ಸೋಮೇಶ್ವರ ಶತಕ

ಸೋಮೇಶ್ವರ ಶತಕ ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ ಕೆಲವಂ ಮಾಳ್ಪವರಿಂದ ಕಂಡು ಕೆಲವಂ ಸುಜ್ಞಾನದಿಂ ನೋಡುತುಂ ಕೆಲವಂ ಸಜ್ಜನ ಸಂಗದಿಂದಲರಿ...

ಭಾನುವಾರ, ಮಾರ್ಚ್ 3, 2019

ಶ್ರೀ ಮಲ್ಲಿಕಾರ್ಜುನ ಕವಿಯ ಸೂಕ್ತಿ ಸುಧಾರ್ಣವಂ

ಶ್ರೀ ಮಲ್ಲಿಕಾರ್ಜುನ ಕವೀಶ್ವರ ಸಂಯೋಜಿತ ಸೂಕ್ತಿ ಸುಧಾರ್ಣವಂ

ಇದರ ಕರ್ತೃ ಕವಿ ಮಲ್ಲಿಕಾರ್ಜುನ.  ಈ ಗ್ರಂಥವನ್ನು ಕವಿಯು ಒಂದು ಮಹಾಕಾವ್ಯವಾಗಿ ಪರಿಗಣಿಸಿ ಮಹಾಕಾವ್ಯದ ಅಂಗಗಳೆನಿಸಿಕೊಳ್ಳುವ ಹದಿನೆಂಟು ವಿಷಯಗಳ, ವರ್ಣನಾರೂಪವಾದ ಪದ್ಯಗಳನ್ನು ತನಗೆ ಹಿಂದಿದ್ದ ಸುಪ್ರಸಿದ್ಧ ಕವಿಗಳ ಗ್ರಂಥಗಳಿಂದ ಸಂಗ್ರಹಿಸೆ, ಒಂದೊಂದು ಅಂಗಕ್ಕೆ ಸಂಬಂಧಿಸಿದ ಪದ್ಯಗಳನ್ನು ಒಂದೊಂದು ಆಶ್ವಾಸವಾಗಿ ಸಂಯೋಜನೆಮಾಡಿ ಬರೆದಿರುತ್ತಾನೆ.

ಈತನಿಗೆ ಮಲ್ಲ, ಮಲ್ಲಪ, ಚಿದಾನಂದ, ಎಂಬ ಹೆಸರುಗಳೂ ಉಂಟು. ಈತನು” ಯಾದವಕಟಕಾಚಾರ್ಯ ಸುಕವಿಸುಮನೋಬಾಣನ ಜಾಮಾತೃ” ಅಂದರೆ ಕವಿ ಜನ್ನನ ಸೋದರಿಯ ಗಂಡ. ಕೇಶಿರಾಜನ ತಂದೆ. ಈತನು
“ ಮುನಿಗಳ ಸಭೆಯೊಳ್ ಪರಮಮುನಿ” ,“ ಸರಸ ಕವೀಶ್ವರರ ಸಭೆಯೊಳ್ಶಸರಸಕವೀಶಂ” , “ಬುಧರ ಸಭೆಯೊಳ್ ಪರಮಬುಧಂ”, “ ಯೋಗಿಪ್ರವರ ಚಿದಾನಂದ ಮಲ್ಲಿಕಾರ್ಜುನಂ “ ಈತನು ಹೊಯ್ಸಳವೀರಸೋಮೇಶ್ವರನ ಆಶ್ರಿತನೆಂದೂ
ಆ ರಾಜನ ಆಳ್ವಿಕೆಯಲ್ಲಿ ಅವನ ಮೆಚ್ಚಿಕೆಗೋಸ್ಕರ ಈ ಕಾವ್ಯವನ್ನು ಬರೆದನೆಂದೂ( ಸಂಯೌಜಿಸಿದನೆಂದೂ) ಸ್ಪಷ್ಟಪಡುತ್ತದೆ.ಈ ಗ್ರಂಥದಲ್ಲಿರುವ ಕ್ರಮವೂ ವಿವರಣೆಯೂ ಬಸರಾಳುಶಾಸನದಲ್ಲಿಯೂ ಕಂಡುಬರುವುದರಿಂದ  ಈ ಶಾಸನದ ಕರ್ತೃವೂ ಈ ಗ್ರಂಥದ ಕರ್ತೃವೂ ಒಬ್ಬನೇ ಎಂದು ಊಹಿಸಬಹುದು.

೧. ಪೀಠಿಕಾ ಪ್ರಕರಣಂ

ಶ್ರೀ ನೆಲಸಿರ್ಪ ತಾವರೆಯನಾಂತ ಸರೋವರದಂತೆ ವಿದ್ರುಮ
ಶ್ರೀ ನೆಲಸಿರ್ಪಂತೆ ವಾರಿನಿಧಿಯಂತೆ ತಳಿರ್ ಪುದಿದಾಮ್ರದಂತೆ ತೇ
ಜೋನಿಧಿಯಪ್ಪ ಬಾಲರವಿ ತಳ್ತ ವಿಯತ್ತಳದಂತೆ ವಿಶ್ವಧಾ
ತ್ರೀನುತ ಕೌಸ್ತುಭಾಭರಣನಚ್ಯುತನೀಗೆಮಗೊಲ್ದು ರಾಗಮಂ॥೧॥

ಆವಳ ಕಯ್ಯ ಪುಸ್ತಕದೊಳಿರ್ಪುವು ಲೋಕದ ಸಾರಸೂಕ್ತಿಯಿ
ನ್ನಾವಳ ವಾಗ್ವಿಲಾಸಚತುರತ್ವದೆ ಪೋದುದು ಪದ್ಮಜಂಗೆ ಮು
ನ್ನಾವರಿಸಿರ್ದ ಛಾಂದಸಿಕೆಯಾವಳ ಪೋಲ್ವೆಯ ಪುತ್ರಿ ಕೀರ್ತಿ ಲ
ಕ್ಷ್ಮೀವಧುವಾದಳಾ ವಧುಗೆ ಕಾವ್ಯದ ನಾಂದಿಯೊಳರ್ಘ್ಯವೆತ್ತುವೆಂ॥೬॥

ಸಳನೆಂಬಮ ಶಶಕಾಭಿಧಾನಪುರದೊಳ್ ವಾಸಂತಿಕಾದೇವಿಯೆಂ
ಬಳನಾರಾಧಿಸುವಾಗಳುಗ್ರತರನೇತ್ರಂ ಘೋರವಕ್ತ್ರಂ ವಿಶೃಂ
ಖಳಗ್ತ್ರಾಂಪುಲಿ  ಪಾಯೆ ಕಂಡು ಮುನಿನಾಥಂ ಕುಂಚಮಂ ಕೊಟ್ಟು ಹೊ
ಯ್ಸಳ ಎಂದಂ ಬೞಿಕಾಯ್ತು ಹೊಯ್ಸಳವೆಸರ್ ತದ್ವಂಶಜೋರ್ವೀಶರೊಳ್॥೧೧॥

ಚದುರೆಸೆವಂತು ಭಾವಮಮರ್ವಂತು ನಯಂ ನಿಮಿರ್ವಂತು ಮಲ್ಲಪಂ
ಪದವಿಡೆ ಭಾರತೀವನಿತೆ ಭೋಂಕನೆ ಬಂದು ಮನಸ್ಸರೋಜದೊಳ್
ಚದುರೆಸೆವಂತು ಭಾವಮಮರ್ವಂತುನಯಂ ನಿಮಿರ್ವಂತು ಲೀಲೆಯಿಂ
ಪದವಿಡುತಿರ್ಪಳಾಹವನ ಕಾರಣಮಂತ್ರಮಿದಾಗದಿರ್ಕುಮೇ॥೨೭॥

ಪೆಱರಂ ಪೊಗೞಲ್ವಡೆಯದೆ
ಪೆಱರಂ ಕಯ್ಯಿಕ್ಕಿ ಜೋಡಿಸಲ್ವಡೆಯದೆ ತಾಂ
ಪೆಱರಂ ಪೞಿಯಲ್ವಡೆಯದೆ
ಮಱುಕದೊಳಿರ್ಪಂತು ದುರ್ಜನರ್ ಬಡವಪ್ಪರ್॥೩೮॥

ಖಳರೆಂಬರ್ ಕವಿಮಾರ್ಗಮಂ ಪಿಡಿದು ಕೇಳ್ದೊಂದುಕ್ತಿಯಿಂದಂ ದೇಸಿಯ
ಗ್ಗಳಮಪ್ಪಂತಿರೆಪೇೞ್ದುದಂ ಕುಪಥಮೆಂಬರ್ ಜಾತಿಸಂಪತ್ತಿಯಂ
ಸ್ಖಲಿತಾಲಂಕೃತಿಯೆಂಬರದ್ಭುತ ರಸಾಲಂಕಾರಸದ್ಭಾವಮಂ
ಕಳೆ ಚಿಃ ನೀರಸಮೆಂಬರೋವೊ ಖಳರಂ ಮೆಚ್ಚಿಪ್ಪರಾರ್ ಕಾವ್ಯದೊಳ್ ॥೫೨॥

ಆರಿಸರ್ ಖಳರ್ ಕೆಲಬರೀ ಪೊಸಕಬ್ಬಮನೆಂದು ನೀಂ ಮನಃ
ಖೇದಮನಾಳದಿರ್ ಜನದ ಕಣ್ಗೆ ವಿಲಾಸಮನೀವ ಸಾಂದ್ರ ಚಂ
ದ್ರೋದಯದೇೞ್ಗೆಯಂ ವಿರಹಿ ಸೈರಿಸದಿರ್ದೊಡದರ್ಕೆ ಬನ್ನಮೇ
ನಾದುದೊನೋಡೆ ಸಜ್ಜನರ್ಗೆ ಸೇವ್ಯಮದಾದೊಡೆ ತಾನೆ ಸಾಲದೇ॥೬೨॥

ಪೞಿದೊಡೆ ಬಾೞ್ವನಲ್ಲದೊಡೆ ಬಾೞ್ವನೆಸತ್ಕೃತಿಗೇಳ್ದು ದುರ್ಜನಂ
ಪೞಿದು ವೃಥೋಕ್ತಿ ಸಲ್ಲದೊಡೆ ಸಲ್ಲದೆಶಕಾವ್ಯನಿಬಂಧನಕ್ಕಮಾ
ಪೞಿಯೆಪೊಗ್ತಯಲ್ತೆ ರಸವತ್ಕೃತಿಯಂ ಕವಿ ಪೇೞ್ಗೆ ದುರ್ಜನಂ
ಪೞಿಯುತುಮಿರ್ಕೆ ಬಾೞ್ವ ಮನೆಗೊಂದು ಬಗುಳ್ವುದುವೇೞ್ಕುಮೆನ್ನರೇ॥೭೨॥ ( ಅನಂತನಾಥ ಪುರಾಣಂ, (೧- ೪೦)

ಶಿಥಿಲಪದಪ್ರಪೂರ್ಣಮಪಶಬ್ಧತುಷಾವೃತಮಸ್ತಭಾವಮ
ಪ್ರಥಿತಗತಾರ್ಥಶಾಸ್ತ್ರಮಪಹಾಸ್ಯ ಸಮಾಶ್ರಿತಮಪ್ಪ ಕಬ್ಬಮಂ
ಕಥಿಯಿಸಿ ಗರ್ವದಿಂ ಬೆಱೆತು ಬಿಱ್ರನೆ ಬೀಗಿ ಸರಸ್ವತೀ ಶಿರೋ
ವ್ಯಥೆಯನದೇಕೆ ಮಿಡುವರೊ ದುಷ್ಕವಿಗಳ್ ಕೆಲರೀ ಧರಿತ್ರಿಯೊಳ್॥೭೩॥ ( ಶೃಂಗಾರರತ್ನಾಕರಂ, ೧-೭ )

ಪರ ವಾರಾಸಿ ನಗರ್ತು ಚಂದ್ರ ತಪನೋದ್ಯಾನಾಂಬುಕೇಳೀ ಸುರಾ
ಸುರತಕ್ರೀಡನ ವಿಪ್ರಲಂಬ ಲಲನಾಕಲ್ಯಾಣ ಪುತ್ರೋದಯ
ಸ್ಫುರಿತಾಳೋಚನ ಮಂತ್ರ ದೂತ ಗಮನಾಜಿ ಸ್ತ್ರೀಸುಖವ್ಯಾಪ್ತಿಗಳ್
ದೊರೆಕೊಳ್ಗುಂ ಕವಿವರ್ಣನಕ್ಕೆ ಪದೆನೆಂಟಂಗಂ ಮಹಾಕಾವ್ಯದೊಳ್ ॥೭೭॥

ಇದು ಸರ್ವತೀಸರ್ವಾಂಗ ದರ್ಪಣಾಯಮಾನ ಪ್ರತಿಭಾಸನೂತನ ಪುರಾತನ
ಪ್ರಮಾಣ ಕವಿಪುಂಗವಪ್ರಣೀತ ಮಹಾಪ್ರಬಂಧ ಸಾರೋದ್ಧಾರಮುಮ
ಷ್ಟಾದಶ ಸ್ಥಳವರ್ಣನಮಾರ್ಗಮನೋಹರಮುಂ ವೀರಹೊಯ್ಸಳ
ಸೋಯಿದೇವರಾಯ ವಿನೋದಾಕರ್ಣನ ಕೌತುಕೋತ್ಪಾ
ದಿತಮುಂ ಯಾದವಕಟಕಾಚಾರ್ಯ ಸೈಕವಿ
ಸುಮನೋಬಾಣ ಜಾಮಾತೃ ಪರಮ ಚಿದಾ
ನಂದ ಮಲ್ಲಿಕಾರ್ಜುನ ಕವೀಶ್ವರ
ಸಂಯೋಜಿತಮುಮಪ್ಪ ಸೂಕ್ತಿ
ಸುಧಾರ್ಣವದೊಳ್
ಪೀಠಿಕಾಪ್ರಕರಣಂ ಪ್ರಥಮಾಶ್ವಾಸಂ ಸಂಪೂರ್ಣಂ.

ಢ೨. ಸಮುದ್ರ ವರ್ಣನಂ.
ಮಾಲಾಮಲಾಪ್ರವಾಳಾವೃತಸುರತರುಶೋಭಾವಹಂ ಭಾವಹಂ ಶೈ
ವಾಲಾವಾಲಾಭಿಘಾತಪ್ರಕರಮಕರಕುಂಭೀಕರಂ ಭೀಕರಂ ಜಂ
ಬಾಲಾಬಾಲಾಮೃಣಾಳೋಚ್ಚಲಿತಶಫರಕಂಜಾಕರಂ ಜಾಕರಂ ಕ
ಲ್ಲೋಲಾಲೋಲಾಯಮಾನಧ್ವನಿಜನಿತದಿಶಾಭಿತ್ತಿ ಮುದ್ರಂ ಸಮುದ್ರಂ॥೨॥

ಶಶಿ ತನ್ನುದರದೊಳುದಯಿಸಿ
ಮಿಸುಗುವುದಾ ನಭದೊಳೆಂದು ಜಲನಿಧಿ ಪಲವುಂ
ಶಶಿವಡೆದ ತೆಱದೆ ಮಿಗೆ ರಂ
ಜಿಸುವುವು ಮಂಡಳಿಸಿ ಪೊಳೆವ ಫೇನಪ್ರಕರಂ ॥೫॥

ಹರನಿರ್ಕೆಗೊಂದು ಬೆಳ್ಳಿಯ
ಗಿರಿ ಸಾಲದೆನುತ್ತನೇಕ ರಜತಾಚಲಮಂ
ಶರಧಿಯಟ್ಟುವ ತೆಱದಿಂ
ನೊರೆವೆಟ್ಟಂತಿಪ್ಪ ತೆರೆಗಳೇನೊಪ್ಪಿದುವೋ॥೬॥  

ಕುಂದಲೊಡನಿಂದುಬಿಂಬಂ
ಕುಂದುಗುಮದು ಪೆರ್ಚೆ ಪೆರ್ಚುಗುಂ ಜಲನಿಧಿ ಮೆ
ಯ್ಯೊಂದಿದ ಪುತ್ರಸ್ನೇಹಂ
ಸಂಧಿಸಿ ಜಗಕ್ಕಿಂತು ಸೊಗಯಿಸವೇಡಾ॥೧೦॥  ( ಕಾವ್ವಾವಲೋಕನಂ,( ೯೧೦)

ಮಗನಿಂದುವಬ್ಜವಾಸಿನಿ
ಮಗಳಳಿಯಂ ಜಲಜಜಠರನಿದು ಪೆಂಪೆನ್ನಿಂ
ಮಿಗಿಲಾವನೆಂದು ರಾಗಿಸಿ
ನಗುವಂತೆವೊಲಾಯ್ತು ಜಲಧಿಕಳಕಾಳನಿನದಂ॥೧೨॥

ಸಿರಿಗೆ ಸುಧಾಕರಂಗೆ ಸುರದಂತಿಗೆ ಕಲ್ಪಕುಜಕ್ಕೆ ಪೆರ್ಚಿದ
ಚ್ಚರಸಿಯ ಸಂಕುಳಕ್ಕೆ ತ್ರಿದಶೇಂದ್ರಹಯಕ್ಕಮೃತಕ್ಕೆ ಮಿಕ್ಕ ಭಾ
ಸುರತರಮಪ್ಪ ರತ್ನ ನಿಚಯಕ್ಕೆ ನೆಗೞ್ತೆಯ ಜನ್ಮಭೂಮಿಯೀ
ಧರೆಗೆನೆ ಬಣ್ಣಸಲ್ ನೆಱೆವನಾವನೊ ಪೆಂಪೆಸೆದಿರ್ಪ ವಾರ್ಧಿಯಂ॥೧೮॥

ಒಂದುಂ ಕಾರಣಮಿಲ್ಲದೆನ್ನ  ಧನಮಂ ಶ್ರೀ ಕೌಸ್ತುಭಾಸಾಂಗನಾ
ವೃಂದಸ್ನಿಗ್ದ ಸುರದ್ರುಮಾಮೃತಹಯಶ್ರೇಷ್ಠೇಭಮಂ ದೇವರೆ
ಯ್ತಂದೀೞ್ಕೊಂಡುದನೆನ್ನ ಪುಯ್ಯಲನಿದಂ ನೀಂ ಭೂಧರಂಗೆಯ್ದಿ ಪೇ
ೞೆಂದೂಳ್ವಂತೆ ಗಭೀರನಾದಮೊಗೆವಂತಾಯ್ತಬ್ಧಿ ವಾತಾಹತಂ

ಪವಳದ ಕೆಯ್ ಮುಗಿಲ್ಗಳಱವಟ್ಟಿಗೆ ನೀರ್ಗಳ ಗೊತ್ತು ಮುತ್ತು ಹು
ಟ್ಟುವ ಕಣಿ ಬೆಟ್ಟವಕ್ಕಿಗಳ ಗೂಡೆಳನೇಸಱ ತೊಟ್ಟಿಲುದಗ್ರ ದಾ
ನವರೆಱೆವಟ್ಟು ಲಕ್ಷ್ಮಿಯ ತವರ್ಮನೆ ತಿಂಗಳ ಪೆತ್ತ ತಂದೆ ವಾ
ಡವಶಿಖಿಗಂ ನಿವಾಸಮಸುರಾರಿಯ ಸೆಜ್ಜೆ ಶುಭಂ ಮಹಾರ್ಣವಂ ॥೩೮॥

ಧರಣೀವನಿತಿಗೆ ಧಾತ್ರಂ
ವಿರಚಿಸಿದ ವಿಚಿತ್ರ ಮೇಖಲಾಸೂತ್ರಮೆನಲ್
ಕರಮೆಸೆವುದಖಿಳ ಮಣಿಗಣ
ಕಿರಣಾವಳಿ ಕಲಿತ ಪಲಿತ ಪಾರಾವಾರಂ॥೪೨॥

೩. ಪರ್ವತವರ್ಣನಂ.

