿ ಇವನು ಯಾರಿರಬಹುದು? ಅರ್ಜುನನಾಗಿದ್ದ ಪಕ್ಷದಲ್ಲಿ ಕಪಿಧ್ವಜನಲ್ಲವೆ? ದೊಡ್ಡದಾದ ಹೋರಿಯೇ ಧ್ವಜದಲ್ಲುಳ್ಳವನಾಗಿದ್ದಾನೆ, ವೀರಭಟನಾಗಿರುವನು ಎಂದು ಹೇಳುತ್ತಾ ತನ್ನ ಸೈನ್ಯವನ್ನು ಕ್ರಮಗೊಳಿಸಿ, ವೃಷಧ್ವಜನಿಗೆದುರಾಗಿ ಬಂದು ನಿಂತು ಬಿಲ್ಲಿನ ಹೆದೆಯನ್ನು ಸರಿಪಡಿಸಿಕೊಳ್ಳುತ್ತಾ ಕರ್ಣನ ಪುತ್ರನಾದ ವೃಷಕೇತುವನ್ನು ಈ ರೀತಿಯಾಗಿ ವಿಚಾರಿಸಿದನು. 


ಎಲವೊ ನೀನಾರ್ ನಿನ್ನ ಪೆಸರದೇನಾವರ್ಷಿ। 

ಕುಲದವಂ ನಿನ್ನ ಪಿತನಾವಾತನೆಂಬುದಂ। 

ತಿಳಿಪೆನಗೆ ತಾನೀಗ ವೀರಹಂಸಧ್ವಜನೃಪನ ಕುಮಾರಂ ತನ್ನನು॥ 

ಇಳೆಯೊಳ್ ಸುಧನ್ವನೆಂಬರ್ ಮಧುಚ್ಛಂದಮುನಿ। 

ತಿಲಕನಿಂದಾಯ್ಯೆಮ್ಮ ವಂಶಮೆನೆ ಕರ್ಣಜಂ। 

ಬಳಿಕ ನಸುನಗೆಯೊಳೆಡಗೈಯ್ಯ ಕೋದಂಡಮಂ ತಿರುಗಿಸತ್ತಿಂತೆಂದನು೧೭॥ 


ಪ್ರತಿಪದಾರ್ಥ :- ಎಲವೊ =ಎಲೈ, ನೀನು ಆರು= ನೀನು ಯಾರು? ನಿನ್ನ ಪೆಸರು= ನಿನ್ನ ನಾಮಧೇಯವು, ಅದೇನು= ಯಾವುದು? ಆವರ್ಷಿ ಕುಲದವನು= ಯಾವ ಋಷಿಕುಲ ಪ್ರಸೂತನು, ನಿನ್ನ ಪಿತನು= ನಿನ್ನ ತಂದೆಯು, ಆವಾತನು= ಯಾರು? ಎಂಬುದಂ= ಎಂಬ ವಿಷಯವನ್ನು, ಎನಗೆ=ನನಗೆ, ತಿಳಿಸು=ತಿಳಿಯಪಡಿಸು, ತಾನು=ನಾನು,ವೀರ=ಪರಾಕ್ರಮಿ-

ಯಾದ, ಹಂಸಧ್ವಜ ನೃಪನ= ಹಂಸಧ್ವಜನೆಂಬ ರಾಜನ, ಕುಮಾರಂ= ಪುತ್ರನು, ತನ್ನಂ=ನನ್ನನ್ನು, ಇಳೆಯೋಳ್= ಭೂಮಿಯಲ್ಲಿ, ಸುಧನ್ವಂ= ಸುಧನ್ವನು, ಎಂಬರ್= ಎಂದು ಕರೆಯುವರು, ಎಮ್ಮ= ನಮ್ಮ, ವಂಶಂ= ಗೋತ್ರವು, ಮಧುಚ್ಛಂದ ಮುನಿಯಿಂ= ಮಧುಚ್ಛಂದ ಮಹರ್ಷಿಯಿಂದ, ಆಯಿತು=ನಿರ್ಮಿತವಾಯಿತು, ಎನೆ= ಎಂದು ಹೇಳಲಾಗಿ, ಕರ್ಣಜಂ= ಕರ್ಣನ ಮಗನಾದ ವೃಷಕೇತುವು, ಬಳಿಕ=ಅನಂತರದಲ್ಲಿ, ನಸುನಗೆಯೊಳು= ಮಂದಹಾಸದಿಂದ, ಎಡಕೈಯ= ಎಡಕೈಯಲ್ಲಿದ್ದ, ಕೋದಂಡಮಂ= ಧನುವನ್ನು, ತಿರುಗಿಸುತಲಿ= ತಿರುಗಿಸುತ್ತ, ಇಂತೆಂದನು= ಈ ಪ್ರಕಾರವಾಗಿ ಹೇಳಿದನು. 


ಅ॥ವಿ॥ ಎಡದ-ಕೈ= ಎಡಗೈ, (ಷ. ತ.) ವಂಶ=ಕುಲ, ಬಿದಿರು, ಮಹ+ಋಷಿ=ಮಹರ್ಷಿ (ಗು. ಸಂ. )


ತಾತ್ಪರ್ಯ:- ಎಲವೊ ನೀನು ಯಾರು? ನಿನ್ನ ನಾಮಧೇಯವೇನು? ನೀನು ಯಾವ ಋಷಿಕುಲಕ್ಕೆ ಸೇರಿದವನು? ನಿನ್ನ ತಂದೆ ಯಾರು? ಎಂಬಂಶವನ್ನು ವಿವರಗೊಳಿಸುವನಾಗು. ನಾನಾದರೋ ಅಸಹಾಯಶೂರನಾದ ಚಂಪಕಾವತಿಯ ರಾಜನಾದ ಮರಾಳಧ್ವಜನ ಕುಮಾರನು, ನನ್ನನ್ನು ಪೃಥ್ವಿಯಲ್ಲಿ ಸುಧನ್ವನೆಂದು ತಿಳಿವರು, ನಮ್ಮ ಕುಲವಾದರೋ ಮಧುಚ್ಛಂದ ಮಹರ್ಷಿಯಿಂದಾದುದು ಎನಲು. 


ಗೂಢಮಾಗಿರ್ದಲರ ಪರಿಮಳಂ ಪ್ರಕಟಿಸದೆ। 

ರೂಢಿಸಿದ ವಂಶವಿಸ್ತಾರಮಂ ಪೌರುಷದ। 

ಮೋಡಿಯಿಂದರಿಯಬಾರದೆ ಸಮರಸಾಧನಮಿದರೊಳಹುದೆ ನಿನಗಾದೊಡೆ॥ 

ಮೂಢ ಕೇಳ್ ಕಶ್ಯಪನ ಕುಲವೆಮ್ಮದೆಂಬರಾ। 

ರೂಢನಾಗಿಹ ದಿನಮಣಿಯ ತನಯನಾಹವ।

ಪ್ರೌಢಕರ್ಣನ ಸುತಂ ಪೆಸರೆನಗೆ ವೃಷಕೇತುವೆಂದೊಡವನಿಂತೆಂದನು॥೧೮॥ 


ಪ್ರತಿಪದಾರ್ಥ :- ಗೂಢಂ ಆಗಿರ್ದ= ಅಂತರಂಗವಾಗಿದ್ದ, ಅಲರ= ಹೂವಿನ, ಪರಿಮಳಂ= ಸುವಾಸನೆಯು, ಪ್ರಕಟಿಸದೆ= ಬಹಿರಂಗಪಡಿಸದೆ ಹೋದೀತೆ, ರೂಢಿಸಿದ= ಬಹಿರಂಗವಾಗಿರುವ, ವಂಶ= ಗೋತ್ರದ, ವಿಸ್ತಾರಮಂ= ಬಿತ್ತರವನ್ನು

(ವಿವರವನ್ನು) ಪೌರುಷದ ಹೇಡಿಯಿಂದ= ಪರಾಕ್ರಮವುಳ್ಳ ಕೈಲಾಗದವನಿಂದ, ಅರಿಯಬಾರದು= ತಿಳಿಯತಕ್ಕದ್ದಲ್ಲ, ಸಮರಕೆ= ಯುದ್ಧಕ್ಕೆ, ಸಾಧನಂ= ಸಾಮಗ್ರಿಯು, ಇದರೋಳ್= ನನ್ನನ್ನು ವಿಚಾರಿಸಿ ತಿಳಿಯುವದ್ದರಿಂದ, ನಿನಗೆ= ಪರಾಕ್ರಮಿಯಾದ ನಿನಗೆ, ಅಹುದೆ= ಆದೀತೆ, (ಆಗಲಾರದು) ಮೂಢ= ಅಜ್ಞಾನಿಯೆ,ಕೇಳ್= ತಿಳಿ, ಕಶ್ಯಪನ= ಕಶ್ಯಪ-

ಋಷಿಯ, ಕುಲವು= ಗೋತ್ರವು, ಎಮ್ಮದು= ನಮ್ಮದಾಗಿರುವುದು, ಎಂಬರು= ಈ ವಿಧದಿಂದ ಜನರು ಹೇಳುತ್ತಾರೆ, ಆರೂಢಂ ಆಗಿಹ= ಆ ಹೆಸರುವಾಸಿಯಾಗಿರುವ, ದಿನಮಣಿಯ = ಸೂರ್ಯನ, ತನಯನು= ಕುಮಾರನು, ಆಗಿ= ಆಗಿರುವ, ಆಹವ= ಕಾಳಗದಲ್ಲಿ, ಪ್ರೌಢ= ಬಲಾಢ್ಯನಾದ, ಕರ್ಣಸುತಂ= ಕರ್ಣನಿಗೆ ಪುತ್ರನು. ಎನಗೆ= ನನಗೆ, ಪೆಸರು= ಹೆಸರು, ವೋಷಕೇತುವು= ವೃಷಧ್ವಜನು. ಎಂದೊಡೆ= ಎಂದು ತಿಳಿಯಪಡಿಸಲು, ಅವನು= ಆ ಸುಧನ್ವನು, ಇಂತೆಂದನು= ಮುಂದಿನಂತೆ ಹೇಳಿದನು. 


ಅ॥ವಿ॥ ವಂಶ= ಬಿದಿರು, ಸಂತತಿ, ಅಲರಿನ+ಪರಿಮಳ(ಷ. ತ.) ದಿನದ+ಮಣಿ( ಷ.ತ.) ಮಣಿ=ರತ್ನ, ನಮಸ್ಕಾರಮಾಡುವುದು, ಕರ್ಣ=ಕಿವಿ, ಸೂರ್ಯಪುತ್ರ. 


ತಾತ್ಪರ್ಯ:- ಆ ಬಳಿಕ ವೃಷಧ್ವಜನು ಕೋದಂಡವನ್ನು ಕೈಯಲ್ಲಿ ತಿರುವುತ್ತ, ಗುಪ್ತವಾಗಿದ್ದ ಪುಷ್ಪದ ಪರಿಮಳವು ವ್ಯಕ್ತವಾಗದೆ ಹೋದೀತೆ? ನನ್ನ ಕುಲಗೋತ್ರಾದಿಗಳನ್ನು ವಿಚಾರಿಸುವುದು ಹೇಡಿಯಾದ ನಿನ್ನಿಂದಾದೀತೆ? ಸುಲಭೋಪಾಯವಾಗಿ ನಿನ್ನಿಂದ ತಿಳಿಯಲಾದೀತೆ? ಎಲೋ ಮೂಢನೆ ! ಕೇಳು, ನಾನು ಕಶ್ಯಪ ಋಷಿಯ ಕುಲದವನು, ಎಮ್ಮ ತಂದೆಯು ಸೂರ್ಯ ಪುತ್ರನಾದ ಕರ್ಣನೇ, ನಾನು ಅಂಥಾ ಕರ್ಣನಿಗೆ ಮಗನಾಗಿರುವೆನು, ಇಳೆಯೊಳಗೆನ್ನಂ ವೀರ ವೃಷಾಂಕನೆಂದಪರು, ಎನಲಾಗಿ, ಆಗ ಸುಧನ್ವನು, 


ಕರ್ಣಸುತನಾದೊಡೊಳ್ಳಿತು ವೀರನಹುದು ನೀಂ। 

ನಿರ್ಣಯಿಸಬಲ್ಲೆ ರಣರಂಗಮಂ ಮೂಢರಾಂ। 

ವರ್ಣಕದ ಮಾತುಗಳನರಿಯೆವೆನುತೆಚ್ಚಂ ಸುಧನ್ವನೀತನಸರಿಸಕೆ॥ 

ಸ್ವರ್ಣಪುಂಖದ ಕಣೆಗಳೈದಿದುವು ಮಿಂಚಿನ ಪೊ। 

ಗರ್ನಭೋಮಂಡಲವನಂಡಲೆಯಲಾಕ್ಷಣಂ। 

ದುರ್ನಿರೀಕ್ಷಣಮಾಗಲೆಡೆಯೊಳವನೆಲ್ಲವಂ ತರಿದಿವಂ ಕೋಲ್ಗರೆದನು॥೧೯॥ 


ಪ್ರತಿಪದಾರ್ಥ :- ಕರ್ಣಸುತನು= ಕರ್ಣನಿಗೆ ಮಗನು, ಆದೊಡೆ= ಆಗಿದ್ದರೆ, ಒಳ್ಳಿತು= ಮೇಲಾಯಿತು, ವೀರನು= ಸಮರ್ಥನು, ಅಹುದು=ಆಗಿರಬಹುದು, ರಣರಂಗಮಂ= ಯುದ್ಧರಂಗವನ್ನು, ನೀ= ನೀನು, ನಿರ್ಣೈಸಬಲ್ಲೆ= ದೃಢಪಡಿಸಬಲ್ಲೆ, ಆವು= ನಾವಾದರೋ, ಮೂಢರು= ಏನೂ ತಿಳಿಯದವರು, ವರ್ಣಕದ= ಜಂಭದ, ಮಾತುಗಳಂ= ಮಾತುಗಳನ್ನು, ಅರಿಯೆವು= ತಿಳಿದವರಾಗಿಲ್ಲ,ಎನುತ= ಎಂದು ಹೇಳುತ್ತ, ಸುಧನ್ವಂ= ಸುಧನ್ವನು, ಎಚ್ಚಂ= ಬಾಣ ಪ್ರಯೋಗ ಮಾಡಿದನು, ಈತನ= ಈ ವೃಷಧ್ವಜನ, ಸರಿಸಕೆ= ಸಮೀಪಕ್ಕೆ, ಸ್ವರ್ಣ= ಕಾಂಚನಯುಕ್ತವಾದ,ಪುಂಖದ= ರೆಕ್ಕೆಗಳುಳ್ಳ, ಕಣೆಗಳು= ಅಂಬುಗಳು, ಐದಿದವು= ಹೊಂದಿದವು, ಮಿಂಚಿನ= ಹೊಳಪಿನ, ಒಗರ್=ಕಾಂತಿಯು,

ನಭೋಮಂಡಲವನ್ನು= ಅಂತರಿಕ್ಷವನ್ನು, ಅಂಡಲೆಯಲು= ತುಂಬಿಬರಲು, ಆಕ್ಷಣಂ= ಆ ಕಾಲವು, ದುರ್ನಿರೀಕ್ಷಣಂ= ನೋಡಲು ಕಷ್ಟವಾದದ್ದು,ಆಗಲು= ಆಗಲಾಗಿ, ಅವಂ= ಆ ವೃಷಧ್ವಜನು, ಅವಂ= ಎಲ್ಲ ಬಾಣಗಳನ್ನೂ,ಎಡೆಯೊಳು= ಬರುತ್ತಿರುವ ಮಾರ್ಗದಲ್ಲಿಯೇ, ತರಿದು=ತುಂಡುಮಾಡಿ, ಕೋಲ್ಗರೆದನು= ಬಾಣಗಳನ್ನು ಸುರಿಸಿದನು. 


ಅ॥ವಿ॥ ಕೋಲ್+ ಕರೆ= ಗ ಕಾರ ಆದೇಶ ಸಂಧಿ, ಸ್ವರ್ಣ(ತ್ಸ)ಚಿನ್ನ (ತ್ಭ) 


ತಾತ್ಪರ್ಯ:- ವೃಷಧ್ವಜನಂ ಕುರಿತು ಎಲೋ! ನೀನು ಕರ್ಣನ ಮಗನೇ ಆಗಿರಬಹುದು, ಆದರೆ ಬಹು ಒಳ್ಳೇದಾಯಿತು, ಯುದ್ಧರಂಗದಲ್ಲಿ ನಿನ್ನನ್ನು ನೀನುಚಮತ್ಕಾರವಾಗಿ ಕಾಪಾಡಿಕೊಳ್ಳಲು ಬಲ್ಲವನಾಗಿರುತ್ತಿ, ನಾವೇನೋ ಮೂಢರೆಂಬುದನ್ನು ಬಲ್ಲೆ, ನಿನ್ನಂತೆ ಬಿನ್ನಾಣದ ಮಾತುಗಳನ್ನು ಅರಿತವರಲ್ಲ,ಎಂದು ಬಾಣವಂ ಪ್ರಯೋಗಿಸಲುಅವು ವೃಷಧ್ವಜನ ಹತ್ತಿರಕ್ಕೆ ಮಿಂಚನ್ನು ತಿರಸ್ಕರಿಸು ವಚಿನ್ನದ ಪುಂಖಗಳುಳ್ಳ ಗರಿಗಳಿಂದಾವೃತಮಾದದ್ದಾಗಿ ಬರುತ್ತಿರಲು ದಾರಿಯಲ್ಲಿಯೇ ಕತ್ತರಿಸಿ, ವೃಷಧ್ವಜನು ಆ ಸುಧನ್ವನ ಮೇಲೆ ಬಾಣವೃಷ್ಟಿಯಂ ಸುರಿಸಿದನು. 







 




ಬುಧವಾರ, ಆಗಸ್ಟ್ 20, 2025

ಜೈಮಿನಿ ಭಾರತ 11 - ದೊಡ್ಡಬೆಲೆ ನಾರಾಯಣಶಾಸ್ತ್ರಿ

 ಜೈಮಿನಿ ಭಾರತ 11 - ದೊಡ್ಡಬೆಲೆ ನಾರಾಯಣಶಾಸ್ತ್ರಿ


ಸೂಚನೆ:- ಹಿಂದುಳಿದನಾಹವಕ್ಕೆಂದು ಹಂಸಧ್ವಜಂ। 

ನಂದನನನೆಣ್ಣೆ ಗಾಯ್ದಿರ್ದ ಕೊಪ್ಪರಿಗೆಯೊಳ್ । 

ತಂದು ಕೆಡಹಿಸಲಚ್ಯುತಧ್ಯಾನದಿಂ ತಂಪುವಡೆದನವನಚ್ಚರಿಯೆನೆ॥ 


ಪ್ರತಿಪದಾರ್ಥ :- ಹಂಸಧ್ವಜಂ= ಮರಾಳಧ್ವಜನು, ಆಹವಕ್ಕೆ=ಕಾಳಗಕ್ಕೆ, ಹಿಂದೆ= ಹಿಂಗಡೆಯಲ್ಲಿ, ಉಳಿದಂ= ತನ್ನ ಪುತ್ರನಾದ ಸುಧನ್ವನು ನಿಂತನು, ಎಂದು= ಎಂಬುದಾಗಿ, ನಂದನನಂ= ತನುಜನಾದ ಸುಧನ್ವನನ್ನು, ಎಣ್ಣೆಗಾದಿರ್ದ= ತೈಲದಿಂದ ತಪ್ತವಾಗಿದ್ದ, ಕೊಪ್ಪರಿಗೆಯೊಳ್=ಕಟಾಹದಲ್ಲಿ, ತಂದು= ಕರೆದುಕೊಂಡುಬಂದು, ಕೆಡಹಿಸಲ್= ಬೀಳಗೆಡವಲಾಗಿ, ಅಚ್ಯುತನ= ನಾಶರಹಿತನಾದ ಶ್ರೀಕೃಷ್ಣನ, ಧ್ಯಾನದಿಂ= ಸ್ಮರಣೆಮಾಡುವುದರಿಂದ,ಅವಂ= ಆ ಸುಧನ್ವನು, ಅಚ್ಚರಿಯೆನೆ= ಸೋಜಿಗವೋ ಎನ್ನುವಂತೆ, ತಂಪುವಡೆದಂ= ಶೈತ್ಯವನ್ನು ಪೊಂದಿದವನಾದನು. 

