ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಶನಿವಾರ, ಡಿಸೆಂಬರ್ 19, 2020

ಜಗನ್ನಾಥ ವಿಠ್ಠಲ ದಾಸ - ಹರಿ ಕಥಾಮೃತ ಸಾರ

ಹರಿ ಕಥಾಮೃತ ಸಾರ

ಜಗನ್ನಾಥ ವಿಠ್ಠಲ ದಾಸ


ಕರ್ತೃವಿನ ಹೆಸರು ಜಗನ್ನಾಥದಾಸರು.  ಹುಟ್ಟಿದ ಸ್ಥಳ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬ್ಯಾಗವಟ್ಟಿ . ತಂದೆ ನರಸಿಂಹ ದಾಸ. ತಾಯಿ ಲಕ್ಷ್ಮೀಬಾಯಿ. ಪ್ರತಿ ವರ್ಷ ತಿಮ್ಮಪ್ಪನ ಜಾತ್ರೆಗೆ ಹೋಗಿಬರುತ್ತಿದ್ದರು. ಮುಂದೆ ಶ್ರೀ ತಿಮ್ಮಪ್ಪನ ದಯೆಯಿಂದಲೇ ಅವರಿಗೊಬ್ಬ ಪುತ್ರ ಜನಿಸಿದನು. ಆ ಮಗುವಿಗೆ ಶ್ರೀನಿವಾಸನೆಂದೇ ನಾಮಕರಣ ಮಾಡಿದರು.  ಮಗು ಬಾಲ್ಯ ಕಳೆದು ತಿಳುವಳಿಕೆ ಬಂದಾಗ ಮಂತ್ರಾಲಯದ ಶ್ರೀ ಬಲರಾಮಾಚಾರ್ಯರಲ್ಲಿ ಸಂಸ್ಕೃತ ಅಭ್ಯಾಸಕ್ಕೆ ಸೇರಿಸಿದರು. ಬಲರಾಮಾಚಾರ್ಯರೆಂದರೆ ಶ್ರೀ ಗುರುರಾಘವೇಂದ್ರರ ಮೊಮ್ಮಕ್ಕಳು.  ಮುಂದೆ ಶ್ರೀನಿವಾಸಾಚಾಯರ್ಯರು ಪಂಡರಪುರಕ್ಕೆ ಹೋಗಿ ಅನೇಕ ಭಜನಾವಕ್ಷಿಗಳನ್ನು ಬರೆದರು.  ಅಲ್ಲಿ ಅವರಿಗೆ ಪಂಡಿತೋತ್ತಮರೆಲ್ಲಾ ಸೇರಿ ಜಗನ್ನಾಥ ವಿಠ್ಠವನೆಂಬ ಬಿರುದು ನಕಡಿದರು. ಒಂದು ಸಲ ಶ್ರೀ ವ್ಯಾಸರಾಯರು ಸ್ವಪ್ನದಲ್ಲಿ ಕಾಣೀಸಿಕೋಂಡು ಶ್ರೀ ಹರಿಕಥಾಮೃತ ಸಾರವನ್ನು ಕನ್ನಡ ಭಾಷೆಯಲ್ಲಿ ಬರೆಯಬೇಕೆಂದು ಆಜ್ಞೆಮಾಡಿದರು. ಅಂತೆಯೇ ಹರಿಕಥಾಮೃತ ಸಾರ ಎಂಬ ಮಹಾಕಾವ್ಯವನ್ನು ನಿರೃಪಿಸಿದರು. 


ಸಂಧಿ - ೧ 

ಮಂಗಲಾಚರಣೆ 


ಹರಿಕಥಾಮೃತ ಸಾರ ಗುರುಗಳ 

ಕರುಣದಿಂದಾಪನಿತು ಹೇಳುವೆ

ಪರಮ ಭಗವದ್ಭಕ್ತರಿದನಾದರದಿ ಕೇಳುವುದು॥ 


ಹರಿಕಥೆ ಎಂದರೆ ಹರಿಯ ಬಗ್ಗೆ ಹೇಳುವುದು. ಇದು ಅಮೃತಕ್ಕೆ ಸಮಾನವಾದುದು. ಇದು ದೊರಕುವುದು ಗುರು ಕೃಪೆಯಿಂದ ಮಾತ್ರ ಸಾಧ್ಯ.  ಇದನ್ನು ನನಾನ ಸಾಮರ್ಥ್ಯಕ್ಕೆ ಅನುಸಾರವಾಗಿ ಹೇಳುತ್ತೇನೆ. ಭಗವಂತನಲ್ಲಿ ನಂಬಿಕೆ, ಹಾಗೂ ಆದರವುಳ್ಳವರಿಗೆ ಮಾತ್ರ ಹೇಳುತ್ತಿದ್ದೇನೆ.  


ಶ್ರೀ ರಮಣಿ ಕಲಕಮಲ ಪೂಜಿತ | 

ಚಾರುಚರಣ ಸರೋಜ ಬ್ರಹಾಮಸ 

ಮೀರವಾಣಿ ಫಣೀಂದ್ರ ವೀಂದ್ರ ಭವೇಂದ್ರ ಮುಖವೀನುತ | 

ನೀರಜಭವಾಂಡೋದಯ ಸ್ತಿತಿ | 

ಕಾರಣನೇ ಕೈವಲ್ಯದಾಯಕ | 

ನಾರಸಿಂಹ ನಮಿಪೆ ಕರುಣಿಪುದೆಮಗೆ ಮಂಗಳವಾ॥೧॥


ಚಾರು=ಸುಂದರ, ಸಮೀರ = ವಾಯು. ನೀಲಜ= ಸೂರ್ಯ. 


ಶ್ರೀ ಲಕ್ಷ್ಮೀದೇವಿಯ ಕರಕಮಲಗಳಿಂದ ಪೂಜಿತನೂ, ಬ್ರಹ್ಮ, ವಾಯು, ಗರುಡ, ರುದ್ರ, ಇಂದ್ರಾದಿಗಳಿಂದ ಸ್ತುತಿಸಲ್ಪಡುವವನೂ, ಬ್ರಹ್ಮಾಂಡದ ಸೃಷ್ಟಿ, ಸ್ತಿತಿ, ಲಯ ಕಾರಣನೂ, ಮೋಕ್ಷದಾಯಕನೂ ಆದ ನರಸಿಂಹನಿಗೆ ನಮಸ್ಕರಿಸುವೆ. ನಮಗೆ ಮಂಗಳವನ್ನುಂಟು ಮಾಡು. 


ಚತುರವದನನ ರಾಣಿ ಅತಿರೋ | 

ಹಿತ ವಿಮಲ ವಿಜ್ಞಾನಿ ನಿಗಮ | 

ಪ್ರತತಿಗಳಿಗಭಿಮಾನಿ ವೀಣಾಪಾಣಿ ಬ್ರಹ್ಮಾಣಿ॥

 ನುತಿಸಿ ಬೇಡುವೆ ಜನನಿ ಲಕ್ಷ್ಮೀ |

ಪತಿಯ ಗುಣಗಳ ನುತಿಪುದಕೆ ಸ |

ನ್ಮತಿಯ ಪಾಲಿಸಿ ನೆಲೆಸು ನೀ ಮದ್ವದನ ಸದನದಲಿ॥೫॥ 


ಬ್ರಹ್ಮನ ರಾಣಿ, ನಿರ್ದುಷ್ಟ ಬ್ರಹ್ಮಸಾಕ್ಷಾತ್ಕಾರವೆಂಬ ವಿಜ್ಞಾನವುಳ್ಳ, ವೀಣಾಪಾಣಿ, ವೇದಾಭಿಮಾನಿ, ಬ್ರಹ್ಮಾಣಿ ನಿನಗೆ ನಮಸ್ಕರಿಸಿ ಬೇಡುತ್ತೇನೆ. ಶ್ರೀ ಲಕ್ಷ್ಮಿಯ ಗುಣಗಳನ್ನು ಹೊಗಳಿ ಹಾಡಲುನನ್ನ ನಾಲಿಗೆಯಲೂಲೆ ನೆಲಸಿ. ಸನ್ಮತಿಯನು ಕೊಡು. 


ವೇದಪೀಠ ವಿರಿಂಚಿ ಭವ ಶ | 

ಕ್ರಾದಿ ಸುರ ವಿಜ್ಞಾನದಾಯಕ | 

ಮೋದ ಚಿನ್ಮಯಗಾತ್ರ ಲೋಕ ಪವಿತ್ರ ಸುಚರಿತ್ರ ॥ 

ಛೇದ ಛೇದ ವಿಷಾದ ಕುಟಿಲಾಂ | 

ತಾದಿ ಮಧ್ಯ ವಿದೂರ ಆದಾ | 

ನಾದಿ ಕಾರಣ ಬಾದರಾಯಣ ಪಾಹಿ ಸತ್ರಾಣ॥ ೭॥


ವೇದಗಳಿಗೆ ಆಧಾರವಾದ ಬ್ರಹ್ಮ, ರುದ್ರ,  ಇಂದ್ರಾದಿ ದೇವತೆಗಳಿಗೆ ವಿಜ್ಞಾನವೆಂಬ ಪರಮ ಭಕ್ತಿಯೋಗವನ್ನು ನೀಡುವವನೂ, ಆನಂದ ಜ್ಞಾನಸ್ವರೂಪನೂ, ಲೋಕಪಾವನಕರ ಸುಚರಿತನೂ, ಸಕಲ ವ್ಯಸನ ವಿಕಾರ ಹಾಗೂ ರೋಗಗಳಿಂದ ವರ್ಜಿತನೂ, ಸಜ್ಜನರಿಗೆ ಆಶ್ರಯದಾತನೂ ಆದ ಬಾದರಾಯಣನೆಂದು ಖ್ಯಾತನಾದ ವ್ಯಾಸನೇ ನಮ್ಮನ್ನು ರಕ್ಷಿಸು. 


ವಾಮದೇವ ವಿರಿಂಚಿತನಯ ಉ |

ಮಾ ಮನೋಹರ ಉಗ್ರ ಧೂರ್ಜಟಿ|

ಸಾಮಜಾಜಿನವಸನ ಭೂಷಣ ಸುಮನೋತ್ತಂಸ ॥ 

ಕಾಮ ಹರ ಕೈಲಾಸ ಮಂದಿರ | 

ಸೋಮ ಸೂರ್ಯಾನಲ ವಿಲೋಚನ| 

ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಳವ॥ ೧೦॥


ಬ್ರಹ್ಮ ಪುತ್ರ ವಾಯುದೇವನೇ, ಉಮಾಪತಿಯೇ, ಶತ್ರುಗಳಿಗೆ ಉಗ್ರನೇ,ಗಜಚರ್ಮಾಂಬರ ಭೂಷಣನೇ, ದೇವೋತ್ತಮನೇ, ಕಾಮನನ್ನು ಸುಟ್ಟವನೇ, ಕೈಲಾಸವನ್ನೇ ವಾಸಸ್ಥಾನವಾಗಿವುಳ್ಳವನೇ, ಚಂದ್ರ, ಸೂರ್ಯ ಅಗ್ನಿಗಳನ್ನು ಕಣ್ಣಾಗಿ ಉಳ್ಳವನೇ, ನಾವು ಇಚ್ಛಿಸಿದ್ದನ್ನು ಕೊಡುವ ಮಹಾದೇವನೇ ನಮಗೆ ಸದಾಕಾಲಕ್ಕೂ ಸುಮಂಗಳವನ್ನು ನೀಡು. 


ಸಂಧಿ ೨


ಶ್ರುತಿ ತತಿಗಳಿಗಭಿಮಾನಿ ಲಕ್ಷ್ಮೀ | 

ಸ್ತುತಿಗಳಿಗೆ ಗೋಚರಿಸದ ಪ್ರತಿ| 

ಹತ ಮಹೈಶ್ವರ್ಯಾದ್ಯಖಿಲ ಸದ್ಗುಣಗಳಾಂಭೋಧಿ ॥

ಪ್ರತಿ ದಿವಸ ತನ್ನಂಘ್ರಿ ಸೇವಾ | 

ರತ ಮಹಾತ್ಮರು ಮಾಡುತಿಹ ಸಂ | 

ಸ್ತುತಿಗೆ ವಶವಾಗುವನಿವನ ಕಾರುಣ್ಯಕೇನೆಂಬೆ॥ ೩॥


ವೇದಾದಿ ಶೃತಿ ಸಮೂಹಕ್ಕೆ ಅಭಿಮಾನಿ ಲಕ್ಷ್ಮೀದೇವಿ. ಆಕೆಗೂ ಗೊಚರೆಸದ ಶಾಶ್ವತವಾದ ಮಹದೈಶ್ವರ್ಯ ಮೊದಲಾದ ಅಖಿಳ ಸದ್ಗುಣಗಳಿಗೆ ಸಮುದ್ರನು ಶ್ರೀಹರಿಯು.  ನಿರಂತರ ಅವನ ಪಾದ ಮಹಿಮಾ ಶ್ರವಣದಲ್ಲಿ ಆಸಕ್ತರಾದ ಮಹಾತ್ಮರ ಸ್ತುತಿಗೆ ವಶನಾಗುತ್ತಾನೆ. 


ಮಲಲಗಿ ಪರಮಾದರದಿ ಪಾಡಲು | 

ಕುಳಿತು ಕೇಳುವ ಕುಳಿತು ಹಾಡಲು | 

ನಿಲುವ ನಿಂತರೆ ನಲಿವ ನಲಿದರೆ ಒಲಿವೆ ನಿಮಗೆಂಬ ॥ 

ಸೈಲಭನೋ ಹರಿ ತನ್ನವರ ನರ | 

ಘಳಿಗೆ ಬಿಟ್ಟಗಲನು ರಮಾಧವ| 

ನೊಲಿಸಲರಿಯದೆ ಪಾಮರರು ಬಳಲುವರು ಭವದೊಳಗೆ॥೫॥


ಭೀಷ್ಮನು ಶರಶಯ್ಯೆಯಲ್ಲಿ ಮಲಗಿ ಪ್ರಾರ್ಥಿಸಿದ .ಶ್ರೀ ಕೃಷ್ಣನು ಅವನೊಳಗೆ ಬಂದು ಕುಳಿತು ಕೇಳಿಸಿಕೊಂಡ. ಶುಕ ಮೊದಲಾದ ದೇವತೆಗಳು ಕುಳಿತು ಹಾಡಿದಾಗ ನಿಂತು ಕೇಳಿದ. ನಾರದಾದಿಗಳಂತೆ ನರ್ತನ ಮಾಡುತ್ತಾ ಸ್ತುತಿಸಿದಾಗಲೂ ಸುಲಭವಾಗಿ ಒಲಿಯುತ್ತಾನೆ. ಶ್ರೀಹರಿಯು ತನ್ನ ಭಕ್ತರನ್ನು ಕ್ಷಣಕಾಲ ಕೂಡ ಬಿಡಲಾರ. ಇಂಥಾ ಸುಲಭನಾದ ಹರಿಯನ್ನು ಒಲಿಸಲು ತಿಳಿಯದ ಮೂರ್ಖ ಜನರು ಜನನ-ಮರಣ ಚಕ್ರಕ್ಕೆ ಸಿಲುಕಿ ವ್ಯರ್ಥವಾಗಿ ಬಳಲುತ್ತಾರೆ. 


ಪರಮ ಸತ್ಪುರುಷಾರ್ಥ ರೂಪನು| 

ಹರಿಯು ಲೋಕಕೆ ಎಂದು ಪರಮಾ|

ದರದಿ ಸದುಪಾಸನೆಯ ಗೈದವರಿಗಿತ್ತಪನು ತನ್ನ॥ 

ಮರೆದು ಧರ್ಮಾರ್ಥಗಳ ಕಾಮಿಸು | 

ವರಿಗೆ ನಗುತತಿ ಶೀಘ್ರದಿಂದಲಿ | 

ಸುರಪತನಯ ಸುಯೋಧನರಿಗಿತ್ತಂತೆ ಕೊಡುತಿಪ್ಪ॥ ೭॥


ಶ್ರೀ ಹರಿಯು ಕೊಡುಗೈ ದಾನಿ.  ಪರಮ ಸತ್ಪುರುಷಾರ್ಥ ರೂಪನು. ನಂಬಿ ಪರಮಾದರದಿಂದ ಸದುಪಾಸನೆ ಮಾಡಿದವರಿಗೆ ತನ್ನನ್ನೇ ಅರ್ಪಿಸಿಕೊಳ್ಳುವನು. ಇದಕ್ಕೆ ಅರ್ಜುನನೇ ಉದಾಹರಣೆ. ಶ್ರೀ ಕೃಷ್ಣನಲ್ಲಿ ಬೇಡಲು ಹೋದಾಗ ಅವನ ಪಾದದ ಬಳಿಯಲ್ಲಿ ಕುಳಿತದ್ದಲ್ಲದೆ ಅವನನ್ನೇ ಬೇಡಿಕೊಂಡದ್ದಕ್ಕೆ ಅವನಿಗೆ ಎಲ್ಲವೂ ದೊರೆಯಿತು. 


ಒಬ್ಬನಲಿ ನಿಂತಾಡುವನು ಮ| 

ತ್ತೊಬ್ಬನಲಿ ನೋಡುವನು ಬೇಡುವ| 

ನೊಬ್ಬನಲಿ ನೀಡುವನು ಮಾತಾಡುವನು ಬೆರಗಾಗಿ॥ 

ಅಬ್ಬರದ ಹೆದ್ದೈವನಿವ ಮ | 

ತ್ತೊಬ್ಬರನು ಲೆಕ್ಕಿಸನು ಲೋಕದೊ | 

ಳೊಬ್ಬನೇ ತಾಬಾದ್ಯ ಬಾಧಕನಾಹ ನಿರ್ಭೀತ॥೯॥ 


ಶ್ರೀ ಹರಿಯು ಕರ್ತೃವೂ ಹೌದು, ಕ್ರಿಯೆಯೂ ಹೌದು, ದೃಷ್ಟಾರನೂ ಹೌದು, ಭೋಗಿಸುವವನೂ ಹೌದು, ನಾಟಕವಾಡಿಸುವವನು, ನಟನು ಅವನೇ, ಅಂದರೆ ಸಕಲ ಕ್ರಿಯೆಗಳಲ್ಲಿಯೂ ಅವನೇ ವ್ಯಾಪಿಸಿದ್ದಾನೆ. ಅದನ್ನು ಕುರಿತು ಆಶ್ಚರ್ಯ ವ್ಯಕ್ತಪಡಿಸುವವನೂ ಅವನೇ, ಹೀಗೆ ಶ್ರೀ ಹರಿಯು ಹೆದ್ದೈವನಾಗಿ ಲೋಕವನ್ನು ತಾನೇ ತಾನಾಗಿ ವ್ಯಾಪಿಸಿಕೊಂಡಿದ್ದಾನೆ. ಅವನೇ ಹೊಣೆಯುಳ್ಳವ, ಹೀಗೆ ಸರ್ವವ್ಯಾಪಿಯಾಗಿ ವ್ಯಾಪಿಸಿಕೊಂಡಿದ್ದರೂ ಅದಕ್ಕೆ ಅಂಟಿಕೊಂಡಿರದ ಸರ್ವ ಸ್ವತಂತ್ರನು. ಹೀಗಾಗಿ ಭಯ-ದುಃಖಗಳಿಂದ ದೂರನಾಗಿದ್ದು ನಿರ್ಭೀತನು. 