ನೋಡೆ ಮಹೇಂದ್ರರೌದ್ರವದನೋಪಮಮಪ್ಪುದಯಾದ್ರಿಕೂಟದಿಂ
ಮೂಡುವ ತಿಗ್ಮದೀಧಿತಿಯ ತೀವ್ರ ಕರಂಗಳ ಕೋಳ್ಗಿದಿರ್ಚಿ ತ
ಳ್ತೋಡಿ ತೆರಳ್ದು ತೂಳ್ದು ನಿಲಲಾಱದೆ ಪಶ್ಚಿಮ ದಿಗ್ವಿಭಾಗದ
ತ್ತೋಡುವದೊಂದು ಕೞ್ತಲೆಯ ಹಾದಿವೊಲಿರ್ದುದು ವಿಂಧ್ಯಪರ್ವತಂ॥೩॥

ಉಲಿವ ಶಕುಂತಿಯಿಂ ನುಡಿವವೋಲ್ ಕುಸುಮೋಜ್ವಲ ಭೂರಿಭೂರುಹಾ
ವಳಿಯಿನನಂತರಂ ನಗುವವೋಲ್ ನವನಿರ್ಝರವಾಗಿನಾದದಿಂ
ದೊಲೆದು ತಗುಳ್ದು ಪಾಡುವವೊಲೂದುವ ಗಾಳಿಯ ಕೋಳ್ಗಳೋಳಿವ
ಟ್ಟಲುಗುವ ಕೊಂಬಿನಿಂ ನಲಿದು ನರ್ತಿಪವೋಲ್ ಸೊಗಯಿಕ್ಕುಮಾ ನಗಂ॥೬॥

ಭಾರತದಂತೆ ಭೀಮನಕುಲಾರ್ಜುನಸಂಗತಿಯಿಂ ನೆಗೞ್ದ ದೈ
ತ್ಯಾರಿಯ ವಕ್ಷದಂತೆ ಭೃಗುಸಂಪದದಿಂ ಹರನಂತೆ ಸದ್ಗುಹಾ
ಕಾರವಿಳಾಸದಿಂ ರಘುಜನಂತೆ ಮನೋಜ್ಞಧರಿತ್ರಿ ಸಂಭವಾ
ಕಾರದಿನಿರ್ದುದೊಂದು ಕುಧರಂ ಗಗನಸ್ಥಳಮಂ ತುಡುಂಕುತುಂ ॥೭॥

ಕತ್ತುರಿಮೃಗಮೆ ಮೃಗಂಗಳ್
ಮುತ್ತುಗಳಂ ತಳೆದ ಗಂಧಗಜಮೆ ಗಜಂಗಳ್
ಬತ್ತದೆ ಪರಿವ ರಸಾಯನ
ದೊತ್ತಿಂ ಬಂದಿೞಿಯುತಿರ್ಪ ತೊಱೆತೊಱೆಗಳ್ ॥೧೦॥

ಅಗತಟಮನೆ ಸಾರ್ಚಿ ಮುಗಿಲ್
ತಗುಳ್ದುಂ ಮೞೆಗಱೆಯೆ ಪೋಗಿ ಕೋಡುಂಗಲ್ಲಂ
ಮೃಗರಾಜನೇಱಿನನೆಯದೆ
ಮಗುೞ್ದೀಕ್ಷಿಸುತಿರ್ಕುಮೇನದತ್ಯುನ್ನತಮೋ ॥೧೯॥
ತುದಿಕೋಡೊಳ್ ವೇಣುಜಾಲಂಗಳ ಹೊದಱನಡರ್ದೆತ್ತುತುಂ ಭದ್ರ ಮುಸ್ತಾ
ದಿ ಧರೋತ್ತಿಷ್ಠತ್ಸು ಕಂದಂಗಳನೆ ಕಬಳಿಸುತ್ತುಂ ತಡಂ ಮೆಟ್ಟುತುಂ ಬೆ
ಟ್ಟದ ತೀಕ್ಷ್ಣಗ್ರಾವದೊಳ್ ನೀರಡಸಿ ಬಿಡದೆ ನೀರ್ದಾಣಮಂ ನೋಡುತುಂ ಕಂ
ಠದ ಬಿಣ್ಪಿಂ ಜೊಂಪಿಸುತ್ತುಂ ನಡೆದುದಡವಿಯೊಳ್ ದೀರ್ಘದೇಹಂ ವರೃಹಂ॥೩೯॥

ಪಿರಿದುಂ ದಾನಾಂದಮೊಂದು ಸ್ಫಟಿಕಮಯ ಶಿಲಾಭ್ಯಂತರಾತ್ಮೀಯರೂಪಂ
ಕರಿಗೆತ್ತೆಯ್ತಂದು ಪಾಯಲ್ ಮುಱಿಯೆ ರದನಯುಗ್ಮಂಗಳಂತಂತೆ ನೋಡು
ತ್ತಿರೆ ಕಣ್ಣಂ ಮುಚ್ಚಿ ತದ್ರೂಪಮನೆ ಕರಿಗೆತ್ತಾಡುತಾತ್ಮೀಯರೂಪಮಂ
ಕರಮಂ ಮೇಲಿಕ್ಕಿ ನಿಂದಿರ್ದುದು ವಿಪುಳಕುಭೃತ್ಕುಂಜದೊಳ್ ಕುಂಜರೇಂದ್ರಂ॥೪೩॥

ಮೊರೆದೊಡೆವಾಯ್ದ ನಿರ್ಝರದ ನಾದಮುಮಂ ಮದಸೌರಭಕ್ಕೆ ತ
ತ್ಕರಟತಟಾಂತದೊಳ್ ಸುೞಿವ ತುಂಬಿಯ ನಾದಮುಮಂ ಪುಳಿಂದಸೌಂ
ದರಿಯರ ಗೀತನಾದಮುಮನಾಲಿಸಸೋಲ್ತು ನೆಱಲ್ದೊಱಲ್ದು ಸುಂ
ದರಗಿರಿಕಂದರೋದರದೊಳಿರ್ದುದದೊಂದು ಮದಾಂಧಸಿಂಧುರಂ ॥೫೨॥

ಹರಿ ಕರಿಯಂ ತಗುಳ್ದು ಬರದ ಸೂಕರನಾ ಕರಿಗಟಜಿ ಪೊಕ್ಕು ಬೆಂ
ಬರಿವರಿವಂತು ಪೆರ್ಬಿದಿರನೆತ್ತಿದೊಡಂತದು ತಾಗೆ ಮೇಘಮಂ
ಕರಿ ಮುೞಿದೊತ್ತೆ ಸೂಕರನನಾ ಕರಿಯಿಂ ಹರಿ ಮೆಟ್ಟಿ ಸೀಳ್ದೊಡಂ
ಸುರಿದುವು ಮೇಘಜೇಭಜ ವರಾಹಜ ವೇಜೈಜ ಮೌಕ್ತಿಕವ್ರಜಂ॥೭೪॥

ಮರೆಯಂ ನುಂಗಿತ್ತು ಪೆರ್ಬಾವಜಗರಮನಿಭಂ ಕುತ್ತಿ ಸುತ್ತಿತ್ತು ಕೋಡೊಳ್
ಕರಿಯಂ ಪೊಯ್ದತ್ತು ಸಿಂಗಂ ಪಿಡಿದುದು ಶರಭಂ ಸಿಂಗಮಂ ಕೋಪದಿಂದಂ
ಮರೆ ಪೆರ್ಬಾವನೆ ಸಿಂಗಂ ಶರಭಮಿನಿತುಮಂ ಕರ್ಚಿ ಭೇರುಂಡನಂದಂ
ಬರದೊಳ್ ಪಾಱುತ್ತಿರಲ್ಕಚ್ಚರಿವಡೆ ತಲೆಯಂ ತೂಗಿದಂ ವಿಕ್ರಮಾಂಕಂ ॥೭೭॥

ನಗಲಕ್ಷ್ಮಿಯುಟ್ಟ ಹಳಮೈ
ಲಗೆಗಳನೊಜ್ಜರಮೆನಿಪ್ಪ ಮಡಿವಾಳಂಗಂ
ವಗೆವಱೆಯೊಳ್ ತೆಗೆಬಿಸುಟವೊ
ಲಗತಟದೊಳ್ ಪೊರಳುತಿರ್ಪುವಜಗರನಿಕರಂ ॥೮೨॥

ಗಿರಿಪತಿಯುಂ ಪವಿಹತಿಗಗಿ
ದಿರದದ ಠಾಣಾಂತರಕ್ಕೆ ನೇರಿದ ಹಲವುಂಶ
ಹರಿಗೆಗಳೆನಲ್ಕೆ ಶಿಲೆಯೋ
ವರಿಯೊಳ್ ಹೆಜ್ಜೇನ ಹುಟ್ಟಿ ಸೊಗಯಿಸಿ ತೋರ್ಕುಂ॥॥೮೪॥

ಬಗೆಯಱಿದು ನಿಟ್ಟಿಪೆಂ ಪ
ಜ್ಜೆಗಳನುಗುರ್ಕೊೞಗು ತುಪ್ಪುೞೆಂಬವಱಿಂ ಪು
ಲ್ಮೃಗಮಂ ಬೆಳ್ಮೃಗಮಂ ಬ
ಲ್ಮೃಗಮಂ ಗುಹೆಯೊಳಾದೊಡಂ ಪಿಡಿದಪ್ಪೆಂ॥೯೦॥

ಕೋಸುವಲೆ ದೋಂಟಿವಲೆ ಬಾ
ಣಾಸನವಲಗಂಬು ಕಲ್ಲಿ ಕೈಪೊಡೆ ಗಾಳಂ
ಮಾಸಿದ ಮಯಣದ ಹಳೆಯೋರೆ
ಪಾಶದ ನಾಯ್ವೆರಸು ಬನಕೆ ಬೇಡರ್ ನಡೆದರ್॥೧೦೩॥

ತುಡು ಕೋಲಂ ಹರಿಣಂಗೆ ಪಾಸು ಬಲೆಯಂ ಕೋಕಂಗೆ ನೀರ್ದಾಣಮಂ
ಬಿಡು ಪೆರ್ಬಂದಿಗೆ ನಾಯ ಬಾಯಂ ಮೊಲನಂ ಕೈಗುತ್ತಿ ಕೊಲ್ ಕಂಡಿಯೊಳ್
ಕೆಡೆಕುತ್ತೆೞ್ಬಿಸು ಮೇಲೆ ಪಾಯ್ವ ಪುಲಿಯಂ ಪುಲ್ಗಾನೊಳಾ ಪೋಪ ಪೇ
ರೈಡುವಂ ಸೋವುವಡಂಗಿಯೆಯ್ದು ಸರುವಂ ಕಟ್ಟಿಟ್ಟು ಸಾರಂಗಮಂ॥೧೧೫॥

ವನಜಜನಂಚೆ ಗೌರಿಯುಡುವಂಬುಜನಾಭನ ಪರ್ದು ಕಾರ್ತಿಕೇ
ಯನ ನವಿಲಿಂದುಬಿಂಬದ ಮೊಲಂ ಕಲಿಮೂಕವರಾಹನಗ್ನಿಮಿ
ತ್ರನ ಹರಿಣಂ ವಿನಾಯಕನ ಮೂಷಕ ಕಾಲನ ಕೋಣ ವಿಂಧ್ಯವಾ
ಸಿನಿಯ ಮೃಗಾರಿ ನಾಯಿಗರಿದಲ್ಲವು ಸಾಹಸಮಲ್ಲದೇವನಾ॥೧೨೩॥

ಪರಮೇಷ್ಠಿಯಂಚೆ ಕೃಷ್ಣನ
ಗರುಡಂ ಪವಮಾನನೆರಡಳೆ ದುರ್ಗಿಯ ಸಿಂಹಂ
ಸುರರೃಜನಾನೆ ಮುನ್ನೀ
ಗಿರಿವರದೊಳ್ಪುಟ್ಟಿ ನೆಗೞ್ದವೆನಿಸುವುವನಿಶಂ॥೧೪೭॥

ಮೊಱೆಯ ಬೆಳ್ಪಿಂದುವನೈ
ದಾಱಂಗುಲಮುೞಿಯೆ ರಾಹು ನುಂಗಿದ ತೆಱದಿಂ
ತೋಱುವ ತೆಱನೆಸೆವಿನ ಮೈ
ದೋಱಿಪ್ಪುವುಪುಂಡುಗರಡಿ ಶೈಲಾಂತರದೊಳ್॥೧೫೧॥

ಪಿಡಿವುದು ಸೋಗೆ ಸೋಗೆವೊದಱಿಂ ನೆೞಲಂ ಜರತಾಪಸರ್ಗೆ ಕೈ
ಗುಡುವುವು ಕೋಡಗಂ ಜಲಗಳಂ ಕುಡಿಗೈಗಳನೊಯ್ದು ತಂದೈ ಮುಂ
ಗುಡುವುವು ಹಸ್ತಿ ತಂದು ಮರದೊಳ್ ಸಮಕಟ್ಟಿರೆ ನಿಂದು ವಾಕ್ಯಮಂ
ನುಡಿವುವು ರಾಜಕೀರಕುಳವಾಶ್ರಿತಪಾವನಮಾ ತಪೋವನಂ॥೧೭೩॥

ಜಡೆಗಳ ಬಂಬಲೊಳ್ ತೊಡರ್ದು ಬಳ್ಳಿಗಳಿರ್ದವು ಮೆಯ್ಯನೆಯ್ದೆ ಪು
ತ್ತಡರ್ದವು ಗಡ್ಡಮಂ ಬಳಸಿ ಗೂಡುಗಳಿಟ್ಟವು ಪಕ್ಕಿ ಕಂಗಳಂ
ಕಡಿದುವು ಪತ್ತಿ ಕಟ್ಟಿಱುಪೆಗಳ್ ಬೆಮರಂ ನಸುನಕ್ಕುತಿರ್ಕುಮಾ
ಗಡ ಮುರಗಂಗಳೇವೊಗೞ್ವೆನೇದೊರೆಯುಗ್ರತಪಂ ತಪಸ್ವಿಯಾ॥೧೮೨॥

ಅಲರ್ಗಣ್ ಪೊಂಗಿದ ಲೋಳೆವಾಯ್ ನಗೆಮೊಗಂ ತೊಂಗಲ್ಗುರುಳ್ ಕೆಂದಳಂ
ಸುಲಿಪಲ್ ಸೋರ್ಮುಡಿ ತೆೞ್ವಸಿರ್ ಪೆಱೆನೊಸಲ್ ಪೊಂಬಾೞೆ ಪಚ್ಚೋಲೆ ನೇ
ಱಿಲಪಣ್ಣಂ ತಿಳಿಯೆಣ್ಣೆಯೊಳ್ ಬಳಸಿ ತೊಯ್ದಂತಪ್ಪ ನುಣ್ಗರೂಪು ಪೆ
ರೂಮೊಲೆ ಚೆಲ್ವಾಗಿರೆ ನಿಂದ ಬೇಡತಿಯರಂ ಕಂಡಂ ಮಹೀವಲ್ಲಭಂ॥೨೧೫॥ ( ಕಾವ್ಯಾವಲೋಕನಂ, ೨೦೬ )

೪. ಪುರವರ್ಣನಂ.