 

ಭೂಹಿತಚರಿತ್ರ ಕೇಳುಳಿಯದೆ ಸಮಸ್ತಭಟ। 

ರಾಹವಕೆ ಪೊರಮಟ್ಟ ಬಳಿಕ ಹಂಸಧ್ವಜನ । 

ಮೋಹದ ಕುಮಾರಂ ಸುಧನ್ವನಾಯತಮಾಗಿ ಬಂದು ನಿಜಮಾತೆಯಡಿಗೆ॥ 

ಬಾಹುಯುಗಮಂ ನೀಡಿ ಸಾಷ್ಟಾಂಗಮೆರಗಿ ಸಿತ। 

ವಾಹನನ ಹರಿಯಂ ಪಿಡಿದು ಕಟ್ಟಿ ಕದನದೊಳ್। 

ಸಾಹಸಮಾಳ್ಪೆನೆನ್ನಂ ಪರಿಸಿ ಕಳುಹೆಂದು ಕೈಮುಗಿದೊಡಿಂತೆಂದಳು॥೧॥ 


ಪ್ರತಿಪದಾರ್ಥ :- ಭೂಹಿತ= ಪೃಥ್ವಿಯಲ್ಲಿ ಜೀವಿಸಿರುವವರಿಗೆ (ಮನುಷ್ಯರಿಗೆ) ಪ್ರೀತಿಪಾತ್ರವಾದ, ಚರಿತ್ರ= ನಡವಳಿಕೆಯುಳ್ಳವನಾದ, ಜನಮೇಜಯರಾಯನೆ ! ಕೇಳು= ಮುಂದಿನ ಕಥಾವಿವರಣೆಯನ್ನು ಕೇಳುವವನಾಗು,  ಸಮಸ್ತ= ಸಕಲರಾದ,  ಭಟರೈ= ಶೂರರು, ಉಳಿಯದೆ= ಒಬ್ಬರೂ ನಿಲ್ಲದೆ, ಆಹವಕೆ= ಯುದ್ಧಕ್ಕೆ, ಪೊರಮಟ್ಟು = ಪ್ರಯಾಣಮಾಡಿ ಹೊರಟು, ಬಳಿಕ =ತರುವಾಯ, ಹಂಸಧ್ವಜನ = ಮರಾಳಧ್ವಜನ, ಮೋಹದ= ಪ್ರೇಮವುಳ್ಳವನಾದ, ಕುಮಾರಂ= ಪುತ್ರನಾದ ಸುಧನ್ವನೆಂಬಾತನು, ಆಯತಮಾಗಿ= ಒಡಗೂಡಿದವನಾಗಿ, ಬಂದು= ಹೊರಟುಬಂದು, ನಿಜ=ತನ್ನಯ, ಮಾತೆಯ= ಮಾತೃವಿನ, ಅಡಿಗೆ= ಚರಣಗಳಿಗೆ, ಬಾಹು= ತೋಳಿನ,ಯುಗಮಂ=ಜೊತೆಯನ್ನು, ನೀಡಿ= ಮುಂದೆ ಚಾಚಿಕೊಂಡು, ಸಾಷ್ಟಾಂಗಮಂ= ನಮಸ್ಕಾರವನ್ನು, ಎರಗಿ= ಮಾಡಿದವನೃಗಿ( ಅಷ್ಟಾಂಗದಿಂದ ಅಡ್ಡಬಿದ್ದು), ಸೆತವಾಹನನ= ಧವಳಾಶ್ವವುಳ್ಳ ಪಾರ್ಥನ, ಹರಿಯಂ= ತುರಗವನ್ನು, ಪಿಡಿದು= ಗ್ರಹಿಸಿ, ಕಟ್ಟಿ= ಬಂಧಿಸಿ, ಕದನದೊಳ್= ಆಜಿಯಲ್ಲಿ, ಸಾಹಸಂ= ಪೌರುಷವನ್ನು, ಮಾಳ್ಪೆಂ= ಗೈಯುವೆನು, ಎನ್ನಂ= ನನ್ನನ್ನು,  ಪರಸಿ= ಹರಸಿ, (ಆಶೀರ್ವಾದ -ಮಾಡಿ) ಕಳುಹು= ಕಳುಹಿಸಿಕೊಡು, ಎಂದು=ಎಂಬುದಾಗಿ, ಕೈಮುಗಿದೊಡೆ= ಕೈಜೋಡಿಸಿ ಕೇಳಿಕೊಳ್ಳಲಾಗಿ, ಇಂತು= ಈ ವಿಧವಾಗಿ, ಎಂದಳು= ಉಸಿರಿದಳು. 


ಅ॥ವಿ॥ ಎಣ್ಣೆ+ಕಾದಿರ್ದ= ಎಣ್ಣೆಗಾದಿರ್ದ, ಗಕಾರ ಆದೇಶಂ, ಚ್ಯುತಿ= ನಾಶವು, ಅ-ಅಲ್ಲದವನು, ನ. ತ. ಅಚ್ಚರಿ (ತ್ಭ). ಆಶ್ಚರ್ಯ( ತ್ಸ) ಕುಮಾರ (ತ್ಸ) ಕುವರ ( ತ್ಭ) ಸಿತವಾದ ವಾಹನವುಳ್ಳವನು, ಸಿತವಾಹನ, (ಬ. ಸ. ) ಅಡಿ= ಪಾದ, ಹನ್ನೆರಡಂಗುಲ. 


ತಾತ್ಪರ್ಯ:- ಎಲೈ ಭೂಪತಿಗಳೊಳಗೆ ಚೂಡಾರತ್ನಪ್ರಾಯನಾದ ಜನಮೇಜರಾಯನೆ ಆಲಿಸು:- ಇನ್ನು ಮುಂದೆ ನಡೆದ ಕಥಾ ಸಂದರ್ಭವನ್ನು ವಿವರಿಪೆನು, ಆಗ ಚಂಪಕಾವತಿ ನಗರದ ರಾಜನಾದ ಮರಾಳಧ್ವಜನ ಅಪ್ಪಣೆಯ ಪ್ರಕಾರ ಸಮಸ್ತರಾದ ಸೈನಿಕರು ತಮ್ಮ ತಮ್ಮ ಗೃಹಗಳಲ್ಲಿ ತಮ್ಮ ಹಿರಿಯರಿಗೂ ತಮ್ಮ ಕುಲದೇವತೆಗಳಿಗೂ ನಮಸ್ಕರಿಸಿದವರಾಗಿ, ಅವರಿಂದ ಆಶೀರ್ವಾದಂಗಳಂ ಪೊಂದಿ ಕಾಲವಿಳಂಬಮಾಡದೆ ಅತಿ ಶೀಘ್ರವಾಗಿ ಯುದ್ಧಕ್ಕೋಸ್ಕರ ಪ್ರಯಾಣಮಾಡಿದರು. ಆದರೆ ಹಂಸಧ್ವಜನ ಪ್ರೀತಿಪಾತ್ರನಾದ ಸುಧನ್ವನೂ ಕೂಡ ಮಹಾ ಘೋರವಾದ ಯುದ್ಧಕ್ಕೆ ಸನ್ನಧ್ಧನಾಗಿ ಹೊರಟು, ತನ್ನ ಜನನಿಯ ಪಾದಾರವಿಂದಗಳಿಗೆ ನಮಸ್ಕರಿಸಿ, ತನ್ನ ಉದ್ದವಾದ ತೋಳ್ಗಳನ್ನು ಮುಂದಕ್ಕೆ ಚಾಚಿಕೊಂಡುಎರಡೂ ಕೈಗಳನ್ನೂ ಜೋಡಿಸಿ - ದವನಾಗಿ, ಎಲೌ ಮಾತೆಯೆ ಸಿತವಾಹನನ ( ಪಾರ್ಥನ) ಅಶ್ವವನ್ನು ಹಿಡಿದುಕಟ್ಟಿ ಆತನೊಡನೆ ಕಾಳಗಕ್ಕೋಸ್ಕರವಾಗಿ ಹೊರಟಿರುವೆನು, ನೀನು ನನಗೆ ಆಶೀರ್ವಾದಗಳನ್ನು ಮಾಡಿ ಕಳುಹೆಂದು ನಮಸ್ಕರಿಸಲಾಗಿ. 


ಕಂದ ಕೇಳ್ ಫಲುಗುಣಂ ಪಾಲಿಪಂ ನಾಲ್ಕಡಿಯ । 

ದೊಂದು ಹರಿಯಂ ನಿನಗದರ ಚಿಂತೆ ಬೇಡ ಸಾ। 

ನಂದದಿಂ ಪಾರ್ಥನಂ ರಕ್ಷಿಸುವ ಹರಿಯನೇ ಹಿಡಿವ ಬುದ್ಧಿಯನೆ ಮಾಡು॥ 

ಹಿಂದೆ ನಾರದಮುನಿಯ ಮುಖದಿಂದೆ ಕೇಳ್ದೆಂ ಮು। 

ಕುಂದನ ವಿಶಾಲಲೀಲಾಮಾಲೆಯಂ ಕೃಷ್ಣ। 

ನಿಂದು ಮೈದೋರಿದೊಡೆ ಕಣ್ಣಾರೆ ಕಾಣಬಹುದೆಂದೊಡವನಿಂತೆಂದನು॥೨॥ 


ಪ್ರತಿಪದಾರ್ಥ :- ಕಂದ= ಎಲೈ ಪ್ರೀತಿಪಾತ್ರನಾದ ಮಗುವೆ, ಕೇಳು= ಆಲಿಸು, ಫಲುಗುಣಂ= ಧನಂಜಯನು, ನಾಲ್ಕಡಿಯ= ನಾಲ್ಕು ಪಾದಗಳುಳ್ಳ, ಅದೊಂದು= ಒಂದಾದ, ಹರಿಯಂ= ತುರಂಗವನ್ನು, ಪಾಲಿಪಂ= ಸಂರಕ್ಷಿಸುವನು, ನಿನಗೆ= ಮಗು- 

ವಾದವನಿಗೆ, ಅದರ= ಆ ಹಯದ, ಚಿಂತೆ= ಆಲೋಚನೆಯು, ಬೇಡ= ಬೇಕಾಗಿರುವುದಿಲ್ಲ, (ಅಗತ್ಯವಿಲ್ಲ), ಸಾನಂದದಿಂ= ಆನಂದದಿಂದ, ಪಾರ್ಥನಂ= ಪೃಥೆಯಮಗನಾದ ಅರ್ಜುನನನ್ನು,  ರಕ್ಷಿಸುವ= ಸಲಹುತ್ತಿರುವ, ಹರಿಯನೇ= ಪ್ರಾಪಂಚಿಕ ತಾಪತ್ರಯಗಳನ್ನು ಹೋಗಲಾಡಿತಕ್ಕವನಾಗಿರುವ, ಶ್ರೀಕೃಷ್ಣನನ್ನೇ, ಹಿಡಿವ= ಕಂಡುಹಿಡಿಯತಕ್ಕ, ಬುದ್ಧಿಯನೆ= ತಿಳಿವಳಿಕೆ-

ಯನ್ನೇ, ಮಾಡು= ಪ್ರಯತ್ನಿಸು, ಹಿಂದೆ= ಕೆಲವು ಕಾಲಕ್ಕೆ ಪೂರ್ವದಲ್ಲಿ, ನಾರದಮುನಿಯ= ನಾರದನೆಂಬ ಮಹರ್ಷಿಯ, ಮುಖದಿಂದ = ಆಸ್ಯದಿಂದ ನುಡಿದ ವಚನದಿಂದ, ಮುಕುಂದನ= ಮೋಕ್ಷದಾಯಕನಾದ ಶ್ರೀಕೃಷ್ಣನ,  ವಿಶಾಲ= ವಿಸ್ತಾರ- 

ವಾದ, ಲೀಲಾ=ವೈಭವದಿಂದೊಡಗೂಡಿದ ನಟನೆಗಳ, ಮಾಲೆಯಂ= ಸಮೂಹವನ್ನು, ಕೇಳ್ದೆ= ಆಕರ್ಣಿಸಿದೆನು, ಕೃಷ್ಣಂ= ಶ್ರೀಕೃಷ್ಣಮೂರ್ತಿಯು,  ಇಂದು= ಈ ಸಮಯದಲ್ಲಿ, ಮೈದೋರಿದೊಡೆ = ಪ್ರಸನ್ನನಾದರೆ, ಕಣ್ಣಾರೆ= ನೇತ್ರವು ದಣಿಯು-

ವವರೆಗೂ, ಕಾಣಬಹುದು= ದರ್ಶಿಸಬಹುದು, ಎಂದೊಡೆ= ಎಂಬುದಾಗಿ ಹೇಳಲು, ಅವಂ= ಆ ಸುಧನ್ವನು, ಇಂತು= ಈ ಕ್ರಮವಾಗಿ, (ಈ ರೀತಿಯಾಗಿ ) ಎಂದನು= ಆಡಿದನು. 


ಅ॥ವಿ॥ ಫಲುಗುಣೀ ನಕ್ಷತ್ರದಲ್ಲಿ ಹುಟ್ಟಿದವನು (ಫಲುಗುಣ ) ನಾಲ್ಕಾದ ಅಡಿಗಳ ಸಮಾಹಾರ ನಾಲ್ಕಡಿ, (ಸ. ದೀ. ಸ.) ಹರಿ= ಕಪ್ಪೆ, ಸಿಂಹ, ಕುದುರೆ, ಕಪಿ, ಚಂದ್ರ, ವಿಷ, ಪೃಥೆಯಮಗ= ಪಾರ್ಥ, ಇಂತು+ಎಂದಂ= ಇಂತೆಂದಂ- (ಉಕಾರ ಲೋ. ಸಂ. )


ತಾತ್ಪರ್ಯ:- ಆಗ ಸುಧನ್ವನ ತಾಯಿಯು, ತನ್ನಯ ಪುತ್ರನಂ ಕುರಿತು, ಎಲೈ ನನ್ನ ಮುದ್ದು ಕಂದನೇ ! ಆಲಿಸು; ಆ ತುರಗವನ್ನು ಪಾಂಡುಪುತ್ರನಾದ ಪಾರ್ಥನೆಂಬುವನು ಸಲಹುವನು, ಅದರಚಿಂತೆ ನಿನಗೆಬೇಕಾದ್ದಲ್ಲ. ಆ ಪಾರ್ಥನನ್ನು ಸರಹುವ, ತನ್ನ ಭಜಕರನ್ನು ಸಂಸಾರ ಬಂಧನದಿಂದ ತನ್ನ ಬಳಿಗೆ ಸೆಳೆದು ಕಾಪಾಡುವ, ವಿಷ್ಣುನಾಮಕನಾದ ಶ್ರೀಕೃಷ್ಣಸ್ವಾ-

ಮಿಯನ್ನು, ಹಿಡಿಯುವುದರಲ್ಲಿ ನಿನ್ನ ಬುದ್ಧಿ ಕುಶಲತೆಯನ್ನುಪಯೋಗಿಸು,ಏಕೆಂದರೆ ಪೂರ್ವದಲ್ಲಿ ದೇವಮುನಿಯಾದ ನಾರದಮಹರ್ಷಿಯ ಮುಖದಿಂದ ನಾಶರಹಿತನು, ವಿಶಾಲವಕ್ಷಸ್ಥಳನು, ಮೋಕ್ಷದಾಯಚನು, ಲಕ್ಷ್ಮೀಪತಿಯು ಆದ ಕೃಷ್ಣಸ್ವಾಮಿಯ, ವಿಶಾಲವಾದ ಲೀಲಾವತಾರಗಳ, ಮಾಲೆಯನ್ನು ಕೇಳಿರುವೆನು, ಶ್ರೀಕೃಷ್ಣಮೂರ್ತಿಯು ಈಗಲು ಪ್ರತ್ಯಕ್ಷನಾಗಿ ಪ್ರಸನ್ನನಾದರೆ ಕಣ್ಣುಗಳಿಗೆ ಆಯಾಸವುಂಟಾಗುವಷ್ಟು ನೋಡಬಹುದು,ಮತ್ತು ನಿರತಿಶಯವಾದ ಮೋಕ್ಷಸುಖವನ್ನು  ಹೊಂದಬಹುದೆಂದು ಹೇಳೆದಳು. 


ತಾಯೆ ಚಿತ್ತೈಸಾದೊಡೀ ಭಾಷೆಯಂ ಕೃಷ್ಣ। 

ರಾಯನಂ ತನ್ನೆಡೆಗೆ ಬರಿಸಿಕೊಳ್ವುದಕೊಂದು। 

ಪಾಯಂ ಬಲ್ಲೆನಾಂ ಕಯ್ಯಂ ಪಿಡಿದೊಡೆ ಮೈ ತಾನೆ ಬಹುದಿಂದ್ರಜನನು॥ 

ನೋಯಿಸಿದೊಡಗಧರಂ ಬಾರದಿರನಾನತರ। 

ಪಾಯಮಂ ಸೈರಿಸಂ ಬಳಿಕ ತೋರುವೆನಂಬು । 

ಜಾಯತಾಕ್ಷನ ಮುಂದೆಶತನ್ನ ಪೌರುಷವನೆನಲಾಕೆ ಮಗುಳಿಂತೆಂದಳು॥೩॥ 


ಪ್ರತಿಪದಾರ್ಥ :- ತಾಯೆ= ಎಲೌ ಜನನಿಯೇ! ಆದೊಡೆ= ಹಾಗಿದ್ದ ವಿಷಯದಲ್ಲಿ, ಈ ಭಾಷೆಯಂ=ಈ ಹಠವನ್ನು, ಪ್ರಮಾಣವನ್ನು, ಚಿತ್ತೈಸು= ಲಾಲಿಸುವಳಾಗು, ಕೃಷ್ಣರಾಯನಂ= ಶ್ರೀಕೃಷ್ಣಮೂರ್ತಿಯನ್ನು,ತನ್ನೆಡೆಗೆ = ನನ್ನ ಸಮೀಪಕ್ಕೇನೆ, ಬರಸಿಕೊಂಬುದಕ್ಕೆ= ಕರೆಯಿಸಿ ಕೊಳ್ಳುವದಕ್ಕೆ, ಆಂ= ನಾನಾದರೊ, ಒಂದು ಉಪಾಯಂ=ಒಂದು ಬಗೆಯ ತಂತ್ರವನ್ನು, ಬಲ್ಲೆ= ತಿಳಿದಿರುತ್ತೇನೆ, ಕೈಯ= ಹಸ್ತವನ್ನು, ಪಿಡಿದೊಡೆ= ಹಿಡಿದುಕೊಂಡರೆ, ಮೈ= ದೇಹವು, ತಾನೆ= ತಾನಾಗಿಯೇ, ಬಹುದು= ಬರುವುದು, ( ನಾವು ಅರ್ಜುನನ ತುರಗಮಂ ಪಿಡಿಯೆ ಅವನಿಗೆ ಸಹಾಯಕನಾಗಿ ಕೃಷ್ಣನು ತಾನಾಗಿಯೆ ಬರುವನು ಕರುವನ್ನು ಪಿಡಿದರೆ ಹಸುವು ಹೇಗೆ ಓಡಿಬರೈವುದೋ ಹಾಗೆ) ಇಂದ್ರಜನನು=ಇಂದ್ರನ ಉಪದೇಶಿಸಿದ್ದ ಮಂತ್ರೋಚ್ಚರಣೆಯ ದೆಸೆಯಿಂದ ಜನಿಸಿದ ಪಾರ್ಥನನ್ನು, ನೋಯಿಸಿದೊಡೆ= ಬಾಧೆಪಡಿಸಿದ್ದೇ ಆದರೆ(ಬೇನೆಮಾಡಿದರೆ) ಅಘಹರಂ=ಪಾಪಹರನಾದ ಶ್ರೀಕೃಷ್ಣಮೂರ್ತಿಯೂ, ಬಾರದಿರನು=ಬರದೇ ಇರತಕ್ಕವನಲ್ಲ,( ಬಂದೇ ಬರುವನು), ಆನತರ= ತನ್ನ ಉಪಾಸಕರ, ಅಪಾಯಮಂ= ತೊಂದರೆಗಳನ್ನು, ಸೈರಿಸಂ= ನೋಡಿ ಸುಮ್ಮನಿರತಕ್ಕವನಲ್ಲ, ಬಳಿಕ =ಅನಂತರದಲ್ಲಿ,  ( ಶ್ರೀಕೃಷ್ಣನು ಇಲ್ಲಿಗೆ ಬಂದ ಅನಂತರದಲ್ಲಿ) ಕಂಜ= ತಾವರೆಯ ಪತ್ರದಂತೆ,ಆಯತ= ವಿಶಾಲವಾದ, ಅಕ್ಷ= ನೇತ್ರಗಳುಳ್ಳವನಾದ, ಶ್ರೀಕೃಷ್ಣನ ಇದಿರಾಗಿ, ಎನ್ನ= ನಿನ್ನ ಬಾಲನಾದ ನನ್ನ, ಪೌರುಷವನು= ಪರಾಕ್ರಮಾತಿಶಯವನ್ನು ತೋರಿಸುವೆನು= ಕಾಣಿಸುತ್ತೇನೆ, ( ತೋರ್ಪಡಿಸುತ್ತೇನೆ) ಎನೆ=ಎಂಬುದಾಗಿ ಹೇಳಲು,  ಆಕೆ= ಆ ಸುಧನ್ವನ ಜನನಿಯು, ಮಗುಳೆ=ಪುನಃ, ಇಂತೆಂದಳು=ಈ ಪ್ರಕಾರವಾಗಿ ಹೇಳಿದಳು. 