ಜನನಿಯನು ಕಾಣದಿಹ ಬಾಲಕ| 

ನೆನೆನೆನೆದು ಹಲುಬುತಿರೆ ಕತ್ತಲೆ| 

ಮನೆಯೊಳಗಡಗಿದ್ದವನ ನೋಡುತ ನಗುತ ಹರುಷದಲಿ॥

ತನಯನಂ ಬಿಗಿದಪ್ಪಿ ರಂಬಿಸಿ| 

ಕನಲಿಕೆಯ ಕಳೆವಂತೆ ಮಧುಸೂ| 

ದನನು ತನ್ನವರಿದ್ದೆಡೆಗೆ ಬಂದೊದಗಿ ಸಲಹುವನು॥ ೧೧॥ 


ಕತ್ತಲೆಯ ಕೋಣೆಯೊಳಗೊಂದು ಮಗು, ತಾಯಿ ಕಾಣುತ್ತಿಲ್ಲ,ಮಗು ತಾಯಿಯನ್ನು ಕಾಣದೆ ಅವಳನ್ನು ನೆನೆದು ಅಳುತ್ತಿದೆ. ಆ ಕತ್ತಲ ಕೋಣೆಯ ಒಂದು ಮೂಲೆಯಲ್ಲಿ ಅಡಗಿ ಕುಳಿತ ತಾಯಿ ಮಗುವಿನ ಶಿಶು ಸಹಜ ಅಸಹಾಯಕತೆಯನ್ನು ಕಂಡು ನಗುತ್ತಾಳೆ.  ಓಡಿ ಬಂದು ಮಗುವನ್ನು ಅಪ್ಪಿಕೊಂಡು ರಮಿಸುತ್ತಾಳೆ.  ಅದರ ಕೋಪವನ್ನು ಬಿಡಿಸಲು ಸಮಾಧಾನ ಹೇಳುತ್ತಾ ಸಂತೋಷಪಡುತ್ತಾಳೆ. ಶ್ರೀ ಹರಿ ಹಾಗೂ ಭಕ್ತನ ಸಂಬಂಧ ಇಂತಹುದೇ. ಸಂಕಷ್ಟದಲ್ಲಿ ಸಿಲುಕಿ ದಾರಿ ಕಾಣದೆ ಕಳವಳಪಡುತ್ತಿರುವ ಭಕ್ತನ ಅಸಹಾಯಕತೆಯನ್ನು ಕಂಡು ಮಧುಸೂದನನು ಅವನನ್ನು ಉದ್ಧರೆಸಲು ಧಾವಿಸಿ ಬರುತ್ತಾನೆ.  


ಕಾಮಧೇನು ಸುಕಲ್ಪತರು ಚಿಂ| 

ತಾಮಣಿಗಳಮರೇಂದ್ರ ಲೋಕದಿ | 

ಕಾಮಿತಾರ್ಥಗಳೀವುವಲ್ಲದೆ ಸೇವೆ ಮಾಳ್ಪರಿಗೆ ॥ 

ಶ್ರೀ ಮುಕುಂದನ ಪರಮಮಂಗಳ | 

ನಾಮ ನರಕಸ್ತರನು ಸಲಹಿತು|

ಪಾಮರರ ಪಂಡಿತರೆನಿಸಿ ಪುರುಷಾರ್ಥ ಕೊಡುತಿಹನು॥೨೧॥ 


ದೇವೇಂದ್ರನ ಬಳಿಯಿರುವ ಕಾಮಧೇನು , ಕಲ್ಪತರು, ಹಾಗೂ ಚಿಂತಾಮಣಿಯು ಸುರಲೋಕದವರಷ್ಟೇ ಬೇಡಿದರೆ ಭೋಗಗಳನ್ನು ನೀಡುವವು. ಶ್ರೀ ಮುಕುಂದನ ನಾಮಸ್ಮರಣೆ ಮಾತ್ರದಿಂದ ನರಕಭಾಗಿಗಳೂ ಉದ್ಧಾರಗೊಂಡರು. ಪಾಮರರು ಪಂಡಿತರಾದರು. ಶ್ರೀ ಹರಿಯ ಕೃಪೆ ಹೀಗೆ ಸಕಲರಿಗೂ ಪುರುಷಾರ್ಥಗಳನ್ನು ನೀಡುವುದು. 


ಕಣ್ಣಿಗೆವೆಯಂದದಲಿ ಕೈ ಮೈ | 

ತಿಣ್ಣಿಗೊದಗುವ ತೆರದಿ ಪಲ್ಗಳು |

ಪಣ್ಣು ಫಲಗಳನಗಿದು ಜಿಹ್ವೆಗೆ ರಸವನೀವಂತೆ ॥ 

ಪುಣ್ಯ ಫಲಗಳನೀವುದಕೆ ನುಡಿ | 

ವೆಣ್ಣಿನಾಣ್ಮಾಂಡದೊಳು ಲಕ್ಷಣ| 

ನಣ್ಣನೊದಗುವ ಭಕ್ತರವಸರಕಮರಗಣ ಸಹಿತ॥೨೭॥ 


ರೆಪ್ಪೆಯು  ಕಣ್ಣನ್ನು ಸಂರಕ್ಷಿಸುವ ಹಾಗೆ, ದೇಹದ ಯಾವ ಭಾಗದಲ್ಲಿ ನವೆ ಉಂಟಾದರೆ ಕೈ ಅದನ್ನು ನಿವಾರಿಸಲು ಮುಂದಾಗುವಂತೆ, ಹಲ್ಲುಗಳು ಫಲಾದಿ ಆಹಾರ ವಸ್ತುಗಳನ್ನು ಅಗಿದು ನಾಲಿಗೆಗೆ ರಸವನ್ನು ಕೊಡುವ ಹಾಗೆ, ನಾವು ಮಾಡಿದ ಪುಣ್ಯ ಕಾರ್ಯಗಳು ನಮಗೆ ಉತ್ತಮ ಫಲವನ್ನು ನೀಡುವ ಹಾಗೆ, ಶ್ರೀ ರಾಮನು ರಾವಣನ ಕಾಟದಿಂದ ದೇವತೆಗಳನ್ನು ಕಾಪಾಡಿದ ಹಾಗೆ ಶ್ರೀ ಹರಿಯು ಭಕ್ತರನ್ನು ಕರೈಣಿಸಿ ಕಾಪಾಡುತ್ತಾನೆ. 


ಸಂಧಿ - ೩


ಪಾದಪಗಳಡಿಗೆರೆಯೆ ಸಲಿಲವು| 

ತೋದು ಕೊಂಬೆಗಳುಬ್ಬಿ ಪುಷ್ಪ | 

ಸ್ವಾದು ಫಲ ವೀವಂದದಲಿ ಸರ್ವೇಶ್ವರನು ಜನರಾ ॥ 

ರಾಧನೆಯ ಕೈಕೊಂಡು ಬ್ರಹ್ಮ ಭ | 

ವಾದಿಗಳ ನಾಮದಲಿ ಫಲವಿ| 

ತ್ತಾದರಿಸುವನು ತನ್ನ ಮಹಿಮೆಯ ತೋರಗೊಡ ಜಗಕೆ॥೧೩॥ 


ಗಿಡಗಳ ಕೆಳಭಾಗಕ್ಕೆ ನೀರೆರೆದರೂ ಅದು ವೃಕ್ಷಕ್ಕೆ ತಲುಪಿ ಕೊಂಬೆಗಳು ಬೆಳೆದು ಹೂ, ಹಣ್ಣು ಬಿಡೈವಂತೆ, ಜನರು ಮಾಡುವ ಪೂಜೆಯನ್ನು ಸರ್ವೇಶ್ವರನು ಒಪ್ಪಿಸಿಕೊಂಡು ಫಲಗಳನ್ನು ಕೊಡುತ್ತಾನೆ.  ಆದರೆ ಅವನು ಕೊಡುವ ಫಲವು ಅವನೇ ಕೊಟ್ಟಿದ್ದೆಂದು ಪ್ರತ್ಯಕ್ಷವಾಗಿ ಕಾಣಿಸುವುದಿಲ್ಲ. ಆದರೆ ಅವುಗಳಲ್ಲಿ ಅವನದೇ ವ್ಯಾಪ್ತಿ. 


ತೋದಕನು ತಾನಾಗಿ ತನುಮೊದ | 

ಲಾದ ಕರಣದೊಳಿದ್ದು ವಿಷಯವ | 

ನೈದುವನು ನಿಜಪೂರ್ಣ ಸುಖಮಯ ಗ್ರಾಹ್ಯ ಗ್ರಾಹಕನು॥ 

ವೇದ ವೇದ್ಯನು ತಿಳಿಯದವನೋ | 

ಪಾದ ಭುಂಜಿಸುತೆಲ್ಲರೊಳಗಾ| 

ಹ್ಲಾದ ಪಡುವನು ಭಕ್ತವತ್ಸಲ ಭಾಗ್ಯಸಂಪನ್ನ॥೧೬॥ 


ಶ್ರೀ ಹರಿಯು ಜೀವಿಗಳ ಮನಸ್ಸು ಮೊದಲಾದ ಇಂದ್ರಿಯಗಳಲ್ಲಿ ಸ್ವತಃ ಪ್ರೇರಿಸುವವನಾಗಿ ಲೌಕಿಕ ಸುಖಗಳನ್ನು ಹೊಂದುವನು. ವೇದ ವೇದ್ಯನಾದರೂ ಏನನ್ನೂ ಅರಿಯದೇ ಅಜ್ಞನಂತೆ ನೀಡುವವನು ತಾನಾಗಿ ಸ್ವೀಕರಿಸುವವನು ತಾನೇ ಆಗಿ ಭಕ್ಯವತ್ಸಲನೂ ಭಾಗ್ಯ ಸಂಪನ್ನನೂ ಜೀವರಂತೆ ಎಲ್ಲರೊಳಗಿದ್ದು ಆಹ್ಲಾದ ಹೊಂದುವನು. 


ಅಣುಮಹತ್ತಿನೊಳಿಪ್ಪ ಘನ ಪರ | 

ಮಾಣುವಿನೊಳಗಡಗಿಸುವ ಸೂಕ್ಷ್ಮವ | 

ಮುಣುಗಿಸುವ ತೇಲಿಸುವ ಸ್ಥೂಲಗಳನವ ಮಾಯವಿದು॥ 

ದನುಜ ರಕ್ಕಸರೆಲ್ಲರಿವನೊಳು | 

ಮುನಿದು ಮೃಡುವುದೇನುಲೂಖಲ| 

ವನಿಕೆಗಳು ಧಾನ್ಯಗಳ ಹಣಿವಂದದಲಿ ಸಂಹರಿಪ॥ ೧೯॥


ಶ್ರೀ ಹರಿಯು ಅಣುವಿನಲ್ಲಿದ್ದಾನೆ. ಅತಿ ದೊಡ್ಡದರಲ್ಲಿಯೂ ಇದ್ದಾನೆ. ಅವನು ದೊಡ್ಡ ವಸ್ತುವನ್ನು ಸಣ್ಣದರಲ್ಲಿಡುವನು. ಸೂಕ್ಷ್ಮ ಮನಸ್ಸಿನಲ್ಲಿ ಬೃಹದ್ ವಿಚಾರಗಳು ನೆಲೆಗೊಳ್ಳುವಂತೆ, ಸೂಕ್ಷ್ಮವಾದ ಕಲೂಲುಚೂರನ್ನು ನೀರಿನಲ್ಲಿ ಮುಳುಗಿಸುವನು. ಬಲು ದೊಡ್ಡದಾದ ಮರದ ತೊಲೆಗಳನ್ನು ನೀರಿನಲ್ಲಿ ತೇಲಿಸುವನು. ಇದು ಅವನ ಮಾಯೆಯೂ ಹೌದು. ಇಂಥವನನ್ನು ದಾನವರು ಮತ್ತು ರಾಕ್ಷಸರು ದ್ವೇಷಿಸಿದರೆ ಅವರಿಗೇನು ಬಂತು. ಒರಳಲ್ಲಿ ಹಾಕಿರುವ ಧಾನ್ಯವನ್ನು ಒನಕೆಯು ಕುಟ್ಟಿ ಹೊಟ್ಟನ್ನು ಬೇರ್ಪಡಿಸುವಂತೆ ಶ್ರೀ ಹರಿಯು ದುಷ್ಟರನ್ನು ದೂರ ಮಾಡಿ ಶಿಷ್ಟರನ್ನು ರಕ್ಷಿಸುತ್ತಾನೆ. 


ವಾರಿದನು ಮಳೆಗರೆಯ ಬೆಳೆದಿಹ | 

ಬೂರುಹರಗಳ ಚಿತ್ರ ಫಲರಸ |

ಬೇರೆ ಬೇರಿಪ್ಪಂತೆ ಬಹುವಿಧ ಜೀವರೊಳಗಿದ್ದು ॥ 

ಮಾರಮಣನವರವರ ಯೋಗ್ಯತೆ| 

ಮೀರದಲೆ ಗುಣಕರ್ಮಗಳನು| 

ಸಾರ ನಡೆಸುವ ದೇವನಿಗೆವೈಷಮ್ಯವೆಲ್ಲಿಹುದೋ॥೨೩॥


ಮರಗಳ ಮೇಲೆ ಸುರಿವ ಮಳೆ ಒಂದೆ. ಆದರೆ ಬೇವು. ಮಾವು, ಹುಣಿಸೆ ಇವುಗಳ ರಸ ಬೇರೆಯಾಗುತ್ತದಲ್ಲ. ಅದರದರ ಗುಣಕ್ಕನುಸಾರ ಅದರದರ ರುಚಿ, ರಸ, ಗಂಧ ಹಾಗೆಯೇ ತ್ರಿಗುಣಾತ್ಮಕ ಜೀವರುಗಳಲ್ಲಿ ತ್ರಿವಿಧ ಭೇದ ಅವರವರ ಕರ್ಮ ಯೋಗ್ಯತೆಗಳಿಗನುಸಾರ ಅವರವರಿಗೆ ಫಲ. ಶ್ರೀ ಹರಿಗೆ 

ಯಾರಲ್ಲೂ ಭೇದ -ಭಾವವಿಲ್ಲ. 


ಕಾದ ಕಬ್ಬಿಣ ಹಿಡಿದು ಬಡಿಯಲು |

ವೇದನವು ಲೋಹಗಳಿಗಲ್ಲದೆ| 

ಆದುದೇನೈ ಅನಲಗಾವ್ಯಥೆಯೇನು ಮಾಡಿದರೂ॥ 

ಆದಿದೇವನು ಸರ್ವಜೀವರ | 

ಕಾದು ಕೊಂಡಹ ಒಳ ಹೊರಗೆ ದುಃ|

ಖಾದಿಗಳು ಸಂಬಂಧವಾಗುವವೇನೋ ಚಿನ್ಮಯಗೆ॥ ೨೭॥


ಕಾದ ಕಬ್ಬಿಣವನ್ನು ಬಡಿದಾಗ ಪೆಟ್ಟು ಕಬ್ಬಿಣಕ್ಕೆ ಹೊರತು ಅದನ್ನು ಕಾಯಿಸಿದ ಅಗ್ನಿಗಲ್ಲ. ಅದೇ ಪ್ರಕಾರ ಶ್ರೀ ಹರಿಯು ಸರ್ವರ ಒಳಗಿದ್ದು ಊವರನ್ನು ಕಾಯುತ್ತಿರುವಾಗಲೂ ಜೀವಿಗಳಿಗೆ ಒದಗಿ ಬರುವ ಸುಖ-ದುಃಖಗಳ ಲೇಪ ಆ ಚಿನ್ಮಯನಿಗಿಲ್ಲ. 


ಮಳಲ ಮನೆಗಳ ಮಾಡಿ ಮಕ್ಕಳು | 

ಕೆಲವು ಕಾಲದಲಾಡಿ ಮೋದದಿ| 

ತುಳಿದು ಕೆಡಿಸುವ ತೆರದಿ ಲಕುಮೀರಮಣ ಲೋಕಗಳ ॥ 

ಹಲವು ಬಗೆಯಲಿ ನಿರ್ಮಿಸುವ ನಿ | 

ಶ್ಚಲನು ತಾನಾಗಿದ್ದು ಸಲಹುವ | 

ಯಲರೈಣಿವೋಲ್ ನುಂಗುವವಗೆಲ್ಲಿಹುದೊ ಸುಖ ದುಃಖ॥೨೮॥ 


ಮಕ್ಕಳು ಮರಳಲ್ಲಿ ಮನೆ ಕಟ್ಟಿ ಸ್ವಲ್ಪ ಕಾಲ ಆಟವಾಡಿ ಅನಂತರ ಅದನ್ನು ಕೆಡಿಸಿಬಿಡುತ್ತಾರೆ.ಹಾಗೆಯೇ ಶ್ರೀ ಹರಿಯು ಹಲವು ತೆರನಾಗಿ ಲೋಕಗಳನ್ನು ನಿರ್ಮಿಸುತ್ತಾನೆ. ತಾನು ನಿಶ್ಚಲನಾಗಿದ್ದುಅವನ್ನು ರಕ್ಷಿಸುತ್ತಾನೆ.  ಸರೂಪವು ತಾನಿಟ್ಟ ಮೊಟ್ಟೆಗಳನ್ನು ತಾನೇ ನುಂಗುವಂತೆ, ಅವನ್ನು ಕೆಡಿಸುತ್ತಾನೆ. ಇಂಥಾ ಲೀಲಾ ಪುರುಷನಿಗೆ ಸುಖ ದುಃಖದ ವ್ಯಾಪ್ತಿಯೆಲ್ಲಿದೆ?