ಮೇರುವಿನಂದಮಂ ಜನನಿದಾನಮನಗ್ಗದ ಜಂಬುದೀವಮಂ
ವಾರಿಧಿಸರ್ಪನಪ್ಪಿದುದು ವಾರಿಧಿವೇಷ್ಟಿತಭೂಮಿಭಾಗದೊಳ್
ಭಾರತವರ್ಷಮೊಪ್ಪಿದುದು ಭಾರತವರ್ಷದ ತೆಂಕವಂಕದೊಳ್
ಧಾರಿಣಿಗುಜ್ಜ್ವಲಶ್ರವಣಕುಂಡಲಮಾಯ್ತು ಸುರಮ್ಯಮಂಡಲಂ ॥೪॥

ಒದವಿದ ದೇಶದುನ್ನತಿಯನೇವೊಗೞ್ವೆಂ ಮದಮತ್ತ ಹಸ್ತಿ ಪು
ಟ್ಟದ ಮಲೆ ಮುತ್ತು ಪುಟ್ಟದ ಬಿದಿರ್ ಮಣಿ ಪುಟ್ಟದ ಬೆಟ್ಟು ಕೌಂಗು ಪು
ಟ್ಟದ ಪೊಲನಂಚೆ ಪುಟ್ಟದ ಕೊಳಂ ನದಿ ಪುಟ್ಟದೊಸಱೆ ನಮೇರು  ಪು
ಟ್ಟದ ಪುರನಂದನಂ ಜರಗು ಪುಟ್ಟದ ಭೂತಳಮಿಲ್ಲ ದೇಶದೊಳ್॥೭॥

ಬನಮೇ ಕೀರಾಳಿ ಪುಂಸ್ಕೋಕಿಲಮಧುರರವೋದ್ದಾಮಕೋಳಾಹಳಂ ಕಾ
ನದಮೇ ಗಂಧೇಭದಾನಪ್ಲವಪರಿಮಳಚಂಚನ್ನ ದೀವಾಃ ಪ್ರವೃದ್ದಂ
ಜನಮೇ ಭೋಗೋಪಭೋಗಾಸ್ಪದಸಮುಚಿತಲಕ್ಷ್ಮೀವಿಳಾಸಾಶ್ರಯಂ ತಾ
ನೆನೆ ಮತ್ತೇನೆಂಬುದಂಗೋಧ್ಭವನರಪತಿಗಾ ಪೂರ್ಣಸಪ್ತಾಂಗಮಂಗಂ॥೧೦॥

ದಾರಿಯ ನಂದನಂ ಬಿಡಿದು ಪೂತ ಕೊಳಂ ಕೊಳದೊಳ್ ಬೞಲ್ಕೆಯಂ
ಜಾರಿಸಲೆಂದು ನಿಂದ ಪಥಿಕರ್ ಪಥಿಕಾನಯನಪ್ರಬಾಮೃತಾ
ಸಾರದೆ ತೀವಿ ಬರ್ಪ ಪರಿಕಾಲ್ ಪರಿಕಾಲ್ಗಳ ನೀರನುಣ್ಬ ಕೇ
ದಾರವನಂ ಮನಂಗೊಳಿಸುತಿರ್ಪುವು ಭೂವನಿತಾವಿಭೂತಿವೋಲ್॥೧೩॥

ಒದವಿದ ಮುಟ್ಟು ತೀವಿದ ಕಳಂ ಬೆಳೆ ತೀವಿದ ಗದ್ದೆ ಕೌಂಗು ತೀ
ವಿದ ಬನವಂಚೆತೀವಿದ ಕೊಳಂ ವಿವಿಧಾಂಬುಜಷಂಡಮೆಯ್ದೆ ತೀ
ವಿದ ಕೆಱೆ ಹಟ್ಟಿ ತೀವಿದ ಹಯಂ ಮನೆ ತೀವಿದ ಮಕ್ಕಳೋಳಿ ಪಿಂ
ಗದ ಸಿರಿ ತೀವಿದಂಗಡಿಗಳೆಲ್ಲಿಯುಮಲ್ಲಿಯ ಪಳ್ಳಿಪಳ್ಳಿಯೊಳ್॥೧೭॥

ಪಾಡುವ ತುಂಬಿ ತುಂಬಿಯೊಳರಲ್ವ ಮರಲ್ ಮರಲೊಂದು ಸೊಂಕಿನಿಂ
ತೀಡುವ ಗಾಳಿ ಗಾಳಿಗೆ ಬೞಲ್ವ ತಳಿರ್ ತಳಿರ್ ತಳಿರಿಂ ಫಲಂಗಳಿಂ
ದಾಡುವ ರಾಜಕೀರತತಿ ಕೀರಚಯಂಗಳ ಕೂಡೆ ಬೈದು ಬೈ  
ದಾಡುವ ತೊಂಡುವೆಣ್ಬುರುಳಿ ಮಾಡುವುವಾರ್ಗಮನಂಗದಾಹಮಂ॥೩೩॥

ತನೆ ಫಲಭಾರದಿಂದೆಱಗೆ  ಪಾಯ್ದದಱೊಳ್ ಕುಟುಕಿಂಗೆ ಮೆಲ್ಲಮೆ
ಲ್ಲನೆ ಗಿಳಿ ಪಾಯೆ ಪಕ್ಷತತಿ ಮೇಗೆ ಪೊದೞಿರೆ ಪಚ್ಚನಪ್ಪತ
ದ್ವನಂ ನವಪತ್ರಮೋ ಶುಕಪತ್ರೋ ಪೇೞಿಮಿದೆಂಬ ಶಂಕೆಯಂ
ಜನಿಯಿಸೆ ಗಂಧಶಾಳಿಯ ಶುಕಾಳಿಯ ಲೀಲೆ ಕರಂ ಮನೋಹರಂ॥೫೪॥

ಕಿಱುಗೊಂಬು ನಳಿದಬೆನ್ನುಂ
ಕಿಱುಕಿದತೊಡೆಗೆಚ್ಚಲಲೆವ ಬಾಲಂ ತೆಳುಮೈ
ಮೆಱೆಯೆ ಬಿಳಿದಾಗಿ ಮಾಣದೆ
ಕಱೆವೆಮ್ಮೆಯ ಪಿಂಡು ಪಳ್ಳಿಪಳ್ಳಿಯೊಳೆಸೆಗುಂ॥೬೧॥  

ಇನಿಸಂ ಪೊಕ್ಕೂರು ಮಿಕ್ಕೋಸರಿಸಿದ ಚರಣಂ ಶೋಭೆಯಂ ಬೀಱೆ ಕುಂಭ
ಕ್ಕೆನಿತಂಬಂ ಸುತ್ತುನೇಣಂ  ತೆಗೆವ ಪುಗುವ ಕೈಗಳ್ ಬೆಡಂಗಾಗೆ ತುಂಗ
ಸ್ತನಯುಗ್ಮಂ ತೂಗೆ ಪೂತ್ಕಾರದಿನುಸಿರ್ವಿಡುತುಂ ಲೋಳೆವಾಯುರ್ಚೆಯೊರ್ವಳ್
ತೊನೆಯುತ್ತುಂ ಪಾಡಿ ಪಾಲಂ ಪೊಸೆದಳಸದಳಂ ಪೊಣ್ಮೆ ಘರ್ಮಾಂಬುಜಾಲಂ ॥೬೬॥

ಕವಣೆಯ ಬಿಟ್ಟು ಮಾಮಿಡಿಯ ಮಿಟ್ಟೆಗಳಿಂ ತೆಗೆದೆಚ್ಚು ಕಂಕಣಾ
ರವಮೊಗೆವಂತು ಚಪ್ಪರಿಸಿ ಘಿಱ್ರನೆ ತೆಂಗಿನ ಪತ್ರದಂದಿಂ
ಸವಡಿಸಿ ಚಚ್ಚಲಚ್ಚಲಲಚಚ್ಚಲಚಚ್ಚಲಲೆಂದು ಬೈದು ಪಾ
ಟವದೊಳು ಪಕ್ಕಿ ಸೋದು ಬೆಳಗಾಯ್ದುದುಪಾಮರ ಕಾಮಿನೀಜನಂ॥೭೩॥

ಇರದಿದಿರ್ಗೊಳ್ವುದು ಪಿಕತತಿ
ಕರೆವುವು ಶುಕರಾಜಿ ಕಾಣ್ಕೆಗೊಡುವುದು ಫಳಮಂ
ಝರಿ ಕಾಲ್ದೊಳೆವುದು ಪಾಂಥರ
ಬರವಿಂಗಿಂತಿದು ವನಾಳಿ ಮಾೞ್ಪಾತಿಥ್ಯಂ ॥೭೮॥

ಅಱವಟ್ಟಿಗೆಯೊಳ್ ಕುಡಿನೀ
ರೆಱೆವ ಬೆಡಂಗಿಯರ ಭಾವಮಂ ಭೋಂಕನೆ ಕ
ಣ್ದೆಱೆದಡರೆ ನೋಡಿ ಪೀರುವ
ತೆಱದಿಂದಂ ಸೊಗಸೆ ತಂಪುಮಂ ತೃಷ್ಣೆಯುಮಂ ॥೮೪॥

ಗಿರಿಜೆಯ ರನ್ನದಾಳಿ ಸಿರಿಯಿಕ್ಕಿದ ಮುತ್ತಿನ ಹಾರಮೞ್ತಿಯಿಂ
ಸರಸತಿ ತೊಟ್ಟ ಪಚ್ಚೆ ಪಡಿಯಲ್ಲವು ಕೀೞ್ತರಮಂತವಿರ್ಕೆನಲ್
ವರುಣನೆ ಮಾಱಲಟ್ಟೆ ವರೈಣಾನುಚರರ್ ಪರಿದಾಡುತಿರ್ಪರೀ
ಪುರದೊಳಗೆಂಬಿನಂ ಮೆಱೆವರಾ ಪುರದೊಳ್ ಮಣಿಗಾಱರಾವಗಂ ॥೧೧೨॥

ಸುೞಿಗುರುಳೊಳ್ ತೊಡಂಗಿ ವದನಾಂಬುಜಸೌರಭದೊಳ್ ಮುೞುಂಗಿ ಪೊಂ
ಪುೞಿಗೊಳುತಿರ್ಪ ಸೊರ್ಮುಡಿಯೊಳೊತ್ತಿದ ಕತ್ತುರಿಯಂ ಕಲಂಕಿ ಮೈ
ವೞೆಯೊಳೆ ಮೇಲುದಂ ತೊಲಗನೂಂಕಿ ಕುಚದ್ವಯದೊಳ್ ಪಳಂಚಿ ಪೊ
ಕ್ಕುೞೊೞಿದಾಡಿ ತೀಡಿದುದು ವಲ್ಲಭನಂತಿರೆ ಮಂದಮಾರುತಂ ॥೧೪೦॥

೫. ನಾಯಕಾಭ್ಯುದಯವರ್ಣನಂ.

ಗೆಲವಿಂ ಭೂಮಿಜೆ ಕೈಗೆವರ್ಪುದೆ ಫಲಂ ರಾಮಂಗೆ ಮುಂ ಪೋದ ಭೂ
ತಳರಾಜ್ಯಂ ಕ್ರಮದಿಂದೆಶಬರ್ಪುದೆ ಫಲಂ ಧರ್ಮಾತ್ಮಜಂ ಗಾರ್ಪಿನಿಂ
ಸಲೆ ರಾಗೋತ್ಸವಸಿದ್ಧಿ ಸಾರ್ವುದೆ ಫಲಂ ಶ್ರೀಖೇಚರಂಗಂತೞಿಂ
ಫಲಯೋಗಸ್ಥಿತಿ ನಾಯಕಾಭ್ಯುದಯಮೆಂಬಂಗಂ ಮಹಾಕಾವ್ಯದೊಳ್ ॥೨॥

ಅದಟಿನಳುರ್ಕೆಯಂ ಮೆಱೆವ ಚೋೞನ ಪಂದಲೆಯೊಂದೆ ಕೈಗೆವಂ
ದುದೆ ಕರಿಕೋಟೆ ಬಂದುದು ಹಯಾವಳಿ ಬಂದುದು ರತ್ನ ರಾಶಿ ಬಂ
ದುದು ಬಗೆದಂತೆ ಚೇರಮನ ಚೋೞನ ಪಾಂಡ್ಯನ ನಾಡೆ ಕೈಗೆವಂ
ದುದು ಕಡತಕ್ಕೆ ಮುಂಡಿಗೆಗಮೋಲೆಗಮೀ ಶುಭತುಂಗದೇವನಾ॥೭॥

ತೋಳ ತೊಡರ್ಪು ಕಣ್ಗೆಸೆಯೆ ಸಾರ್ಚಿದ ವಕ್ತ್ರಸರೋಜಮೋಜೆಯೊಳ್
ಮೇಳಿಸಿ ಪುಂಖಶುದ್ಧಮೆನೆ ಭೋಂಕನೆ ಪುಂಖಿಸಿ ಮಧ್ಯಮಾದಿಯಂ
ಚಾಳಿಸಿ ತುಂಬಿಯಿಂಚರದ ಮೊತ್ತಮನೆತ್ತುವವೋಲ್ ಮೃದು ಸ್ವರಂ
ಪಾಳಿಯಿನೊಪ್ಪುವಂತೆಸೆಯೆ ಬಾಜಿಸಿದಳ್ ಸುವಿಲಾಸೆ ವೀಣೆಯಂ ॥೧೯॥

ಭಾವರಸಂಗಳಂ ಮೆಱೆವ ಸತ್ಕವಿ ಸಂಕುಲ ಗೋಷ್ಠಿಯಲ್ಲಿ ರ
ತ್ನಾವಳಿ ಸರ್ವರಾಗರಸ ಸಂಭೃತಗಾಯಕಸಂಘದಲ್ಲಿ ರ
ತ್ನಾವಳಿ ವಾಜಿವಾರಣವಿನೋದವಿಲಾಸವಿಶೇಷದಲ್ಲಿ ರ
ತ್ನಾವಳಿ ವತೂಸಭೂಪತಿಗದೇನೆಸೆದಿರ್ದುದೊ ರಾಜ್ಯಸಂಪದಂ ॥೨೨॥

ಬಾರಿಸಿ ಚಾಮರಾದಿಗಳನಿಕ್ಕಿದ ಗದ್ದುಗೆಯೊಳ್ ಮಹಾಪ್ರತೀ
ಹಾರರ ಪೇೞ್ಕೆಯಿಂದೆಳಸಿ ಮತ್ತವರಂ ಪೆಸರ್ಗೊಂಡು ಪೋಗವೇ
ೞ್ದೂರವಕೇಳ್ವ ಮನ್ನೆಯರ ಮಂಡಳಿಕರ್ಕಳ ಭೂಷಣಾಂಶು ವಿ
ಸ್ತಾರದಿನೆತ್ತಲುಂ ಪರಿವಿನಂ ಪರೆಗುಂ ನೃಪಧೀರನೋಲಗಂ॥೨೪॥

೬. ವಿವಾಹವರ್ಣನಂ.