ಅ॥ವಿ॥ (ಅಷ್ಟಾಂಗ -ಪಾದದ್ವಯ, ಭುಜದ್ವಯ, ವಕ್ಷ, ಲಲಾಟ,), ಅಗ= ಬೆಟ್ಟವನ್ನು, ಧರ= ಧರಿಸಿದವನು, (ಕೃ- ಕೃಷ್ಣನು), ಅಘ= ಪಾಪವನ್ನು, ಹರ= ಪರಿಹಾರ ಮಾಡುವವನು, ಮುಕುಂದ= ಮೋಕ್ಷದಾಯಕನು, ಆನಂದದಿಂದ ಸಹಿತವಾದದ್ದು ಸಾನಂದ, ( ಸಹ. ಪೂ, ಬಹು.) 


ತಾತ್ಪರ್ಯ:- ಆ ಬಳಿಕಸುಧನ್ವನು ಎಲೌ ಜನನಿಯೇ, ಬಾಲಕನಾದ ನನ್ನಯ ವಿನಯೋಕ್ತಿಗಳಂ ಲಾಲಿಸುವಳಾಗು, ಶ್ರೀಕೃಷ್ಣಮೂರ್ತಿಯಂ ನಮ್ಮೆಡೆಗೆ ಬರಮಾಡಿಕೊಳ್ಳುವುದಕ್ಕೋಸ್ಕರವಾಗಿ ನಾನೊಂದುಪಾಯವನ್ನು ಯೋಚಿಸಿರುವೆನು, ಅದೇನೆಂದರೆ ಈಗ ಎಳೆಗರುವನ್ನು ಪಿಡಿದುಕೊಂಡರೆ ಅದನ್ನು ರಕ್ಷಿಸುವುದಕ್ಕಾಗಿ ಅದರ ತಾಯಿಯು ಹೇಗೆ ನಮ್ಮನ್ನ ಬೆನ್ನಟ್ಟಿ ಬರುವುದೊ, ಮತ್ತು ಹಸ್ತವನ್ನು ಪಿಡಿದೆಳೆದರೆ ಶರೀರವೆಲ್ಲವೂ, ಹೇಗೆ ಬರುತ್ತದೆಯೋ ಹಾಗೆಯೆ ಪಾರ್ಥನ ತುರಂಗಮಂ ಪಿಡಿದು ಅವನೊಡನೆ ಕಾಳಗಕ್ಕೆ ನಿಂತರೆ ತಾನಾಗಿಯೆಯಿರುವ ಎಂದರೆ( ಪಾರ್ಥನೇ ಶ್ರೀ ಕೃಷ್ಣನಾಗಿರುವನೆಂಬ ಅಭಿಪ್ರಾಯ, ಶ್ರೀಕೃಷ್ಣನು ತನ್ನ ಮೈದುನನಾದ ಧನಂಜಯನನ್ನು ಕಾಪಾಡಿಕೊಳ್ಳಲಿಕ್ಕಾಗಿ ತಾನಾಗಿಯೇ ನಾವಿದ್ದ ಸ್ಥಳಕ್ಕೆಬರುವನು. ಆಗ ಆ ತಾವರೇ ಎಸಳಿನೋಪಾದಿಯಲ್ಲಿ ವಿಸ್ತಾರ ನೇತ್ರಗಳುಳ್ಳವನು, ನೀಲಮೇಘಶ್ಯಾಮನು, ಪೀತಾಂಬರಧಾರಿಯು ಆದ ಶ್ರೀ ಕೃಷ್ಣಮೂರ್ತಿಯ ಎದುರಾಗಿ ನನ್ನ ಪರಾಕ್ರಮಾಟೋಪವನ್ನು ತೋರಿಸುತ್ತೇನೆ, ಎಂದು ಹೇಳಲಾಗಿ, ಆ ಸುಧನ್ವನ ಮಾತೆಯು ಮತ್ತೆ ಇಂತೆಂದಳು. 


ಕರುವನೆಳಗಂದಿ ತಾನರಸಿಕೊಂಡೈತರ್ಪ। 

ತೆರದಿಂದೆ ಬಂದಪಂ ಮುರಹರಂ ಪಾರ್ಥನೆಡೆ। 

ಗರಿವೆನಿದು ನಿಶ್ಚಯಂ ಮಗನೆ ನೀನಾ ಹರಿಗೆ ವಿಮುಖನಾದೊಡೆ ತನ್ನನೈ॥ 

ಜರಿವರಿಕ್ಕೆಲದ ಬಂಧುಗಳಿನ್ನು ಸಮರದೊಳ್। 

ನೆರೆ ಕೃಷ್ಣನಂ ಗೆಲ್ವರುಂಟೆ ಸಾಕೆನ್ನೊಡಲ। 

ಮರುಕಮಂ ಬಿಟ್ಟೆನವನಂ ಕಂಡ ಬಳಿಕ ಹಿಮ್ಮೆಟ್ಟದಿರ್ ಪೋಗೆಂದಳು॥೪॥ 


ಪ್ರತಿಪದಾರ್ಥ :- ಕಂದ= ಎಲೈ ಬಾಲನೆ, ಕರುವಂ= ಕರುವನ್ನು(ಹಸುವಿನ ಕರುವನ್ನು) ಎಳೆಗಂದಿ= ಕರುಹಾಕಿದ ಪಶುವು, ಅರಸಿಕೊಂಡು=ಹುಡುಕುತ್ತಾ, ತಾಂ= ತಾನು, ಐತಪ್ಪ= ಆಗಮಿಸುವ, ತೆರದಿಂದ,= ಕ್ರಮದಿಂದ, ಮುರಹರ= ಮುರಾಂತಕನಾದ ಶ್ರೀಕೃಷ್ಣನು, ಪಾರ್ಥನ= ಫಲುಗುಣನ, ಎಡೆಗೆ= ಸಮೀಪಕ್ಕೆ, ಬಂದಪಂ= ಬರುವನು, ತಾಂ= ನಾನು, ಅರಿವೆನು= ತಿಳಿದಿರುತ್ತೇನೆ,ಇದು= ಈ ವಾಕ್ಯವು, ನಿಶ್ಚಯ= ಯಥಾರ್ಥವು, ಮಗನೆ=ಎಲೈ ಪುತ್ರನೆ! ನೀನು= ನೀನಾದರೊ,  ಆ ಹರಿಗೆ= ಆ ಶ್ರೀ ಕೃಷ್ಣನಿಗೆ, ವಿಮುಖನು= ಸೋತುಹೋದವನು, ಆದೊಡೆ= ಆಗುವುದಾದರೆ, (ಆದ ಪಕ್ಷದಲ್ಲಿ), ತನ್ನಂ= ಎನ್ನನ್ನು, ಇಕ್ಕೆಲದ ಬಂಧುಗಳ್= ಮಾತಾ ಪಿತೃಗಳ ಕಡೆಯ ನೆಂಟರಿಷ್ಟರು, ಮತ್ತು ಆ ಎರಡು ಕಡೆಯ ಕುಲದೇವತಾಭಿಮಾನಿಗಳು, ಇನ್ನು= ಇನ್ನು ಮುಂದೆ, ಜರಿವರ್= ತಿರಸ್ಕರಿಸುತ್ತಾರೆ, ಸಮರದೊಳ್= ಆಹವದಲ್ಲಿ, ನೆರೆ= ಪೂರ್ತಿಯಾಗಿ, ಕೃಷ್ಣನಂ= ಶ್ರೀಹರಿಯನ್ನು, ಗೆಲ್ವರ್= ಗೆಲ್ಲತಕ್ಕವರು, ಉಂಟೆ=ಎಲ್ಲಿಯಾದರೂ ಇರುತ್ತಾರೆಯೇ? ಸಾಕು= ಶ್ರೀ ಕೃಷ್ಣನನ್ನು ಯುದ್ಧದಲ್ಲಿ ಗೆಲ್ಲುವೆನೆಂಬ ಮಾತು ಬಿಡುವವನಾಗು, ಎನ್ನ= ನನ್ನಯ, ಒಡಲ=ಶರೀರದ, ( ದೇಹದಲ್ಲುಂಟಾದ,) 

ಮರುಕಮಂ= ಸಂತಾಪವನ್ನು,  ಬಿಟ್ಟೆಂ= ತ್ಯಜಿಸಿದೆನು, ಅವನಂ= ಆ ಶ್ರೀಕೃಷ್ಣನನ್ನು ನೋಡಿದ ಅನಂತರದಲ್ಲಿ, ಹಿಮ್ಮೆಟ್ಟದಿರ್ = ಎಂದಿಗೂ ಹಿಂದೆಗೆಯದವನಾಗಿರು, ಪೋಗ್= ಹೋಗುವವನಾಗು, ಎಂದಳ್= ಎಂಬುದಾಗಿ ಪೇಳಿದಳು. 


ಅ॥ವಿ॥ ಎಳೆಯ ಕಂದಿ, ಎಳೆಗಂದಿ-( ವಿ. ಪೂ. ಕ.) ಆಯತ= ವಿಸ್ತಾರ, ಆಯತಾಕಾರ, ಅಚ್ಚರಿ(ತ್ಭ. ) ಆಶ್ಚರ್ಯ (ತ್ಸ)ಕುಲ=ವಂಶ, ಸಮೂಹ, ಕುಲದಬಂಧು-ಕುಲಬಂಧು,(ಷ.ತ.) ಅವನು ಸುಧನ್ವ- ಆ ಸುಧನ್ವ, ಗಮಕ ಸಮಾಸ, ಪೋಗು+ ಎಂದು= ಪೋಗೆಂದು - ಉ ಕಾರ ಲೋಪ. ಸ. ದಶ ವಿಧಪಾತಕಗಳು= ಮಹಾಪಾತಕ, ಅತಿಪಾತಕ, ಪ್ರಾಸಂಗಿಕ ಪಾತಕ, ಉಪಪಾತಕ, ಜಾತಿಭ್ರಂಶಕರ, ಸಂಕೀರ್ಣಕ, ಅಪಾತ್ರಕರಣ, ಮಲಾವಹ, ಪ್ರಕೀರ್ಣಕ. 


ತಾತ್ಪರ್ಯ:- ಎಲೈ ಕಂದನೇ ! ಆಕಳ ಕರುವನ್ನು ಪಿಡಿದರೆ ಎಳೆಗಂದಿಯು ತನ್ನ ಕಂದನನ್ನು ಅರಸಿಕೊಂಡು ಬರುವುದ ನಿಶ್ಚಯವೆಂದು ನನಗೆ ಗೊತ್ತುಂಟು, ಈ ನಿನ್ನಯ ಬಾಲನುಡಿಯ ಸತ್ಯವು, ಆದರೆ ಆ ಶ್ರೀಕೃಷ್ಣನಿಗೆ ಪ್ರತಿಭಟಿಸಲು ನಿಂತು ಕಾಳಗದಲ್ಲಿ ವಿಮುಖನಾಗಿ ಬಂದರೆ ನನ್ನ ಸ್ವಜನರು ಒಡಹುಟ್ಟಿದವರೇ ಆದಿಯಾಗಿ ಸಕಲರೂ ನನ್ನನ್ನು ತಿರಸ್ಕಾರ ಮಾಡುತ್ತಾರೆ. ರಣದಲ್ಲಿ ಶ್ರೀಹರಿಯನ್ನು ಎಲ್ಲಿಯಾದರೂ ಜಯಿಸಲಿಕ್ಕಾದೀತೇ, ಎನ್ನೊಡಲು ಮರುಕವನು

(ಅಂಧಕಾರವನ್ನು) ತ್ಯಜಿಸಿರುವೆನು. ಶ್ರೀಕೃಷ್ಣನಂ ನೋಡಿದ ನಂತರದಲ್ಲಿ ಎಂದಿಗೂ ಹಿಮ್ಮೆಟ್ಟದೇ ಇರು ಎಂದು ಆಶೀರ್ವಾದವಂ ಗೈದಳು. 


ಎಂದೊಡೆಲೆ ತಾಯೆ ಕೇಳ್ ಚಕ್ರಿಗೆ ವಿಮುಖನಾಗಿ। 

ಬಂದೆನಾದೊಡೆ ನಿನ್ನ ಗರ್ಭದಿಂದುದಯಿಸಿದ । 

ನಂದನನೆ ಹಂಸಧ್ವಜನ ಕುಮಾರನೆ ಮೇಣು ಹರಿಕಿಂಕರನೆ ವೀರನೆ॥ 

ಕೊಂದಪೆಂ ಪಾರ್ಥನ ಪತಾಕಿನಿಯನವನದಟ। 

ನಂದಗೆಡಿಸುವೆನೆನ್ನ ವಿಕ್ರಮವನಚ್ಯುತನ। 

ಮುಂದೆ ತೋರಿಸುವೆನಿನಿತರಮೇಲೆ ಸೋಲುಗೆಲೈವದು ಪುಣ್ಯವಶಮೆಂದನು॥೫॥ 


ಪ್ರತಿಪದಾರ್ಥ :- ಎಂದೊಡೆ= ಸುಧನ್ವನ ತಾಯಿಯು ಈ ರೀತಿ ಹೇಳಲು, ಎಲೆ ತಾಯೆ= ಎಲೌ ಜನನಿಯೇ, ಕೇಳ್= ಆಲಿಸುವವಳಾಗು, ಚಕ್ರಿಗೆ= ಶ್ರೀಕೃಷ್ಣಮೂರ್ತಿಗೆ, ವಿಮುಖನಾಗಿ = ಸೋತು ಹೋದವನಾಗಿ,( ಜಯಿಸದೇ ಹೋದವನಾಗಿ)

ಬಂದೆನಾದೊಡೆ= ಬಂದವನಾದರೆ, ಆಂ= ನಾನು, ನಿನ್ನ= ನಿನ್ನಯ ಗರ್ಭದಿಂದ( ಹೊಟ್ಟೆಯಿಂದ,) ಉದಯಿಸಿದ= ಆವಿರ್ಭವಿಸಿದ(ಜನಿಸಿದ) ನಂದನನೇ= ಪುತ್ರನಾದೇನೆಯೇ( ಯುದ್ಧದಲ್ಲಿ ಪರಾಜಿತನಾದರೆ, ನಿನ್ನ ಮಗನೆಂದು ಭಾವಿಸ-

ಬೇಡ) ಹಂಸಧ್ವಜನ = ಎನ್ನ ಪಿತನಾದ ಮರಾಳಧ್ವಜನ, ಕುಮಾರನೇ= ಪುತ್ರನೇ ? ಮೇಣು= ಇನ್ನೂ, ಹರಿ= ಕೃಷ್ಣನಿಗೆ, ಕಿಂಕರನೆ= ಭಜಕನೇ ? ವೀರನೇ= ಪರಾಕ್ರಮಿಯೇ ? ಪಾರ್ಥನ= ಆ ಫಲುಗುಣನ, ಪತಾಕಿನಿಯನು= ವಾಹಿನಿಯನ್ನು, ಕೊಂದಪೆಂ= ಸಂಹಾರಮಾಡುತ್ತೇನೆ, ಅವನ= ಆ ಪಾರ್ಥನ, ಅಧಟಂ= ಪರಾಕ್ರಮವನ್ನು, ಅಂದಗೆಡಿಸುವೆಂ= ಛಂದೋಭಂಗಮಾಡುತ್ತೇನೆ, ಅಚ್ಯುತನ= ನಾಶರಹಿತನಾದ ಶ್ರೀಕೃಷ್ಣನ, ಮುಂದೆ= ಎದುರಿನಲ್ಲಿ, ಎನ್ನ= ಎನ್ನಯ, ವಿಕ್ರಮವನು= ಆಟೋಪಾತಿಶಯವನ್ನು, ತೋರಿಸುವೆಂ= ತೋರಮಾಡುತ್ತೇನೆ, ಅನಿತರಮೇಲೆ= ಇಷ್ಟಾದಾಗ್ಯಾದರೂ, ಸೋಲಿಗೆಲುವುದು= ಅಪಜಯವನ್ನು, ಜಯವನ್ನೂ ಪಡೆಯುವುದು, ಪುಣ್ಯವಶಂ= ನನ್ನಯ ಪುಣ್ಯಾನುಸಾರಿಯಾಗಿರುತ್ತದೆ, ಎಂದನು= ಎಂಬುದಾಗಿ ಹೇಳಿದನು.  


ಅ॥ವಿ॥ ಚಕ್ರವುಳ್ಳವನು, ಚಕ್ರಿ= ಕೃಷ್ಣ, ಚಕ್ರಿ= ಹೆಣ್ಣು ಚಕ್ರವಾಕ, ಕೃಷ್ಣ, ನಂದನ= ಮಗ, ನಂದನವನ, ಗರ್ಭ= ಹೊಟ್ಟೆ, ಬಸಿರು, ಕುಮಾರ(ತ್ಸ) ಕುವರ(ತ್ಭ) ಪತಾಕ=ಧ್ವಜ, ಅದುಳ್ಳದ್ದು=ಪತಾಕಿನಿ, ಪೃಥೆಯ ಮಗ, ಪಾರ್ಥ- ಅರ್ಜುನ. 


ತಾತ್ಪರ್ಯ:- ಆಗ ಸುಧನ್ವನು ಎಲೌ ಮಾತೆಯೆ, ನಾನು ಯುದ್ಧದಲ್ಲಿ ಶ್ರೀಕೃಷ್ಣನಿಗೆ ಹಿಮ್ಮೆಟ್ಟಿ ಬಂದರೆ(ವಿಮುಖನಾಗಿ ಬಂದರೆ ನಿನ್ನ ಗರರ್ಭದಲ್ಲಿ ಹುಟ್ಟಿದ ಸುತನೆಂಬುವರೆ, ಅಸಹಾಯ ಶೂರನಾದ ಹಂಸಧ್ವಜನಿಗೆ ಕುಮಾರನೆ, ಮತ್ತು ಹರಿಕಿಂಕರನೆ, ವೀರನೆ ನಿಜವಾಗಿಯೂ ಪಾರ್ಥನ ಪತಾಕಿನಿಯನ್ನು ನಾಶಮಾಡುವೆನು ಮತ್ತು ಅರ್ಜುನನ ಅಹಂಕಾರವನ್ನು ಭಂಗಿಸುತ್ತೇನೆ, ಶ್ರೀಕೃಷ್ಣನ ಮುಂದೆ ನನ್ನ ಶಕ್ತಿಯನ್ನೆಲ್ಲಾ ತೋರ್ಪಡಿಸೈವೆನು, ಇಷ್ಟರಮೇಲೆ ಜಯಾಪಜಯಗಳೂ ನನ್ನ ಪುಣ್ಯ ಪರಿಪಾಕವಾಗಿರುತ್ತದೆ ಎಂದು ಹೇಳಿದನು. 