ಸಂಧಿ -೪ ಭೋಜನ ರಸವಿಭಾಗ


ಕ್ಷೀರಗತ ರಸರೂಪಗಳು ಮು | 

ನ್ನೂರು ಮೇಲೈವತ್ತು ನಾಲ್ಕು | 

ಚಾರು ಘೃತಗತ ರೂಪಗಳು ಇಪ್ಪತ್ತರೊಂಬತ್ತು॥ 

ಸಾರಗುಡದೊಳಗೈದು ಸಾವಿರ| 

ನೂರು ಒಂದು ಸುರೂಪ ದ್ವಿಸಹ| 

ಸ್ರಾರೆರಡು ಶತಪಂಚ ವಿಂಶತಿ ರೂಪಫಲಗಳಲಿ॥೫॥


ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಾಲಿನ ರಸದಲ್ಲಿ ೩೫೪, ತುಪ್ಪದಲ್ಲಿ ೨೯, ರುಚಿಕರವಾದ ಬೆಲ್ಲದಲ್ಲಿ ೫೧೦೧ ಮತ್ತು ಹಣ್ಣುಗಳಲ್ಲಿ ೫೮೨೫ ಭಗವದ್ರೂಪಗಳಿರುವುದೆಂದು ಹೇಳಿರುವ ಕಾರನ ಒಟ್ಟು ೮೩೦೯ ಭಗವದ್ರೂಪಗಳಾಗುವದೆಂದು ತಿಳಿದು ಧ್ಯಾನಿಸಬೇಕು. 


ಕಪಿಲನರಹರಿ ಭಾರ್ಗವತ್ರಯ | 

ವಪುಷ ನೇತ್ರದಿ ನಾಸಿಕಾಸ್ಯದಿ 

ಶಫರನಾಮಕ ಜಿಹ್ವೆಯಲಿ ದಂತದಲಿ ಹಂಸಾಖ್ಯಾ॥ 

ತ್ರಿಪದಿ ಪಾದ್ಯ ಹಯಾಸ್ಯ ವಾಚ್ಯದೊ | 

ಳಪರಿಮಿತ ಸುಖಪೂರ್ಣ ಸಂತತ| 

ಕೃಪಣದೊಳಿದ್ದವರವರ ರಸ ಸ್ವೀಕರಿಸಿ ಕೊಡುವಾ॥೭॥ 


ಶ್ರೀ ಹರಿಯು  ಕಣ್ಣಿನಲ್ಲಿ ಕಪಿಲರೊಪನಾಗಿಯೂ , ಮೂಗಿನ ತುದಿಯಲ್ಲಿ ಪರಶುರಾಮನಾಗಿಯೂ, ಬಾಯಲ್ಲಿ ನರಸಿಂಹನಾಗಿಯೂ, ನಾಲಿಗೆಯಲ್ಲಿ ಮತ್ಸ್ಯಮೂರ್ತಿಯಾಗಿಯೂ, ಹಲ್ಲುಗಳಲ್ಲಿ ಹಂಸನಾಗಿಯೂ, ವಾಕ್ಕಿನಲ್ಲಿತ್ರಿಪದಿ ಪಾದ್ಯನೆಂಬ ಗಾಯತ್ರಿ, ಪ್ರತಿಪಾದ್ಯ , ಹಯಗ್ರೀವರೂಪನಾಗಿಯೂ ನೆಲಸಿ, ನಿಸ್ಸೀಮನಿರಂತರನಾದ, ಪೂರ್ಣನಾದ ಪರಮಾತ್ಮನು ಕೃಪಣರಾದ ಮಾನವ ಜೀವಿಗಳಲ್ಲಿ ಆಯಾ ಜೀವದ ಯೋಗ್ಯ ರಸಗಳನ್ನು ತಾನು ಸ್ವೀಕರಿಸಿ ಜೀವರಿಗೆ ಕೊಡುವನು. 


ವಾಸುದೇವನು ಅನ್ನದೊಳು ನಾ | 

ನಾ ಸುಭಕ್ಷ್ಯದಿ ಸಂಕರುಷಣ ಕೃ| 

ತೀಶ ಪರಮಾನ್ನದೊಳು ಘೃತದೊಳಗಿಪ್ಪನಿರುದ್ಧ॥ 

ಆ ಸುಪರ್ಣಾಂಸಗನು ಸೂಪದಿ | 

ವಾಸವಾನುಜ ಶಾಕದೊಳು ಮೂ| 

ಲೇಶ ನಾರಾಯಣನು ಸರ್ವತ್ರದಲಿ ನೆಲೆಸಿಹನು॥೧೦॥ 


ಅನ್ನದಲ್ಲಿ ವಾಸುದೇವನು, ಉತ್ತಮವಾದ ನಾನಾ ಭಕ್ಷ್ಯಗಳಲ್ಲಿ ಸಂಕರ್ಷಣನು,ಪಾಯಸದಲ್ಲಿ ಪ್ರದ್ಯುಮ್ನನು, ತುಪ್ಪದಲ್ಲಿ ಅನಿರುದ್ಧನು ಇರುವರು. ಗರುಡಧ್ವಜ ವಿಷ್ಣುವು ತೊವ್ವೆಯಲ್ಲಿ, ಉಪೇಂದ್ರನಾಗಿ ಶಾಕದಲ್ಲಿ ಮೂಲ ರೂಪನಾದ ನಾರಾಯಣನು ಎಲ್ಲದರಲ್ಲೂ ಇರುವನು. 


ಕಲುಷ ಜಿಹ್ವೆಗೆ ಸುಷ್ಟುಭೋಜನ | 

ಜಲ ಮೊದಲು ವೆಷದೋರುವುದು ನಿ| 

ಷ್ಕಲುಷ ಜಿಹ್ವೆಗೆ ಸುರಸ ತೋರುವುದೆಲ್ಲ ಕಾಲದಲಿ॥ 

ಸುಲಲಿತಾಂಗಗೆ ಸಕಲ ರಸ ಮಂ | 

ಗಳ ವೆನಿಸುತಿಹವನ್ನಮಯ ಕೈ| 

ಕೊಳದೆ ಬಿಡುವನೆ ಪೂತನಿಯ ವೆಷಮೊಲೆಯನುಂಡವನು॥೨೭॥ 


ರೋಗಿಷ್ಟವಾದ ನಾಲಿಗೆಗೆ ಎಲ್ಲಾ ಆಹಾರ ಪಾನೀಯಗಳೂ ಕಹಿಯಾಗಿಯೇ ತೋರುವವು. ಅದೇ ನಿಷ್ಕಲ್ಮಸವಾದ ನಾಲಿಗೆಗೆ ಆಹಾರಪದಾರ್ಥಗಳು ಸದಾಕಾಲಕ್ಕೂ ರುಚಿಕರವೆನಿಸುವವು. ಅಂತೆಯೇ ನಿತ್ಯ ಮುಕ್ತನಾದ ಶ್ರೀಹರಿ ಶುಭಾಶುಭಗತ ಸರ್ವಸ್ವರೂಪ ರಸಮಾನಂದ ಪ್ರದವೇ ಹೌದು. ಎಂತಲೇ ದ್ವೇಷದಿಂದ ವಿಷಪೂರಿತ ಮೊಲೆಯನ್ನುಣಿಸಿದ ಪೂತನಿಯ ವೆಷದ ಪರಿಣಾಮ ಶ್ರೀಹರಿಯ ಮೇಲೆ ಉಂಟಾಗಲಿಲ್ಲ. 


ಐದು ಲಕ್ಷ ಎಂಭತ್ತರೊಂಭ|

ತ್ತಾದ ಸಾವಿರದೇಳನೂರರ| 

ಐದು ರೂಪವ ಧರಿಸಿ ಭೋಕ್ತೃಗಭೋಜ್ಯನೆಂದೆನಿಸಿ॥ 

ಶ್ರೀ ಧರಾದುರ್ಗರಮಣ ಪಾ| 

ದಾದಿ ಶಿರ ಪರ್ಯಂತ ವ್ಯಾಪಿಸಿ| 

ಕಾದು ಕೊಂಡಿಹ ಸತತ ಜಗನ್ನಾಥ ವಿಠ್ಠಲನು॥೩೦॥ 


ಪಾದಾದಿಶಿರ ಪರ್ಯಂತ = ಆಪಾದಮಸ್ತಕ


ಈ ಪದ್ಯದಲ್ಲಿ ಭಗವತ್ಸ್ವರೂಪದ ಒಟ್ಟು ಲೆಕ್ಕವನ್ನು ನಿರೂಪಿಸಿದೆ. ಅನ್ನಮಯ ೮೨೫೧, ಪ್ರಾಣಮಯ ೫೫೪೩, ಮನೋಮಯ ೫,೬೨,೧೦೬, ವಿಜ್ಞಾನಮಯ ೪,೩೭೪, ಆನಂದಮಯ ೫,೧೨೫, ಅನ್ನ ೧೦೧, ಪ್ರಾಣ ೫೧೩, ಮನ ೫೫, ವಿಜ್ನಾನ ೫೮೪, ಆನಂದ ೩,೦೫೨, ಹೀಗೆ ಶ್ರೀ ಹರಿಯು ಒಟ್ಟು ೫,೮೯,೭೦೫. ರೂಪಗಳಲ್ಲಿ ಭೋಜನ ಪದಾರ್ಥಗಳಲ್ಲೂ, ಭೋಜನಗಳಲ್ಲೂ, ಮಾಡುವವರಲ್ಲೂ, ಶ್ರೀ ಹರಿ ದುರ್ಗಾರಮಣನು ಜಗನ್ನಾಥ ವೆಠ್ಠಲನಾಗಿ ಪಾಪ ಪರಿಹಾರಕನಾಗಿ ಆಪಾದಮಸ್ತಕ ವ್ಯಾಪ್ತನಾಗಿ ಜೀವರನ್ನು ರಕ್ಷಿಸುತ್ತಿರುವನು. 


ಜಲಜನಾಭನ ಮೂರ್ತಿ ಮನದಲಿ | 

ನೆಲೆಗೊಳಿಸಿ ನಿಶ್ಚಲ ಸುಭಕುತಿಯಲಿ|

ಛಳಿ, ಬಿಸಿಲು, ಮಳೆ, ಗಾಳಿಗಳ ನಿಂದಿಸದೆ ನಿತ್ಯದಲಿ॥

ನೆಲದಲಿಹ ಗಂಧವೆ ಸುಗಂಧವು| 

ಜಲವೇ ರಸ ರೂಪವೆ ಸುದೀಪವು |

ಎಲರುಚಾಮರ ಶಬ್ಧ ವಾದ್ಯಗಳರ್ಪಿಸಲು ಒಲಿವ॥೧೩॥ 


ಕಮಲನಾಭನ ಮೂರ್ತಿಯನ್ನು ಮನದಲ್ಲಿ ನೆಲೆಗೊಳಿಸಿ ನಿಶ್ಚಲವಾದ ಭಕ್ತಿಯಿಂದ ಕೂಡಿ ಮಳೆ, ಗಾಳಿ, ಬಿಸಿಲು, ಛಳಿ ಮೊದಲಾದ ಪ್ರಾಕೃತಿಕ ಅಡೆತಡೆಗಳನ್ನು ಗಣನೆಗೆ ತಾರದೆ ಭೂಮಿಯ ವಾಸನೆಯನ್ನೇ ಗಂಧವೆಂದು, ನೀರಿನಲ್ಲಿನ ರಸವನ್ನು ಷಡ್ರಸವೆಂದೂ, ಶಬ್ಧಗಳನ್ನು ವಾದ್ಯವೆಂದೂ ತಿಳಿದು ಅವುಗಳನ್ನು ಶ್ರೀ ಹರಿಗೆ ಅರ್ಪಿಸಿದರೆ ಅವನು ಒಲಿಯುವನು.


ಗೋಳಕಗಳೆ ರಮಾರಮಣ ನಿ| 

ಜಾಲಯಗಳನುದಿನದಿ ಸಂಪ್ರ| 

ಕ್ಷಾಲನೆಯ ಸಮ್ಮಾರ್ಜನವು ಕರಣಗಳೆ ದೀಪಗಳ ॥ 

ಸಾಲು ತತ್ತದ್ವಿಷಯಗಳ ಸಂ| 

ಮೇಳನವೆ ಪರಿಯಂಕ ತತ್ಸುಖ| 

ದೇಳಿಗೆಯ ಸುಪ್ಪತ್ತಿಗಾತ್ಮನೀವೇದನವೆ ವಸನ॥೧೪॥


ದೇಹದ ಅವಯವಗಳೇ ಗೋಲಕಗಳು. ಇವನ್ನೇ ನಾವು ದೇವಾಲಯವೆಂದು ಮಾಡಿಕೊಳ್ಳುವ ದೇಹಶುದ್ಧಿ ಮೊದಲಾದ ಸಮ್ಮಾರ್ಜನಗಳೆ ದೇವರ ಗುಡಿ ಮಾರ್ಜನವೆಂದೂ, ಕಣ್ಣು ಮೊದಲಾದ ಕರಣಗಳೇ ದೀಪಮಾಲೆಯೆಂದೂ, ಕಣ್ಣಿಗೆ ಸಿಗುವ ರೂಪದರ್ಶನ, ಕಿವಿ ಆಲಿಸುವ ಶಬ್ಧ ಮೊದಲಾದುವುಗಳಿಂದ ಮನಸ್ಸಿಗೆ ಸಿಗುವ ಸುಖ ದೇವರಿಗೆ ಪರ್ಯಂತ ಸುಖ ಅಂದರೆ ಸುಪ್ಪತ್ತಿಗೆಯ ಶಯನವೆಂದೂ" ನಾನು ಸದಾ ನಿನ್ನ ದಾಸ" ಎಂಬ ನಿವೇದನೆಯೇ ದೇವರಿಗೆ ಉಡುಗೊರೆ. 


ಪಾಪಕರ್ಮವು ಪಾದುಕೆಗಳನು |

 ಲೇಪನವು ಸತ್ಪುಣ್ಯ ಶಾಸ್ತ್ರಾ |

ಲಾಪನೆ ಶ್ರೀ ತುಳಸಿ ಸುಮನೋವೃತ್ತಿಗಳು ಸುಮನ॥ 

ಕೋಪ ಧೂಪವು ಭಕ್ತಿ ಭೂಷಣ| 

ವ್ಯಾಪಿಸಿದ ಸುಬುದ್ಧಿ ಛತ್ರವು| 

ದೀಪವೇ ಸುಜ್ಞಾನ ಅರಾರ್ತಿಗಳ ಗುಣ ಕಥನ॥ ೧೫॥ 


ನಾವು ಮಾಡುವ ಪಾಪಗಳೇ ಅವನಿಗೆ ಪಾದುಕೆಗಳು. ನಾವು ಮಾಡುವ ಪುಣ್ಯ ಶಾಸ್ತ್ರಾಲಾಪಗಳೇ ಸುಗಂಧವು, ಒಳ್ಳೆಯ ಮನಸ್ಸೇ ಶ್ರೀ ತುಳಸಿ, ನಮ್ಮ ವೃತ್ತಿಗಳೇ ಹೂಗಳು, ದುಷ್ಟರಲ್ಲಿ ನಾವು ತೋರುವ ಕೋಪವೇ ಧೂಪವು, ಭಕ್ತಿಯೇ ಭೂಷಣ, ಬುದ್ಧಿಯೇ ಛತ್ರವು, ಸುಜ್ಞಾನವೇ ಬೆಳಕು, ಹರಿಕಥಾ ಶ್ರವಣವೇ ಮಂಗಳಾರತಿ ಎಂದು ನಾವು ತಿಳಿಯಬೇಕು. 


ಮನವಚನ ಕಾಯಕ ಪ್ರದಕ್ಷಿಣೆ | 

ಯನುದಿನದಿ ಸರ್ವತ್ರ ವ್ಯಾಪಕ| 

ವನರುಹೇಕ್ಷಣಗರ್ಪಿಸುತ ಮೋದಿಸುತಲಿರು ಸತತ॥ 

ಅನೈಭವಕೆ ತಂದುಕೋ ಸಕಲ ಸಾ| 

ಧನಗಳೊಳಗಿದು ಮುಖ್ಯ ಪಾಮರ | 

ಮನುಜರಿಗೆ ಪೇಳಿದರೆ ತಿಳಿಯದು ಬುಧರಿಗಲ್ಲದಲೆ॥೧೬॥ 

ಶ್ರೀ ಹರಿಯು ಸರ್ವವ್ಯಾಪಿಯಾಗಿರುವಾಗ ಅವನ ಪೂಜೆ ಬಹು ಸುಲಭ, ನಾವು ಕಾಯಾ, ವಾಚಾ, ಮನಸಾ ಮಾಡುವ ಅನುದಿನದ ಕರ್ಮಗಳನ್ನೇ ಪ್ರದಕ್ಷಿಣೆಯೆಂದು ಶ್ರೀ ಹರಿಗೆ ಅರ್ಪಿಸುತ್ತಾ ಸುಖಿಸಬೇಕು. ಇದನ್ನು ಅನುಭವಕ್ಕೆ ತಂದುಕೊಂಡು

ಸರ್ವ ಸಾಧನೆಗಳಲ್ಲಿ ಅದನ್ನೇ ಶ್ರೇಷ್ಠವೆಂದು ತಿಳಿದು ಅನುಷ್ಠನಕ್ಕ್ಕೆ ತರಬೇಕು. 


ಚತುರವಿಧ ಪುರುಷಾರ್ಥ ಪಡೆವರೆ|

 ಚತುರದಶಲೋಕಗಳ ಮಧ್ಯದೊ|

ಳಿತರುಪಾಯಗಳಿಲ್ಲ ನೋಡಲು ಸಕಲ ಶಾಸ್ತ್ರದಲಿ॥ 

ಸತತ ವಿಷಯೇಂದ್ರಿಯಗಳಲಿ ಪ್ರವಿ| 

ತತನೆನಿಸಿ ರಾಜಿಸುವ ಲಕುಮೀ | 

ಪತಿಗೆ ಸರ್ವಸಮರ್ಪಣೆಯ ಮಹಾಪೂಜೆ ಸದುಪಾಯ ॥೧೭॥ 


ಚತುರ್ವಿಧ ಪುರುಷಾರ್ಥಗಳು ಜೀವರಿಗೆ ದೊರಕಬೇಕಾದರೆ ಬೇರೆ ಯಾವ ಉಪಾಯವೂ ಇಲ್ಲ. ಸಕಲೇಂದ್ರಿಯಗಳಲ್ಲಿ ವ್ಯಾಪ್ತವಾಗಿರುವ ಶ್ರೀ ಹರಿಯಲ್ಲಿ ಸರ್ವ ಸಮರ್ಪಣಾ ಭಾವ ಹೊಂದುವದೇ ಶ್ರೇಷ್ಠವಾದ ಪೂಜೆ.  ಸಕಲ ಶಾಸ್ತ್ರಗಳನ್ನು ಅವಲೋಕಿಸುವಾಗ ನಮಗೆ ದೊರಕುವ ಶೃತಿ ವಾಕ್ಯವಿದೊಂದೇ. 