ಪಡೆ ಪಂದಲ್ ದಟ್ಟಿ ಜಾಗಂ ಜಗಲಿ ಬಿಗಿದ ಭೃಂಗಾರಿ ಮೇಲ್ಕಟ್ಟು ಚಿತ್ರಂ
ಪೊಸಕುಂಭಂ ಶಂಕು ನೂಲೈರಣೆ ತಳಿರ್ಗಳಸಂ ಸರ್ವಧಾನ್ಯಂ ಮೊಸರ್ ಭ
ಕ್ಷ್ಯಸಹಸ್ರಂ ಲಾಜೆ ಹೋಮಂ ಪಱೆ ಕಡೆ ಗುಡಿ ಪೂದೋರಣಂ ಬಾಸಿಗಂ ಸೇ
ಸೆ ಸಮಸ್ತಸ್ತ್ರೀಜನಂ ಕನ್ನಡಿಜವಳಿಗಳುದ್ವಾಹದೊಳ್ ವರ್ಣನೀಯಂ॥೧॥

ತೊಟ್ಟಿಯ ಸುತ್ತುವೆತ್ತ ಪಸುರ್ವಂದಲ ಮುತ್ತಿನ ಮಂಟಪಂಗಳೊಳ್
ಕಟ್ಟಿದ ಪಚ್ಚೆದೋರಣದ ಬಾಜಿಪ ತೂರ್ಯದ ಸಂಭ್ರಮಂಗಳಿಂ
ತೊಟ್ಟೆಡೆಯಾಡುವೆಯ್ದೆಯರ ಪಾವನಮಂಗಳದೊಪ್ಪುಗೂಡಿ ನೇ
ರ್ಪಟ್ಟುದು ನೋಟಕರ್ಗೊಸಗೆಯುಬ್ಬಣಮಪ್ಪಿನಮಾ ವಿವಾಹದೊಳ್॥೨೨॥

ಎಳವೆಱೆಯಂ ಶ್ರೀಕಂಠಂ
ತಳೆದಂತಿರೆ ಭಾಳಪಟ್ಟದೊಳ್ ಕಣ್ಗೆಸೆದಂ
ಮಳಯಜವಿಲಿಪ್ತ ಗಾತ್ರಂ
ತೊಳಗುವ ಬಾಸಿಗಮನಾಂತು ವರ ನರಸಿಹಃ॥೫೫॥

ಶಂಕುಶಲಾಕೆಯುಂ ಗೞಿಗೆವಟ್ಟಲೈಮೊಪ್ಪಿರೆ ವೇದನಾದದೊಳ್
ಸಂಕರಮಾಗಿ ಪಾಠಕಪಟುಸ್ವನಮಂಗಳಗೀತತೂರ್ಯಘೋ
ಷಂ ಕಡಲೂರ್ಮಿಯಂತುಲಿಯೆ ನರ್ತಿಸೆ ನಾರಿಯರಾಯ್ತುಸಾರ್ಕೆ ಲ
ಗ್ನಂ ಕರೆಯಿಂ ವಧೂವರರನೆಂದುಸಿರ್ದರ್ ಹಿತದೊಳ್ ಪುರೋಹಿತರ್॥೫೭॥

ಜವನಿಕೆಯೋಸರಿಸುವುದುಂ
ನವವರನಂ ನೋಡುವಪ್ಪು ಕಣ್ಣ ಬೆಳಗಿನಿಂ ಮುಸುಕಿದಳಾ
ಯುವತಿ ಪದೆದಪ್ಪಿದುದು ಮಾ
ಧವನೀಕ್ಷಣಕಾಂತಿಯವಳ ಸರ್ವಾಂಗಮುಮಂ ॥೬೫॥

ನಾರಿಯರಿಕ್ಕೆ ಸೇಸೆಗಳನಾದರದಿಂದಿರದೆಯ್ದೆ ಪಾಡೆ ಶೃಂ
ಗಾರಪಯೋಧಿ ಘೂರ್ಣಿಸುವವೋಲ್ ಕುಣಿದಾಡೆ ಕುಲಪ್ರಧಾನೆಯರ್
ಚಾರು ಸುವರ್ಣಕುಂಭಭೃತಮಂಗಳವಾರಿಯನೆತ್ತಿಕೊಂಡು ಕೈ
ನೀಱೆರೆದಂ ವಧೂವರರ್ಗುದಾತ್ತಮನಂ ವಸುಧಾಧಿನಾಯಕಂ ॥೭೧॥

ಕೆಂದಳಿರೇೞಿದ ಮಾವಂ
ಬಂದ ವಸಂತದೊಳನಂಗನಂಗನೆಸಹಿತೆ
ೞ್ತಂದುಬಲವಂದು ಮನ್ನಿಸು
ವಂದದೆ ಬಲಗೊಂಡರಗ್ನಿಯಂ ದಂಪತಿಗಳ್॥೭೯॥

ಕೊಂಕಿ ಕವಲ್ತು ತನ್ನನೆ ಪಳಂಚುವ ಕೇಕರ ಪಾತವೆೞ್ದ ರೋ
ಮಾಂಕುರಮುಣ್ಮಿ ಪೊಣ್ಮುವ ಭಯಂ ನಮಿತಾನನ ಪದ್ಮರಾಗದಿಂ
ದಂಕರೆಗಣ್ಮಿ ಸೂಸುವ ಬೆಮರ್ ತಲೆದೋಱುವ ಲಜ್ಜೆ ನಾಡೆ ಚೆ
ಲ್ವಂ ಕುಡೆ ನೋಡುತಂಗನೆಯನೀಕ್ಷಿಸಿದಂ ನೃಪರೂಪ ಮನ್ಮಥಂ ॥೮೧॥

ಹಿತನುತ ಮಂತ್ರಿ ಮಂಡಳಿಕ ಮಿತ್ರ ಪುರೋಹಿತ ದಂಡನಾಯಕಾ
ನ್ವಿತ ನಗರಪ್ರಧಾನವನಿತಾನಿಕರಕ್ಕೆ ಸುವರ್ಣಭಾಜನ
ಪ್ರತತಿಗಳೊಳ್ ಕನನ್ಮಣಿಯ ಪೊಂಗಳ ಕೇಳಿಯ  ಬಾಯಿನಂಗಳಂ
ಸುತೆಯ ವಿವಾಹದುತ್ಸವದೊಳಿತ್ತುದು ತನ್ನಪಾಂಗನಾಜನಂ॥೮೫॥

ಭೋಂಕನೆ ಕಂಡು ಕಾಮಿನಿ ಮನಃಪ್ರಿಯನಂ ರತಿರಾಗವಾರ್ಧಿಯೊಳ್
ತೇಂಕಿದಳಪ್ಪಿಕೊಂಡು ಪುಳಕಾಂಕುರಸಂಕುಳದಿಂದೆ ನಲ್ಲನಂ
ಕೂಂಕಿದಳೆಯ್ದೆ ಘರೂಮಜಲದಿಂದಭಿಷೇಕಮನಾಕೆ ಮಾಡಿದಳ್
ಪಂಕಜಲೋಚನಾಂಶುಗಳ ಮಾಲೆಗಳಿಂದಮೆ ಮಾಲೆಸೂಡಿದಳ್ ॥೯೫॥

ನುಡಿಯಿಸಿದೊಡೆ ಬಿಗಿದಿರದೊಡ
ನುಡಿ ಕರೆದೊಡ ಕಳಿಯ ತಡೆದಿರಿನಿಸಂ ಕುಡುವೇ
ೞೊಡೆ ವೀಳೆಯಮಂ ತಡೆಯದೆ
ಕುಡೆಂದು ತದ್ವಧುಗೆ ಬುದ್ಧಿವೇೞ್ವರ್ ಸಖಿಯರ್॥೯೮॥

ಮನಮಱಿದಂಜಿ ಬೆರ್ಚಿ ಬೆಸಕೆಯ್ ನಿಜವಲ್ಲಭನೇನನೆಂದೊಡಂ
ಕಿನಿಸದಿರೊಂದಿದಗ್ರಮಹಿಷೀಪದದಲ್ಲೆ ಪದಸ್ಥೆಯಾಗು ನಂ
ದನರನಗಣ್ಯಪೈಣ್ಯಧನರಂ ಪಡೆಯೆಂದಮರ್ದಪ್ಪಿಕೊಂಡು ತ
ತ್ತನುಜೆಯಗಲೂಕೆಯೊಳ್ ನೆಗಪಿದರ್ ಬಸಮಲ್ಲದ ಬಾಷ್ಪವಾರಿಯಂ॥೧೦೯॥  (ಆದಿಪುರಾಣಂ. ೪-೫೬)

೭. ಕುಮಾರೋದಯವರ್ಣನಂ.

ಪಡೆದರುದಗ್ರಮಪ್ಪ ಕುಲಮಂ ಪಡೆದಂತಿರೆ ರೂಪು ಮೂರ್ತಿಯಂ
ಪಡೆದವರಂ ಸಮಂತು ಪಡೆದಂತು ಸಮಾನಮೆನಿಪ್ಪ ನಲ್ಮೆಯಂ
ಪಡೆದರಿಳೇಶನಂ ಪಡೆವುದಿಂ ಪೆಱತಾವುದೊ ಮತ್ತೆ ಮಕ್ಕಳಂ
ಪಡೆದೊಡೆ ಸಾಲ್ಗುಮೆಂದವರೊಳೞ್ಕಱನಾಳ್ದು ಬಂಧುಸಂಕುಲಂ॥೨॥

ಪಸಿದೞುತಿರ್ಪ ಬಾಲಕನ ನಾದಮನಾಲಿಸಿ ಗೇಹಕೃತ್ಯಮಂ
ಬಿಸುಟತಿವೇಗದಿಂ ಪರಿದು ಸೋಗಿಲೊಳಡ್ಡಮಿಟ್ಟು ಚಿ
ಮ್ಮಿಸಿ ಮೊಲೆವಾಲ್ಗಳಂ ದೆಸೆಗೆ ನೋಡದೆ ವಕ್ತ್ರಮನೊಂದಿ ಚೆಲ್ಲದಿಂ
ಮಸಗದೆ ಸಾರ್ಚಿ ಸಾರ್ಚಿ ಮೊಲೆಯೂಡುವ ಸೈಪೆನಗೆಂದು ಸಾರ್ವುದೋ॥೬॥

ತಳಿರಡಿಯಿಡುತಂ ಕುಟ್ಟಿಮ
ತಳದೊಳ್ ಮಾರ್ಪೊಳೆಯುತಿರೆ ನೀಜಪ್ರತಿಬಿಂಬಂ
ಗಳನೀಕ್ಷಿಸಿ ಕೌತುಕಸಂ
ಚಳನಯನಂ ತನಯನೆಂದು ಬೞಿಸಂದಪನೋ॥೧೬॥

ಕಳಹಂಸಂ ಸುೞಿಯದ ಪೂ
ಗೊಳನಮೃತಮರೀಚಿ ಬೆಳಗದಂಬರಚಕ್ರಂ
ಕಳಭಂ ಸಂಚರಿಸದ ವನ
ವಳಯಂ ಸುತರಾಡದಂಗಣಮ ರಂಜಿಕುಮೇ॥೨೦॥

ಸೆಳೆನಡುವನುಡಿವ ಭರದಿಂ
ಬಳೆವಂತಿರೆ ಬಳೆಯೆ ಮೊಲೆಗಳವರ್ಗಳ ಛಲದಿಂ
ಬಳೆವಂತೆ ಬಳೆಯೆ ನಡುವುಂ
ಮುಳಿಸಿದವೋಲ್ ಕರ್ಗಿಕೊಂಡವವಱ ಮೊಗಂಗಳ್ ॥೫೧॥

ದೊರೆವಡೆದಾ ಕುಮಾರಕನಾ ಗರ್ಭದಿನೀ ಮೃಗಲೋಲನೇತ್ರೆ ಭಾ
ಸುರತರ ಚಂದ್ರಬಿಂಬಮುಖಿಯೆಂಬ ಪೊಗೞ್ತೆಗೆ ರೂಢಿವೆತ್ತ ಸಿಂ
ಧುರಮೃಗಯಾನೆಯೆಂಬ ಮತಿಗುನ್ನತಿವೆತ್ತತಿವೃತ್ತಪೀನಪೀ
ವರಕುಚೆಯೆಂಬ ವರ್ಣನಕೆ ತೃನೆ ದಲಾಶ್ರಯಮಾದುದೊಪ್ಪದೇ॥೫೬॥

ಜ್ಞಾನಮಯಂ ತೇಜೋನಿಧಿ
ತಾನಿರ್ದುಂ ತಾಯಗರೂಭದೊಳ್ ಪೀಡೆಯನಂ
ತೇನಂ ಮಾಡಿದನಿಲ್ಲ ಕೃ
ಶಾನುವ ನೆೞಲಳುರದಂತೆವೊಲ್ ಕನ್ನಡಿಯಂ ॥೫೭॥

ಅರಸಿ ಕುಮಾರನಂ ಪಡೆದ ಭಂಗಿಯನೇವೆಸರ್ಗೊಳ್ವೆನೆಲ್ಲಮೆ
ಲ್ಲರ ತೆಱನಲ್ತು ಮಿಟ್ಟೆಯೊಳೆ ತಾಂ ಪಡೆದಂತೆ ಸುಖಪ್ರಸೂತಿಯೊ
ಪ್ಪಿರೆ ಪಡೆದಳ್ ಭಯಂ ಗಡ ನಯಂ ಗಡ ಬೇನೆಯ ಸೂೞ್ ಗಡೆಂದು ತ
ತ್ಪುರದ ಪುರಂಧ್ರಿಯರು ಸತಿಗೆ ತೂಪಿಱಿದರ್ ಸ್ವಗೃಹಾಂತರದೊಳ್ ॥೫೮॥

ತೊಟ್ಟಿಲ ತೂಕದೊಳ್ ಕಂಕಣ ಝಂಕೃತಿ ದಿಟ್ಟಿ ಸೂರ್ಕೆಯಂ
ನಿಟ್ಟಿಸೆ ಜಿಹ್ವೆ ಕಾವಳನ ಕಾಕುಪಟುಧ್ವನಿರಾಗದಿಂ ಪದಂ
ಬಟ್ಟಿರೆ ದೇವಿಯರ್ ಕೆಲದೊಳಿರ್ದ ಕುಮಾರನ ಮುದ್ದು ಹರ್ಷಮಂ
ಪುಟ್ಟಿಸೆ ಕೂಡೆ ಪಾಡಿದುದು ಜೋಗುಳಮಂ ಪುರಕಾಮಿನೀಜನಂ॥೬೨॥

ಮಣದೆ ಧೂಲಿಮಾಳಿಗೆಗಡಂಗುವ ಸಾರ್ಚಿದ ತಾಯ ಜಂಘೆ ನಿ
ಶ್ರೇಣಿವೊಲಾಗೆ ಮೆಟ್ಟಿ ತೊಡೆಯೇಱುವ ಚಿತ್ರದ ಪಣ್ಫಲಂಗಳಂ
ಕಾಣಿಸೆ ದಾದಿಯಂ ಬಿಡದೆ ಬೇಡುವ ಕಂಡರ ಹಸ್ತವಾದ್ಯಕ
ಲ್ಯಾಣರವಕ್ಕೆ ನರ್ತಿಸುವ ಮುದ್ದುಗಳೊಪ್ಪಿದುದಾ ಕುಮಾರನೊಳ್॥೬೭॥

ಮನೂನಣೆವೆತ್ತ ದಾದಿಯರ ಕೈಗೆ ನೃಪಾಲನ ಕೈಗೆ ಸನ್ನೆಯಿಂ
ಸನ್ನೆಯ ಮಾಡೆ ನೀಱೆಯರ ಕೈಗೆ ತದನಂತರದಿಂ ಬರ್ಪನಂ
ಮುನ್ನಮೆನಿಪ್ಪ ಮುದ್ದುತನದಿಂ ಜಯದೇವಿಯ ಸೂನು ಕಂದುಕಂ
ಕನ್ನಡಿ ಹೊನ್ನ ವೀಣೆ ಪಿಡಿದಾಡುವ ತಾವರೆಯೆಂಬ ಮಾೞ್ಕೆಯಿಂ॥೬೯॥

ಅಳರೆಲೆ ಯತ್ತಿಕಾಯ್ ಪುಲಿಯುಗುರ್ ನಿಗಳಂ ಕಿಱುಗೆಜ್ಜೆ ಬಂದಿ ಕಂ
ಗೊಳಿಸುವ ರಕ್ಕೆ ಸಂಕೊಲೆ ಘಣಿಲ್ಗರೆದೊಪ್ಪುವ ಗಂಟೆ ನೇವುರಂ
ಪೊಳೆಪಳವಟ್ಟು ತೋರ್ಪ ಕುಱಿಯುಣ್ಣೆಯ ಪೆಂಡೆರವೆಂಬಿವೊಂದಿ ಗೊಂ
ದಳಿಸಿರೆ ಬಾಲವಂದದ ತೆರಳ್ಕೆಯಿನಚ್ಯುತನಾದಮೊಪ್ಪಿದಂ॥೭೫॥

೮. ಚಂದ್ರೋದಯವರಣನಂ.

ಒದವಿ ಪೊದೞ್ದು ಪಜ್ಜಳಿಪ ತೇಜದ ಸುಯ್ನಱೆ ಕಾಯ್ಪೆಯೋಡಿಪ ಪ
ಣ್ತದು ಬಿಸಿಲೆಂಬಿನಂ ಬಿಸಿಲೊಳಾದುದು ಕೆಂಪು ಬೞ್ಕೆ ಪಾಱಿಪೋ
ದುದು ಬಿಸಿಲೊಪ್ಪಿದೊಂದರಿಸಿನಕ್ಕೆಣೆಯಾಯ್ತು ಬಿಸಿಲ್ ಬಿಸಿಲ್ಗೊಡ
ರ್ಚಿದ ವಿಹಗಾಳಿವೊಲ್ ಬೞಿಯವೊರ್ಬುಗೊಂಡುವು ಸೂರ್ಯರಶ್ಮಿಗಳ್ ॥೩॥

ಕಡುಬಿಸುಪಾಱೆ ಬೆಳ್ಪಣಮೆ ಪಾಱೆ ಕರಂ ಕರಮೆಲ್ಲ ಪಕ್ಕದಿಂ
ದುಡುಗೆ ನಿಜಾಂಗತುಂಗಧವಳಾಕೃತಿ ಕಾಸಿದ ಬಟ್ಟಿನಂತಗೆ ಕೆಂ
ಪಡರ್ದಿರೆ ತನ್ನ ಮುನ್ನೊಗೆದ ತತ್ತಿಯ ರೂಪನೆ ಪೋಲ್ತು ಜಾಜಿನೊಳ್
ತೊಡರ್ದವೊಲೊಪ್ಪಿದಂ ಗಗನವೃಕ್ಷದ ಪಣ್ಗೆಣೆಯಾಗಿ ಭಾಸ್ಕರಂ॥೧೦॥

ಕವಿದುವುಧೇನು ಮುಂಚೆ ತುಱುಗಳ್ ಪೊಲದತ್ತಣಿನೊರ್ಗೆ ಬಾನಲಾ
ದುವು ಪಡುವಣ್ಗೆ ಪಾಱಿದುವು ಗೂಡಿನ ಸಾರ್ಕೆಗೆ ಪಕ್ಕಿ ಕೊಂಬುಗೊಂ
ಡುವು ಮೃಗಮೂರಪೊರ್ದುಗೆಯ ಬಟ್ಟೆಗೆ ಮೇಪಿನ ಕಾಪಿನಿಂ ಮರ
ಳ್ದುವು ದಿನನಾಯಕಂ ವರುಣ ದಿಙ್ನಗಮಂ ಮಱೆಗೊಳ್ವ ಕಾಲದೊಳ್॥೨೦॥

