ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಬುಧವಾರ, ಜೂನ್ 21, 2017

ಕನಕದಾಸ ವಿರಚಿತ ನಳಚರಿತ್ರೆ

ಕನಕದಾಸ ವಿರಚಿತ  

ನಳಚರಿತ್ರೆ


ಒಂದನೆಯ ಸಂಧಿ.
ಶ್ರೀರಮಣ ಸರಸಿಜದಳಾಕ್ಷ ಮು
ರಾರಿ ಸಚರಾಚರಭರಿತ ದುರಿ
ತಾರಿ ನಿತ್ಯಾನಂದ ನಿರ್ಜರನಿಕರದಾತಾರ
ವಾರಿಜಾಂಬಕ ವರಗುಣಾಶ್ರಯ
ಮಾರಪಿತ ವೇದಾಂತನುತ ಸಾ
ಕಾರ ಚೆನ್ನಿಗರಾಯ ಪಾಲಿಸು ಜಗಕೆ ಮಂಗಳವ ||೧||

ಕರಿವದನ ಹೇರಂಬ ಲಂಬೋ
ದರ ಗಣಾಧಿಪ ಮೋದಕಪ್ರಿಯ
ಪರಶು ಪಾಶಾಂಕುಶರಾಂಕಿತದಿಂದ ರಂಜಿಸುವ
ಸುರನರೋರಗನಮಿತ ಗೌರೀ
ವರಕುಮಾರಕ ವಿದ್ಯೆವಾರಿಧಿ
ವರದ ಗಣಪತಿ ಪಾಲಿಸೆನ್ನಯ ಮತಿಗೆ ಮಂಗಳವ ||೪||

ನಾರಿ ನಳಿನದಳಾಕ್ಷಿ ವರ ಜಂ
ಭಾರಿನುತೆ ಚತುರಾನನಪ್ರಿಯೆ
ಭೂರಿಶುಭಗುಣಭರಿತೆ ಭಕ್ತಾಶ್ರಿತಜನಾಧಾರೆ
ನೀರೆ ನಿಗಮವಿಚಾರೆ ಘನಶೃಂ
ಗಾರೆ ಭಕ್ತರಿಗೊರವ ಕೊಡುವ ಉ
ದಾರೆ ಶಾರದೆ ನಲಿದೊಲಿದು ನೆಲಸೆನ್ನ ಜಿಹ್ವೆಯಲಿ ||೫||

ರಾಯರೊಳಗ್ಗಳೆಯನಾಕೌಂ
ತೇಯನಿಗೆ ರೋಮಶಮಹಾಮುನಿ
ರಾಯ ವಿಸ್ತರಿಸಿದನು ನಳಭೂವರನ ಚರಿತೆಯನು
ಶ್ರೀಯರಸ ವರಪುರದ ಚೆನ್ನಿಗ
ರಾಯನಂಕಿತಮಾಗಿ ಪೇಳುವೆ
ಪ್ರೀಯದಿಂದಾಲಿಸುವ ಸುಜನರಿಗೀ ಮಹಾಕಥೆಯ ||೬||

ಜನಪ ಕುರುಭೂಪಾಲನೊಳು ಜೂ
ಜಿನಲಿ ರಾಜ್ಯವ ಸೋಯು ಯಮನಂ
ದನನು ತನ್ನನುಜಾತರೊಡನೆಯೆ ಸತ್ಯವನು ಬಿಡದೆ
ವನಿತೆ ಧೌಮ್ಯಮುನೀಂದ್ರ ಮಂತ್ರೀ
ಜನಸಹಿತ ನಡೆತಂದು ಕಾಮ್ಯಕ
ವನದೊಳಗೆ ಸಂಚರಿಸುತಿರ್ದನು ತೀರ್ಥಯಾತ್ರೆಯಲಿ ||೮||

ಧರಣಿಪತಿ ಚಿಂತಿಸುತ ಹಲುಬಿದ
ನರನ ಹದನೇನೆಂದು ತಪದಲಿ
ಮರೆದು ಕಳೆದನೊ ನಮ್ಮನಿಬರನೆನುತಲಿರಲಂದು
ಸರಪ ಕಳುಹಿದ ರೋಮಶನು ಮುನಿ
ವರನು  ಗಡಣದೊಳೆಯ್ದಿ ರವಿಭಾ
ಸುರಸುತೇಜದೊಳಂದು ಕಾಮ್ಯಕ ವನಕೆ ನಡೆತಂದ ||೯||

ಅರಸನನುಜರು ಸಹಿತ ಮುನಿಮು
ಖ್ಯರನು ಕಂಡಿದಿರೆದ್ದು ಚರಣದೊ
ಳೆರಗಿ ಬಿಜಯಂಗೈಸಿ ತಂದನು ತಳಿರ ಮಂಟಪಕೆ
ವರಮುನೀಂದ್ರರಿಗರ್ಘ್ಯಪಾದ್ಯೋ
ತ್ಕರದೊಳುಪಚರಿಸುತ್ತ ದರ್ಭಾ
ಸ್ತರಣದಲಿ ಕುಳ್ಳಿರಿಸಿದನು ಭಯಭರಿತಭಕ್ತಿಯಲಿ ||೧೦||

ಧರಣಿಪತಿ ಸುಕ್ಷೇಮವೇ ನಿಜ
ತರುಣಿ ನಿನ್ನನುಜಾತತನಯರು
ವರಸಚಿವ ಸಾಮಂತ ಧೌಮ್ಯಮುನೀಂದ್ರ ಮಂತ್ರಿಗಳು
ಪರಿಣತರೆ ಪೇಳೆನಲು ನಿಮ್ಮಯ
ಪರಮ ಕರುಣಾಮೃತವೆ ನಮ್ಮನು
ಹೊರೆಯುತಿರೆ ಸುಕ್ಷೇಮ ಬೇರಿಲ್ಲೆಂದನಾ ನೃಪತಿ  ||೧೩||

ಧಾರಿಣಿಯ ನೆರೆ ಸೋತು ಅನುಜರು
ವಾರಿಜಾನನೆ ಸಹಿತ ಬಂದೀ
ಘೋರಕಾನನದೊಳಗೆ ಗಿರಿಗಹ್ವರದ ಮಧ್ಯದಲಿ
ಸೇರಿ ಹತಸುಖರಾಗಿ ಬಳಲಿದ
ರಾರು ಧರಿಯೊಳಗೆನ್ನವೊಲು ಭವ
ದೂರ ಮುನಿಕುಲತಿಲಕ ಹೇಳೆಂದರಸ ಬಿಸುಸುಯ್ದ ||೧೪||

ಎಲೆ ಮಹೀಪತಿ ನೀನಿನಿತು ಉ
ಮ್ಮಳಿಸಲೇಕರಸುಗಳು ಪೂರ್ವದ
ನಳ ಹರಿಶ್ಚಂದ್ರಾದಿ ರಾಘವನೃಪರು ಹಳುವದಲಿ
ಲಲನೆಯರ ತಾವಗಲಿ ಕಷ್ಟವ
ಬಳಸಿದರು ಅವರಂತೆ ನಿನಗುಪ
ಟಳಗಳುಂಟೆ ಬರಿದೆ ಮನನೋಯದಿರು  ನನೀನೆಂದ ||೧೫||

ಪರಮ ಋಷಿಗಳ ನೆರವಿಯೇ ಸಭೆ
ಹರಿಯ ಕಾರುಣ್ಯಾಂಬುಧಿಯೆ ಸಿರಿ
ನರವೃಕೋದರ ಮಾದ್ರಿತನಯರು ನಿನಗೆ ಬಾಹುಬಲ
ತರುಣಿಯೇ ಭೋಗೈಕಸಂಪ
ತ್ತುರುತರದ ವನರಾಜ್ಯ ನಿನಗಿಂ
ತಿರಲು ಸರಿಯಾರರಸ ಚಿಂತಿಸಲೇಕೆ ನೀನೆಂದ ||೧೬||

ಆದಡೆಲೆ ಮುನಿನಾಥ ನಳನೃಪ
ಮೇದಿನಿಯನುಳಿದವನಿಯಲಿ ತ
ಳೋದರಿಯನೆಂತಗಲಿದನು ತಾನಾರ ದೆಸೆಯಿಂದ
ಸಾಧಿಸಿದನವನಿಯನು ಧರೆಯೆಂ
ತಾದುದಾ ನಳನೃಪಗೆ ನೀವಿದ
ನಾದರಿಸಿ ಪೇಳೆನಲು ನಗುತಿಂತೆಂದನಾ ಮುನಿಪ ||೧೭||

ವಸುಧೆಪತಿ ಕೇಳೀ ಚರಿತ್ರೆಯ
ನಿಷಧವೆಂತೆಂಬಾ ಮಹಾಪುರ
ವೆಸೆದುದಗಣಿತ ಗೋಪುರ ಪ್ರಾಕಾರಶಿಖರದಲಿ
ಮಿಸುನಿ ರತ್ನಪ್ರಭೆಗಳಲಿ ರಂ
ಜಿಸುವ ದೇವಾಲಯಗಳಿರ್ದುದು
ವಸುಧೆಗಚ್ಚರಿಯೆನಿಸಿತಾ ಪುರವರಸ ಕೇಳೆಂದ ||೧೯||

ಭೂರಮಣ ಕೇಳಾ ಪುರಾಧಿಪ
ವೀರಸೇನನೃಪಾಲ ರಿಪುಸಂ
ಹಾರನಾತನ ತನಯ ನಳನೃಪನೆಂಬುದಭಿಧಾನ
ಭೂರಿವಿಕ್ರಮ ಪರಮಧರ್ಮವಿ
ಚಾರ ಶಶಿಕುಲಮೌಳಿ ಘನಗಂ
ಭೀರ ಪಾಲಿಸುತಿರ್ದ ಸಪ್ತದ್ವೀಪದವನಿಪರರ ||೨೫||

ಭೂಮಿಪತಿ ಕೇಳಿತ್ತಲುತ್ತರ
ಭೂಮಿಯಲಿ ಪಜ್ಜಳಿಸುತಿಹ ಸು
ತ್ರಾಮಪುರದಂತೆಸೆದುದಲ್ಲಿ ವಿದರ್ಭನಗರವದು
ರಾಮಣೀಯಕರಚನೆಯಲಿ ನವ
ಹೇಮಖಚಿತ ಸುರತ್ನಸೌಧ
ಸ್ತೋಮಗಳ ಸಾಲಿನಲಿ ರಂಜಿಸುತಿರ್ದುದಾ ನಗರ ||೨೭||

ಅಲ್ಲಿಗಧಿಪತಿ ಭೀಮನೃಪ ಗುಣ
ದಲ್ಲಿ ನಯದಲಿ ವೀರ್ಯವಿತರಣ
ದಲ್ಲಿ ಚಾತುರ್ಯದಲಿ ಸೌಭಾಗ್ಯದಲಿ ಧೈರ್ಯದಲಿ
ಬಲ್ಲಿದನು ತಾನಾಗಿ ನಿಜಸುತ
ರಿಲ್ಲವೆಂದುಮ್ಮಳಿಸುತಿರೆ ಮನ
ದಲ್ಲಿಗಾಕ್ಷಣ ಬಂದನಾ ದಮನಾಖ್ಯಮುನಿವರನು ||೨೮||

ಬಂದ ಮುನಿಗವನಿಪತಿ ವಂದಿಸಿ
ನಿಂದು ಕರಗಳ ಮುಗಿದು ವಿನಯದೊ
ಳೆಂದ ಸುತಸಂತಾನವಿಲ್ಲದ ಸಿರಿಯದೇಕೆಂದು
ನೊಂದನುಡಿಯಲು ಸುತರ ಪಡೆಯದ
ತಂದೆಗಿದು ಸಂತಾಪವಲ್ಲವೆ
ಎಂದು ಮುನಿ ಕರುಣದಲಿ ಸಂತೈಸಿದನು ಜನಪತಿಯ ||೨೯||

ಯೋಗದೃಷ್ಟಿಯೊಳರಿದು ಮುನಿವರ
ನಾಗ ನೃಪನೊಡನೆಂದ ಪುತ್ರನ
ಯಾಗವನು ಮಾಡರಸ ತಪ್ಪದು ಪುತ್ರಲಾಭವೆನೆ
ಆ ಗರುವ ಮುನಿಮಂತ್ರದಿಂದ ಸ
ರಾಗದಲಿ ಶುಭದಿನ ಸುಲಗ್ನದಿ
ಯಾಗವನು ಪೂರೈಸಿದನು ಸುರನರರು ತಣಿವಂತೆ||೩೦||

ಅರಸ ಕೇಳಾ ಯಾಗಸಮನಂ
ತರದೊಳಾ ಮುನಿಮುಖ್ಯರನು ಸ
ತ್ಕರಿಸಿ ಕಳುಹಿದನವರವರನುಚಿತೋಪಚಾರದಲಿ
ತರುಣಿಗಾದುದು ಗರ್ಭ ಮಂಗಳ
ಕರ ಸುಲಗ್ನ ಸುತಾರೆಯಲಿ ನೃಪ
ನರಸಿ ಪಡೆದಳು ತಷನುಜೆಯನು ಲೋಕೈಕಸುಂದರಿಯ ||೩೧||

ಅಮರದುಂದುಭಿ ಮೊಳಗಲಿಳೆ ಸಂ
ಭ್ರಮಿಸೆ ಪುರಜನ ನಲಿಯೆ ನೃಪನಾ
ಸಮಯದಲಿ ದಮನಾಖ್ಯಮುನಿಗಭಿನಮಿಸಿ ನಿಜಸುತೆಗೆ
ವಿಮಲನಾಮವ ಪಾಲಿಸೆನಲಾ
ಕಮಲಮುಖಿ ದಮಯಂತಿಯೆಂದು
ತ್ತಮದ ಪೆಸರೆಂದರುಹಿ ಮುನಿ ಹೊರವಂಟನಾಶ್ರಮಕೆ ||೩೨||

ನಿರಿಗುರುಳ ಪವಳಾಧರದ ಉರು
ತರದ ತೋಳ್ಗಳ ಕಂಬುಕಂಠದ
ತರಳನಯನದ ಸಂಪಗೆಯ ನಾಸಿಕದ ಪೆರೆನೊಸಲ
ಹರಿಯ ಮಧ್ಯದ ಹಂಸಗಮನದ
ಗುರುಕುಚದ ಕರಪಲ್ಲವದ ಸರ
ಸಿರುಹಮುಖಿ ನಲಿದಾಡುತ್ತಿದ್ದಳು ರಾಜಭವನದಲಿ ||೩೩||

ಗುಣದೊಳಗೆ ಶೀಲದಲಿ ಮಾತಿನ
ಭಣಿತಿಯಲಿ ಗಾಂಭೀರ್ಯದಲಿ ವಿತ
ರಣದಲನುಪಮವಿದ್ಯೆಯಲಿ ಗುರು ದೈವವಭಕ್ತಿಯಲಿ
ಪ್ರಣಿತಿಸಲು ಶರ್ವಾಣಿ ರತಿಯರಿ
ಗೆಣೆಯೆನಿಪ ಸುಂದರಿಗೆ ಸರಿಯೆ ಲೋಕದೊಳೆಂದನಾ ಮುನಿಪ ||೩೪||

ಕೇಳು ಪಾಂಡವತನಯ ಭೀಮನೃ
ಪಾಲನೋಲಗದಲ್ಲಿ ಧರಣೀ
ಪಾಲಕರರ ಚರಿತಪ್ರಸಂಗದೊಳಿರಲು ನಳನೃಪನ
ಶೀಲವನು ಸೌಂದರ್ಯವಿಭವ ವಿ
ಶಾಲಮತಿ ಲಾವಣ್ಯರೂಪು ಗು
ಣಾಳಿಗಳ ವಿಸ್ತರಿಸಿ ಕೊಂಡಾಡಿದರು ಕವಿಜನರು ||೩೫||

ವನಜಮುಖಯಾ ವಾರ್ತೆಯೆಲ್ಲವ
ಮನವೊಲಿದು ಕೇಳಿದಳು ಹಿಗ್ಗುತ
ನೆನೆದುದಂತಃಕರಣ ಹೆಚ್ಚಿದ ಚಿತ್ತವೃತ್ತಿಯಲಿ
ನೆನೆದು ಬರೆದಳು ನಳನ ರೂಪವ
ನನುನಯದಿ ಚಿತ್ರದಲಿ ಮಿಗೆ ಸಂ
ಜನಿಸಿತವನಲಿ ಮೋಹವೆಲೆ ಧರಣೀಶ ಕೇಳೆಂದ ||೩೬||

ಆಗ ಮದನನು ತನ್ನ ಬಲವನು
ಬೇಗದಲಿ ಜೋಡಿಸಲು ಖೋಯೆಂ
ದಾಗಲರಸಂಚೆಗಳು ಅಳಿವಿಂಡುಗಳು ನಲಿದಾಡೆ
ಕೋಗಿಲೆಗಳಾರ್ಭಟಿಸೆ ಗಿಳಗಳು
ಕೂಗೆ ನವಿಲುಗಳಾಡೆ ಮನ್ಮಥ
ನಾಗ  ಪೂಗಣೆಗಳನು ಸಂಧಿಸಿಯೆಚ್ಚನಂಗನೆಯ ||೩೭||

ಉಣ್ಣಳನ್ನವ ಕಾಮಗತ್ತಲೆ
ಕಣ್ಣಿನಲಿ ಪೆರ್ಚಿದುದು ಸತಿಯರ
ಮನ್ನಣೆಗೆ ಮೈಗೊಡಳು ಬಲುಬೇಸರದಿ ಬಳಲುವಳು
ಬಣ್ಣಿಸಿಯೆ ಮಾತಾಡಲೊಲ್ಲಳು
ಬಣ್ಣಗುಂದಿದ ದೇಹದೊಳಗೆಳ
ವೆಣ್ಣುಗಳ ಸೌಖ್ಯವನು ತೊರೆದಳು ಮದನನೆಸುಗೆಯಲಿ ||೩೮||

ಈ ಪರಿಯೊಳಾ ಕಾಮಿನಿಗೆ ಶೈ
ತ್ಯೋಪಚಾರವ ಮಾಡಿದರು ಪರಿ
ತಾಪ ವೆಗ್ಗಳಿಸಿದುದು ಇದಕಿನ್ನೇನು ಹದನೆನುತ
ಚಾಪಳೆಯರಾಲೋಚಿಸುತ ಕಡು
ಪಾಪಿಯಂಗಜನೆಂದು ಬಯ್ಯುತ
ತೋಪಿನೆಡೆಗಿರದೈದಿ ತಂದರು ಸತಿಯ ಸಂತೈಸಿ ||೪೧||

ಎರಡನೆಯ ಸಂಧಿ
ಕೇಳು ಕುಂತೀತನಯ ಭೀಮನೃ
ಪಾಲತನುಜೆಗೆ ವಿರಹ ಬಲಿದು  ವಿ
ಶಾಲವಾಗಿರಲಿತ್ತ ಕೇಳೈ ನಿಷಧನಗರಿಯನು
ಪಾಲಿಸುವ ನಳಚಕ್ರವರ್ತಿಯು
ಮೇಲೆನಿಪ ಸಭೆಯಲ್ಲಿ ರತ್ನದ
ಸಾಲುಹೊಳಹಿನ ಸಿಂಹಪೀಠದೊಳೆಸೆದು ಕುಳ್ಳಿರ್ದ ||೧||

ಆ ಸಮಯದಲಿ ಬಂದನಲ್ಲಿಗೆ
ದೇಶಯಾತ್ರಿಕ ಭೂಸುರನೊಳವ
ನೀಶ ಕೇಳಿದನಿಳೆಯೊಳೇನುಂಟತಿ ವಿಚಿತ್ರವೆನೆ
ಭೂಸುರೋತ್ತಮನೆಂದನೆಲೆ ಧರ
ಣೀಶ ಕೇಳು ವಿದರ್ಭನಗರದೊ
ಳೇಸು ಪುಣ್ಯೋದಯದಿ ಪಡೆದನೊ ಭೀಮನೃಪ ಸುತೆಯ ||೩||

ಅವಳ ರೂಪಗುಣಾತಿಶಯಗಳ
ನೆವಗೆ ಬಣ್ಣಿಸಲಳವೆ ಕೇಳಾ
ಯುವತಿ ಲೋಕದ ಸತಿಯ ಬಗೆಯಂತಲ್ಲ ಭಾವಿಸಲು
ಪ್ರವಿಮಲಾಕಾರದಲಿ ಮೃದುತರ
ಸವಿನುಡಿಯ ಸಂಭಾಷಣೆಗಳಲಿ
ಭುವನದೊಳು ನಾಕಾಣೆ ದಮಯಂತಿಗೆ ಸಮಾನರನು ||೪||

ಮುರಹರನ ನಿಜಸೊಸೆಯ ರೂಪಂ
ತಿರಲಿ ಚಂದ್ರನ ಮಗಳ ಚೆಲುವಂ
ತಿರಲಿ ಮೈನಾಕನ ಸಹೋದರಿಯಂದವಂತಿರಲಿ
ಶರಧಿತನುಜೆಯ ಸೌಂದರಿಯವನು
ಮರಸಿತೆಂಬುದು ಲೋಕದೊಳಗಾ
ಸರಸಿಜಾಕ್ಷಿಯ ಬಗೆಗೆ ಸರಿಯಿಲ್ಲರಸ ಕೇಳೆಂದ||೫||

ಹೇಳುತಿರೆ ನುಡಿನುಡಿಗೆ ಮೆಚ್ಚುತ
ಕೇಳಿ ತಲೆದೂಗಿದನು ನೈಷದ
ನಾಲಿಗಳಿಗೆ ಸರೋಜಮುಖಿ ಗೋಚರಿಸಿದಂತಾಗೆ
ಬಾಲಿಕೆಯ ಮೋಹಿಸಿದ ಪುಷ್ಷಶ
ರಾಳಿಯಲಿ ಮನನೊಂದು ಶಿವ ಶಿವ
ಲೋಲಲೋಚನೆಯೆಂತು ತನಗಹಳೆನುತ ಚಿಂತಿಸಿದ ||೭||

ವನಿತೆ ಗುಣಗಳೊಳೊಂದನೊಂದನು
ಮನದೊಳಗೆ ಸವಿಮಾಡಿ ತರುಣಿಯ
ನೆನೆದು ಹೊಂಪುಳಿವೋಗಿ ವಿರಹದಿ ಮದನಗೀಡಾಗಿ
ಘನವಿರಹದಲಿ ಕಾಯಕುಂದಿದ
ಜನಪ ನಳನಿರೆ ಬೇಂಟೆಕಾರರ
ಜನನಿವಹದಿಂ ಬಂದರಾ ಸಮಯದಲಿ ವನಚರರು ||೮||

ಅರಸ ಕೇಳ್ ಶಶಿಕುಲಶಿರೋಮಣಿ
ಧರಿಸಿದನು ನವರತುನಮಯದಾ
ಭರಣಗಳ ದಿವ್ಯಾಂಬರಾದಿ ಸುಗಂಧಲೇಪದಲಿ
ತರಿಸಿಯೇರಿದ ವಾಯುವೇಗದ
ತುರಗವನು ಸಂದಣಿಸಿ ಮೋಹರ
ತೆರಳಿತಗಣಿತ ವಾದ್ಯದಲಿ ನೆಲ ಬಿರಿಯಲೈತಂದ ||೧೧||

ನಿಲಿಸಿ ಬೇಂಟೆಯನಲ್ಲಿ ಬಳಲಿದ
ಬಲಸಮೇತದಿ ಬಂದು ತತ್ಪುರ
ವಳಯದುದ್ಯಾನವನು ಹೊಕ್ಕನು ಬಲಿದ ವಿರಹದಲಿ
ನಲವು ಹಿಂಗಿದ ಮನದ ದುಗುಡದೊ
ಳಿಳಿದು ತೊಳೆದನು ಜಾನುಜಂಘೆಯ
ಕೊಳದಿ ಪರಿಹೃತನಾಗಿ ಸಂಚರಿಸಿದನು ವನದೊಳಗೆ ||೧೪||