ಅನಿತರೊಳ್ ಕುವಲೆಯೆಂಬುವಳೋರ್ವಳಾ ಸುಧ। 

ನ್ವನ ಸಹೋದರಿ ತಂದಳಾರತಿಯನನುಜ ಕೇ। 

ಳನುವರದೊಳಿಂದು ಶೌರಿಗೆ ವಿಮುಖನಾಗಿ ನೀಂ ಬಂದೆಯಾದೊಡೆ ಮಾವನ॥ 

ಮನೆಯೊಳಾಂ ತಲೆಯೆತ್ತಿ ನಡೆವೆನೆಂತದರಿಂದೆ। 

ವನಜಾಕ್ಷನಂ ಮೆಚ್ಚಿಸಾಹವದೊಳೆಂದು ಚಂ। 

ದನದ ನುಣ್ಪಿಟ್ಟು ಕಪ್ಪುರವೀಳೆಯಂಗೊಟ್ಟು ಕಳುಹಿದಳ್ ಸೇಸೇದಳೆದು॥೬॥ 


ಪ್ರತಿಪದಾರ್ಥ :- ಅನಿತರೊಳ್= ಆ ವೇಳೆಯೊಳಗೆ, ಕುವಲೆಯೆಂಬ= ಕುವಲೆಯೆಂಬ ಹೆಸರುಳ್ಳ, ಅವಳೋರ್ವಳ್= ಅವಳೊಬ್ಬಳಾದ, ಆ ಸುಧನ್ವನ = ಆ ಸುಧನ್ವನೆಂಬವನ, ಸಹೋದರಿ=ತನ್ನೊಡಹುಟ್ಟಿದವಳು,ಆರತಿಯನು= ಆ ರಾತ್ರಿಕವನ್ನು, ತಂದಳು=ತೆಗೆದುಕೊಂಡು ಬಂದಳು, ಅನುಜ= ಸಹೋದರನಾದ ಸುಧ್ವನೆ, ಕೇಳು= ಎನ್ನಯ ನುಡಿಯನ್ನು ಲಾಲಿಸು,  ಅನುವರದೊಳ್= ಆಹವದಲ್ಲಿ, ಇಂದು= ಈ ದಿನ, ಶೌರಿಗೆ= ಶ್ರೀಕೃಷ್ಣನಿಗೆ, ವಿಮುಖನಾಗಿ=ಸೋತುಹೋದ- 

ವನಾಗಿ, ನೀಂ= ನೀನು, ಬಂದೆಯಾದೊಡೆ= ಬಂದದ್ದೇ ಆದರೆ, ಮಾವನ= ಗಂಡನ ತಂದೆಯ, ಮನೆಯೊಳ್= ಗೃಹದಲ್ಲಿ,

ನಾಂ= ನಾನು, ತಲೆಯೆತ್ತಿ= ತಲೆಯನ್ನೆತ್ತಿಕೊಂಡು, ನಡೆಯೆನು= ನಡೆಯಲಾರೆನು( ನನಗೆ ಬಹು ಅಪಮಾನವಾಗುತ್ತದೆಂಬ ಭಾವವು) ನಾಂ= ನಾನಾದರೊ, ಅದರಿಂದ= ಅದಕ್ಕೋಸ್ಕರವಾಗಿ, ಪೇಳ್ದೆಂ= ಹೇಳಿದೆನು, ವನಜಾಕ್ಷನಂ= ಕಮಲಾಂಬಕ-

ನಾದ ಶ್ರೀಕೃಷ್ಣಮೂರ್ತಿಯನ್ನು, ಮೆಚ್ಚಿಸು= ಒಲಿಯುವಂತೆ ಮಾಡು, ಎಂದು=ಎಂಬುದಾಗಿ ಹೇಳಿ, ಚಂದನದ= ಶ್ರೀಗಂಧದಿಂದ ಮಾಡಿದ, ನೂಂಪಿಟ್ಟು= ಚುಕ್ಕೆಯನ್ನಿಟ್ಟು, ಕರ್ಪೂರವೀಳೆಯಂ= ಪಚ್ಚಕರ್ಪೂರವೇ ಮೊದಲಾದ ಸುವಾಸನಾ ದ್ರವ್ಯದಿಂದ ಕೂಡಿದ ಅಡಿಕೆಲೆಯನ್ನು ಕೊಟ್ಟವಳಾಗಿ, ಸೇಸೆದಳಿದು= ಮಂತ್ರಾಕ್ಷತೆಯನ್ನು ತಲೆಯ ಮೇಲೆ ಹಾಕಿ,ಕಳುಹಿದಳ್= ಆಶೀರ್ವಾದ ಮಾಡಿ ಕಳುಹಿಸಿಕೊಟ್ಟಳು. 


ಅ॥ವಿ॥ ಸಹ+ಉದರಿ= ಸಹೋದರಿ, (ಗು. ಸಂ.)ವನಜದಂತೆ= ಅಕ್ಷಿಯುಳ್ಳವಳು, ವನಜಾಕ್ಷಿ,(ಉ. ಪೂ. ಬ.ಸ.) ಕಪ್ಪುರ(ತ್ಭ. ) ಕರೂಪೂರ( ತ್ಸ)ವೀಳೆಯವಂ ಕೊಟ್ಟು= ವೀಳೆಯಂಗೊಟ್ಟು, (ಕ್ರಿ. ಸ) ಆಗ ಅಷ್ಟರೊಳಗೆ ಸುಧನ್ವನ ಸಹೋದರಿಯಾದ ಕುವಲೆ ಎಂಬುವಳು ಆರತಿಯನ್ನು ಕೈಯಲ್ಲಿ ಪಿಡಿದುಕೊಂಡು, ತಮ್ಮನಾದ ಎಲೈ ಸುಧನ್ವನೆ ನೀನೇನಾದರೂ ಯುದ್ಧದಲ್ಲಿ ಸೋತುಹೋದರೆ ನಾನಂತು ನಮ್ಮ ಮಾವನ ಮನೆಯಲ್ಲಿ, ತಲೆ ಎತ್ತಿಕೊಂಡುತಿರುಗಲಾರೆನು. ಶ್ರೀಕೃಷ್ಣನಿಗೆ ಎದುರುನಿಂತು ಜಯಶಾಲಿಯಾಗೆನುತ ಆರತಿಯನ್ನು ಎತ್ತಿ ಅಕ್ಷತೆಯ ಕಾಳುಗಳನ್ನು ತಲೆಯಮೇಲೆ ಹಾಕಿ, ಕರ್ಪೂರವೇ ಮೊದಲಾದ ಸುವಾಸನೆಯ ದ್ರವ್ಯದಿಂದ ಯುಕ್ತಮಾದ ತಾಂಬೂಲವನ್ನುಕೊಟ್ಟು ಹೋಗಿಬಾರೆಂದು ಕಳುಹಿದಳು. 


ಊರಸ ಕೇಳಾ ಸುಧನ್ವಂ ಬಳಿಕ ಜನನಿಸೋ। 

ದರಿಯರಂ ಬೀಳ್ಕೊಂಡು ಪೊರಮಟ್ಟು ತನ್ನ ಮಂ। 

ದಿರದ ಪೊರೆಗೈತರಲಿದಿರಾಗಿ ಪೊಂದಟ್ಟೆಯೊಳ್ ಸಂಪಗೆಯ ಪೂವನು॥ 

ಸರಸ ಪರಿಮಳಗಂಧ ಕರ್ಪೂರವೀಟಿಕೆಯ । 

ನಿರಿಸಿಕೊಂಡೊಲವಿಂದೆ ಬಂದಳಂಗಜನ ಜಯ। 

ಸಿರಿ ತಾನೆನಲ್ ಪ್ರಭಾವತಿಯೆನಿಪವನರಾಣಿ ಸುಶ್ರೋಣಿ ಸರ್ಪವೇಣಿ॥೭॥ 


ಪ್ರತಿಪದಾರ್ಥ :- ಅರಸ=ರಾಜನಾದ ಜನಮೇಜಯರಾಯನೆ,  ಕೇಳು= ಆಲಿಸು, ಆ ಸುಧನ್ವ= ಆ ಸುಧನ್ವನೆಂಬುವನು, ಬಳಿಕ = ಅನಂತರದಲ್ಲಿ, ಜನನೆ= ಮಾತೆಯನ್ನು, ಸೋದರಿಯರಂ= ಅಕ್ಕತಂಗಿ ಆದಿಯಾದವರನ್ನು, ಬೀಳ್ಕೊಂಡು= ಅವರನ್ನು ಕೇಳಿ ಅಪ್ಪಣೆ ತೆಗೆದುಕೊಂಡು, ಪೊರಮಟ್ಟು = ಹೊರಟುಬಂದು, ತನ್ನ=ತನ್ನಯ, ಮಂದಿರದ= ಗೃಹದ, ಪೊರಗೆ= ಹತ್ತಿರದ ಪ್ರದೇಶದಲ್ಲಿ, ಐತರಲ್ಕೆ= ಬಂದವನಾಗಲು, ಅಂಗಜನ=ಮನಸಿಜನ, ಜಯ= ಜಯಿಸಿದ,  ಸಿರಿ=ಶ್ರೀಯ ಮದವನ್ನು ಜಯಿಸಿದ ಜಯಲಕ್ಷ್ಮಿಯು, ತಾನ್= ತಾನೆ, ಎನಲ್=ಎಂಬುವ ಹಾಗೆ, ಅವನ=ಆ ಸುಧನ್ವನ, ಸುಶ್ರೋಣಿ= ಸೊಗಸಾದ ಕಟಿಪಶ್ಚಾದ್ಭಾಗವುಳ್ಳ, ಸರ್ಪವೇಣಿ= ಹಾವಿನಂತೆ ಜಡೆಯುಳ್ಳವಳಾದ, ಪ್ರಭಾವತಿಯೆನಿಪ= ಪ್ರಭಾವತಿಯೆಂದು ಅಭಿಧಾನವುಳ್ಳ, ರಾಣಿ= ರಾಜ್ಞಿಯು, (ಹೆಂಡತಿಯು) ಇದಿರಾಗಿ= ಎದುರು ಮುಖವಾಗಿ, ಪೊಂದಟ್ಟೆಯೊಳ್= ಚಿನ್ನದ ಹರಿವಾಣದಲ್ಲಿ, ಸಂಪಗೆಯ ಪೂವನು= ಚಂಪಕಾ ಪುಷ್ಪವನ್ನು,  ಸರಸ=ರಸಯುಕ್ತವಾದ, ಪರಿಮಳ= ಸುಗಂಧದ್ರವ್ಯವನ್ನು ಕರ್ಪೂರ= ಪಚ್ಚ ಕರ್ಪೂರದಿಂದ ಯುಕ್ತವಾದ, ವೀಳೆಯವನು= ತಾಂಬೂಲವನ್ನು,ಇರಿಸಿಕೊಂಡು= ಇಟ್ಟುಕೊಂಡವಳಾಗಿ, ಒಲವಿಂದ= ಪ್ರೀತಿಯಿಂದ, ಬಂದಳ್= ಐತಂದಳು. 


ಅ॥ವಿ॥ ಪೊನ್ನಿನ+ತಟ್ಟೆ= ಪೊಂದಟ್ಟೆ (ಷ.ತ.)ರಸದೊಡನೆ ಸಹಿತವಾದ್ದು= ಸರಸ ( ಸಹ. ಪೂ. ಬಹು. ಸ.) ಸಿರೆ (ತ್ಭ) ಶ್ರೀ  (ತ್ಸ) ಸುಷ್ಠು, ಶ್ರೋಣಿಯುಳ್ಳವಳು= ಸುಶ್ರೇಣಿ,(ಬ. ಸ. )ಸರೂಪದಂತೆ ವೇಣಿಯುಳ್ಳವಳು= ಸರ್ಪವೇಣಿ (ಉ.ಪೂ. ಬಹು.ಸ.) 


ತಾತ್ಪರ್ಯ:- ಎಲೈ ಜನಮೇಜಯರಾಯನೆ ಋಲೆಸುವನಾಗು, ಬಳಿಕ ಸುಧನ್ವನು ತನ್ನ ಜನನಿಯನ್ನು ಸಹೋದರಿಯನ್ನು ಸಂತವಿಟ್ಟು ಹೊರಟು ತನ್ನ ಮನೆಯ ಮುಂಗಡೆಗೆ ಬರಲಾಗಿ, ಗಂಡನಿಗೆ ಎದುರಾಗಿ ಚಿನ್ನದ ಹರಿವಾಣದಲ್ಲಿ ಚಂಪಕಾ ಕುಸುಮವನ್ನು ಪರಿಮಳಯುಕ್ತವಾದ ಸುಗಂಧವನ್ನು ಪಚ್ಚಕರ್ಪೂರಯುತಮಾದ ವೀಳೆಯವನ್ನು ಇರಿಸಿಕೊಂಡು ಬಲು ಪ್ರೀತಿಯಿಂದ ಮನಸಿಜನ ಜಯಲಕ್ಷ್ಮಿಯೇ ತಾನು ಎನ್ನುವಂತೆ ಸುಧನ್ವನ ಧರ್ಮಪತ್ನಿಯು, ಪಟ್ಟಮಹಿಷಿಯು ಆದ, ಪ್ರಭಾವತಿಯೆಂಬ ಹೆಸರುಳ್ಳವಳು ಬಂದಳು. 


ಚಂದ್ರಮಂಡಲ ಸದೃಶ ವದನದೆಳನಗೆಯ ನವ। 

ಚಂದಿರಿಕೆಯೆನಲ್ ಮೇಲುದಿನ ದುಕೂಲಂ ಮೆರೆಯೆ। 

ಚಂದ್ರತಿಲಕದ ರಾಗಮುಂ ಚಿತ್ತದನುರಾಗಮಂ ಸೂಚಿಸುವಂತೆ ಸೊಗಸೆ॥ 

ಇಂದ್ರನೀಲದ ಮಣಿಯ ಮಿರುಗುವ ಲಲಿತಕಾಂತಿ। 

ಸಾಂದ್ರಮಾದವೊಲೆಸೆವಳಕಪಾಶದಿಂದೆ ನಯ। 

ನೇಂದ್ರೆಯಮನುರೆ ಕಟ್ಟಿ ಕೆಡಪದಿರಳೆಂಬಿನಂ ರಂಜಿಸಿದಳಾ ಮೃಗಾಕ್ಷಿ॥೮॥ 


ಪ್ರತಿಪದಾರ್ಥ :-  ಆ ಮೃಗಾಕ್ಷಿ= ಕುರಂಗಾಕ್ಷಿಯಾದ ಪ್ರಭಾವತಿಯು, ಚಂದ್ರಮಂಡಲ=ಇಂದು ಬಿಂಬಕ್ಕೆ, ಸದೃಶ= ಸಮವಾಗುಳ್ಳ, ವದನದ= ಆಸ್ಯದಿಂದ ಯುತಳಾದ, ಎಳೆನಗೆಯ= ಮಂದಹಾಸವೆಂಬುವ, ನವಚಂದ್ರಿಕೆಯ= ನೂತನಮಾದಜ್ಯೋತ್ಸ್ನವೆಂಬಂತಿರುವ, ಮೇಲುದಿನ= ಮೇಲು ಹೊದಿಕೆಯ,(ಸೆರಗಿನ) ದುಕೂಲಂ= ಪಟ್ಟೆಯ ವಸ್ತ್ರವು, ಮೆರೆಯೆ= ಕಾಂತಿಯಿಂದೊಪ್ಪುತಿರಲು, ಚಂದ್ರ= ಸಿಂಧೂರದಿಂದ ಮಾಡಿದ, ತಿಲಕದ= ಊರ್ಧ್ವರೇಖೆಯು, ( ಉದ್ದವಾದ ನಾಮವುಳ್ಳ) ರಾಗಮುಂ= ರಕ್ತ ಬಣ್ಣವು, ಚಿತ್ತದ= ತನ್ನ ಹೃದಯದಲ್ಲಿರುವ, ಅನುರಾಗಮಂ= ಪ್ರೇಮವನ್ನು, ಸೂಚಿಪಂತೆ= ತೋರ್ಪಡಿಸುವ ಅಂದದಿಂದ, ಸೊಗಸೆ= ಪ್ರಕಾಶಯುತಮಾಗಿರಲು, ಇಂದ್ರನೀಲಮಣಿಯ= ಇಂದ್ರನೀಲವೆಂಬ ರತುನದಂತೆ, ಮಿರುಗುವ= ಹೊಳೌಯುವ, ಲಲಿತ=ಮನೋಹರಮಾದ, ಕಾಂತಿ= ಶೋಭೆಯು, ಸಾಂದ್ರ= ಒತ್ತು(ದಟ್ಟವು) ಆದವೋಲ್= ಆದರೀತಿಯಿಂದ, ಎಸೆವ= ಹೊಳೆಯುವ, ಅಳಕ= ಮೂಗೂದಲಿನಿಂದ ವ್ಯಾಪ್ತವಾದ, ಪಾಶದಿಂ= ಜಟೆಯೆಂಬ ಪ್ರಗ್ರಹದಿಂದ, ನಯನೇಂದ್ರಿಯವನು= ನೋಟವನ್ನು, ಉರೆ= ಬಹುವಾಗಿ, ಕಟ್ಟಿ= ಬಂಧಿಸಿ, ಕೆಡಪದೆ= ಬೀಳುಗೊಡದೆ, ಇರಳು= ಇರಲಾರಳು, ಎಂಬಿನಂ= ಎನ್ನುವ ರೀತಿಯಿಂದ, ರಂಜಿಸಿದಳು= ಪ್ರಕಾಶಿಸಿದಳು. 


ಅ॥ವಿ॥ ನೇತ್ರ+ಇಂದ್ರಿಯ=ನೇತೂರೇಂದಿಯ,( ಗುಣ. ಸಂ.) ಹಗ್ಗ (ತ್ಭ. ) ಪ್ರಗ್ರಹ, ( ತ್ಸ) ಶೃಂಗಾರ( ತ್ಸ)ಸಿಂಗೆರ (ತ್ಭ) ಚಿತ್ತ= ಮನಸ್ಸು, ಒಂದು ನಕ್ಷತ್ರ, ಜಡೆ (ತ್ಭ) ಜಟಾ (ತ್ಸ) ಮೃಗದಂತೆ, ಅಕ್ಷಿಯುಳ್ಳವಳು, ಮೃಗಾಕ್ಷಿ ( ಉ. ಪೂ. ಬಹು. ಸ.) 


ತಾತ್ಪರ್ಯ:- ಆಗ ಕುರಂಗಾಕ್ಷಿಯಾದ ಪ್ರಭಾವತಿಯು ಚಂದ್ರಮಂಡಲಕ್ಕೆ ಸದೃಶಮಾದ ಮುಖವು, ಮಂದಹಾಸವೆಂಬ ನವ ಚಂದ್ರಿಕೆಯಂತೆ ಕಂಗೊಳಿಪ ಶರಗುಳ್ಳ ದುಕೂಲವು, ಪ್ರಕಾಶಿಸಲು, ಫಣೆಯಲ್ಲಿ ಧರಿಸಿರುವ ಚಂದ್ರದ ತಿಲಕದ ಕೆಂಪು ಬಣ್ಣವು, ಹೃದಯದಲ್ಲಿರುವ ಸ್ನೇಹವನ್ನು ಸೂಚಿಸುವಂತೆ ಶೃಂಗಾರವಾಗಿರಲು, ಇಂದ್ರನೀಲ ಮಣಿಯಂತೆ ಪ್ರಕಾಶಿಸುವ ಕೋಮಲವಾದ ಕಾಂತಿಯ ನಿಬಿಡವು, ಆದ ರೀತಿಯಿಂದ ಶೋಭಿಸುವ ಮುಂಗುರುಳುಗಳಿಂದ ಕೂಡಿದ,  ಜಡೆಯೆಂಬ ಹಗ್ಗದಿಂದ, ನಯನೇಂದ್ರಿಯವನ್ನು, ಕಟ್ಟಿ ಕೆಡವದೇ ಎರುವುದಿಲ್ಲ ಎಂಬ ರೀತೆಯಿಂದ ಶೋಭಿಸಿದಳು. 