ಮಧು ವಿರೋಧಿಯ ಪಟ್ಟಣಕೆ ಪೂ | 

ರ್ವದ ಕವಾಟಗಳಕ್ಷಿ ನಾಸಿಕ| 

ವದನ ಶ್ರೋತ್ರಗಳೆರಡು ದಕ್ಷಿಣ ಉತ್ತರ ದ್ವಾರ॥ 

ಗುದ ಉಪಸ್ಥಗಳೆರಡು ಪಶ್ಚಿಮ|

 ಕದಗಳೆನಿಪವು ಷಟ್ ಸರೋಜವೆ |

ಸದನ ಹೃದಯವೆ ಮಂಟಪಂಗಳು ತ್ರಿಗುಣವೇ ಕಲಶ॥ 


ದೇಹವನ್ನು ದೇವರ ನಗರವೆಂದು ಭಾವಿಸಿ ಪೂಜಿಸಿದಾಗ ಈ ಪಟ್ಟಣವೆಂಬ ದೇಹಕ್ಕೆ ಕಣ್ಣು, ಕಿವಿ, ಮೂಗುಗಳೇ ಪೂರ್ವದ ಬಾಗಿಲುಗಳು. ಬಾಯಿ, ಕಿವಿ ಎರಡು ಉತ್ತರ ದಕ್ಷಿಣದ ಬಾಗಿಲುಗಳು, ಜಲ, ಮಲಗಳನ್ನು ವಿಸರ್ಜಿಸುವ ಅಪಾನ ದ್ವಾರಗಳು ಪಶ್ಚಿಮ ಕಡೆಯವು. ಹೃದಯ ಕಮಲವೇ ಪರಮಾತ್ಮನ ಮನೆ, ಹೃದಯ ಮಂಟಪ ಸತ್ತ್ವ, ತಮ, ರಜ, ಈ ಮೂರು ಗುಣಗಳೇ ಕಲಶಗಳು. 


ವಾರಿಜಭವಾಂಡವೆ ಸುಮಂಟಪ| 

ಮೇರುಗಿರಿ ಸಿಂಹಾಸನವು ಭಾ | 

ಗೀರಥಿಯೇ ಮಜ್ಜನವು ದಿಗ್ವಸ್ತ್ರಗಳು ನುಡಿಮಂತ್ರ|

ಭೂರುಹಜ ಫಲಪುಷ್ಪಗಂಧ ಸ| 

ಮೀರ ಶಶಿರವಿದೀಪ ಭೂಷಣ| 

ತಾರಕಗಳೆಂದರ್ಪಿಸಲು ಕೈಕೊಂಡು ಮನ್ನಿಸುವ॥ ೨೮॥


ಬ್ರಹ್ಮಾಂಡವೇ ದೇವರಿಗೆ ಮಂಟಪ, ಮೇರು ಪರ್ವತವೇ ಸಿಂಹಾಸನ, ಆ ಮೇರುವಿನ ಮೇಲೆ ಸುರಿಯುವ ಗಂಗೆಯೇ ಅಭಿಷೇಕ, ದಶದಿಕ್ಕುಗಳೇ ಉಡುಗೆ-ತೊಡುಗೆ, ಮಾತೇ ಮಂತ್ರ, ಗಿಡ ವೃಕ್ಷಗಳಲ್ಲಿ ಬಿಡುವ ಫಲಪುಷ್ಪಗಳೇ ದೇವರಿಗೆ ನೈವೇದ್ಯ.  ಗಾಳಿಯೇ ಸುಗಂಧ, ಸೂರ್ಯ ಚಂದ್ರರು ದೀಪಗಳು, ಆಕಾಶದಲ್ಲಿ ಮಿನುಗುವ ನಕ್ಷತ್ರಗಳೇ ಭೂಷಣಗಳೆಂದು ಶ್ರೀ ಹರಿಗೆ ಅರ್ಪಿಸಿದರೆ ಅವನು ಅದನ್ನು ಸ್ವೀಕರಿಸಿ ನಮ್ಮನ್ನು ಆಶೀರ್ವದೆಸುವನು. 


ನದಿಯ ಜಲ ನದಿಗೆರೆವ ತೆರದಂ| 

ದದಲಿ ಭಗವದ್ಧತ್ತ ಧರ್ಮಗ| 

ಳುದಧಿಶಯನನಿಗರ್ಪಿಸುತ ವ್ಯಾವರ್ತ ನೀನಾಗಿ॥ 

ವಿಧಿ ನಿಷೇಧಾದಿಗಳಿಗೊಳಗಾ| 

ಗದಲೆ ಮಾಡುತ ದರ್ವಿಯಂದದಿ|

ಪದುಮನಾಭನ ಸಕಲ ಕರ್ಮಗಳಲ್ಲಿ ನೆನೆವುತಿರು॥ 


ನದಿಯ ನೀರನ್ನು ನದಿಗೆ ಅರ್ಪಿಸುವ ಹಾಗೆ, ಭಗವಂತನಿಂದ ಕೊಡಮಾಡಲ್ಪಟ್ಟ ವಸ್ತಿಗಳನ್ನು ಶ್ರೀ ಹರಿಗರ್ಪಿಸಿ "ಸೌಟಿನಂತೆ"

ನಿರ್ಲಿಪ್ತನಾಗಿ, ವಿಧಿ ನಿಷೇಧಗಳಿಗೆ ಅಂಟಿಕೊಳ್ಳದೇ ಶ್ರೀ ಹರಿಯೇ ಎಲ್ಲವನ್ನೂ ಮಾಡಿಸಿದನೆಂದು ತಿಳಿದು ಪದುಮನಾಭನನ್ನು ನೆನೆಯುತ್ತಿರಬೇಕು. 


ಸಂಧಿ - ೬  ಪಂಚ ಮಹಾ ಯಜ್ಞ 


ಪುರುಷ ಶಿಖಿ ವಾಕ್ ಸಮಿಧೆ ಧೂಮವು| 

ಕರಣವರ್ಚಿಯು ಜಿಹ್ವೆ ಶ್ರೋತ್ರ ಗ | 

ಳೆರಡು ಕಿಡಿಗಳು ಲೋಚನಗಳಂಗಾರಗಳೆನಿಸುವವು॥ 

ನಿರುತ ಭುಂಜಿಸುವನ್ನ ಯದುಕುಲ| 

ವರನಿಗವದಾನಗಳು ಎಂದೀ | 

ಪರಿಸಮರ್ಪಣೆಗೈಯೆ ಕೈಕೊಂಡನುದಿನದಿ ಪೊರೆವ॥ ೫॥ 


ಪುರುಷನೇ ಅಗ್ನಿ, ನಮ್ಮ ಮಾತುಗಳೇ ಕಾಷ್ಠ, ಪಂಚೇಂದ್ರಿಯಗಳೇ ಹೊಗೆ, ನಾಲಿಗೆ ಜ್ವಾಲೆ, ಎರಡು ಕಿವಿಗಳೇ ಕಿಡಿಗಳು, ಕಣ್ಣುಗಳು ಕೆಂಡಗಳು, ಎಂದು ಚಿಂತಿಸಿ ನಿತ್ಯದಲ್ಲಿ ಉಣ್ಣುವ ಅನ್ನವನ್ನು ಶ್ರೀ ಕೃಷ್ಣನಿಗೆ ಆಹುತಿ ಎಂದು ಅರ್ಪಿಸಿದರೆ ಅದನ್ನು ಒಪ್ಪಿಕೊಂಡು ಶ್ರೀ ಹರಿಯು ಸದಾಕಾಲ ನಮ್ಮನ್ನು ರಕ್ಷಿಸುವನು. 


ತಲೆಯೊಳಿಹ ನಾರಾಯಣನ ಗಂ| 

ಟಲೆಡೆ ಒಡಲೊಳು ವಾಸುದೇವನು| 

ಬಲದಲೆಹ ಪ್ರದ್ಯುಮ್ನ ಎಡಬಾಗದಲಿ ಅನಿರುದ್ಧ॥ 

ಕೆಳಗಿನಂಗದಲಿ ಸಂಕರುಷಣ | 

ತಿಳಿದು ಈ ಪರಿ ಸಕಲ ದೇಹಗ |

ಳೊಳಗೆ ಪಂಚಾತ್ಮಕ ರೂಪವನೋಡು ಕೊಂಡಾಡು॥ 


ತಲೆಯಲ್ಲಿ ನಾರಾಯಣ, ಗಂಟಲಿನ ಕೆಳಭಾಗದಲ್ಲಿ ವಾಸುದೇವ, ಶರೀರದ ಬಲಭಾಗದಲ್ಲಿ ಪ್ರದ್ಯುಮ್ನ,  ಎಡದಲ್ಲಿ ಅನಿರುದ್ಧ,  ಹೀಗೆ ಸರ್ವ ಶರೀರದಲ್ಲಿ ಪಂಚರೃಪಗಳಿಂದ ಇರುವನೆಂದು ತಿಳಿದು ಆ ಶ್ರೀಹರಿಯನ್ನು ಸ್ತುತಿಸು. 


ಪದುಮನಾಭನು ಪಾಣಿಯೊಳಗಿಹ | 

ವದನದಲಿ ಹೃಷಿಕೇಶ ನಾಸಿಕ | 

ಸದನದಲಿ ಶ್ರೀ ಧರನು ಜಿಹ್ವೆಯೊಳಿಪ್ಪ ವಾಮನನು॥ 

ಮೃದುಳತ್ವಗ್ದೇಶದಿ ತ್ರಿವಿಕ್ರಮ | 

ಮಧು ವಿರೋಧಿಯು ಲೋಚನದಿ ಕರ| 

ಣದಲಿ ಇಪ್ಪನು ವಿಷ್ಣು ನಾಮಕ ಶ್ರವಣನೆಂದೆನಿಸಿ॥೧೮॥ 


ಪದ್ಮನಾಭನು ಹಸ್ತದಲ್ಲಿ., ಹೃಷಿಕೇಶನು ವದನದಲ್ಲಿ, ಮೂಗಿ ಹೊಳ್ಳೆಗಳಲ್ಲಿ ಶ್ರೀಧರನು, ನಾಲಿಗೆಯಲ್ಲಿ ವೃಮನನು, ಮೃದುವಾದ ಚರ್ಮದಲ್ಲಿ ತ್ರಿವಿಕ್ರಮನು, ಕಣ್ಣಿನಲ್ಲಿ ಮಧುಸೂಧನನು,ಕಿವಿಯಲ್ಲಿ ಶ್ರವಣ ಶಬ್ಧವಾಚ್ಯ ರೂಪದಲ್ಲಿ ವೆಷ್ಣುವು ಇರುವನೆಂದು ತಿಳಿಯಬೇಕು. 


ವಾಸುದೇವಾನಿರುದ್ಧ ರೂಪದಿ| 

ಪುಂಶರೀರದೊಳಿಹನು ಸರ್ವದ | 

ಸ್ರೀ ಶರೀರದೊಳಿಹನು ಸಂಕರೈಷಣನು ಪ್ರದ್ಯುಮ್ನ ॥ 

ದ್ವಾಸುಪರ್ಣ ಶ್ರುತಿವಿನುತ ಸ| 

ರ್ವಾ ಸುನಿಲಯ ನಾರಾಯಣನ ಸದು | 

ಪಾಸನೆಯ ಗೈವವರು ಜೀವನ್ಮುಕ್ತರೆನಿಸುವರು ॥೩೦॥ 


ವಾಸುದೇವಾನಿರುದ್ಧ ರೂಪಗಳಿಂದ ಪುರುಷರ ಶರೀರದಲ್ಲೂ , ಸಂಕರ್ಷಣ ಪ್ರದ್ಯುಮ್ನನೆಂಬ ಎರಡು ರೂಪಗಳಿಂದ ಸದಾ ಸ್ತ್ರೀಯರ ಶರೀರಗಳಲ್ಲಿರುವನು. ಸರ್ವ ಪ್ರಾಣಿನಿವಾಸಿಯಾದ ನಾರಾಯಣನ ಸದ್ಗುಣ ರೂಪಗಳನ್ನು ಅರಿತು ಉಪಾಸನೆ ಮಾಡುವವರು, ಸದೇಹಿಗಳಾದರೂ, ನಿರಭಿಮಾನಿಗಳಾಗಿರುವ ಕಾರಣ ಜೇವನ್ಮುಕ್ತರೆಂದು ಕರೆಸಿಕೊಳ್ಳುವರು. 


ಕೃತಜ್ಞತೆಗಳು: 

ಮೂಲ ಲೇಖಕರು:ಜಗನ್ನಾಥ ವಿಠ್ಠಲ 

ಸರಳಗನ್ನಡ ಲೇಖಕರು:ಎನ್. ಎಸ್. ಜೋಶಿ

ಪ್ರಕಾಶಕರು:ಮೆ ॥ ಪಿ. ಸಿ. ಶಾಬಾದಿಮಠ ಬುಕ್ ಡಿಪೋ, 

ಸ್ಟೇಷನ್ ರೋಡ್, ಗದಗ- ೫೮೨೧೦ 

ಶನಿವಾರ, ನವೆಂಬರ್ 21, 2020

ಗೊಂಡರ ರಾಮಾಯಣ

 ಗೊಂಡರ ರಾಮಾಯಣ - ಬುಡಕಟ್ಟು ಮಹಾಕಾವ್ಯ ಮಾಲೆ

ಹಾಡಿದವರು: ತಿಮ್ಮಪ್ಪಗೊಂಡ 

ಸಂಪಾದಕರು: ಹಿ. ಚಿ. ಬೋರಲಿಂಗಯ್ಯ. 


ಈ ಕಾವ್ಯವನ್ನು ಹಾಡಿರುವವರು ತಿಮ್ಮಪ್ಪಗೊಂಡ. ಉತ್ತರಕನ್ನಡ ಜಿಲ್ಲೆ ಭಟ್ಕಳ ತಾಲೂಕಿನಹಲ್ಯಾಣಿ ಇವರ ಸ್ಥಳ. ಅಲ್ಲಿನ ಗೊಂಡ ಸಮುದಾಯದ ಮುಖಂಡರು.  ಇವರ ಮುಮ್ಮೇಳಕ್ಕೆ ಅರ್ಕಳದ ಸಂಕಯ್ಯ,ಹಿರೇಬಳ್ಯಿಯ  ಮಂಜು ಹಿಮ್ಮೇಳ ಒದಗಿಸಿದ್ದಾರೆ. 


ಗೊಂಡರ ತಿಮ್ಮಪ್ಪನ ಕಾವ್ಯದ ವಿಶೇಷತೆ ಎಂದರೆ ಅ ಅಕ್ಷರ ಲ ಕಾರವಾಗಿ ಮಾರ್ಪಡುತ್ತದೆ. ಅವನು ಎಂಬುದು ಲವುನು ಎಂದೂ, ಅಂದು ಎಂಬುದ ಲಂದೂ ಎಂದೂ, ಆಕಾಶ ಎಂಬುದು ಲಾಕಾಸು ಎಂದೂ, ಪರಿವರ್ತಿತವಾಗಿವೆ. ದಶರಥ ಎಂಬುದು ದಶರಥು, ಎಂದೂ ರಾಮ ಎಂಬುದು ರಾಮು ಎಂದೂ, ಸುಖದಲ್ಲಿ ಎಂಬುದು ಸುಖದಲ್ಲು ಎಂದೂ ಸ್ತಿತ್ಯಂತರಗೊಂಡಿವೆ. ಸೌಮಿತ್ರೆ- ಕೌಮಿತ್ರೆ, ಭರತ- ಬಾರ್ತ,ಶತೃಜ್ಞ - ಸಸ್ತ್ರ, ಲಕ್ಸ್ಮಣ - ಲಚ್ಚುಮಣ, ಮೃಗ - ಮುರುಗ, ಸಣ್ಣ - ಚಣ್ಣ,ಚಂದ್ರ - ಚಂದುರು, ಅರಣ್ಯ - ಆರುಣ್ಣೀ, ಅಜ್ಞಾತವಾಸ- ಅಜ್ಞಾಸ, ರಾಕ್ಷಸ - ರಾಕಾಸ, ಮುಂತಾಗಿ ರೂಪಾಂತರ ಪಡೆದಿವೆ. 


ಕಾವ್ಯ ಅತ್ಯಂತ ಸರಳವಾದ ರೀತಿಯಲ್ಲಿ ಮುನ್ನಡೆಯುತ್ತಾ ಯಾವುದೇ ವರ್ಣನೆಗಳಿಲ್ಲದೆ " ಕಂಡದ್ದನ್ನು ಕಂಡಂತೆ ಹೇಳುವ" ಕ್ರಮದಲ್ಲಿ ಮುಂದುವರಿಯುತ್ತದೆ. ಲಿಖಿತ ರೂಪದಲ್ಲಿರುವ ಹತ್ತಾರು ರಾಮಾಯಣಗಳು ನಮಗೆ ಸಿಗುತ್ತವೆ. ಅವೆಲ್ಲವೂ ತಮ್ಮ ತಮ್ಮ ವಿಚಾರಗಳನ್ನು ರಾಮಾಯಣದ ಮೂಲಕ ಬೋಧಿಸುತ್ತವೆ,ಹಾಗೆ ಬೋಧಿಸುವ ಶಕ್ತಿ ಇರುವ ಕಾರಣಕ್ಕಾಗಿಯೇ ಅವುಗಳನ್ನು ಮಹಾಕಾವ್ಯಗಳೆಂದು ಕರೆಯಲಾಗಿದೆ. 


ಆದರೆ ಮೌಖಿಕ ಪರಂಪರೆಯಲ್ಲಿ ಕಾಲದಿಂದ ಕಾಲಕ್ಕೆ, ಬಾಯಿಂದ ಬಾಯಿಗೆ ಬೆಳೆದು ಬಂದ ನೂರಾರು ರಾಮಾಯಣಗಳು ನಮ್ಮಲ್ಲಿವೆ. ಭಾರತದಾದ್ಯಂತ ಪ್ರಚಲಿತದಲ್ಲಿರುವ ಇಂಥ ಅನೇಕ ಬುಡಕಟ್ಟು ರಾಮಾಯಣಗಳ ಸ್ವರೂಪವನ್ನು, ಅವುಗಳ ಬಗ್ಗೆ ವಿದ್ವಾಂಸರು, ಸಂಶೋಧಕರು, ಚಿಂತಕರು ಹಾಗೂ ಇತಿಹಾಸಕಾರು ಹೇಳಿರೈವ ಅಭಿಪ್ರಾಯಗಳನ್ನು ಈ ಕಾವ್ಯದ ಮುಖೇನವೇ ಪ್ರಸ್ತಾಪಿಸಿ ತುಲನೆ ಮಾಡಬೇಕು. 