ಆ ಕೊಳದ ತೀರದಲಿ ತರುಗಳ
ನೇಕವದರೊಳಗೊಂದು ಠಾವಿನೊ
ಳೇಕವೃಕ್ಷದ ನೆಳಲಿನಲಿ ನವಕುಸುಮದಿಕ್ಕೆಯಲಿ
ಆ ಕಮಲಜನತುರಗ ನಿದ್ರಾ
ವ್ಯಾಕುಲದಿ ಮಲಗಿರಲು ಡ ಶು
ಭಾಕರೋನ್ನತ ಶುಭ್ರತೇಜದ ರಾಜಹಂಸವನು ||೧೫||

ಅರುಣಮಯದಾನನದ ಪದಯುಗ
ಗರಿಗಳುನ್ನತಧವಳ ದೇಹದ
ಪರಮತೇಜದೊಳೆಸೆವ ಹಂಸೆಯ ಕಂಡು ಬೆರಗಾಗಿ
ಹರಹರಾ ಇದರಾಯತವ ಮುರ
ಹರನು ತಾನೇ ಬಲ್ಲನೆನುತ
ಕ್ಕರದಿ ಮೆಲ್ಲನೆ ಕರವ ನೀಡುತ ಪಿಡಿದ ಹಂಸವನು ||೧೬||

ಒದರಿ ಕುಣಿಯಲು ಹಸ್ತದೊಳಗದ
ಕದಲದಂತಿರೆ ಪಿಡಿಯಲರಸನ
ವದನಕಮಲವ ನೋಡಿ ಹೆದರಿತು ಬಹಳ ಭೀತಿಯಲಿ
ಹೃದಯ ಕರಗುವ ಮಾತನೆಂದುದು
ಮದಕರಿಗೆ ನೊರಜಂತರವೆ ಕೈ  
ಸದರದವರನು ಕೊಲುವುದೇನರಿದೆಂದುದಾ ಪಕ್ಷಿ ||೧೭||

ಕರಿಗಳನು ಮುರಿದಿಡುವ ಸಿಂಹಕೆ
ನರಿಗಳಿದಿರೇ ತಾನು ನಿನಗಂ
ತರವೆ ಸಾಕಂತಿರಲಿ ಕಂಡವರೆಲ್ಲ ಕಡುನಗರೆ
ಅರಿಭಯಂಕರ ಶತ್ರುಗಳ ಸಂ
ಹರಿಸುವುದು ನೃಪನೀತಿ ನಿನಗಿದು
ತರವೆ ಬಿಡು ಪರಹಿಂಸೆ ದೋಷವಿದೆಂದುದಾ ಪಕ್ಷಿ ||೧೮||

ಬಡಬಗೌತಣವಿಕ್ಕುವಡೆಯೊ
ಕ್ಕುಡಿತೆ ಹಾಲೇ ಮಂಜು ಸುರಿಯ
ಲ್ಕೊಡನೆ ಕೆರೆ ತುಂಬುವುದೆ ನೃಪ ನೀನೆನ್ನ ಭುಂಜಿಸಲು
ಒಡಲಿಗಾಪ್ಯಾಯನವೆ ಕೇಳೆಲೆ
ಪೊಡವಿಪತಿ ಬಿಡು ನನ್ನ ಮನೆಯಲಿ
ಮಡದಿ ಸುತರುಮ್ಮಳವ ನೋಡೆಂದೊರಲಿತಾ ಪಕ್ಷಿ ||೧೯||

ಮರನ ಹುತ್ತವನಚೇರಿದರ ಸಂ
ಗರದಿ ದೈನ್ಯಂಬಡುವರಾಯುಧ
ಮುರಿದ ಬರಿಗೈಯವರ ನೀರೊಳು ಹೊಕ್ಕು ನಿಂದವರ
ತರುಣಿಯರ ಮರೆಗೊಂಡವರ ನಿ
ಬ್ಬರದಿ ಮುರಿದೋಡುವರ ನಿದ್ರಾ
ಭರದೊಳಿರ್ದರ ಕೊಲುವುದುಚಿತವೆಯೆಂದುದಾ ಪಕ್ಷಿ ||೨೦||

ನುಡಿಗೆ ನಾಚಿದನರಸ ಹಂಸದ
ನಡವಳಿಗೆ ಮೆಚ್ಚಿದನು ನಿನ್ನನು
ಹಿಡಿದು ಕೊಲ್ಲುವವನಲ್ಲ ನಿನ್ನಾಲಯಕೆ ಹೋಗೆಂದು
ಬಿಡಲು ರೆಕ್ಕೆಯ ಕೊಡಹಿ ಹಾರಿತು
ವೊಡನೆ ಮರಳಿತು ಧರೆಗೆ ರಾಯನ
ಕಡೆಗೆ ಮಂಡಿಸಿ ಕುಳಿತು ನುಡಿದುದು ನೃಪಗೆ ವಿನಯದಲಿ ||೨೧||

ಭೂರಮಣ ಕೇಳಸುವ ಕಾಯ್ದುಪ
ಕಾರಮಾಡಿದೆ ನೀನು ನಿನಗುಪ
ಕಾರಮಾಡುವೆನೆನಲದೇನೆಂದರಸ ಬೆಸಗೊಂಡ
ಸಾರಹೃದಯನೆ ಚಿತ್ತವಿಸು ವಿ
ಸ್ತಾರದಿಂದರುಹುವೆನು ಭುವನದೊ
ಳಾರಿಗುಂಟೇ ಪರಮಸುಕೃತಗಳೆಂದುದಾ ಪಕ್ಷಿ ||೨೨||

ಅರಸ ಕೇಳತಿದೂರದಲಿ ಸುರ
ಪುರವ ಪೋಲ್ವ ವಿದರ್ಭಪಟ್ಟಣ
ದರಸು ಭೀಮನೃಪಾಲನಾತನ ತನುಜೆ ದಮಯಂತಿ
ಪರಮ ಪುಣ್ಯಾಂಗನೆ ಮಹಾಸುಂ
ದರಿ ನಿಪುಣೆ ಗಜಗಮನೆ ನಯಗುಣ
ಭರಿತೆ ಸೊಬಗಿನ ಸೋನೆ ತಾನಿಹಳಲ್ಲಿ ವನಜಾಕ್ಷಿ ||೨೩||

ಪೊಗಳಲಳವೇ ಸತಿಯ ಚೆಲುವಿನ
ಬಗೆಯ ಭಾವಿಸಿ ನೋಡಲತಿ ಸೋ
ಜಿಗವು ನೆರೆ ದಮಯಂತಿ ಯೌವನರೂಪರೇಖೆಯಲಿ
ನಗೆಮೊಗದ ಪೊಂಬೊಗರ ಮಿಂಚಿನ
ಬೊಗಸೆಗಂಗಳ ಸೆಳೆನಡುವ ಸೆ
ಳ್ಳುಗುರ ಬೆಡಗಿನ ಕಾಂತೆ ರಂಜಿಸುತಿರ್ಪಳಾ ಪುರದಿ ||೨೪||

ಕ್ಷಿತಿಯೊಳಿಹ ಸತಿಯರಲಿಯಮರಾ
ವತಿಯೊಳಿಹ ಪೆಣ್ಗಳಲಿ ಮೇಣಾ
ವತಳದಲ್ಲಿಹ ನಾರಿಯರಲೀಕ್ಷಿಸಿದಡಾ ಸತಿಗೆ
ಪ್ರತಿಯ ಕಾಣೆನು ರೂಪಿನಲಿ ನೀ
ನತಿ ಚೆಲುವ ನಿನಗವಳು ಪಾಸಟಿ
ಸತಿಗೆ ನೀನೇ ರಮಣನಲ್ಲದೆ ಕಾಣೆನಿತರರನು ||೨೫||

ಅವಳು ನಿನಗೊಲಿವಂತೆ ಮಾಡುವೆ
ಶಿವನ ಕೃಪೆ ನಿನಗುಂಟು ನಮ್ಮಲಿ
ಸವನುಡಿಯಿಲ್ಲರಸ ನಂಬುವುದೆನ್ನ ನೀನೆನಲು
ಅವನಿಪತಿ ನಸುನಗುತ ಹಂಸೆಯ
ಸವಿನುಡಿಗೆ ಮನಸೋತು ವಿರಹದ
ತವಕದಲಿ ಹೇವರಿಸಿ ನುಡಿದನು ನೃಪತಿ ಖಗಪತಿಗೆ ||೨೬||

ಮನಸಿಜನ ಶರಹತಿಗೆ  ನೊಂದದೆನು
ತನುವ ಸೈರಿಸಲಾರೆನೆನಗಾ
ವನಿತೆಯನು ಸೇರಿಸುತ ಸಲಹೆನ್ನಸುವ ಕರುಣದಲಿ
ಎನಗೆ ನೀನೇ ಪರಮಬಾಂಧವ
ಮನಕೆ ಹರುಷವ ಮಾಡು ನೀನೀ
ಬನಕೆ ಬಹ ಪರಿಯಂತ ತಾನಿಲ್ಲಿಹೆನು ಹೋಗೆಂದ ||೨೭||

ತಳಿತ ಮೇಘದಿ ಹೊಳೆವ ಮಿಂಚಿನ
ಬಳಗವೆನೆ ಹಂಸಗಳು ನಭದಿಂ
ದಿಳೆಗಿಳಿದು ಸತಿಯರ ಸಭಾಮಂಡಲದಿ ಕುಳ್ಳಿರಲು
ನಳಿನಲೋಚನೆ ಕಂಡು ಪಕ್ಷಿಯ
ಲಲನೆಯರ ಮೊಗ ನೋಡಿ ಹಂಸದ
ಚೆಲುವ ಬಣ್ಣಿಸಿ ಹಿ ಡಿಯಬೇಕೆಂದೆನುತ ಗಮಿಸಿದಳು ||೩೨||

ಎಲೆ ಸರೋರುಹಗಂಧಿ ನೀನೆನ
ಗೊಲಿದು ಮನದಲಿ ಹಿಡಿವೆನೆಂಬೀ
ಛಲವಿದೇತಕೆ ಮಾಣು ನಾವಂಬರದ ಪಕ್ಷಿಗಳು
ನಿಲುಕುವವರಾವಲ್ಲ ಬರಿದೇ
ಬಳಲದಿರು ತಾ ಬಂದ ಪರಿಯನು
ತಿಳುಹುವೆನು ನಿನಗೆಲ್ಲವನು ಕೇಳೆಂದುದಾಪಕ್ಷಿ ||೩೫||

ನಳಿನಮುಖಿ ನಳಚಕ್ರವರ್ತಿಯ
ಬಳಿಯ ವಾಹನವಾಗಿ ತಾನಿಹೆ
ನೊಲಿದು ಸಲಹುವನೆನ್ನ ಪರಮಪ್ರೀತಿಯಲಿ
ಇಳೆಗೆ ನಳಕೂಬರ ಜಯಂತರ
ಚೆಲುವ ಮದನನ ರೂಪರೇಖೆಯ
ಹಳಿವುದಾ ನಳನೃಪನ ನಿಜಸೌಂದರ್ಯದಾಟೋಪ ||೩೬||

ನಿನ್ನ ರೂಪಿಗೆ ಸಲುವುದೌ ನಳ
ನುನ್ನತದ ಸೌಂದರ್ಯ ಜಗದೊಳು
ಗಿನ್ನು ನಾ ಸರಿಗಾಣೆ ನಿಮಗೀರ್ವರಿಗೆ ಸಮನಹುದು
ಎನ್ನಲಾ ನುಡಿಗೇಳಿ ಹಂಸೆಗೆ
ತನ್ನ ಶಿರವನು ಬಾಗಿ  ಗುಣಸಂ
ಪನ್ನೆ ನುಡಿದಳು ನಾಚಿ ನಸುನಗೆಯಿಂದ ವಿನಯದಲಿ ||೩೭||

ಪರಮಗುಣನಿಧಿ ಪಕ್ಷಿ ಕೇಳ್ ಬಾ
ಹಿರನು ಪಾತಕಿ ಮದನನೆಲೆ ನಿ
ಷ್ಠುರದೊಳೆಸೆಯಲು ಪುಷ್ಪಬಾಣದಿ ನೊಂದುದೆನ್ನೊಡಲು
ಕರುಣರಸಧಾರೆಯಲಿ ತಾಪವ
ಪರಿಹರಿಸಬೇಕೆಂದು ನೀನಾ
ಧರಣಿಪತಿ ನಳನೃಪಗೆ ಬಿನ್ನೈಸೆಂದಳಿಂದುಮುಖಿ ||೩೮||

ಬಲಿದ ವಿರಹಾಗ್ನಿಯಲಿ ನೊಂದೆನು
ಬಳಲಿದೆನು ತನು ಬಾಡಿ ತಾಪದಿ
ನಲವು ಹಿಂಗಿತು ಬವಣೆ ಹೆಚ್ಚಿತು ತ್ರಾಣವೆಳದಾಯ್ತು
ಹಲವು ಮಾತೇನಿನ್ನು ನಳನೃಪ
ತಿಲಕನೆನ್ನಯ ಪತಿಯಲಾ ಭೂ
ತಳದ ಪುರುಷರು ಪಿತನ ಸಮ ಕೇಳೆಂದಳಿಂದುಮುಖಿ ||೪೦||

ಅರಸ ಕೇಳಾ ಹಂಸ ತರುಣಿಯ
ಕರುಣದಳತೆಯ ಕಂಡು ತಾ ಬಂ
ದಿರುವ ಕಾರ್ಯದ ಹದನು ಲೇಸಾಯ್ತೆಂದು ಮನದೊಳಗೆ
ಹರುಷ ಮಿಗೆ ಕೊಂಡಾಡಿ ಸತಿಯನು
ಕರೆದು ನುಡಿದುದು ನಿನಗೆ ನಳಭೂ
ವರನ ಪತಿಯನು ಮಾಳ್ಪೆನಂಜದಿರೆಂದುದಾ ಹಂಸೆ ||೪೧||

ಬಂದ ಹಂಸೆಯ ಕಂಡು ಮುಖಕಳೆ
ಯಿಂದಲರಿದನು ನೃಪತಿ ಮನದಲಿ
ಯಿಂದುಮುಖಿ ತನಗೊಲಿದ ಹದನಹುದೆಂದು ಹರುಷದಲಿ
ಮಂದಗಮನೆಯ ಕಂಡಿರೇ ಏ
ನೆಂದು ನುಡಿದಳು ಸತಿಯ ಬಗೆಯೇ
ನೆಂದು ಕೇಳಲು ನೃಪಗೆ ಬಳಿಕಿಂತೆಂದುದಾ ಪಕ್ಷಿ ||೪೪||

ಮಾನವಾಧಿಪ ಕೇಳು  ಮನದನು
ಮಾನವನು ಬಿಡು ಗುಡಿಯ ಕಟ್ಟಿಸು
ನೀನೆಳಸಿದಿಷ್ಟಾರ್ಥಫಲ ಸಿದ್ಧಿಸಿದುದಿನ್ನೇನು
ಮಾನನಿಧಿ  ನೀ ಮುನ್ನ ಮಾಡಿದ
ನೂನ ಸುಕೃತದ ಫಲವೊ ನಿನ್ನನೆ
ಧ್ಯಾನಿಸುವಳನವರತ ಮನ ಬೇರಿಲ್ಲವಾ ಸತಿಗೆ ||೪೫||

ಮೂರನೆಯ ಸಂಧಿ

ಕೇಳಿದನು ನಸುನಗುತ ಭೀಮನೃಪ
ಪಾಲ ತನ್ನಾತ್ಮಜೆಯ ಯೌವನ
ದೇಳಿಗೆಯನಾಲಿಸುತ ವರನಾರೆಂದು ಚಿಂತೆಯಲಿ
ಓಲಗಕೆ ನಡೆತಂದು ಬರೆಸಿದ
ನೋಲೆಗಳ ಕಳುಹಿದನು ಧರಣೀ
ಪಾಲಕರ ಬರಹೇಳೆನುತ ಹೊಯಿಸಿದನು ಡಂಗುರವ ||೪||

ಹರಿದರರಸಾಳುಗಳು ದಿಕ್ಖುಗ
ಳರಸುಗಳ ನಗರವನು ಇತ್ತಲು
ಪುರವ ಶೃಂಗರಿಸಿದರು ಭೀಮನೃಪಾಲನಾಜ್ಞೆಯಲಿ
ತರಿಸಿದರು ಭಂಡಾರದಲಿ ನವ
ಭರಿತವಾದ ಸುವಸ್ತುಗಳ ವಿ
ಸ್ತರಿಸಿ ಕಟ್ಟಿದರಗಲದಲಿ ವೈವಾಹಮಂಟಪವ ||೫||

ಆ ಸಮಯದಲಿ ನಾರದನು ಹರಿ
ವಾಸುದೇವಾಯೆಂಬ ವೀಣೆಯ
ಭಾಸುರದ ಕರಗಳಲಿ ನುಡಿಸುತ ಮುನಿಗಳೊಗ್ಗಿನಲಿ
ವಾಸವನ ಸಭೆಗೈತರಲು ಸಂ
ತೋಷದಿಂದಿದಿರೆದ್ದು ಘನ ಸಂ
ಹಾಸನದಿ ಕುಳ್ಳಿರಿಸಿ ಕೈಮುಗಿದೆಂದನಮರೇಂದ್ರ ||೧೦||

ಎತ್ತಣಿಂದೈತಂದಿರುರ್ವಿಯೊ
ಳುತ್ತಮರು ಧರಣೀಶರಲಿ ನೆರೆ
ಸತ್ಯಧರ್ಮ ಸುಶೀಲರಾರುಂಟಲ್ಲಿ ಗುಣವೇನು
ಚಿತ್ತವಿಸಿ ಮುನಿನಾಥಯೆನಗದ
ಬಿತ್ತರಿಸಿ ಪೇಳೆನಲು ಸುರಮುನಿ
ಚಿತ್ತದಲಿ ನಸುನಗುತ ನುಡಿದನು ಪಾಕಶಾಸನಗೆ ||೧೧||

ಅಮರಪತಿ ಕೇಳವನಿಯಲಿ ಭೂ
ರಮಣರುಂಟು ಅನೇಕವವರೊಳು
ನಿಮಗೆ ಪೇಳ್ವೆ ವಿದರ್ಭಪುರಪತಿ ಭೀಮನೃಪತನುಜೆ
ಕಮಲಮುಖಿ ದಮಯಂತಿಗೆವ್ವನ
ಸಮತಳಿಸೆ ಚಿತ್ತದಿ ಸ್ವಯಂವರ
ಕಮಿತಬಲ ನೃಪರೈದಿ ಬರುತಿರೆ ಧರಣಿಯಗಲದಲಿ ||೧೨||

ಅರಸ ಕೇಳಮರೇಂದ್ರನಾ ಮುನಿ
ವರನ ವಚನವ ಕೇಳಿ ಹೆಚ್ಚಿದ
ವಿರಹದಲಿ ಕರೆಸಿದನು ಸತಿಯರಿಗೆಂದನೀ ಹದನ
ಪರಮಸತಿ ದಮಯಂತಿಯಳನುಪ
ಚರಿಯದಲಿ ಯೆನಗೊಲಿಯೆ ಮಾಡೆಂ
ದುರುತರದ ವಸ್ತುಗಳನಿತ್ತಬಲೆಯರ ಬೀಳ್ಕೊಟ್ಟ||೧೪||

ನಳಿನಮಿತ್ರನ ತೇಜದವೊಲಿಳೆ
ಗಿಳಿವ ಮಹಿಮರ ಕಂಡು ರಥದಿಂ
ದಿಳೆಗಿಳಿದು ಭಕ್ತಿಯಲಿ ನಳ ಕೈಮುಗಿದು ನಿಂದಿರಲು
ತಳಿತ ಹರು ಷಾನಂದದಲಿ  ಬರ
ಸೆಳೆದು ಬಿಗಿಯಪ್ಪಿದರು ರಾಯನ
ಚೆಲುವನೀಕ್ಷಿಸಿ ನಲಿದು ಕೊಂಡಾಡಿದರು ಮನವೊಲಿದು ||೧೬||

ಕುಶಲವೇ ನಳನೃಪತಿ ಬಾರೈ
ಶಶಿಕುಲೋದ್ಭವ ನಿನ್ನ ಪಿತನೀ
ವಸುಧೆಗಧಿಪತಿ ವೀರಸೇನನು ಪರಮಸಖನೆಮಗೆ
ಒಸೆದು ಬೇಡುವ ಕಾರ್ಯವಿದು ಭರ
ವಸದಿ ಬಂದೆವು ನಮಗೆ ಫಲ ಸಿ
ದ್ಧಿಸಿತು ಉಪಕಾರಾರ್ಥ ನಿನ್ನಿಂದಾಗಬೇಕೆಂದ ||೧೭||

ಭೂತಳದೊಳಿಹ ಸತಿಯರಲಿ ರೂ
ಪಾತಿಶಯೆ ದಮಯಂತಿಯೆನಲಾ
ಮಾತಿನಲಿ ಮನವೊಲಿದುದೆನಗವಳಲ್ಲಿ ನೀಪೋಗಿ
ಆ ತಳೋದರಿಗುಚಿತವಚನವ
ಪ್ರೀತಿಪೂರ್ವಕದಿಂದ ಸತಿಯಳ
ನೀ ತಿಳುಹಿಯನುಕೂಲೆಯನು ಮಾಡೆಂದನಮರೇಂದ್ರ ||೧೯||

ಕೇಳಿದಾಮಾತಿನಲಿ ಚಿಂತೆಯ
ತಾಳಿದನು ಚಿತ್ತದಲಿ ನಳನೃಪ
ಲೋಲಲೋಚನೆ ತನ್ನನೇ ಪತಿಯೆಂದು ಭಜಿಸಿಹಳು
ಆ ಲತಾಂಗಿಯ ಮೇಲೆ ಪರಮವಿ
ಶಾಲಮನವಿಹುದಿನ್ನು ಶಿವಶಿವ
ಬಾಲಕಿಯ ಬೆಸಗೊಳಲು ನಾಲಗೆಯೆಂತು ತನಗೆಂದ ||೨೧||

ಬಂದರಲ್ಲಿಗೆ ಸುರಪ ಕಳುಹಿದ
ಮಂದಗಮನೆಯರಖಿಳವಸ್ತುವ
ತಂದು ಕಾಣಿಕೆಗೊಟ್ಟು ಕೈಮುಗಿದೆರಗಿ ನಿಂದಿರಲು
ಬಂದ ಸತಿಯರ ನೋಡಿ ನೀವೆ
ಲ್ಲಿಂದ ಬಂದಿರಿ ನಿಮ್ಮ ಹದನೇ
ನೆಂದು ಬೆಸಗೊಳೆ ವಿನಯದಿಂದರುಹಿದರು ಮಾನಿನಿಗೆ ||೨೯||

ತಾಯಿ ಕೇಳಮರೇಂದ್ರ ನಿಮ್ಮ ನಿ
ಜಾಯತದ ಚೆಲುವಿಕೆಯ ಕೇಳಿದು
ಕಾಯಜನ ಶರಹತಿಗೆ ನೊಂದುರೆ ಕಳುಹಿದನು ನಮಗೆ
ಆಯತದ ಭೂಷಣವ ತೊಡು ಸುರ
ರಾಯನಿಗೆ ಸತಿಯಾಗು ಮರ್ತ್ಯದ
ರಾಯರಸ್ಥಿರರವರ ನೆಚ್ಚದಿರೆಂದರಾ ಸತಿಗೆ ||೩೦||