ಸ್ಫುರಿವೊಳ್ದೊಡೆಯ ಬೆಡಗಿನ ನಡೆಯ ನಿರಿಯ ಸಿಂ। 

ಗರದುಡೆಯ ತೆಳ್ವಾದಸಿಯ ಪೊಡೆಯ ಚೆಲ್ವುದಳೆ। 

ದುರದೆಡೆಯ ನಿಂಬುಗೊಂಡಿಟ್ಟೆಡೆಯ ಬಲ್ಮೊಲೆಯ ಪೊಳೆವ ಕಣ್ಮಲರ ಕಡೆಯ॥ 

ತ್ವರಿಪ ಭುಜವಲ್ಲರಿಯ ತೊಡವುಗಳ ಮೈಸಿರಿಯ। 

ಬಿರಿಮುಗುಳ ಕಬರಿಯ ಕಲೆಗಳಿಡಿದ ಸೌಂದರಿಯ। 

ದರಸಿ ನಿಜಪತಿಯ ಮುಂದಚ್ಚರಿಯ ಬಗೆಗೊಂಡಳಂದು ಬೇರೊಂದು ಪರಿಯ॥೯॥ 


ಪ್ರತಿಪದಾರ್ಥ :- ಅರಸಿ= ಪಟ್ಟಮಹಿಷಿಯಾದ ಪ್ರಭಾವತಿಯು, ನಿಜಪತಿಯ= ತನ್ನ ಗಂಡನಾದ ಸುಧನ್ವನ, ಮುಂದು= ಎದುರಾಗಿ, ಅಂದು= ಆ ಸಮಯದಲ್ಲಿ, ಸ್ಫುರಿಸುವ= ಪ್ರಕಾಶಿಸುತ್ತಲಿರುವ, ಒಳ್ದೊಡೆಯ= ಒಳಭಾಗದ ಊರು ಪ್ರದೇಶವುಳ್ಳ. ಬೆಡಗಿನ= ಠೀವಿಯಿಂದ ಯುತವಾದ, ನಡೆಯ= ಗಮನವುಳ್ಳವಳಾದ, ನಿರಿಯ= ನೆರಿಗೆ ಹಿಡಿದು, ಸಿಂಗರದ= ಶೃಂಗಾರವುಳ್ಳ, ಉಡಿಗೆಯ= ಉಟ್ಟಿರುವ ವಸ್ತ್ರದ, ತೆಳ್ವಾದ= ತೆಳುವಾದ( ಕೃಶವಾದ) ಅಸಿಯ= ಸೊಂಟಪ್ರದೇಶವುಳ್ಳ,(ಮಧ್ಯಭಾಗವುಳ್ಳ) ಪೊಡೆಯ= ಉದರದ, ಚಲ್ವ= ಸೊಗಸನ್ನು, ದಳೆದ=ಪಡೆದಿರುವ, ಉದರ= ಎದೆಯಪ್ರದೇಶದಲ್ಲಿ, ಎಡೆಯನು= ಸ್ಥಳವನ್ನು, ಇಂಬುಗೊಂಡು= ವ್ಯಾಪಿಸಿಕೊಂಡು, (ಕಾಂತಿಯಂ ಹೊಂದಿ ), ಇಟ್ಟೆಡೆಯ= ಸ್ಥಾನವನೊಡಗೊಂಡಿರುವ, ಬಲ್ಮೊಲೆಯ= ಬಲವಾದ (ದಪ್ಪವಾದ ) ಸ್ತನಯುಗ್ಮಗಳ, ಪೊಳೆವ=ಪ್ರಕಾಶಿಸುತ್ತಿರುವ,ಕಣ್ಮಲರ= ಕಮಲಪತ್ರದಂತೆ ಆಯತಮಾದ ನೇತ್ರಗಳ, ಕಡೆಯ= ಕಡೆಯಭಾಗವುಳ್ಳ( ಕೊನೆ- 

ಗಣ್ಣನೋಟವುಳ್ಳ), ತ್ವರಿಪ= ಆತುರಪಡುತ್ತಿರುವ, ಭುಜವಲ್ಲರಿಯ= ಲತೆಯೋಪಾದಿಯಲ್ಲಿರುವ ಬಾಹುಗಳುಳ್ಳ, ತೊಡವುಗಳ= ಧರಿಸಿರುವ ಕುಪ್ಪಸದ ಮತ್ತು ಹಸ್ತಾಭರಣವೇ ಮೊದಲಾದ ವಸ್ತುಗಳ, ಮೈಸಿರಿಯ= ದೇಹದ ಪ್ರಕಾಶಮುಳ್ಳ, ಬಿರಿಮುಗುಳ= ವಿಕಶಿಸಿದ ಮುಗುಳುಗಳಿಂದ ಕೂಡಿದ, ಕಬರಿಯ= ಕಬರಿಯನ್ನುಳ್ಳ( ಕೂದಲು ಗಂಟುಳ್ಳ), ಕಲೆಗಳ=ಪ್ರಕಾಶಗಳು, ಇಡಿದ= ವ್ಯಾಪ್ತಮಾದ, ಸೌಂದರ್ಯದ= ಲಾವಣ್ಯವುಳ್ಳ, ಬೇರೊಂದುಪರಿಯ= ನೂತನಾಕಾರವುಳ್ಳ, ಅಚ್ಚರಿಯ=ಸೋಜಿಗದ,  ಬಗೆಗೊಂಡಳು= ಚಂದವನ್ನುಂಟುಮಾಡಿದಳು. 


ಅ॥ವಿ॥ ಒಳ್ಳಿತ್ತು, ತೊಡೆ-ಒಳ್ದೊಡೆ (ವಿ.ಪೂ. ಕ.) ಅಲರಿನಂತೆ, ಕಣ್ಮಲರ್ ( ಉ.ಉತ್ತ. ಕ. ) ಮುಕುಳ (ತ್ಸ) ಮೊಗ್ಗು(ತ್ಭ) ಅಚ್ಚರಿ( ತ್ಭ) ಆಶ್ಚರ್ಯ (ತ್ಸ) 


ತಾತ್ಪರ್ಯ:- ಪಟ್ಟಮಹಿಷಿಯಾದ ಪ್ರಭಾವತಿಯ ಹೊಳೆಯುವ ಒಳ ತೊಡೆಯು ಠೀವಿಯಿಂದ ಕೂಡಿರುವ ಮಂದಗಮನವುಳ್ಳ ನೆರಿಗೆಯ ಅಲಂಕಾರದಿಂದ ಕೂಡಿರುವ ಪೀತಾಂಬರವು, ಸಿಂಹದ ಮಧ್ಯದಂತೆ ಪ್ರಕಾಶಿಸುವ ಮಧ್ಯಪ್ರದೇಶವು, ಚೆಲ್ವನ್ನುಹೊಂದಿರುವ ಉರದೇಶದಲ್ಲಿ ಇಂಬುಗೊಂಡು ಸ್ಥಳವನ್ನಾಕ್ರಮಿಸಿರುವ,ದುಂಡಾದ ಮತ್ತು ದಪ್ಪವಾದ ಕುಚಗಳು, ಕಮಲಪತ್ರದಂತೆ ವಿಶಾಲವಾದ ನೇತ್ರವು ಬಳ್ಳಿಯಂತೆ ಕೋಮಲವಾದ ತವಕ ಪಡುತ್ತಿರುವ ಬಾಹುಗಳು ತೊಡವುಗಳ ಕಾಂತಿಯಿಂದೊಪ್ಪುವ ಅಂಗಾಂಗವು, ಅರಳಿದ ಮೊಗ್ಗುಗಳಿಂದ ಪ್ರಕಾಶಿಸುವ ಕಬರಿಯು( ತುರುಬು) ಕಲೆಗಳಿಂದ ತುಂಬಿದ ಲೃವಣ್ಯವೂ, ಉಳ್ಳವಳಾದ ಪ್ರಭಾವತಿಯು ತನ್ನ ವಲ್ಲಭನ ಮುಂಗಡೆ ನಿಂದು ವಿಜಾತೀಯವಾದ ಲಕ್ಷಣಗಳಿಂದ ಶೋಭಿಸಿದಳು. 


ಮುಡಿಯ ಪೊಸಮಲ್ಲಿಗೆಯ ಸೂಸುವೆಳನಗೆಯ ಸವಿ। 

ನುಡಿಯ ಬಾಯ್ದೆರೆಯ ಹೊಳೆಹೊಳೆವ ದಶನದ ಮಿಸುಪ। 

ಕಡೆಗಣ್ಣ ತೊಳಗುವ ನಖಾವಳೆಯ ಥಳಥಳಿಪ ಕಂಠಮಾಲೆಯ ಮುತ್ತಿನ॥ 

ತೊಡವುಗಳ ಘನಸಾರದನುಲೇಪನದ ಸಣ್ಣ । 

ಮಡಿದುಕೂಲದ ಬೆಳ್ವೊಗರ್ ಕೋಮಲಾಂಗದೊಳ್। 

ಬಿಡದೆ ಪಸರಿಸೆ ಚಂದ್ರಕಾಂತದಿಂ ನಿರ್ಮಿಸಿದ ಪುತ್ತಳಿವೊಲವಳೆಸೆದಳು॥೧೦॥ 


ಪ್ರತಿಪದಾರ್ಥ :- ಅವಳ್= ಆ ಸುಧನ್ವನ ಪತ್ನಿಯಾದ ಪ್ರಭಾವತಿಯು,  ಮುಡಿಯ= ಕಬರಿಯಲ್ಲಿನ, ಹೊಸಮಲ್ಲಿಗೆಯ= ನೂತನವಾದ ಮಲ್ಲಿಕಾ ಪುಷ್ಪವನ್ನು , ಸೂಸುವ= ಚೆಲ್ಲುತ್ತಿರುವ, ಎಳೆನಗೆಯ= ಮಂದಹಾಸಯುತವಾದ, ನುಡಿಯ= ವಚನಗಳುಳ್ಳ( ಮಾತುಗಳು) ಬಾಯ್ದೆರೆಯ= ಬಾಯಿಯನ್ನು ತೆರೆಯಲಾಗಿ, ಹೊಳೆಹೊಳೆವ= ಅತ್ಯಂತವಾಗಿ ಪ್ರಕಾಶಿಸುವ, ದಶನದ= ರದನದ, ಮಿಸುಪ= ಪ್ರಕಾಶಿಸುತ್ತಿರುವ, ಕಡೆಗಣ್ಣ= ಕಣ್ಣಿನ ಕೊನೆಯ ನೋಟವುಳ್ಳ, ತೊಳಗುವ= ಹೊಳೆಯುತ್ತಿರುವ, ನಖಾವಳಿಯ= ಕರಜಗಳ ಪಙ್ತಿಗಳ, (ಕರಜ=ಉಗುರು), ಥಳಥಳಿಪ= ಅತ್ಯಂತವಾಗಿ ಪ್ರಕಾಶಿಸುವ,  ಕಂಠಮಾಲೆಗಳ= ಕಂಠಾಭರಣಗಳ ಹಾರಗಳುಳ್ಳ, ಮುತ್ತಿನ= ಮೌಕ್ತಿಕಗಳಿಂದ ಮಾಡಿದ, ತೊಡವುಗಳ, ಒಡವೆಗಳಿಂದ ಕೂಡಿದ, ಘನ= ಶ್ರೇಷ್ಠವಾದ, ಸಾರದ= ಸುವೃಸನೆಯುಳ್ಳ ಸುಗಂಧದಿಂದ, ಅನುಲೇಪದ=ಆ ಗಂಧವೇ ಆದಿಯಾದ ಪದಾರ್ಥವುಳ್ಳ, ಸಣ್ಣ = ಭಾರವಿಲ್ಲದ, ಮಡಿ= ಒಗೆದಿರುವಂಥ,ದುಕೂಲದ= ಪಟ್ಟೆವಸ್ತ್ರದ,ಬೆಳ್ವೊಗರು= ಬಿಳೀಕಾಂತಿಯು, ಕೋಮಲಾಂಗದೋಳ್=ಮನೋಹರವಾದ ದೇಹದಲ್ಲಿ, ಬಿಡದೆ= ತಪ್ಪದೆ, ಪಸರಿಸೆ= ವೃದ್ಧಿಹೊಂದುತ್ತಿರಲು, ಚಂದ್ರಕಾಂತದಿಂ = ಚಂದ್ರಕಾಂತದ ಕಲ್ಲಿನಿಂದ, ನಿರ್ಮಿಸಿದ= ನಿರ್ಮಾಣಮಾಡಿದ, (ರಚಿಸಿದ, ಮಾಡಿದ ), ಪುತ್ಥಳಿಯೋಲ್= ಪ್ರತಿಮೆಯಂತೆ, (ಬೊಂಬೆಯಂತೆ) ಎಸೆದಳ್= ಪ್ರಕಾಶಿಸಿದಳು.  


ಅ॥ವಿ॥ ಮಲ್ಲಿಗೆ (ತ್ಭ) ಮಲ್ಲಿಕಾ (ತ್ಸ), ಬಾಯ್+ತೆರೆ= ಬಾಯ್ದೆರೆ, ತ ಕಾರಕ್ಕೆ ದಕಾರ ಆದೇಶ ಸಂ, ಮುತ್ತು(ತ್ಭ) ಮೌಕ್ತಿಕ (ತ್ಸ)


ತಾತ್ಪರ್ಯ:- ಕಬರಿಯಲ್ಲಿನ ಹೊಸಮಲ್ಲಿಗೆಯ ಕುಸುಮಗಳನ್ನು ಸುರಿಸುತ್ತಿರುವ ಕಿರುನಗೆಯುಳ್ಳ ನುಡಿಗಳಿಂದ ಕೂಡಿದ, ಬಾಯಿಯನ್ನು ತೆರೆಯಲು ಅತ್ಯಂತವಾಗಿ ಹೊಳೆಯುವ ದಂತ ಪಙ್ತಿಗಳು, ಪ್ರಕಾಶಿಸುವ ಕಡೆಗಣ್ಣಿನ ನೋಟವು, ಥಳಥಳನೆ ಹೊಳೆಯೈವ ಕಂಠಮಾಲೆಯಲ್ಲಿರುವ ಮುತ್ತಿನ ಸರದ ಕಾಂತಿಯು,  ಒಗೆದ ವಸ್ತ್ರವನ್ನು ಧರಿಸಿರುವುದರ ಕಾಂತಿಯತಿಶ-

ವು, ಇವುಗಳು ಪ್ರಭಾವತಿಯ ಕೋಮಲವಾದ ಅಂಗದಲ್ಲಿ ಪ್ರಕಾಶಿಸಲಾಗಿ ಚಂದ್ರಕಾಂತ ಶಿಲೆಯಿಂದ ಮಾಡಿಟ್ಟ ಪ್ರತಿಮೆಯೋ ಎಂಬಂತೆ ಪ್ರಕಾಶಿಸಿದಳು. 


ಕರಯುಗದೊಳಾಂತ ಪೊಂದಟ್ಟೆಯನದರ ಮೇಲೆ।  

ಪರೆಪಿರ್ದ ಸಂಪಗೆಯ ಪೂಗಳಂ ತನ್ನ ಮೆ।

ಯ್ಯೊರಗೆ ಸರಿಯಾದಪುವೆನೋಡೆಂದು ತೋರ್ಪಂತೆ ಕೊಂಡುಬಂದಿದಿರೆ ನಿಂದ॥ 

ತರಳೆಯಂ ಕಡೆಗಣ್ಣೊಳೊಯ್ಯನೀಕ್ಷಿಸಿ ನಗುತೆ। 

ಸರಸ ಪರಿಮಳ ನವ್ಯ ಕುಸುಮಂಗಳಂ ಕೊಂಡು। 

ಭರದಿಂದೆ ಕೊಳುಗುಳಕೆ ಪೊರಮಡುವ ಗಮನದಿಂ ಕಾಂತೆಗವನಿಂತೆಂದನು॥೧೧॥


ಪ್ರತಿಪದಾರ್ಥ :- ಕರಯುಗದೊಳ್= ಎರಡು ಹಸ್ತಗಳಿಂದಲೂ, ಆಂತ=ಧರಿಸಿರುವ, ಪೊಂದಟ್ಟೆಯನು= ಚಿನ್ನದ ಹರಿವಾಣವನ್ನು( ತಬಕವನ್ನು) ಅದರಮೇಲೆ= ಆ ಹರಿವಾಣದ ಮೇಲ್ಭಾಗದಲ್ಲಿ , ಪರೆಪಿರ್ದ=ವಿಸ್ತರಿಸಿರ್ದ, ಸಂಪಗೆಪೂಗಳಂ= ಚಂಪಕಾ ಕುಸುಮಗಳನ್ನು, ತನ್ನ=ತನ್ನಯ, ಮೈಸಿರಿಗೆ=ಅಂಗದ ಕಾಂತಿಗೆ, ಸರಿಯಾದಪವೆ= ಹೋಲಿಕೆಯಾಗುತ್ತದೆಯೆ? ನೋಡು=ಈಕ್ಷಿಸು, ಎಂದು= ಎಂಬುದಾಗಿ, ತೋರ್ಪಂತೆ= ತೋರಿಸುವಹಾಗೆ, ಕೊಂಡುಬಂದು= ತೆಗೆದುಕೊಂಡು ಬಂದು,  ಇದಿರೆ= ಎದುರಿನಲ್ಲಿ, ನಿಂದು= ನಿಂತುಕೊಂಡಿರುವವಳಾದ, ತರಳೆಯಂ=ತನ್ನ ರಾಣಿಯನ್ನು,

 ( ಸ್ತ್ರೀಯನ್ನು) ಕಡೆಗಣ್ಣೊಳು=ಕಡೆಗಣ್ಣಿನ ನೋಟದಿಂದ, ಒಯ್ಯನೆ= ನಿಧಾನವಾಗಿ, ಈಕ್ಷಿಸಿ = ನೋಡಿದವನಾಗಿ, ನಗುತ= ಹರ್ಷಿಸುತ್ತ, ಸರಸ= ರಸಯುಕ್ತವಾದ, ಪರಿಮಳ= ಸುವಾಸನೆಯ ದ್ರವ್ಯ,ನವ್ಯ= ನೂತನವಾದ, ಕುಸುಮಂಗಳಂ = ಪುಷ್ಪಗಳನ್ನು, ಕೊಂಡು=ಗ್ರಹಿಸಿದವನಾಗಿ, ಭರದಿಂದ= ಶೀಘ್ರವಾಗಿ, ಕೊಳುಗುಳಕೆ= ಆಹವಕ್ಕೆ, ಪೊರಮಡುವ= ಹೊರಡತಕ್ಕ, ಗಮನದಿಂ= ಹೊರಡಲುದ್ಯುಕ್ತನಾಗಿ, ಕಾಂತೆಗೆ= ಪ್ರಿಯಳಾದ(ಪತ್ನಿಯಾದ) ಪ್ರಭಾವತಿಗೆ, ಅವಂ= ಆ ಸುಧನ್ವನು, ಇಂತೆಂದನು= ಈ ಪ್ರಕಾರವಾಗಿ ಹೇಳಿದನು.  


ಅ॥ವಿ॥ ಕರ= ಕಿರಣ, ಕೈ, ಆನೆಯ ಸೊಂಡಿಲು, ಪೊಗದಿ, ಚಂಪಕಾ ತ್ಸ. ಸಂಪಗೆ ತ್ಭ. ನವರತ್ನಗಳು- ವಜ್ರ, ವೈಢೂರ್ಯ, ಗೋಮೇಧಿಕ, ಪುಷ್ಯರಾಗ, ನೇಲ, ಮರಕತ, ಮಾಣಿಕ್ಯ, ವಿದ್ರುಮ, ಮೌಕ್ತಿಕ.  


ತಾತ್ಪರ್ಯ:- ಆಗ ಪ್ರಭಾವತಿಯು ಎರಡು ಕೈಗಳಿಂದಲೂ ಹಿಡಿದಿರುವ ಚಿನ್ನದ ತಟ್ಟೆಯನ್ನು ಅದರಮೇಲೆ ಹರಡಿದ್ದ ಚಂಪಕಾ ಕುಸುಮವನ್ನು ತನ್ನ ದೇಹ ಕಾಂತಿಗೆ ಸಮವಾಗಿರುತ್ತವೆಯೇ ನೋಡು ಎಂಬುದಾಗಿ ತೋರ್ಪಂತೆ ಬಂದು ನಿಂತಿರುವ ಚಂಚಲಾಕ್ಷಿಯಾದ ತನ್ನ ಹೆಂಡತಿಯನ್ನು ಕಡೆಗಣ್ಣಿನ ನೋಟದಿಂದ ಈಕ್ಷಿಸಿ,  ನಗುತ್ತ ರಸಯುಕ್ತಮಾದ ಸುಗಂಧದ್ರವ್ಯವನ್ನು ಮತ್ತು ಪುಷ್ಪವನ್ನು ತೆಗೆದುಕೊಂಡು ಭರದಿಂದ ಯುದ್ಧಕ್ಕೆ ಹೊರಡುವ ವೈಭವದಿಂದ ಪ್ರಭಾವತಿಗೆ ಇಂತೆಂದನು.  


ಕಾಂತೆ ಕೇಳಿಂದು ಸಮರದೊಳರ್ಜುನಂಗೆ ಮಾ। 

ರಾಂತವನ ಬಿಂಕಮಂ ಮುರಿವೆನಾ ಹರಿಖಲಬಕಸು। 

ರಾಂತಕಂ ಬಂದೊಡಾತನ ಮುಂದೆ ತೋರಿಸುವೆನೆನ್ನ ಭುಜವಿಕ್ರಮವನು॥ 

ನಾಂ ತಳೆವೆನಾರ್ಪಿಂದೆ ವಿಜಯಮಂ ಮೀರ್ದೊಡೆ ಭ। 

ವಾಂತರವನೈದಿ ಸನ್ಮುಕ್ತಿಯಂ ಪಡೆದಪೆಂ। 

ನೀಂ ತಳಮಳಿಸದಿರೆಂದಿನಿಯಳಂ ಸಂತೈಸಿ ಪೊರಮಡಲ್ ತಡೆದೆಂದಳ್॥೧೨॥ 


ಪ್ರತಿಪದಾರ್ಥ :- ಅವಂ= ಆ ಸುಧನ್ವನು,  ತನ್ನ ಹೆಂಡತಿಯನ್ನು ಕುರಿತು,  ಕಾಂತೆ= ಪ್ರಕಾಶಯುತಳಾದ ಪ್ರಭಾವತಿಯೇ ! 