ನಮ್ಮ ಜನಸಾಮಾನ್ಯರು ಕಲ್ಪಿಸಿಕೊಂಡ ನಾಯಕರು ಹೀಗೇ ಇರಬೇಕೆಂದೇನಿಲ್ಲ. ಕಥೆ ಕೂಡ ವಾಲ್ಮೀಕಿ ರಾಮಾಯಣದ ಪಡಿಯಚ್ಚೇ ಆಗಬೇಕಿಲ್ಲ.  ಈ ಕಾವ್ಯದ ದಶರಥ ವಾಲೂಮೀಕಿಯ ದಶರಥನಂತೆ ಬೇಟೆಗೆ ಹೊರಡುತ್ಯಾನೆ. ಆದರೆ ಅವನ ಆಕಾಂಕ್ಷೆ ಬೇಟೆಗೆ ಹೋಗುವುದು, ಪ್ರಾಣಿಗಳನ್ನು ಕೊಂದು, ಅವುಗಳ ಮಾಂಸ ತಂದು, ಬ್ಯಾಟೆ ಅಡುಗೆ ಮಾಡುವುದಕ್ಕೆ, ದಶರಥ ಕೋವಿ ಇಟ್ಟುಕೊಂಡಿದ್ದ. ಗೊಂಡರ ಬೇಟೆಗಾರನಂತೆ ಸಹಜವಾಗಿ ಬೇಟೆಗೆ ಹೊರಟ. ಕೆರೆಯಲ್ಲಿ ನೀರು ಕುಡಿಯುತ್ತಿದ್ದ ಆನೆಯೊಂದಕ್ಕೆ ಗುಂಡು ಹಾರಿಸಿದ. ಸಾಯುವ ಮೊದಲು ಆನೆ " ನಿನ್ನ ಪುತ್ರನಿಂದಲೇ ನೀನು ಸಾಯುತ್ತೀಯ" ಎಂದು ಶಾಪ ಕೊಟ್ಟಿತು.  ಪ್ರಕೃತಿಯ ಬಹು ಮುಖ್ಯ ಪ್ರಾಣಿಗಳಲ್ಲಿ ಒಂದಾದ ಆನೆಯನ್ನು ಕೊಲ್ಲುವ ಮೂಲಕ ನಿಸರೂಗದ ಮೇಲೆ ಹಲ್ಲೆ ನಡೆಸುವ ಯಾವನೇ ಆದರೂ ಅವನಿಗೆ ಶ್ರೇಯಸ್ಸಿಲ್ಲ ಎಂಬ ದೇಸಿ ಧರ್ಮದ ಸೂಕ್ಷ್ಮವನ್ನು ಇಲ್ಲಿ ಹೇಳಲಾಗುತ್ತಿದೆ. 