ಎನಲು ಕೇಳಿದಳಾ ನುಡಿಯ ಸುರ
ವನಿತೆಗೆಂದಳು ಚಿತ್ತವೆನಗೊ
ಬ್ಬನಲಿ ಸಿಲುಕಿತು ಮರಳಿಪಡೆ ಕಮಲಾಕ್ಷಗಳವಲ್ಲ
ಅನಿಮಿಷಾಧಿಪ ತನಗೆ ದೇವಾಂ
ಗನೆಯರಿರುತಿರೆ ಮನುಜಸತಿ ಪಾ
ವನವೆ ಬರಿದೆ ದುರಾಸೆ ತನಗೇಕೆಂದಳಿಂದುಮುಖಿ ||೩೩||

ಮರಳಿದರು ಸುರಸತಿಯರಿತ್ತಲು
ಬರುತೆ ನಳನೃಪತಿಲಕ ತಾ ಮನ
ಹರುಷದಲಿ ನಿಜರೂಪ ತಾಳ್ದನು ರಾಜತೇಜದಲಿ
ಅರಸನಿರೆ ದಮಯಂತಿ ಕಂಡ
ಚ್ಚರಿಯ ಮದನನೊ ನಳನೊ ನಳಕೂ
ಬರನೊ ಜಯಂತನೊ ಎನೆ ವಿಸ್ಮಯಗೊಂಡಳಾ ತರುಣಿ ||೩೪||

ಆರು ನೀವೆಲ್ಲಿಂದ ಬಂದಿರಿ
ಕಾರಣವಿದೇನೆಮ್ಮ ರಾಜ
ದ್ವಾರದಲಿ ನೀವ್ ಹೊಕ್ಕ ಹದನೇನಿಲ್ಲಿ ಗಂಡುನೊಣ
ಸೇರಲಮ್ಮದು ನೀವಘಾಡದ
ವೀರರತಿಸೌಂದರ್ಯರೆನೆ ನಳ
ಭೂರಮಣ ನಸುನಗುತ ನುಡಿದನು ಸತಿಗೆವಿನಯದಲಿ ||೩೬||

ಬಲ್ಲವರು ನೀವಧಿಕರೆಮ್ಮೊಳು
ಸಲ್ಲದೀ ನುಡಿಯೇತಕಿದು ಶಚಿ
ವಲ್ಲಭನ ಮಾತೇನು ಸಾಕಂತಿರಲಿಯೆನಗಿನ್ನು
ವಲ್ಲಭನು ನಳನೃಪತಿಯಲ್ಲದೆ
ನಲ್ಲರುಂಟೆ ಜಗದಿ ನೀವ್ ಸುರ
ರಲ್ಲ ನಿಮ್ಮಭಿಧಾನವೇನೆಂದಳು ಸರೋಜಮುಖಿ ||೩೮||

ದೂತರಲಿ ಕುಲಗೋತ್ರಗಳ ನೀ
ನೇತಕರಸುವೆ ತರುಣಿಯಿಂದ್ರನು
ಖ್ಯಾತ ಪುರುಷನು ಬಯಸುವುದು ಕೃತಪುಣ್ಯ ನಿನಗಿನ್ನು
ಭೂತಳದ ನರರಧಿಕರೇ ಸಂ
ಪ್ರೀತಿಯೇಕವರಲ್ಲಿ ಬಿಡು ಪುರು
ಹೂತನನು ಕೈವಿಡಿದು ನೀ ಸುಖಿಯಾಗು ನಡೆಯೆಂದ ||೩೯||

ಮಾನವಾಧೀಶ್ವರರೊಳಗೆ ಸನು
ಮಾನವುಳ್ಳವ ಸತ್ತಸಂಧ ನಿ
ಧಾನಿ ಹಿಮಕರವಂಶಪಾವನ ಸಾರ್ವಭೌಮನಲೆ
ಆ ನರೇಂದ್ರಗೆ ಸರಿಯೆ ಮನುಮುನಿ
ದಾನವಾಮರರಿನ್ನು ನಿಮಗೀ
ಹೀನವೃತ್ತಿಯ ಮಾತದೇಕೆಂದಳು ಸರೋಜಮುಖಿ ||೪೧||

ನಿಷಧಪತಿಯೇ ಪತಿಯೆನುತ ಭಾ
ವಿಸಿದೆನಾತನ ಕರುಣವೆನ್ನಲಿ
ಪಸರಿಸಿದಡದು ಲೇಸು ಲೇಸಲ್ಲದೊಡೆ ನಳನೃಪಗೆ
ಅಸುವ ತೆರುವೆನು ಎನಗೆ ಫಲ ಸಿ
ದ್ಧಿಸಲಿದೇ ಸಂಕಲ್ಪವೆಂದಾ
ಶಶಿವದನೆ ಕಂಬನಿಯ ಮಿಡಿದಳು ನಖದ ಕೊನೆಯಲ್ಲಿ ||೪೨||

ಕರಗಿತಂತಃಕರಣ ನೃಪತಿಗೆ
ಸರಸಿಜಾಕ್ಷಿಯ ದೃಢವ ಕಂಡನು
ಕರುಣಲತೆ ಕುಡಿದೋರಿತಾಕ್ಷಣ ನುಡಿದನಾ ಸತಿಗೆ
ಸರಸಿಜಾನನೆ ಕೇಳು ತಾನೇ
ಧರಣಿಪತಿ ನಳನೆನಲು ಲಜ್ಜಿಸಿ
ಶಿರವ ನಸು ಬಾಗಿದಳು ಮತ್ತಿಂತೆಂದಳಾ ನೃಪಗೆ ||೪೪||

ನಳನೆನಲು ತನು ಪುಳಕಜಲದಲಿ
ಮುಳುಗಿ ಹೊಂಪುಳಿಯೋಗಿ ತನ್ನಯ
ಕೆಳದಿಯರ ಮರೆಗೊಂಡು ಹರುಷದ ಹೃದಯಭೀತಿಯಲಿ
ತೊಲಗಿದಳು ನೃಪನಿತ್ತ ಪುರವನು
ಕಳೆದು ಬಂದನು ಮನದ ವಿರಹದಿ
ಬಳಲುತಿಹ ದೇವೇಂದ್ರನಿದ್ದೆಡೆಗಾಗಿ ವಹಿಲದಲಿ ||೪೬||

ಬಂದು ಭಯಭೀತಿಯಲಿ ನಳನೃಪ
ನಿಂದ್ರ ಮಾರುತ ಯಮ ವರುಣರಿಗೆ
ವಂದಿಸುತ ದಮಯಂತಿ ಪೇಳಿದ ಮಾತ ವಿವರಿಸಲು
ಒಂದು ನಿನ್ನಲಿ ಕುಟಿಲವಿಲ್ಲರ
ವಿಂದವದನೆಯರಿಂದ ಕೇಳಿದೆ
ವೆಂದು ಸಂತೈಸಿದರು ಭಯಗೊಂಡಿಹ ನೃಪಾಲಕನ ||೪೭||

ಲಲನಯೊಲಿವುದಕಿನ್ನು ಹದನಿದು
ಹಲವು ಮಾತೇನೆಂದು ನಾಲ್ವರು
ನಳನ ರೂಪನು ತಾಳ್ದರಿತ್ತಲು ಧರಣಿವಲ್ಲಭರು
ನಲಿದು ಬರುತಿರೆ ಸ್ವರ್ಗ ಮರ್ತ್ಯಾ
ವಳಿಯ ಸುಜನರು ಸಿದ್ಧ ಕಿನ್ನರ
ರೊಲಿದು ಗುಹ್ಯಕ ಗರುಡ ಗಂಧರ್ವಾದಿ ಸುರರಲ್ಲಿ ||೪೯||

ನೆರೆದುದಗಣಿತದರಸುಗಳು ಕರಿ
ತುರಗ ರಥ ಪಾಯ್ದಳದ ಸಂದಣಿ
ಮೆರೆವ ಶಂಖ ಮೃದಂಗ ತಂಬಟ ಭೇರಿ ನಿಸ್ಸಾಳ
ಉರುಬಿತಲ್ಲಿ ವಿದರ್ಭಪುರಪತಿ
ಧರಿಸಲಾಪನೆ ಹರಮಹಾದೇ
ವರಸ ಬಣ್ಣಿಸಲರಿಯೆ ನೆರೆದ ಮಹಾಮಹೀಸುರರ||೫೦||

ಕುಡಿತೆಗಂಗಳ ಸಿರಿಮುಡಿಯ ಬಡ
ನಡುವ ಸೆಳೆವತಿಬೆಡಗಿನಲಿ ಹೊಂ
ಗೊಡದ ಮೊಲೆ ವೈಯಾರದುಡುಗೆಯ ಸಿರಿಯ ಸಡಗರದ
ತೊಡರ ಝಣಝಣರವದ ಮೆಲ್ಲಡಿ
ಯಿಡುವ ಗಮನದ ಭರದಿ ಕಿರುಬೆಮ
ರಿಡುತ ಬಂದಳು ಸಖಿಯರೊಡನೆ ವಿವಾಹಮಂಟಪಕೆ ||೫೬||

ನಿಗಮನುತೆ ಗೀರ್ವಾಣಿ ರಕ್ಷಿಸು
ಮುಗುದರನು ಕರುಣದಲಿ ನೋಡುತ
ಲಗಣಿತದಲಿ ಅರಸುಗಳು ನೆರೆದಿರೆ ತಿಳಿಯಲರಿದೆಮಗೆ
ಮಗಳ ಮನ ವಿಗಡಿಸಿತು ನಾಲ್ವರು
ಬೆರಗುಗೊಳಿಸಿದರೆನಲು ಭಾರತಿ
ನಗುತ ನುಡಿದಳು ಕರೆದು ದಮಯಂತಿಯನುಪಚರಿಸಿ ||೬೫||

ದೇವಮಾಯವಿದೀಗ ಕೇಳೆಲೆ
ದೇವಿ ಇಂದ್ರನ ಭಜಿಸೆನಲು ಸಂ
ಭಾವನೀಯರ ಸಭೆಗೆ ಬಂದೆರಗಿದಳು ಭಕ್ತಿಯಲಿ
ದೇವಕುಲಸಂಭವರು ರಕ್ಷಿಸಿ
ನೀವು ಮಗಳೆಂದೆನ್ನ ಭಾವಿಸಿ
ಪಾವನರು ತರಳೆಯನು ಪತಿಕರಿಸೆಂದಳಿಂದುಮುಖಿ ||೬೬||

ಘಳಿಲನೇ ಪ್ರಚ್ಛನ್ನವೇಶವ
ಕಳೆದು ಯಮ ಪವಮಾನ ವರುಣರು
ಬಳಿಕ ಸುರಪತಿ ಮೆಚ್ಚಿ ದಮಯಂತಿಯನು ಕೊಂಡಾಡಿ
ನಳನೃಪನ ಕರೆಸಿದರು ಹೂವಿನ
ಮಳೆಯ ಕರೆದರು ದೇವದುಂದುಭಿ
ಮೊಳಗಲರಸನ ಕೊರಳಿಗಿಟ್ಟಳು ಪುಷ್ಪಮಾಲಿಕೆಯ ||೬೭||

ನಾಲ್ಕನೆಯ ಸಂಧಿ

ಒಂದು ದಿವಸದದೊಳಾಗ ನೃಪನಿಗೆ
ಬಂದುದಲ್ಲಾಚಮನಕಾಲದೊ
ಳಂದು ಶುದ್ಧಾಚಮನವಿಲ್ಲದೆ ನಿಂದು ನೀರ್ಗುಡಿಯೆ
ಇಂದು ತನಗಿದೆ ಸಮಯವೆಂದಾ
ನಂದದಲಿ ಕಲಿಪುರುಷ ರಾಯನ
ಸಂಧಿಸಿದ ವಿಧಿವಶವ ತಪ್ಪಿಸಲಾರ ಹವಣೆಂದ ||೨೧||

ಕಪಟ ಭೂಸುರವೇಶದಲಿ ನಿ
ಷ್ಕಪಟ ನಳಭೂವರನ ಕೆಡಿಸುವ
ಯುಪಮೆಯನು ತಾ ನೆಗಳಿ ಬಂದನು ಪುಷ್ಕರನ ಹೊರೆಗೆ
ನಿಪುಣನೆಂದನು ನಿನಗೆ ನಳಭೂ
ಮಿಪನು ಸಖನೆನೆ ಕೇಳಿ ಬಂದಿಹೆ
ನಪಯಶಕೆ ಹೆದರದಿರು ನಿನಗಹುದಖಿಳಸಾಮ್ರಾಜ್ಯ ||೨೨||

ಬಲ್ಲೆಯಾ ನೀನೆನ್ನ ಲೋಕಕೆ
ಬಲ್ಲಿದನು ತಾ ಕಲಿಪುರುಷ ನಳ
ನಲ್ಲಿ ದ್ಯೂತವನಾಡಿ ಗೆಲಿಸುವೆ ನಿನ್ನ ನೆತ್ತದಲಿ
ಒಲ್ಲೆನೆನದಿರು ಸಕಲರಾಜ್ಯದ
ವಲ್ಲಭನ ಮಾಡುವೆನು ನಡೆ ಹುಸಿ
ಯಿಲ್ಲ ನಿಷಧನ ಕಿತ್ತು ಬಿಸುಡುವೆ ನಂಬು ನೀನೆಂದ ||೨೩||

ನಂಬಿದನು ಲೇಸಾಗಿ ಭಾಷೆಯ
ನಿಂಬುಗೊಂಡುದು ಹೃದಯ ಪುಷ್ಕರ
ನೆಂಬ ಖಳ ಸಂತೋಷದಲಿ ಕಲಿಪುರುಷನೊಡಗೊಂಡು
ಅಂಬುಜಾಕ್ಷನ ಕಳೆಗೆ ತಾ ಪ್ರತಿ
ಬಿಂಬನೆನಿಸುವ ನಳನ ಬಳಿಗತಿ
ಸಂಭ್ರಮದೊಳೈತಂದರಿಬ್ಬರು ರಾಯನೋಲಗಕೆ ||೨೪||

ಅರಸ ಕೇಳೀ ವಿಪ್ರನತಿ ಭಾ
ಸುರ ಸುತೇಜದೊಳೆಸೆವ ನೆತ್ತವ
ನೆರಡ ಕಾಣಿಕೆಗೊಟ್ಟ ನನಗಿದರಲ್ಲಿ ಮನವಾಯ್ತು
ಹರವು ಹಾಸಂಗಿಗಳನಾಡುವೆ
ವಿರದೆ ಸೋತವನಾವನಾಗಲಿ
ಧರೆಯನುಳಿದು ವನಾಂತರಕೆ ತೆರಳುವುದು ಸತಿಸಹಿತ ||೨೬||

ಧರಣಿಪತಿ ನಿನಗಿನಿತು ಚಿತ್ತಕೆ
ಹರುಷವಾಗಿರಲಿನ್ನು ಮನದಲಿ
ಕೊರತೆದೋರಲು ಮಾಣುಯಿದು ಪಾರ್ಥಿವರ ಪಂಥ ಕಣ
ಧುರಕೆ ಬೇಂಟೆಗೆ ಜೂಜಿಗೆಂದಡೆ
ಕರೆದಡೋಸರಿಸುವುದು ನೀತಿಯೆ
ನಿರುತವಿದು ಚಿತ್ತೈಸುಯೆಂದನು ನೃಪಗೆ ಕೈಮುಗಿದು ||೨೭||

ಆಡಿದನು ಜೂಜಿನಲಿ ನೃಪ ಹೋ
ಗಾಡಿದನು ರಾಜ್ಯವನು ಕೋಶವ
ಕೇಡುಗರ ಕೈ ಮೇಳವಿಸಿದುದು ದೈವಗತಿಯಿಂದ
ಬಾಡಿತರಸನ ವದನ ಸಭೆಯಲಿ
ನೋಡಿದರು ಸಜ್ಜನರು ಮರುಗಿದ
ರಾಡಲೇನದನರಸ ಸೋತನು ವಿಧಿಯ ಘಟನೆಯಲಿ ||೩೦||

ಅರಸನಾಪ್ತಪುರೋಹಿತನು ಮನ
ಹರುಷವಿಳಿದೆಯ್ತಂದನಂತಃ
ಪುರವಹೊಕ್ಕನು ರಾಜದವದನೆಯ ಸಭೆಗೆ ತಾ ಬಂದು
ತರುಣಿಯರ ಮೇಳದಲಿ ಶೋಭಿಪ
ಪರಮರತ್ನದ ಪೀಠದಲಿ ತಾ
ಹರುಷಮಿಗೆ ರಂಜಿಸುವ ಸತಿಯಳ ಕಂಡು ಕೈಮುಗಿದು ||೩೨||

ತಾಯೆ ಬಿನ್ನಹವಿದು ನಿಮ್ಮಯ
ರಾಯ ಸೋತನು ಜೂಜಿನಲಿ ನಿ
ರ್ದಾಯದಲಿ ಪುಷ್ಕರನು ಗೆಲಿದನು ಸಕಲರಾಜ್ಯವನು
ನೋಯಲಾಗದು ಚಿತ್ತದಲಿ ನೆರೆ
ಬೀಯವಾದುದು ಸಿರಿಯುಯಿನ್ನಿದ
ರಾಯತವ ನೀವ್ ಬಲ್ಲಿರೆಂದನು ವಿಪ್ರ ಕೈಮುಗಿದು||೩೩||

ಕಮಲವನದಲಿ ಮಂಜು ಸುರಿದಾ
ಕ್ರಮದ ಬಗೆಯಲಿ ಸತಿಯಳಿಗೆ ಮುಖ
ಕಮಲ ಬಾಡಿತು ನುಡಿಯಕೇಳುತ ಮನದ ಚಿಂತೆಯಲಿ
ಕಮಲನಾಭನ ಕರುಣಕವಚವು
ಸಮೆದರಾರೇಗುವರು ಹರಹರ
ಕುಮತಿ ಪುಷ್ಕರನಿಂತು ಮುನಿದನೆಯೆನುತ ಮರುಗಿದಳು ||೩೪||

ಕಮಲಮುಖಿ ನಳನೃಪಗೆ ರಾಜ್ಯ
ಭ್ರಮಣವಾಯಿತೆಯೆನುತ ಸತಿ ಭೂ
ರಮಣನೆಡೆಗೈತಂದು ಕಂಡಳು ಕಾಂತನಿಂಗಿತವ
ತಮದ ರಾಹುಗ್ರಹವು ಸೋಂಕಿದ
ದ್ಯುಮಣಿಯಂತಿರೆ ಕಂಡು ಧೈರ್ಯದಿ
ಕಮಲಮುಖಿ ಕೈಮುಗಿದು ಬಿನ್ನೈಸೆದಳು ನಿಜಪತಿಗೆ ||೩೫||

ತರುಣಿ ಕೇಳಪಜಯದ ನಾರಿಯ
ಸೆರಗ ಹಿಡಿದೆನು ರಾಜ್ಯಲಕ್ಷ್ಮಿಯ
ಪರರಿಗಿತ್ತುಳುಹಿದೆನು ದೇಹವನಿದಕೆಯಂಜದಿರು
ತರುಣಿ ನೀ ಕಾನನದಿ ಗಿರಿಗ
ಹ್ವರಗಳಲಿ ಬಿಡದೆಂತು ತೊಳಲುವೆ
ಹರಹರಾಯೆಂದೆನುತ ಸತಿಯನು ನೋಡಿ ಬಿಸುಸುಯ್ದ||೩೮||

ಚಿಂತೆ ಬೇಡೆಂದರಸನನು ಸತಿ
ಸಂತವಿಟ್ಟಳು ನೀತಿಯಲಿ ದಮ
ಯಂತಿ ನಿಜಮಂದಿರಕೆ ಸರಿಯಲು ಕಂಡು ಪುಷ್ಕರನು
ಇಂತುಜೂಜಲಿ ಸೋತು ತಿರಿಗಿ
ನ್ನೆಂತು ರಾಜ್ಯದಿ ನಿಲುವಿರೆನೆ ಭೂ
ಕಾಂತ ವನವಾಸಕ್ಕೆ ನಿಜಸತಿಸಹಿತಲನುವಾದನು ||೪೧||

ಐದನೆಯ ಸಂಧಿ

ಅಡವಿಯಲಿ ಪತಿ ಕಳೆದು ಬಿಡೆ ಫಣಿ
ಯೊಡಲಿಗಿಳಿಯದೆ ಮುಂದೆ ಕರಿಗಳ
ಪಡೆಗೆರಗಿ ದಮಯಂತಿ ಹೊಕ್ಕಳು ಚೈದ್ಯನಗರಿಯನು

ಕೇಳು ಕುಂತೀತನಯ ನಳನೃಪ
ಬೀಳುಕೊಟ್ಟನು ಪುರವನಲ್ಲಂ
ಮೇಲೆ ನಡೆದರು ಪಯಣಗತಿಯಲಿ ಹಲವು ಯೋಜನವ
ಹೇಳಲೇನದನವರ ವಿಧಿಯನು
ತಾಳಿಗೆಗಳೊಣಗಿದವು ಸತಿಯಳ
ಕಾಲೊಡೆದು ಸುರಿವರುಣಜಲದಲಿ ಬಟ್ಟೆ ಕೆಸರಾಯ್ತು ||೧||

ಎಳೆಯ ಬಾಳೆಯ ಸುಳಿಯು ಅನಲನ
ಜಳದ ಹೊಯ್ಲಲಿ ನೊಂದವೊಲ್ ಕಡು
ಬಳಲಿದಬಲೆಯ ಕಂಡು ನೃಪ ಮರುಗಿದನು ಮನದೊಳಗೆ
ಲಲಿತಹೇಮದ ತೂಗಮಂಚದ
ಹೊಳೆವ ಮೇಲ್ವಾಸಿನಲಿ ಮಲಗುವ
ಲಲನೆಗೀ ವಿಧಿ ಬಂದುದೇ ಹಾಯೆನುತ ಬಿಸುಸುಯ್ದ ||೨||

ಮರುಗಲಿನ್ನೇಕರಸ ಬಿಡು ವಿಧಿ
ಬರೆದ ಬರೆಹವ ತಪ್ಪಿಸಲು ಹರಿ
ಹರವಿರಿಂಚಾದಿಗಳಿಗಳವೇ ನಮ್ಮ ಪಾಡೇನು
ಹರೆವುದಾಕ್ಷಣ ತುಂಬುವುದು ಗೋ
ಚರಿಸುವುದು ಸಿರಿ ನಿತ್ಯವೇನಿದ
ನರಿಯದವನೇ ನೋಯಲೇಕೆಂದಳು ಸರೋಜಮುಖಿ ||೩||

ನುಡಿಯ ಕೇಳುತ ಮನದಿ ಮಿಡುಕುತ
ಪೊಡವಿಪನು ಸತಿಸಹಿತ ಘನಘೋ
ರಡವಿಯಲಿ ಬರುತಿರೆ ಜಗನ್ಮೋಹನದ ಪಕ್ಷಿಗಳು
ಪೊಡವಿಗಿಳಿಯಲು ಕಂಡಪೇಕ್ಷಿಸಿ
ಪಿಡಿವೆನೆಂದುರವಣಿಸಿ ನೃಪ ಹ
ಚ್ಚಡವ ಬೀಸಿದಡದನು ಕೊಂಡೊಯ್ದವು ನಭಸ್ಥಳಕೆ ||೪||

ಮೂಗಿನಲಿ ಬೆರಳಿಟ್ಟು ಮಕುಟವ
ತೂಗಿದನು ನಸುನಗುತ ನಿಂದಿರ
ಲಾಗ ಸೂಚಿಸಿದವು ನಿರಂತರ ರಾಜ್ಯ ಭೋಗವನು
ಬೇಗದಿಂದಪಹರಿಸಿಕೊಂಡವ
ರೀಗವಾವಿದನರಿದಿರೆಂದು ಸ
ರಾಗದಿಂದಲಿ ಮಾಯವಾದವು ಪಕ್ಷಿಯುಗಳಗಳು ||೫||