ಜಲರುಹಮಿತ್ರನೊಳ್ ನೆರೆವ ಸಂಜೆಯ ನಿರ್ಭರಾಕಂಠನಾದಮಂ
ನಲವಿನೊಳೆಯ್ದೆ ಕಲ್ತು ಪರಿಮಿಕ್ಕಿರೆ ಪಕ್ಕೆಗೆ ಸಾರ್ವ ಪಕ್ಕಿಗಳ್
ಚಿಲಿವಿಲಿವಿಚ್ಚುವಿಚ್ಚುಚಿಲಿಚಿಲ್ವಿಲಿ ಕರ್ಕುಕಹುರ್ಕು ಬಾರ್ಕುಳಿ
ರ್ಘಲಘಲಲೆಂದದೇನುಲಿಯುತಿರ್ದುದೊ ನೀಳ್ದ ಮಹೀರುಹಂಗಳ್ ॥೨೭॥

ಕೂಡಿದೆವಿಲ್ಲಿ ಕೂಡಿ ನಲಿದೋಕುಳಿಯಾಡಿದೆವಿಲ್ಲಿ ಸಂಗಡಂ
ಪಾಡಿದೆವಿಲ್ಲಿ ಪಂಕಜದ ಕೋಮಳಕೋಶದ ಬೀಜರಾಜಿಯಂ
ತೋಡಿದೆವಿಲ್ಲಿ ನೀಡಿ ಕುಟುಕಂ ಮನದೞ್ಕಱೊಳೀಗಳಿಕ್ಕಿ ಬಾ
ಯ್ಗೂಡಿದೆವೆಂದು ತಮ್ಮಿನಿಯರಂ ನೆನೆದೞ್ತುವು ಜಕ್ಕವಕ್ಕಿಗಳ್ ॥೪೦॥

ಕರಿದು ಪಿಕಂ ಪಿಕಕ್ಕೆ ಕರಿದಾ ಭ್ರಮರಂ ಪಿಕದಿಂದೆ ತುಂಬಿಯಿಂ
ಕರಿದೆಸೆವಂಜನಂ ಪರಭೃತಕ್ಕಳಿಗಂಜನಕಿಂದ್ರನೀಲಮುಂ
ಕರಿದು ಪಿಕಾಳಿಯಿಂದಳಿಯಿನಂಜನದಿಂ ನೆಗೞ್ದಿಂದ್ರನೀಲದಿಂ
ಕರಿದೆನಲುಬ್ಬಿ ಪರ್ಬಿದುದುಗುರ್ಬಿಸಿ ಸರ್ವದಿಗಂತಮಂ ತಮಂ॥೭೨॥

ಉದಯವಿಶಾಲಶೈಲದ ತಮಾಲವನಂ ನವನೀಲರತ್ನಚೂ
ಳದ ರುಚಿ ನೀರಜಾಗರದ ನೀರರೈಹಂ ಮುಗಿದಿರ್ದುದಿಂದ್ರ ದಿ
ಙ್ಮದಗಜದಾನಸೌರಭಕೆ ಬಂದೆಳಗಿರ್ದು ಮದಾಳಿಮಾೞ್ಕೆಯೆಂ
ಬುದು ಬಗೆಗುಣ್ಮೆ ಪರ್ವಿದುದು ಪೂರ್ವದಿಗಂತಮನಾವಗಂ ತಮಂ ॥೭೯॥

ಸಱಕನೆ ಸೀತಡೆ ಪೆರರಂ
ಜಱೆದಡೆ ಕೆಮ್ಮಿದಡೆ ಕಯ್ಯ ವೀಳೆಯದೆಲೆಯಂ
ಹಱಿದಡೆ ಬಾಗಿಲ ದಿಕ್ಕಂ
ಮುಱಿದಡೆ ಕುರುಪಿಂಗೆ ಪಾಣ್ಬರೆಸೆವರ್ ತಮ್ಮೊಳ್ ॥೧೨೪॥

ನೋಡಿಸಿ ನೋಡವೇಳ್ಪ ಭರಮಪ್ಪುದು ಗೆಂಟರ ಕೋಣೆಗೇರಿಯೊಳ್
ಕೇಡಱಸಲ್ಕೆ ಪೋಪ ಭರಮಪ್ಪುದುದೇವಿಗೆ ರಾತ್ರಿಯಾತ್ರೆಯಂ
ಮಾಡುವ ನೊಂಪಿಯೊಂದು ಭರಮಪ್ಪುದು ಜಾರೆಯರಾತ್ಮ ಜಾರರೊಳ್
ಕೂಡುವ ಚಿತ್ತದಿಂ ತೆಱಪನಾಗಿಸಿಕೊಳ್ವರನೇಕ ಭಂಗಿಯಿಂ ॥೧೩೩॥

ಬಿಡಬೇಡಣ್ಣೆಲೆ ಬೀಡುಗೊಳ್ವೂಡೆನಸುಂ ಕಣ್ಗಾಣಳೆಮ್ಮತ್ತೆ  ನೋ
ೞ್ಪಡೆ ಮಾವಂ ಶತವೃದ್ಧನೆನ್ನ ಪತಿಯುಂ ಬೇರೂರ್ಗೆ ಪೋಗಿರ್ದನಾಂ
ಪಡುವೆಂ ಮೂಡಣ ಕೋಣೆಯಲ್ಲಿ ಸುೞಿವರ್ ಮತ್ತೊಬ್ಬರಿಲ್ಲೇಕೆ ನೀಂ
ಬಿಡಬೇಡೆಂದತಿಜಾತಿ ಜಾರೆ ನುಡಿದಳ್ ಜಾರಂಗೆ ವಕ್ರೋಕ್ತಿಯಿಂ॥೧೩೯॥

ಎನಸುಂ ಜಾರರ್ಗದೇಂ ಪ್ರೀತಿಯನೊಡರಿಸಿತೋ ಸ್ವೈರಿಣೀಸ್ವಲ್ಪಕಂಠ
ಧ್ವನಿ ಕಿಂಚಿಚ್ಚುಂಬನಂ ಸೀತ್ಕೃತಿವದನರವಂ ಮಂದನಿಶ್ವಾಸನಂ ಗೂ
ಢನಖೋಲ್ಲೇಖಾಂಕಮೀಷದ್ವಚನರಚನವಾಕ್ಪ್ರೌಢಿ ಶೀಘ್ರಾಕುಳಾಲಿಂ
ಗನಮೀಷತ್ತಾಡನಂ ಸಂಕುಚಿತರತಿ ಚಳಾಂಪಾಂಗಮುತ್ಕಂಪಿತಾಂಗಂ॥೧೫೦॥

ನಿಡಸುಯ್ಲುಂ ತನ್ನನೊತ್ತಂಬರಿಸೆ ನಿಲುಪುತುಂ ನೀಳ್ದ ನಲ್ಕೇಶದಿಂದಂ
ತೊಡೆಯುತ್ತುಂ ತೊಂಡೆವಾಯಂ ಶ್ರಮಜಲಕಣಮಂ ಮೇಲುದಿಂ ವಾರಿಸುತ್ತುಂ
ನುಡಿಯುತ್ತುಂ ಪಾಣ್ಬನೊಳ್ ಕೂಡಿದ ರತಿವಿಷಯಖ್ಯಾತಿಯಂ ತನ್ನೊಳಾಗಳ್
ನಡೆಯುತ್ತುಂ ಪಾಣ್ಬೆಯೊರ್ವಳ್ ನಿಜಮಣಿಭವನದ್ವಾರದೊಳ್ ಬಂದು ನಿಂದಳ್॥೧೬೭॥

ಲೀಲೆವಡೆದೆಸೆವ ತಾರಾ
ಮಾಲೆಯ ಜಲಜಲಿಸಿ ಪೊಳೆವ ಪೊಳೆಪುಗಳಿಂದಂ
ಸೋಲಿಸೆ ಪೂವಲಿಗೆದಱಿದ
ನೀಲದ ರಂಗದವೊಲೆಸೆದುದಾಕಾಶತಳಂ॥೧೭೧॥

ಶಶಿ ಬಂದನೆಂದು ವಾರಿಧಿ
ಯೆಸೆದೊಲವಿಂ ನರರ ದಿಟ್ಟಿ ನಟ್ಟಪವೆಂದಾ
ಸಸಿಗೆ ನಿವಾಳಿಸಿ ಚೆಲ್ಲಿದ
ಪೊಸ ಮುತ್ತಿನ ಸೇಸೆಯಂತೆ ತಾರಗೆಯೆಸಗುಂ॥೧೮೨

ವಿರಹಿಗಳಂ ಮನೋಜನಲರಂಬುಗಳಂ ತೆಗೆದೂಱಿಕೊಂಡು ಕೊ
ಕ್ಕರೆಸದೆ ಹೃತ್ಕವಾಟಪುಟಮಂ ಬಿರಿಯೆಚ್ಚೊಡೆ ತದ್ಗುಹೌಘದಿಂ
ಸುರಿವರುಣಾಂಬುವಂ ಕುಡಿದು ನರ್ತಿಸುತಿರ್ಪವಸಂತಡಾಕಿನೀ
ಕರದ ಕಪಾಲಮಿಂತಿದೆನೆ ಕಣ್ಗೆಸೆದಿರ್ದುದು ಚಂದ್ರಮಂಡಳಂ॥೧೯೭॥

ಪುರುಡಿಂ ಕಾಯ್ದೊದೆಯಲ್ಕೆ ರೋಹಿಣಿಯ ಪಾದಾಲಕ್ತಕಂ ಮೆಯ್ಯನಾ
ವರಿಸಿತ್ತೋ ನಿಕಟಾಬ್ಧಿ ವಿದ್ರುಮ ಮಯೂಖಂ ತಳ್ತುದೋ ಪೂರ್ವಭೂ
ಧರಸಿಂಹಂ ಪೊಯೆ ನೊಂದುದೋ ಹರಿಣನೆಂಬಂತಾಗಳತ್ಯುಕ್ತ ಸೌಂ
ದರಮಾಗಿರ್ದುದು ಕಣ್ಗೆ ರಕ್ತ ರುಚಿಯಿಂ ಬಿಂಬಂ ಸುಧಾಸೂತಿಯಾ॥೨೦೩॥

ತೊರೆದುದು ಚಂದ್ರಕಾಂತಮೆಣೆವಕ್ಕಿಗಳಪ್ಪು ಸಡಿಲ್ದುವಿಂಗಡಲ್
ತೆರೆ ಮಸಗಿತ್ತು ಮಿರ್ದೈವೊಗೆತಂದುದು ಚಂದ್ರಿಕೆ ಕೂಡೆ ಮೀನ್ಗಳಂ
ಕುರಿಸಿದುವುತ್ಪಲಂ ನಗುತಮಿರ್ದುವು ಕಣ್ಮುಗಿದಬ್ಜಂಮುಂ ತಮಂ
ಪರೆದುದು ಮನ್ಮಥಂ ನಲಿದು ನರ್ತಿಸಿದಂ ಶಶಿ ಬರೂಪ ಪೊೞ್ತಿನೊಳ್॥೨೧೧॥

ನನೆಯಂಬಂ ಮದವೇಱೆ ಕೈರವಕುಳಂ ನೀರೆಱೆ ಕಾಮಾರ್ಥಿಯ
ಪ್ಪನ ಜೀವಂ ನಡುನೆತ್ತಿಗೇಱೆ ಖರದಂಡಶ್ರೀಗೆ ಕರ್ಪೆಱೆ ಕಾ
ಮಿನಿಯರ್ ಸಂತಸದುಯ್ಯಲೇಱೆ ನೆಲೆಯಿಂದಂಭೋಧಿ ಮಿಕ್ಕೇಱೆ ಭೋಂ
ಕನೆ ಬಂದೇಱಿದನಲ್ತೆ ವಾಸವದಿಶಾಶೈಲೇಂದ್ರಮಂ ಚಂದ್ರಮಂ॥೨೧೭॥

ಗಗನಮಹಾಂಬುರಾಶಿಯೊಳಗೊಯ್ಯನೆ ಕೊರ್ಬಿದ ಮುತ್ತು ಸುತ್ತಲುಂ
ಸೊಗಯಿಪ ಕೌಮುದೀಲತೆಯ ಬಿತ್ತು ವಿಧುಂತುದನುಂಬ ತುತ್ತು ಕಾ
ಮಿಗಳನನಂಗನಾಜ್ಞೆಯೊಳೆ ಪೋಣಿಸಿದೋಲೆಯ ಸುತ್ತು ನೋೞ್ಪೊಡಂ
ಬಗೆಗೊಳಿಸಿತ್ತು ವಾಸವದಿಶಾನನಕುಂಡಲಮಿಂದುಮಂಡಲಂ ॥೨೨೨॥

ಮನಸಿಜನಿಟ್ಟ ಚಂದನದ ಬೊಟ್ಟು ರತೀಶನ ಜೀವದಂಚೆ ಕಾ
ಮನ ಧವಳಾತಪತ್ರವಸಮಾಸ್ತ್ರನ ಭಾಸುರಚಕ್ರವಿಕ್ಷುಚಾ
ಪನ ಶಶಿಕಾಂತದರ್ಪಣವನಂಗನ ಮುತ್ತಿನ ಚಂಡು ಪುಷ್ಪಧ
ನ್ವನ ಕೃತಪುಣ್ಯಪುಂಜಮೆನೆ ಕಣ್ಗೆಸೆದಿರ್ದುದು ಚಂದ್ರಮಂಡಲಂ ॥೨೩೧॥

ನೆಯ್ದಿಲ್ ವಿಕಾಸಲಕ್ಷ್ಮಿಯ
ನೆಯ್ದಿಲ್ ತಳಿರ್ಗೆಂಪನಾಂತು ಮೂಡಣದೆಸೆ ಚೆ
ನ್ನೆಯ್ದಲ್ ವಿರಹಿಯನಂಗಜ
ನೆಯ್ದಲ್ ನೆಯ್ದಿಲಸಹಾಯನುದಯಂಗೆಯ್ದಂ ॥೨೪೦॥

ಇದು ಹರಿಣಂ ದಿಟಂ ಹರಿಣನಲ್ತು ಮೊಲಂ ಮೊಲನಲ್ತದಾಲಮಾ
ಲದ ಮರನಲ್ತು ಪುತ್ತುಗಳೆ ಪುತ್ತುಮಿದಲ್ತೆನುತಿರ್ಪ ಮೂಢಲೋ
ಕದ ಪಡೆಮಾತದಿರ್ಕೆ ನೆವಮಿಟ್ಟು ಕೊಲಲ್ ಮದನಂ ವಿಯೋಗಿಗೊ
ಡ್ಡಿದ ಘಟಸರ್ಪನೆಂದು ಬಗೆಯಿಂ ಹಿಮದೀಧಿತಿಹೃತ್ಕಳಂಕಮಂ॥೨೪೭॥

ಸಿರಿ ಬಂದಾಶ್ರೈಸಿದಳ್ ಮಾಧವನುದರದೊಳೊತ್ತಿಟ್ಟುಕೊಂಡು ದಿನೇಶಂ
ಪಿರಿದುಂ ಕೂರ್ಪಂ ಸುಧಾಸೂತಿಯೆ ಮುನಿವವನೆಮ್ಮನ್ವಯಕ್ಕೆಂದು ನೀರೇ
ಜರುಹ ಕಾಯ್ಪಿಂ ನಿಜಾಗ್ರಾಯೈಧವನಿಡೆ ಸಿಡಿಲ್ದೊಂದು ಭಾಗಂ ನಭೋಭ್ಯಂ
ತರದೊಳ್ ಸೂಸಿತ್ತೆನಲ್ಕೇನೆಸೆದುದೋ ಭಗಣಾನೀಕದಿಂದರ್ಧಚಂದ್ರಂ॥೨೫೭॥

ಲವಾಂಭೋನಿಧಿ ದುಗ್ಧವಾರ್ಧಿಚಯದಂತಿರ್ದತ್ತು ಕಾಳಿಂದಿ ಜಾ
ಹ್ನವಿಯಂತಿರ್ದುದು ನೀಲಪರ್ವತಮೆ ಕೈಲಾಸಾದ್ರಿಯಂತಿರ್ದುದೀ
ಭುವನಂ ಕಪ್ಪುರದಿಂದೆ ಕಂಡರಿಸಿದಂತಿರ್ದತ್ತು ಕೃಷ್ಣಂ ಸದಾ
ಶಿವಶಂತಿರ್ದನೆನಲ್ಕದೇವೊಗೞ್ವೆನೋ ಪೇೞಚ್ಚವೆಳ್ದಿಂಗಳಂ ॥೨೭೩॥

ಉರುಳಿಸಿ ವೆಜ್ಜಮಂ ಕಳೆದು ಕೋದೊಡೆ ಮುತ್ತಿನ ಹಾರಮಪ್ಪ ಸೀ
ಳ್ದಿರೆ ಪೊರೆಯೆತ್ತಿ ಪಟ್ಟಣಿಗೆಯಪ್ಪುಗುರಿಂದೆ ಕೞಲ್ಚೆ ತೋರಗ
ಪ್ಪುರವಳುಕಪ್ಪ ಬಕ್ಕಬಯಲಂ ಕಡೆಯಲ್ ಧವಳಾರಮಪ್ಪ ಬಂ
ಧುರ ವರ ಸಾಂದ್ರಮಕ್ಕೆ ನೆಲೆಯಾದುದು ಚಂದ್ರಿಕೆಯೇಂ ವಿಚಿತ್ರಮೋ॥೨೮೫॥