ಕೇಳು= ಆಲಿಸು, ಇಂದು =ಈ ದಿನ, ಸಮರದೊಳು=ಯುದ್ಧದಲ್ಲಿ, ಅರ್ಜುನಂಗೆ= ಪಾರ್ಥನಿಗೆ, ಮಾರಾಂತು= ಪ್ರತಿಭಟಿಸಿ, ಅವನ= ಆ ಅರ್ಜುನನ,  ಬಿಂಕಮಂ= ಅಹಂಭಾವವನ್ನು, ಮುರಿವೆಂ= ಹೋಗಲಾಡಿಸುತ್ತೇನೆ, ಆ ಹರಿ= ಆ ಶ್ರೀಕೃಷ್ಣಮೂ-

ರ್ತಿಯು, ಖಲ= ನೀಚನಾದ, ಬಕ= ಬಕಾಸುರನಿಗೆ, ಆಂತ= ಯಮಪ್ರಾಯನಾದ, ಭೀಮಸೇನನು, ಬಂದೊಡೆ= ಬಂದಾಗ್ಯೂ, ಆತನ= ಆ ಭೀಮಸೇನನ.  ಮುಂದೆ= ಎದುರಾಗಿ, ಎನ್ನ=ನನ್ನಯ, ಭುಜವಿಕ್ರಮಮಂ= ಬಾಹುಗಳ ಪರಾಕ್ರ-

ಮಾತಿಶಯವನ್ನು, ತೋರಿಸುವೆನು= ತೋರ್ಪಡಿಸುತ್ತೇನೆ, ಆಂ= ನಾನಾದರೊ, ಆರ್ಪಿಂದ= ಬಾಹುಬಲದಿಂದ, ವಿಜಯಮಂ= ಜಯವನ್ನು, ತಳೆವೆಂ= ಪಡೆಯುತ್ತೇನೆ, ಮೀರ್ದೊಡೆ= ಕೈ ಮಿಂಚಿಹೋದರೆ, ಭವಾಂತರವಂ= ಈ ಸಂಸಾರಾಂತರವನ್ನು, ಐದಿಸದ= ಪುನಃ ಸೇರಿಸದ, ಮುಕ್ತಿಯಂ= ಬಿಡುಗಡೆಯನ್ನು, ಎಂದರೆ ಮೋಕ್ಷ ಸುಖವನ್ನು, ಪಡೆದಪೆಂ= ಸಂಪಾದಿಸುತ್ತೇನೆ, ನೀಂ=ನೀನಾದರೊ, ಕಳವಳಿಸದೆ= ಮನಸ್ಸಿನಲ್ಲಿ ಚಿಂತಿಸದೆ,ಇರೆಂದು=ಇರುತಿರು ಎಂಬುದಾಗಿ, ಇನಿಯಳಂ= ಪ್ರೀತಿಪಾತ್ರಳಾದ ಹೆಂಡತಿಯನ್ನು,  ಸಂತೈಸಿ= ಸಮಾಧಾನವನ್ನು ಪಡಿಸಿ, ಪೊರಮಡಲ್= ಮುಂದೆ ಹೊರಡಲಾಗಿ, ತಡದು= ತನ್ನ ಪತಿಯನ್ನು ಅಡ್ಡಗಟ್ಟಿ, ಇಂತೆಂದಳು= ಈ ಪ್ರಕಾರವಾಗಿ ಪೇಳಿದಳು,.


ಅ॥ವಿ॥ ಅಂತಕ= ಕೊನೆಗಾಣಿಸತಕ್ಕವನು, (ಯಮನು) ವಿಕ್ರಮ= ಪರಾಕ್ರಮ, ವಿಕ್ರಮ ಚಕ್ರವರ್ತಿ, ಮುಕ್ತಿ ತ್ಸ. ಮುಕುತಿ ತ್ಭ. 


ತಾತ್ಪರ್ಯ:- ಎಲೆ ಕಾಂತಿಯಿಂದ ಶೋಭಿಸುವ ಪ್ರಭಾವತಿಯೇ ಕೇಳು,  ಈ ದಿನ ಕಾಳಗದಲ್ಲಿ ಪಾರ್ಥಂಗೆ ಎದುರಾಗಿ ಅವನ ಬಿಂಕವನ್ನು ಮುರಿಯುವೆನು. ಆ ಶ್ರೀಕೃಷ್ಣನೂ, ಬಕನನ್ನು ಭೀಮಸೇನನೂ ಬಂದಾಗ್ಯೂ ಅವರ ಮುಂದೆ ನನ್ನ ಭುಜಬಲ ಪರಾಕ್ರಮಾತಿಶಯವನ್ನು ತೋರಿಸುತ್ತೇನೆ. ನೃನು ನನ್ನ ಬಾಹು ಬಲದಿಂದ ಜಯವನ್ನು ಹೊಂದುತ್ತೇನೆ, ಒಂದುವೇಳೆ ಹಾಗೆ ಗೆಲವು ದುರ್ಲಭವಾದರೆ ಈ ಪ್ರಾಪಂಚಿಕ ಸುಖದುಃಖಾದಿಗಳಿಂದ ಕೂಡಿರುವ ಸಾಗರದಂತಹ ಸಂಸಾರ ತಾಪತ್ರಯಂಗಳಂ ತ್ಯಜಿಸಿ ಮೋಕ್ಷ ಸುಖವನ್ನು ಹೊಂದುವೆನು. ನೀನು ಭಯಪಡದೆ ಇರು ಎಂಬುದಾಗಿ ಹೇಳಿ ಹೆಂಡತಿಯನ್ನು ಸಂತೈಸಿ ಹೊರಡಲು, ಆಗ ಪ್ರಭಾವತಿಯು ವಲ್ಲಭನ ಪ್ರಯಾಣವನ್ನು ತಡೆದು ಇಂತೆಂದಳು. 


ಯುಕ್ತಮಲ್ಲಿದು ರಮಣ ನಿನಗೆ ಕೇಳ್ ಕಾದುವಾ। 

ಸಕ್ತಿಯಿಂ ಚಕ್ರಿಗಭಿಮುಖನಾದ ಬಳಿಕಲ್ಲಿ। 

ಮುಕ್ತಿಯಲ್ಲದೆ ಬೇರೆ ಜಯಮುಂಟೆ ಜನಿಸದು ವಿವೇಕಸಂತತಿ ನಿನ್ನೊಳು॥ 

ವ್ಯಕ್ತದಿಂ ತನಗೊಂದಪತ್ಯಮುಲದಯಿಸದೊಡೆ ವಿ। 

ರಕ್ತಿಯಿಂ ಕೈವಲ್ಯಮಾದಪುದೆ ಸಮರಕು। 

ದ್ಯುಕ್ತನಪ್ಪಾತಂಗೆ ಸಂತಾನಮಿಲ್ಲದಿರಲಪ್ಪುದೇ ಹೇಳೆಂದಳು॥೧೩॥ 


ಪ್ರತಿಪದಾರ್ಥ :- ರಮಣ=ವಲೂಲಭನೆ! ಇದು=ಈ ಸಮಯದಲ್ಲಿ ಕಾಳಗಕ್ಕೆ  ಹೊರಡುವುದು,  ನಿನಗೆ= ನಿನಗಾದರೊ, ಯುಕ್ತಂ ಅಲ್ಲ= ಸರಿಯಾದದ್ದು ಆಗಿರುವುದಿಲ್ಲ , ಕೇಳ್=ಆಲಿಸು, ಕಾದುವ= ಜಗಳವಾಡುವ,ಆಸಕ್ತಿಯಿಂ= ಪ್ರೀತಿಯಿಂದ, ಚಕ್ರಿಗೆ= ಶ್ರೀಕೃಷ್ಣಸ್ವಾಮಿಗೆ,ಅಭಿಮುಖವಾದ= ಪ್ರತಿಭಟಿಸಿ ನಿಂತ, ಬಳಿಕ= ಅನಂತರದಲ್ಲಿ, ಊಲ್ಲಿ= ಆ ಸ್ಥಳದಲ್ಲಿ, ಎಂದರೆ ಯುದ್ಧರಂಗದಲ್ಲಿ,ಮುಕ್ತಿ= ಮೋಕ್ಷ ಸುಖವು, (ಸ್ವರ್ಗಪ್ರಾಪ್ತಿಯು), ಅಲ್ಲದೆ= ಹೊರತಾಗಿ, ಬೇರೆ= ಇತರಮಾದ, ಜಯಂ= ಗೆಲುವು, ಉಂಟೆ=ಲಭಿಸುವುದೆ! ನಿನ್ನೊಳು= ನಿನ್ನಲ್ಲಿ,  ವಿವೇಕ ಸಂತತಿ= ತಿಳಿವಳಿಕೆಯಿಂದುಂಟಾಗುವ ವಂಶಾಭಿವೃದ್ಧಿಯು, ಜನಿಸದು= ಆವಿರ್ಭವಿಸಲಾರದು, ವ್ಯಕ್ತದಿಂ= ಸ್ಪಷ್ಟವಾಗೋಣವು ಹೇಗೊ ಹಾಗೆ( ಲೋಕವಿಖ್ಯಾತಿಯಿಂ) ತನಗೆ= ಎನಗೆ, 

(ನನಗಾದರೊ) ಒಂದು= ಒಂದಾದ, ಅಪತ್ಯಂ= ಮಗುವು(ಸಂತಾನವು) ಉದಯಿಸದೊಡೆ= ಉತ್ಪತ್ತಿಯಾಗದಿದ್ದರೆ, ವಿರಕ್ತಿಯಿಂ= ವೈರಾಗ್ಯದಿಂದ, ಕೈವಲ್ಯಂ= ಮೋಕ್ಷ ಸುಖವು, ( ಸ್ವರ್ಗವು) ಆದಪುದೆ= ಉಂಟಾದೀತೆ? ಸಮರಕೆ= ಕಾಳಗಕ್ಕೆ,  ಉದ್ಯುಕ್ತ= ಆಸಕ್ತನಾದವನು, ಅಪ್ಪ=ಆಗಿರುತ್ತಲಿರುವ, ಆತಂಗೆ= ಅಂಥವನಿಗೆ, ಸಂತಾನಂ= ಪುತ್ರಸಂತಾನವು, ಇಲ್ಲದಿರಲು= ಆಗದಿದ್ದರೆ( ಇಲ್ಲದಿದ್ದಲ್ಲಿ) ಅಪ್ಪುದೆ= ಆಗುವುದೆ? ಹೇಳೆಂದಳು= ಪೇಳೆಂದು ನುಡಿದಳು. 


ಅ॥ವಿ॥ ವಿವೇಕಗಳ ಸಂತತಿ= ವಿವೇಕ ಸಂತತಿ, (ಷ.ತ. ) ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ ಸಾಯುಜ್ಯ, ಇವು ಮೋಕ್ಷ ಚತುಷ್ಟಯ. 


ತಾತ್ಪರ್ಯ:- ಪ್ರೀತಿಪಾತ್ರನಾದ ಪ್ರಿಯನೇ! ಈಗ ನೀನು ಕಾಳಗಕ್ಕೆ ಹೋಗೋಣವು ಯೋಗ್ಯವಾದ್ದಲ್ಲ, ಎನ್ನಯ ನುಡಿಯಂ ಲಾಲಿಸು, ಯುದ್ಧಮಾಡುವ ಕುತೂಹಲದಿಂದ ಶ್ರೀಕೃಷ್ಣನಿಗೆ ಪ್ರತಿಭಟಿಸಿ ನಿಂತ ಬಳಿಕ ನಿನಗೆ ಗೆಲುವು ಎಲ್ಲಿಂದ ಬಂದೀತು, ಮೋಕ್ಷವಲ್ಲದೆ ಎಂದಿಗೂ ಜಯವಾಗದು. ನಿನಗೆ ಸುಜ್ಞಾನದಿಂದುಂಟಾಗುವ ಸಂತಾನವು ಜನಿಸದು. ವ್ಯಕ್ತದಿಂದ ನನಗೊಂದು ಅಪತ್ಯವು(ಕೂಸು) ಹುಟ್ಟದೇ ಹೋದರೆ ವಿರಕ್ತಿಯಿಂದ ಕೈವಲ್ಯವು ಲಭಿಸುವುದೇ( ಎಂದಿಗೂ ಲಭಿಸದು) ಯುದ್ಧೋನ್ಮುಖನಾದವನಿಗೆ ಪುತ್ರ ಸಂತಾನವು ಇಲ್ಲದಿರೆ ಆದೀತೆ? ನೀನೆ ಹೇಳೆಂದು ಪೇಳಿದಳು. 


ಅದರಿಂದಮಾತ್ಮಜವಿವೇಕಮಿಲ್ಲದೊಡೆ ನನ। 

ಗಿದುವೆ ಜಲದೋದಯದ ಋತುಸಮಯಮೀ ಪದದೊ। 

ಳುದುಭವಿಸುವುದು ನಿನ್ನ ಭೂಮಿಯೊಳ್ ಬೀಜಮಂ ಬಿತ್ತಿದೊಡೆ ಬೆಳೆ ಬಾಳ್ಕೆಗೆ॥ 

ಕದನಕೈದುವವೇಳೆಯಲ್ಲೆನಲವಂ ಮುಂದೆ। 

ಬೆದೆಗಾಲಮುಂಟೆಂದೊಡವಳೆಣೆಸಿ ಮಳೆಗಳಂ । 

ತುದಿವಿಶಾಕೆಗೆ ಬಂದುದಿನ್ನು ಮೇಲಂಕುರಿಸಲರಿಯದೆನಲಿಂತೆಂದನು॥೧೪॥ 


ಪ್ರತಿಪದಾರ್ಥ :- ಅದರಿಂದಲ್= ಆದ್ದರಿಂದಲೇನೆ, ಆತ್ಮಜ= ಪುತ್ರರ, ವಿವೇಕ= ಇರಬೇಕೆಂಬ ತಿಳಿವಳಿಕೆಯು, ಇಲ್ಲದೊಡೆ= ಹಾಗೆ ಇಲ್ಲದೇಹೋದ ಪಕ್ಷದಲ್ಲಿ, ನಿನಗೆ= ನಿನಗಾದರೊ, ಇದುವೆ= ಇದೇನೆ, ಜಲೋದಯದ= ಮೇಘಗಳು ಆವಿರ್ಭವಿ- ಸೋಣದ, ಎಂದರೆ ಬೀಜ ಬಿತ್ತಲು ಸಿದ್ಧವಾಗಿರುವ ಪ್ರದೇಶದ, ಋತುಸಮಯಂ= ರಜಸ್ಸು ವ್ಯಾಪಿಸಿರುವ ಕಾಲವು (ಗರ್ಭಧಾರಣ ಸಮಯವು), ಆಗಿರ್ಪುದು= ಆಗಿರುತ್ತದೆ, ಈ ಪಥದೊಳು= ಈ ಹಾದಿಯಲ್ಲಿ, ನಿನ್ನ =ನಿನ್ನಯ, ಭೂಮಿಯೊಳಗೆ= ಬೀಜ ಬಿತ್ತಲು ಅನುವಾಗಿಇರುವ ಪ್ರದೇಶದಲ್ಲಿ, ಬೀಜವಂ= ರೇತವೆಂಬ ಬೀಜವನ್ನು, ಬಿತ್ತಿದೊಡೆ= ಬಿತ್ತಿದ್ದೇ ಆದರೆ, ಬೆಳೆ= ಪುತ್ರಸಂತಾನವೆಂಬ ಅಂಕುರವು, ಬಾಳ್ವೆಗೆ= ಬದುಕುವುದಕ್ಕೆ,(ಅಭಿವೃದ್ಧಿ ಹೊಂದಲಿಕ್ಕೆ,) ಉದುಭವಿಸುವುದು= ಆವಿರ್ಭವಿಸುವುದು, ಕದನಕೆ= ಆಹವಕ್ಕೆ, ಐದುವ=ಹೊರಡಲು ಸಿದ್ಧವಾಗಿರುವ, ವೇಳೆಯು= ಸಮಯವು, ಇಲ್ಲ= ಆಗಿರುವುದಿಲ್ಲ, ಎನಲು= ಎಂಬುದಾಗಿ ಹೇಳಲು, ಅವಂ= ಆ ಸುಧನ್ವನು,  ಮುಂದೆ= ಮುಂದಕ್ಕೆ,  ಬೆಳೆಗಾಲಂ= ಬೀಜಬಿತ್ತುವ ಸಮಯವು,(ಗರ್ಭಧಾರಣ ಸಮಯವು), ಉಂಟು= ಉಂಟಾಗಿರುವುದು, ಎಂದೊಡೆ= ಎಂಬುದಾಗಿ ಆಲೋಚಿಸಿದರೆ, ಅವಳು= ಆ ಪ್ರಭಾವತಿ ರಾಜ್ಞಿಯು, ಎಣಿಸಿ= ಎಣಿಕೆಮಾಡಿ, ಆಲೋಚನೆಯನ್ನು ಮಾಡಿ, ಮಗೆಗಳಿಂ= ಮಘಾ ನಕ್ಷತ್ರ ಮೊದಲುಗೊಂಡು, ತುದಿ=ಕೊನೆಯಾದ ವಿಶಾಖಾ ನಕ್ಷತ್ರದಪರಿಯಂತವೂ,ಬಂದುದು= ಬಂದಿರುತ್ತದೆ, ಇನ್ನುಮೇಲೆ= ಇಲ್ಲಿಂದೀಚೆಗೆ, (ಈ ಮಹಾ ನಕ್ಷತ್ರ ತರುವಾಯದಲ್ಲಿ) ಅಂಕುರಿಸಲು=ಅಂಕೈರೋದ್ಭವವಾ-

ಗಲು, ಅರಿಯದು = ಕಾಣಬರುವುದಿಲ್ಲ, (ಗರ್ಭವು ಉತ್ಪತ್ತಿಯಾಗಲಾರದು) ಎನಲು= ಎಂಬುದಾಗಿ ಹೇಳಲಾಗಿ, ಅವಂ= ಆ ಸುಧನ್ವನು, ಇಂತು=ಈ ಪ್ರಕಾರವಾಗಿ, ಎಂದನು= ಎಂಬುದಾಗಿ ಹೇಳಿದನು.  


ಅ॥ವಿ॥ ಋತುವಿನ ಸಮಯ= ಋತೈಸಮಯ (ಷ. ತ. ) ವಿವೇಕವೆಂಬ,ಸಂತತಿ= ವಿವೇಕ ಸಂತತಿ(ಸಂ. ಪೂ. ಕ) ಇದು ಪಥ= ಈ ಪಥ ( ಗಮಕ.ಸ.) 


ತಾತ್ಪರ್ಯ:- ಆದ್ದರಿಂದಲೆ ಮಕ್ಕಳು ಇರುವ ವ್ಯವಸ್ಥೆಯು ಇಲ್ಲದೇ ಹೋದರೆ ನಿನಗೆ ಎದೇನೆ ಜಲೋದಯದ ಎಂದರೆ ಋತುಸಮಯವು ಆಗಿರುವುದು. ಈ ಪಥದಿಂದ ನಿನ್ನ ಕ್ಷೇತ್ರದಲ್ಲಿ ಬೀಜವಂ ಬಿತ್ತಿದೊಡೆ ಬೆಳೆಯೆಂಬ ಸಂತಾನವು ವಂಶಾ-

ಭಿವೃದ್ಧಿಗೋಸ್ಕರವಾಗಿ ಉದಯಿಸುವುದು. ಈಗ ನೀನು ಯುದ್ಧಕ್ಕೆ ಹೋಗಲುಸಮಯವಲ್ಲವೆಂದು ಪ್ರಭಾವತಿಯು ಹೇಳಲಾಗಿ, ಆಗ ಸುಧನ್ವನು ಮುಂದೆ ಬೆದೆಗಾಲವುಉಂಟು ಎಂದು ಯೋಚಿಸಿದರೆ, ಆ ಪ್ರಭಾವತಿಯು ಗಣಿತಮಾಡಿ ಮಖಾನಕ್ಷತ್ರದಿಂದ ಕೊನೆಯಿಂದ ವಿಶಾಖ ನಕ್ಷತ್ರದವರೆವಿಗೆ ಕಳೆದುಬಂತು ಇನ್ನು ಮುಂದೆ ಅಂಕುರಿಸಲು ಅಪರೂಪವಾಗುತ್ತದೆ ಎನಲು ಮತ್ತೆ ಆ ಸುಧನ್ವನು ಇಂತೆಂದನು.  