ಧರಣಿಪತಿ ಕೇಳ್ ನಿಷಧಪತಿ ಕಲಿ
ಪುರುಷ ಮಾಯವ ಬಲ್ಲನೆ ಮನ
ಮರುಗಿ ನಿರ್ವಾಣದಲಿ ನಿಂದಿರಲಾಗ ಸತಿ ಕಂಡು
ಹರಹರಾಯೆನುತಾಗ ಸೀರಿಯ
ಸೆರಗ ಹರಿದಿತ್ತಳು ನೃಪಾಲಗೆ
ಶಿರವ ನಸುಬಾಗಿದನು ನಾಚಿಕೆಯಾಗಲಿಂತೆಂದ ||೬||

ಧರೆಯ ನೃಪರಿಗೆ ನಿಷಧಪುರಪತಿ
ಯರಮನೆಯ ಬಾಗಿಲಿನ ಸುಮುಖವು
ದೊರಕಲದು ತಾ ಪುಣ್ಯವೆಂಬೀಯರಸುತನ ನಮಗೆ
ಹರೆದುದೆಲ್ಲ ಸಮಸ್ತರಾಜ್ಯದ
ಸಿರಿಗೆ ಬಾಹಿರನಾಗಿ ಸತಿಯಳ
ಸೆರಗನುಡುವಂತಾಯ್ತೆ ಹರಹರಯೆನುತ ಬಿಸುಸುಯ್ದ ||೭||

ಧರೆಯ ಸಂಪದದಷ್ಟಭೋಗವ
ಪರಿಹರಿಸಿ ನಿಜಪುತ್ರಮಿತ್ರರ
ತೊರೆದು ನಂಬಿದ ಸತಿಯ ಘೋರಾರಣ್ಯಮಧ್ಯದಲಿ
ಹಿರಿದು ಬಳಲಿಸಿ ನೋಯಿಸಿದೆ ಕೇಳ್
ತರುಣಿಯೆನ್ನವೊಲಾರು ಪಾಪಿಗ
ಳಿರದೆ ನೀ ಹೋಗಿನ್ನು ತಂದೆಯ ಮನೆಗೆ ನಡೆಯೆಂದಾ ||೮||

ಇನಿಯನಾಡಿದ ನುಡಿಗೆಯಂಗನೆ
ಕನಲಿ ನುಡಿದಳು ಶೋಕದಲಿ ನೀ
ನಿನಿತು ಮುನಿದಾಡುವರೆ ಸಾಕಿನ್ನಾರು ಗತಿಯೆನಗೆ
ಅನುದಿನವು ನಾ ನಿಮ್ಮ ಪದಯುಗ
ವನಜವನು ಭಜಿಸುವುದ ತೊರೆದೀ
ತನುವ ಸೈರಿಸಲಾಪೆನೆ  ಹೇಳೆಂದಳಿಂದುಮುಖಿ ||೯||

ನೆಳಲು ತನುವಿನ ಬಳಿಯೊಳಲ್ಲದೆ
ಚಲಿಸುವುದೆ ತಾ ಬೇರೆ ನಿಮ್ಮಡಿ
ನಳಿನದಲಿ ಸುಖದುಃಖವಲ್ಲದೆ ಬೇರೆ ಗತಿಯುಂಟೆ
ಹಳುವವೇ ಸಾಮ್ರಾಜ್ಯ ನಿಮ್ಮಡಿ
ನೆಳಲಿನಲಿ ತಾನಿರುವೆನಲ್ಲದೆ
ನಿಳಯವೇ ನನಗಡವಿಯೆಂದೆರಗಿದಳು ಪದಯುಗಕೆ ||೧೦||

ಎನುತ ಸುರಿದಳು ಕಣ್ಣಿನಲಿ ಕಂ
ಬನಿಯ ಮಿಡಿದಳು ಬೆರಳಿನಲಿ ಮು
ನ್ನಿನಲಿ ಮಾಡಿದ ಕರ್ಮಫಲವಿದಕೇನ ಮಾಡುವುದು
ಎನಗೆ ಚಿಂತಿಸಲೇಕೆ ನೀನಿಂ
ದಿನಲಿ ನಿರ್ಮಲಚಿತ್ತದಲಿ ಕಾ
ನನವ ಸಂಚರಿಸುವೆನು ನಿಮ್ಮೊಡನೆಂದಳಿಂದಮುಖಿ ||೧೧||

ಶೋಕವೇಕೆಲೆ ತರುಣಿ ಬಾರೆಂ
ದಾಕಮಲಲೋಚನೆಯ ತೋಳಿನೊ
ಳೌಕಿ ಬಿಗಿಯಪ್ಪಿದನು ಸೆರಗಿನೊಳಿರಸಿ ಕಂಬನಿಯ
ಜೋಕೆಯಲಿ ಕುಳ್ಳಿರಿಸಿ ತೊಡೆಯೊಳ
ನೇಕ ಪ್ರೀತಿಯೊಳೆಂದ ನೀನವಿ
ವೇಕಿಯೇ ಬಿಡು ಮನದ ದುಗುಡವೆಂದನಾ ನೃಪತಿ ||೧೨||

ಎಂದು ಸತಿಯಳ ಸಂತವಿಟ್ಟರ
ವಿಂದನಾಭಧ್ಯಾನದಲಿ ಬರೆ
ಮುಂದೆ ಘೋರಾರಣ್ಯವೆಸೆದುದು ಘನಭಯಂಕರದಿ
ಸಂದ ಖಗಮೃಗವಲ್ಲಿ ನೆರೆದಿರೆ
ಬಂದು ಹೊಕ್ಕರು ಕಾನನವನರ
ವಿಂದಸಖ ಹೊದ್ದಿದನು ಮೆಲ್ಲನೆ ಪಶ್ಚಿಮಾಂಬುಧಿಯ ||೧೩||

ಲೋಕಕಧಿಪತಿ ನಳನ ರಾಣಿಗೆ
ಶೋಕ ಪರ್ಬಿದ ತೆರದಿ ಕತ್ತಲೆ
ಲೋಕವನು ಮುಸುಕಿದುದು ಭರಣಿಯ ಮುಚ್ಚುವಂದದಲಿ
ಭೀಕರಧ್ವನಿಗಳಿಗೆ ಹೆದರಿದ
ಳಾ ಕಮಲಲೋಚನೆಯ ಕಂಡು ವಿ
ವೇಕನಿಧಿ ಸಂತಯಿಸಿ ಬಿಗಿಯಪ್ಪಿದನು ತೂಪಿರಿದು ||೧೪||

ತರುಣಿಯಂಜದಿರಂಜದಿರು ವಿಧಿ
ಬರೆದ ಬರಹವಿದೆನುತ ವೃಕ್ಷದ
ತರಗೆಲೆಯ ಹಾಸಿನಲಿ ಮಲಗಿಸಿ ಸತಿಯನೀಕ್ಷಿಸುತ
ವರರತುನಮಂಚದಲಿ ಪವಡಿಸಿ
ಪರಮಸುಖವಿಹ ಸತಿಗೆ ವಿಧಿಯಿದು
ಹರಹರಾಯೆನುತರಸ ಕಂಬನಿದುಂಬಿದನು ಮರುಗಿ ||೧೫||

ಎಲ್ಲರೋಪಾದಿಯ ಪತಿವ್ರತೆ
ಯಲ್ಲವೀ ದಮಯಂತಿ ಬಿಡುವವ
ಳಲ್ಲ ತನ್ನನು ತರುಣಿ ಕಾಣದ ಕಡೆಗೆ ತೆರಳಿದರೆ
ಅಲ್ಲಿ ತಂದೆಯ ಮನೆಗೆ ಹೋಗುವ
ಳಿಲ್ಲಿ ತಾನಿರೆ ಬಿಡಳೆನುತ ಮನ
ದಲ್ಲಿ ಯೋಚಿಸಿ ನಿದ್ರೆಗೈಸಿದನಾ ಮಹಾಸತಿಯ ||೧೬||

ಮರೆದು ಮಲಗಿದಳವಳ ಮಗ್ಗುಲ
ಸೆರಗ ಮೆಲ್ಲನೆ ಜಾರಿಸುತಲಾ
ಗರಸ ವಸನವ ಕೊಂಡು ಮಲಗಿದ ಸತಿಯನೀಕ್ಷಿಸುತ
ಮರುಗಿದನು ಮನದೊಳಗೆ ಹರಿಹರಿ
ವರ ಜಗತ್ಪತಿ ಅಡವಿಯಲಿ ಎ
ಚ್ಚರಿಸದೇ ತಾನೆಂತು ಪೋಗುವೆನೆನುತ ಬಿಸುಸುಯ್ದ ||೧೭||

ಮಡದಿಯಗಲಿದ ಬಳಿಕ ಹತ್ತೆಂ
ಟಡಿಯ ದಾಂಟುವ ಮರಳಿ ನಿಜಸತಿ
ಯೆಡೆಗೆ ತಿರುಗುವ ಚಂದ್ರಬಿಂಬಾನನೆಯನೀಕ್ಷಿಸುವ
ಅಡಸಿ ಬರೆ ದುಃಖದಲಿ ಮೆಲ್ಲಡಿ
ಯಿಡುವ ಸತಿಯನು ನೋಡಿ ಮನದು
ಗ್ಗಡದ ಶೋಕದಿ ನಡೆದ ನಳನೃಪನೊಂದು ಯೋಜನವ ||೧೮||

ಮರುಗುವುದು ಮನವೊಮ್ಮೆ ಕಂಗಳು
ಮರಳಿ ನೋಡುವುದೊಮ್ಮೆ ಸತಿಯಳ
ಯಿರವ ಕಾಣದೆ ಕಳವಳಕೆ ಬೀಡಾದುದಾ ಹೃದಯ
ಕರಗಿತರಸನ ಧೈರ್ಯ ಚಿತ್ತದಿ
ಮುರಿದುದಗ್ಗದ ಮಹಿಮೆ ಶೋಕದ
ಹೊರಿಗೆಯಲಿ ಕಾತರಿಸಿ ನಡೆದನು ನೃಪತಿ ಕೇಳೆಂದ ||೧೯||

ಕರುಣೆದೋರದೆ ನೃಪತಿ ಸತಿಯಳ
ತೊರೆದು ಬಿಸುಟನು ವನದೊಳಗೆ ಹುಲಿ
ಕರಡಿ ಮೃಗದುಪಟಳವ ತಾನಿನ್ನೆಂತು ಸೈರಿಪಳೊ
ಮೊರೆಯ ಲಾಲಿಸಿ ನೋಳ್ಪೆನೆಂದುರು
ತರದ ಪ್ರೇಮದಿ ಬಂದು ಸತಿಗೆ
ಚ್ಚರಿಸುವಂದದಿ ತರಣಿ ತಲೆದೋರಿದನು ಪೂರ್ವದಲಿ ||೨೦||

ನಳಿನಮುಖಿ ಮೈಮುರಿದು ನಿದ್ರೆಯ
ತಿಳಿದು ಮೆಲ್ಲನೆ ನೋಡಿದಳು ಎಡ
ಬಲವನೀಕ್ಷಿಸಿ ಪತಿಯ ಕಾಣದೆ ಬಲಿದ ಮೂರ್ಛೆಯಲಿ
ಮಲಗಿದಳು ಮೈಮರೆದು ನಿಮಿಷಕೆ
ತಿಳಿದು ಕಾಣದೆ ಕಾತುರದಿ ಹಂ
ಬಲಿಸಿ ಹಲುಬಿದಳಲ್ಲಿ ಗಿರಿತರುನಿಕರಮಧ್ಯದಲಿ ||೨೧||

ಹಾ ರಮಣ ನಳನೃಪತಿ ಹಾ ರಣ
ಧೀರ ಸದ್ಗುಣಹಾರ ರಿಪುಸಂ
ಹಾರ ನಿತ್ಯೋದಾರ ನಿರ್ಮಳಸತ್ಸಂಚಾರ
ಘೋರಕಾನನದೊಳಗೆ ನಂಬಿದ
ನಾರಿಯನು ಬಿಸುಡುವರೆ ತನಗಿ
ನ್ನಾರು ಗತಿ ಮುಖದೋರೆನುತ ಹಲುಬಿದಳು ದಮಯಂತಿ ||೨೨||

ಪೊಡವಿಗಿಳಿದನೊ ಹಾಯ್ದು ಪಾವಕ
ನೊಡಲ ಹೊಗುವೆನೊ ಕಾಳಕೂಟದ
ಮಡುವಿನೊಳು ಮುಳುಗುವೆನೊ ಹಾಸರೆಯೊಳಗೆ ಬೀಳುವೆನೊ
ಅಡಸಿದಾಪತ್ತಿನಲಿ ಗರಳವ
ಕುಡಿವೆನೋ ತಾನೆನುತ ಸತಿ ಬಾ
ಯ್ಬಿಡುತ ಕಾನನದೊಳಗೆ ತಿರು ಗಿದಳಬಲೆ ಶೋಕದಲಿ ||೨೩||

ಕಾಣಿರೇಯರಸಂಚೆಗಳೆ ನೀವ್
ಕಾಣಿರೇ ನಿಜಪತಿಯ ಶುಕಪಿಕ
ಕಾಣಿರೇ ಮೃಗಪಕ್ಷಿಗಳೆ ನಳಚಕ್ರವರ್ತಿಯನು
ಕಾಣಿರೇ ತರುಲತೆಗಳಿನಿಯನ
ಕಾಣಿರೇ ನೀವೆಂದು ಶೋಕದೊ
ಳೇಣಲೋಚನೆ ಹಲುಬಿದಳು ಹಲವಂಗದಲಿ ಪತಿಯ ||೨೪||

ಮುಡಿಕೆದರಿ ಹುಡಿಯೊಳಗೆ ಹೊರಳುತ
ಲೊಡಲನೀಡಾಡಿದಳು ಧರೆಯೊಳ
ಗಡವಿ ಪಾಲಾಗೆಂದು ಪಡೆದಳೊ ತನ್ನ ನಿಜಜನನಿ
ಮಡದಿಯರು ತನ್ನಂತೆ ಲೋಕದೊ
ಳೊಡಲ ತೆತ್ತವರುಂಟೆ ಶೋಕದಿ
ಪೊಡವಿಪತಿ ಮುಖದೋರೆನುತ ಹಂಬಲಿಸಿದಳು ಪತಿಯ ||೨೫||

ಮಾನವಾಧಿಪ ಕೇಳು ಬನದಲಿ
ಮಾನಿನಿಗೆ ಮತ್ತೊಂದು ಕಂಟಕ
ಹಾನಿ ಬಂದುದೇನೆಂಬೆನು ಪತಿಗೆ ಬಾಯ್ಬಿಡುತ
ಕಾನನದ ಬಳಿವಿಡಿದು ಬರೆ ಸು
ಮ್ಮಾನದಲಿ ತರಗೆಲೆಯ ಹಕ್ಕೆಯ
ಮೌನದಲಿ ಉರಗೇಂದ್ರನಿದ್ದನು ಬಲಿದ ನಿದ್ರೆಯಲಿ ||೨೬||

ತರಳೆ ಕಾಣದೆ ಬರುತ ಮೆಟ್ಟಿದ
ಳುರಗಪತಿಯನು ಕೋಪದಲಿ ಮಿಗೆ
ಸುರಿವ ಗರಳದಿ ರೌದ್ರಮಯರೂಪಿನಲಿ ಬಾಲಕಿಯ
ತರುಬಿ ಹಿಡಿದುದು ತವಕದಲಿ ಹಿಮ
ಕರನ ನುಂಗುವ ರಾಹುವಿನವೊಲ್
ಅರಸ ಕೇಳಂಗನೆಯ ವಿಧಿಯನು ಹೇಳಲೇನೆಂದ ||೨೭||

ಹಾ ರಮಣ ನ ಳನೃಪತಿ ತನ್ನನ
ದಾರಿಗೊಪ್ಪಿಸಿ ಕಳೆದೆ ಹರಿಹರಿ
ಕ್ರೂರಸರ್ಪನ ಬಾಯ್ಗೆ ತುತ್ತಾದೆನೆ ಜಗನ್ನಾಥ
ಆರಿಗೊರಲುವೆನಿನ್ನು ಪ್ರಾಣವ
ನಾರು ಕಾವವರಕಟ ಬಿಡಿಸೈ
ವಾರಿಜಾಕ್ಷ ಮುಕುಂದ ಸಲಹೆಂದೊರಲಿದಳು ತರಳೆ ||೨೮||

ಶೈರಶಿಖರದೊಳಿರ್ದು ಕೇಳಿದ
ಬಾಲಕಿಯ ಶೋಕವನು ಬಿಲ್ಲಿನ
ಕೋಲುಗಾರನು ಕರೆದ ಬಿಲ್ಲಿನ ಶಬರನೈತಂದು
ಆ ಲತಾಂಗಿಯ ಪಿಡಿದು ನುಂಗುವ
ಕಾಲಭುಜಗನ ಕಂಡು ನಿಜಕರ
ವಾಳದಲಿ ಖಂಡಿಸಿದನಹಿಯನು ಬಿಡಿಸಿದನು ಸತಿಯ ||೨೯||

ಹಾಯೆನುತ ಸುರರುಲಿಯೆ ಹಾವಿನ
ಬಾಯೊಳಗೆ ಸಿಲುಕಿರ್ದ ಕಮಲದ
ಳಾಯತಾಕ್ಷಿಯ ಬಿಡಿಸಿದನು ಸಂತೈಸಿದನು ಸತಿಯ
ರಾಯ ಕೇಳೈ ರಾಹುವಿನ ಕಟ
ವಾಯ ಚಂದ್ರನ ಸೆಳೆವವೋಲರಿ
ದಾಯಿತಬಲೆಗೆ ಮೂರ್ಛೆ ತಿಳಿದುದು ಶಬರಮಂತ್ರದಲಿ ||೩೦||

ಬಂದು ಕೆಂದಾವರೆಯ ಕೊಳದಲಿ
ಮಿಂದು ನಿಂದಿರೆ ಶಬರನೆಂದನು
ಇಂದುಮುಖಿ ನೀನೆನಗೆ ಸತಿಯಾಗೆನಲು ಖತಿಗೊಂಡು
ಇಂದೆನಗೆ ಅಸುವಿತ್ತು ಸಲಹಿದ
ತಂದೆಯಲ್ಲವೆ ನೀನು ಕೇಳು ಪು
ಳಿಂದ ಮುಳಿದರೆ ಶಪಿಸುವೆನು ಹೋಗೆಂದಳಿಂದುಮುಖಿ ||೩೧||

ತರುಣಿ ಕೋಪಿಸಿ ನುಡಿಯೆ ಭಯದಲಿ
ಶಿರವ ಬಾಗಿ ಪುಳಿಂದನತ್ತಲು  
ಮರಳಿದನು ದಮಯಂತಿ ಮನದಲಿ ಪತಿಗೆ ಹಂಬಲಿಸಿ
ಮರುಗುವಳು ಬನದೊಳಗೆ ಭೂಪನ
ನರಸಿ ಕಾಣದೆ ಬಯಲನಪ್ಪುವ
ಳುರವಣಿಪ ಕಣ್ಣೀರಿನಲಿ ನಡೆತಂದಳಿಂದುಮುಖಿ ||೩೨||

ಅರಸ ಕೇಳಾಶ್ಚರ್ಯವನು ಸತಿ
ಬರುತಿರಲು ಕಾನನದಿ ನೆರೆದಿಹ
ಮರುಳು ಬಳಗವು ಭೂತಭೇತಾಳಗಳು ತೊಲಗಿದವು
ಶರಭ ಮೊಲ ಕಾಡಾನೆ ಸಿಂಹಗ
ಳಿರದೆ ಜಾರಿದುವಲ್ಲಿ ಸತಿಯಳ
ಪರಮಪಾತಿವ್ರತ್ಯಮಹಿಮೆಗೆ ನೃಪತಿ ಕೇಳೆಂದ ||೩೩||

ಮುಂದೆ ಕಂಡಳು ಹೊಳೆವ ತಾಪಸ
ವೃಂದವನು ಕಣ್ಣೀರ ಸುರಿಸುತ
ಬಂದವಳನುರೆ ಕೇಳಿದರು ಮುನಿವರರು ಕರುಣದಲಿ
ಇಂದುಮುಖಿ ನೀನಾರು ಇಲ್ಲಿಗೆ
ಬಂದ ಹದನೇನೆನಲು ಶೋಕದಿ
ನೊಂದು ನುಡಿದಳು ಮುನಿಗಳಿಗೆ ಕೈಮುಗಿದು ವಿನಯದಲಿ ||೩೪||

ಏನನೆಂಬೆನು  ತನ್ನ ಪುಣ್ಯದ  
ಹಾನಿಯನು ಚಿತ್ತವಿಸಿ ಕರುಣದಿ
ಮಾನನಿಧಿಗಳು ಬಲ್ಲಿರೇ ನಳಚಕ್ರವರ್ತಿಯನು
ಆ ನರೇಂದ್ರನ ಮಡದಿ ತಾ ಮು
ನ್ನೇನ ನೋಂತೆನೊ ಪತಿಯಗಲಿ ಘನ
ಕಾನನಕೆ ಗುರಿಯಾದೆನೆಂದಳು ತರುಣಿ ಬಿಸುಸುಯ್ದು ||೩೫ ||

ಭೂತಳವ ನಳನೃಪತಿ ದ್ಯೂತದಿ
ಸೋತು ಪುಷ್ಕರಗಿತ್ತು ಸತ್ಯದ
ನೀತಿ ತಪ್ಪದೆ ಬಂದು ಬನದಲಿ ತನ್ನನಗಲಿದನು
ಧಾತುಗುಂದಿದೆ ಪತಿಯ ಕಾಣದೆ
ಭೀತಿಯಲಿ ನಿಮ್ಮಡಿಯ ಕಂಡೆನು
ಭೂತದಯೆ ನಿಮಗುಂಟಲಾ ಸಲಹೆಂದಳಿಂದುಮುಖಿ ||೩೬||

ನನೆದುದಂತಃಕರಣ ಕೇಳುತ
ಮುನಿಗಳೆಂದರು ತಾಯೆ ಶೋಕದಿ
ಕನಲಿ ಕಂಗೆಡಬೇಡ ನಿಜಪತಿರಾಜ್ಯಸಿರಿಸುತರು
ನಿನಗೆ ಬಂದಪರಿನ್ನು ಯೋಗದ
ಮನದಲರಿದೆವು ನಾವು ಅಂಜದಿ
ರೆನುತ ಪೇಳಿಯದೃಶ್ಯವಾದರು ಮುನಿಗಳೊಗ್ಗಿನಲಿ ||೩೭||

ಆ ತರುಣಿ ಬೆರಗಾಗಿ ಕನಸಿನ
ರೀತಿಯಾಯ್ತಕಟಕಟ ಮೌನಿ
ವ್ರಾತವೆತ್ತಲು ಸರಿದುದೋ ವಿಸ್ಮಯವಲಾಯೆನುತ
ಆ ತಳೋದರಿ ಪತಿಯ ಕಾಣದೆ
ಕಾತುರದಿ ಬರುತಿರಲು ಕಂಡರು
ನೂತನದ ಬೇಹಾರಿಗಳು ತೊಳಲುವ ನಿತಂಬಿನಿಯ ||೩೮||

ಆರಿವಳು ವನಲಕ್ಷ್ಮಿಯೋ ಸುರ
ನಾರಿಯೋ ಮಾರಾಂಗನೆಯ ಮದ
ನಾರಿಸತಿಯೋ ಸರಸತಿಯೊ ಮೇಣಸುರಮಾನಿನಿಯೊ
ಆರ ವನಿತೆಯೊ ಮಾಯಾರೂಪಿನ
ಭೂರಿಭೂತವೊ ತಿಳಿಯಲರಿದಿವ
ಳಾರೆನುತ ಭಯಗೊಂಡು ಓಡಿದರಲ್ಲಿ ಬಣಜಿಗರು ೩೯||