ತಂದಾನ ತಾನನ ತಂದಾನುವೋ ತಾನ|ತಂದಾನ| 

ದಶರತುವೋ ಮಾರಾಜ ಎಂಬುವುನು ಈಗಿನ್ನು 

ಚಂದೂದಿಂದೂಲೇ ಇರುವೊನಲ್ಲಾ ತಾನ|ತಂದಾನ| 

ಚಂದೂದಿಂದೂಲೇ ಇರುವೊನಲ್ಲಾ ಈಗಿನ್ನು 

ಸುಖದಲ್ಲೂ ಕಾಲಾನೇ ಕಳುವಂಗಾ ತಾನ| ತಂದಾನ| 

ಲವುನೀಗೂ ಇರುವೋರು ಮೂರುಂದ್ಯೋ | ತಂದಾನ| 

ಲವುನಿಗಿರುವೋರು ಮೂರುಮಂದಿ ಈಗಿನ್ನು 

ಕೈಕೇ ಕೌಸಲ್ಯೆ ಕೌಮಿತ್ರಾ ತಾನ| ತಂದಾನ| 

ಕೈಕೇ ಕೌಸಲ್ಯೆ ಕೌಮಿತ್ರಾ ಎಂಬೋರು 

ಮೂರೂಮಂದೀನೆ ಹೆಂಡಿರಾಲಾ ತಾನ|ತಂದಾನ| 

ಸುಖುದಲೂ ಕಾಲಾನೇ ಕಳುವಂಗೂ ಈಗಿನ್ನು 

ಒಂದಲ್ಲವೊಂದೇ ದಿನದಲ್ಲೀ  ತಾನ|ತಂದಾನ| 

ಒಂದಲ್ಲವೊಂದೆ ದಿನದಲೂ ಈಗಿನ್ನು | 

ದಶರತು ಮಾರಾಜ ಎಂಬೋನು ಯ ತಾನ|ತಂದಾನ| 

ಮಡುದೀ ಕೂಡೊಂದೆ ನುಡುದನಲ್ಲ ಈಗಿನ್ನು 

ನಾನೂ ಈಗೊಂದೆ ಹೋಗುಬೇಕಾ ತಾನ|ತಂದಾನ| 

ನಾನೂ ಈಗೊಂದೆ ಹೋಗಬೇಕು ಈಗಿನ್ನು 

ಮಾಸುದೂ ಮಾನುಬಾಳು  ಮನುಸಾಲಾ ಈಗಿನ್ನೂ

ಮಾಸುಲುದೀಬಾಳು ಮನುಸಾಲಾ ತಾನ|ತಂದಾನ|

ಮಾಸುಲುದೀಬಾಳು ದಿವುಸಾದುವೀಗಿನ್ನು

ಮುರುಗುನು ಬ್ಯಾಟೀಟು ಹೋಗುಬೇಕಾ ತಾನ |ತಂದಾನ| 

ಮುರುಗುನು ಬ್ಯಾಟೀಗು ಹೋಗುಬೇಕುವೀಗಿನ್ನು 

ಮಾಸಾಮಾಡಿ ನಾನೆ ಬರುಬೇಕಾ ತಾನ|ತಂದಾನ| 

ಮೊಡುದೀ ಕೂಡೊಂದೆ ನುಡಿತವನೆ ಏನೆಂದು 

ಬ್ಯಾಟಿ ಅಡುಗೇನ ಮಾಡುಬೇಕಾ ತಾನ | ತಂದಾನ| 

ಲಂದೂ ತಾನೀಗು ನುಡ್ದವನಾಲೋವೀಗಿನ್ನು 

ದಶುರತು ಮಾರಾಜ ಎಂಬುವನಲಾ ತಾನ |ತಂದಾನ| 

ಬ್ಯಾಟೀ ಅಡುಗೇನೆ ಮಾಡಿದುರುವೀಗಿನ್ನು 

ದಶುರತಾ ಮಾರಾಜರಿರುವರಾಲಾ ತಾನ|ತಂದಾನ| 

ಸಾನಾ ಜಪುವನೆ ಮಾಡಿದರು ಈಗಿನ್ನು 

ಊಟಾಉಳ್ಳೇನೆ ಮಾಡಿದುರಾ ತಾನ|ತಂದಾನ| 

ಊಟಾಉಳ್ಳೆನೆ ಮಾಡುಗೊಂಡು ಈಗಿನ್ನು 

ಮೂಡಿನೂ ಕಾಡೀಗೆ ಹೋದನಾ ತಾನ|ತಂದಾನ| 

ಮೂಡಿನೂ ಕಾಡೀಗು ಹೋಗಿದುನುವೀಗಿನ್ನು

ಚಣ್ಣಾಗುಂಡೀನ ಕೋವಿಯಾಲಾ ತಾನ|ತಂದಾನ| 

ಚಣ್ಣಾಗುಂಡೀನ ಕೋವಿಯಲೋವೀಗಿನ್ನು

ಲದುರು ತಾನೀಗ ತುಂಬಿದನೋ ತಾನ | ತಂದಾನ| 

ಮದ್ದೂ ಗುಂಡೊಂದೆ ತುಂಬಿದುನೊವೀಗಿನ್ನು

ಲಾಗೂ ತಾನೀಗೂ ಎದ್ದಾನಾಲಾವೀಗಿನ್ನು 

ಹಂಡಾ ನಾಯೊಂದೆ ಕರಕೊಂಡಾ ತಾನ|ತಂದಾನ| 

ಹಟಡಾನಾಯೊಂದೆ ಕರಕೊಂಡುವೀಗಿನ್ನು

ಮುರುಗುನೂ ಬ್ಯಾಟೀಗೂ ಎದ್ದನಾಲಾ ತಾನ|ತಂದಾನ| 

ಮುರುಗುನೂ ಬ್ಯಾಟೀಗು ಎದ್ದನಾವೀಗಿನ್ನು 

ದಶುರತು ಮಾರಾಜ ಎಂಬವನಲಾ ತಾನ |ತಂದಾನ| 

ಬಡುಗೀನ ಹೊಲಕಾಗಿ ನಡೆದಿದುನುವೀಗಿನ್ನು 

ಬಡಗೀನ ಹೊಲವೊಂದೆ ತಿರುಗಾನ್ಯಾಲ ತಾನ|ತಂದಾನ| 

ಬಡಗೀನ ಹೊಲವೊಂದೆ ತಿರುಗಿದುನುವೀಗಿನ್ನು 

ಹಾರುವ ಹಕ್ಕಿಯ ಹೊಡುಲಿಲ್ಲಾ ತಾನ|ತಂದಾನ|

ಆ ಹೊಲುನು ತಾನೆ ಬಿಟ್ಟನಲೋವೀಗಿನ್ನು

ತೆಂಕೀನೊಲುಕಾಗಿಬಂದಾನ್ಯಾಲಾ ತಾನ|ತಂದಾನ| 

ಕೊಡುವೂಕಂಡೊಲನೆ ಹೋಕ್ದಾನೆವೀಗಿನ್ನು 

ಹೊಕ್ಕನಾಲ ಹೊಲನ ಇಟ್ಟನ್ಯಾಲಾ ತಾನ|ತಂದಾನ| 

ಆ ಹೊಕ್ಕನಾಲ ಹೊಲನ ಇಟ್ಟನ್ಯಾಲ್ಲೋವೀಗಿನ್ನು 

ಮೆರೆವು ತುಂಬೀ ಹುಳುಲಿಲ್ಲಾ ತಾನ|ತಂದಾನ| 

ಆ ಹೊಲುನು ತಾನೆ ಬಿಟ್ಟೆನೆಲ್ಲೋವೀಗಿನ್ನು 

ಮೂಡೀನೊಲಕಾಗಿ ನಡೆದನ್ಯಾಲಾ ತಾನ|ತಂದಾನ| 

ಕೊಡುವೂ ಕಂಡಲುನೆ ಹೊಕ್ಕನಾಲವೀಗಿನ್ನು 

ಹೊಕ್ಕು ಹೊಕ್ಕೀಗೂ ಹದನಾದೂ ತಾನ |ತಂದಾನ| 

ಅಲ್ಲೂವಿಗೊಂದು ಇರುವುದಲ್ಲೊವೀಗಿನ್ನು 

ಆ ಕೆರೆಯಲು ನೀರೇ ಇರುವುದಲಾ ತಾನ|ತಂದಾನ| 

ಮದದಲ್ಲಿ ತುರವಂಥ ಮದ್ದಾನಿವೀಗಿನ್ನು 

ನೀರು ಕುಡಕೊಂಡೆ ಬಂದದ್ಯಾಲಾ ತಾನ | ತಂದಾನ| 

ಕೆರೆಯಲ್ಲಿ ನೀರೊಂದೆ ಕುಡುವಂಗಾವೀಗಿನ್ನು 

ದಶುರತು ಮಾರಾಜ ಕಂಡನಲಾ ತಾನ| ತಂದಾನ| 

ದಶುರತು ಮಾರಾಜ ಕಂಡಿದುನೋವೀಗಿನ್ನು 

ಚೆಣ್ಣಾ ಗುಂಡೀನ ಕೋವಿಯಲಾ ತಾನ |ತಂದಾನ| 

ಲದರೂ ತಾನೀಗ ವಿಡಿದುದುನುವೀಗಿನ್ನು ಮ

ಮದ್ಹಾನೆಗೂ ಗುಂಡು ತಗಲದ್ಯಾಲಾ ತಾನ| ತಂದಾನ| 

ಕೇಳು ಕೇಳು ನರಮನುಷ್ಯ ನೀ ಕೇಳವೀಗಿನ್ನು 

ನನ್ನಾ ಹೊಡೆದು ನೀನೆ ಕೊಂದಿಯೇನೊ ತಾನ |ತಂದಾನ| 

ನನ್ನಾ ಹೊಡೆದು ನೀನೇ ಕೊಂದಿಯೇನೊವೀಗಿನ್ನು

ನೀನಾದುರೀಗಾ ಸಾಯ್ತಿಯಲಾ ತಾನ |ತಂದಾನ| 

ನೀನಾದುರೀಗಾ ಸಾಯ್ತಿಯಲಾವೀಗಿನ್ನು

ಪುತ್ತುರುನಾ ಶಾಪುದಿಂದು ಸಾಯ್ತಿಯಾಲಾ ತಾನ | ತಂದಾನ| 

ನನಗೇ ಪುತ್ತುರಾನೆ ಹುಟ್ಟುಲಿಲ್ಲವೀಗಿನ್ನು 

ಪುತ್ತುರುನಾ ಶಾಪದಿಂದೆ ಸಾವುದಿಲ್ಲಾ ತಾನ |ತಂದಾನ| 

ದಶುರತಾ ಮಾರಾಜ ನುಡಿದನ್ಯಾಲ್ಲೋವೀಗಿನ್ನು 

ಲಷ್ಟೊಂದು ಮಾತೆ ಹೇಳಿದುರಾ ತಾನ| ತಂದಾನ| 

ಹಿಂದೂ ತಿರುಗುವೊಂದೆ ಬಂದನಾಲಾವೀಗಿನ್ನು 

ತನ್ನಾಲರುಮನಿಗೂ ಬಂದನಾಲಾ ತಾನ| ತಂದಾನ| 

ತನ್ನಾಲರುಮನಿಗೂ ಬಂದನಲ್ಲೋವೀಗಿನ್ನು 

ಮಾಸುಲದ ಮನಿಗೂ ಬಂದನಾಲಾ ತಾನ |ತಂದಾನ| 

ದಶುರತು ಮಾರಾಜ ಎಂಬುವುನುವೀಗಿನ್ನು 

ನಾನೂವಿಗೊಂದೆ ಕರೆಸಬೇಕಾ ತಾನ | ತಂದಾನ| 

ನಾನೂವಿಗೊಂದೆ ಕರೆಸಬೇಕುವೀಗಿನ್ನು 

ಮಾಯದು ರಥವೊಂದೇ ಕರೆಸಬೇಕಾ ತಾನ | ತಂದಾನ| 

ಮಾಯಾದು ರಥವೊಂದೇ ಕರೆಸಬೇಕಾವೀಗಿನ್ನು 

ಇಂದುರು ಲೋಕಾಕ್ಕೆ ಹೋಗುಬೇಕಾ ತಾನ| ತಂದಾನ| 

ಇಂದುರು ಲೋಕಾಕು ಹೋಗಬೇಕಾವೀಗಿನ್ನು 

ಚಂದುರು ಲೋಕಾಕೂ ಹೋಗಬೇಕಾ ತಾನ | ತಂದಾನ| 

ಚಂದುರು ಲೋಕಾಕೂ ಹೋಗಬೇಕೋವೀಗಿನ್ನು 

ದೇವುಪಟ್ಟುಣವೆ ನೋಡಬೇಕಾ ತಾನ|ತಂದಾನ| 

ಲಂದು ಗ್ಯಾನಾನೆ ಮಾಡಿದುನೋವೀಗಿನ್ನು 

ದಶುರಥು ಮಾರಾಜ ಎಂಬುವುನಾಲಾ ತಾನ |ತಂದಾನ| 

ಮಾಯುದು ರಥವೊಂದೇ ಕಡುಸಿದುನೋವೀಗಿನ್ನು

ಲಾಗುತಾನಿಗು ಇರುವನಲಾ ತಾನ | ತಂದಾನ| 

ಲಾಗುತಾನೀಗು ಇರುವನಾಲಾವೀಗಿನ್ನು 

ತಾನೂವಿಗೊಂದೇ ಎದ್ದನಾಲಾ ತಾನ | ತಂದಾನ| 

ತನ್ನ ಮಡುದೇರು ಕರೆದಿದುನೋವೀಗಿನ್ನು

ಕೇಳಿ ಕೇಳಿ ಮಡುದ್ಹೀರೇ ನೀವಾಲಾ ತಾನ|ತಂದಾನ| 

ಕೈಕೆ ಕೌಸಲ್ಯ ಕಾಮಿತುರೆ ನೀವಾಲ 

ನೀವು ಮೂರುಜನಾ ಕೇಳುಬೇಕಾ ತಾನ | ತಂದಾನ| 

ಅರುಮನಿಯಲು ನೀವೇ ಉಳಿತೀರಿ ನೀವಿನ್ನು 

ನಾನೂವಿಗೊಂದೆ ಹೋಗುಬೇಕಾ ತಾನ|ತಂದಾನ| 

ನಾನೂವಿಗೊಂದೆ ಹೋಗಬೇಕುವೀಗಿನ್ನು 

ಇಂದರುಲೋಕ ಚಂದರುಲೋಕ ತಿರುಗಬೇಕಾ ತಾನ|ತಂದಾನ| 

ಇಂದರುಲೋಕ ಚಂದರುಲೋಕ ತಿರೈಗುಬೇಕುವೀಗಿನ್ನು

ದೇವುಲೋಕ ದೇವುಪಟ್ನುವೆ ನೋಡುಬೇಕಾ ತಾನ |ತಂದಾನ| 

ಎಂದು ತಾನೀಗೂ ಹೇಳಿದುನೋವೀಗಿನ್ನು

ಊಟ ವೀಳ್ಳೆನೆ ಮಾಡಿದುನೋ ತಾನ|ತಂದಾನ| 

ಊಟ ವೀಳ್ಳೆನೆ ಮಾಡಿದುನೋವೀಗಿನ್ನು

ಮಾಯುದ ರಥವೊಂದೆ ಏರಿದುನೋ ತಾನ|ತಂದಾನ|

ಮಾಯುದು ರಥವೊಂದೇ ಏರಿದುನೋವೀಗಿನ್ನು 

ಮಡುದೀನೆ ಎಂಬುವಳಾಲಾ ತಾನ|ತಂದಾನ| 

ಕೈಕೆ ಎಂಬೋ ಮಡುದಿಯಲ್ಲೋ ಈಗಿನ್ನು 

ರಥುದು ಗಾಲೀನೆ ಹಿಡಿದಳ್ಯಾಲಾ ತಾನ |ತಂದಾನ| 

ಗಂಡುನು ಜೊತೆಯಲ್ಲೇ ಹೋಗಳಲ್ಲೋವೀಗಿನ್ನು 

ಮಾಯುದು ರಥದಲ್ಲಿ ಹೋಗ್ಯಾಳ ತಾನ|ತಂದಾನ| 

ದಶುರಥು ಮಾರಾಜ ಎಂಬುವುನು ಈಗಿನ್ನು 

ಹಿಂದೆ ತಿರುಗೊಂದೆ ಕಂಡಿಲ್ಲಾ ತಾನ|ತಂದಾನ| 

ಲಾಗೂತಾನೀಗೂ ಹೋಗನಲ್ಲೋವೀಗಿನ್ನು 

ದೇವು ಲೋಕ ದೇವುಪಟ್ಟುಣಾ ಕಂಡನ್ಯಾಲಾ ತಾನ|ತಂದಾನ| 

ಚಂದುರು ಲೋಕಾಕು ಹೋದನಲ್ಲೋವೀಗಿನ್ನು 

ಚಂದುರು ಲೋಕಾನೆ ಕಂಡನ್ಯಾಲಾ ತಾನ | ತಂದಾನ| 

ಇಂದುರು ಲೋಕಾಕೆ ಹೋದನಲ್ಲೋವೀಗಿನ್ನು 

ಇಂದುರು ಲೋಕಾನೆ ಕಂಡನಲ್ಲೋ ತಾನ | ತಂದಾನ| 

ಇಂದುರು ಲೋಕಾನೆ ಕಂಡನಲ್ಲೋವೀಗಿನ್ನು 

ಎಲ್ಲಾ ತಿರುಗೀಗೂ ಬಂದನ್ಯಾಲಾ ತಾನ | ತಂದಾನ| 

ಎಲ್ಲಾ ತಿರುಗೀಗೂ ಬಂದನಲ್ಲೋವೀಗಿನ್ನು 

ಹಿಂದೂ  ತಿರುಗೀಗೂ ಬರುವಾಗ ತಾನ|ತಂದಾನ| 

ಹಿಂದೂ ತಿರುಗೊಂದೆ ಬರುವಂಗೋವೀಗಿನ್ನು 

ಅಲ್ಲೊಂದು ನದೀನೆ ಕಂಡನ್ಯಾಲಾ ತಾನ |ತಂದಾನ| 

ಅಲ್ಲೊಂದು ನದೀನೆ ಕಂಡನ್ಯಾಲವೀಗಿನ್ನು

ಬಾಳ ಬಾಯುರಿಕೆ ಅವನಿಗಾಲಾ ತಾನ |ತಂದಾನ| 

ನದಿಯಲು ನೀರೇ ಕುಡಿಬೇಕು ಎಂದೇಳಿ

ಮಾಯುದ ರಥವೊಂದೇ ಇಳಿಸನ್ಯಾಲಾ ತಾನ|ತಂದಾನ| 

ಮಾಯುದ ರಥವೊಂದೇ ಇಳಿಸಿದುನೋವೀಗಿನ್ನು

ಹಿಂದೆ ತಿರುಗೊಂದೆ ಕಂಡಿದುನಾ ತಾನ |ತಂದಾನ| 

ಕಿರಿ ಮಡುದೀನೆ ಅವುಳಿಗಾಲ ಈಗಿನ್ನು 

ಕೇಳು ಕೇಳು ನನ್ನ ಮಡದೀ ನೀನಾಲಾ ತಾನ |ತಂದಾನ| 

ಇಂತಾ ಕೆಲುಸಾನೆ ಮಾಡುಬ್ಯಾಡ ಈಗಿನ್ನು 

ನಿನ್ನ ಪ್ರಾಣವೇ ತೆಗೆದಿನಾಲಾ ತಾನ | ತಂದಾನ| 

ನನ್ನಾ ಕೈಯಿಂದನೇ ತೆಗೆದೀನಾಲಾವಕಗಿನ್ನು 

ಈ ಕೆಲಸ ನೀನೇ ಮಾಡಿದೇನೇ ತಾನ| ತಂದಾಶ| 

ಕೇಳಿ ಕೇಳಿ ನನ್ನ ಸ್ವಾಮಿ ಪತಿಯವುರೆ ನೀವಿನ್ನು 

ನೀವು ಈಗೊಂದೆ ಕೇಳುರ್ಯಾಲಾ ತಾನ|ತಂದಾನ|

ನಿಮ್ಮಾ ಬೆನ್ನೀಗೂ ಬರುದಿದುರೆ ಈಗಿನ್ನು

ನಿಮ್ಮಾ ಪ್ರಾಣಾನೆ ಉಳುವದಿಲ್ಲಾ ತಾನ | ತಂದಾನಾ| 

ಮಾಯುದು ರಥವೊಂದೆ ಇರುವುದಾಲಾವೀಗಿನ್ನು 

ರಥುದು ಕೀಲಾನೆ ಹೋಗದ್ಯಾಲಾ ತಾನ|ತಂದಾನ| 

ನನ್ನಾ ಕೈಬಿಟ್ಟು ವರಸ್ತುಗೊಂಡುವೀಗಿನ್ನು

ಇಲ್ಲಾರೆ ನಿಮ್ಮಾ ಪ್ರಾಣಾ ತಡದನ್ಯಾಲಾ ತಾನ | ತಂದಾನ| 

ಕೇಳು ಕೇಳು ನನ್ನ ಮಡುದಿ ನೀ ಕೇಳು ಈಗಿನ್ನು 

ನನ್ನಾ ಪ್ರಾಣಾನೇ ಉಳಿಸಿದ್ಯಾಲಾ ತಾನ | ತಂದಾನ| 

ನನ್ನಾ ಪ್ರಾಣಾನೇ ಉಳಿಸಿದ್ಯಾಲ್ಲೇ ಈಗಿನ್ನು 

ನೀ ಬೇಡಿದೊರುವೆ ಕೊಡುತೆಂಬಾ ತಾನ|ತಂದಾನ| 

ನೀ ಬೇಡಿದೊರುವೆಕೊಡುತೆಂಬುವೀಗಿನ್ನು 

ಮಡುದಿ ಕೂಡೊಂದೆ ನುಡುದನ್ಯಾಲಾ ತಾನ|ತಂದಾನ| 

ಕೇಳಿ ಕೇಳಿ ನನ್ನ ಸ್ವಾಮಿ ನೀವು ಕೇಳಿ ಈಗಿನ್ನು 

ಬೇಡೀದ ವರುವೆ ಕೊಡುತೆಂದಾ ತಾನ|ತಂದಾನ| 

ಬಾಯಲ್ಲಿ ಹೇಳಿದುರು ಅಲ್ಲುವಾಲಾ ಈಗಿನ್ನು 

ಕೈಮ್ಯಾಲೆ ಬಾಷೆ ಕೊಡುಬೇಕಾ ತಾನ|ತಂದಾನ| 

ಕೇಳು ಕೇಳು ನನ್ನ ಮಡುದಿ ನೀ ಕೇಳೆವೀಗಿನ್ನು 

ಬೇಡಿದು ವರುವೆ ಕೊಡುತೆಂಬಾ ತಾನ|ತಂದಾನ| 

ಬೇಡಿದ ವರುವೆ ಕೊಡುತೆಂಬಾವೀಗಿನ್ನು

ಬಲಗೈಲಿ ಭಾಷೆಯ ಕೊಡ್ಹನೆಂಬಾ ತಾನ|ತಂದಾನ| 

ಅಲ್ಲಿಂದವೀಗೂ ಬಂದರಲ್ಲವೀಗಿನ್ನು 

ಗಂಡಾಹೆಂಡಾರು ಇಬ್ಬುರಾಲಾ ತಾನ|ತಂದಾನ| 

ಗಂಡಾಹೆಂಡಾರು ಇಬ್ಬುರಾಲೋವೀಗಿನ್ನು 

ತಮ್ಮಾಲರುಮನಿಗೂ ಬಂದಿದುರು ತಾನ|ತಂದಾನ| 

ತಮ್ಮಾಲರುಮನಿಗೂ ಬಂದಾರಾಲಾ ಈಗಿನ್ನು 

ಸುಖುದಲು ಕಾಲಾನೆ ಕಳುವಂಗಾ ತಾನ|ತಂದಾನ| 

ಸುಖುದಲು ಕಾಲಾನೆ ಕಳುವಂಗೋ ಈಗಿನ್ನು 