ಇದು ವಿಧೈಬಿಂಬಮಪ್ಪುದಿನಮಂಡಲಮಲ್ತಿದರಲ್ದ ನೆಯ್ದಿಲ
ಪ್ಪುದು ಸರಸೀಜಮಲ್ತಿದು ಶಶಿಪ್ರಭೆಯಪ್ಪುದು ಭಾನುದೀಪ್ತಿಯ
ಲ್ತಿದು ಹಗಲಲ್ಲದಿಲ್ಲದಿರುಳಪ್ಪುದು ತಪ್ಪದೆಂದು ನೋ
ಡಿದರಭಿಶಂಕೆಯಂ ತಳೆಯೆ ಪಜ್ಜಳಿಸಿತ್ತು ಸುಧಾಂಶುಮಂಡಲಂ॥೨೯೨॥

ಸೞಿಗುರುಳೊಳ್ ತೊಡಂಕಿ ವದನಾಂಬುಜಸೌರಭದೊಳ್ ಮುೞುಂಗಿ ಪೊಂ
ಪುೞಿಗೊಳುತಿರ್ದ ಸೊರ್ಮುಡಿಯೊಳೊತ್ತಿದ ಕತ್ತುರಿಯಂ ಕಲಂಕಿ ಮೈ
ವೞಿಯೊಳೆ ಮೇಲುದಂ ತೊಲಗೆನೂಂಕಿ ಕುಚದ್ವಯದೊಳ್ ಪಳಂಚಿ ಪೊ
ಕ್ಕುೞೊಳಿೞಿದಾಡಿ ಕೂಡಿದುದು ವಲ್ಲಭನಂತಿರೆ ಮಂದಮಾರುತಂ॥೩೧೬॥

ತೂಗಿ ನಿಜೇಶನಾ ಸೊಬಗನೞ್ಗಿಸೆ ನೋೞ್ಪವರುತ್ತಮಾಂಗಮಂ
ತೂಗಿ ತಗುಳ್ದು ನೋೞ್ಪ ವಿಟಕೋಟಿಗೆ ಮನ್ಮಥನಾತ್ಮಬಾಣಮಂ
ತೂಗೆ ಪೊದೞ್ದ ಮಾಂದಳಿರ ತೋರಣಮಂ ಸುೞಿತಪ್ಪ ತಂಬೆಲರ್
ತೂಗೆ ವಿಲಾಸದಿಂದೆ ಪೊಸಪೊಂಬೆಸದುಯ್ಯಲನೊರ್ವಳಾಡಿದಳ್॥೩೨೯॥

ಪವಳದಿನಿಂಗಡಲ್ ಶಫರದಿಂ ಕೊಳನುನ್ಮದಭೃಂಗನಾದದಿಂ
ದವಿರಳಪುಷ್ಪಭೂಜಮೆಸೆವಂತಿರೆ ಚಂದ್ರಿಕೆ ರತ್ನಭೂಷಣಾಂ
ಶುವಿನಲರ್ಗಣ್ಣ ಮಾರ್ಪೊಳೆಪಿನಿಂ ಮೃದುಗೇಯದಿನೊಯ್ಯನೊಯ್ಯನುಯ್ಯಲಾ
ಡುವ ಲಲಿತಾಂಗಿ ತನ್ನೆಡೆಗೆ ನೀಱರ ಚಿತ್ತಮನುಯ್ಯಲಾಡಿದಳ್॥೩೩೫॥

ತೀಡುವ ಗಾಳಿಯಂ ಪಿಡಿದು ನೋಡುವ ಸಿಂಗಮನಾಗಳಂತೆ ನಾಯ್
ಮಾಡುವ ಬನ್ನಮೇಲೆ ಬಯಲಂಗವನಾಡುವ ಬೆಟ್ಟನಣ್ಣೆಕ
ಲ್ಲಾಡುವ ಚಂದ್ರನಂ ಪಿಡಿದು ಸೂಡುವ ಬೊಮ್ಮನನಾದೊಡಂ ಮರುಳ್
ಮಾಡುವ ಕಾಳುಗುಂಟಣಿಯರಾರುಮನೇಳಿಸಿಕಾಡದಿರ್ಪರೇ॥೩೭೬॥

ನಗುವೊಡೆ ಪಲ್ ಕೞಲ್ದಪುವು ಡೊಳ್ಳಿನೊಳಪ್ಪುವ ಗಂಡರೞ್ದಪರ್
ಪುಗುವೊಡೆ ಪಾಸಲುಂ ಪೊದೆಯಲುಂ ಮೊಲೆ ಸಾಲ್ವುವು ನಿದ್ರೆಯಲ್ಲಿ ಮೆ
ಲ್ಲಗೆ ತೊಡೆಮೇಲೆ ಬೀೞೆ ಮಹನಾಮಿ ಬೊಜಂಗತನಕ್ಕೆ ನೋಡೆ ಸೂ
ಳೆಗೆ ಕೊಡವೇೞ್ದರೀ ಪೞಬಳಾರಿಗೆ ಕೊಟ್ಟನದೊರ್ವನೊತ್ತೆಯಂ ॥೩೮೩॥

ಕಡು ಮುಳಿದಿರ್ದ ನಲ್ಲನಿದಿರಂ ಬರೆ ನಲ್ಲಳ ಬಾಯ ತಂಬುಲಂ
ಪುಡಿಯಿಡವೇೞ್ಕು ಮೈ ಬೆಮರವೇೞ್ಕು ಮೊಗಂ ಕಿಱಿದಾಗವೇೞ್ಕುಮೊ
ಳ್ನುಡಿ ತೊದಳಾಗವೇೞ್ಕು ನಡೆನೋಡುವ ದಿಟ್ಟ ಕಲಂಕವೇೞ್ಕು ನಾ
ಣೆಡೆ ತಲೆದೋಱವೇೞ್ಕುಮಿನಿತಿಲ್ಲದೊಡೊಲ್ಮೆಯನಿಕ್ಕು ಕಿಚ್ಚಿನೊಳ್॥೩೯೩ ॥

ಮನಮಂ ಮೋಹಿಸು ನೋಟದೊಳ್ ನುಡಿಯೊಳಿಂಪಂ ಬೀಱು ಮೆಯ್ಮೇಳದೊಳ್
ತನುವಂ ಮೆಚ್ಚಿಸುಕೂಟದೊಳ್ ಪದೆದ ಮೆಯ್ಯಾಗೊಲ್ದವೊಲ್ ಸುತ್ತು ಸು
ಸ್ವನನಿತ್ತಳ್ಕುವ ಲೋಭನಂ ಪುಗದಿರಾರ್ಗಂ ಕುಡದಿರ್ ನಾಣ ಪೆಂ
ಪನೆ ಕಾಯೆಂದೆಳಸೂಳೆಗೋದಿಸುತಲಿರ್ದಳ್ ಸೂಳೆಸಿದ್ದಾಂತಮಂ ॥೪೨೯॥

ಒಡನೆಯ ಪುಣಿಸೆಯ ಮರಗಳ್
ಕೆಡೆದುವು ನಿಮಗಿನ್ನುಮಜ್ಜ ಪೆಂಡಿರ ಕಜ್ಜಂ
ನಡೆವುದಕೆ ತೆಱಹದಲ್ಲದು
ನಡೆಯೆಂದೊಡೆ ಬಿಟ್ಟು ಬಿದಿರ್ದು ಪೋದಂ ಮುದುಪಂ॥೪೪೮॥

೯. ಸೂರ್ಯೋದಯವರ್ಣನಂ.

ಹಳಹಳನಿರ್ದ ತಾರೆ ಕಳೆಗುಂದಿದ ಚಚದ್ರನಲರ್ಕೆಗುಂದಿದು
ತ್ಪಲಮತಿಶೈತ್ಯಮಪ್ಪೆಲರು ನಂದುವ ದೀಪ್ತಿಯಗಲ್ವ ಜಾರೆಯರ್
ಗೞಪುವ ಕೋೞಿ ಶಂಖಮರುಣಚ್ಚವಿ ಕೆಂಪಿನಮಂಡಲಂ ರತ
ಕ್ಕೆಳಸುವ ಕೋಕಮಬ್ಜ ವಿಕಸಂ ಸಲೆ  ಸೂರ್ಯನ ವರ್ಣನಕ್ರಮಂ ॥೨॥

ಒದವಿದ ಗಗನಾಂಗಣದೊಳ್
ಕೆದಱಿದ ಪೂವಲಿಯ ಕಸವನೇಂ ಕಳೆದರೊ ದಿ
ಕ್ಸುದತಿಯರೆಂಬಂದದಿನೊ
ರ್ಮೊದಲೊಳ್ ಮೀನ್ ಪರೆದು ಪೋದುವರುಣೋದಯದೊಳ್ ॥೭॥

ಆವರಿಸಿ ನಿಂದ ನಿಜಕಿರ
ಣಾವಳಿಗಳನುಡುಗಿಕೊಂಡು ತೀವಿದ ಕೊಳದೊಳ್
ಕಾವುಡಿದ ಬಿಳಿಯ ತಾವರೆ
ವೂವಾೞ್ದವೊಲಾೞ್ದನಂಬುನಿಧಿಯೊಳ್ ॥೧೬॥

ಶರನಿಧಿಯಲ್ಲಿ ಸಂಭವಿಸಿದೆಂ ಕಮಲೋದರನೆಮ್ಮ ಭಾವನಿಂ
ದಿರೆಯೊಡವುಟ್ಟಿದಳ್ ಶಿವಲಲಾಟದ ಚಂದ್ರಮನಣ್ಣನೆಂಬುದಂ
ಪರಿಕಿಸದಂಧನೊತ್ತಿ ಪಿಡಿದಾಸ್ಯದೆ ಕಚ್ಚಿದನೆಂದು ಶಂಖವಾ
ಧರಣಿಧರಂಗೆ ಪುಯ್ಯಲಿಡುವಂದದಲಿರ್ದುದು ಸುಪ್ಯಭಾತದೊಳ್॥೨೪॥

ಮುಟ್ಟುಪಡಾಯ್ತು ಜೊನ್ನದುಣಿಸುಂಬ ಚಕೋರಚಯಕ್ಕೆ ಬಂಧನಂ
ಬಿಟ್ಟುದು ಪದ್ಮಕೋಶವೊಳಕೊಂಬ ಮದಾಳಿಗೆ ಚಕ್ರವಾಕ ನೀಂ
ಬಿಟ್ಟಿರಬೇಡ ನಿಮ್ಮಿನಿಯರೊಳ್ ನೆರೆಯೆಂದುಱೆ ಸಾಱುವಂತೆ ಬೊ
ಬ್ಬಿಟ್ಟು ಕಡಂಗಿ ಕೂಗಿದುವಾಗಳು ಕುಕ್ಕುಟನೊಂದು ನಿಚ್ಚಟಂ ॥೨೭॥
ಮುಂದೆ ಮಹಾಸುರಮಥನಂ
ಬಂದೆಱೆದನಮರಗಿರಿಶಿಖಾಗ್ರಮನೆಂದೋ
ರಂದದೆ ಮೊರೆವಳಿಯಿಂದರ
ವಿಂದೌಘದ ಮುಂದೆ ನಿದ್ದೆ ತಿಳಿದುವು ಕೊಳಗಳ್॥೪೧॥

ಜಗಮಂ ಬೆಳಗುವ ಮಗನಂ
ಗಗನಂ ಪಡೆದೊಸಗೆಗಂದು ವಾರಿನೃಪಂತೊ
ಟ್ಟಗೆ ಬಿಟ್ಟ ತಮದ ಸೆಱೆಯೆನ
ಲೊಗೆದುವು ಮುಂ ಸಿಲ್ಕಿದಳಿಗಳಲರ್ದಂಬುಜದಿಂ॥೪೬॥

ಇನನ ಬರವಿಂಗೆ ಪೂರ್ವಾಂ
ಗನೆ ಕುಂಕುಮಪಂಕದಿಂದಲಂಕರಿಸಿದಳೋ
ತನುವನೆನೆ ಸಂಜೆ ರಂಜಿಸಿ
ತಿನನುದಯಮನಱಿಪುವಂತೆ ಮೂಡಣ ದೆಸೆಯೊಳ್॥೫೫॥

ಅಳಿದ ಕರುಳ್ ತಡಂಮುಡಿದ ಸೋರ್ಮುಡಿ ಬೀಗಿ ಬೆಳರ್ತ ದೋರೆವಾಯ್
ಮಳಮಳಿಸುತ್ತಮಿರ್ಪ ನಗೆಗಣ್ ನಸುಜೋಲ್ದುಡೆ ಕೊಂಕಿದೋಲೆ ಚ
ಪ್ಪಲರ್ದ ಘನಸ್ತನಂ ನವನಖಾಂಕಮಲಂಕರಿಸಲ್ ನಿಜೇಚ್ಛೆಯಿಂ
ಸುಳಿವಬಲಾಜನಂ ದಿನಕರೋದಯಕಾಲದೊಳೊಪ್ಪಿ ತೋಱುಗುಂ॥೬೧॥

ತಡೆಯದೆ ತಮಮೆಲ್ಲಮನೊಂ
ದೆಡೆಯೊಳ್ ತಂದೊಟ್ಟಿ ಪೂರ್ವದೆಸೆಯೊಳ್ ಧಾತ್ರಂ
ಸುಡುಸುಡಲುರಿವೆರಸಿದ ಬ
ಲ್ಗಿಡಿಯಂ ಪೋಲ್ತೆಸೆದನರುಣಕಿರಣಸಹಸ್ರಂ ॥೭೦॥

ನಿಶಿ ಬಿಟ್ಟೋಡೆ ಶಶಾಂಕನುನ್ನತಕರಂಗಳ್ ಬಾಡೆ ಕಂಜಾಳಿ ಸಂ
ತಸಮಂ ಸೂಡೆ ಮರಾಳಿ ಪಾಡೆಯೊಲವಿಂ ಚಕ್ರದ್ವಯಂ ಕೂಡೆ ಶೈ
ತ್ಯಸಮೀರಂ ನೆಱೆ ತೀಡೆ ಕೈರವನಿಕಾಯಂ ಬಾಡೆ ಪೂರ್ವಾದ್ರಿ ಕೆಂ
ಬಿಸಿಲಿಂದೊಪ್ಪಿರೆ ಮೂಡಿದಂ ಭಗಣಶೋಭಾತಸ್ಕರಂ ಭಾಸ್ಕರಂ ॥೭೫॥

ಒಸಗೆಯನಂಬುಜಪ್ರತತಿಗುಬ್ಬಸಮಂ ಪೊಸನೆಯ್ದಿಲೋಳಿಗು
ರ್ಬಿಸುವೆಡರಂ ತಮಸ್ಸಮಿತಿಗೋತೊಡಗೂಟಮನಾ ವಿಯೋಗದಿಂ
ದೆಸಗುವ ಚಕ್ರವಾಕಮಿಥುನಕ್ಕೆ ದಿಶಾನನದುಜ್ಜಳಿಕ್ಕೆ ಯಂ
ಬಿಸಿಗದಿರ್ಗಳ್ ಕವಿಲ್ತೊಡನೆ ಸೂಸಿದುವಾದಮೆ ಸುಪ್ರಭಾತದೊಳ್॥೭೮॥

೧೦. ಋತುವರ್ಣನಂ.
ವಸಂತೋದಯವರ್ಣನಂ.
ಪದದೊಳ್ ಠಾಯಿಗಳೋಯರಂಬಡೆಯೆ ವಾಕ್ಯಾರ್ಥಕ್ಕೆ ಪಕ್ಕಾಗೆ ರಾ
ಗದ ಮರ್ಯಾದೆಯನುಕ್ರಿಯಾಂಗುಳಿವಿಳಾಸಂ ಭಾವಮಂ ತಾಳಿ ಕ
ಬ್ಬದ ನಿವಾರಹದ ಮೇಗೆ ಬೈಸಿಕೆ ಬೆಡಂಗಂ ಬೀಱೆ ನಿಂದೊರ್ವಳೋ
ದಿದಳಾಂದೋಳದೆ ಪಲ್ಲವಾಧರೆ ವಸಂತೋತ್ಪದ್ಯಮಂ ಪದ್ಯಮಂ ॥೨॥

ಒತ್ತಂಬದೆ ವಿರಹಿಗಳಂ
ಚಿತ್ತಭವಂ ಬಂದಿ ವಿಡಿದು ಗಂಟಲ ಬಳೆಯಂ
ಕೆತ್ತಿಸುವ ಬೊಮ್ಮಪಾಶದ
ಕೃತ್ತಿಗೆಯೆನೆ ತೊಳಗಿ ಬೆಳಗಿತೆಳವೆಱೆ ನಭದೊಳ್ ॥೯॥

ಅಲರ್ವದನಾಯ್ತು ಮುನ್ನನೆ ತಮಾಲದ ಕಿೞ್ಗವಲಿಂ ತಳಿರ್ತ ಮಾ
ವಲೆದುದು ಬೆಳ್ಪುಗೂಡಿದುದು ಮಲ್ಲಿಗೆ ತುಂಬಿಯ ಸಂತೆ ಸಂಭ್ರಮಂ
ನಿಲೆ ನೆರೆದತ್ತು ಬಾನವೆಱೆ ಕೇದಗೆ ಬೆಳ್ಗಱಿಗಟ್ಟಿದಂತೆವೋಲ್
ಜಲಕನೆ ಮೇಲೆ ಮೇಲೆ ಕಳೆವೊತ್ತುದು ಬಂದ ವಸಂತಮಾಸದೊಳ್ ॥೧೬॥