ರಮಣಿ ನೀನೆಂಬುದನುನಯಮಪ್ಪುದಾದೊಡಂ। 

ಸಮಯಮಲ್ಲಿದು ಮೊಳಗುತಿದೆ ಭೇರಿ ಪೊರಮಟ್ಟು । 

ಸಮರಕಯ್ಯಂ ಪೋದನುಳಿದೆನಾದೊಡೆ ತಾತನಾಜ್ಞೆಗೊಳಗಾಗದಿರೆನು॥

 ಕ್ರಮವನರಿಯದಳೆ ನೀನೆನಗೆ ಸೈರಿಸಲಳವೆ। 

ಗಮನಕನುಕೂಲೆಯಾಗೆನುತ ಗಲ್ಲಂಬಿಡಿದು। 

ಕಮಲಾಕ್ಷಿಯಂ ಮುದಗೈದು ಬೀಳ್ಕೊಳ್ವಿನಂ ಕಾತರಿಸಿ ಮೇಲ್ವಾಯ್ದಳು॥೧೫॥ 


ಪ್ರತಿಪದಾರ್ಥ :- ರಮಣಿ= ಎಲೆ ಕಾಂತಾ ಶಿರೋಮಣಿಯೆ! ನೀಂ=ನೀನು, ಎಂಬುದು= ಹೇಳತಕ್ಕ ವಿಷಯವು, ಅನುನಯಂ= ಲಲಿತವಾದದ್ದು( ಸರಿಯಾದದ್ದು), ಅಪ್ಪುದು= ಆಗಿರುತ್ತದೆ, ಇದು= ಈಗಿನವೇಳೆ, ಸಮಯಂ= ಅವಕಾಶವು, ಅಲ್ಲ= ಆಗಿರುವುದಿಲ್ಲ,  ಭೇರಿ= ನಗಾರಿಯು, ಮೊಳಗುತಿವೆ= ಶಬ್ಧಮಾಡುತ್ತಿವೆ, ಅಯ್ಯಂ= ಜನಕನು, ಸಮರಕೆ= ಕಾಳಗಕ್ಕೆ, ಪೊರಮಟ್ಟು = ಹೊರಟು, ಪೋದನು= ಹೊರಟು ಹೋಗಿರುವನು, ಉಳಿದೆಂ ಆದೊಡೆ= ಇಲ್ಲಿಯೇ ನಿಂತುಬಿಟ್ಟರೆ, ತಾತನ= ಪಿತನ, ಆಜ್ಞೆಗೆ= ಅಪ್ಪಣೆಗೆ, ಒಳಗಾಗದೆ= ಒಳಪಡದೆ, ಇರೆನು= ಇರಲಾರೆನು, ಎಂದರೆ ಶಿಕ್ಷೆಯನ್ನು ಅನುಭವಿಸಬೇಕಾಗುತ್ತೆ, (ಯಾರಾದರೂ ಸರಿಯೆ ಕಾಳಗಕ್ಕೆ ಸಕಾಲದಲ್ಲಿ ಬಾರದಿದ್ದಲ್ಲಿ ಕ್ರೂರವಾದ ಶಿಕ್ಷೆಗೆ ಗುರಿಯಾಗಬೇ-

ಕೆಂಬ ನಿಯಮವಿರುತ್ತೆ) ಕ್ರಮವು= ಆ ನಮ್ಮ ತಂದೆಯ ರೀತಿಯು, ನೀಂ= ನೀನೂ ಕೂಡ, ಅರಿಯದಳೆ= ತಿಳಿದಿರತಕ್ಕವಳೆ? ಎನಗೆ= ನನಗಾದರೊ, ಸೈರಿಸಲು= ರಾಜಾಜ್ಞೆಯನ್ನು ಅನುಭವಿಸಲು, ಅಳವೆ= ಸಾಧ್ಯವೇ? ಯೋಗ್ಯವಾದುದೆ? ಗಮನಕ್ಕೆ= ಎನ್ನ ಪ್ರಯಾಣಕ್ಕೆ,  ಅನುಕೂಲೆಯಾಗು= ಸಹಾಯಕಳಾಗಿರು, ಎನುತ= ಎಂಬುದಾಗಿ ಹೇಳುತ್ತ,  ಗಲ್ಲ= ಚುಬುಕಾಗ್ರವನ್ನು, ಪಿಡಿದು= ಹಿಡಿದುಕೊಂಡು, ಕಮಲಾಕ್ಷಿಯಂ = ಪಂಕಜಾಕ್ಷಿಯಾದ ಪ್ರಭಾವತಿಯನ್ನು, ಮುದ್ದುಗೈದು= ಮುದ್ದಾಡಿ, ಬೀಳ್ಕೊಂಡು= ಹೇಳುತ್ತಿರುವ( ಹೊರಟು ಹೋಗುವಂತೆ ಕೇಳುತ್ತಿರುವ) ಇನಂ= ವಲ್ಲಭನನ್ನು ಕುರಿತು,  ಕಾತರಿಸಿ= ಹೆದರಿಕೊಂಡು,  ಮೇಲ್ವಾಯ್ದಳು= ವಲ್ಲಭನಮೇಲೆ ಬಿದ್ದಳು(ಕಾಮೋದ್ರೇಕದಿಂದಬಂದು ಬಿದ್ದಳು). 


ಅ॥ವಿ॥ ತಾತ (ತ್ಸ) ತಂದೆ (ತ್ಭ) ಆಜ್ಞೆ (ತ್ಸ) ಅಪ್ಪಣೆ (ತ್ಭ) ಕಮಲದಂತೆ ಅಕ್ಷಿಯುಳ್ಳವಳು = ಕಮಲಾಕ್ಷಿ, ಉ. ಪೂ. ಬ. ಸ.  


ತಾತ್ಪರ್ಯ:- ಎಲೆ ರಮಣಿಯಾದ ಪ್ರಭಾವತಿಯೇ ನೀನು ಹೇಳತಕ್ಕದ್ದು ನ್ಯಾಯವಾದದ್ದು ಆಗಿರುವುದು. ಈಗ ಅಂಕುರೋದ್ಭವಕ್ಕೆ ಕಾಲವಲ್ಲ, ಆಗಲೆ ಭೇರಿ ಮೊದಲಾದ ವಾದ್ಯವಿಶೇಷಗಳು ರವಗೈಯುತ್ತಿರುವುವು. ಎನ್ನಯ ಪಿತನು ಯುದ್ಧಕ್ಕಾಗಿ ಹೊರಟು ಹೋದನು. ನಾನೇನಾದರು ಇಲ್ಲಿ ನಿಂತುದೇ ಆದರೆ ತಾತನಾಜ್ಞೆಗೆ ಒಳಗಾಗದೆ ಇರಲಾರೆನು, 

( ಯುದ್ಧಕ್ಕೆ ಹಿಮ್ಮೆಟ್ಟಿ ನಿಂತಲ್ಲಿ ಶಿಕ್ಷಾರ್ಹನಾಗುತ್ತೇನೆ), ಈ ಕ್ರಮವನ್ನು ನೀನು ತಾನೆ ಊರಿಯದವಳೇ? ನಾನು ಶಿಕ್ಷೆಯನ್ನು ಹೊಂದುವುದು ಸಾಧ್ಯವೇ, ನನ್ನ ಪ್ರಯಾಣಕ್ಕೆ ಅನುಕೂಲೆಯಾಗೆಂದು ಸುಧನ್ವನು ತನ್ನ ಪ್ರಿಯಳ ಗಲ್ಲವನ್ನು ಪಿಡಿದು ಕಮಲಾಕ್ಷಿಯಂ ಮುದ್ದಾಡಿ ಹೊರಡಲುದ್ಯುಕ್ತನಾಗಲು, ಆಗ ಪ್ರಭಾವತಿಯು ಪತಿಯಂ ನೋಡಿ ಭಯದಿಂದ ಕಾತರಿಸಿ ಮೇಲೆ ಬಿದ್ದವಳಾದಳು. 


ಅಂಗಮಿಲ್ಲದನ ಸಮರಂಗಮಂ ಪುಗಲಂಜಿ। 

ತುಂಗವಿಕ್ರಮವಿಜಯಸಂಗರಕೆಳಸುವೆನೆಂ। 

ಬಂಗವಣೆಯೆಂತುಟೆಂದಂಗಗನೆ ಬಲತ್ಕಾರದಿಂ ಗುರುಕುಚದ್ವಯವನು॥ 

ಸಂಗಡಿಸುವಂತಾರ್ಪಿನಿಂ ಗಾಢತರದೊಳಾ। 

ಲಿಂಗನಂಗೈದು ಕುಡಿಕಂಗಳಿಂದವನ ಮೊಗ। 

ದಿಂಗಿತವನಾರೈವ ಶೃಂಗಾರಚೇಷ್ಟೆಯ ಬೆಡಂಗನದನೇವೇಳ್ವೆನು॥೧೬॥ 


ಪ್ರತಿಪದಾರ್ಥ :- ಅಂಗಂ= ದೇಹವು, ಇಲ್ಲದನ= ಇಲ್ಲದಿರುವವನ( ಮದನನ) ಸಮರಂಗಮಂ= ಯುದ್ಧವನ್ನು ಕುರಿತು, ( ಮನ್ಮಥ ವಿಜಯವನ್ನು ಕುರಿತು,  ಇಲ್ಲವೆ ಸಮವಾದ ರತಿಸುಖವನ್ನು ಯೋಚಿಸಿ,  ಪೋಗಲ್= ಪ್ರವೇಶೀಸಲು, ಅಂಜಿ= ಹೆದರಿಕೊಂಡು,  ತುಂಗ= ಉನ್ನತವಾದ, (ಅತ್ಯಧಿಕವಾದ) ವಿಕ್ರಮ= ಆಟೋಪವುಳ್ಳವನಾದ, ವಿಜಯ= ಪಾರ್ಥನ, ಸಂಗರಕೆ= ಕಾಳಗಕೆ, ಎಳಸುವನು= ಇಚ್ಛಿಸುವನು, ಎಂಬ= ಎನ್ನುವ, ಅಂಗವಣೆ= ಕುತೂಹಲವು, ಎಂತುಟು= ಯಾವ ರೀತಿಯಾದುದು( ಅದು ಹೇಗಾಯಿತು) ಎಂದು= ಎಂಬುದಾಗಿ,  ಅಂಗನೆ= ಸ್ತ್ರೀಯಾದ ಪ್ರಭಾವತಿಯು,  ಬಲತ್ಕಾರದಿಂ = ಅತಿಕ್ರಮ ಪ್ರವೇಶದಿಂದ, ಘನ= ದಪ್ಪವಾದ, ಕುಚದ್ವಯವನು= ಸ್ತನಯುಗ್ಮವನ್ನು, ಸಂಘಟಿಸುವಂತೆ= ಸೇರುವಹಾಗೆ, ಬಿಗಿಯಪ್ಪಿ= ತಬ್ಬಿಕೊಂಡು,  ಗಾಢಾಲಿಂಗನಂಗೈದು= ಗಾಢಾಲಿಂಗನವನ್ನು ಮಾಡಿಕೊಂಡು,  ಕುಡಿಗಂಗಳಿಂದ= ಕಡೆಗಣ್ಣಿನ ನೋಟದಿಂದ,  ಅವನ= ಸುಧನ್ವನ,  ಮೊಗದ= ವದನದ, ಇಂಗಿತವನು= ಮನೋಭಿಪ್ರಾಯಾದಿಗಳನ್ನು, ಆರೈವ= ಗ್ರಹಿಸತಕ್ಕ, ಶೃಂಗಾರಚೇಷ್ಟೆಯ= ರತಿ ಕ್ರೀಡಾಸಂಬಂಧವಾದ ಅಂಗವಿಕಾರದ ನಡವಳಿಕೆಯು, ಬೆಡಂಗನು= ಠೀವಿಯನ್ನು, 

( ಸೊಗಸನ್ನು), ಅದಂ= ಆ ವಿಷಯವನ್ನು, ಏವೇಳ್ವೆನು= ಏನೆಂದು ಹೇಳಲಿ. 


ಅ॥ವಿ॥ ಘನ= ಮೇಘ, ದೊಡ್ಡದು, ಉನ್ನತ, ಘನಾಕೃತಿ, ಶೃಂಗಾರ (ತ್ಸ) ಸಿಂಗರ (ತ್ಭ) ನವರಸಗಳು= ಶೃಂಗಾರ, ವೀರ, ಕರುಣ, ಅದ್ಭುತ, ಹಾಸ್ಯ, ಭಯಾನಕ, ರೌದ್ರ, ಶಾಂತಿ, ಭೀಭತ್ಸ ಇವುಗಳು, ಅಷ್ಟಭೋಗಂಗಳು= ಸ್ನಾನ, ಪಾನ, ಭೋಜನ, ವಸ್ತ್ರ, ಗಂಧ, ಪುಷ್ಪ, ತಾಂಬೂಲ, ಸಂಯೋಗ. 


ತಾತ್ಪರ್ಯ:- ಬಳಿಕ ಕಾಮನ ಕೇಳಿಗೆ ಹೋಗಲು( ರತಿಕ್ರೀಡೆಯಾಡಲು ಹೊರಡುವುದಕ್ಕೆ) ಭಯಪಟ್ಟು, ಪಾರ್ಥನೊಡನೆ ಕಾದುವುದಕ್ಕೆ ಹೋಗುವೆನು ಎನ್ನುವಲ್ಲಿ ಆಸೆಮಾಡುವುದರ ಉತ್ಸಾಹವುಹೇಗೆ ಉಂಟಾಯಿತೊ, ಎಂಬುದಾಗಿ ಹೇಳಿ ಆ ಪ್ರಭಾವತಿಯು ಬಲಾತ್ಕಾರದಿಂದ ದೊಡ್ಡದಾದ ಕುಚದ್ವಯಗಳು ಸಂಘಟಿಸುವಂತೆ ಬಿಗಿಯಾಗಿ ಆಲಿಂಗನೆಯಂ ಮಾಡಿದ ನಂತರ ಪತಿಯನ್ನು ಬಿಡದೆ ಆಲಿಂಗಿಸಿಕೊಂಡು ಕೊನೆಗಣ್ಣಿನ ನೋಟದಿಂದ ಆ ಸುಧನ್ವನ ಮುಖದ ವಿಕಾರಾದಿಗಳನ್ನು

( ಮನೋಭಿಪ್ರಾಯಾದಿಗಳನ್ನು) ತಿಳಿದುಕೊಳ್ಳುವ ಶೃಂಗಾರಚೇಷ್ಟೆಯ ಬೆಡಗನ್ನು ಏನೆಂದು ಬಣ್ಣಿಸಲಿ. 


ಮಿಡಿದೊದೊಡೆವಂತಮೃತರಸದಿಂದೆ ನೆರೆವ ಪೊಂ। 

ಗೊಡಮೊಲೆಯನವನ ವಕ್ಷಸ್ಥಳದೊಳಿಟ್ಟೊತ್ತಿ। 

ದೊಡೆ ಹಿಸಿದೊಳಗಣ ತನುಸುಧೆಯೊಸರ್ದು ತೊಟ್ಟಿಡುವ ಬಿಂದುಗಳ ಸಾಲಿದೆನಲು॥ 

ಕಡಿಕಿ ಪರಿದುಗುವ ಹಾರದ ಮುತ್ತುಗಳ ಮಣಿಗ। 

ಳೆಡೆವಿಡದೆ ಸೂಸುತಿರೆ ಸೊಕ್ಕುದೆಕ್ಕೆಯೊಳ್ ಸೊಗಸು। 

ಪಡೆದಳಾಕಾಂತೆಪ್ರಿಯನಂಗದೊಳ್ ಮೋಹನೋತ್ಸಂಗದೊಳ್ ಬಗೆಗೊಳಿಸುತೆ॥೧೭॥ 


ಪ್ರತಿಪದಾರ್ಥ :- ಮಿಡಿದರೆ= ಹಿಡಿದು ಹೀಳಿದರೆ, ಒಡೆವಂತೆ= ದ್ರವಿಸುವಹಾಗೆ, ಅಮೃತರಸದಿಂದ= ಅಮೃತವಸ್ತುವಿನಿಂದ, 

(ಪಯದಿಂದ) ನೆರೆವ= ಕಲೆತಿರುವ, ಪೊಂಗೊಡ= ಚಿನ್ನದ ಘಟದಂತಿರುವ, ಮೊಲೆಯನು= ಕುಚಗಳನ್ನು, ಅವನ=ಆ ಸುಧನ್ವನ,  ವಕ್ಷಸ್ಥಳದೊಳು= ಉರಪ್ರದೇಶದಲ್ಲಿ, ಇಟ್ಟು= ಸೇರಿಸಿದವಳಾಗಿ, ಒತ್ತಿದೊಡೆ= ಅಮುಕಲಾಗಿ, ಹಿಸಿದು= ಅದು ವಿಸ್ತರಿಸಿ, ಒಳಗಣ= ಒಳಪ್ರದೇಶದಲ್ಲಿರುವ,ತನಿ=ಮಧುರವಾದ, (ನೂತನವಾದ), ಸುಧೆಯು=ಅಮೃತವೆಂಬ ಹಾಲು, ಒಸರಿ= ಸ್ರವಿಸಿ, ತೊಟ್ಟಿಡುವ= ಹನಿಗಳಾಗಿ ಬೀಳುತ್ತಿರುವ, ಸಾರಂ= ಸಾರವು ( ಮಂದ ವಸ್ತುವು), ಎನಲು=ಎನ್ನುವ ಹಾಗೆ, ಕಡಿಕಿ= ಹಿಟ್ಟಾಗಿ,ಪರಿದು= ಹರಿದುಹೋಗಿ, (ಕಿತ್ತುಹೋಗಿ) ಒಗುವ= ಸೋರುವ, ಮುತ್ತುಗಳ=ಮೌಕ್ತಿಕಗಳ, ಹಾರದ=ಸರದ

ಮಣಿಗಳು=ಮೌಕ್ತಿಕಗಳು, ಎಡೆಬಿಡದೆ= ಸ್ಥಳಬಿಡದೆ, ಸೂಸುತಿರೆ= ಚಲ್ಲುತ್ತಿರಲು, ಸೊಕ್ಕು= ಮದವು, (ಕಾಮದಿಂದುಂಟಾದ ಕೊಬ್ಬು), ತೆಕ್ಕೆಗೆ= ಸಮೂಹಕ್ಕೆ,(ಅಜ್ಞಾನಕ್ಕೆ) ಆ ಕಾಂತೆ= ಆ ಪ್ರಭಾವತಿಯು, ಪ್ರಿಯನ= ತನ್ನ ವಲ್ಲಭನ, ಅಂಗದೊಳ್=

ಅವಯವದಲ್ಲಿ, ಮೋಹನೋತ್ಸಂಗದೋಳ್= ಮೋಹಿಸತಕ್ಕ ತೊಡೆಯಪ್ರದೇಶದಲ್ಲಿ,ಬಗೆಗೊಳುತಿರೆ= ಆ ರೀತಿ ಚಂದದಿಂದ ಕಾಣಬರುತ್ತಿರಲು, ಸೊಗಸುವಡೆದಳು= ಕಾಂತ್ಯತಿಶಯವಾಗಿದ್ದಳು. 


ಅ॥ವಿ॥ ಮುತ್ತು= ಆವರಿಸು, ಮೌಕ್ತಿಕ, ಮೌಕ್ತಿಕ (ತ್ಸ)ಮುತ್ತು (ತ್ಭ) ಸೊಗಸಂ -ಪಡೆದಳು=ಸೊಗಸುವಡೆದಳು (ಕ್ರಿ. ಸ.) 


ತಾತ್ಪರ್ಯ:- ಆಗ ಮಿಡಿದರೆ (ಹಿಡಿದರೆ) ಸುರಿದುಹೋಗುವಂತೆ ಅಮೃತರಸದಿಂದ ಕೂಡಿರುವ ಚಿನ್ನದ ಕೊಡದಂತಿರುವ ಕುಚಗಳನ್ನು ಆ ಸುಧನ್ವನ ವಕ್ಷಸ್ಥಳದಲ್ಲಿಟ್ಟು ಒತ್ತಿದರೆ, ಅದು ಹಿಸಿದು ಒಳಗಣ ಹೊಸದಾದ ಸುಧೆಯುಸೋರಿ ಬಿಂದುಗಳಾಗಿತೊಟ್ಟಿಡುವ ಸಾರವೋ ಎನ್ನುವಂತೆ ಕಡಿಕಿ ( ಸೊನೆಯಾಗಿ ಪರಿದು) ಒಗುವ ಮುತ್ತುಗಳ ಹಾರದ ಮಣಿಗಳು ಎಡಬಿಡದೆ ಉದುರುತ್ತಿರಲು ಕಾಮದಿಂದುಂಟಾದ ಮತ್ತತೆಯ ಕೊಬ್ಬಿಗೆ ಅವಳು ಪ್ರಿಯನ ಅಂಗದೊಳಿರ್ಪ ಮೋಹನೋತ್ಸಂಗದ ಬಗೆಗೊಳ್ಳುತ್ತಿರಲು ಕಾಂತಿಯಿಂದ ಒಪ್ಪಿದ್ದಳು. 