ಒಂದಲ್ಲ ಒಂದೇ ದಿನುವಲ್ಲಾ ತಾನ|ತಂದಾನ| 

ಅವನಿಗಿರುವೋರು ಮೂರುಂದಿ ಮಡದೀರು ಈಗಿನ್ನು 

ಕೈಕಿ ಕೌಸಲ್ಯೆ ಕೌಮಿತ್ತುರಾ ತಾನ|ತಂದಾನ| 

ಕೈಕಿ ಕೌಸಲ್ಯೆ ಕೌಮಿತ್ರೆ ಈಗಿನ್ನು 

ಮೂರು ಜನರೀಗೂ ಹೊತ್ತರ್ಯಲಾ ತಾನ|ತಂದಾನ| 

ಮೂರು ಜನರೀಗೂ ಹೊತ್ತರ್ಯಾಲೋ ಈಗಿನ್ನು 

ಲವುರು ಗರುಬಿಣೆನೆ ಲಾದರಾಲಾ ತಾನ|ತಂದಾನ| 

ಲವುರು ಗರುಬಿಣೆನೆ ಲಾದರಲ್ಲೋ ಈಗಿನ್ನು 

ರಾಮಾ ಲಕ್ಷುಮಣ್ಣ ಎಂಬುವುರಾಲಾ ತಾನ|ತಂದಾನ| 

ರಾಮಾ ಲಕ್ಷುಮಣ್ಣ ಎಂಬವುರು ಈಗಿನ್ನು 

ಒಂದೇ ತಾಯಿಗೆ ಹಡುದಳಲ್ಲಾ ತಾನ|ತಂದಾನ| 

ಒಂದೆ ತಾಯಿಗೆ ಹಡುದಳಲ್ಲಾ ಈಗಿನ್ನು 

ಕೈಕಾದೇವೀನೆ ಹಡುದಿದುಳು ತಾನ|ತಂದಾನ| 

ಕೈಕಾದೇವೀನೆ ಹಡುದಿದುಳು ಈಗಿನ್ನು 

ಎಲ್ಡು ಗಂಡೂ ಪುತ್ರನಾಲಾ ತಾನ|ತಂದಾನಾ| 

ಬಾರ್ತ ಸಸ್ತ್ರಾವೆ ಎಂಬುವುರು ಈಗಿನ್ನು 

ಕೈಕಿ ಕೌಸಲ್ಯೆಗೆ ಹುಟ್ಟಿದರಾಲಾ ತಾನ|ತಂದಾನ| 

ಒಟ್ಟಿಗವುರು ನಾಕು ಜನರಲ್ಲೋ ಈಗಿನ್ನು 

ಉದ್ದು ದೊಡ್ಡಾನೆ ಮಾಡುದರಾಲಾ ತಾನ|ತಂದಾನ| 

ಉದ್ದು ದೊಡ್ಡಾನೆ ಮಾಡುದುರು ಈಗಿನ್ನು  

ಹುಸುನೀರು ಬಿಸಿಮಾಡು ಹುಯ್ದರಾಲಾ ತಾನ|ತಂದಾನ| 

ಹುಸುನೀರು ಬಿಸಿಮಾಡು ಹುಯ್ದಿದುರು ಈಗಿನ್ನು  

ಎಣ್ಣೆಲು ಬೆಣ್ಣೇಲಿ ಉಜ್ಜರಾಲಾ ತಾನ|ತಂದಾನ| 

ಎಣ್ಣೆಲು ಬೆಣ್ಣೇಲಿ ಉಜ್ಜರಾಲಾವೀಗಿನ್ನು 

ಉದ್ದೊದೊಡ್ಡಾನೆ ಮಾಡರ್ಯಾಲಾ ತಾನ|ತಂದಾನ| 

ಉದ್ದೊದೊಡ್ಡಾನೆ ಮಾಡ್ಯರಲ್ಲೋ ಈಗಿನ್ನು  

ಬುದ್ದು ಬಲುವಾಗು ಬಂದರಾಲಾ ತಾನ|ತಂದಾನ| 

ಬುದ್ದಿ ಬಲುವಾಗಿ ಬಂದರ್ಯಾಲೋ ಈಗಿನ್ನು  

ಒಳ್ಳೆ ಬುದ್ದೀನೆ ಕಲಸ್ಯಾರಾಲೋ ತಾನ|ತಂದಾನ| 

ಒಳ್ಳೆ ಬುದ್ದೀನೆ ಕಲಸ್ಯರಾಲೋ ಈಗಿನ್ನು 

ಇದ್ದಿ ಬುದ್ದೀನೆ ಕಲಸರ್ಯಾಲಾ ತಾನ|ತಂದಾನ| 

ಇದ್ದಿ ಬುದ್ದೀನೆ ಕಲುಸರ್ಯಾಲಾ ಈಗಿನ್ನು  

ಸಾಧುಕು ಸಂಪತ್ತೆ ಕಲುಸರ್ಯಾಲಾ ತಾನ|ತಂದಾನ| 

ಸಾಧುಕು ಸಂಪತ್ತೆ ಕಲುಸರ್ಯಾಲಾ ಈಗಿನ್ನು 

ಜಾದು ವಿದ್ದೀನೆ ಕಲಿಸಿದುರೋ ತಾನ |ತಂದಾನ| 

ಎಲ್ಲಾ ವಿದ್ದೀನೆ ಕಲೆಸಿದುರೋವೀಗಿನ್ನು 

ಒಂದೆ ಗೇವೀಲಿ ಹೋಗುವಾಲಾ ತಾನ|ತಂದಾನ| 

ಒಂದೆ ಗೇವೀಲಿ ಹೋಗುವುರೆ ಈಗಿನ್ನು  

ಒಂದೆ ಗೇವೀಲಿ ಬರುವವರಾ ತಾನ|ತಂದಾನ| 

ಒಂದೆ ಗೇವೀಲಿ ಬರುವವರು ಈಗಿನ್ನು  

ಒಂದೆ ತೋಳೀನ ತೊಡಿಯವರಾ ತಾನ|ತಂದಾನ| 

ಒಂದೆ ತೋಳೀನ ತೊಡಿಯವರು ಈಗಿನ್ನು  

ಒಂದೆ ಮುದ್ದೀನ ಮುಖದವರಾ ತಾನ|ತಂದಾನ| 

ಒಂದೆ ಮುದ್ದೀನ ಮುಖದವರಾ ಈಗಿನ್ನು  

ಒಂದೇ ಗೇವೀಲಿ ಹೋಗುವಾರಾ ತಾನ|ತಂದಾನ| 

ಒಂದೆ ಗೇವೀಲಿ ಹೋಗುವಾರಾ ಈಗಿನ್ನು 

ರಾಮ ಲಚ್ಚುಮಣ್ಣ ಎಂಬುವರು ತಾನ|ತಂದಾನ|

 ರಾಮಲಚ್ಚುಮಣ್ಣ ಎಂಬುವರು ಈಗಿನ್ನು 

ಬಾರ್ತ ಸಸ್ತ್ರಾನೆ ಎಂಬುವುರಾಲಾ ತಾನ|ತಂದಾನ| 

ಬಾರ್ತ ಸಸ್ತ್ರಾನೆ ಎಂಬುವುರು ಈಗಿನ್ನು 

ಚಂದಾದಿಂದವುರ ಇರುವರಾಲಾ ತಾನ|ತಂದಾನ| 

ಚಂದಾದಿಂದವುರು ಇರುವರಾಲಾ ಈಗಿನ್ನು 

ಉಳುವಂಗ ಕಾಲಾ ಕಳುವಾಂಗಾ ತಾನ|ತಂದಾನ| 

ಉಳುವಂಗ ಕಾಲ ಕಳುವಂಗಾ ಈಗಿನ್ನು  

ದಶುರಥು ಮಾರಾಜ ಎಂಬವನಾಲಾ ತಾನ|ತಂದಾನ| 

ದಶರಥು ಮಾರಾಜ ಎಂಬವನಲ್ಲೋ ಈಗಿನ್ನು  

ಏನು ಗ್ಯಾನಾನೇ ಮಾಡಿದುನೋ ತಾನ|ತಂದಾನ| 

ಏನು ಗ್ಯಾನಾನೆ ಮಾಡಿದುನೋ ಈಗಿನ್ನು  

ನನಗೂವಿಗೊಂದೆ ಬಂದದ್ಯಾಲಾ ತಾನ |ತಂದಾನ| 

ನನಗೂವಿಗೊಂದೆ ಬಂದದಲ್ಲೋ ಈಗಿನ್ನು  

ಮುಪ್ಪೀನ ಕಾಲ ಸಂದುದ್ಯಾಲಾ ತಾನ |ತಂದಾನ| 

ಮುಪ್ಪೀನ ಕಾಲ ಸಂದದಲ್ಲೋ ಈಗಿನ್ನು 

ರಾಮುಗೂ ಪಟ್ಟವೊಂದೆ ಕಟ್ಟಬೇಕಾ ತಾನ |ತಂದಾನ| 

ರಾಮುಗು ಪಟ್ಟವೊಂದೆ ಕಟ್ಟಬೇಕು ಈಗಿನ್ನು  

ಪಟ್ಟಾಲಬುಷೇಕ ಮಾಡುಬೇಕಾ ತಾನ|ತಂದಾನ| 

ಪಟ್ಟಾಲುಬುಷೇಕ ಮಾಡುಬೇಕಾ ಈಗಿನ್ನು 

ರಾಮುಗು ಪಟ್ಟುವೊಂದೆ ಕೊಡಬೇಕಾ ತಾನ |ತಂದಾನ| 

ಲಂದೂ ಗ್ಯಾನಾನೇ ಮಾಡಿಕೊಂಡುವೀಗಿನ್ನು 

ಅವರವರಿಗೂ ಹೇಳನ್ಯಾಲಾ ತಾನ |ತನದಾನ| 

ಬರುವ ಸೋಮವಾರ ದಿನದಲ್ಲು ಈಗಿನ್ನ

ರಾಮುಗು ಪಟ್ಟವೊಂದು ಕೊಡಬೇಕಾ ತಾನ |ತಂದಾನ| 

ಲಂದೂ ಗ್ಯಾನಾನೇ ಮಾಡಿಕೊಂಡು ಈಗಿನ್ನು  

ಊರಾವರಿಗೆಲ್ಲಾ ಹೇಳನ್ಯಾಲಾ ತಾನ |ತಂದಾನ| 

ಊರಾವರಿಗೆಲ್ಲಾ ಹೇಳನ್ಯಾಲಾ ಈಗಿನ್ನು  

ಡೋಳಿಗು ಡಂಗೂರು ಸಾರನ್ಯಾಲಾ ತಾನ 1ತಂದಾನ| 

ಡೋಳಿಗು ಡಂಗೂರು ಸಾರಿದನು ಈಗಿನ್ನು  

ಪುರೋತು ಭಟಾಟರಿಗೂ ಹೇಳಿದುನಾಲಾ ತಾನ |ತಂದಾನ| 

ಪುರೋತು ಭಟ್ಟರಿಗೂ ಹೇಳಿದುನಾ ಈಗಿನ್ನು  

ಭಟ್ಟ ಬ್ರಾಹ್ಮಣಂಗೂ ಹೇಳಿದುನಾ ತಾನ |ತಂದಾನ| 

ಭಟ್ಟ ಬ್ರಾಹ್ಮಣರಿಗೂ ಹೇಳಿದುನು ಈಗಿನ್ನು  

ಹಾದಿ ಹಂಜ್ರಾನ ಅಗುಸಿದನೋ ತಾನ | ತಂದಾನ| 

ಹಾದಿ ಹಂಜ್ರಾನೆ ಅಗುಸಿದನೋ ಈಗಿನ್ನು  

ಬೀದಿಗು ಚಪ್ಪುರಾನೆ ಹಾಕಿಸಿದುನೋ ತಾನ |ತಂದಾನ| 

ಊರು ನೆರೆಯುವುರೆ ಕೂಡಿದರು ಈಗಿನ್ನು  

ಒಕ್ಕುಲು ಮಕ್ಕೋಳು ಕೂಡಿದುರಾ ತಾನ| ತಂದಾನ| 

ಒಕ್ಕುಲು ಮಕ್ಕೋಳು ಕೂಡಿದುರು ಈಗಿನ್ನು  

ಲಾಗುತಾನೀಗೂ ಲಿರುವರಾಲಾ ತಾನ |ತಂದಾನ| 

ಲಾಗುತಾನೀಗೂ ಲಿರುವರಾಲಾ ಈಗಿನ್ನು  

ಭಟ್ಟ ಬ್ರಾಹ್ಮಣರೇ ಬಂದರ್ಯಾಲಾ ತಾನ |ತಂದಾನ| 

ಮೂರುತವೀಗ ಬರಲಿಲ್ಲ ವೀಗಿನ್ನು 

ರಾಮುಗು ಚಡ್ಡಂಗ ಗೆಯಿತಾರಿಯಾ ತಾನ |ತಂದಾನ| 

ರಾಮೈಗೈ ಚಡ್ಡಂಗ ಗೆಯಿತಾರೆ ಈಗಿನ್ನು  

ಏನು ಚಡ್ಡಂಗ ಮಾಡುತಾರಿಯೋ ತಾನ |ತಂದಾನ| 

ಏನು ಚಡ್ಡಂಗ ಮಾಡುತಾರಿಯೋ ಈಗಿನ್ನು  

ಚಿನ್ನದ ಕಿರೀಟೊಂದೆ ಕಟ್ಟುತಾರಿಯೋ ತಾನ |ತಂದಾನ| 

ಚಿನ್ನದ ಕಿರೀಟೊಂದೆಕಟ್ಟುತಾರೆಯೋ ಈಗಿನ್ನು 

ಚಿನ್ನದು ಬಳೆಯೊಂದೆ ಹಾಕುತಾರಿಯೋ ತಾನ |ತಂದಾನ| 

ಚಿನ್ನದ ಬಳೆಯೊಂದೆ ಹಾಕುತಾರಿಯೋ ಈಗಿನ್ನು  

ರಾಮುನು ಕಾಡಿಗೆ ಹಾಕುತಾರಿಯೋ ತಾನ |ತಂದಾನ| 

ರಾಮುನು ಕಾಡೀಗಿ ಹಾಕುತಾರಿಯೋ ಈಗಿನ್ನು  

ಮೂರುತುವೀಗ ಬಂದದ್ಯಾಲಾ ತಾನ |ತಂದಾನ| 

ಮೂರುತವೀಗ ಬಂದದ್ಯಾಲಾ ಈಗಿನ್ನು  

ಎಷ್ಟು ಹೊತ್ತಿಗೂ ಬಂದಳಾಲಾ ತಾನ|ತಂದಾನ| 

ಎಷ್ಟು ಹೊತ್ತೀಗೂ ಬಂದಳಾಲಾ ಈಗಿನ್ನು 

ಕಿರಿಯೋ ಮಡುದೀನೆ ಬಂದಳಾಲಾ ತಾನ|ತಂದಾನ| 

ಕಿರಿಯೋ ಮಡುದೀನೆ ಬಂದಳಾಲಾ ಈಗಿನ್ನು  

ಕೈಕಿ ಎಂಬ ಮಡುದಿಯಾಲಾ ತಾನ|ತಂದಾನ|

ಕೈಕಿ ಎಂಬ ಮಡುದೀಯಾಲ್ಲೋ ಈಗಿನ್ನು  

ತಾನೂವಿಗೊಂದೆ ಬಂದಳ್ಯಾಲಾ ತಾನ|ತಂದಾನ| 

ಕೇಳಿ ಕೇಳಿ ನನ್ನ ಸ್ವಾಮಿ ಪತಿಯವ್ರೆ ಈಗಿನ್ನು  

ನಾನೊಂದು ಮಾತು ಕೇಳುತೀದಾ ತಾನ |ತಂದಾನ| 

ನಾನೊಂದು ಮಾತು ಕೇಳುತೀದೆವೀಗಿನ್ನು 

ನನಗೊಂದು ವರುವೇ ಕೊಟ್ಟಿರಾಲಾ ತಾನ |ತಂದಾನ| 

ನನಗೊಂದು ವರುವೇ ಕೊಟ್ಟಿರಾಲ್ಲೋ ಈಗಿನ್ನು  

ಇಂದು ನಾನೀಗು ಕೇಳುತೀನಾ ತಾನ|ತಂದಾನ| 

ನನಗೂ ಆ ವರುವೇ ಕೊಡಬೇಕೊವೀಗಿನ್ನು 

ಅಂದೂ ತಾನೀಗರಾ ನುಡಿದಳಾಲಾ ತಾನ|ತಂದಾನ| 

ದಶುರಥು ಮಾರಾಜ ಎಂದಾನು ಈಗಿನ್ನು  

ಕೇಳೇ ನನ್ನ ಮಡುದಿ ಅಂದನಾಲಾ ತಾನ|ತಂದಾನ|

ಮತ್ತೇನುವೀಗೂ ಅಲ್ಪಲ್ಲೋವೀಗಿನ್ನು 

ರಾಮ ಲಚ್ಚಮಣ್ಣ ಎಂಬವುರಾ ತಾನ|ತಂದಾನಾ| 

ರಾಮ ಲಚ್ಚುಮಣ್ಣರು ಎಂಬವುರು ಈಗಿನ್ನು  

ಆರಣ್ಣೇಕ್ಕೀಗೂ ಹೋಗುಬೇಕಾ ತಾನ |ತಂದಾನ| 

ಆರಣ್ಣೇಕೀಗೂ ಹೋಗಬೇಕುವೀಗಿನ್ನು 

ಆರೊರೈಷ ಆರಣ್ಣೇ ಕಳಿಬೇಕಾ ತಾನ|ತಂದಾನ| 

ಆರೊರುಷ ಅರಣ್ಯಲೆ ಉಳಿಬೇಕು ಈಗಿನ್ನು  

ಆರೊರುಷ ಅಜ್ಞಾಸಕಳಿಬೇಕಾ ತಾನ|ತಂದಾನ| 

ಆರೊರೈಷ ಅಜ್ಞಾಸ ಕಳಿಬೇಕು ಈಗಿನ್ನು  

ಆರಾರನ್ನೆರಡು ವರುಷಾವ ತಾನ|ತಂದಾನ| 

ಆರಾರನ್ನೆರಡು ವರುಷಾವಾಲಾ ವೀಗಿನ್ನು 

ವನವಾಸ ಕಳುದಿ ಬರುವರಿಗಾ ತಾನ |ತಂದಾನ| 

ವನವಾಸ ಕಳುದಿ ಬರುವರಿಗೆ ಈಗಿನ್ನು 

ಬಾರ್ತ ಸಸ್ತ್ರ ಎಂಬುವರಾಲಾ ತಾನ |ತಂದಾನ| 

ಅವುರು ಇಬ್ಬರೂ  ಆಳುಬೇಕು ತಾನ|ತಂದಾನ| 

ಅವುರು ಇಬ್ಬರೂ ಆಳುಬೇಕು ಈಗಿನ್ನು  

ರಾಮನು ಪಟ್ಟವೊಂದೇ ಆಳುಬೇಕಾ ತಾನ|ತಂದಾನ| 

ಲಂದೇಳಿಗೊಂದೆ ನುಡಿದಾಳಾ ಈಗಿನ್ನು 

ಕೈಕಾದೇವಿಯೇ ಎಂಬುವಳಾಲಾ ತಾನ|ತಂದಾನ| 

ಕೈಕಾದೇವಿಯೆಂಬ ಮಡದಿಯಾಲೋವೀಗಿನ್ನು 

ಲವ್ಳೊಂದೆ ಮಾತು ಕೇಳಿದಳು ತಾನ |ತಂದಾನ| 

ದಶರಥು ಮಾರಾಜ ಎಂಬುವುನು ಈಗಿನ್ನು 

ಲಾಡಿದು ಮಾತೀಗೂ ಹೂಂ ಇಲ್ಲಾ ತೃನ|ತಂದಾನ| 

ಲಾಡಿದು ಮಾತೀಗೂ ಹೂಂ ಇಲ್ಲೆ ಹ್ಹಾಂ ಇಲ್ಲ 

ಮಾತಿಗತ್ತುರಾನೇ ಕೊಡಲಾರವಕಗಿನ್ನು 

ಹಣುಕುದು ಮಂಡೇನೆ ನೆಗಲಾರ ತಾನ |ತಂದಾನ| 

ಹಣಕುದು ಮಂಡೇನೆ ನೆಗಿಲಾರವೀಗಿನ್ನು 

ಹರ ಹರ ಭಗವಂತ ತಾನ1ತಂದಾನ| 

ಹರ ಹರ ಭಗವಂತ ಗೋವಿಂದ ವೀಗಿನ್ನು 

ನನ್ನ ಮಾನಾನ ಕಳದಳಲ್ಲಾ ತಾನ|ತಂದಾನ| 

ನನ್ನ ಮಾನಾನ ಕಳದಳಲ್ಲೋವೀಗಿನ್ನು

 ಏನೂ ಉತ್ತೂರ ಕೊಡುಲಂಬಾ ತಾನ |ತಂದಾನ| 

ಬಾಳ ದುಕ್ಕಾನೆ ಮಾಡುತಾನೆಯೇ ಈಗಿನ್ನು 

ದಶರಥು ಮಾರಾಜ ಎಂಬುವನಾಲಾ ತಾನ |ತಂದಾನ| 

ದಶರಥು ಮಾರಾಜ ಎಂಬುವನಾಲಾ ಈಗಿನ್ನು 

ಕಣ್ಣೀಲ್ಲೀ  ನೀರೇ ತಗಿತಾನೆಯೋ ತಾನ|ತಂದಾನ| 

ಕಣ್ಣೀಲ್ಲಿ ನೀರೇ ತಗಿತಾನೆಯೇ ಈಗಿನ್ನು 

ಹಣುಕುದು ಮಂಡೀನೆ ನೆಗಿಲಾರ ತಾನ|ತಂದಾನ| 

ಕೇಳು ಕೇಳು ನನತಂದೆ ನೀ ಕೇಳೋ ಈಗಿನ್ನು 

ನನಗಾಗಿ ದುಕ್ಕಾನೆ ಮಾಡುಬ್ಯಾಡಾ ತಾನ|ತಂದಾನ| 

ನನಗಾಗಿ ದೈಕ್ಕಾನೆ ಮಾಡುಬ್ಯಾಡಾ ಈಗಿನ್ನು 

ಕಣ್ಣಲ್ಲಿ ನೀರೊಂದೆ ತಗಿಬ್ಯಾಡಾ ತಾನ |ತಂದಾನಾ| 

ನಾವು ಇಬ್ಬೋರು ಇರುವವುರು ಈಗಿನ್ನು 

ರಾಮಾ ಲಚ್ಚುಮಣ್ಣ ನಾವಾಲಾ ತಾನ |ತಂದಾನ| 

ಆರಣ್ಣೆಕು ನಾವೆ ಹೋಗುತೀದೋ ಈಗಿನ್ನು  

ತಮ್ಮಾವರಿಗೆ ಇರುವರಾಲಾ  ತಾನ|ತಂದಾನ| 

ಲವರಿಗೂ ಪಟ್ಟವೊಂದೆ ಕೊಡಬೇಕು ವೀಗಿನ್ನು 

ನೀನು ದುಕ್ಕಾನೆ ಮಾಡುಬ್ಯಾಡಾ ತಾನ|ತಂದಾನ| 

ಲೆಂದು ರಾಮುಸ್ವಾಮಿ ನುಡಿತನೆಯೋ ಈಗಿನ್ನು

ತಂದಿಕೂಡೊಂದೆ ನುಡಿತನಿಯಾ ತಾನ|ತಂದಾನ| 

ಎಷ್ಟುವಿಗೊಂದು ಹೇಳಿದರೂ ಈಗಿನ್ನು  

ಬಾಳಾ ದುಕ್ಕಾನೆ ಮಾಡುತನಿಯೋ ತಾನ|ತಂದಾನ| 

ಬಾಳಾ ದುಕ್ಕಾನೆ  ಮಾಡುತನಿಯೋ ಈಗಿನ್ನು  

ದಶರಥು ಮಾರಾಜ ಎಂಬವನಾಲಾ ತಾನ|ತಂದಾನ| 

ರಾಮಾ ಲಚ್ಚುಮಣ್ಣ ಎಂಬುವರು ಈಗಿನ್ನು  

ರಾಮಾ ಸ್ವಾಮೀನೆ ಇದ್ದರಾಲಾ ತಾನ|ತಂದಾನ| 