ನೋಡಿದಳು ದಮಯಂತಿ ಭೀತಿಯ
ಲೋಡುತಿಹ ಬೀಡಿಕೆಯ ವೈಶ್ಯರ
ಹೇಡಿತನವನು ಕಂಡು ನಸುನಗುತಲ್ಲಿಗೈತಂದು
ಓಡಲೇತಕೆ ನಿಮಗೆ ಉಪಹತಿ
ಮಾಡುವವಳು ತಾನಲ್ಲ ಜಗಕತಿ
ರೂಢಿಸಿದ ನಳನೃಪನ ಸತಿ ತಾನೆಂದಳಿಂದುಮುಖಿ ||೪೦||

ವೀರಸೇನನ ತನಯ ನಳನೃಪ
ಧಾರಿಣಿಯನುರೆ ಸೋತು ಕಾರ್ಯದ
ಕಾರಣದಿ ನಡೆತಂದನಡವಿಗೆ ತನ್ನನಗಲಿದನು
ದಾರಿತಪ್ಪಿದೆನಿಲ್ಲಿ ನಿಮ್ಮನು
ಸೇರಿದೆನು ಪರದೇಶಿ ತನಗೊಂ
ದೂರ ತೋರಿರೆ  ನೀವೆನುತ ತುಂಬಿದಳು ಕಂಬನಿಯ ||೪೧ ||

ತಾಯೆ ನಿಮ್ಮ ಪದಾಬ್ಜದರ್ಶನ
ವಾಯಿತೆಮಗಿಂದಿನಲಿ ಧನ್ಯರು
ಈಯವಸ್ತೆಗೆ ತಂದುದೇ ವಿಧಿ ನಿಮ್ಮನೆನುತೆರಗಿ
ನೋಯದಿರಿಯಿದೆ ಚೈದ್ಯಪುರವೆಂ
ದಾ ಯುವತಿಯೊಡಗೊಂಡು ಬರುತಿರೆ
ತೋಯಜಾಪ್ತನು ಪಶಶ್ಚಿಮಾಂಬುಧಿಗಿಳಿದನೊಲವಿನಲಿ ||೪೨||

ಹಗಲು ಸವೆದುದು ಹೊಂಬಿಸಿಲು ನೆರೆ
ದೆಗೆದುದತಿವೇಗದಲಿ ಕತ್ತಲೆ
ಬಿಗಿದುದವನೀತಳವ ಪೆಟ್ಟಿಗೆ ಮುಚ್ಚಿದಂದದಲಿ
ಸುಗುಣೆ ದಮಯಂತಿಯಳ ನೋಡಲು
ಸೊಗಸಿ ಬಂದನಿಮಿಷರವೋಲ್ ತಾ
ರೆಗಳು ಮೂಡಿದುವಂಬರದಿ ಪ್ರಜ್ವಲಿಪ ಕಾಂತಿಯಲಿ ||೪೩||

ಅವನಿಪತಿ ಕೇಳ್ ವೈಶ್ಯಕುಲಸಂ
ಭವರು ಹಾಯ್ಕಿದರಲ್ಲಿ ಗೂಡಾ
ರವನು ಬಿಟ್ಟರು ಪಾಳೆಯವ ಮಲಗಿದರು ರಾತ್ರಿಯಲಿ
ಅವಧಿ ಬಂದುದನೇನನೆಂಬೆನು
ಕವಿದು ಕಾಡಾನೆಗಳು ಮಡುವಿಗೆ
ತವಕದಿಂ ನೀರಡಿಸಿ ಬಂದುದು ಸಿರಿಗಳಂದದಲಿ ||೪೪||

ಅಮ್ಮ ಕೇಳೀ ಮದಗಜಂಗಳು
ನಮ್ಮ ಕೊಲುತಿವೆ ಹದನ ಕಾಣೆನು
ನಮ್ಮನೇ ನೆರೆ ನಂಬಿ ಬಂದಿರಿ ಇದಕೆ ಗತಿಯೇನು
ನಿಮ್ಮನಿಲ್ಲಿಗೆ ತಂದುದೇ ವಿಧಿ
ಬೊಮ್ಮ ಬರಹವ ಮೀರುವವರಾ
ರಮ್ಮ ಲೋಕದೊಳೆಂದು ಮರುಗಿದ ವೈಶ್ಯಕುಲತಿಲಕ ||೪೮||

ಜನನವೇ ವರಭೀಮರಾಯನ
ಮನೆಯೊಳಗೆ ನಳಚಕ್ರವರ್ತಿಯೆ
ಇನಿಯನಗ್ಗದ ವೀರಸೇನನೆ ಮಾವನಾಗಿರಲು
ವನದೊಳಿಭಕರಿಗಳಿಗೆ ತಾ ನಿಜ
ತನುವ ತೆರಬೇಕೆಂಬ ಕಾರಣ
ತನಗಿರಲು ನೀವೇನ ಮಾಡುವಿರೆಂದಳಿಂದುಮುಖಿ ||೪೯||

ಎನುತ ಕಣ್ಣೆವೆ ಬಿಗಿದು ಮನದಲಿ
ನೆನೆದಳಚ್ಯುತನಂಘ್ರಿಕಮಲವ
ವನಜನಾಭ ಮುಕುಂದ ಸಲಹೆನೆ ಕರಿಗಳಾಕ್ಷಣಕೆ
ವನಕೆ ಮರಳಿದುವವರನೆಲ್ಲರ
ವನಿತೆ ಸಂತೈಸಿದಳು ದೈವವ
ನೆನೆದ ಭಕ್ತರಿಗುಂಟೆ ಭಯವೆಲೆ ನೃಪತಿ ಕೇಳೆಂದ ||೫೦||

ರಸದ ಲೇಪದಮಿಸುನಿಯೊ ಮಲಿನ
ವಸನದಲಿ ಹುದುಗಿರ್ದ ರತ್ನವೊ
ನಸಿದ ಮೇಘದೊಳೆಸೆವ ಚಂದ್ರನ ಬಿಂಬದಂದದಲಿ
ಶಶಿವದನೆ ಬರುತಿರಲು  ಪುರಜನ
ವೊಸೆದು ನೋಡಿದುದಲ್ಲಿಗಲ್ಲಿಗೆ
ಬಿಸಜಮುಖಿಯಿವಳಾರೆನುತ ಬೆರಗಾಯ್ತು ಜನನಿಕರ ||೫೨||

ನುಡಿಗೆ ಶುಕಪಿಕ ನಲಿಯೆ ಮಿಗೆ ಸೆಳೆ
ನಡು ಬಳುಕೆ ವೃತ್ತಸ್ತನಕೆ ಸೋ
ರ್ಮುಡಿಯ ಭಾರಕೆ ಕೊರಳು ಕೊಂಕಲು ಮೆಲ್ಲಡಿಯನಿಡುತ
ಕುಡಿತೆಗಂಗಳ ನೋಟ ಕಾರ್ಮುಗಿ
ಲೊಡೆದು ಮಿಂಚುವ ಮಿಂಚಿನಂದದಿ
ಸಡಗರದಿ ಬರುತಿರ್ದಳಂಗನೆ ಹೊಳಲ ಬೀದಿಯಲಿ ||೫೩||

ಹೇಮದುಪ್ಪರಿಗೆಯಲಿ ನೃಪಸತಿ
ಕಾಮಿನಿಯರೋಲಗದೊಳೊಪ್ಪುತ
ತಾಮರಸದಳನಯನೆ ದಮಯಂತಿಯನು ತಾ ಕಂಡು
ಈ ಮಹಾ ಸತಿ ಯಾವಳೋ ಸು
ತ್ರಾಮನರಸಿಯೊ ಎನುತ ಕರೆಸಿದ
ಡಾ ಮಹಿಳೆ ಬಂದಳು ನೃಪಾಲನ ಸತಿಯ ಸಮ್ಮುಖಕೆ ||೫೪||

ತಾಯೆ ನೀನಾರಾವ ದೇಶದ
ರಾಯನರಸಿಯಿದೇನು ನಿನಗೀ
ಪ್ರಾಯದಲಿ ಕಳೆಗುಂದಿ ಮಾಸಿಹುದೇನು ಪೇಳೆನಲು
ಆ ಯುವತಿ ಕಣ್ಣೀರಿನಲಿ ಪೂ
ರಾಯ ಶೋಕದಲೆಂದಳಾ ತರ
ಳಾಯತಾಕ್ಷಿಗೆ ತನ್ನ ವೃತ್ತಾಂತವನು ಬಿಸುಸುಯ್ದು ||೫೫||

ಕ್ಷಿತಿಯನೆಲ್ಲವ ಸೋತು ಜೂಜಿನಲಿ
ಪತಿ ಬನಕೆ ಬಂದೆನ್ನನಗಲಿದ
ಮತಿವಿಕಳತನದಿಂದ ತಿರುಗುತ ಬಂದೆ ನಿಮ್ಮಡಿಗೆ
ಹಿತವರಾರನು ಕಾಣೆ ನೀವೇ
ಗತಿಯೆನಗೆ ಪರದೇಶಿಯನು ಪರ
ಹಿತವೆ ಪುಣ್ಯವು ರಕ್ಷಿಸೆಂದಳು ನಳನೃಪನ ರಾಣಿ ||೫೬||

ನುಡಿಯ ಕೇಳುತ ಚೈದ್ಯಭೂಪನ
ಮಡದಿ ನೂಪುರ ಘಲಿರುಘಲಿರೆನ
ಲಡಿಯಿಡುತ ಬಂದಪ್ಪಿ ಸೆರಗಿನೊಳೊರಸಿ ಕಂಬನಿಯ
ಬಿಡು ವ್ಯಥೆಯ ವರಭೂಷಣಂಗಳ
ತೊಡು ದುಕೂಲವನುಡು ಸುಮಾಲ್ಯವ
ಮುಡಿಗೆ ಸೇರಿಸು ತರುಣಿಯೆಂದಳು ಚೈದ್ಯನೃಪನರಸಿ ||೫೭||

ದೇವಿ ನಿಮ್ಮುಪಚಾರವೇ ಸಂ
ಭಾವನೆಯಲಾ ನಮಗೆ ಬೇರಿ
ನ್ನಾವ ಭೂಷಣವೇಕೆ ದೇಸಿಗರಾವು ನಿಮ್ಮಡಿಯ
ಸೇವೆಯಲಿ ತಾನಿಹೆನು  ಹೀನವ
ನಾವು ಬಳಸುವರಲ್ಲ ತನ್ನನು
ಕಾವ ಹದನನು ನೀವೆ ಬಲ್ಲಿರಿಯೆಂದಳಾ ಸತಿಗೆ ||೫೮||

ಎನಲು ನಸುನಗುತೆಂದಳಾ ಮಾ
ನಿನಿಗೆ ತಮ್ಮಿಂದಾಗದುಪಹತಿ
ನಿನಗೆ ಪೇಳೆವು ಹೀನಕೆಲಸವ ಚಿಂತೆ ಬೇಡಿನ್ನು
ತನಗೆ ಮಗಳು ಸುನೀತಿಯಾಕೆಯ
ಮನೆಯೊಳಿರು ಸೈರಂಧ್ರಿತನದಿಂ
ದನವರತ ನೀನೆಂದು ನೇಮಿಸಿ ಕಳುಹಿದಳು ಮನೆಗೆ ||೫೯||

ಆರನೆಯ ಸಂಧಿ

ಇಂದುವದನೆಯನಗಲಿ ತಾ ಮನ
ನೊಂದು ಕಾರ್ಕೋಟಕನ ದೆಸೆಯಲಿ
ಬಂದು ಹೊಕ್ಕನು ನಿಷಧಪತಿ ಋತುಪರ್ಣನಗರಿಯನು

ಕೇಳು ಕುಂತೀತನಯ ನಿಷಧನೃ
ಪಾಲನಿತ್ತಲು ಮರೆದು ಮಲಗಿದ
ಬಾಲಕಿಯ ಬಿಟ್ಟಡವಿಯಲಿ ಹೊರವಂಟನಾ ವನವ
ಕಾಲವಾವನ ಕೀಳು ಮಾಡದು
ಶೂಲಪಾಣಿಯೆ ಬಲ್ಲ ನಳ ಭೂ
ಪಾಲಕನ ವಿಧಿಯೇನನೆಂಬೆನು ಬಂದನಡವಿಯಲಿ ||೧||

ವನಿತೆ ಮಲಗಿಹಳೋ ಅಧೈರ್ಯದಿ
ನೆನೆವಳೋ ದೈವವನು ನಿದ್ರೆಯ
ಕನಸ ಕಂಡೇಳುವಳೊ ಕಾಣದೆ ಹಲವ ಹಂಬಲಿಸಿ
ಕನಲಿ ವಿಧಿಯನು ಬೈವಳೋ ಕಂ
ಬನಿಯ ಸುರಿವಳೊ ಶೋಕದಲಿ ನಿಜ
ತನುವ ಬಿಡುವಳೊ ಕಾಂತೆಯೆಂತಿಹಳೆನುತ ನಡೆತಂದ ||೨||

ಸುತರ ಪರರೆಡೆಗಿತ್ತು ನಂಬಿದ
ಸತಿಯ ತಂದಡವಿಯಲಿ ಮಲಗಿಸಿ
ಮತಿವಿಕಳನಾದೆನು ಪುರಾಕೃತಕರ್ಮಫಲವೈಸೆ
ಕ್ಷಿತಿಯೊಳಾರುಂಟೆನ್ನವೊಲ್ ನಿಜ
ಸತಿಗೆ ತಪ್ಪಿದ ಬಾಹಿರನುಯೆಂ
ದತಿಶಯದ ಶೋಕದಲಿ ನಡೆದನು ಶಿವಶಿವಾಯೆನುತ ||೩||

ಲೋಕದೊಳಗಗ್ಗಳೆಯ ಮಹಿಪರ
ನೇಕರವರೊಳಗಾರನೊಲ್ಲದೆ
ನೂಕಿ ತನ್ನನೆ ಒಲಿದು ಕೈಕೊಂಡಳು ಸರೋಜಮುಖಿ
ಆಕೆಯಗಲಿದ ಪಾತಕನು ತಾ
ನೇಕೆ ಧರೆಯೊಳು ಶಿವಶಿವಾಯೆಂ
ದಾ ಕಮಲಲೋಚನೆಗೆ ಮರುಗಿದನರಸ ಕೇಳೆಂದ ||೪||

ಈ ಪರಿಯೊಳತಿಶೋಕದಿಂದ ಪ್ರ
ಳಾಪಿಸುವ ನಳನೃಪತಿ ಹೆಚ್ಚಿದ
ತಾಪದಲಿ ಕಡುನೊಂದು ಬಳಲುತ ತನ್ನ ಮನದೊಳಗೆ
ಶ್ರೀಪತಿಯ ನೆಲೆಗೊಳಿಸಿ ಹೃದಯದ
ತಾಪದೊಳು ಬರುತಿರಲು ಮುಂದೆ ಸ
ಮೀಪದಲಿ ಹುತವಹನ ಮಹಿಮೆಯ ಕಂಡನವನೀಶ ||೫||

ಏನನೆಂಬೆನು ನೃಪತಿ ಕಿಚ್ಚಿನ
ಹಾನಿಯನು ಬನದೊಳಗೆ ಚಲಿಸುತ
ಭಾನುಮಂಡಲವಡರೆ ಮುಸುಕಿದ ಹೊಗೆಯ ಹೊರಳಿಯಲಿ
ಕಾನನವನೆಡೆಗೊಂಡ ದಳ್ಳುರಿ
ಗಾನಲಾಪುದೆ ತರುನಿಕರ ವೈ
ಮಾನಿಕರು ನಡನಡುಗೆ ಬೆಂದುದು ಸಕಲ ವನಭೂಮಿ ||೬||

ಬಿದಿರ ಮೆಳೆ ಧಗಧಗಿಸೆ ಘನ ಹೆ
ಬ್ಬಿದಿರು ಛಟಛಟಿರೆನಲು ಉರಿಯೊಳು
ಕದಳಿಗಳು ಸಿಮಿಸಿಮಿಸೆ ತರುಗಳನುರುಹಿ ಮೆಳೆಗಳಲಿ
ಗದಗದಿಸೆ ಗುಹೆಗಳಲಿ ಮೃಗತತಿ
ಬೆದರಿ ಹಾಯ್ದುವು ಪಕ್ಷಿಸಂಕುಲ
ಉದುರಿದುವು ಗರಿಸಹಿತ ಬೆಂದಾವನದ ಮಧ್ಯದಲಿ ||೭||

ತೆಗೆದು ಹಾಯ್ದುವು ಸಿಂಹ ಶಾರ್ದೂ
ಲಗಳು ಕರಿಗಳ ಹಿಂಡು ನಾನಾ
ಮೃಗಗಳಗಣಿತ ಬೆಂದು ಬಿದ್ದವು ನಿಮಿಷಮಾತ್ರದಲಿ
ಚಿಗಿದು ಹಾಯ್ದುವು ಗಂಡಭೇರುಂ
ಡಗಳು ಮೊದಲಾದಖಿಳಮೃಗಪ
ಕ್ಷಿಗಳು ಕೆಡೆದುವು ಕಿಚ್ಚಿನೊಳಗವನೀಶ ಕೇಳೆಂದ ||೮||

ಪ್ರಳಯಕಾಲದಿ ಸುಡುವ ವಡಬಾ
ನಳನೊಯೆನಲಾ ವನವ ಸುಡುತಲಿ
ಸುಳಿಸುಳಿಯುತಾಹಾರಗೊಳುತಿರಲಲ್ಲಿ ದನಿಯಾಯ್ತು
ಸಿಲುಕಿದೆನು ಪಾವಕನೊಳೆನ್ನನು
ಒಲಿದು ಹಾ ನೃಪಕುಲಶಿರೋಮಣಿ
ಕಳೆದು ಬಿಡಿಸೈ ಸುಕೃತ ನಿನಗಹುದೆಂದುದಾ ನಿನದ ||೯||

ಆಗಲಾ ದನಿಗೇಳಿ ನೃಪತಿ ಸ
ರಾಗದಿಂದವೆ ಬಂದು ಹೊಕ್ಕನು
ಕೂಗಿದವರಾರೆನುತ ಬರುತಿರೆ ಕಂಡನುರಗಪತಿ
ಪೋಗುತಿದೆಯೆನ್ನಸುವು ಸಲಹು ಷ
ಡಾಗಮಜ್ಞ ನೃಪಾಲಯೆನಲ
ಭೋಗಿಯನು ಕಂಡರಸ ನೀನಾರೆಂದು ಬೆಸಗೊಂಡ ||೧೦||

ಉರಗಪತಿ ಕಾರ್ಕೋಟಕನು ತಾ
ನರಸ ಕೇಳೀ ಬನದೊಳಿರುತಿರೆ
ಪರರಮಋಷಿ ಬಂದೆನ್ನ ತಾಗಿದನಂದು ಭೀತಿಯಲಿ
ಕರೆದು ಕೊಟ್ಟನು ಶಾಪವನು ಸಂ
ಚರಿಸದಂತಿರೆಯೆನಗೆಯಿದು ಪರಿ
ಹರವದೆಂದಿಗೆ ಮುನಿಪ ಕರುಣಿಪುದೆಂದೊಡಿಂತೆಂದ ||೧೧||

ಇರಲಿರಲು ಕಾಲಾಂತರಕೆ ಭೂ
ವರನು ನಳನೃಪನಿಲ್ಲಿಗೈದುವ
ಧರಣಿಪನ ಕರಕಮಲ ಸೋಂಕಲು ಶಾಪವಿದು ಬಳಿಕ
ಪರಿಹರಿಪುದೆನೆ ಮುನಿಯ ವಚನದಿ
ಬರವ ಹಾರುತ್ತಿರಲು ಬಂದೈ
ಕರುಣದಿಂದಗ್ನಿಯನು ಪರಿಹರಿಸೆಂದನುರಗಪತಿ ||೧೨||

ಕರುಣದಲಿ ನೃಪ ಭೀತಿಗೊಳ್ಳದೆ
ಯುರಗಪತಿಯನು ತೆಗೆಯುತನಲನ
ಉರಿಯ ತಪ್ಪಿಸಿ ಕೊಳದ ತೀರಕೆ ತಂದುಪಚರಿಸೆ
ಕರವಿಡಿದು ವಿಷವೇರೆ ನೃಪತಿಯ
ಪರಮತೇಜದ ದೇಹ ಕೆಟ್ಟಿತು ವಿಕೃತರೂಪಾಗಿ ||೧೩||

ದೊಡ್ಡ ಹೊಟ್ಟೆಯ ಗೂನುಬೆನ್ನಿನ
ಅಡ್ಡ ಮೋರೆಯ ಗಂಟುಮೂಗಿನ
ದೊಡ್ಡ ಕೈಕಾಲುಗಳ ಉದುರಿದ ರೋಮಮೀಸೆಗಳ
ಜಡ್ಡು ದೇಹದ ಗುಜ್ಜುಗೊರಲಿನ
ಗಿಡ್ಡ ರೂಪಿನ ಹರುಕು  ಗಡ್ಡದ
ಹೆಡ್ಡನಾದ ಕುರೂಪಿತನದಲಿ ನೃಪತಿ ವಿಷದಿಂದ ||೧೪||

ಮಾರನಾಕಾರದ ನೃಪಾಲಕ
ಕ್ರೂರರೂಪಾದನು ಪುರಾಕೃತ
ಮೀರಲಾರಳವೆಂದು ನುಡಿದನು ತನ್ನ ಮನದೊಳಗೆ
ತೋರಮಾಣಿಕವೆಂದು ಪಿಡಿದರೆ
ಭೂರಿ ಕೆಂಡವಿದಾಯ್ತು ಶಿವಶಿವ
ಕ್ರೂರಜಂತುಗಳೊಡನೆ ಸಖತನ ಫಲಿಸಿತೆನಗೆಂದ ||೧೫||

ಮುನ್ನಮಾಡಿದ ಕರ್ಮಫಲವಿದು
ಬೆನ್ನ ಬಿಡದಿರಲುರಗಪತಿ ಕೇ
ಳಿನ್ನು ನೋಯಲದೇತಕೆ ತಾನೇ ಪಾಪಿಯಾದೆನಲ
ಪನ್ನಗಾರಿಧ್ವಜನ ಕೃಪೆ ತನ
ಗಿನ್ನು ತಪ್ಪಿದ ಬಳಿಕ ಲೋಕದೊ
ಳಿನ್ನು ಸೈರಿಸಲಾರ ವಶವೆಂದೆನುತ ಮರುಗಿದನು ||೧೬||

ಏಕೆ ನೃಪತಿ ವೃಥಾ ಮನೋವ್ಯಥೆ
ಕಾಕಬಳಸಲುಬೇಡ ನೀನವಿ
ವೇಕಿಯೇ ಸಾಕಿನ್ನು ನಿನಗುಪಕಾರವಂಜದಿರು
ಲೋಕ ನಿನ್ನನು ಕಾಣದಂತಿರ
ಬೇಕೆನುತ ಲೇರಿಸಿದೆ ಗರಳವ
ನೇಕವುಪಕಾರಂಗಳಹವದರಿಂದ ನಿನಗೆಂದ ||೧೭||

ಗರಳವಿದು ಸರ್ವಾಂಗದಲಿ ಸಂ
ಚರಿಸುತಿಹ ಪರಿಯಂತ ರಿಪುಗಳ
ಶರಜಲಾಗ್ನಿಭುಜಂಗರೋಗಾದಿಗಳ ಭಯವಿಲ್ಲ
ನಿರುತವಿದು ವಜ್ರಾಂಗಿ ಬೇಡಿ
ನ್ನರಸ ಚಿಂತಿಸಬೇಡ ಕಾರ್ಯದ
ಹೊರಗೆ ತಾನಿದು ಬೇರೆ ಭಯ ಬೇಡಿನ್ನು ನಿನಗೆಂದ ||೧೮||