ವನರುಹಮೆಡ್ಡಮಪ್ಪ ಮೊಗಮಾದ ತಳಿರ್ ತಳಮಾದ ಕೋಕಿಳ
ಧ್ವನಿಯಾದ ಪಣ್ಣಡಕೆ ಬಾಯ್ದೆಱೆಯಾದೆಳವಳ್ಳಿ ಮಿಕ್ಕ ನೂ
ತನುತನುವಾದ ಮಲ್ಲಿಗೆಯ ತುಂಬಿಯ ಕೂಟಮೆ ನೋಟಮಾದ ನಂ
ದನ ವನಲಕ್ಷ್ಮಿ ಮಾಧವಮಹೀಶನ ಕಾಂತೆಯೊ ಕಂತುಕಾಂತೆಯೋ ॥೨೦॥

ಅರಗಗಿಳಿ ದರ್ಭೆ ಪೂತರಳ್ದ ಮಲ್ಲಿಗೆ ಜನ್ನಿವರಂ ತಳಿರ್ ಮನೋ
ಹರತರಮಪ್ಪ ಕಾಸೆ ಕೞಲ್ದಲ್ಲೊಗುವೊಳ್ಳಲರಕ್ಷತಂಗಳಾ
ಗಿರೆ ಮಱಿದುಂಬಿಯಿಂಚರಮೆ ಸಾಮರಕ್ಕೆಣೆಯಾಗೆ ಕಾಮನಂ
ಪರಸುವಿಳಾಮರಂಬೊಲೆಸೆದಿರ್ದುದು ಚೂತಕುಜಂ ವಸಂತದೊಳ್॥೨೭॥

ತಳಿರೊಳ್ ನೀನೆ ಬೆಡಂಗನಯ್ ನನೆಗಳೊಳ್ ನೀಂ ನೀಱನಯ್ ಪುಷ್ಪಸಂ
ಕುಳದೊಳ್ ನೀನೆ ವಿಳಾಸಿಯಯ್ ಮಿಡಿಗಳೊಳ್ ನೀಂ ಚೆಲ್ವನಯ್ ಪಣ್ತ ಪ
ಣ್ಗಳೊಳೋವೋ ಪೆಱತೇನೊ ನೀನೆ ಭುವನಕ್ಕಾರಾಧ್ಯನಯ್ ಭೃಂಗಕೋ
ಕಿಳಕೀರಪ್ರಿಯ ಚೂತರಾಜ ತರುಗಳ್ ನಿನ್ನಂತೆ ಚನ್ನಂಗಳೇ॥೩೬॥ ( ಆದಿಪುರಾಣಂ, ೧೧-೯೮)

ತುಱುಗಿ ತಳಿರ್ತಕೊಂಬು ನೆಱೆ ಪೂತು ಮರಲ್ದು ಮರಲ್ದ ಕೊಂಬು ಕಿ
ಕ್ಕಿಱಿಗಿಱಿದಳ್ಳೆಗೊಂಬು ಸೆಳೆಗೊಂಬೆಳಗೊಂಬು ಕವಲ್ತ ಕೊಂಬು ಕಾ
ಯ್ತೊಱಗಿದ ಕೊಂಬು ಪಣ್ಗೊನೆಯ ಪಿಂಗೊನೆಯಂ ಕೆಳೆಗೊಂಡ ಕೊಂಬು ಬಿ
ತ್ತಱಿಯದ ಬೀಜಗೊಂಬೆಸೆದುದಾಮ್ರವನಾಂತರದೊಳ್ ನಿರಂತರಂ॥೪೧॥

ಅಲರ್ದೊಂಗಲ್ಗಳೆ ನೂಪುರಂಗಳೆನಿಸಲ್ ಮಾಂಗಾಯೆ ಮಾಂಗಾಯವೊಲ್
ಪೊಳೆಯಲ್ ಕೆಂದಳಿರೆಂಬ ಕೆಂಜಡೆ ಮರಲ್ದಲ್ಲಾಡೆಯುಂ ಕೋಕಿಲಂ
ಗಳ ಹುಂಕಾರದೊಳಂ ತೊದಳ್ನುಡಿಯುತುಂ ಮುದದಿಂದಮುದ್ಯಾನಲಕ್ಷ್ಮೀ
ಯೆಳಕಯ್ಯಿಂದೆೞೆತಂದ ಕಂದನವೊಲೇಂ ಚೆಲ್ವಾದುಮಿಮ್ಮಾವುಗಳ್॥೪೬॥

ಉಗುರೊತ್ತಿಂ ಸೋರ್ವಸೊರ್ಕುಂಗೊನರ ಸೊನೆಗೇವೈಸಿ ಬಾಯ್ದಾರೆಯುಂ ತಾ
ಳುಗೆ ಮುಟ್ಟುತೀಂಟ ಬಾಯಂ ತೆಱೆದು ಪರಭೃತಂ ಕಾಯುದು ಕಿೞ್ಕೊಂಬಿನೊಳ್ ಕೈ
ಮಿಗೆ ಪೊಕ್ಕುರ್ವೇೞೆ ತುಪ್ಪುೞ ಮಡಗೆದಱೆ ಕುಳಿರ್ ಪೋಪುಗಿಲ್ ಪೋಪುಗಿಲ್ ಪೋ
ಪುಗಿಲೆಂದಿಮ್ಮಾವಿನೊಳ್ ಕಣ್ಮಲೆದುದುಲಿದು ತನ್ನಿಚ್ಛೆಯಿಂದನ್ಯಪುಷ್ಪಂ ॥೫೧॥

ಕನರ್ಗಾಯಂ ಕಚ್ಚಿ ಮೆಯ್ಯೊಕ್ಕರಿಸಿರೆ ಸೊನೆಯಂ ಮೊಕ್ಕಳಂ ಕಚ್ಚಿ ಕಿಱ್ರೆಂ
ದೆನುತುಂ ಕಿೞ್ಗೊಂಬಿನಿಂಬಂ ಬಿಸುಟು ತುರಿಪದಿಂ ಲಂಘನಂಗೆಯ್ದು ಮೇಲ್ಗೊಂ
ಬಿನ ಪಣ್ಣಂ ಪಂಚುವಿಂ ಪೀರ್ದೊಸರ್ವ ರಸಮನೊಲ್ದಂದದಿಂದೀಂಟಿ ಕೈಮಿ
ಕ್ಕೆನಸುಂ ಕೈಗಣ್ಮಿ ತೆಟ್ಟುಂದೆಱೆದು ಗೞಪಿದತ್ತಾಮ್ರದೊಳ್ ತಾಮ್ರತುಂಡಂ॥೫೬॥

ಗಿಳಿಯ ಹಸುಗೂಸು ಮಾವಿನ ಸೆಳೆಗೊಂಬಿನ ತಳಿರ
ತೊಟ್ಟಿಲೊೞಗಳುತಿರೆ ಕಂ
ಡಳಿನಿವಹಮೞ್ಕಱಿಂ ಜೋ
ಗುಳಮಂ ಪಾಡಿದುವು ತೂಗಿದುದು ಗಂಧವಹ॥೫೮॥

ಪೊಸ ಸಿರಿಗಂಧದೊಳ್ ತೊಡೆದು ಕರ್ಪುರದೊಳ್ ಪುಳಿಗರ್ಚಿ ಕೊಡೆ ಬೆ
ಳ್ಪೆಸೆಯೆ ಹಿಮಾನಿಳನಿಂ ತೆಗೆಯೆ ಪೂರ್ಣನಿಶಾಕರನೆಂಬ ಸಾಣೆಯೊಳ್
ಕುಸುಮಶರಂಗೆ ಜಾಣ್ ನೆಪಱೆಯಲೆಂದು ವಸಂತಕನೆಂಬ ಕಮ್ಮಱಂ
ಮಸೆದಲಗೆಂಬಿನಂತೆಸೆಯುತಿರ್ದುವುಮಲ್ಲಿಗೆಗಳ್ ಬಸಂತದೊಳ್॥೬೮॥

ಬಂದಪನಿಂದು ನಾಳೆ ಮದನಂ ವನಕೇಳಿಗೆ ರಾಜಕೀರ ಮಾ
ಕಂದದ ಕಾಪು ನಿನ್ನದು ಮದಾಳಿಯೆ ಪೂಗಳ ಕಾಪು ನಿನ್ನದೆ
ೞ್ತಂದಿರು ಬಾಗಿಲೊಳ್ ಪಿಕ ಸರೋವರಮಂ ಕಳಹಂಸ ಕಾಪುಗೊಳ್
ವಂದಿಸಿ ಗಂಧವಾಹ ಕೊಳಲೆಂದು ನಿಯಾಮಿಸಿದಂ ವಸಂತಕಂ॥೮೭॥

೧೦.(೨) ವೈಶಾಖವರ್ಣನಂ

ಇನಿತಾನುಂ ಮೃಗತೃಷ್ಣೆಯಂ ಪಡೆಯುತುಂ ದಿಗ್ಭಾಗದೊಳ್ ತಳ್ತಕಾ
ನನದೊಳ್ ಬೇಗೆಯನಿಕ್ಕುತುಂ ಕದಡುತುಂ ನೀರ್ದಾಣಮಾದಂತುಟಂ
ಬಿನದಂತಪ್ಪೆಡೆಯೊಳ್ ತೆರಳ್ಚಿ ತೊವಲಂ ತಂದಿಕ್ಕುತುಂ ಬೇಂಟೆಗಾ
ಱನವೋಲ್ ಬೇಸಗೆ ಬಂದು ಪೊಕ್ಕು ಕವಿದತ್ತೆತ್ತಂ ಮಹೀಭಾಗಮಂ॥೮೯॥

ಪಾವಸೆಯಾಗಿ ಪೋಯ್ತು ನಗನಿರ್ಝರಣಂ ತೊಱೆಗಳ್ ಪದಗ್ನಮಾ
ಯ್ತಾವಗಮೀಕ್ಷಿಸಲ್ಕೆ ಕೆಸಱಾಯ್ತು ಕೊಳ ಕೆಱೆ ಬತ್ತಿಪೋದುವಿ
ರ್ಪಾವೆಡೆಯೆಂಬಿನಬಱತು ಬೀಟೆಯನಾಳ್ದುದು ಬೆಂಚೆ ದೂರ ಪೆ
ರ್ಬಾವಿಯೊಱಂತೆ ತೋಡುವಿನೆಗೆಂತಳಕೋಡಿದುದಾ ನಿದಾಘದೊಳ್॥೯೦॥

ಬಟ್ಟೆಯ ಪಳ್ಳದೊಳ್ ಪಲವೊಱಂತೆಗಳಾದುವು ಕಾಡೊಳಿರ್ದಾ ಕಾ
ಲ್ವಟ್ಟೆಗಳೆಲ್ಲಮೆಯ್ದುವುವು ನೀರ್ನೆಲೆಯಂ ಪೞವಾೞು ಬಾವಿಯೊಳ್
ಪುಟ್ಟಿದ ಸೊಪ್ಪು ಪೇೞ್ದುದು ಜಲೋದಯಲೋಭಮನೆತ್ತಿ ಪೊತ್ತು ಡೋ
ಣಿಟ್ಟು ದನಕ್ಕೆ ನೀರೆಱೆವ ಸಂಭ್ರಮಮುಣ್ಮಿದುದೂರ ಪಕ್ಕದೊಳ್॥೯೩

ಕಾನನಮುರಿದುದು ರವಿಕಾಂ
ತಾನಳನಿಂ ನಗದ ಶಿಖರಮೊಡೆದು ಸಿಡಿಲ್ದ
ತ್ತಾನೆಯ ತಲೆ ಬಿರಿದುದು ಮು
ಕ್ತಾನೀಕಂ ತೋಱೆ ಬೆಟ್ಟಬೇಸಗೆ ಬಿಸಿಲೊಳ್॥೯೪॥

ಬರಿಯದ ಬೆಟ್ಟಮಿಲ್ಲ ಮೞಲಾಗದ ಪೆರ್ದೊಱೆಯಿಲ್ಲ ಬೆಂದೊಗಲ್
ಪೊರೆವೊರೆಯೆರ್ದು ಸಾಯದ ಮೃಗವ್ರಜಮಿಲ್ಲ ಬಿದಿರ್ ತಗುಳ್ದು ಮಾ
ಱೊರಸಿದ ಕಿಚ್ಚಿನಿಂದಡಸಿ ಬೇಯದ ಕಾನನಮಿಲ್ಲ ತೃಷ್ಣೆಯಿಂ
ದುರುಳದ ಪಾಂಥರಿಲ್ಲ ವಿಷಮಾರ್ಕರೌಘದೊಳಾ ನಿದಾಘದೊಳ್ ॥೯೫॥

ಕುಲಗಿರಿ ಕಾಯ್ದ ಕರ್ಬುನದ ಬೆಟ್ಟುವೊಲಿರ್ದುವು ಧಾತ್ರಿ ಕಾದ ಕಾ
ವಲಿಯವೊಲಿರ್ದುದಂಬುನಿಧಿ ದಿಬ್ಬೆಗೆ ಕಾಸಿದ ತೈಲದಂದದಿಂ
ತಲೆದಳೆದುಕ್ಕುತಿರ್ದುವು ದಿಶಾವಿವರಂ ಸಲೆ ಕಾಜುಗಾಱನ
ಟ್ಟೊಲೆಯವೊಲಿರ್ದುವೇಂ ಪ್ರಳಯಕಾಲಮೊ ತೀವ್ರ ನಿದಾಘಕಾಲಮೋ॥೧೦೧॥

ಜಲನಿಧಿತಲ್ಪನುಂ ಜಲರುಹೋದರನುಂ ಜಲಜಾತನೇತ್ರನುಂ
ಜಲಧಿಸುತೇಶನುಂ ಜಲದವರ್ಣನುಮೆಂಬುದನೀ ನಿದಾಘಮಂ
ಕಳೆಯಲೆ ಪಣ್ಣಿಕೊಂಡನಸುರಾರಿವೊಲಾವನನಾಗತಜ್ಞನೆಂ
ದಿಳೆ ನುಡಿವಂತು ಪೆರ್ಬಿಸಿಲನುರ್ಬಿಸಿತುರ್ಬಿನಿದಾಘಮುರ್ಬಿಯೊಳ್ ॥೧೧೬॥

ಅರ್ಕಾಂಶುವಿಂದೆ ಪಾಲ್ಗಡ
ಲುಕ್ಕಲ್ ನೀರ್ದಳಿಯಲುದಕಮಿಲ್ಲದೆ ಹರಿ ತಾಂ
ತರ್ಕೈಸಿಕೊಂಡು ಪೋದಂ
ಪರ್ಕೈಯನೆನಿಸಿತ್ತು ಲೋಕಭೀಷ್ಮಂ ಗ್ರೀಷ್ಮಂ ॥೧೨೪॥

೧೦.(೩) ವರ್ಷಾಕಾಲವರ್ಣನಂ.

ಮೊದಲಿಡೆ ಕಾಮುರಕಂ ಗಳಿಯೆರಂಕೆಯ ಬಣ್ಣದಪುಲ್ಗೊನರ್ ಪೊದ
ೞ್ದುದು ಪೊಲದೊಳ್ ವಿರಾಜಿಸುವ ಮಾಣಿಕವಣ್ಣದ ಕೋರಕಂಗಳಿಂ
ಪುದಿದೆಸೆದತ್ತು ಸಾಳೆತರು ಮುತ್ತಿನ ಬಣ್ಣದ ಕುಟ್ಮಳೌಘವಾ
ದುದು ಕುಟಜಂಗಳೊಳ್ ಪವಳವಣ್ಣದ ಪೂಗಳನಾಂತುದರ್ಜುನಂ॥೧೫೦॥

ಮುಗಿಲಿದಿರೆಱೆ ಕಾದಲರೆಱೆ ಪೊಲಂ ಪಸುರೆರಿ ಕಾಡಮ
ಲ್ಲಿಗೆ ನನೆಯೆಱೆ ಮೊಲ್ಲೆ ನಯವೆಱೆ ಬಿಸಿಲ್ ಕಡುದಣ್ಣಸೇಱೆ ಕೇ
ದಗೆ ಸುೞಿಯೇರಿ ಹಂಸೆ ಭಯವೇಱಿ ನವಿಲ್ ನಲವೇರಿ ಕಾಮಬಾ
ಹುಗೆ ಬಲವೇರಿದತ್ತು ವಿರಹಿ ಪ್ರಕರಕ್ಕಳಿಲೇರುತಿರ್ಪಿನಂ॥೧೫೨॥

ನಲ್ಲರನಪ್ಪೆ ಮುಗ್ದೆಯರು ದುರ್ಭಯಸಂಭ್ರಮದಿಂದೆ ಹಂಸೆಗಳ್
ನಿಲ್ಲದೆ ಪಾಱಿಪೋಗೆ ಕೊಳದಿಂ ನವಿಲ್ ಮೊಱೆಯೆ ಕೇಳುದನರ್ತನೋ
ತ್ಫುಲ್ಲತೆಯಂ ನೆಗಳ್ಚಿ ಮೊಳಗಿತ್ತು ಮುಗಿಲ್ ಘನಕಾಲಭೂಮಿಭೂ
ವಲ್ಲಭದಿಗ್ಜಯೋದ್ಯಮಮಹೋತ್ಸವದುಂಧುಭಿ ತಾನಿದೆಂಬಿನಂ॥೧೬೧॥