ಚಿನ್ನುದು ಕಿರೀಟೊಂದೆ ತೆಗೆದನ್ಯಾಲೋ ಈಗಿನ್ನು 

ಚಿನ್ನುದು ಬಳಿಯೊಂದೆ ತೆಗೆದನ್ಯಾಲಾ ತಾನ|ತಂದಾನ| 

ರಾಮನು ಕಾಡುಗಿ ಬಿಟ್ಟನ್ಯಾಲೋ ಈಗಿನ್ನು 

ಬಿಲ್ಲು ಬಾಣಾನೆ ಹಿಡುದನ್ಯಾಲಾ ತಾನ |ತಂದಾನ| 

ಬಿಲ್ಲು ಬಾಣಾನೆ ಹಿಡಿದಿದುರು ಈಗಿನ್ನು  

ರಾಮಾ ಲಚ್ಚುಮಣ್ಣ ಎಂಬುವರು ತಾನ|ತಂದಾನ| 

ರಾಮಾ ಲಚ್ಚುಮಣ್ಣ ಎಂಬುವರು ಈಗಿನ್ನು 

ಅಣ್ಣ ತಮ್ಮೇಡು ಜನುರಾಲಾ ತಾನ|ತಂದಾನ| 

ಅಣ್ಣಾ ತಮ್ಮೇಡು ಜನುರಲ್ಲೋ ಈಗಿನ್ನು  

ತಂದೆ ಪಾದುಪೂಜೆ ಮಾಡರ್ಯಾಲಾ ತಾನ|ತಂದಾನ| 

ತಂದೆ ಪಾದುಪೂಜೆ ಮಾಡಿದುರುವೀಗಿನ್ನು 

ತಾಯಿ ಪಾದುಪೂಜೆ ಮಾಡಿದುರೋ ತಾನ |ತಂದಾನ| 

ಕೇಳು ಕೇಳು ನನ್ನ ತಾಯಿ ನೀ ಕೇಳಿ ಈಗಿನ್ನು  

ನಮುಗಾಗಿ ನೀ ದುಕ್ಕ ಮಾಡುಬ್ಯಾಡಾ ತಾನ|ತಂದಾನ| 

ನಮುಗಾಗಿ ನೀ ದುಕ್ಕ ಮಾಡುಬ್ಯಾಡಾ ಈಗಿನ್ನು 

ಚಂದೂದಿಂದೀಗ ಉಳಿತೀರ ತಾನ|ತಂದಾನ| 

ನಾವು ಈಗೊಂದೆ ಹೋಗುತೇವೆ ಈಗಿನ್ನು  

ಆರೊರುಷ ಅಜ್ಞಾಸ ಕಳಿತೆಂಬಾ ತಾನ|ತಂದಾನ| 

ಆರೊರುಷ ವನವಾಸ ಕಳಿತೆಂಬವೀಗಿನ್ನು 

ನಾವು ಇಬುರೀಗೂ ಹೋಗುತೆಂಬಾ ತಾನ|ತಂದಾನ| 

ರಾಮಾ ಲಚ್ಚುಮಣ್ಣ ಎಂಬುವರು ಈಗಿನ್ನು 

ಅಣ್ಣಾ ತಮ್ಮೇಡು ಜನರಾಲಾ ತಾನ|ತಂದಾನ| 

ಅಣ್ಣಾ ತಮ್ಮೇಡು ಜನರಾಲಾ ಈಗಿನ್ನು  

ಲಾಗುತಾವೀಗೂ ಎದ್ದರಾಲಾ ತಾನ|ತಂದಾನ| 

ಲಾಗುತಾವೀಗೂ ಎದ್ದರಾಲ್ಲೋ ಈಗಿನ್ನು 

ಬಿದ್ದು ದಾರೀಗೆ ಹಿಡಿದಾರ್ಯಾಲಾ ತಾನ|ತಂದಾನ| 

ಬಿದ್ದು ದಾರೀಗೆ ಹಿಡಿದಿದುರು ಈಗಿನ್ನು  

ರಾಮಾ ಲಚ್ಚುಮಣ್ಣ ಎಂಬವುರಾ ತಾನ|ತಂದಾನ| 

ಲಾಗು ತಾವೀಗೂ ಹೋಗುವಂಗ ಈಗಿನ್ನು  

ದಾರಿಕೂಡವರು ಹೋಗುತಾರ್ಯೋ ತಾನ|ತಂದಾನ| 

ದಾರಿಕೂಡೊಂದೆ ಹೋಗುವಾಗು ಈಗಿನ್ನು  

ಬಾರ್ತಾ ಸಸ್ತ್ರಾನೆ ಎಂಬವುರಾ ತಾನ|ತಂದಾನ| 

ಬಾರ್ತ ಸಸ್ತ್ರಾನೆ ಎಂಬುವುರು ಈಗಿನ್ನು 

ಲವುರು ತಾವೀಗೂ ಹೋಗುವರಾಲಾ ತಾನ|ತಂದಾನ| 

ಲವುರು ತಾವೀಗೂ ಹೋಗುವರು ಈಗಿನ್ನು  

ರಾಮುನು ಬೆನ್ನೀಗು ಓಡುವವರಾ ತಾನ|ತಂದಾನ| 

ರಾಮುನು ಬೆನ್ನೀಗು ಓಡುವವರಾವೀಗಿನ್ನು 

ಎಲ್ಲೀಗಿಗೊಂದೆ ಓಡಿದುರಾ ತಾನ|ತಂದಾನ| 

ಕೇಳು ಕೇಳು ನನ್ನಣ್ಣ ನೀ ಕೇಳು ಈಗಿನ್ನು  

ನಮ್ಮ ಬಿಟ್ಟು ನೀನೆ ಹೋಗಿದುರಾ ತಾನ|ತಂದಾನ| 

ನಮ್ಮ ಬಿಟ್ಟು ನೀನೆ ಹೋಗಿದುರೆ ನನ್ನಣ್ಣ 

ಇಲ್ಲಾದುರು ನಾವೆ ಉಳಿಲಾರೋ ತಾನ|ತಂದಾನ| 

ಇಲ್ಲಾದುರು ನಾವೆ ಉಳಿಲಾರೋವೀಗಿನ್ನು

ನಿಮ್ಮೃ ಬೆನ್ನಿಗೂ ಬರುತೆಂಬಾ ತಾನ|ತಂದಾನ| 

ನಿಮ್ಮಾ ಬೆನ್ನೀಗೂ ಬರುತೆಂಬವೀಗಿನ್ನು 

ಆರಣ್ಣೆಕು ನಾವೆ ಬರುತೆಂಬಾ ತಾನ|ತಂದಾನ| 

ಕೇಳು ಕೇಳು ನನ್ನ ತಮ್ಮ ನೀ ಕೇಳು ಈಗಿನ್ನು  

ನಮ್ಮ ಬೆನ್ನೀಗೂ ಬರುಬೇಡಾ ತಾನ|ತಂದಾನ| 

ನಮ್ಮ ಬೆನ್ನೀಗೂ ಬರುಬೇಡಾ ಈಗಿನ್ನು  

ಉಳಿಲಾರೆ ಕಾಲ ಕಳಿಲಾರೇ ತಾನ |ತಂದಾನ| 

ಕೇಳು ಕೇಳು ನನ್ನಣ್ಣ ನೀ ಕೇಳು ಈಗಿನ್ನು 

ನಿನ್ನಾ ಬೆನ್ನೀಗೂ ಬರುತೆಂಬಾ ತಾನ|ತಂದಾನ| 

ನಿನ್ನಾ ಬೆನ್ನೀಗೂ ಬರುತೆಂಬಾ ವೀಗಿನ್ನು

ನೀವೂ ಉಳುದಂಗೆ ಉಳುತೆಂಬಾ ತಾನ|ತಂದಾನ |

ನೀವೂ ಕಳುದಂಗೆ ಕಳಿತೆಂಬ ತಾನ|ತಂದಾನ |

ಕೇಳು ಕೇಳು ನನ್ನತಮ್ಮ ನೀ ಕೇಳು ಈಗಿನ್ನು 

ಇಲ್ಲೇ ನೀವೀಗ ಉಳಿರೆಂಬಾ ತಾನ|ತಂದಾನ | 

ಅಲ್ಲೇ ನೀವೀಗ ಉಳಿರೆಂಬವೀಗಿನ್ನು 

ನನ್ನ ಪಟ್ಟುವೊಂದೆ ಆಳುಕೊಂಡೆ ತಾನ|ತಂದಾನ | 

ನನ್ನ ಪಟ್ಟವೊಂದೆ ಆಳುಕೊಂಡೆವೀಗಿನ್ನು 

ಅರಮನೇಲಿ ನೀವು ಉಳಿರೆಂಬ ತಾನ |ತಂದಾನ | 

ಕೇಳು ಕೇಳು ನನ್ನಣ್ಣ ನೀ ಕೇಳು ನೀನೀಗ 

ಉಳಿಲಾರೆ ನಾನು ಆಳಲಾರೆ ತಾನ|ತಂದಾನ| 

ನಿನ್ನಾ ಪಟ್ಟವೊಂದೆ ಆಳುಲಾರೆ ಈಗಿನ್ನು 

ನಾವು ಅಲ್ಲೊಂದೆ ಉಳಿಲಾರೋ ತಾನ1ತಂದಾನ| 

ಏನೂ ಹೇಳಿದರೂ ಕೇಳುವುದಿಲ್ಲೆ ಈಗಿನ್ನು  

ನಿನ್ನಾ ಬೆನ್ನೀಗೂ ಬರುತೆಂಬ ತಾನ|ತಂದಾನ | 

ಕೇಳು ನನ್ನ ತಮ್ಮ ಎಂದಿದುನು ಈಗಿನ್ನು  

ರಾಮಸ್ವಾಮೀನೇ ನುಡಿದನ್ಯಾಲಾ ತಾನ|ತಂದಾನ | 

ರಾಮಸ್ವಾಮೀನೆ ನುಡಿದಿದುನೋ ಈಗಿನ್ನು  

ಕೇಳು ನನ್ನ ತಮ್ಮಾ ನೀವಾಳಾ ತಾನ1ತಂದಾನ| 

ಕೇಳೋ ನನ್ನ ತಮ್ಮಾ ನೀನಾಳವೀಗಿನ್ನು 

ಬಾರ್ತ ಸಸ್ತ್ರಾ ನೀವಾಲಾ ತಾನ|ತಂದಾನ| 

ನನ್ನಾ ಕಾಡೋವಿ ಕೂಡುತಿದ್ದೇವೀಗಿನ್ನು ( ಕಾಡೋವಿ= ಪಾದರಕ್ಷೆ)

ಪಟ್ಟೂದ ಮೇಲೊಂದೆ ಇಡುಬೇಕಾ ತಾನ|ತಂದಾನ | 

ಪಟ್ಟುದೂ ಮೇಲೊಂದೆ ಇಡುಬೇಕಾ ವೀಗಿನ್ನು 

ಅದನೂ ಪೂಜೊಂದೇ ಮಾಡುಕೊಂಡು ನೀವೀಗ 

ಅರಮನೆಯಲು ನೀವೇ ಉಳಿಬೇಕಾ ತಾನ|ತಂದಾನ| 

ನಾವೂ ಈಗೊಂದೆ ಹೋಗುತೀದೊವೀಗಿನ್ನು 

ಆರೂ ವರೈಷ ಅರುಣೀಕಾ ತಾನ|ತಂದಾನ | 

ಆರೂರುಷ ಅರಣ್ಣೇಲಿ ಕಳಿತೀದೋವೀಗಿನ್ನು 

ಆರಾರನ್ನೆರಡು ಅಜ್ಞಾಸ ಕಳಿತೀದಾ ತಾನ|ತಂದಾನ| 

ಆರಾರನ್ನೆರಡು ವರುಷಾನೆವೀಗಿನ್ನು 

ಕಳುದು ಮ್ಯಾಲೆ ನಾನೆ ಬರುತೀದಾ ತಾನ |ತಂದಾನ| 

ಕಳುದು ಮ್ಯಾಲೆ ನಾನೆ ಬರುತಿದೋ ನನ್ನ ತಮ್ಮ 

ಅಲ್ಲೊರಿಗೂ ನೀವೆ ಉಳಿಬೇಕಾ ತಾನ|ತಂದಾನ | 

ಲಾಗೂತಾನೀಗೂಲಿರುವಲ್ಲೋ ಈಗಿನ್ನು 

ಬಾರ್ತ ಸಸ್ತ್ರಾನೆ ಎಂಬುವುರಾ ತಾನ|ತಂದಾನ | 

ಬಾರ್ತ ಸಸ್ತ್ರಾನೆ ಎಂಬುವುರು ಈಗಿನ್ನು 

ಕೇಳೂಕೇಳಾಲ ನನ್ನಣ್ಣ ತಾನ|ತಂದಾನ| 

ಕೇಳೂಕೇಳಾಲ ನನ್ನಣ್ಣ ವೀಗಿನ್ನು

ರಾಮಾಸ್ವಾಮೀನೇ ನೀನಾಳ ತಾನ |ತಂದಾನ| 

ರಾಮಾಸ್ವಾಮೀನೇ ನೀನಾಳು ಈಗಿನ್ನು 

ಹನ್ನೆರಡು ವರುಷ ಕಳೆದುಮ್ಯಾಲೆ ತಾನ|ತಂದಾನ| 

ಹನ್ನೆರಡು ವರುಷ ಕಳೆದುಮ್ಯಾಲೆ ವೀಗಿನ್ನು 

ಒಂದೂ ದಿವುಸೊಂದೆಲಾಗುದುರಾ ತಾನ|ತಂದಾನ | 

ಒಂದೂ ದಿವುಸೊಂದೆ ಆಗಿದುರು ನನ್ನಣ

ನಾವಾದುರೀಗ ಉಳುವದಿಲ್ಲಾ ತಾನ |ತಂದಾನ | 

ನಾವಾದುರೀಗ ಉಳುವದಿಲ್ಲಾ ವೀಗಿನ್ನು  

ನಾವೂ ವೀಗೊಂದೆ ಮಾಡುತೀದಾ ತಾನ|ತಂದಾನ| 

ನಾವೂ ವೀಗೊಂದೆ ಮಾಡುತೀದೆ ವೀಗಿನ್ನು  

ಒಂದೂ ಹೊಂಡಾನೆ ಮಾಡುತೀದೋ ತಾನ|ತಂದಾನ| 

ಒಂದೂ ಹೊಂಡಾನೆ ಮಾಡುತೇದೋ ವೀಗಿನ್ನು 

ಹೊಂಡಾದಲ್ಲಿ ಕೊಂಡ ಮಾಡುತೀದೋ ತಾನ|ತಂದಾನ | 

ಹೊಂಡಾದಲೊಂದೆ ಕೊಂಡಮಾಡುತೀದುವೀಗಿನ್ನು 

ನಾವೂವೀಗೊಂದೆ ಇರುವರಾಲಾ ತಾನ |ತಂದಾನ | 

ನಾವೂವೀಗೊಂದೆ ಇರುವವರು ಈಗಿನ್ನು  

ಕೊಂಡದಲ್ಲಿ ನಾವೆ ಹಾರುತೀದೋ ತಾನ |ತಂದಾನ | 

ಅಂದೇ ತಾವಿಗೆ ನುಡುದಿದುರು ಈಗಿನ್ನು  

ಅಣ್ಣನು ಕೂಡೊಂದ ನೈಡಿದನ್ಯಾರಾ ತಾನ|ತಂದಾನ | 

ಬಾರ್ತ ಸಸ್ತ್ರಾನೆ ಎಡೂ ಜನೂ ಈಗಿನ್ನು  

ಹಿಂದೂ ತಿರುಗೊಂದೆ ಬಂದಿದುರಾ ತಾನ |ತಂದಾನ | 

ಹಿಂದೂ ತಿರುಗೊಂದೆ ಬಂದಿದುರುವೀಗಿನ್ನು

ರಾಮನು ಕಾಡೋವಿ ತಂದಿದುರಾ ತಾನ|ತಂದಾನ | 

ರಾಮನು ಕಾಡೋವಿ ತಂದಿದುರಾವೀಗಿನ್ನು 

ಪಟ್ಟುದ ಮ್ಯಾಲೊಂದುಇಟ್ಟುಕ್ಕೊಂಡಾ ತಾನ|ತಂದಾನ | 

ಪಟ್ಟುದ ಮ್ಯಾಲೊಂದು ಇಟ್ಟುಕೊಂಡಾರುವೀಗಿನ್ನು 

ಬಾರ್ತ ಸಸ್ತ್ರಾನೆ ಎಂಬುವುರಾ ತತಂದಾನ| 

ಬಾರ್ತ ಸಸ್ತ್ರಾನೆ ಎಂಬುವುರು ಈಗಿನ್ನು 

ಚಂದೂದಿಂದವರು ಇರುವರಾಲಾ ತಾನ |ತಂದಾನ | 

ಚಂದೂದಿಂದವರು ಉಳುವಾಂಗೋವೀಗಿನ್ನು 

ಸುಖದಲು ಕಾಲ ಕಳಿವಂಗಾ ತಾನ |ತಂದಾನ | 

ಸುಖದಲು ಕಾಲ ಕಳುವವರು ಈಗಿನ್ನು 

ಅರೈಮನೆಯಲ್ಲವುರೆ ಉಳುವವುರಾ ತಾನ|ತಂದಾನ | 

ಅರಮನೆಯಲ್ಲವುರು ಉಳುವವುರು ಈಗಿನ್ನು 

ಒಕ್ಕಲ ಮಕ್ಕೂಳು ಸಲಿಕೊಂಡಾ ತಾನ |ತಂದಾನ | 

ಒಕ್ಕಲು ಮಕ್ಕೂಳು ಸಲಿಕೊಂಡೈವೀಗಿನ್ನು 

ಆಳೂಮಕ್ಕಳು ಕಟ್ಟಿಕೊಂಡಾ ತಾನ |ತಂದಾನ | 

ಆಳೂ ಮಕ್ಕಳು ಕಟ್ಟಿಕೊಂಡು ವೀಗಿನ್ನು

ಚಂದುದಿಂದವುರೆ ಇರುತಾರೇ ತಾನ |ತಂದಾನ | 

ರಾಮಾಲಚ್ಚುಮಣ್ಣ ಎಂಬವುರು ಈಗಿನ್ನು  

ಅಣ್ಣಾತಮ್ಮೇಡು ಜನುರಾಲಾ ತಾನ|ತಂದಾನ |

ಅಣ್ಣತಮ್ಮೇಡು ಜನುರಾಲಾ ವೀಗಿನ್ನು 

ಮುಂದು ದಾರೀನೇ ಹೀಡಿದನ್ಯಾರಾ ತಾನ |ತಂದಾನ | 

ಮುಂದೂ ದಾರಿನೆ ಹೀಡಿದನ್ಯಾರಾ ವೀಗಿನ್ನು  

ಅನಸೂ ಕಾಡೊಂದೇ ಸೇರಯ್ರಾಲಾ ತಾನ|ತಂದಾನ | 

ನಾಡೂ ದಾರೀನೆ ಬಿಟ್ಟಿದುರು ಈಗಿನ್ನು  

ಕಾಡೂ ದಾರೀನೆ ಹಿಡಿದುದರಾ ತಾನ |ತಂದಾನ | 

ಕಾಡು ದಾರೀನೇ ಹಿಡಿದುದರು ಈಗಿನ್ನು 

ಗೋರೂ ಅಡವೀಯ ಒಳಗಾಲಾ ತಾನ |ತಂದಾನ | 

ಗೋರೂ ಅಡವೀಯ ಒಳಗಲಾವೀಗಿನ್ನು 

ನರಮನುಷರು ಹುಳುಲು ಅಲ್ಲಲ್ಲಿ ತಾನ |ತಂದಾನ | 

ನರಮನುಷರು ಹುಳುಲು ಅಲ್ಲಲ್ಲಿ ವೀಗಿನ್ನು  

ಗೋರೂ ಅಡವಿಯ ಒಳಗಾಲ ತಾನ|ತಂದಾನ | 

ಗೋರೂ ಅಡವೀಯ ಒಳಗಲಾವೀಗಿನ್ನು

ಅಲ್ಲಿಗೂ ತಾವೀಗೂ ಅದರಾಳ ತಾನ|ತಂದಾನ | 

ಅಲ್ಲೀಗೂ ತಾವೀಗೂ ಅದರಾಳುವೀಗಿನ್ನು 

ಅಣ್ಣಾತಮ್ಮೇಡು ಜನರಾಲಾ ತಾನ |ತಂದಾನ | 

ಅಣ್ಣಾತಮ್ಮೇಡು ಜನರಾಳು ವೀಗಿನ್ನು  

ರಾಮಾಲಚ್ಚುಮಣ್ಣ ಎಂಬುವರಾ ತಾನ |ತಂದಾನ | 

ರಾಮಾಲಚ್ಚುಮಣ್ಣ ಎಂಬವುರು ಈಗಿನ್ನು 

ಆರಣ್ಣಿದಲ್ಲೇ  ಉಳಿದರಾಲಾ ತತಂದಾನ| 

ಆರಣ್ಣೆದಲ್ಲೇ ಉಳಿದಿದುರು ಈಗಿನ್ನು  

ಅಲ್ಲೊಂದು ಮನೆಯ ಮಾಡ್ಯರಾಲಾ ತಾನ |ತಂದಾನ | 

ಅಲ್ಲೊಂದು ಮನೆಯ ಮಾಡಿದರುವೀಗಿನ್ನು 

ಸೊಪ್ಪನು ತುಂಡೀನೆ ಮುರುದರ್ಯಲಾ ತಾನ |ತಂದಾನ | 

ಸೊಪ್ಪನು ತುಂಡೀನ ಮುರಿದುದರು ಈಗಿನ್ನು  

ಕಡುವೋನೆಂದರು ಕತ್ತಿಯಿಲ್ಲಾ ತಾನ |ತಂದಾನ | 

ಕಡುವೋನೆಂದರು ಕತ್ತಿಯಿಲ್ಲಾವೀಗಿನ್ನು

ಕೊಯ್ಯುನಂದರು ಚೂರಿಯಿಲ್ಲ ತಾನ |ತಂದಾನ | 

ಕೊಯ್ಯೋನಂದರು ಚೂರಿಯಿಲ್ಲವೀಗಿನ್ನು 

ಕೈಯಲೂ ತಾವಿಗೋ ಮುರಿದುದರಾ ತಾನ|ತಂದಾನ | 

ಕೈಯಲ್ಲೂ ತಾವೀಗೋ ಮುರಿದುದರಾ ಈಗಿನ್ನು 

ಸೊಪ್ಪನು ತುಂಡೀನೌ ಮುರಿದುದರಾ ತಾನ|ತಂದಾನ |

ಸೊಪ್ಪನು ತುಂಡೀನೆ ಮುರಿದಿದರಾ ಈಗಿನ್ನು  

ಅಲ್ಲೊಂದು ಮನೆಯ ಮಾಡಿದುರಾ ತಾನ |ತಂದಾನ | 

ಅಲ್ಲೊಂದು ಮನೆಯ ಮಾಡಿದುರಾ ಈಗಿನ್ನು  

ಸೊಪ್ಪನು ತುಂಡೀಯ ಮನಿಯಾಲಾ ತಾನ |ತಂದಾನ | 

ಸೊಪ್ಪನು ತುಂಡೀಯ ಮನಿಯಾಲಾ ವೀಗಿನ್ನು 

ಅಲ್ಲೇ ತಾವೀಗೂ ಉಳುವವರಾ ತಾನ |ತಂದಾನ | 


ಕೃತಜ್ಞತೆಗಳು:


ಹಾಡಿದವರು: ತಿಮ್ಮಪ್ಪಗೊಂಡ 

ಸಂಪಾದಕರು: ಹಿ. ಚಿ. ಬೋರಲಿಂಗಯ್ಯ.  


ಪ್ರಕಾಶಕರು: ಪ್ರಸಾರಾಂಗ 

ಕನ್ನಡ ವಿಶ್ವವಿದ್ಯಾಲಯ,  ಹಂಪಿ.