ಜನಪ ಕೇಳೈ ಧರೆಗೆ ಋತುಪ
ರ್ಣನು ಮಹಾರಾಜೇಂದ್ರ ಗುಣನಿಧಿ
ಯಿನಕುಲಾಂಬುಧಿ ಚಂದ್ರನಾತನ ಪುರವಯೋಧ್ಯೆಯದು
ನಿನಗೆ ಬಹುದಕಷಹೃದಯವು ಆ
ತನಲಿ ನೀನವಗಶ್ವಹೃದಯವ
ನನುಗೊಳಿಸು ಸಾಕಿನ್ನು ಚಿಂತಿಸಬೇಡ ಹೋಗೆಂದ ||೧೯||

ಪೊಡವಿಪನನೋಲೈಸು ವಾಘೆಯ
ಪಿಡಿದು ಬಾಹುಕನೆಂಬ ನಾಮದಿ
ನಡೆಸು ರಥವನು ಹೀನವೃತ್ತಿಯದಲ್ಲ ನಿನಗಿನ್ನು
ಬಿಡದೆ ಮುನ್ನಿನ ರೂಪು ಬೇಕಾ
ದಡೆ ನೆನೆವುದಾ ಪಕ್ಷಿಗಳ ಹ
ಚ್ಚಡವನೀವುವು ಧರಿಸಲಡಗುವುದೀ ಕುರೂಪಿತನ ||೨೦||

ನಿನ್ನ ಹವಣೇ ಪೂರ್ವದಲಿ ಭಿ
ಕ್ಷಾನ್ನವನು ಬೇಡಿದನು ಪಶುಪತಿ
ಪನ್ನಗಾರಿಧ್ವಜನು ಕಾಯ್ದನು ಪಶುಗಳಡವಿಯಲಿ
ಉನ್ನತೈಶ್ವರ್ಯಪ್ರದನು ಶತ
ಮನ್ಯು ಬನದಲಿ ನವೆಯನೇ ಸಾ
ಕಿನ್ನು  ಮನನೋಯದಿರು ಚಿತ್ತೈಸೆಂದನುರಗಪತಿ ||೨೧||

ಪರಮ ಸತ್ಯವ್ರತದೊಳಾ ಪು
ಷ್ಕರನ ಗೆಲಿದುನ್ನತದ ರಾಜ್ಯದ
ಸಿರಿ ಮಿಗಲು ಸಾಮ್ರಾಜ್ಯವಾಳುವೆ ನಿನ್ನ ಸತಿಸಹಿತ
ವರವನಿತ್ತೆನು ನಿನಗೆಯೆಂದುಪ
ಚರಿಸಿ ಕಾರ್ಕೋಟಕನು ನಳನೃಪ
ಗರುಹುತಾಕ್ಷಣ ಮಾಯವಾದನು ರಾಯ ಕೇಳೆಂದ ||೨೨||

ಬಲಿದ ಚಿಂತೆಯ ಮನದ ದುಗುಡದ
ನಳನೃಪತಿ ಕಾನನದಿ ಬರುತಿರೆ
ಮಲೆತು ತೊಲಗಿದ ದುಷ್ಟಮೃಗಗಳಕಂಡು ನಸುನಗುತ
ಹಲವು ಗಿರಿಗುಹೆ ಗಹ್ವರಂಗಳ
ಕಳೆದು ಮುಂದಣ ಜನಪದಂಗಳ
ಬಳಿವಿಡಿದು ನಡೆತಂದನಲಸದೆ ಹಲವು ಯೋಜನವ ||೨೩||

ಹೊಳೆವ ಮಿಸುನಿಯ ರತ್ನನಿಚಯದ
ನೆಲೆನೆಲೆಯ ಸೌಧಾಗ್ರದಲಿ ಪ್ರ
ಜ್ವಲಿಪ ಹೇಮದ ಕಲಶಗಳ ರವಿಚಂದ್ರಶಾಲೆಗಳ
ಲಲನೆಯರ ನಾನಾ ವಿನೋದದ
ಹಲವು ಗೋಪುರಶಿಖರದಗಣಿತ
ನೆಲೆಯ ವ್ಣಿಸಲರಿದಯೋಧ್ಯಾಪುರವು ರಂಜಿಸಿತು ||೨೬||

ಅರಸುಗಳು ಭೂಸುರರು ಮಿಗೆ ವೈ
ಶ್ಯರು ಚತುರ್ಥರು ನಾಗರೀಕದ
ಪುರಜನರು ಸಂದಣಿಸಿತಗಣಿತ ರಾಜವೀಧದಿಯಲಿ
ಕರಿ ತುರಗ ರಥ ಪಾಯದಳ ಗೋ
ಚರಿಸಿತಂಗಡಿ ನವವಿಧಾನದಿ
ಮೆರೆವಯೋಧ್ಯಾಪುರವ ಕಂಡನು ತೂಗಿದನು ಶಿರವ ||೨೭||

ಬಂದು ಹೊಕ್ಕನು ಪುರವ ಮೆರೆವತಿ
ಚಂದವನು ನೆರೆನೋಡಿ ಮನದೊಳ
ಗಂದು ಕೊಂಡಾಡಿದನು ಋತುಪರ್ಣನ ಮಹಾ ಸಿರಿಯ
ತಂದುದೇ ವಿಧಿ ತನ್ನನಿಲ್ಲಿಗೆ
ಮಂದಭಾಗ್ಯನು ತಾನೆನುತ ಮನ
ನೊಂದು ನೆನೆದನು ವರಪುರಾಧಿಪ ಚೆನ್ನಕೇಶವನ||೨೮||

ಏಳನೆಯ ಸಂಧಿ

ಕೇಳು ಧರ್ಮಜ ರತ್ನನಿರ್ಮಿತ
ದಾಲಯದ ಸೊಬಗಿನಲಿಯೋಲಗ
ಶಾಲೆಯಲಿ ಋತುಪರ್ಣನಿದ್ದನು ಸಿಂಹಪೀಠದಲಿ
ಸಾಲ ಮಕುಟದ ನೃಪರು ಭೂಸುರ
ಜಾಲ ಮಂತ್ರಿ ಪುರೋಹಿತರು ಗುಣ
ಶೀಲರುನ್ನತಸತಿಯರಿಂದೆಸೆದಿರ್ದುದಾಸ್ತಾನ ||೧||

ಅವನಿಪತಿ ಕೇಳ್ ನಿಮ್ಮ ಪದಕಮ
ಲವನು ಭಜಿಸುವೆ ಜೀಯ ಚಿತ್ತದಿ
ಸವಡಿನುಡಿ ತನಗಿಲ್ಲ ಬಾಹುಕನೆಂಬುದಭಿಧಾನ
ಭುವನದೊಳು ತಾನಶ್ವಕುಲಹೃದ
ಯವನನು ಬಲ್ಲೆನು ಶಾಕಪಾಕದಿ
ಸವಿಗೊಳಿಪ ವರವಿದ್ಯೆ ತನಗುಂಟೆಂದನವ ನಗುತ ||೩||

ಸೂಪಕಾರದೊಳಗ್ಗಳನು ಕಡು
ರೂಪಿನವ ತಾನಲ್ಲ ಚಿತ್ತದಿ
ಕಾಪುರುಷಷನೆನ್ನದಿರು ನೋಡಾ ತನ್ನ ಪೌರುಷವ
ಭೂಪ ಮುಂಗೈಗಂಕಣಕೆ ಕುಲ
ದೀಪ ಕನ್ನಡಿಯೇಕೆ ತರಿಸು ಪ್ರ
ತಾಪದಾಜಿಯನೆಂದು ಬಿನ್ನೈಸಿದನು ನಸುನಗುತ ||೪||

ಪೊಡವಿಪತಿ ಋತುಪರ್ಣ ಬಾಹುಕ
ನುಡಿದ ವಚನಕೆ ಮೆಚ್ಚಿ ಮನದು
ಗ್ಗಡದ ತೇಜಿಯ ತರಿಸಿ ಕೊಡಲೇರಿದನು ಬೀದಿಯಲಿ
ಮಡದ ಸನ್ನೆಗೆ ಕುಣಿದುರವೆಗಾ
ಲಿಡುತ ಜೋಡಣೆಯಿಂದ ಹಯವಡಿ
ಗಡಿಗೆ ಚಿಮ್ಮಿತು ವಾಯುವೇಗದೊಳರಸ ಕೇಳೆಂದ ||೫||

ಕರದ ವಾಘೆಯ ಸಡಿಲ ಬಿಡೆ ನಿ
ಬ್ಬರದ ಗಮನದೊಳೈದಿತವನಿಯೊ
ಳುರವಣಿಸಿ ಕೆಂಧೂಳಿ ಮುಸುಕಿದುದಂಬರವ ಬಿಡದೆ
ಧರಣಿ ತಲ್ಲಣಿಸಿದುದು ಗಗನದಿ
ಸುರರು ಕೊಂಡಾಡಿದರು ರಾವುತ
ರರಸನಹುದೋ ಭಾಪು ಭಾಪೆಂದು ಸಮಸ್ತಜನ ||೬||

ಮುರುಹಿ ಹಿಡಿಯಲು ಮಡದ ಸನ್ನೆಗೆ
ತಿರುಗಿತತಿವೇಗದಲಿ ಹಯವೋ
ಸರಿಸಿ ಕಿರುಬೆಮರಿಡಲು ನಿಲಿಸುತ ವಾರುವವನಿಳಿದು
ಕರವ ಮುಗಿಯಲು ನೃಪತಿ ಮೆಚ್ಚುತ
ತರಿಸಿ ಕೊಟ್ಟನು ಭೂಷಣಂಗಳ
ಹಿರಿದು ಸಂಬಳವಿತ್ತು ನಿಲಿಸಿದನರಸ ಬಾಹುಕನ ||೭||

ಜನಪ ಕೇಳ್ ಬಾಹುಕನು ವಾಲಾ
ಖ್ಯನಲಿ ಸಖ್ಯವ ಬೆಳಸುತಾತನ
ನನುದಿನವು  ಕೂಡಿರ್ದನೊಂದಾನೊಂದುದಿನ ರಾತ್ರಿ
ವನಜಮುಖಿ ದಮಯಂತಿಯೊಳು ಚುಂ
ಬನ ಸರಸ ಸಲ್ಲಾಪದಿಂದಿಹ
ಕನಸ ಕಂಡೆಚಚರದಿ ಕಾಣದೆ ಹಲುಬಿದನು ||೮||

ಹಾ ತರುಣಿ ನಳಿನಾಕ್ಷಿ ನಯಸು
ಪ್ರೀತಿಪೂರ್ವಕದಿಂದ ಕನಸಲಿ
ಮಾತುದೋರದೆ ಬಂದು  ನನ್ನಲಿ ಕರುಣದಿಂ ನೀನು
ಧಾತುಗುಂದಿದೆನಕಟ ಅಸುರಾ
ರಾತಿ ಬಲ್ಲನೆನುತ್ತ ಮನದಲಿ
ಕಾತರಿಸಿ ನಿಜಸತಿಗೆ ಹಲುಬಿದ ಮದನನೆಸುಗೆಯಲಿ ||೯|
ವಿಕಳನು ವಾಲಾಖ್ಯ ಕೇಳಿದು
ಪಕಪಕನೆ ನಗುತೆಂದನೆಲೆ ಬಾ
ಹುಕನೆ ಹಲುಬುವುದೇನು ಕಾಂತೆಗೆ ತಕ್ಕ ಬೊಂತೆಯನು
ಅಕಟ ನೀನತಿ ಚೆಲುವನೇ ಬಾ
ಲಕಿ ನಿನಗೆ ತಕ್ಕವಳೊ ಲೋಕದಿ
ಮಕರಕೇತನ ಮರುಳನೆಂದಪಹಾಸ್ಯಮಾಡಿದನು ||೧೦||

ಎಂದು ಹಾಸ್ಯವ ಮಾಡಿದವನೊಡ
ನೆಂದನಾ ಬಾಹುಕನು ಪೂರ್ವದೊ
ಳಂದು ಬ್ರಾಹ್ಮಣನೊಬ್ಬ ನಿಜಸತಿಯಗಲಿಯೆನುನೊಡನೆ
ನೊಂದು ನುಡಿದನು ವಿರಹದಲಿಯದ
ನಿಂದು ಕನಸಲಿ ಕಂಡು ಭ್ರಾಂತಿಯೊ
ಳೆಂದಡದು ತಪ್ಪೇನು ಸತಿಸುತರಿಲ್ಲ ತನಗೆಂದ ||೧೧||

ಅರಸ ಕೇಳಾ ಪುರದೊಳೊಬ್ಬರಿ
ಗರಿಯದಂದದಿ ನಳನಿರಲು ಭೂ
ಸುರರ ಮತದಲಿ ಕೇಳ್ದ ಭೀಮನೃಪಾಲನೀ ಹದನ
ಧರೆಯನೆಲ್ಲವ ಜೂಜಿನಲಿ ಪು
ಷ್ಕರಗೆ ಸೋತು ನಳನೃಪನಡವಿಗೆ
ತೆರಳಿದನು ಸತಿಸಹಿತವೆನೆ ಹೊರಳಿದನು ಶೋಕದಲಿ ||೧೨||

ಹಾ ಮಗಳೆ ದಮಯಂತಿ ನಿಷಧಸ
ನಾಮನನು ಕೈಹಿಡಿದು ಬಾಳುವ
ನೇಮವನು ಬಿಸುಟಡವಿಗಟ್ಟಿತೆ ವಿಧಿ ವಿಕರ್ಮಫಲ
ಭೀಮನೃಪನುದರದಲಿ ಜನಿಸಿ ವಿ
ರಾಮವಾದುದೆ ನಿನ್ನ ಸಿರಿಮುಖ
ತಾಮರಸವನು ಕಾಣೆ ತೋರೆಂದರಸ ಹಲುಬಿದನು ||೧೩||

ಮಗಳೆ ಮೋಹದ ಸುತರನಾರಿಗೆ
ತೆಗೆದು ಬಿಸುಟೆ ನಿರಾಶೆಯಲಿಯೀ
ಬಗೆಗೆ ತಂದುದೆ ವಿಧಿಯು ನಿನ್ನನು ಹರಮಹಾದೇವ
ಹೊಗಲುಬಹುದೇ ಕಾನನದೊಳಿಹ
ಮೃಗಗಳಿಂದೇನಾದಳೋ ಪತಿ
ಯಗಲಿದನೊ ಭೇತಾಳ ನುಂಗಿತೊಯೆನುತ ಹಲುಬಿದನು ||೧೪||

ಬಡವರುದರದೊಳುದಿಸಿ ಸುಖವನು
ಪಡೆಯಲೊಲ್ಲದೆ ಬಂದು ನೀನೀ
ಪೊಡವಿಪತಿಯುದರದಲಿ ಸಂಜನಿಸುವರೆ ಎಲೆ  ತಾಯೆ
ಗಿಡಮೆಳೆಗಳಾರಣ್ಯದಲಿ ತನು
ವಿಡಿದು ಸೈರಿಪುದೆಂತು ಮಗಳೇ
ಸುಡು ತನುವನಿದನೆಂದು ಮರುಗಿದಳವಳ ನಿಜಜನನಿ ||೧೫||

ಸತಿಪತಿಗಳೀಪರಿಯ ಶೋಕೋ
ನ್ನತಿಯ ಸೈರಿಸಲಾರದಾ ಮಾ
ರುತನಸಖನೊಳು ಪುಗುವೆವೆಂದುರವಣಿಸಿ ನಡೆತರಲು
ಕ್ಷಿತಿಪ ಕೇಳಿಂತವರು ಬರುತಿರೆ
ಮತಿಯುತನೆ ಚಿಂತೆಯನು ಬಿಡು ಪತಿ
ವ್ರತೆಗೆ ಹಾನಿಯೆ ಸುಖದೊಳಿಹಳೆಂದುದು ನಭೋನಿನದ ||೧೬||

ಎಂದ ವಾಕ್ಯವ ಕೇಳಿ ಭೂಸುರ
ವೃಂದದಲಿ ಮುನಿಯೋರ್ವ ನುಡಿದನು
ಸಂದ ಪರಮಾನಂದಜ್ಯೋತಿರ್ಮಯನ ವಾಕಯಮಿದು
ಇಂದುಮುಖಿ ದಮಯಂತಿ ನಳನೃಪ
ರೆಂದಿಗೂ ಸುಕ್ಷೇಮಿಗಳು ನೀ
ವಿಂದು ಕಳುಹಿಸಿ ಚರರ ಭೇದಿಸಲೆಂದನಾ ಮುನಿಪ ||೧೭||

ಅರಸ ಕರೆಸಿ ವಿಪ್ರರನು ಭೂ
ಸುರರಿಗೆಂದನು ನೀವು ಕರುಣದಿ  
ಧರೆಯೊಳೆಲ್ಲಿಹಳೆನ್ನ ಸುತೆ ದಮಯಂತಿ ನಳನೃಪರ
ಇರವ ಕಾಂಬುದು ಕಂಡು ಕರೆತಂ
ದರಿಗೆ ಕೊಡುವೆನು  ಧರೆಯೊಳರ್ಧವ
ನಿರುತವೆಂದುಪಚರಿಸಿ ಕಳುಹಿದ ಭೀಮನೃಪವರ ||೧೯||

ಹರಿದರರಸಾಳುಗಳು ಪಶ್ಚಿಮ
ಶರಧಿ ದಕ್ಷಣಶರದಿ ಪೂರ್ವದ
ಶರಧಿಯುತ್ರರ ಕುರುನರರೇಂದ್ರರ ಸೀಮೆ ಪರಿಯಂತ
ಪುರಗಳಲಿ ವನವೀದಿಯಲಿ ತ
ದ್ಗಿರಿಗಳಲಿ ನಾನಾ ದಿಗಂತದೊ
ಳರಸಿ ಕಾಣದೆ ಮುಂದೆ ನಡೆದರು ಹಲವು ದಿವಸದಲಿ ||೨೦||

ಪುರನಗರ ಬೀದಿಗಳ ಮಧ್ಯದಿ
ನೆರೆದ ಸಭೆಯಲಿ ಮಾರ್ಗದಲಿ ಸಂ
ಚರಿಸುವವರನು ಕಂಡು ಕೇಳುತ ಬಂದರಲ್ಲಲ್ಲಿ
ಇರವ ಕಾಣದೆ ಬಳಲಿ ಚಿಂತಿಸಿ
ಮರುಗುತವನೀಸುರರು ಭೇದಿಸು
ತಿರಲು ಮೂವರು ಬೇರೆ ಹೊಕ್ಕರು ಚೈದ್ಯನಗರಿಯನು ||೨೧||

ಜನಪನವನೀಸುರರ ಮಂತ್ರದ
ಲನಿಲಸಖನಾರಾಧಿಸಲು ನೃಪ
ತನುಜೆಯಾದ ಸುನೀತೆಯೊಳು ದಮಯಂತಿ ಭಾವಿಸುತ
ವನಿತೆಯಿರೆ ಕಂಡನು ಸುದೇವನು
ಮನದೊಳನುಮಾನಿಸಿದನೀ ಮಾ
ನಿನಿ ಮಹಾಸತಿಯೆನುತ ವಿಸ್ಮಯಗೊಂಡ ಮನದೊಳಗೆ ||೨೩||

ಮುಗಿಲು ಮುಸುಕಿದ ಚಂದ್ರಬಿಂಬವೊ
ಪಗಲೊಳೆಸೆವ ಸುದೀಪಕಾಂತಿಯೊ
ಹೊಗೆಯೊಳೆಸಗಿದ ಚಿತ್ರಪ್ರತಿಮೆಯೊ ಹೇಳಲೇನವಳ
ಉಗಿದು ಬಿಸುಟ ವಿಭೂಷಣದ ಮೈ
ಲಿಗೆಯ  ಸೀರೆಯ ಮಲಿನತನವನು ಕಳೆ
ದೆಗೆದು ಕೈಗಲ್ಲದಲಿ ನಿಂದಿರೆ ಕಂಡನಾ ಸತಿಯ ||೨೪||

ಇದು ಪತಿವ್ರತಧರ್ಮವಹುದೀ
ಸುದತಿ ತೊರೆದಿಹಳೆಲ್ಲವನು ನೃಪ
ವಧುವ ಕಾಣಿಸಿಕೊಂಬೆನೆಂದು ಸುದೇವ ನಡೆತಂದು
ಹದನಿದೇನೌ ತಾಯೆ ನಿಮ್ಮಯ
ವದನಕಮಲವು ಬಾಡಿ ಕಡುಮಾ
ಸಿದುಡುಗೆಯಲಿಹುದೇನು ಕಾರಣವೆನುತಲಿಂತೆಂದ ||೨೫||

ಇಂದುವದನೆ ವಿದರ್ಭಪಟ್ಟಣ
ದಿಂದ ಬಂದೆನು ತಾನು ಭೂಸುರ
ವಂದ್ಯನೆನ್ನಭಿಧಾನಕೇಳು ಸುದೇವನೆಂಬುವುದು
ಇಂದು ನಿಮ್ಮನು ನೋಡ ಕಳುಹಿದ
ತಂದೆ ಭೀಮನೃಪಾಲನಾತನ
ನಂದನಗೆ ತಾ ಸಖನು  ಚಿತ್ತೈಸೆನ್ನ ಬಿನ್ನಪವ ||೨೬||

ಕ್ಷಿತಿಪ ಭೀಮನೃಪಾಲನಾತನ
ಸತಿಸುತರು ಬಾಂಧವ ಸಹೋದರ
ರತಿಶಯರು ನಿಮ್ಮಯ ಕುಮಾರರು ಕುಶಲರಿಂದಿನಲಿ
ಕ್ಷಿತಿಯನಗಲುತ ನಳನೃಪತಿ ನಿಜ
ಸತಿಸಹಿತ ವನಕೈದಿದುದ ಕೇ
ಳುತಲಿ ನಿಮ್ಮವರೆಲ್ಲ ಶೋಕಾಬ್ಧಿಯಲಿ ಮುಳುಗಿಹರು ||೨೭||

ಘೋರತರಶೋಕವನು ಸೈರಿಸ
ಲಾರದಾ ಸತಿಪತಿಗಳಿಬ್ಬರು
ಸೋರುತಿಹ ಕಂಬನಿಗಳಲಿ ಕರೆದೆಮ್ಮ ಕಳುಹಿದರು
ಧಾರಿಣಿಯಲರಸುತಲಿ ಬಂದೆವು
ವಾರಿಜಾನನೆ ನಿಮ್ಮ ಕಂಡೆವು
ಸೇರಿತೆಮ್ಮಯ ಪುಣ್ಯವೆಂದು ಸುದೇವ ಕೈಮುಗಿದ ||೨೮||

ವನಿತೆ ಕೇಳುತ ಶೋಕಜಲದಲಿ
ನೆನೆದು ಬುಧಕುಲತಿಲಕನನು ಬಾ
ರೆನುತ ಮನ್ನಿಸಿ ತನ್ನವರನಡಿಗಡಿಗೆ ಬೆಸಗೊಳಲು
ವನಿತೆ ನೋಡಿದಳಾ ಸುದೇವನ
ಜನನಿಗರುಹಲು ಬಂದಳಾ ವಿ
ಪ್ರನನು ನೀವಾರೆನಲು ನುಡಿದನು ಬಂದ ಸಂಗತಿಯ ||೨೯||

ಕೇಳು ತಾಯೆ ವಿದರ್ಭಪತಿ ಭೂ
ಪಾಲನಾತ್ಮಜೆ ಪತಿಯೊಡನೆ ತ
ನ್ನಾಲಯವನುಳಿದು ವನಕೈದಿದಳೆನಲು ನೃಪ ಕೇಳಿ
ತಾಳಲಾರದೆ ನೋಡಿ ಕರೆತರ
ಹೇಳಿ ಕಳುಹಲು ಬಂದೆನಿಲ್ಲಿಗೆ
ಬಾಲೆ ದಮಯಂತೆಯಳ ಕಂಡೆನೆನುತ್ತ ಕೈಮುಗಿದ ||೩೦||