ವಾದನದಂಡಂ ಕುಡುಮಿಂ
ಚಾದುದು ನೇಣಾದುದಮರಚಾಪಂ ವರದಂ
ಭೋದಮದು ಢಕ್ಕೆಯಾದುದು
ವಾದಕನಾದುದು ನಟತ್ಕಲಾಪಿಗೆ ಗಗನಂ॥೧೬೪॥

ಮಾರ್ಮುಗಿಲೊಡ್ಡಿದತ್ತು ತುಱುಗಾರ್ತಿಯ ಕೋಣೆ ಕಡಂಕಿ ಮಿಂಚಿದ
ತ್ತೊರ್ಮೆಯೆ ನಿಂದ ನೀರ್ತೆಗೆದುದೊರ್ಮೆ ಬಿಸಿಲ್ಗೆ ಪೊದಳ್ದುದೋಳಿಯಿಂ
ಘರ್ಮಮರೀಚಿಮಂಡಳತರಂಗಿತ ಮೈವಳಿಯಾಯ್ತು ನೀರ್ಗದಿರ್
ಪೆರ್ಮಳಿಯಾಗದೀಗಳೆನುತಿರ್ದುದು ರಾಗದಿನುರ್ಬಿದಾ ಜನಂ॥೧೭೩॥

ಎಳಮಿಂಚು ತಳೆಯಿಕ್ಕಿ ಚಾಮೆಗಳಂ ಬಿಟ್ಟಾಡಿ ಬಲ್ಗೆಚ್ಚಲಿ
ಟ್ಟಳಿನೀಳಾಂಬುದದಿಂ ಬೆಳಲ್ದ ಗಗನ ಶ್ರೇಧೇನುವಂ ಕೋಮಳಾ
ಮಳದೀರ್ಘಾಮೃತಧಾರೆಗಳ್ ಸುರಿಯೆ ಭೋರ್ ಬೋರೆಂಬಿನಂ ಶಕ್ರ ಚಾ
ಪಲತಾದಾಮಕದಿಂದೆ ಕಟ್ಟಿ ಕಱೆದಂ ಕಾರೆಂಬ ಗೋಪಾಲಕಂ॥೧೮೯॥

ಬಲ್ಸರಿ ಬಿಱುಸರಿ ಪೆರ್ಮೞೆ
ಮೆಲ್ಸರಿ ತುಂತುಱ್ ತುಷಾರಮಿಡುಕುಂಬನಿ ತಂ
ದಲ್ಸೋನೆ ನೆಟ್ಟ ಬಡಪಮೆ
ನಲ್ ಸುರಿದುವು ಬಿಡದೆ ಮೞೆಗಳಿರುಳಂ ಪಗಲುಂ ॥೧೯೮॥

ಬಱ ಬಱನಾಗಿ ತಾಳಸಿದುದುರ್ವರೆಯಂ ರವಿ ಸುಟ್ಟನೆಮ್ಮನಿಂ
ತಱಗುಲಿಯೆಂದು ವಾರಿದಕೆ ಮುಟ್ಟಿಸಿ ಪುಯ್ಯಲನಿಕ್ಕುವಂದದಿಂ
ಟಱ ಟಱ ಱೊಂಕು ಱೊಕುಟ ಟಱ ಟ್ಟಱ ಱಟ್ಟಱ ಯೆಂದುಮೆತ್ತಲುಂ
ಕೆಱೆ ಕೆಱೆ ಬಾವಿ ಬಾವ ತೊಱೆ ಪೆರ್ದೊಱೆದಪ್ಪದೆ ದರ್ದುರವ್ರಜಂ ॥೨೦೧॥

ಇನನಿದಿರೆೞ್ವ ಕಾರ್ಮುಗಿಲ ಬಾಧೆಗೆ ಬಿಳಬಿೞನೊತಳ್ತ ಬಳ್ಳಿಮಿಂ
ಚಿನ ಬಲೆಯಲ್ಲಿ ಸಿಲ್ಕಿದನೊ ಪೊಯ್ವ ಸಿಡಿಲ್ಗೊಳಗಾಗಿ ನಿಂದನೋ
ಘನಜಲಕಧಾರೆಯೊಳ್ ಕರಗಿಪೋದನೋ ತನ್ನನೆ ಕಾಣನೆಂದು ಪ
ದ್ಮಿನಿ ನಲವೋಡಿ ತನ್ಮಧುಕರಧ್ವನಿಯಿಂದ ಪಲುಲಿ ಪಾಡಿದಳ್॥೨೧೦॥

ಬಂದಪೆನೆಂದು ಪೋದನಿನಿಯಂ ಜಲದಾಗಮನಕ್ಕೆ ಕಾರ್ಮುಗಿಲ್
ಬಂದುದು ಶಕ್ರ ಚಾಪಲತೆ ಬಂದುದುಪೆರ್ಚಿದ ಸೋಗೆಯಿಂಚರಂ
ಬಂದುದು ಚೆಲ್ವುವೆತ್ತು ನಭದೊಳ್ ಪೊಳೆದೊಪ್ಪುವ ಬಳ್ಳಿ ಮಿಂಚು ತಾಂ
ಬಂದುದು ಬಂದನಿಲ್ಲ ಪತಿಯೆಂದು ಲತಾಂಗಿ ಪಲುಂಬಿ ಪಾಡಿದಳ್॥೨೧೪॥

ಸುರಗೋಪಂಗಳುಮಾಲಿಕಲ್ಲುಮೆಳವುಲ್ಲುಂ ಕೆಂಪಿನಂ ಬೆಳ್ಪಿನಿಂ
ಹರಿತಚ್ಛಾಯೆಯಿನಲ್ಲಿಗಲ್ಲಿಗೆಸೆಗುಂ ಮಾಣಿಕ್ಯದಿಂ ಮುತ್ತಿನಿಂ
ಗರುಡೋದ್ಗಾರದ ಪಚ್ಚೆಯಿಂ ಸಮೆದ ನಾನಾಭೂಷಣಾನೀಕಮಂ
ಧರಣೀವಲ್ಲಭೆಗಂಬುದಾಗಮವಿಟಂ ಕೈಗೆಯ್ಸಿದೊಂದಂದದಿಂ॥೨೨೨॥

೧೦. (೪) ಶರದ್ವರ್ಣನಂ.

ಮೞೆಯಿನ್ನೆತ್ತಣದೆಂಬಿನಂ ಬೆಳಗುಗುಂ ಬಾನೊರ್ಮೆ ಮತ್ತೊರ್ಮೆ ಪೆ
ರ್ಮೞೆಕಪಳ್ಗು ರವಿ ಕೂಡೆ ಪಣ್ತು ಮುಗಿಲಿಂ ಸೀಳ್ದಂದದಿಂ ಬಿಸಿಲ್
ಮೞೆ ಕೊಳ್ಗುಂ ಗಿಳಿಸೋವ ಪಾಮರಿಯರಂಕೆಮೀಱೆ ನೀರವ್ರಜಂ
ಸುೞಿಗುಂ ಶಾಡ್ವಳಮಾದ ಶಾಳಿವನದೊಳ್ ನೀರಾಜನಂ ಮಾೞ್ಪವೋಲ್॥೨೨೭॥

ತರದಿಂ ನಲಿನಲಿದಾಡುವ
ಘಸರಸದ ಮಕ್ಕಳವೊಲಂಚೆಗಳ್ ಮಾನಸದಿಂ
ಬರೆ ಮೆಱೆದುಶರದದವನಿಪ
ನರಮನೆಯಂಗಣಮಿದೆನಿಸಿ ಬೆಳಗಿತು ಗಗನಂ॥೨೩೧॥

ಗಗನಂ ದಿಗ್ವಳಯಂ ದಿನೇಶವಳಯಂ ಶೈಲಾಳಿ ತೋಯಾಶಯಂ
ನಗರಂ ನಂದನಮೆಂಬ ವಸ್ತುಗಳನಾರುಂ ಕಾಣದಂತಾಗಿ ತೊ
ಟ್ಟಗೆ ಕಣ್ ವಂಚಿಸಿ ನುಂಗಿ ತೋರೂಪ ಚಪಲಂ ಹೇಮಂತಮೆಂಬಿಂದ್ರಜಾ
ಲಿಗನೊರ್ದೂದಿದ ಧೂಮದಂತಸದಳಂ ಪರ್ಬಿತ್ತು ಮಂಕೆತ್ತಲುಂ॥೨೩೯॥

ಗಂಗೆಯ ಸೂಡನಂದುೞಿದು ಸೂಡಿದ ಚಂದ್ರಕಲಾವಸಂತಮಂ
ಪಿಂಗಿಸಿ ಸುಟ್ಟು ಮನ್ಮಥನೊಳಾದ ವಿಭೂತಿಯನೊಟ್ಟಿಕೊಂಡು ವಾ
ಮಾಂಗದೊಳಿಟ್ಟಪಾರ್ವತಿಯನೀಶ್ವರನಗ್ಗಳಗಣ್ಣ ಬೆಂಕಿಯಿಂ
ಭಂಗಿಸುವ ಕುಬೇರಗಿರಿಗಹ್ವರದೊಳ್ ಶಿಶಿರಾತಿರೇಕಮಂ॥೨೫೩॥

ತುದಿಗೋಡಿಂಗೇಱಿ ಕೊಂಬಂ ಪಿಡಿದು ಜಡಿದು ಪುರ್ವಿಕ್ಕಿಯುಃ ಪೆಂದು ಮುನ್ನೇ
ಱಿದ ಕೊಂಬಂ ನೋಡಿ ಮೆಯ್ಯಂ ಸುಗಿದುಗಿದುರಮಂ ಪಿಕ್ಕಿ ಪೇನ್ವಿಂಡನಾಯ್ದು
ರ್ಬಿದ ಮೆಯ್ಯಂ ಕಯ್ಯಿನೆತ್ತ ತುಱಿಸಿ ಮಱಿಗಳಂ ಸಾರ್ಚಿ ಮುಂದಣ್ಗೆ ಕುಳ್ಳಿ
ರ್ದುದು ಕೋಡಂ ಹೇಮಂತದೊಳೆಳವಿಸಿಲಂ ಕಾಯಲೆಂದೊಂದು ಧೂರ್ತಂ॥೨೫೭॥

ಬಿಸಿಬಿಸಿಯೋಗರಂ ಕೆಲದ ಸೋಡಗೆತೆಳ್ಪೊಳುದುಪ್ಪಮುಪ್ಪು ಗಾಯ್
ಮೊಸರಿನಿದಪ್ಪ ಮಜ್ಜಿಗೆ ನಿವಾತದ ಶಯ್ಯೆ ಕದಂಬದಂಬುಲಂ
ರಸೀಕರ ಗೋಷ್ಠಿ ಬಟ್ಟಮೊಲೆಯೋಪಳ ತಳ್ತಮರ್ದಪ್ಪು ತಾವೆ
ಬಗ್ಗಿಸದೆ ಹಿಮಾಗಮೋಕ್ತಿಕಜಡೋದಯಮಂ ಸುಜೃತಾತ್ಮರಪ್ಪರಾ॥೨೬೫॥

೧೧. ವನವಿಹಾರವರ್ಣನಂ.

ಅದಿರ್ಮುತ್ತೆಯ ನನೆಯಿಂ ಚೂ
ತದ ಕಳಿಕಯಿನೆಸೆವ ಕರ್ಣಿಕಾರ ಪೂವಿಂ
ಕದಳಿಯ ಸುೞಿಯಿಂದೋಲಗಿ
ಸಿದನೋಲಗದೊಳ್  ನೃಪಾಲನಂ ವನಪಾಳಂ॥೨॥

ಮಾವಿನ ಬಂದ ಮಲ್ಲಿಗೆಯ ಬಾಲತಮಾಳಕುಜಾತಷಂಡಮಂ
ತೀವಿ ತಗುಳ್ ಸುತ್ತಿದದಿರ್ಮುತ್ತೆ ಕವುಂಗಿನ ಸಾಲ ಪಕ್ಕದೊಳ್
ಸಾವುಮನಾಳ್ದ ಸಂಪಗೆ ಮನಕ್ಕೆ ಮನೋಹರವೆಂಬ ಮಾತೆ ಕೇಳ್
ದೇವರ ಪಾದದಾಣೆ ಬನದೀಸುಳ ಮೈಸಿರಿ ಪೇೞಲಗ್ಗಳಂ॥೭॥

ಎಕ್ಕಲದುಂಬಿಯಿಂ ಜವಳಿದುಂಬಿಯಿನಟ್ಟುವ ಮಾಲೆದುಂಬಿಯಿಂ
ದಿಕ್ಕುವ ಕುಂಭದಂತೆಸೆವ ಗೊಂದಣದುಂಬಿಯಿನಾವಮೆಯ್ಯೊಳಂ
ಮೊಕ್ಕಳಮೆಂಬಿನಂ ಕವಿವ ಗಾವರದುಂಬಿಯಿನಾದ ಗಾವರಂ
ತೆಕ್ಕನೆ ತೀವಿ ಕೂಡೆ ಬಗೆಗೊಂಡುದು ಕೂಡೆ ಬನಂ ಬಸಂತದೊಳ್ ॥೧೦॥

ಕುಸುಮಶರಾಸನಕ್ಕೆ ನನೆಯಂಬಿನ ತೆಕ್ಕೆಗೆ ಮೀನಕೇತನ
ಕ್ಕಸಮ ಶಿಳೀಮುಖಕ್ಕೆ ರತಿಗೇಳಿಗಿವೆಂದರೆ ನೋಡಿ ಮೆಚ್ಚಿ ಜಾ
ನಿಸಿ ಕರಪಲ್ಲವಂ ಬಡುಗೆ ಬಾಯಿನ ಬಲ್ನನೆ ಮೊಗ್ಗೆ ಜಾಗರಲ್
ಪಸರಿಸೆಕೊಯ್ದು ಮಲ್ಲಿಗೆಯೊಳರ್ಚಿಸಿದರ್ ಸಹಕಾರಪಾದಮಂ ॥೩೧॥

ಅಳಿ ಕರ್ದುಕಿದ ಕಡೆಗಂಗಳ
ಗಿಳಿ ಕರ್ದುಕಿದ ದಶನವಸನದುನ್ಮದದ ಪಿಕಾ
ವಳಿ ಕರ್ದುಕಿದ ಬೆರಲ ಲತಾ
ಲಲಿತೆಯರೆ ಪಲಂಬರಾದರಲರ್ಗೊಯ್ವೆಡೆಯೊಳ್॥೪೭॥

ಎಳಮಾವಿನ ತಳಿರ್ಪೂವಿನ
ಗಿಳಿ ಚಿಲಿಪಿಲಿಯೆಂದೊಡಾ ಮರಂ ಜಗಳಕ್ಕ
ವ್ವಳಿಸಿದಪುದೆಂದು ಭಯದಿಂ
ತಳಿರ್ಗೊಯ್ಯದೆ ಪಿಂಗಿ ಮುಗ್ಧೆ ನಗಿಸಿದಳೊರ್ವಳ್ ॥೬೧॥

ನಗಿಸುವ ಕೋಡಗಂ ನೆರೆದು ನೋಡುವ ದೀಹದ ಹುಲ್ಲೆ ಸೋಗೆಯಂ
ನೆಗಪಿ ತುಡುಂಕಿಮೆಟ್ಟುವ ನವಿಲ್ ಕಳಕೂಜನೆಗೆಯ್ವ ಪಾರಿವಂ
ನಗುವ ಶುಕಾಳಿಯಾಡುವ ಕುರಂಗವಡಂಗುಱುಚಾಟಮಂ ಪ್ರಿಯ
ರ್ಗೂಗೆಯಿಪವಂ ಗಜನ್ಮನ ಬೆಸಂಬಡೆದಂತೆ ಲತಾಗೃಹಂಗಳೊಳ್॥೭೪॥

ಪಿಪ್ಪಿಲಿ ಚಿಲ್ಲಿಕಾಯ್ ಮೆಣಸು ಮಾಗುಳಿವೇರ್ ಮೊಳೆಯಲ್ಲಮೇಲೆ ಕ
ಮ್ಮಿಪ್ಪ ಸುಭದ್ರೆ ಮಾಮಿಡಿ ಕರಂಜಿಕೆಯಂಬಟೆ ನಿಂಬೆ ನೆಲ್ಲಿಗಾಯ್
ಕಪ್ಪುರಗಂಪನೊಪ್ಪಿಸುತಮಿರ್ಪರೆಮಾದುಫಲಂಗಳಾದಿಯಾ
ದುಪ್ಪಿನಕಾಯ್ಗಳಂ ಮಗಮಗಿಪ್ಪುವನಿಕ್ಕಿದನಬ್ಜಪತ್ರದೊಳ್॥೮೬॥ ( ಲೀಲಾವತಿ- ೫-೭೧)

ಪೊತ್ತದೆ ಪೊಗೆಸುತ್ತದೆ ನಸು
ಬತ್ತದೆ ಕೆಂಪಡರ್ದು ಬೆಂದ ಪಾಗಲ ಕಾಯಂ
ಪತ್ತೆಂಟು ತುತ್ತಿಲ್ಲದೆ
ಚಿತ್ತಂತಣಿಗುಮೆ ಸರಸ್ವತೀಮಣಿಹಾರಾ॥೯೨॥

ಕೃತಜ್ಞತೆಗಳು
ಸಂಪಾದಕರು: ಎನ್ ಅನಂತರಂಗಾಚಾರ್
ಪ್ರಕಾಶನ: ಕನ್ನಡ ಸಾಹಿತ್ಯ ಪರಿಷತ್ತು
ಚಾಮರಾಜಪೇಟೆ
ಬೆಂಗಳೂರು-೫೬೦೦೧೮.



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