ಪ್ರಿಯನ ತನುಚಂದನಮಹೀಜಮಂ ಸುತ್ತಿದ ಫ। 

ಣಿಯೊ ವಲ್ಲಭಾಂಗದಾಲಸ್ತಂಭಮಂ ತೊಡ। 

ರ್ದಯುಗಶರಕರಿಯ ಸುಂಡಿಲೊ ಕಾಂತಕಾಯಬಲಮಂ ಬಂಧಿಸಿದ ಮದನನ॥ 

ಜಯಪಾಶಮೋ ರಮಣ ದೇಹ ಕಲ್ಪ ದ್ರುಮಾ। 

ಶ್ರಯದ ಕೋಮಲಲತೆಯೊ ಪೊಸತಾದುದೆಂಬಂತಿ।

 ನಿಯನಪ್ಪಿದ ಹರಿಣಲೋಚನೆಯ ನಳಿತೋಳ್ಗಳೆಸೆದುವತಿಗಾಢದಿಂದೆ॥೧೮॥ 


ಪ್ರತಿಪದಾರ್ಥ :- ಪ್ರಿಯನ= ತನ್ನ ವಲ್ಲಭನ, ತನು= ಅಂಗವೆಂಬುವ, ಮಹೀಜಮಂ= ವೃಕ್ಷವನ್ನು, ಸುತ್ತಿದ= ಬಳಸಿಕೊಂಡಿರುವ, ಫಣಿಯೋ= ಹಾವೋ, ವಲ್ಲಭ= ಪ್ರಿಯನೆಂಬ(ಗಂಡನೆಂಬ) ಆಲಸ್ತಂಭ= ವಟದ್ರುಮವನ್ನು, ತೊಡರ್ದ= ಬಳಸಿಕೊಂಡ, ಅ ಯುಗ=ಜೊತೆಯಲ್ಲದವನಾದ (ಸಮವಲ್ಲದ) ಸ್ಮರನ=ಮನಸಿಜನ, ಕರಿಯ=ಗಜದ, ಶುಂಡಿಲೊ= ಸೊಂಡಿಲವೊ( ಕರವೊ), ಕಾಂತ=ತನ್ನ ಗಂಡನ, ಕಾಯ=ಶರೀರದ, ಬಲಮಂ= ಸಾಮರ್ಥ್ಯವನ್ನು, ಬಂಧಿಸಿದ= ಸಂಬಂಧಿಸಿದ, ಮದನನ= ಅಂಗಜನ, ಜಯಪಾಶಮೊ= ಗೆಲವಂ ಪಡೆಯಲು ಹಾಕಿರುವ ಪಗ್ಗವೊ, ರಮಣ= ತನ್ನ ವಲ್ಲಭನ,  ದೇಹದ= ವಪುವೆಂಬ, ಕಲ್ಪದ್ರುಮ=ಕೋರಿದ್ದನ್ನು ಕೊಡುವ ಕಲ್ಪತರುವೆ, ಆಶ್ರಯದ= ಆಶ್ರಯವಾಗುಳ್ಳ

(ಸಹಾಯವಾಗಿರುವ), ಕೋಮಲ= ಮನೋಹರವಾದ, ಲತೆಯೊ= ಲತಾವಿಶೇಷವೋ ( ಬಳ್ಳಿಯೊ) ಪೊಸತಾದುದು= ಹೊಸದಾಗಿರುತ್ತದೆ, ಎಂಬಂತೆ= ಎನ್ನುವ ಹಾಗೆ, ಇನಿಯನನು= ತನ್ನ ಗಂಡನನ್ನು, ಅಪ್ಪಿದ= ಆಲಿಂಗನೆ ಮಾಡಿಕೊಂಡ,  ಹರಿಣಲೋಚನೆಯ= ಕುರಂಗಾಕ್ಷಿಯಾದ ಪ್ರಭಾವತಿಯ, ನಳಿತೋಳ್ಗಳ್ = ಮನೋಹರವಾದ ಬಾಹುಗಳು, ಅತಿಗಾಢದಿಂದ= ಅತ್ಯಂತ ಬಿಗಿಯಾಗಿ, ಎಸೆದುವು= ಹೊಳೆದುವು. 


ಅ॥ವಿ॥  ಏಣದಂತೆ ಅಕ್ಷಿಯುಳ್ಳವಳು = ಏಣಾಕ್ಷಿ, ( ಉ.ಪೂ. ಬಹು. ) ಫಣ=ಹೆಡೆ ಅದುಳ್ಳದ್ದು ಫಣಿ(ಸರ್ಪ) ಕರ= ಕೈ, ಆನೆಯ ಸೊಂಡಿಲು, ಕಿರಣ, ಕಪ್ಪ. 


ತಾತ್ಪರ್ಯ:- ಆಗ ಸುಧನ್ವನ ಅಂಗವೆಂಬ ವೃಕ್ಷವನ್ನು ಬಳಸಿಕೊಂಡ ಫಣಿಯೋ, ವಲ್ಲಭನೆಂಬ ವಟವೃಕ್ಷವನ್ನು ಬಳಸಿಕೊಂಡ

ಪಂಚಬಾಣನ ಗಜದ ಸೊಂಡಿಲವೋ, ಒಡೆಯನ ದೇಹದ ಶಕ್ತಿಯನ್ನು ಬಂಧಿಸುವ, ಕಾಮನ ಜಯಪಾಶವೋ, ರಮಣನ ದೇಹವೆಂಬ ಕಲ್ಪದ್ರುಮವೇ ಆಶ್ರಯವಾದ ಕೋಮಲ ಲತೆಯೋ ಹೊಸದಾಗಿದೆ ಎಂಬಂತೆ ಪ್ರಿಯನನ್ನು ಅಪ್ಪಿದ, ಕುರಂಗಾಕ್ಷಿಯಾದ ಪ್ರಭಾವತಿಯ ಮೃದುವಾದ ತೋಳ್ಗಳು ಅತಿಯಾದ ಬಿಗಿಯಿಂದ ಪ್ರಕಾಶಿಸಿದವು.


ಕಣ್ಮಲರ್ ಕಾತರಿಸೆ ಮುಡಿ ಪೂಗಳಂ ಸೂಸೆ। 

ನುಣ್ಮೊಗಂ ಬೇರೊಂದು ಪಯಾಗೆ ನುಡಿ ದೈನ್ಯ। 

ಮುಣ್ಮೆ ಹೀನಸ್ವರದೊಳೆಸೆಯೆ ಕೈ ಕಲೆಗಳೊಳ್ ಸೋಂಕೆ ಮೈ ಪುಳಕದಿಂದೆ ॥ 

ಪೊಣ್ಮೆ ಮದನಾತುರಂ ತಲೆದೋರೆ ಮೇಲುದಂ। 

ಬಿಣ್ಮೊಲೆಗಳೋಸರಿಸೆ ನಿರಿಯ ಬಿಗಿ ಪೈಸರಿಸೆ। 

ಪೆಣ್ಮಂಚದಂಚೆದುಪ್ಪುಳ್ವಾಸಿಗೆಳೆದೊಯ್ದಳಿನಿಯನಂ ಬಲ್ಪಿನಿಂದೆ॥೧೯॥


ಆಗ= ಆ ವೇಳೆಯಲ್ಲಿ  ಕಣ್ಮಲರ್ = ನೇತ್ರವೆಂಬ ಪುಷ್ಪವು, ಕಾತರಿಸೆ= ಕಳವಳಗೊಳ್ಳುತ್ತಿರಲು, ಮುಡಿ= ಕೂದಲಗಂಟು( ಕಬರಿಯು) ಪೂಗಳಂ= ಪುಷ್ಪಗಳನ್ನು,  ಸೂಸೆ= ಸುರಿಸುತ್ತಿರಲು, (ಚೆಲ್ಲುತ್ತಿರಲು) ನುಣ್ಮೊಗಂ= ಸಮನಾದ ಆಸ್ಯವು( ನುಣುಪಾದ ಮುಖ) ಬೇರೊಂದು= ಇನ್ನೊಂದು, ಪರಿಯಾಗೆ= ಬಗೆಯಾಗಲಾಗಿ, ನುಡಿ=ಮಾತು, ದೈನ್ಯ=ನಮ್ರಭಾವವು

( ದೀನತೆಯು) ಪೊಣ್ಮೆ= ಆಗುವಂತೆ, ಹೀನಸ್ವರದೊಳು= ಗದ್ಗದ ಸ್ವರದಿಂದ, ಎಸೆಯೆ ಶೋಭಿಸಲು, ಕೈ= ಕರವು, ಚಲಾಸ್ಥಾನಗಳನ್ನು, ಸೋಂಕೆ= ಸೋಕುತ್ತರಲು, ಮೈ=ಶರೀರವು, ಪುಳಕದಿಂದ= ಶರೀರದಲ್ಲಿ ರೋಮೋದ್ಗಮದಿಂದ, ಪೊಣ್ಮೆ= ವ್ಯಾಪಿಸುತ್ತಿರಲು, ಮದನಾತುರಂ= ಕಾಮಾತುರವು(ಕ್ರೀಡಾಸಕ್ತಿಯು), ತಲೆದೋರೆ= ಕಾಣಬರುತ್ತಿರಲು, ಬಿಣ್ಮೊಲೆಗಳ್= ಬಿಳೀ ಛಾಯೆಯುಳ್ಳ(ಗಟ್ಟಿಯಾದ) ಕುಚಗಳು, ಮೇಲುದಂ= ಮೇಲುಹೊದಿಕೆಯನ್ನು(ಸೆರಗನ್ನು),ಓಸರಿಸೆ

= ಜಾರಿಸಲು, ನಿರಿಯ= ನೆರಿಗೆಯಾಗಿ ಧರಿಸಿದ್ದ ವಸ್ತ್ರದ,ಬಿಗಿ= ಬಂಧನವು, ಪೈಸರಿಸೆ= ಜಾರಿಬರುತ್ತಿರಲು, ಪೆಣ್= ಸ್ತ್ರೀಯಾದ ಪ್ರಭಾವತಿಯು,  ಮಂಚದ= ಪಲ್ಲಂಕದಲ್ಲಿರುವ, ಅಂಚೆದುಪ್ಪುಳವಾಸಿಗೆ= ಹಂಸತೂಲಿಕಾತಲ್ಪದ ಮೇಲಕ್ಕೆ,  ಇನಿಯನಂ= ತನ್ನ ವಲ್ಲಭನಾದ ಸುಧನ್ವನನ್ನು, ಬಲ್ಪಿನಿಂದ= ಅತಿಕ್ರಮ ಪ್ರವೇಶದಿಂದ, ( ಜುಲುಮೆಯಿಂದ)ಎಳದು= ಸೆಳೆದುಕೊಂಡು, ಒಯ್ದಳು= ಬರಮಾಡಿಕೊಂಡು ಹೋದಳು. 


ಅ॥ವಿ॥ ನುಣ್ಣಿತ್ತು ,ಮೊಗ= ನುಣ್ಮೊಗ, (ವಿ. ಪೂ. ಕ.) ಮೊಗ( ತ್ಭ.)ಮುಖ( ತ್ಸ.)ಕಲೆ= ವಿದ್ಯಾ, ಕಾಂತಿ, ಮದನ+ಆತುರ = 

ಮದನಾತುರ(ಸ. ದೀ. ಸಂ.) 


ತಾತ್ಪರ್ಯ:- ಬಳಿಕ ಪ್ರಭಾವತಿಯ ನೇತ್ರವೆಂಬ ಪುಷ್ಪವು ಚಂಚಲವಾಗುತ್ತಿರಲು, ಕಬರಿಯು ಕುಸುಮಂಗಳನ್ನು ಸೂಸಲು, ನುಣ್ಣಗಿರುವ ಮುಖವು ಬೇರೊಂದು ರೀತಿಯಾಗಲು, ಮಾತು ದೀನತ್ವವು ಉಂಟಾಗುವಂತೆ ಹೀನಸ್ವರದಿಂದ ಪ್ರಕಾಶಿಸಲು, ಕರವು ಕಳಾವಿಶೇಷಸ್ಥಾನಗಳನ್ನು ಹೊಂದುತ್ತಿರಲು, ದೇಹವು ರೋಮೋದ್ಗದಿಂದ ಕೂಡುತ್ತಿರಲಾಗಿ ಅಂಗಜನ ಕ್ರೀಡಾವಿಷ-

ಯದ ಆತುರವು ಅಂಕುರೋದ್ಭವವಾಗಲು ಬೆಣ್ಮೊಲೆಗಳು ಮೇಲು ಹೊದಿಕೆಯನ್ನುಓಸರಿಸುತ್ತಿರಲು ಕೋಮಲಾಂಗಿಯಾದ ಪ್ರಭಾವತಿಯು ಮಂಚದಲ್ಲಿರು ಹಂಸತೂಲಿಕಾ ತಲ್ಪದ ಮೇಲಕ್ಕೆ ಪ್ರಿಯನನ್ನು ಬಲಾತ್ಕಾರದಿಂದ ಕರೆದುಕೊಂಡು ಹೋದಳು. 


ಸತಿಗೆ ಷೋಡಶದ ಋತುಸಮಯಮೇಕಾದಶೀ। 

ವ್ರತಮಲಂಘ್ಯಶ್ರಾದ್ಧಮಿನಿತೊಂದುದಿನಮೆ ಸಂ। 

ಗತಮಾದೊಡೆಂತು ಕರ್ತವ್ಯಮೆನೆ ಪೈತೃಕದ ಶೇಷಾನ್ನಮಾಘ್ರಾಣಿಸೆ॥ 

ಕೃತಭೋಜ್ಯಮಾದಪುದು ನಡುವಿರುಳ್ಗಳಿದಾವ। 

ನಿತೆಯನೊಡಗೂಡಬಹುದದರಿಂದ ಧರ್ಮಪ। 

ದ್ಧತಿಯನೀಕ್ಷಿಸಲಿವಳನಿಂದುಮೀರುವುದು ಮತವಲ್ಲೆಂದವಂ ತಿಳಿದನು॥೨೦॥ 


ಪ್ರತಿಪದಾರ್ಥ :- 

ಸತಿಗೆ= ಹೆಂಡತಿಯಾದ ಪ್ರಭಾವತಿಗೆ,  ಷೋಡಶದ= ಹದಿನಾರನೆಯ ದಿವಸದ, ರುತುಸಮಯಂ= ಗರ್ಭವನ್ನು ಹೊಂದಲು ಅನುಕೂಲವಾದ ಕಾಲವು, ಏಕಾದಶೀವ್ರತಂ= ಉಪವಾಸ ಮಾಡುವ ದಿನವು(ಹರಿ ದಿನವು), ಅಲಂಘ್ಯಂ= ಅತಿಕ್ರಮಿಸದ್ದು, ಶ್ರಾದ್ಧಂ= ಪಿತೃವಿನ ಮೃತ ದಿನವು(ತಿಥಿಯು), ಇನಿತು= ಇವುಗಳಷ್ಟು, ಒಂದುದಿನಮೆ= ಒಂದೇ ದಿನದಲ್ಲಿಯೇ, ಸಂಗತಮಾದೊಡೆ=ಸಂಭವಿಸಿದುದೇ ಆದರೆ, ಎಂತು=ಅದು ಹೇಗೆ, ಕರ್ತವ್ಯಂ= ಮಾಡತಕ್ಕ ಕಾರ್ಯವು, ಎನೆ= ಎನ್ನಲಾಗಿ, ಪೈತೃಕ= ಪಿತೃಸಂಬಂಧವಾದ ತಂದೆಯ ಶ್ರಾದ್ಧದ, ಶೇಷಾನ್ನಂ= ಬಾಕಿಯಾದ ಓದನವನ್ನು, ಆಘ್ರಾಣಿಸೆ= ವಾಸನೆ ನೋಡಲು

( ಮೂಸಿನೋಡಲಾಗಿ) ಕ್ರತುಭೋಜ್ಯ= ಪಿತೃ ಯಜ್ಞದಲ್ಲಿ ಉಳಿದುದನ್ನು, ಭುಜಿಸಿದಂತೆ, ಆದಪುದು= ಆದಂತಾಗುವುದು, ನಡುವಿನೊಳು=ನಡುರಾತ್ತಿಯನ್ನು, ಕಳೆದು= ಹೋಗಲಾಡಿಸಿ, ಆ ವನಿತೆಯನು=ತನ್ನ ಹೆಂಡತಿಯನ್ನು,  ಒಡಗೂಡಬಹು-

ದು= ಒಟ್ಟಿಗೆಸೇರಬಹುದು, ( ಕ್ರೀಡಿಸಬಹುದು) ಅದರಿಂದ= ಆದ ಕಾರಣದಿಂದ, ಧರ್ಮಪದ್ಧತಿಯಂ= ಧರ್ಮಮಾರ್ಗ-

ವನ್ನು, ( ಶಾಸ್ತ್ರ ಸಮ್ಮತವನ್ನು) ಈಕ್ಷಿಸಲು= ನೋಡಲಾಗಿ, ಇವಳಂ= ಈ ಪ್ರಭಾವತಿಯನ್ನು,ಇಂದು= ಈಗ, ಮೀರುವುದು= ಸಂಭೋಗಮಾಡದಿರುವುದು, ಮತವಲ್ಲೆಂದು=ಸರಿಯಾದ್ದಲ್ಲವೆಂಬುದಾಗಿ, ಅವಂ= ಆ ಸುಧನ್ವನು, ತಿಳಿದನು. 


ತಾತ್ಪರ್ಯ:- ಆಗ ಸುಧನ್ವನು ತನ್ನ ಮನದಲ್ಲಿ ಎನ್ನ ಪ್ರಿಯಳಿಗೆ ಷೋಡಶದ ರುತುಸಮಯವು( ಗರ್ಭಧಾರಣಯೋಗ್ಯಕಾ-

ಲವು, ಏಕಾದಶೀ ವ್ರತವು ಅಲಂಘ್ಯಮಾದ ತಂದೆಯ ಶ್ರಾದ್ಧವು, ಈ ಮೂರೂ ಒಂದೇ ದಿನದಲ್ಲಿ ಸಂಗಮವಾದೊಡೆ ಹೇಗೆ ಮಾಡತಕ್ಕದ್ದು ಎನಲು-ಪೈತೃಕ ಶೇಷಾನ್ನವನ್ನು ಆಘ್ರಾಣಿಸಿದ್ದೇ ಆದರೆ ಕರ್ತೃವು ಶ್ರಾದ್ಧ ಶೇಷಾನ್ನವನ್ನು ಭುಂಜಿಸಿದಂತಾಯಿ-

ತು, ನಡುರಾತ್ತಿಯನ್ನು ಕಳೆದು ತನ್ನ ಪತ್ನಿಯಲ್ಲಿ ಸಂಭೋಗಮಾಡಬಹುದು. ಆದ್ದರಿಂದ ಧರ್ಮಪದ್ಧತಿಯನ್ನು ನೋಡಲಾಗಿ ಇವಳನ್ನು,  ಈ ದಿನದಲ್ಲಿ ಸಂಭೋಗಿಸದೆ ಬಿಡಬಾರದು ಎಂಬುದಾಗಿ ಯೋಚಿಸಿದನು. " ಮೃತೇಹನಿಪರತ್ಯಜ್ಯ ಚಂಡಾಲಃ ಕೋಟಿಜನ್ಮಸು" ರುತುಸ್ನಾತಾಂಪರಿತ್ಯಜ್ಯ ಭ್ರೂಣಹತ್ಯಾನು ವೃಪ್ನುಯಾತ್" ಎಂಬ ಶಾಸ್ತ್ರೋಕ್ತ ಪ್ರಕಾರವಾಗಿ ತಂದೆಯ ತಿಥಿಯನ್ನು ಮಾಡದೆ ಬಿಟ್ಟವನಿಗೆ ಒಂದುಕೋಟಿ ಜನ್ಮಾಂತರಗಳವರೆವಿಗೂ, ಕರ್ಮ ಚಂಡಾಲನಾಗಿನೀಚತನದಲ್ಲಿರುವನು" 

ರುತುಸ್ನಾನವಾದ ತನ್ನ ಪತ್ನಿಯಲ್ಲಿ ಸಂಭೋಗಿಸದೇ ಹೋದವನಿಗೆ ಭ್ರೂಣಹತ್ಯ ದೋಷಬರುವುದು"ಎಂಬ ಶಾಸ್ತ್ರವನ್ನು ಬಲ್ಲವನಾಗಿದ್ದನು.