ಕೇಳಿ ಶಿವಶಿವಯೆನು ತ ಶೋಕವ
ತಾಳಿ ತೆಗೆದಪ್ಪಿದಳು ಮಗಳೆ ವಿ
ಟಾಳಿಸಿತೆ ಸಿರಿ ರಾಜ್ಯಸಂಪದವೀ ಮಹಾವ್ಯಥೆಯ
ಭಾಳದಲಿ ವಿಧಿ ಬರೆದನೇ ಜನ
ಪಾಲ ನಳನೃಪನೆತ್ತ ಸರಿದನೊ
ಕಾಲಗತಿಯಿಂತಾಯಿತೇ ಹಾಯೆನುತ ಮರುಗಿದಳು ||೩೧||

ಬಾಲೆ ಬಿಡು ಶೋಕವನು ಭೀಮನೃ
ಪಾಲನರಸಿಗೆ ತಂಗಿ ತಾ ತ
ನ್ನಾಲಯದಿ ಕಡುನೊಂದೆ ಮಗಳೇ ಸಾಕು ನಮ್ಮೊಡನೆ
ಪೇಳದಿಹರೆ ಸುನಂದೆಗೆ ಸಮ
ಪಾಳಿ ನೀನೆಮಗೆಂದು ತಳ್ಕಿಸಿ
ಪಾಲಿಸಿದಳತಿಕರುಣದಲಿ ದಮಯಂತಿಯನು ಜನನಿ ||೩೨||

ಕಿರಿಯ ತಂದೆ ಸುಬಾಹು ಮರುಗಿದ
ವರಕುವರಿ ದಮಯಂತಿ ನಿನ್ನಯ
ಪುರುಷನಿಲ್ಲದೆ ಚಿಂತೆಯಿಂದೆಲ್ಲವನು ನೀ ತೊರೆದು
ಕರಗಿ ಕಂದಿದೆ ಮಗಳೆ ತಾನಿಂ
ತರಿದುದಿಲ್ಲಲ ನಿನ್ನ ಪುರುಷನ
ಕರೆಸಿ ಕೊಡುವೆನು ನಾನು ಚಿಂತಿಸಬೇಡ ನೀನೆಂದ ||೩೩||

ತರಳೆ ಬಾರೆಂದೆನುತ ಕಣ್ಣಿನೊ
ಳೊರೆವ ಕಂಬನಿಗಳನು ಸೆರಗಿನೊ
ಳೊರಸಿ ದಮಯಂತಿಯನು ಮನ್ನಿಸಿ ಬಂದನೋಲಗಕೆ
ಕರೆಸಿದನು ಭೂಸುರ ಸುದೇವನ
ನಿರುತ ಮಣಿಭೂಷಣಗಳಿಂದುಪ
ಚರಿಸಿ ಕಳುಹಲು ಬಂದ ಭೀಮನೃಪಾಲನೋಲಗಕೆ ||೩೪||

ಅರಸ ಕೇಳು  ವಿದರ್ಭಪತಿ ಮನ
ಮರುಗುತಿರಲಾ ಸಮಯದಲಿ ಭೂ
ಸುರ ಸುದೇವನು ಬಂದು ಕೈಮುಗಿದೆಂದನೀ ಹದನ
ತರುಣಿ ದಮಯಂತಿಯನು ಕಂಡೆನು
ಹರುಷ ಮಿಗಲಾ ಚೈದ್ಯಪುರದಲಿ
ವರಜನನಿ ಚಿಕ್ಕಮ್ಮನಲ್ಲಿಹಳೆಂದನಾ ವಿಬುಧ ||೩೫||

ದೂತರೈದಿದರೊಸಗೆಯಲಿ ಜನ
ಜಾತ ನಲಿಯಲು ಬಂದು ಬೇಗದಿ
ಭೂತಳೇಂದ್ರಗೆ ಕೈಮುಗಿದು ದಮಯಂತಿ ಬಂದಳೆನೆ
ಮಾತ ಕೇಳಿದನದನು ಬಲಸಂ
ಗಾತಲೈತಂದವರ ಕಂಡತಿ
ಪ್ರೀತಿಯಿಂ ತಕ್ಕೈಸಿ ಕರೆತಂದನು ನಿಜಾಲಯಕೆ ||೪೧||

ಅವನಿಪತಿ ಕೇಳಾ ಪುರದೊಳು
ತ್ಸವವನದನೇನನೆಂಬೆನಂದಿನ  
ದಿವಸದೊಳಗರಮನೆಯೊಳಾ ದಮಯಂತಿಯನು ಜನನಿ
ತವಕದಿಂ ಬಿಗಿಯಪ್ಪಿದಳು ಬಾಂ
ಧವರು ಸಂತೋಷಿಸಿದರನಿಬರು
ಯುವತಿಯರು ನಿಜತನಯರಾಲಿಂಗಿಸಿದರಂಗನೆಯ ||೪೨||

ಮಗನ ನೋಡಿದಳಿಂದ್ರಸೇನನ
ತೆಗೆದುತಕ್ಕೈಸಿದಳು ಕರೆದಳು
ಮಗಳ ಚಂದ್ರಾಸ್ಯಳನು ತೊಡೆಯೊಳಗಿಟ್ಟು ಮಮತೆಯಲಿ
ಮೊಗವನೀಕ್ಷಿಸಿ ಮೊಲೆಗಳಲಿ ತೊರೆ
ದುಗುವ ಹಾಲಿನ ಜನನಿ ಮಿಗೆ ನೀ
ರೊಗುವ ಕಣ್ಣೀರಿನಲಿ ಸಂತೈಸಿದಳು ನಿಜಸುತರ ||೪೩||

ಎಂಟನೆಯ ಸಂಧಿ

ಸುರರ ದುಂದುಭಿ ಮೊಳಗೆ ಧರಣೀ
ಸುರರುಲಿಯೆ ಮುರಹರನ ಕರುಣದಿ
ತರುಣಿ ದಮಯಂತಿಯಳನೊಡಗೂಡಿದನು ನಳನೃಪತಿ

ಧರೆಯೊಳೆಲ್ಲಿಹನೋ ವಿಚಾರಿಸಿ
ಕರೆಸಿಕೊಡು ಎಲೆ ತಾಯೆ ಎನ್ನಯ
ಪುರುಷನಿಲ್ಲದ ಬಳಿಕ ಬಿಡುವೆನು ತನುವನೆಂದೆನಲು
ಮರುಗಿದಳು ಮಗಳೆಂದ ಮಾತಿಗೆ
ಕರಗಿ ಕಂಬನಿಲೊಡೆದು ತನ್ನಯ
ಪುರುಷನೊಡನಿಂತೆನಲು ಭೀಮನೃಪಾಲ ಚಿಂತಿಸಿದ ||೮||

ನಳನೃಪತಿ ನಿಜರಾಜತೇಜವ
ನುಳಿದು ತಾ ಪ್ರತಿರೂಪುದಾಳಿಹ
ನಿಳೆಯೊಳಗ್ಗದ ಸಭೆಯೊಳಗೆ ನೀವೆಂಬುದೀ ನುಡಿಯ
ಹಳುವದಲಿ ಸತಿಯುಟ್ಟ ಸೀರೆಯ
ಸೆಳೆಯುತರ್ಧವ ಕೊಂಡು ನಾರಿಯ
ಕಳೆದು ಹೋದವರುಂಟೆಯೆನಲುತ್ತರವ ಪೇಳುವನು ||೧೦||

ಆ ನುಡಿಯ ತಂದೆನಗೆ ನೀವನು
ಮಾನವಿಲ್ಲದೆ ಪೇಳೆನುತ ಸ
ನ್ಮಾನದಿಂ ಬೀಳ್ಕೊಟ್ಟಳಂಗನೆ ತೆರಳಿದರು ಬಳಿಕ
ಮಾನವೇಂದ್ರರ ಸಭೆಯ ನೋಡಿ ನಿ
ಧಾನಿಸುತ ನಾನಾ ದಿಗಂತ
ಸ್ಥಾನದಲಿ ನಗರಿಗಳ ಭೇದಿಸುತೈದಿದರು ಪಥವ ||೧೧||

ಮುಂದೆ ಬರುತಿರೆ ಕಂಡರೊಬ್ಬನ
ಸಂದ ಯಾಚಕ ಭೂಸುರನನೆ
ಲ್ಲಿಂದ ಬಂದಿರಿಯೆನಲಯೋಧ್ಯಾನಗರದಿಂದೆನಲು
ಕುಂದದಲ್ಲಿ ವಿಶೇಷನುಂ
ಟೆಂದೆನಲು ಪೇಳಿದನು ಮಖವಹು
ದೆಂದ ವಿಪ್ರನ ಮಾತಿನಿಂದೈದಿದರಯೋಧ್ಯೆಯನು ||೧೩||

ಮರುದಿವಸ ಋತುಪರ್ಣ ಮುನಮು
ಖ್ಯರು ಸಹಿತಲೋಲಗದೊಳಿರೆ ಕಂ
ಡರು ಮಹಾಸಭೆಯೊಳಗೆ ಹೊಕ್ಕರು ನಿಂದು ಕೈನೆಗಹಿ
ಹಿರಿಯರಿದೆ ಸಾಮಾಜಿಕರು ಸ
ಚ್ಚರಿತರಿದೆಲಾ ಕೇಳಿ ನೀವೆಂ
ದುರುತರವ ಗಂಭೀರವಾಕ್ಯದೊಳೆಂದನಾ ವಿಪ್ರ ||೧೪||

ಹಳುವದಲಿ ಬಂದಲಸಿ ಮಲಗಿದ
ಕುಲಸತಿಯ ವಸನದೊಳಗರ್ಧವ  
ಕಳೆದುಕೊಂಡೊಯ್ದಗಲಿ ಪೋದವರುಂಟೆ ರಾತ್ರಿಯಲಿ
ಇಳೆಯನಾಳುವ ನೃಪರ ಸತ್ಯದ
ಬಳಕೆಗಿದು ಲೇಸಲ್ಲವೆನೆ ಮನ
ವಳುಕಿ ನಸುನಗೆಯಿಂದ ನುಡಿದನು ಒಲಿದು ಬಾಹುಕನ ||೧೫||

ಈತನಾರು ಕುರೂಪಿ ನೈಷಧ
ನೀತನೋ ಸಭೆಯೊಳಗೆ ತಾನೀ
ಮಾತನಾಡಲದೇಕೆ ಸಂಶಯವೆನುತ ಮನದೊಳಗೆ
ದೂತರಾಲೋಚಿಸುತ ಬಂದರು
ಭೂತಳಾಧಿಪತಿ ಭೀಮನೃಪ ಸಂ
ಜಾತೆಯನು ಕಂಡೆರಗಿ ಕೈಮುಗಿದೆಂದರೀ ಹದನ ||೧೭||

ದೇವಿಯರು ಚಿತ್ತೈಸುವುದು ಭುವ
ನಾವಳಿಗಳೆಲ್ಲವನು ನೋಡಿದು
ನಾವು ಮುಂದೈತರಲು ಕಂಡೆವಯೋಧ್ಯೆನಗರಿಯನು
ಭೂವರನ ಋತುಪರ್ಣರಾಯನ
ಸೇವೆಯಲ್ಲಿ ಕುರೂಪಿಯೋರ್ವನು
ಜೀವಸಖನಾತಂಗೆ ಬಾಹುಕನೆಂಬ ನಾಮದಲಿ ||೧೮||

ತುರಗನಿಕರದ ಶಿಕ್ಷೆಯಲಿ ಮಂ
ದಿರದ ಬಾಣಸಿತನದ ಕೆಲಸದಿ
ನೆರೆ ನಿಪುಣನೆಂದೆನಿಸಿಕೊಂಡಿಹ ನೃಪನ ಸಭೆಯೊಳಗೆ
ಪರುಠವಿಸಿ ನೀವೆಂದ ಮಾತನು
ವರಸಭಾಮಧ್ಯದಲಿ ನುಡಿಯ
ಲ್ಕಿರದೆ ತಾನೀ ಮಾತನೆಂದನು ನಗುತ ಬಾಹುಕನು ||೧೯||

ಸತಿಗೆ ವಂಚನೆಗೈದ ಪತಿ ತಾ
ಮತಿವಿಕಳನಂತಿರಲಿ ಭೂಸುರ
ಪತಿಯೆ ಕೇಳಾ ಸತಿಗೆ ಭಂಗವೆ ಪತಿಗೆ ಕೊರತೆ ಕಣಾ
ಪತಿವ್ರತವನಾಚರಿಸುವಳು ನಿಜ
ಪತಿಯ ಗುಣದೋಷಗಳನೆಣಿಸುವಳೆ
ಗತಿಗೆ ಕಾರಣ ಸತ್ಯವೇ ತನಗೆಂದನವ ನಗುತ ||೨೦||

ಎನಲು ತಲೆದೂಗಿದಳು ಈ ಮಾ
ತಿನಲಿ ಸಂಶಯವಿಲ್ಲದಿಹುದೆಂ
ದೆನುತ ಕಂಬನಿದುಂಬಿದಳು ದಮಯಂತಿ ಮನದೊಳಗೆ
ಇನಿಯನಹುದಾತನ ಪರೀಕ್ಷೆಗೆ
ನೆನೆಯಬೇಕೆಂದನುವನೆಂದಾ
ವನಿತೆ ತಂದೆಯನುಜ್ಞೆಯಲಿ ಕರೆದಳು ಸುದೇವನನು ||೨೨||

ಇಳೆಯಮರ ಬಾರೆಂದು ವಿವರವ
ತಿಳುಹಿ ಪಯಣವ ಮಾಡಿ ಕಳುಹಲು
ಹೊಳಲ ಹೊರವಂಟನು ಸುದೇವನು ಹಲವು ಯೋಜನವ
ಕಳೆದು ಬರುತಿರೆ ಮುಂದೆ ಕಂಡನು
ಲಲಿತರತ್ನಪ್ರಭೆಯ ಗೋಪುರ
ಹೊಳೆವಯೋಧ್ಯಾಪುರವನೀಕ್ಷಿಸಿ ಹೊಕ್ಕನವನಂದು ||೨೩||

ಇಟ್ಟ ಫಣೆಯೊಳಗೆಸೆವ ಮಟ್ಟಿಯ
ತೊಟ್ಟ ಹೊಸ ಯಜ್ಞೋಪವೀತದ
ಕಟ್ಟಿಯಿರುಕಿದ ಕಕ್ಷಪಾಳದ ಬೆರಳ ಜಪಸರದ
ಉಟ್ಟ ಧೋತ್ರದ ಬಳಲುಗಚ್ಚೆಯ
ಸೃಷ್ಟಿಗಚ್ಚರಿರೂಪಿನಲಿ ಪರ
ಮೇಷ್ಠಿಯಂದದಿ ಬಂದನಾ ಋತುಪರ್ಣನೋಲಗಕೆ ||೨೪||

ಆರು ನೀವೆಲ್ಲಿಂದ ಬಂದಿರಿ
ದೂರದೇಶದ ಹಿರಿಯರಿಳೆಯೊಳು
ಕಾರಣವದೇನಿರುವುದಲ್ಲಿ ವಿಶೇಷವೇನೆನಲು
ಭೂರಮಣ ಕೇಳವನಿಯಲಿ ಸಂ
ಚಾರಿಸುತ ಬಂದೆವು ವಿದರ್ಭಕೆ
ಭೂರಿನೃಪರೈತರುತಲಿದೆ ಚತುರಂಗಬಲಸಹಿತ ||೨೫||

ದೇಶದೇಶದ ಯಾಚಕಕರು ಧರ
ಣೀಶರುನ್ನತ ತುರಗ ಗಜ ರಥ
ಭೂಸುರರು ಮಂತ್ರಿಗಳು ದೈವಜ್ಞರು ಸುಗಾಯಕಲರು
ಭಾಸುರದ ತೇಜದಲಿ ಜನ ಸಂ
ತೋಷದಲಿ ನಡೆತರುತಲಿದೆ ಪರ
ವಾಸುದೇವನೆ ಬಲ್ಲ ದಮಯಂತಿಯ ಸ್ವಯಂವರವ ||೨೬||

ಶಯನದಲಿ ಮಲಗಿದ ಸತಿಯನಡ
ವಿಯಲಿ ನಳನೃಪನಗಲಿ ಹೋದನು
ನಯವಿಹೀನಳಿಗಾಗಿ ರಚಿಸಿದರಾ ಸ್ವಯಂವರವ
ಪಯಣ ನಿಮಗುಂಟೀಗಳೆನೆ ನೃಪ
ಬಯಸಿ ಹೆಣ್ಣಿನ ಮೋಹದಲಿ ವಾ
ಜಿಯ ವರೂಥಕೆ ಹೂಡಹೇಳಿದ ಕರೆಸಿ ಬಾಹುಕನ ||೨೭||

ಹೈ ಹಸಾ ದವೆನುತ್ತ ವಂದಿಸಿ
ಬಾಹುಕನು ಮಂದಿರಕೆ ಬಂದು ವಿ
ವಾಹವುಂಟೇ ಮರಳಿ ದಮಯಂತಿಗೆ ಜಗನ್ನಾಥ
ಈ  ಹದನವಾರಿಂದಲಾದುದೊ
ದ್ರೋಹಿಯಾ ದಮಯಂತಿಯಿದು ಸಂ
ದೇಹವಾಗಿದೆ ಎನುತ ಚಿಂತಿಸಿ ಬಂದನರಮನೆಗೆ||೨೮||

ಲಾಯದೊಳಗುತ್ತಮದ ತೇಜಿಯ
ನಾಯ್ದು ಹೂಡಿದ ರಥಕೆ ಸೇರಿಸಿ
ವಾಯುವೇಗದ ತೇರ ನಿಲಿಸಿದ ತಂದು ನೃಪನೆಡೆಗೆ
ರಾಯನೇರಲು ಕರಿ ತುರಗ ರಥ
ಪಾಯದಳ ಸಂದಣಿಸಿದುದು ನೆಲ
ಬಾಯ ಬಿಡೆ ಹೊರವಂಟ ನೃಪ ಘನವಾದ್ಯ ರಭಸದಲಿ ||೨೯||

ಜನಪನೆಂದನು ಬಾಹುಕಗೆ ಮಾ
ನಿನಿಯನೀಕ್ಷಿಸಬೇಕು ನಿಲ್ಲದು
ಮನವಿದೊಂದೇ ದಿನಕೆ ನಡೆಸು ವಿದರ್ಭಪುರಕೆ
ಎನಲು ನಕ್ಕನು ಮನದೊಳಗೆ ತ
ನ್ನಿನಿಯಳಿಗೆ ವಿಧಿ ಬರೆದನೇ ಶಾ
ಸನವ ಮೀರುವರಾರೆನುತ ಮರುಗಿದನು ನಳನೃಪತಿ ||೩೦||

ಕರದ ವಾಘೆಯ ಸಡಿಲ ಬಿಡೆ ಮುಂ
ಬರಿದು ಚಿಮ್ಮಿದುವಡಿಗಡಿಗೆ ರಥ
ತುರಗ ಹಾಯ್ದುದು ತೇರು ಮುಂದಕೆ ಪವನವೇಗದಲಿ
ಭರದೊಳೈತರೆ ನೃಪನ ಹಚ್ಚಡ
ಧರೆಗೆ ಬೀಳಲು ಸಾರಥಿಯನೆ
ಚ್ಚರಿಸಿದನು ಋತುಪರ್ಣನಿದಕಿನ್ನೇನು ಹದನೆನುತ ||೩೧||

ಜೀಯ ಚಿತ್ತೈಸುರವಣಿಸಿ ನಿ
ರ್ದಾಯದಲಿ ಹಿಂದುಳಿದುದಂಬರ
ವಾಯುಗತಿಯಲಿ ದಾಟಿಬಂದೆವು ಹಲವು ಯೋಜನವ
ಹೋಯಿತಾ ಮಾತೇಕೆ ನಡೆಯೆನೆ
ರಾಯ ಮೆಚ್ಚಿದ ಸಾರಥಿಯ ಬಿರು
ದಾಯಕನು ನೀನೆಂದು ಕೊಂಡಾಡಿದನು ಬಾಹುಕನ ||೩೨||

ಮುಂದೆ ಕಂಡನು  ಬರುತಲಡವಿಯೊ
ಳೊಂದು ತಾರೆಯ ಮರನನದರೊಳು
ಸಂದ ಫಲಪರ್ಣಂಗಳೆಣಿಸದೆ  ಸೂತ ಪೇಳೆನಲು
ಇಂದೆನಗೆ ಮತಿದೋರದವನಿಪ
ಕುಂದದೆನಿಸಿದ ಪೇಳು ನೀನೆನ
ಗೆಂದೊಡಾ ಸಾರಥಿಗೆ ಲೆಕ್ಕವನರುಹಿದನು ನೃಪತಿ ||೩೩||

ಇಳಿದು ರಥವನು ಬಂದು ವೃಕಷದ
ಬಳಿಗೆ ನಿಂದಾ ಶಾಖೆಗಳಲಿಹ
ಫಲದ ಪರ್ಣಂಗಳೆಣಿಸಿದನಾ ಪದ್ಮ ಸಂಖ್ಯೆಯಲಿ
ಒಲಿದು ಲೆಕ್ಕವಕಂಡು ತಾ ಮನ
ನಲಿದು ನಳನನೃಪ ಪುಷ್ಕರನ ತಾ
ಗೆಲುವ ಹದನಾಯ್ತೆನುತ ಬರೆ ಕಲಿಪುರುಷನಿದಿರಾದ ||೩೪||

ಎಲೆ ನೃಪಾಲಕ ನಿನ್ನ ಸತ್ಯದ
ನೆಲೆಯನೀಕ್ಷಿಸಬೇಕೆನುತ ಬಂ
ದಳಲಿಸಿದೆ ಹಿರಿದಾಗಿ ನೋಯದಿರಿನ್ನು ಚಿತ್ತದಲಿ
ತೊಲಗಿದೆನು ಇಂದಿನಲಿ ಶುಭಮಂ
ಗಳಕರವು ನಿನಗಪ್ಪುದೆನಲಾ
ನಳನೃಪತಿ ಖತಿಗೊಂಡು ಶಾಪವಕೊಡದೆ ಮನ್ನಿಸಿದ ||೩೫||

ಮಾನವಾಧಿಪ ಕೇಳು ಲೋಕಕೆ
ದೀನಜನಬಾಂಧವನು ನಳನೃಪ
ಕಾನನದೊಳವನತ್ತ ಕಳುಹಿಸಿ ಬಂದು ರಥವೇರಿ
ಆ ನರೇಂದ್ರಗಶ್ವಹೃದಯವ
ತಾನರುಹಿ ಆತನಲಿ ಪಡೆದನು
ಸಾನುರಾಗದಿ ಭೂರುಹದ ಹೃದಯವನು ನಿಮಿಷದಲಿ ||೩೬||

ಕರದ ವಾಘೆಯ ಕೊಂಡು ನೃಪಗೆ
ಚ್ಚರಿಸಿ ನೂಕಿದ ತೇಜಿಗಳು ಹೂಂ
ಕರಿಸಿ ಮನ ಮುಂಕೊಂಡು ಹಾಯ್ದುದು ಬಿಟ್ಟ ಸೂಟಿಯಲಿ
ಭರದ ಗಮನವನೇನನೆಂಬೆನು
ನೆರೆದ ಜನವಲ್ಲಲ್ಲಿ ನಿಂದುದು
ಧರೆಯೊಳೀ ಸಾರಥಿಗೆ ಸರಿಯಾರರಸ ಕೇಳೆಂದ ||೩೭||

ತುರಗ ಹೇಷಾರವದ ಗಾಲಿಯ
ಧರಧುರದ ಚೀತ್ಕೃತಿಯ ಸಾರಥಿ
ಯುರವಣೆಯ ರಥದಚ್ಚುಗಳ ಝೇಂಕಾರನಾದದಲಿ
ಭರದಿ ಕೆಂಧೂಳಿಡುತ ಬರಲಾ
ಪುರಜನರು  ಸಂದಣಿಸಿ ನೋಡಲು
ಪರಿಚರರು  ಬಂದರು ವಿದರ್ಭನೃಪಾಲಗರುಹಿದರು ||೩೮||

ಬಂದನೇ ಋತುಪರ್ಣನೆನುತಾ
ನಂದ ಮಿಗೆ ಕರೆಸಿದನು ಸಚಿವರ
ಮಂದಿಯನು ಕಳುಹಿಸಲು ಕರೆತಂದರು ನಿಜಾಲಯಕೆ
ಸಂದಣಿಯ ಪರಿಹರಿಸಿ ನೃಪ ಮುದ
ದಿಂದ ಬೇರರಮನೆಯೊಳುಲುಪೆಗೆ
ಳಿಂದಯೋಧ್ಯಾಪತಿಯ ಸತ್ಕರಿಸಿದನು ಭೀಮನೃಪ ||೩೯||

ಕೇಳಿದಳು ದಮಯಂತಿ ವಾರ್ತೆಯ
ತಾಳಿದಳು ಹರುಷವನು ಮನದಲಿ
ಫಾಲಲೋಚನದಿಂದ ಫಲಿಸಿತು ಪುಣ್ಯವೆನಗಿಂದು
ಬಾಲೆ ಕೇಳೆನಗಿಂದು ಶೋಕ
ಜ್ವಾಲೆ ಪರಿಹರವಾಯ್ತು ಮಂಗಳ
ದೇಳಿಗೆಯು ಪಸರಿಸಿತು ಶುಭಕರವೆಂದಳಿಂದುಮುಖಿ||೪೦||

ಖಿನ್ನನಾದನು ಚಿತ್ತದಲಿ ಋತು
ಪರ್ಣ ಭೂಸುರನೆಂದ ಮಾತಿನ
ಭಿನ್ನಣಕೆ ಮರುಳಾಗಿ ಬಂದೆನು ಮೂಢನಾದೆನಲ
ಭಿನ್ನವಿಲ್ಲದೆ ಕೊಂಡ ನಾಚಿಕೆ
ಗಿನ್ನು ಹದನೇನೆನುತ ಗುಣಸಂ
ಪನ್ನ ಮರುಗಿದ ತನ್ನ ಮನದ ದುರಂತಚಿಂತೆಯಲಿ ||೪೧||

ನಾರಿಯರ ಮರೆಗೊಂಡು ಸಭೆಯಲಿ
ಸಾರಥಿಯ ಕುಬ್ಜಾವತಾರವ
ನೋರೆಗಣ್ಣಿನೊಳೀಕ್ಷಿಸುತ ದಮಯಂತಿ ಮನದೊಳಗೆ
ಆರಿವನು ನಳನೃಪನ ಹೋಲುವ
ಚಾರುಚಿಹ್ನೆಗಳಿಲ್ಲ ತೋರ್ಕೆ ವಿ
ಕಾರವಾಗಿದೆ ರೂಪೆನುತ ಚಿಂತಿಸಿದಳಿಂದುಮುಖಿ ||೪೩||

ತಾಯೆ ಚಿತ್ತೈಸಿನ್ನವನ ಕರ
ಣಾಯತತನವೇನೆಂಬೆ ಲೋಕದ
ಸ್ತ್ರೀಯರೊಳಗಿನ್ನಿಲ್ಲ ರಚಿಸುವ ಶಾಕಪಾಕದಲಿ
ಮಾಯವನು ಮಿಗೆ ತಿಳಿಯಲರಿಯದು
ಪಾಯದಿಂದೀಕ್ಷಿಸಲು ಸಕಲ ರ
ಸಾಯನವು ಪರಿಪಕ್ವವಾಗಿದೆ ಪೇಳಲರಿದೆಮಗೆ ||೪೩||

ದಾದಿಯರು ಬಾಹುಕನ ಗುಣಗಳ
ಭೇದಿಸಿದರೊಂದೊಂದು ಬಗೆ ತ
ಳೋದರಿಗೆ ಬಿನ್ನೈಸೆ ನಿಶ್ಚೈಸಿದಳು ದಮಯಂತಿ
ಆದಡವ ನಳನಹುದು ಗುಣದಲಿ
ಭೇದಿಸುವೆನಿನ್ನೊಮ್ಮೆಯೆನುತ ವಿ
ನೋದದಿಂದಾಡುವ ಕುಮಾರರ ತರಿಸಿದಳು ತರುಣಿ ||೪೭||

ತರಳರಿಗೆ ನೀರೆರೆದು ಕಾಂಚನ
ವರದುಕೂಲವನಿತ್ತು ದಿವ್ಯಾ
ಭರಣಭೂಷಿತರಾದ ತನಯರ ದಾದಿಯರ ಕೈಯ
ಪಿರಿದು ಕಳುಹಲು ಬಾಣಸಿನ ಮಂ
ದಿರದ ಬಾಗಿಲ ಮುಂದೆ ಬಿಡೆ ಸಂ
ಚರಿಸಿ ಸುಳಿದಾಡುವರ ಕಂಡನು ನೃಪತಿ ಹರುಷಿಸುತ ||೪೮||

ತರಳರನು ಪಿಡಿದೆತ್ತಿ ತೊಡೆಯೊಳ
ಗಿರಿಸಿ ಮುದ್ದಾಡಿದನು ನೋಡುತ
ಸುರಿವ ಕಂಬನಿಗಳಲಿ ಬಾಹುಕ ಮರುಗುತಿರಲಂದು
ಮತಿಯ ಜಾಲಂದ್ರದಲಿ ಕಂಡಳು
ತರುಣಿ ನಳನೃಪನೀತನಹುದೆಂ
ದುರುತರದ ಪ್ರೇಮದಲಿ ಬಂದಳು ಜನನಿಯರಮನೆಗೆ ||೪೯||

ತಾಯೆ ಸಂಶಯವಿಲ್ಲ ನೈಷಧ
ರಾಯನೀತನು ಸೂತನಲ್ಲ ವಿ
ಡಾಯದಲಿ ಬಂದಿಹನು ನೋಡು ಕುರೂಪಿವೇಶದಲಿ
ರಾಯರೊಳಗಗ್ಗಳೆಯ ನಳನೃಪ
ಮಾಯವನು ತೋರಿಹನು ಇವನ ನಿ
ಜಾಯತವ ತಾ ಬಲ್ಲೆ ಕರೆಸೆಂದಳು ಸರೋಜಮುಖಿ ||೫೦||

ಧರಣಿಪತಿಯನುಮತದೊಳಾತನ
ಕರೆಸಿದಳು ನೃಪನರಸಿ ಬಾಹುಕ
ನಿರದೆ ಬಂದನು ರಾಜಮಂದಿರದಲ್ಲಿ ಕುಳ್ಳಿರಲು
ತರಳೆ ಮಾಸಿದ ಸೀರೆಯಲಿ ಗರ
ಗರಿಕೆ ತಪ್ಪಿದ ಚೆಲುವಿನಲಿ ನಿಂ
ದಿರಲು ಕಂಡನು ಸತಿಯ ತಲೆಬಾಗಿದನು ಲಜ್ಜೆಯಲಿ ||೫೧||

ಹಿಮಕರಾನ್ವಯತಿಲಕ ವಸುಧಾ
ರಮಣ ಪುಣ್ಯೋದಯ ಸುಭಾಷಿತ
ವಿಮಲಗುಣ ಚಾರಿತ್ರಸನ್ನುತ ಸತ್ಯಸಂಚಾರ
ಕುಮತಿ ಪುಷ್ಕರ ಮುನಿದನೇ ವಿ
ಕ್ರಮದರಿದ್ರತೆ ಬಂದುದೇ ಸಾ
ಕಮಿತಭುಜಬಲ ಪಾಲಿಸೆಂದಳು ಪತಿಗೆ ದಮಯಂತಿ ||೫೨||

ತುರುಬ ಹಿಡಿದೆತ್ತಿದನು ಸತಿಯಳ
ಸುರಿವ ಕಂಬನಿದೊಡೆದು ನುಡಿದನು
ಬರಿದೆ ಚಿಂತಿಸಲೇಕೆ ಮಾನಿನಿ ಬಿಡು ಮನೋವ್ಯಥೆಯ
ಅರಿಯದವಳೇಂ ನೀನು ಲೋಕದ
ಸರಸಿಜಾಕ್ಷಿಯರೆಲ್ಲರಿಗೆ ವರ
ಗುರುವಲಾ ಬರಿದೆನ್ನ ಬಯಸಲುಬೇಡ ಹೋಗೆಂದ ||೫೪||

ವಿನಯಹೀನನು ತಾನು ಮನದಲಿ
ನೆನೆದು ತಪ್ಪಿದ ನಿರ್ದಯನು ಕಾ
ನನದಿ ನಿನ್ನನು ಬಿಸುಟು ಕಳೆದ ದುರಾತ್ಮ ಬಾಹಿರನ
ನೆನೆವರೇ ಬಿಡು ಮರುಳೆ ನಿನಗಿಂ
ದಿನಲಿ ಮಾಳ್ಪ ಪುನಸ್ವಯಂವರ
ಮನಕೆ ಸರಿಬಂದವನ ನೀನೊಲಿಸೆಂದನಾ ನೃಪತಿ ||೫೫||

ಎನಲು ಕರ್ಣಂಗಳಿಗೆ ಸಬಳದ
ಮೊನೆಗಳಿರಿದಂತಾಗೆ ಸತಿ ಕ
ಣ್ಣಿನಲಿ ತುಂಬಿದಳುದಕವನು ಹರಹರ ಶಿವಾಯೆನುತ
ಎನಗೆಯಿನ್ನು ಪುನಸ್ವಯಂವರ
ಮನದೊಳುಂಟೆ ನೀವು ಬರಬೇ
ಕೆನುತ ವಾರ್ತೆಯ ಕಲ್ಪಿಸಿದೆ ಕೇಳೆಂದಳಿಂದುಮುಖಿ ||೫೬||

ನಡೆಯುತೆಡಹಿದ ಪಟಟ್ಟದಾನೆಯ
ಪಿಡಿದು ಕೊಲ್ಲುವರುಂಟೆ ನಂಬಿದ
ಮಡದಿಯಲ್ಲವೆ ತಾನು ಬಿರುನುಡಿಯೇಕೆ ನಳನೃಪತಿ
ಅಡವಿಯಲಿ ಕಡುನೊಂದು ದೇಹವ
ಬಿಡದೆಯುಳುಹಿದೆನಿನ್ನು ಪ್ರಾಣದ
ಗೊಡವೆಯಿನ್ನೇಕೆನುತ ಕಂಬನಿದುಂಬಿದಳು ತರಳೆ ||೫೮||

ಇದಕೆ ಯಮ ವರುಣಾನಿಲೇಂದ್ರರು
ಮದನಜನಕನೆ ಸಾಕ್ಷಿಯೆನೆ ಮೇ
ಘದಲಿ ನುಡಿದನು ವಾಯು ನಳನೃಪನೊಡನೆ ಸತ್ಯವನು
ಚದುರ ಕೇಳ್ ದಮಯಂತಿ ಲೋಕದ
ಸುದತಿಯೇ ತಿಳಿ ಲೋಕಪಾವನೆ
ಯಿದಕೆ ಸಂಶಯವೇಕೆ ಪಾಲಿಸು ಸತಿಯ ನೀನೆಂದು ||೬೨||

ಪವನನಾಡಿದ ನುಡಿಯ ಕೈಕೊಂ
ಡವನಿಪತಿ ಬಿನ್ನೈಸಿದನು ಕೈ
ತವಕದಲಿ ಕಲಿಯಿಂದ ನೊಂದೆನು ನಿಮ್ಮ ದರುಶನದಿ
ಬವಣೆ ಹಿಂಗಿ ಕೃತಾರ್ಥನಾದೆನು
ಬುವಿಯೊಳಿನ್ನೇನೆನುತ ಪಕ್ಷಿಯ
ಹವಣ ಮನದಲಿ ನೆನೆಯೆ ಬಂದುದು ದಿವ್ಯಮಯವಸನ ||೬೩||

ಧರಿಸಿದನಾ ನಳನಾ ದುಕೂಲವ
ಪರಿಹರಿಸಿತಾ ರೂಪು ಮುನ್ನಿನ
ಪರಮತೇಜದ ದಿವ್ಯತನುವಿನೊಳೆಸೆದು ರಂಜಿಸಲು
ಸುರರ ದುಂದುಭಿ ಮೊಳಗೆ ಮಲ್ಲಿಗೆ
ಯರಳ ಮಳೆ ಸೂಸಿದರು ಗಗನದಿ
ಸುರಸತಿಯರಕ್ಷತೆಯ ತಳಿದರು ಹರಸಿ ನಳನೃಪಗೆ ||೬೪||

ಒಂಬತ್ತನೆಯ ಸಂಧಿ

ಕದನದಲಿ ಪುಷ್ಕರನ ಬಲವನು  
ಸದೆದು ಜೂಜಿಂ ಗೆಲಿದು ರಾಜ್ಯವ
ಮುದದಿ ಪಾಲಿಸುತಿರ್ದನಾ ಸತಿಸಹಿತ ನಳನೃಪತಿ

ಕಲಿಪುರುಷನಿಂದಾದುದುಪಹತಿ
ಲಲನೆ ಪುತ್ರರನಗಲಿ ಕಷ್ಟವ
ಬಳಸಿದೆಯಲಾ ನೊಂದು ಸತ್ಯವ ಬಿಡದೆ ಸಂಚರಿಸಿ
ಸುಲಭನಾದೆ ಕುಲಾಂಗನೆಯ ವ್ರತ
ಫಲದ ಪುಣ್ಯೋದಯದಿ ನಿಜಸಿರಿ
ಫಲಿಸಿತಿನ್ನೀ ಲೋಕದಲಿ  ನಿನಗಾರು ಸರಿಯೆಂದ ||೮||

ಹರಿಯ ನೆಲೆಗೆಡಿಸಿದನು ಪರಮೇ
ಶ್ವರನ ಭಿಕ್ಷವನೆತ್ತಿಸಿದ ಸರ
ಸಿರುಹಭವ ತಾ ಶಿರವ ಪೋಗಾಡಿದನು ಪೂರ್ವದಲಿ
ಕರುಣಹೀನನು ನಿನ್ನ ಸೋಂಕಲು
ತೆರನ ಕಾಣದೆ ಹಲವು ದಿನ ಕಾ
ತರಿಸಿ ಛಲದಲಿ ತೊಡಚಿಬಿಟ್ಟನು ಮನದ ಭೀತಿಯಲಿ ||೯||

ಎಲ್ಲ ನೃಪರಂತಲ್ಲ ಲಕ್ಷ್ಮೀ
ವಲ್ಲಭನ ಪ್ರತಿಬಿಂಬ ನಿನ್ನಲಿ
ನಿಲ್ಲಬಲ್ಲನೆ ಕಲಿಪುರುಷನತಿ ಬೇಗ ತೆರಳಿದನು
ಸಲ್ಲಲಿತ ಸಾಮ್ರಾಜ್ಯಪದವಿಂ
ದೆಲ್ಲ ನಿನಗಹುದೆಂದು ಧರಣೀ
ವಲ್ಸಲಭನ ಸತ್ಕರಿಸಿ ಕೊಂಡಾಡಿದನು ಮೈತ್ರೇಯ ||೧೦||

ಅರಸ ಕೇಳು ವಿದರ್ಭಪತಿ ಮುನಿ
ವರರನುಪಚರಿಸಿದನು ಧರಣೀ
ಸುರರಿಗಿತ್ತನು ಗೋಹಿರಣ್ಯ ಸುವಸ್ತುದಾನವನು
ಕರೆಸಿ ಕೊಟ್ಟನು ನೃಪತಿಗಖಿಲಾ
ಭರಣಗಳ ಕರಿ ತುರಗ ರಥವನು
ಪುರಜನರ ಸಂತೈಸಿ ಕಳುಹಿದನಖಿಳಬಾಂಧವರ ||೧೩||

ದಂಡು ನಡೆಯಲಿ ನಿಷಧಪುರಿಗಾ
ಭಂಡ ನೃಪ ಪುಷ್ಕರನ ಮಾತೇ
ನಂಡಲೆದು ಫಲವಿಲ್ಲ ಸಾಕಿನ್ನೇಳಿಯೆಂದಿನುತ
ಮಂಡಲಾಧಿಪನೆನಲು ಭೂಪರ
ತಂಡವೆದ್ದುದು ಕೂಡೆ ಭಟರು
ದ್ದಂಡವೆದ್ದುದು ಕೂಡೆ ಭಟರು
ದ್ದಂಡ ಕೈದುವ ಕೊಂಡು ನಡೆದರು ನಳನ ಸನ್ನೆಯಲಿ ||೧೬||

ಹೊಳೆವ ಸಿಂಧದ ಸಾಲ ಝಲ್ಲರಿ
ಗಳ ಪತಾಕದ ಛತ್ರ ಚಮರಾ
ವಳಿಗಳಿಂದ ಧಾತುಗುಂದಿದಭ್ರತಳ ಮುಸುಕಿ
ಉಲಿವ ಮಂಗಳಪಾಠಕರ ಕಳ
ಕಳಿಕೆ ಮಿಗೆ ಹೆಬ್ಬಲ ಛಡಾಳಿಸೆ
ನೆಲ ಬಿರಿಯಲೈತಂದು ಬಿಟ್ಟುದು ನಿಷಧನಗರಿಯಲಿ ||೨೦||

ಮುರಿದ ಬಲ ಸಂವರಿಸಿಕೊಂಡುದು
ಮೊರೆವ ಕಹಳಾರವದ ಸನ್ನೆಯೊ
ಳುರುಬಿತಾ ಬಲದೊಳಗೆ ಬೆರಸಿತು ನಳನ ಪರಿವಾ ರ
ಅರಸನಾ ಸಮಯದಲಿ ಹೂಡಿದ
ಸರಳ ಕೆನ್ನೆಗೆ ಸೇದಿ ಬಿಡೆ ಕ
ತ್ತರಿಸಿ ಬಿಸುಟುದು ರಿಪುನೃಪರ ಶಿರಗಳನು ಖಂಡಿಸುತ ||೨೯||

ಆರು ಸಾಸಿರ ತೇರುಗಳು  ಹದಿ
ನಾರುಸಾಸಿರ ಕರಿಗಳಿಪ್ಪ
ತ್ತಾರುಸಾವಿರ ತುರಗ ಕಾಲಾಳೊಂದು ಲಕ್ಷದಲಿ
ಸೇರಿತಂತಕಪುರಿಗೆ ಸರಳಿನ
ಸಾರದಲಿ ರಿಪುಸೇನೆ ಮುರಿದುದು
ಆರು ಬಲ್ಲರು ಮಿಕ್ಕ ಸೇನೆಯನರಸ ಕೇಳೆಂದ ||೩೩||

ಅರಿಭಯಂಕರ ನೈಷಧನ ಸಂ
ಗರದಿ ಗೆಲುವವರಾರು ದೇವಾ
ಸುರರು ನಿಲಲರಿದರಸ ಮಿಕ್ಕಿನ ನರರ ಪಾಡೇನು
ಮರುಳುತನ ಬೇಡಿನ್ನು ನೃಪನನು
ಕರೆಸಿ ಸಂಧಿಯ ಮಾಡಿ ಜೂಜಿನ
ಮರುವಲಗೆಯಲಿ ಗೆಲುವುದುಚಿತವೆಂದನಾ ಮಂತ್ರಿ ||೩೮||

ಎಲವೋ ಕೇಳಿನ್ನಾದುದಾಗಲಿ
ಕಲಹಕಂಜುವೆ ನೀನು ಜೂಜಿನ
ಬಳಕೆಯಲಿ ಬಲ್ಲಿದನು ನಮ್ಮನು ಕರೆದೆ ತಪ್ಪೇನು
ಕಲಹವಾಗಲಿ ಜೂಜದಾಗಲಿ
ಗೆಲುವೆ ನಿನ್ನನು ಕುಟಿಲ ಹೃದಯದ
ನೆಲೆಯ ಬಲ್ಲೆನು ನಿನಗೆ ಮನವೊಲಿದುದನು ಮಾಡೆಂದ ||೪೧||

ಹೂಡಿದರು ಸಾರಿಗಳ ನೆತ್ತವ
ನಾಡಿದರು ಮನ ನಲಿದು ಖಾಡಾ
ಖಾಡಿಯಲಿ ದುಗ ಬಾರ ಇತ್ತಿಗವೆಂಬ ರಭಸದಲಿ
ಬೇಡಿದರೆ ಬೀಳುವುದು ದಾಯದ
ರೂಢಿ ಜಳುಪಿಸೆ ಹೊಳೆವ ದಾಳದ
ರೂಢಿಗಚ್ಚರಿಯಾಗಿ ನಳನೃಪ ಗೆಲಿದು ಬೊಬ್ಬಿರಿದ ||೪೪||

ಖಿನ್ನನಾದನು  ಪುಷ್ಕರನು ಹರು
ಷೋನ್ನತಿಯ ಬೀಳ್ಕೊಡಲು ಗುಣಸಂ
ಪನ್ನನೇರಿದ ರತ್ನಸಿಂಹಾಸನವ ನಳನೃಪತಿ
ಪನ್ನಗಾರಿಧ್ಜನ ಕೃಪೆ ನಿನ
ಗಿನ್ನು ಸಿದ್ಧಿಸಲೆಂದು ಮುನಿಜನ
ರುನ್ನತದಿ ಕೊಂಡಾಡಿ ಹರಸಿದರೆಲ್ಲ ಧರಣಿಪನ ||೪೫||

ಎಲೆ ಯುಧಿಷ್ಠಿರ ಕೇಳು ಲೋಕದ
ಲಲನೆಯರ ಪರಿಯಲ್ಲ ನಾಲ್ವರು
ಚೆಲುವೆಯರು ಗುಣಶೀಲಸಂಪನ್ನೆಯರು ಭುವನದಲಿ
ನಳಿನಮುಖಿ ದಮಯಂತಿ ಸೀತಾ
ಲಲನೆ ದ್ರೌಪದಿ ಚಂದ್ರಮತಿ ಕೋ
ಮಲೆಯರಚ್ಯುತನಚ್ಚುಮೆಚ್ಚಿನ ರಾಜವನಿತೆಯರು ||೬೭||

ನಿನಗೆ ಪಟ್ಟದ ಮಹಿಳೆ ದ್ರೌಪದಿ
ವನಿತೆಯರ ಸಾಮ್ರಾಜ್ಯಸಂಪದ
ವಿನಿತು ಸತಿಯಿಂದಾಗುವುದು ಕಾಮ್ಯಗಳು ಸಿದ್ಧಿಪುವು
ಜನಪ ಚಿಂತಿಸಬೇಡ ನಾಳಿನ
ದಿನದಿ ಬಹ ನಿನ್ನನುಜನರ್ಜುನ
ಮನದ ಚಿಂತೆಯ ಬೀಳುಕೊಡು ಸುಖಿಯಾಗು ನೀನೆಂದ ||೬೮||

ಮೇದಿನಿಯೊಳೀ ಪುಣ್ಯಚರಿತೆಯ
ನಾದರಿಸಿ ಬರೆದೋದಿ ಕೇಳುವ
ಸಾಧುಸಜ್ಜನರಾದವರಿಗಹುದಖಿಳ ಕೈವಲ್ಯ
ವೇದಗೋಚರ ಕೃಷ್ಣ ವರಪುರ
ದಾದಿಕೇಶವನಮರವಂದಿತ
ನಾದಿನಾರಾಯಣನು ಸಲಹುವನಖಿಳಸಜ್ಜನರ ||೭೨||

ಕೃಪೆ

ಹಾತೂರು ಶಂಕರನಾರಾಯಣ ಭಟ್

1 ಕಾಮೆಂಟ್‌: